Thursday, July 29, 2021

ಆಸೆಯ ಮೂಲ?

ಆಸೆಯೇ ದುಃಖಕ್ಕೆ ಮೂಲ ಎಂದ ಬುದ್ಧ. ಸರಿ, ಆದರೆ ಆಸೆಯ ಮೂಲ ಯಾವುದು? ಆಸೆಗಳಿಗೆ ಕೊನೆಯಿಲ್ಲದಂತೆ ಆಗಿದ್ದು ಹೇಗೆ? ಅದರ ಬಗ್ಗೆ ಬುದ್ಧ ಏನು ಹೇಳಿದ್ದಾನೋ ಗೊತ್ತಿಲ್ಲ. ಆದರೆ ಪ್ರಕೃತಿ ವಿಕಾಸ (Evolution) ಇದರ ಬಗ್ಗೆ ಸಾಕಷ್ಟು ಬೆಳಕು ಚೆಲ್ಲುತ್ತದೆ.


ಪ್ರಕೃತಿ ಸಹಸ್ರಾರು ಜೀವಿಗಳನ್ನು ಸೃಷ್ಟಿಸಿ, ಅವುಗಳು ನಿರಂತರ ವಿಕಾಸ ಹೊಂದುವ ಪ್ರಕ್ರಿಯೆಯನ್ನು ಸದಾ ಜಾರಿಯಲ್ಲಿ ಇಟ್ಟಿರುತ್ತದೆ. ಪರಿಸರಕ್ಕೆ ತಕ್ಕಂತೆ ಬದಲಾವಣೆ ಹೊಂದಬಲ್ಲ ಜೀವಿಗಳು ಮಾತ್ರ ಉಳಿದುಕೊಂಡು ತಮ್ಮ ವಂಶವನ್ನು ಮುಂದುವರೆಸಿಕೊಂಡು ಹೋಗುತ್ತವೆ. ಉಳಿದವುಗಳನ್ನು ನಿರ್ದಾಕ್ಷಿಣ್ಯವಾಗಿ ಪ್ರಕೃತಿ ಹೊಸಕಿ ಹಾಕುತ್ತದೆ. ಈ ವಿಕಾಸ ಹೊಂದುವ ಪ್ರಕ್ರಿಯೆ ಮುಂದುವರೆದುಕೊಂಡು ಹೋಗಲು, ಪ್ರಕೃತಿ ಎಲ್ಲ ಜೀವಿಗಳಲ್ಲಿ, ತಾನು ಸ್ವಾರ್ಥಿಯಾಗುವಂತೆ, ಎಂತಹ ಪರಿಸ್ಥಿತಿಯಲ್ಲೂ ಮೊದಲು ತನಗೆ ಆಹಾರ ಹುಡುಕಿಕೊಳ್ಳುವಂತೆ, ತನ್ನ ಪ್ರಾಣ ಕಾಪಾಡಿಕೊಳ್ಳುವಂತೆ, ತನ್ನ ವಂಶ ಮುಂದುವರೆಯುವಂತೆ ಮಾಡುವ ಸ್ವಭಾವಗಳನ್ನು ಹುಟ್ಟಿನಿಂದಲೇ ಬರುವ ಏರ್ಪಾಡು ಮಾಡುತ್ತದೆ. ಆಸೆ ಮತ್ತು ನೋವು ಈ ಸ್ವಭಾವಗಳ ಎರಡು ಮುಖಗಳು. ನೋವೇ ಆಗದಿದ್ದರೆ ಮನುಷ್ಯ ತನ್ನ ದೇಹಕ್ಕೆ ಕಾಳಜಿ ಮಾಡುತ್ತಿದ್ದನೇ? ಅದಕ್ಕೆ ನೋಡಿ, ಯಾವುದೇ ಗಾಯ ಉಲ್ಬಣವಾಗುವುದಕ್ಕೆ ಮುನ್ನವೇ ನೋವು ಉಂಟು ಮಾಡಿ ದೇಹದ ಕಡೆಗೆ ಗಮನ ಹರಿಸುವಂತೆ ಮಾಡುವ ವ್ಯವಸ್ಥೆ ಪ್ರಕೃತಿ ಮನುಷ್ಯನನ್ನು ಸೇರಿದಂತೆ ಎಲ್ಲ ಪ್ರಾಣಿ, ಪಕ್ಷಿಗಳಲ್ಲಿ ಮಾಡಿದೆ. ಹಾಗೆಯೇ, ವಿಕಾಸ ಹೊಂದುವುದಕ್ಕೆ ಆಸೆಯನ್ನು ಎಲ್ಲ ಜೀವಿಗಳಲ್ಲಿ ಹುಟ್ಟು ಗುಣವನ್ನಾಗಿಸಿದೆ. ಆದರೆ ಮನುಷ್ಯರಲ್ಲಿ ಮಾತ್ರ ಆಸೆಗಳಿಗೆ ಮಿತಿಯೇ ಇಲ್ಲ ಎನ್ನುವಂತೆ ಆಗಿರುವುದು ಪ್ರಕೃತಿ ನಮಗೆ ಹೆಚ್ಚಿಗೆ ಕೊಟ್ಟ ಬುದ್ದಿವಂತಿಕೆಯಿಂದ. ಆಸೆಗಳು ಹೆಚ್ಚಾದಷ್ಟು ದುಃಖವು ಹೆಚ್ಚಾಗುತ್ತದೆ ಎನ್ನುವುದು ಮಾತ್ರ ಬುದ್ಧ ನಮಗೆ ತಿಳಿಸಿಕೊಟ್ಟ.


ಆಸೆಗಳನ್ನೇ ಬೇಡ ಎಂದು ತಿರಸ್ಕಿರಿಸದರೆ ಏನಾಗುತ್ತದೆ? ಅದು ಪ್ರಕೃತಿಯ ವಿರುದ್ಧದ ಈಜಾಗುತ್ತದೆ. ನಾವು ಆಸೆಗಳನ್ನು ಅದುಮಿಕೊಂಡರೂ, ಪ್ರಕೃತಿ ನಮ್ಮನ್ನು ಮತ್ತೆ ವಿಕಾಸದ ಕಡೆಗೆ ಸೆಳೆಯುವ ಪ್ರಯತ್ನ ಮಾಡುತ್ತಲೇ ಇರುತ್ತದೆ. ಅದಕ್ಕೆ ಬುದ್ಧ, ಮಹಾವೀರ, ಸ್ವಾಮಿ ವಿವೇಕಾನಂದ ತರಹದ ಕೆಲವೇ ಜನರಿಗೆ ಮಾತ್ರ ಆಧ್ಯಾತ್ಮ ಒಲಿಸಿಕೊಳ್ಳಲು ಸಾಧ್ಯವಾಯಿತು. ಕೊನೆಯಿಲ್ಲದ, ನಿರಂತರ ವಿಕಾಸದ ವಿರುದ್ಧ ದಿಕ್ಕಿನೆಡೆ ಅವರು ಸಾಗಿ ಪ್ರಕೃತಿಯ ಬಿಗಿ ಮುಷ್ಟಿಯಿಂದ ಪಾರಾದರು. ಪ್ರಕೃತಿಗೆ ಸಾಧು-ಸಂತರಿಂದ ಏನೂ ಉಪಯೋಗವಿಲ್ಲ. ಅದಕ್ಕೆ ಅದು ಆಸೆಗಳಿಗೆ ಶರಣಾಗುವ ನಮ್ಮ ನಿಮ್ಮಂಥವರನ್ನೇ ಅವಲಂಬಿಸಿದೆ. ಒಬ್ಬೊಬ್ಬರಿಗೆ ಒಂದೊಂದು ತರಹದ ಹುಚ್ಚು ಹತ್ತಿಸಿ ತನ್ನ ಕಾರ್ಯ ಸಾಧಿಸಿಕೊಳ್ಳುತ್ತದೆ. ಆಸೆಗಳನ್ನು ಮೆಟ್ಟಿ ನಿಂತವರನ್ನು ತನ್ನಲ್ಲಿ ಲೀನವಾಗಿಸಿಕೊಂಡು ಪುನರ್ಜನ್ಮವಿಲ್ಲದಂತೆ ಮಾಡಿಬಿಡುತ್ತದೆ. (ಇದು ನನ್ನ ಅಭಿಪ್ರಾಯ ಅಷ್ಟೇ, ಯಾವ ಅನುಭವವು ನನಗಿಲ್ಲ).


ಪ್ರಕೃತಿಗೆ ವಿಕಾಸ ಮುಖ್ಯ. ನಿರ್ದಿಷ್ಟ ಮನುಷ್ಯನಲ್ಲ. ಆಸೆಯೇ ಇರದಿದ್ದರೆ, ಬದಲಾವಣೆ ಮತ್ತು ಪ್ರಗತಿ ಹೇಗೆ ಸಾಧ್ಯ? ಪ್ರಕೃತಿ ವಿಕಾಸ ನಿರಂತರವಾಗಿ ಸಾಗಲು ಆಸೆಗಳ ನೆರವು ಪ್ರಕೃತಿಗೆ ಅತ್ಯವಶಕ. ಅದಕ್ಕೆ ಅದು ಬದಲಾವಣೆ ಬಯಸದವರನ್ನು ಹಿಂದಕ್ಕೆ ಬಿಟ್ಟು, ಆಸೆಯ ತೆವಲಿಗೆ ಬಿದ್ದವರನ್ನು ತನ್ನ ದಾಳವನ್ನಾಗಿಸಿಕೊಳ್ಳುತ್ತದೆ. ಸತ್ಯ ಕಂಡುಕೊಂಡ ಕೆಲವೇ ಕೆಲವರು ಈ ಆಟದಿಂದ ದೂರ ಸರಿದರೆ, ಉಳಿದವರೆಲ್ಲ ಆಸೆಗಳ ಬೆಂಬತ್ತಿ ಜೀವನ ಸವೆಸುತ್ತಾರೆ. ಅದಕ್ಕೆ ಬುದ್ಧ 'ಆಸೆಯೇ ದುಃಖಕ್ಕೆ ಮೂಲ' ಎಂದು ಎರಡು ಸಾವಿರ ವರುಷಗಳ ಹಿಂದೆಯೇ ಸಾರಿ ಹೇಳಿದರೂ, ಮನುಜ ಕುಲ ಕಿಂಚಿತ್ತಾದರೂ ಬದಲಾಗದೇ, ಇನ್ನು ಹೆಚ್ಚಿನ ಆಸೆಬುರುಕರಾಗಿರುವುದು.

Sunday, July 25, 2021

ಪುಸ್ತಕ ಪರಿಚಯ: ತೇಜೋ-ತುಂಗಭದ್ರಾ (ಲೇಖಕರು: ವಸುಧೇಂದ್ರ)

ಇದು ಹದಿನೈದನೇ ಶತಮಾನದಲ್ಲಿ ನಡೆಯುವ ಕಥಾ ವಸ್ತುವನ್ನು ಹೊಂದಿದೆ. ಪೋರ್ಚುಗೀಸ್ ದೇಶದ ತೇಜೋ ನದಿ ದಡದ, ಲಿಸ್ಬನ್ ನಗರದಲ್ಲಿ ವಾಸಿಸುವ ಗೇಬ್ರಿಯಲ್ ಮತ್ತು ವಿಜಯನಗರ ಸಾಮ್ರಾಜ್ಯದಲ್ಲಿ, ತುಂಗಭದ್ರಾ ನದಿ ದಡದಲ್ಲಿರುವ ತೆಂಬಕಪುರದಲ್ಲಿ ವಾಸಿಸುವ ಹಂಪಮ್ಮ ಈ ಕಾದಂಬರಿಯ ಕೇಂದ್ರ ಬಿಂದುಗಳು. ಅವರಲ್ಲದೇ ಇನ್ನೂ ಹತ್ತಾರು ಪಾತ್ರಗಳು ತಮ್ಮ ಕಥೆಗಳನ್ನು ಹೇಳುತ್ತಾ ವಿಶಿಷ್ಟ ಛಾಪು ಮೂಡಿಸುತ್ತಾರೆ.


