Thursday, December 31, 2020

ವಿದಾಯ ೨೦೨೦; ಸುಸ್ವಾಗತ ೨೦೨೧!

ಈ ವರ್ಷ ಉಂಟು ಮಾಡಿದ ಭೀತಿ, ಕಸಿದುಕೊಂಡ ಸ್ವಾತಂತ್ರ್ಯ, ಆರ್ಥಿಕ ವ್ಯವಸ್ಥೆಗೆ ಆದ ಹಾನಿ ಅಪಾರ. ನಾವಲ್ಲದಿದ್ದರೆ, ನಮ್ಮ ಸ್ನೇಹಿತರು, ಬಂಧುಗಳು ಕೊರೊನ ಧಾಳಿಯ ನೇರ ಸಂಕಟ ಅನುಭವಿಸಿದ್ದಾರೆ. ಮಕ್ಕಳು ಶಾಲೆಯ ಕಡೆಗೆ ತಲೆಯೇ ಹಾಕಲಿಲ್ಲ. ಎಷ್ಟೋ ತಿಂಗಳುಗಳ ಕಾಲ ರಸ್ತೆ, ಮಾರುಕಟ್ಟೆಗಳು ಮುಕ್ತವಾಗಿ ಇರದಿದ್ದರೂ, ಇಂಟರ್ನೆಟ್ ಮುಕ್ತವಾಗಿ ಇತ್ತಲ್ಲ. ನಾವುಗಳು ಮನೆಯ ಒಂದು ರೂಮಿನಲ್ಲಿ ಸೇರಿಕೊಂಡು ಆಫೀಸ್ ಕೆಲಸ ಮಾಡುತ್ತ ಬಂದದ್ದಾಯ್ತು. ಒಂದು ಬಾಗಿಲು ಮುಚ್ಚಿದರೆ ಇನ್ನೊಂದು ಬಾಗಿಲು ತೆರೆಯುತ್ತೆ ಅಂತಾರಲ್ಲ. ನಮಗೆ ಇದ್ದ ಅವಕಾಶಗಳಿಗೆ ಹೊಂದಿಕೊಂಡು, ಹಾಗೋ, ಹೀಗೋ, ವಿನೋದವೋ-ವಿಷಾದವೋ ಈ ವರ್ಷ ಕಳೆದದ್ದಾಯ್ತು.


ಸಾಂಕ್ರಾಮಿಕ ರೋಗಗಳು ನಮ್ಮ ಪೀಳಿಗೆಗೆ ಅನುಭವ ಇರದಿದ್ದರೂ, ಇತಿಹಾಸದ ಪುಸ್ತಕಗಳು ಅವು ಉಂಟು ಮಾಡಿದ ಅನಾಹುತಗಳನ್ನು ತಿಳಿಸಿ ಕೊಡುತ್ತವೆ. ಪ್ರಕೃತಿಯು ಕಾಲ ಕಳೆದಂತೆ ಹೊಸ ಜೀವಿಗಳನ್ನು ಹುಟ್ಟು ಹಾಕುತ್ತ,  ಇದ್ದವುಗಳನ್ನು ಮಾರ್ಪಡಿಸುತ್ತ, ಹೊಂದಾಣಿಕೆ ಮಾಡಿಕೊಳ್ಳದವನ್ನು ಹೊಸಕಿ ಹಾಕುತ್ತ ಹೋಗುತ್ತದೆ. ಕಾಲಕ್ಕೆ ತಕ್ಕಂತೆ ಹೊಂದಾಣಿಕೆ ಆಗದ ಎಷ್ಟೋ ಜೀವಿಗಳು, ಪ್ರಾಣಿ-ಪಕ್ಷಿಗಳು ಭೂಮಿಯಿಂದ ಕಣ್ಮರೆಯಾಗಿ ಹೋಗಿವೆ. ಆದರೆ ಮನುಷ್ಯ ಪ್ರಾಣಿ ತನ್ನ ಬುದ್ದಿವಂತಿಕೆಯಿಂದ ಪ್ರಕೃತಿಯನ್ನು ತುಳಿಯಲು ನೋಡುತ್ತಾನಾದರೂ, ಸಾಧ್ಯವಾಗದಿದ್ದಾಗ ಬಲು ಬೇಗ ಹೊಂದಾಣಿಕೆ ಮಾಡಿಕೊಂಡು ಬದುಕು ಉಳಿಸಿಕೊಳ್ಳುತ್ತಾನೆ. ಆ ಹೊಂದಾಣಿಕೆ ಅವನನ್ನು ಉಳಿದೆಲ್ಲ ಜೀವಿಗಳಿಗಿಂತ ಭಿನ್ನವಾಗಿಸಿ, ಭೂಮಿ ಇರುವವರೆಗೆ ಮಾನವನೂ ಇರಲು ಸಾಧ್ಯ ಎನ್ನುವಂತೆ ಮಾಡಿದೆ.   


ಬರುವ ವರ್ಷ ಶುಭವಾಗಿರಲಿ ಎಂದು ನಾವೆಲ್ಲ ಹಾರೈಸಿದರು, ಅದು ತನ್ನ ಒಡಲಲ್ಲಿ ಏನೆಲ್ಲಾ ಇಟ್ಟುಕೊಂಡಿದೆಯೋ ಕಾದು ನೋಡಬೇಕು. ಅದು ಹೂಮಳೆ ಸುರಿಸಿದರು ಇಲ್ಲ ವಿಷ ಕಾರಿದರು ಹೊಂದಿಕೊಂಡು ಹೋಗಬೇಕು. ಅದನ್ನೇ ನಾವು ನಿನ್ನೆಯಿಂದ ಕಲಿತಿರುವುದು ಮತ್ತು ನಾಳೆಗೆ ಕೊಂಡೊಯ್ಯುತ್ತಿರುವುದು. ಇದನ್ನೇ ಒಂದು ಹಾಡಾಗಿಸಿದ್ದರಲ್ಲ ಚಿ.ಉದಯಶಂಕರ್. ರಾಜಣ್ಣನ ಧ್ವನಿಯಲ್ಲಿರುವ ಈ ಗೀತೆ ಕಾಲಾತೀತವೆನ್ನುವಂತೆ, ಹಿಂದಿಗೂ, ಇಂದಿಗೂ ಮತ್ತು ಮುಂದೆಯೂ ನಮ್ಮ ಜೀವನಕ್ಕೆ ಅನ್ವಯಿಸುತ್ತದೆ.


"ಕಾಲವು ಕುಣಿಸಿದಂತೆ, ಆ ವಿಧಿ ಎಣಿಸಿದಂತೆ, 

ಆಡುವ ಸಮಯದ ಗೊಂಬೆ ಮಾನವ"   


ನಿಜ, ನಾವು ನೀವೆಲ್ಲರೂ ಸಮಯದ ಗೊಂಬೆಗಳಲ್ಲವೇ? ವರ್ಷ ಒಂದು ಕಳೆದು ಇನ್ನೊಂದು ಬಂದರೇನು? ಆದರೂ ರೂಢಿ ತಪ್ಪದೆ, ನಿಮಗೆ ಹೊಸ ವರ್ಷ ಶುಭ ತರಲೆಂದು ಕೋರುತ್ತೇನೆ.



Tuesday, December 29, 2020

ಅವರು ನಮಗೇನು ಸಹಾಯ ಮಾಡಿದ್ದಾರೆ ಎಂದು ಕೇಳುವ ಮುನ್ನ

ನಾವೇ ಅಲ್ಲದಿದ್ದರೆ, ನಮ್ಮ ನಿಮ್ಮ ನಡುವೆ ಅಲ್ಲೊಬ್ಬರು, ಇಲ್ಲೊಬ್ಬರು ಇರುತ್ತಾರೆ. ಅವರು ಯಾರಿಗಾದರೂ ಸಹಾಯ ಮಾಡುವ ಮುನ್ನ "ಅವರು ನಮಗೇನು ಸಹಾಯ ಮಾಡಿದ್ದಾರೆ?" ಎಂದು ಪ್ರಶ್ನೆ ಕೇಳುತ್ತಾರೆ. ಅವರಿಗೆ ಜೀವನ ಒಂದು ವ್ಯವಹಾರ ಎನಿಸಿದ್ದರೆ ಅದು ಅವರ ಅಭಿಪ್ರಾಯ. ಇದು ಲೌಕಿಕವಾಗಿ ಸಾಮಾನ್ಯ ವಿಷಯ ಎಂದು ಅನಿಸಿದರೂ ಇದರ ಬಗ್ಗೆ ಸ್ವಲ್ಪ ವಿಚಾರ ಮಾಡಿ ನೋಡೋಣ.


ನಾವು ಹುಟ್ಟಿದ್ದು ಅಸಹಾಯಕ ಪರಿಸ್ಥಿತಿಯಲ್ಲಿ. ನಾವು ಇನ್ನು ಕೂಸಾಗಿದ್ದಾಗ ಅಮ್ಮ, ಅಜ್ಜಿ, ಅಕ್ಕ ಹೀಗೆ ಹಲವಾರು ವ್ಯಕ್ತಿಗಳು ಲಾಲನೆ ಪಾಲನೆ ಮಾಡಬೇಕಿತ್ತಲ್ಲವೇ? ಹಾಗೆಯೆ ನಾವು ಸತ್ತಾಗ ಕೂಡ ಯಾರೋ ನಮ್ಮನ್ನು ಹೊತ್ತುಕೊಂಡು ಹೋಗಬೇಕು. ಹುಟ್ಟು, ಸಾವಿನ ನಡುವೆ ಕೂಡ  ನಾವು ಸಂಪೂರ್ಣ ಸ್ವಾವಲಂಬಿಯಾಗಿಲ್ಲ. ನಾವು ಶಾಲೆಯಲ್ಲಿದ್ದಾಗ ನಮ್ಮ ಪ್ರತಿಭೆ ಕಂಡು ಪ್ರೋತ್ಸಾಹಿಸಿದ ಶಿಕ್ಷಕರಿದ್ದರಲ್ಲವೇ? ಅವರು ಆ ಕೆಲಸ ಮಾಡದೇ, ಬರಿ ಪಾಠ ಮಾಡಿದ್ದರೂ ಕೂಡ ಅವರಿಗೆ ಸಂಬಳ ಬರುತ್ತಿತ್ತು. ಅವರು ಈ ಹುಡುಗ ತಮಗೆ ಯಾವ ಸಹಾಯ ಮಾಡಿದ್ದಾನೆ ಎಂದು ಕೇಳಿಕೊಳ್ಳಲಿಲ್ಲ. ಕೆಲವೊಮ್ಮೆ ಅವಸರದಲ್ಲಿದ್ದಾಗ ದಾರಿಯಲ್ಲಿ ನಮಗೆ ಲಿಫ್ಟ್ ಕೊಟ್ಟು ಸರಿಯಾದ ಸಮಯಕ್ಕೆ ನಮ್ಮನ್ನು ಸ್ಥಳಕ್ಕೆ ಮುಟ್ಟಿಸುತ್ತಾರಲ್ಲ ಅಪರಿಚಿತರು, ಅವರಿಗೆ ನಾವು ಯಾವ ಸಹಾಯ ಮಾಡಿದ್ದು? ಕೆಲವು ವರ್ಷಗಳ ಹಿಂದೆ ನಾನು ಓಡಿಸುತ್ತಿದ್ದ ಕಾರು ಅಪಘಾತಕ್ಕೀಡಾದಾಗ, ಅಲ್ಲೇ ಇದ್ದ ಕೆಲ ಮಂಗಳಮುಖಿಯರು ನಮ್ಮ ಸಹಾಯಕ್ಕಾಗಿ ಧಾವಿಸಿದ್ದರು. ನಮಗೆ ಅವರ ಪರಿಚಯ ಇದ್ದಿಲ್ಲ ಮತ್ತು ನಾವು ಅವರಿಗೆ ಹಿಂದೆ ಯಾವ ಸಹಾಯ ಮಾಡಿದ್ದಿಲ್ಲ. ಯಾವುದೊ ಕಷ್ಟದ ಸಮಯದಲ್ಲಿ ನಮ್ಮ ಜೊತೆಗೆ ನಿಲ್ಲುವ ಸ್ನೇಹಿತನಿಗೆ ನಾವು ಹಿಂದೆ ಸಹಾಯ ಮಾಡಿರಲೇಬೇಕು ಎಂದೇನಿದೆ? ಅವರೆಲ್ಲರೂ "ಇವರು ನಮಗೇನು ಸಹಾಯ ಮಾಡಿದ್ದಾರೆ?" ಎಂದು ನಮ್ಮ ಬಗ್ಗೆ ಕೇಳಿಕೊಂಡಿದ್ದರೆ ನಮ್ಮ ಜೀವನ ಹೇಗಿರುತ್ತಿತ್ತು?


ಜಗತ್ತಿನಲ್ಲಿ ಸ್ವಾರ್ಥಿಗಳೇ ತುಂಬಿರಬಹುದು. ಆದರೆ ಸ್ವಾರ್ಥವನ್ನು ಮೆಟ್ಟಿ ನಿಲ್ಲುವ ಜನರೂ ಇದ್ದಾರಲ್ಲ. ಸ್ವತ ಬ್ರಹ್ಮಚಾರಿಯಾದ ಶಿವಕುಮಾರ ಸ್ವಾಮಿಗಳು ಸಿದ್ಧಗಂಗೆಯಲ್ಲಿ ಮಠ ಕಟ್ಟಿ, ಸಾವಿರಾರು ಜನರ ಮಕ್ಕಳಿಗೆ ಆಸರೆಯಾಗಲಿಲ್ಲವೇ? ಅವರ ಮನಸ್ಸಿನಲ್ಲಿ "ಇವರು ನಮಗೇನು ಸಹಾಯ ಮಾಡಿದ್ದಾರೆ?" ಎನ್ನುವ ಪ್ರಶ್ನೆ ಯಾವತ್ತೂ ಬಂದಿರಲಿಕ್ಕಿಲ್ಲ. ದಿನ ನಿತ್ಯ ದಾಸೋಹ ನಡೆಸುವ ಧರ್ಮಸ್ಥಳದ ಹೆಗ್ಗಡೆಯವರು ಬಂದಿರುವ ಭಕ್ತರಿಗೆ "ಇವರು ನಮಗೇನು ಸಹಾಯ ಮಾಡಿದ್ದಾರೆ?" ಎಂದು ಯಾವತ್ತಾದರೂ ಕೇಳಿದ್ದಾರೆಯೇ? ಸ್ವಾರ್ಥಿಗಳು ಸಾವಿರಾರು ಜನ ಇದ್ದರೂ, ಅದನ್ನು ಮೆಟ್ಟಿ ನಿಲ್ಲುವ ಒಬ್ಬೊಬ್ಬ ವ್ಯಕ್ತಿ ಸಮಾಜವನ್ನು ಮುನ್ನಡೆಸುತ್ತಾ ಹೋಗುತ್ತಾನೆ.


ನಾವು ಅಂತಹ ಮಹಾ ಪುರುಷರು ಆಗದಿದ್ದರೂ ಪರವಾಗಿಲ್ಲ. ಆದರೆ ನಮ್ಮ ಕೈಲಾಗುವ ಸಣ್ಣ ಪುಟ್ಟ ಸಹಾಯ ಮಾಡಲು ನಾವು "ಅವರು ನಮಗೇನು ಸಹಾಯ ಮಾಡಿದ್ದಾರೆ?" ಎಂದು ಪ್ರಶ್ನೆ ಕೇಳಿಕೊಳ್ಳಬೇಕೇ? ಯಾರೋ ವಂಚಕರಿಗೆ ಸಹಾಯ ಮಾಡಿ ಎಂದು ನಾನು ಹೇಳುತ್ತಿಲ್ಲ. ಇಲ್ಲವೇ ಉದಾರಿಯಾಗಿ ದಾನ ಧರ್ಮಕ್ಕೆ ನಿಲ್ಲಿ ಎಂದೂ ಹೇಳುತ್ತಿಲ್ಲ. ಆದರೆ ನಿಜ ಅವಶ್ಯಕತೆ ಇದೆ ಎಂದು ನಮಗೆ ಅನಿಸಿದಲ್ಲಿ ಮತ್ತು ಆ ಸಹಾಯದಿಂದ ನಾವು ಹೆಚ್ಚು ಏನು ಕಳೆದುಕೊಳ್ಳುವಿದಿಲ್ಲ ಎಂದಲ್ಲಿ, ಆಗ ನಾವು ಪ್ರಶ್ನೆ ಕೇಳಿಕೊಳ್ಳುವ ಅಗತ್ಯವೇನಿದೆ? ನಮ್ಮಿಂದ ಸಹಾಯ ಪಡೆದ ಜನರಿಗೆ ನಮಗೆ ಸಹಾಯ ಮಾಡುವ ಸಾಮರ್ಥ್ಯ ಇರದೇ ಇರಬಹುದು ಅಥವಾ ಅಂತಹ ಪರಿಸ್ಥಿತಿ  ಬರದೇ ಹೋಗಬಹುದು. ಅಥವಾ ಅವರು ನಮ್ಮನ್ನು ಮರೆತು ಕೂಡ ಹೋಗಬಹುದು. ಯಾವುದೇ ಸಹಾಯಕ್ಕೆ ಮುನ್ನ ಅದರಿಂದ ನಮಗೇನು ಲಾಭ ಎಂದು ಕೇಳಿಕೊಳ್ಳುತ್ತಾ ಹೋದರೆ, ನಮ್ಮ ಸುತ್ತ ಮುತ್ತ ಅಂತಹ ಜನರೇ ತುಂಬುತ್ತ ಹೋಗುವುದಿಲ್ಲವೆ?


ಆದರೆ ನಮ್ಮ ಕುಟುಂಬದಲ್ಲೇ ಆ ಪ್ರಶ್ನೆ ಕೇಳುವ ಜನರಿದ್ದರೆ ಏನು ಮಾಡುವುದು? ಮತ್ತು ಅವರು ನಿಮ್ಮ ಕೈ ತಡೆದರೆ ನೀವು ಆಗೇನು ಮಾಡುವಿರಿ? ನನ್ನನ್ನು ಕುಟುಂಬದವರು ಬುದ್ಧಿಗೇಡಿ ಎಂದು ಕರೆದರೂ, ನನಗೆ ಮಾತ್ರ ಆ ಪ್ರಶ್ನೆ ಕೇಳಿಕೊಳ್ಳಲು ಆಗುತ್ತಿಲ್ಲ. ನನಗೆ ಹಿಂದೆ ಸಹಾಯ ಮಾಡಿದ ಅನೇಕ ಅಪರಿಚಿತರೇ ನನಗೆ ಆದರ್ಶ. ಅವರು ನನ್ನ ಜೊತೆ ಯಾವುದೇ ವ್ಯವಹಾರದ ಅಥವಾ ಋಣ ಸಂದಾಯದ ಮಾತು ಆಡಲಿಲ್ಲ. ಸ್ವಾರ್ಥಿಗಳು, ವಂಚಕರ ನಡುವೆಯೂ ಸಮಾಜದ ಬಗ್ಗೆ ವಿಶ್ವಾಸ ಹುಟ್ಟಿಸುವ ವ್ಯಕ್ತಿಗಳು, ಪ್ರತಿಫಲ ಬಯಸದೆ ಮಾಡುವ ಕೆಲಸಗಳು ಉಂಟು ಮಾಡುವ ನೆಮ್ಮದಿಯನ್ನು ತೋರಿಸಿಕೊಡುತ್ತಾರೆ ಅಲ್ಲವೇ? ಅವರು ಕೇಳಿಕೊಳ್ಳದ ಪ್ರಶ್ನೆ ನಾವೇಕೆ ಕೇಳಿಕೊಳ್ಳಬೇಕು?

Monday, December 28, 2020

My Walking Statistics of 2020

More than an year ago, I had installed the pedometer app "Step Set Go" on my cell phone. That started giving me a track of how much I walk on daily and weekly basis. Except occasional misses, my walking has been more or less consistent throughout 2020 and here are the consolidated numbers for the year.



It shows I clocked an average of 8 km per day. And 2,925 km's of walking in the year of 2020. This number surprised me for a while. If I could reach this number walking for less than 2 hours a day, what about those travelers in the past who almost walked from one town to another throughout the year? History documents many travelers like Marco Polo who had traveled from Europe to Mongolia twice on foot (mostly). And the Chinese traveler to India - Hiuen Tsang, who had walked thousands of kilometers. I had always wondered how they could achieve this and why they did not get tired out? Now my own statistics shows that walking few thousand kilometers a year is an easily achievable task. Just one needs to be willing and consistent.


Biology and Evolution indicate that human body is designed or evolved for walking. Our legs are way stronger than our hands. It shows our ancestors used legs more often than hands that made legs pack higher muscular power. As the transition from monkey to humans happened and our ancestors climbed down from tree to land, our feet structure got shaped differently than other four legged animals, helping us to stand up and not yet lose balance. That improved our survival rate as we could walk long distances searching for food. Though we took shelter in agriculture for food later, legs were the primary mode of transporting oneself. Though man tamed horses and invented bullock carts, majority of the population still walked. This continued till bicycles and later motor cars helped us improve our moving speeds and gradually replaced walking in the recent past. Our current generation rarely walks to work but our bodies which got shaped through thousands of years of evolution demand us to walk (or do any other physical exercise) to keep up in a better shape. No wonder what was natural to us in the past has become Doctor's prescription to keep us fit again.


Though walking has been part of my routine for many years, I was not this consistent before and did not record the statistics either. The year of pandemic made me more health conscious and the app on the phone helped me keep a track of the numbers and form a perspective. What is your fitness regime?

