Showing posts with label ಕನ್ನಡ ಬರಹಗಳು. Show all posts
Showing posts with label ಕನ್ನಡ ಬರಹಗಳು. Show all posts

Sunday, March 3, 2024

ಸೋತಾಗ ಹಣೆ ಬರಹ, ಅರ್ಥವಾಗದಿದ್ದಾಗ ಕರ್ಮ

ನಿಮ್ಮ ಸ್ನೇಹಿತ ಬಲು ಪ್ರಯತ್ನಶಾಲಿ. ಅವನ ಪ್ರಯತ್ನಗಳನ್ನು ನೀವು ಮೆಚ್ಚುಗೆಯಿಂದಲೇ ಗಮನಿಸುತ್ತಿರುತ್ತೀರಿ. ಅವನು ಎಂತಹ ಸಮಸ್ಯೆಗಳೇ ಬರಲಿ, ಧೈರ್ಯದಿಂದಲೇ ಎದುರಿಸುತ್ತಿರುತ್ತಾನೆ. ಆದರೆ ಅವನಿಗೆ ವಿಜಯಮಾಲೆ ದೂರ. ಅವನು ಛಲ ಬಿಡದ ತ್ರಿವಿಕ್ರಮ. ಮತ್ತೆ ತನ್ನ ಪ್ರಯತ್ನಗಳನ್ನು ಮುಂದುವರೆಸುತ್ತಾನೆ. ಆದರೆ ನೋಡಿ. ಅದು ಏನು ಮಾಡಿದರೂ ಅವನು ಜಯಶಾಲಿ ಆಗುತ್ತಿಲ್ಲ. ಆಗ ನಮ್ಮ-ನಿಮ್ಮ ಬಾಯಿಂದ ಉದ್ಗಾರ ಹೊರಡುತ್ತದೆ. "ಹಣೆ ಬರಹದ ಮುಂದೆ ಯಾರೇನು  ಮಾಡುವುದಕ್ಕಾಗುತ್ತದೆ?"

ವಿಚಾರ ಮಾಡಿ ನೋಡಿದರೆ ಹಣೆ ಬರಹ ಅಂತ ಏನೂ ಇರುವುದಿಲ್ಲ. ಅದನ್ನೇ ಎಲ್ಲರು ನಂಬಿಕೊಂಡಿದ್ದರೆ, ಯಾರು ಪ್ರಯತ್ನವನ್ನೇ ಮಾಡುತ್ತಿದ್ದಿಲ್ಲ. ಆದರೆ ಪ್ರಯತ್ನ ಮಾಡಿದರೂ, ಅದಕ್ಕೆ ತಕ್ಕ ಪ್ರತಿಫಲ ದೊರಕದಿದ್ದರೆ 'ಹಣೆ ಬರಹ' ಎಂದು ಸುಮ್ಮನಾಗುತ್ತೇವೆ ಅಷ್ಟೇ.

ಇನ್ನೊಂದು ಉದಾಹರಣೆ ನೋಡಿ. ನಿಮ್ಮ ಮನೆಯಲ್ಲಿ ಒಬ್ಬ ಸೋಮಾರಿ. ಅವನಿಗೆ ದುಡಿಯುವುದು ಬೇಕಿಲ್ಲ. ಸಿಕ್ಕ ಅವಕಾಶಗಳನ್ನು ಉಪಯೋಗ ಮಾಡಿಕೊಳ್ಳುವುದಿಲ್ಲ. ಅವನಿಗೆ ಬುದ್ಧಿ ಹೇಳಲು ಮನೆಯವರು, ಸ್ನೇಹಿತರು, ಬಂಧುಗಳು ಎಲ್ಲ ಪ್ರಯತ್ನ ಮಾಡಿ ಸೋತು ಹೋಗುತ್ತಾರೆ. ಕೊನೆಗೆ ಎಲ್ಲರು ಹೇಳುವುದು ಒಂದೇ "ಅವನ ಹಣೆಬರಹಕ್ಕೆ ನಾವೇನು ಮಾಡುವುದುಕ್ಕಾಗುತ್ತದೆ?" 

ಕರ್ಮ ಅನ್ನುವುದು ಇದಕ್ಕಿಂತ ಸ್ವಲ್ಪ ಬೇರೆ (ತುಂಬಾ ಅಲ್ಲ). ಯಾರೋ ಒಬ್ಬರಿಗೆ ಹೆಚ್ಚು ಪ್ರಯತ್ನ ಇಲ್ಲದೆ ಯಶಸ್ಸು ದೊರಕಿದರೆ, ನಾವು ಅವನಿಗೆ ಅದೃಷ್ಟಶಾಲಿ ಎನ್ನುತ್ತೇವೆ. ಸ್ವಲ್ಪ ಜನ ಅದು ಅವರ ಸಂಸ್ಕಾರ, ಅವರ ಹಿಂದಿನ ಜನ್ಮದ ಪುಣ್ಯದ ಫಲ ಎಂದು ಕೂಡ ಹೇಳುತ್ತಾರೆ. ಅದೇ ಇನ್ನೊಬ್ಬರಿಗೆ ದಾರಿದ್ರ್ಯ ಕಾಡಿದರೆ ಅದು ಅವರು ಪಡೆದುಕೊಂಡು ಬಂದದ್ದು, ಅದು ಅವರ ಕರ್ಮ ಅನುಭವಿಸಲೇಬೇಕು ಎಂದು ಕೂಡ ಹೇಳುತ್ತೇವೆ. ಒಳ್ಳೆಯ ತಂದೆ-ತಾಯಿಗಳಿಗೆ ಕೆಟ್ಟ ಮಕ್ಕಳು, ಒಳ್ಳೆಯ ಗಂಡನಿಗೆ ಕಾಡುವ ಹೆಂಡತಿ ಅಥವಾ ಒಳ್ಳೆಯ ಹೆಂಡತಿಗೆ ದುಷ್ಟ ಗಂಡ ಇವೆಲ್ಲವುಗಳು ಅವರ ಪಾಪ-ಪುಣ್ಯದ ಫಲಗಳು, ಅದು ಅವರ ಕರ್ಮ ಎಂದು ಮಾತು ಮುಗಿಸುತ್ತೇವೆ. ಏಕೆಂದರೆ ಆ ನಂಟುಗಳು ನಮಗೆ ಅರ್ಥವಾಗದ್ದು.

ಈ ಕರ್ಮ ಎನ್ನುವುದು ನಿಜವಾಗಿ ಇದೆಯೋ ಇಲ್ಲವೋ ಯಾರಿಗೆ ಗೊತ್ತು? ಆದರೆ ಅರ್ಥವಾಗದ ವಿಷಯಗಳಿಗೆ ತುಂಬಾ ಹೆಚ್ಚಿಗೆ ತಲೆ ಕೆಡಿಸಿಕೊಳ್ಳುವುದಕ್ಕಿಂತ ಅದು ಕರ್ಮ ಎಂದು ಕೈ ತೊಳೆದುಕೊಳ್ಳುವುದು ವಾಸಿ ಅಲ್ಲವೇ? ಹಾಗೆ ಮಾಡುವುದರಿಂದ ಆ ಸಮಸ್ಯೆಯನ್ನು ಸ್ವಲ್ಪ ಸಮಯದ ಮಟ್ಟಿಗಾದರೂ ಪಕ್ಕಕ್ಕೆ ಇಟ್ಟು ಜೀವನ ಮುಂದುವರೆಸಲು ಆಗುತ್ತದೆ. ಅರ್ಥವಾಗದ ಸಮಸ್ಯೆಗಳಿಗೆ ಹಿಂದಿನ ಜನ್ಮವನ್ನು ಹೊಣೆಗಾರ ಮಾಡಿದರೆ ಈ ಜನ್ಮದಲ್ಲಿ ಸ್ವಲ್ಪವಾದರೂ ನೆಮ್ಮದಿ. ಅದು ನಮ್ಮನ್ನು ನಾವು ಸಮಾಧಾನ ಮಾಡಿಕೊಳ್ಳುವ ರೀತಿ. ಹಾಗೆ ಮಾಡದೆ ಹೋದರೆ ನಮ್ಮ ಮನಸ್ಸಿನ ಮೇಲೆ ಆಗುವ ಪರಿಣಾಮಗಳು ಅಧಿಕ. ಹಿಂದಿನ ಜನ್ಮದಲ್ಲಿ ನೀವು ಕೆಟ್ಟದು ಮಾಡಿದ್ದಕ್ಕೆ ಇಂದಿನ ಜನ್ಮದಲ್ಲಿ ನೀವು ಒಳ್ಳೆಯವರು ಆದರೂ ಕಷ್ಟ ಅನುಭವಿಸುತ್ತಿದ್ದೀರಿ ಎಂದು ನಿಮ್ಮ ಮೇಲೆ ನೀವೇ ಅನುಕಂಪ ತೋರಿಸಿದರೆ ನೀವು ನಾಲ್ಕು ದಿನ ಬಾಳಲು ಸಾಧ್ಯ. ಇಲ್ಲದೆ ಹೋದರೆ ನೀವು ಈ ಜನ್ಮದ ಕಷ್ಟಗಳನ್ನು ಎದುರಿಸಲು ಆಗದೆ ಸಾವಿಗೆ ಹತ್ತಿರವಾಗುತ್ತಾ ಹೋಗುತ್ತೀರಿ. ಇಲ್ಲವೇ ದ್ವೇಷ ಸಾಧಿಸುತ್ತ ಬದುಕಲ್ಲಿ ಇನ್ನು ಹೆಚ್ಚು ತೊಂದರೆಗಳನ್ನು ಆಹ್ವಾನಿಸುತ್ತ ಹೋಗುತ್ತೀರಿ.

ನಮ್ಮ ವೇದ-ಪುರಾಣಗಳಲ್ಲಿ ಮರು ಜನ್ಮಗಳ ವ್ಯಾಖ್ಯಾನಗಳಿವೆ. ಪಾಪ-ಪುಣ್ಯ-ಕರ್ಮಗಳ ಲೆಕ್ಕಗಳಿವೆ. ಮಹಾಭಾರತದ ಉಪಕಥೆಗಳನ್ನು ಗಮನಿಸಿ ನೋಡಿ. ಅಲ್ಲಿ ಅವನು ಹಿಂದಿನ ಜನ್ಮದಲ್ಲಿ ಹಾಗೆ ಮಾಡಿದ್ದಕೆ ಈ ಜನ್ಮದಲ್ಲಿ ಇದನ್ನು ಅನುಭವಿಸುತ್ತಿದ್ದಾನೆ ಎನ್ನುವ ವಿವರಣೆಗಳಿವೆ. ಇವುಗಳ ಪ್ರಭಾವ ನಮ್ಮ ಮೇಲೆ ಕೂಡ ಆಗಿ ನಾವು ಪಾಪ-ಕರ್ಮಗಳ ಉದಾಹರಣೆಗಳನ್ನು ಸುಲಭದಲ್ಲಿ ಒಪ್ಪಿಕೊಂಡುಬಿಡುತ್ತೇವೆ. ಅದು ನಮಗೆ ಯಾರೋ ಕೆಟ್ಟದು ಮಾಡಿದಾಗ ಕೂಡ ನಾವು ಅವರ ಮೇಲೆ ದ್ವೇಷ ಸಾಧಿಸಿ ಮತ್ತೆ ಕೆಟ್ಟದು ಮಾಡದಂತೆ ಕಾಯುತ್ತದೆ. 

'ಇದು ಕಲಿಗಾಲ. ಒಳ್ಳೆಯವರಿಗೆ ಕೆಟ್ಟದ್ದು ಆಗುತ್ತದೆ' ಎಂದೆಲ್ಲ ಮಾತನಾಡುತ್ತಾರೆ ಅಲ್ಲವೇ. ಇದು ಯಾವ ಕಾಲವೇ ಆಗಿರಲಿ. ನಮಗೆ ಕೆಟ್ಟದು ಆದಾಗಲೂ ನಾವು ಒಳ್ಳೆಯತನ ಕೈ ಬಿಡಬಾರದು ಎನ್ನುವ ಉದ್ದೇಶದಿಂದ ಮನುಷ್ಯ ಆ ಮಾತುಗಳನ್ನು ರೂಢಿಗೆ ತಂದ. ಹಾಗೆಯೆ "ಕೆಟ್ಟವರನ್ನು ದೇವರು ನೋಡಿಕೊಳ್ಳುತ್ತಾನೆ" ಎನ್ನುವ ಸಮಾಧಾನದ ಮಾತುಗಳು ನಾವು ಸಮಾಜದಲ್ಲಿ ಕೆಟ್ಟ ಹುಳುಗಳು ಆಗದಂತೆ ನಮ್ಮನ್ನು ಕಾಪಾಡಿದವು.

ಇನ್ನು ಮುಂದೆ ನೀವು ಎಲ್ಲಿಯಾದರೂ 'ಹಣೆ ಬರಹ' ಎನ್ನುವ ಪದ ಕೇಳಿದಾಗ ಅಲ್ಲಿ ಅವರು ಪ್ರಯತ್ನ ಮಾಡಿ ಸೋತಿದ್ದಾರೆ ಎನ್ನುವುದು ಅರ್ಥ ಮಾಡಿಕೊಳ್ಳಿ. ನೀವು ಅವರ ಪ್ರಯತ್ನಗಳಿಗೆ  ಅಭಿನಂದಿಸಿ. 

ಹಾಗೆಯೇ ಯಾರಾದರೂ 'ಕರ್ಮ' ಎಂದು ಹೇಳುತ್ತಿದ್ದರೆ ಅವರು ಕಷ್ಟಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ಬದುಕು ನಡೆಸುತ್ತಿದ್ದಾರೆ ಎಂದು ಅರ್ಥ ಮಾಡಿಕೊಳ್ಳಿ. ಅವರ ಜೀವನ ಪ್ರೀತಿ ಕೂಡ ಅಷ್ಟೇ ದೊಡ್ಡದು ಎನ್ನುವುದು ಮರೆಯಬೇಡಿ.

Saturday, February 24, 2024

ಯುಗಳ ಗೀತೆ ಹಾಡಿದರೆ ವಿಷಾದ ಗೀತೆ ಕೂಡ ಹಾಡಲೇ ಬೇಕು

ಅಮಾವಾಸ್ಯೆ ಕಳೆದು ೫-೬ ದಿನಗಳಷ್ಟೇ ಆಗಿತ್ತು. ರಾತ್ರಿ ಹೊತ್ತು ಸೆಖೆ ತಾಳದೆ ಹೊರಗೆ ಬಾಲ್ಕನಿಯಲ್ಲಿ ಬಂದು ಮಲಗಿದೆ. ಸಹಜವಾಗಿ ಕಣ್ಣು ಆಕಾಶದತ್ತ ನೋಡಿತು. ಆ ಕಡೆ ಪೂರ್ತಿ ಕತ್ತಲು ಇಲ್ಲ, ಈ ಕಡೆ ಶುಭ್ರ ಬೆಳದಿಂಗಳು ಕೂಡ ಅಲ್ಲ. ಕೆಂಪು ದೀಪ ಮಿಟುಕಿಸುತ್ತ ಹಾರುವ ವಿಮಾನಗಳು ಇದು ಬೆಂಗಳೂರಿನ ಆಕಾಶ ಎನ್ನುವ ಸಂಜ್ಞೆ ಬಿಟ್ಟರೆ ಬೇರೆ ಏನು ಗೋಚರಿಸುತ್ತಿರಲಿಲ್ಲ. ಅಲ್ಲಿ ಚಂದ್ರನಿಲ್ಲ ಎನ್ನುವ ಕೊರತೆ ಎದ್ದು ಕಾಣುತ್ತಿತ್ತು. 


ಕೇಳುತ್ತಿದ್ದ ೯೦ ರ ದಶಕದ ಹಿಂದಿ ಹಾಡುಗಳು ಕೂಡ ಅದೇ ಭಾವವನ್ನು ಹೊಮ್ಮಿಸುತಿದ್ದವು. 


ಮೊದಲಿಗೆ ಆಶಿಕಿ ಚಿತ್ರದ ಗೀತೆ:


'ಚಾಂದ ಕಿ ಜರೂರತ್ ಹೈ ಜೈಸೇ ಚಾಂದನಿ ಕೆ ಲಿಯೇ, 

ಬಸ್ ಏಕ್ ಸನಮ್ ಚಾಹಿಯೇ ಆಶಿಕಿ ಕೆ ಲಿಯೇ'


ಹೌದಲ್ಲವೇ? ಚಂದ್ರನಿಲ್ಲದೆ ಬೆಳೆದಿಂಗಳೆಲ್ಲಿ? ಪ್ರೇಯಸಿ ಇರದೇ ಪ್ರೀತಿ ಎಲ್ಲಿ?


ನಂತರ ಇನ್ನೊಂದು ಗೀತೆ 'ಹಮ್ ಹೈ ರಾಹಿ ಪ್ಯಾರ್ ಕೆ' ಚಿತ್ರದ್ದು 


'ಜಬ್ ತಕ್ ನ ಪಡೆ ಆಶಿಕಿ ಕಿ ನಜರ್,

ಸಿಂಗಾರ್ ಅಧೂರಾ ರೆಹತಾ ಹೈ'


ಇದೂನು ಸರಿಯೇ. ಮೆಚ್ಚುವವರು ಇರದೇ ಹೋದರೆ ಸಿಂಗಾರಕ್ಕೆ ಯಾವ ಬೆಲೆ?


ಆಕಾಶಕ್ಕೂ ಒಂದು ಅಪೂರ್ಣತೆ ಇದೆ. ಅಲ್ಲಿ ಚಂದ್ರನಿದ್ದರೆ ಕಳೆ. ಇಲ್ಲದಿದ್ದರೆ ಅಲ್ಲಿ ಯಾವ ಆಕರ್ಷಣೆಯೂ ಇಲ್ಲ. ಅದು ಬರಿ ಕಗ್ಗತ್ತಲು.


ಹಗಲು ಹೊತ್ತಿನಲ್ಲಿ ಉರಿಯುವ ಸೂರ್ಯ ನಮಗೆ ಬೆವರಿಳಿಸಿ ಕಂಗಾಲು ಮಾಡಿ ಬಿಡುತ್ತಾನೆ. ಅದೇ ಸೂರ್ಯನ ಬೆಳಕು ಚಂದ್ರನ ಮೇಲೆ ಬಿದ್ದು ಪ್ರತಿಫಲಗೊಂಡು ಆ ಬೆಳಕು ಉಷ್ಣತೆ ಕಳೆದುಕೊಂಡು ಬೆಳದಿಂಗಳಾಗಿ ರಾತ್ರಿಯಲ್ಲಿ ಆಹ್ಲಾದತೆ ತಂದು ಕೊಡುತ್ತದೆ. ಸಮುದ್ರವನ್ನು ಉಕ್ಕೇರಿಸತ್ತದೆ. ಪ್ರೇಮಿಗಳಿಗೆ ಮತ್ತೇರಿಸುತ್ತದೆ. ಕವಿಗಳಿಗೆ ಉತ್ತೇಜನ ನೀಡುತ್ತದೆ. ದಣಿದ ಜೀವಗಳಿಗೆ ತಂಪೆರುಯುತ್ತದೆ. ಆದರೆ ಆ ಸಂತೋಷ ನಿಮಗೆ ಪ್ರತಿ ದಿನ ಇಲ್ಲ.


ಇದು ಗಾಲಿ ತಿರುಗಿದ ಹಾಗೆ ಅಲ್ಲವೇ? ಹುಣ್ಣಿಮೆ ನಂತರ ನಿಮಗೆ ಬೇಕೋ ಬೇಡವೋ ಅಮಾವಾಸ್ಯೆಯ ಕತ್ತಲು ಅನಿಭವಿಸಿದ ಮೇಲೆಯೇ ಇನ್ನೊಮ್ಮೆ ಹುಣ್ಣಿಮೆ. ನಿಮಗೆ ಹುಣ್ಣಿಮೆಯ ಸಂತೋಷ ಬೇಕೆಂದರೆ ಅಮಾವಾಸ್ಯೆ ಹುಟ್ಟಿಸುವ ದಿಗಿಲು ಕೂಡ ಅನುಭವಿಸಬೇಕು. ಯುಗಳ ಗೀತೆ ಹಾಡಿದರೆ ವಿಷಾದ ಗೀತೆ ಕೂಡ ಹಾಡಲೇ ಬೇಕು. ಸರಸ-ವಿರಸವೆಂಬ ಹುಣ್ಣಿಮೆ-ಅಮಾವಾಸ್ಯೆಗಳು ಎಲ್ಲರ ಬಾಳಿನಲ್ಲಿ ಉಂಟು. ಅದು ಪ್ರಕೃತಿ ನಿಯಮ.


ನೀವು ಪ್ರಕೃತಿಯನ್ನು ಮೀರಿಸುವ ಸನ್ಯಾಸಿಯಾದರೆ ನಿಮಗೆ ಹುಣ್ಣಿಮೆ ಸಂತೋಷ ತರದು ಹಾಗೆಯೇ ಅಮಾವಾಸ್ಯೆಯ ಕತ್ತಲು ಭೀತಿಗೊಳಿಸದು. ಆದರೆ ಉಳಿದ ಭಾವನಾತ್ಮಕ ಮನುಜರಿಗೆ ಹುಣ್ಣಿಮೆಯ-ಅಮಾವಾಸ್ಯೆಗಳ ಚಕ್ರಗಳಿಂದ ಹೊರ ಬರಲು ಆಗದು. ಹುಣ್ಣಿಮೆ ಇರುವಷ್ಟು ಹೊತ್ತು ಆನಂದಿಸಿ. ಅದು ಕ್ಷೀಣಿಸಿದಾಗ ಸಂತೋಷದಿಂದಲೇ ಬೀಳ್ಕೊಡಿ. ಏಕೆಂದರೆ ಇನ್ನೊಂದು ಹುಣ್ಣಿಮೆ ಬಂದೆ ಬರುತ್ತದೆ.

ಹೊಸ ತೇರು, ಹಳೆ ಜಾತ್ರೆ, ಸಮಾಯಾತೀತ ಶ್ರೀ ಮಲ್ಲಿಕಾರ್ಜುನ


ನಮ್ಮೂರಿನಲ್ಲಿ ಇಂದು ಭರತ ಹುಣ್ಣಿಮೆಯ ದಿನದಂದು ಶ್ರೀ ಮಲ್ಲಿಕಾರ್ಜುನನ ಜಾತ್ರೆ. ಇಲ್ಲಿ ಜಾತ್ರೆಯ ದಿನದಂದು ಎಳೆಯುವ ತೇರು ಎಷ್ಟು ವರುಷ ಹಳೆಯದು, ಯಾರು ಮಾಡಿಸಿದ್ದು ಎಂದು ಈ ಊರಿನಲ್ಲಿರುವ ೮೦-೯೦ ವರುಷದ ವೃದ್ಧರಿಗೂ ತಿಳಿದಿಲ್ಲ. ಅವರಿಗೆ ಜಾತ್ರೆಯ ದಿನದಂದು ತೇರು ಎಳೆದದ್ದು ಅಷ್ಟೇ ನೆನಪು. ತೇರಿನ ಹಳೆಯ ಭಾಗಗಳು (ಕಟ್ಟಿಗೆಯಿಂದ ಮಾಡಿದ್ದು) ಗಮನಿಸಿ ನೋಡಿದಾಗ ಇದು ೧೨೦ ರಿಂದ ೧೫೦ ವರುಷ ಹಳೆಯದು ಎಂದು ಅಂದಾಜು ಮಾಡಬಹುದು. ಗಟ್ಟಿ-ಮುಟ್ಟ್ಯಾಗಿರುವ ಜನ ತುಂಬಾ ಭಾರವೆನಿಸುವ ಹಗ್ಗ ಹಿಡಿದು ತೇರು ಎಳೆದರೆ, ಉಳಿದೆಲ್ಲ ಭಕ್ತರಿಗೆ ತೇರಿನ ಕಳಸಕ್ಕೆ ಬಾಳೆ ಹಣ್ಣು ಎಸೆಯುವ ಸಂಭ್ರಮ. ತೇರು ತನ್ನ ಮನೆಗೆ ಮರಳಿದ ನಂತರ ಸಂಜೆ ಹೊತ್ತಿಗೆ ಜಾತ್ರೆ ಶುರು. ಇದು ಸಾವಿರಾರು ವರುಷಗಳಿಂದ ಇಲ್ಲಿ ನೆಲೆಗೊಂಡಿರುವ ಶ್ರೀ ಮಲ್ಲಿಕಾರ್ಜುನನ ಜಾತ್ರೆ.

