Sunday, September 26, 2021

ಬದುಕು ಕರೆದೊಯ್ದ ಕಡೆಗೆ ಹೋದೆ ನಾನು

 ಹಿಂದಿಯ 'ಹಮ್ ದೋನೋ' ಚಿತ್ರದ ಒಂದು ಹಾಡು 'ಮೈ ಜಿಂದಗಿ ಕಾ ಸಾಥ್ ನಿಭಾತಾ ಚಲಾ ಗಯಾ'. ಈ ಹಾಡನ್ನು ಒಬ್ಬ ಉಪೇಕ್ಷೆಯ ವ್ಯಕ್ತಿ ಹಾಡುವ ಹಾಡಿನಂತೆ ಚಿತ್ರೀಕರಿಸಲಾಗಿದೆ. ಆದರೆ ಲೌಕಿಕದಲ್ಲಿ ಎಲ್ಲವನ್ನು ನಿರ್ಲಕ್ಷಿಸುವುದನ್ನೇ ಅಧ್ಯಾತ್ಮ ಕೂಡ ಹೇಳಿಕೊಡುತ್ತದೆ. ಆದ್ದರಿಂದ ಅದನ್ನು ಯಾವ ತರಹ ಬೇಕಾದರೂ ಸ್ವೀಕರಿಸಬಹುದು. ಸಾಹಿರ್ ಲುಧಿಯಾನ್ವಿ ರಚಿಸಿದ, ಮೊಹಮ್ಮದ್ ರಫಿ ಹಾಡಿದ ಈ ಹಾಡು ಇಷ್ಟವಾಯಿತು.  


https://www.youtube.com/watch?v=ZwDvIZA-H9A


ಎಲ್ಲ ಹಾಡುಗಳನ್ನು ಯಥಾವತ್ತಾಗಿ ಭಾಷಾಂತರ ಮಾಡಲು ಎಲ್ಲಿ ಸಾಧ್ಯ? ಆದರೆ ಅರ್ಥವನ್ನು ಕಟ್ಟಿಕೊಡುವ ಪ್ರಯತ್ನ ಇಲ್ಲಿದೆ.


ಬದುಕು ಕರೆದೊಯ್ದ ಕಡೆಗೆ ಹೋದೆ ನಾನು

ನನ್ನೆಲ್ಲ ಚಿಂತೆಗಳನ್ನು ಹೊಗೆಯ ಹಾಗೆ ತೇಲಿ ಬಿಟ್ಟೆ


ವಿನಾಶದ ಬಗ್ಗೆ ಕೊರಗುವುದಲ್ಲಿ ಏನಿದೆ ಅರ್ಥ?

ಅದಕ್ಕೆ ನನ್ನ ವಿನಾಶವನ್ನೇ ಮೆರೆಸತೊಡಗಿದೆ


ಸಿಕ್ಕಿದ್ದೇ ನನ್ನ ದೈವ ಎಂದುಕೊಂಡೆ

ಕಳೆದು ಹೋದದ್ದನ್ನು ನಾನು ಮರೆತುಬಿಟ್ಟೆ


ಸುಖ-ದುಃಖದ ನಡುವೆ ಭೇದವನ್ನೇ ಕಾಣದ

ಸ್ಥಿತಿಗೆ ಹೃದಯವನ್ನು ತಳ್ಳಿಕೊಂಡು ಬಂದೆ


ಬದುಕು ಕರೆದೊಯ್ದ ಕಡೆಗೆ ಹೋದೆ ನಾನು

ನನ್ನೆಲ್ಲ ಚಿಂತೆಗಳನ್ನು ಹೊಗೆಯ ಹಾಗೆ ತೇಲಿ ಬಿಟ್ಟೆ

Saturday, September 25, 2021

ಮುಸ್ಸಲೋನಿ ಎಂಬ ಸರ್ವಾಧಿಕಾರಿ - ಭಾಗ ೨

(ಫ್ರಾಂಕ್ ಡಿಕೊಟ್ಟೆರ್ ಬರೆದ 'How to be a dictator' ಪುಸ್ತಕದ 'ಮುಸ್ಸಲೋನಿ' ಅಧ್ಯಾಯದ ಆಯ್ದ ಭಾಗದ ಭಾವಾನುವಾದ)


೧೯೩೦ ರ ಹೊತ್ತಿಗೆ ಜನಪ್ರಿಯತೆಯ ತುತ್ತ ತುದಿಯಲ್ಲಿದ್ದ ಮುಸ್ಸಲೋನಿ. ಅವನು ಹೋದ ಕಡೆಯೆಲ್ಲ ಜನ ಸಾಗರ ಮತ್ತು ಚಪ್ಪಾಳೆಗಳ ಸುರಿಮಳೆ. ಅಲ್ಲೊಬ್ಬರು, ಇಲ್ಲೊಬ್ಬರು ಮುಸ್ಸಲೋನಿ ಕಟ್ಟಿದ ಪಕ್ಷವನ್ನು ಟೀಕೆ, ವಿಮರ್ಶೆ ಮಾಡುವವರು ಇದ್ದರೂ ಮುಸ್ಸಲೋನಿಯನ್ನು ಟೀಕೆ ಮಾಡುವವರು ಮಾತ್ರ ಸಮಾಜದ ಹೊರ ನೋಟಕ್ಕೆ ಕಾಣುತ್ತಿರಲಿಲ್ಲ. ಏಕೆಂದರೆ ಮುಸ್ಸಲೋನಿ ಅವರಿಗೆಲ್ಲ ಆರಾಧ್ಯ ದೈವ ಆಗಿಬಿಟ್ಟಿದ್ದ. ಅವನಲ್ಲಿ ಏನು ತಪ್ಪು ಹುಡುಕುವುದು?

ಮುಸ್ಸಲೋನಿ ಮತ್ತು ಅವನ ಪಕ್ಷ ಬಿಟ್ಟರೆ ಜನರಿಗೆ ಬೇರೆ ಆಯ್ಕೆಯೇ ಇರಲಿಲ್ಲ. ಮೊದಲಿಗೆ ಮಂತ್ರಮುಗ್ಧರಾಗಿ ಮುಸ್ಸಲೋನಿಯ ಭಾಷಣ ಕೇಳುತ್ತಿದ್ದ ಜನರಿಗೆ ಕ್ರಮೇಣ ಮುಸ್ಸಲೋನಿಯ ನಿಜಮುಖದ ಗೋಚರವಾಗತೊಡಗಿತು. ಅವನೊಬ್ಬ ಅದ್ಭುತ ನಟ ಮತ್ತು ಅವನು ಹಿಂಬಾಲಕರು  ನಾಟಕದ ಇತರ ಪಾತ್ರಧಾರಿಗಳು ಎನ್ನುವ ಅರಿವು ಬರತೊಡಗಿತು. ಬಹಿರಂಗವಾಗಿ ವಿರೋಧಿಸಿದರೆ ಕಠಿಣ ಶಿಕ್ಷೆಗಳಿದ್ದವಲ್ಲ. ಹೀಗಾಗಿ ಹೊರಗೆ ಏನು ಮಾತನಾಡದೆ ಇದ್ದರೂ ತಮ್ಮ ತಮ್ಮ ಜನರೊಡನೆ ಇದ್ದಾಗ M for Mussolini ಅಲ್ಲ ಅದು M for Misery ಎಂದು ನಗೆಯಾಡತೊಡಗಿದರು. ತನ್ನ ಜನಪ್ರಿಯತೆ ಕುಗ್ಗುತ್ತಿರುವುದರ ಸುಳಿವನ್ನು ರಹಸ್ಯ ಏಜೆಂಟ ರಿಂದ ಪಡೆದ ಮುಸ್ಸಲೋನಿ, ಜನರ ಗಮನ ಬೇರೆ ಕಡೆ ಹರಿಸಲು ಹೊಸ ಯೋಜನೆಯೊಂದನ್ನು ಹೆಣೆದ. ಅದು ಪಕ್ಕದ ದೇಶವಾದ ಗ್ರೀಸ್ ಮೇಲೆ ಧಾಳಿ ನಡೆಸುವುದು. ಆದರೆ ಮುಸ್ಸಲೋನಿಯ ದುರಾದೃಷ್ಟಕ್ಕೆ ಅವನ ಸೈನಿಕರು ಪ್ರತಿಕೂಲ ಪರಿಸ್ಥಿತಿಯಿಂದ ಮರಳಿ ಬಂದರು. ತನ್ನ ಸ್ನೇಹಿತ ಹಿಟ್ಲರ್ ನ ಸಹಾಯ ಕೋರಿದ ಮುಸ್ಸಲೋನಿ, ಗ್ರೀಸ್ ದೇಶವನ್ನು ಆಕ್ರಮಿಸಿಕೊಳ್ಳುವಲ್ಲಿ ಸಫಲನಾದ. ಆದರೆ ಹಿಟ್ಲರ್ ನ ಸೈನಿಕರು ಅಲ್ಲಿ ತಮ್ಮ ಅಧಿಪತ್ಯ ಸಾಧಿಸಿ ಮುಸ್ಸಲೋನಿ ಯನ್ನು ಮೂಲೆಗುಂಪು ಮಾಡಿಬಿಟ್ಟರು. ಒಂದು ಕಾಲದ ಸರ್ವಾಧಿಕಾರಿ ಮುಸ್ಸಲೋನಿ ಸುಮ್ಮನೆ ಶಬ್ದ ಮಾಡುವ ಖಾಲಿ ಪಾತ್ರೆಯಾದ. 

