Wednesday, June 30, 2021

ನಿಸರ್ಗ ನಮ್ಮಲ್ಲಿ ಹುಟ್ಟಿಸಿದ ಸ್ಪರ್ಧೆ

ಪ್ರಾಣಿ, ಪಕ್ಷಿ, ಸರೀಸೃಪಗಳ ವಿಚಾರ ಶಕ್ತಿ ಮನುಷ್ಯರಿಗೆ ಹೋಲಿಸಿದರೆ ತುಂಬಾ ಕಡಿಮೆ. ಅವುಗಳ ತಲೆಯಲ್ಲಿ ಓಡುವುದು ಪ್ರಮುಖವಾಗಿ ನಾಲ್ಕೇ ವಿಷಯಗಳು. ಆ ದಿನದ ಆಹಾರ, ತಾವು ಇನ್ನೊಂದು ಪ್ರಾಣಿಗೆ ಆಹಾರವಾಗದಂತೆ ಕಾಪಾಡಿಕೊಳ್ಳುವುದು, ಸಂಗಾತಿಯನ್ನು ಹುಡುಕಿಕೊಳ್ಳುವುದು ಮತ್ತು ತಮ್ಮ ಮರಿಗಳನ್ನು ಬೆಳೆಸುವುದು. ಜಿಂಕೆಗೆ ಹಸಿರು ಹುಲ್ಲು ಹುಡುಕುವುದು ಎಷ್ಟು ಮುಖ್ಯವೋ, ಮರೆಯಲ್ಲಿ ಅಡಗಿರುವ ಹುಲಿಯ ಬಾಯಿಗೆ ತಾನು ಆಹಾರವಾಗದಂತೆ ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯ. ಈ ಸ್ಪರ್ಧೆಯಲ್ಲಿ, ಸದಾ ಜಾಗರೂಕತೆಯಿಂದ ಇರುವ ಮತ್ತು ಅಗತ್ಯ ಬಿದ್ದಾಗ ಅತಿ ವೇಗದಲ್ಲಿ ಓಡಿ ಪ್ರಾಣ ಉಳಿಸಿಕೊಳ್ಳುವ ಜಿಂಕೆಗಳು ಮಾತ್ರ ಪ್ರೌಢಾವಸ್ಥೆಗೆ ತಲುಪಲು ಸಾಧ್ಯ. ಹಾಗಾಗಿ ಆ ಗುಣ ಲಕ್ಷಣಗಳನ್ನು ಉಳ್ಳ ಜಿಂಕೆಗಳ ಸಂತತಿ ಮಾತ್ರ ಉಳಿದುಕೊಂಡು ಬಂದಿತು. ಬೇಟೆಗಾರ ಪ್ರಾಣಿಗಳಾದ ಸಿಂಹಗಳಲ್ಲಿ, ಪ್ರತಿಸ್ಪರ್ಧಿ ಸಿಂಹಗಳೊಡನೆ ಕಾದಾಡಿ ಗೆದ್ದ ಸಿಂಹಕ್ಕೆ ಮಾತ್ರ ಸಂತತಿ ಮುಂದುವರೆಸುವ ಅವಕಾಶ ಉಂಟು. ಹಾಗಾಗಿ ಸಿಂಹಗಳಲ್ಲಿ ಕಾದಾಟಕ್ಕೆ ಅನುಕೂಲವಾಗುವ ಭೀಕರತೆಯ ಅಂಶಗಳು ವಂಶವಾಹಿಯಾದವು. ಅಬ್ಬರಿಸುವ ಸಿಂಹ ಕಾಡಿನ ರಾಜನಾದರೆ, ಅವನ ಗುಣ ಲಕ್ಷಣಗಳು ಹೇಗಿದ್ದರೆ ಚೆನ್ನ ಎಂದು ನಿರ್ಧರಿಸುವ ಹೆಣ್ಣು ಸಿಂಹ ನ್ಯಾಚುರಲ್ ಸೆಲೆಕ್ಷನ್ ಮಾಡುವ ಕಿಂಗ್ ಮೇಕರ್ ಆಯಿತು. ನವಿಲುಗಳಲ್ಲಿ ಇರುವುದು ಸೌಂದರ್ಯದ ಸ್ಪರ್ಧೆ. ಆಕರ್ಷಕ ಗರಿಯನ್ನು ಹೊಂದದೆ ಇದ್ದ ನವಿಲುಗಳು ಬ್ರಹ್ಮಚಾರಿಗಳಾಗಿ ಉಳಿದವು. ವೈರಿಗಳ ಜೊತೆ ಕಾದಾಟಕ್ಕೆ ಮತ್ತು ಬೇರೆ ಯಾವುದೇ ಉಪಯೋಗಕ್ಕೆ ಬಾರದ ತನ್ನ ಗರಿಯನ್ನು ಮುಚ್ಚಿಕೊಂಡು ಓಡುವ ನವಿಲು, ಗರಿಗಳು ತನಗೆ ಹೊರೆಯಾದರೂ ತನ್ನ ಸಂತತಿ ಮುಂದುವರೆಸುವದಕ್ಕೆ, ಹೆಣ್ಣುಗಳನ್ನು ಆಕರ್ಷಿಸುವುದಕ್ಕೆ ಪೋಷಿಸುತ್ತದೆ. ವಂಶ ಮುಂದುವರೆಯುವುದಕ್ಕೆ ಅದು ಪ್ರಕೃತಿ ತಂದಿಟ್ಟ ಅನಿವಾರ್ಯತೆ.


ಮನುಷ್ಯ ವಿಕಾಸ ಹೊಂದುತ್ತ ಪ್ರಾಣಿ ಲೋಕಕ್ಕಿಂತ ಭಿನ್ನ ಜೀವನ ಮಾಡುತ್ತಾನೆ. ಅವನು ಕೃಷಿ ಕಲಿತ ನಂತರ ಪ್ರತಿ ದಿನ ಆಹಾರಕ್ಕಾಗಿ ಅಲೆಯಬೇಕಾಗಿಲ್ಲ. ಮತ್ತು ಅವನಿಗೆ ನೈಸರ್ಗಿಕವಾಗಿ ಯಾವುದೇ ಶತ್ರುಗಳಿಲ್ಲವಾದ್ದರಿಂದ ಅವನು ಪ್ರತಿ ಕ್ಷಣ ಯಾವ ಕಡೆಯಿಂದ ಆಪತ್ತು ಬಂದಿತು ಎಂದು ವಿಚಾರ ಮಾಡಬೇಕಿಲ್ಲ. ಆದರೂ ಜೀವ ವಿಕಾಸದ ಪ್ರವೃತ್ತಿಗಳು ಅವನಲ್ಲಿ ಇನ್ನು ಹಾಸು ಹೊಕ್ಕಾಗಿದೆ. ಅವನಿಗೆ  ಸಂಗಾತಿಯನ್ನು ಆಕರ್ಷಿಸಲು ನವಿಲಿನ ಹಾಗೆ ಗರಿ ಇಲ್ಲ. ಬದಲಿಗೆ ಆಕರ್ಷಕ ಮುತ್ತಿನ ಹಾರದ ಕಾಣಿಕೆ ನೀಡಿ ತನ್ನ ಸಂಗಾತಿಗೆ ತನ್ನ ಶ್ರೀಮಂತಿಕೆಯ ಸಾಮರ್ಥ್ಯ ತೋರಿಸುತ್ತಾನೆ. ಹಾಸ್ಯ ಮಾತುಗಳನ್ನಾಡುತ್ತಾ, ತಾನೆಷ್ಟು ಚತುರ ಎಂದು ಬಿಂಬಿಸಲು ಪ್ರಯತ್ನಿಸುತ್ತಾನೆ. ಹೆಣ್ಣು ತಾನು ಉಡುವ ವಸ್ತ್ರಾಭರಣಗಳಲ್ಲಿ ಕುಶಲತೆ ತೋರಿಸುತ್ತಾಳೆ. ತನ್ನ ಸೊಂಟ ಬಳುಕಿಸಿ ತನಗೆ ಸರಿಯಾದ ಜೋಡಿಯನ್ನು ಆಕರ್ಷಿಸುತ್ತಾಳೆ. ಕಾಡಿನಲ್ಲಿ ಪ್ರಾಣಿಗಳು ಹೆಣ್ಣಿಗಾಗಿ ಕಾದಾಡುತ್ತವೆ. ಮನುಷ್ಯನು ಹಿಂದೆ ರಾಜ-ಮಹಾರಾಜರ ಕಾಲದಲ್ಲಿ ಹೆಣ್ಣಿಗಾಗಿ ಕಾದಿದ್ದು ಉಂಟು. ಆದರೆ ಇಂದು ಅದು ಮಾರ್ಪಾಡಾಗಿ, ಸೌಂದರ್ಯ-ಶ್ರೀಮಂತಿಕೆ-ಸಾಮಾಜಿಕ ಸ್ಥಾನಮಾನ ಇವುಗಳ ಮೇಲೆ ಗಂಡು-ಹೆಣ್ಣು ಜೋಡಿಯ ಏರ್ಪಾಡುಗಳಾಗುತ್ತವೆ. ಪ್ರಾಣಿಗಳು ದೈಹಿಕ ಶಕ್ತಿಯಿಂದ ಹೆಚ್ಚಿನ ಸಾಮಾಜಿಕ ಸ್ಥಾನಮಾನ ಹೊಂದಲು ಪ್ರಯತ್ನಿಸಿದರೆ, ನಾವುಗಳು ನಮ್ಮ ಓದು, ವರಮಾನ, ನಾವು ಧರಿಸುವ ವಸ್ತ್ರ, ಓಡಿಸುವ ಕಾರು, ನಮ್ಮ ಉದ್ಯೋಗ ತಂದು ಕೊಡುವ ಅಧಿಕಾರ ಇವುಗಳ ಮೂಲಕ ಸಾಮಾಜಿಕ ಸ್ಥಾನಮಾನ ಗಳಿಸಲು ಮತ್ತು ಅದರ ಮೂಲಕ ಒಳ್ಳೆಯ ಸಂಗಾತಿಯನ್ನು ಆಕರ್ಷಿಸಲು ಮತ್ತು ಸಂತತಿ ಮುಂದುವರೆಸಲು ಜೀವನ ಸವೆಸುತ್ತೇವೆ. ಮನುಷ್ಯನ ಜೀವನ ರೀತಿಗಳು ಪ್ರಾಣಿಗಳಿಗಿಂತ ಬೇರೆ ಇರಬಹುದು ಆದರೆ ಉದ್ದೇಶ ಮಾತ್ರ ಒಂದೇ. ಪ್ರಕೃತಿಗೆ ಮನುಷ್ಯನು ಕೂಡ ಒಂದು ಪ್ರಾಣಿಯೇ.


