Saturday, June 5, 2021

ಪ್ರಕೃತಿಯ ಯೋಜನೆಯ ನಂತರದ ಜೀವನ

ಕೊರೊನ ವೈರಸ್ ಹೇಗೆ ರೂಪಾಂತರಿಯಾಗಿ ಬಿಟ್ಟು ಬಿಡದೆ ಕಾಡುತ್ತದೆ ಎಂದು ನಾವೆಲ್ಲ ಗಮನಿಸುತ್ತಿದ್ದೇವೆ. ತಾನು ಸೇರಿಕೊಂಡ ದೇಹ ಅಂತ್ಯವಾದಾಗ ತನ್ನ ಅಂತ್ಯವೂ ಆಗುತ್ತದೆ ಎನ್ನುವುದು ಆ ಸೂಕ್ಷ್ಮ ಜೀವಿಗೂ ಗೊತ್ತು. ಅದಕ್ಕೆ ಅದು ಹೊಸ ಅತಿಥಿಯನ್ನು ಹುಡುಕಿ ಸೇರಿಕೊಳ್ಳುತ್ತದೆ ಮತ್ತು ತನ್ನ ವಂಶವನ್ನು ಮುಂದುವರೆಸುತ್ತದೆ. ಹಾಗೆ ನೋಡಿದರೆ, ಇದು ಪ್ರಕೃತಿಯ ಎಲ್ಲ ಜೀವಿಗಳಲ್ಲಿ ಸಹಜ. ಮನುಷ್ಯನಲ್ಲೂ ಇದೇ ತರಹದ ಪ್ರಕ್ರಿಯೆ ಇದೆ. 'The Selfish Gene' ಎನ್ನುವ ಪುಸ್ತಕ, ನಮ್ಮ ದೇಹದಲ್ಲಿರುವ ಜೀನ್ ಗಳು, ಎಂತಹುದೆ ಪರಿಸ್ಥಿತಿಯಲ್ಲಿ ತಾನು ಉಳಿದುಕೊಳ್ಳುವುದು ಮತ್ತು ವಂಶ ಮುಂದುವರೆಸುವುದು ಈ ಪ್ರಕ್ರಿಯೆಯೆಗಳ ಕಡೆ ಗಮನ ಹರಿಸುವ ಬಗ್ಗೆ ಬೆಳಕು ಚೆಲ್ಲುತ್ತದೆ. ಮನುಷ್ಯ ಸ್ವಾರ್ಥಿಯಾಗುವುದರಲ್ಲಿ ಪ್ರಕೃತಿಯ ಕೈವಾಡವೂ ಇದೆ. ಅದಕ್ಕೆ ಅವನು ಬದುಕುವುದು ಬೇಕು ಮತ್ತು ಅವನ ವಂಶ ಮುಂದುವರೆಯುವುದು ಬೇಕು. ಅದಕ್ಕೆ ಅದು ತನ್ನ ಸಂದೇಶವನ್ನು ಜೀನ್ ಗಳಲ್ಲಿ ಅಡಿಗಿಸಿ ಇಡುತ್ತದೆ. ಅದಕ್ಕೆ ನೋಡಿ, ಸಣ್ಣ ವಯಸ್ಸಿನಲ್ಲಿ ಟೈಫಾಯಿಡ್, ಟಿ.ಬಿ. ಯಂತಹ ರೋಗಗಳು ಬಂದಾಗಲೂ ಮನುಷ್ಯ ಬೇಗನೆ ಚೇತರಿಸಿಕೊಳ್ಳುತ್ತಾನೆ. ಹಾಗೆಯೆ ಯೌವನ ಬಂದಾಗ, ಪ್ರಕೃತಿಯು ಮನುಷ್ಯನ ದೇಹವನ್ನು ಹಾರ್ಮೋನ್ ಬದಲಾವಣೆ ಮೂಲಕ, ಸಂಗಾತಿಯನ್ನು ಹುಡುಕಲು ಮತ್ತು ವಂಶ ಬೆಳೆಸಲು ಪ್ರಚೋದಿಸುತ್ತದೆ. ಅಲ್ಲಿಗೆ ಪ್ರಕೃತಿಯು ಮನುಷ್ಯ ದೇಹದ ಜೀನ್ ಗಳಲ್ಲಿ ಬರೆದ ಸಾಂಕೇತಿಕ ಭಾಷೆಯು ತಾನು ಅಂದು ಕೊಂಡಿದ್ದಕ್ಕೆ ಬಳಕೆ ಆಗುತ್ತದೆ.