ಇಟಲಿ ದೇಶದ ಜನರು ತಮ್ಮ ನಾಯಕನ ಮಾತುಗಳನ್ನು ನಂಬದೆ ನಿಜ ಸುದ್ದಿ ತಿಳಿಯಲು ಬ್ರಿಟಿಷ್ ದೇಶದ ರೇಡಿಯೋ ಸ್ಟೇಷನ್ ಗಳಿಂದ ಸುದ್ದಿ ಕೇಳತೊಡಗಿದದರು. ಇತ್ತ ಆಫ್ರಿಕಾ ದೇಶಗಳ ಕಡೆ ಆಕ್ರಮಣಕ್ಕೆ ಹೋಗಿದ್ದ ಮುಸ್ಸಲೋನಿಯ ಸೇನೆ ಸೋತು ಸುಣ್ಣವಾಯಿತು. ಒಂದು ಕಾಲದಲ್ಲಿ 'ಅತಿ ಹೆಚ್ಚು ಫೋಟೋ ತೆಗೆಸಿಕೊಂಡ ವ್ಯಕ್ತಿ' ಎಂದು ಪ್ರಸಿದ್ಧಿ ಪಡೆದಿದ್ದ ಮುಸ್ಸಲೋನಿಯ ಚಿತ್ರಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗದೆ ತಿಂಗಳುಗಳು ಸವೆದವು. ಸ್ವತಃ ಮುಸ್ಸಲೋನಿ ತನ್ನ ಭಾಷಣಗಳನ್ನು ನಿಲ್ಲಿಸಿಬಿಟ್ಟ. ಅವನು ಬದುಕಿದ್ದಾನೋ, ಇಲ್ಲವೋ ಎಂದು ಅನುಮಾನ ಪಡುವಷ್ಟರ ಮಟ್ಟಿಗೆ ಅವನಿಂದ ಯಾವುದೇ ಸುದ್ದಿ ಬರುವುದು ನಿಂತು ಹೋಯಿತು. 

ಹದಿನೆಂಟು ತಿಂಗಳ ನಂತರ ತನ್ನ ಮೌನ ಮುರಿದು ಮಾತನಾಡಿದ ಮುಸ್ಸಲೋನಿ ಯ ಧ್ವನಿಯಲ್ಲಿ ಯಾವುದೇ ಮಾಂತ್ರಿಕತೆ ಉಳಿದಿರಲಿಲ್ಲ. ಆ ಹೊತ್ತಿಗೆ ಇಟಲಿಯ ದೊಡ್ಡ ಪಟ್ಟಣಗಳ ಮೇಲೆ ಪಕ್ಕದ ದೇಶಗಳ ಧಾಳಿ ನಡೆದಿತ್ತು. ಅದರಿಂದ ಜನರನ್ನು ಉಳಿಸುವ ಶಕ್ತಿ ಮುಸ್ಸಲೋನಿ ಯಲ್ಲಿ ಉಳಿದಿರಲಿಲ್ಲ. ಅವನನ್ನು ಆರಾಧಿಸಿದ ಜನರೇ ಅವನು ಸತ್ತರೆ ಚೆನ್ನ ಎಂದು ಮಾತನಾಡುವಂತೆ ಆಯಿತು. ಇಟಲಿ ದೇಶದ ಜನನಾಯಕರೆಲ್ಲ ಸೇರಿ ಮುಸ್ಸಲೋನಿಯನ್ನು ಕೆಳಗಿಳಿಸುವ ನಿರ್ಧಾರಕ್ಕೆ ಬಂದರು. ಆದರೆ ಮುಸ್ಸಲೋನಿಗೆ ಇನ್ನೂ ಒಬ್ಬ ಸ್ನೇಹಿತ ಉಳಿದೆ ಇದ್ದ. ಅವನು ಹಿಟ್ಲರ್. ಅವನ ಸಹಾಯದಿಂದ ತನ್ನ ಕೆಲವು ವೈರಿಗಳನ್ನು ಮುಸ್ಸಲೋನಿ ಮುಗಿಸಿದರೂ, ಅವನ ಕಾಲ ಮಿಂಚಿ ಹೋಗಿತ್ತು. ಅವನ ವಿರೋಧಿಗಳು ಮುಸ್ಸಲೋನಿಯನ್ನು ಮತ್ತು ಅವನ ಹಿಂಬಾಲಕರನ್ನು ಶೂಟ್ ಮಾಡಿ ಸಾಯಿಸಿ, ಮಿಲಾನ್ ನಗರದಲ್ಲಿ ತಲೆ ಕೆಳಗೆ, ಕಾಲು ಮೇಲೆ ಮಾಡಿ ಜನರ ವೀಕ್ಷಣೆಗೆಂದು ನೇತು ಹಾಕಿದರು. ಅದಕ್ಕೆ ಮೊದಲೇ ಮುಸ್ಸಲೋನಿ ತನ್ನ ಆಪ್ತರಲ್ಲಿ ತನ್ನ ನಟನೆ ಮುಗಿದಿರುವುದಾಗಿ ಮತ್ತು ತಾನು ಜೀವಂತ ಶವ ಅಷ್ಟೇ ಎಂದು ಹೇಳಿಕೊಂಡಿದ್ದ.

ಮುಸ್ಸಲೋನಿ ಎಂಬ ಸರ್ವಾಧಿಕಾರಿ

(ಫ್ರಾಂಕ್ ಡಿಕೊಟ್ಟೆರ್ ಬರೆದ 'How to be a dictator' ಪುಸ್ತಕದ 'ಮುಸ್ಸಲೋನಿ' ಅಧ್ಯಾಯದ ಆಯ್ದ ಭಾಗದ ಭಾವಾನುವಾದ)

 

ಮುಸ್ಸಲೋನಿ ಜನ ಸಾಮಾನ್ಯರನ್ನು ತನ್ನ ಮೋಡಿಗೆ ಒಳಪಡಿಸಲು ಉತ್ಸುಕನಾಗಿದ್ದ. ಅದಕ್ಕಾಗಿ ಅವನು ದೇಶಾದ್ಯಂತ ಪ್ರವಾಸ ಕೈಗೊಂಡ. ಕಾರ್ಯಕರ್ತರ ಸಾಮೂಹಿಕ ಸಭೆಗಳು, ಸರ್ಕಾರೀ ಕೆಲಸಗಳ ಉದ್ಘಾಟನೆಗಳು ಹೀಗೆ ಯಾವುದೇ ಅವಕಾಶ ಇರಲಿ, ಅವುಗಳ ಮೂಲಕ ನೂರಾರು ಪಟ್ಟಣ, ಹಳ್ಳಿಗಳಲ್ಲಿ ಅವನು ಚಿರಪರಿಚಿತನಾಗಿ ಹೋದ. ತನ್ನ ಓಡಾಟಕ್ಕೆಂದೇ ಒಂದು ರೈಲನ್ನು ನಿಯಮಿಸಿಕೊಂಡ. ಮಾರ್ಗ ಮದ್ಯದಲ್ಲಿ ಜನಸಂದಣಿ ಎಲ್ಲೆಲ್ಲಿ ಇರುತ್ತಿತ್ತೋ, ಅಲ್ಲಿ ಅವನಿದ್ದ ರೈಲು ನಿಧಾನವಾಗಿ ಚಲಿಸುತ್ತಿತ್ತು. ಅವನು ಕಿಟಕಿಯಲ್ಲಿ ನಿಂತು ಕೈ ಬೀಸುತ್ತ ಜನರ ಕಣ್ಣಿಗೆ ತಾನು ಬಿದ್ದಿದ್ದೇನೆ ಎನ್ನುವುದನ್ನು ಖಚಿತಗೊಳಿಸಿಕೊಳ್ಳುತ್ತಿದ್ದ. ಮೊದಲಿಗೆ ಯಾವುದು ರಾಜಕೀಯ ಅವಶ್ಯಕತೆಯಾಗಿತ್ತೋ ಅದು ಕಾಲ ಕ್ರಮೇಣ ಒಂದು ಗೀಳಾಗಿ ಮಾರ್ಪಟ್ಟಿತ್ತು.