ಕ್ರಿಶ್ಚಿಯನ್ ಆದ ಗೇಬ್ರಿಯಲ್ ಗೆ, ಯಹೂದಿ ಧರ್ಮಕ್ಕೆ ಸೇರಿದ ಬೆಲ್ಲಾಳನ್ನು ಮದುವೆಯಾಗುವ ಆಸೆ. ಆದರೆ ಅವಳ ಅಪ್ಪ ಶ್ರೀಮಂತರಿಗೆ ಮಾತ್ರ ತನ್ನ ಮಗಳು ಸಿಗುವುದು ಎಂದು ಸ್ಪಷ್ಟ ಪಡಿಸಿದ ಮೇಲೆ, ಹೇಗಾದರೂ ತನ್ನ ಬಡತನ ಕಳೆದುಕೊಳ್ಳುವ ಉದ್ದೇಶದಿಂದ, ಶ್ರೀಮಂತಿಕೆ-ವೈಭವದಿಂದ ಮೆರೆಯುವ ಭಾರತಕ್ಕೆ, ಹಣ ಗಳಿಸುವುದಕ್ಕಾಗಿ ತೆರಳುತ್ತಾನೆ. ಅಷ್ಟರಲ್ಲಾಗಲೇ ವಾಸ್ಕೋ-ಡಾ-ಗಮ ಭಾರತಕ್ಕೆ ಸಮುದ್ರ ಮಾರ್ಗ ಕಂಡು ಹಿಡಿದಿದ್ದನಲ್ಲ. ಅವನ ಹಡಗುಗಳು ಮಸಾಲೆ, ರತ್ನ-ವೈಡೂರ್ಯಗಳನ್ನು ಹೊತ್ತು ತಂದು, ಅವನ ಜೊತೆಗಾರರನ್ನು ಶ್ರೀಮಂತರನ್ನಾಗಿಸುವುದಲ್ಲದೆ ರಾಜ ಮನೆತನದ ಬೊಕ್ಕಸವನ್ನು ಕೂಡ ತುಂಬಿದ್ದವು. ಭಾರತದೊಡನೆ ವ್ಯಾಪಾರ ಮಾಡಿದರೆ ಬಡತನ ಕಳೆದುಹೋಗುವುದು ಸುಲಭ ಎನ್ನುವುದು ಎಲ್ಲ ಸಾಮಾನ್ಯ ಜನರಿಗೂ ಗೊತ್ತಾಗಿ ಹೋಗಿತ್ತು.


ತೆಂಬಕಪುರದಲ್ಲಿ ಹಂಪಮ್ಮಳನ್ನು ಮದುವೆಯಾಗುವ ಉದ್ದೇಶದಿಂದ ಇಬ್ಬರು ಜಟ್ಟಿಗಳು ಕಾಳಗಕ್ಕೆ ಇಳಿದಿದ್ದರು. ಸೋತವನು ಸತ್ತರೆ, ಗೆದ್ದವನಿಗೆ ಹಂಪಮ್ಮಳ ಕೈ ಹಿಡಿಯುವ ಅದೃಷ್ಟ. ಆ ಕಾಳಗ ನೋಡಲು, ಸ್ವತಃ ಶ್ರೀಕೃಷ್ಣದೇವರಾಯರೇ ತಮ್ಮ ರಾಣಿಯರ ಜೊತೆ ತೆಂಬಕಪುರಕ್ಕೆ ಆಗಮಿಸಿದ್ದರಲ್ಲ. ಅದರಲ್ಲಿ ಗೆದ್ದ ಕೇಶವ ಹಂಪಮ್ಮಳನ್ನು ಮದುವೆಯಾದರೂ, ಕೆಲವೇ ವರುಷಗಳಿಗೆ ಕೃಷ್ಣದೇವರಾಯರಿಗೆ ಗಂಡು ಮಗುವಾದಾಗ, ಲೆಂಕನಾಗಿ ಪ್ರಾಣ ತೆರುತ್ತಾನೆ. ಸಹಗಮನಕ್ಕೆ ಒಪ್ಪದ, ಆಗಲೇ ಗರ್ಭಿಣಿಯಾಗಿದ್ದ ಹಂಪಮ್ಮ, ತಪ್ಪಿಸಿಕೊಂಡು ನದಿ ದಾಟುತ್ತಾಳೆ.


ಭಾರತಕ್ಕೆ ಬಂದು ತಲುಪಿದ ಗೇಬ್ರಿಯಲ್, ಗೋವಾದಲ್ಲಿ ಬಿಜಾಪುರ ಸುಲ್ತಾನರ ಕೈಗೆ ಸಿಕ್ಕು, ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡು, ಅಹ್ಮದ್ ಖಾನ್ ನಾಗಿ ಬದಲುಗುತ್ತಾನೆ. ಮತ್ತೆ ಪೋರ್ಚುಗೀಸ್ ರ ಧಾಳಿಗೆ ಸಿಕ್ಕು ತನ್ನ ಕಿವಿ-ಮೂಗುಗಳನ್ನು ಕೊಯ್ಯಿಸಿಕೊಂಡು ವಿರೂಪಗೊಳ್ಳುತ್ತಾನೆ. ಕೊನೆಗೆ ವಿಜಯನಗರಕ್ಕೆ ಬಂದು ನೆಲೆಗೊಳ್ಳುತ್ತಾನೆ. ಅವನ ಹೆಸರು ಕನ್ನಡಕ್ಕೆ ರೂಪಾಂತರಗೊಂಡು  ಅಮ್ಮದಕಣ್ಣ ನಾಗಿ ಬದಲಾಗುತ್ತದೆ.


ನದಿ ದಾಟಿ ಬಂದ ಹಂಪಮ್ಮಳಿಗೆ, ಅವಳನ್ನು ಕೊಲ್ಲಲು ಹಿಂದೆ ಬೆನ್ನಟ್ಟಿ ಬರುತ್ತಿರುವವರಿಂದ ಕಾಪಾಡುವ ಉದ್ದೇಶದಿಂದ ಅಮ್ಮದಕಣ್ಣ, ಹಂಪಮ್ಮಳನ್ನು ತನ್ನ ಕುದುರೆಯ ಮೇಲೆ ಗೋವಾ ಗೆ ಕರೆದೊಯ್ಯುತ್ತಾನೆ. ಮಾರ್ಗ ಮಧ್ಯದಲ್ಲಿ ಪುರಂದರ ದಾಸರ ದರ್ಶನವಾಗಿ ಅವರು ಇವರನ್ನು ಹರಸುತ್ತಾರೆ. ಗೋವಾ ತಲುಪಿ ಪೋರ್ಚುಗೀಸ್ ರ ಆಶ್ರಯ ಪಡೆಯುವ ಹಂಪಮ್ಮ, ತನಗೆ ನೆರವಾದ ಅಮ್ಮದಕಣ್ಣನನ್ನು ತನಗೆ ಜೋಡಿಯಾಗುವಂತೆ ಕೇಳಿಕೊಳ್ಳುತ್ತಾಳೆ.


ಪರದೇಶದವನಿಗೆ ಆಶ್ರಯ ಕೊಟ್ಟ ಹಂಪೆ, ತನ್ನದೇ ನಾಡಿನವಳಿಗೆ ಹೊರ ಹೋಗುವಂತ ಸನ್ನಿವೇಶ ಸೃಷ್ಟಿಸುವ ವಿಪರ್ಯಾಸ ಈ ಕಥೆಯಲ್ಲಿದೆ. ಸಣ್ಣ ಕಥೆಗಳಲ್ಲಿರುವ ಸೂಕ್ಷ್ಮತೆ, ಆರ್ದ್ರತೆ ಈ ಕಾದಂಬರಿ ಉದ್ದಕ್ಕೂ ಕಾಪಾಡಿಕೊಂಡು ಬಂದಿದ್ದಾರೆ ಲೇಖಕರು. ಐದು ನೂರು ವರುಷಗಳ ಹಿಂದೆ ಇದ್ದ ಸಮಾಜದ ಸಂಸ್ಕೃತಿ, ಧರ್ಮ-ಅಧರ್ಮದ ವಿಮರ್ಶೆ, ಸಾಮಾಜಿಕ ಸ್ಥಿತಿ-ಗತಿಗಳು, ಮತ್ತು ಜೀವನಶೈಲಿ ಇವುಗಳನ್ನು ವಾಸ್ತವಕ್ಕೆ ಹತ್ತಿರವಾಗಿ ಅಕ್ಷರಗಳಲ್ಲಿ ಈ ಕೃತಿಯ ಮೂಲಕ ಮೂಡಿಸಿದ್ದಾರೆ ಲೇಖಕ ವಸುಧೇಂದ್ರ. ಬಡತನ-ಹಸಿವು, ಧರ್ಮ ಮತ್ತು ರಾಜಭಕ್ತಿಗಳನ್ನು ಮೀರಿದ್ದು, ಹಾಗೆಯೇ ಮನುಷ್ಯ ತನ್ನ ಅಧಿಕಾರ ದಾಹಕ್ಕೆ ಧರ್ಮ ಮತ್ತು ಕ್ರೌರ್ಯಗಳನ್ನು ಹೇಗೆ ಬಳಸಿಕೊಳ್ಳುತ್ತಾನೆ ಎಂದು ಈ ಕಾದಂಬರಿಯ ಕೆಲವು ಪಾತ್ರಗಳು ಸ್ಪಷ್ಟ ಪಡಿಸುತ್ತವೆ. 


ಇತಿಹಾಸಕ್ಕೆ, ಸಮಾಜಕ್ಕೆ ಮತ್ತು ಮನುಷ್ಯ ವರ್ಗಕ್ಕೆ ಕನ್ನಡಿ ಹಿಡಿಯುವ ಕೃತಿಯಾಗಿದೆ ಈ ಕಾದಂಬರಿ.




Wednesday, July 14, 2021

ಪರಿಸ್ಥಿತಿ vs. ನಾಯಕ

ಕಾಲಮಾನ, ಸನ್ನಿವೇಶಗಳು ನಾಯಕರನ್ನು ಸೃಷ್ಟಿಸುತ್ತವೆ ಎಂದು ಹೇಳಿದ್ದು ಲಿಯೋ ಟಾಲ್ಸ್ಟಾಯ್. ಅದಕ್ಕೆ ತದ್ವಿರುದ್ಧವಾಗಿ, ನಾಯಕರು ಸನ್ನಿವೇಶಗಳನ್ನು ಸೃಷ್ಟಿಸುತ್ತಾರೆ ಮತ್ತು ಕಾಲಮಾನವನ್ನು ಪ್ರಭಾವಗೊಳಿಸುತ್ತಾರೆ ಎಂದು ಹೇಳಿದ್ದು ಥಾಮಸ್ ಕಾರ್ಲೈಲ್. ಒಬ್ಬರದು ನಾಯಕರು ಇತಿಹಾಸದ ಕೈಗೊಂಬೆ ಎನ್ನುವ ಅಭಿಪ್ರಾಯ. ಇತಿಹಾಸ ಎನ್ನುವುದು ಮಹಾನ್ ನಾಯಕರ ಆತ್ಮ ಚರಿತ್ರೆ ಎನ್ನುವುದು ಇನ್ನೊಬ್ಬರ ಅಭಿಪ್ರಾಯ.


ಹಿಟ್ಲರ್, ಸ್ಟಾಲಿನ್, ಮಾವೋ ಮುಂತಾದವರು ತಮ್ಮ ಬಿಗಿ ಹಿಡಿತದಿಂದ ಚರಿತ್ರೆ ಸೃಷ್ಟಿಸಿದರೆ, ಇಂದಿಗೆ ಸಾಕಷ್ಟು ದೇಶಗಳಲ್ಲಿ ಒಬ್ಬ ವ್ಯಕ್ತಿಯಲ್ಲಿ ಸಂಪೂರ್ಣ ಅಧಿಕಾರ ಕೇಂದ್ರೀಕೃತವಾಗುವ ಬದಲು ಒಂದು ವ್ಯವಸ್ಥೆ, ಸಮೂಹ ಮತ್ತು ಸಂಸ್ಥೆಗಳು ಜವಾಬ್ದಾರಿಯ ನಿರ್ವಹಣೆ ಮಾಡುತ್ತವೆ.


ಕೆಲವು ನಾಯಕರು ಎಲ್ಲ ನಿರ್ಧಾರಗಳನ್ನು ತಾವು ತೆಗೆದುಕೊಳ್ಳದೆ, ಸಂಘ, ಸಂಸ್ಥೆಗಳನ್ನು ಹುಟ್ಟು ಹಾಕಿ ಅವುಗಳು ತೆಗೆದುಕೊಳ್ಳುವ ನಿರ್ಧಾರಕ್ಕೆ ಬೆಲೆ ಕೊಟ್ಟ ಉದಾಹರಣೆಗಳು ಇವೆ. ಹಾಗೆಯೆ, ಸಂಘ, ಸಂಸ್ಥೆಗಳಿಂದ ಬೆಳಕಿಗೆ ಬಂದ ಕೆಲವು ನಾಯಕರು ಅದನ್ನು ಮೀರಿ ಬೆಳೆದು, ಅಧಿಕಾರವನ್ನು ತಮ್ಮ ಕೈಗೆ ತೆಗೆದುಕೊಂಡ ಉದಾಹರಣೆಗಳು ಇವೆ.


