Sunday, January 28, 2024

One Sunday Morning

Distance covered: 75 km in 3 hours

Places: Manchanabele, Savanadurga


Tippagondanahalli Reservoir

Anjaneya waiting for his mask to be removed

Savana Durga 





Let's go!

Manchanabele Reservoir 

Savana Durga 

Thursday, January 4, 2024

ಆಶಾವಾದಿಯ ಕನಸುಗಳು ಮತ್ತು ನಿರಾಶಾವಾದಿಯ ಹತಾಶೆಗಳು

ಯಾವುದೇ ರಾಜಕಾರಣಿಯ ಭಾಷಣ ಕೇಳಿ ನೋಡಿ. ಅವರು ನಿಮಗೆ ಭವಿಷ್ಯದ ಕನಸು ಕಟ್ಟಿ ಕೊಡುತ್ತಾರೆ. ನಿಮ್ಮ ಚಿಕ್ಕ ಮಕ್ಕಳು ಸ್ವಲ್ಪ ಜಾಣತನ ತೋರಿದರು ಸಾಕು. ಮುಂದೆ ಅವರು ದೊಡ್ಡ ಮನುಷ್ಯರಾಗುವ ಕನಸು ನೀವೇ ಕಾಣತೊಡಗುತ್ತೀರಿ. ಭರವಸೆ ಹುಟ್ಟಿಸುವ ಯಾವುದೇ ಕೆಲಸಗಾರನ ಭವಿಷ್ಯದ ಅಂದಾಜು ಎಲ್ಲರಿಗೂ ಮನವರಿಕೆ ಆಗಿರುತ್ತದೆ. ಮನುಷ್ಯ ಎಂತಹ ಸೋಮಾರಿಯೇ ಆಗಿರಲಿ ಅವನು ಕನಸು ಕಾಣದೆ ಇರಲಾರ. ಅದು ಆಶಾವಾದಿಯ ಜಗತ್ತು.


ಒಂದು ಕಾಲದಲ್ಲಿ ಕನಸು ಕಂಡು ಆದರೆ ಕೈ ಸುಟ್ಟುಕೊಂಡು ನಿರಾಶಾವಾದಿಯಾಗಿ ಬದಲಾಗಿರುತ್ತಾರಲ್ಲ. ಅವರಿಗೆ ಯಾವುದರಲ್ಲೂ ಭರವಸೆ ಇರುವುದಿಲ್ಲ. ಅವರದ್ದು ಬರೀ ಹತಾಶೆಯ ಮಾತುಗಳು. ನಮ್ಮ ದೇಶ ಬದಲಾಗೋದಿಲ್ಲ ಬಿಡಿ ಅನ್ನುತ್ತಾ ಇರುತ್ತಾರೆ. ಭಾರತದ ಉಪಗ್ರಹ ಚಂದ್ರನ ಮೇಲೆ ಇಳಿದದ್ದು ಅವರಿಗೆ ಸಾಧನೆ ಎನಿಸುವುದಿಲ್ಲ.ಸಂತೆ ವ್ಯಾಪಾರಕ್ಕೆ ಸ್ಮಾರ್ಟ್ ಫೋನ್ ಬಳಕೆಯಾಗುವುದು ಅವರಿಗೆ ಪ್ರಗತಿ ಎನಿಸುವುದಿಲ್ಲ. 'ಏನೇ ಆಗಲಿ ನಮ್ಮ ದೇಶದ ಕಥೆ ಇಷ್ಟೇ ಬಿಡಿ' ಎಂದೇ ಅವರು ಹೇಳುವುದು. ದೇಶದ ಕಥೆ ಹೇಗೆಯೇ ಇರಲಿ ನಿರಾಶಾವಾದಿಗಳ ಕಥೆ ಮಾತ್ರ ಅಲ್ಲಿಯೇ ಉಳಿದಿರುತ್ತದೆ.