ಮನುಷ್ಯನು ತನ್ನ ಜೀನ್ ಗಳನ್ನೂ ಸೃಷ್ಟಿಸುವುದಿಲ್ಲ ಬದಲಿಗೆ ಜೀನ್ ಗಳು ಮನುಷ್ಯನನ್ನು ಸೃಷ್ಟಿಸುತ್ತವೆ ಎಂದು ನಾವು ಕಲಿತುಕೊಂಡಾಗಿದೆಯಲ್ಲ. ಆ ಜೀನ್ ಗಳು ಮನುಷ್ಯ ಸೇರಿದಂತೆ ಎಲ್ಲ ಪ್ರಾಣಿ, ಪಕ್ಷಿಗಳಲ್ಲಿ ತಾನು ಸ್ವಾರ್ಥಿಯಾಗುವಂತೆ, ಮೊದಲು ತಾನು ಆಹಾರ ಹುಡುಕಿ ಕೊಳ್ಳುವಂತೆ, ಹಾಗೆಯೇ ಕಾದಾಟ ಮಾಡಿದರು ಸರಿ, ಮೋಸದಿಂದ ಆದರೂ ಸರಿ ತನ್ನ ವಂಶವನ್ನು ಬೆಳೆಸುವಂತೆ ಪ್ರಚೋದಿಸುತ್ತವೆ. ಒಬ್ಬ ವ್ಯಕ್ತಿ ಸತ್ತರೂ, ಅವನ/ಅವಳ ಜೀನ್ ಗಳು ಅವರ ಮಕ್ಕಳ ಪೀಳಿಗೆಗೆ ಹರಿದು ಹೋಗಿ, ತಾವು ಬದುಕಿಕೊಳ್ಳುತ್ತವೆ. ಹಾಗೆಯೇ ಆ ಪೀಳಿಗೆಯಲ್ಲೂ, ಮುಂದಿನ ಪೀಳಿಗೆಗೆ ಹರಿದು ಹೋಗುವ ಏರ್ಪಾಡು ಮಾಡಿಕೊಂಡು ಚಿರಂಜೀವಿಯಾಗುತ್ತವೆ.


ಸ್ವಾರ್ಥ ಎನ್ನುವುದು ನಿಸರ್ಗದಲ್ಲಿ ಬದುಕಿರುವ ಎಲ್ಲ ಜೀವಿಗಳಲ್ಲಿ ಇರುವ ಸಹಜ ಸ್ವಭಾವ. ಮೊದಲಿಗೆ ತಾನು, ತನ್ನ ಊಟ, ತನ್ನ ಸಂಗಾತಿ, ತನ್ನ ಮಕ್ಕಳು. ಅವರ ಏಳಿಗೆಗೆ ಬೇರೆಯವರು ಜೀವ ತೆರಬೇಕಾದರೆ ಅದು ಆಗಿ ಹೋಗಲಿ ಎನ್ನುವುದು ಎಲ್ಲ ಜೀವಿಗಳಲ್ಲಿ ಜೀನ್ ಗಳು ಬರೆದ ಸಾಂಕೇತಿಕ ಭಾಷೆ. ಹಾಗಾಗಿ ಪ್ರಕೃತಿ ಯಾವ ಕಾಲಕ್ಕೂ ಆದರ್ಶ ಎನ್ನಿಸುವ ಸಮಾಜ ಸೃಷ್ಟಿಸಲಾರದು. ಇಲ್ಲಿ ಪ್ರತಿ ದಿನ ನಿಮ್ಮ ಇರುವನ್ನು ನೀವು ಧೃಢ ಪಡಿಸಬೇಕು. ಇಲ್ಲದಿದ್ದರೆ ಪ್ರಕೃತಿ ನಿಮ್ಮನ್ನು ಕಡೆಗಣಿಸಿ ಇತರೆ ಪ್ರಬಲರಿಗೆ ಅವಕಾಶ ಮಾಡಿಕೊಡುತ್ತದೆ.


References:

1. The Rise and Fall of The Third Chimpanzee by Jared Diamond

2. The Red Queen by Matt Ridley

3. The Selfish Gene by Richard Dawkins


Friday, June 25, 2021

ಯಾವಾಗ ಕೆಟ್ಟವರಾಗಬೇಕು ಎಂದು ತಿಳಿಯದೆ ಹೋದರೆ

ನಮಗೆ ಬೇಕೋ ಬೇಡವೋ, ಕೆಲವು ಸಲ ನಮಗೆ ಕೆಟ್ಟದು ಮಾಡಬೇಕು ಎನ್ನುವ ಉದ್ದೇಶ ಹೊಂದಿರುವ ಜನರ ನಡುವೆ ಸಿಕ್ಕಿ ಹಾಕಿಕೊಂಡು ಬಿಡುತ್ತೇವೆ. ನಮಗೆ ಸರಿ ತಪ್ಪು ಪ್ರಶ್ನಿಸುವ ಆ ಜನ ತಾವು ಮಾಡುತ್ತಿರುವುದು ಸರಿಯೋ ತಪ್ಪೋ ಎಂದು ವಿಚಾರ ಮಾಡಿರುವುದಿಲ್ಲ. ತಾವೇ ಅನ್ಯಾಯ ಮಾಡಿ ನಮಗೆ ಸಾಕ್ಷಿ ಕೇಳುವ ಜನರನ್ನು ನಾನು ನೋಡಿದ್ದೇನೆ. ನ್ಯಾಯ ನೀತಿ ಪಾಲನೆ ಮಾಡಬೇಕಾದದ್ದು ಪರರು, ತಾವು ಏನು ಮಾಡಿದರು ನಡೆಯುತ್ತೆ ಎನ್ನುವ ಆಕ್ರಮಣಕಾರಿ ಪ್ರವೃತ್ತಿಯನ್ನು ಆ ಜನ ಹೊಂದಿರುತ್ತಾರೆ. ಅವರಿಗೆ ನೀವು ಸೌಮ್ಯ ಸ್ವಭಾವದ, ಹೊಂದಿಕೊಂಡು ಹೋಗುವ ತರಹದ ಮನುಷ್ಯರಾಗಿ ಕಂಡರೆ ಸಾಕು, ಅವರು ನಿಮ್ಮ ಶೋಷಣೆಗೆ ಇಳಿದು ಬಿಡುತ್ತಾರೆ.

 

ನಿಮಗೆ ಶಾಲಾ ದಿನಗಳಲ್ಲಿ, ಯಾರ ಜೊತೆಗೂ ಜಗಳವಾಡದ ಹುಡುಗನಿಗೆ ಹೆಚ್ಚಿನ ಅನ್ಯಾಯವಾಗುವುದು ನೆನಪಿರಬೇಕು. ಹಾಗೆಯೇ ತಮ್ಮ ತಂಟೆಗೆ ಬಂದರೆ ನೋಡು ಎಂಬಂತಿರುವ ಹುಡುಗರ ತಂಟೆಗೆ ಯಾರೂ ಹೋಗದೆ ಇರುವುದು ನೆನಪಿರಬೇಕು. ದೊಡ್ಡವರ ಜಗತ್ತು ತುಂಬಾ ಬೇರೆಯೇನಲ್ಲ. ನೀವು ಯಾರ ತಂಟೆಗೂ ಹೋಗದ, ನಿರುಪದ್ರವಿ ಜೀವಿಯ ಹಾಗೆ ನಿಮ್ಮನ್ನು ತೋರ್ಪಡಿಸಿಕೊಂಡರೆ ನಿಮ್ಮ ಕತೆ ಮುಗಿಯಿತು. ನಿಮ್ಮ ಮೇಲೆ ದಬ್ಬಾಳಿಕೆ ಆಗುವುದು ಶತಸಿದ್ಧ. ಹಾವು ಕಚ್ಚದಿದ್ದರೆ, ಭುಸ್ ಆದರೂ ಅನ್ನಬೇಕಲ್ಲವೇ? ಇಲ್ಲದಿದ್ದರೆ ಯಾರು ಬೇಕಾದರೂ ಅದರ ಬಾಲ ಹಿಡಿದು ಎಳೆದಾಡಿಬಿಡುತ್ತಿದ್ದರು. ಅದಕ್ಕೆ ಅದು ಹೆಡೆ ಎತ್ತಿ, ನೋಡು ನನ್ನ ತಂಟೆಗೆ ಬಂದರೆ ಎಂದು ಭುಸ್ ಅನ್ನುತ್ತದೆ. ಆ ಮೂಕ ಪ್ರಾಣಿಯ ಧೈರ್ಯವನ್ನು ನಮ್ಮ ನಿರುಪದ್ರವಿ ಮನುಷ್ಯರು ತೆಗೆದುಕೊಳ್ಳಬೇಕು. ತಾಳ್ಮೆಯ ಸೀಮಾ ರೇಖೆಯನ್ನು ದಾಟಿದರೆ, ಯಾವುದೇ ಹೋರಾಟಕ್ಕೂ ನೀವು ಸಿದ್ಧ, ಸೋಲು ಗೆಲುವಿನ ಬಗ್ಗೆ ನೀವು ವಿಚಾರ ಮಾಡದೆ ಜಗಳ ಕಾಯಲು ನೀವು ಹಿಂಜರಿಯುವುದಿಲ್ಲ ಎನ್ನುವ ಸಂದೇಶ ನಿಮ್ಮಿಂದ ಸ್ಪಷ್ಟವಾಗಿ ಹೋದರೆ, ಬಹುತೇಕ ಜಗಳಗಳು ಆರಂಭದಲ್ಲೇ ಮುಗಿದು ಹೋಗುತ್ತವೆ.

