Tuesday, September 8, 2015

ರಂಗಿತರಂಗ: ಈ ಚಿತ್ರದಲ್ಲಿ ನಿರ್ದೇಶಕನೇ ನಾಯಕ

ಕನ್ನಡದ ಚಿತ್ರಗಳು ಗಳಿಕೆಯಲ್ಲಿ ಹಿಂದೆ ಎನ್ನುವ ಮಾತನ್ನು ಹಿಂದಕ್ಕೆ ತಳ್ಳಿ ಹಾಕಿದೆ 'ರಂಗಿತರಂಗ'. ಸದಭಿರುಚಿಯ ಚಿತ್ರ ಮಾಡಿದರೆ ಕನ್ನಡಿಗರೂ ಚಿತ್ರ ಮಂದಿರಕ್ಕೆ ಬಂದು ನೋಡುತ್ತಾರೆ ಎಂದು ಮತ್ತೆ ಸಾಬೀತು ಪಡಿಸಿದೆ.

ಅಪಘಾತವೊಂದರಲ್ಲಿ ಹಳೆಯ ನೆನಪನ್ನು ಕಳೆದುಕೊಂಡ ನಾಯಕ, ಅವನನ್ನು ಕಳೆದುಕೊಳ್ಳಲು ಇಚ್ಚಿಸದ ಗರ್ಭಿಣಿಯಾದ ಅವನ ಪತ್ನಿ, ಮುನಿಸಿಕೊಂಡಿರುವ ಭೂತಕ್ಕೆ ಪೂಜೆ ಸಲ್ಲಿಸಲು ಕಮರೊಟ್ಟು ಗ್ರಾಮಕ್ಕೆ ಬರುತ್ತಾರೆ. ಅಲ್ಲಿ ನಡೆಯುವ ನಿಗೂಢ ಘಟನೆಗಳ ಸುಳಿಗೆ ಸಿಲುಕುತ್ತಾರೆ. ಕಾಣೆಯಾದ ಪತ್ನಿಯ ಬಗ್ಗೆ ದೂರು ಕೊಡಲು ಪೋಲಿಸ್ ಸ್ಟೇಷನ್ ಗೆ ಬಂದ ನಾಯಕನಿಗೆ ಅವನ ಪತ್ನಿ ಸತ್ತು ಈಗಾಗಲೇ ಆರು ವರ್ಷಗಳು ಕಳೆದಿರುವುದಾಗಿ ತಿಳಿಯುತ್ತದೆ. ಆಘಾತಕ್ಕೆ ಒಳಗಾದ ನಾಯಕನಿಗೆ, ಒಬ್ಬ ಪತ್ರಿಕೋದ್ಯಮದ ಯುವತಿ (ನಾಯಕನಿಗೆ ನೆನಪು ಕಳೆದು ಹೋಗುವ ಮುಂಚಿನ ಜೀವನದ ಪ್ರೇಯಸಿ) ಜೊತೆಯಾಗುತ್ತಾಳೆ



ಅವರಿಬ್ಬರೂ ಪ್ರತೀ ಜುಲೈ ತಿಂಗಳಿನಲ್ಲಿ ಗರ್ಭಿಣಿ ಹೆಂಗಸರು ನಾಪತ್ತೆಯಾಗುತ್ತಿರುವುದನ್ನು ಪತ್ತೆ ಹಚ್ಚುತ್ತಾರೆ. ಅವರ ಸಂಶೋಧನೆ ಸಾಗುತ್ತ ಹೋದಂತೆ ನಾಯಕನಿಗೆ ತನ್ನ ಬಗ್ಗೆ ಕೆಲ ವಿಷಯಗಳ ಅರಿವಾಗುತ್ತ ಹೋಗುತ್ತದೆ. ದಾಖಲೆಗಳ ಪ್ರಕಾರ ಅವನೂ ಕೂಡ ಸತ್ತಿರುವುದು ತಿಳಿಯುತ್ತದೆ. ಹಾಗೆಯೇ ಗುಡ್ಡದ ಭೂತದ ನಿಗೂಢತೆಯೂ ಬಯಲಾಗುತ್ತ ಹೋಗುತ್ತದೆ. ಹಾಗಾದರೆ ಸತ್ತವರು ಯಾರುಗುಡ್ಡದ ಭೂತ ಇರುವುದು ನಿಜವೇ? ಇಲ್ಲವಾದಲ್ಲಿ, ಅಲ್ಲಿ ಪ್ರತಿ ವರ್ಷ ಒಬ್ಬ ಗರ್ಭಿಣಿ ಕಾಣೆಯಗುತ್ತಿರುವುದು ಏಕೆ? ಅಂಗಾರನ ಆತ್ಮಕ್ಕೂ, ರಾತ್ರಿ ಕೇಳುವ ಹೆಣ್ಣಿನ ಅರಚಾಟಕ್ಕೂ ಸಂಬಂಧ ಇದೆಯೇ? ಏನಿದರ ಹಿಂದಿನ ಕಥೆ? ನೀವು ಇನ್ನು ಚಿತ್ರ ನೋಡಿರದಿದ್ದರೆ ಬಿಡುವು ಮಾಡಿಕೊಂಡು ನೋಡಿ ಬನ್ನಿ.