Tuesday, December 22, 2020

Elevating our perspectives

Next time when you meet a kid in the neighborhood, praise him (or her) that he (or she) is good at Math or Drawing. It does not matter he was good at it before or not, but now he wants to be. That is the power of praise.

Let us say you are among a group of friends or relatives. One of them challenges you saying you can’t achieve some thing. Your ego will be set on fire. You will focus all your energies on proving him wrong. Criticism can be a wonderful motivation too.

Take a step back and reflect. Both praise and criticism are external stimulants to which we react. But we can’t go on pleasing others around us, we would be tired soon. Similarly, we can’t go on proving all our opponents wrong. Our lives would become purposeless. Instead we need to be guided from our inner desire to achieve something.

Gandhi was undeterred by sarcasm of The British. Gandhi was just an example. Thomas Alva Edison was unfazed by his series of failures. Alexander the Great did not have a single moment of self-doubt. Praise him or criticize him, Buddha would smile, always. History is full of such personalities. All of them had one common thing. Clarity of thought and knowing what they wanted to achieve in their lives.

How does one get clarity? Wider the options you keep for yourself, the more confused you will be. Reject your thoughts based on their merit and retain only few that appeals to you most. Then it would become easy to focus and pursue. Some might get there by deductive thinking. Forcibly filter your ideas of life until you are left with actionable few. Repeat and revalidate until you are left with clear objectives. If you are struggling, meditation can help. It steadies your body, slows down your breathing, calms your nerves and then gradually rejects your thoughts. It produces clarity.

Once you have clarity, your life will become a meditation. Then you know what you want from life. When that becomes driving force, praise or criticism will fall on your wayside. Your elevated perspectives help you overcome shortsightedness, distractions and how others measure you. Clarity also gives you patience on your path towards your objectives.

Sunday, December 20, 2020

ಮೋಸದ ಮುನ್ನವೇ ಸಿಗುವ ಮುನ್ಸೂಚನೆಗಳು

ರಾಮಾಯಣದಲ್ಲಿನ ಸೀತಾಪಹರಣ ಪ್ರಸಂಗದ ನೆನಪು ಮಾಡಿಕೊಳ್ಳೋಣ. ಬಂಗಾರದ ಜಿಂಕೆ ಎನ್ನುವುದು ಇರಲು ಸಾಧ್ಯವಿಲ್ಲ. ಇದರಲ್ಲಿ ಏನೋ ಮೋಸವಿದೆ ಎಂದು ಸೀತೆಗೆ ಏಕೆ ಅನಿಸಲಿಲ್ಲ? ಅವಳು ಒಬ್ಬ ರಾಜನ ಮಗಳು. ಅವಳಿಗೆ ಎಲ್ಲ ವಿದ್ಯಾಭ್ಯಾಸ ದೊರಕಿತ್ತು. ಆದರೆ ಒಂದು ಕ್ಷಣ ವಿಚಾರ ಮಾಡದೇ ಜಿಂಕೆಯ ಮೇಲೆ ಮೋಹ ಪಟ್ಟಳು. ರಾಮನಿಗೆ ಅದನ್ನು ಹಿಡಿದು ತರಲು ಕೇಳಿದಳು. ರಾಮ ದೈವಾಂಶ ಸಂಭೂತನಲ್ಲವೇ? ಅವನಿಗೆ ಇದು ಮೋಸ ಎನ್ನುವುದು ಗೊತ್ತಾಗಿರಲಿಕ್ಕೂ ಸಾಕು. ಅವನು  ತನ್ನ ಪತ್ನಿಗೆ 'ಸಾಕು ಸುಮ್ಮನಿರು' ಅಥವಾ  'ಮುಂದೆ ನೋಡೋಣ' ಎಂದು ಹೇಳಿದ್ದರೆ ಸಾಕಾಗಿತ್ತು. ಅಸಮಾಧಾನ ಮುಗಿದ ನಂತರ ಬಂಗಾರದ ಜಿಂಕೆಯ ಮರ್ಮ ಸೀತೆಗೆ ಅರಿವಾಗುತಿತ್ತೇನೋ? ಆದರೆ, ಒಂದು ಕೈ ನೋಡೇ ಬಿಡೋಣ ಎಂದು ಬಿಲ್ಲನ್ನು ಹಿಡಿದು ರಾಮ ಹೊರಟ. ಅವನು ಎಷ್ಟು ಹೊತ್ತಾದರೂ ಬರದಿದ್ದಾಗ ,  ಸೀತೆಗೆ, ತನ್ನ ಗಂಡ ಪರಾಕ್ರಮಿ ಎಂದು ಗೊತ್ತಿದ್ದರೂ ಚಿಂತೆಯಾಯಿತು. ಲಕ್ಷ್ಮಣನಿಗೆ ನೋಡಿಕೊಂಡು ಬಾ ಎಂದು ಗಂಟು ಬಿದ್ದಳು. ಲಕ್ಷ್ಮಣ ಏನು ಸುಮ್ಮನೆ ಹೋಗಲಿಲ್ಲ. ಯಾವುದೊ ಮೋಸದ ಜಾಡು ಇಲ್ಲಿ ಇರಬಹುದು ಎಂದು ಊಹಿಸಿ ಒಂದು ಗೆರೆಯನ್ನು ಗೀಚಿ (ಲಕ್ಷ್ಮಣ ರೇಖೆ), ಯಾವುದೇ ಕಾರಣಕ್ಕೂ ಅದನ್ನು ದಾಟಿ ಬರದಂತೆ ತನ್ನ ಅತ್ತಿಗೆಗೆ ತಿಳಿಸಿಯೇ ಹೊರಟ. ಆದರೆ ಅದನ್ನು ಕೂಡ ಸೀತೆ ದಾಟಿ ಬಂದ ಮೇಲೆಯಲ್ಲವೇ ಅವಘಡ ಸಂಭವಿಸಿದ್ದು. ಮೋಸದ ಜಾಡು ಸಾಕಷ್ಟು ಮುನ್ಸೂಚನೆಗಳನ್ನು ನೀಡುತ್ತಾ ಹೋಗಿತ್ತು. ಪ್ರತಿಯೊಂದು ಹಂತದಲ್ಲೂ ಹಿಂದೆ ಸರಿಯುವ ಅವಕಾಶ ಇತ್ತು. ಆದರೆ ಅವುಗಳನ್ನೆಲ್ಲ ಕಡೆಗಣಿಸಿದಾಗ ನಡೆದದ್ದು ಅನಾಹುತ. ಹೌದು ಸ್ವಾಮಿ, ಇದು ಆಗದಿದ್ದರೆ ರಾಮಾಯಣ ಕಥೆ ಹೇಗೆ ಮುಂದೆ ಹೋಗುತಿತ್ತು ಎನ್ನುವಿರಾ? ಆಗಬಾರದ್ದೆಲ್ಲ ಒಂದಾದ ನಂತರ ಆಗುತ್ತಾ ಹೋದರೆ 'ಯಾರಿಗೆ ಬೇಕಿತ್ತು ಈ ರಾಮಾಯಣ' ಎಂದು ನಾವು ಆಗಾಗ ಹೇಳುವಿದಿಲ್ಲವೇ? ಅದು ಇದಕ್ಕೇನೋ?


ರಾಮಾಯಣದ ಮಾತು ಬಿಡಿ. ನಮಗೆ ಆಗುವ ದಿನ ನಿತ್ಯದ ಸಣ್ಣ ಪುಟ್ಟ ಮೋಸಗಳ ಬಗ್ಗೆ ವಿಚಾರ ಮಾಡಿ ನೋಡೋಣ. ಇನ್ನೂ ಚೆನ್ನಾಗಿ ಪರಿಚಯವಿರದ ಸ್ನೇಹಿತನೊಬ್ಬ ಸ್ವಲ್ಪ ಹಣ ಕೇಳುತ್ತಾನೆ. ಬೇರಾರು ನೆನಪಾಗದೆ ನೀವೇ ಏಕೆ ಅವನಿಗೆ ನೆನಪಾದೀರಿ ಎಂದು ನೀವು ವಿಚಾರ ಮಾಡದೇ ನೀವು ಅವನಿಗೆ ಹಣ ನೀಡಿದರೆ, ಅಲ್ಲಿ ನೀವು ಸಹಾಯ ಮಾಡಿದ್ದಕ್ಕಿಂತ ಪಾಠ ಕಲಿಯುವ ಸಂಭವವೇ ಹೆಚ್ಚು. ಸಾಕಷ್ಟು ಅನುಭಗಳಾದ ಮೇಲೆ ನಾನು ಅಂಥವರಿಗೆ ಕೆಲವು ಪ್ರಶ್ನೆಗಳನ್ನು ಕೇಳುತ್ತೇನೆ. ಅವನಿಗೆ ಹಣದ ಅವಶ್ಯಕತೆ ಹೇಗಾಯಿತು? ಅವನು ಅಂತಹ ಪರಿಸ್ಥಿತಿಗೆ ಬರುತ್ತಿರುವುದು ಇದೆ ಮೊದಲೋ, ಅಲ್ಲವಾದಲ್ಲಿ ಅವನು ಏಕೆ ಅದಕ್ಕೆ ತಯಾರಿ ಮಾಡಿಕೊಂಡಿರಲಿಲ್ಲ? ಅವನು ಕೇಳಿದ ಹಣಕ್ಕಿಂತ ಕಡಿಮೆ ಹಣ ಕೊಟ್ಟರೆ ಸಾಕಾಗುತ್ತದೋ? ಅಷ್ಟರಲ್ಲಿ ಅವನ ನಿಜ ಕಾರಣ ನನಗೆ ಅರಿವಾಗುತ್ತದೆ ಮತ್ತು ಅದು ನನಗೆ ತಿಳಿದದ್ದು ಅವನಿಗೂ ಗೊತ್ತಾಗುತ್ತದೆ. ಕೊನೆ ಎಂಬಂತೆ ನಾನು ಕೇಳುವುದು, ಯಾವಾಗ ವಾಪಸ್ಸು ನೀಡುತ್ತೀಯ ಮತ್ತು ಅದಕ್ಕೆ ನಿನಗೆ ಹೇಗೆ ಹಣ ಸಿಗುತ್ತದೆ? ಅಷ್ಟರಲ್ಲಿ ಆ ಹಣ ವಾಪಸ್ಸು ಬರುತ್ತೋ, ಇಲ್ಲವೋ ಎನ್ನುವ ಅಂದಾಜು ನನಗೆ ಸಿಕ್ಕಿರುತ್ತದೆ.


ವಂಚನೆ ದೊಡ್ಡದಾದಷ್ಟೂ ಮುನ್ಸೂಚನೆಗಳು ಅಧಿಕವಾಗಿಯೇ ಇರುತ್ತವೆ. ಆದರೆ ತಿಳಿದುಕೊಳ್ಳುವ ಜಾಣ್ಮೆ ನಮಗಿರಬೇಕಷ್ಟೆ. ನಾವು ಮಾಡಬೇಕಾದ್ದು ಇಷ್ಟೇ. ಮೊದಲನೆಯದು ವಂಚಕರು ಉಂಟು ಮಾಡುವ ಭ್ರಮೆಯಿಂದ ಹೊರ ಬಂದು ಸತ್ಯಾಸತ್ಯತೆಯ ಬಗ್ಗೆ ತಿಳಿದುಕೊಳ್ಳುವುದು. ನಂತರ ಅವರು  ನಿರೀಕ್ಷೆ ಮಾಡಿದೆ ಇರದಂತಹ ಕೆಲವು ಪ್ರಶ್ನೆಗಳನ್ನು ಕೇಳಿ ಅವರನ್ನು ತಬ್ಬಿಬ್ಬು ಮಾಡುವುದು. ಆಗಲೂ ಸ್ಪಷ್ಟತೆ ದೊರೆಯದಿದ್ದರೆ, ಸ್ವಲ್ಪ ಕಾಲಾವಕಾಶ ಕೇಳಿ, ಇನ್ನೊಮ್ಮೆ ಅವರನ್ನು ಭೇಟಿಯಾಗುವುದು. ಮತ್ತೆ ಮತ್ತೆ ಭ್ರಮಾಲೋಕ ಸೃಷ್ಟಿಸುವುದು ಎಂತಹ ವಂಚಕನಿಗಾದರು ಕಷ್ಟದ ಕೆಲಸವೇ ಸರಿ. ನೀವು ಅಂತಹ ವೇಳೆಯಲ್ಲಿ, ನಿಮ್ಮ ಪ್ರಜ್ಞಾವಂತ ಸ್ನೇಹಿತರನ್ನು ಜೊತೆಗೂಡಿಸಿಕೊಂಡು ಆಲೋಚಿಸಿದಲ್ಲಿ ಇನ್ನೊಂದು ರಾಮಾಯಣಕ್ಕೆ ಅವಕಾಶವೇ ಇರದು.


ನಾನು ಹಿಂದೆ ಮನೆ ಕಟ್ಟುವಾಗ, ಅನೇಕ ಮೋಸಗಾರರ ಮತ್ತು ಅವರ ಕಾರ್ಯ ವೈಖರಿಗಳ ಪರಿಚಯವಾದವು. ಇವತ್ತಿಗೆ ಆ ತರಹದ ವಂಚನೆಗಳನ್ನು ಸುಲಭದಲ್ಲಿ ನಿಭಾಯಿಸುತ್ತೇನೆ. ಆದರೆ ಬೆಂಗಳೂರಿನಲ್ಲಿ ಜೀವಿಸುತ್ತಿರುವ ನನಗೆ, ಇನ್ನೂ ದೊಡ್ಡ ಮಟ್ಟದ ವಂಚನೆ ಮಾಡುವ ಮತ್ತು ಅದರಲ್ಲಿ ಸಾಕಷ್ಟು ಪಳಗಿದ ವ್ಯಕ್ತಿಗಳ ಪಟ್ಟುಗಳು ಅನುಭವಕ್ಕೆ ಬರುತ್ತಿವೆ. ಈ ವಿಷಯ ನನಗೆ ಬೇಡದಿದ್ದರೂ ಅಂಥವರ ನಡುವೆ ಬದುಕಬೇಕಾದ ಮತ್ತು ಅವರಿಂದ ನಮ್ಮನ್ನು ರಕ್ಷಿಸಿಕೊಳ್ಳುವ ಅನಿವಾರ್ಯತೆ, ಹೊಸ ಪಾಠಗಳನ್ನು ಕಲಿಸುತ್ತಿವೆ. ಅವರ ಬಗ್ಗೆ ಮುಂದೆ ಯಾವಾಗಲಾದರೂ ಬರೆಯುತ್ತೇನೆ.

ಕುರುಡರ ಜಗತ್ತಿನಲ್ಲಿ ಒಬ್ಬನಾಗಿ ಹೋಗದೆ

H. G. Wells ಅವರ ಒಂದು ಕಥೆಯ ಹೆಸರು "The Country of the Blind". ಈ ಕಥೆಯಲ್ಲಿ ಪರ್ವತಾರೋಹಿಯೊಬ್ಬ ಅದುವರೆಗೆ ಯಾರು ಹತ್ತಿರದ ಪರ್ವತನ್ನು ಹತ್ತುತ್ತಿರುವಾಗ ಜಾರಿ, ಪರ್ವತದ ಆಚೆ ಇರುವ ಇರುವ ಕಣಿವೆ ಒಂದಕ್ಕೆ ಉರುಳಿಕೊಂಡು ತಲುಪುತ್ತಾನೆ. ಮೈ ಕೈ ಸೋತು ತುಂಬಾ ದಣಿದಿದ್ದ ಅವನಿಗೆ ವಾಪಸ್ಸು ಹೋಗುವ ದಾರಿ ಗೊತ್ತಾಗುವುದಿಲ್ಲ. ಆದರೆ ಆ ಕಣಿವೆಯೊಳಗೆ ಒಂದು ಮನುಷ್ಯ ಜನಾಂಗ ವಾಸವಿರುವುದು ಗೊತ್ತಾಗುತ್ತದೆ. ಅವರನ್ನು ಸೇರಿಕೊಂಡಾಗ ಅವನಿಗೆ ತಿಳಿಯುವುದು ಅಲ್ಲಿರುವವರೆಲ್ಲ ಕುರುಡರು ಎಂದು. ಯಾವುದೊ ಅನುವಂಶೀಯ ರೋಗದಿಂದ, ಅಲ್ಲಿರುವ ಕುರುಡರ ಮಕ್ಕಳೆಲ್ಲ ಕುರುಡರಾಗಿಯೇ ಹುಟ್ಟಿರುತ್ತಾರೆ. ಹೀಗೆ ಅದು ವಂಶ ಪಾರಂಪರ್ಯವಾಗಿ ಬೆಳೆದು ಅದು ಕುರುಡರ ಜಗತ್ತೇ ಆಗಿರುತ್ತದೆ. ಆದರೆ ಅವರಿಗೆ ಉಳಿದ ಇಂದ್ರಿಯಗಳು ಹೆಚ್ಚಿನ ತೀಕ್ಷ್ಣತೆ ಪಡೆದು, ಯಾವುದೇ ಸಮಸ್ಯೆಯಿಲ್ಲದೆ ಒಳ್ಳೆಯ ಬದುಕನ್ನು ಬದುಕುತ್ತಿರುತ್ತಾರೆ. ಆದರೆ ಇವರಿಗೆ ಹೊರಗಿನ ಸಂಪರ್ಕ ಇರದೇ ಮತ್ತು ಹೊರಗಿನ ಜಗತ್ತಿಗೆ ಈ ತರಹದ ಒಂದು ಸ್ಥಳ ಇರುವುದು ಗೊತ್ತೇ ಇರುವುದಿಲ್ಲ. ಈ ಸ್ಥಳಕ್ಕೆ ಬಂದ ಆಗಂತುಕನಿಗೆ ಒಂದು ಕ್ಷಣ ಆಶ್ಚರ್ಯ ಮತ್ತು ಸಂತೋಷ ಒಟ್ಟಿಗೆ ಆಗುತ್ತವೆ. ಕುರುಡರ ಜಗತ್ತಿಗೆ ಒಕ್ಕಣ್ಣಿನ ರಾಜ ಎಂಬ ನಾಣ್ಣುಡಿಯಂತೆ ತಾನು ಅವರಿಗೆ ಹೊಸ ವಿಷಯಗಳನ್ನು ಕಲಿಸುತ್ತ ಅವರಿಗೆ ನಾಯಕನಾಗಬಹುದು ಎನ್ನುವ ಲೆಕ್ಕಾಚಾರದಲ್ಲಿ. ಆದರೆ ಕಣ್ಣು ಎನ್ನುವ ಇಂದ್ರಿಯ ಮತ್ತು ಅದರಿಂದ ಕಾಣಿಸುವ ನೋಟ ಏನು ಎಂಬುದು ಅರಿವಿರದ ಅವರಾರಿಗೂ ಈತನ ಮಾತುಗಳ ಮೇಲೆ ನಂಬಿಕೆ ಬರುವುದಿಲ್ಲ. ಈತನಿಗೆ ಏನೋ ಭ್ರಮೆ ಎಂದು ಕನಿಕರ ತೋರಿಸುತ್ತಾರೆ. ಬೇರೆ ದಾರಿ ಇರದೇ, ಅವರ ಜೀವನಕ್ಕೆ ಹೊಂದಿಕೊಳ್ಳುವ ಪರಿಸ್ಥಿತಿ ಆಗಂತುಕನದು. ಅವನಿಗೆ ಅಲ್ಲಿಯ ಯುವತಿ ಒಬ್ಬಳ  ಮೇಲೆ ಪ್ರೇಮಾಂಕುರವಾಗುತ್ತದೆ. ಅವಳ ನಂಬಿಕೆ ಗಳಿಸಿಕೊಂಡ ಮೇಲೆ, ಅವಳಿಗೆ ತಾನು ಕಾಣುತ್ತಿರವ ನೋಟ ಎಷ್ಟು ಮಹತ್ತರದ್ದು ಎಂದು ಮನವರಿಕೆ ಮಾಡಿ ಕೊಡುವ ಪ್ರಯತ್ನ ಮಾಡುತ್ತಾನೆ. ಆದರೆ ಅದು ಇನ್ನಷ್ಟು ಗೊಂದಲ ಉಂಟು ಮಾಡಿ ಅಲ್ಲಿರುವರೆಲ್ಲ ಇವನಿಗೆ ಅಲ್ಪ ಪ್ರಮಾಣದ ಹುಚ್ಚು ಹಿಡಿದಿದೆ ಎನ್ನುವ ತೀರ್ಮಾನಕ್ಕೆ ಬರುತ್ತಾರೆ. ಅಲ್ಲಿಯ ವೈದ್ಯನೊಬ್ಬ ಅದಕ್ಕೆಲ್ಲ ಕಾರಣ ಇವನಿಗಿರುವ ಕಣ್ಣುಗಳೇ  ಮತ್ತು ಅವನ್ನು ತೆಗೆದು ಹಾಕಿದರೆ ಎಲ್ಲ ಸರಿ ಹೋಗುತ್ತದೆ ಎಂದು ತೀರ್ಮಾನಿಸುತ್ತಾನೆ. ಪ್ರೀತಿಯ ಸೆಳೆತಕ್ಕೆ ಸಿಕ್ಕಿದ ಆಗಂತುಕ ಒಲ್ಲದ ಮನಸ್ಸಿನಿಂದಲೇ  ಅದಕ್ಕೆ ಒಪ್ಪಿಗೆ ನೀಡುತ್ತಾನೆ. ಆದರೆ ಅವನ ಕಣ್ಣುಗಳನ್ನು ಕೀಳುವ ಮುನ್ನವೇ, ಮರುದಿನ ಅವನು ನೋಡುವ ಸೂರ್ಯೋದಯದ ಕಿರಣಗಳು ಅವನ ಮನಸ್ಸನ್ನು ಬದಲಾಯಿಸುತ್ತವೆ. ಕುರುಡರ ಕಣಿವೆಯನ್ನು ಹಿಂದೆ ಬಿಟ್ಟು ಮತ್ತೆ ಪರ್ವತ ಹತ್ತಿ ಬೆಳಕಿನ ನಾಡಿಗೆ ದಾರಿ ಹುಡುಕುತ್ತ ಮುಂದೆ ಸಾಗುತ್ತಾನೆ.