 

ನೀವು ಕೆಟ್ಟವರಾಗಿ ಬಿಡಿ ಎಂದು ನಾನು ಹೇಳುತ್ತಿಲ್ಲ. ಆದರೆ ನಿಮಗೆ ಅನ್ಯಾಯ ಮಾಡುವ ಉದ್ದೇಶ ಹೊಂದಿದ ಜನರು ನಿಮ್ಮ ಸಂಪರ್ಕಕ್ಕೆ ಬಂದಾಗ, ನನಗೂ ಕೂಡ ಕೆಟ್ಟವನಾಗಲು ಬರುತ್ತದೆ ಎನ್ನುವ ಸಂದೇಶ ಪ್ರತ್ಯಕ್ಷವೋ  ಪರೋಕ್ಷವೋ ನೀವು ನೀಡಲೇಬೇಕು. ಕೆಲವರು ಮೋಸ, ಅನ್ಯಾಯದಲ್ಲಿ ನುರಿತವರು ಇರುತ್ತಾರಲ್ಲ. ಅವರ ಮುಖಾಮುಖಿ ನಿಮಗೆ ಆದಾಗ, ಅವರದೇ ಕಲೆಗಳಾದ ಮಾಹಿತಿ ತಿರುಚುವುದು, ಸುಳ್ಳು ಅಪವಾದ ಸೃಷ್ಟಿಸುವುದು, ದೈಹಿಕ ಜಗಳಗಳಿಗೆ ಇಳಿಯುವುದು ಇವುಗಳನ್ನು ನೀವು ಕೂಡ ಅಗತ್ಯಕ್ಕೆ ತಕ್ಕಂತೆ ಉಪಯೋಗ ಮಾಡಬೇಕು. ಇಲ್ಲದೆ ಹೋದರೆ ಆ ಜನ ನಿಮ್ಮ ಪ್ರಾಣ ಹಿಂಡದೆ ಬಿಡುವುದಿಲ್ಲ. ಮೂಕ ಬಸವನಾಗಿ, ನೊಗ ಹೊತ್ತು, ಬಾರುಕೋಲು ಏಟು ತಿನ್ನುತ್ತಿರೋ, ಇಲ್ಲವೇ ಜೇನುಹುಳುಗಳ ಹಾಗೆ ತಂಟೆಗೆ ಬಂದವರನ್ನು ಮುಖ-ಮೂತಿ ನೋಡದೆ ಚುಚ್ಚಿ, ಸ್ವತಂತ್ರವಾಗಿ ಬದುಕುತ್ತಿರೋ ಎನ್ನುವ ಆಯ್ಕೆ ನಿಮಗೆ ಬಿಟ್ಟಿದ್ದು.

 

ಜನರನ್ನು, ಸಮಾಜವನ್ನು ನೀವು ಸಂತೋಷ ಪಡಿಸಲು ಹೋಗಬೇಡಿ. ಸ್ವಾರ್ಥ ಸಮಾಜದಲ್ಲಿ ಬಹುತೇಕ ಜನರು, ಕಣ್ಣಿಗೆ ಕಂಡದ್ದನ್ನು, ತಾವು ಆಸೆ  ಪಟ್ಟದ್ದನು ತಮ್ಮದಾಗಿಸಿ ಕೊಳ್ಳಲು ಹೊರಡುತ್ತಾರೆ. ಮಾರ್ಗ ನ್ಯಾಯದ್ದೋ, ಅನ್ಯಾಯದ್ದೋ ಎನ್ನುವ ವಿವೇಚನೆ ಅವರಿಗೆ ಬೇಕಿಲ್ಲ.  ಅವರಿಗೆ ನೀವು ಸುಲಭದ ತುತ್ತಾಗಬೇಡಿ. ಒಳ್ಳೆಯತನ ನಿಮ್ಮ ಹೃದಯದಲ್ಲಿರಲಿ. ಆದರೆ ನಿಮ್ಮ ಕೈ-ಬಾಯಿಗಳು ಅಗತ್ಯ ಬಿದ್ದಾಗ ಬಿರುಸಾಗಿರಲಿ. ಯಾವಾಗ ಕೆಟ್ಟವರಾಗಬೇಕು ಎಂದು ನಿಮಗೆ ಮೊದಲೇ ಗೊತ್ತಿರಲಿ.

Saturday, June 19, 2021

ನೆಲ್ಲಿನಿಂದ ಬದಲಾದ ಊರುಗಳು

ನಮ್ಮೂರು ಮಸ್ಕಿಯಲ್ಲಿ ನದಿಯಿಲ್ಲ. ಆದರೆ ಅದಕ್ಕಿಂತ ಹೆಚ್ಚು ಎನ್ನುವಂತೆ ತುಂಗಭದ್ರಾ ಕಾಲುವೆಯಿದೆ. ಅದನ್ನು ನೆಚ್ಚಿಕೊಂಡು ಸಾವಿರಾರು ಎಕರೆ ಭೂಮಿಯಲ್ಲಿ ನೆಲ್ಲು (ಭತ್ತ) ಬೆಳೆಯುತ್ತಾರೆ. ಕಾಲುವೆ ಮತ್ತು ನೆಲ್ಲು ಇವೆರಡು ಊರಿಗೆ ಊರುಗೋಲಾಗುವ ಮುಂಚೆ ನಮ್ಮೂರಿನ ಕಥೆ ಒಂದು ತರಹ ಆದರೆ ಈಗಿನ ಪರಿಸ್ಥಿತಿಯೇ ಬೇರೆ. ಇದು ಬರಿ ನಮ್ಮೂರಷ್ಟೇ ಅಲ್ಲ. ಕಾಲುವೆ ಹರಿದು ಹೋದ ನೂರಾರು ಕಿಲೋ ಮೀಟರ್ ಪ್ರದೇಶದ ಎಲ್ಲ ಊರು-ಹಳ್ಳಿಗಳ ಕಥೆ.

 

ಇಲ್ಲಿ ಹಿಂಗಾರು ಬೆಳೆ ಬೆಳೆದ ರೈತರು ಹಿಂದೆಯೇ ಉಳಿದು ಹೋದರು. ಹಾಗೆಯೇ ಮುಂಗಾರು ಮಳೆ ನಂಬಿದ ರೈತರು ಮುಂದೆಯೇ ಬರಲಿಲ್ಲ. ಆದರೆ ಭತ್ತ ಬೆಳೆದ ಮತ್ತು ವ್ಯಾಪಾರ ಮಾಡಿದವರೆಲ್ಲ ಭರ್ತಿ ಕುಳಗಳಾಗಿ ಹೋದರು. ಸಮಯಕ್ಕೆ ಸರಿಯಾಗಿ ಬರುವ ನೆಲ್ಲಿನ ಬೆಳೆ ಮತ್ತು ಅದಕ್ಕಿದ್ದ ಬೆಲೆ ರೈತ ತಲೆ ಎತ್ತಿ ನಡೆಯುವಂತೆ ಮಾಡಿತು. ಅದಕ್ಕೆ ಪೂರಕವಾಗಿ ಒಂದು ಉದ್ಯಮವೇ ಬೆಳೆದು ನಿಂತಿತು. ಗೊಬ್ಬರ, ಕ್ರಿಮಿನಾಶಕ ಅಂಗಡಿಗಳು, ನೆಲ್ಲನ್ನು ಅಕ್ಕಿಯಾಗಿ ಪರಿಷ್ಕರಿಸುವ ಮಿಲ್ ಗಳು, ಗದ್ದೆಯಲ್ಲಿ ಕೆಲಸ ಮಾಡಲು ಬೇಕಾಗುವ ಟ್ರ್ಯಾಕ್ಟರ್ ಗಳು, ಆ ಟ್ರ್ಯಾಕ್ಟರ್ ಗಳನು ರಿಪೇರಿ ಮಾಡುವ ಗ್ಯಾರೇಜು ಗಳು, ನೆಲ್ಲನ್ನು ಸಂಗ್ರಹಿಸಿ ಇಡುವ ಗೋದಾಮುಗಳು, ಅದರ ಮೇಲೆ ಸಾಲ ಕೊಡುವ ಬ್ಯಾಂಕ್ ಗಳು, ನೆಲ್ಲನ್ನು ಒಂದೂರಿನಿಂದ ಇನ್ನೊಂದೂರಿಗೆ ಹೊತ್ತೊಯ್ಯುವ ಲಾರಿಗಳು, ವ್ಯಾಪಾರ ಸರಾಗ ಮಾಡಿಕೊಡುವ ಏಜೆಂಟ್ ಗಳು ಹೀಗೆ ಅದರ ಪರಿವಾರ ಬಳ್ಳಿಯಂತೆ ಹಬ್ಬುತ್ತ ಊರಿನ ಹೆಚ್ಚಿನ ಜನರೆಲ್ಲಾ ನೆಲ್ಲನ್ನೇ ನಂಬಿ ಜೀವನ ಮಾಡ ತೊಡಗಿದರು.

 

ಮಳೆಯನ್ನೇ ನಂಬಿ ಐವತ್ತು ವರುಷಗಳ ಹಿಂದೆ ಬಿಳಿ ಜೋಳ, ಹತ್ತಿ ಬೆಳೆದು ಆರ್ಥಿಕವಾಗಿ ಮುಂದೆ ಬರಲು ಆಗದೆ ಹೋದ ಇಲ್ಲಿನ ಜನತೆ, ನೆಲ್ಲು ತರುವ ಖಾತರಿ ಎನಿಸುವ ಎರಡು ಬೆಳೆಗಳು ಮತ್ತು ಅದು ತರುವ ಆದಾಯದಿಂದ ಆರ್ಥಿಕವಾಗಿ ಸಬಲರಾಗತೊಡಗಿದರು. ಇಪ್ಪತ್ತು ವರುಷಗಳ ಹಿಂದೆ ಹತ್ತು ಸಾವಿರಕ್ಕೆ ದೊರಕುತ್ತಿದ್ದ ಒಂದೆಕರೆ ಜಮೀನು ಇವತ್ತಿಗೆ ಹತ್ತು ಲಕ್ಷ ಕೊಟ್ಟರೂ ಸಿಗುವುದಿಲ್ಲ. ಅದು ತುಂಗಭದ್ರೆಯ ಆಶೀರ್ವಾದ ಮತ್ತು ನೆಲ್ಲಿನ ಮಹಿಮೆ.

 

ನೆಲ್ಲನ್ನು ಬೆಳೆದು ಬರಿ ಮಾರಲಿಕ್ಕೆ ಆಗುತ್ತದೆಯೇ? ಮೂರು ಒಪ್ಪತ್ತು ರೊಟ್ಟಿ ತಿನ್ನುತ್ತಿದ್ದ ಇಲ್ಲಿನ ಕುಟುಂಬಗಳು ಅದನ್ನು ಒಂದು ಒಪ್ಪತ್ತಿಗೆ ಇಳಿಸಿ ಅನ್ನ ಬೇಯಿಸಲು ಆರಂಭಿಸಿದರು. ಉಳಿದ ಸಾಂಪ್ರದಾಯಿಕ ಬೆಳೆಗಳು ಹಿಂದೆ ಬಿದ್ದವು. ಜನ ಬದುಕುವ ರೀತಿಯು ಬದಲಾಗುತ್ತ ಹೋಯಿತು. ಆಧುನಿಕ ಸವಲತ್ತುಗಳು ಬಂದವು. ಊರಲ್ಲಿ ಇರುವ ಯಾರೂ ಇಂದಿಗೆ ಹಳ್ಳದಿಂದ ನೀರು ಹೊತ್ತು ತರುವುದಿಲ್ಲ. ಹಳ್ಳದಲ್ಲಿ ಸ್ನಾನ ಮಾಡಿದ್ದು ನಮ್ಮ ಪೀಳಿಗೆಗೆ ಕೊನೆ. ಹೊಸ ಪೀಳಿಗೆಯ ಮಕ್ಕಳಿಗೆ ಅದರ ಬಗ್ಗೆ ಗೊತ್ತಿಲ್ಲ. ಆ ಹಳ್ಳಕ್ಕೂ ಆಣೆಕಟ್ಟು ಕಟ್ಟಿಯಾದ ಮೇಲೆ, ಅಲ್ಲಿ ನೀರು ಹರಿಯುವುದು ನಿಂತು, ಹಳ್ಳದ ಉಸುಕು ಕಟ್ಟಡ ನಿರ್ಮಾಣಕ್ಕೆ ಹೊತ್ತು ಸಾಗಿ ಅದರ ರೂಪು ರೇಷೆಯೇ ಬೇರೆಯಾಗಿ ಹೋಗಿದೆ. ಸುತ್ತ ಹಳ್ಳಿಗಳಲ್ಲಿ ಸಾಂಪ್ರದಾಯಿಕ ಕೃಷಿ ಕೆಲಸ ಕಡಿಮೆಯಾದ ಕಡೆ ಕೂಲಿಕಾರರು ದೂರದ ಊರುಗಳಿಗೆ ಕಟ್ಟಡ ನಿರ್ಮಾಣಕ್ಕೆ ಹೊರಟು ಹೋಗಿದ್ದಾರೆ.