ವಿಚಾರ ಮಾಡಿ ನೋಡಿ. ಒಂದು ವಯಸ್ಸಿನವರೆಗೆ (ಸುಮಾರು ೧೬-೧೮ ವರುಷದವರೆಗೆ)  ಮನುಷ್ಯ ಆಶಾವಾದಿಯಾಗಿದ್ದರೆ ತೊಂದರೆ ಏನಿಲ್ಲ. ಆದರೆ ಮುಂದೆಯೂ ಅವನು ವಿಪರೀತ ಕನಸುಗಾರನಾದರೆ, ಅವನಿಗೆ ಜೀವನ ಪೆಟ್ಟು ಕೊಡದೆ ಬಿಡುವುದಿಲ್ಲ. ನಿರಾಶಾವಾದಿಗಳ ಎಚ್ಚರಿಕೆ ಸ್ವಭಾವ ಅವರನ್ನು ಮತ್ತೆ ಎಡವದಂತೆ ಕಾಯುತ್ತದೆ. ಆದರೆ ಸಂಪೂರ್ಣ ಆಶಾವಾದಿಗಳು ಅಪಾಯಗಳನ್ನು ನಿರ್ಲಕ್ಷಿಸುವ ಸ್ವಭಾವ ಹೊಂದಿರುತ್ತಾರೆ. ಅದೇ ಅವರಿಗೆ ಮುಳುವಾಗುತ್ತದೆ. ಮುಂದೆ ನಾವು ದೊಡ್ಡ ಮನುಷ್ಯರಾಗಬೇಕು ನಿಜ ಆದರೆ ಇಂದಿಗೆ ನಾವು ಎಚ್ಚರಿಕೆಯಿಂದ ಕೂಡ ಇರಬೇಕಾದದ್ದು ಅವಶ್ಯಕ ಅಲ್ಲವೇ?


ಸಂಪೂರ್ಣ ಆಶಾವಾದಿಯಾಗದೆ ಅಥವಾ ನಿರಾಶಾವಾದಿಯಾಗದೆ, ಎರಡರ ನಡುವಿನ ವಾಸ್ತವವಾದಿಯಾಗಿ ನೋಡಿ. ಅವನಿಗೆ ಜಗತ್ತು ಹೇಗೆ ಇದೆಯೋ ಹಾಗೆ ನೋಡಲು ಸಾಧ್ಯವಾಗುತ್ತದೆ. ಅವನಿಗೆ ಆಶಾವಾದಿಗೆ ಕಾಣುವ ಅವಕಾಶಗಳು ಮತ್ತು ನಿರಾಶಾವಾದಿಗೆ  ಕಾಣುವ ಅಪಾಯಗಳು ಎರಡು ಗೋಚರಿಸುತ್ತವೆ. ಅವನು ಸಮತೋಲನದಿಂದ, ಸಮಚಿತ್ತದಿಂದ ವರ್ತಿಸುತ್ತಾನೆ. ಅಪಾಯ ಗೊತ್ತಿರದ ಆಶಾವಾದಿ ಮತ್ತು ಪ್ರಯತ್ನ ನಿಲ್ಲಿಸಿರುವ ನಿರಾಶಾವಾದಿಗಿಂತ ಹೆಚ್ಚಿನ ಸಾಧನೆ ವಾಸ್ತವವಾದಿಯದ್ದಾಗಿರುತ್ತದೆ.


ಜಗತ್ತನ್ನೇ ಗೆಲ್ಲ ಹೋರಾಟ ಮಹತ್ವಕಾಂಕ್ಷಿಗಳು ಆಶಾವಾದಿಗಳಾಗಿದ್ದರು. ಅಪಾಯಗಳು ಅವರು ಮೈ ಮರೆತ ಕ್ಷಣಗಳಲ್ಲಿ ಅವರನ್ನು ಸಣ್ಣ ಯುದ್ಧಗಳಲ್ಲಿ ಅಳಿಸಿ ಹಾಕಿದವು. ನೆಪೋಲಿಯನ್ ವಾಟರ್ಲೂ ಕಾಳಗದಲ್ಲಿ ಸೋತ ಹಾಗೆ. ಬಲಿಷ್ಠ ವಿಜಯನಗರ ಸಾಮ್ರಾಜ್ಯವನ್ನು ಐದು ಸಣ್ಣ ರಾಜ್ಯಗಳು ಒಟ್ಟಿಗೆ ಸೇರಿ ಸೋಲಿಸಿದ ಹಾಗೆ. ಹಾಗೆಯೆ ನಿರಾಶಾವಾದಿಗಳು ಯಾವ ಚರಿತ್ರೆಯ ಪುಟಗಳಲ್ಲಿ ಕಾಣ ಸಿಗುವುದಿಲ್ಲ. ಏಕೆಂದರೆ ಅವರು ಸಾಧಿಸುವ ಕೆಲಸಗಳಿಗೆ ಕೈ ಹಾಕಲೇ ಇಲ್ಲ.