ನೂರಾರು ವರುಷಗಳ ಹಳೆಯ ಸಂಪ್ರದಾಯ ಎನಿಸುವ ಪೂಜೆಗಳು ಬೆಳಿಗ್ಗೆ ಹೊತ್ತಿಗೆಲ್ಲ ಶುರು. ಹೆಚ್ಚು ಕಡಿಮೆ ಊರಿನ ಜನ ಎಲ್ಲ ಶ್ರೀ ಮಲ್ಲಿಕಾರ್ಜುನ ದರ್ಶನ ಪಡೆಯುವಷ್ಟರಲ್ಲಿ ಸುತ್ತ ಹತ್ತಾರು ಹಳ್ಳಿಗಳಿಂದ ಜನರ ಆಗಮನ, ಡೊಳ್ಳು ಬಾರಿಸುತ್ತ ಬರುವ ಕುರುಬರು ವಿಶೇಷ ಗಮನ ಸೆಳೆಯುತ್ತಾರೆ. ಸಣ್ಣ ಮಕ್ಕಳ ಕೈಯಲ್ಲಿ ಬಣ್ಣದ ಬಲೂನುಗಳು, ಹೆಂಗಳೆಯರ ಮುಖದಲ್ಲಿ ಭಕ್ರಿ ಭಾವ, ಗಂಡಸರ ಮುಖದಲ್ಲಿ ತೇರು ಎಳೆಯುವ ಉತ್ಸಾಹ. ಇದು ಪ್ರತಿ ವರುಷ ಜಾತ್ರೆಯ ದಿನ ಕಾಣ ಸಿಗುವ ನೋಟ.

ಶ್ರೀ ಮಲ್ಲಿಕಾರ್ಜುನ ಕಾಲಾತೀತ. ಆತನಿಗೆ ಹಳೆ ಪೀಳಿಗೆಯ ಭಕ್ತರು ಮಣ್ಣು ಸೇರಿದರೆ  ಹೊಸ ಪೀಳಿಗೆಯ ಭಕ್ತರು ಮಲ್ಲಿಕಾರ್ಜುನ ಜಾತ್ರೆ ನಡೆಸಿಕೊಂಡು ಹೋಗುತ್ತಾರೆ. ಸುಮಾರು ೫-೬ ಪೀಳಿಗೆಯ ಜನ ಎಳೆದ ತೇರು ಕೆಲವು ವರುಷಗಳಿಂದ ತೊಂದರೆ ಕೊಡುತ್ತಲಿತ್ತು. ಹೊಸ ಗಾಲಿಗಳು ಬಂದರು ತೊಂದರೆ ತಪ್ಪಲಿಲ್ಲ. ದಾರಿ ಬಿಟ್ಟು ಬರುವ ತೇರು, ಸಿಕ್ಕಿ ಹಾಕಿಕೊಂಡ ಜಾಗದಿಂದ ಮಿಸುಗಾಡದ ತೇರು, ತುಂಡಾಗುವ ಹಗ್ಗ ಹೀಗೆ ಹಲವು ತೊಂದರೆಗಳಿಂದ ತೇರನ್ನು ಒಂದೇ ದಿನದಲ್ಲಿ ಆದರೆ ಮನೆಗೆ ಸೇರಿಸಲು ಆಗುತ್ತಿರಲಿಲ್ಲ. ದೈವ ಕೃಪೆಯೋ, ಭಕ್ತರ ಕಾಳಜಿಯೋ ಒಟ್ಟಿನಲ್ಲಿ ಈ ವರುಷ ಹೊಸ ತೇರು ಬಂದಾಗಿದೆ. 

ಹಳೆಯ ತೇರನ್ನು ಕೊನೆಯ ಬಾರಿಗೆ ಎಳೆದು, ಹೊಸ ತೇರನ್ನು ಮಲ್ಲಿಕಾರ್ಜುನನ ಸೇವೆಗೆ ಬಿಡುವ ಜಾತ್ರೆ ಇಂದು. ಎರಡು ತೇರುಗಳನ್ನು ಒಟ್ಟಿಗೆ ನೋಡಿದ ಆನಂದ ಈ ದಿನ ನನ್ನದು. ಅಷ್ಟೇ ಅಲ್ಲ, ನಿಮಗೂ ಅದನ್ನು ತೋರಿಸುವ ಆಸೆ. ಒಮ್ಮೆ ವಿಡಿಯೋ ನೋಡಿ.


Thursday, January 4, 2024

ಆಶಾವಾದಿಯ ಕನಸುಗಳು ಮತ್ತು ನಿರಾಶಾವಾದಿಯ ಹತಾಶೆಗಳು

ಯಾವುದೇ ರಾಜಕಾರಣಿಯ ಭಾಷಣ ಕೇಳಿ ನೋಡಿ. ಅವರು ನಿಮಗೆ ಭವಿಷ್ಯದ ಕನಸು ಕಟ್ಟಿ ಕೊಡುತ್ತಾರೆ. ನಿಮ್ಮ ಚಿಕ್ಕ ಮಕ್ಕಳು ಸ್ವಲ್ಪ ಜಾಣತನ ತೋರಿದರು ಸಾಕು. ಮುಂದೆ ಅವರು ದೊಡ್ಡ ಮನುಷ್ಯರಾಗುವ ಕನಸು ನೀವೇ ಕಾಣತೊಡಗುತ್ತೀರಿ. ಭರವಸೆ ಹುಟ್ಟಿಸುವ ಯಾವುದೇ ಕೆಲಸಗಾರನ ಭವಿಷ್ಯದ ಅಂದಾಜು ಎಲ್ಲರಿಗೂ ಮನವರಿಕೆ ಆಗಿರುತ್ತದೆ. ಮನುಷ್ಯ ಎಂತಹ ಸೋಮಾರಿಯೇ ಆಗಿರಲಿ ಅವನು ಕನಸು ಕಾಣದೆ ಇರಲಾರ. ಅದು ಆಶಾವಾದಿಯ ಜಗತ್ತು.


ಒಂದು ಕಾಲದಲ್ಲಿ ಕನಸು ಕಂಡು ಆದರೆ ಕೈ ಸುಟ್ಟುಕೊಂಡು ನಿರಾಶಾವಾದಿಯಾಗಿ ಬದಲಾಗಿರುತ್ತಾರಲ್ಲ. ಅವರಿಗೆ ಯಾವುದರಲ್ಲೂ ಭರವಸೆ ಇರುವುದಿಲ್ಲ. ಅವರದ್ದು ಬರೀ ಹತಾಶೆಯ ಮಾತುಗಳು. ನಮ್ಮ ದೇಶ ಬದಲಾಗೋದಿಲ್ಲ ಬಿಡಿ ಅನ್ನುತ್ತಾ ಇರುತ್ತಾರೆ. ಭಾರತದ ಉಪಗ್ರಹ ಚಂದ್ರನ ಮೇಲೆ ಇಳಿದದ್ದು ಅವರಿಗೆ ಸಾಧನೆ ಎನಿಸುವುದಿಲ್ಲ.ಸಂತೆ ವ್ಯಾಪಾರಕ್ಕೆ ಸ್ಮಾರ್ಟ್ ಫೋನ್ ಬಳಕೆಯಾಗುವುದು ಅವರಿಗೆ ಪ್ರಗತಿ ಎನಿಸುವುದಿಲ್ಲ. 'ಏನೇ ಆಗಲಿ ನಮ್ಮ ದೇಶದ ಕಥೆ ಇಷ್ಟೇ ಬಿಡಿ' ಎಂದೇ ಅವರು ಹೇಳುವುದು. ದೇಶದ ಕಥೆ ಹೇಗೆಯೇ ಇರಲಿ ನಿರಾಶಾವಾದಿಗಳ ಕಥೆ ಮಾತ್ರ ಅಲ್ಲಿಯೇ ಉಳಿದಿರುತ್ತದೆ.


ವಿಚಾರ ಮಾಡಿ ನೋಡಿ. ಒಂದು ವಯಸ್ಸಿನವರೆಗೆ (ಸುಮಾರು ೧೬-೧೮ ವರುಷದವರೆಗೆ)  ಮನುಷ್ಯ ಆಶಾವಾದಿಯಾಗಿದ್ದರೆ ತೊಂದರೆ ಏನಿಲ್ಲ. ಆದರೆ ಮುಂದೆಯೂ ಅವನು ವಿಪರೀತ ಕನಸುಗಾರನಾದರೆ, ಅವನಿಗೆ ಜೀವನ ಪೆಟ್ಟು ಕೊಡದೆ ಬಿಡುವುದಿಲ್ಲ. ನಿರಾಶಾವಾದಿಗಳ ಎಚ್ಚರಿಕೆ ಸ್ವಭಾವ ಅವರನ್ನು ಮತ್ತೆ ಎಡವದಂತೆ ಕಾಯುತ್ತದೆ. ಆದರೆ ಸಂಪೂರ್ಣ ಆಶಾವಾದಿಗಳು ಅಪಾಯಗಳನ್ನು ನಿರ್ಲಕ್ಷಿಸುವ ಸ್ವಭಾವ ಹೊಂದಿರುತ್ತಾರೆ. ಅದೇ ಅವರಿಗೆ ಮುಳುವಾಗುತ್ತದೆ. ಮುಂದೆ ನಾವು ದೊಡ್ಡ ಮನುಷ್ಯರಾಗಬೇಕು ನಿಜ ಆದರೆ ಇಂದಿಗೆ ನಾವು ಎಚ್ಚರಿಕೆಯಿಂದ ಕೂಡ ಇರಬೇಕಾದದ್ದು ಅವಶ್ಯಕ ಅಲ್ಲವೇ?


ಸಂಪೂರ್ಣ ಆಶಾವಾದಿಯಾಗದೆ ಅಥವಾ ನಿರಾಶಾವಾದಿಯಾಗದೆ, ಎರಡರ ನಡುವಿನ ವಾಸ್ತವವಾದಿಯಾಗಿ ನೋಡಿ. ಅವನಿಗೆ ಜಗತ್ತು ಹೇಗೆ ಇದೆಯೋ ಹಾಗೆ ನೋಡಲು ಸಾಧ್ಯವಾಗುತ್ತದೆ. ಅವನಿಗೆ ಆಶಾವಾದಿಗೆ ಕಾಣುವ ಅವಕಾಶಗಳು ಮತ್ತು ನಿರಾಶಾವಾದಿಗೆ  ಕಾಣುವ ಅಪಾಯಗಳು ಎರಡು ಗೋಚರಿಸುತ್ತವೆ. ಅವನು ಸಮತೋಲನದಿಂದ, ಸಮಚಿತ್ತದಿಂದ ವರ್ತಿಸುತ್ತಾನೆ. ಅಪಾಯ ಗೊತ್ತಿರದ ಆಶಾವಾದಿ ಮತ್ತು ಪ್ರಯತ್ನ ನಿಲ್ಲಿಸಿರುವ ನಿರಾಶಾವಾದಿಗಿಂತ ಹೆಚ್ಚಿನ ಸಾಧನೆ ವಾಸ್ತವವಾದಿಯದ್ದಾಗಿರುತ್ತದೆ.


ಜಗತ್ತನ್ನೇ ಗೆಲ್ಲ ಹೋರಾಟ ಮಹತ್ವಕಾಂಕ್ಷಿಗಳು ಆಶಾವಾದಿಗಳಾಗಿದ್ದರು. ಅಪಾಯಗಳು ಅವರು ಮೈ ಮರೆತ ಕ್ಷಣಗಳಲ್ಲಿ ಅವರನ್ನು ಸಣ್ಣ ಯುದ್ಧಗಳಲ್ಲಿ ಅಳಿಸಿ ಹಾಕಿದವು. ನೆಪೋಲಿಯನ್ ವಾಟರ್ಲೂ ಕಾಳಗದಲ್ಲಿ ಸೋತ ಹಾಗೆ. ಬಲಿಷ್ಠ ವಿಜಯನಗರ ಸಾಮ್ರಾಜ್ಯವನ್ನು ಐದು ಸಣ್ಣ ರಾಜ್ಯಗಳು ಒಟ್ಟಿಗೆ ಸೇರಿ ಸೋಲಿಸಿದ ಹಾಗೆ. ಹಾಗೆಯೆ ನಿರಾಶಾವಾದಿಗಳು ಯಾವ ಚರಿತ್ರೆಯ ಪುಟಗಳಲ್ಲಿ ಕಾಣ ಸಿಗುವುದಿಲ್ಲ. ಏಕೆಂದರೆ ಅವರು ಸಾಧಿಸುವ ಕೆಲಸಗಳಿಗೆ ಕೈ ಹಾಕಲೇ ಇಲ್ಲ.


ವಾಸ್ತವವಾದಿಗಳ ಉದಾಹರಣೆ ಕೊಡಿ ಎಂದು ಕೇಳಲೇಬೇಡಿ. ಅವರು ಎಲ್ಲೆಲ್ಲೂ ಇದ್ದಾರೆ. ಉದಾಹರಣೆಗೆ ನಿಮ್ಮ ಬ್ಯಾಂಕ್ ಮ್ಯಾನೇಜರ್. ಅವನು ಸಾಲ ಕೊಡುವ ಮುನ್ನ ನಿಮ್ಮ ಸಾಲ ವಾಪಸ್ಸು ಕೊಡುವ ತಾಕತ್ತು ಅಳೆಯುತ್ತಾನೆ. ಅವನು ನಿಮ್ಮ ಕನಸುಗಳಿಗಿಂತ ವಾಸ್ತವಕ್ಕೆ ಬೆಲೆ ಕೊಡುತ್ತಾನೆ. ನವ ಭಾರತ ಕಟ್ಟಿದ ಗಾಂಧಿ-ನೆಹರು-ಪಟೇಲ್ ವಾಸ್ತವವಾದಿಗಳಾಗಿದ್ದರು. ಅವರು ಭಾರತಕ್ಕೆ ಸ್ವತಂತ್ರ ತರುವ ಜೊತೆಗೆ ಭಾರತದಲ್ಲಿ ಪ್ರಜಾಪ್ರಭುತ್ವ ನೆಲೆಯೂರುವಂತೆ ನೋಡಿಕೊಂಡರು. ಬಹುಕಾಲ ಬಾಳಿದ ಯಾವುದೇ ಸಂಘ-ಸಂಸ್ಥೆ, ಇಲ್ಲವೇ ದೇಶಗಳನ್ನೇ ಗಮನಿಸಿ ನೋಡಿ. ಅವುಗಳನ್ನು ವಾಸ್ತವವಾದಿಗಳೇ ಕಟ್ಟಿರುತ್ತಾರೆ. ಯುದ್ಧ ಮಾಡಿ ನಿರಾಶನಾದ ಸಾಮ್ರಾಟ್ ಅಶೋಕ, ಸಮಾಜ ಪ್ರಗತಿಗೆ ಪ್ರಯತ್ನ ಮಾಡುವ ಆಶಾವಾದಿಯೂ ಆಗಿದ್ದ. ಎಲ್ಲವನ್ನು ಹಿಂದೆ ಬಿಟ್ಟು ನಡೆದ ಬುದ್ಧ, ಶಾಂತಿ ಸಂದೇಶ ಸಾರುವ ಆಶಾವಾದಿಯೂ ಆಗಿದ್ದ. ಅದರ ಫಲ ಎಷ್ಟು ಜನ ಪಡೆದುಕೊಂಡರು ಎಂದು ವಿಚಾರ ಮಾಡದೆ ಇರುವ ನಿರಾಶಾವಾದಿಯೂ ಆಗಿದ್ದ.


ಆಶಾವಾದಿಗಳ ಪ್ರಯತ್ನ, ನಿರಾಶಾವಾದಿಗಳ ಎಚ್ಚರಿಕೆ ಈ ಎರಡರ ಸಮ್ಮಿಶ್ರಣ ಬದುಕನ್ನು ಸುಲಭವಾಗಿಸುತ್ತದೆ. ಅವುಗಳು ವಾಹನದಲ್ಲಿ ಆಕ್ಸಿಲರೇಟರ್ ಮತ್ತು ಬ್ರೆಕ್ ಎರಡರನ್ನು ಅಗತ್ಯಕ್ಕೆ ತಕ್ಕಂತೆ ಉಪಯೋಗ ಮಾಡಿಕೊಂಡು ಮುಂದೆ ಸಾಗಿದ ಹಾಗೆ. ಕನಸುಗಳ ಜೊತೆಗೆ ಅಪಾಯಗಳನ್ನು ಸರಿದೂಗಿಸಿಕೊಂಡು ಹೋಗುವ ವಾಸ್ತವವಾದಿಗಳು ನಾವಾಗಬೇಕಲ್ಲವೇ? ನೀವು ಏನಂತೀರಿ?

Saturday, December 23, 2023

ಸಂಖ್ಯೆಗಳು, ಕಥೆಗಳು ಮತ್ತು ಭಾವನೆಗಳು

ನೀವು ಶಾಲೆ ಕಲಿಯುತ್ತಿದ್ದಾಗ ಗಣಿತದ ಸೂತ್ರಗಳನ್ನು ಮತ್ತು ವಿಜ್ಞಾನಕ್ಕೆ ಸಂಬಂಧಿಸಿದ ವ್ಯಾಖ್ಯಾನಗಳನ್ನು ನೆನಪಿಟ್ಟುಕೊಳ್ಳಲು ಶ್ರಮ ಪಡುತ್ತಿದ್ರಿ. ಆದರೆ ಅಜ್ಜಿ ಹೇಳಿದ ಕಥೆಗಳು, ರಾಗವಾಗಿ ಹಾಡಲು ಕಲಿತ ಪದಗಳು, ಸ್ನೇಹಿತರೊಡನೆ ಹಂಚಿಕೊಳ್ಳುತ್ತಿದ್ದ ತಮಾಷೆಯ ಮಾತುಗಳನ್ನು ನೆನಪಿಟ್ಟುಕೊಳ್ಳಲು ನಿಮಗೆ ಯಾವುದೇ ಶ್ರಮ ಬೇಕಿದ್ದಿರಲಿಲ್ಲ. ಹತ್ತಾರು ವರುಷಗಳ ನಂತರ ಸಿಕ್ಕ ಸ್ನೇಹಿತನೊಡನೆ, ಹಿಂದೆ ನೀವು  ಅವನನ್ನು ಗೇಲಿ ಮಾಡಿದ್ದು ಮತ್ತೆ ನೆನಪಿಸಿಕೊಂಡು ನಗಬಲ್ಲರಿ. ಆದರೆ ಆದರೆ ನಿಮಗೆ ನಾಲ್ಕನೇ ಕ್ಲಾಸಿನಲ್ಲಿ ಬಂದ ಅಂಕಗಳನ್ನು ನೆನಪಿಸಿಕೊಳ್ಳಲು ಕಷ್ಟ. ಯಾಕೆ ಹೀಗೆ ಎಂದು ಯೋಚಿಸಿದ್ದೀರಾ?

ಮನುಷ್ಯ ರೂಪುಗೊಂಡಿದ್ದೆ ಹಾಗೆ. ಲಕ್ಷಾಂತರ ವರುಷಗಳ ಹಿಂದೆ ಮನುಜ ಆದಿವಾಸಿಯಾಗಿ ಬದುಕುತ್ತಿದ್ದಾಗ ಅವನಿಗೆ ಭಾಷೆ, ಅಂಕೆ-ಸಂಖ್ಯೆಗಳ ಅರಿವಿರಲಿಲ್ಲ. ಅದು ಅವನಿಗೆ ಬೇಕಾಗಿದ್ದು ಇಲ್ಲ. ಆದರೆ ಅವನು ಕಾಡಿನಲ್ಲಿ ನೋಡಿದ ಪ್ರಾಣಿಗಳ ಚಿತ್ರಗಳನ್ನು ಕಲ್ಲಿನಲ್ಲಿ ಕೆತ್ತುತ್ತಿದ್ದ. ಕ್ರಮೇಣ ಅದು ಚಿತ್ರಕಲೆಯಾಗಿ ಬದಲಾಗಿತು. ಅವನ ಹೆಂಡತಿ ಮಗುವಿಗೆ ಬರಿ ಗುನುಗುತ್ತ ಜೋಗುಳ ಹಾಡುತ್ತಿದ್ದಳು. ಮುಂದೆ ಅವುಗಳು ಹಾಡುಗಳಾಗಿ ಬದಲಾದವು. ಮನುಷ್ಯರ ಗುಂಪು ದೊಡ್ಡದಾದಂತೆಲ್ಲ ಅವರಿಗೆ ಕೇವಲ ಸಂಜ್ಞೆಗಳು ಸಾಕಾಗದೆ ಭಾಷೆಯ ಅವಶ್ಯಕತೆ ಮೂಡಿತು. ಆಡು ಭಾಷೆಗೆ ಲಿಪಿ ಮೂಡಲು ಇನ್ನು ಕೆಲವು ಸಾವಿರ ವರುಷಗಳೇ ಕಳೆದವು. ವಸ್ತುಗಳ ಬದಲಾವಣೆಗೆ, ವ್ಯಾಪಾರಕ್ಕೆ ಅನುಕೂಲವಾಗಲು ಅವನಿಗೆ ಸಂಖ್ಯೆಗಳ ಅವಶ್ಯಕತೆ ಮೂಡಿತು. ಬರೀ ಕೈ ಬೆರಳುಗಳ ಎಣಿಕೆ ಸಾಕಾಗದೆ ಸೊನ್ನೆಯನ್ನು ಸಂಖ್ಯಾ ಪದ್ದತಿಗೆ ಸೇರಿಸಿದರು. ಪ್ರಕೃತಿ ವಿಕಾಸದಲ್ಲಿ ಕೊನೆಗೆ ಬಂದದ್ದು ಸಂಖ್ಯೆ. ಹಾಗಾಗಿ ಮಾನವನ ಮೆದುಳು ಭಾಷೆಯನ್ನು ಸಲೀಸಾಗಿ ಕಲಿಯುವಷ್ಟು ಸಂಖ್ಯೆಗಳನ್ನು ಗ್ರಹಿಸುವುದಿಲ್ಲ. ಹಾಗೆಯೆ ಭಾಷೆಗಿಂತ ಮೊದಲು ಮನುಷ್ಯ ಹಾವ-ಭಾವಗಳನ್ನು ಉಪಯೋಗಿಸಿ ವ್ಯವಹರಿಸುತ್ತಿದ್ದ. ಅದಕ್ಕೆ ಮನುಷ್ಯನ ಮುಖದ ಮೇಲೆ ಮೂಡುವ ಎಷ್ಟೋ ಭಾವನೆಗಳನ್ನು ಭಾಷೆಯಲ್ಲಿ ವ್ಯಕ್ತ ಪಡಿಸುವುದು ಕಷ್ಟ. ಅದಕ್ಕೆ ನೋಡಿ. ಎಂತಹ ಕಷ್ಟದ ವಿಷಯವೇ ಇರಲಿ, ಚಿತ್ರ ಬಿಡಿಸಿ ತೋರಿಸಿ ಅಥವಾ ಅಭಿನಯಿಸಿ ತೋರಿಸಿ. ಹೆಚ್ಚಿನ ವಿವರಣೆ ಕೊಡದೆ ನೀವು ಇನ್ನೊಬ್ಬರಿಗೆ ಸುಲಭದಲ್ಲಿ ವಿಷಯ ಅರ್ಥ ಮಾಡಿಸಬಹುದು.

ಕನ್ನಡ ನಾಡಿನ ಮೊದಲ ದೊರೆ ಮಯೂರ ವರ್ಮನ ಬಗ್ಗೆ ಜನ ಓದಿ ತಿಳಿದುಕೊಂಡಿದ್ದಕ್ಕಿಂತ ಚಲನಚಿತ್ರ ನೋಡಿ ಅರಿತವರೇ ಹೆಚ್ಚು. ಏಕೆಂದರೆ ಕಾದಂಬರಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಚಲನಚಿತ್ರಗಳು ಸಾಧಾರಣ ಮನುಷ್ಯನಲ್ಲಿ ಭಾವಾವೇಶಗಳನ್ನು ಮೂಡಿಸುತ್ತವೆ. ಚಿತ್ರ ನೋಡಿ ಬಂದ ಜನಕ್ಕೆ ಮಯೂರ ವರ್ಮ ಯಾವ ಶತಮಾನದಲ್ಲಿ ಬದುಕಿದ್ದ ಎನ್ನುವ ವಿಷಯ ಗಮನಕ್ಕೆ ಬಾರದೆ ಹೋಗುತ್ತದೆ. ಆದರೆ ಮಯೂರನಿಗೆ ಬೀಳುತ್ತಿದ್ದ ಕನಸುಗಳು, ಅವನಲ್ಲಿ ಮೂಡುವ ರೋಷ, ಅವನ ಶೌರ್ಯ ಮತ್ತು 'ನಾನಿರುವುದೇ ನಿಮಗಾಗಿ' ಎನ್ನುವ ಹಾಡು ಅವರಿಗೆ ಮರೆಯಲು ಸಾಧ್ಯವೇ ಆಗುವುದಿಲ್ಲ. ಇದು ಬರೀ ಕನ್ನಡ ನಾಡಿಗೆ ಮಾತ್ರ ಸೀಮಿತವಲ್ಲ.