 

ಅಂದಿಗೆ ಊರಲ್ಲಿ ಒಂದೋ, ಎರಡೋ ಶ್ರೀಮಂತ ಕುಟುಂಬಗಳಿದ್ದರೆ, ಇಂದು ಊರಲ್ಲೆಲ್ಲ ಶ್ರೀಮಂತರೇ. ಇಂದು ನಮ್ಮೂರಿನ ಎಲ್ಲ ಯುವಕರ ಕೈಲಿ ದುಬಾರಿ ಎನಿಸುವ ಸ್ಮಾರ್ಟ್ ಫೋನ್ ಗಳಿವೆ. ಹಾಗೆಯೇ ಮದುವೆ ಮತ್ತಿತರ ಶುಭ ಕಾರ್ಯಗಳಲ್ಲಿ ಸ್ವಲ್ಪ ಜಾಸ್ತಿಯೇ ಎನಿಸುವಷ್ಟು ಖರ್ಚು ಮಾಡುತ್ತಾರೆ. ಸಾವಿರಾರು ವರುಷ ಬಡತನದಲ್ಲಿ ಬದುಕಿದ ಊರುಗಳು ಇಂದು ಶ್ರೀಮಂತಿಕೆಯ ರುಚಿ ನೋಡುತ್ತಿವೆ. ಇದು ಸಂತೋಷದ ವಿಷಯವೇ ಸರಿ.

 

ಇಲ್ಲಿ ನೆಲ್ಲು ಬೆಳೆಯುವ ರೈತ, ತಲೆ ಎತ್ತಿ ಆಕಾಶ ನೋಡಿ, ಮೋಡ ದಿಟ್ಟಿಸುವುದನ್ನೇ ಮರೆತು ಬಿಟ್ಟಿದ್ದಾನೆ. ಆದರೆ ತುಂಗಭದ್ರೆ ಅಣೆಕಟ್ಟಿನಲ್ಲಿ ನೀರಿನ ಪ್ರಮಾಣ ಕಡಿಮೆಯಾಯಾದರೆ ಆತಂಕಗೊಳ್ಳುತ್ತಾನೆ. ಐವತ್ತು ವರುಷಗಳಿಗೂ ಹಿಂದೆ ಕಟ್ಟಿದ ಅಣೆಕಟ್ಟಿನಲ್ಲಿ ಇಂದಿಗೆ ಅಪಾರ ಪ್ರಮಾಣದ ಹೂಳು ತುಂಬಿ ನೀರು ಸಂಗ್ರಹಿಸುವ ಸಾಮರ್ಥ್ಯ ಕುಗ್ಗುತ್ತಿದೆಯಲ್ಲ. ಅದು ಇನ್ನು ಐವತ್ತು ವರುಷಗಳ ನಂತರ ಏನಾಗಬಹುದು? ಅದಕ್ಕೆ ಯಾವುದಾದರೂ ಪರಿಹಾರ ದೊರಕಬಹುದೇ? ಇನ್ನೊಂದು ಆಣೆಕಟ್ಟು ಕಟ್ಟಲು, ಲಕ್ಷಾಂತರ ಬೆಲೆ ಬಾಳುವ ಭೂಮಿಯನ್ನು ಇಂದಿಗೆ ಕೊಳ್ಳಲು ಸಾಧ್ಯವೇ? ಹಾಗೆಯೇ ನೆಲ್ಲಿನ ಗದ್ದೆಯಲ್ಲಿ ಅಪಾರ ಪ್ರಮಾಣದ ರಾಸಾಯನಿಕ ಸುರಿದು ಅದರ ಫಲವತ್ತತೆ ಕಡಿಮೆ ಆಗಿ, ಯಾವ ಬೆಳೆಯೂ ಬೆಳೆಯದ ಪರಿಸ್ಥಿತಿ ಬರುವ ಬಗ್ಗೆ ಕೃಷಿ ತಜ್ಞರು ಎಚ್ಚರಿಸುತ್ತಿರುವರಲ್ಲ? ಅದರ ಬಗ್ಗೆ ನಮ್ಮ ಕಡೆಯ ಯಾವ ರೈತನು ಗಮನ ಹರಿಸಿದಂತೆ ಕಾಣುವುದಿಲ್ಲ. ಹಾಗೆಯೇ ಈಶಾನ್ಯ ಭಾರತ ಮತ್ತು ಅದರ ನೆರೆಯ ರಾಷ್ಟ್ರಗಳಲ್ಲಿ ಬ್ರಹ್ಮಪುತ್ರ ನದಿ ನೀರಿನಿಂದ ಅಪಾರ ಪ್ರಮಾಣದ ಭತ್ತದ ಕೃಷಿ ಆರಂಭವಾಗಿದೆಯಲ್ಲ. ಅದರಿಂದ ನೆಲ್ಲಿನ ಬೆಲೆ ಮೊದಲ ಹಾಗೆ ಏರಿಕೆ ಇಲ್ಲ.

 

ಆರ್ಥಿಕವಾಗಿ ಪ್ರಗತಿ ಕಾಣುವಂತ ಕಾಲದಲ್ಲಿ ನಮ್ಮೂರಲ್ಲಿ ಹುಟ್ಟಿದ್ದು ನಮಗೆ ಹೆಮ್ಮೆಯ ವಿಷಯ. ಆದರೆ ಅದು ಸಾಧ್ಯ ಆಗಿದ್ದು ತುಂಗಭದ್ರಾ ಆಣೆಕಟ್ಟು ನೀರು ಹಿಡಿದಿಡುವ ಸಾಮರ್ಥ್ಯ, ನಮ್ಮ ನೆಲದ ಫಲವತ್ತತೆ ಮತ್ತು ಭತ್ತಕಿದ್ದ ಬೆಲೆ, ಇವುಗಳ ಕಾರಣದಿಂದ. ಇನ್ನು ಇಪ್ಪತ್ತು-ಮೂವತ್ತು ವರುಷಗಳಿಗೆ ಇವುಗಳಲ್ಲಿ ಬದಲಾವಣೆ ಬರಲು ಸಾಧ್ಯವೇ? ಆಗ ನಮ್ಮ ಊರುಗಳ ಪ್ರಗತಿ ಏನಾಗಬಹುದು? ಅದರ ಬಗ್ಗೆ ಚಿಂತಿಸುವ ಮನುಷ್ಯರು ನಮ್ಮ ಊರಿನ ಜನ ಅಲ್ಲವೇ ಅಲ್ಲ ಬಿಡಿ. ಅದು ಬಂದಾಗ ನೋಡಿಕೊಂಡರಾಯಿತು. ಇಂದಿಗೆ ನೆಲ್ಲು ನಮ್ಮ ಕೈ ಹಿಡಿದ ಹಾಗೆ ಮುಂದೆ ಬೇರೆ ಯಾವುದೊ ನಮ್ಮನ್ನು ಕೈ ಹಿಡಿಯಬಹುದಲ್ಲ ಎನ್ನುವ ಆಶಾವಾದಿಗಳು ನಾವು.

Book Summary: Genome by Matt Ridley

The time scale of evolution is very wide, it is scaled not in years but millions of years. Life came into being in the oceans as single celled creatures billions of years ago. They got evolved into multi-cellular organisms and into fish and amphibians. Few species deviated to be transformed into reptiles and plants. That took millions of years. Evolution further led to creation of birds and mammals and at last, came the human beings. That was 2 million years ago. In the time scale of evolution which spans a few billion years, 2 million years is a short span of time. As life transformed from one form to another, its genetic structure got modified to preserve and propagate the changes as new species.

 

Though our immediate cousins were Chimpanzees with whom we share 98% of genes, our common ancestor departed from other mammals a few hundred million years ago, so we share 80% of our genes with cow. Before we were mammals, our ancestors were birds and fishes, so we share 60% to 70% gene pool with them. Even before our ancestors we were animals, they were plants, so we share roughly 50% of genes with apple and banana.

 

Though majority of Genome (complete set of genes) is shared across life in this Universe, what makes each plant/animal unique is the minor difference in its gene pool. Chimpanzees have 24 pairs of chromosomes (which carry the genes), that is how they retain their uniqueness. In humans, it is 23 pairs of chromosomes. We get one set each from our father and mother and they together as a pair provide the necessary instructions for us to grow into an individual human being. Each chromosome, having a set of genes together, influences the anatomy of our body, its functions and the behavior. Some take care of growth of physical organs as we grow into adulthood. Some take care of bodily functions like digestion. Few are responsible for repair from injury and regaining health from sickness. Few prepare us for reproduction when we reach sexual maturity. Few genes instruct our cells to decay and die. Some genes influence our behavior too.


All of these instructions are packed into genes in a language with just four letters (A, T, C, G). and each letter is a chemical. Together, they have the blueprint of our physical body and govern its functions as well. While the scientists have seen some success in decoding this language, our understanding of it is not yet complete. But whatever we have understood so far is mesmerizing. All the learnings from a billion years of evolution is packed in the form of genes and as we understand them better, our understanding of ourselves get better too.


This book, in its 23 chapters, investigates how genes on each chromosome governs what happens within our bodies. Some of the genes influence our behavior and they are in turn influenced too with our behavior. It is a 2-way street. Our food intake, lifestyle, age, stress on body and mind, all lead to switching on or off some of the genes which in turn help us recover from illness or succumb to a disease.

 

Though I had attempted reading this book twice in the past, I could not digest or appreciate it. In the last few months, I had put efforts to improve my understanding of molecular biology, read many books on the subject, watched videos and listened to podcasts. And the third attempt to read this book kept me engrossed for a week. I could appreciate it this time and write a book summary.




