Saturday, January 19, 2019

ಸ್ಮಾರ್ಟ್ ಫೋನ್ ವ್ಯಸನಿ: ಕಲ್ಪನಾ ಜೀವಿ ಮನುಷ್ಯ

ನಾವು ಸಿನೆಮಾಗೆ ಏಕೆ ಹೋಗುತ್ತೇವೆ ಹೇಳಿ? ಮೂರು ತಾಸು ಮೈ ಮರೆತು, ಕಾಲ್ಪನಿಕ ಕಥೆಯಲ್ಲಿ, ಅದರ ಪಾತ್ರಗಳ ಜೊತೆ ಬೆರೆತು, ಭಾವನೆಗಳಲ್ಲಿ ಮುಳುಗಿ, ವಾಸ್ತವಿಕತೆಯನ್ನು ಮರೆಯುವುದೋಸ್ಕರ ಅಲ್ಲವೇ? ಹಾಗೆಯೇ ಪ್ರವಾಸ ಮಾಡುವುದೇತಕ್ಕೆ ಹೇಳಿ? ಒಂದೇ ಊರಿನ, ಪ್ರತಿನಿತ್ಯದ ವಾಡಿಕೆ ಬದುಕಿನಿಂದ ಹೊರ ಬಂದು, ಹೊಸ ಹೊಸ ಅನುಭವಗಳು ಹೊಂದುವುದಕ್ಕೆ ತಾನೇ? ದಿನ ನಿತ್ಯದ ಸಂಗತಿಗಳಲ್ಲಿ, ಹಾಗು-ಹೋಗುಗಳಲ್ಲಿ, ಮನುಷ್ಯನಿಗೆ ಹೊಸತೇನು ಕಾಣ ಸಿಗದು. ಅದಕ್ಕೆ ಅವನು ಕಲ್ಪನಾ ಲೋಕದ ಸೆಳೆತಕ್ಕೆ ಸಿಕ್ಕುತ್ತಾನೆ. ಯಾವಾಗ ಸಾಧ್ಯವೋ ಆವಾಗ, ವಾಸ್ತವಿಕತೆಗೆ ಕಡಿಮೆ ಒತ್ತು ಕೊಟ್ಟು, ತನ್ನ ಸುತ್ತ ಇರಲಾರದ ಜಗತ್ತಿಗೆ, ಬದುಕಿಗೆ ಹೆಚ್ಚಿನ ಮಹತ್ವ ಕೊಡತೊಡಗುತ್ತಾನೆ.

ಬಹುಶ ಜ್ಯೋತಿಷ್ಯ ಶಾಸ್ತ್ರ ಜನಪ್ರಿಯತೆಗೆ ಬಂದದ್ದು ಇದೇ ಕಾರಣಕ್ಕೆ ಏನೋ? ಮುಂದೆ ಬರಲಿರುವ ದಿನಗಳು ತರುವ ಆಶಾದಾಯಕತೆ, ಈ ಕ್ಷಣದ ಬದುಕಿಗೆಲ್ಲಿದೆ? ಧನ ಲಾಭ ಎಂದು ಜ್ಯೋತಿಷ್ಯ ಹೇಳಿದರೆ  ಅಥವಾ ಗಿಳಿ ಶಾಸ್ತ್ರ ಉಲಿದರೆ, ಅದು ಎಂಥ ಬಡವನಲ್ಲಿಯಾದರು ಅರೆ ಕ್ಷಣದ ಉಲ್ಲಾಸ ಮೂಡಿಸದೆ ಇರದು. ಇದು ಮನುಷ್ಯನು ವಾಸ್ತವದಲ್ಲಿ ಬದುಕುವದಕ್ಕಿಂತ, ಭವಿಷ್ಯ ತರುವ ಕಲ್ಪನೆ ಹೆಚ್ಚು ಇಷ್ಟ ಪಡುವದನ್ನು ಸಾಬೀತು ಪಡಿಸುತ್ತದೆ.

ಜ್ಯೋತಿಷ್ಯ ಕೆಲ ಕ್ಷಣ ಮೈ ಮರೆಸಿದರೆ, ಸಿನೆಮಾ ಅದನ್ನು ಕೆಲವು ತಾಸುಗಳವರೆಗೆ ಮಾಡಬಲ್ಲದು. ಒಂದು ಒಳ್ಳೆಯ ಪ್ರವಾಸ ಕೆಲ ದಿನಗಳಿಗೆ ನಿಮ್ಮನ್ನು ಉಲ್ಲಾಸಮಯ ಭಾವನೆಯಲ್ಲಿಡಬಹುದು. ಆದರೆ ಹೊಸ ವಿಷಯ, ಹೊಸ ಹೊಸ ಅನುಭವಗಳು, ನಿಮಗೆ ಬೇಕೆಂದ ತಕ್ಷಣ ಸಿಗುವುವಂತಾದರೆ, ನೀವು ಅದರ ಉಪಯೋಗ ಮಾಡಿಕೊಳ್ಳುವುದು ಖಂಡಿತ ತಾನೇ?