 

ತನ್ನ ನಂಬಿಕಸ್ಥರಿಗೆ ಕೆಲವು ಕೆಲಸಗಳ ಜವಾಬ್ದಾರಿ ವಹಿಸಿದ. ಅದರಲ್ಲಿ ಮೊದಲನೆಯದು, ತನ್ನ ಅವಶ್ಯಕತೆ ಎಷ್ಟು ಇದೆ ಎಂದು ಜನರಿಗೆ ಮಾಧ್ಯಮಗಳ ಮೂಲಕ ತೋರಿಸುವುದು, ಅದಕ್ಕೆ ನೆರವಾದ ಸಂಸ್ಥೆಗಳಿಗೆ ಅನುಕೂಲ ಮಾಡಿಕೊಡುವುದು, ಸಹಾಯ ಮಾಡದವರನ್ನು ತನ್ನ ಕಪಿ ಮುಷ್ಟಿಯಲ್ಲಿ ಹಿಚುಕಿ ಹಾಕುವುದು. ಎರಡನೆಯದು, ತನ್ನ ರಾಜಕೀಯ ವೈರಿಗಳನ್ನು ಒಬ್ಬೊಬ್ಬರನ್ನಾಗಿ ನಿರ್ಮೂಲ ಮಾಡುವುದು. ಇವೆಲ್ಲದರ ನಡುವೆ ಮುಸ್ಸೊಲೊನಿ ಜನರ ಮಧ್ಯೆ ಆವೇಶದಿಂದ ಭಾಷಣ ಮಾಡುತ್ತಿದ್ದ. ಜನರ ಮನಸ್ಸಿನಿಂದ ತಾನು ಕಣ್ಮರೆಯಾಗದಂತೆ, ಅವರಿಗೆ ಉಳಿದಿರುವ ಕೊನೆಯ ಆಶಾಕಿರಣ, ಭರವಸೆ ತಾನೊಬ್ಬನೇ ಎನ್ನುವ ಸಂದೇಶ ಪರೋಕ್ಷವಾಗಿ ನೀಡಲು ಮರೆಯುತ್ತಿರಲ್ಲ. ಪಕ್ಷದ, ಸರಕಾರದ ಎಲ್ಲ ಕಾರ್ಯಗಳು ಅವನ ಹತೋಟಿಗೆ ಬರಲು ಬಹಳ ಸಮಯ ಏನೂ ತಗುಲಲಿಲ್ಲ. ಆಮೇಲಿಂದ ಅವನ ಮಾತೇ ಅಂತಿಮ ಆಗಿ ಹೋಯಿತು. ಎಲ್ಲ ಊರಿನ, ಎಲ್ಲ ಜನ ಸಂಪರ್ಕ ಸ್ಥಳಗಳಲ್ಲಿ ಅವನ ಫೋಟೋಗಳು ರಾರಾಜಿಸತೊಡಗಿದವು. ಮಾಧ್ಯಮಗಳು ಅವನನ್ನು ಹೊಗಳಿ ಪುಟಗಟ್ಟಲೆ ಬರೆದವು. ಅವನ ಜೀವನ ಚರಿತ್ರೆಯ ಪುಸ್ತಕಗಳು ಒಂದಾದರ ನಂತರ ಇನ್ನೊಂದರಂತೆ ಬಿಡುಗಡೆಯಾದವು. ಅಂತರರಾಷ್ಟ್ರೀಯ ಗಣ್ಯ ವ್ಯಕ್ತಿಗಳೆಲ್ಲ ಅವನಿಗೆ ಭೇಟಿಯ ಗೌರವ ಕೊಡಲು ಬಂದರು. ಅವನ ಜೊತೆ ಕಳೆದ ಕೆಲವೇ ಕ್ಷಣಗಳಿಗೆ, ಅವನದು ಸೂಜಿಗಲ್ಲಿನ ವ್ಯಕ್ತಿತ್ವ ಎಂದು ಹೊಗಳಿದರು.

 

ಹೊರಗಿನ ಶತ್ರುಗಳು ಇಲ್ಲವಾದ ಮೇಲೆ, ತನ್ನದೇ ಪಕ್ಷದಲ್ಲಿ ತನಗೆ ಯಾವುದೇ ಉತ್ತರಾಧಿಕಾರಿ ಹುಟ್ಟದಂತೆ ನೋಡಿಕೊಳ್ಳುವುದನ್ನು ಮುಸ್ಸಲೋನಿ ಮರೆಯಲಿಲ್ಲ. ಯಾರಾದರೂ ತನಗಿಂತ ಜನಮನ್ನಣೆ ಪಡೆದರೆ ಸಾಕು ಅವರನ್ನು ಆ ಜಾಗದಿಂದ ಕೆಳಗಿಳಿಸಿ, ಅಲ್ಲಿ ಒಬ್ಬ ಅನಾಮಿಕನನ್ನು ತಂದು ಕೂರಿಸುತ್ತಿದ್ದ. ಅವನಿಗೆ ಸ್ವಾಮಿ ನಿಷ್ಠೆ ತೋರಿಸದವರೆಲ್ಲ ಮೂಲೆ ಗುಂಪಾಗಿ ಹೋದರು. ಪಕ್ಷದ, ದೇಶದ, ಜನ ಹಿತದ ಧ್ಯೇಯಗಳೆಲ್ಲ ಬದಲಾಗಿ 'ಮುಸ್ಸಲೋನಿ ಎಲ್ಲ ವಿಷಯದಲ್ಲೂ ಸರಿ' ಎನ್ನುವುದೇ ವೇದವಾಕ್ಯವಾಗಿ ಹೋಯಿತು. ಅವನೀಗ ತನ್ನ ಭಾಷಣಗಳನ್ನು ರೇಡಿಯೋದಲ್ಲಿ ಪ್ರಸಾರ ಮಾಡಿ ಇಡೀ ಇಟಲಿ ದೇಶ ಒಂದೇ ಸಲಕ್ಕೆ ತನ್ನ ಮಾತು ಕೇಳುವಂತೆ ಮಾಡಿಕೊಂಡ. ಜನ ನಿಬಿಡ ಸ್ಥಳಗಳಲ್ಲಿ ಬೃಹತ್ ಸ್ಪೀಕರ್ ಗಳು ಅವನ ಭಾಷಣವನ್ನು ಬಿತ್ತರಿಸತೊಡಗಿದವು.


ಅವನು ಸಾರ್ವಜನಿಕವಾಗಿ ಯಾವುದಾದರೂ ಊರಲ್ಲಿ ಭಾಷಣ ಮಾಡುವುದು ಇತ್ತೆಂದರೆ, ಅಂದು ಅಲ್ಲಿ ಶಾಲೆಗಳಿಗೆ, ಅಂಗಡಿ-ಮುಗ್ಗಟ್ಟುಗಳಿಗೆ ರಜೆ ಘೋಷಿಸಲಾಗುತ್ತಿತ್ತು. ಅವನ ಭಾಷಣ ಕೇಳುವುದು ಎಲ್ಲರಿಗೂ ಕಡ್ಡಾಯವಾಗಿತ್ತು. ಅವನು ಭಾಷಣ ಮಾಡುವ ವೇದಿಕೆಯಲ್ಲಿ ಅವನು ಪ್ರಕಾಶಮಾನವಾಗಿ ಕಾಣುವಂತೆ ದೀಪಗಳಿಂದ ಸಜ್ಜುಗೊಳಿಸಲಾಗುತ್ತಿತ್ತು. ಅಲ್ಲಿ ಸೇರಿದ ಜನ ಸಮೂಹ ಅವನ ಹೆಸರನ್ನೇ ಜಪಿಸುವಂತೆ ಹಿನ್ನೆಲೆ ಸಂಗೀತ ನೀಡಲಾಗುತ್ತಿತ್ತು. ಜನರ ಉನ್ಮಾದ ತಾರಕಕ್ಕೇರಿದ ಮೇಲೆ ಮುಸ್ಸಲೋನಿ ವೇದಿಕೆಯ  ಮೇಲೆ ಪ್ರತ್ಯಕ್ಷನಾಗಿ ಅವರ ಹುಚ್ಚನ್ನು ಇನ್ನು ಅಧಿಕಗೊಳಿಸುತ್ತಿದ್ದ.

Thursday, September 23, 2021

ಕ್ಯಾನ್ಸರ್ ಆದವರ ಮುಂದೆ ನೆಗಡಿ ಎಂಥ ದೊಡ್ಡ ರೋಗ ಎಂದು ಹೇಳುವವರಿಗೆ

ನೀವು ಹಳೇ ಚಿತ್ರಗಳನ್ನು ನೋಡುತ್ತೀರಾ? ನನಗೆ ಭೂತಕಾಲ ಕಾಡಿದಷ್ಟು, ವರ್ತಮಾನ, ಭವಿಷ್ಯ ಕಾಡುವುದಿಲ್ಲ. ಹಾಗಾಗಿ ಟಿ.ವಿ.ಯಲ್ಲಿ ಬರುವ ಹಳೆಯ ಚಿತ್ರಗಳನ್ನು ಆಗಾಗ ನೋಡುತ್ತಿರುತ್ತೇನೆ. ೧೯೭೨ರಲ್ಲಿ ಬಿಡುಗಡೆಯಾದ 'ಬಂಗಾರದ ಮನುಷ್ಯ' ಚಿತ್ರ ಯಾರಿಗೆ ಗೊತ್ತಿಲ್ಲ? ಅದರಲ್ಲಿ ಒಂದು ಸನ್ನಿವೇಶದಲ್ಲಿ ರಾಜಕುಮಾರ್ ತಮ್ಮ ಅಕ್ಕನ ಮಗನಿಗೆ ಬರುವ ೬೦೦ ರೂಪಾಯಿ ಸಂಬಳ ಕುಟುಂಬ ನಿರ್ವಹಣೆಗೆ ಸಾಕಾಗುದಿಲ್ಲವೇ ಎಂದು ದಬಾಯಿಸುತ್ತಾರೆ. ಆ ಕಾಲ ಹಾಗಿತ್ತೇನೋ? ಅದಾಗಿ ೧೫ ವರುಷ ಕಳೆದಿರಲಿಲ್ಲ. ೧೯೮೬ ರಲ್ಲಿ ತೆರೆ ಕಂಡ 'ಭಾಗ್ಯದ ಲಕ್ಷ್ಮಿ ಬಾರಮ್ಮ' ಚಿತ್ರದಲ್ಲಿ, ಅದೇ ರಾಜಕುಮಾರ್, ಸ್ಪರ್ಧೆಯಲ್ಲಿ ಗೆದ್ದರೆ ಸಿಗುವ ೧೦,೦೦೦ ಸಾವಿರ ರೂಪಾಯಿಗಾಗಿ ಸಾವಿರ ಸುಳ್ಳು ಹೇಳುವ ಹಾಸ್ಯಮಯ ಪಾತ್ರವನ್ನು ನಿಭಾಯಿಸುತ್ತಾರೆ. ಕೆಲವು ನೂರು ಅಥವಾ ಕೆಲವು ಸಾವಿರ ರೂಪಾಯಿಗೆ ಎಷ್ಟೊಂದು ಬೆಲೆಯಿತ್ತಲ್ಲವೇ? ದುಡ್ಡಿಗಿದ್ದ ಆ ಬೆಲೆ, ಹೋಟೆಲಿನ ಗಾಜುಗಳನ್ನು ಒಡೆದು, ಸಾವಿರಾರು ರೂಪಾಯಿ ಖರ್ಚು ಮಾಡುವ 'ಅಂಜದ ಗಂಡು' ಚಿತ್ರದ ರವಿಚಂದ್ರನ್ ಅವರ ಪಾತ್ರದಲ್ಲಿ ಕಾಣುವುದಿಲ್ಲ. ಅದೇಕೆ ಎನ್ನುವುದು ಸುಲಭ. ಆ ಚಿತ್ರದ ನಾಯಕನಿಗೆ ಬಡತನ ಎಂದರೆ ಏನು ಎಂದರೆ ಗೊತ್ತಿರುವುದಿಲ್ಲ ಅಷ್ಟೇ. ನಿಜ ಕಷ್ಟಗಳನ್ನು ನೋಡದ ಮನುಷ್ಯರು ಸಣ್ಣ ಪುಟ್ಟ ಸಮಸ್ಯೆಗಳನ್ನು ಕೂಡ ದೊಡ್ಡದೇ ಎಂದುಕೊಳ್ಳುತ್ತಾರೆ.