Sunday, June 13, 2021

Book Summary: The Code Breaker by Walter Isaacson

Gene editing is no more a science fiction. The Nobel Prize for the last year (2020) in Chemistry was awarded to two women - Emmanuelle Charpentier and Jennifer Doudna, for the development of a method for genome editing. This book has Jennifer Doudna as the protagonist and many more interesting personalities who have contributed to the field of genetic engineering and the development of gene editing platform known as CRISPR.


The timing is important with the assault of Corona virus. Viruses can only live if they find a host. They cannot replicate on their own but once they enter a host cell, they gain control over it by entering its nucleus and begin to spread. Many bacteria have been found with resistance to virus, not just to Corona but all kinds of viruses. These bacteria had clustered patterns in their genes which offered immunity from viruses by not allowing them to replicate themselves. Researchers agreed to name this genetic pattern as ‘Clustered Regularly Interspaced Short Palindromic Repeats’ or CRISPR in its short form.


This book in begins with exploring the origins of life, the works of Charles Darwin and Gregor Mendel. Then it moves on to James Watson who improved our understanding of structure of Genes and their functioning. Then comes in Jennifer Doudna who had read James Watson’s book ‘The Double Helix’ as a child and then went on to work with him as an adult. As the book progresses, it throws light on hundreds of scientists and researchers working across the world in the field of gene editing, sharing their knowledge and collaborating with each other. But it is Jennifer Doudna who takes it to the finish and wins the Nobel Prize.


This book is more biographical and includes discussions on science only to support the development of story and explain how one event led to another. Walter Isaacson who has authored many books including the best seller biography of Steve Jobs, is well-known to make his readers understand the intricacies and eccentricities involved in the personal lives of well-known public figures.


Gene editing is an evolving branch of science which would potentially change the field of medicines and bio-tech engineered plants. Apart from knowing the science behind it, it would be interesting to know the people behind it as well. And this book just helps with that.




Saturday, June 12, 2021

ಕವಿ ಸಿದ್ದಲಿಂಗಯ್ಯ ನವರಿಗೊಂದು ನಮನ

ಸಿದ್ದಲಿಂಗಯ್ಯ ನವರು ದಲಿತ ಬಂಡಾಯದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರು. ಹಾಗೆಯೇ ಕನ್ನಡ ಸಾಹಿತ್ಯಕ್ಕೆ ಹಲವಾರು ಪುಸ್ತಕ, ನಾಟಕ, ಕವನ ಸಂಕಲನಗಳ ರಚನೆಗಳ ಮೂಲಕ ಸೇವೆ ಸಲ್ಲಿಸಿದ್ದು ಅಲ್ಲದೆ, ವಿಶ್ವವಿದ್ಯಾನಿಲಯಗಳಿಗೆ ಮತ್ತು ಸರ್ಕಾರೀ ಪ್ರಾಧಿಕಾರಗಳಿಗೂ ಮಣ್ಣು ಹೊತ್ತಿದ್ದಾರೆ.

 


ಒಬ್ಬ ಹೋರಾಟಗಾರ ಕವಿಯೂ ಆದರೆ, ಅವನಲ್ಲಿ ಹುಟ್ಟುವ ಕವಿತೆಗಳು ತೀಕ್ಷ್ಣವಾಗಿರುತ್ತಲ್ಲವೇ? ಯಾವುದೇ ಕಲೆಗಾರ ತನ್ನ ವಿಚಾರ, ಅಭಿಪ್ರಾಯಗಳನ್ನು ತನ್ನ ಕಲೆಯ ಮೂಲಕವೇ ವ್ಯಕ್ತಪಡಿಸುತ್ತಾನೆ. ಕವಿ ಸಿದ್ದಲಿಂಗಯ್ಯ ನವರು ಬರೆದ ಅನೇಕ ಕವಿತೆಗಳು ನಮ್ಮ ಸಮಾಜದ ಧೂರ್ತತನಕ್ಕೆ ಕನ್ನಡಿ ಹಿಡಿಯುವುದಲ್ಲದೆ, ಚಾಟಿ ಏಟು ಬೀಸಿ ಪ್ರಶ್ನಿಸುತ್ತಿದ್ದವು. ಅವರ ಒಂದು ಕವಿತೆ, ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ಧರಣಿ ಮಂಡಲ ಮಧ್ಯದೊಳಗೆ' ಚಿತ್ರದೊಳಗೆ ಉಪಯೋಗವಾಗಿದೆ. ದುಡ್ಡಿನ ಮದದವರಿಗೆ ತರಾಟೆ ತೆಗೆದುಕೊಳ್ಳುವ ಸನ್ನಿವೇಶದಲ್ಲಿ ಈ ಹಾಡು ಮೂಡಿ ಬರುತ್ತದೆ. ಆ ಕವಿತೆಯ ಸಾಲುಗಳನ್ನು ಇಲ್ಲಿ ಓದಿಕೊಂಡು ನೋಡಿ.

 

 

ಕಾಸನು ಬೀಸಿ, ಒಲವಿನ ಬೆಲೆಯನು

ನಿಗದಿ ಮಾಡುವ ಅಂಧಕರೇ,

ಬೀಸುವ ಗಾಳಿಯ ಕೊಳ್ಳುವಿರೇನು,

ನೋಟಿನ ಕಂತೆಯ ಉಳ್ಳವರೇ

 

ದುಡ್ಡಿನ ಗಂಟನು ಮೇಲಕೆ ತೂರಿ,

ಹಾರುವ ಹಕ್ಕಿಯ ಇಳಿಸುವಿರಾ?

ಬಣ್ಣದ ನೋಟಿನ ಬಲೆಯನು ಬೀಸಿ,

ಉರಿಯುವ ಸೂರ್ಯನ ಹಿಡಿಯುವಿರಾ?

 

ಕಾಸನು ಬೀಸಿ, ಒಲವಿನ ಬೆಲೆಯನು

ನಿಗದಿ ಮಾಡುವ ಅಂಧಕರೇ

 

ಕಾಸಿನ ಸದ್ದಿಗೆ ಗಿಡದಲಿ ಮೊಗ್ಗು,

ಅರಳುವುದೇನು ಹೂವಾಗಿ?

ಕಾಸನು ಕಂಡು ಮರದಲಿ ಕಾಯಿ,

ತೂಗುವುದೇನು ಹಣ್ಣಾಗಿ?

 

ಕಾಸನು ಬೀಸಿ, ಒಲವಿನ ಬೆಲೆಯನು

ನಿಗದಿ ಮಾಡುವ ಅಂಧಕರೇ

 

ಮಿರುಗುವ ನೋಟಿನ ಕಟ್ಟನು ತೋರಿ,

ಕಂದನ ನಗುವನು ಕೊಳ್ಳುವಿರಾ?

ಕಾಸನು ಕೊಟ್ಟರೆ ಕಾಮನ ಬಿಲ್ಲನು,

ನೀಲಿಯ ಗಗನದಲಿ ತೋರುವಿರಾ? 

 

ಕಾಸನು ಬೀಸಿ, ಒಲವಿನ ಬೆಲೆಯನು

ನಿಗದಿ ಮಾಡುವ ಅಂಧಕರೇ

 

ಕವನ ಓದುವುದಿಕ್ಕಿಂತ, ಆ ಹಾಡು ಚಿತ್ರದ ತೆರೆಯ ಮೇಲೆ ಬಂದಿದ್ದು ನೀವು ನೋಡುವವರಾದರೆ, ಇಲ್ಲಿದೆ ಅದರ ಲಿಂಕ್.




Thursday, June 10, 2021

ಕನ್ನಡ ನಾಡು, ಸಕಲ ಅನುಭವದ ಬೀಡು

'ಹಸುರಿನ ಬನಸಿರಿಗೆ ಒಲಿದು,

ಸೌಂದರ್ಯ ಸರಸ್ವತಿ ಧರೆಗಿಳಿದು,

ಚೆಲುವಿನ ಬಲೆಯ ಬೀಸಿದಳು,

ಈ ಗಂಧದ ಗುಡಿಯಲಿ ನೆಲೆಸಿದಳು'


ಹೌದು ರೀ, ದೇಶ ವಿದೇಶ ಪ್ರವಾಸ ಮಾಡಿದಾಗ ಸಿಗುವ ಅನುಭವ, ನಮ್ಮ ಕನ್ನಡ ನಾಡನ್ನು ಸುತ್ತಿದಾಗ ಸಿಗುವ ಅನುಭವಕ್ಕಿಂತ ಹೆಚ್ಚಿನದೇನಲ್ಲ. ನಯಾಗರಕ್ಕಿಂತ ನಮ್ಮ ಜೋಗ ಜಲಪಾತವೇ ಹೆಚ್ಚಿನ ರೋಮಾಂಚನ ಸೃಷ್ಟಿಸುತ್ತದೆ. ನೀರಿಲ್ಲದಾಗ ಹೋಗಿ ನನ್ನನ್ನು ಬೈದುಕೊಳ್ಳಬೇಡಿ ಅಷ್ಟೇ. ದೂರದ ಸ್ವಿಟ್ಜರ್ಲ್ಯಾಂಡ್ ಗೆ ಹೋಗಿ, ಹಿಮ ಮುಸುಕಿದ ಪರ್ವತಗಳ ಅಡಿಯಲ್ಲಿರುವ ಊರುಗಳು ಎಷ್ಟು ಅಂದವೋ ಎನ್ನುವುದಕ್ಕಿಂತ, ಚಿಕ್ಕಮಗಳೂರಿನ ಮಂಜು ಮುಸುಕಿದ ಕಾಫಿ ತೋಟಗಳು ಅಷ್ಟೇ ಅಂದ ಅನ್ನುವ ಅನುಭವ ನಿಮಗಾಗದಿದ್ದರೆ ನೋಡಿ. ಸಾಕೆನಿಸದಿದ್ದರೆ ಕುಮಾರ ಪರ್ವತಕ್ಕೆ ಚಾರಣ ಹೋಗಿ ಖಚಿತ ಪಡಿಸಿಕೊಳ್ಳಿ. ಲಕ್ಷಾಂತರ ಖರ್ಚು ಮಾಡಿ, ಕೆನ್ಯಾದ ಕಾಡು ಪ್ರಾಣಿಗಳನ್ನು ನೋಡಲು ಹೋಗದೆ, ನಾಗರ ಹೊಳೆಯಲ್ಲಿ ನಾಲ್ಕಾರು ದಿನ ಉಳಿದುಕೊಳ್ಳಿ. ಹೆಚ್ಚಿನ ಜೀವ ವೈವಿಧ್ಯತೆಯ ಪರಿಚಯ ನಿಮಗಾಗದಿದ್ದರೆ ನೋಡಿ.


