Showing posts with label ಕನ್ನಡ ಪುಸ್ತಕ ಪರಿಚಯ. Show all posts
Showing posts with label ಕನ್ನಡ ಪುಸ್ತಕ ಪರಿಚಯ. Show all posts

Sunday, September 24, 2023

ಕಾದಂಬರಿ: ಸನ್ಯಾಸಿಯ ಬದುಕು (ಶಿವರಾಮ ಕಾರಂತ)

ಜೂಜಿನಲ್ಲಿ ದುಡ್ಡು ಕಳೆದುಕೊಂಡುಕೊಂಡು, ಹತಾಶನಾಗಿ, ಜೀವನದಲ್ಲಿ ಜುಗುಪ್ಸೆಗೊಂಡು ದೇಶಾಂತರ ಹೋಗುವ ಶಂಕರರಾಯ ಮತ್ತು ಅವನು ಬಿಟ್ಟು ಹೋದ ಪತ್ನಿಯನ್ನು ಮತ್ತು ಮಕ್ಕಳನ್ನು ಸಲಹುವ ರುಕ್ಮಿಣಿ ಮಾಯಿ ಈ ಕಾದಂಬರಿಯ ಮುಖ್ಯ ಪಾತ್ರಗಳು.


ಸಾಲ ಮಾಡಿ, ಜವಾಬಾರಿಯನ್ನು ನಿಭಾಯಿಸದೆ ಹೆಂಡತಿ ಸುಮಿತ್ರೆ ಮತ್ತು  ಮಕ್ಕಳಿಬ್ಬರನ್ನು ಹಿಂದೆ ಬಿಟ್ಟುಹೋಗುವ ಶಂಕರರಾಯ ಸಾಧುಗಳ ಜೊತೆ ಅಲೆಯುತ್ತ ದೇಶ ಸುತ್ತುತ್ತಾನೆ. ಅವರ ಅಲೌಕಿಕ ಭಾಷೆ ಕಲಿಯುತ್ತಾನೆ. ಅವನು ಹೆಸರು ಶಿವಾನಂದ ನಂತರ ಕೃಷ್ಣಾನಂದ ಎಂದು ಬದಲಾಗುತ್ತದೆ.  ಅವನ ಸುತ್ತಾಟದ ಸಮಯದಲ್ಲಿ ಅವನಿಗೆ ಭಕ್ತರು, ಅಭಿಮಾನಿ ಬಳಗ ಬೆಳೆಯುತ್ತದೆ. ತಾನು ಬಿಟ್ಟು ಹೋದ ಊರಿನ ಸಮೀಪವೇ ಅವನಿಗೆ ಭಕ್ತರು ಆಶ್ರಮ ನಿರ್ಮಿಸುತ್ತಾರೆ. ಅವನಿಗೆ ದೇವ ದೂತ ಎಂದು ಜನ ಪೂಜಿಸಲು ತೊಡಗುತ್ತಾರೆ.


ಗಂಡ, ಮಕ್ಕಳಿಲ್ಲದೆ ಅವರಿವರ ಮನೆ ಕೆಲಸದಲ್ಲಿ ನೇರವಾಗಿ, ಅದರಿಂದಲೇ ಹೊಟ್ಟೆ ತುಂಬಿಸಿಕೊಳ್ಳುವ ರುಕ್ಮಿಣಿ ಮಾಯಿ, ಸುಮಿತ್ರೆಯ ಪರಿಸ್ಥಿತಿ ಕಂಡು ಮರುಗುತ್ತಾಳೆ. ಅವಳಿಗೆ ತಾಯಿಯ ಸ್ಥಾನದಲ್ಲಿ ನಿಂತು ವರುಷಗಳ ಕಾಲ ಅವಳ ಕುಟುಂಬಕ್ಕೆ ಆಸರೆಯಾಗುತ್ತಾಳೆ. ಅವಳ ಮಕ್ಕಳನ್ನು ಪೋಷಿಸುತ್ತಾಳೆ. ಕೊನೆಗೆ ಆ ಮನೆಯಲ್ಲೇ ಪ್ರಾಣ ತ್ಯಜಿಸುತ್ತಾಳೆ.