ಈ ಕಥೆಯಲ್ಲಿನ ಕಣ್ಣನ್ನು ಒಂದು ಅಭಿಪ್ರಾಯ ಎಂದುಕೊಂಡರೆ, ಈ ಕಥೆಯ ಪ್ರಮಾಣದಲ್ಲಿ ಅಲ್ಲದಿದ್ದರೂ, ನಾವು ನೀವುಗಳು ಈ ತರಹದ ಪರಿಸ್ಥಿಯಲ್ಲಿ ಸಿಕ್ಕಿ ಬಿದ್ದ ನೆನಪಾಗುದಿಲ್ಲವೇ? ಯಾವುದೊ ಭ್ರಮೆಯಲ್ಲಿ ಸಿಕ್ಕಿ ಬಿದ್ದ ಒಂದು ಸಮಾಜದ ಎಲ್ಲ ಜನರು ಒಂದೇ ತರಹ ವರ್ತಿಸುವುದು ಸಾಮಾನ್ಯ ವಿಷಯವೇ. ಅವರಿಗೆ ಅನುಭವಕ್ಕೆ ಬಂದದ್ದು ಅಷ್ಟೇ. ಸಮುದ್ರವನ್ನು ನೋಡದ ಭಾವಿಯ ಕಪ್ಪೆ ತನ್ನದೇ ದೊಡ್ಡ ಜಗತ್ತು ಅಂದ ಹಾಗೆ. ಪರಿಸ್ಥಿತಿಗೆ ಕಟ್ಟು ಬಿದ್ದು ಅಲ್ಲಿಯವರಲ್ಲಿ ಒಂದಾಗಿ ಹೋದ ಸಾಕಷ್ಟು ಜನರನ್ನು ನಾನು ನೋಡಿದ್ದೇನೆ. ಹಾಗೆಯೇ ಲಂಕೆಯ ರಾಕ್ಷಸರ ನಡುವೆ ತಾನು ಬದಲಾಗದೆ ಆದರೆ ಏನು ಮಾಡಲಾಗದೆ ಅಸಹಾಯಕನಾದ ವಿಭೀಷಣನ ತರಹದವರೂ ಇದ್ದಾರೆ. ಆದರೆ ಅಲ್ಲಿಂದ ಬೇಗ ಹೊರ ಬಂದಷ್ಟು ಜಾಣತನ ಎನ್ನುವುದು ನನ್ನ ಅಭಿಪ್ರಾಯ. ಅಂದ ಹಾಗೆ ನಿಮ್ಮ ಸ್ನೇಹಿತರಾರು? ಅವರೆಲ್ಲ ಒಂದೇ ತರಹ ವಾದಿಸುವವರಲ್ಲ ತಾನೇ?

Saturday, December 19, 2020

ರೈತರ ಆದಾಯ ದ್ವಿಗುಣಗೊಳಿಸುವ ಮೊದಲು

ರೈತರ ಆದಾಯ ದ್ವಿಗುಣಗೊಳಿಸುವ ಯೋಜನೆ ಒಂದು ಒಳ್ಳೆಯ ಉದ್ದೇಶ. ಆದರೆ ಕೆಲವು ವಾಸ್ತವ ಸಂಗತಿಗಳನ್ನು ನಾವು ಗಮನಿಸುವುದು ಉತ್ತಮ. ತುಂಬಾ ಸರಳವಾಗಿ ವಿಚಾರ ಮಾಡಿದರೆ, ರೈತಣ್ಣನ ಆದಾಯ ದ್ವಿಗುಣವಾಗಲು ಆತ ಮಾರುವ ಕೃಷಿ ಉತ್ಪನ್ನಗಳ ಬೆಲೆ ದುಪ್ಪಟ್ಟಾಗಬೇಕು. ಇಲ್ಲವೇ ಆತನ ಖರ್ಚುಗಳು ಅರ್ಧಕ್ಕೆ ಕಡಿಮೆಯಾಗಬೇಕು. ಇಲ್ಲವೇ ಇವೆರಡು ಬೇರೆ ಬೇರೆ ಅನುಪಾತದಲ್ಲಿ ಬದಲಾಗಬೇಕು.


ಮೊದಲೆನಯದು, ಕೃಷಿ ಉತ್ಪನ್ನಗಳ ಬೆಲೆ ಹೆಚ್ಚಾಗಬೇಕೆಂದರೆ ಅದನ್ನು ಕೊಳ್ಳುವ ಗ್ರಾಹಕನಿಗೆ ಆ ಬೆಲೆಯನ್ನು ಕೊಡುವ ಸಾಮರ್ಥ್ಯವಿರಬೇಕು. ನಾವು ತರಕಾರಿ ಕೊಳ್ಳಲು ಹೋದಾಗ, ತುಂಬಾ ಹೆಚ್ಚಿನ ಬೆಲೆಯ ತರಕಾರಿಯನ್ನು ಕೊಂಡುಕೊಳ್ಳದೆ, ನಮಗೆ ಸರಿ ಅನ್ನಿಸುವ ಕಡಿಮೆ ಬೆಲೆಯ ತರಕಾರಿಯನ್ನು ಖರೀದಿ ಮಾಡುವುದಿಲ್ಲವೇ? ಅಂದರೆ ಬೆಲೆ ಹೆಚ್ಚಿಗೆ ಬಂದರೂ, ಅದನ್ನು ಖರಿಸದಿಸುವ ಗ್ರಾಹಕರು ಕಡಿಮೆ ಆಗಿ ಮತ್ತೆ ಗ್ರಾಹಕ ಯಾವ ಬೆಲೆ ಕೊಡಲು ಸಾಧ್ಯವೋ ಅಲ್ಲಿಗೆ ಅಕ್ಕಿ-ಬೆಳೆಯಾಗಲಿ, ಹಣ್ಣು-ತರಕಾರಿಯಾಗಲಿ, ಎಲ್ಲ ಕೃಷಿ ಉತ್ಪನ್ನಗಳ ಬೆಲೆಗಳು ಬಂದು ನಿಲ್ಲುತ್ತವೆ. ಬೆಲೆ ಕಡಿಮೆ ಆಗದಿದ್ದರೆ, ಹೆಚ್ಚಿನ ಬೆಲೆಯ ಉತ್ಪನ್ನಗಳು ಕಡಿಮೆ ಮಟ್ಟದಲ್ಲಿ ಖರ್ಚಾಗಿ, ಕಡಿಮೆ ಬೆಲೆಯ ಉತ್ಪನ್ನಗಳು ಜಾಸ್ತಿ ಎನ್ನುವಷ್ಟು ಖರ್ಚಾಗುತ್ತವೆ. ಭಾರತ ಇನ್ನೂ ಬಡ ದೇಶ ಅಲ್ಲವೇ. ಇಲ್ಲಿನ ಹೆಚ್ಚಿನ ಜನರ ಆದಾಯ ಅಷ್ಟಕಷ್ಟೇ ಎನ್ನುವಂತಿದ್ದರೆ ಅವರು ರೈತನಿಗೆ ದುಪ್ಪಟ್ಟು ಬೆಲೆ ಹೇಗೆ ಕೊಟ್ಟಾರು? ಇದು ಬರಿ ಕೃಷಿ ಉತ್ಪನ್ನಗಳಿಗೆ ಸೀಮಿತ ಅಲ್ಲ. ಮಾರುಕಟ್ಟೆಯಲ್ಲಿನ ಎಲ್ಲ ವಸ್ತುಗಳ ಬೆಲೆ ನಿರ್ಧರಿತವಾಗುವುದು ಹಾಗೆಯೇ. ಭಾರತದ ಪ್ರಜೆಯ ಸರಾಸರಿ ಆದಾಯ ಹೆಚ್ಚಾಗದ ಹೊರತು, ಬರಿ ರೈತನ ಆದಾಯ ಹೆಚ್ಚಾಗುವುದು ಹೇಗೆ ಸಾಧ್ಯ?


ಇನ್ನೂ ರೈತನ ಖರ್ಚುಗಳ ಕಡೆಗೆ ಗಮನ ಹರಿಸೋಣ. ಅವನು ಕೊಂಡುಕೊಳ್ಳುವ ಬೀಜ, ಗೊಬ್ಬರ, ಕ್ರಿಮಿನಾಶಕ ಇತರೆ ವಸ್ತುಗಳ ಬೆಲೆಯನ್ನು ಅರ್ಧಕ್ಕೆ ಇಳಿಸಲು ಸಾಧ್ಯವೇ? ಅವನ ಹೊಲಗಳಲ್ಲಿ ದುಡಿಯುವ ಕೂಲಿ ಕಾರ್ಮಿಕರ ದಿನಗೂಲಿಯನ್ನು ಅರ್ಧಕ್ಕೆ ಇಳಿಸಲು ಸಾಧ್ಯವೇ? ಹಾಗಾದಲ್ಲಿ, ಅವರು ಹೊಲಗಳಿಗೆ ಕೂಲಿ ಹೋಗುವುದು ಬಿಟ್ಟು ಇತರೆ ಕೆಲಸಗಳಿಗೆ ವಲಸೆ ಹೋಗುವುದಿಲ್ಲವೆ? ಈ ಸಮಸ್ಯೆಯನ್ನು ರೈತ ಆಗಲೇ ಅನುಭವಿಸುತ್ತಿಲ್ಲವೇ?


ಆದರೆ, ರೈತ ಬೆಳೆದ ಉತ್ಪನ್ನ ಕೆಡದಂತೆ, ಬೆಲೆ ಬರುವವರೆಗೆ ದಾಸ್ತಾನು ಮಾಡಲು ಸಹಾಯವಾಗುವಂತೆ ಉಗ್ರಾಣಗಳು ಇದ್ದರೂ, ಅವುಗಳ ಪ್ರಮಾಣ ಇನ್ನಷ್ಟು ಹೆಚ್ಚಿಸಬಹುದು. ಅವನ ಪಂಪ್ಸೆಟ್ ಗೆ ಉಚಿತ ಅಥವಾ ರಿಯಾಯಿತಿ ದರದ ವಿದ್ಯುತ್ ನೀಡುವುದು ಮುಂದುವರೆಸಬಹುದು. ಬೆಂಬಲ ಬೆಲೆ, ಕನಿಷ್ಟ ಬೆಲೆ, ಇವುಗಳು ರೈತ ಬದುಕುಳಿಯುವುದು ಸಾಧ್ಯವಾಗುವಂತೆ ಮಾಡುತ್ತವೆ ಹೊರತು ಅವನ ಆದಾಯ ದುಪ್ಪಟ್ಟಾಗಲು ಶೀಘ್ರದಲ್ಲಿ ಹೇಗೆ ಸಾಧ್ಯ?


ಇಷ್ಟಕ್ಕೂ ದೊಡ್ಡ ಮತ್ತು ಮಧ್ಯಮ ರೈತರು ಉಪವಾಸವೇನು ಇಲ್ಲ. ಅವರು ಆರ್ಥಿಕವಾಗಿ ಹೆಚ್ಚೇನು ಹಿಂದೆ ಬಿದ್ದಿಲ್ಲ. ಆದರೆ ಅರ್ಧಕ್ಕೂ ಹೆಚ್ಚು ಸಣ್ಣ ಪ್ರಮಾಣದ ರೈತರೇ ಇದ್ದಾರಲ್ಲ. ಅವರಿಗೆ ಇರುವುದೇ ಎರಡು-ಮೂರು ಎಕರೆ ಜಮೀನು. ಇವರಿಗೆ ಸಹಾಯದ ಅವಶ್ಯಕತೆ ಇದ್ದರೂ, ಉಳಿದ ಸಮಾಜವನ್ನು ಮೇಲಕ್ಕೆತ್ತದ ಹೊರತು ಸಣ್ಣ ರೈತರನ್ನಷ್ಟೇ ಉದ್ಧಾರ ಮಾಡುವುದು ಹೇಗೆ ಸಾಧ್ಯ?


ಯಾವುದೇ ಭೂಮಿ ಇಲ್ಲದ, ಸಾಕಷ್ಟು ಜನ ಕೂಲಿ ಕಾರ್ಮಿಕರು ದಿನಗೂಲಿಯಲ್ಲಿ ಬದುಕುತ್ತಿದ್ದಾರಲ್ಲ. ಅವರೇಕೆ ನಮಗೆ ನೆನಪಾಗುತ್ತಿಲ್ಲ? ಅವರೆಲ್ಲ ಮುಂದೆ ಬರದೇ, ಹೆಚ್ಚಿನ ಬೆಲೆ ಕೊಟ್ಟು ರೈತನನ್ನು ಉದ್ಧಾರ ಮಾಡಲು ಹೇಗೆ ಸಾಧ್ಯ? ಕೃತಕವಾಗಿ ಬೆಲೆ ಹೆಚ್ಚಿಸಿ, ಬರೀ ಮೇಲ್ವರ್ಗದವರೇ ಎಲ್ಲ ವಸ್ತು ಕೊಂಡುಕೊಂಡರೆ, ಕೂಲಿ, ಕಾರ್ಮಿಕರು ಉಣ್ಣಬೇಕಾದದ್ದು ಏನು?


ನಾನು ಯಾವ ಸರ್ಕಾರದ ಪರವಾಗಿಯೂ ಅಥವಾ ವಿರುದ್ಧವಾಗಿಯೂ ಧ್ವನಿ ಎತ್ತುತ್ತಿಲ್ಲ. ಆದರೆ ನಮ್ಮ ಸಮಾಜವನ್ನು ರಾಜಕಾರಣಿಗಳು, ಅಧಿಕಾರಿಗಳು ಮತ್ತು ಸಾಮಾನ್ಯ ಜನರು ಅರ್ಥ ಮಾಡಿಕೊಳ್ಳುವ ರೀತಿ ತುಂಬಾ ಬೇರೆ ಎನಿಸಿತು. ಹಾಗಾಗಿ  ಕೆಲವು ಮೂಲಭೂತ ಪ್ರಶ್ನೆಗಳನ್ನು ಹಾಕಿಕೊಂಡು, ನಿಮ್ಮ ಹತ್ತಿರ ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದೇನೆ.

Friday, December 18, 2020

ಬೆಂಗಳೂರು ಹೊರವಯಲದಲ್ಲಿನ ವೈವಿಧ್ಯಮಯ ಪ್ರಾಣಿ-ಪಕ್ಷಿ ಸಂಕುಲ

ಬೆಂಗಳೂರು ನಗರ ಕಾಂಕ್ರೀಟ್ ಕಾಡಾದರೆ, ಅದರ ಹೊರ ವಲಯ ಮಾತ್ರ ತನ್ನ ನೈಸರ್ಗಿಕ ಪರಿಸರವನ್ನು ಇನ್ನು ಕಳೆದುಕೊಂಡಿಲ್ಲ. ನಾವು ಬೆಂಗಳೂರು ಹೊರವಯಲದಲ್ಲಿ ಮನೆ ಕಟ್ಟಿ ವಾಸಕ್ಕೆ ಬಂದು ಆರು ವರ್ಷಗಳಾಗುತ್ತಾ ಬಂತು.  ಮೆಜೆಸ್ಟಿಕ್ ನಿಂದ ಸುಮಾರು ೧೮  ಕಿ.ಮೀ. ಹಾಗು ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಸುಮಾರು ನಾಲ್ಕು ಕಿ.ಮೀ. ದೂರದಲ್ಲಿದೆ ನಮ್ಮ ಮನೆ. ಇಲ್ಲಿ ಹೊಸದಾಗಿ ಬಂದಾಗ, ಮನೆಯ ಮುಂದಿನ ಸಂಪಿಗೆ ಮರದಲ್ಲಿ, ಸೂರ್ಯೋದಯಕ್ಕೆ ಕೋಗಿಲೆ ಕೂಗಿದರೆ, ರಾತ್ರಿ ಧಾಳಿ ಇಡುವ ಗೂಬೆಗಳ ಬಗ್ಗೆ ಹಿಂದೆ ಲೇಖನ ಬರೆದಿದ್ದೆ. (Link: http://booksmarketsandplaces.blogspot.com/2015/07/blog-post_29.html)


ಇಲ್ಲಿ ಕೇವಲ ಪಕ್ಷಿಗಳಷ್ಟೇ ಇಲ್ಲ, ನಾವಿದ್ದರೂ ನಮ್ಮನ್ನ್ಯಾಕೆ ಗಮನಿಸುತ್ತಿಲ್ಲ ಎಂದು ಪ್ರಾಣಿ, ಸರೀಸೃಪ ಜಗತ್ತು ನನ್ನ ಕಣ್ಣಿಗೆ ಬೀಳಲಾರಂಭಿಸಿತು. ನಮ್ಮ ಬಡಾವಣೆಯಲ್ಲಿ ಹಾವುಗಳು ಸುತ್ತಾಡುವುದನ್ನು, ನಾನು ಸೇರಿದಂತೆ ಇಲ್ಲಿಯ ನಿವಾಸಿಗಳೆಲ್ಲ ಗಮನಿಸಿದ್ದರು. ಅವು ವಿಷಪೂರಿತ ನಾಗರಹಾವು ಮತ್ತು ವೈಪರ್ ಹಾವುಗಳು. ಯಾರಿಗೂ ತೊಂದರೆ ಕೊಡದೆ ಅಡ್ಡಾಡಿಕೊಂಡಿದ್ದವು. (ಅಥವಾ ಅವುಗಳು ಅಡ್ಡಾಡಿಕೊಂಡಿದ್ದ ಜಾಗದಲ್ಲಿ ನಾವುಗಳು ಮನೆ ಕಟ್ಟಿಕೊಂಡಿದ್ದೆವು). ಒಂದು ದಿನ ಬೆಳಗ್ಗೆ, ಮರಿ ಅಲ್ಲದ ಆದರೆ ಇನ್ನು ದೊಡ್ಡದಾಗದ, ಸುಮಾರು ಎರಡು-ಮೂರು ಅಡಿ ಉದ್ದದ ನಾಗರಹಾವು ನಮ್ಮ ಮನೆಯ ಮುಂಬಾಗಿಲಿನ ಮುಂದೆ ಬಂದು ಕುಳಿತಿತ್ತು. ನಮ್ಮ ಅವಸರಕ್ಕೆ ಹಾವು ಹಿಡಿಯುವವರಾರು ನನ್ನ ಫೋನಿಗೆ ಸಿಗಲಿಲ್ಲ. ಏನು ಮಾಡುವುದು ಎಂದು ವಿಚಾರ ಮಾಡುತ್ತಿರುವಾಗ, ಆ ಹಾವು, ಮನೆಯ ಕಾಂಪೌಂಡ್ ನಲ್ಲಿದ್ದ ಒಂದು ಪೈಪ್ ನೊಳಗೆ ಸೇರಿಕೊಂಡಿತು. ತಡ ಮಾಡದೇ ನಾನು ಪೈಪ್ ನ ಎರಡು ಬದಿಗೂ ಸ್ವಲ್ಪ ಸಡಿಲವಾಗಿ ಪ್ಲಾಸ್ಟಿಕ್ ಚೀಲಗಳನ್ನು ಕಟ್ಟಿಬಿಟ್ಟೆ. ಇದನ್ನು ಊರಾಚೆ ಬಿಟ್ಟು ಬರಲು ಒಬ್ಬರನ್ನು ಸಹಾಯಕ್ಕಾಗಿ ಕರೆದರೆ, ಆ ವ್ಯಕ್ತಿ ಆ ಪೈಪ್ ಅನ್ನು ನನ್ನ ಕೈಗೆ ಕೊಟ್ಟು, ಸುಮ್ಮನೆ ದ್ವಿಚಕ್ರ ವಾಹನದಲ್ಲಿ ಹಿಂದೆ ಬಂದು ಕುಳಿತುಕೊಂಡ. ಸರಿ, ಎಂದು ಅದನ್ನು ತೆಗೆದುಕೊಂಡು ಊರು ದಾಟಿ, ಕಟ್ಟಿದ ಚೀಲಗಳನ್ನು ಬಿಚ್ಚಿ, ಪೈಪ್ ನ್ನು ಮೆತ್ತಗೆ ಅಲ್ಲಾಡಿಸಿದೆ. ಅದರಿಂದ ಹೊರ ಬಂದು, ಸರ ಸರ ಹರಿದು ಮಿಂಚಿನಂತೆ ಮಾಯವಾದ ನಾಗರಾಜ. ಅದರ ವೇಗ ಮತ್ತು ಶಕ್ತಿ ಕಂಡು ಒಂದು ಕ್ಷಣ ರೋಮಾಂಚನ ಆಯಿತು.