ನೀವು ದೈವ ಭಕ್ತರೋ? ಹಿಮಾಲಯದ ಗಂಗೋತ್ರಿಯಲ್ಲಿ ಮಿಂದು ಬಂದರೆ ಯಾವ ಪಾಪ ಕಳೆಯುವುದೋ, ಅದು ತುಂಗೆಯಲ್ಲಿ ಮಿಂದು ಶೃಂಗೇರಿಯ ಶಾರದಾಂಬೆಯ ದರ್ಶನ ಪಡೆದರೂ ಲಭ್ಯ. ಧರ್ಮವ ಸಾರುವ ಧರ್ಮಸ್ಥಳ ಬೇರೆ ಎಲ್ಲುಂಟು? ಮುರುಡೇಶ್ವರದಲ್ಲಿ  ಶಿವ ದರ್ಶನ ಪಡೆದು, ಸಮುದ್ರ ಸ್ನಾನ ಮಾಡಿ ಬಂದರೆ ಹಿತವಲ್ಲವೇ? ನಿಮಗೆ ದ್ವೀಪ ಪ್ರವಾಸ ಮಾಡಬೇಕೆ?  ನೋಡಬಹುದಲ್ಲ, ಸೇಂಟ್ ಮೇರಿ ಐಲ್ಯಾಂಡ್.


ನಿಮಗೆ ಶಿಲ್ಪ ಕಲೆ ಇಷ್ಟವೋ? ಬೇಲೂರಿನ ಶಿಲಾ ಬಾಲಿಕೆಯರಷ್ಟೇ  ಅಲ್ಲ, ಹೊಯ್ಸಳರು ಕಟ್ಟಿದ ಎಲ್ಲಾ ದೇಗುಲಗಳಲ್ಲಿ, ಶಿಲ್ಪಕಲೆಯ ಆರಾಧನೆಯನ್ನು ಕಾಣಬಹುದು. ನಿಮಗೆ ಚರಿತ್ರೆ ಇಷ್ಟವೇ? ಹಾಗಿದ್ದಲ್ಲಿ ಹಂಪೆಯನ್ನು ಮರೆಯುವುದುಂಟೆ? ವೈಭವದಿಂದ ಕೂಡಿದ ಸಾಮ್ರಾಜ್ಯ ಹೇಗಿತ್ತು ಅನ್ನುವುದಷ್ಟೇ ಅಲ್ಲ ಸಕಲ ಕಲೆಗಳ ಬೀಡು ಇದಾಗಿತ್ತು ಎನ್ನುವುದು ಅರಿವಿಗೆ ಬರುತ್ತದೆ. ಕಲ್ಲು ಕಂಬಗಳು ನುಡಿಸುವ ಮರ್ಮರ ಸಂಗೀತಕ್ಕೆ ನೀವೇ ಮೂಕರಾಗಿಬಿಡುವಿರಿ. ಇಲ್ಲಿ ಶ್ರೀಕೃಷ್ಣದೇವರಾಯನು ತನ್ನ ಕುರುಹುಗಳನ್ನು ಬಿಟ್ಟು ಹೋಗಿದ್ದಾನೆ, ಹಾಗೇಯೇ ಪುರಂದರ ದಾಸರು ಕೂಡ. ನಿಮಗೆ ಪುರಾಣ ಇಷ್ಟವೇ? ಹತ್ತಿರದಲ್ಲೇ ಇದೆಯಲ್ಲ, ರಾಮಾಯಣದಲ್ಲಿ ಬರುವ ಕಿಷ್ಕಿಂದೆ, ಅಂಜನಾದ್ರಿ ಬೆಟ್ಟ.


Picture Credit: Shivashankar Banagar




'ವಾತಾಪಿ ಜೀರ್ಣೋಭವ' ಎಂದ ಅಗಸ್ತ್ಯ ಮುನಿ ಇದ್ದ ಬಾದಾಮಿಯನ್ನು ನೋಡಿ ಬನ್ನಿ. ಇದು ಚಾಲುಕ್ಯರ ರಾಜಧಾನಿ ಕೂಡ ಆಗಿತ್ತು. ಕನ್ನಡ ನಾಡಿನ ಸಾಂಸ್ಕೃತಿಕ ಪರಂಪರೆ ಅರಿಯಲು ಐಹೊಳೆ, ಪಟ್ಟದಕಲ್ಲು ನೋಡುವುದು ಅಗತ್ಯ. ಬಿಜಾಪುರದ ಸುಲ್ತಾನರು ಕಟ್ಟಿದ ಗೋಲ್ ಗುಂಬಜ್ ಇಂದಿಗೂ ಮನ ಮೋಹಕ ಮತ್ತು ಮನುಷ್ಯನ ಸಾಧನೆಗಳ ಪ್ರತೀಕ.


ಬಸವನ ಬಾಗೇವಾಡಿಯಿಂದ, ಬಸವ ಕಲ್ಯಾಣ ಅಲ್ಲಿಂದ ಕೂಡಲ ಸಂಗಮಕ್ಕೆ ಬಂದು ನೋಡಿ. ದಾರಿಯಲ್ಲೆಲ್ಲೋ ಕ್ರಾಂತಿಯೋಗಿ ಬಸವಣ್ಣ ನಿಮ್ಮ ಅನುಭವಕ್ಕೆ ಬರುತ್ತಾನೆ. ಹಾಗೆಯೇ ಅನೇಕ ಶರಣರು, ವಚನಕಾರರು ಕೂಡ. ಆ ಪ್ರದೇಶಗಳಲ್ಲಿನ ವಿರಕ್ತ ಮಠಗಳಲ್ಲಿ ಕುಳಿತು ವಚನಗಳನ್ನು ಓದಿಕೊಂಡು ನೋಡಿ. ವೇದಗಳಿಗೂ ಮೀರಿದ ಜ್ಞಾನ ನಿಮಗೆ ಕನ್ನಡ ಭಾಷೆಯಲ್ಲೇ ಸಿಕ್ಕಿಬಿಡುತ್ತದೆ.


ಪ್ರವಾಸ ನಮ್ಮ ಅನುಭವವನ್ನು ವಿಸ್ತಾರಗೊಳಿಸುತ್ತದೆ. ಆದರೆ ಅದಕ್ಕೆ ಬಹು ದೂರದ ಪ್ರದೇಶಗಳಿಗೆ, ವಿದೇಶಗಳಿಗೆ ಹೋಗಬೇಕೆಂದಿಲ್ಲ. ಅಲ್ಲಿಗೆ ನೀವು ಹೋಗುವಿರೋ, ಬಿಡುವಿರೋ ನಿಮಗೆ ಬಿಟ್ಟಿದ್ದು. ಆದರೆ ಕನ್ನಡ ನಾಡನ್ನು ಸುತ್ತುವುದು ಮಾತ್ರ ಕಡೆಗಣಿಸಬೇಡಿ. ನನಗೆ ಈಗಾಗಲೇ ಸ್ಪಷ್ಟವಾಗಿದೆ. ಕನ್ನಡ ನಾಡಿಗಿಂತ ಚೆಲುವ ನಾಡು ಬೇರೊಂದಿಲ್ಲ. ಎಲ್ಲೆಲ್ಲ ಅಡ್ಡಾಡಿ ಬಂದ ಮೇಲೆ ನೀವು ಕೂಡ ಇದೆ ಮಾತು ಹೇಳುವಿರಿ ಎನ್ನುವ ಅಭಿಪ್ರಾಯ ನನ್ನದು.

Saturday, June 5, 2021

ಪ್ರಕೃತಿಯ ಯೋಜನೆಯ ನಂತರದ ಜೀವನ

ಕೊರೊನ ವೈರಸ್ ಹೇಗೆ ರೂಪಾಂತರಿಯಾಗಿ ಬಿಟ್ಟು ಬಿಡದೆ ಕಾಡುತ್ತದೆ ಎಂದು ನಾವೆಲ್ಲ ಗಮನಿಸುತ್ತಿದ್ದೇವೆ. ತಾನು ಸೇರಿಕೊಂಡ ದೇಹ ಅಂತ್ಯವಾದಾಗ ತನ್ನ ಅಂತ್ಯವೂ ಆಗುತ್ತದೆ ಎನ್ನುವುದು ಆ ಸೂಕ್ಷ್ಮ ಜೀವಿಗೂ ಗೊತ್ತು. ಅದಕ್ಕೆ ಅದು ಹೊಸ ಅತಿಥಿಯನ್ನು ಹುಡುಕಿ ಸೇರಿಕೊಳ್ಳುತ್ತದೆ ಮತ್ತು ತನ್ನ ವಂಶವನ್ನು ಮುಂದುವರೆಸುತ್ತದೆ. ಹಾಗೆ ನೋಡಿದರೆ, ಇದು ಪ್ರಕೃತಿಯ ಎಲ್ಲ ಜೀವಿಗಳಲ್ಲಿ ಸಹಜ. ಮನುಷ್ಯನಲ್ಲೂ ಇದೇ ತರಹದ ಪ್ರಕ್ರಿಯೆ ಇದೆ. 'The Selfish Gene' ಎನ್ನುವ ಪುಸ್ತಕ, ನಮ್ಮ ದೇಹದಲ್ಲಿರುವ ಜೀನ್ ಗಳು, ಎಂತಹುದೆ ಪರಿಸ್ಥಿತಿಯಲ್ಲಿ ತಾನು ಉಳಿದುಕೊಳ್ಳುವುದು ಮತ್ತು ವಂಶ ಮುಂದುವರೆಸುವುದು ಈ ಪ್ರಕ್ರಿಯೆಯೆಗಳ ಕಡೆ ಗಮನ ಹರಿಸುವ ಬಗ್ಗೆ ಬೆಳಕು ಚೆಲ್ಲುತ್ತದೆ. ಮನುಷ್ಯ ಸ್ವಾರ್ಥಿಯಾಗುವುದರಲ್ಲಿ ಪ್ರಕೃತಿಯ ಕೈವಾಡವೂ ಇದೆ. ಅದಕ್ಕೆ ಅವನು ಬದುಕುವುದು ಬೇಕು ಮತ್ತು ಅವನ ವಂಶ ಮುಂದುವರೆಯುವುದು ಬೇಕು. ಅದಕ್ಕೆ ಅದು ತನ್ನ ಸಂದೇಶವನ್ನು ಜೀನ್ ಗಳಲ್ಲಿ ಅಡಿಗಿಸಿ ಇಡುತ್ತದೆ. ಅದಕ್ಕೆ ನೋಡಿ, ಸಣ್ಣ ವಯಸ್ಸಿನಲ್ಲಿ ಟೈಫಾಯಿಡ್, ಟಿ.ಬಿ. ಯಂತಹ ರೋಗಗಳು ಬಂದಾಗಲೂ ಮನುಷ್ಯ ಬೇಗನೆ ಚೇತರಿಸಿಕೊಳ್ಳುತ್ತಾನೆ. ಹಾಗೆಯೆ ಯೌವನ ಬಂದಾಗ, ಪ್ರಕೃತಿಯು ಮನುಷ್ಯನ ದೇಹವನ್ನು ಹಾರ್ಮೋನ್ ಬದಲಾವಣೆ ಮೂಲಕ, ಸಂಗಾತಿಯನ್ನು ಹುಡುಕಲು ಮತ್ತು ವಂಶ ಬೆಳೆಸಲು ಪ್ರಚೋದಿಸುತ್ತದೆ. ಅಲ್ಲಿಗೆ ಪ್ರಕೃತಿಯು ಮನುಷ್ಯ ದೇಹದ ಜೀನ್ ಗಳಲ್ಲಿ ಬರೆದ ಸಾಂಕೇತಿಕ ಭಾಷೆಯು ತಾನು ಅಂದು ಕೊಂಡಿದ್ದಕ್ಕೆ ಬಳಕೆ ಆಗುತ್ತದೆ.