ಟೈಟಾನಿಕ್ ಚಿತ್ರ ನೆನಪಿಸಿಕೊಳ್ಳಿ. ಅದರಲ್ಲಿ ಲಕ್ಷಾಂತರ ಬೆಲೆ ಬಾಳುವ ಹಡಗು ಮುಳುಗಿ ಹೋಗುತ್ತದೆ. ಸಾವಿರಾರು ಜನ ಪ್ರಾಣ ಕಳೆದುಕೊಳ್ಳುತ್ತಾರೆ. ಆದರೆ ಚಿತ್ರ ನೋಡಿದ ಜನರಿಗೆ ನೆನಪಿನಲ್ಲಿ ಉಳಿಯುವುದು ನಾಯಕ-ನಾಯಕಿಯ ನಡುವಿನ ಪ್ರೀತಿ. ಮತ್ತು ಅದು ದುಃಖಾಂತ ಕಾಣುವ ರೀತಿ. ಅದು ಜನರ ಮನಸ್ಸಿನೊಳಗೆ ಇಳಿದಷ್ಟು ಬೇರೆ ವಿಷಯಗಳು ಇಳಿಯುವುದಿಲ್ಲ.

ಅಂಕೆ-ಸಂಖ್ಯೆಗಳಿಗೆ ಖಂಡಿತ ಮಹತ್ವ ಇದೆ. ಆದರೆ ಅದನ್ನು ಕಥೆಯ ರೂಪದಲ್ಲಿ ಹೇಳದೆ ಹೋದರೆ ಅದನ್ನು ಗ್ರಹಿಸುವುದು ಮತ್ತು ನೆನಪಿನಲ್ಲಿ ಇಟ್ಟುಕೊಳ್ಳುವುದು ಜನರಿಗೆ ಕಷ್ಟ. ಮತ್ತು ಕಥೆಯನ್ನು ನೀವು ಎಷ್ಟು ಪರಿಣಾಮಕಾರಿಯಾಗಿ ಹೇಳುತ್ತೀರೋ, ಅದು ಜನರ ಮನಸ್ಸಿಗೆ ಎಷ್ಟರ ಮಟ್ಟಿಗೆ ನಾಟುತ್ತದೋ ಎನ್ನುವುದು ಆ ಕಥೆ ಹುಟ್ಟಿಸುವ ಭಾವನೆಗಳ ಮೇಲೆ ಅವಲಂಬಿತ ಆಗಿರುತ್ತದೆ. ಜನರ ಮನಸ್ಸಿನಲ್ಲಿ ಭಾವನೆಗಳನ್ನು ಹುಟ್ಟಿಸದ ಕಥೆ ಅಲ್ಪಾಯುಷಿ. ಹಾಗೆಯೇ ರಾಮಾಯಣ, ಮಹಾಭಾರತಗಳು ಚಿರಂಜೀವಿಗಳಾಗಿರುವುದಕ್ಕೆ ಕಾರಣ ಅವು ಹುಟ್ಟಿಸುವ ವಿಚಾರ ಮತ್ತು ಭಾವನೆಗಳು.

ಅಂಕೆ-ಸಂಖ್ಯೆ ಗಳಲ್ಲಿ ನುರಿತವರು ವ್ಯಾಪಾರಿಗಳಾದರು, ಶ್ರೀಮಂತರಾದರು ಹಾಗೆಯೆ ಸುಲಭದಲ್ಲಿ ಜನ ಅವರನ್ನು ಮರೆತು ಹೋದರು. ಆದರೆ ಭಾವನೆಗಳಿಗೆ ಸ್ಪಂದಿಸುವ ಬಸವಣ್ಣನವರ ವಚನಗಳು, ದಾಸರ ಪದಗಳು ಜನರ ಬಾಯಲ್ಲಿ ಚಿರಸ್ಥಾಯಿಯಾಗಿ ಉಳಿದು ಹೋದವು. ಕಾಲ ಬದಲಾದರೂ, ಭಾಷೆ, ಜೀವನಶೈಲಿ ಬದಲಾದರೂ, ಆಧುನಿಕ ಮನುಷ್ಯನ ಭಾವನೆಗಳಿಗೂ, ಆದಿವಾಸಿಯ ಮನಸ್ಸಿನ ಭಾವನೆಗಳಿಗೂ ಏನೂ ವ್ಯತ್ಯಾಸವಿಲ್ಲ. ಅವನನ್ನು ಗೆಲ್ಲಲು, ಅವನ ಭಾವನೆಗಳಿಗೆ ಸ್ಪಂದಿಸಿದಾಗ ಮಾತ್ರ ಸಾಧ್ಯ. ಮತ್ತು ಅದಕ್ಕೆ ಅಂಕೆ-ಸಂಖ್ಯೆ ಗಳಿಂತ ಕಥೆ-ಗೀತೆಗಳೇ ಸುಲಭದ ಹಾದಿ.

Tuesday, December 19, 2023

ಅಸೂಯೆ ಅತಿಯಾಸೆಯ ತಾಯಿ

ನಾನು ಚಿಕ್ಕವನಿದ್ದಾಗ (೮೦ ರ ದಶಕದಲ್ಲಿ) ಹಳ್ಳದಿಂದ, ದೂರದ ಮನೆಗಳಲ್ಲಿ ಆಳದಲ್ಲಿರುವ ನಲ್ಲಿಗಳಿಂದ ಕೊಡದಲ್ಲಿ ನೀರು ಹೊತ್ತು ತಂದ ನೆನಪಿದೆ. ಇದು ಪ್ರತಿನಿತ್ಯದ ಮನೆಯವರೆಲ್ಲರ  ಕೆಲಸವಾಗಿತ್ತು. ಬರೀ ನಮ್ಮನೆ ಅಷ್ಟೇ ಅಲ್ಲ. ಊರಲ್ಲಿರುವ ಎಲ್ಲರಿಗು ಕೊಡದಲ್ಲಿ ನೀರು ಹೊತ್ತು ತಂದರಷ್ಟೇ ಮನೆಯಲ್ಲಿ ನೀರು. ಆ ಪರಿಸ್ಥಿತಿಯಲ್ಲಿ ಹಬ್ಬ ಬಂದರೆ, ನೆಂಟರು ಬಂದರೆ ಮನೆಯಲ್ಲಿ ನೀರಿಗೇನು ಮಾಡುವುದು ಎನ್ನುವ ಚಿಂತೆ ನನ್ನ ತಾಯಿಯಾದಾಗಿರುತ್ತಿತ್ತು .

ಕಾಲ ಬದಲಾಯಿತು. ಮನೆ ಮುಂದಿನ ನಲ್ಲಿಗಳಿಗೆ ನೀರು ಬರಲಾರಂಭಿಸಿತು. ಕೆಲವರಿಗೆ ಬೋರ್ವೆಲ್ ಸೌಲಭ್ಯ. ಇನ್ನು ನೀರು ಕಡಿಮೆ ಬಿದ್ದರೆ ಟ್ಯಾಂಕರ್ ಗಳಿಂದ ನೀರು ತರಿಸಿಕೊಳ್ಳುವುದು ಕೂಡ ಈಗ ಸಾಧ್ಯ. ಗಂಡಸರಾದರೆ ಭುಜದ ಮೇಲೆ, ಹೆಂಗಸರಾದರೆ ಸೊಂಟದಲ್ಲಿ ಕೊಡ ಹೊತ್ತು ಬರುವ ನೋಟ ಈಗ ತೀರಾ ಅಪರೂಪ.

ಆಗಿನ ಕಾಲಕ್ಕೂ ಹೋಲಿಸಿ ನೋಡಿದರೆ ಈಗಿರುವ ಸೌಲಭ್ಯಗಳಿಗೆ ಅಂದಿನ ಕಾಲ ಏನು ಅಲ್ಲ. ಆದರೆ ಕೊಡದಲ್ಲಿ ನೀರು ಹೊತ್ತು ತರುವುದು ಒಂದು ಜವಾಬ್ದಾರಿ ಅಂದುಕೊಡದಿದ್ದ ನಮಗೆ ಅದು ದುಃಖದ ಸಂಗತಿ ಅಂತ ಅನಿಸಿಯೇ ಇರಲಿಲ್ಲ. ಊರ ಜನ ಕೊಡ ಹೊತ್ತು ತರುವಾಗ ನಮಗೆಲ್ಲಿಂದ ದುಃಖ? ಅದೇ ಈಗ ಯಾರಿಗಾದರೂ ಕೊಡದಲ್ಲಿ ನೀರು ಹೊತ್ತು ತನ್ನಿ ಎಂದರೆ ಅದು ತಮಗೆ ಕೊಟ್ಟ ಶಿಕ್ಷೆ ಎಂದುಕೊಳ್ಳುತ್ತಾರೆ.

ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ನಾವೊಬ್ಬರೆ ನೀರನ್ನು ಹೊತ್ತ ತರಬೇಕಾದ ಪರಿಸ್ಥಿತಿ ಇದ್ದರೆ ಮಾತ್ರ ದುಃಖ. ಇಲ್ಲದಿದ್ದರೆ ಅದು ಸಾಮಾನ್ಯ ಅಂಶ ಅಷ್ಟೇ. ಅಲ್ಲಿ ದುಃಖ-ಸಂತೋಷ ಎರಡೂ ಇಲ್ಲ. ಇದು ಜೀವನದ ಎಲ್ಲ ವಿಷಯಗಳಿಗೂ ಅನ್ವಯಿಸುತ್ತದೆ. ನಿಮ್ಮ ಊರಲ್ಲಿ ಎಲ್ಲರು ಹರಿದ ಬಟ್ಟೆಗಳನ್ನು ಧರಿಸಿದರೆ ನಮಗೆ ಕೂಡ ಹರಿದ ಬಟ್ಟೆ ಧರಿಸುವದರಲ್ಲಿ ಯಾವ ಅವಮಾನ ಕೂಡ ಎನಿಸುವುದಿಲ್ಲ. ಅದೇ ಕೆಲವರು ಅಥವಾ ಸಾಕಷ್ಟು ಜನ ಒಳ್ಳೆಯ ಬಟ್ಟೆ ಧರಿಸಿದರೆ, ನಮಗೆ ಖಂಡಿತ ದುಃಖ ಅನಿಸುತ್ತದೆ. ಅವರಲ್ಲಿರುವ ವಸ್ತು ನಮ್ಮಲಿಲ್ಲ ಎನ್ನುವ ಹೋಲಿಕೆ ನಮ್ಮಲ್ಲಿ ಅಸೂಯೆ ಮೂಡಿಸುತ್ತದೆ. 

ಬೇರೆ ಯಾರ ಹತ್ತಿರವಿರದಿದ್ದ ವಸ್ತುವಿನ ಮೇಲೆ ನಮಗೆ ಆಸೆ ಮೂಡುವದೇ ಇಲ್ಲ. ಉದಾಹರಣೆಗೆ ನಮ್ಮ ಸುತ್ತ ಮುತ್ತಲಿನ ಜನ ತಮ್ಮ ಓಡಾಟಕ್ಕೆ ಪ್ರೈವೇಟ್ ಜೆಟ್ ಇಟ್ಟುಕೊಂಡಿರುವುದಿಲ್ಲ. ಆದರೆ ಅಂತಹ ಸುದ್ದಿಗಳನ್ನು ಟಿವಿ ಯಲ್ಲಿ ನೋಡಿದರೆ ಅಥವಾ ಪತ್ರಿಕೆಗಳಲ್ಲಿ ಓದಿದರೆ ಅದು ನಮಗೆ ಬೇಕು ಎನಿಸುವುದಿಲ್ಲ ಮತ್ತು ಅವರ ಮೇಲೆ ನಮಗೆ ಅಸೂಯೆ ಮೂಡುವುದಿಲ್ಲ. ಅದೇ ನಮ್ಮ ನೆರೆಯವರು ಅಥವಾ ಸಂಬಂಧಿಕರು ಒಂದು ದೊಡ್ಡ ಕಾರನ್ನು ತಮ್ಮ ಮನೆಯ ಮುಂದೆ ನಿಲ್ಲಿಸಿಕೊಂಡರೆ ಆಗ ನಮ್ಮ ಪ್ರತಿಷ್ಠೆ ಭುಗಿಲೇಳುತ್ತದೆ. ಅಲ್ಲಿವರೆಗೆ ಕಾರಿನ ಆಸೆ ಇರದಿದ್ದ ನಾವುಗಳು ಅಸೂಯೆಯಿಂದ ಸಂಕಟಕ್ಕೀಡಾಗುತ್ತೇವೆ. ಹೊಸ ಆಸೆಯ ಹಿಂದೆ ಬೀಳುತ್ತೇವೆ.

ಊರ ಜನ ಕೊಡದಲ್ಲಿ ನೀರು ಹೊತ್ತು ತರುವಾಗ, ಅದೇ ಕೆಲಸ ಮಾಡಿದ ನಮಗೆ ಇರದಿದ್ದ ದುಃಖ ಈಗ ನಮ್ಮ ನೆರೆಯವರಿಗಿಂತ, ಹತ್ತಿರದ ಬಂಧುಗಳಿಗಿಂತ ಕಡಿಮೆ ಎನಿಸಿಕೊಳ್ಳುವುದು ದುಃಖ ಉಂಟು ಮಾಡುತ್ತದೆ. 'ಆಸೆಯೇ ದುಃಖದ ಮೂಲ' ಎಂದು ಹೇಳಿದ ಬುದ್ಧ, ಅಸೂಯೆ ಆಸೆಯ ತಾಯಿ ಎಂದು ಹೇಳುವುದು ಮರೆತು ಹೋದ.

ಬೇರೆಯವರಿಗಿಂತ ನಾವು ಕಡಿಮೆ ಅನಿಸಿಕೊಳ್ಳಬಾರದು ಎನ್ನುವ ಹೋಲಿಕೆ ನಮ್ಮಲ್ಲಿ ಅಸೂಯೆ ಮನೆ ಮಾಡುವಂತೆ ಮಾಡಿ, ನಮಗೆ ಉಪಯೋಗವಿರದ ಆಸೆಗಳಿಗೆ ಬಲಿಯಾಗುವಂತೆ ಮಾಡುತ್ತದೆ. ಅಸೂಯೆ ಇರದಿದ್ದರೆ ಅಲ್ಲಿ ಆಸೆಗಳಿಗೂ ಕಡಿವಾಣ ಇರುತ್ತದೆ. ಅದರಿಂದ ಏನು ಸಾರ್ಥಕತೆ ಇದೆ ಎನ್ನುವ ವಿವೇಕ ಕೂಡ ಇರುತ್ತದೆ. ಆದರೆ ಅಸೂಯೆ ಇದ್ದಲ್ಲಿ ಉಳಿದೆಲ್ಲ ಲೋಭ, ಮದ-ಮತ್ಸರಗಳು ಅತಿರೇಕಕ್ಕೆ ಹೋಗುತ್ತವೆ. ಸರಿ-ತಪ್ಪಿನ ತರ್ಕಗಳು, ವಿವೇಚನಗಳು ಕೆಲಸಕ್ಕೆ ಬಾರದೆ ಹೋಗುತ್ತವೆ.

ನಾವೊಬ್ಬರೆ ಕಾಡಿನಲ್ಲಿ ಮನೆ ಮಾಡಿಕೊಂಡು ಇರಲು ಸಾಧ್ಯವಿಲ್ಲ. ಸಮಾಜದಲ್ಲಿ ಬದುಕಿದಾಗ ಅಸೂಯೆ ಸಾಮಾನ್ಯ ಪ್ರಕ್ರಿಯೆ. ಆದರೆ ಅಸೂಯೆ ನಮ್ಮ ವಿವೇಚನೆ ದಾಟಿ ಹೋಗದಂತೆ ನೋಡಿಕೊಳ್ಳುವುದು ಮಾತ್ರ ನಮಗೆ ಬಿಟ್ಟಿದ್ದು. ನಮ್ಮಲ್ಲಿ ಆಸೆ ಹುಟ್ಟಿದಾಗ ಅದಕ್ಕೆ ಕಾರಣ ಅಸೂಯೆಯೋ ಎನ್ನುವುದು ಗಮನಿಸಿ ನೋಡಿ. ಇಲ್ಲದಿದ್ದರೆ ನಾವದರ ಬಲಿಪಶು ಅಷ್ಟೇ.

Thursday, November 23, 2023

ಬುಲೆಟ್ ಪುರಾಣ

ನಾನು ಚಿಕ್ಕವನಿದ್ದಾಗ (೮೦ ರ ದಶಕದಲ್ಲಿ) ನಮ್ಮೂರು ಮಸ್ಕಿಯಲ್ಲಿ ಇದ್ದದ್ದು ಎರಡೇ ಬೈಕ್ ಗಳು. ಒಂದು ಖ್ಯಾತ ವೈದ್ಯರದ್ದು. ಮತ್ತು ಇನ್ನೊಂದು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅವರದ್ದು. ಎರಡು ಕೂಡ ಬುಲೆಟ್ ಬೈಕ್ ಗಳೇ. ಕಾಲ ಕ್ರಮೇಣ ತರಹೇವಾರಿ ಬೈಕ್ ಗಳು ಬಂದವು. ಎಜ್ಡಿ, ರಾಜದೂತ್, ಮತ್ತು ಜಾವಾ. ಇನ್ನೊಂದು ದಶಕ ಕಳೆಯುವಷ್ಟರಲ್ಲಿ ಹೀರೋ ಹೋಂಡಾ. ಬಜಾಜ್, ಯಮಹಾಗಳು ಬಂದು ಮನೆಗೊಂದು ಬೈಕ್ ಬಂದಾಗಿತ್ತು. ಆದರೆ ನಾನು ಜೀವನದ ಶುರುವಿನಲ್ಲಿ ತಿಳಿದುಕೊಂಡಿದ್ದು ಕಾರ್ ಅಂದರೆ ಅಂಬಾಸಡರ್ ಮತ್ತು ಬೈಕ್ ಅಂದರೆ ಬುಲೆಟ್. ಇದು ಬರೀ ನಮ್ಮೂರಷ್ಟೇ ಅಲ್ಲ. ನಾವು ನೋಡುತ್ತಿದ್ದ ಕನ್ನಡ ಚಲನ ಚಿತ್ರಗಳಲ್ಲಿ ಕೂಡ ಅವುಗಳೇ ಕಾಣುತ್ತಿದ್ದವು. ನಾಯಕ ಶಂಕರ್ ನಾಗ್ ರಿಂದ ಖಳನಾಯಕ ಸುಧೀರ್ ರವರೆಗೆ ಓಡಿಸುತ್ತಿದ್ದದ್ದು ಬುಲೆಟ್ ಬೈಕ್ ಗಳೇ.

ಆ ಕಾಲಮಾನದಲ್ಲಿದ್ದ ಅನೇಕ ಬೈಕ್ ಕಂಪನಿಗಳು ಮುಚ್ಚಿ ಹೋದವು. ಬುಲೆಟ್ ಕೂಡ ಅದೇ ಹಾದಿಯಲ್ಲಿ ಸ್ವಲ್ಪ ವರ್ಷಗಳ ಕಾಲ ಕಣ್ಮರೆಯಾಗಿತ್ತು. ಆದರೆ ಅದಕ್ಕೆ ಮತ್ತೆ ಪುನರುಜ್ಜೀವನ ಸಿಕ್ಕಿತು. ಕ್ರಮೇಣ ಅದು ತನ್ನ ಬೆಲೆ ಕೂಡ ಹೆಚ್ಚಿಸಿಕೊಂಡು ಮಾರುಕಟ್ಟೆಯಲ್ಲಿ ಹೊಸ ಗ್ರಾಹಕರನ್ನು ಸೆಳೆಯುತ್ತ ಸದ್ದು ಮಾಡತೊಡಗಿತು. ಬದಲಾದ ಪೀಳಿಗೆಗೆ ಹಳೆಯ ಬೈಕ್ ಕೆಲವು ಕಾರಣಗಳಿಂದ ಇಷ್ಟವಾಗತೊಡಗಿತು.

ಬೈಕ್  ಅಂದರೆ ಅಷ್ಟೇನೂ ಹುಚ್ಚು ಇರದಿದ್ದ ನನಗೂ ಕೂಡ ಅದೇಕೋ ಇದನ್ನು ಓಡಿಸುವ ಹುಚ್ಚು ಸೇರತೊಡಗಿತು. ತೆಗೆದುಕೊಳ್ಳಬೇಕೋ, ಬೇಡವೋ ಎನ್ನುವ ಜಿಜ್ಞಾಸೆಯಲ್ಲಿ ಹಲವು ತಿಂಗಳುಗಳು ಕಳೆದು ಹೋದವು. ಕೊನೆಗೆ ದುಡ್ಡು ಜೋಡಿಸಿಕೊಂಡು ಬೈಕ್ ಏರಿದ್ದಾಯಿತು. ಆ ಸಂತೋಷ ನಿಮ್ಮ ಜೊತೆ ಹಂಚಿಕೊಳ್ಳುವ ಸಲುವಾಗಿ ಇದನ್ನು ಬರೆದದ್ದಾಯಿತು.






Thursday, November 9, 2023

ತೋಳ ಬಂತು ತೋಳ

ಕುರಿ ಕಾಯಲು ಬಂದ ಹುಡುಗನಿಗೆ ಕುತೂಹಲ. ತೋಳ ಬಂದರೆ ಜನ ಸಹಾಯಕ್ಕೆ ಬರುವರೇ? ದೊಡ್ಡ ದನಿಯಲ್ಲಿ ಕೂಗಿಯೇ ಬಿಟ್ಟ 'ತೋಳ, ತೋಳ, ತೋಳ'. ಕೇಳಿಸಿಕೊಂಡ ಜನ ಸಹಾಯಕ್ಕೆ ಧಾವಿಸಿದರು. ಆದರೆ ಅದು ತಮಾಷೆಗೆ ಮಾಡಿದ್ದು ಎಂದು ಗೊತ್ತಾದಾಗ ಜನ ಆ ಹುಡುಗನನ್ನು ಬೈದುಕೊಂಡು ಹಿಂತಿರುಗಿದರು.

ಆದರೆ ಒಂದು ದಿನ ತೋಳ ಬಂದೇ ಬಿಟ್ಟಿತು. ಅವನು ಸಹಾಯಕ್ಕೆ ಕೂಗಿಕೊಂಡ. ಆದರೆ ಹುಡುಗನ ಧ್ವನಿಯನ್ನು ಗುರುತಿಸಿದ ಜನ ಅವನನ್ನು ಉಪೇಕ್ಷಿಸಿದರು. 

ಆ ಹುಡುಗ ಸಂಜೆಯಾದರೂ ಮನೆಗೆ ಬರೆದದ್ದಕ್ಕೆ ಅವನ ಅಜ್ಜ ಅವನನ್ನು ಹುಡುಕಿಕೊಂಡು ಬಂದ. ತೋಳ ಒಂದು ಕುರಿಯನ್ನು ಎತ್ತಿಕೊಂಡು ಹೋಗಿತ್ತು. ಉಳಿದವುಗಳು ಚೆಲ್ಲಾಪಿಲ್ಲಿಯಾಗಿದ್ದವು. ತಾತ ಮೊಮ್ಮಗನ ಹೆಗಲ ಮೇಲೆ ಕೈ ಹಾಕಿ ಮನೆಗೆ ಕರೆದುಕೊಂಡು ಹೊರಟ. ದಾರಿಯಲ್ಲಿ ಮೊಮ್ಮಗ ಕೇಳಿದ 'ನಾನು ಮಾಡಿದ ತಪ್ಪು ಏನು?'

ತಾತ ಸಮಾಧಾನದಿಂದ ಉತ್ತರಿಸಿದ: 'ಸುಳ್ಳುಗಾರರನ್ನು ಜನ ನಂಬುವುದಿಲ್ಲ'

ಕಥೆ ಹಳೆಯದಾದರೂ ಪುನರಾವರ್ತನೆ ಆಗುತ್ತಲೇ ಇರುತ್ತದೆ. ಏಕೆಂದರೆ ಮೊದಲ ಸಲ (ಅಥವಾ ಮೋಸ ಹೋಗುವುವರೆಗೆ) ಜನ ಸುಳ್ಳುಗಾರರನ್ನು ನಂಬುತ್ತಾರೆ. ಮತ್ತು ಅದರ ಉಪಯೋಗ ಪಡೆದುಕೊಂಡು ಸುಳ್ಳುಗಾರರು ಹೊಸ ಜನರನ್ನು ಹುಡುಕಿಕೊಂಡು ಹೋಗುತ್ತಾರೆ. ನಿಜವಾಗಿ ತೋಳ ಬಂದಾಗ ಸುಳ್ಳುಗಾರನ ಕಥೆ ಮುಗಿಯುತ್ತದೆ. ಮತ್ತೆ ಹೊಸ ಸುಳ್ಳುಗಾರ ಹುಟ್ಟಿಕೊಳ್ಳುತ್ತಾನೆ. ಕಥೆ ಪುನರಾವರ್ತನೆ ಆಗುತ್ತಲೇ ಹೋಗುತ್ತದೆ.