ವ್ಯಕ್ತಿಗಿಂತ ಸಿದ್ಧಾಂತ ಮುಖ್ಯ ಎನ್ನುವವವರು ಇದ್ದಾರೆ. ವ್ಯಕ್ತಿಯೇ ಸಿದ್ಧಾಂತವಾದ ಉದಾಹರಣೆಗಳು ಕೂಡ ಇವೆ. ಒಳ್ಳೆಯ ನಾಯಕರಿಲ್ಲದ ದೇಶದ್ದು ದುರಾದೃಷ್ಟ ಎನ್ನುವ ವಾದ ಇದೆ. ನಾಯಕರ ಮೇಲೆ ಅವಲಂಬಿತವಾದ ದೇಶದ್ದೇ ದುರಾದೃಷ್ಟ ಎನ್ನುವ ವಾದವೂ ಕೂಡ ಇದೆ.


ಆದರೆ ಇಲ್ಲಿ ನಾವು ಗಮನಿಸಬೇಕಾದದ್ದು ನಾಯಕ ಮತ್ತು ಪರಿಸ್ಥಿತಿ ಇವರಲ್ಲಿ ಯಾರು ಮೇಲುಗೈ ಸಾಧಿಸುತ್ತಾರೆ ಎನ್ನುವುದು. ಪರಿಸ್ಥಿತಿ ಅನುಕೂಲಕರವಾಗಿದ್ದಾಗ ನಾಯಕರು ಹೇಳಿದ್ದೆಲ್ಲ ವೇದವಾಕ್ಯವಾದರೆ, ಸರ್ವಾಧಿಕಾರಿಗಳು ಪರಿಸ್ಥಿತಿ ತಮ್ಮ ಕೈ ಮೀರಿ ಹೋದ ಕೆಲವೇ ದಿನಗಳಿಗೆ ಅಂತ್ಯ ಕಂಡರು.


ಮಹಾತ್ಮಾ ಗಾಂಧಿ ೧೯೧೭ ರಲ್ಲೇ ತಮ್ಮ ಸತ್ಯಾಗ್ರಹವನ್ನು ಆರಂಭಿಸಿದಾಗ, ಅವರ ಹಿಂದೆ ೩೦ ಜನ ಹಿಂಬಾಲಕರೂ ಇರಲಿಲ್ಲ. ಆದರೆ ೧೯೪೨ ರಲ್ಲಿ ಕ್ವಿಟ್ ಇಂಡಿಯಾ ಆಗ್ರಹ ಶುರುವಾಗುವ ಹೊತ್ತಿಗೆ ಅವರಿಗೆ ೩೦ ಕೋಟಿ ಹಿಂಬಾಲಕರಿದ್ದರು. ಆ ೨೫ ವರುಷಗಳ ಅಂತರದಲ್ಲಿ, ಗಾಂಧೀಜಿ ನಂಬಿದ್ದು, ಹೇಳಿದ್ದು ಯಾವುದು ಬದಲಾಗಿರಲಿಲ್ಲ ಆದರೆ ಬದಲಾಗಿದ್ದು ಪರಿಸ್ಥಿತಿ ಮಾತ್ರ ಮತ್ತು ಅದು ಒಬ್ಬ ನಾಯಕನ ಬೆಳವಣಿಗೆಗೆ ದಾರಿ ಮಾಡಿ ಕೊಟ್ಟಿತು. 


ಬಲಿಷ್ಠ ಸೇನೆ ಕಟ್ಟಿ, ದಶಕಗಳ ಕಾಲ ಸಾಲು ಸಾಲು ಯುದ್ಧ ಗೆದ್ದ ಮಹತ್ವಾಕಾಂಕ್ಷಿ ನೆಪೋಲಿಯನ್, ಪರಿಸ್ಥಿತಿಯನ್ನು ತನ್ನ ಆಳಾಗಿ ಇಟ್ಟುಕೊಂಡಿದ್ದ. ಆದರೆ ಒಂದು ಪ್ರತಿಕೂಲ ಪರಿಸ್ಥಿತಿಯಲ್ಲಿ ಒಂದು ಯುದ್ಧ ಸೋತು, ಕೊನೆಯವರೆಗೂ ಬಂದಿಯಾಳಾಗಿ ಜೀವಿಸಬೇಕಾಯಿತು. ಬದಲಾಗಿದ್ದು ನೆಪೋಲಿಯನ್ ನ ಯುದ್ಧ ಕೌಶಲ್ಯತೆ ಅಲ್ಲ. ಪ್ರತಿಕೂಲ ಪರಿಸ್ಥಿತಿ ಮಾತ್ರ. ಅದು ಒಬ್ಬ ನಾಯಕನನ್ನು ಆಹುತಿ ತೆಗೆದುಕೊಂಡಿತು.


ಪರಿಸ್ಥಿತಿ ಮತ್ತು ನಾಯಕ ಇಬ್ಬರೂ ಶಾಶ್ವತವಲ್ಲ. ಇಬ್ಬರು ಒಬ್ಬರ ಮೇಲೆ ಇನ್ನೊಬ್ಬರು ಅವಲಂಬಿತರು. ನಾಯಕನ ಅಂತ್ಯ ಪರಿಸ್ಥಿತಿಯನ್ನು ಬದಲಾಯಿಸಬಹುದು. ಪರಿಸ್ಥಿತಿಯ ಬದಲಾವಣೆ ಹೊಸ ನಾಯಕನನ್ನು ಹುಟ್ಟು ಹಾಕಬಹುದು. ಹೊಂದಾಣಿಕೆ ಇರುವಷ್ಟು ಹೊತ್ತು ಅವರಿಬ್ಬರದು ಭಲೇ ಜೋಡಿ. ಹೊಂದಾಣಿಕೆ ಮುರಿದು ಬಿದ್ದಾಗ ಮುಗಿಯುವುದು ಮೋಡಿ.

ಸರಳ, ಸಜ್ಜನರ ಊರು ಮೈಸೂರು

ಮೈಸೂರು ಪ್ರವಾಸಿ ತಾಣವಾಗಿ, ಸಾಂಸ್ಕೃತಿಕ ಕೇಂದ್ರವಾಗಿ ನಮಗೆಲ್ಲ ಗೊತ್ತು. ನೀವು ಅಲ್ಲಿಗೆ ಹಲವಾರು ಸಲ ಭೇಟಿ ನೀಡಿದರೆ ಮತ್ತು ಕೆಲವು ದಿನ ಉಳಿದುಕೊಂಡರೆ, ಆ ಊರಿನ ಮತ್ತು ಅಲ್ಲಿನ ಜನರ ಜೀವನ ಶೈಲಿ, ಅವರ ಆದ್ಯತೆಗಳು, ಹೆಚ್ಚಿನ ಜನರ ವಿಚಾರ ಧಾಟಿ ಇವುಗಳನ್ನು ಗುರುತಿಸಬಹುದು. ಬೇರೆ ಎಲ್ಲ ಊರುಗಳಲ್ಲಿ ಇರುವ ಹಾಗೆ, ಮೈಸೂರಲ್ಲಿ ಕೂಡ ಎಲ್ಲ ತರಹದ ಜನರು ಇರಬಹುದು. ಆದರೆ ನನ್ನ ಅನುಭವದಲ್ಲಿ ಸರಳ, ಸಜ್ಜನಿಕೆಯ ಜನರು ಬೇರೆ ಊರಿಗಿಂತ ಮೈಸೂರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಲ್ಲಿ ನನಗಾದ ಮೂರು ಅನುಭವಗಳನ್ನು ಇಲ್ಲಿ ಕೊಡುತ್ತಿದ್ದೇನೆ.


೧.

ನಾವು ಸ್ನೇಹಿತರು ಒಂದು ದಿನ ಮೈಸೂರಿನಲ್ಲಿ ಸಾಯಂಕಾಲ ಕತ್ತಲಾಗುತ್ತಿರುವ ಸಮಯದಲ್ಲಿ ಕೈಯಲ್ಲಿ ವಿಳಾಸ ಹಿಡಿದುಕೊಂಡು ಆ ಮನೆಯ ಪತ್ತೆ ಹಚ್ಚುವುದಕ್ಕೆ ಪರದಾಡುತ್ತಿದ್ದೆವು. ಅಲ್ಲಿ ಒಬ್ಬರು ತಮ್ಮ ಮನೆಯ ಹೊರಗಡೆ ನಿಂತಿದ್ದರು. ಅವರ ಹತ್ತಿರ ವಿಚಾರಿಸಿದಾಗ, ಅವರು ಹತ್ತಿರದಲ್ಲೇ ಇರುವ ಆ ವಿಳಾಸಕ್ಕೆ ತಲುಪುವುದು ಹೇಗೆಂದು ಅತ್ಯಂತ ಸ್ಪಷ್ಟವಾಗಿ ಮಾರ್ಗದರ್ಶನ ನೀಡಿದರು. ಅಷ್ಟರಲ್ಲಿ ಆ ಮನೆಯಿಂದ ಹೊರ ಬಂದ ಅವರ ಪತ್ನಿ, ತಮ್ಮ ಪತಿಗೆ ನಮ್ಮ ಜೊತೆ ಹೋಗಿ ಆ ಮನೆಯವರಿಗೆ ಹೋಗಿ ನಮ್ಮನ್ನು ಬಿಟ್ಟು ಬನ್ನಿ ಎಂದು ಹೇಳಬೇಕೇ? ಆತ ತಲೆ ತಗ್ಗಿಸಿಕೊಂಡು, ಸರಿ ಹೋಗೋಣ ಬನ್ನಿ ಎಂದು ನಮ್ಮ ಜೊತೆಗೆ ಬರಲು ಸಿದ್ಧನಾದ. ನಮ್ಮ ಕಲ್ಯಾಣ ಕರ್ನಾಟಕದಲ್ಲಿ ಅಷ್ಟು ಒಳ್ಳೆಯ ಹೆಂಡತಿಯರು ಮತ್ತು ಅವರ ಮಾತು ಕೇಳುವ ಗಂಡಂದಿರು ಇರುವುದು ಮತ್ತು ಅವರು ಅಪರಿಚಿತರಿಗೆ ಸಹಾಯ ಮಾಡುವುದು ಸಾಧ್ಯವೇ?


೨.

ಇನ್ನೊಂದು ಪ್ರವಾಸದಲ್ಲಿ, ಅವತ್ತು ಶನಿವಾರ ಸಾಯಂಕಾಲವಾಗಿತ್ತು. ಮಾರ್ಕೆಟ್ ನಲ್ಲಿ, ಅಡ್ಡಾಡುತ್ತ ನನಗೆ ಕಾರು ಡೂಪ್ಲಿಕೇಟ್ ಕೀ ಮಾಡುವ ಅಂಗಡಿ ಕಾಣಿಸಿತು. ಸರಿ ನನಗೆ ಆ ಅವಶ್ಯಕತೆ ಇತ್ತಲ್ಲ. ಆ ಅಂಗಡಿಗೆ ಹೋದೆ. ಅವನು ಕೀ ಮಾಡುವುದಲ್ಲದೆ, ಅದನ್ನು ಕಾರಿನಲ್ಲಿಟ್ಟು ಒಂದು ಸಾಫ್ಟ್ ವೇರ್ ಕೋಡ್ ಕೂಡ  ನಕಲು ಮಾಡಬೇಕಿತ್ತು. ಅವನು ಎಷ್ಟು ಪ್ರಯತ್ನ ಪಟ್ಟರೂ ಅದು ಆಗಲೊಲ್ಲದು. ಪಕ್ಕದ ಎಲ್ಲ ಅಂಗಡಿಗಳು ಮುಚ್ಚಿ, ಇಡೀ ಮಾರುಕಟ್ಟೆಯೇ ಮುಚ್ಚಿ, ನಾವಷ್ಟೇ ಉಳಿದಾಯಿತು. ಆದರೂ ಕೆಲಸ ಪೂರ್ಣಗೊಳ್ಳಲಿಲ್ಲ. ಮರುದಿನ ರವಿವಾರ ಅವನ ಅಂಗಡಿ ಮತ್ತು ಮಾರುಕಟ್ಟೆಗೆ ರಜೆ. ಆದರೆ ನಾವು ಅಂದೇ ಮೈಸೂರಿನಿಂದ ಹೊರಟು ಬಿಡುವವರಿದ್ದೆವು. ಅವನು ನಾನು ಉಳಿದುಕೊಂಡ ಲಾಜ್ ವಿವರ ತಿಳಿದುಕೊಂಡು ಮರುದಿನ ಬೆಳಿಗ್ಗೆ ಬರುವುದಾಗಿ ತಿಳಿಸಿದ. ಮರುದಿನ ಬೆಳಿಗ್ಗೆ ನಾನು ಹಲ್ಲುಜ್ಜಿ, ಏನು ಟಿಫನ್ ತಿನ್ನುವುದು ಎಂದು ವಿಚಾರ ಮಾಡುವ ಹೊತ್ತಿಗೆ ಅವನು ಲಾಜ್ ಮುಂದೆ ಹಾಜರ್. ಪಾರ್ಕಿಂಗ್ ನಲ್ಲೆ ಕುಳಿತು, ತನ್ನ ಕೆಲಸ ಮುಗಿಸಿಕೊಟ್ಟು ನಮಗೆ ವಿದಾಯ ಹೇಳಿ ಹೋದ. ಅವನ ಕರ್ತವ್ಯ ಪ್ರಜ್ಞೆ ಮತ್ತು ನಮ್ಮ ಬಗ್ಗೆ ಅವನು ತೋರಿಸಿದ ಕಾಳಜಿ ಕಂಡು ನನಗೆ ಆಶ್ಚರ್ಯ. ಇದೆ ಕೆಲಸಕ್ಕೆ ನನಗೆ ಬೆಂಗಳೂರಿನಲ್ಲಿ ಎರಡು ಮೂರು ದಿನ ಓಡಾಡಿಸಿ, ಅದು ನಿಮ್ಮ ಹಣೆಬರಹ ಎಂದು ಹೇಳಿರುತ್ತಿದ್ದರು.