ಜೀವನೋತ್ಸಾಹ, ಸಮಾಜಮುಖಿ ಕಾದಂಬರಿಗಳನ್ನು ಬರೆದ ಶಿವರಾಮ ಕಾರಂತರು ಇಲ್ಲಿಯೂ ಕೂಡ ಜೀವನ ಕಷ್ಟಗಳನ್ನು ಎದುರಿಸುತ್ತ ಅದರಲ್ಲೇ ಸಾರ್ಥಕತೆ ಕಾಣುವ ಜೀವಗಳನ್ನು ಅಭಿನಂದಿಸುತ್ತಾರೆ. ಹಾಗೆಯೆ, ಸನ್ಯಾಸಿಯಾಗಿ ದೇವರನ್ನು ಹುಡುಕುತ್ತ ಹೊರಟವರು, ವೈರಾಗ್ಯದ ಸೋಗಿನಲ್ಲಿ ತಾವು ಬಿಟ್ಟು ಬಂದ ಪ್ರಾಪಂಚಿಕ ಆಸೆಗಳನ್ನು ಇನ್ನೂ ದೊಡ್ಡ ಪ್ರಮಾಣದಲ್ಲಿ ಅನುಭವಿಸಲು ತೊಡಗುತ್ತಾರೆ ಮತ್ತು ಅದಕ್ಕೆ ದೇವರ ಇಚ್ಛೆ ಎನ್ನುವ ಸಬೂಬು ನೀಡುತ್ತಾರೆ ಎನ್ನುವುದನ್ನು ಸೊಗಸಾಗಿ ಚಿತ್ರಿಸುತ್ತಾರೆ. 

 

ಇದು ೧೯೪೮ ರಲ್ಲಿ ಪ್ರಕಟಗೊಂಡ ಕಾದಂಬರಿ. ಆಗ ಕಾರಂತರು ಸುಮಾರು ನಲವತ್ತೈದು ವರ್ಷ ವಯಸ್ಸಿನವರು. ಅವರ 'ಮೂಕಜ್ಜಿಯ ಕನಸುಗಳು' ಪುಸ್ತಕ ಬರುವುದಕ್ಕೆ ಇನ್ನೂ ಮೂವತ್ತು ವರ್ಷ ಬಾಕಿಯಿತ್ತು. ಆ ವಯಸ್ಸಿನಲ್ಲೇ ಅವರು  ವೈರಾಗಿಗಳ ಸೋಗಿನಲ್ಲಿ ಇರುವ ಜನರ ಮನಸ್ಸಿನಾಳಕ್ಕೆ ಇಳಿದು, ಅವರ ಅನ್ವೇಷಣೆ ಮೊದಲಿಗೆ ಪ್ರಾಮಾಣಿಕವಾಗಿದ್ದರೂ ಮತ್ತೆ ಸಮಾಜದೊಳಗೆ ದೇವ ಮಾನವರ ರೂಪದಲ್ಲಿ ಹೇಗೆ ವಾಪಸ್ಸಾಗುತ್ತಾರೆ ಮತ್ತೆ ಅವೇ ಪ್ರಾಪಂಚಿಕ ಹಂಬಲಗಳಿಗೆ ಹೇಗೆ ಬಲಿಯಾಗುತ್ತಾರೆ ಎನ್ನುವುದನ್ನು ಈ ಕಾದಂಬರಿಯಲ್ಲಿ ಹಿಡಿದಿಟ್ಟಿದ್ದಾರೆ. ಹಾಗೆಯೆ ನಮ್ಮೊಳಗೇ ಸಮಾಜದ ಕೆಳಸ್ತರದಲ್ಲಿ ಬದುಕಿದರೂ, ಮಾನವೀಯತೆಯನ್ನು ಎತ್ತಿ ಹಿಡಿಯುವ ಜೀವಗಳು ಮತ್ತು ಅದರಲ್ಲೇ ದೇವರನ್ನು ಕಾಣುವ ವ್ಯಕ್ತಿಗಳ ಸಾರ್ಥಕತೆ  ಸನ್ಯಾಸಿಗಳಿಗಿಂತ ಹೆಚ್ಚಿನದು ಎಂದು ತೋರಿಸಿಕೊಡುತ್ತಾರೆ.


ಬದುಕನ್ನು ಪ್ರೀತಿಸಿದ ಕಾರಂತರು ತಮ್ಮ ಕಾದಂಬರಿಗಳ ಮೂಲಕ ಕೂಡ ಅದೇ ಸಂದೇಶವನ್ನೇ ಸಾರುತ್ತಾರೆ.