ಹಾವಿದ್ದಲ್ಲಿ, ಮುಂಗುಸಿ ಇರಬೇಕು ತಾನೇ. ಅವುಗಳು ಕಣ್ಣಿಗೆ ಬೀಳಲಾರಂಭಿಸಿದವು. ಆದರೆ ಆಶ್ಚರ್ಯ ಎನ್ನುವಂತೆ, ಮನೆ ಪಕ್ಕದ ಖಾಲಿ ಸೈಟುಗಳಲ್ಲಿ, ಒಂದು ಕಾಡು ಮೊಲ, ಟಣ್ಣನೆ ಜಿಗಿದಾಡುತ್ತಿತ್ತು. ಅದನ್ನು ಕಂಡು ಹರ್ಷಗೊಂಡು ಚಿಕ್ಕ ಮಕ್ಕಳು ಅದರ ಹಿಂದೆ ಓಡಿದರು. ಕುತೂಹಲದಿಂದ ಏನು ವಿಷಯ ಎಂದು ನೋಡಲು ಬಂದ ಬೀದಿ ನಾಯಿಗಳು ಅದನ್ನು ಬೆನ್ನಟ್ಟಿದವು. ನಂತರ ಅದು ಈ ಕಡೆಗೆ ಸುಳಿಯಲೇ ಇಲ್ಲ.


ಈ ವರ್ಷ ಲಾಕ್ ಡೌನ್ ಆರಂಭವಾದಾಗ, ಆಫೀಸ್ ಗೆ ಹೋಗುವ ತಾಪತ್ರಯ ಇರಲಿಲ್ಲ. ಹಾಗೆಯೇ ನಗರದ ಕಡೆಗೆ ಹೋಗುವ ಹಾಗೆಯೂ ಇರಲಿಲ್ಲ. ಆದ್ದರಿಂದ ನಮ್ಮ ಬಡಾವಣೆಯಿಂದ ಹಳ್ಳಿಗಳ ಕಡೆಗೆ ಹೋಗುವ ರಸ್ತೆಯ ಕಡೆಗೆ ನಮ್ಮ ವಾಕಿಂಗ್ ಶುರು ಮಾಡಿದೆವು. ಊರಾಚೆಯ ಕೆರೆ ದಾಟಿ ಹೋದರೆ, ಅಲ್ಲಿ ಸಾಲು ಸಾಲು ತೋಟಗಳಿವೆ. ಮಾವು, ಅಡಕೆ, ತೆಂಗಿನ ತೋಟಗಳು. ಸಾಲು ಸಾಲಾಗಿ ತೇಗದ ಮರಗಳನ್ನು ಕೂಡ ಕಾಣಬಹುದು. ಹಾಗೆಯೆ ಕೆಂಪೇಗೌಡ ಬಡಾವಣೆಯ ಕೆಲಸ ಕೂಡ ಅಲ್ಲಲ್ಲಿ ನಡೆದಿದೆ. ಮುಂಜಾನೆ ಮತ್ತು ಸಂಜೆ ಹೊತ್ತಿನಲ್ಲಿ, ನಮ್ಮ ನಡಿಗೆಯ ಸಮಯದಲ್ಲಿ ಅಲ್ಲಿ ನವಿಲುಗಳು ಕಣ್ಣಿಗೆ ಬೀಳಲಾರಂಭಿಸಿದವು. ಹತ್ತಾರಲ್ಲ, ನೂರಾರು ಸಂಖ್ಯೆಯಲ್ಲಿ ಇದ್ದ ಅವುಗಳು ಪ್ರತಿ ದಿನ ಕಣ್ಣಿಗೆ ಬಿದ್ದು, ಅವುಗಳ ಫೋಟೋ ತೆಗೆದು ನಮಗೂ ಸಾಕಾಗಿ ಹೋಯಿತು.


ನಾಲ್ಕು ವರುಷಗಳ ಹಿಂದೆ ಒಂದು ಹನಿ ನೀರು ಇರದಿದ್ದ ಕೆರೆಯಲ್ಲಿ, ಒಳ್ಳೆಯ ಮಳೆಯಿಂದ ನೀರು ಬರಲಾರಂಭಿಸಿತು. ಕಳೆದ ನವೆಂಬರ್ ತಿಂಗಳಲ್ಲಿ ಬಂದ ಮಳೆಗೆ, ಕೆರೆ ತುಂಬಿ ಕೋಡಿ ಬೀಳುವ  ಸ್ಥಿತಿಯಲ್ಲಿದೆ. ಇದುವರೆಗೇ ಕಾಣದಿದ್ದ ಬಾತುಕೋಳಿಗಳು ಎಲ್ಲಿಂದಲೋ ಬಂದು ಸೇರಿಕೊಂಡಿವೆ. ಹಾಗೆ ಮೀನುಗಾರರು ಇಲ್ಲಿ ಬಲೆ ಬೀಸಿ, ದಷ್ಟ ಪುಷ್ಟವಾಗಿ ಬೆಳೆದ ಮೀನುಗಳನ್ನು ಹಿಡಿದುಕೊಂಡು ಹೋಗುತ್ತಾರೆ.   

  

ಆದರೆ ಬೇಸರದ ಸಂಗತಿಯೆಂದರೆ, ಲಾಕ್ ಡೌನ್ ಮುಗಿದ ನಂತರ, ಈ ಹಳ್ಳಿ ರಸ್ತೆಗಳಲ್ಲಿ ಓಡಾಡುವ ವಾಹನಗಳ ಸಂಖ್ಯೆ ಜಾಸ್ತಿಯಾಗಿದೆ. ರಸ್ತೆ ಕಿತ್ತು ಹೋಗಿ, ಧೂಳು ಎದ್ದು, ಅಲ್ಲಿ ಓಡಾಡುವುದು ಕಷ್ಟ ಆಗುತ್ತಿದೆ. ಒಂದು ಮುಂಜಾನೆ ಅಲ್ಲಿ ಬೇಟೆಗಾರರನ್ನು ನೋಡಿದ ಮೇಲೆ, ನವಿಲುಗಳು ಸ್ವಲ್ಪ ಕಡಿಮೆ ಕಾಣಸಿಗುತ್ತಿವೆ. ಹಾಗೆ ಕೆರೆ ನೀರಿಗೆ ಒಂದು ಭಾಗದಲ್ಲಿ ಕಸ, ಕೊಳಚೆ ಸೇರಿಕೊಂಡಿದೆ. ಕೆಂಪೇಗೌಡ ಬಡಾವಣೆಗೆ ಸೇರಿದ ಈ ಜಾಗ, ಅದು ಬೆಳವಣಿಗೆ ಆದಂತೆ ಇಲ್ಲಿನ ಹಸಿರಿನ ಹೊದಿಕೆ ಕಡಿಮೆ ಆಗುತ್ತಿದೆ. ಇನ್ನು ಕೆಟ್ಟು ಹೋಗುವ ಮುನ್ನ, ನೀವು ನಮ್ಮ ಮನೆಗೆ ಯಾವುದಾದರೂ ಸಂಜೆ ಬನ್ನಿ. ನಮ್ಮ ಮನೆಯಲ್ಲಿ ಕಾಫಿ ಕುಡಿಯುವುರಂತೆ ಹಾಗೆಯೇ ಒಂದು ಸುತ್ತು ವಾಕಿಂಗ್ ಹೋಗಿ ಬರೋಣ.



Thursday, December 17, 2020

ಎಲ್ಲರೂ ಓಡುತ್ತಿದ್ದಾರೆ, ಯಾವ ಸ್ಪರ್ಧೆಯೋ ತಿಳಿಯದು

ಬೆಂಗಳೂರಿನಲ್ಲಿ ರಸ್ತೆಗಿಳಿದರೆ ಸಾಕು. ಅಲ್ಲಿ ವಾಹನಗಳು ನಾ ಮುಂದು, ನೀ ಮುಂದು ಎಂದು ನುಗ್ಗುತ್ತಿರುತ್ತವೆ. ಎಲ್ಲರಿಗೂ ಅವಸರ. ಆಂಬುಲೆನ್ಸ್ ವಾಹನದ ಅವಸರ ಅರ್ಥವಾಗುತ್ತದೆ. ಆದರೆ ಉಳಿದವರಿಗೆ ೫-೧೦ ನಿಮಿಷ ತಮ್ಮ ಮನೆ, ಆಫೀಸ್ ಬೇಗ ತಲುಪಿದರೆ ಅವರ ಜೀವನ ತುಂಬಾ ಏನು ಬದಲಾಗುವಿದಿಲ್ಲ. ಆದರೆ ರಸ್ತೆಯಲ್ಲಿ ಸ್ಪರ್ಧೆಗೆ ಬಿದ್ದವರ ಹಾಗೆ ವಾಹನ ಚಲಾಯಿಸುತ್ತಾರೆ. ಮೊನ್ನೆ ವಿಧಾನ ಪರಿಷತ್ತಿನಲ್ಲಿ ಕುರ್ಚಿಗಾಗಿ ಕಾದಾಡಿದರಲ್ಲ ನಮ್ಮ ಜನ ನಾಯಕರು, ಅವರೂ ಸ್ಪರ್ಧೆಗೆ ಬಿದ್ದವರೇ. ಆ ಕುರ್ಚಿ ನಮ್ಮ ಪಕ್ಷಕ್ಕೆ ಸೇರಿದ್ದು ಎಂದು ಒಂದು ಪಕ್ಷದವರು, ಇಲ್ಲ ನಮ್ಮ ಪಕ್ಷಕ್ಕೆ ಸೇರಿದ್ದು ಅಂದು ಇನ್ನೊಬ್ಬರು. ನಾನು ಕೆಲಸ ಮಾಡುವ ಆಫೀಸ್ ನಲ್ಲಿ, ಕೆಲವು ಸಹೋದ್ಯೋಗಿಗಳು ಯಾರನ್ನು ಬೇಕಾದರೂ ತುಳಿದು, ಪ್ರಮೋಷನ್ ಗಿಟ್ಟಿಸಿಕೊಳ್ಳಲು ಸಾಹಸ ಪಡುತ್ತಿರುತ್ತಾರೆ. ನನ್ನ ಕೆಲವು ಸ್ನೇಹಿತರು, ಬಂಧುಗಳು, ತಾವು ಉಳಿದವಿರಿಗಿಂತ ಉತ್ತಮ ವರ್ಗದವರು ಎಂದು ತೋರಿಸಿಕೊಳ್ಳಲು ಅನವರತ ಪ್ರಯತ್ನ ಪಡುತ್ತಿರುತ್ತಾರೆ.


ಖ್ಯಾತ ಸಾಹಿತಿ ಶಿವರಾಮ ಕಾರಂತರ ಒಂದು ಜನಪ್ರಿಯ ಕಾದಂಬರಿಯ ಹೆಸರು 'ಗೆದ್ದ ದೊಡ್ಡಸ್ತಿಕೆ'. ಗೆದ್ದು ದೊಡ್ಡಸ್ತಿಕೆಯನ್ನು ತೋರಿಸಿಕೊಳ್ಳಲು ಹೆಣಗಾಡುವುದೇ, ಸಾಕಷ್ಟು ಜನರ ಜೀವನ ಗುರಿ. ರಸ್ತೆಯಲ್ಲಿ ಎಲ್ಲರನ್ನು ಹಿಂದೆ ಹಾಕುವುದು, ಅವಶ್ಯಕತೆಗಿಂತ ಅಂತಸ್ತಿಗಾಗಿಯೇ ದೊಡ್ಡ ಮನೆ ಕಟ್ಟಿ ಮೆರೆಯುವುದು, ಎದುರಾಳಿಗಳನ್ನು ತುಳಿದು ಹಾಕುವುದೇ ರಾಜಕೀಯ ಎನ್ನುವುದು. ಹೀಗೆ ಈ ಸ್ಪರ್ಧೆ, ಗೆದ್ದ ದೊಡ್ಡಸ್ತಿಕೆ ಎನ್ನುವುದು ಇರದೇ ಇದ್ದಿದ್ದರೆ, ಜನರಿಗೆ ಜೀವನವೇ ಬೇಸರ ಆಗಿಬಿಡುತ್ತಿತ್ತು. ಹಿಂದೆ ಬಿದ್ದವರು, ನಮ್ಮ ಗೆಲುವನ್ನು ಒಪ್ಪಿಕೊಳ್ಳುತ್ತಾರೋ, ಇಲ್ಲವೋ. ಆದರೆ ನಮಗೆ ಮಾತ್ರ ಗೆದ್ದು  ದೊಡ್ಡಸ್ತಿಕೆಯಲ್ಲಿ ಬೀಗಬೇಕು.


ಏಕೆ ಹೀಗೆ ಎಂದು ವಿಚಾರ ಮಾಡಿದರೆ, ಚಿಕ್ಕಂದಿನಿಂದ ನಮ್ಮ ಸಮಾಜ ಪರೋಕ್ಷವಾಗಿ ಇದನ್ನೇ ಹೇಳಿಕೊಟ್ಟದ್ದು. ಶಾಲೆಯಲ್ಲಿರುವಾಗ ಓಟದ ಪಂದ್ಯ ಇರಲಿಲ್ಲವೇ? ಪ್ರಥಮ ಸ್ಥಾನ ಒಂದೇ ಇದ್ದರೂ, ಅದು ನಮ್ಮದೇ ಎಂದುಕೊಂಡು ಎಲ್ಲರೂ ಓಡುವುದಿಲ್ಲವೇ? ಮುಂದೆ ಅದೇ ಓಟವನ್ನು ನಮ್ಮ ವೃತ್ತಿಯಲ್ಲಿ ಮುಂದುವರೆಸಿಕೊಂಡು ಹೋಗುತ್ತವೆ. ಹಾಗೆಯೇ ಜೀವನದಲ್ಲಿ ನಾವೂ ತೆಗೆದುಕೊಳ್ಳುವ ಅನೇಕ ನಿರ್ಧಾರಗಳು ಇದರಿಂದ ಪ್ರಭಾವಿತಗೊಳ್ಳುತ್ತವೆ. ವಿಚಾರ ಮಾಡಿ ನೋಡಿ. ನಮ್ಮ ಅನೇಕ ಕಷ್ಟಗಳು, ಬೇರೆಯವರ ದೊಡ್ಡಸ್ತಿಕೆಗೆ ಹುಟ್ಟಿದವು. ನಮ್ಮ ಅಣ್ಣ ತಮಂದಿರು, ಅಸ್ತಿ ಮಾಡಿದರು. ನಮ್ಮ ಸಹೋದ್ಯೋಗಿ ಅಂತಹ ಮನೆ ಕಟ್ಟಿಸಿದ. ನಮ್ಮ ನೆರೆಯವನು ಜುಮ್ ಎಂದು ಹೊಸ ಐಷಾರಾಮಿ ಕಾರಿನಲ್ಲಿ ಓಡಾಡುತ್ತಾನೆ. ಅವು ಎಲ್ಲ ನಮಗೆ ಬೇಕಿತ್ತೋ ಇಲ್ಲವೋ ಎಂದು ವಿಚಾರ ಮಾಡುವುದಿಲ್ಲ. ಅದರ ಬದಲು ನಾವು ಗೆಲ್ಲಬೇಕೆಂದರೆ, ಅವರಿಗಿಂತ ಹೆಚ್ಚು ಸಾಧಿಸಬೇಕು ಎಂದು ಹೊರಡುತ್ತೇವೆ. ಸ್ಪರ್ಧೆ ಒಂದಾದರ ನಂತರ ಇನ್ನೊಂದರಂತೆ ಮುಂದುವರೆಯುತ್ತ ಹೋಗುತ್ತದೆ. ನೀವು ಒಬ್ಬರೊಡನೆ ಜಿದ್ದಿಗೆ ಬಿದ್ದು, ಅದರಲ್ಲಿ ಸಫಲರಾದರೂ, ಆ ಸಂತೋಷ ನಿಮ್ಮಲ್ಲಿ ಬಹಳ ದಿನ ಉಳಿಯಲಾರದು. ಏಕೆಂದರೆ ನೀವು ಪ್ರಯತ್ನ ಪಟ್ಟಿದ್ದು ಅವರ ಜೀವನದ ಗುರಿಯಲ್ಲಿ, ಅವರಿಗಿಂತ ಮುಂದೆ ಹೋಗಲು. ಅಲ್ಲಿ ಮುಟ್ಟಿದ ಮೇಲೆ ನಿಮಗರಿವಾಗುತ್ತದೆ. ಅರೆರೇ, ಇದಲ್ಲ ನಾನು ಜೀವನದಲ್ಲಿ ಸಾಧಿಸಲು ಬಯಸಿದ್ದು. ಅಷ್ಟರಲ್ಲಿ ಸಾಕಷ್ಟು ಸಮಯ, ಹಣ ಮತ್ತು ನಿಮ್ಮ ಅಮೂಲ್ಯ ಜೀವನ ವ್ಯರ್ಥವಾಗಿರುತ್ತದೆ.


ಜೀವನದಲ್ಲಿ ಎಲ್ಲರೂ ಓಡುತ್ತಿರುವವರೇ. ಆದರೆ ಸಾಕಷ್ಟು ಜನರಿಗೆ ಆ ಸ್ಪರ್ಧೆ ತಮಗೆ ಬೇಕೋ, ಬೇಡವೋ ಎಂದು ಕೇಳಿಕೊಳ್ಳುವ ವ್ಯವಧಾನವಿಲ್ಲ. ಗೆದ್ದವನ ದೊಡ್ಡಸ್ತಿಕೆಯೂ ಬಹಳ ದಿನ ಉಳಿಯುವುದಿಲ್ಲವಲ್ಲ. ಅವನು ಕಾಲ ಚಕ್ರಕ್ಕೆ ಸಿಕ್ಕಿ ಹಿಂದೆ ಬಿದ್ದು, ಮುಂದೆ ಸಾಗಿದವರನ್ನು ಪೆಚ್ಚಾಗಿ ನೋಡುತ್ತಾ ನಿಲ್ಲುತ್ತಾನೆ. ನಿಜ ಧೈರ್ಯ ಇರುವುದು, ಅನವಶ್ಯಕ ಸ್ಪರ್ಧೆ ಮಾಡುವುದರಲ್ಲಿ ಅಲ್ಲ. ಜಾಗೃತೆಯಿಂದ ಅದರಿಂದ ಹಿಂದೆ ಸರಿಯುವುದರಲ್ಲಿ. ನಮ್ಮ ಗುರಿ ಸಾಧನೆ ನಮ್ಮ ಸಂತೋಷಕ್ಕೆ ಆದರೆ ಅದು ಬಹು ಕಾಲ ಉಳಿದೀತು ಎನ್ನುವುದು ನನ್ನ ಅಭಿಪ್ರಾಯ.

Wednesday, December 16, 2020

ಕೊರೊನ ವೈರಸ್ ಮತ್ತು ಮಾಲ್ತಸ್ ನ ಜನಸಂಖ್ಯೆಯ ಸಿದ್ಧಾಂತ

೧೮ ನೇ ಶತಮಾನದ ತಜ್ಞ ಥಾಮಸ್ ರಾಬರ್ಟ್ ಮಾಲ್ತಸ್ ಹೇಳಿದ್ದು, ಪ್ರಪಂಚದ ಜನಸಂಖ್ಯೆಯ ಬೆಳವಣಿಗೆಯ ವೇಗಕ್ಕೆ ಸರಿ ಸಮನಾಗಿ ಆಹಾರ ಪೂರೈಕೆಯ  ಬೆಳವಣಿಗೆಯಾಗುವುದಿಲ್ಲ . ಅದು ಏರು ಪೇರಾದಾಗ, ಆಹಾರ ಕೊರತೆಯ ಕಾರಣಕ್ಕೋ, ಯುದ್ಧಗಳ ಕಾರಣವೋ ಅಥವಾ ಸಾಂಕ್ರಾಮಿಕ ರೋಗಗಳ ಕಾರಣದಿಂದಲೋ ಜನಸಂಖ್ಯೆ ಇಳಿಕೆಯಾಗಿ ಮತ್ತೆ ಅದು ಸಮತೋಲನಕ್ಕೆ ಬರುವ ಏರ್ಪಾಡನ್ನು ಪ್ರಕೃತಿ ಮಾಡುತ್ತದೆ. ಈ ಸಿದ್ದಾಂತ ಸಾಕಷ್ಟು ಜನಪ್ರಿಯಗೊಂಡು ಜಗತ್ತಿನಾದ್ಯಂತ ಸಾಕಷ್ಟು ಪಠ್ಯ ಪುಸ್ತಕಗಳಲ್ಲಿ ಸೇರಿ ಹೋಗಿದೆ. ಈಗಾಗಲೇ ಕೊರೊನ ವೈರಸ್ ಗೆ ೧೬ ಲಕ್ಷಕ್ಕೂ ಜನ ವಿಶ್ವದಾದ್ಯಂತ ಅಸು ನೀಗಿದ್ದಾರಲ್ಲ. ಅದು ಜನಸಂಖ್ಯೆಯನ್ನು ನಿಯಂತ್ರಿಸುವ ಉದ್ದೇಶದಿಂದ ಪ್ರಕೃತಿ ಉಂಟು ಮಾಡಿದ ಏರ್ಪಾಡೇ? ಹಾಗಿದ್ದಲ್ಲಿ ಆಹಾರದ ಕೊರತೆ ನಮಗೆ ಕಾಡಿತ್ತೆ? ಮಾಲ್ತಸ್ ನ ಜನಸಂಖ್ಯೆಯ ಸಿದ್ದಾಂತ ಇಂದಿಗೂ ಅನ್ವಯಿಸುತ್ತದೆಯೇ? ಇಲ್ಲ ಎನ್ನುವುದು ನನ್ನ ಅಭಿಪ್ರಾಯ. ಅದು ಏಕೆ ಎನ್ನುವುದರ ವಿವರಣೆ ಮುಂದಿದೆ.