೩.

ಪ್ರವಾಸದ ಗುಂಗಿನಲ್ಲಿದ್ದ ನಮಗೆ ಮಧ್ಯಾಹ್ನದ ಹೊತ್ತು ಕಳೆದಿದ್ದೆ ಗೊತ್ತಾಗಿರಲಿಲ್ಲ. ಆಗಲೇ ಮೂರು ಗಂಟೆಯಾಗಿತ್ತು. ಮೈಸೂರಿನಿಂದ ಸುಮಾರು ಒಂದು ಗಂಟೆ ದೂರದಲ್ಲಿ ಇದ್ದ ನಮಗೆ ರಸ್ತೆಯಲ್ಲಿ ಸಿಕ್ಕ ಎಲ್ಲ ಹೋಟೆಲ್ ಗಳಲ್ಲಿ, ಊಟ-ತಿಂಡಿ ಎಲ್ಲ ಖಾಲಿ, ಮುಂದೆ ಹೋಗಿ ಎಂದು ಹೇಳಿ ಕಳಿಸಿದರು. ಮೈಸೂರು ಹೊರ ವಲಯಕ್ಕೆ ಬರುವ ಹೊತ್ತಿಗೆ ಮಧ್ಯಾಹ್ನ ನಾಲ್ಕು ಗಂಟೆ. ಎಲ್ಲರೂ ಹಸಿವಿನಿಂದ ಕಂಗಾಲು. ಮುಂದೆ ಹೋಗುವಷ್ಟು ಶಕ್ತಿ ನಮಗಾರಿಗೂ ಉಳಿದಿರಲಿಲ್ಲ. ಆದರೆ ಮೈಸೂರು ಹೊರ ವಲಯದ ಆ ಹೋಟೆಲ್ ನಲ್ಲೂ ಕೂಡ ಊಟ-ತಿಂಡಿ ಎಲ್ಲ ಖಾಲಿಯಾಗಿತ್ತು. ಆದರೆ ನಮ್ಮ ಸ್ಥಿತಿ ಗಮನಿಸಿದ ಹೋಟೆಲ್ ಮಾಲೀಕ, ಹದಿನೈದು ನಿಮಿಷ ಕಾದರೆ ಅನ್ನ-ಸಾಂಬಾರ್ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು. ಅವರ ಉದ್ದೇಶ ನಮ್ಮ ಹೊಟ್ಟೆ ತುಂಬಿಸುವುದಾಗಿತ್ತು. ನಮ್ಮವರೆಲ್ಲ ಒಂದೇ ಏಟಿಗೆ ಹೂಂ ಎಂದರು. ನಮ್ಮ ಊಟ ಮುಗಿದು ನಾವು ಹೊರಡುವ ಹೊತ್ತಿಗೆ, ನಮ್ಮದೇ ಪರಿಸ್ಥಿತಿ ಇದ್ದ ಇನ್ನೊಂದು ಕಾರು ಅಲ್ಲಿಗೆ ಬಂದು ಏನಾದರು ಊಟ ಕೊಡುವಂತೆ ಹೋಟೆಲ್ ಮಾಲೀಕರಿಗೆ ಕೇಳಿಕೊಳ್ಳುತ್ತಿದ್ದರು. ಅವರಿಗೂ ಕೂಡ ಆ ಮಾಲೀಕ ಸಮಾಧಾನವಾಗಿ ಉತ್ತರಿಸುತ್ತಿದ್ದರು. 


ಇದು ನನ್ನ ಅನುಭವಗಳು ಮತ್ತು ಅವುಗಳಿಂದ ಮೂಡಿದ ಅಭಿಪ್ರಾಯ. ಬೇರೆ ಊರಿನ ಪ್ರವಾಸಗಳಲ್ಲಿ ಸಾಕಷ್ಟು ಒರಟು ಎನಿಸುವ ಅನುಭವಗಳು ಆದ ಮೇಲೆ, ಮೈಸೂರಿನ ಜನರ ಸರಳ, ಸಜ್ಜನಿಕೆಗೆ ತಲೆ ಬಾಗುತ್ತೇನೆ. ಕುಟುಂಬದ ಜೊತೆ ಎರಡು ದಿನ ಬಿಡುವು ಬೇಕೆನಿಸಿದಾಗ, ಎರಡನೇ ವಿಚಾರ ಮಾಡದೇ ಮೈಸೂರಿಗೆ ಹೊರಟು ಬಿಡುತ್ತೇನೆ.

Tuesday, July 13, 2021

ಕವಿತೆ: ದುಡ್ಡು

ಜಿಪುಣರು ಉಳಿಸುತ್ತಾರೆ

ಉಡಾಫೆಯವರು ಉಡಾಯಿಸುತ್ತಾರೆ 


ಶ್ರೀಮಂತರು ಇರುವುದನ್ನು ಹೆಚ್ಚಿಸುತ್ತಾರೆ

ಜೂಜುಕೋರರು ಇರುವುದನ್ನು ಕಳೆಯುತ್ತಾರೆ


ಶ್ರಮಿಕರು ದುಡಿದು ಗಳಿಸುತ್ತಾರೆ

ಹೆಂಡತಿಯರು ಖರ್ಚು ಮಾಡುತ್ತಾರೆ


ಬ್ಯಾಂಕ್ ನವರು ಸಾಲ ಕೊಡುತ್ತಾರೆ

ಸರಕಾರದವರು ತೆರಿಗೆಯಲ್ಲಿ ಕಿತ್ತುಕೊಳ್ಳುತ್ತಾರೆ


ಸಾಯುವವರು ಬಿಟ್ಟು ಹೋಗುತ್ತಾರೆ

ಉತ್ತರಾಧಿಕಾರಿಗಳು ಅನುಭವಿಸುತ್ತಾರೆ


ಇಲ್ಲದವರು ದಾಹ ಪಡುತ್ತಾರೆ

ಇರುವವರು ಚಿಂತೆ ಮಾಡುತ್ತಾರೆ


ದಾನಿಗಳು ಹಂಚುತ್ತಾರೆ

ಕಳ್ಳರು ದೋಚುತ್ತಾರೆ


ಬೇಕೇ ಬೇಕು ಎನಿಸಿದವರು ಅಡ್ಡದಾರಿ ಹಿಡಿಯುತ್ತಾರೆ

ಸಾಕು ಸಾಕು ಎನಿಸಿದವರು ಸರಿದಾರಿ ಮೆಚ್ಚುತ್ತಾರೆ

Monday, July 12, 2021

ಅನುಭವ ಕಥನ: ಪ್ರತಿಫಲ

ವರ್ಷ: 2010

ಬೆಂಗಳೂರಿನಿಂದ ನಮ್ಮ ಊರಿಗೆ ಬಸ್ಸಲ್ಲಿ ಹೋದರೆ, ಬಳ್ಳಾರಿ ಬರುವುದು ಬೆಳಗಿನ ಜಾವ  ನಾಲ್ಕು ಗಂಟೆ ಹೊತ್ತಿಗೆ. ಬಸ್ ಸ್ಟಾಂಡ್ ನಲ್ಲಿ ಇಳಿದು ದೇಹ ಭಾಧೆ ತೀರಿಸಿಕೊಂಡು ಮತ್ತೆ ಬಸ್ ಹತ್ತಿ ನಿದ್ರೆಗೆ ಜಾರಿದರೆ, ಈ ಊರಿನ ಬಸ್ ಸ್ಟಾಂಡ್ ಮಾತ್ರ ನಮ್ಮ ಮನಸಿನಲ್ಲಿ ಉಳಿದು ಹೋಗುತ್ತದೆ. ಉಳಿದೆಲ್ಲ ವಿಷಯಗಳನ್ನು ಪೇಪರ್ ಓದಿಯೇ ತಿಳಿದುಕೊಳ್ಳಬೇಕು. ೨೦೦೮-೨೦೦೯ ರ ಹೊತ್ತಿನಲ್ಲಿ ಬಳ್ಳಾರಿ ಪ್ರತಿ ದಿನವೂ ಸುದ್ದಿಯಾಗುತಿತ್ತಲ್ಲ. ಅದರ ಹಿಂದೆ ಇದ್ದಿದ್ದು ಪ್ರಮುಖವಾಗಿ ಗಣಿಗಾರಿಕೆ ವಿಷಯ. ಕುತೂಹಲಕ್ಕಾಗಿ ಬಳ್ಳಾರಿಯ ಮಣ್ಣಿಗೇಕೆ ಬೇಡಿಕೆ ಎಂದು ಗಮನಿಸುತ್ತಾ ಹೋದೆ. ನಮ್ಮ ದೇಶದ ಬೇರೆಡೆ ಸಿಗುವ ಕಬ್ಬಿಣದ ಅದಿರು 40% Fe ಆದರೆ ಬಳ್ಳಾರಿಯಲ್ಲಿ ಸಿಗುವುದು ಉತ್ತಮ ಗುಣಮಟ್ಟದ  65% Fe ಅದಿರು. ಈ ಮಣ್ಣನ್ನು ಸಂಸ್ಕರಿಸಿದರೆ ಹೆಚ್ಚಿನ ಮಟ್ಟದ ಕಬ್ಬಿಣವನ್ನು ತಯಾರಿಸಬಹುದು. ಹಾಗಾಗಿ ಬಳ್ಳಾರಿಯ ಅದಿರಿಗೆ ಬೇಡಿಕೆ ಅಷ್ಟೇ ಅಲ್ಲ ಬೆಲೆ ಕೂಡ ಹೆಚ್ಚು. ಸರಿ ಇದನ್ನು ಕೊಂಡುಕೊಳ್ಳುವವರು ಯಾರು? ಪ್ರಮುಖವಾಗಿ ಚೀನಾ ದೇಶ. ಅವರೇಕೆ ಅಪಾರ ಪ್ರಮಾಣದಲ್ಲಿ ಅದಿರು ಕೊಳ್ಳುತ್ತಿದ್ದಾರೆ? ೨೦೦೮ ರಲ್ಲಿ ಆ ದೇಶದಲ್ಲಿ ನಡೆಯುವ ಒಲಿಂಪಿಕ್ಸ್ ಕ್ರೀಡಾ ಕೂಟಕ್ಕೆ ಅದ್ಭುತವೆನಿಸುವ ಸ್ಟೇಡಿಯಂ ಗಳನ್ನು ಕಟ್ಟುವ ಸಲುವಾಗಿ ಮತ್ತು ತಮ್ಮ ಪಟ್ಟಣಗಳಲ್ಲಿನ ಗಗನಚುಂಬಿ ಕಟ್ಟಡಗಳ ನಿರ್ಮಾಣಕ್ಕಾಗಿ. ಇಷ್ಟು ಮಾಹಿತಿಗಳು ದಿನ ಪತ್ರಿಕೆ, ಇಂಟರ್ನೆಟ್ ಮೂಲಕ ತಿಳಿದುಕೊಂಡದ್ದಾಯಿತು. ಆದರೆ ರಾಜಕೀಯ, ವ್ಯವಹಾರ ಮೀರಿ ಸಾಮಾನ್ಯ ಜನಜೀವನಕ್ಕೆ ಇದರ ಕೊಡುಗೆ ಏನು ಎಂದು ನಾನು ಖುದ್ದು ತಿಳಿದುಕೊಳ್ಳಬೇಕಿತ್ತು.