ಅದು ಸಾಧ್ಯವಾಗಿದ್ದು ಮೂರು ತಂತ್ರಜ್ಞಾನದ ಮಿಲನಗಳಿಂದ. ಒಂದು ಇಂಟರ್ನೆಟ್ ಆವಿಷ್ಕಾರ. ಎರಡನೆಯದ್ದು ಸ್ಮಾರ್ಟ್ ಫೋನ್. ಮೂರನೆಯದ್ದು ಅದರಲ್ಲಿನ ವಾಟ್ಸ್ ಆಪ್, ಫೇಸ್ ಬುಕ್ ಮುಂತಾದ ಆಪ್ ಗಳಿಂದ. ದೂರದ ಊರಿನ ಆತ್ಮೀಯ ಗೆಳೆಯ ಇಂದು ದೂರದವನು ಅಲ್ಲವೇ ಅಲ್ಲ. ಬೆರಳ ತುದಿಯ ಮೆಸೇಜ್ ಸಾಕು. ಹಾಗೆಯೇ ಜಗತ್ತಿನ ಎಲ್ಲ ಮೂಲೆಗಳಲ್ಲಿ ನಡೆಯುವ ವರ್ತಮಾನ, ಅದಕ್ಕೆ ಜನರ ಸ್ಪಂದನೆ ಎಲ್ಲ ಟ್ವಿಟ್ಟರ್ ನಲ್ಲಿ ಉಂಟು.

ಹೀಗಿರುವಾಗ ಪಕ್ಕದ ಮನೆಯಲ್ಲಿ ನಡೆಯುವ ಅದೇ ಹಳೆ ಜಗಳ ಎಷ್ಟು ದಿನ ಕುತೂಹಲ ಉಳಿಸಿಕೊಂಡಿತು ಹೇಳಿ? ಕೈಯಲ್ಲಿ ಇರುವ ಸ್ಮಾರ್ಟ್ ಫೋನ್ ಅದನ್ನೆಲ್ಲ ಬದಲು ಮಾಡಿತು. ಬೇಸರ ತರುವ ಪಕ್ಕದ ಜನರಿಗಿಂತ, ನಾವು ಕಂಡರಿಯದ, ಎಲ್ಲೋ ನಡೆಯುವ ಸಂಗತಿಗಳು ಆಸಕ್ತಿ ಮೂಡಿಸುವುದಿಲ್ಲವೇ? ಅದಕ್ಕೆ ಈ ಪೀಳಿಗೆಯ ಜನ ಸ್ಮಾರ್ಟ್ ಫೋನ್ ಜೊತೆ, ತಮ್ಮ ಸುತ್ತ ಮುತ್ತಲಿನ ಜನರಿನ ಜೊತೆ ಕಳೆಯುವ ವೇಳೆಗಿಂತ ಹೆಚ್ಚು ಸಮಯವನ್ನು ಕಳೆಯುತ್ತಾರೆ.

ಅವರನ್ನು ದೂರುವ ಮುಂಚೆ ಸ್ವಲ್ಪ ವಿಚಾರ ಮಾಡಿ ನೋಡಿ. ಮನುಷ್ಯ ಸ್ವಭಾವತಃ ಕಲ್ಪನಾ ಜೀವಿ. ಅವನ ಕಲ್ಪನೆಯ ಸಾಮರ್ಥ್ಯವೇ, ಅವನನ್ನು ಮಂಗಗಳಿಂದ ಮನುಷ್ಯನಾಗಿ ವಿಕಾಸ ಹೊಂದುವಂತೆ ಮಾಡಿದ್ದು. ಈ ಸ್ಮಾರ್ಟ್ ಫೋನ್ ಅವನನ್ನು ದಿನದ ಹೆಚ್ಚು ಸಮಯ ವಾಸವಿಕತೆಯಿಂದ ದೂರ ಇರುವಂತೆ ಮಾಡಿದೆ. ಅದು ಒಳ್ಳೆಯದು ಅಥವಾ ಕೆಟ್ಟದು ಎನ್ನುವುದರ ವಿವೇಚನೆ ಈ ಬರಹದ್ದಲ್ಲ. ಬದಲಿಗೆ ಇಂತಹ ನಡವಳಿಕೆ ಮನುಷ್ಯನ ಸ್ವಭಾವದಲ್ಲಿ ಹಾಸು ಹೊಕ್ಕಾಗಿರುವುದನ್ನು ತೋರಿಸುವ ಪ್ರಯತ್ನ ಇದರದ್ದು. ಬರಿ ಈ ಪೀಳಿಗೆಯ ಜನರಲ್ಲ, ಗುಡ್ಡ, ಗವಿಗಳಲ್ಲಿ ವಾಸ ಮಾಡುತ್ತಿದ್ದ ಸಾವಿರಾರು ವರ್ಷ ಹಿಂದೆ ಬದುಕಿದ್ದ ಪೀಳಿಗೆ ಕೂಡ ಸ್ಮಾರ್ಟ್ ಫೋನ್ ದೊರಕಿದ್ದರೆ, ಅವರ ಜೀವನ ಶೈಲಿ ಕೂಡ ಇಂದಿನ ಪೀಳಿಗೆಯವರಿಗಿಂತ ಬೇರೆ ಇರುತ್ತಿರಲಿಲ್ಲವೇನೋ?