ಮನುಷ್ಯ ಮನುಷ್ಯನನ್ನು ನಂಬುತ್ತಾನೆ. ಅದಕ್ಕೆ ಮನುಷ್ಯ ಮನುಷ್ಯನಿಗೆ ಮೋಸ ಮಾಡಲು ಸಾಧ್ಯವಾಗುತ್ತದೆ. ತೋಳನೆಂಬ ವಿಧಿ ಇದನ್ನು ಸಮತೋಲನ ಮಾಡಲು ತಡವಾಗಿ ಆದರೂ ಬಂದೇ ಬರುತ್ತಾನೆ.

Sunday, October 8, 2023

ಇಳಿಸಂಜೆಯ ಹೆಂಗಸು

(ಇದು William  Dalrymple ಅವರ "Nine Lives" ಪುಸ್ತಕದಲ್ಲಿನ 'The Lady Twilight' ಅಧ್ಯಾಯದ ಭಾವಾನುವಾದದ ಸಾರಾಂಶ)

'ನೀನು ತಲೆಬುರುಡೆಯನ್ನು ಕುಡಿಯುವದಕ್ಕೆ ಉಪಯೋಗ ಮಾಡುವ ಮೊದಲು ಅದು ಸರಿಯಾದ ಶವದಿಂದ ಬಂದದ್ದು ಎನ್ನುವುದು  ಖಚಿತ ಪಡಿಸಿಕೊಳ್ಳಬೇಕು.'

ನಾವು ಸ್ಮಶಾನ ಮಧ್ಯದಲ್ಲಿದ್ದ ಗುಡಿಸಲು ಒಂದರಲ್ಲಿ ಕುಳಿತು ಮಾತನಾಡುತ್ತಿದ್ದೆವು. ಅದು ಬಂಗಾಳದಲ್ಲಿನ ತಾರಾಪೀಠ. ಶಕ್ತಿ ಪೀಠ ಎಂದು ಕೂಡ ಕರೆಸಿಕೊಳ್ಳುತ್ತದೆ. ಅದು ಮಹಾನ್ ಶಕ್ತಿ ದೇವತೆಯಾದ ತಾರಾಳ ಮನೆ.

ತಾರಾಪೀಠ ಅಶುಭ ಎನ್ನಿಸುವ ಒಂದು ವಿಲಕ್ಷಣ ಜಾಗ. ಕಲ್ಕತ್ತೆಯಲ್ಲಿ ನನಗೆ ಈ ಜಾಗದ ಬಗ್ಗೆ ಸಾಕಷ್ಟು ಜನ ಎಚ್ಚರ ವಹಿಸುವಂತೆ ಸಲಹೆ ನೀಡಿದ್ದಾರೆ. ಅಲ್ಲಿ ಮಧ್ಯ ರಾತ್ರಿಯಲ್ಲಿ ನಡೆಯುವ ಸಂಗತಿಗಳ ಬಗ್ಗೆ ಜನ ಗುಸು ಗುಸು ಮಾತನಾಡಿಕೊಳ್ಳುತ್ತಾರೆ.

ಆದರೆ ಅಲ್ಲಿಯೇ ತಾರಾ ದೇವತೆ ಜೀವಿಸುವುದು. ಬಲಿ ಕೊಡುವ ಕುರಿಗಳ ರಕ್ತ ಹೀರಿಯೇ  ಅವಳು ಸಂಪನ್ನಳಾಗುವುದು. ಆ ಸ್ಮಶಾನದಲ್ಲಿಯೇ ಅನೇಕ ತಾಂತ್ರಿಕ ಸಾಧಕರು ನೆಲೆಗೊಂಡಿದ್ದಾರೆ. ಅವರ ಗುಡಿಸಲ ಬಾಗಿಲಿಗೆ ಮನುಷ್ಯರ ಅದರಲ್ಲೂ ಸಣ್ಣ ಮಕ್ಕಳ ತಲೆಬುರುಡೆಗಳನ್ನು ತೋರಣದಂತೆ ತೂಗು ಹಾಕಿದ್ದಾರೆ. ನರಿ, ಹದ್ದುಗಳ ಮತ್ತು ಹಾವುಗಳ ತಲೆ ಬುರುಡೆಗಳು ಮತ್ತು ಎಲುಬುಗಳು ಕೂಡ ಆ ಮಾಲೆಗಳಲ್ಲಿ ಕಾಣಬಹುದು.

" ಅದು ಸರಿಯಾದ ತಲೆ ಬುರುಡೆ ಎಂದು ಹೇಗೆ ಗೊತ್ತಾಗುತ್ತದೆ?" ನಾನು ಮನಿಷಾಳನ್ನು ಕೇಳಿದೆ.

"ಸ್ಮಶಾನದಲ್ಲಿ ಕಾವಲು ಇರುವವರು, ಅಂತ್ಯ ಸಂಸ್ಕಾರಕ್ಕೆ ನೆರವಾಗುವವರು ನಮಗೆ ಈ ತಲೆ ಬುರುಡೆ ತಂದು ಕೊಡುತ್ತಾರೆ" ವಾಸ್ತು ಸ್ಥಿತಿಯನ್ನು ಹೇಳುತ್ತಾ ಮನಿಷಾ ಮುಂದುವರೆಸಿದಳು. "ಸತ್ತ ವ್ಯಕ್ತಿ ಆತ್ಮ ಹತ್ಯೆ ಮಾಡಿಕೊಂಡಿದ್ದರೆ ಅದು ಅತ್ಯುತ್ತಮ ತಲೆ ಬುರುಡೆ. ಹಾಗೆ ಮದುವೆ ಆಗದೆ ತೀರಿಕೊಂಡ ಕುಮಾರಿಯರ ತಲೆ ಬುರುಡೆಗಳು ಕೂಡ ವಿಶೇಷ ಶಕ್ತಿ ಹೊಂದಿರುತ್ತವೆ"

"ಆಮೇಲೆ?"

"ಒಂದು ಸಲ ಸರಿಯಾದ ತಲೆ ಬುರುಡೆ ಸಿಕ್ಕ ಮೇಲೆ, ಅದನ್ನು ಕೆಲ ದಿನ ಮಣ್ಣಲ್ಲಿ ಹುದುಗಿಸಬೇಕು. ನಂತರ ಹೊರ ತೆಗೆದು ಎಣ್ಣೆ ಸವರಬೇಕು. ಆಗ ಅದು ಕುಡಿಯಲು ಯೋಗ್ಯ  ಬಟ್ಟಲು ಆಗುತ್ತದೆ. ಬರಿ ಮಾಲೆ ಮಾಡಿ ಹಾಕುವುವುದಾದರೆ, ಅದನ್ನು ಒಣಗಿಸಿ, ಅದಕ್ಕೆ ಕೆಂಪು ಬಣ್ಣ ಬಳಿದು ತೂಗು ಬಿಡಬಹುದು, ಆಗ ಅದು ಮಳೆಗೆ ಕೆಡುವುದಿಲ್ಲ"

ಹೊರ ಜಗತ್ತಿನಲ್ಲಿ ಮಾಟ-ಮಂತ್ರ ಎಂದು ಭೀತಿಯಿಂದ ಕರೆಸಿಕೊಳ್ಳುವ ಈ ಅಭ್ಯಾಸಗಳು ಈ ಜಾಗದಲ್ಲಿ ಸಾಧಾರಣ ಸಂಗತಿ ಅಷ್ಟೇ. ಈ ಜಾಗದಲ್ಲಿ ವಾಸಿಸುವ ತಾಂತ್ರಿಕ ಸಾಧಕರು, ತಮ್ಮ ಮೈಗೆಲ್ಲ ಬೂದಿ ಬಳೆದುಕೊಂಡು, ನಗ್ನ-ಅಥವಾ ಅರೆ ನಗ್ನರಾಗಿ,  ತಾಯಿ ತಾರಾಳ ಆರಾಧನೆಯಲ್ಲಿ ತೊಡಗಿರುತ್ತಾರೆ. ಅಲ್ಲಿರುವ ಅನೇಕ ಸಾಧಕರಲ್ಲಿ ಒಬ್ಬ ತಪನ್ ಸಾಧು. ಅವನು ಮನಿಶಾಳ ಗುರು ಮತ್ತು ಸಂಗಾತಿ.

ಮನಿಷಾ ಭಯ ಹುಟ್ಟಿಸುವ ಹೆಣ್ಣು ಮಗಳಲ್ಲ. ಅವಳ ಜಡ್ಡುಗಟ್ಟಿದ ಕೂದಲು, ಕೇಸರಿ ಬಣ್ಣದ ಬಟ್ಟೆಗಿಂತ ಅವಳ ನಡತೆಯಲ್ಲಿ ಹೆಚ್ಚಿನ ವ್ಯಕ್ತಿತ್ವದಲ್ಲಿ ತೋರುವುದು. ಅವಳು ದೇವಿ ಆರಾಧನೆಗೆ ಬರುವ ಭಕ್ತರಲ್ಲಿ ಆದರೆ ತೋರುತ್ತಾಳೆ. ದಾರಿಹೋಕ ಸಾಧುಗಳಿಗೆ ನೀರು-ಚಹಾ ನೀಡಿ ಸುಧಾರಿಸಿಕೊಳ್ಳುವ ವ್ಯವಸ್ಥೆ ಮಾಡುತ್ತಾಳೆ. ಮತ್ತು ತಪನ್ ಸಾಧುವನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾಳೆ.

ಅವಳು ಹೇಳಿದಳು "ಜನ ಏನಾದರೂ ಮಾತನಾಡಿಕೊಳ್ಳಲಿ. ಇದು ಭೂತ ಪ್ರೇರಿತ ಹೆದರಿಕೊಳ್ಳುವ ಜಾಗವಲ್ಲ. ಇಲ್ಲಿರುವ ನಾವುಗಳು, ಪಟ್ಟಣದಲ್ಲಿರುವ ಜನರಿಗಿಂತ, ಒಬ್ಬರನ್ನೊಬ್ಬರು ಕಾಳಜಿಯಿಂದ ನೋಡಿಕೊಳ್ಳುತ್ತೇವೆ. ಆದರೆ ಜನರಿಗೆ ನಮ್ಮ ಬಗ್ಗೆ ತಲ್ಪು ಕಲ್ಪನೆಗಳಿವೆ. ಇಲ್ಲಿರುವವರು ಮಧ್ಯ ವ್ಯಸನಿಗಳು. ಸಣ್ಣ ಮಕ್ಕಳನ್ನು ಕದ್ದು , ನರಬಲಿ ಕೊಡುತ್ತಾರೆ ಎಂದೆಲ್ಲ ಅಂದುಕೊಳ್ಳುತ್ತಾರೆ. ನನ್ನನ್ನು ಕೂಡ ಮಾಟಗಾತಿ ಎಂದುಕೊಂಡಿದ್ದಾರೆ."

ಅವಳು ಮುಂದುವರೆಸಿದಳು "ಇಲ್ಲಿರುವವರೆಲ್ಲ ತಾಯಿ ತಾರಾಳ ಭಕ್ತರು. ಅವಳನ್ನು ಸಾಕ್ಷಾತ್ಕಾರ ಮಾಡಿಕೊಳ್ಳಲು ಅವಳನ್ನು ಪೂಜಿಸುವವರು. ರೀತಿಗಳು ಮಾತ್ರ ಭಿನ್ನ ಅಷ್ಟೇ. ತಾಯಿ ತಾರಾ ಇಲ್ಲಿಯೇ ನೆಲೆಸಿದ್ದಾಳೆ. ಅವಳು ಪ್ರತಿ ದಿನ ನಮ್ಮ ಅನುಭವಕ್ಕೆ ಬರುತ್ತಾಳೆ. ತಾಯಿ ಯಾರಲ್ಲೂ ಭೀತಿ ಹುಟ್ಟಿಸುವುದಿಲ್ಲ. ಗಂಡ-ಅತ್ತೆಗೆ ಬೇಡವಾಗಿದ್ದ ನಾನು, ನನಗಿದ್ದ ಮೂರು ಹೆಣ್ಣು ಮಕ್ಕಳನ್ನು ಬಿಟ್ಟು ಮನೆಯಿಂದ ಹೊರ ಬಂದಾಗ ನನಗೆ ರಕ್ಷಣೆ ನೀಡಿದ್ದು ತಪನ ಸಾಧು. ಇಲ್ಲಿಗೆ ಬರುವಂತೆ ತಾಯಿಯೇ ನನಗೆ ಪ್ರೇರಣೆ ನೀಡಿದ್ದು. ಇನ್ನು ನಾನು ಬೇರೆಲ್ಲಿಗೂ ಹೋಗಲಾರೆ. ಈ ಸ್ಮಶಾನದಲ್ಲೇ ನಾನು ಜೀವನ  ಕಂಡುಕೊಂಡಿದ್ದು. ತಾಯಿ ತಾರಲೇ ನನಗೆ ರಕ್ಷಣೆ, ನನಗೆ ಸ್ಪೂರ್ತಿ. ಇನ್ನು ನನ್ನ ಜೀವನ ಅವಳೇ ನಿರ್ಧರಿಸುತ್ತಾಳೆ "

ಅಂದು ಸಂಜೆ ಮನಿಷಾ ನನ್ನನ್ನು ದೇವಸ್ಥಾನಕ್ಕೆ ಕರೆದುಕೊಂಡು  ಹೋದಳು. ಸಂಜೆ ಆರತಿಯ ಹೊತ್ತಾದರೂ, ದೇವಸ್ಥಾನದಲ್ಲಿ ಜನರು ಕಡಿಮೆಯೇ ಇದ್ದರು. ಹೊರಗೆ ತಪನ್ ಸಾಧು ಯಾವುದೊ ಪೂಜೆಯ ಕೈಂಕರ್ಯದಲ್ಲಿ ತೊಡಗಿದ್ದ. ಅದನ್ನು ಮಾಡಿಸಲು ಬಂದವನು ಒಬ್ಬ ರಾಜಕಾರಣಿ. ತನಗೆ ಚುನಾವಣೆಯಲ್ಲಿ ಗೆಲುವು ಸಿಗಲೆಂದು ಆ ಪೂಜೆ ಮಾಡಿಸಿ ಹಾಗೆಯೆ ಬಲಿ ಕೊಡಲು ಒಂದು ಕುರಿಯನ್ನು ತಂದಿದ್ದ.

ಅದನ್ನು ದೂರದಿಂದಲೇ ಗಮನಿಸುತ್ತಾ, ಮನಿಷಾ ಮಾತಿಗೆ ತೊಡಗಿದಳು.

"ನನಗೆ ಏಳು ಜನ ಅಕ್ಕಂದಿರು ಮತ್ತು ಒಬ್ಬ ತಮ್ಮ. ಮನೆಯಲ್ಲಿ ದಿನಕ್ಕೆ ಒಂದೇ ಹೊತ್ತು ಉಣ್ಣುವಷ್ಟು ಬಡತನ. ತಾಯಿಗೆ ನನ್ನ ತಮ್ಮನ ಮೇಲೆ ವಿಶೇಷ ಪ್ರೀತಿ. ನನಗೆ ಚಿಕ್ಕಂದಿನಿಂದಲೂ ಆಧ್ಯತ್ಮದ ಬಗ್ಗೆ ಸೆಳೆತ. ಮನೆಯಲ್ಲಿ ದುರ್ಗೆ, ಕಾಳಿ, ತಾರಾ ದೇವತೆಗಳ ಚಿತ್ರಪಟಗಳನ್ನು ನೋಡುತ್ತಾ ಭಕ್ತಿ ಪರವಶಳಾಗುತ್ತಿದ್ದೆ.

ಹದಿನಾರು ವರುಷಕ್ಕೆ ನನಗೆ ಮದುವೆ ಆಯಿತು, ಮೊದಲ ಮಗಳು ಹುಟ್ಟಿದ ಮೇಲೆ ನನಗೆ ಮೈ ಮೇಲೆ ದೇವಿ ಬರಲು ಆರಂಭಿಸಿದಳು. ಕಾಲ ಕ್ರಮೇಣ ಅದು ಹೆಚ್ಚಾಗುತ್ತಾ ಹೋಯಿತು. ಅದು ನನ್ನ ಗಂಡ-ಅತ್ತೆಗೆ ಕಸಿವಿಸಿ ಉಂಟು ಮಾಡುತ್ತಾ ಹೋಯಿತು. ಒಂದು ದಿನ ಮೈ ಮೇಲೆ ದೇವಿ ಬಂದು ನನಗೆ ಪ್ರಜ್ಞೆ ತಪ್ಪಿ ಕೆಲ ಸಮಯದ ನಂತರ ಎಚ್ಚರವಾದಾಗ ಪೂಜಾರಿಯೊಬ್ಬ ನನ್ನ ಕಾಲು ತೊಳೆದು ಪೂಜೆ ಮಾಡಿದ್ದೂ ನನ್ನ ಗಮನಕ್ಕೆ ಬಂತು. ನನ್ನ ಗಂಡ-ಅತ್ತೆಗೆ ಇದು ಸರಿ ಕಾಣದೆ ಹೋಯಿತು. ಆದರೆ ನನ್ನ ಮೇಲೆ ದೇವಿ ಬರುವುದು ಹೆಚ್ಚಾಗುತ್ತಾ ಹೋಯಿತು. ಒಂದು ದಿನ ದೇವಿ ಪ್ರೇರಣೆಯೊಂದ ಮನೆಯಿಂದ ಹೊರ ಬಿದ್ದು ಒಂದು ಕಾಳಿ ಮಂದಿರ ಸೇರಿದೆ. ಮತ್ತೆ ಕನಸಿನಲ್ಲಿ ತಾರಾಪೀಠಕ್ಕೆ ಬಂದು ತಪನ್ ಸಾಧುವನ್ನು ಕಾಣುವಂತೆ ತಾಯಿ ಅಪ್ಪಣೆ ಕೊಟ್ಟಳು. ಅಲ್ಲಿಂದ ಇದೆ ನನ್ನ ಮನೆ ಆಯಿತು.

ಈಗ ನನ್ನ ಆರಾಧನೆ ತಾಯಿ ತಾರಾಳಿಗೆ ಮೀಸಲು. ಅದಕ್ಕೆ ತಲೆ ಬುರುಡೆಗಳು ಸಹಾಯ ಆಗುತ್ತವೆ. ಆದರೆ ನಾನು ಈಗ ತಾಯಿಯನ್ನು ಪ್ರೀತಿಯಿಂದ ಒಲಿಸಿಕೊಳ್ಳುವ ಕಾರ್ಯದಲ್ಲಿ ತೊಡಗಿದ್ದೇನೆ."

"ನಿನಗೆ ಕುಟುಂಬದ ನೆನಪಾಗಲಿಲ್ಲವೇ?" ನಾನು ಕೇಳಿದೆ.

ತಾರಾ ಉತ್ತರಿಸಿದಳು "ಇಪ್ಪತ್ತು ವರುಶಗಳವರೆಗೆ ಯಾವುದೇ ಸಂಪರ್ಕ ಇರಲಿಲ್ಲ. ನನ್ನ ಗಂಡ ತಾನು ಸಾಯುವ ಮುನ್ನ, ನಾನು ತಾರಪುರದಲ್ಲಿ ಇರುವ ವಿಷಯ ನನ್ನ ಮಕ್ಕಳಿಗೆ ತಿಳಿಸಿದನಂತೆ. ಅವರು ನನ್ನನ್ನು ಹುಡುಕಿಕೊಂಡು ಬಂದರು. ಇಬ್ಬರು ದೊಡ್ಡ ಹೆಣ್ಣು ಮಕ್ಕಳಿಗೆ ಮದುವೆ ಆಗಿ ಮಕ್ಕಳು ಆಗಿದ್ದರು. ನಾವು ಒಬ್ಬರನ್ನೊಬ್ಬರು ನೋಡಿದ ಎಷ್ಟೋ ಹೊತ್ತು ಮಾತೇ ಹೊರಡಲಿಲ್ಲ.ನಂತರ ಒಬ್ಬರನ್ನೊಬ್ಬರು ಅಪ್ಪಿಕೊಂಡು ಬಿಕ್ಕಿ ಬಿಕ್ಕಿ ಅತ್ತೆವು. ನನ್ನ ಚಿಕ್ಕ ಮಗಳು ಮತ್ತು ತಾಯಿ ಹತ್ತಿರದ ಊರಲ್ಲೇ ಇರುತ್ತಾರೆ. ಆಗಾಗ ಭೇಟಿಯಾಗುತ್ತವೆ. ಇವತ್ತು ಬೆಳಿಗ್ಗೆ ಪೂಜೆಗೆ ಅವರು ಬಂದು ಹೋದರು".

ಇನ್ನು ಮಾತು ಸಾಕು ಎನ್ನುವಂತೆ ಮನಿಷಾ ಹೇಳಿದಳು "ನನಗೆ ಉಳಿದಿರುವ ಆಸೆ ಎಂದರೆ ತಾಯಿ ತಾರಾಳ ತೋಳ್ತೆಕ್ಕೆಯಲ್ಲಿ ಸಾಯಬೇಕು ಎನ್ನುವುದು ಒಂದೇ".

--0--

Monday, September 4, 2023

ಆದಾಯ ಮುಖ್ಯವೋ, ಖರ್ಚು ಮುಖ್ಯವೋ?

ನಿಮಗೆ ಬರುವ ಸಂಬಳ ಎಷ್ಟು?ನಿಮ್ಮ ವ್ಯಾಪಾರದಲ್ಲಿ ಸಿಗುವ ಲಾಭ ಎಷ್ಟು? ಅದು ನಿಮಗೆ ಮತ್ತು ನಿಮ್ಮ ಹತ್ತಿರದವರಿಗಷ್ಟೇ ಗೊತ್ತಿರಲು ಸಾಧ್ಯ.

ನಿಮ್ಮ ಮನೆ ಎಷ್ಟು ದೊಡ್ಡದು? ನಿಮ್ಮ ಕಾರಿನ ಬೆಲೆ ಎಷ್ಟಾಗುತ್ತದೆ? ನೀವು ಧರಿಸುವ ಬಟ್ಟೆಗಳು ಎಂಥವು? ನಿಮ್ಮ ಮೈ ಮೇಲಿರುವ ಬಂಗಾರದ ಒಡವೆಗಳ ಮೌಲ್ಯ ಎಷ್ಟು? ಅದನ್ನು ಯಾರು ಬೇಕಾದರೂ ಹೇಳಲು ಸಾಧ್ಯ.

ನಿಮಗೆ ಇಷ್ಟ ಇದೆಯೋ, ಇಲ್ಲವೋ, ಸಮಾಜ ಮಾತ್ರ ನೀವು ಮಾಡುವ ಖರ್ಚುಗಳ ಮೇಲೆ ನಿಮ್ಮನ್ನು ಅಳೆಯುತ್ತದೆ. ನಿಮಗೆ ಎಷ್ಟು ಪ್ರತಿಷ್ಠೆ ಕೊಡಬೇಕು ಎನ್ನುವುದು ಕೂಡ ಅದರ ಮೇಲೆ ನಿಗದಿಯಾಗಿರುತ್ತದೆ. ನೀವು ಸಮಾಜದಲ್ಲಿನ ಪ್ರತಿಷ್ಠೆಗೆ ಬೆಂಕಿ ಇಡೀ ಎನ್ನಬಹುದು. ಆದರೆ ನಿಮ್ಮ ತಂದೆ-ತಾಯಿ, ಹೆಂಡತಿ-ಮಕ್ಕಳು ಸಮಾಜದ ಒಂದು ಭಾಗ ಅಲ್ಲವೇ? ಅವರಿಗೆ ತಾವು ಏನು ಎಂದು ಯಾರಿಗೋ ತೋರಿಸಬೇಕಾಗಿರುತ್ತದೆ. ಅವರುಗಳು ತಮ್ಮ ಬಿಲ್ಲಿಗೆ ನಿಮ್ಮನ್ನೇ ಬಾಣವನ್ನಾಗಿಸುತ್ತಾರೆ. ಅದೇ ಕಾರಣಕ್ಕೆ ನಿಮ್ಮ ಮನೆಯಲ್ಲಿನ ಸಮಾರಂಭಗಳಿಗೆ ನೀವು ಕಡಿಮೆ ಖರ್ಚು ಮಾಡಲು ಸಾಧ್ಯವಿಲ್ಲ. ಅದೇ ಕಾರಣಕ್ಕೆ ನೀವು ದುಡಿಮೆ ಕೂಡ ಹೆಚ್ಚಿಗೆ ಮಾಡಿಕೊಳ್ಳಬೇಕಾಗುತ್ತದೆ.