Sunday, March 19, 2023

ಓದಿದ ಪುಸ್ತಕ: ಹಸ್ತಿನಾವತಿ (ಲೇಖಕರು: ಜೋಗಿ)

ತನ್ನ ಶ್ರಮದಿಂದ ಪಕ್ಷ ಕಟ್ಟಿ, ಚುನಾವಣೆ ಗೆದ್ದು ಅಧಿಕಾರಕ್ಕೆ ಬಂದ ಪ್ರಧಾನ ಮಂತ್ರಿ, ಪಕ್ಷದ ಹಿತಕ್ಕೆ ಏನಾದರು ಮಾಡಲಿಕ್ಕೆ ಸಿದ್ಧನಿರುವ ಪಕ್ಷದ ಮುಖ್ಯಸ್ಥ, ಅವರನ್ನು ದೂಷಣೆಗೆ ಈಡು ಮಾಡಲು ತಂತ್ರ ರೂಪಿಸುವ ಎದುರಾಳಿ ಪಕ್ಷ, ಸರ್ಕಾರದ ಅಧಿಕಾರವನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳಲು ಮತ್ತು ಅದಕ್ಕಾಗಿ ಬೆದರಿಕೆ ಒಡ್ಡುವ ಅನೇಕ ಜನ. ಇವುಗಳ ನಡುವೆ ತಂತ್ರಗಾರಿಕೆಗೆ ಪ್ರತಿತಂತ್ರ ಹೆಣೆಯುವ, ತಪ್ಪುಗಳನ್ನು ಸರಿದೂಗಿಸುವ, ತೆರೆ ಮರೆಯಲ್ಲೇ ಆತಂಕಕಾರಿ ಪರಿಸ್ಥಿತಿಗಳನ್ನು ನಿಭಾಯಿಸುವ ಹೊಣೆ ಹೊತ್ತ ಕಾದಂಬರಿಯ ಮುಖ್ಯ ಪಾತ್ರ ಸಹದೇವ.


ಚುನಾವಣೆ ಹತ್ತಿರ ಬಂದಾಗ ರಾಜಕೀಯ ಸನ್ಯಾಸ ತೆಗೆದುಕೊಳ್ಳುವ ಇಂಗಿತ ಪ್ರಧಾನಿ  ವ್ಯಕ್ತ ಪಡಿಸಿದಾಗ, ಪಕ್ಷದ ಮುಖ್ಯಸ್ಥ ಗಾಬರಿಯಾಗುತ್ತಾರೆ. ಅವರಿಲ್ಲದೆ ಇದ್ದರೆ ಚುನಾವಣೆ ಸೋಲುವ ಭೀತಿ. ಪಕ್ಷದ ಪೊಲಿಟಿಕಲ್ ಸ್ಟ್ರಾಟಜಿಸ್ಟ್ ಆದ ಸಹದೇವನಿಗೆ ಅದನ್ನು ತಪ್ಪಿಸುವ ಜವಾಬ್ದಾರಿ ಹೆಗಲೇರುತ್ತದೆ. ಸಮಸ್ಯೆಯನ್ನು ಸಹದೇವ ಕೆದಕುತ್ತಾ ಹೋದಾಗ ಪ್ರಧಾನಿಯ ಹಿಂದಿನ ಜೀವನ, ಅದರ ಬಗ್ಗೆ ತಿಳಿದ ಒಬ್ಬ ಪತ್ರಿಕೋದ್ಯಮಿ ಅವರನ್ನು ಬೆದರಿಸುವ ಪ್ರಯತ್ನ ಮಾಡಿರುವುದು ತಿಳಿಯುತ್ತದೆ. ಕಾದಂಬರಿಗೆ ಹೊಸ ಪಾತ್ರಗಳು ಸೇರುತ್ತಾ ಹೋಗುತ್ತವೆ.