ಗಂಭೀರತೆ ಮೈ ತಳೆದಂತಿರುವ ನಾಯಕ ಪಾತ್ರಕ್ಕೆ ನ್ಯಾಯ ಒದಗಿಸುತ್ತಾನೆ. ಎಲ್ಲರ ಪಾತ್ರಗಳು ಅಷ್ಟೇ, ಅನವಶ್ಯಕವಾಗಿ ಅಬ್ಬರಿಸುವುದಿಲ್ಲ. ಕಥೆಯ ಜೊತೆಗೆ ಉತ್ತಮ ಹಾಡುಗಳು, ಅತ್ಯುತ್ತಮ ಛಾಯಾಗ್ರಹಣ, ಪ್ರೇಕ್ಷಕರ ಕುತೂಹಲ ಹಿಡಿದಿಡುವ ನಿರೂಪಣೆ ಇವೆಲ್ಲವುಗಳೂ ಸಾಧ್ಯವಾಗುವುದು ನಿರ್ದೇಶಕನ ಶ್ರಮದಿಂದ. ಹಾಗಾಗಿ ಚಿತ್ರದ ಯಶಸ್ಸಿಗೆ ಮೂಲ ಕಾರಣರಾದ ಇದರ ನಿರ್ದೇಶಕ ಅನೂಪ್ ಭಂಡಾರಿಯವರಿಗೆ ಅಭಿನಂದನೆಗಳು.


ಗುಡ್ಡದ ಭೂತದ ನಿಗೂಢತೆ ಚಿತ್ರದ ಅಂತ್ಯದೊಂದಿಗೆ ಮುಗಿಯುತ್ತದೆ ಆದರೆ ನನ್ನ ನನ್ನ ಕಿವಿಯಲ್ಲಿ ಗುನುಗುತ್ತಿರುವ ಹಾಡಿನ ಸದ್ದು ಮಾತ್ರ ನಿಲ್ಲುತ್ತಿಲ್ಲ. ಏನಿದರ ಮರ್ಮ?

ಡೆಣ್ಣಾನ, ಡೆಣ್ಣಾನ
ತುಳು ನಾಡ ಸೀಮೆಡು,
ಕಮರೊಟ್ಟು ಗ್ರಾಮೊಡು,
ಗುಡ್ಡದ ಭೂತ ಉಂದು ... 

1 comment:

  1. ಈ ಚಲನಚಿತ್ರಾದಲಿ ಹಾಡುಗಳು ತುಂಬ ಚೆನಾಗಿದೇ .. ಅಂಗಾರನ ಪಾತ್ರ ,ಅನೂಪ್ ಭಂಡಾರಿ ಪಾತ್ರ ಹಿಡಿಶಿತು.
    ಸಾಈಕುಮರ್ ಕೊನೆಯ ಡಾನ್ಸ್ ...
    ಭ್ಹೊತ ಈಲಾ ,ಮಾನುಸ್ಯ ಭೂತಾ ಆಗಬಹುದು ...

    ReplyDelete