ನಿಮಗೆ ಸರಳ ಜೀವನ ಇಷ್ಟ ಎಂದುಕೊಳ್ಳಿ. ಆದರೆ ನಿಮ್ಮ ಆತ್ಮೀಯ ಸ್ನೇಹಿತರು ಕೂಡ, ಒಂದಲ್ಲ ಒಂದು ಸಲ ನಿಮಗೆ ಖರ್ಚು ಹೆಚ್ಚಿಸಿಕೊಳ್ಳಲು ಸಲಹೆ ನೀಡಿಯೇ ಬಿಡುತ್ತಾರೆ. ಮನೆ ಕಟ್ಟಿಸುವುದು ಒಂದೇ ಸಲ, ಚೆನ್ನಾಗಿಯೇ ಕಟ್ಟಿಸಿಕೊಳ್ಳಿ ಎಂದು ಚೆನ್ನಾಗಿಯೇ ಖರ್ಚು ಮಾಡಿಸುತ್ತಾರೆ. ಆಮೇಲೆ ಎಷ್ಟು ದಿನ ಅಂತ ಬಸ್ ನಲ್ಲಿ, ಬೈಕ್ ನಲ್ಲಿ ಓಡಾಡುತ್ತಿರ? ಅದು ಕೂಡ ಯಾರು ಯಾರೋ ಕಾರು ತೆಗೆದುಕೊಳ್ಳುತ್ತಿರುವ ಕಾಲದಲ್ಲಿ? ಬೆಂಗಳೂರಿನಲ್ಲಿ ಟ್ರಾಫಿಕ್ ಜಾಸ್ತಿ, ಒಬ್ಬ ಡ್ರೈವರ್ ಇಟ್ಟುಕೊಂಡರೆ ಅನುಕೂಲ ಎನ್ನುವುದು ಅದರ ಮುಂದಿನ ಖರ್ಚು. ಅಷ್ಟೆಲ್ಲ ಆದ ಮೇಲೆ ಜೀವನಕ್ಕಿಂತ ದುಡ್ಡು ಮುಖ್ಯನಾ ಎನ್ನುವ ವಾದ ಬೇರೆ.

ನೀವು ಒಮ್ಮೆ ನಿಮ್ಮ ಆದಾಯಕ್ಕಿಂತ ಹೆಚ್ಚಿನ ಖರ್ಚುಗಳಿಗೆ ವಾಲಿದರೆ ಮುಗಿಯಿತು. ಊರಿನ ಜನರ ಹೆಸರಿನಲ್ಲಿ ನೀವು ದೊಡ್ಡ ಪಾರ್ಟಿ. ಆದರೆ ಸಾಲ ಯಾವಾಗ ತೀರುತ್ತದೋ ಎನ್ನುವ ನಿಮ್ಮ ಚಿಂತೆ ಅವರಿಗೆ ಕೇಳಲು ಇಷ್ಟವೇ ಇಲ್ಲ. ಈ ಜಂಜಾಟದಲ್ಲಿ ನಿಮಗೆ ದುಡ್ಡಿಗಿಂತ ನೆಮ್ಮದಿ ಮುಖ್ಯ ಎನ್ನಿಸಲು ಶುರು ಆಗುತ್ತದೆ. ನಿಮಗೆ ಈಗಾಗಲೇ ಆದಾಯ ತರುವ ಸಂತೋಷ, ಖರ್ಚು-ಸಾಲ ತರುವ ಸಂಕಟಗಳನ್ನು ಬೇಕಾದಷ್ಟು ಸಲ ಅನುಭವಿಸಿ ಆಗಿದೆ. ಕ್ರಮೇಣ ದುಡ್ಡಿಗಿಂತ ಜೀವನ ಮುಖ್ಯ ಅಲ್ಲವೇ ಎಂದು ನೀವು ಸ್ವಂತ ಅನುಭವದಿಂದಲೇ ಕಂಡುಕೊಳ್ಳುತ್ತೀರಿ. ಆಮೇಲೆ ನೀವು ಬಡವರಾಗಿದ್ದಾಗ ಎಷ್ಟು ನೆಮ್ಮದಿ ಇತ್ತು ಆದರೆ ಈಗ ಶ್ರೀಮಂತಿಕೆ ಬಂದರೂ ಅದು ಏಕಿಲ್ಲ ಎನ್ನುವ ವಿಚಾರ ಮೂಡಲು ಆರಂಭ ಆಗುತ್ತದೆ.

ದುಡ್ಡು ಬೇಕೆಂದರೆ ಅದು ಹೇಗೆ ಸಿಗುವುದಿಲ್ಲವೋ, ಹಾಗೆಯೆ ನೆಮ್ಮದಿ ಬೇಕೆಂದರೆ ಅದು ಸಿಗಲು ಸಾಧ್ಯವೇ ಇಲ್ಲ. ಯಾವುದೊ ವೃತ್ತಿಯಲ್ಲಿ ಪರಿಣಿತಿ ಸಾಧಿಸಿದ ಮೇಲೆ, ಸಾಕಷ್ಟು ಶ್ರಮ ಪಟ್ಟ ಮೇಲೆ ನಿಮಗೆ ದುಡ್ಡು ಬಂತು. ಆದರೆ ನೆಮ್ಮದಿ ಬೇಕೆಂದರೆ ಮಾಡಬೇಕಾದದ್ದು ಇನ್ನೂ ಕಷ್ಟದ ಕೆಲಸ. ಈಗ ನೀವು ನೆಮ್ಮದಿ ಹುಡುಕುವುದಕ್ಕಿಂತ, ನೆಮ್ಮದಿ ಹೇಗೆ ಕಳೆದು ಹೋಗುತ್ತದೆ ಮತ್ತು ಆ ವಿಷಯಗಳನ್ನು ನೀವು ಹೇಗೆ ದೂರ ಮಾಡಿಕೊಳ್ಳಬೇಕು ಎಂದು ಹುಡುಕಬೇಕು. ಪದೇ, ಪದೇ ಕೈ ಕೊಡುವ ಕಾರನ್ನು ಹೇಗೆ ಮಾರಿ ಕೈ ತೊಳೆದುಕೊಳ್ಳುತ್ತೇವೆಯೋ, ಹಾಗೆಯೆ ನಮ್ಮನ್ನು ಸಮಸ್ಯೆಗೆ ಈಡು ಮಾಡುವ ಸಂಗತಿಗಳನ್ನು ದೂರ ಮಾಡಿಕೊಳ್ಳುತ್ತ ಹೋಗಬೇಕು. ಇಷ್ಟ ಪಟ್ಟು ಕಟ್ಟಿಸಿದ ಮನೆ ಕೂಡ ಮಾರಿ ಬಿಡಬಹುದು. ಆದರೆ ಪದೇ ಪದೇ ಫೇಲ್ ಆಗುವ ಮಗನನ್ನು ಏನು ಮಾಡುವಿರಿ? ಮನುಷ್ಯ ಸಂಬಂಧದ ಸಮಸ್ಯೆಗಳಿಂದ ಪಾರಾಗುವುದು ಕಠಿಣ.

ದುಡ್ಡು ಗಳಿಸುವುದು-ಉಳಿಸಿಕೊಳ್ಳುವುದು ಹೇಗೆ ಕಠಿಣವೋ, ನೆಮ್ಮದಿ ಕೂಡ ಗಳಿಸುವುದಕ್ಕಿಂತ ಉಳಿಸಿಕೊಳ್ಳುವುದು ಹೆಚ್ಚು ಕಠಿಣ. ದುಡ್ಡಿನ ವಿಷಯದಲ್ಲಿ ಹೇಗೆ ಆದಾಯ-ಖರ್ಚುಗಳನ್ನು ಸರಿದೂಗಿಸಿಕೊಂಡು ಹೋಗಬೇಕೋ, ನೆಮ್ಮದಿಯಲ್ಲಿ ಕೂಡ ಖುಷಿ ತರುವ ವಿಷಯಗಳು, ಬೇಜಾರು ಮಾಡುವ ವಿಷಯಗಳನ್ನು ಸಮತೋಲನದಲ್ಲಿಡಬೇಕು. ನಿಮ್ಮ ಖರ್ಚು ಕಡಿಮೆ ಇದ್ದರೆ, ಕಡಿಮೆ ಆದಾಯದಲ್ಲಿ ಬದುಕಬಹುದಲ್ಲವೇ? ಅದು ದುಡ್ಡು ಆಗಿರಲಿ, ನೆಮ್ಮದಿಯೇ ಆಗಿರಲಿ. ಕಡಿಮೆ ಸಂತೋಷ ಬಯಸಿದರೆ, ದುಃಖ ಕೊಡುವ ಸಂಗತಿಗಳು ಕೂಡ ತಾನಾಗಿಯೇ ಕಡಿಮೆ ಆಗುತ್ತವೆ. ಖರ್ಚು ಕಡಿಮೆ ಮಾಡಲು ಸಾಧ್ಯ ಇಲ್ಲ ಎಂದರೆ, ಅವುಗಳು ಹತೋಟಿಯಲ್ಲಾದರೂ ಇರಬೇಕು. ಅಂದ ಹಾಗೆ ಇದನ್ನು ನಾನು ಪುಸ್ತಕ ಓದಿ ಕಲಿತದದ್ದಲ್ಲ.

ನೀವು ಕಡು ಬಡತನದಲ್ಲಿದ್ದರೆ ನಿಮಗಿರುವುದು ಆದಾಯದ ಸಮಸ್ಯೆ. ಊಟ-ಬಟ್ಟೆಗೆ ತೊಂದರೆಯಿಲ್ಲ ಆದರೆ ದುಡ್ಡು ಸಾಕಾಗುತ್ತಿಲ್ಲ ಎಂದರೆ ಅದು ಖರ್ಚಿನ ಸಮಸ್ಯೆ. ಹಣಕಾಸಿನ ತೊಂದರೆ ಇಲ್ಲ ಆದರೆ ನೆಮ್ಮದಿ ಇಲ್ಲ ಎಂದರೆ ನೀವು ಜೀವನದಲ್ಲಿ ನಿರೀಕ್ಷೆಗಳನ್ನು ಕಡಿಮೆ ಮಾಡಿಕೊಳ್ಳುವ ಅವಶ್ಯಕತೆ ಇದೆ. ನಿಮ್ಮಲ್ಲಿ ದುಡ್ಡು-ನೆಮ್ಮದಿ ಎರಡು ಇದ್ದು ಇನ್ನೂ ಫೇಸ್ ಬುಕ್ ನಲ್ಲಿ ಉಳಿದುಕೊಂಡಿದ್ದರೆ ನಿಮಗೆ ಪ್ರಣಾಮಗಳು.

Sunday, August 27, 2023

ಗುಡ್ಡದ ಮೇಲೆ ಗುಡಿ ಕಟ್ಟಿದ ಮನುಷ್ಯನೇ ಮೆಟ್ಟಿಲು ಕಟ್ಟಿದ

ಹಲವಾರು ಶತಮಾನಗಳಿಂದ ಬೆಟ್ಟದ ಮೇಲೆ ವಿರಾಜಮಾನನಾಗಿರುವ ಶ್ರೀ ಮಲ್ಲಿಕಾರ್ಜುನ ನನ್ನ ಇಷ್ಟ ದೈವ. ಚಿಕ್ಕಂದಿನಿಂದ ಶ್ರಾವಣದಲ್ಲಿ ಬೆಟ್ಟ ಹತ್ತಿ ಆತನ ದರ್ಶನ ಮಾಡುವ ಅಭ್ಯಾಸ ಇನ್ನು ಬಿಟ್ಟು ಹೋಗಿಲ್ಲ. ಬೆಟ್ಟ ಹತ್ತಿದ ಪ್ರತಿ ಬಾರಿಯೂ ಹೊಸ ವಿಚಾರಗಳು ಮೂಡುತ್ತವೆ. ಅದು ಈ ಬಾರಿಯೂ ಕೂಡ ಆಯಿತು.


ದೇವರು ಮನುಷ್ಯನನ್ನು ಹುಟ್ಟಿಸಿದು ಎಂದು ನಾವೆಲ್ಲ ಅಂದುಕೊಂಡರೆ, ಮನುಷ್ಯನೇ ದೇವರನ್ನು ಹುಟ್ಟಿ ಹಾಕಿದ್ದು ಎಂದು ಸೂಚಿಸುತ್ತದೆ ಡಾರ್ವಿನ್ ವಿಕಾಸವಾದ ಸಿದ್ಧಾಂತ. ಅವೆರಡನ್ನು ಒಟ್ಟು ಮಾಡಿ, ಒಂದು ಕಲ್ಲಿಗೆ ಬಹು ಕಾಲ ಭಕ್ತಿಯಿಂದ ಪೂಜಿಸಿದರೆ, ಅದರಲ್ಲಿ ವಿಶೇಷ ಶಕ್ತಿ ತುಂಬಿ ದೈವ ಕಳೆ ಬರುತ್ತದೆ ಎನ್ನುವ ವಿವರಣೆ ಕೂಡ 'Sapiens ' ಅನ್ನುವ ಪುಸ್ತಕದಲ್ಲಿದೆ. ಮೂರ್ತಿ ಪೂಜೆಯನ್ನು ವಿರೋಧಿಸಿದ ಬುದ್ಧ. ನಶ್ವರವನ್ನೇ ಶಿವನೆಂದರು ನಮ್ಮ ವಚನಕಾರರು.


ಆದರೆ ಅವೆಲ್ಲವನ್ನು ಬದಿಗಿಟ್ಟು ವಿಚಾರ ಮಾಡಿದಾಗ ನನಗೆ ಅನ್ನಿಸಿದ್ದು ಇಷ್ಟು. ಆದಿ ಮಾನವ ಬೆಟ್ಟ ಗುಡ್ಡಗಳಲ್ಲಿ ವಾಸ ಮಾಡುತ್ತಿದ್ದ. ಆಗ ಅವನು ಪೂಜಿಸುತ್ತಿದ್ದ ದೈವಗಳು ಕೂಡ ಬೆಟ್ಟದೆ ಮೇಲೆಯೇ ಇದ್ದವು. ಮುಂದೆ ಆ ಮಾನವ ಬೆಟ್ಟ ಇಳಿದು ಬಯಲಿಗೆ ಬಂದು, ವ್ಯವಸಾಯ ಕಲಿತು ನಾಗರಿಕನಾದ. ಆದರೆ ಬೆಟ್ಟದ ದೈವವನ್ನು ಮರೆಯಲಿಲ್ಲ. ತನ್ನ ನಾಗರಿಕತೆಗೆ ತಕ್ಕಂತೆ ತಾನು ಪೂಜಿಸುತ್ತಿದ್ದ ಜಾಗವನ್ನು ಗುಡಿಯಾಗಿ ಮಾರ್ಪಡಿಸಿದ. ತನಗೆ ಬೆಟ್ಟ ಹತ್ತಿ, ಇಳಿಯಲು ಅನುಕೂಲವಾಗಲೆಂದು ಮೆಟ್ಟಿಲು ನಿರ್ಮಿಸಿದ. ಶತಮಾನಗಳು ಕಳೆದರು ಆ ದೇವಸ್ಥಾನಗಳ ಮೇಲಿನ ಅವನ ಭಕ್ತಿ ಕಡಿಮೆ ಆಗಲಿಲ್ಲ. ಮನುಷ್ಯ ಸಮಾಜದ ಏಳಿಗೆ ಬಯಸುವ ವ್ಯಕ್ತಿಗಳು ಎಲ್ಲ ಕಾಲಕ್ಕೂ ಇರುತ್ತಾರಲ್ಲ. ಅವರು ಸಮಾಜ ಒಟ್ಟಿಗೆ ಕೂಡಲಿ ಎನ್ನುವ ಉದ್ದೇಶದಿಂದ, ಬೆಟ್ಟದ ಮೇಲಿನ ದೈವದ ಹೆಸರಿನಲ್ಲಿ ಜಾತ್ರೆ, ಪೂಜೆಗಳನ್ನು ಏರ್ಪಾಡು ಮಾಡಿದರು. ಹೀಗೆ ದೈವ ಸಮಾಜದ ಒಗ್ಗಟ್ಟಿಗೆ ಮುಖ್ಯ ಕಾರಣವಾಯ್ತು.


ಅಷ್ಟೇ ಅಲ್ಲ. ಬೆಟ್ಟ ಹತ್ತಿದ ದಣಿವು ಮನುಷ್ಯನ ಅರೋಗ್ಯ ಸುಧಾರಿಸುತ್ತಿತ್ತು. ಬೆಟ್ಟದ ಮೇಲಿನಿಂದ ನೋಡಿದರೆ, ಮನುಷ್ಯನಿಗೆ ತನ್ನ ಮನೆ ಎಷ್ಟು ಚಿಕ್ಕದು ಕಾಣುತ್ತಲ್ಲವೇ? ಹಾಗೆಯೆ ಆ ಮನೆಯಲ್ಲಿನ ಸಮಸ್ಯೆಗಳು ಕೂಡ ಇನ್ನು ಚಿಕ್ಕವು ಎನ್ನುವ ಅರಿವು ಅವನಿಗೆ ಬೆಟ್ಟದ ಮೇಲೆ ಮೂಡಲು ಸಾಧ್ಯ. ಮನೆಯಲ್ಲಿ ಕುಳಿತಾಗ ಬೆಟ್ಟದಂತಹ ಸಮಸ್ಯೆ ಅನಿಸಿದ್ದು, ಬೆಟ್ಟ ಹತ್ತಿ ನಿಂತಾಗ ಬದಲಾಗಲು ಸಾಧ್ಯ ಇದೆ. ಹಾಗೆಯೆ ಬೆಟ್ಟದ ವಾತಾವರಣ ಕೂಡ ಬೇರೆಯೇ. ಬಯಲಲ್ಲಿ ಬೆಳೆಯದ ಗಿಡ, ಮರಗಳು,  ಬಯಲಲ್ಲಿ ಕಾಣದ ಪ್ರಾಣಿ, ಪಕ್ಷಿಗಳು ಅಲ್ಲಿ ಕಾಣುತ್ತವೆ. ಮೆಟ್ಟಿಲ ಮೇಲೆ ಮೆಲ್ಲಗೆ ಸಾಗುವ ಝರಿಗಳು, ಪಕ್ಕದ ಗುಡ್ಡದಿಂದ ಕೇಳಿಸುವ ನವಿಲಿನ ಕೇಕೆ, ಬಯಲಿಗಿಂತ ಬೆಟ್ಟವನ್ನು ಇಷ್ಟ ಪಡುವ ಮಂಗಗಳು, ಕಲ್ಲಿನಡಿ ಮಲಗಿರಬಹುದಾದ ಸರಿಸೃಪಗಳು ಮನುಷ್ಯನನ್ನು ಸ್ವಲ್ಪ ಕಾಲಕ್ಕಾದರೂ ಬೇರೆಯ ಲಹರಿಯಲ್ಲಿ ಇರುವಂತೆ ಮಾಡುತ್ತವೆ.


ಬೆಟ್ಟ ಇಳಿದು, ಹೊಟ್ಟೆ ಹಸಿವು ಇಂಗಿಸಲು ಹತ್ತಿರದ ಹೋಟೆಲಿಗೆ ತೆರಳಿದೆ. ಆದರೆ ನನ್ನ ವಿಚಾರ ಸರಣಿ ಮತ್ತೆ ಮುಂದುವರೆಯಿತು.


ಕಾಲಕ್ಕೆ ತಕ್ಕಂತೆ ಮಾರ್ಪಾಡು ಆದರೂ, ಆದಿ ಮಾನವನಲ್ಲಿ ಅಡಗಿದ್ದ ಜೀನ್ ಗಳು ನಮ್ಮ ಪೀಳಿಗೆಗಳಿಗೆ ಸಾಗಿ ಬಂದು, ನಮ್ಮನ್ನು ಸ್ವಾರ್ಥಿಗಳಾಗಿ, ಜೀವನ ಸಂಗಾತಿ ಹುಡುಕಿ ವಂಶ ಮುಂದುವರೆಯುವಂತೆ ಪ್ರಚೋದಿಸುವುದರ ಜೊತೆಗೆ, ತಾವು ಬದುಕ್ಕಿದ್ದ ಕಾಲ ಘಟ್ಟವನ್ನು ಮರೆಯದೆ, ಮೂಲಗಳನ್ನು ಹುಡುಕಿ ಕೊಂಡು ಹೋಗುವ ಪ್ರಚೋದನೆಗಳನ್ನು ಕೂಡ ಮಾಡುತ್ತದೆ.


ನನ್ನ ತಲೆಯಲ್ಲಿರುವುದು ಪುಸ್ತಕದ ಬದನೇಕಾಯಿ ಗಿಡವೋ ಎನ್ನುವ ಸಂಶಯ ಮೂಡಿ, ಚಹಾ ಹೀರುತ್ತಾ ಸುತ್ತಲಿನ ಜನರನ್ನು ಗಮನಿಸತೊಡಗಿದೆ.


ಚಿಕ್ಕಂದಿನಲ್ಲಿ ಶಾಲೆ ಓದುತ್ತಿರುವಾಗ ಬಡ ಸ್ನೇಹಿತರನ್ನು ತನ್ನ ಮನೆಗೆ ಊಟಕ್ಕೆ (ವಾರಾನ್ನ) ಕರೆದುಕೊಂಡು ಹೋಗುತ್ತಿದ್ದ ಸ್ನೇಹಿತ ಕಣ್ಣಿಗೆ ಬಿದ್ದ. ಈಗ ಅವನು ತನ್ನ ಅಂಗಡಿಯ ಮುಂದೆ ಗೋವಿನ ಪೂಜೆ ಮಾಡುತ್ತಿದ್ದ ಅದಕ್ಕೆ ಹಣ್ಣು ತಿನ್ನಿಸುತ್ತಿದ್ದ. ಚಿಕ್ಕಂದಿನ ಅವನ ನಡುವಳಿಕೆ ನಲವತ್ತು ವರುಷ ಕಳೆದರು ಬದಲಾಗಿರಲಿಲ್ಲ. ಅದಕ್ಕೆ ಕಾರಣ ಅವನಲ್ಲಿನ ಜೀನ್ ಗಳು ಎಂದಾದರೆ, ಬೆಟ್ಟದ ದೈವದ ಆಕರ್ಷಣೆ ಕೂಡ ನಮ್ಮ ಪೂರ್ವಜರ ಬಳುವಳಿ ಏಕಾಗಿರಬಾರದು?


ಸಾವಿರಾರು ವರುಷ ಹಿಂದೆ ಬದುಕಿದ್ದ ನಮ್ಮ ಹಿರಿಯರು, ತಮ್ಮ ಬೆಟ್ಟದ ದೈವದ ನಂಬಿಕೆಯನ್ನು ಕೂಡ ನಮಗೆ ವರ್ಗಾಯಿಸುತ್ತ ಹೋದರು. ಕೆಲ ಪೀಳಿಗೆಯವರು ಸುಸಜ್ಜಿತ ಗುಡಿ ಕಟ್ಟಿದರೆ, ಇನ್ನು ಕೆಲವರು ಮೆಟ್ಟಿಲು ಕಟ್ಟಿದರು. ಇಂದಿನ ಪೀಳಿಗೆಯವರು ಆ ಮೆಟ್ಟಿಲುಗಳಿಗೆ ಸುಣ್ಣ ಬಳಿದು ಅಂದ ಹೆಚ್ಚಿಸಿದರು. ನಾನು ತಪ್ಪದೆ ಪ್ರತಿ ವರುಷ ದರ್ಶನಕ್ಕೆ ಬರುತ್ತೇನೆ.   


ಪುರಾವೆ ಕೇಳುವ ವಿಜ್ಞಾನದಲ್ಲಿ ಮುಂದೆ ಒಂದು ದಿನ ಇವೆಲ್ಲವುಗಳಿಗೆ ಸಮರ್ಪಕ ವಿವರಣೆ ಸಿಗಬಹುದು. ನನಗೆ ದೇವರ ಮುಂದೆ ತಲೆ ಬಾಗಿಸುವುದನ್ನು ಕಲಿಸಿದ ಅಜ್ಜಿಯ ಭಕ್ತಿ ನನಗೆ ಅಂಧಾನುಕರಣೆ ಅನಿಸುವುದಿಲ್ಲ. ಇವತ್ತಿಗೆ ನನ್ನ ಅಜ್ಜಿ ಇಲ್ಲ. ಮುಂದೆ ಒಂದು ದಿನ ನಾನೂ ಇರುವುದಿಲ್ಲ. ಆದರೆ ಬೆಟ್ಟದ ದೈವ ಇರುತ್ತದೆ. ಹಾಗೆಯೆ ಶ್ರೀ ಮಲ್ಲಿಕಾರ್ಜುನನ ಭಕ್ತರು  ಯಾವತ್ತಿಗೂ ಇರುತ್ತಾರೆ.