ಪ್ರಾಣಿ ಜಗತ್ತಿನಲ್ಲಿ ಮಾಲ್ತಸ್ ನ ಸಿದ್ದಾಂತ ಯಾವತ್ತಿಗಾದರು ಅನ್ವಯಿಸುತ್ತದೆ ಎಂದು ಹೇಳಬಹುದು. ಉದಾಹರಣೆಗೆ, ಒಂದು ಕಾಡಿನಲ್ಲಿನ ಹುಲಿಗಳ ಸಂಖ್ಯೆ ಅವು ಬೇಟೆಯಾಡುವ ಪ್ರಾಣಿಗಳಾದ ಜಿಂಕೆ, ಕಡವೆ ಇತ್ತ್ಯಾದಿ ಪ್ರಾಣಿಗಳ ಸಂಖ್ಯೆಯ ಮೇಲೆ ಅವಲಂಬಿತವಾಗಿರುತ್ತದೆ. ಮತ್ತು ಆ ಪ್ರಾಣಿಗಳ ಸಂಖ್ಯೆ ಕಾಡಿನ ವಿಸ್ತಾರ, ಹುಲ್ಲುಗಾವಲಿನ ಮೇಲೆ ಅವಲಂಬಿತವಾಗಿರುತ್ತದೆ. ಕಾಡು ದೊಡ್ಡದಾಗದ ಹೊರತು ಅಲ್ಲಿನ ಜಿಂಕೆ, ಕಡವೆಗಳ ಸಂಖ್ಯೆ ಜಾಸ್ತಿಯಾಗದು ಹಾಗೆಯೆ ಅಲ್ಲಿನ ಹುಲಿಗಳ ಸಂಖ್ಯೆಗೂ ಒಂದು ಮಿತಿಯಿರುತ್ತದೆ. ಅದಕ್ಕೂ ಮೀರಿ ಹುಲಿಗಳ ಸಂಖ್ಯೆ ಜಾಸ್ತಿಯಾದರೆ, ಹಸಿವಿನಿಂದಲೋ, ಕಾದಾಟದಿಂದಲೋ ಕೆಲವು ಹುಲಿಗಳು ಸತ್ತು, ಅವುಗಳ ಸಂಖ್ಯೆ ಮತ್ತೆ ಸಮತೋಲನಕ್ಕೆ ಬರುತ್ತದೆ.


ಶಿಲಾಯುಗದ ಕಾಲದಲ್ಲಿ ಮನುಷ್ಯ ಇತರೆ ಪ್ರಾಣಿಗಳ ಹಾಗೆ ಅಲೆದಾಡುತ್ತ, ಪ್ರಾಣಿಗಳನ್ನು ಬೇಟೆಯಾಡುತ್ತ ಬದುಕುತ್ತಿದ್ದ. ಆಗ ಮನುಷ್ಯರ ಸಂಖ್ಯೆಗೆ ಪ್ರಕೃತಿಯ ಮಿತಿಯಿತ್ತು, ನಂತರ ವ್ಯವಸಾಯ ಕಲಿತುಕೊಂಡ ಮಾನವ, ತನ್ನ ಆಹಾರಕ್ಕೆ ಅಲೆಯದೇ ತಾನೇ ಬೆಳೆದುಕೊಳ್ಳುವ ವ್ಯವಸ್ಥೆ ಮಾಡಿಕೊಂಡ. ಆದರೂ ವ್ಯವಸಾಯದ ಉತ್ಪನ್ನ ಪ್ರತಿ ವರ್ಷವೂ ಒಂದೇ ರೀತಿಯಿರಲಿಲ್ಲ. ಮಳೆ ಕಡಿಮೆಯಿದ್ದ ವರ್ಷ, ಬರಗಾಲ ಬಂದಾಗ ಆಹಾರದ ಕೊರತೆಯಾಗುತ್ತಿತ್ತು. ಅದೇ ಸಮಯಕ್ಕೆ ಸಾಂಕ್ರಾಮಿಕ ರೋಗಗಳು ಬಂದಾಗ ಸೂಕ್ತ ವೈದ್ಯಕೀಯ ಸೌಕರ್ಯಗಳ ಕೊರತೆಯಿತ್ತು. ಅದು ೧೮ನೆ ಶತಮಾನದಲ್ಲಿ ಮಾಲ್ತಸ್ ಜೀವಿತವಾಗಿದ್ದಾಗ ಇದ್ದಂತ ಪರಿಸ್ಥಿತಿ. ಹಸಿವಿನಿಂದ, ರೋಗದಿಂದ, ಯುದ್ಧದಿಂದ ಜನ ಸತ್ತಾಗ ಅದು ಪ್ರಕೃತಿಯ ಕೈವಾಡ ಎಂದು ಮಾಲ್ತಸ್ ಗೆ ಅನ್ನಿಸಿದ್ದರೆ ಆಶ್ಚರ್ಯವೇನಿಲ್ಲ. 


ಆದರೆ ಇಂದಿನ ಮನುಷ್ಯ, ೧೮ನೆ ಶತಮಾನದ ಇತಿ ಮಿತಿಗಳನ್ನು ಮೀರಿ ಬೆಳವಣಿಗೆ ಸಾಧಿಸಿದ್ದಾನೆ. ಇವತ್ತಿಗೆ ನೀರಾವರಿ ಸೌಲಭವಿದೆ. ಮಳೆಯ ಮೇಲೆ ಅವಲಂಬನೆ ಇದ್ದರೂ ಎರಡು ನೂರು ವರುಷಗಳ ಹಿಂದಕ್ಕೆ ಹೋಲಿಸಿದರೆ ಅದು ಗಣನೀಯವಾಗಿ ಕಡಿಮೆಯಾಗಿದೆ. ಗೊಬ್ಬರದ ಬಳಕೆ, ಕ್ರಿಮಿ ಕೀಟಗಳ ನಾಶಕ್ಕಾಗಿ ಔಷಧಗಳ ಬಳಕೆಯಿಂದ ಅದೇ ವಿಸ್ತೀರ್ಣದಲ್ಲಿ ಹೆಚ್ಚಿನ ಬೆಳೆ ಬೆಳೆಯುವುದು ಮನುಷ್ಯನಿಗೆ ಸಾಧ್ಯವಾಗಿದೆ. ಹೈಬ್ರಿಡ್ ತಳಿಗಳ ಆವಿಷ್ಕಾರದಿಂದ ಆಹಾರ ಉತ್ಪಾದನೆ ಇನ್ನು ಹೆಚ್ಚಾಗಿದೆ. ಅಲ್ಲದೆ ಬೆಳೆದ ಬೇಳೆ ಕಾಳುಗಳನ್ನು ಸಂಸ್ಕರಿಸುವ ಮತ್ತು ಅವುಗಳನ್ನು ಬಹು ಕಾಲದವರೆಗೆ ಕೆಡದಂತೆ ಕಾಪಾಡಿಕೊಳ್ಳುವ ವಿದ್ಯೆಯನ್ನೂ ಮನುಜ ಕಲಿತದ್ದಾಗಿದೆ. ಇಂದಿಗೆ ಆಹಾರದ ಕೊರತೆ ೧೮ನೆ ಶತಮಾನದ ತರಹ ಇಲ್ಲ. ಇಂದು ಸರಿಯಾದ ಬೆಲೆ ಸಿಗದೇ ರಸ್ತೆಗೆ ಸುರಿದು ಹೋದ ಟೊಮೇಟೊ ಬಗ್ಗೆ, ಸರಕಾರದ ಗೋದಾಮುಗಳಲ್ಲಿ ದಾಸ್ತಾನು ಇಟ್ಟಲ್ಲೇ ಹಾಳಾಗಿ ಹೋದ ಅಕ್ಕಿ, ಗೋದಿಯ ಬಗ್ಗೆ ನಾವು ಸುದ್ದಿ ಓದುತ್ತೇವೆ. ಇವುಗಳು ಆಹಾರದ ಕೊರತೆ ಇರುವುದು ಸೂಚಿಸುವುದಿಲ್ಲ.


ಹಾಗೆಯೇ ವೈದ್ಯಕೀಯ ಸೌಲಭ್ಯಗಳು, ರೋಗ ನಿರೋಧಕ ಔಷಧಿಗಳು ಇಂದಿಗೆ ಇರುವ ಹಾಗೆ ೧೮ನೆ ಶತಮಾನದಲ್ಲಿ ಇರಲಿಲ್ಲ. ಆಗ ಸಾಂಕ್ರಾಮಿಕ ರೋಗಗಳಿಗೆ ಇಡೀ ಊರಿಗೆ ಊರೇ ಖಾಲಿ ಮಾಡಿಕೊಂಡು ಗುಳೆ ಹೋಗುವ ಪರಿಸ್ಥಿತಿ ಇಂದು ಎಷ್ಟು ಊರುಗಳಲ್ಲಿದೆ?   ಆದರೆ ೧೮ನೆ ಶತಮಾನದಲ್ಲಿ ಅದು ಸಾಮಾನ್ಯ ಸಂಗತಿಯಾಗಿತ್ತು. 


ಎರಡನೇ ಜಾಗತಿಕ ಮಹಾಯುದ್ಧದ ನಂತರ ಅಷ್ಟು ದೊಡ್ಡ ಪ್ರಮಾಣದ ಯುದ್ಧ ಇಂದಿಗೆ  ಆಗುವ ಸಂಭವವೂ ತೀರಾ ಕಡಿಮೆ. ಈ ಶತಮಾನದಲ್ಲಿ ಮನುಜ ಕಲಿತುಕೊಂಡ ದೊಡ್ಡ ಪಾಠ, ಯುದ್ದದಿಂದ ಆಗುವ ಸಾವು ನೋವು. ಇಂದಿಗೆ ಜಗಳಗಳೇ ಇಲ್ಲ ಎಂದಿಲ್ಲ. ಆದರೆ ಸಣ್ಣ ಪುಟ್ಟ ಯುದ್ದಗಳನ್ನು ಕ್ಷಿಪಣಿಗಳೇ ಮಾಡಿ ಮುಗಿಸುತ್ತವೆ. ಯುದ್ಧ ಎನ್ನುವುದು ಮನುಷ್ಯ ಹೋರಾಟವಲ್ಲ ಬದಲಿಗೆ ಅದು ತಂತ್ರಜ್ಞಾನದ ಹೋರಾಟ ಎನ್ನುವಂತ ಪರಿಸ್ಥಿತಿ ಇಂದಿನದು.


ಆಹಾರದ ಪೂರೈಕೆ, ವೈದ್ಯಕೀಯ ಸೌಲಭ್ಯಗಳು ಮತ್ತು ಯುದ್ಧ ಮಾಡುವ ರೀತಿ ಬದಲಾಗಿರುವ ಈ ಕಾಲಕ್ಕೂ, ಮಾಲ್ತಸ್ ಬದುಕಿದ ಕಾಲಕ್ಕೂ ಅಜ ಗಜಾಂತರ ವ್ಯತಾಸವಿದೆ. ಹಾಗಾದರೆ ಈ ಕೊರೊನ ವೈರಸ್  ಏನು ಅನ್ನುತ್ತೀರಾ? ೧೮ನೆ ಶತಮಾನದ ಪರಿಸ್ಥಿತಿ ಇಂದಿಗೆ ಇದ್ದಿದ್ದರೆ, ಕೊರೊನ ಮಾರಿಗೆ ಸತ್ತವರ ಸಂಖ್ಯೆ ದಶ ಕೋಟಿಗಳಲ್ಲಿರುತ್ತಿತ್ತು ಎನ್ನುವುದು ನನ್ನ ಅಭಿಪ್ರಾಯ. ೭೮೦ ಕೋಟಿ ಜನಸಂಖ್ಯೆ ಇರುವ ಜಗತ್ತಿನಲ್ಲಿ, ೧೬ ಲಕ್ಷ ಸಾವು ನಮ್ಮ ಜನಸಂಖ್ಯೆಯನ್ನು ೦.೦೨% ಮಾತ್ರ ಕಡಿಮೆ ಮಾಡಿದೆ. ಇಷ್ಟಕ್ಕೆ ನಾವು ಸರಿಯಾಗಿ ನಿಭಾಯಿಸಿದ್ದೇವೆ ಎಂದೇನೂ ನಾನು ಹೇಳುತ್ತಿಲ್ಲ. ಆದರೆ ಮಾಲ್ತಸ್ ಇಂದು ಬದುಕಿದ್ದರೆ ತನ್ನ ಸಿದ್ಧಾಂತವನ್ನು ಬದಲಾಯಿಸುತ್ತಿದ್ದ ಮತ್ತು ಕೊರೊನ ವೈರಸ್ ಪ್ರಕೃತಿಯ ಕೈವಾಡ ಎನ್ನುವುದಕ್ಕಿಂತ ಮನುಷ್ಯ ಎದುರಿಸುತ್ತಿರುವ ಒಂದು ಸವಾಲು ಎಂದು ಹೇಳುತ್ತಿದ್ದ ಎನ್ನುವುದಷ್ಟೆ ನನ್ನ ಅಭಿಪ್ರಾಯ.

Tuesday, December 15, 2020

ಹಿಮಾಲಯ: ಅದರ ಪಾಡಿಗೆ ಅದನ್ನು ಬಿಟ್ಟಷ್ಟು ವಾಸಿ

ಕಳೆದ ದಶಕದಲ್ಲಿ ಆದ ಪ್ರಕೃತಿ ವಿಕೋಪಗಳಲ್ಲಿ, ಹಿಮಾಲಯ ವಲಯದಲ್ಲಿನ ಕೇದಾರನಾಥ ಮತ್ತು ನೇಪಾಳದಲ್ಲಿ ಆದ ಭೂಕಂಪ, ಭೂಕುಸಿತ, ನೆರೆ ಹಾವಳಿ ಮಾಡಿದ ನಷ್ಟ ಅಪಾರ. ಅಪಾಯಕಾರಿ ಮಟ್ಟದ ಭೂಕಂಪಗಳು ಇಲ್ಲಿ ಆಗುತ್ತಲೇ ಇವೆ. ೧೯೫೦ ರಲ್ಲಿ ಆದ ಭೂಕಂಪ, ಟಿಬೆಟ್ ಮತ್ತು ಅಸ್ಸಾಂ ಪ್ರದೇಶಗಳಲ್ಲಿ ಸಾವಿರಾರು ಜನರನ್ನು ಬಲಿ ತೆಗೆದುಕೊಂಡಿತ್ತು. ೨೦೧೩ ರಲ್ಲಿ ಕೇದಾರನಾಥ ಪ್ರದೇಶದಲ್ಲಿ ಆದ ಭೂಕುಸಿತ ಮತ್ತು ನೆರೆಯಿಂದ ಸತ್ತಿದ್ದು ಐದು ಸಾವಿರಕ್ಕೂ ಹೆಚ್ಚಿನ ಜನ. ಅಸ್ತಿ ಹಾನಿಯೇನು ಕಡಿಮೆ ಎನ್ನುವ ಹಾಗಿಲ್ಲ.

 

ಇದು ಅನೀರಿಕ್ಷಿತವಾಗಿ ಆದ ಪ್ರಕೃತಿ ವಿಕೋಪ ಎಂದು ಮೇಲ್ನೋಟಕ್ಕೆ ಎನ್ನಿಸಿದರೂ ವಿವರಗಳನ್ನು ಗಮನಿಸುತ್ತಾ ಹೋದಂತೆ ಮನುಷ್ಯನಿಂದ ಉಂಟಾದ ಅಸಮತೋಲನಗಳನ್ನು ಕಡೆಗಣಿಸುವಂತಿಲ್ಲ. ಹಿಮಾಲಯ ಒಂದು ಸೂಕ್ಷ್ಮವಾದ ಪರಿಸರ ಮತ್ತು ಭೂಕಂಪ ಪೀಡಿತ ಪ್ರದೇಶ. ಇಲ್ಲಿರುವುದು ದಕ್ಷಿಣ ಭಾರತದಲ್ಲಿನ ಬೆಟ್ಟಗಳ ಹಾಗೆ ಗಟ್ಟಿ ನಿಲ್ಲುವ ಕಲ್ಲು ಗುಡ್ಡಗಳಲ್ಲ. ಬದಲಿಗೆ ಕಲ್ಲು ಮಣ್ಣುಗಳ ರಾಶಿ  ಮಾಡಿ ಒಂದರ ಮೇಲೆ ಒಂದರಂತೆ ಪೇರಿಸಿದ ಮೆದು ಮಣ್ಣಿನ ಶ್ರೇಣಿ. ಇಲ್ಲಿ ಹೆಚ್ಚಿಗೆ ಮಳೆ ಆದರೆ, ಬೆಟ್ಟದ ಮಣ್ಣು ಕರಗಿ, ಅಲ್ಲಿನ ಕಲ್ಲುಗಳು ಉರುಳಲಾರಂಭಿಸುತ್ತವೆ. ಭಾರತದಲ್ಲೇ ಎತ್ತರದ ಪ್ರದೇಶ ಇದಾಗಿರುವರಿಂದ, ಮಾನ್ಸೂನ್ ಮೋಡಗಳು ಅರಬ್ಬೀ ಸಮುದ್ರದಲ್ಲಿ ಹುಟ್ಟಿ ಈಶಾನ್ಯ ದಿಕ್ಕಿಗೆ ಚಲಿಸಿ, ಮಳೆಯಾಗದೆ ಹಾಗೆ ಉಳಿದ ಮೋಡಗಳು ಇಲ್ಲಿ ಜಮಾವಣೆಗೊಂಡು ಹೆಚ್ಚಿನ ಮಳೆ ಸುರಿಸುತ್ತವೆ. ಇಲ್ಲವೇ ಘರ್ಷಣೆ ಹೆಚ್ಚಾದರೆ ಸ್ಪೋಟಗೊಳ್ಳುತ್ತವೆ. ನಾನು ಹಿಮಾಲಯ ಪ್ರವಾಸ ಹೋದಾಗ, ಮೇಘ ಸ್ಪೋಟವಾಗಿ (Cloud Burst), ಭೂಕುಸಿತದಿಂದ ರಸ್ತೆ ಮುಚ್ಚಿ ಹೋಗಿ ದಾರಿಯಲ್ಲೇ ಇಡೀ ದಿನ ಸಿಕ್ಕು ಹಾಕಿಕೊಂಡು, ಹತ್ತಿರದ ಹಳ್ಳಿಯಲ್ಲಿ ಮಲಗಿ ಮರು ದಿನ ರಸ್ತೆ ಉಪಯೋಗ ಮಾಡುವಂತಾದಾಗ ಮುಂದೆ ಸಾಗಿದ್ದು ನೆನಪಿದೆ.

ನನ್ನ ಯಮುನೋತ್ರಿ ಪ್ರವಾಸದ ಮಾರ್ಗಮಧ್ಯದಲ್ಲಿ ಭೂಕುಸಿತದಿಂದ ರಸ್ತೆ ಮುಚ್ಚಿ ಹೋಗಿರುವುದು


ತರಹದ ಪ್ರದೇಶದಲ್ಲಿ ಆಣೆಕಟ್ಟು ಕಟ್ಟುವುದು ಹಿಮಾಲಯದ ರಚನೆಯ ಮೇಲೆ ಪರಿಣಾಮ ಬೀರುತ್ತದೆ. ನೈಸರ್ಗಿಕ ವಿಕೋಪಗಳು ಅಣೆಕಟ್ಟನ್ನು ಒಡೆದು ಹಾಕದಿದ್ದರೂ ಅದು ಸುರಕ್ಷಿತವಾಗಿ ಕೆಲಸ ಮಾಡುವ ಅವಧಿಯನ್ನು ಗಣನೀಯವಾಗಿ ತಗ್ಗಿಸುತ್ತವೆ. ಮತ್ತು ಭೂಕುಸಿತಗಳು ಆಣೆಕಟ್ಟು ಹಿಡಿದಿಡುವ ನೀರಿನ ಪ್ರಮಾಣವನ್ನು ಕಡಿಮೆ ಮಾಡುತ್ತವೆ. ಅಲ್ಲದೆ ಹಿಮಾಲಯದಲ್ಲಿ ನಾವು ಕಟ್ಟುವ ರಸ್ತೆಗಳು ಮತ್ತು ಅದಕ್ಕಾಗಿ ಮರಗಳನ್ನು ಕಡಿಯುವುದು, ಬೆಟ್ಟ ಪ್ರದೇಶದಲ್ಲಿ ಅಸಮತೋಲನ ಉಂಟು ಮಾಡಿ ಭೂಕುಸಿತದ ಸಾಧ್ಯತೆಯನ್ನು ಹೆಚ್ಚಿಸುತ್ತವೆ. ಹಿಮಾಲಯವನ್ನು ಒಂದು ಸಂರಕ್ಷಿತ ಪ್ರದೇಶವೆಂದು ಘೋಷಿಸುವುದು ಕ್ಷೇಮಕರ ಎನ್ನುತ್ತಾರೆ ಪರಿಸರ ತಜ್ಞ ಮತ್ತು ಹಿಮಾಲಯವನ್ನು ದಶಕಗಳ ಕಾಲ ಅಭ್ಯಸಿಸಿದ ಮಹಾರಾಜ ಪಂಡಿತ್. (ಲಿಂಕ್: https://www.nature.com/articles/d41586-020-01809-4 )

 

ಪೈಪೋಟಿಗೆ ಬಿದ್ದ ಭಾರತ ಮತ್ತು ಚೀನಾ ದೇಶಗಳು ಪ್ರದೇಶದಲ್ಲಿ ತಮ್ಮ ಬಲ ತೋರಿಸುಕೊಳ್ಳುವ ಕಾದಾಟ ಮತ್ತು ಇಲ್ಲಿಯ ಸಂಪನ್ಮೂಲಗಳನ್ನು ಉಪಯೋಗಿಸುವ ಉದ್ದೇಶದಿಂದ ರಸ್ತೆ, ಅಣೆಕಟ್ಟುಗಳ ನಿರ್ಮಾಣ ಕಾರ್ಯಗಳನ್ನು ಮುಂದುವರೆಸಿವೆ. ಹಾಗೆಯೆ ಮನುಷ್ಯ ವಾಸವು ಹಿಂದಿಗಿಂತ ಹೆಚ್ಚಿಗೆ ಪ್ರದೇಶಗಳಲ್ಲಿ ಕಾಣುತ್ತಿದೆ. ಆದರೆ ಪ್ರಕೃತಿ ಶಕ್ತಿಯ ಮುಂದೆ ಮನುಷ್ಯ ಶಕ್ತಿ ಯಾವ ಲೆಕ್ಕದ್ದು? ಹಿಮಾಲಯವನ್ನು ಅದರ ಪಾಡಿಗೆ ಬಿಡದ ಮನುಜ ಮುಂದೆ ಒಂದು ದಿನ ಭಾರಿ ಬೆಲೆ ತೆತ್ತಬೇಕಾಗಬಹುದು.