ನಾನು ೨೦೦೫ ರಿಂದ ಕಾರು ಓಡಿಸಲು ಕಲಿತುಕೊಂಡು, ಅವಶ್ಯಕತೆ ಬಿದ್ದಾಗ ನಮ್ಮೂರಿಗೆ ಕಾರಲ್ಲೇ ಹೋಗುವುದಕ್ಕೆ ಆರಂಭಿಸಿದ್ದೆ. ಬೆಂಗಳೂರಿನಿಂದ ತುಮಕೂರಿನವರೆಗೆ ಟ್ರಾಫಿಕ್ ದಟ್ಟಣೆಯಲ್ಲಿ ಕಾರು ಓಡಿಸುವುದು ಕಿರಿ ಕಿರಿ ಅನಿಸಿದರೆ, ಅಲ್ಲಿಂದ ಸಿರಾ, ಹಿರಿಯೂರಿನವರೆಗೆ ರಸ್ತೆ ಅಕ್ಕ-ಪಕ್ಕದ ತೆಂಗಿನ ತೋಟಗಳನ್ನು ನೋಡುತ್ತಾ ಉಲ್ಲಾಸದಾಯಕವಾಗಿ ಡ್ರೈವ್ ಮಾಡಬಹುದು. ಹೈವೇ ನಿಂದ ಬಲಕ್ಕೆ ತಿರುಗಿ ಚಳ್ಳಕೆರೆ ದಾಟಿದರೆ ಅಲ್ಲಿಂದ ಬಳ್ಳಾರಿ ಸುಮಾರು ನೂರು ಕಿ.ಮೀ. ದೂರ. ಆ ನೂರು ಕಿ.ಮೀ. ಉದ್ದದ ಪ್ರದೇಶದಲ್ಲಿ ಹೆಚ್ಚಿನ ಕೃಷಿ ಮತ್ತು ವಾಣಿಜ್ಯ ಚಟುವಟಿಕೆ ಕಾಣುವುದಿಲ್ಲವಾದ್ದರಿಂದ, ಮಾರ್ಗ ಮಧ್ಯದಲ್ಲಿ ಯಾವುದೇ ದೊಡ್ಡ ಪಟ್ಟಣಗಳಿಲ್ಲ. ಆದರೆ ಓಬಳಾಪುರಂ ದಾಟಿ ಬಳ್ಳಾರಿ ಇನ್ನು ೨೦ ಕಿ.ಮೀ. ಇರುವಾಗಲೇ, ಅದಿರು ಹೊತ್ತ ದೊಡ್ಡ ದೊಡ್ಡ ಟಿಪ್ಪರ್ ಗಳು ರಸ್ತೆಯನ್ನು ಆಕ್ರಮಿಸಿಕೊಳ್ಳುತ್ತವೆ. ಅವು ಧೊಳೆಬ್ಬಿಸುತ್ತ, ರಸ್ತೆಯನ್ನು ಕೆಂಪಾಗಿಸುತ್ತ ಬಳ್ಳಾರಿ ಪ್ರದೇಶದ ಗಣಿಗಾರಿಕೆಯ ಪ್ರಥಮ ಅನುಭವವನ್ನು ನಮಗೆ ಕೊಡುತ್ತವೆ.


ಒಂದು ಸಲ ಮುಖ್ಯ ರಸ್ತೆಯಲ್ಲಿ ಯಾವುದೊ ಕಾರಣಕ್ಕಾಗಿ ಸಂಚಾರ ನಿಲ್ಲಿಸಿ, ನಾವು ಸುತ್ತು ಹಾಕಿ ಹಳ್ಳಿಗಳ  ಮಾರ್ಗದ ಮೂಲಕ ಬಳ್ಳಾರಿ ತಲುಪವ ಅವಶ್ಯಕತೆ ಬಂದಿತು. ಕೆಂಪು ರಸ್ತೆಗಳ ಮೇಲೆ, ಕಡಿಮೆ ವೇಗದಲ್ಲಿ ಕಾರು ನಡೆಸತೊಡಗಿದೆ. ದೂರದಲ್ಲಿ ಕಾಣುತ್ತಿರುವ ಬೆಟ್ಟಗಳು ಕರಗುತ್ತಿರುವುದು ಯಾರಾದರೂ ಮೇಲ್ನೋಟಕ್ಕೆ ಗಮನಿಸಬಹುದಿತ್ತು. ಹಳ್ಳಿಗಳ ರಸ್ತೆ ಬದಿಯ ಮನೆಗಳು ಧೂಳು ಸುರಿದಂತಿದ್ದವು. ನೀರಿಲ್ಲದ ಊರುಗಳಲ್ಲಿ ಧೂಳು ತೊಳೆಯವರು ಯಾರು? ಬರಿ ಮನೆಗಳಲ್ಲ, ದಾರಿಯಲ್ಲಿ ಸಿಕ್ಕ ಎಮ್ಮೆಗಳು ಕೂಡ ಕಂದಾಗಿ ಕಾಣುತ್ತಿದ್ದವು. ರಸ್ತೆ ಬದಿಯ ತಟ್ಟೆ ಹೋಟೆಲು ಸಂಪೂರ್ಣ ಧೂಳುಮಯವಾಗಿತ್ತು. ಅಲ್ಲಿನ ಟೇಬಲ್ ಗಳು, ಪಾತ್ರೆಗಳು ಸಹ ಧೂಳುಮಯವಾಗಿದ್ದವು.  ಚಹಾ ಕುಡಿಯುವ ಒತ್ತಾಸೆಯನ್ನು ನಾನು ಅದುಮಿಕೊಂಡು ಸುಮ್ಮನಾದೆ. 


ಹಳ್ಳಿಗಳು ಶೋಚನೀಯ ಸ್ಥಿತಿಯಲ್ಲಿದ್ದರೆ, ಬಳ್ಳಾರಿ ನಗರಕ್ಕೆ ಶ್ರೀಮಂತಿಕೆಯ ವೈಭವ ಬಂದು ಬಿಟ್ಟಿತ್ತು. ಕೆಲವು ಅರಮನೆಯಂತಹ ಮನೆಗಳು, ರೋಡಿನ ಮೇಲೆ ಲಕ್ಸುರಿ ಕಾರುಗಳು, ರಸ್ತೆಗೆ ಅಲಂಕಾರಿಕ ದೀಪಗಳು ಹೀಗೆ ಸಂಪೂರ್ಣ ಊರು ಬದಲಾಗದಿದ್ದರೂ, ಆ ಊರಿನ ಕೆಲವರಾದರೂ ಗಣಿಗಾರಿಕೆಯ ಲಾಭ ಪಡೆದುಕೊಂಡಿದ್ದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಹಾಗೆಯೇ ಆ ಊರಲ್ಲಿ ಮೊದಲಿಗಿಂತ ಹೆಚ್ಚಿನ ಸಂಖ್ಯೆಯ ಆಸ್ಪತ್ರೆಗಳು ನನಗೆ ಕಾಣಿಸಲಾರಂಭಿಸಿದವು. ಅಲ್ಲಿ ಮೆಡಿಕಲ್ ಕಾಲೇಜು ಇದೆ ಎನ್ನುವ ಕಾರಣಕ್ಕೆ ಅಲ್ಲಿ ಡಾಕ್ಟರ್ ಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆಯೇ ಅಥವಾ ರೋಗಿಗಳು ಹೆಚ್ಚಾಗಿದ್ದರೆ ಎನ್ನುವ ಕಾರಣಕ್ಕೆ ಡಾಕ್ಟರ್ ಗಳು ಹೆಚ್ಚಾಗಿದ್ದರೆ ಎನ್ನುವುದು ತಿಳಿಯದೆ ಹೋಯಿತು. ಬಿಸಿಲ ನಾಡಿನಲ್ಲಿ ಆರೋಗ್ಯವಾಗಿದ್ದ ಜನರು ಗಣಿಗಾರಿಕೆಯ ಧೂಳಿಗೆ ಬಲಿಪಶುಗಳಾಗುತ್ತಿದ್ದಾರೆಯೇ ಎನ್ನುವ ಅನುಮಾನ ಕೂಡ ಮೂಡಿತು.


ವರ್ಷ: 2021

ಕೆಲವು ವರುಷಗಳು ಕಳೆದು ಹೋದವು. ರಾಜ್ಯ ರಾಜಕಾರಣವನ್ನೇ ಬದಲಿಸಿದ ಬಳ್ಳಾರಿಯ ಗಣಿಗಾರಿಕೆ ತನ್ನ ಸದ್ದು ಕಳೆದುಕೊಂಡಿತ್ತು. ಚೀನಾ ದೇಶ ತನ್ನ ಆರ್ಥಿಕ ಪ್ರಗತಿಯ ವೇಗವನ್ನು ಕಳೆದುಕೊಂಡಿತ್ತು. ಗಣಿಗಾರಿಕೆಗೆ ಹಲವಾರು ನಿರ್ಬಂಧಗಳನ್ನು ಸರ್ಕಾರ ಹೇರಿತ್ತು. ನಾನು ಮತ್ತೆ ಊರಿಗೆ ಹೊರಟಾಗ ಬಳ್ಳಾರಿಯ ಬಸ್ ಸ್ಟಾಂಡ್ ಪಕ್ಕದಲ್ಲಿ ಬಾಡಿಗೆ ಸಿಗದೇ ಸುಮ್ಮನೆ ನಿಂತ ನೂರಾರು ಜೆಸಿಬಿ ಮತ್ತು ಟಿಪ್ಪರ್ ಗಳು ಕಂಡವು. ಅವು ವಾಹನಗಳೆನಿಸದೆ ಗತ ಕಾಲ ವೈಭವದ ಪಳೆಯುಳಿಕೆ ತರಹ ಕಂಡವು. ಕೆಲ ದಿನಗಳ ನಂತರ, ನಾನು ಬೆಂಗಳೂರಿಗೆ ಹೊಸಪೇಟೆ ಮಾರ್ಗ ಮೂಲಕ ವಾಪಸ್ಸಾದೆ. ಗಣಿಗಾರಿಕೆ ಪ್ರದೇಶದಲ್ಲಿದ್ದ ಹಳ್ಳಿಗಳ ಮೂಲಕ ಸಾಗಿ ಬಂದೆ. ಅಲ್ಲಿ ರಸ್ತೆ ಪಕ್ಕದ ಒಂದು ಮನೆಯಲ್ಲಿ ಟಿವಿ ನೋಡುತ್ತಿರುವುದು ಕಾಣುತ್ತಿತ್ತು. ಆ ಧೂಳು ತುಂಬಿದ ಟಿವಿ ಯಲ್ಲಿ ಚೀನಾ ದೇಶದ ಸ್ಟೇಡಿಯಂ ಗಳನ್ನು ತೋರಿಸುತ್ತಿದ್ದರು. ತಮ್ಮ ಊರಿನ ಮಣ್ಣೇ ಅಲ್ಲಿ ಸ್ಟೇಡಿಯಂ ಆಗಿರುವ ಪರಿವೆ ಅಲ್ಲಿ ಟಿವಿ ನೋಡುತ್ತಿರುವವರಿಗೆ ತಿಳಿದಿದೆಯೋ ಇಲ್ಲವೋ ನಿರ್ಧರಿಸಲು ಆಗಲಿಲ್ಲ. ಅಷ್ಟಕ್ಕೂ ಮಣ್ಣನ್ನು ಕಳೆದುಕೊಂಡ ಅವರಿಗೆ ಸಿಕ್ಕ ಪ್ರತಿಫಲ ಏನು ಎಂದು ಕೂಡ ತಿಳಿಯದೆ ಹೋಯಿತು.

Sunday, July 11, 2021

ಕಥೆ: ಇದೂ ಒಂದು ಕನಸಲ್ಲವೇ?

ಸಂತೆಗೆ ಜನ ತರಕಾರಿ ಕೊಳ್ಳಲು ಹೋಗುತ್ತಾರೆ. ಆದರೆ ನೆಮ್ಮದಿ ಹುಡುಕಲು ಹೋಗುತ್ತಾರೆಯೇ? ಹಾಗೇಯೇ ಅನಿಸಿತ್ತು ನನಗೆ ಬೆಂಗಳೂರಿನ ಜೀವನ. ಬೆಂಗಳೂರು ಅಲ್ಲಿ ಬದುಕಿದ ಇಪ್ಪತ್ತು ವರುಷಗಳಲ್ಲಿ, ಹಣ, ಅನುಭವ ಎರಡನ್ನು ಯಥೇಚ್ಛವಾಗಿ ಕೊಟ್ಟಿತ್ತಾದರೂ, ಅಲ್ಲಿ ನೆಮ್ಮದಿ ಬಯಸುವ ಯಾರೂ ಬದುಕಲು ಸಾಧ್ಯವಿಲ್ಲ ಎನಿಸಿ, ೪೫ನೇ ವಯಸ್ಸಿನಲ್ಲಿ ಹುಟ್ಟೂರಿಗೆ ಮರಳಿ ಬಂದುಬಿಟ್ಟಿದ್ದೆ. ನಮ್ಮೂರು ಮಸ್ಕಿಯೂ ಸಾಕಷ್ಟು ಬದಲಾಗಿತ್ತಲ್ಲ. ಚಿಕ್ಕವರಾಗಿದ್ದಾಗ ಇಲ್ಲಿ ಎಲ್ಲವರು ಒಳ್ಳೆಯವರೇ ಆಗಿ ಕಾಣುತ್ತಿದ್ದರು. ಅದು ಚಿಕ್ಕ ವಯಸ್ಸಿನ ಮುಗ್ಧತೆಯ ಪ್ರಭಾವವೋ ಏನೋ? ಆದರೆ ಎದುರಿಗಿರುವ ವ್ಯಕ್ತಿಯ ಕಣ್ಣಾಚೆಗಿನ ಮನಸ್ಸನ್ನು ಓದಲು ಕಲಿತ ಮೇಲೆ, ಅಂತಹ ಅನಿಸಿಕೆ ಈಗೇನು ಉಳಿದಿಲ್ಲ. ಆದರೆ ಹಳೆ ಗೆಳೆಯರು, ಚಿಕ್ಕಂದಿನಲ್ಲಿ ಓಡಾಡಿದ ಜಾಗಗಳು, ಹಳೆಯ ನೆನಪುಗಳು ಇಲ್ಲಿ ಉಳಿದುಕೊಂಡಿವೆಯಾದ್ದರಿಂದ, ಬೆಂಗಳೂರಿನಷ್ಟು ಅನುಕೊಲಗಳು ಇಲ್ಲಿ ಇರಲು ಸಾಧ್ಯವಿಲ್ಲವಾದರೂ, ಒಂದು ಸಮಾಧಾನದ ಬದುಕು ಸಾಧ್ಯವಾಗಿತ್ತು. ಇಲ್ಲಿ ಬೇರೆಯ ದಿನಚರಿಗೆ ಹೊಂದಿಕೊಂಡು, ಹತ್ತಾರು ವರುಷಗಳು ಕಳೆದೇ ಹೋದವು. 