ತಂತ್ರಗಾರಿಕೆ-ಪ್ರತಿತಂತ್ರ ಹೂಡುವ ಎಲ್ಲ ಮನುಷ್ಯರಿಗೂ ಒಂದು ಪ್ರತ್ಯೇಕ ಜೀವನ ಇದ್ದೇ ಇರುತ್ತದೆ. ಸಹದೇವನಿಗೂ ಅವನ ತಾಯಿಯಿದ್ದಾಳೆ. ಎಲ್ಲದರಲ್ಲೂ ನೆರವಾಗುವ ಸಹಾಯಕಿ ಮತ್ತು ಮನಸ್ಸು ಮತ್ತು ದೇಹ ಹಂಚಿಕೊಳ್ಳುವ ಸ್ನೇಹಿತೆ ಇದ್ದಾಳೆ. ರಹಸ್ಯ ಕೆಲಸಗಳಿಗೆ ನೆರವಾಗಲು ಅನೇಕ ಸರ್ಕಾರೀ ಅಧಿಕಾರಿಗಳು ಅವನ ಬೆಂಬಲಕ್ಕೆ ಇದ್ದಾರೆ. ಹಾಗೆಯೆ ಅವನನ್ನು ಹಣಿಯಲು ಎತ್ನಿಸುವ ಪ್ರತಿಸ್ಪರ್ಧಿಗಳು ಕೂಡ. ಹೊರಗಿನ ಪ್ರಪಂಚಕ್ಕೆ ತನ್ನ ಬಗ್ಗೆ ಯಾವುದೇ ವಿಷಯ ಗೊತ್ತಾಗದಂತೆ ಎಚ್ಚರ ವಹಿಸುವ ಸಹದೇವನಿಗೆ ಅವನ ಅಂತರಂಗದಲ್ಲಿ ಅನೇಕ ಗೊಂದಲಗಳಿವೆ. ಅದನ್ನು ಮೀರಿ ಅವನು ತನ್ನ ಜವಾಬ್ದಾರಿ ನಿಭಾಯಿಸಬೇಕು. ತನ್ನ ಪಕ್ಷದ ಹಿತ ಕಾಯಬೇಕು.


ಉಳಿದ ಪಾತ್ರಗಳಾದ ಪ್ರಧಾನ ಮಂತ್ರಿ, ಪಕ್ಷದ ಮುಖ್ಯಸ್ಥ, ಸಹದೇವನ ತಾಯಿ, ಸ್ನೇಹಿತೆ, ಅವನ ಪ್ರತಿಸ್ಪರ್ಧಿಗಳು ಎಲ್ಲರಿಗೂ ಅವರದೇ ಆದ ಮಿತಿಗಳಿವೆ. ಅವರದ್ದೇ ಆದ ಇತಿಹಾಸ ಇದೆ. ಹಾಗೆಯೆ ನಂಬಿಕೆ, ಆಸೆಗಳು ಕೂಡ.


ಸಮಸ್ಯೆಗೆ ಪರಿಹಾರ ಕಾಣಲು ಪ್ರಧಾನ ಮಂತ್ರಿಯವರೊಂದಿಗೆ ಅವರ ಸಾಹಿತ್ಯ ಸ್ನೇಹಿತ ಒಬ್ಬರ ಮನೆಯಲ್ಲಿ ಠಿಕಾಣಿ ಹೂಡುವ ಸಹದೇವನಿಗೆ ಹೊಸ ಜನರ ಮತ್ತು ಜೀವನದ ಹೊಸ ಆಯಾಮಗಳ ಪರಿಚಯವಾಗುತ್ತದೆ. ಮಹಾಭಾರತ ಬರೆದ ವ್ಯಾಸರ ಪಾತ್ರ ಅವನಿಗೆ ಪರಿಚಯ ಆಗುತ್ತದೆ. ಅಲ್ಲಿ ಇರುವವರಿಂದ ತಾನು ಬೇರೆ ಎಂದು ಯೋಚಿಸುವ ಅವನು ಕ್ರಮೇಣ ಅವರಲ್ಲಿ ಒಂದಾಗುತ್ತಾನೆ. ಎಲ್ಲವು ರಾಜಕೀಯದ ಲೆಕ್ಕಾಚಾರ ಎನ್ನುವ ಅವನ ನಿಲುವು ಬದಲಾಗುತ್ತದೆ. ಮುಂದೆ ಮದುವೆ ಆಗುವ ನಿರ್ಧಾರ ಮಾಡುತ್ತಾನೆ. ಐವತ್ತನೇ ವಯಸ್ಸಿನಲ್ಲಿ ಅವನ ಜೀವನಕ್ಕೆ ಹೊಸತನ ಬರುತ್ತದೆ.


ಆದರೆ ರಾಜಕೀಯಕ್ಕೆ ಕೊನೆ ಎಲ್ಲಿ? ಭಾರತ ಇರುವವರೆಗೆ ಮಹಾಭಾರತ ಇರಬೇಕಲ್ಲವೇ? ಅಲ್ಲಿ ಪಾತ್ರಗಳಷ್ಟೇ ಅಭಿನಯಿಸುವುದಿಲ್ಲ. ಪ್ರೇಕ್ಷಕರು ಕೂಡ ಮೂಕ ಅಭಿನಯ ನೀಡುವವರೇ.