ಮನುಷ್ಯ ದೇಹ ನಲವತ್ತರ ನಂತರ ಬೇರೆಯದೇ ತರಹದ ವರ್ತನೆ ತೋರಲು ಆರಂಭಿಸುತ್ತದೆ. ಪ್ರಕೃತಿಯಾಗಲಿ, ಅದು ಸೃಷ್ಟಿಸಿದ ಜೀನ್ ಗಳಾಗಲಿ, ನಲವತ್ತರ ನಂತರದ ಮನುಷ್ಯನನ್ನು ಕಡೆಗಣಿಸುತ್ತವೆ. ಇಷ್ಟು ವರ್ಷ ಅವನು ಬದುಕಿ ವಂಶ ಬೆಳೆಸಿದ್ದರೆ, ಪ್ರಕೃತಿಗೆ  ಅವನನ್ನು ಹುಟ್ಟಿಸಿದ ಅವಶ್ಯಕತೆ ಮುಗಿದಿದೆ. ಒಂದು ವೇಳೆ ಅವನು ಇಷ್ಟರಲ್ಲಾಗಲೇ ವಂಶ ಮುಂದುವರೆಸದಿದ್ದರೆ, ಅವನು ಬದುಕಿದ್ದು ಪ್ರಯೋಜನ ಏನು ಎನ್ನುವುದು ಪ್ರಕೃತಿಯ ಅಭಿಪ್ರಾಯ. ಅದಕ್ಕೆ ನೋಡಿ, ನಲವತ್ತರ ನಂತರ ಮನುಷ್ಯ ದೇಹದ ಶಕ್ತಿ ಮೊದಲಿನ ತರಹ ಇರುವುದಿಲ್ಲ. ಯಾವುದಾದರೂ ರೋಗ ಸೇರಿಕೊಂಡರೆ ಬೇಗನೆ ಬಿಟ್ಟು ಹೋಗುವುದಿಲ್ಲ. ಜೀನ್ ಗಳು ತಾವು ಮರೆಯಾಗಿ ಹೋಗಿ ಮತ್ತೆ ಪ್ರಕೃತಿಯಲ್ಲಿ ಲೀನವಾಗಿ ಹೋಗಲು ಬಯಸುತ್ತವೆ. 


ಆದರೆ ನಲವತ್ತರ ನಂತರವೂ ನೀವು ಅತ್ಯುತ್ತಮ ಅರೋಗ್ಯ ಹೊಂದಿ, ಬದುಕಿನ ಬಗ್ಗೆ ಅಭಿರುಚಿ ಇದ್ದರೆ, ಅದಕ್ಕೆ ನಿಮ್ಮ ಪ್ರಯತ್ನವೇ ಕಾರಣ . ಏಕೆಂದರೆ ಪ್ರಕೃತಿಯು ಈಗ ನಿಮ್ಮ ಸಹಾಯಕ್ಕೆ ಇಲ್ಲ. ಅದಕ್ಕೆ ನಿಮ್ಮಿಂದ ಈಗ ಯಾವ ಪ್ರಯೋಜನವೂ ಇಲ್ಲ. ಹಾಗಾಗಿ ಅದರ ಸಹಾಯ ಮತ್ತು ಪ್ರಭಾವ ಎರಡರಿಂದ ನೀವು ಮುಕ್ತರಾಗಿದ್ದೀರಿ. ಮನುಷ್ಯನನ್ನು ಬಿಟ್ಟು ಬೇರೆಲ್ಲ ಪ್ರಾಣಿ, ಪಕ್ಷಿಗಳ ಜೀವನ ಕ್ರಮ ಗಮನಿಸಿ ನೋಡಿ. ಸಂತಾನೋತ್ಪತ್ತಿ ನಿಲ್ಲಿಸಿದ ಕೆಲವೇ ವರ್ಷಗಳಿಗೆ ಅವುಗಳ ಜೀವನವು ಅಂತ್ಯವಾಗುತ್ತದೆ. ಅದು ಪ್ರಕೃತಿ ಮಾಡಿದ ವಿನ್ಯಾಸ. ಆದರೆ ಮನುಷ್ಯ ಮಾತ್ರ ಅದಕ್ಕೆ ಹೊರತು. ಬೇರೆ ಯಾವುದೇ ಜೀವಿಗಳಿಗೆ ಇರದ ಸೌಲಭ್ಯ ನಮಗಿದೆ. ಅದು ಪ್ರಕೃತಿಯನ್ನು ಅರ್ಥ ಮಾಡಿಕೊಳ್ಳುವ ಮತ್ತು ಅದರ ಮೇಲೆ ಹಿಡಿತ ಸಾದಿಸುವ ಪ್ರಜ್ಞೆ. ಅದಕ್ಕೆ ನೋಡಿ, ನಾವು ನಲವತ್ತರ ನಂತರ ನಮ್ಮ ದೇಹವನ್ನು ತಾತ್ಸಾರವಾಗಿ ಕಾಣಲು ಸಾಧ್ಯವಿಲ್ಲ. ಎಷ್ಟು ಕಾಳಜಿ ವಹಿಸಿ ಕಾಪಾಡಿಕೊಳ್ಳುತ್ತೇವೋ, ಅಷ್ಟು ವರ್ಷದ ಬದುಕು ನಮ್ಮದು. ವೈದ್ಯಕೀಯ ಸೌಲಭ್ಯಗಳು ಕೂಡ ಅದಕ್ಕೆ ಸಹಾಯ ಮಾಡುತ್ತವೆ.


ನಲವತ್ತರ ನಂತರ ಪ್ರಕೃತಿಯು ನಮ್ಮನ್ನು ನಮ್ಮ ಪಾಡಿಗೆ (ಎಲ್ಲರಿಗೂ ಅಲ್ಲವಾದರೂ, ಸಾಕಷ್ಟು ಜನರಿಗೆ) ಬಿಟ್ಟು ಬಿಡುತ್ತದಲ್ಲ. ಆಗ ಜೀವನದ ಹೊಸ ಆಯಾಮಗಳು ತೆರೆದುಕೊಳ್ಳುತ್ತವೆ. ಮನಸ್ಸು ಸಾಕಷ್ಟು ತಹಬದಿಗೆ ಬಂದಿರುತ್ತದೆ. ಅಲ್ಲಿಯವರೆಗೆ ನೋಡಿದ ಸಾವು ನೋವುಗಳು ನಮ್ಮ ನಶ್ವರತೆಯ ಅರಿವು ಮೂಡಿಸುತ್ತವೆ. ಸ್ವಾರ್ಥದ ಆಚೆಗೆ ಬದುಕು ಇರುವುದು ಅರಿವಿಗೆ ಬರುತ್ತದೆ. ಕಲೆಗಳು ಒಲಿಯತೊಡಗುತ್ತವೆ. ಅಲ್ಲಿಂದ ಆಮೇಲೆ ನಾವು ಪ್ರಕೃತಿಯ ಯೋಜನೆಯಂತೆ ಬದುಕದೆ, ನಮ್ಮ ಇಷ್ಟದಂತೆ ಬದುಕಲು ಸಾಧ್ಯವಾಗುತ್ತದೆ. ಅಲ್ಲಿಂದ ಮುಂದೆ ಎಷ್ಟು ವರ್ಷ ಬದುಕುತ್ತೇವೆ ಎನ್ನುವುದು ನಮ್ಮ ಪ್ರಯತ್ನದ ಮೇಲೆ ಅವಲಂಬಿತವಾಗುತ್ತದೆ. ಚಟಗಳಿಗೆ ದಾಸರಾಗಿ, ದೇಹವನ್ನು ದುರುಪಯೋಗ ಪಡಿಸಿಕೊಂಡರೆ ಅಲ್ಲಿಂದ ಸಾವು ದೂರದ ದಾರಿಯೇನಲ್ಲ. ಹಾಗೆಯೇ ನಿಯಮಿತವಾಗಿ ಬದುಕಿದಷ್ಟು ದೇಹ ತನ್ನ ಇರುವಿಕೆಯನ್ನು ಮುಂದುವರೆಸುತ್ತ ಹೋಗುತ್ತದೆ. ಅದು ಇನ್ನೂ ನಲವತ್ತು ವರುಷ ಮುಂದುವರೆಯಬಹುದು. ಅಥವಾ ಅಸಮರ್ಪಕವಾಗಿದ್ದಲ್ಲಿ, ಬೇಗನೆ ಕೊನೆಗೊಳ್ಳಬಹುದು ಕೂಡ. 


ನಮ್ಮ ಹುಟ್ಟು, ಬೆಳವಣಿಗೆಯ ಎಷ್ಟೋ ಸಂಗತಿಗಳನ್ನು ಪ್ರಕೃತಿಯು ತನ್ನ ನಿಯಂತ್ರಣದಲ್ಲಿ ಇಟ್ಟುಕೊಂಡಿತ್ತು. ಏನೇ ಕಷ್ಟ ಬರಲಿ, ನಲವತ್ತರ ಅಂಚಿಗೆ ನಮ್ಮನ್ನು ಕರೆ ತರಲು ಅದು ಸಹಾಯ ಮಾಡಿತು. ಆದರೆ ಅದರ ನಂತರದ ನಮ್ಮ ಬದುಕಿಗೆ ಮಾತ್ರ ನಾವೇ ಸಂಪೂರ್ಣ ಹೊಣೆ.  ಹಾಗೆಯೇ ನಂತರದ  ಸಮಯವನ್ನು ಹೇಗೆ ಉಪಯೋಗಿಸಿಕೊಳ್ಳುತ್ತೇವೆ ಅನ್ನುವುದು ನಮ್ಮ ವಿವೇಚನೆಗೆ ಬಿಟ್ಟಿದ್ದು. ನಮ್ಮ ವ್ಯಕ್ತಿತ್ವ ವಿಕಾಸವು ಇದೇ ಸಮಯದಲ್ಲಿ ಸಹಜ ಸಾಧ್ಯ. ನೀವು ಈಗಾಗಲೇ ನಲವತ್ತು ದಾಟಿದ್ದೀರಾ? ನಿಮ್ಮ ದೇಹದ, ಮನಸ್ಸಿನ ಕಾಳಜಿ ನಿಮಗಿದ್ದರೆ, ನಿಮಗೆ ಅಭಿನಂದನೆಗಳು. ಇಲ್ಲದಿದ್ದರೆ ಪ್ರಕೃತಿಯ ಯೋಜನೆಗೆ ವಿರುದ್ಧ ಈಜಿ, ನಿಮ್ಮ ಅದೃಷ್ಟದ ಪರೀಕ್ಷೆ ಮಾಡುತ್ತಿರಿವಿರಿ ಅಷ್ಟೇ.