 

(ಚಿತ್ರ: ನನ್ನ ಯಮುನೋತ್ರಿ ಪ್ರವಾಸದ ಮಾರ್ಗಮಧ್ಯದಲ್ಲಿ ಭೂಕುಸಿತದಿಂದ ರಸ್ತೆ ಮುಚ್ಚಿ ಹೋಗಿರುವುದು)

ವಾಯು ಮಾಲಿನ್ಯ: ಸಹನೀಯವಾಗಿಸುವುದು ಹೇಗೆ?

ಕಳೆದ ದಶಕದಲ್ಲಿ ವಾಯು ಮಾಲಿನ್ಯದ ಬಗ್ಗೆ ವಿಚಾರವೇ ಮಾಡದ ನಾವುಗಳು ಇಂದು ಅದರ ಬಗ್ಗೆ ಚಿಂತಿಸುವ ಕಾಲ ಬಂದಿದೆ. ದೇಶದ್ಯಾಂತ ಸ್ಥಾಪಿಸಲಾಗಿರುವ ನೂರಾರು ಸಂವೇದಕಗಳ (Sensor) ಸಹಾಯದಿಂದ ಇಂದು ನಾವು ನಾವು ಉಸಿರಾಡುವ ಗುಣ ಮಟ್ಟದ ಬಗ್ಗೆ ತಿಳಿದುಕೊಳ್ಳಬಹುದು. ಕೆಲವು ಕಡೆ ಉತ್ತಮ ಎಂದೆನಿಸಿದರೆ, ಇನ್ನು ಕೆಲವು ಕಡೆ ಅಪಾಯಕಾರಿ ಎನ್ನುವ ಮಟ್ಟಕ್ಕೆ ವಾಯು ಮಾಲಿನ್ಯವಿದೆ.

 

ಸರಕಾರವಾಗಲಿ, ಜನತೆಯಾಗಲಿ ಇದರ ಕಡೆಗೆ ಗಮನ ಹರಿಸಿಲ್ಲ ಎಂದೇನಿಲ್ಲ.  BS -IV ವಾಹನಗಳಿಂದ BS -VI ಕಡೆಗೆ ಸಾಗಿದ್ದು ಮಾಲಿನ್ಯದ ಮಟ್ಟ ಕಡಿಮೆ ಮಾಡಲು. ಕಲ್ಲಿದ್ದಲ್ಲಿಂದ ಉತ್ಪಾದಿಸುವ ವಿದ್ಯುತ್ ಗೆ ಒತ್ತು ನೀಡದೆ ಗಾಳಿ ಯಂತ್ರ (Wind Power) ಮತ್ತು ಸೌರ ಫಲಕ (Solar Panel) ಗಳಿಂದ ವಿದ್ಯುತ್ ಉತ್ಪಾದನೆಯೆಡೆಗೆ ಸಾಗುತ್ತಿರುವುದು ಇದೇ ಉದ್ದೇಶ. ಗ್ರಾಮೀಣ ಪ್ರದೇಶಗಳಲ್ಲಿ ಅಡಿಗೆಗೆ ಉರುವಲು ಕಟ್ಟಿಗೆ ಬದಲು, LPG ಉಪಯೋಗಿಸುತ್ತಿರುವುದು ಒಳ್ಳೆಯ ಬೆಳವಣಿಗೆಯೇ. ಇದೆಲ್ಲ ಇದ್ದರೂ, ಕೆಲವು ಕಾರ್ಖಾನೆ ಮತ್ತು ಉದ್ದಿಮೆಗಳು ಅಪಾಯಕಾರಿ ಮಟ್ಟದಲ್ಲಿ ಹೊಗೆ ಉಗುಳುವುದು ನಿಂತಿಲ್ಲ. ಯೂರೋಪ್ ದೇಶಗಳಲ್ಲಿ ಅವುಗಳನ್ನು ಆಕಾಶದಲ್ಲಿರುವ ಉಪಗ್ರಹಗಳ ಮೂಲಕ ಪತ್ತೆ ಹಚ್ಚಿ ದಂಡ ವಿಧಿಸುತ್ತಾರೆ. ನಮ್ಮ ಉಪಗ್ರಹಗಳು ಆ ಕೆಲಸ ಮಾಡಲಾರವು ಎಂದಲ್ಲ. ಆದರೆ ಆ ಕಾರ್ಖಾನೆಗಳು ರಾಜಕೀಯ ಧುರೀಣರದ್ದೋ, ಅವರ ಸಂಬಂಧಿಗಳದ್ದೋ ಆಗಿದ್ದರೆ ಅದು ಉಂಟು ಮಾಡುವ ರಾಜಕೀಯ ತೊಡಕು ವಾಯು ಮಾಲಿನ್ಯವನ್ನು ಮುಂದುವರೆಸುತ್ತವೆ.

 

ಮಾಲಿನ್ಯ ತಗ್ಗಿಸುವ ತಂತ್ರಜ್ಞಾನದ (Abatement Technology ) ಉಪಯೋಗ ಮತ್ತು ಅವುಗಳ ನಿರಂತರ ನವೀಕರಣದಿಂದ ಉದ್ದಿಮೆಗಳಿಂದ ಆಗುವ ಮಾಲಿನ್ಯದ ಪ್ರಮಾಣವನ್ನು ಸಾಕಷ್ಟು ಮಟ್ಟಿಗೆ ತಗ್ಗಿಸಲು ಸಾಧ್ಯ. ಅವುಗಳಿಗೆ ಆಗುವ ಹೆಚ್ಚಿನ ಖರ್ಚು ವೆಚ್ಚಗಳಿಗೆ ಹೋಲಿಸಿದರೆ ಅದರಿಂದ ಆಗುವ ಪರೋಕ್ಷ ಲಾಭವೇ ಹೆಚ್ಚಿನದಾಗಿದೆ. ಮಾಲಿನ್ಯ ಉಂಟು ಮಾಡುವ ಅನಾರೋಗ್ಯ, ವೈದ್ಯಕೀಯದ ಖರ್ಚು ಮತ್ತು ಆಗ ನೌಕರರು ಕೆಲಸ ಮಾಡದೇ ಉಂಟಾಗುವ ಆರ್ಥಿಕ ಪೆಟ್ಟು ಇವುಗಳನ್ನು ಲೆಕ್ಕ ಹಾಕಿದರೆ, ವಾಯು ಮಾಲಿನ್ಯ ಕಡಿಮೆ ಮಾಡುವುದಕ್ಕೆ ಮಾಡುವ ಖರ್ಚು ಹೆಚ್ಚು ಎನ್ನಿಸಲಾರದು.

 

ಕೆಲವು ವರ್ಷಗಳ ಹಿಂದೆ ತಮಿಳುನಾಡಿನ ತಾಮ್ರ ತಯಾರಿಕೆ ಘಟಕವೊಂದು ತಾಜ್ಯ ವಸ್ತುಗಳನ್ನು ಸರಿಯಾಗಿ ಪರಿಷ್ಕರಿಸದೆ ಇದ್ದುದರಿಂದ, ಆ ಭಾಗದ ಜನರಲ್ಲಿ ಕ್ಯಾನ್ಸರ್ ರೋಗ ಜಾಸ್ತಿ ಆಗಿ, ಕೊನೆಗೆ ಆ ಕಾರ್ಖಾನೆಯನ್ನು ಮುಚ್ಚಿದ ಉದಾಹರಣೆ ಉಂಟಲ್ಲ. ಹಾಗೆಯೇ ಸಿಮೆಂಟ್ ಕಾರ್ಖಾನೆಗಳು, ಲೋಹದ ಕುಲುಮೆಗಳು ಪರಿಸರವನ್ನು ಹಾಳು ಮಾಡಿದ್ದಲ್ಲದೆ ತಮ್ಮ ನೌಕರರ ಜೀವನಾವಧಿಯನ್ನೇ ಕಡಿಮೆ ಮಾಡಿಲ್ಲವೇ? ಅದಕ್ಕೆ ಅವರನ್ನು ಜವಾಬ್ದಾರರನ್ನಾಗಿ ಮಾಡಿ, ಸೂಕ್ತ ತಿದ್ದುಪಡಿಗಳು ಆಗುವಂತೆ ಮಾಡುವ ಹೊಣೆ ಸರಕಾರದ್ದು ಎಷ್ಟೋ, ಅಷ್ಟೇ ಜವಾಬ್ದಾರಿ ಜನರದ್ದೂ, ತಾವು ಉಪೇಕ್ಷಿಸದೇ, ಎಚ್ಚತ್ತುಕೊಳ್ಳುವ ಕಡೆಗೆ ಆಗಬೇಕಿದೆ.

 

ಪಟ್ಟಣಗಳಲ್ಲಿ ವಾಯು ಮಾಲಿನ್ಯಕ್ಕೆ ಹೆಚ್ಚಿನ ಕೊಡುಗೆ ವಾಹನಗಳಿಂದಲೇ. ವಾಹನ ಓಡಾಟ ತಗ್ಗಿಸಿ ಮೆಟ್ರೋ ತರಹದ ಸಮೂಹ ಸಾರಿಗೆ ಉಪಯೋಗಿಸಿದಷ್ಟು ಒಳ್ಳೆಯದು. ಆದರೆ ಅದರ ವ್ಯವಸ್ಥೆ ಇಲ್ಲದ ಕಡೆಗೆ ಹೇಗೆ? ನೀವು ವಾಸಿಸುವ ಜಾಗ ಬದಲಿಸುವುದು ಸೂಕ್ತವೇ? ಯೋಚಿಸಿ ನೋಡಿ.

 

ನೀವು ಬೆಂಗಳೂರಿನಲ್ಲಿ ವಾಸಿಸುತ್ತಿದ್ದರೆ, ಈ ಲಿಂಕ್ ನಗರದ ಹಲವು ವಲಯದ ವಾಯು ಗುಣಮಟ್ಟವನ್ನು ತಿಳಿಸಿಕೊಡುತ್ತದೆ. ಮೈಸೂರು ರಸ್ತೆಯ ಬಾಪೂಜಿನಗರ ಭಾಗದಲ್ಲಿ ವಾಯು ಮಾಲಿನ್ಯ ಅನಾರೋಗ್ಯಕರ ಮಟ್ಟದಲ್ಲಿ ಇದೆ ಎಂದು ಅದು ತೋರಿಸುತ್ತಿದೆ.

https://aqicn.org/city/india/bengaluru/bapuji-nagar

Monday, December 14, 2020

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಇಪ್ಪತ್ತರ ಹರೆಯ

ಕಳೆದ ತಿಂಗಳಲ್ಲಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (International Space Station) ಇಪ್ಪತ್ತು ತುಂಬಿತು. ಮುಂದುವರೆದ ದೇಶಗಳಲ್ಲಿ ಇದು ಸುದ್ದಿ ಮಾಡಿದರೂ, ನಮ್ಮ ದೇಶದ ಮಾಧ್ಯಮಗಳಲ್ಲಿ ಇದು ಚರ್ಚೆಯಾಗಲಿಲ್ಲ. ಅದರಲ್ಲಿ ಭಾರತದ ಕೊಡುಗೆ ಏನು ಇರಲಿಲ್ಲ ಎನ್ನುವುದಕ್ಕೋ ಏನೋ? ನಿಜ, ಅದು ಶ್ರೀಮಂತ ದೇಶಗಳ ಯೋಜನೆ. ನೂರು ಬಿಲಿಯನ್ ಡಾಲರ್ ವೆಚ್ಚದ ಯೋಜನೆಯಲ್ಲಿ ಪಾಲ್ಗೊಳ್ಳಲು ನಮಗೆ ಇಪ್ಪತ್ತು ವರುಷಗಳ ಹಿಂದೆ ಸಾಧ್ಯವಿರಲಿಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಇಸ್ರೋ ಸಂಸ್ಥೆಯ ವಿಜಯಗಳು ಭಾರತಕ್ಕೆ ವಿಶ್ವಾಸ ತುಂಬಿ ನಮ್ಮದೇ ಒಂದು ಬಾಹ್ಯಾಕಾಶ ನಿಲ್ದಾಣ ನಿರ್ಮಿಸಲು ಯೋಜನೆ ಹಾಕಿಕೊಳ್ಳುವಂತಾಗಿದೆ.

 

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಮನುಜ ಕುಲದ ವಿಕಾಸ ಮತ್ತು ವಿಜ್ಞಾನದ ಪ್ರಗತಿಯ ಸಂಕೇತ. ಇಪ್ಪತ್ತು ವರ್ಷಗಳಲ್ಲಿ ಮನುಷ್ಯರು ಬಾಹ್ಯಾಕಾಶದಲ್ಲಿ ಸುರಕ್ಷಿತವಾಗಿ ಜೀವಿಸಿ, ಅಲ್ಲಿರುವ ಸವಾಲುಗಳನ್ನು ಎದುರಿಸಿ, ಸಮಸ್ಯೆಯಿಲ್ಲದೆ ಭೂಮಿಗೆ ಮರಳುವುದು ಸಾಧ್ಯ ಎನ್ನುವುದು ಹಲವಾರು ಬಾರಿ ತೋರಿಸಿಕೊಟ್ಟಿದೆ. ತುಂಬಾ ದುಬಾರಿ ಎನ್ನಿಸುವ ಯೋಜನೆ, ಕೃತಕ ಉಪಗ್ರಹಗಳು ಮಾಡುವ ಕೆಲಸಕ್ಕಿಂತ ಹೆಚ್ಚಿನದನ್ನು ಸಾಧ್ಯವಾಗಿಸುತ್ತದೆ. ಇದು ಆಕಾಶದಲ್ಲಿ ಹಾರಾಡುವ ಒಂದು ಪ್ರಯೋಗಾಲಯ. Microgravity ಯಲ್ಲಿ ಮಾತ್ರ ಸಾಧ್ಯವಾಗುವಂತ ಪ್ರೋಟೀನ್ ಗಳನ್ನು ಇದರಲ್ಲಿ ಅಭಿವೃದ್ಧಿ ಪಡಿಸಲಾಗುತ್ತದೆ. ಪ್ರಕೃತಿ ವಿಕೋಪಗಳ ಜಾಡು ಹಿಡಿದು ಹೋಗುವುದು ಇದರ ಇನ್ನೊಂದು ಕೆಲಸ. ಭೂಮಿ ಮತ್ತು ಅದರ ಸಮೀಪದ ಆಕಾಶದ ಮೇಲೆ ಸದಾ ಕಣ್ಣಿಟ್ಟು, ಭೂಮಿಯ ಸುತ್ತುವ ಕೇಂದ್ರ ಕಳಿಸುವ ಚಿತ್ರಗಳು ಮತ್ತು ಮಾಹಿತಿ ಅಪಾರ. ಸುಮಾರು ೧೦ ವರುಷಕ್ಕೂ ಹೆಚ್ಚಿನ ಕಾಲ ಆಕಾಶದಲ್ಲಿ ನಿಲ್ದಾಣದ ಜೋಡಣೆಯ ಕಾರ್ಯ ನಡೆಯಿತ್ತಲ್ಲ. ಆಗ ಇದನ್ನು ಕಟ್ಟುವ ಸಲುವಾಗಿ ಅಭಿವೃದ್ಧಿ ಪಡಿಸಿದ ತಂತ್ರಜ್ಞಾನಗಳು ಇಂದು ಮನುಕುಲದ ಕೆಲ ಗಂಭೀರ ಸಮಸ್ಯೆಗಳನ್ನು, ಅದರಲ್ಲೂ ಮುಖ್ಯವಾಗಿ ವೈದ್ಯಕೀಯ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಹಾಯವಾಗಿವೆ. ಹೀಗೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಆಗಿರುವ ೧೫ ಉಪಯೋಗಗಳ ಪಟ್ಟಿಯನ್ನು ಮಾಡಿದೆ ಅಮೇರಿಕಾದ ನಾಸಾ ಸಂಸ್ಥೆ. (Link: https://www.nasa.gov/mission_pages/station/research/news/15_ways_iss_benefits_earth

ಅಲ್ಲದೆ ಕಳೆದ ವಾರದ ಮುಖ್ಯ ಬೆಳವಣಿಗೆಗಳನ್ನು ಲಿಂಕ್ ಮೂಲಕ ವರದಿ ಮಾಡಿದೆ. Link: https://www.nasa.gov/mission_pages/station/research/news/space-station-science-highlights-07dec20

ಯಮಧರ್ಮ ತೆರೆದು ಹೋದ ಆಧ್ಯಾತ್ಮದ ಬಾಗಿಲು

ಸುಮಾರು ಎರಡು ವರ್ಷದ ಹಿಂದಿನ ಸಮಯ. ಆ ದಿನ ಬುದ್ಧ ಪೂರ್ಣಿಮೆ. ಸಾಯಂಕಾಲ ವೇಳೆ ಬೆಂಗಳೂರಿನ ಟ್ರಾಫಿಕ್ ನಲ್ಲಿ ಕಾರು ಓಡಿಸುತ್ತಿದ್ದ ನನಗೆ ಒಂದಾದರ ಮೇಲೆ ಒಂದರಂತೆ ಫೋನ್ ಕರೆಗಳು ಬರತೊಡಗಿದ್ದವು. ಎಲ್ಲವುಗಳ ಸಂದೇಶವೂ ಒಂದೇ. ನನ್ನ ತಾಯಿ ತೀರಿಕೊಂಡಿರುವುದಾಗಿ, ಕೂಡಲೇ ಹೊರಟು ಬರಬೇಕೆಂದು ಮನೆಯವರು, ಬಂಧುಗಳು, ಸ್ನೇಹಿತರು ತಿಳಿಸುತ್ತಲೆ ಇದ್ದರು. ಆಘಾತ, ಆತಂಕ ಎನ್ನಿಸಿದರೂ ಸಾವರಿಸಿಕೊಂಡು, ಕಾರನ್ನು ಬಂಧುವೊಬ್ಬರ ಕೈಗೆ ಒಪ್ಪಿಸಿ, ಸೀದಾ ಮೆಜೆಸ್ಟಿಕ್ ಗೆ ಬಂದು ನನ್ನ ಊರಾದ ಮಸ್ಕಿ ಗೆ ಹೋಗುವ ಬಸ್ಸನ್ನು ಏರಿದೆ.


ಬೆಳಿಗ್ಗೆ ಊರಿಗೆ ಬಂದು ಸೇರುವಷ್ಟರಲ್ಲಿ, ಮನೆಯಲ್ಲಿ ತಾಯಿಯ ಅಂತಿಮ ದರ್ಶನದ ವ್ಯವಸ್ಥೆ ಮತ್ತು ಅಂತ್ಯ ಸಂಸ್ಕಾರಕ್ಕೆ ಆಗಬೇಕಾದ ಏರ್ಪಾಡುಗಳು ಆಗುತ್ತಿದ್ದವು. ಲಿಂಗಾಯತ ಸಮಾಜ ಮಾಡುವ  ವ್ಯವಸ್ಥಿತ ಏರ್ಪಾಡು ಮತ್ತು ಊರಿನ ಎಲ್ಲ ಧರ್ಮದ ಜನರ ಸಹಕಾರವನ್ನು ಕಂಡು ನನಗೆ ಈ ಊರಲ್ಲಿ ಪ್ರಾಣ ಬಿಡುವುದಕ್ಕೂ ಪುಣ್ಯ ಇರಬೇಕು ಎನ್ನಿಸತೊಡಗಿತ್ತು. ಅಲ್ಲಿಯವರೆಗೆ ಸಾಕಷ್ಟು ಅಂತ್ಯ ಸಂಸ್ಕಾರಗಳಲ್ಲಿ ಭಾಗವಹಿಸಿದ್ದರೂ, ಅಂದು ಮಾತ್ರ ನನ್ನಲ್ಲಿನ ಒಂದು ಭಾಗವು ಸತ್ತು ಹೋಯಿತೆನ್ನುವ ಭಾವನೆ ಮನೆ ಮಾಡಿತ್ತು. ಏನು ಮಾಡುವುದಕ್ಕೂ ತೋಚದಂತಾಗಿತ್ತು.