ಕಾದಂಬರಿಯ ಹಲವಾರು ಪುಟಗಳು ಮನೋಜ್ಞವಾಗಿ ಚಿತ್ರಗೊಂಡಿವೆ. "ಸಂಭವಾಮಿ ಯುಗೇ ಯುಗೇ" ಎನ್ನುವ ವ್ಯಾಸ, ದೇಶದ ಪ್ರಗತಿ ಬಯಸುವ ಪ್ರಧಾನಿ, ಪಕ್ಷದ ಹಿತ ಬಯಸುವ ಮುಖ್ಯಸ್ಥ, ಬದುಕಿನ ಸಣ್ಣ ಸಂಗತಿಗಳನ್ನು ಆನಂದಿಸುವ ಸಹದೇವನ ಗೆಳತಿ ಹೀಗೆ ಕಾದಂಬರಿಯ ಎಲ್ಲ ಪಾತ್ರಗಳು ಹದವಾಗಿ ಮೂಡಿ ಬಂದಿವೆ.


ಕ್ಲಿಷ್ಟ ವಿಷಯಗಳನ್ನು ಸರಳವಾಗಿ ಅಕ್ಷರದಲ್ಲಿ ಮೂಡಿಸುವ ಲೇಖಕ ಜೋಗಿಯವರಿಗೆ ಅಭಿನಂದನೆಗಳು. ಒಬ್ಬರ ಬಾಯಿಂದ ಇನ್ನೊಬರಿಗೆ ತಲುಪಿದ ಮಹಾಭಾರತದಲ್ಲಿ ಕಥೆ ಹೇಳಿದವರ ಪ್ರಜ್ಞೆಯು ಕೂಡ ಕಥೆಯಾದಂತೆ, ಹಸ್ತಿನಾವತಿ ಓದಿದ, ಅದನ್ನು ನಮಗೆ ತಿಳಿದಂತೆ ಅರ್ಥೈಸಿಕೊಳ್ಳುವ ನಮ್ಮ ಕಥೆಯು ಕೂಡ ಅದರಲ್ಲಿ ಸೇರಿಕೊಳ್ಳುತ್ತದೆ. ವ್ಯಾಸನ ಭಾರತ, ಜೋಗಿಯ ಭಾರತವಾಗಿ ಮತ್ತು ಅದು ಓದುಗರ ಭಾರತವಾಗಿ ಪರಿವರ್ತಿತಗೊಳ್ಳುತ್ತ ಸಾಗುತ್ತದೆ.



Sunday, June 19, 2022

ಕಥೆ: ಸೌಂದರ್ಯ ತಂದ ದುರಾದೃಷ್ಟ

(ಇತಿಹಾಸದ ಹಲವಾರು ಅಂಶಗಳನ್ನು ಒಟ್ಟು ಮಾಡಿ ಬರೆದ ಕಾಲ್ಪನಿಕ ಕಥೆ)

 


ಅದು
೧೪ನೇ ಶತಮಾನ. ವಿಜಯನಗರದ ಸಂಸ್ಥಾಪಕರಲ್ಲಿ ಒಬ್ಬನಾದ ಬುಕ್ಕರಾಯನ ಮೊಮ್ಮಗ ದೇವರಾಯ ಆಳ್ವಿಕೆ ನಡೆಸುತ್ತಿದ್ದ ಕಾಲ. ವಿಜಯನಗರವು ತುಂಗಭದ್ರೆಯ ದಡದಲ್ಲಿ ಹುಟ್ಟಿದರೂ ಅದು ಕಾಲ ಕ್ರಮೇಣ ಕೃಷ್ಣ, ಭೀಮಾ ನದಿಗಳವರೆಗೂ ಹಬ್ಬಿತ್ತು. ಅದೊಂದು ದಿನ ಒಬ್ಬ ಅರ್ಚಕನೊಬ್ಬ ರಾಜನನ್ನು ಭೇಟಿಯಾಗಲು ರಾಜಧಾನಿ ಹಂಪೆಗೆ ಬಂದಿದ್ದ. ರಾಜನನ್ನು ಕಾಣಲು ತವಕಿಸುವ ಕವಿಗಳು, ವಿದ್ವಾಂಸರು, ಅರ್ಚಕರಿಗೇನು ಹಂಪೆಯಲ್ಲಿ ಕಡಿಮೆ ಇರಲಿಲ್ಲ. ಆಸ್ಥಾನದಲ್ಲಿ ತುಂಬಿದ್ದ ಹರಟೆ, ಸದ್ದು-ಗದ್ದಲಗಳೆಲ್ಲ ರಾಜನ ಆಗಮನದೊಂದಿಗೆ ಮೌನವಾಯಿತು. ರಾಜಯೋಗ್ಯ ವಸ್ತ್ರಗಳಲ್ಲಿ ಅಲಂಕೃತನಾಗಿದ್ದ ರಾಜ, ಸಿಂಹಾಸನದಲ್ಲಿ ಕುಳಿತು ಸಂಜ್ಞೆ ಮಾಡಿದೊಡನೆ ಮತ್ತೆ ಸಭೆಯ ಕಲಾಪಗಳು ಆರಂಭವಾದವು. 