Sunday, August 20, 2023

ಬಯಲು ಗಣೇಶ, ಸರ್ಕಲ್ ಮಾರಮ್ಮ

ಬೆಂಗಳೂರು ವೈವಿಧ್ಯತೆ ತುಂಬಿದ ಊರು. ಅದು ಸಾಧ್ಯವಾಗಿದ್ದು ಅಲ್ಲಿನ ವಲಸಿಗರಿಂದ. ಬರೀ ಬೀದರ್ ನಿಂದ ಚಾಮರಾಜನಗರ ವರೆಗಿನ ಜನ ಇಲ್ಲಿ ಬಂದು ನೆಲೆಗೊಂಡಿದ್ದಾರೆ ಎಂದುಕೊಳ್ಳಬೇಡಿ. ಕಾಶ್ಮೀರ್ ದಿಂದ ಕನ್ಯಾಕುಮಾರಿ ವರೆಗಿನ ಜನ ಇಲ್ಲಿ ತಮ್ಮ ಮನೆ ಕಟ್ಟಿದ್ದಾರೆ ಎನ್ನುವುದು ಸೂಕ್ತ. ಇಲ್ಲಿರುವ MNC ಕಂಪನಿ ಗಳನ್ನು ನಿರ್ವಹಣೆ ಮಾಡಲಿಕ್ಕೆ ವಿದೇಶಿಯರು ಕೂಡ ಇಲ್ಲಿ ನೆಲೆ ಕಂಡುಕೊಂಡಿರುವುದು ನೀವು ಗಮನಿಸಬಹುದು. ವಿವಿಧ ದೇಶ, ಭಾಷೆ, ಸಂಸ್ಕೃತಿಯ ಜನರು ಒಟ್ಟಿಗೆ ಬದುಕಿದಾಗ ಅಲ್ಲಿಯ ಜನರ ಬದುಕು ಕೂಡ ವೈವಿಧ್ಯವಾಗುತ್ತ ಹೋಗುತ್ತದೆ.

ಜನ ಬಂದ ಮೇಲೆ ಅವರ ದೇವರುಗಳು ಬೆಂಗಳೂರಿಗೆ ಬರದೇ ಇರುತ್ತಾರೆಯೇ? ಶಿವ, ವಿಷ್ಣು, ಪಾರ್ವತೀ, ಲಕ್ಷ್ಮಿ, ಗಣೇಶ, ಆಂಜನೇಯ, ಪೈಗಂಬರ್, ಜೀಸಸ್, ಗುರು ನಾನಕ್ ಹೀಗೆ ಎಲ್ಲ ಧರ್ಮದ ದೇವರುಗಳು ಕೂಡ ಇಲ್ಲಿ ಪ್ರತಿಷ್ಠಾಪಿತರಾಗಿದ್ದರೆ. ಅದರಲ್ಲೂ ದೇವಿಯ ಹಲವು ರೂಪಗಳು - ಬನಶಂಕರಿ, ರಾಜ ರಾಜೇಶ್ವರಿ, ಮೀನಾಕ್ಷಿ ಎಲ್ಲರ ಹೆಸರಲ್ಲೂ ದೊಡ್ಡ ದೊಡ್ಡ ದೇವಾಲಯಗಳು ಇವೆ. ಹಾಗೆಯೆ ಬೆಂಗಳೂರಿನ ನಾಡ ದೇವಿಯಾದ ಅಣ್ಣಮ್ಮ ದೇವಿಯು ಕೂಡ ಭಕ್ತಿಯಿಂದ ಪೂಜಿಸಲ್ಪಡುತ್ತಾಳೆ.

ನಿಮಗೆ ತಿರುಪತಿಗೆ ಹೋಗುವುದು ದೂರ ಎನಿಸಿದರೆ, ಶ್ರೀನಿವಾಸನ ದರ್ಶನವನ್ನು, ಬೆಂಗಳೂರಿನ ಹೊರವಲಯದಲ್ಲಿರುವ ರಾಮೋಹಳ್ಳಿಯ ಅದೇ ಶೈಲಿಯಲ್ಲಿರುವ ದೇವಸ್ಥಾನದಲ್ಲಿ ಮಾಡಬಹುದು. ರಾಘವೇಂದ್ರರ ದರ್ಶನಕ್ಕೆ ನೀವು ಮಂತ್ರಾಲಯಕ್ಕೆ ಹೋಗಬೇಕಿಲ್ಲ. ಮಾಗಡಿ ರಸ್ತೆಯಲ್ಲಿರುವ ಕಾಮಧೇನು ಕ್ಷೇತ್ರಕ್ಕೆ ಹೋಗಬಹುದು. ಸರ್ಪದೋಷ ನಿವಾರಣೆ ಪೂಜೆಗೆ ಕುಕ್ಕೆಗೆ ಹೋಗಬೇಕೆಂದಿಲ್ಲ. ಬದಲಾಗಿ ಮುಕ್ತಿನಾಗ ದೇವಸ್ಥಾನಕ್ಕೆ ಹೋಗಬಹುದು. ದೂರದ ದೇವಸ್ಥಾನಗಳಿಗೆ ಹೋಗುವ ಬದಲು ಹೆಚ್ಚು-ಕಡಿಮೆ ಅದೇ ಅನುಭವ ನಿಮಗೆ ಬೆಂಗಳೂರಲ್ಲೇ ಲಭ್ಯ. ಹಾಗೆಯೆ ಯೋಗ ಸಾಧನೆಗೆ ಸದ್ಗುರು, ಶ್ರೀ ರವಿಶಂಕರ್, ಪತ್ರೀಜಿಯವರ ಪಿರಮಿಡ್ ಎಲ್ಲವೂ ಬೆಂಗಳೂರಿಂದ ಒಂದೆರಡು ಘಂಟೆಗಳಲ್ಲಿ ತಲುಪಲು ಸಾಧ್ಯ.

ಆದರೆ ಬೆಂಗಳೂರಿನ ಗುಡಿಗಳ ವೈಶಿಷ್ಟ್ಯ ಏನೆಂದರೆ, ದೇವ-ದೇವಿಯರ ದೇವಸ್ಥಾನಗಳು ಬರೀ ಅವರ ಶಕ್ತಿನಾಮಗಳನ್ನು ಒಳಗೊಳ್ಳದೆ ಅವು ಯಾವ ಸ್ಥಳಗಳಲ್ಲಿವೆ ಅದರ ಗುರುತು ಆ ದೇವಸ್ಥಾನದ ಹೆಸರಿನೊಂದಿಗೆ ಸೇರಿಕೊಂಡಿವೆ. ಉದಾಹರಣೆಗೆ, ಬಯಲು ಗಣೇಶ, ಸರ್ಕಲ್ ಮಾರಮ್ಮ, ಕಣಿವೆ ಆಂಜನೇಯ. ಊರು ಮತ್ತು ಹೊರ ವಲಯ ಬೆಳೆದಂತೆಲ್ಲ  ದೇವಸ್ಥಾನಗಳು ಕೂಡ ಅವುಗಳಿಗೆ ಹೊಂದಿಕೊಂಡು ಈ ಊರಿನ ವಿಶೇಷ ಗುರುತುಗಳಾಗಿವೆ.




ಬಲ್ಲವರಿಗಷ್ಟೇ ಗೊತ್ತು ಕಸ್ತೂರಿ ಪರಿಮಳ

ಬೆಟ್ಟ ಹತ್ತುವ, ಪ್ರಾಕೃತಿಕ ಸೌಂದರ್ಯ ತುಂಬಿದ ನಿರ್ಜನ ಪ್ರದೇಶಗಳನ್ನು ನೋಡುವ ಆನಂದ ಚಾರಣರಿಗಷ್ಟೇ ಗೊತ್ತು. ಅದನ್ನು ಸೆರೆ ಹಿಡಿಯಬಯಸುವವರ ಕತ್ತಲ್ಲಿ ಯಾವಾಗಲು ನೇತಾಡುತಿರುತ್ತದೆ ಕ್ಯಾಮೆರಾ. ಇನ್ನೂ ಕೆಲವರು ತಿಂಡಿಪೋತರು. ತಾವು ಹೋದ ಎಲ್ಲ ಊರುಗಳಲ್ಲಿ ಅಲ್ಲಿಯ ವಿಶಿಷ್ಟ ತಿಂಡಿ ಸವಿಯುವದಲ್ಲದೆ, ತಮಗಿಷ್ಟವಾದ ತಿಂಡಿ ಆ ಊರಿನಲ್ಲಿ ಹೇಗೆ ಮಾಡುತ್ತಾರೆ ಎಂದು ತಿಂದು ನೋಡುವ ಚಪಲ. 'ಅದೇ ಮಸಾಲೆ ದೋಸೆ ಮಾರಾಯ' ಎಂದು ನೀವು ಅವರಿಗೆ ಹೇಳಿದರೆ, 'ಇಲ್ಲಿ ಉಪ್ಪುಕಡಿಮೆ, ಖಾರ ಜಾಸ್ತಿ, ಸಾಂಬಾರ ನಲ್ಲಿ ಅದು ಏನೋ ವಿಶಿಷ್ಟತೆ ಇದೆ' ಎಂದೆಲ್ಲ ಹೇಳಿ ನಮ್ಮ ಬಾಯಿ ಮುಚ್ಚಿಸುತ್ತಾರೆ. ಹೌದಲ್ಲವೇ, ಅವರ ಆನಂದ ಬೇರೆಯವರಿಗೆಲ್ಲಿ ತಿಳಿಯಲು ಸಾಧ್ಯ? ಕೆಲವರಿಗೆ ರಾಜಕೀಯದ ಹುಚ್ಚು. ಇನ್ನೂ ಕೆಲವರಿಗೆ ದೇಶ ಸುತ್ತಿ ಬರುವ ಹವ್ಯಾಸ. 

ನಿಮ್ಮ ಸುತ್ತ ಮುತ್ತಲಿರುವ ಎಲ್ಲರನ್ನು ಗಮನಿಸಿ ನೋಡಿ. ಕೆಲವರು ಸುಮ್ಮನೆ ಕುಳಿತು ಹರಟೆ ಹೊಡೆದರೆ, ಕೆಲವರು ಇನ್ನೊಬ್ಬರ ಸಂಸಾರದಲ್ಲಿ ಮೂಗು ತೋರಿಸುತ್ತಾರೆ. ಕೆಲವರಿಗೆ ಹಣ ಗಳಿಸುವದೇ ಆನಂದ. ಕೆಲವರು ಪ್ರಾಣಿ, ಪಕ್ಷಿ ಸಾಕಿ ಆ ಜಗತ್ತಿನಲ್ಲೇ ಮುಳುಗಿ ಹೋಗಿರುತ್ತಾರೆ. ಕೆಲವರು ಭಕ್ತಿ ಪ್ರಿಯರು. ದೇವಸ್ಥಾನ ಸುತ್ತುವ, ಪ್ರಸಾದ ಹಂಚುವ ಕಾಯಕ ಅವರಿಗೆ ತುಂಬಾ ಇಷ್ಟ. ಹೀಗೆ ಪ್ರತಿಯೊಬ್ಬರಿಗೂ ಆನಂದ ಕೊಡುವ ಹವ್ಯಾಸ (ಅಥವಾ ದುರಭ್ಯಾಸಗಳು) ಇದ್ದೇ ಇರುತ್ತವೆ. ಅದು ಬೇರೆಯವರಿಗೆ  ಅರ್ಥವಾಗದೆ ಹೋಗಬಹುದು. ಬಲ್ಲವರಿಗಷ್ಟೇ ಗೊತ್ತು ಅದರ ಮರ್ಮ.

ನನಗಿರುವುದು ಪುಸ್ತಕಗಳ ಗೀಳು. 'ಈಗಿನ ಕಾಲದಲ್ಲಿ ಯಾರು ಪುಸ್ತಕ ಓದುತ್ತಾರೆ?' ಎನ್ನುವುದು ಸಾಕಷ್ಟು ಜನರ ಉದ್ಗಾರ. ಪುಸ್ತಕ ಓದುವ ಆನಂದ ಅವರೇನು ಬಲ್ಲರು?  ಮತ್ತು ಬೇರೆಯವರ ವಿಚಾರಗಳಿಗೆ ನಾವೇಕೆ ಆನಂದ ಕಳೆದುಕೊಳ್ಳಬೇಕು? ಚಿಕ್ಕಂದಿನಲ್ಲಿ ಓದಿದ ಅಮರ ಚಿತ್ರ ಕಥೆ ಪುಸ್ತಕಗಳು, ಪ್ರತಿ ವಾರ ಓದುತ್ತಿದ್ದ ಸುಧಾ, ತರಂಗ ವಾರಪತ್ರಿಕೆಗಳು, ಸುಮ್ಮನೆ ಕುತೂಹಲಕ್ಕೆಂದು ಅಕ್ಕ ಓದುತ್ತಿದ್ದ ಕಾದಂಬರಿಯ ಕೆಲವು ಪುಟಗಳು ಇವುಗಳನ್ನು ಬಿಟ್ಟರೆ ಪೂರ್ಣ ಪ್ರಮಾಣದ ಪುಸ್ತಕ ಓದಿದ್ದು ಏಳನೆಯ ತರಗತಿ ಮುಗಿದ ಮೇಲೆ ಬಂದ ಬೇಸಿಗೆ ರಜೆಯಲ್ಲಿ. ಅದು ತೇಜಸ್ವಿ ಅವರು ಬರೆದ ಕಿರು ಕಾದಂಬರಿ 'ಕರ್ವಾಲೋ'. ಅಲ್ಲಿಂದ ಆರಂಭ ನನ್ನ ಮತ್ತು ಪುಸ್ತಕಗಳ ಗೆಳೆತನ.

ಯಂಡಮೂರಿಯವರ ಸರಳತೆ, ಚಿತ್ತಾಲರ ಗಂಭೀರತೆ, ಕುವೆಂಪುರವರ ಪ್ರಕೃತಿ ಪ್ರೀತಿ, ತೇಜಸ್ವಿಯವರ ಕ್ರಿಯಾಶೀಲತೆ, ಭೈರಪ್ಪ-ಅನಂತ ಮೂರ್ತಿಯವರ ಕಾದಂಬರಿಗಳಲ್ಲಿನ   ವೈಚಾರಿಕತೆ, ಕಾರಂತರ ಜೀವನ ಪ್ರೀತಿ ಇವುಗಳನ್ನು ಸವಿದು ಮುಂದೆ ಇಂಗ್ಲಿಷ್ ಪುಸ್ತಕಗಳಿಗೆ ಜಿಗಿದಿದ್ದಾಯಿತು, ಟಾಗೋರ್ ಅವರ ಸಣ್ಣ ಕಥೆಗಳು, ಟಾಲ್ಸ್ಟಾಯ್ ಅವರ ಕಾದಂಬರಿಗಳು ನನ್ನ ಜೀವನ ಅನುಭವವನ್ನು ವಿಸ್ತಾರಗೊಳಿಸಿದವು. ನಾನಾ ದೇಶದ ಲೇಖಕರ ಪುಸ್ತಕಗಳು ಮುರಕಮಿ (ಜಪಾನ್), ಮಾರ್ಕ್ಯೂಜ್ (ಕೊಲಂಬಿಯಾ), ಹೆಮಿಂಗ್ವೇ (ಅಮೇರಿಕ), ಹರ್ಮನ್ ಹೆಸ್ಸೆ (ಜರ್ಮನಿ), ಬೆನ್ ಒಕ್ರಿ (ಆಫ್ರಿಕಾ) ಹೀಗೆ ವಿವಿಧತೆ ತುಂಬಿದ ಪುಸ್ತಗಳು ಕೈ ಸೇರತೊಡಗಿದವು.

ಎಲ್ಲಿ ಹೋದಲ್ಲಿ ಪುಸ್ತಕಗಳು ನನ್ನ ಜೊತೆಗೆ. ಆಫೀಸ್ ಗೆ ಹೋಗುವಾಗ ಬರುವಾಗ ಬಸ್ ನಲ್ಲಿ ಕುಳಿಕೊಂಡಾಗ ಸಿಗುವ ಸಮಯ ಪುಸ್ತಕಗಳಿಗೆ ಮೀಸಲಾಯಿತು. ಆಗ ನೆಹರು ಅವರು ಬರೆದ 'Glimpses of World History' ಎನ್ನುವ ಪುಸ್ತಕ ಓದಲು ಕೆಲವು ತಿಂಗಳುಗಳು ತೆಗೆದುಕೊಂಡಿದ್ದೆ. ಊರಿಗೆ ಹೊರಟರೆ ನನ್ನ ಬ್ಯಾಗ್ ನಲ್ಲಿ ಒಂದಲ್ಲ ಒಂದು ಪುಸ್ತಕ ಇದ್ದೇ ಇರುತ್ತಿತ್ತು. ಹಾಗೆಯೆ ಕಾರಲ್ಲಿ ಹೊರಟರೆ ಕನಿಷ್ಠ ಮೂರ್ನಾಲ್ಕು ಪುಸ್ತಕಗಳು ಜೊತೆಯಾಗುತ್ತಿದ್ದವು. ಅಲ್ಲದೆ Kindle ಬಂದಾಗಿನಿಂದ ಅದರಲ್ಲೂ ನೂರಾರು ಪುಸ್ತಕಗಳು.

ಪುಸ್ತಕ ಓದುವ ಹವ್ಯಾಸ ನನಗೆ ಸಾಕಷ್ಟು ಹೊಸ ಗೆಳೆಯರನ್ನು ಹುಡುಕಿ ಕೊಟ್ಟಿತು. ಆದರೆ ಹಳೆಯ ಗೆಳೆಯರು ನನ್ನ ಈ ಹವ್ಯಾಸ ನೋಡಿ ಕೆಲವರು ಆಶ್ಚರ್ಯ ಪಟ್ಟರೆ, ಕೆಲವರು ಕನಿಕರ ತೋರಿಸಿದರು. ಒಬ್ಬ ಸ್ನೇಹಿತ ಮುಖಕ್ಕೆ ಹೊಡೆದಂತೆ ಹೇಳಿಯೇ ಬಿಟ್ಟ. "ನಾನು ಶಾಲೆ ಓದುವುದು ಮುಗಿದಾಗಿಂದ ಯಾವುದೇ ಪುಸ್ತಕ ಓದಿಲ್ಲ. ನೀನು ಓದುತ್ತಿ ಎಂದರೆ ನಿನಗೆ ಯಾವುದೊ ದುಃಖ ಕಾಡುತ್ತಿದೆ" ಎಂದು ಸಂಶಯದಿಂದ ನನ್ನ ಮೇಲೆ ಕನಿಕರ ತೋರಿಸಿದ. ಅವನಿಗೆ ಹೇಳಿದೆ "ನಾನು ಪಿಚ್ಚರು ನೋಡುತ್ತೇನೆ, ಊರು ಸುತ್ತುತ್ತೇನೆ. ಆದರೆ ಪುಸ್ತಕ ಓದುವ ಆನಂದ ಅದಕ್ಕಿಂತ ಹೆಚ್ಚಿನದು". ಅವನು ಬೇರೆ ಏನು ಹೇಳಲಿಲ್ಲ ನಿನ್ನ ಸಮಸ್ಯೆ ನಿನಗೆ ಎನ್ನುವಂತೆ. ಬಲ್ಲವರೇ ಬಲ್ಲರು ಎನ್ನುವುದು ಅವನಿಗೂ ಗೊತ್ತು ಎನ್ನುವಂತೆ ನಾನು ಕೂಡ ಸುಮ್ಮನಾದೆ.

ಕಳೆದ ವಾರ ಬೆಂಗಳೂರಿನ ವಿಜಯನಗರದಲ್ಲಿನ ಕನ್ನಡ ಪುಸ್ತಕ ಮಾರುವ ಅಂಗಡಿಗೆ ಹೋಗಿದ್ದೆ. ಯಥಾ ಪ್ರಕಾರ ಹತ್ತು-ಹನ್ನೆರಡು ಪುಸ್ತಕಗಳನ್ನು ತೆಗೆದುಕೊಂಡೆ. ವಸುಧೇಂದ್ರ, ಜೋಗಿ, ಕಾರಂತ ಮತ್ತು ಹೊಸ ಲೇಖಕರ ಪುಸ್ತಕಗಳ ಜೊತೆಗೆ ಕನಕದಾಸರ ಕೀರ್ತನೆಗಳು ನನ್ನ ಮಡಿಲು ಸೇರಿದವು. ಅವುಗಳನ್ನು ಅಂಗಡಿಯವರು ಕೊಟ್ಟ ಬ್ಯಾಗ್ ನಲ್ಲಿ ಹಾಕಿಕೊಂಡು ಅವುಗಳನ್ನು ನನ್ನ ದ್ವಿ ಚಕ್ರ ವಾಹನದಲ್ಲಿ ನೇತಾಡಲು ಬಿಟ್ಟು,  ಸ್ನೇಹಿತನ ಜೊತೆ ಚಹಾ ಕುಡಿಯಲು ಹೋದೆ. ವಾಪಸ್ಸು ಬಂದರೆ ಪುಸ್ತಕಗಳ ಚೀಲ ಹಾಗೆಯೆ ನೇತಾಡುತ್ತಿತ್ತು. ಅದನ್ನು ನೋಡಿ ನನ್ನ ಸ್ನೇಹಿತ ಹೇಳಿದ 'ಯಾರಾದರೂ ಹಳೆಯ ಚಪ್ಪಲಿ ಕಳ್ಳತನ ಮಾಡಬಹುದು ಆದರೆ ಪುಸ್ತಕಗಳನ್ನು ಮುಟ್ಟುವುದಿಲ್ಲ'. ಆ ಮಾತು ನಿಜ ಅನ್ನಿಸಿತು. ಪುಸ್ತಕ ಕಳ್ಳತನವಾದರೂ ಅವುಗಳು ಕೊಡುವ ವಿದ್ಯೆ, ಜ್ಞಾನ , ಆನಂದ ಕಳ್ಳತನ ಮಾಡಲು ಸಾಧ್ಯವೇ?

ಹೆಚ್ಚಿನ ಸಮಾಜ ಪುಸ್ತಕಗಳನ್ನು ಅಸಡ್ಡೆಯಿಂದ ನೋಡಿದರೆ ಅದು ಅವರ ನಷ್ಟ ಅಷ್ಟೇ. ಇಷ್ಟಕ್ಕೂ ಪುಸ್ತಕ ಪ್ರೇಮಿಗಳು ಅದಕ್ಕೆಲ್ಲಿ ತಲೆ ಕೆಡಿಸಿಕೊಳ್ಳುತ್ತಾರೆ? ಬಲ್ಲವರೇ ಬಲ್ಲರು ಎಂದುಕೊಂಡು ಸುಮ್ಮನಾಗುತ್ತಾರೆ.