ಮನುಷ್ಯ ದೇಹ ನಲವತ್ತರ ನಂತರ ಬೇರೆಯದೇ ತರಹದ ವರ್ತನೆ ತೋರಲು ಆರಂಭಿಸುತ್ತದೆ. ಪ್ರಕೃತಿಯಾಗಲಿ, ಅದು ಸೃಷ್ಟಿಸಿದ ಜೀನ್ ಗಳಾಗಲಿ, ನಲವತ್ತರ ನಂತರದ ಮನುಷ್ಯನನ್ನು ಕಡೆಗಣಿಸುತ್ತವೆ. ಇಷ್ಟು ವರ್ಷ ಅವನು ಬದುಕಿ ವಂಶ ಬೆಳೆಸಿದ್ದರೆ, ಪ್ರಕೃತಿಗೆ  ಅವನನ್ನು ಹುಟ್ಟಿಸಿದ ಅವಶ್ಯಕತೆ ಮುಗಿದಿದೆ. ಒಂದು ವೇಳೆ ಅವನು ಇಷ್ಟರಲ್ಲಾಗಲೇ ವಂಶ ಮುಂದುವರೆಸದಿದ್ದರೆ, ಅವನು ಬದುಕಿದ್ದು ಪ್ರಯೋಜನ ಏನು ಎನ್ನುವುದು ಪ್ರಕೃತಿಯ ಅಭಿಪ್ರಾಯ. ಅದಕ್ಕೆ ನೋಡಿ, ನಲವತ್ತರ ನಂತರ ಮನುಷ್ಯ ದೇಹದ ಶಕ್ತಿ ಮೊದಲಿನ ತರಹ ಇರುವುದಿಲ್ಲ. ಯಾವುದಾದರೂ ರೋಗ ಸೇರಿಕೊಂಡರೆ ಬೇಗನೆ ಬಿಟ್ಟು ಹೋಗುವುದಿಲ್ಲ. ಜೀನ್ ಗಳು ತಾವು ಮರೆಯಾಗಿ ಹೋಗಿ ಮತ್ತೆ ಪ್ರಕೃತಿಯಲ್ಲಿ ಲೀನವಾಗಿ ಹೋಗಲು ಬಯಸುತ್ತವೆ. 


ಆದರೆ ನಲವತ್ತರ ನಂತರವೂ ನೀವು ಅತ್ಯುತ್ತಮ ಅರೋಗ್ಯ ಹೊಂದಿ, ಬದುಕಿನ ಬಗ್ಗೆ ಅಭಿರುಚಿ ಇದ್ದರೆ, ಅದಕ್ಕೆ ನಿಮ್ಮ ಪ್ರಯತ್ನವೇ ಕಾರಣ . ಏಕೆಂದರೆ ಪ್ರಕೃತಿಯು ಈಗ ನಿಮ್ಮ ಸಹಾಯಕ್ಕೆ ಇಲ್ಲ. ಅದಕ್ಕೆ ನಿಮ್ಮಿಂದ ಈಗ ಯಾವ ಪ್ರಯೋಜನವೂ ಇಲ್ಲ. ಹಾಗಾಗಿ ಅದರ ಸಹಾಯ ಮತ್ತು ಪ್ರಭಾವ ಎರಡರಿಂದ ನೀವು ಮುಕ್ತರಾಗಿದ್ದೀರಿ. ಮನುಷ್ಯನನ್ನು ಬಿಟ್ಟು ಬೇರೆಲ್ಲ ಪ್ರಾಣಿ, ಪಕ್ಷಿಗಳ ಜೀವನ ಕ್ರಮ ಗಮನಿಸಿ ನೋಡಿ. ಸಂತಾನೋತ್ಪತ್ತಿ ನಿಲ್ಲಿಸಿದ ಕೆಲವೇ ವರ್ಷಗಳಿಗೆ ಅವುಗಳ ಜೀವನವು ಅಂತ್ಯವಾಗುತ್ತದೆ. ಅದು ಪ್ರಕೃತಿ ಮಾಡಿದ ವಿನ್ಯಾಸ. ಆದರೆ ಮನುಷ್ಯ ಮಾತ್ರ ಅದಕ್ಕೆ ಹೊರತು. ಬೇರೆ ಯಾವುದೇ ಜೀವಿಗಳಿಗೆ ಇರದ ಸೌಲಭ್ಯ ನಮಗಿದೆ. ಅದು ಪ್ರಕೃತಿಯನ್ನು ಅರ್ಥ ಮಾಡಿಕೊಳ್ಳುವ ಮತ್ತು ಅದರ ಮೇಲೆ ಹಿಡಿತ ಸಾದಿಸುವ ಪ್ರಜ್ಞೆ. ಅದಕ್ಕೆ ನೋಡಿ, ನಾವು ನಲವತ್ತರ ನಂತರ ನಮ್ಮ ದೇಹವನ್ನು ತಾತ್ಸಾರವಾಗಿ ಕಾಣಲು ಸಾಧ್ಯವಿಲ್ಲ. ಎಷ್ಟು ಕಾಳಜಿ ವಹಿಸಿ ಕಾಪಾಡಿಕೊಳ್ಳುತ್ತೇವೋ, ಅಷ್ಟು ವರ್ಷದ ಬದುಕು ನಮ್ಮದು. ವೈದ್ಯಕೀಯ ಸೌಲಭ್ಯಗಳು ಕೂಡ ಅದಕ್ಕೆ ಸಹಾಯ ಮಾಡುತ್ತವೆ.