ಬೆಂಗಳೂರು ಮಾತ್ರ ಬೆಳೆಯಬೇಕೆ? ನಮ್ಮೂರು ಮಸ್ಕಿ ಹಿಂದೆ ಒಂದು ಕಾಲಕ್ಕೆ ಬೆಟ್ಟ ಹತ್ತಿ ಮಲ್ಲಿಕಾರ್ಜುನ ದೇವಸ್ಥಾನದಿಂದ ನೋಡಿದರೆ, ಒಂದು ಕಡೆ ಹಳ್ಳ, ಇನ್ನೊಂದು ಕಡೆ ಕಾಲುವೆ ಮತ್ತು ಮುಖ್ಯ ರಸ್ತೆ, ಈ ಮೂರು ಗಡಿಗಳ ನಡುವೆ ತ್ರಿಕೋನಾಕಾರದ ಪ್ರದೇಶ ಬಿಟ್ಟು ಬೆಳೆದಿರಲಿಲ್ಲ. ಆದರೆ ಇಂದಿಗೆ ಅದರ ರೂಪು ರೇಷೆಯೇ ಬೇರೆಯಾಗಿಬಿಟ್ಟಿದೆ. ಬೆಟ್ಟವನ್ನು ಕಾಲ್ನಡಿಗೆಯಲ್ಲಿ ಹತ್ತಿ ದೇವರ ದರ್ಶನ ಪಡೆಯುವರು ಕಡಿಮೆಯಾಗಿ, ಬೆಟ್ಟದ ಹಿಂಭಾಗದ ರಸ್ತೆಯ ಮೂಲಕ ಭುರ್ರೆಂದು ವಾಹನದಲ್ಲಿ ಬಂದು ಧಿಢೀರ್ ದರ್ಶನ ಪಡೆಯುವರು ಹೆಚಾಗಿದ್ದರಲ್ಲ. ಅದು ಬದಲಾದ ನಮ್ಮೂರಿನ ಸಮಾಜದ ಮನಸ್ಥಿತಿಯನ್ನು ಸಹ ತೋರಿಸುತ್ತದೆ. ಸಹನೆ ಇಲ್ಲದ ಜನರು ಬೆಂಗಳೂರು ಮಾತ್ರವಲ್ಲ, ಎಲ್ಲ ಕಡೆಯೂ ಇದ್ದಾರೆ ಎನ್ನುವ ಪಾಠವನ್ನು ಅದು ನನಗೆ ಕಲಿಸಿತ್ತು. ಆದರೆ ಪರಿಚಿತರ ಯೋಗಕ್ಷೇಮ ವಿಚಾರಿಸಿಕೊಳ್ಳಲು ಪುರುಸೊತ್ತಿಲ್ಲದ ಬೆಂಗಳೂರಿನ ಜನ ಸಾಗರಕ್ಕಿಂತ, ಯಾವುದೇ ಸಹಾಯ ಮಾಡದಿದ್ದರೂ, "ಆರಾಮಿದ್ದಿರಾ?" ಎಂದು ಕೇಳುವ ನಮ್ಮೂರ ಜನರೇ ಹಿತವೆನಿಸಿದ್ದರು.


ಏರು ಜವ್ವನದಲ್ಲಿ ನಾವು ವರ್ಷಕ್ಕೆ ಒಂದು ಸಲವೋ, ಇಲ್ಲವೇ ಎರಡು ವರುಷಕ್ಕೆ ಒಂದು ಸಲವೋ ವೈದ್ಯರನ್ನು ಭೇಟಿಯಾದರೆ, ವಯಸ್ಸಾಗುತ್ತ ದೈಹಿಕ ಶಕ್ತಿ ಕುಗ್ಗಿದಾಗ, ತಿಂಗಳಿಗೆ ಎರಡು ಸಲ ವೈದ್ಯರನ್ನು ನೋಡುವ ಅವಶ್ಯಕತೆ ಬಂದು ಬಿಡುತ್ತದೆ. ಇಂತಹುದೇ ಸಂದರ್ಭದಲ್ಲಿ ಹೆಚ್ಚು ಕಡಿಮೆ ನನ್ನದೇ ವಯಸ್ಸಿನ ವೈದ್ಯ ಒಬ್ಬರನ್ನು ನಾನು ನಾಲ್ಕಾರು ಸಲ ಭೇಟಿಯಾದ ಮೇಲೆ, ನಮ್ಮಿಬ್ಬರ ನಡುವೆ ಒಂದು ಸ್ನೇಹ, ಸಲಿಗೆ ಬೆಳೆದಿತ್ತು. ಅವರಿಗೆ ಅದೇನು ಅನ್ನಿಸಿತೋ ಒಂದು ದಿನ ರಾತ್ರಿ ಊಟಕ್ಕೆ ನನ್ನನ್ನು ತಮ್ಮ ಮನೆಗೆ ಆಹ್ವಾನಿಸಿದರು. ಸರಿ, ಹೋದರಾಯಿತು ಎಂದು ಅವರ ಮನೆ ಎಲ್ಲಿ ಎಂದು ವಿಚಾರಿಸಿಕೊಂಡೆ. ಕವಿತಾಳ ರಸ್ತೆಗೆ ಬಂದು, ಬಲಕ್ಕೆ ಒಂದು ಅಡ್ಡ ರಸ್ತೆಯಲ್ಲಿ ತಿರುಗಿಕೊಳ್ಳಿ. ಅವಶ್ಯಕತೆ ಬಿದ್ದಲ್ಲಿ ಫೋನ್ ಮಾಡಿ, ರಾತ್ರಿ ಎಂಟು ಗಂಟೆ ಹೊತ್ತಿಗೆಲ್ಲ ಬಂದು ಬಿಡಿ ಎಂದು ತಿಳಿಸಿದ್ದರು.


ರಾಯಚೂರಿಗೆ ಸಂಪರ್ಕ ಕಲ್ಪಿಸುವ ಆ ಕವಿತಾಳ ರಸ್ತೆಯಲ್ಲಿ ನಾನು ಓಡಾಡಿದ್ದರೂ, ಅಲ್ಲಿ ಬೆಳೆದಿದ್ದ ಊರಿನ ಪರಿಚಯ ಇರಲಿಲ್ಲ. ಚಿಕ್ಕವನಾಗಿದ್ದಾಗ ನಮ್ಮ ಮನೆ ಇದ್ದದ್ದು ಊರ ಮಧ್ಯದಲ್ಲಿ ಮತ್ತು ನಂತರದ ಜೀವನವೆಲ್ಲ ಕಳೆದದ್ದು ಸಿಂಧನೂರು ರಸ್ತೆಯ ಆಸು ಪಾಸಿಗೆ ಬೆಳೆದ ಪ್ರದೇಶದಲ್ಲಿ.  ಏಕಾದರೂ ಇರಲಿ, ಸ್ವಲ್ಪ ಬೇಗ ಹೊರಟರಾಯಿತು ಎಂದು ಸಂಜೆ ಕತ್ತಲಾಗುವ ಸಮಯಕ್ಕೆ ನನ್ನ ಕಾರನ್ನು ತೆಗೆದುಕೊಂಡು  ಕವಿತಾಳ ರಸ್ತೆಗೆ  ಹೊರಟೆ. ಅಡ್ಡ ರಸ್ತೆಯಲ್ಲಿ ಕಾರು ಸರಾಗವಾಗಿ ಓಡಾಡುವಷ್ಟು ರಸ್ತೆಗಳು ಅಗಲ ಇರದಿದ್ದರಿಂದ, ಕಾರನ್ನು ಒಂದು ಕಡೆ ನಿಲ್ಲಿಸಿ, ನಡೆಯುತ್ತಾ ಡಾಕ್ಟರ್ ರ ಮನೆ ಹುಡುಕಿದರೆ ಆಯಿತು ಎಂದು ನಿರ್ಧರಿಸಿದೆ. 


ಅಡ್ಡ ರಸ್ತೆಯ ಕೊನೆಯವರೆಗೂ ಹೋದರೂ, ಡಾಕ್ಟರ್ ಹೆಸರಿರುವ ಫಲಕ ಯಾರ ಮನೆ ಮುಂದೆಯೂ ಕಾಣಲಿಲ್ಲ. ಇಷ್ಟಕ್ಕೂ ಈ ಡಾಕ್ಟರ್ ಗೆ ಮನೆ ಕಟ್ಟಲು ಬೇರೆ ಯಾವ ಪ್ರದೇಶವು ಸಿಗಲಿಲ್ಲವೇ ಎಂದು ಕೂಡ ಅನಿಸಿತು.  ಅಲ್ಲಿ ಒಬ್ಬರನ್ನು ವಿಚಾರಿಸಿ ನೋಡಿದೆ. ಅಲ್ಲಿ ಯಾವ ಡಾಕ್ಟರ್ ಮನೆ ಇಲ್ಲ, ಆದರೆ ಹತ್ತಿರದ ಸ್ಮಶಾನದ ಸುತ್ತ ಮುತ್ತ ಕೂಡ ಸಾಕಷ್ಟು ಮನೆಗಳಾಗಿದ್ದು ಅಲ್ಲಿ ವಿಚಾರಿಸಿ ನೋಡಿ ಎಂದರು. ಅಲ್ಲಿಂದ ಇನ್ನೊಂದು ರಸ್ತೆಯಲ್ಲಿ ಹೊರಳಿದರೆ ಅದು ಸ್ಮಶಾನಕ್ಕೆ ಹೋಗುವ ಮಾರ್ಗವಾಗಿತ್ತು. ಅಲ್ಲಿಗೆ ಬಂದಾಗ, ಎಷ್ಟೋ ವರುಷಗಳು ಹಿಂದೆ  ತೀರಿಕೊಂಡ ನನ್ನ ದೊಡ್ಡಮ್ಮಳ ಅಂತ್ಯ ಸಂಸ್ಕಾರಕ್ಕೆಂದು ಆ ಅಡ್ಡ ರಸ್ತೆಯಲ್ಲಿ ಒಮ್ಮೆ ಓಡಾಡಿದ್ದು ನೆನೆಪಿಗೆ ಬಂತು. ನಾನು ಅವತ್ತು ಬಂದಿದ್ದು ಹಗಲಿನಲ್ಲಿ. ಆದರೆ ಇಂದು ಕತ್ತಲಾಗಿ ಸಂಪೂರ್ಣ ಗುರುತು ಸಿಗುತ್ತಿರಲಿಲ್ಲ. ಸ್ಮಶಾನದ ಪ್ರವೇಶದಲ್ಲಿ ಕಟ್ಟಿರುವ ಒಂದು ಕಮಾನಿನವರೆಗೆ ನಡೆದು ಬಂದರೂ, ದಾರಿಯಲ್ಲಿದ್ದ ಯಾವ ಮನೆಗಳು ನಾನು ಭೇಟಿಯಾಗಬೇಕಿರುವ ಡಾಕ್ಟರ್ ದ್ದು ಎಂದು ಅನಿಸಲಿಲ್ಲ. 