Thursday, August 10, 2023

ಕವನ: ದುಡಿಯುವ ಕಷ್ಟ

ದುಡಿಯದೆ ಇದ್ದರೆ ನಾಯಿಪಾಡು

ದುಡಿಯಲೇ ಬೇಕು ಹೊಟ್ಟೆಪಾಡು


ಹೊಟ್ಟೆ ತುಂಬುವಷ್ಟು ದುಡಿದರೆ ಜೀರ್ಣ

ಜಾಸ್ತಿ ದುಡಿದರೆ ಆಗ ಶುರು ಅಜೀರ್ಣ


ಹೆಚ್ಚಿಗೆ ದುಡಿದರೆ ಹೊಟ್ಟೆ ಕಿಚ್ಚಿನವರ ಮುಖಾಮುಖಿ

ಅದಕ್ಕೂ ಜಾಸ್ತಿ ದುಡಿದರೆ ಅನ್ನುತ್ತಾರೆ ಇವನದೇನೋ ಕಿತಾಪತಿ


ಕಣ್ಣು ಕುಕ್ಕುವಷ್ಟು ದುಡಿದರೆ ಕಾಯುವರು ನಿನ್ನ ಅವನತಿ

ಲೆಕ್ಕಕ್ಕೆ ಸಿಗದಷ್ಟು ದುಡಿದರೆ ಕಾಣಿಸುವರು ನಿನಗೆ ಸದ್ಗತಿ


ದುಡಿದ ದುಡ್ಡು ಎಲ್ಲೂ ಹೇಳದಿದ್ದರೆ ನಿನ್ನದು

ಲೆಕ್ಕ ಗೊತ್ತಾದರೆ ಪಾಲು ಬೇಕು ಎಲ್ಲರಿಗು


ದುಡಿಯುವದಕ್ಕಿಂತ ಕಷ್ಟ ಉಳಿಸಿಕೊಳ್ಳುವುದು

ಅದಕ್ಕೆ ಶ್ರೀಮಂತರು ಹೆಣಗುವುದು


ಹೊಟ್ಟೆ-ಬಟ್ಟೆ, ಸಂತೋಷ-ನೆಮ್ಮದಿ

ಮೀರಿದಾಗ ದುಡ್ಡೇ ನಿನಗೆ ಸಮಾಧಿ


Wednesday, August 2, 2023

ಕವನ: ದುಡ್ಡು ಒಂದೇ, ನಾಮ ಹಲವು

(ದುಡ್ಡು ಪರಿಸ್ಥಿತಿಗೆ ತಕ್ಕಂತೆ ಹಲವಾರು ಹೆಸರುಗಳಲ್ಲಿ ಕರೆಸಿಕೊಳ್ಳುತ್ತದೆ)

ಸರ್ಕಾರಕ್ಕೆ ಕಟ್ಟಿದರೆ ತೆರಿಗೆ
ಕೋರ್ಟ್ ಗೆ ಕಟ್ಟಿದಾಗ ದಂಡ

ಶಾಲೆಗೆ ಕಟ್ಟಿದರೆ ಶುಲ್ಕ
ಮಕ್ಕಳ ಕೈಯಲ್ಲಿಟ್ಟರೆ ಪುಡಿಗಾಸು

ಅರ್ಚಕರಿಗೆ ಕೊಟ್ಟರೆ ದಕ್ಷಿಣೆ
ಮಾವ ಕೊಟ್ಟರೆ ವರದಕ್ಷಿಣೆ

ದುಡಿದಾಗ ಅದು ಸಂಬಳ
ಕಿತ್ತುಕೊಂಡಾಗ ಅದು ಗಿಂಬಳ

ಬ್ಯಾಂಕ್ ನಲ್ಲಿ ಇಟ್ಟಾಗ ಜಮೆ
ಬ್ಯಾಂಕ್ ನಿಂದ ತೆಗೆದುಕೊಂಡರೆ ಸಾಲ

ವ್ಯಾಪಾರದಲ್ಲಿ ಗಳಿಸಿದರೆ ಲಾಭ
ವೃಥಾ ಖರ್ಚು ಮಾಡಿದಾಗ ನಷ್ಟ

ಶ್ರಮ ಪಟ್ಟರೆ ಕೂಲಿ
ಕಳ್ಳ ದೋಚಿದರೆ ಸುಲಿಗೆ

ಸುಮ್ಮನೆ ಕೊಟ್ಟರೆ ದಾನ
ಹುಂಡಿಗೆ ಹಾಕಿದರೆ ಕಾಣಿಕೆ

Monday, July 17, 2023

ಗಾಳಿಪಟದೆತ್ತರದ ಕನಸು, ಸೂತ್ರ ಹರಿಯುವ ಹೊತ್ತು

ಮಂಜ, ತಂದೆಯಿಲ್ಲದ, ತಾಯಿಯ ಆರೈಕೆಯಲ್ಲಿರುವ ಬಾಲಕ. ಗಾಳಿಪಟ ಹಾರಿಸುವುದು ಅವನ ಮೆಚ್ಚಿನ ಹವ್ಯಾಸ. ಅಕ್ಕ ಪಕ್ಕದವರ ಮನೆ ಮಹಡಿ ಹತ್ತಿ ಗಾಳಿಪಟ ಬಿಡುವುದರಲ್ಲೇ ಅವನು ಮಗ್ನ. ಅವನನ್ನು ಹುಡುಕಿ ಮನೆಗೆ ಕರೆತಂದು ಓದಲು ಬರೆಯಲು ಹಚ್ಚುವುದೇ ಅವನ ತಾಯಿಗೆ ಕಾಯಕ. ಗಾಳಿಪಟದೆತ್ತರಕ್ಕೆ ಅವನು ಬೆಳೆಯಬೇಕೆಂಬ ಹಂಬಲ ಅವನ ತಾಯಿಯ ಸಹಜ ಆಸೆ. ಅವನು ಶಾಲೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದರೆ ಅವನ ಜೊತೆ ತಾನು ಕೂಡ ಗಾಳಿಪಟ ಹಾರಿಸುವುದಕ್ಕೆ ಬರುವುದಾಗಿ ಅವನ ತಾಯಿ ಭಾಷೆ ನೀಡುತ್ತಾಳೆ. ಅದಕ್ಕೆ ತಕ್ಕಂತೆ ಮಂಜ ಕೂಡ ಶಾಲೆಯ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಗಳಿಸುವುದರಲ್ಲಿ ಸಫಲನಾಗುತ್ತಾನೆ. ಕೈಯಲ್ಲಿ ಅಂಕಪಟ್ಟಿ ಹಿಡಿದು ಮನೆಗೆ ಓಡುವ ಮಂಜನಿಗೆ ದಾರಿಯಲ್ಲಿ ಕಾದಿರುವ ದೌರ್ಭಾಗ್ಯ ಏನು ಎಂದು ನೀವು ಈ ಕಿರು ಚಿತ್ರ ನೋಡಿಯೇ ತಿಳಿದುಕೊಳ್ಳಿ.

ಗಾಳಿಪಟದ ದಾರಕ್ಕೆ ಗಾಜಿನ ಪುಡಿಯನ್ನು ಸವರುವುದು ಬರೀ ಪಕ್ಷಿಗಳ ಪ್ರಾಣ ಅಷ್ಟೇ ಅಲ್ಲ, ಮನುಷ್ಯರ ಅದರಲ್ಲೂ ಅನೇಕ ಬಾಲಕರ ಪ್ರಾಣಗಳನ್ನು ಕೂಡ ತೆಗೆದುಬಿಟ್ಟಿದೆ. ಈ ಹಿನ್ನೆಲೆಯಲ್ಲಿ ನಿರ್ಮಾಣಗೊಂಡ 'ಮಂಜ' ಕಿರುಚಿತ್ರ ನೋಡುಗರ ಗಮನ ಸೆಳೆಯುತ್ತದೆ. ಮತ್ತು ಹಲವಾರು ಪ್ರಶಸ್ತಿಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಕಥೆ ಸಾಗುವ ರೀತಿ, ಛಾಯಾಗ್ರಹಣ, ಧ್ವನಿ ಸಂಯೋಜನೆ ಎಲ್ಲದರ ಸ್ಪಷ್ಟ ನಿರೂಪಣೆಯ ಜೊತೆಗೆ ಈ ಒಂದು ಕಿರುಚಿತ್ರ, ಪೂರ್ಣ ಪ್ರಮಾಣದ ಚಲನಚಿತ್ರ ನೋಡುವ ಅನುಭವ ಒದಗಿಸುತ್ತದೆ. ಹೆಚ್ಚಿನ ಕಲಾವಿದರು ಹೊಸಬರು ಆದರೂ, ಅಭಿನಯದಲ್ಲಿ ಏನೂ ಕಡಿಮೆ ಇಲ್ಲ. ಚಿತ್ರದ ಆರಂಭ ಮತ್ತು ಕೊನೆಯಲ್ಲಿ ಡಾಲಿ ಧನಂಜಯ ಅವರ ಹಿನ್ನೆಲೆ ಧ್ವನಿ ಗಮನ ಸೆಳೆಯುತ್ತದೆ. ಮತ್ತು ಚಿತ್ರ ಮುಗಿದಾಗ ವಿಷಾದ ಭಾವ ಮೂಡುವುದರ ಜೊತೆಗೆ ಒಂದು ದುರಭ್ಯಾಸ ಹೇಗೆ ಮಾರಣಾಂತಕ ಆಗಬಲ್ಲದು ಎನ್ನುವ ಪ್ರಜ್ಞೆ ಮೂಡುತ್ತದೆ.

ಗಮನ ಸೆಳೆಯುವ ಕಥೆ ಬರೆದು, ಈ ಕಿರು ಚಿತ್ರ ನಿರ್ಮಿಸಿದ ಅನಂತ ಸುಬ್ರಮಣ್ಯ (Anantha Subramanyam K) ಮತ್ತು ನಿರ್ದೇಶಕರಾದ ಹರ್ಷಿತ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಇವರ ಪ್ರತಿಭೆಯಲ್ಲಿ ಇನ್ನು ಅನೇಕ ಕಥೆಗಳು ಅಡಗಿವೆ. ಅವುಗಳು ತೆರೆಗೆ ಬಂದು, ಸದಭಿರುಚಿಯ ನೋಡುಗರ ಗಮನ ಸೆಳೆಯುತ್ತ, ಯಶಸ್ಸು ಕಾಣಲಿ ಎಂದು ಹಾರೈಸುವೆ.



Wednesday, June 28, 2023

ಹಾಳೂರಿನಲ್ಲಿ ಉಳಿದವರು

ಊರುಗಳು ಏತಕ್ಕೆ ಪಾಳು ಬೀಳುತ್ತವೆ? ನಮ್ಮ ಹಂಪೆಯನ್ನು ಶತ್ರುಗಳು ಹಾಳುಗೆಡವಿದರು. ಹಿರೋಷಿಮಾ, ನಾಗಸಾಕಿ ಪಾಳು ಬೀಳುವುದಕ್ಕೆ ಪರಮಾಣು ಬಾಂಬ್ ಗಳು ಕಾರಣವಾದವು. ಒಂದು ಯುದ್ಧ ಮುಗಿಯುವುದಕ್ಕೆ ಕೆಲ ಊರುಗಳು ಪಾಳು ಬೀಳಬೇಕೇನೋ? ಅದನ್ನೇ ಇಂದಿಗೂ ಉಕ್ರೇನ್ ನಲ್ಲಿ ಕೂಡ ಕಾಣಬಹುದು. ಆದರೆ ಅದು ಅಷ್ಟೇ ಅಲ್ಲ. ಅಕ್ಬರ್ ಕಟ್ಟಿದ ಫತೇಪುರ್ ಸಿಕ್ರಿ ಯಲ್ಲಿ ನೀರು ಸಾಕಾಗದೆ ಮೊಗಲ್ ದೊರೆಯಿಂದ ಸಾಮಾನ್ಯ ಪ್ರಜೆಗಳವರೆಗೆ ಎಲ್ಲರೂ ಊರು ಬಿಟ್ಟರು. ಹಿಂದೆ ಪ್ಲೇಗ್ ಬಂದಾಗ ಜನ ಊರು ತೊರೆಯುತ್ತಿದ್ದರು. ಭೂಕಂಪಗಳು ಕೂಡ ಊರುಗಳನ್ನು  ಕ್ಷಣಾರ್ಧದಲ್ಲಿ ಪಾಳು ಬೀಳಿಸಿಬಿಡುತ್ತವೆ. ಇಂದಿಗೆ ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಜನ ದುಡಿಮೆ ಅರಸಿ ಬೆಂಗಳೂರಿಗೆ ಗುಳೆ ಹೊರಡುತ್ತಾರಲ್ಲ. ಅವರು ತಮ್ಮ ಹಳ್ಳಿಗಳಿಗೆ ಹಿಂತಿರುಗದಿದ್ದರೆ ಅವುಗಳು ಸ್ವಲ್ಪ ಮಟ್ಟಿಗಾದರೂ ಪಾಳು ಬೀಳದೆ ಏನು ಮಾಡುತ್ತವೆ?


ಬಹು ಕಾಲದ ಹಿಂದೆ ಆದಿ ಮಾನವ ಬೆಟ್ಟ, ಗುಡ್ಡಗಳಲ್ಲಿ, ಗುಹೆಗಳಲ್ಲಿ ವಾಸಿಸುತ್ತಿರಲಿಲ್ಲವೇ? ಅವನು ಬೆಟ್ಟ ಇಳಿದು, ನೀರಿನ ವ್ಯವಸ್ಥೆ ಇದ್ದಲ್ಲಿ ವ್ಯವಸಾಯ ಆರಂಭಿಸಿದ. ಕ್ರಮೇಣ ಬಯಲಲ್ಲಿ ಮನೆಗಳನ್ನು ಕಟ್ಟಿಕೊಂಡ. ಅವುಗಳು ಊರಾಗಿ ಬೆಳೆದವು. ವಾಸಕ್ಕೆ ಅನುಕೂಲ ಹೆಚ್ಚಿದ್ದರೆ ಹೊಸ ಊರು ಕಟ್ಟಿಕೊಂಡು ಹಳೆ ಊರು ತೊರೆಯಲು ಹಿಂದೆ ಮುಂದೆ ಯೋಚಿಸಲಿಲ್ಲ. ನಂತರ ಸಮಾಜ ರೂಪುಗೊಂಡು, ಪ್ರದೇಶಗಳು ಸಾಮ್ರಾಜ್ಯಗಳ ಸೀಮೆ ರೇಖೆಗಳಾದವು. ಗೆದ್ದವರು ಸೋತವರ ಊರನ್ನು  ಹಾಳುಗೆಡವುತ್ತಿದ್ದರು. ಆ ಸಂಪ್ರದಾಯ ಮುಂದೆ ಹಲವು ಊರುಗಳು ಅಳಿಯಲು ಮತ್ತು ಹೊಸ ಊರುಗಳು ಹುಟ್ಟಿಕೊಳ್ಳಲು ಕಾರಣವಾದವು.


ಆದರೆ ಹಾಳೂರಿನಲ್ಲಿ ಒಬ್ಬಿಬ್ಬರು ಉಳಿದುಕೊಂಡರೆ ಅವರೇ ಊರ ಗೌಡರು ಎನ್ನೋದು ಗಾದೆ ಮಾತು. ಆದರೆ ಆ ಊರಿನಲ್ಲಿ ಉಳಿದುಕೊಳ್ಳಲು ಕಾರಣಗಳು ಮುಗಿದು ಹೋಗಿವೆ. ಹಳೆ ನೆನಪಿಗಳಿಗೆ, ಸಂಪ್ರದಾಯಗಳಿಗೆ, ಮುಲಾಜಿಗೆ ಬಿದ್ದು ಉಳಿದುಕೊಂಡರೆ ಅವರು ಸಾಧಿಸುವುದೇನು? ಬೇರೆಲ್ಲ ಜನ ಊರು ಬಿಟ್ಟು ಹೋಗಿ ಆಗಿದೆಯಲ್ಲವೇ? ಮತ್ತೆ ಆ ಊರಲ್ಲಿ ಹಳೆಯ ಅನುಕೂಲಗಳು ಉಳಿಯುವುದಿಲ್ಲ. ಪರಸ್ಪರ ಸಹಾಯ, ವ್ಯಾಪಾರ ಯಾವುದು ಸಾಧ್ಯವಿಲ್ಲ. ಹಾಗಿದ್ದಲ್ಲಿ ಪಾಳು ಬಿದ್ದ ಕೋಟೆ ಕಾಯುವೆದೇಕೆ? ಸತ್ತ ಹೆಣಕ್ಕೆ ಶೃಂಗಾರ ಮಾಡಿದರೆ ಏನುಪಯೋಗ?


ನಮ್ಮ ಪೂರ್ವಜರು ಅವರ ಹಿರಿಯರು ಬದುಕಿದ್ದಲ್ಲಿಯೇ ಇರುತ್ತೇವೆ ಎಂದು ನಿಶ್ಚಯ ಮಾಡಿದ್ದರೆ, ಇಂದಿಗೆ ನಾವು ಕೂಡ ಗುಹೆಗಳಲ್ಲಿ ವಾಸ ಮಾಡಬೇಕಿತ್ತು. ಆದರೆ ಹಾಗಾಗಲಿಲ್ಲ. ಸಮಾಜಕ್ಕೆ ಬೇಡದ ಊರುಗಳನ್ನು ಅವನು ತೊರೆದು ಹೊಸ ಜೀವನ ಕಟ್ಟಿಕೊಂಡ. ಆದರೂ ಅಲ್ಲೊಬ್ಬರು ಇಲ್ಲೊಬ್ಬರು ಹಾಳೂರಿನಲ್ಲೂ ಗೌಡರಾಗಿ ಉಳಿದುಕೊಂಡರು. ಅದು ಯಾವುದೊ ಪ್ರತಿಷ್ಠೆಗೋ, ಅಥವಾ ಮುಲಾಜಿಗೆ ಬಿದ್ದು. ಅವರಿಗೆ ತಾವು ಕಳೆದುಕೊಂಡಿದ್ದು ಏನು ಎಂದು ತಿಳಿಯಲಿಲ್ಲ. 


ಸಂಪ್ರದಾಯಗಳನ್ನು ಮರೆಯಬೇಕೆಂದು ನಾನು ಹೇಳುತ್ತಿಲ್ಲ. ಆದರೆ ಸಂಪ್ರದಾಯಗಳಿಗಾಗಿ ಸಾಯಬಾರದು ಎನ್ನುವುದಷ್ಟೆ ನನ್ನ ಅಭಿಪ್ರಾಯ. ಇಲ್ಲಿ ಊರುಗಳಷ್ಟೇ ಹಾಳು ಬೀಳುವುದಿಲ್ಲ ಎನ್ನುವುದು ಗಮನಿಸಬೇಕು. ಕುಟುಂಬಗಳು ಹಾಳು ಬಿದ್ದಾಗ ಅವರ ಮನೆಗಳು ಕೂಡ ಹಾಳು ಬೀಳುತ್ತವೆ. ಒಬ್ಬ ಮನುಷ್ಯ ಹಾಳು ಬಿದ್ದರೆ ಅವನ ಸಂಬಂಧಗಳು ಕೂಡ ಹಾಳು ಬೀಳುತ್ತವೆ. ಅಂತಹ ಹಾಳೂರುಗಳನ್ನು ಬಿಟ್ಟು ಮುನ್ನಡೆದಷ್ಟೂ ಹೊಸ ಜೀವನಕ್ಕೆ ಅವಕಾಶ.


ಹಾಳೂರು, ಪಾಳು ಬಿದ್ದ ಮನೆ, ಮನುಷ್ಯ ಅಲ್ಲಿ ಗೌಡರಾಗಿ ಉಳಿದು ಯಾವ ಪ್ರಯೋಜನ?

Monday, June 26, 2023

ಕಥೆ: ಹುಲಿಯೊಂದರ ಡೈರಿಯ ಪುಟಗಳು

ನೀವು ಮನುಷ್ಯರೆಲ್ಲ ಹುಲಿಗಳು ಬೆಕ್ಕಿನ ಜಾತಿಗೆ ಸೇರಿದ್ದು ಎನ್ನುತ್ತೀರಿ. ಅದೇಕೋ ನನಗೆ ಒಂಚೂರು ಇಷ್ಟವಾಗುವುದಿಲ್ಲ. ನನಗೆ ಬೆಕ್ಕಿನ ಹಾಗೆ ಮನುಷ್ಯರ ಮಕ್ಕಳ ಜೊತೆಗೆ ಆಟವಾಡುವುದು ಅಥವಾ ಹೆಣ್ಣು ಮಕ್ಕಳಿಂದ ಮುದ್ದಿಸಿಕೊಳ್ಳುವುದು ಅವೆಲ್ಲ ಆಗಿ ಬರುವುದಿಲ್ಲ. ಅವರನ್ನು ಬೇಕಾದರೆ ಬೆಳಗಿನ ಉಪಹಾರಕ್ಕೆ ತಿನ್ನುತ್ತೇನೆ. ನನಗೆ ಬೆಕ್ಕಿನ ಜಾತಿ ಎನ್ನುವುದಕ್ಕಿಂತ ಹುಲಿ ಜಾತಿಯೇ ಎನ್ನುವುದು ಸೂಕ್ತ. ಅಥವಾ ಅದಕ್ಕಿಂತ ಭಯಂಕರವಾಗಿ 'ವ್ಯಾಘ್ರ' ಎಂದು ಕರೆಸಿಕೊಳ್ಳಲು ಇಷ್ಟ. ನಾನು 'ಜಂಗಲ್ ಬುಕ್' ಕಥೆಯನ್ನು ಮನುಷ್ಯರು ತಾವು-ತಾವು ಮಾತನಾಡುವಾಗ ಕೇಳಿಸಿಕೊಂಡಿದ್ದೇನೆ. ಅದರಲ್ಲಿನ 'ಶೇರ್ ಖಾನ್' ಗಿಂತ ವಿಭಿನ್ನವಾಗಿ ನಾನು ಏನು ನಡೆದುಕೊಳ್ಳುತ್ತಿರಲಿಲ್ಲ. 'ಮೌಗ್ಲಿ' ಜೊತೆಗೆ ನನ್ನ ಸ್ನೇಹ ಎಂದಿಗೂ ಸಾಧ್ಯವಿಲ್ಲ.


ನನ್ನ ಮತ್ತು ಮನುಷ್ಯರ ಭೇಟಿ ಅತ್ಯಂತ ಆಕಸ್ಮಿಕವಾದದ್ದು. ನಾನು ಚಿಕ್ಕವನಿದ್ದಾಗ ನನಗೆ ಮನುಷ್ಯ ಜಾತಿ ಇದೆ ಎನ್ನುವ ವಿಷಯವೇ ಗೊತ್ತಿರಲಿಲ್ಲ. ತಾಯಿಯ ಆರೈಕೆಯಲ್ಲಿ ಸೋದರರ ಜೊತೆ ಆಟವಾಡುವುದೇ ನನ್ನ ಜಗತ್ತಾಗಿತ್ತು. ಮರೆಯಲ್ಲಿ ಅಡಗಿ ತಾಯಿ ಬೇಟೆಯಾಡುವುದನ್ನು ಗಮನಿಸುತ್ತಿದ್ದೆ. ಎಲ್ಲಾ ನಾಲ್ಕು ಕಾಲಿನ ಪ್ರಾಣಿಗಳು, ಸಣ್ಣ ಕಾಲುಗಳು-ದೊಡ್ಡ ಹೊಟ್ಟೆ ಇದ್ದರೆ ಅದು ನಮಗೆ ಒಳ್ಳೆ ಊಟ. ಬೇಟೆಯ ಹತ್ತಿರಕ್ಕೆ ಸದ್ದಿಲ್ಲದೇ ಹೋಗಿ, ಅದರ ಗಮನ ಬೇರೆ ಕಡೆಗೆ ತಿರುಗಿದ ಕ್ಷಣದಲ್ಲಿ, ಅದರ ಮೈ ಮೇಲೆ ಎರಗಿ, ಕುತ್ತಿಗೆ ಮುರಿದರೆ ಅಂದಿನ ಬೇಟೆ ಮುಗಿದೇ  ಹೋಯಿತು. ತಾಯಿ ನಮ್ಮನ್ನು ಚೆನ್ನಾಗಿ ತರಬೇತಿಗೊಳಿಸಿದ್ದಳು. ಸಂತೋಷಮಯವಾಗಿರುವ  ಕಾಲ ಬಹು ಬೇಗ ಕಳೆದು ಹೋಗಿ ಬಿಡುತ್ತದೆ ಅಲ್ಲವೇ? ನಾನು ಸ್ವತಂತ್ರವಾಗಿ ಬೇಟೆಯಾಡುವುವುದನ್ನು ಗಮನಿಸಿದ ನನ್ನ ತಾಯಿ, ನನ್ನ ಮೇಲಿನ ಪ್ರೀತಿಯನ್ನು ಮರೆತು, ತನ್ನ ವ್ಯಾಪ್ತಿ ಪ್ರದೇಶದಿಂದ ಹೊರಗೆ ಅಟ್ಟಿದಳು.


ಸ್ವತಂತ್ರ ಜೀವನ ಆರಾಮದಾಯಕ ಕೂಡ ಆಗಿತ್ತು. ನೀರು ಕುಡಿಯಲು ಬರುವ ಪ್ರಾಣಿಗಳು ಮೈ ಮರೆತಾಗ ಹೊಂಚಿನ ಧಾಳಿ ಮಾಡಿದರೆ, ಅದು ಕೆಲ ದಿನಗಳ ಹಸಿವನ್ನು ನೀಗಿಸುತ್ತಿತ್ತು. ಉಳಿದೆಲ್ಲ ವಿಶ್ರಾಂತಿ ಸಮಯ. ನನ್ನ ಪ್ರದೇಶದಲ್ಲಿ ತಿರುಗಾಡುವಾಗ, ಉಳಿದೆಲ್ಲ ಪ್ರಾಣಿಗಳು ನನ್ನ ನೋಡಿ ಭಯ ಪಡುವುದು ಗಮನಿಸುತ್ತಿದ್ದೆ. ನಾನು ಕಾಡಿನ ರಾಜಕುಮಾರನೇ? ಇರಬಹುದೇನೋ? ನೋಡಲು ವ್ಯಗ್ರವಾಗಿದ್ದಷ್ಟು ಹೆಚ್ಚಿನ ಮರ್ಯಾದೆ. ಅದು ಕಾಡಿನ ನಿಯಮ. ಸುಮ್ಮನೆ ಒಮ್ಮೆ ಗ್ರ್ರ್ರ್ ಅಂದರೆ ಸಾಕು. ನಾನು ಹೋಗಬೇಕಾದ ದಾರಿಯಲ್ಲಿ ಯಾರೂ ಅಡ್ಡಿ ನಿಲ್ಲುತ್ತಿದ್ದಿಲ್ಲ. ರಾಜಕುಮಾರನಾಗಿದ್ದ ನಾನು ಕ್ರಮೇಣ ರಾಜನೇ ಆಗಿಬಿಟ್ಟೆ.