 

ಅರ್ಚಕನ ಸರದಿ ಬಂದಾಗ, ಅವನು ರಾಜನಿಗೆ ವಂದಿಸುತ್ತಾ ಹೇಳಿದ "ಮನ್ಮಥನಂತೆ ಕಂಗೊಳಿಸುತ್ತ ಇರುವ ರಾಜನೇ, ನಿನ್ನ ಪಕ್ಕ ಒಬ್ಬ ರತಿಯೂ ಕುಳಿತಿದ್ದರೆ ಅದು ನೋಡುಗರ ಕಣ್ಣಿಗೆ ಹಬ್ಬವಾಗುತ್ತಿತ್ತು"        

 

ಆಶ್ಚರ್ಯ ಚಕಿತನಾದ ರಾಜ ಕೇಳಿದ "ಅರ್ಚಕರೇ, ರತಿಯಂತಹ ಸುಂದರಿಯನ್ನು ನೀವು ಎಲ್ಲಾದರೂ ನೋಡಿದ್ದೀರಾ?"

 

ಅರ್ಚಕ ಹೇಳಿದ "ಹೌದು ಮಹಾರಾಜ. ರತಿಯೇ ನಿಮಗಾಗಿ ಮರು ಜನ್ಮ ತಾಳಿ ಬಂದಿದ್ದಾಳೆ. ಹಂಸದ ನಡಿಗೆ, ಉದ್ದನೆಯ ಕೇಶ ರಾಶಿ, ಕೋಗಿಲೆಯ ಕಂಠ. ಅವಳ ಅಂದವನ್ನು ಹೊಗಳಲು ಪದಗಳು ಸಾಲವು"

 

ರಾಜನಲ್ಲಿ ಆಸೆ ಹುಟ್ಟಿತು. "ಅವಳು ಇರುವುದು ಎಲ್ಲಿ? ಅವಳ ತಂದೆ-ತಾಯಿ ಯಾರು?"

 

ಅರ್ಚಕ ಉತ್ತರಿಸಿದ "ಅವಳು ಮುದಗಲ್ ನಲ್ಲಿ ಇರುವ ಒಬ್ಬ ಅಕ್ಕಸಾಲಿಗನ ಮಗಳು"

 

ರಾಜ ತನ್ನಲ್ಲೇ ವಿಚಾರ ಮಾಡಿದ 'ಮುದಗಲ್ ಇರುವುದು ನಮ್ಮ ಶತ್ರುಗಳ ಸರಹದ್ದಿನಲ್ಲಿ  ಅಲ್ಲವೇ?' ಮತ್ತು ಅರ್ಚಕನನ್ನು ಉದ್ದೇಶಿಸಿ ಹೇಳಿದ "ನೀನು ನಮಗೆ ವಿಷಯ ತಿಳಿಸಿದ್ದಕ್ಕೆ ಧನ್ಯವಾದಗಳು. ನೀನು ನಮ್ಮ ರಾಯಭಾರಿಯಾಗಿ ಅಲ್ಲಿಗೆ ತೆರಳಿ ಅವಳನ್ನು ವರಿಸುವ ನಮ್ಮ ಆಸೆಯನ್ನು ತಿಳಿಸಿ."

 

ಬಂಗಾರ, ವಜ್ರದ ಆಭರಣಗಳನ್ನು ಹುಡುಗಿಯ ಕುಟುಂಬಕ್ಕೆ ಕಾಣಿಕೆಯಾಗಿ ಅರ್ಪಿಸಲು ತೆಗೆದುಕೊಂಡು ಪ್ರಯಾಣ ಬೆಳೆಸಿದ ಅರ್ಚಕ. ಮುದುಗಲ್ ಪಟ್ಟಣದ ಅಕ್ಕಸಾಲಿಗನ ಮನೆ ತಲುಪಿದ. ಅವರಿಗೆ ವಿಷಯ ತಿಳಿಸಿದ.