ನಾನು ಬೆಂಗಳೂರಿಗೆ ಬಂದದ್ದು ೧೯೯೯ ರಲ್ಲಿ. ವಾಪಸ್ಸು ಊರಿಗೆ ಹೋಗುವುದಿಲ್ಲ ಮತ್ತು ಮನೆಯಲ್ಲಿ ಯಾವುದೇ ಕಾರಣಕ್ಕೆ ದುಡ್ಡು ಕೇಳುವುದಿಲ್ಲ ಎನ್ನುವ ಧೃಢ ನಿರ್ಧಾರದಿಂದ ಬೆಂಗಳೂರಿಗೆ ಬಂದಿದ್ದ ನನಗೆ, ಬಂದ ಮೂರೇ ದಿನಕ್ಕೆ ಕೆಲಸ ಸಿಕ್ಕಿತ್ತು. ಭರ್ತಿ ೨,೫೦೦ ರೂಪಾಯಿ ಸಂಬಳ. ತಿಂಗಳ ಕೊನೆಗೆ ೨೦೦-೩೦೦ ರೂಪಾಯಿ ಉಳಿದರೆ ಅದೇ ಹೆಚ್ಚು. ಅದನ್ನೇ ಪೂರ್ತಿ ಒಂದು ವರುಷ ಉಳಿಸಿ, ಅದರಲ್ಲಿ ಒಂದು ಚಿಕ್ಕ ಟಿ.ವಿ. ಖರೀದಿಸುವ ಆಸೆಯಿಂದ ಮಾರುಕಟ್ಟೆಗೆ ಹೋದರೆ ನನ್ನಲ್ಲಿ ಇದ್ದ ಹಣಕ್ಕೆ ಖರೀದಿಸಲು ಸಾಧ್ಯವಾಗಿದ್ದು ಒಂದು ಟೇಪ್ ರೆಕಾರ್ಡರ್ ಮಾತ್ರ. ಅದು ನನ್ನ ಹಲವಾರು ವರುಷಗಳ ಸಂಗಾತಿಯಾಗಿತ್ತು. ಅದಾಗಿ ಇಪ್ಪತ್ತು ವರುಷ ನಂತರದ ಇಂದಿನ ವರ್ತಮಾನಕ್ಕೆ ಬಂದರೆ, ನನ್ನ ಮಗ ತನಗೆ ಆಟ ಆಡಲು ಎರಡು ಸಾವಿರ ರೂಪಾಯಿ ಬೆಲೆಯ ಆಟಿಕೆ ಸಾಮಾನು ಕೇಳುತ್ತಿದ್ದ. ಹಿಂದೆ ನನಗೆ ಅಷ್ಟು ಹಣ ಉಳಿಸಲು ಪೂರ್ತಿ ಒಂದು ವರುಷ ಬೇಕಾಗಿತ್ತು ಎನ್ನುವ ವಿಷಯ ನಾನು ಅವನಿಗೆ ತಿಳಿಸುವುದು ಸಾಧ್ಯವೇ? ನೂರು ರೂಪಾಯಿ ಬಿಡಿ, ಸಾವಿರ ರೂಪಾಯಿಗೆ ಏನು ಬೆಲೆ ಎಂದು ಕೂಡ ಅವನಿಗೆ ತಿಳಿಸುವುದು ಕಷ್ಟ.


ಈ ಬೆಲೆಯ ಮಹತ್ವ ಬರಿ ದುಡ್ಡಿನ ವಿಚಾರಕ್ಕೆ ಮಾತ್ರ ನಿಲ್ಲುವುದಿಲ್ಲ. ಅದು ಬದುಕಿನ ಇತರ ವಿಷಯಗಳಿಗೂ ಅನ್ವಯಿಸುತ್ತದೆ. ತೆಲುಗು ಚಿತ್ರರಂಗದ ಸಮಂತಾ ಎನ್ನುವ ನಟಿ ಇಂದು ತನ್ನ ಮದುವೆಯನ್ನು ಕೊನೆಗೊಳ್ಳಿಸುವ ವಿಚಾರ ಸುದ್ದಿ ಮಾಧ್ಯಮಗಳಲ್ಲಿ ಬರುತ್ತಿದೆಯಲ್ಲ. ಅವಳಿಗೆ ಇರುವ ಸೌಂದರ್ಯ, ಕುರೂಪದಿಂದ ಮದುವೆಯಾಗದೆ ಹಾಗೆಯೆ ಉಳಿದು ಹೋದ ಹುಡುಗಿಗೆ, ಅಥವಾ ಮುಖದ ಮೇಲೆ ಆಸಿಡ್ ಸುರಿಸಿಕೊಂಡ ನತದೃಷ್ಟರಿಗೆ ಇದ್ದರೆ ಹೇಗಿರುತ್ತಿತ್ತು? ಸಮಂತಾಗಿರುವ ಅಭಿನಯ ಪ್ರತಿಭೆ, ಹಿಂದೆ ಕನ್ನಡ ಚಿತ್ರರಂಗವನ್ನಾಳಿದ ಜಯಂತಿ, ಕಲ್ಪನಾರಿಗೆ ಕೂಡ ಇತ್ತಲ್ಲ. ಅವರಿಗೆ ವೈವಾಹಿಕ ಜೀವನ ಬೇಕು ಎಂದು ಎಷ್ಟು ಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ. ನಟಿ ಸಮಂತಾರಿಗೆ ಅವರದೇ ಆದ ವೈಯಕ್ತಿಕ ಕಾರಣಗಳು ಇರಬಹುದು. ಹಾಗೆಯೇ ಅವರ ಜೀವನ ಅವರ ವೈಯಕ್ತಿಕ ವಿಚಾರ. ಆದರೆ ಅವರ ಸಮಸ್ಯೆಗಳು ದುಃಖವನ್ನೇ ನೋಡದ ಮನುಷ್ಯರ ಕಸಿವಿಸಿಯಂತಹವು ಎನ್ನುವುದು ಮಾತ್ರ ನನ್ನ ಅಭಿಪ್ರಾಯ. ಅವರು ಬೇರೆ ಮದುವೆಯಾದರೂ ಅಥವಾ ಹಾಗೆ ಉಳಿದರೂ ಅವರ ವೈಯಕ್ತಿಕ ಜೀವನ ಈಗಿರುವುದಕ್ಕಿಂತ ಉತ್ತಮ ಆಗಲು ಸಾಧ್ಯವೇ ಎನ್ನುವುದು ಸಾಮಾನ್ಯರ ವಿಚಾರಕ್ಕೂ ನಿಲುಕುವಂತಹದ್ದು.


ಎಲ್ಲರಿಗೂ ಅವರದೇ ಆದ ಸಮಸ್ಯೆಗಳಿವೆ. ಆದರೆ ಅವುಗಳು ದೊಡ್ಡ ಸಮಸ್ಯೆ ಹೌದೋ ಅಲ್ಲವೋ ಎಂದು ಅರಿವಾಗಲು ಸಾಕಷ್ಟು ಜನರಿಗೆ ಜೀವನ ಅನುಭವದ ಕೊರತೆ ಇದೆ. ತಮಗೆ ಆಗಿರುವ ನೆಗಡಿ ಎಂತಹ ಭೀಕರದ್ದು ಎಂದು ಅವರು ಕ್ಯಾನ್ಸರ್ ನಿಂದ ಬಳಲುತ್ತಿರುವ ರೋಗಿಯ ಮುಂದೆ ಹೇಳಲು ಹೊರಡುತ್ತಾರೆ. ತಮಗೆ ಕ್ಯಾನ್ಸರ್ ಆದಾಗ ಅವರು ಇನ್ನೇನು ಮಾಡುತ್ತಾರೋ?