ಅಂತ್ಯ ಕ್ರಿಯೆ ಮುಗಿದ ರಾತ್ರಿ, ಮಾಡಲು ಇನ್ನೇನು ಕೆಲಸ ಇಲ್ಲ ಎಂದಾಗ ನೆನಪು ಮಾಡಿಕೊಂಡೆ. ಕೊನೆಯ ಬಾರಿ ಮಾತನಾಡಿದಾಗ ತನಗೆ ಕೆಮ್ಮು ಬಂದಿದ್ದು ಆದರೆ ಅದು ಕಡಿಮೆಯಾಗುತ್ತಿರುವುದಾಗಿ ನನ್ನ ತಾಯಿ ತಿಳಿಸಿದ್ದಳು. ಊರಿಗೆ ಯಾವಾಗ ಬರುತ್ತೀಯ ಎಂದು ಕೇಳಿದ್ದಳು. ಬರುವಷ್ಟರಲ್ಲಿ ಅವಳೇ ಇರಲಿಲ್ಲ. ವಾಂತಿ ಬರುತ್ತಿದೆ ಎಂದು ಮನೆಯ ಹೊರಗಡೆ ಹೋದ ಅವಳು ಹಾಗೆ ಉರುಳಿ ಬಿದ್ದಿದ್ದಳು. ಅವಳಿಗೆ ಕೊನೆಯ ಕ್ಷಣದಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಆಸ್ಪತ್ರೆಗೆ ಕರೆದೊಯ್ದ ನಮ್ಮ ನೆರೆ ಮನೆಯಲ್ಲಿರುವ ಡಾಕ್ಟರ್ ತಿಳಿಸಿದ್ದು, ಅಮ್ಮ ಯಾವುದೇ ಚಿಕಿತ್ಸೆಗೆ ಅವಕಾಶ ನೀಡಲಿಲ್ಲ ಎಂದು. ಅವಳಿಗೆ ಯಾರ ಜೊತೆಗೂ ಕೊನೆಯ ಮಾತು ಆಡುವ ಅವಕಾಶ ನೀಡದೆ ಯಮಧರ್ಮ ಹಟಾತ್ತನೆ ಕರೆದೊಯ್ದಿದ್ದ. ಅಂದು ರಾತ್ರಿ ಎಷ್ಟು ಹೊತ್ತಾದರೂ, ಕಣ್ಣು ಕೆಂಪಾಗಿ, ಮೈ ಬಿಸಿಯೇರಿದರೂ  ನನಗೆ ನಿದ್ದೆ ಮಾತ್ರ ಬಾರದು. ನನ್ನ ಮೊಬೈಲ್ ನಲ್ಲಿ ಹಾಕಿಕೊಂಡ ವಿಡಿಯೋನಲ್ಲಿ ಸದ್ಗುರು ಹೇಳುತ್ತಿದ್ದ "ಸಾವು ಸಹಜ ಕ್ರಿಯೆ. ಆದರೆ ಅದು ಬರುವ ಮುಂಚೆಯೇ ನಾವು ಅದನ್ನು ಸ್ವಾಗತಿಸಲು ತಯಾರಿ ಮಾಡಿಕೊಳ್ಳಬೇಕು." ಮಂಕು ಬಡಿದಂತೆ ಎರಡು ದಿನ ಕಳೆದ ನಾನು ಹಿತವಿಲ್ಲದಿದ್ದರೂ ಮತ್ತೆ ಲೌಕಿಕ ಜೀವನಕ್ಕೆ ಸ್ವಲ್ಪ ಅಸಹಜ ಎನ್ನುವ ರೀತಿಯಲ್ಲೇ ಮರಳಿದೆ.


ಬೇರೆಯ ಸಮಸ್ಯೆಗಳು ನನ್ನನ್ನು ಅವರಿಸಿದರೂ, ನಡೆದು ಹೋದದ್ದು ಜೀರ್ಣಿಸಿಕೊಳ್ಳಲು ಕೆಲವು ತಿಂಗಳುಗಳೇ ಬೇಕಾದವು. ಆದರೆ ಆ ಸಮಯದಲ್ಲಿ ನನ್ನ ವಿಚಾರಗಳು ಬದಲಾಗತೊಡಗಿದವು. ದುಡ್ಡು, ಅಸ್ತಿ, ಮರ್ಯಾದೆ ಸಂಪಾದಿಸುವುದಕ್ಕಿಂತ ದ್ವೇಷ, ಗರ್ವ, ಅಹಂ ಗಳನ್ನು ಕಳೆದುಕೊಳ್ಳುವುದೇ ಜೀವನ ಎನ್ನಿಸತೊಡಗಿತು. ಅದುವರೆಗೆ ಓದಿದ ಉಪನಿಷತ್ತುಗಳೆಲ್ಲ ಸಪ್ಪೆ ಎನ್ನಿಸತೊಡಗಿದವು. ಹಿಮಾಲಯದ ಗುಡಿಗಳಿಗೆ ಹೋಗದಿದ್ದರೂ, ಗಂಗೆಯ ಮಡಿಲು ಸೇರದಿದ್ದರು ಜೀವನಕ್ಕೆ ಮುಕ್ತಿ ಎನ್ನುವುದು ಎಲ್ಲರಿಗೂ ಸಾಧ್ಯ ಎನ್ನುವ ನಂಬಿಕೆ ಬಲವಾಗತೊಡಗಿತು. 'ಎಲ್ಲೋ ಹುಡುಕಿದೆ ಇಲ್ಲದ ದೇವರ' ಎಂದು ಬರೆದಿದ್ದು ಶಿವರುದ್ರಪ್ಪನವರೇ ಆದರೂ, ಅದು ನನ್ನ ಹಾಗೆ ನೂರಾರು, ಸಾವಿರಾರು ಜನರ ಎದೆಯಾಳದ ಧ್ವನಿ ಎನ್ನಿಸತೊಡಗಿತು. ಮಾತಿಗಿಂತ ಮೌನ ಶ್ರೇಷ್ಟ ಎಂದು ಹೇಳಿದ್ದು ಓಶೋ ಮಹಾಗುರು. ಅದುವರೆಗೆ ಧ್ಯಾನ ಎಂದರೆ ಏನು ಎಂದು ಗೊತ್ತಿರದಿದ್ದ ನನಗೆ, ಯಾವುದೇ ಚಿತ್ತ ವಿಕಾರಗಳಿಲ್ಲದೆ ಸುಮ್ಮನೆ ಕುಳಿಕೊಳ್ಳುವುದು ಸಾಧ್ಯವಾಗತೊಡಗಿತು. ಭಾವನೆಗಳೆಲ್ಲ ಕರಗಿ ಸ್ಪಷ್ಟತೆ ಮೂಡಲಾರಂಭಿಸಿತು.


ನನ್ನ ಸುಪ್ತ ಮನಸ್ಸು ತಿಳಿದುಕೊಂಡದ್ದು ನನ್ನ ಅರಿವಿಗೆ ಬರಲು ಇನ್ನು ಹೆಚ್ಚಿನ ಸಮಯ ತಗುಲಿತು. ನನಗೆ ಇಂದು ಭಾವನೆಗಳೆಲ್ಲ ತಹಬದಿಗೆ ಬಂದ ಮೇಲೆ ಅನಿಸುವುದು ಏನೆಂದರೆ, ಅವಸರದಲ್ಲಿ ನನ್ನ ತಾಯಿಯನ್ನು ಕರೆದೊಯ್ದ ಯಮಧರ್ಮ, ನನ್ನನ್ನು ಮುಂದೊಂದು ದಿನ ಕರೆದೊಯ್ಯಲು ಬರುವುದಾಗಿ ಖಡಕ್ಕಾಗಿ ಎಚ್ಚರಿಸಿ ಹೋಗಿದ್ದ. ಆದರೆ ಅಲ್ಲಿಯವರೆಗೆ ನಿನಗೆ ತಿಳಿದಿದ್ದು, ಸಾಧ್ಯವಾಗಿದ್ದು  ಮಾಡಿಕೋ ಎನ್ನುವಂತೆ, ನನಗೆ ಆಧ್ಯಾತ್ಮದ ಬಾಗಿಲು ತೆರೆದು ಹೋಗಿದ್ದ. ಯಮನಿಗೆ ಯಾವುದಾದರೂ ಧರ್ಮ ಇದ್ದರೆ ಅದು ಇದೇ ಏನೋ ಎನ್ನುವಂತೆ. ತೆರೆದ ಬಾಗಿಲಿನ ಆಚೆ ಇರುವ ಬುದ್ಧ-ಶಂಕರ-ಬಸವ-ಅಕ್ಕ-ಶರೀಫ-ದಾಸರು ನನ್ನ ಕಾಲದವರಲ್ಲರಾದರೂ, ನನಗೆ ಹೆಚ್ಚು ಆತ್ಮೀಯ ಎನ್ನಿಸತೊಡಗಿದರು. ವೇದ-ಪುರಾಣ-ಗೀತೆಗಳು ಸಪ್ಪೆ ಎನಿಸತೊಡಗಿದವು. ಭಕ್ತಿಯೇ ಪೂಜೆ, ಧರ್ಮವೇ ಪ್ರಸಾದ, ಕರುಣೆಯೇ ತೀರ್ಥ ಎನ್ನುವ ತಿಳುವಳಿಕೆ ಬಂದಿತು. ನಮ್ಮ ಗುಡಿಗಳಲ್ಲಿ ನಡೆಯುವುದು ಅದರ ಅಂಧ ಅನುಕರಣೆ ಮಾತ್ರ ಎನ್ನುವ ಸ್ಪಷ್ಟತೆ ಮೂಡಿತು.


ಅರ್ಥವಿಲ್ಲದ ಜೀವನದಲ್ಲಿ, ಏನು ನಿನ್ನ ಗುರಿ ಎಂದು ಕೇಳಿ ಹೋದ ಯಮ ಮತ್ತೆ ಬರುವಷ್ಟರಲ್ಲಿ ಉತ್ತರ ಹುಡುಕಿಕೊಳ್ಳಬೇಕು. ಆತನ ಮೇಲೆ ನನಗೆ ಯಾವುದೇ ದೂರುಗಳಿಲ್ಲ. ಬದಲಿಗೆ ಜೀವನ ನನಗೆ ಈಗಾಗಲೇ ಕೊಟ್ಟಿರುವ ಸೌಕರ್ಯಗಳಿಗೆ ಋಣಿಯಾಗಿದ್ದೇನೆ. ಅದರಲ್ಲೇ ನನ್ನಿಂದ ಸಾಧ್ಯ ಆಗುವುದರ ಕಡೆಗೆ ಹೆಜ್ಜೆ ಇಟ್ಟಿದ್ದೇನೆ. ಸ್ವಾರ್ಥದಿಂದಾಚೆಗೆ ಇಡುವ ಪುಟ್ಟ ಹೆಜ್ಜೆಗಳು ನನ್ನಲ್ಲಿ ಹೊಸ ಉತ್ಸಾಹ ಮೂಡಿಸಿವೆ. ಅಡಿಗರು ತಮ್ಮ ಕಾವ್ಯದಲ್ಲಿ ಹೇಳಿದ ಹಾಗೆ ದೂರ ತೀರಕೆ ಕರೆಯುವ ಮೋಹನ ಮುರಳಿಯ ಕರೆ ಪ್ರತಿಯೊಬ್ಬರಿಗೆ ಅವರ ಸಮಯ ಬಂದಾಗ ಕೇಳಿಯೇ ಕೇಳಿಸುತ್ತದೆ. ಅದಕ್ಕೆ ಮುಂಚೆ ನಮ್ಮ ಕರ್ಮದ ಹೊರೆ ಕಡಿಮೆ ಮಾಡಿಕೊಳ್ಳುವ ಅವಕಾಶಗಳ ಸದುಪಯೋಗ ಮಾಡಿಕೊಳ್ಳುವುದು ನಮಗೆ  ಬಿಟ್ಟಿದ್ದು. ನಾನು ಆ ದಿಶೆಯಲ್ಲಿ ಈಗಾಗಲೇ ಹೆಜ್ಜೆ ಇಟ್ಟಾಗಿದೆ. ಬದುಕು ಕಳೆದು ಹೋಗುವ ಮುನ್ನವೇ ಬದುಕಬೇಕಲ್ಲವೇ?

Sunday, December 13, 2020

ಮೈಯಲ್ಲಿನ ತೂಕ ಕಡಿಮೆಯಾದಾಗ ಅದು ಹೋಗುವುದು ಎಲ್ಲಿಗೆ?

ಈಗ ಎಲ್ಲರಿಗೂ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಅಲ್ಲವೇ? ನಿಮ್ಮ ಎತ್ತರಕ್ಕೆ ಅನುಗುಣವಾಗಿ ಇರದೇ ನಿಮ್ಮ ದೇಹದ ತೂಕ ಹೆಚ್ಚಿದ್ದರೆ ಅದನ್ನು ಕಡಿಮೆ ಮಾಡಿಕೊಳ್ಳಲು ವೈದ್ಯರು ಸಲಹೆ ನೀಡುತ್ತಾರೆ ಅಲ್ಲವೇ? ಆಗ ತೂಕ ಹೆಚ್ಚಿದ್ದವರು ಏನೆಲ್ಲಾ ಸಾಹಸ ಮಾಡುತ್ತಾರೆ. ಬೆಳಿಗ್ಗೆ ಇಲ್ಲವೇ ಸಂಜೆ ನಡಿಗೆ, ಲಘು ಓಟ, ಜಿಮ್ ಸೇರಿಕೊಳ್ಳುವುದು, ತಿನ್ನುವ ಆಹಾರದ ಕಡೆಗೆ ಕಾಳಜಿ ವಹಿಸುವುದು,  ಕಡಿಮೆ ಕೊಬ್ಬಿನಂಶ ಇರುವ ಪದಾರ್ಥ ಸೇವಿಸುವುದು ಹೀಗೆ ಎಲ್ಲ ಪ್ರಯತ್ನಗಳು ತೂಕ ಕಡಿಮೆ ಮಾಡಿಕೊಳ್ಳುವುದರ ಕಡೆಗೆ ಸಾಗುತ್ತವೆ. ಅದರ ಪ್ರತಿಫಲ ಎಂಬಂತೆ ತೂಕದ ಯಂತ್ರ ಕಡಿಮೆ ತೂಕ ತೋರಿಸಲು ಶುರು ಮಾಡಿದಾಗ 'ಉಸ್ಸಪ್ಪ' ಎನ್ನುತ್ತಾರೋ ಅಥವಾ ಖುಷಿಯಿಂದ ಇನ್ನು ಹೆಚ್ಚು ನಡಿಗೆ, ಓಟ ಪ್ರಾರಂಭ ಮಾಡುತ್ತಾರೋ ಇಲ್ಲವೇ ಹಳೆಯ ಆಲಸ್ಯಕ್ಕೆ ಶರಣು ಹೋಗುತ್ತಾರೋ ಅವರವರ ಮೇಲೆ ಅವಲಂಬಿತವಾಗಿದೆ. ಆದರೆ ನನಗೆ ಮಾತ್ರ ಪ್ರಶ್ನೆ ಕಾಡಿದ್ದು, ಈ ಮೈಯಲ್ಲಿನ ತೂಕ ಕೊಡುವ ಭೌತಿಕ ವಸ್ತು ದೇಹದಿಂದ ಮರೆಯಾಗಿ ಹೋಗಿದ್ದು ಹೇಗೆ ಎನ್ನುವುದು?


ಅದಕ್ಕೆ ನಾನು ಗೂಗಲ್ ಹುಡುಕಾಟ ಆರಂಭಿಸಿದಾಗ ಕೆಲವು ಕುತೂಹಲ ಎನ್ನಿಸುವ ವಿಷಯಗಳು ಗೊತ್ತಾದವು. ಅವುಗಳನ್ನು ನಿಮ್ಮೊಂದಿಗೆ ಹಂಚಿಕೊಂಡರಾಯಿತು ಎನ್ನುವ ಉದ್ದೇಶ ಈ ಲೇಖನದ್ದು. ಮೊದಲಿಗೆ ನಾವು ತಿಳಿಕೊಳ್ಳಬೇಕಾದದ್ದು ಕೊಬ್ಬು ಹೇಗೆ ನಮ್ಮ ಮೈ ಸೇರಿತು ಎನ್ನುವುದು, ನಂತರ ಅದು ಕರಗಿ ಹೋಗುವ ಬಗೆಯನ್ನು. 


ನಾವು ದೇಹಕ್ಕೆ ಅಗತ್ಯ ಇರುವದಕ್ಕಿಂತ ಹೆಚ್ಚಿನ ಪ್ರೋಟೀನ್, ಕಾರ್ಬೋಹೈಡ್ರೇಟ್ ಆಹಾರ ಸೇವಿಸಿದಾಗ ಅದು ಕೊಬ್ಬಿನಂಶವಾಗಿ ಮಾರ್ಪಟ್ಟು ನಮ್ಮ ದೇಹದಲ್ಲಿ ಶೇಖರವಾಗಿ, ನಮ್ಮ ದೇಹದ ತೂಕವನ್ನು ಹೆಚ್ಚಿಸುತ್ತದೆ. ನಾವು ದೇಹಕ್ಕೆ ಪರಿಶ್ರಮ ಕೊಡುವ ಕೆಲಸದಲ್ಲಿ ತೊಡಗಿದಾಗ, ಆಗ ನಡೆಯುವ ಜೀವರಾಸಾಯನಿಕ ಕ್ರಿಯೆಯಲ್ಲಿ ಅದು ಕರಗಿ ದೇಹಕ್ಕೆ ಶಕ್ತಿ ಕೊಡುವುದಲ್ಲದೆ, ಎರಡು ತ್ಯಾಜ್ಯ ವಸ್ತುಗಳನ್ನು ಉತ್ಪಾದಿಸುತ್ತದೆ. ಆ ತಾಜ್ಯ ವಸ್ತುಗಳು ನೀರು ಮತ್ತು ಕಾರ್ಬನ್ ಡೈಆಕ್ಸೈಡ್. ನೀರು ಬೆವರಿನ ಮೂಲಕ ಇಲ್ಲವೇ ಮೂತ್ರದ ಮೂಲಕ ದೇಹದಿಂದ ಹೊರಗೆ ಹೋದರೆ, ಕಾರ್ಬನ್ ಡೈಆಕ್ಸೈಡ್ ನ್ನು ನಾವು ಉಸಿರಿನ ಮೂಲಕ ಹೊರ ಹಾಕುತ್ತೇವೆ. 

ಆದರೆ ಇಲ್ಲಿ ಗಮನಿಸಬೇಕಾದ ಸಂಗತಿ ಏನೆಂದರೆ, ಇಲ್ಲಿ ನೀರಿನ ಪ್ರಮಾಣ ಕೇವಲ ಶೇಕಡಾ ೧೬ ರಷ್ಟು ಮಾತ್ರ. ಉಳಿದ ಶೇಕಡಾ ೮೪ ರಷ್ಟು ತೂಕ ದೇಹದಿಂದ  ಮರೆಯಾಗಿದ್ದು ನಮ್ಮ ಶ್ವಾಸಕೋಶಗಳ ಮೂಲಕ ಕಾರ್ಬನ್ ಡೈಆಕ್ಸೈಡ್ ಆಗಿ.

C55H104O6 + 78O2 → 55CO2  + 52H2O  + ಶಕ್ತಿ 

ನೀವು ಈ ರಾಸಾಯನಿಕ ಕ್ರಿಯೆಯ ಸಮೀಕರಣ ಗಮನಿಸಿದರೆ, ಇಲ್ಲಿರುವುದು ಕಾರ್ಬನ್, ಹೈಡ್ರೋಜನ್ ಮತ್ತು ಆಕ್ಸಿಜನ್ ಕಣಗಳು ಮಾತ್ರ. ಈ ಮೂರರಲ್ಲಿ ಹೆಚ್ಚಿನ ತೂಕವಿರುವುದು ಕಾರ್ಬನ್ ಅಣುಗಳೇ. ಹಾಗಾಗಿ ತೂಕ ಕಡಿಮೆಯಾದಾಗ, ಅದರಲ್ಲಿ ಕಾರ್ಬನ್ ಅಣುಗಳ ಪಾತ್ರವೇ ಹಿರಿದಾಗಿತ್ತು. 

ಕಾರ್ಬನ್ ನಮ್ಮ ದೇಹ ಸೇರಿದ್ದು ನಮ್ಮ ಊಟದ ಮೂಲಕ ಹಾಗು ಹೈಡ್ರೋಜನ್ ನಾವು ಕುಡಿಯುವ ನೀರಿನ ಮೂಲಕ ಮತ್ತು ಊಟದಲ್ಲಿನ ನೀರಿನಂಶದಿಂದ. ಆಕ್ಸಿಜನ್ ನಮ್ಮ ದೇಹದ ಒಳಗೆ ಬಂದಿದ್ದು, ನಾವು ಉಸಿರು ಒಳಗೆ ಎಳೆದುಕೊಂಡಾಗ. ಆದರೆ ಅದು ಜೀವಕೋಶಗಳ ಶಕ್ತಿ ಉತ್ಪಾದನೆಯ ಕ್ರಿಯೆಯಲ್ಲಿ ಭಾಗವಹಿಸಿ ಹೊರ ಹೋಗುವಾಗ ಕಾರ್ಬನ್ ಡೈಆಕ್ಸೈಡ್ ಆಗಿ ಮಾರ್ಪಟ್ಟು, ಹೆಚ್ಚು ತೂಕದ ಕಾರ್ಬನ್ ಅಣುಗಳನ್ನು ದೇಹದಿಂದ ಹೊರಕ್ಕೆ ಹಾಕಿತು. ಹಾಗೆ ದೇಹದ ಭಾರವೂ ಕಡಿಮೆಯಾಯಿತು. 