 

ಆಶ್ಚರ್ಯ, ಸಂತೋಷ ಅವರಿಗೆ ಒಟ್ಟಿಗೆ ಆಗಿ ಅಕ್ಕಸಾಲಿಗ ತನ್ನ ಮಗಳಿಗೆ ಹೇಳಿದ "ನಾಳೆಯೇ ಹಂಪೆಗೆ ಹೊರಟು ಬಿಡೋಣ. ಒಳ್ಳೆಯ ರೇಷ್ಮೆ ಸೀರೆ ಉಟ್ಟು ರಾಣಿಯ ಹಾಗೆ ತಯಾರಿ ಆಗಿಬಿಡು".

 

ಅವನ ಮಗಳು ಪೆರ್ತಾಳ್ ತನಗೆ ಮದುವೆ ಇಷ್ಟ ಇಲ್ಲ ಎಂದು ಹೇಳಿದಳು. "ನಾನು ರಾಣಿಯಾದರೆ ಸಾಮಾನ್ಯರಂತೆ ಬದುಕಲು ಸಾಧ್ಯವಿಲ್ಲ. ನಿಮ್ಮನ್ನು ಬಿಟ್ಟು ದೂರ ಬಾಳಲು ನಾನು ಸಿದ್ಧಳಿಲ್ಲ"

 

ಪೆಚ್ಚು ಮೊರೆ ಹಾಕಿಕೊಂಡು ಅರ್ಚಕ ಹಿಂದಿರುಗಿದ. ವಿಷಯ ಅರಿತು ರಾಜ ಕೋಪದಿಂದ ಕೆಂಡಾಮಂಡಲನಾದ. ತನಗಾದ ಅವಮಾನ ಸರಿಪಡಿಸಲು ಎರಡು ಸಾವಿರ ಕುದುರೆ ಸವಾರರನ್ನು ಕರೆದುಕೊಂಡು ತನ್ನ ಶತ್ರುಗಳಾದ ಬಹಮನಿ ಸುಲ್ತಾನರ ರಾಜ್ಯಕ್ಕೆ ಸೇರಿದ ಮುದಗಲ್ ಪಟ್ಟಣಕ್ಕೆ ಲಗ್ಗೆ ಹಾಕಿದ. ಕುದುರೆಗಳು ನಾಗಾಲೋಟದಲ್ಲಿ ಬರುವುದು ದೂರದಿಂದ ಗಮನಿಸಿದ ಊರಿನ ಜನರು ಕೈಗೆ ಸಿಕ್ಕ ಸಾಮಾನುಗಳನ್ನು ತೆಗೆದುಕೊಂಡು ಊರು ತೊರೆದು ಹೋದರು. ರಾಜ ಬರುವ ಹೊತ್ತಿಗೆಲ್ಲ ಪಟ್ಟಣದ ಬೀದಿಗಳೆಲ್ಲ ಖಾಲಿಖಾಲಿ. ಪೆರ್ತಾಳ್ ಕುಟುಂಬ ಕೂಡ ಊರು ಬಿಟ್ಟು ಹೋಗಿತ್ತು. ಅದನ್ನು ಕಂಡು ಹತಾಶನಾದ ರಾಜ, ಹಿಂತಿರುಗುವ ಮುನ್ನ ಸುತ್ತ ಮುತ್ತಲಿನ ಪ್ರದೇಶ ಹಾಳುಗೆಡವಲು ಆದೇಶ ನೀಡಿದ.

 

ಸುದ್ದಿ ಬಹಮನಿ ಸುಲ್ತಾನ ಫಿರೋಜ್ ಶಾನಿಗೆ ತಲುಪಲು ತಡ ಆಗಲಿಲ್ಲ. ವಿಜಯನಗರವನ್ನು ಆಕ್ರಮಣ ಮಾಡಲು ಇದೆ ಸುಸಂದರ್ಭ ಎಂದರಿತು ಅವನು ತನ್ನ ಸಂಪೂರ್ಣ ಸೇನೆಯೊಂದಿಗೆ ಹಂಪಿ ತಲುಪಿಯೇ ಬಿಟ್ಟ. ಇದು ದೇವರಾಯ ನಿರೀಕ್ಷಿಸಿರಿರಲಿಲ್ಲ. ಅವನು ತನ್ನ ಸೇನೆಯನ್ನು ಮತ್ತು ಸಹಾಯವನ್ನು ಎಲ್ಲ ಕಡೆಯಿಂದ ಬರ ಹೇಳಿದರೂ, ಅವು ತಲಪುವಷ್ಟರಲ್ಲಿ ಆಗಬಹುದಾದ ಅಪಾಯ ಅರಿತು ಸಂಧಿಗೆ ಮುಂದಾದ. ತನ್ನ ಮಗಳನ್ನು ಫಿರೋಜ್ ಶಾನಿಗೆ ಮದುವೆ ಮಾಡಿ ಕೊಟ್ಟು, ಮೂರು ದಿನಗಳ ಕಾಲ ಸತ್ಕರಿಸಿ, ಕಪ್ಪ ಕಾಣಿಕೆಗಳೊಂದಿಗೆ ಅವನನ್ನು ಬೀಳ್ಕೊಟ್ಟ. ಮನಸ್ಸಿನ ಮೂಲೆಯಲ್ಲಿ ಶತ್ರುವಿಗೆ ತಲೆಬಾಗಬೇಕಾದ ಪರಿಸ್ಥಿತಿಗೆ ನೊಂದುಕೊಂಡು ಇದಕ್ಕೆ ಸರಿಯಾದ ಉತ್ತರ ಹೇಳದೇ ಬಿಡುವಿದಿಲ್ಲ ಎಂದು ಶಪಥ ಮಾಡಿದ.