Tuesday, September 21, 2021

ರೂಮಿಯ ಸೂಕ್ತಿಗಳು ಮತ್ತು ಕಿರು ಕವಿತೆಗಳ ಅನುವಾದ

ನೀವು ಸಮುದ್ರದ ಹನಿಯಲ್ಲ

ಹನಿಯೊಳಗಿರುವ ಸಮುದ್ರ

--೦--


ನೀವು ಏನನ್ನು ಹುಡುಕುತ್ತಿರುವಿರೋ 

ಅದು ನಿಮ್ಮನ್ನು ಹುಡುಕುತ್ತಿದೆ

--೦--


ಸರಿ-ತಪ್ಪುಗಳ ಆಚೆ ಇದೆ ಒಂದು ಬಯಲು

ನಾನು ನಿಮಗೆ ಅಲ್ಲಿಯೇ ಸಿಗುವೆ


ಆ ಹಸಿರಿನಲ್ಲಿ ಮಲಗಿದಾಗ

ಜಗತ್ತಿನ ಭಾಷೆ, ವಿಚಾರ, ಕಲ್ಪನೆಗಳು

ನಾವು-ನೀವು ಎಲ್ಲವೂ ಅಪ್ರಸ್ತುತ

--೦--


ಮುಂಜಾನೆಯ ತಂಗಾಳಿ

ಬಿಟ್ಟು ಕೊಡಲಿದೆ ಯಾವುದೊ ರಹಸ್ಯ

ಮಲಗಿ ನಿದ್ದೆ ಹೋಗಬೇಡಿ


ನಿಮಗೆ ಏನು ಬೇಕು

ನೀವು ಕೇಳಿಯೇ ಪಡೆಯಬೇಕು

ಮಲಗಿ ನಿದ್ದೆ ಹೋಗಬೇಡಿ


ಎರಡು ಜಗತ್ತುಗಳು ಸಂಧಿಸುವ ಬಾಗಿಲಿನಿಂದ

ಜನ ಒಳಗೆ-ಹೊರಗೆ ಚಲಿಸುತ್ತಲೇ ಇದ್ದಾರೆ


ಬಾಗಿಲು ತೆರೆದೇ ಇದೆ

ಮಲಗಿ ನಿದ್ದೆ ಹೋಗಬೇಡಿ

--೦--


ವಿಚಾರ ಮಾಡಬೇಡಿ

ಕಳೆದು ಹೋಗಬೇಡಿ


ಚಂದ್ರ ನಿಮ್ಮ ಹೃದಯ

ವಿಚಾರಗಳು ಅದರ ಮೇಲಿನ ಮುಸುಕು


ಮುಸುಕು ಸರಿಯಲಿ

ವಿಚಾರಗಳು ನೀರಲ್ಲಿ ಬಿದ್ದು ಹೋಗಲಿ

--೦--


ನಿನ್ನೆ ನಾನು ಮೇಧಾವಿ

ಜಗತ್ತನ್ನೇ ಬದಲಿಸ ಹೊರಟಿದ್ದೆ


ಇಂದು ನಾನು ಬುದ್ದಿವಂತ

ನನ್ನನ್ನು ಮಾತ್ರ ಬದಲಿಸುವೆ

--೦--


ಮಾತು ನದಿ

ಮೌನ ಸಮುದ್ರ


ಹುಡುಕುವುದು ಸಮುದ್ರವಾದರೆ

ನದಿಯಲ್ಲಿ ಕಳೆದು ಹೋಗುವುದೇಕೆ

--೦--

Monday, September 20, 2021

ಹಿರಿ ಮಗ, ಕಿರಿ ಸೊಸೆ ಮತ್ತು ಬಂಗಾರದಂತ ತಮ್ಮ

ಹಿರಿ ಮಗ, ಕಿರಿ ಸೊಸೆ ಆಗಬಾರದು ಎನ್ನುವುದು ಹಳೇ ಕಾಲದ ಗಾದೆ. ಆದರೆ ಆ ಕಾಲ ಈಗೆಲ್ಲಿ? ಹಿರಿ ಮಗ ಜವಾಬ್ದಾರಿ ತೆಗೆದುಕೊಳ್ಳುವುದು ಇರಲಿ, ಒಣ ಅಹಂಕಾರ ತೋರಿಸಿ ಮನೆಯರನ್ನೆಲ್ಲ ದಾರಿ ತಪ್ಪಿಸುವ ಉದಾಹರಣೆಗಳೇ ಹೆಚ್ಚು. ಹಾಗೆಯೇ ಕಿರಿ ಸೊಸೆ, ಮನೆಯವರನ್ನೆಲ್ಲ ಆರೈಕೆ ಮಾಡುವುದಕ್ಕಿಂತ, ಮನೆ ಗುಟ್ಟನ್ನು ರಟ್ಟು ಮಾಡಿ ಕುಟುಂಬದ ಮರ್ಯಾದೆ ಬೀದಿಗೆ ತಂದು ನಿಲ್ಲಿಸುವುದಕ್ಕೆ ಹಿಂದೂ ಮುಂದು ನೋಡುವುದಿಲ್ಲ. ಕಾಲಕ್ಕೆ ತಕ್ಕಂತೆ ಈ ಗಾದೆ ಮಾರ್ಪಾಡು ಮಾಡುವುದು ಅವಶ್ಯ ಇದೆಯೋನೋ?


ಆದರೆ ಸ್ವಲ್ಪ ವಿಚಾರ ಮಾಡಿ. ಹಿರಿ ಮಗ, ಕಿರಿ ಸೊಸೆ ಎಂದು ಸ್ಥಾನಕ್ಕೆ ತಕ್ಕಂತೆ ಜವಾಬ್ದಾರಿ ಹೊರಿಸುವ ತಾಯಂದಿರು ತಾವು ಸಣ್ಣವರಾಗಿದ್ದಾಗ ಅವರಿಗೆ ಅವರ ಅಪ್ಪನೇ ಜೀವನದಲ್ಲಿ ಮೊದಲ ಹೀರೋ ಆಗಿದ್ದ. ಆವರಿಗೆ ಅಪ್ಪನಿಗಿಂತ ಆದರ್ಶ ಪುರುಷ ಶ್ರೀರಾಮನೂ ಕೂಡ ಅಲ್ಲ. ಅವರು ಬೆಳೆದು ದೊಡ್ಡವರಾದಂತೆಲ್ಲ ಅವರ ಅಪ್ಪನಿಗೂ ಕೂಡ ವಯಸ್ಸಾಗಿಬಿಡುತ್ತದಲ್ಲವೇ? ಆಗ ಹೆಣ್ಣು ಮಕ್ಕಳು ತಮ್ಮ ತಮ್ಮನನ್ನು ಹೀರೋ ಮಾಡಿಬಿಡುತ್ತಾರೆ. ತಮ್ಮನ ವಾರಿಗೆಯ ಹುಡುಗರೆಲ್ಲ ಅವರ ಕಣ್ಣಿಗೆ ಪೋಲಿಗಳು, ಕುಡುಕರು, ಕೆಲಸಕ್ಕೆ ಬಾರದವರಂತೆ ಕಂಡರೆ, ಅಂತಹವರ ನಡುವಿನ ಅವರ ತಮ್ಮ ಮಾತ್ರ ಬಂಗಾರ. ಅದೆಂತ ಕುರುಡು ಪ್ರೀತಿಯೋ? ಮುಂದೆ ಅವರ ತಮ್ಮನಿಗೆ ಮದುವೆಯಾಗಿ ಅವನ ಸಂಸಾರ ಬೇರೆಯಾದಾಗ, ಅದೇ ಹೆಣ್ಣು ಮಕ್ಕಳು ತಮ್ಮ ದೊಡ್ಡ ಮಗನನ್ನು ಮುಂಚೂಣಿಗೆ ತರುತ್ತಾರೆ.


ಒಂದು ವೇಳೆ ನೀವು ನಿಮ್ಮ ಕುಟುಂಬದಲ್ಲಿ ನೀವು ದೊಡ್ಡ ಮಗನಾಗಿ ಹುಟ್ಟಿದ್ದರೆ, ಅಲ್ಲಿ ನಿಮ್ಮ ತಾಯಿಯೇ ನಿಮ್ಮನ್ನು ಹೀರೋ ಮಾಡಿರುತ್ತಾಳೆ. ಒಂದು ವೇಳೆ ನೀವು ಕಿರಿಯ ಮಗನಾಗಿದ್ದರೆ, ನಿಮ್ಮದೇ ಅದೃಷ್ಟ. ಮನೆಯಲ್ಲಿ ಬೇರೆಯವರ ಪ್ರೀತಿ ಸಿಗುತ್ತದೋ ಇಲ್ಲವೋ, ನಿಮ್ಮ ತಾಯಿ ಸಮಯಕ್ಕೆ ಸರಿಯಾಗಿ, ಬಿಸಿ ಬಿಸಿಯಾಗಿ ನೀವು ಕೇಳಿದ್ದು ಮಾಡಿ ಬಡಿಸುತ್ತಾಳೆ. ಒಂದು ವೇಳೆ ನೀವು ಹಿರಿ ಮಗ ಅಲ್ಲ ಆದರೆ ನಿಮಗೆ ಅಕ್ಕ ಇದ್ದರೆ, ಅವಳು ಅಲ್ಪ ಸಮಯಕ್ಕಾದರೂ ನಿಮ್ಮನ್ನು ಕೇಂದ್ರ ಬಿಂದುವನ್ನಾಗಿ ಮಾಡುತ್ತಾಳೆ. ನೀವು ಹಿರಿ ಮಗನೂ ಅಲ್ಲ, ನಿಮಗೆ ಸೋದರಿಯೂ ಇಲ್ಲ ಎಂದರೆ ಏನು ಚಿಂತೆ ಇಲ್ಲ. ನಿಮ್ಮನ್ನು ಹೀರೋ ಮಾಡಲು ಇದ್ದಾಳೆ ನಿಮ್ಮ ಮಗಳು.