ಸ್ಮಶಾನದ ಅಂಚಿನಲ್ಲಿ ಒಬ್ಬ ಹೆಣ್ಣು ಮಗಳು ನನ್ನನ್ನು ನೋಡಿದರೂ ನೋಡದಂತೆ ಹೊರಟು ಹೋದಳು. ಅವಳ ಮುಖ ನಾನು ಚಿಕ್ಕವನಾಗಿದ್ದಾಗ ವರದಕ್ಷಿಣೆ ಕಿರುಕುಳ ತಾಳದೆ ವಿಷ ಕುಡಿದು ಸತ್ತ ಹೆಣ್ಣು ಮಗಳನ್ನು ಹೋಲುತ್ತಿತ್ತು. ಅಂದು ಊರಿನ ಜನರೆಲ್ಲಾ ಆ ಮನೆ ಮುಂದೆ ಸೇರಿದ್ದಲ್ಲ. ಅವಳ ದೇಹವನ್ನು ಬಿಳಿ ಬಟ್ಟೆಯಲ್ಲಿ ಸುತ್ತಿ ಮುಖ ಮಾತ್ರ ಕಾಣುವಂತೆ ಮಲಗಿಸಿಟ್ಟಿದ್ದರು. ಇಂದು ಕೂಡ ಅಲ್ಲಿರುವ ಮಬ್ಬೆಳಕಿನಲ್ಲಿ ಆ ಹೆಣ್ಣು ಮಗಳ ಮುಖ ನೀಲಿ ಮಿಶ್ರಿತ ಕಪ್ಪಾಗಿರುವುದು ಕಾಣುತ್ತಿತ್ತು. ಛೆ, ಕಾರನ್ನು ಹಿಂದೆಯೇ ಬಿಟ್ಟು ಬರಬಾರದಿತ್ತು, ಅದರ ಬೆಳಕು ಇಲ್ಲಿ ಸಹಾಯವಾಗುತ್ತಿತ್ತು ಎಂದು ಅನಿಸಿತು. ಪ್ಯಾಂಟಿನ ಜೇಬಿಗೆ ಕೈ ಹಾಕಿ ನೋಡಿದೆ. ಕಾರಿನ ಕೀ ಅಲ್ಲಿ ಭದ್ರವಾಗಿತ್ತು. ಮತ್ತೆ ಹಿಂದೆ ಹೋಗುವುದಕ್ಕಿಂತ ಮುನ್ನ ಯಾರನ್ನಾದರೂ ವಿಚಾರ ಮಾಡಿದರಾಯಿತು ಎಂದು ಸುತ್ತ ಮುತ್ತ ನೋಡಿದೆ. ಸ್ಮಶಾನ ದ್ವಾರ ಮಂಟಪದ ಕೆಳಗೆ ಕತ್ತಲಿನಲ್ಲಿ ಒಬ್ಬ ಅಜಾನುಬಾಹು ವ್ಯಕ್ತಿ ನಿಂತಿದ್ದ. ಆತನ ಆಕಾರ ಹೆದರಿಕೆ ತರುತ್ತಿದ್ದರೂ, ಧೈರ್ಯ ತೆಗೆದುಕೊಂಡು ಹತ್ತಿರ ಹೋಗಿ,


"ಇಲ್ಲಿ ಹತ್ತಿರದಲ್ಲಿ ಡಾಕ್ಟರ್ ಮನೆ ಇದೆಯೇ?" ಎಂದು ಕೇಳಿದೆ. 


ತನಗೆ ಯಾವ ಡಾಕ್ಟರ್ ಗೊತ್ತಿಲ್ಲ ಎಂದು ಹೇಳಿದ ಅವನು ತಾನು ನಿಂತ ಆ ಜಾಗದಿಂದಾಚೆ ಹೋದವರನ್ನು ಮತ್ತೆ ಆಚೆಗೆ ಬಿಡುವುದಿಲ್ಲ ಎಂದು ಧೃಢ ನಿರ್ಧಾರದ ಧ್ವನಿಯಲ್ಲಿ ಹೇಳಿದ. ಇವನು ಸ್ಮಶಾನದ ಕಾವಲುಗಾರನೋ, ಇಲ್ಲವೇ ನಿಜ ಯಮಧರ್ಮನೊ, ಮತ್ತು ಅವನು ನನಗೇಕೆ ಹಾಗೆ ಹೇಳಿದ ಎಂದು ಒಂದು ಕ್ಷಣ ಕಸಿವಿಸಿ ಆಯಿತು. ಕತ್ತಲು ಮನಸಿಗೂ ಕವಿದಂತಾಗಿತ್ತು. 


"ಇದೇನು ನಿಜವೋ, ಕನಸೋ?" ಎಂದು ನನಗೆ ನಾನೇ ಕೇಳಿಕೊಂಡೆ.


ಆ ವ್ಯಕ್ತಿ ನನ್ನನ್ನೇ ದಿಟ್ಟಿಸಿ ನೋಡುತ್ತಾ, ನಿನಗಿನ್ನೂ ಅರ್ಥವಾಗಿಲ್ಲವೇ ಎನ್ನುವ ಭಾವದಲ್ಲಿ ಹೇಳಿದ "ಜೀವನ ಕೂಡ ಒಂದು ಕನಸಲ್ಲವೇ?"

Friday, July 9, 2021

ಎನಗೂ ಆಣೆ, ನಿನಗೂ ಆಣೆ

ಯಾವುದೇ ಮನುಷ್ಯ-ಮನುಷ್ಯ ಸಂಬಂಧಗಳು ಗಟ್ಟಿಯಾಗಿ ನಿಲ್ಲಬೇಕೆಂದರೆ, ಅದರಲ್ಲಿ ಇಬ್ಬರ ಕೊಡುಗೆಯು ಸರಿ ಸಮನಾಗಿ ಇರಬೇಕು ಅಲ್ಲವೇ? ಒಮ್ಮುಖವಾದ ಸಂಬಂಧ, ಸಂಬಂಧ ಎನಿಸಿಕೊಳ್ಳದು. ಅದು ಬರೀ ಬಂಧವಾಗುತ್ತದೆ. ಇಲ್ಲದಿದ್ದರೆ ಕರ್ತವ್ಯವೋ, ಕಟ್ಟುಪಾಡೋ ಎನಿಸಿಕೊಳ್ಳಬಹುದು ಅಷ್ಟೇ. ಗಮನಿಸಿ ನೋಡಿದರೆ ನಮ್ಮ ಸಮಾಜದಲ್ಲಿನ ಎಷ್ಟೋ ಸಂಬಂಧಗಳು, ತಂದೆ-ಮಗ, ಅಣ್ಣ-ತಮ್ಮ, ಗಂಡ-ಹೆಂಡತಿ ಇವುಗಳೆಲ್ಲ ಸಂಬಂಧಗಳಾಗದೆ ಕೇವಲ ಬಂಧಗಳಾಗಿ ಉಳಿದುಬಿಡುತ್ತವೆ. ಏಕೆಂದರೆ ಇವುಗಳಲ್ಲಿ ಸರಿ ಸಮಾನ ಕೊಡುಗೆಯ ಕೊರತೆ. ಅಥವಾ ಅವರಿಬ್ಬರಲ್ಲಿ ಒಬ್ಬರಿಗೆ ತಾನು ಹೆಚ್ಚು ಎಂದು ಶೋಷಣೆಗೆ ಇಳಿಯುವ ಹುಚ್ಚು. ಇಲ್ಲವೇ ಇನ್ನೊಬ್ಬರ ನೋವಿಗೆ ಸ್ಪಂದಿಸದ ಅಥವಾ ಖುಷಿ ಪಡುವ ಪ್ರವೃತ್ತಿ.


ತನಗೆ ಮರ್ಯಾದೆ ಇಲ್ಲ ಎಂದುಕೊಳ್ಳುವ ತಂದೆ, ತನ್ನಿಷ್ಟದಂತೆ ನಡೆಯಲು ಬಿಡುತ್ತಿಲ್ಲ ಎನ್ನುವ ಮಗ, ಇವಳ ಜೊತೆ ಹೇಗೆ ಬದುಕಬೇಕೋ ಎಂದುಕೊಳ್ಳುವ ಗಂಡ, ತನ್ನನ್ನು ಸರಿಯಾಗಿ ಬಾಳಿಸುತ್ತಿಲ್ಲ ಎಂದು ದೂರುವ ಹೆಂಡತಿ, ಇವರೆಲ್ಲರೂ ತಮ್ಮ ಸಂಬಂಧಗಳಲ್ಲಿ ಅಸಮಾನತೆಯನ್ನು ಹುಡುಕಿ ತರುತ್ತಾರೆ. ಆಮೇಲೆ ಶುರುವಾಗುವುದು ಅವರವರ ಕರ್ತವ್ಯಗಳ ಪಾಲನೆ ಬಗ್ಗೆ ಆರೋಪ, ಪ್ರತ್ಯಾರೋಪ. ಅಲ್ಲಿಗೆ ಸಂಬಂಧ ಸತ್ತು ಹೋದ ನಂತರ ಅವರ ನಡುವೆ ಉಳಿಯುವುದು ಸಾಮಾಜಿಕ ಕಟ್ಟು ಪಾಡಿನ ಪಾಲನೆ ಮಾತ್ರ.


ಅವರೆಲ್ಲರೂ ತಮ್ಮ ದೋಷಾರೋಪಣೆಗೆ ಮುಂಚೆ ಆ ಸಂಬಂಧಕ್ಕೆ, ಅದನ್ನು ಸಿಹಿಗೊಳಿಸುವದಕ್ಕೆ, ಗಟ್ಟಿಯಾಗಿಸುವುದಕ್ಕೆ, ಕರ್ತವ್ಯ ಪಾಲನೆಯನ್ನು ಮೀರಿ ತಮ್ಮ ಕೊಡುಗೆಯ ಬಗ್ಗೆ ಸ್ಪಷ್ಟತೆ ಹೊಂದಿದ್ದರೆ, ಆ ಸಂಬಂಧ ಪಡೆದುಕೊಳ್ಳುವ ತಿರುವು ಬೇರೆ. ಸಂಬಂಧ ಅನ್ನುವುದು ವ್ಯಾಪಾರ ಅಲ್ಲದೆ ಇರಬಹುದು. ಆದರೆ ನಾವು ಇನ್ನೊಬ್ಬರಿಗೆ ಆಣೆ, ಭಾಷೆ ತೆಗೆದುಕೊಳ್ಳುವ ಮುನ್ನ ನಾವು ಯಾವ ಆಣೆಗೆ ಸಿದ್ಧರಿದ್ದೇವೆ ಎನ್ನುವುದು ತಿಳಿಸಬೇಕೆಲ್ಲವೇ? ಪುರಂದರ ದಾಸರ ಹಾಡು ಕೇಳಿದ್ದೀರಾ?


"ತನುಮನಧನದಲಿ ವಂಚಕನಾದರೆ ಎನಗೆ ಆಣೆ

ರಂಗಾ ಮನಸು ನಿನ್ನಲಿ ನಿಲಿಸದಿದ್ದರೆ ನಿನಗೆ ಆಣೆ


ಕಾಕು ಮನುಜರ ಸಂಗವ ಮಾಡಿದರೆ ಎನಗೆ ಆಣೆ

ರಂಗಾ ಲೌಕಿಕವ ಬಿಡಿಸದಿದ್ದರೆ ನಿನಗೆ ಆಣೆ


ಹರಿ ನಿನ್ನಾಶ್ರಾಯ ಮಾಡದಿದ್ದರೆ ಎನಗೆ ಆಣೆ

ರಂಗಾ ಪುರಂದರವಿಠಲ ನೀನೊಲಿಯದಿದ್ದರೆ ನಿನಗೆ ಆಣೆ


ಎನಗೆ ಆಣೆ ನಿನಗೆ ಆಣೆ

ಎನಗೂ ನಿನಗೂ ಇಬ್ಬರಿಗೂ ಭಕ್ತರಾಣೆ"


ಪುರಂದರ ದಾಸರಿಗೆ ತಮ್ಮ ಇಷ್ಟ ದೈವದ ಮೇಲೆ ಆಣೆ ಹಾಕುವ ಆತ್ಮಸ್ಥೈರ್ಯ ತಂದುಕೊಟ್ಟಿದ್ದು ಅವರು ತಮಗೆ ತಾವು ಹಾಕಿಕೊಳ್ಳುವ ಆಣೆಯಿಂದ. ಅವರ ಸಂಬಂಧ ಮನುಷ್ಯ-ದೇವರ ನಡುವಿನದಾದರೂ ಅದು ಒಂದು ಗಟ್ಟಿ ತಳಹದಿಯ ಮೇಲಿತ್ತು. ಹಾಕಿಕೊಂಡ ಆಣೆಗಳು ಸಂಬಂಧಗಳ ಮೇಲಿನ ನಂಬುಗೆಯನ್ನು ಹೆಚ್ಚಿಸಿದವು. ಆ ಸಂಬಂಧದ ಮಾಧುರ್ಯ, ಕಂಪು ಅವರಿಬ್ಬರಿಗೆ ಮೀಸಲಾಗದೆ ಇತರರಿಗೂ ಪಸರಿಸಿ ಪ್ರಭಾವಗೊಳಿಸಿತು. ನಮಗೆ ದಾಸರಿಗಿದ್ದ ಶೃದ್ಧೆ ಇಲ್ಲ. ಕಾಯಿ ಒಡೆದು, ಕೋಟಿ ಕೇಳುವ ನಮಗೆ ದೇವರು ಒಲಿಯುವುದಾದರೂ ಹೇಗೆ?