ವಾಸ್ತವವಾದಿಗಳ ಉದಾಹರಣೆ ಕೊಡಿ ಎಂದು ಕೇಳಲೇಬೇಡಿ. ಅವರು ಎಲ್ಲೆಲ್ಲೂ ಇದ್ದಾರೆ. ಉದಾಹರಣೆಗೆ ನಿಮ್ಮ ಬ್ಯಾಂಕ್ ಮ್ಯಾನೇಜರ್. ಅವನು ಸಾಲ ಕೊಡುವ ಮುನ್ನ ನಿಮ್ಮ ಸಾಲ ವಾಪಸ್ಸು ಕೊಡುವ ತಾಕತ್ತು ಅಳೆಯುತ್ತಾನೆ. ಅವನು ನಿಮ್ಮ ಕನಸುಗಳಿಗಿಂತ ವಾಸ್ತವಕ್ಕೆ ಬೆಲೆ ಕೊಡುತ್ತಾನೆ. ನವ ಭಾರತ ಕಟ್ಟಿದ ಗಾಂಧಿ-ನೆಹರು-ಪಟೇಲ್ ವಾಸ್ತವವಾದಿಗಳಾಗಿದ್ದರು. ಅವರು ಭಾರತಕ್ಕೆ ಸ್ವತಂತ್ರ ತರುವ ಜೊತೆಗೆ ಭಾರತದಲ್ಲಿ ಪ್ರಜಾಪ್ರಭುತ್ವ ನೆಲೆಯೂರುವಂತೆ ನೋಡಿಕೊಂಡರು. ಬಹುಕಾಲ ಬಾಳಿದ ಯಾವುದೇ ಸಂಘ-ಸಂಸ್ಥೆ, ಇಲ್ಲವೇ ದೇಶಗಳನ್ನೇ ಗಮನಿಸಿ ನೋಡಿ. ಅವುಗಳನ್ನು ವಾಸ್ತವವಾದಿಗಳೇ ಕಟ್ಟಿರುತ್ತಾರೆ. ಯುದ್ಧ ಮಾಡಿ ನಿರಾಶನಾದ ಸಾಮ್ರಾಟ್ ಅಶೋಕ, ಸಮಾಜ ಪ್ರಗತಿಗೆ ಪ್ರಯತ್ನ ಮಾಡುವ ಆಶಾವಾದಿಯೂ ಆಗಿದ್ದ. ಎಲ್ಲವನ್ನು ಹಿಂದೆ ಬಿಟ್ಟು ನಡೆದ ಬುದ್ಧ, ಶಾಂತಿ ಸಂದೇಶ ಸಾರುವ ಆಶಾವಾದಿಯೂ ಆಗಿದ್ದ. ಅದರ ಫಲ ಎಷ್ಟು ಜನ ಪಡೆದುಕೊಂಡರು ಎಂದು ವಿಚಾರ ಮಾಡದೆ ಇರುವ ನಿರಾಶಾವಾದಿಯೂ ಆಗಿದ್ದ.


ಆಶಾವಾದಿಗಳ ಪ್ರಯತ್ನ, ನಿರಾಶಾವಾದಿಗಳ ಎಚ್ಚರಿಕೆ ಈ ಎರಡರ ಸಮ್ಮಿಶ್ರಣ ಬದುಕನ್ನು ಸುಲಭವಾಗಿಸುತ್ತದೆ. ಅವುಗಳು ವಾಹನದಲ್ಲಿ ಆಕ್ಸಿಲರೇಟರ್ ಮತ್ತು ಬ್ರೆಕ್ ಎರಡರನ್ನು ಅಗತ್ಯಕ್ಕೆ ತಕ್ಕಂತೆ ಉಪಯೋಗ ಮಾಡಿಕೊಂಡು ಮುಂದೆ ಸಾಗಿದ ಹಾಗೆ. ಕನಸುಗಳ ಜೊತೆಗೆ ಅಪಾಯಗಳನ್ನು ಸರಿದೂಗಿಸಿಕೊಂಡು ಹೋಗುವ ವಾಸ್ತವವಾದಿಗಳು ನಾವಾಗಬೇಕಲ್ಲವೇ? ನೀವು ಏನಂತೀರಿ?