ಒಂದು ವೇಳೆ ನೀವು ನಡುವಿನ ಮಗನಾಗಿದ್ದರೆ, ನೀವು ಮಕ್ಕಳೆಷ್ಟು ಎಂದು ಕೇಳಿದಾಗ ಮಾತ್ರ ಲೆಕ್ಕಕ್ಕೆ ಉಂಟು. ನೀವು ಏನು ಸಾಧಿಸಿದರೂ ಅದನ್ನು ನಿಮ್ಮ ತಾಯಿ ಒಪ್ಪುವುದಿಲ್ಲ. ಅವಳಿಗೆ ದೊಡ್ಡ ಮಗನೇ ಹೀರೋ. ನಿಮ್ಮ ಸೋದರಿಗೆ ಹಲವಾರು ಸೋದರರಿದ್ದರೆ, ಸರ್ಕಸ್ ನಲ್ಲಿ ಜೋಕರ್ ನಾಲ್ಕಾರು ಚೆಂಡುಗಳನ್ನು ಒಂದಾದರ ನಂತರ ಒಂದರಂತೆ ತೂರುತ್ತಾ ಕೈ ಬದಲಾಯಿಸುತ್ತಾನಲ್ಲ. ಆ ಚೆಂಡಿನ ಪರಿಸ್ಥಿತಿ ನಿಮ್ಮದು. ನಿಮಗೆ ಮಗಳು ಕೂಡ ಇರದಿದ್ದರೆ, ನಿಮ್ಮಷ್ಟು ದುರದೃಷ್ಟವಂತರು ಬೇರಿಲ್ಲ. ಏಕೆಂದರೆ ನಿಮ್ಮನ್ನು ಹೀರೋ ಮಾಡಲು ನಿಮ್ಮ ತಾಯಿ, ಸೋದರಿ, ಮಗಳು ಯಾರು ನಿಮ್ಮ ಜೊತೆಗಿಲ್ಲ. ನಿಮ್ಮ ಹೆಂಡತಿಗೆ ಹೀರೋ ಆಗಲು ಅವಳ ಅಪ್ಪ, ತಮ್ಮ ಮತ್ತು ಮಗ ಇದ್ದಾರೆ. ಹಾಗಾಗಿ ನಿಮ್ಮ ಹೆಂಡತಿಗೆ ನೀವು ಗಂಟು ಬಿದ್ದ ಶನಿ ಮಾತ್ರ. ನಾನಾದಕ್ಕೆ ಇವರ ಜೊತೆ ಸಂಸಾರ ಮಾಡುತ್ತಿದ್ದೇನೆ ಎನ್ನುವಂತೆ ಅವಳು ವರ್ತಿಸುತ್ತಿರುತ್ತಾಳೆ. ನೀವು ಏನೇ ಕೆಲಸ ಸಾಧಿಸಿದರೂ, ಅದರ ಕ್ರೆಡಿಟ್ಟು ತನ್ನ ತಂದೆಗೆ, ತಮ್ಮನಿಗೆ ಇಲ್ಲವೇ ಮಗನಿಗೆ ಕೊಡುತ್ತಾಳೆ.


ನೀವು ದೊಡ್ಡ ಮಗನಾಗಿ ಹುಟ್ಟಿದ್ದರೆ, ನೀವು ಹೀರೋ ಆಗುವುದರಲ್ಲಿ ನೀವು ಸಾಧಿಸಿದ್ದಕ್ಕಿಂತ ನಿಮ್ಮ ತಾಯಿಯೇ ಪಾತ್ರವೇ ಹೆಚ್ಚಿತ್ತು. ಅದು ಕುಂತಿ ಧರ್ಮರಾಯನನ್ನು ಮುಂದಿಟ್ಟ ಹಾಗೆ. ನೀವು ಕಿರಿಯ ಮಗನಾಗಿದ್ದರೆ, ನಿಮ್ಮ ತಾಯಿಯ ಸಾವಿನ ನಂತರ ನಿಮ್ಮ ಬದುಕು ಧುರ್ಭರವಾಗುತ್ತದೆ. ನಿಮಗೆ ಸೋದರಿ ಇದ್ದರೆ ಜೀವನದ ಮೊದಲ ಭಾಗದಲ್ಲಿ ಮತ್ತು ಮಗಳು ಇದ್ದರೆ ಜೀವನದ ಕೊನೆಯಲ್ಲಿ ಮರ್ಯಾದೆ. ಅವೆರಡು ಇಲ್ಲದೆ ಹೋದರೆ ನೀವು ಮನೆಯಲ್ಲಿ ಯಾರಿಂದಲೂ, ಯಾವ ಕಾಲಕ್ಕೂ ಸೈ ಅನ್ನಿಸಿಕೊಳ್ಳದ ಅಂತರ್ ಪಿಶಾಚಿ ಮಾತ್ರ.

ಉದ್ವೇಗಗಳು ಕಡಿಮೆಯಾದಾಗ ಆ ಜಾಗದಲ್ಲಿ ವಿವೇಕ ತುಂಬಿಕೊಳ್ಳುತ್ತದೆ

ನೀವು ಯಾವುದೊ ಸಿನಿಮಾ ನೋಡಲು ಹೋಗಿರುತ್ತೀರಿ. ಅದು ನಿಮಗೆ ಇಷ್ಟವಾಗಿ ಬಿಡುತ್ತದೆ. ಸ್ವಲ್ಪ ಸಮಯದ ನಂತರ ಅದನ್ನು ಇನ್ನೊಮ್ಮೆ ನೋಡಲು ಹೋಗುತ್ತೀರಿ. ಈ ಸಲ ನಿಮಗೆ ಆ ಸಿನಿಮಾ ಮೊದಲ ಸಲ ನೋಡಿದ್ದಕ್ಕಿಂತ ಚೆನ್ನಾಗಿ ಅರ್ಥವಾಗುತ್ತದೆ. ಅದೇಕೆ? ನೋಡಿದ್ದು ಅದೇ ಸಿನಿಮಾ, ಅವೇ ಕಣ್ಣುಗಳ ಮೂಲಕ. ಬದಲಾಗಿದ್ದು ಏನು? ಅಲ್ಲಿ ಬದಲಾಗಿದ್ದು ನಿಮ್ಮ ಮನಸ್ಥಿತಿ. ಮೊದಲ ಸಲ ಕುತೂಹಲದಿಂದ ಸಿನಿಮಾ ನೋಡಿರುತ್ತೀರಿ. ಅದು ನಿಮ್ಮ ಭಾವನೆಗಳನ್ನು ಬಡಿದೆಬ್ಬಿಸಿರುತ್ತದೆ. ಆಗ ನಿಮ್ಮ ಕಣ್ಣು ನೋಡಿದ್ದು ನಿಮ್ಮ ಮನಸ್ಸು ಸಂಪೂರ್ಣ ಗ್ರಹಿಸಲು ಸಾಧ್ಯವಾಗದೆ ಹೋಗುತ್ತದೆ. ಎರಡನೆಯ ಸಲ ಸಿನಿಮಾ ನೋಡಿದಾಗ ನಿಮಗೆ ಮೊದಲಿನ ಕುತೂಹಲ ಇಲ್ಲ. ಮತ್ತು ನಿಮ್ಮ ಭಾವನೆಗಳು, ಉದ್ವೇಗಗಳು ನಿಮ್ಮ ಹಿಡಿತದಲ್ಲಿ ಇವೆ. ಹಾಗಾಗಿ ನಿಮ್ಮ ಕಣ್ಣು ನೋಡಿದ್ದು, ನಿಮ್ಮ ಮನಸ್ಸಿನ ಗ್ರಹಿಕೆಗೆ ಸಂಪೂರ್ಣ ಬರಲು ಸಾಧ್ಯವಾಯಿತು. ಕಣ್ಣು ಮತ್ತು ಗ್ರಹಿಕೆಯ ನಡುವೆ ತಡೆಗೋಡೆಯಾಗಿದ್ದು ಭಾವನೆಗಳು. ಆ ಪರದೆ ಸರಿದ ಮೇಲೆ, ನೀವು ವಾಸ್ತವಕ್ಕೆ ಹತ್ತಿರವಾದಿರಿ.