ನಾವು ಬದುಕುವ ರೀತಿ ನೋಡಿ. ನಮಗೆ ನಾವು ಯಾವ ಆಣೆಗೂ ತಯ್ಯಾರಿಲ್ಲ. ಅದೆಲ್ಲ ಮಾಡಬೇಕಾದ್ದು ಇನ್ನೊಬ್ಬರು ಎನ್ನುವ ಮನೋಭಾವದವರು. ಅದಕ್ಕೆ ನಮ್ಮ ಸಂಬಂಧಗಳಲ್ಲಿ ಕಂಪಿಲ್ಲ. ನಾವು ದಾಸರ ಪದಗಳನ್ನು ಕೇಳುತ್ತೇವೆ. ಹಾಗೆಯೇ ಮುಂದಿನ ಜಗಳಕ್ಕೆ ಸಿದ್ಧರಾಗುತ್ತೇವೆ. ನೆಮ್ಮದಿಯಿಂದ ಬದುಕಲು ಆಗದೆ, ಕರ್ತವ್ಯ ನಮ್ಮನ್ನು ಸಾಯಲು ಬಿಡದೆ, ಮುಕ್ತಿಯ ಆಸೆ ನಾವು ಬಿಡದೆ, ಲೌಕಿಕ ನಮ್ಮನ್ನು ಬಿಡದೆ ಚಡಪಡಿಸುವ ಹಕ್ಕಿಗಳಾಗಿ ಹೊತ್ತುಗಳೆಯುತ್ತೇವೆ.

Sunday, July 4, 2021

ಇಲ್ಲಿ ಹಿಟ್ಲರ್ ನು ಇದ್ದ, ಮದರ್ ತೇರೇಸಾ ಳೂ ಇದ್ದಳು

ಪ್ರಕೃತಿ ಎಲ್ಲರನ್ನು ಹೇಗೆ ಹುಟ್ಟು ಸ್ವಾರ್ಥಿಗಳನ್ನಾಗಿಸುತ್ತದೆ ಎಂದು ಕಳೆದ ಲೇಖನದಲ್ಲಿ ಗಮನಿಸಿದ್ದೆವು. ಆದರೆ ಕೆಲವೇ ಕೆಲವರಿಗಾದರೂ ಸ್ವಾರ್ಥ ಭಾವದಿಂದ ಹೊರ ಬಂದು ಮಾನವ ಕಲ್ಯಾಣ ಕಾರ್ಯಗಳನ್ನು ಮಾಡಲು ಸಾಧ್ಯವಾಗುತ್ತದಲ್ಲ. ಇಲ್ಲದಿದ್ದರೆ ಎಷ್ಟೊಂದು ಗುಡಿ, ಮಠಗಳು, ಅನಾಥಾಶ್ರಮಗಳು, ಮನುಷ್ಯ ಕಲ್ಯಾಣಕ್ಕೆಂದೇ ಮೀಸಲಾಗಿರುವ ಸಂಘ-ಸಂಸ್ಥೆಗಳು ಹುಟ್ಟಿಕೊಳ್ಳಲು ಸಾಧ್ಯವಿತ್ತೇ? ಮನುಷ್ಯನ ಆ ಇನ್ನೊಂದು ಪ್ರಕ್ರಿಯೆ ಬಗ್ಗೆ ಗಮನ ಹರಿಸೋಣ.

 

ವಿಪರೀತ ನೋವನ್ನುಂಡ ಮನುಷ್ಯನಲ್ಲಿ, ಇತರೆ ಜೀವಿಗಳಲ್ಲಿ ಆ ನೋವನ್ನು ಗುರುತಿಸುವುದು ಮತ್ತು ಮತ್ತು ಅವರ ನೋವಿಗೆ ಮಿಡಿಯುವುದು ಸಾಧ್ಯವಾಗುತ್ತದೆ. ಸಾಮ್ರಾಟ್ ಅಶೋಕನಿಗೆ ಸಾಧ್ಯವಾಗಿದ್ದು ಅದೇ. ಯುದ್ಧ ಮಾಡಿ ಸಾಮ್ರಾಜ್ಯ ಗೆಲ್ಲುವ ಆಕಾಂಕ್ಷೆಯನ್ನು ಅಲ್ಲಿಗೆ ಕೊನೆಗೊಳಿಸಿ, ಪ್ರಜೆಗಳನ್ನು ಮಕ್ಕಳ ಹಾಗೆ ಗಮನಿಸಲು ಆರಂಭ ಮಾಡಿದಾಗ ಅವನು ಗೆದ್ದದ್ದು ಅವನ ಮನದಲ್ಲಿನ ಸ್ವಾರ್ಥ ಭಾವವನ್ನು. ಇಂದಿಗೂ ಇತಿಹಾಸ ಅವನನ್ನು ದಾಖಲಿಸುವುದು ಒಬ್ಬ ಕರುಣಾಮಯಿ ಚಕ್ರವರ್ತಿಯನ್ನಾಗಿ.

 

ಸಕಲ ಜೀವಾತ್ಮಗಳಲ್ಲಿರುವ ಶಕ್ತಿ ಒಂದೇ. ನಾವು ಮತ್ತು ಈ ಜಗತ್ತು ಬೇರೆ ಬೇರೆಯಲ್ಲ ಎಂದು ತಿಳಿಸಿದ್ದು ಪ್ರಾಚೀನ ಕಾಲದಲ್ಲಿ ರೂಪುಗೊಂಡ ಉಪನಿಷತ್ತುಗಳು - ಐತ್ತರಿಯ ಉಪನಿಷತ್ತು (ಪ್ರಜ್ಞೆಯೇ ಬ್ರಹ್ಮ), ಬೃಹದಾರಣ್ಯಕ ಉಪನಿಷತ್ತು (ಅಹಂ ಬ್ರಹ್ಮಾಸ್ಮಿ), ಚಂದೋಗ್ಯ ಉಪನಿಷತ್ತು (ತತ್ವಂ ಅಸಿ), ಮಾಂಡೂಕ್ಯ ಉಪನಿಷತ್ತು (ಆತ್ಮನೇ ಬ್ರಹ್ಮ). ಇವುಗಳ ಮೇಲೆ ರೂಪುಗೊಂಡಿದ್ದು ಅದ್ವೈತ ಶಾಸ್ತ್ರ. ಧರ್ಮ, ಅರ್ಥ, ಕಾಮ, ಮೋಕ್ಷ ಎನ್ನುವ ಮನುಷ್ಯ ಜೀವನದ ನಾಲ್ಕು ಧ್ಯೇಯಗಳನ್ನು ಅದು ಸಾರಿ ಹೇಳಿತು. ಆದಿ ಶಂಕರ ಎನ್ನುವ ಅಪರೂಪದ ವ್ಯಕ್ತಿ ಅದನ್ನು ಜನ ಸಾಮಾನ್ಯರಿಗೆ ಸರಳವಾಗಿ ತಿಳಿಸಿ ಹೋದ. ಆತನ ಮುಂಚಿನ ಮತ್ತು ನಂತರದ ಅನೇಕರು (ಬುದ್ಧ, ಮಹಾವೀರ, ಬಸವ, ಸ್ವಾಮಿ ವಿವೇಕಾನಂದ) ಮನುಷ್ಯನಿಗೆ ತನ್ನ ಸ್ವಾರ್ಥದಿಂದ ಹೊರ ಬಂದು ಜೀವಿಸಲು ಪ್ರೇರೇಪಣೆ ನೀಡಿದರು.

 

ಇಂದಿಗೂ ಪ್ರತಿ ಊರಿನಲ್ಲಿ, ನಮ್ಮ ನಿಮ್ಮೆಲ್ಲರ ನಡುವೆ, ಪ್ರಾಮಾಣಿಕತೆಯಿಂದ ಸಮಾಜ ಸೇವೆ ಮಾಡುತ್ತಿರುವರು ಇದ್ದಾರಲ್ಲ. ಅವರನ್ನು ಆಳುತ್ತಿರುವ ಭಾವ ಸ್ವಾರ್ಥವೋ, ನಿಸ್ವಾರ್ಥವೋ ಎಂದು ಗಮನಿಸಿ ನೋಡಿ. ಅವರಿಗೆ ಆಸ್ತಿ-ಅಹಂಕಾರದ ಪ್ರತಿಷ್ಠೆ ಏಕಿಲ್ಲ ಎಂದು ವಿಚಾರ ಮಾಡಿ ನೋಡಿ. ಗಂಗಾ ನದಿ ತಟದಲ್ಲಿ ಎಷ್ಟೋ ಸಾಧು-ಸಂತರು ವಾಸ ಮಾಡಿಕೊಂಡಿರುತ್ತಾರಲ್ಲ. ಅವರ ಹೆಸರೇನು ಎಂದು ಕೇಳಿ ನೋಡಿ. 'ಬಾಬಾ ಮುರ್ದಾ ಹೋತಾ ಹೈ' ಎನ್ನುವ ಉತ್ತರ ಬರುತ್ತದೆ. ತಮ್ಮ ಪೂರ್ವಾಶ್ರಮದ ಹೆಸರು, ಗುರುತುಗಳನ್ನು ಬಿಟ್ಟು ಅವರು ಹುಡುಕುತ್ತಿರುವುದು ಏನನ್ನು? ನಾವು ಮಾತ್ರ ನಮ್ಮ ಹೆಸರು, ಪ್ರತಿಷ್ಠೆಗೆ ಗಂಟು ಬಿದ್ದಿರುವುದು ಏಕೆ?

 

ಪ್ರಕೃತಿ ಎಲ್ಲರನ್ನು ಸ್ವಾರ್ಥಿಯಾಗಿಯೇ ಹುಟ್ಟಿಸಿತು. ಹಾಗೆಯೆ ವಿಚಾರ ಮಾಡುವ ಶಕ್ತಿ, ವಿವೇಕವನ್ನು ಕೂಡ ಕೊಟ್ಟಿತು. ಸ್ವಾರ್ಥವನ್ನೇ ಆಯುಧವನ್ನಾಗಿಸಿಕೊಂಡ ಹಿಟ್ಲರ್ ತನ್ನ ಹಿತಕ್ಕಾಗಿ ಲಕ್ಷಾಂತರ ಜನರ ಸಾವಿಗೆ ಕಾರಣನಾದರೆ, ಮದರ್ ತೇರೇಸಾ ನೊಂದ ಜನರ ಸೇವೆಯಲ್ಲಿ ತನ್ನ ಜೀವನದ ಬೆಳಕು ಕಂಡಳು. ಒಬ್ಬ ಸ್ವಾರ್ಥ ಕೂಪದಿಂದ ಹೊರ ಬರದೇ ಹೋದರೆ, ಇನ್ನೊಬ್ಬಳಿಗೆ ಅದನ್ನು ಮೆಟ್ಟಿ ನಿಲ್ಲಲು ಸಾಧ್ಯವಾಯಿತು.

 

ಪ್ರಕೃತಿ ನಮ್ಮಲ್ಲಿ ಅಸಮಾನತೆಯನ್ನು ಸೃಷ್ಟಿಸುತ್ತದೆ. ಒಬ್ಬರ ಮೇಲೆ ಇನ್ನೊಬ್ಬರು ಪೈಪೋಟಿ ಮಾಡುವಂತೆ ಮಾಡುತ್ತದೆ. ಆದರೆ ಆ ಅಸಮಾನತೆಯ ಅಂತರ ಕಡಿಮೆ ಮಾಡಲು ಪ್ರಯತ್ನಿಸುವ ಕೆಲವರಾದರೂ ಇದ್ದಾರಲ್ಲ. ಅವರಿಂದ ನಮ್ಮ ಬದುಕು ಸ್ವಲ್ಪ ಮಟ್ಟಿಗಾದರೂ ಸಹನೀಯವಾಗಿದೆ. ನಿಸ್ವಾರ್ಥ ಸೇವೆಗೆ ನಿಂತವರು ಮುಕ್ತಿ ಪಥದತ್ತ ಹೆಜ್ಜೆ ಹಾಕಿದರೆ, ಉಳಿದವರು ಕರ್ಮದ ತಿರುಗಣಿಯಲ್ಲೇ ಸುತ್ತುತ್ತಾರೆ. ಪ್ರಕೃತಿಯನ್ನು ಗೆದ್ದವರು, ಪ್ರಕೃತಿಯಲ್ಲಿ ಲೀನವಾಗುತ್ತಾರೆ. ಉಳಿದವರು ಪ್ರಕೃತಿಯ ನಿಯಮಗಳಿಗೆ ಅನುಸಾರವಾಗಿ ಬದುಕುತ್ತಾರೆ.