ನಾವು ಉಸಿರಾಡುವ ಗಾಳಿ ನಮ್ಮ ಕಣ್ಣಿಗೆ ಕಾಣದೆ ಹೋಗುವುದರಿಂದ, ಅದರ ಬೃಹತ್ ಎನ್ನಿಸುವ ಪ್ರಮಾಣ ನಮ್ಮ ಗಮನಕ್ಕೆ ಬರದೇ ಹೋಗುತ್ತದೆ. ಆದರೆ ನೆನಪಿಡಿ. ನಿಮ್ಮ ಗೆಳೆಯ ಹತ್ತು ಕೆ.ಜಿ. ತೂಕ ಕಳೆದುಕೊಂಡರೆ ಅದರಲ್ಲಿ ೮.೪ ಕೆ.ಜಿ. ತೂಕ ಮರೆಯಾಗಿ ಹೋದದ್ದು ಅವನ ಉಸಿರಾಟದ ಮೂಲಕ. ಒಂದು ತಾಸಿನ ವ್ಯಾಯಾಮ ೩೯ ಗ್ರಾಂ ನಷ್ಟು ತೂಕದ ಕಾರ್ಬನ್ ನ್ನು ದೇಹದಿಂದ ಹೊರಗೆ ಹಾಕುತ್ತದೆ. ಮತ್ತೆ ಅದೇ ಪ್ರಮಾಣ ಊಟದ ಮೂಲಕ ದೇಹ ಸೇರದಂತೆ ನೋಡಿಕೊಂಡರೆ, ಒಂದು ತಿಂಗಳಲ್ಲಿ ಎಷ್ಟು ತೂಕ ಕಳೆದುಕೊಳ್ಳಬಹುದು ಎಂದು ನೀವೇ ಲೆಕ್ಕ ಹಾಕಿ.

 ನಾನು ಈ ವಿಷಯ ತಿಳಿದುಕೊಂಡಿದ್ದು ಲಿಂಕ್ ನಲ್ಲಿರುವ ವಿವರಣೆಯಿಂದ. ಹೆಚ್ಚಿನ ಮಾಹಿತಿಗೆ ಅದನ್ನೇ ಓದಿ ನೋಡಿ.


Source: https://www.bmj.com/content/349/bmj.g7257

Link: https://www.bmj.com/content/349/bmj.g7257

Friday, December 11, 2020

ಕಣ್ಣಿಗೆ ಕಾಣದ್ದು, ಕಿವಿಗೆ ಕೇಳಿಸದ್ದು

ನಾವು ನಮ್ಮ ಪಂಚೇಂದ್ರಿಯಗಳ ಮೂಲಕ ಜಗತ್ತಿನ ಅನುಭವ ಪಡೆಯುತ್ತೇವೆ. ನೀವು ಈಗ   ನೋಡುತ್ತಿರುವುದು ನಿಮ್ಮ ಫೋನ್ (ಅಥವಾ ಕಂಪ್ಯೂಟರ್) ಅಲ್ಲ. ಬದಲಿಗೆ ಅದರ ಅದರ ಮೇಲೆ ಬಿದ್ದ ಬೆಳಕು ಪ್ರತಿಫಲಿಸಿ ನಿಮ್ಮ ಕಣ್ಣಿನ ಒಳಗಡೆ ಮೂಡಿದ ಬಿಂಬವನ್ನ. ಹಾಗೆಯೇ ನಿಮ್ಮ ಪಕ್ಕದವರು ನಿಮ್ಮನ್ನು ಕೈ ಮುಟ್ಟಿ ಮಾತನಾಡಿಸಿದರೆ ನಿಮಗೆ ಅರಿವಾಗುವದು ಅವರ ಕೈ ಸ್ಪರ್ಶ ಅಲ್ಲ. ನಿಮ್ಮ ಅನುಭವಕ್ಕೆ ಬಂದದ್ದು ನಿಮ್ಮ ಚರ್ಮದ ಮೇಲೆ ಮೂಡಿದ ಸಂವೇದನೆ ಮಾತ್ರ. ಪ್ರತಿಯೊಂದು ಇಂದ್ರಿಯವು ಕೆಲಸ ಮಾಡುವ ಬಗೆ ಹಾಗೆಯೇ. ನಮ್ಮ ಇಂದ್ರಿಯಗಳ ಸಾಮರ್ಥ್ಯಕ್ಕೂ ಹಲವಾರು ಇತಿ ಮಿತಿಗಳಿವೆ. ಹಾಗಾಗಿ ನಮ್ಮ ಇಂದ್ರಿಯಗಳ ಗ್ರಹಿಕೆಗೆ ಸಿಕ್ಕದೆ ಹೋಗುವ ಸಾವಿರಾರು ವಿಷಯಗಳ ಅನುಭವ ನಮಗೆ ದಕ್ಕದೆ ಹೋಗುತ್ತದೆ. ಅದು ನನ್ನ ಇಂದಿನ ವಿಷಯ ವಸ್ತು.
 

ಮನೆಯಲ್ಲಿಯ ಮೈಕ್ರೋವೇವ್ ಓವೆನ್ ಹೇಗೆ ಅಡುಗೆ ಬಿಸಿ ಮಾಡುತ್ತದೆ ಎಂದು ಯೋಚಿಸಿದ್ದೀರಾ? ಅಲ್ಲಿ ನೀವು ಕಡ್ಡಿ ಗೀರುವುದಿಲ್ಲ, ಬೆಂಕಿ ಹಚ್ಚುವುದಿಲ್ಲ. ಅದರೊಳಗೆ ಇಟ್ಟ ಪಾತ್ರೆ ಹೆಚ್ಚು ಬಿಸಿಯಾಗದೆ ಇದ್ದರೂ, ಅದರೊಳಗಿನ ಅಡುಗೆ (ಮ್ಯಾಗಿ ನೂಡಲ್ಸ್?) ಮಾತ್ರ ಬಿಸಿ ಬಿಸಿಯಾಗಿ ಹೇಗೆ ತಯಾರಾಗಿರುತ್ತದೆ? ಸುಲಭ ಉತ್ತರ, ಮೈಕ್ರೋವೇವ್ ಕಿರಣಗಳು ಕಣ್ಣಿಗೆ ಕಾಣದೆ ಇದ್ದರೂ, ಶಕ್ತಿಯುತವಾಗಿ ಕೆಲಸ ಮಾಡುತ್ತವೆ. ನಮಗೆ ಕಣ್ಣಿಗೆ ಗೋಚರವಾಗುವುದು VIBGYOR ಬಣ್ಣಗಳ ಕಿರಣಗಳು ಮಾತ್ರ. Violet ಬಣ್ಣದ ಆಚೆಗಿನ ಕಿರಣಗಳು Ultraviolet, X-Ray, Gamma ಹಾಗೆ Red ಬಣ್ಣದ ಈಚೆಗಿನ ಕಿರಣಗಳಿಗೆ Infrared, Microwave, Radio ಎಂದು ಕರೆಯುತ್ತೇವೆ. ನಮ್ಮ ಕಣ್ಣಿಗೆ ಕಾಣುವುದಕ್ಕಿಂತ, ಕಾಣದೆ ಹೋಗುವುದು ಅಗಾಧವಾಗಿರುವುದು ನಿಮಗೆ ಗೊತ್ತೇ? ಅವುಗಳ ಉಪಯೋಗ ಮಾತ್ರ ನಾವು ದಿನ ನಿತ್ಯ ಎನ್ನುವಂತೆ ರೇಡಿಯೋ, ಮೊಬೈಲ್ ಫೋನ್, ಕ್ಷ-ಕಿರಣ ಹೀಗೆ ಹಲವಾರು ಉಪಕರಣಗಳ ಸಹಾಯದಿಂದ ಸಾಧ್ಯವಾಗುತ್ತದೆ.


ನೋಡುವ ವಸ್ತು ಒಂದೇ ಆಗಿದ್ದರೂ, ಅದು ನಮಗೆ ಕಂಡ ಹಾಗೆ ಇತರೆ ಪ್ರಾಣಿಗಳಿಗೆ ಕಾಣುವುದಿಲ್ಲ. ಕೆಲವೊಂದು ಪ್ರಾಣಿಗಳು ಬಣ್ಣ ಗುರುತಿಸಲಾರವು. ಆದರೆ ಬೆಕ್ಕುಗಳು ನಮಗಿಂತ ಹೆಚ್ಚು ಅಗಲದ ೨೦೦ ಡಿಗ್ರಿ ನೋಟವನ್ನು ನೋಡಬಲ್ಲವು. ಕತ್ತಲಾದರೆ ನಾವು ಮನೆ ಸೇರಿದರೆ, ಕಾಡಿನಲ್ಲಿನ ಬೇಟೆ ಪ್ರಾಣಿಗಳು ಹಾಗು ನಿಶಾಚರ ಹಕ್ಕಿಗಳು ಆಗ ಹೊರ ಬೀಳುವುದಿಲ್ಲವೇ? ಪ್ರಕೃತಿಯು ಅವುಗಳ ದೇಹವನ್ನು ಬೇರೆ ತರಹ ವಿನ್ಯಾಸ ಮಾಡಿ ಅವುಗಳ ಇಂದ್ರಿಯಗಳ ಸಾಮರ್ಥ್ಯವನ್ನು ಅವುಗಳ ಜೀವನ ಶೈಲಿಗೆ ಹೊಂದುವಂತೆ ಬದಲಾಯಿಸಿದೆ. ನಾಯಿಗಳ ವಾಸನೆ ಗುರುತು ಹಿಡಿಯುವ ಶಕ್ತಿ ನಮಗಿಂತ  ಹೆಚ್ಚು ಇರುವ ಹಾಗೆ, ಹಾವುಗಳು ಸೂಕ್ಷ್ಮ ಕಂಪನಗಳನ್ನು ಗುರುತಿಸಿದ ಹಾಗೆ ಎಲ್ಲ ಪ್ರಾಣಿ, ಪಕ್ಷಿಗಳು ವಿವಿಧ ಸ್ಥರದಲ್ಲಿ ಇಂದ್ರಿಯ ಸಾಮರ್ಥ್ಯ ಹೊಂದಿವೆ. ಎಲ್ಲ ಜೀವಿಗಳಿಗೂ, ಕಾಣಿಸುವ ಬೆಳಕು, ಕೇಳಿಸುವ ಶಬ್ದ, ವಾಸನೆ, ರುಚಿ ಗುರುತಿಸುವಿಕೆ, ಹಾಗೆಯೆ ಸ್ಪರ್ಶದ ಅನುಭವಕ್ಕೆ ಬೇರೆ ಬೇರೆ ವ್ಯಾಪ್ತಿಗಳಿವೆ. ಅದರಾಚೆಗೆ ಇರುವುದು ಅವುಗಳ ಅನುಭವಕ್ಕೆ ಬರುವುದಿಲ್ಲ ಅಷ್ಟೇ. ಆದರೆ ಇರುವಿಕೆಯನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ.


ಹಾಗೆಯೇ ನಿಮ್ಮ ಶ್ರವಣ ಶಕ್ತಿಗೆ ಒಂದು ಪುಟ್ಟ ಪರೀಕ್ಷೆ. ಲಿಂಕ್ ನಲ್ಲಿರುವ ಧ್ವನಿಯನ್ನು ಆಲಿಸಿ. ಅದರ ಮೊದಲ ಕೆಲವು ಕ್ಷಣಗಳು ಹಾಗು ಕೊನೆಯ ಕ್ಷಣಗಳು ನಿಮಗೆ ಕೇಳಿಸದೇ ಹೋಗಬಹುದು. ಆದರೂ ಸಂಪೂರ್ಣ ಆಲಿಸಿ. ನಂತರ ಮನೆಯಲ್ಲಿನ ಚಿಕ್ಕ ಮಕ್ಕಳಿಗೆ ಇದನ್ನು ಕೇಳಿಸಿ ನೋಡಿ. ನಿಮಗಿಂತ ಹೆಚ್ಚಿನ frequency ಅವರಿಗೆ ಕೇಳಿಸುವುದಾಗಿ ಹೇಳುತ್ತಾರೆ. ತರಂಗಾಂತರದಲ್ಲಿ ಶಬ್ದ ಇದ್ದರೂ, ಅದು ಚಿಕ್ಕ ಮಕ್ಕಳಿಗೆ ಕೇಳಿಸಿದರೂ, ನಮಗೆ ಮಾತ್ರ ಕೇಳಿಸದೇ ಹೋಗಿತ್ತು.

https://www.youtube.com/watch?v=PAsMlDptjx8

 



ವಿಜ್ಞಾನದ ತಿಳಿವು ಪಂಚೇಂದ್ರಿಯಗಳ ಸಾಮರ್ಥ್ಯಕ್ಕೆ ನಿಲುಕದ ಅನುಭೂತಿ ಮತ್ತು ಜ್ಞಾನವನ್ನು ನಮ್ಮದಾಗಿಸುತ್ತ ಹೋಗುತ್ತದೆ. ಪ್ರಕೃತಿಯ ರಹಸ್ಯಗಳು ತಮಗೆ ತಾವೇ ತೆರೆದುಕೊಳ್ಳುತ್ತಾ ಹೋಗುತ್ತವೆ. ಇದು ಎಷ್ಟು ಕುತೂಹಲಕಾರಿ ವಿಷಯ ಅಲ್ಲವೇ?

Thursday, December 10, 2020

ವಿಶ್ವದ ಅಗಾಧತೆ: ನಮಗೆಷ್ಟು ಗೊತ್ತು?

ನಾನು ಶಾಲೆ ಓದುತ್ತಿರುವಾಗ, ನಮ್ಮ ಸೌರ ಮಂಡಲವನ್ನೇ (Solar System) ವಿಶ್ವ (Universe) ಎಂದುಕೊಂಡಿದ್ದೆ. ಆದರೆ ಕಾಲೇಜು ಓದುತ್ತಿರುವಾಗ ನಮ್ಮ ಸೌರ ಮಂಡಲದ  ಹಾಗೆ ೫೦೦ಕ್ಕು ಹೆಚ್ಚು ಸೌರ ಮಂಡಲಗಳಿದ್ದು ಅವನ್ನೆಲ್ಲ ಒಟ್ಟುಗೂಡಿ ಮಿಲ್ಕಿ ವೆ ಗ್ಯಾಲಕ್ಸಿ (Milki Way Galaxy) ಎನ್ನುತ್ತಾರೆ ಎಂದು ತಿಳಿಯಿತು. ಮುಂದೆ ಕುತೂಹಲಕ್ಕಾಗಿ ವಿಜ್ಞಾನದ ಬೆಳವಣಿಗೆಗಳನ್ನು ತಿಳಿದುಕೊಳ್ಳುತ್ತ ಹೋದಾಗ ಆಂಡ್ರೊಮೆಡಾ ಗ್ಯಾಲಕ್ಸಿ (Andromeda Galaxy) ನಮ್ಮ ಗ್ಯಾಲಕ್ಸಿಗಿಂತ ಹಿರಿದಾದುದು ಎನ್ನುವ ವಿಷಯ ತಿಳಿಯಿತು. ಹೀಗೆ ಕಾಡಿನಲ್ಲಿ ಮರಕ್ಕಿಂತ ಮರ ದೊಡ್ಡದು ಎನ್ನುವ ಹಾಗೆ, ವಿಶ್ವದ ಅಗಾಧತೆ ನಾವು ಅರ್ಥ ಮಾಡಿಕೊಳ್ಳುತ್ತ ಹೋದಷ್ಟು ದೊಡ್ಡದಾಗುತ್ತ ಹೋಗುತ್ತದೆ. ವರ್ಷದ ಭೌತ ಶಾಸ್ತ್ರದ ನೊಬೆಲ್ ಪ್ರಶಸ್ತಿ ನಮ್ಮ ಗ್ಯಾಲಕ್ಸಿ ಕೇಂದ್ರ ಬಿಂದು ಒಂದು ಕಪ್ಪು ರಂಧ್ರ (Black Hole) ಎಂದು ಕಂಡು ಹಿಡಿದ ವಿಜ್ಞಾನಿಗಳಿಗೆ ದೊರಕಿತಲ್ಲವೇ. ಇದು ಹೀಗೆ ಇರಲು ಸಾಧ್ಯವೇ ಎಂದು ಆಶ್ಚರ್ಯ ಎನಿಸಿತು.


ವಿಶ್ವದ ಬಗ್ಗೆ ನಮ್ಮ ತಿಳುವಳಿಕೆ ಸಾವಿರಾರು ವರುಷಗಳಿಂದ ಬದಲಾಗುತ್ತ ಬಂದಿದೆ ಮತ್ತು ಹಾಗೆ ಬದಲಾಗುವುದು ಮುಂದುವರೆದಿದೆ. ಭೂಮಿ ಚಪ್ಪಟೆಯಾಗಿದೆ ಎಂದು ನಂಬಿದ್ದ ಕಾಲವಿತ್ತು. ಹಾಗೆಯೇ ಭೂಮಿಯ ಸುತ್ತ ಸೂರ್ಯ ಸುತ್ತುವುದು ಎಂದು ನಂಬಿದ್ದ ಕಾಲವೂ ಇತ್ತು. ಸೂರ್ಯನೇ ಕೇಂದ್ರ ಬಿಂದು ಎಂದ ಗೆಲಿಲಿಯೋ ಅಂದಿನ ಸಮಾಜಕ್ಕೆ ಅರ್ಥವಾಗದೇ ಹೋದರೂ, ವಿಜ್ಞಾನದ ಬೆಳವಣಿಗೆಗೆ ಅವನ ಕೊಡುಗೆ ಅಪಾರ. ಅವನು ತಯಾರಿಸಿದ ಟೆಲಿಸ್ಕೋಪ್ ಗಳು, ಗ್ರಹಗಳ ಚಲನೆಯನ್ನು ಹಾಗೆಯೇ ವಿಶ್ವದ ರಚನೆಯನ್ನು ತೆರೆದಿಡುತ್ತಾ ಹೋದವು. ಅವನ ಹಾಗೆ ಖಗೋಳಶಾಸ್ತ್ರದಲ್ಲಿ ಆಸಕ್ತಿ ಇದ್ದ ಸಾಕಷ್ಟು ವಿಜ್ಞಾನಿಗಳು ಹೊಸ ವಿಷಯಗಳನ್ನು ಕಲಿಯುತ್ತ, ಹಳೆಯ ತಪ್ಪು ತಿಳುವಳಿಕೆಗಳನ್ನು ತಿದ್ದುತ್ತಾ ಸಾಗಿದರು. ನ್ಯೂಟನ್, ಐನ್ ಸ್ಟೀನ್ ರಂತ ದೈತ್ಯ ಪ್ರತಿಭೆಗಳು ವಿಜ್ಞಾನವನ್ನು ಮನುಕುಲದ ಮುಂಚೂಣಿಗೆ ತಂದರು. ಸ್ಟೀಫೆನ್ ಹಾಕಿಂಗ್ ವಿಶ್ವದ ಬಗೆಗಿನ ನಮ್ಮ ತಿಳುವಳಿಕೆಯ ಪರಿಧಿಯನ್ನು ವಿಸ್ತರಿಸಿದರು. ಇತ್ತೀಚಿನ ವರ್ಷಗಳಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ವೇಗದ ಬೆಳವಣಿಗೆ ಕಂಡು, ಹೆಚ್ಚಿನ ಮಾಹಿತಿಯನ್ನು ನಿಖರವಾಗಿ ಕಲೆ ಹಾಕಲು ಸಾಧ್ಯವಾಗಿದೆ.

 

ನಮ್ಮದೇ ಲೋಕದಲ್ಲಿ  ಮುಳುಗಿ ಹೋಗುವ ನಮಗೆ, ನಾವು ಇರುವ ಭೂಮಿ ಎಷ್ಟು ಚಿಕ್ಕದು ಎನ್ನುವ ಅಂದಾಜು ಸಿಗಲಿಕ್ಕೆ ಈ ವಿಡಿಯೋ ನೋಡಿ. ನಾವು ಇರುವ ಭೂಮಿ ಏನು ಅಲ್ಲ, ನಮ್ಮ ಸೂರ್ಯನೇ ಯಾವ ಲೆಕ್ಕಕ್ಕೂ ಅಲ್ಲ ಅನ್ನುವಷ್ಟು ದೊಡ್ಡ ದೊಡ್ಡ ನಕ್ಷತ್ರಗಳಿವೆ ಈ ವಿಶ್ವದಲ್ಲಿ. ಹಾಗೆ ನಕ್ಷತ್ರ  ಉರಿಯುವುದು ಮುಗಿದು ಹೋದ ಮೇಲೆ ಶೂನ್ಯವಾಗಿ ಬದಲಾಗಿ, ಆದರೆ ತಮ್ಮ ಗುರುತ್ವಾಕರ್ಷಣೆಯನ್ನು ಉಳಿಸಿಕೊಂಡು ಹತ್ತಿರದ ಎಲ್ಲವನ್ನು ತಮ್ಮ ಶೂನ್ಯದಲ್ಲಿ ಅರಗಿಸಿಕೊಳ್ಳುವ ಅನೇಕ ಕಪ್ಪು ರಂಧ್ರಗಳಿವೆ. ಹಾಗಿದ್ದರೂ ವಿಶ್ವದ ಅಗಾಧತೆ ಹಿಗ್ಗುತ್ತಲೇ ಇದೆ. ಇದು ವಿಸ್ಮಯದ ಸಂಗತಿ ಅಲ್ಲವೇ? 


ಅಂದ ಹಾಗೆ ನಿಮ್ಮ ಮನೆಯಲ್ಲಿ ಟೆಲಿಸ್ಕೋಪ್ ಇದೆಯೇ? ಇದ್ದಲ್ಲಿ, ಡಿಸೆಂಬರ್ ೨೧ ರಾತ್ರಿ ನಿಮ್ಮ ಮನೆ ಮಾಳಿಗೆ ಹತ್ತಿ, ದೊಡ್ಡ ಗ್ರಹಗಳಾದ ಶನಿ ಹಾಗು ಗುರು ಗ್ರಹಗಳ ಸಂಯೋಗ ವೀಕ್ಷಣೆಗೆ ಸಿದ್ಧತೆ ಮಾಡಿಕೊಂಡಿದ್ದೀರಾ?



https://www.youtube.com/watch?v=i93Z7zljQ7I