ನಮ್ಮ ಮನಸ್ಸು ಹಲವಾರು ಕಾರ್ಯಗಳನ್ನು ನಿಭಾಯಿಸುತ್ತದೆ. ವಿಷಯಗಳನ್ನು ಗ್ರಹಿಸುವುದು, ನೆನಪಿಡುವುದು, ವಿಚಾರ ಮಾಡುವುದು, ಭಾವನೆಗಳನ್ನು ಹೊಮ್ಮಿಸುವುದು ಹೀಗೆ ಇವೆಲ್ಲವುಗಳನ್ನು ಒಟ್ಟಾಗಿ ನಾವು ಮನಸ್ಸು ಎನ್ನುತ್ತೇವೆ. ಇವುಗಳಲ್ಲಿ ಭಾವನೆಗಳು ಅವಶ್ಯಕವು ಹೌದು ಆದರೆ ಅವು ಅತಿಯಾದಾಗ ಮನಸ್ಸಿನ ಉಳಿದ ಕಾರ್ಯಗಳು ಮಸುಕಾಗಿ ಬಿಡುತ್ತವೆ. ಭಾವನೆಗಳು ಹೆಚ್ಚಾದಾಗ ಅವು ಉದ್ವೇಗಗಳಾಗಿ ಬದಲಾಗಿ ನಮ್ಮ ಅಹಂ ಅನ್ನು ಪೋಷಿಸುತ್ತವೆ. ಉದ್ವೇಗಗಳು ಹಿಡಿತದಲ್ಲಿ ಇರದ ಮನುಷ್ಯನನ್ನು ಗಮನಿಸಿ ನೋಡಿ. ಅವನಲ್ಲಿ ವಿವೇಕ ಎನ್ನುವುದು ಸಂಪೂರ್ಣ ಮರೆಯಾಗಿ ಹೋಗಿರುತ್ತದೆ. ಆದರೆ ಜೀವನದಲ್ಲಿ ನಡೆಯುವ ಎಷ್ಟೋ ಘಟನೆಗಳು, ದೊಡ್ಡ ದೊಡ್ಡ ಸೋಲುಗಳು, ಹತ್ತಿರದವರ ಮರಣ ಇತ್ಯಾದಿ ಮನುಷ್ಯನ ಅಹಂ ಅನ್ನು ಘಾಸಿಗೊಳಿಸುತ್ತವೆ. ಅಹಂ ಕುಗ್ಗಿದಾಗ, ಆ ಜಾಗದಲ್ಲಿ ಕ್ರಮೇಣ ವಿವೇಕ ತುಂಬಿಕೊಳ್ಳುತ್ತದೆ. ಪ್ರಜ್ಞೆ ಜಾಗೃತವಾಗುತ್ತ ಹೋಗುತ್ತದೆ. ಏಕೆಂದರೆ ಈಗ ಅವನಿಗೆ ಉದ್ವೇಗಗಳ ತೀವ್ರತೆ ಕಡಿಮೆಯಾಗಿ, ವಾಸ್ತವದ ಸರಿಯಾದ ಗ್ರಹಿಕೆ ಸಾಧ್ಯವಾಗಿದೆ. ಅಲ್ಲಿಂದ ಮುಂದೆ ಅವನು ತೆಗೆದುಕೊಳ್ಳುವ ನಿರ್ಧಾರಗಳು ಸರಿಯಾಗಿರಲು ಸಾಧ್ಯ. ಅವನೀಗ ಅಹಂ ಅನ್ನು ಪೋಷಿಸುವ ಭಾವನೆಗಳನ್ನು ಮೀರಿ ಬೆಳೆದಿದ್ದಾನೆ.


ಈ ವಿಷಯ ಬೇಗ ಅರ್ಥವಾದಷ್ಟು ನಮಗೆ ಒಳ್ಳೆಯದು. ಭಾವನೆಗಳು ಹುಟ್ಟಿಸುವ ಭ್ರಮಾಲೋಕಕ್ಕಿಂತ, ವಾಸ್ತವದಲ್ಲಿ ಬದುಕಿದಷ್ಟು ವಾಸಿ. ನಿಮ್ಮ ಮನೆಯಲ್ಲಿ ತಾನೇ ದೊಡ್ಡವನು ಎನ್ನುವ ಅಹಂ  ಯಾರಿಗಾದರೂ ಇದ್ದರೆ, ಅವರನ್ನು ಮೊದಲು ಸೋಲಲು ಬಿಡಿ. ಅದೇ ಅವರಿಗೆ ನೀವು ನೀಡುವ ದೊಡ್ಡ ನೆರವು. ಸೋತ ನಂತರ ಕ್ರಮೇಣ ಅವರು ಪ್ರಜ್ಞಾವಂತರಾಗಲು ಸಾಧ್ಯ. ಅದು ಬಿಟ್ಟು ಅವರ ಅಹಂ ಅನ್ನು ಪೋಷಿಸದರೆ ಅವರು ಬದಲಾಗುವುದು ಸಾಧ್ಯವೇ ಇಲ್ಲ. ಹಾಗೆಯೇ ನಮ್ಮ ಮಕ್ಕಳು ಏನಾದರೂ ಕೇಳಿದಾಗ, ಅದನ್ನು ಕೇಳಿದ ತಕ್ಷಣ ಕೊಡಿಸಿಬೇಡಿ. ಮುಂದೊಂದು ದಿನ ನೀವು ಕೊಡಿಸುವುದಿಲ್ಲ ಎಂದಾಗ ಅವರು ಭಾವನಾತೀತರಾಗಿ, ಉದ್ವೇಗಕ್ಕೆ ಬಿದ್ದು ನಿಮ್ಮ ಜೊತೆ ಜಗಳಕ್ಕೆ ನಿಲ್ಲುತ್ತಾರೆ. ಅದರ ಬದಲು, ಕಾಯುವಿಕೆ ಹುಟ್ಟಿಸುವ ವಿವೇಕವನ್ನು ಸಣ್ಣ ವಯಸ್ಸಿನಿಂದಲೇ ಕಲಿಸಿ ಕೊಡಿ. ಅದು ಅವರನ್ನು ಪ್ರಜ್ಞಾವಂತರನ್ನಾಗಿಸುವದಕ್ಕೆ ಸಹಾಯವಾಗುತ್ತದೆ.


ಬೇರೆಯವರ ಬಗ್ಗೆ ಮಾತನಾಡುವ ಮೊದಲು ನಮ್ಮ ಭಾವನೆಗಳನ್ನು, ಉದ್ರೇಕಗಳನ್ನು ಸ್ಥಿಮಿತದಲ್ಲಿ ಇಟ್ಟುಕೊಳ್ಳಬೇಕು ಅಲ್ಲವೇ? ಅದು ಮಾತನಾಡಿದಷ್ಟು ಸುಲಭ ಅಲ್ಲ. ಆದರೆ ನಮ್ಮನ್ನು ನಾವು ಗಮನಿಸುತ್ತಾ ಹೋದಾಗ ಕ್ರಮೇಣ ಅವುಗಳ ತೀವ್ರತೆ ಕಡಿಮೆಯಾಗಲು ಸಾಧ್ಯ. ಆದರೆ ಅದನ್ನು ಗೆದ್ದ ನಂತರ, ನಮ್ಮ ಮನಸ್ಸಿಗೆ ಹತ್ತು ಆನೆ ಬಲ ಬರುತ್ತದೆ. ಅಲ್ಲಿಂದ ನಾವು ತೆಗೆದುಕೊಳ್ಳುವ ನಿರ್ಧಾರಗಳು, ನಮ್ಮನ್ನು ಪ್ರಗತಿಯ ಪಥಕ್ಕೆ ಒಯ್ಯುತ್ತವೆ.

Sunday, September 19, 2021

Nine Unknown Men of Ashoka

We are aware of the 8 jewels in the court of Srikrishnadevaraya. Akbar and Vikramaditya had ‘Navaratna’ – nine gems in their courts. All of that is documented in history. But the secret organization of 9 men built by King Ashoka is not documented anywhere. We can’t say for sure if it was a plain myth or such an attempt was made by the king who was known for his reputation for nation building. Let us look at some information available.


Myth says, these 9 men had responsibilities for developing nine different fields of science and sociology, preserving them, and ensuring they don’t fall into wrong hands. These nine men before their retirement had to pass on their work and responsibilities to the newly recruited men who would remain anonymous and continue their work. It was designed to be secretive and never ending.


Look on the internet, you will find many novels written about these nine men and interestingly most of those authors are non-Indians. There are several videos and short movies made on these nine men asking us to believe that they exist and operate even today.


One of the videos describes the nine streams which the secret organizations worked on were:

1. Propaganda (Including Psychological Warfare)

2. Physiology (Skills like how to kill a person by touching nerve pulse)

3. Microbiology (Developing vaccines)

4. Alchemy (Transmutation of metals)

5. Communication (With other members of space, cosmos)

6. Gravity (Building anti-gravity flying machines)

7. Cosmogony (Secrets of Universe and time travel)

8. Light (Changing speed of light to use it as a weapon)

9. Sociology (Create, nurture, and destroy civilizations)


These nine fields would be of interest to any dictator in today’s world. Most of the scientific research in the modern world is going on in these streams only. We know King Ashoka was ambitious but was it possible for him and his 9 men to have the understanding that these streams would gain prominence with the advancement of civilization?


All of Ashoka’s edicts convey that he was a peace-lover, but they don’t give any clues about his nine men. I went through multiple biographies of Ashoka and the history of contemporary people lived in his time, there are no slightest evidences that he had either dreamed of this secret organization or worked towards it. Well, you can ask if it was meant to be secretive, why would they leave traces of it? Agree, but look at what happened after Ashoka. The Maurya kingdom itself fell soon after the demise of Ashoka. His grandson was the only successor to Ashoka who died in a battlefield and with that most of Ashoka’s work too fell on the wayside. Was it bad luck of these nine men who could not prevent downfall of their master's works? Do you think they tried but failed? Or is it safe to say, they chose to distance themselves but continued their work?