 

ತನ್ನ ಬಹಮನಿ ರಾಜ್ಯಕ್ಕೆ ಮರಳಿದ ಫಿರೋಜ್ ಶಾ, ಪೆರ್ತಾಳ್ ಅನ್ನು ಎಲ್ಲಿದ್ದರು ಹುಡುಕಿ ತರುವಂತೆ ಆದೇಶಿಸಿದ. ಕೆಲವೇ ದಿನಗಳಿಗೆ ಅವನ ಆಸ್ಥಾನಕ್ಕೆ ಪೆರ್ತಾಳ್ ಅನ್ನು ಹಾಜರು ಪಡಿಸಿದರು ಅವನ ಸೈನಿಕರು. ಅವಳ ಸೌಂದರ್ಯ ಕಂಡು ಬೆರಗಾದ ಫಿರೋಜ್ ಶಾ ತನ್ನ ಮಗ ಹಸನ್ ಖಾನ್ ನೊಂದಿಗೆ ಅವಳ ಮದುವೆ ಮಾಡಿಸಿದ.

 

ಅದಾಗಿ ಕೆಲ ವರುಷಗಳಿಗೆ ದೇವರಾಯನಿಗೆ ತನ್ನ ಸೇಡು ತೀರಿಸಿಕೊಳ್ಳುವ ಕಾಲ ಬಂದೆ ಬಿಟ್ಟಿತು. ಯುದ್ಧಕ್ಕೆ ಸಕಲ ತಯ್ಯಾರಿ ಮಾಡಿಕೊಂಡಿದ್ದ ದೇವರಾಯ ಸಲ ಶತ್ರುವನ್ನು ಯುದ್ಧದಲ್ಲಿ ಮಣಿಸಿಯೇ ಬಿಟ್ಟ. ಸೋಲಿನಿಂದ ಕಂಗೆಟ್ಟ ಫಿರೋಜ್ ಶಾ ಅಧಿಕಾರವನ್ನು ತನ್ನ ತಮ್ಮನಿಗೆ ಒಪ್ಪಿಸಿ ರಾಜ್ಯದಿಂದ ಹೊರ ನಡೆದ. ಅವನ ತಮ್ಮ ಅಹ್ಮದ್ ಶಾ ತನ್ನ ಅಣ್ಣನ ಮಗನಾದ ಹಸನ್ ಖಾನ್ ಕಣ್ಣು ಕೀಳಿಸಿ ಗೃಹಬಂಧಿಯನ್ನಾಗಿಸಿದ. ಮತ್ತು ಅವನಿಗೆ ತನ್ನ ಪತ್ನಿ ಪೆರ್ತಾಳ್ ಸೌಂದರ್ಯ ಸವಿಯುವ ಸೌಭಾಗ್ಯ ಕಸಿದುಕೊಂಡುಬಿಟ್ಟ.

 

ಎರಡು ದೊಡ್ಡ ರಾಜ್ಯಗಳ ಕಾದಾಟಕ್ಕೆ ಕಾರಣವಾದ ಪೆರ್ತಾಳ್ ಚೆಲುವು ಅವಳಿಗೆ ಸ್ವತಂತ್ರ ಜೀವನದ ಹಕ್ಕು ಕಸಿಯುವುದಲ್ಲದೆ, ಅವಳನ್ನು ಬಯಸಿದವರಿಗೆ ಕೂಡ ನೆಮ್ಮದಿ ತರಲಿಲ್ಲ.

 

References:

1.      Deva Raya: Wikipedia

2.      Roving Eyes by Mahesh S

3.     A Forgotten Empire by Robert Sewell