Friday, June 4, 2021

ಕಥೆ ಹೇಳೋದು ಕಲಿತ ಮೇಲೆ ಮನುಷ್ಯ ಮನುಷ್ಯ ಆಗಿದ್ದು

ಎಷ್ಟೋ ಸಾವಿರ ವರ್ಷಗಳ ಹಿಂದೆ ಆದಿ ಮಾನವ ಅಲೆಮಾರಿಯಾಗಿ, ಬೇಟೆ ಆಡುತ್ತ ಜೀವನ ಕಳೆಯುತ್ತಿದ್ದ. ಆಗ ಅವನಿಗೆ ಮತ್ತು ಕಾಡಲ್ಲಿನ ಇತರ ಮೃಗಗಳಿಗೆ ಹೆಚ್ಚಿನ ವ್ಯತ್ಯಾಸ ಇದ್ದಿಲ್ಲ. ಆದರೆ ಅವನು ಕ್ರಮೇಣ ವ್ಯವಸಾಯ ಕಲಿತುಕೊಂಡು, ಸಂಘ ಜೀವಿಯಾಗಿ ಮಾರ್ಪಟ್ಟ. ಜೊತೆಗಾರರ ನಡುವೆ ವ್ಯವಹರಿಸಲು ಅವನು ಬಳಸುತ್ತಿದ್ದ ಸಂಜ್ಞೆ, ಹೂಂಕಾರಗಳು ಕ್ರಮೇಣ ಶಬ್ದಗಳಾಗಿ ರೂಪುಗೊಂಡು, ಶಬ್ದ ಭಂಡಾರ ಬೆಳೆಯುತ್ತ ಅದು ಒಂದು ವ್ಯವಸ್ಥಿತ ಭಾಷೆಯಾಗಿ ಬದಲಾಯಿತು. ಅದು ಮನುಷ್ಯನಿಗೆ ಇತರೆ ಮೂಕ ಪ್ರಾಣಿಗಳಿಗೆ ಇಲ್ಲದಂತಹ ಅನುಕೂಲತೆಯನ್ನು ಒದಗಿಸಿತು. ಅದು ಮನುಷ್ಯರ ನಡುವಿನ ಸಂಪರ್ಕದ ಕ್ಷಮತೆ ಹೆಚ್ಚಿಸುವುದಲ್ಲದೆ, ಇನ್ನೂ ಒಂದು ಅದ್ಬುತ ಬೆಳವಣಿಗೆಗೆ ಕಾರಣವಾಯಿತು. ಅದು ಮನುಷ್ಯ ತಾನು ಕಲಿತುಕೊಂಡ ಜ್ಞಾನವನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ಬಗೆ. ಚಿಕ್ಕ ಮಕ್ಕಳನ್ನು ಕೂರಿಸಿಕೊಂಡು ಬೆಟ್ಟದ ಹುಲಿಯ ಕಥೆ ಹೇಳಿದ ಅಜ್ಜ, ಕೂಸುಗಳಿಗೆ ಜೋಗುಳ ಹಾಡುತ್ತ ಮಲಗಿಸಿದ ಅಜ್ಜಿ, ಬಹುಶ ಮನುಷ್ಯ ಕುಲದ ಮೊದಲ ಕಥೆಗಾರರು. ಆ ಕಥೆಗಳು ಮನರಂಜನೆಯ ಜೊತೆ, ಆ ಮಕ್ಕಳ ಬುದ್ಧಿ ಮಟ್ಟವನ್ನು ಹೆಚ್ಚಿಸಲು ಸಹಕಾರಿಯಾದವು.

 

ಜೀವನದ ಪಟ್ಟುಗಳ ಬಗ್ಗೆ ಕಥೆಯ ಮೂಲಕ ಅರಿವು ಮೂಡಿಸಿಕೊಂಡ ಮಕ್ಕಳು, ಮುಂದೆ ತಾವು ದೊಡ್ಡವರಾದಾಗ ತಮ್ಮ ಅನುಭವಗಳನ್ನು ಹೊಸ ಕಥೆಗಳನ್ನಾಗಿಸಿ ತಮ್ಮ ಮುಂದಿನ ಪೀಳಿಗೆಗೆ ವರ್ಗಾಯಿಸಿದರು. ಕೆಲವು ಕಥೆಗಳು ಹಾಡಿನ ರೂಪಿನಲ್ಲಿದ್ದವು. ಅವು ಮನುಷ್ಯನಲ್ಲಿ ಕಲಾತ್ಮಕತೆಯನ್ನು ಮೂಡಿಸಿದವು. ಇನ್ನೂ ಕೆಲವು ಕಥೆಗಳನ್ನು ಮನುಷ್ಯ ಅಭಿನಯಿಸಿ ತೋರಿಸಲಾರಂಭಿಸಿದ. ಅವುಗಳು ಬಯಲಾಟ, ನಾಟಕಗಳಾಗಿ ಮಾರ್ಪಾಡಾದವು. ಅಷ್ಟೊತ್ತಿಗೆ ಬರವಣಿಗೆಯನ್ನು ಕೂಡ ಮನುಷ್ಯ ಕಲಿತುಕೊಂಡ. ಆಗ ಆ ಕಥೆಗಳೇ ಪುಸ್ತಕಗಳಾದವು. ಹಾಗೆಯೇ ಮನುಷ್ಯ ಚಿತ್ರ ಬಿಡಿಸುವುದನ್ನು ಮಾಡುತ್ತಿದ್ದ. ಅವೆರಡು ಸೇರಿ ಮುಂದೆ 'ಅಮರ ಚಿತ್ರ ಕಥೆ' ಗಳಾದವು. ರಾಜ, ಮಹಾರಾಜರಿಗೆ ಇರಬೇಕಾದ ಸಮಯ ಪ್ರಜ್ಞೆ, ಶಿಕ್ಷಣಗಳನ್ನೂ ಅತಿ ಕಡಿಮೆ ಅವಧಿಯಲ್ಲಿ ಕಲಿಸಿಕೊಡಲು 'ಪಂಚ ತಂತ್ರ' ದ ಕಥೆಗಳು ರೂಪುಗೊಂಡವು. ಹಿಂದಿನ ಪೀಳಿಗೆಗಳ ಅನುಭವ ಸಾರವನ್ನೇ ಮನುಷ್ಯ ಕಥೆಗಳ ಮೂಲಕ ಹಿಡಿದಿಟ್ಟ ಮತ್ತು ಅವುಗಳ ಸದ್ಬಳಕೆ ಮನುಷ್ಯ ಪೀಳಿಗೆಯ ಅಭಿವೃದ್ಧಿಗೆ ಸಹಾಯವಾಯಿತು.

 

ಕಥೆಗಳೇ ಇರದಿದ್ದರೆ, ರಾಮಾಯಣ, ಮಹಾಭಾರತ ಎಲ್ಲಿರುತ್ತಿದ್ದವು? ಯಾರೂ ಕಥೆ ಹೇಳದಿದ್ದರೆ, ನಮಗೆ ನಮ್ಮ ಕಳೆದು ಹೋದ ಹಿಂದಿನ ತಲೆಮಾರಿನ ಪರಿಚಯವೇ ಇರುತ್ತಿರಲಿಲ್ಲ. ಆದರೆ ಹಾಗಾಗದೆ, ಮನುಷ್ಯ ಸೊಗಸಾದ ಕಥೆಗಾರನಾಗಿ ರೂಪುಗೊಂಡ ಮತ್ತು ಭವಿಷ್ಯದ ತಲೆಮಾರುಗಳು ಅಭಿವೃದ್ಧಿಯ ಕಡೆ ಸಾಗಲು ನೆರವಾದ. ಇಂದಿಗೆ ಕಥೆಗಳು ಹಲವಾರು ಮಾಧ್ಯಮದಿಂದ ನಮ್ಮನ್ನು ತಲುಪುತ್ತವೆ. ಅವು ಚಲನ ಚಿತ್ರಗಳಾಗಿರಬಹುದು. ದೂರದರ್ಶನದ ಎಳೆದು ಕಥೆ ಹೇಳುವ ಧಾರಾವಾಹಿಗಳಾಗಿರಬಹುದು. ಓದುವ ಕಾದಂಬರಿಗಳಾಗಿರಬಹುದು. ರೇಡಿಯೋನಲ್ಲಿ ಕೇಳುವ ಕಾರ್ಯಕ್ರಮಗಳಾಗಿರಬಹುದು. ನಮ್ಮ ಕಾರ್ಪೊರೇಟ್ ಜಗತ್ತಿನಲ್ಲಿ ಪವರ್ ಪಾಯಿಂಟ್ ಮೂಲಕ ಹೇಳುವುದು ಕೂಡ ಕಥೆಯ ಇನ್ನೊಂದು ರೂಪವೇ ಅಲ್ಲವೇ? 


ಕಥೆಗಳು ಕೇವಲ ಮನರಂಜನೆ ಒದಗಿಸುವ, ರೋಮಾಂಚನ ಹುಟ್ಟಿಸುವ ಸಾಧನಗಳು ಅಲ್ಲ. ಅವು ನಮ್ಮನ್ನು ಇತಿಹಾಸ ಮತ್ತು ಭವಿಷ್ಯದ ಜೊತೆ ಸಂಪರ್ಕ ಕಲ್ಪಿಸುವ ಕೊಂಡಿ. ಮನುಷ್ಯ ನಾಗರಿಕತೆಯ ಬೆಳವಣಿಗೆ, ಅವನು ಹೇಳಿದ ಕಥೆಗಳ ಜೊತೆ ಹಾಸು ಹೊಕ್ಕಾಗಿದೆ. ಅದಕ್ಕೆ ನನಗೆ ಅನ್ನಿಸಿದ್ದು, ಕಥೆ ಹೇಳುವುದನ್ನು ಕಲಿತ ಮೇಲೆಯೇ ಮನುಷ್ಯ, ಮನುಷ್ಯನಾಗಿ ಬದಲಾದದ್ದು.