ನಲವತ್ತರ ನಂತರ ಪ್ರಕೃತಿಯು ನಮ್ಮನ್ನು ನಮ್ಮ ಪಾಡಿಗೆ (ಎಲ್ಲರಿಗೂ ಅಲ್ಲವಾದರೂ, ಸಾಕಷ್ಟು ಜನರಿಗೆ) ಬಿಟ್ಟು ಬಿಡುತ್ತದಲ್ಲ. ಆಗ ಜೀವನದ ಹೊಸ ಆಯಾಮಗಳು ತೆರೆದುಕೊಳ್ಳುತ್ತವೆ. ಮನಸ್ಸು ಸಾಕಷ್ಟು ತಹಬದಿಗೆ ಬಂದಿರುತ್ತದೆ. ಅಲ್ಲಿಯವರೆಗೆ ನೋಡಿದ ಸಾವು ನೋವುಗಳು ನಮ್ಮ ನಶ್ವರತೆಯ ಅರಿವು ಮೂಡಿಸುತ್ತವೆ. ಸ್ವಾರ್ಥದ ಆಚೆಗೆ ಬದುಕು ಇರುವುದು ಅರಿವಿಗೆ ಬರುತ್ತದೆ. ಕಲೆಗಳು ಒಲಿಯತೊಡಗುತ್ತವೆ. ಅಲ್ಲಿಂದ ಆಮೇಲೆ ನಾವು ಪ್ರಕೃತಿಯ ಯೋಜನೆಯಂತೆ ಬದುಕದೆ, ನಮ್ಮ ಇಷ್ಟದಂತೆ ಬದುಕಲು ಸಾಧ್ಯವಾಗುತ್ತದೆ. ಅಲ್ಲಿಂದ ಮುಂದೆ ಎಷ್ಟು ವರ್ಷ ಬದುಕುತ್ತೇವೆ ಎನ್ನುವುದು ನಮ್ಮ ಪ್ರಯತ್ನದ ಮೇಲೆ ಅವಲಂಬಿತವಾಗುತ್ತದೆ. ಚಟಗಳಿಗೆ ದಾಸರಾಗಿ, ದೇಹವನ್ನು ದುರುಪಯೋಗ ಪಡಿಸಿಕೊಂಡರೆ ಅಲ್ಲಿಂದ ಸಾವು ದೂರದ ದಾರಿಯೇನಲ್ಲ. ಹಾಗೆಯೇ ನಿಯಮಿತವಾಗಿ ಬದುಕಿದಷ್ಟು ದೇಹ ತನ್ನ ಇರುವಿಕೆಯನ್ನು ಮುಂದುವರೆಸುತ್ತ ಹೋಗುತ್ತದೆ. ಅದು ಇನ್ನೂ ನಲವತ್ತು ವರುಷ ಮುಂದುವರೆಯಬಹುದು. ಅಥವಾ ಅಸಮರ್ಪಕವಾಗಿದ್ದಲ್ಲಿ, ಬೇಗನೆ ಕೊನೆಗೊಳ್ಳಬಹುದು ಕೂಡ. 


ನಮ್ಮ ಹುಟ್ಟು, ಬೆಳವಣಿಗೆಯ ಎಷ್ಟೋ ಸಂಗತಿಗಳನ್ನು ಪ್ರಕೃತಿಯು ತನ್ನ ನಿಯಂತ್ರಣದಲ್ಲಿ ಇಟ್ಟುಕೊಂಡಿತ್ತು. ಏನೇ ಕಷ್ಟ ಬರಲಿ, ನಲವತ್ತರ ಅಂಚಿಗೆ ನಮ್ಮನ್ನು ಕರೆ ತರಲು ಅದು ಸಹಾಯ ಮಾಡಿತು. ಆದರೆ ಅದರ ನಂತರದ ನಮ್ಮ ಬದುಕಿಗೆ ಮಾತ್ರ ನಾವೇ ಸಂಪೂರ್ಣ ಹೊಣೆ.  ಹಾಗೆಯೇ ನಂತರದ  ಸಮಯವನ್ನು ಹೇಗೆ ಉಪಯೋಗಿಸಿಕೊಳ್ಳುತ್ತೇವೆ ಅನ್ನುವುದು ನಮ್ಮ ವಿವೇಚನೆಗೆ ಬಿಟ್ಟಿದ್ದು. ನಮ್ಮ ವ್ಯಕ್ತಿತ್ವ ವಿಕಾಸವು ಇದೇ ಸಮಯದಲ್ಲಿ ಸಹಜ ಸಾಧ್ಯ. ನೀವು ಈಗಾಗಲೇ ನಲವತ್ತು ದಾಟಿದ್ದೀರಾ? ನಿಮ್ಮ ದೇಹದ, ಮನಸ್ಸಿನ ಕಾಳಜಿ ನಿಮಗಿದ್ದರೆ, ನಿಮಗೆ ಅಭಿನಂದನೆಗಳು. ಇಲ್ಲದಿದ್ದರೆ ಪ್ರಕೃತಿಯ ಯೋಜನೆಗೆ ವಿರುದ್ಧ ಈಜಿ, ನಿಮ್ಮ ಅದೃಷ್ಟದ ಪರೀಕ್ಷೆ ಮಾಡುತ್ತಿರಿವಿರಿ ಅಷ್ಟೇ.

No comments:

Post a Comment