ಹುಲಿಗಳು ಅದೃಷ್ಟ ಅಥವಾ ಹಣೆಬರಹಗಳನ್ನು ನಂಬಿ ಬದುಕುವುದಿಲ್ಲ. ಎಲ್ಲ ಸರಿಯಿತ್ತು. ಈ ಮನುಷ್ಯರನ್ನು ಅಕಸ್ಮಾತ್ ಆಗಿ ಭೇಟಿ ಆಗುವವರೆಗೆ. ಒಬ್ಬನಲ್ಲ, ಹಲವರು ಇದ್ದರು. ಅವರು ದೊಡ್ಡ ಕೋತಿಗಳ ತರಹ ಕಾಣುತ್ತಿದ್ದರು. (ನೀವು ನನಗೆ ಬೆಕ್ಕಿನ ಜಾತಿ ಅಂದದ್ದು ನೆನಪು ಮಾಡಿಕೊಳ್ಳಿ). ಆದರೆ ಅವರು ಮರದಿಂದ ಮರಕ್ಕೆ ಹಾರುತ್ತಿದ್ದಿಲ್ಲ. ನೋಡಲು ತುಂಬಾ ನಿಶ್ಶಕ್ತರ ಹಾಗೆ ಕಾಣುತ್ತಿದ್ದರು. ಅವರನ್ನು ತಿನ್ನಲು ನನಗೇನು ಇಷ್ಟವಿದ್ದಿಲ್ಲ. ಆದರೆ ನನಗೆ ಅವರನ್ನು ನೋಡಿ ಅಸಹನೆಯಿಂದ ರೇಗುವಂತೆ ಆಗಿತ್ತು. ಅವರನ್ನು ಓಡಿಸುವ ಉದ್ದೇಶದಿಂದ ನಾನು ಒಬ್ಬನ ಮುಂದೆ ಧುತ್ತನೆ ನಿಂತು, ಮೆಲ್ಲಗೆ ಗುರ್ರ್  ಎಂದೆ. ಅವನು ಗಲಾಟೆ ಮಾಡಿ ಎಲ್ಲ ಜನರ ಗಮನ ಸೆಳೆಯುವಂತೆ ಮಾಡಿಬಿಟ್ಟ. ಮನುಷ್ಯರ ಗುಂಪು ಅಲ್ಲಿ ಸೇರತೊಡಗಿದ್ದಂತೆ ನಾನು ಅಲ್ಲಿಂದ ಜಿಗಿದು ಮರೆಯಾದೆ. ಹೆದರಿಕೆಯಿಂದಲ್ಲ, ಅಸಹ್ಯದಿಂದ, ಜಿಗುಪ್ಸೆಯಿಂದ.


ಆ ಘಟನೆ ನಡೆದಾಗಿಂದ, ನನ್ನನ್ನು ಮನುಷ್ಯ ಕಣ್ಣುಗಳು ಗಮನಿಸುವುದು ನನ್ನ ಅರಿವಿಗೆ ಬರುತ್ತಿತ್ತು. ನನ್ನ ಮತ್ತು ಮನುಷ್ಯರ ಮುಖಾ-ಮುಖಿ ಸ್ವಲ್ಪೇ ದಿನಗಳಲ್ಲಿ ಮತ್ತೆ ಆಯಿತು. ಅವನು ಗೋಪುರ ಒಂದರ ಮೇಲೆ ಒಂದು ಉದ್ದನೆಯ ಕೋಲೊಂದನ್ನು ನನಗೆ ಗುರಿ ಮಾಡಿ ಹಿಡಿದಿದ್ದ. ತಡೆಯಲಾರದ ಕೋಪ ನನ್ನ ನೆತ್ತಿಗೇರಿ, ಅವನ ಮೇಲೆ ಆ ಕ್ಷಣದಲ್ಲೇ ಹಾರಿದೆ. ಏನಾಶ್ಚರ್ಯ! ಅವನು ಹಿಡಿದ ಕೋಲಿನಿಂದ ಬೆಂಕಿಯ ಉಂಡೆ ಸಿಡಿದು ನನ್ನ ಹಿಂಗಾಲನ್ನು ಸೇರಿತು. ಅಪಾರ ನೋವಿನಿಂದ ಕೆಳಗೆ ಬಿದ್ದ ನನಗೆ ಮತ್ತೆ ಓಡಲು ಆಗಲಿಲ್ಲ. ಕೆಲ ಸಮಯದಲ್ಲೇ ನನ್ನ ಪ್ರಜ್ಞೆ ಕಳೆದು ಹೋಯಿತು.


ಎಷ್ಟೋ ದಿನಗಳ ದೀರ್ಘ ನಿದ್ದೆಯ ನಂತರ ನನಗೆ ಎಚ್ಚರವಾದಾಗ ನಾನು ಕಾಡಿನಲ್ಲಿ ಇದ್ದಿಲ್ಲ. ಅದು ಒಂದು ಚಿಕ್ಕ ನಡುಗಡ್ಡೆಯ ಹಾಗೆ ತೋರುತ್ತಿತ್ತು. ಅದರ ಸುತ್ತ ಆಳವಾಗಿ ತೋಡಿಬಿಟ್ಟಿದ್ದರು. ಅದರಾಚೆಗೆ ಎತ್ತರದ ಗೋಡೆ ಮತ್ತು ಅದರ ಮೇಲೆ ಕಬ್ಬಿಣದ ಕಂಬಿಗಳು. ಎಷ್ಟು ಚಿಕ್ಕ ಜಾಗ. ಎರಡು ಸಲ ನೆಗೆದರೆ ಆ ಪ್ರದೇಶ ಮುಗಿದೇ ಹೋಗುತ್ತಿತ್ತು. ಸುಮ್ಮನೆ ನಡೆಯಬೇಕು. ಅಲ್ಲಿಯೇ ಸುತ್ತಬೇಕು. ನಾನು ಅಲ್ಲಿ ಬಂದಿಯಾಗಿದ್ದೇನೆ ಎನ್ನುವುದು ಅರಿವಾಯಿತು. ಹತ್ತಿರದಲ್ಲಿ ಇತರ ಪ್ರಾಣಿ-ಪಕ್ಷಿಗಳ ಸದ್ದು ಕೇಳಿಬರುತ್ತಿತ್ತು. ಅವರುಗಳು ಕೂಡ ನನ್ನ ಹಾಗೆ ಬಂದಿಯಾಗಿರಬಹುದು ಎನ್ನಿಸಿತು. ಭೂಮಿ ಮೇಲೆ ಇಂತಹ ಜಾಗವೂ ಉಂಟೆ? ನೆಮ್ಮದಿಯ ವಿಷಯ ಎಂದರೆ ಊಟ ಮಾತ್ರ ಪ್ರತಿ ದಿನ ಇದ್ದಲ್ಲಿಗೆ ಬರುತ್ತಿತ್ತು. ಮೈ-ಕೈಗೆ ಕೆಲಸವಿಲ್ಲದೇ, ಬೇಟೆಯಾಡದೆ, ಉಗುರುಗಳಿಂದ, ಕೋರೆ ಹಲ್ಲುಗಳಿಂದ ಪ್ರಾಣಿಗಳ ಚರ್ಮವನ್ನು ಹರಿಯದೆ ಪ್ರತಿ ದಿನ ಅದೇ ಸಮಯಕ್ಕೆ ಹಾಕಿದ ಮಾಂಸ ತಿನ್ನುವುದು ಬೇಸರದ ಸಂಗತಿ. ಪ್ರತಿ ದಿನ ಊಟ ಸಿಗದೇ ಇದ್ದರು ಕಾಡಿನ ಅನಿಶ್ಚಿತ ಬದುಕು ಚೆನ್ನಾಗಿತ್ತು ಅನಿಸುತ್ತಿತ್ತು.


ಗೋಡೆಯ ಆಚೆಗಿನ ಕಬ್ಬಿಣದ ಸರಳಿನ ಹಿಂದೆ ನಿಂತು ಮನುಷ್ಯರು ನನ್ನನ್ನು ನೋಡಲು ಬರುತ್ತಾರೆ. ಈ ಪ್ರಪಾತವನ್ನು ಜಿಗಿಯುವುದು ನನಗೆ ಕಷ್ಟ ಏನಲ್ಲ. ಆದರೆ ಕಬ್ಬಿಣದ ಸರಳುಗಳು ನನ್ನನ್ನು ಘಾಸಿಗೊಳಿಸುತ್ತವೆ ಎನ್ನುವ ಅರಿವು ನನಗಿದೆ. ಅದಿಲ್ಲದಿದ್ದರೆ ಈ ಮನುಷ್ಯರನ್ನು ಹುರಿ ಮುಕ್ಕಿ ಬಿಡುತ್ತಿದ್ದೆ. ಅವರು ನನ್ನನ್ನು ದಿಟ್ಟಿಸಿ ನೋಡುವುದು ನನಗೆ ಇಷ್ಟ ಆಗುವುದಿಲ್ಲ. ಆದರೆ ನನಗೆ ಬೇರೆ ದಾರಿ ಇಲ್ಲ. ಅದಕ್ಕೆ ಅವರ ಮೇಲೆ ಗಮನ ಹರಿಸಲು ಹೋಗುವುದಿಲ್ಲ. ಅತ್ತಿತ್ತ ತಿರುಗುತ್ತೇನೆ. ಇಲ್ಲವೇ ಮಲಗಿ ನಿದ್ದೆ ಹೊಡೆಯುತ್ತೇನೆ.


ನೋಡಿ, ಯಾವ ಹುಲಿಯೂ ಡೈರಿ ಬರೆಯುವುದಿಲ್ಲ. ಓದುವುದು. ಬರೆಯುವುದು ಮಾಡಲಿಕ್ಕೆ ಅವುಗಳು ಭೂಮಿಗೆ ಬಂದಿಲ್ಲ. ಆದರೆ ಬೇಟೆಯಾಡಲು ಅವಕಾಶ ಇಲ್ಲದ ನನಗೆ ಹೊತ್ತು ಕಳೆಯುವುದೆಂತು? ನಿರುತ್ಸಾಹದ ಬದುಕು ನನ್ನದಾಗಿದೆ. ಬೇಟೆ ಪ್ರಾಣಿಗಳನ್ನು ಕೊಲ್ಲದಿದ್ದರೆ ಸಮಯವನ್ನಾದರೂ ಹೇಗಾದರೂ ಕೊಲ್ಲಬೇಕಲ್ಲವೇ? ಅದಕ್ಕೋಸ್ಕರ ಈ ಡೈರಿ ಬರೆಯುತ್ತಿದ್ದೇನೆ ಅಷ್ಟೇ. ಹಳೆಯ ನೆನಪುಗಳನ್ನು ಮೆಲಕು ಹಾಕುತ್ತ ಹೇಗೋ ಜೀವನ ನೂಕಬೇಕು. ಮೃಗಾಲಯದಲ್ಲಿ ಪ್ರಾಣಿಗಳು ಹೆಚ್ಚಿನ ಕಾಲ ಬದುಕುತ್ತವಂತೆ. ಅದಕ್ಕೆ ಸ್ವಾತಂತ್ರದ ಬೆಲೆ ತೆರಬೇಕು ನೋಡಿ. ಹಿಂದೆ ಮುಂದೆ ನೋಡದೆ ಪ್ರಾಣಿಗಳನ್ನು ಸಿಗಿದು ಹಾಕುತ್ತಿದ್ದ ನನಗೆ ಅಭಿಪ್ರಾಯ ಹಂಚಿಕೊಳ್ಳುವುದು ಏನಂತಲೇ ಗೊತ್ತಿರಲಿಲ್ಲ. ಹೆಚ್ಚಿಗೆ ವಿಚಾರ ಮಾಡುವುದು ನನಗೆ ಒಗ್ಗುವುದಿಲ್ಲ. ಇಂದು ಮಾತನಾಡಿದ್ದು ಜಾಸ್ತಿಯೇ ಆಯಿತು. ನಾನು ಸ್ವಲ್ಪ ಮಲಗುತ್ತೇನೆ.

Saturday, June 10, 2023

ಸತ್ತ ಮೇಲೆ ಸಮರಾದಾರು

"ಕುಲ ಕುಲ ಕುಲವೆಂದು ಹೊಡೆದಾಡದಿರಿ,
ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ, ಬಲ್ಲಿರಾ?"
-ಕನಕದಾಸ

ಜಾತಿ-ವರ್ಗ ಬೇಧಗಳಿದ್ದರಿಂದಲೇ ಕನಕದಾಸರು ಈ ಗೀತೆ ರಚಿಸಿದರಲ್ಲವೇ? ಈ ಜಾತಿ ಪದ್ದತಿ ತುಂಬಾನೇ ಹಳೆಯದು. ವೇದ, ಪುರಾಣಗಳಲ್ಲಿ ಇದರ ಉಲ್ಲೇಖವಿದೆ.

ಜನ್ಮನಾ ಜಾಯತೇ ಶೂದ್ರಃ ಸಂಸ್ಕಾರಾತ್ ದ್ವಿಜ ಉಚ್ಯತೇ
- ಸ್ಕಂದ ಪುರಾಣ

ಹುಟ್ಟಿನಿಂದಲ್ಲ, ಸಂಸ್ಕಾರದಿಂದ ಬ್ರಾಹ್ಮಣ ಎಂದು ನಮ್ಮ ಪುರಾಣಗಳು ಹೇಳುತ್ತವೆ. ಆದರೆ ಹುಟ್ಟಿನಿಂದಲೇ ಜಾತಿಯನ್ನು ಪುರಸ್ಕರಿಸುವ ಪದ್ಧತಿಯೇ ಜನ ಸಾಮಾನ್ಯರಲ್ಲಿ ಬಳಕೆಗೆ ಬಂತು. ಅಷ್ಟೇ ಅಲ್ಲದೆ ಒಳ ಪಂಗಡಗಳು ಹುಟ್ಟಿಕೊಂಡವು. ಮತ್ತು ಅವುಗಳು ಆಯಾ ಧರ್ಮ ಸಂಸ್ಥಾಪಕರ ವಿಚಾರಗಳಿಗೆ ವಿರುದ್ಧವಾಗಿದ್ದವು.

ಬುದ್ಧನ ವಿಚಾರಗಳಿಗೆ ವಿರುದ್ಧವಾಗಿ ಬೌದ್ಧ ಧರ್ಮದಲ್ಲಿ ಹೀನಾಯಾನ ಮತ್ತು ಮಹಾಯಾನ ಎನ್ನುವ ಎರಡು ಪಂಗಡಗಳಾದವು. ಕ್ರಿಶ್ಚಿಯನ್ ಧರ್ಮ ಶುರು ಆದಾಗ ಕ್ಯಾಥೊಲಿಕ್ ಮತ್ತು ಪ್ರೊಟೆಸ್ಟೆಂಟ್ ಅನ್ನುವ ಬೇಧ ಭಾವ ಇರಲಿಲ್ಲ. ಹಾಗೆಯೆ ಮುಸ್ಲಿಮರಲ್ಲಿ ಶಿಯಾ-ಸುನ್ನಿ ಎನ್ನುವ ಪಂಗಡಗಳಿರಲಿಲ್ಲ. ಕಾಲ ಕಳೆದ ಹಾಗೆ ಬ್ರಾಹ್ಮಣರಲ್ಲಿ ಕೂಡ ಶೈವ-ವೈಷ್ಣವ ಪಂಗಡಗಳು ಹುಟ್ಟಿಕೊಂಡವು.

ಜಾತಿ ಅಸಮಾನತೆಯನ್ನು ವಿರೋಧಿಸಿ ಹೊಸ ಧರ್ಮವನ್ನು ಹುಟ್ಟು ಹಾಕಿದಾತ ಬಸವಣ್ಣ. ದಲಿತರ ಮನೆಯಲ್ಲಿ ಊಟ ಮಾಡಿ, ಅಂತರಜಾತಿಯ ವಿವಾಹ ಮಾಡಿಸಿ, ರಾಜನ ಕೆಂಗಣ್ಣಿಗೆ ಗುರಿಯಾದಾತ ಆತ. ಆದರೆ ಇಂದು ನೋಡಿ. ಎಷ್ಟು ಜನ ಲಿಂಗಾಯತರು ಅಂತರಜಾತಿಯ ವಿವಾಹ ಒಪ್ಪಿಕೊಳ್ಳುತ್ತಾರೆ? ಲಿಂಗಾಯತರು, ಲಿಂಗಾಯತ ಮಠಗಳು ಕಟ್ಟಿದ ಸಂಸ್ಥೆಗಳು ಲಿಂಗಾಯತರಿಗೆ ಪ್ರಾಮುಖ್ಯತೆ ಕೊಡುತ್ತವೆ. ಅದು ಜಾತಿ-ಬೇಧ ಮಾಡದೆ ದಾಸೋಹ ನಡೆಸಿದ ಬಸವಣ್ಣನ ಇಚ್ಛೆಗೆ ವಿರೋಧವಾಗಿಲ್ಲವೇ? ಜಾತಿಗಳು ತರುವ ಅಸಮಾನತೆಯನ್ನು ತೊಡೆಯಲು ಕಟ್ಟಿದ ಲಿಂಗಾಯತ ಧರ್ಮದಲ್ಲಿ ಇಂದಿಗೆ ಅನೇಕ ಒಳ ಪಂಗಡಗಳಿವೆ.

ಪ್ರಪಂಚದ ಎಲ್ಲ ಜಾತಿಗಳು ಅವುಗಳ ಸಂಸ್ಥಾಪಕರ ಮೂಲ ವಿಚಾರಗಳಿಗೆ ಅನುಗುಣ ಆಗಿರದೆ, ಸಮಾಜದ ಜನರ ಅನುಕೂಲಕ್ಕೆ ತಕ್ಕಂತೆ ಬದಲಾಗಿವೆ. ಇರುವ ಜಾತಿಗಳಲ್ಲಿಯೇ ಒಳ ಪಂಗಡಗಳಾಗಿವೆ. ಹಾಗಾಗಿ ಜಾತಿ ಪದ್ದತಿ ಮತ್ತು ಮೇಲು-ಕೀಳು ಭಾವನೆಗಳು ದೂರವಾಗುವುದೆಂತು? ಅನೇಕ ಸಾಧು-ಸಂತರ, ಶಂಕರ-ಬಸವ-ಶರೀಫರಂತಹ ಸಮಾಜ ಸುಧಾರಕರ ಪ್ರಯತ್ನಗಳು ಅವರು ಬಯಸಿದ ನಿಜ ಬದಲಾವಣೆ ತರಲೆ ಇಲ್ಲ.

ಅಷ್ಟೆಲ್ಲ ಜಾತಿ ಮೇಲು-ಕೀಳು ಎಂದು ಹೊಡೆದಾಡುವ ಜನರ ಕೊನೆ ಮಾತ್ರ 'ಸತ್ಯ ಹರಿಶ್ಚಂದ್ರ ' ಚಿತ್ರದ 'ಕುಲದಲ್ಲಿ ಮೇಲ್ಯಾವುದೋ' ಗೀತೆಯ ಹಾಗೆ:

"ಇಟ್ಟ ಗಂಧಾ ಬೂದಿ ನಾಮ
ಚಟ್ಟ ಕಟ್ಟಲು ನಿರನಾಮಾ

ಉತ್ತಮ ಮಧ್ಯಮ ಅಧಮರೆಲ್ಲರು
ಸತ್ತಮೇಲೆ ಸಮರಾದಾರು

ಮಸಣದಲ್ಲಿ ಈ ವೀರಬಾಹುವ
ಕೈಯ ಮೇಲ್ಗಡೆ ಬೂದಿಯಾದರು

ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ
ಮತದಲ್ಲಿ ಮೇಲ್ಯಾವುದೋ
ಹುಟ್ಟಿಸಾಯುವ ಹಾಳು ಮನುಸಾ ಮನುಸಾನ ಮಧ್ಯ
ಕೀಳ್ಯಾವ್ದು ಮೇಲ್ಯಾವುದೋ"

Friday, June 9, 2023

ಋಷಿಗಳು vs ಬುದ್ಧ

ಹಿಂದಿನ ಕಾಲದಲ್ಲಿ ಋಷಿಗಳು ಹೇಗೆ ಬದುಕಿದ್ದರು ಎನ್ನುವ ಚಿತ್ರಗಳನ್ನು ಗಮನಿಸಿ ನೋಡಿ. ಅವರುಗಳು ಉದ್ದನೆಯ ಗಡ್ಡ ಬಿಟ್ಟಿರುತ್ತಿದ್ದರು. ಅವರು ವೇದ-ಉಪನಿಷತ್ತುಗಳ  ಕರ್ತೃಗಳು  ಅಥವಾ ಅವುಗಳನ್ನು ಭೋಧಿಸುವವರು ಆಗಿದ್ದರು. ಅವರುಗಳು ಊರ ಹೊರಗಡೆ ಆಶ್ರಮಗಳಲ್ಲಿ ವಾಸಿಸುತ್ತಿದ್ದರು. ಅಲ್ಲಿ ಅವರ ಜೊತೆ ಅವರ ಹೆಂಡತಿ-ಮಕ್ಕಳು ಕೂಡ ವಾಸ ಆಗಿರುತ್ತಿದ್ದರು. ಅವರುಗಳು ತಮ್ಮ ದೇಶದ ರಾಜನಿಗೆ ಉಪದೇಶ ಮಾಡುವುದು, ಅವನ ಮಕ್ಕಳ ವಿದ್ಯಾಭ್ಯಾಸದ ಹೊಣೆ ಹೊರುವುದು ಇತ್ಯಾದಿ ಕೆಲಸಗಳಿಗೆ ನೆರವಾಗುತ್ತಿದ್ದರು. ಹಾಗೆಯೇ ಅವರಿಗೆ ತೊಂದರೆ ಕೊಟ್ಟವರಿಗೆ ಶಾಪ ಕೊಟ್ಟ ಉದಾಹರಣೆಗಳು ಏನೂ ಕಡಿಮೆ ಇಲ್ಲ. ಎಷ್ಟು ದೊಡ್ಡ ಋಷಿಯೊ, ಶಾಪ ಕೂಡ ಅಷ್ಟೇ ದೊಡ್ಡದಾಗಿರುತ್ತಿತ್ತು.


ಬುದ್ಧನ ಚಿತ್ರಗಳು ಅವನಿಗೆ ಮೀಸೆ-ಗಡ್ಡ ಇರುವುದು ತೋರಿಸಲಿಲ್ಲ.ಅವನು ಮೂರ್ತಿ ಪೂಜೆಯ ವಿರೋಧಿ ಆಗಿದ್ದ. ಅವನು ಹೆಂಡತಿ-ಮಕ್ಕಳನ್ನು ಬಿಟ್ಟು ಬಂದಿದ್ದ. ಅವನು ಒಂದು ಸ್ಥಳದಲ್ಲಿ ವಾಸ ಮಾಡದೆ ಅಲೆಮಾರಿಯಾಗಿದ್ದ. ಅವನು ರಾಜ ಮತ್ತು ಸಾಮಾನ್ಯರ ನಡುವೆ ಭೇಧ-ಭಾವ  ತೋರಿಸಲಿಲ್ಲ. ಅವನು ವೇದಾಭ್ಯಾಸ ಮಾಡಲಿಲ್ಲ. ದೇವರನ್ನು ನಂಬು ಎಂದು ಹೇಳಲಿಲ್ಲ. ಬದಲಿಗೆ ನಮ್ಮ ಆಸೆಗಳಿಗೆ ನಮ್ಮನ್ನೇ ಹೊಣೆಗಾರರನ್ನಾಗಿ ಮಾಡಿದ. ಅವನು ಸಿಟ್ಟಾದ ಅಥವಾ ಶಾಪ ಕೊಟ್ಟ ಉದಾಹರಣೆಗಳೇ ಇರಲಿಲ್ಲ. ಬುದ್ಧ ಗುರುವಿನ ಬಳಿ ಕಲಿತು ಜ್ಞಾನಿ ಆಗಲಿಲ್ಲ ಮತ್ತು ಜ್ಞಾನದ ಬಗ್ಗೆ ಭೋದಿಸಲಿಲ್ಲ. ಆದರೆ ಅವನು ಸ್ವಂತ ಅನುಭವದ ಜ್ಞಾನಿಯಾಗಿದ್ದ. ಅದನ್ನೇ ಸರಳ ಮಾತುಗಳಲ್ಲಿ ಹೇಳಿದ.


ಬುದ್ಧ ಯಾವ ಅವಮಾನಕ್ಕೂ ಸ್ಪಂದಿಸಲಿಲ್ಲ. ಅವನು ಕ್ಷಮಿಸಿದನೋ ಅಥವಾ ನಿರ್ಲಕ್ಷ್ಯ ಮಾಡಿದನೋ ಕೂಡ ಯಾರಿಗೂ ತಿಳಿಯಲಿಲ್ಲ.