My opinion is, though King Ashoka’s work was admired by most, it is unlikely that he had built such an organization. My heart wishes he had the vision to build such a thing. That would have helped India and the global population advance at a rapid pace and peacefully as well. But the fact is, there are no gatekeepers to science or knowledge of any subject. Looking at how advancement of science has been used for war and destructions, the purpose of nine men and that of Ashoka has been defeated throughout the history which renders that these nine men were nothing but an impressive fiction. Even if they existed, they were not successful in their mission.

Saturday, September 18, 2021

ಕಲ್ಲರಳಿ ಹೂವಾಗಿ, ಹೂವರಳಿ ಹೆಣ್ಣಾಗಿ

"ಕಲ್ಲರಳಿ ಹೂವಾಗಿ,

ಹೂವರಳಿ ಹೆಣ್ಣಾಗಿ"


ಹೀಗೆ ಸಾಗುತ್ತದೆ 'ಕಲ್ಲರಳಿ ಹೂವಾಗಿ' ಚಲನಚಿತ್ರದ ಒಂದು ಗೀತೆ. ಇದು ಒಳ್ಳೆ ಗೀತೆ, ಅದರಲ್ಲೇನಿದೆ ವಿಶೇಷ ಎನ್ನುತ್ತೀರಾ? ನೂರಾರು ಕೋಟಿ ವರುಷಗಳ ದೀರ್ಘ ಕಾಲದಲ್ಲಿ ಮನುಜ ಕುಲ ವಿಕಾಸ ಹೊಂದಿದ ಬಗೆಯನ್ನು ಒಬ್ಬ ಕವಿ ಎರಡು ಸಾಲುಗಳಲ್ಲಿ ಹೇಳಿದ ಬಗೆ ಅಚ್ಚರಿ ಮೂಡಿಸಿತು. ಹಾಡಿನ ಮೊದಲು ಎರಡು ಸಾಲುಗಳು ಅಕ್ಷರಶ ಸತ್ಯ ಎನ್ನುವುದು ಜೀವಶಾಸ್ತ್ರ ಓದಿ ನಾನು ಧೃಢಪಡಿಸಿಕೊಂಡೆ. 


ನಾವು ಉಸಿರಾಡುವುದು ಆಕ್ಸಿಜನ್. ಅದು ನಮಗೆ ಜೀವ ಕೊಟ್ಟರೂ, ಆಕ್ಸಿಜನ್ ಅಣು ಮಾತ್ರ ನಿರ್ಜಿವ ವಸ್ತು. ಹೈಡ್ರೋಜನ್ ಮತ್ತು ಆಕ್ಸಿಜನ್ ಸೇರಿ ಆಗುವ ನೀರು ನಮ್ಮ ಜೀವನಕ್ಕೆ ಅವಶ್ಯಕ. ಆದರೆ ಅದು ಕೂಡ ನಿರ್ಜಿವ ವಸ್ತು. ಇವೆರಡಕ್ಕೆಇನ್ನೆರಡು ನಿರ್ಜಿವ ಕಾರ್ಬನ್ ಮತ್ತು ನೈಟ್ರೋಜನ್ ವಸ್ತುಗಳ ಅಣುಗಳು ಒಟ್ಟಾಗಿ ಸೇರಿ ಅಮೈನೊ ಆಸಿಡ್ ಆಯಿತು. ಈ ಅಮೈನೊ ಆಸಿಡ್ ಸರಪಣಿಯ ಹಾಗೆ ಜೊತೆಗೊಂಡು, ಪ್ರೊಟೀನ್ ಆಯಿತು. ಅದು ಜೀನ್ ಬೆಳವಣಿಗೆಗೆ ಕಾರಣವಾಯಿತು. ಅಲ್ಲಿಂದ ಏಕ ಕೋಶ ಜೀವಿಗಳ ಉಗಮ ಆಯಿತು. ನಿರ್ಜಿವ ಕಲ್ಲರಳಿ ಜೀವ ವಿಕಾಸವಾಯಿತು. 


ಆ ಜೀವಗಳು ವಿಕಾಸ ಹೊಂದುತ್ತ ಹಲವಾರು ವೈವಿಧ್ಯಮಯ ಜಲಚರ, ಸರಿಸೃಪಗಳು, ಮರಗಳು ಸೃಷ್ಟಿಗೊಂಡವು. ಮರಗಳಲ್ಲೇ ವಿವಿಧ ಬಗೆಯ ಮರಗಳ ಸೃಷ್ಟಿಯಾಯಿತು. ಆ ಮರಗಳು ದುಂಬಿಗಳನ್ನು ಆಕರ್ಷಿಸಲು ಪೈಪೋಟಿ ನಡೆಸಲೆಂದು ಹುಟ್ಟಿಕೊಂಡಿದ್ದೇ ಹೂವು. ಕಣ್ಣುಸೆಳೆಯುವ ಬಣ್ಣಗಳು,  ಆಕರ್ಷಕ ವಿನ್ಯಾಸ, ಘಮ್ಮೆನ್ನುವ ಸುವಾಸನೆ ಇವೆಲ್ಲವುಗಳು ಹೂಗಳಲ್ಲಿ ಅಡಕಗೊಂಡವು.  ಪ್ರಕೃತಿ ವಿಕಾಸ ಕಲ್ಲಿಗೆ ಜೀವ ತುಂಬಿ, ಸೌಂದರ್ಯದ ಹೂ ಅರಳಿಸಿತು.


ಪ್ರಕೃತಿ ವಿಕಾಸದ ಇತ್ತೀಚಿನ ಹಂತದಲ್ಲಿ ಹುಟ್ಟಿ ಬಂದದ್ದು ಸಸ್ತನಿಗಳು ಮತ್ತು ಕೊನೆಯಲ್ಲಿ ಮಾನವ. ಪ್ರಕೃತಿ ಅಲ್ಲಿಯವೆರೆಗೂ ಕಲಿತುಕೊಂಡು ಬಂದದ್ದೆನ್ನೆಲ್ಲಾ ಮಾನವನ ಸೃಷ್ಟಿಯಲ್ಲಿ ಧಾರೆ ಎರೆಯಿತು. ಹೂವಿನ ಸೌಂದರ್ಯ, ಆಕರ್ಷಣೆಗಳನ್ನು ವಿವೇಕದ ಜೊತೆಗೂಡಿಸಿ ಹೆಣ್ಣಾಗಿಸಿತು. ಹೂ ಅರಳಿ ಹೆಣ್ಣಾಯಿತು. ಪ್ರಕೃತಿ ಹೆಣ್ಣಿನಲ್ಲಿ ಬರಿ ಅಂದವನ್ನಷ್ಟೇ ತುಂಬದೇ, ಕಂದಮ್ಮಗಳ ಆರೈಕೆಯ ಜವಾಬ್ದಾರಿಯನ್ನು ಹೊರಿಸಿತು. ಗಮನಿಸಿ ನೋಡಿ. ನಾವು ನೀರಿಗೆ ಗಂಗೆ, ಭಾಗೀರಥಿ ಎನ್ನುತ್ತೇವೆ. ಆಹಾರಕ್ಕೆ ಅನ್ನಪೂರ್ಣೆಯನ್ನು ಪೂಜಿಸುತ್ತೇವೆ. ಸಂಪತ್ತಿಗೆ ಲಕ್ಷ್ಮಿ, ವಿದ್ಯೆಗೆ ಸರಸ್ವತಿ ಹೀಗೆ ಮಾನವ ಕಲ್ಯಾಣದ ಜವಾಬ್ದಾರಿಯನ್ನು ಪ್ರಕೃತಿ ಹೆಣ್ಣಿನ ಹೆಗಲೇರಿಸಿತು. ಇನ್ನೊಂದು ಅರ್ಥದಲ್ಲಿ ಪ್ರಕೃತಿಯೇ ಹೆಣ್ಣಾಗಿ ಬದಲಾಯಿತು.


ಹೀಗೆ ಕಲ್ಲು, ಹೂವಾಗಿ, ಹೆಣ್ಣಾಗಿ ಬದಲಾಗಲು ಕೋಟ್ಯಂತರ ವರುಷ ತೆಗೆದುಕೊಂಡರೂ, ಆ ಪ್ರಕ್ರಿಯೆಯನ್ನು ಪ್ರಾಸಬದ್ಧ ಪದಗಳಲ್ಲಿ ಒಂದು ಹಾಡಾಗಿ ಕೇಳುವುದು ಎಷ್ಟು ಚೆಂದ ಅಲ್ಲವೇ?

Thursday, September 16, 2021

ಗೈಡ್ ಎನ್ನುವ ವಿಲಕ್ಷಣ ಚಿತ್ರ

'ಮಾಲ್ಗುಡಿ ಡೇಸ್' ಬರೆದ ಆರ್.ಕೆ.ನಾರಾಯಣ್ ಸೃಜನಶೀಲ ಕಥೆಗಳಿಗೆ ಹೆಸರಾದವರು. ಅವರ ಶೈಲಿ, ಸ್ವಭಾವಕ್ಕೆ ವಿರುದ್ಧ ಎನ್ನಿಸುವ ಕಥಾ ವಸ್ತು ಹೊಂದಿದ್ದ 'ಗೈಡ್'  ಎನ್ನುವ ಕಿರುಕಾದಂಬರಿಯನ್ನು ಅವರು ಬರೆದರು. ಅದೇ ಆಶ್ಚರ್ಯ ಎಂದರೆ ಇನ್ನೂ ಆಶ್ಚರ್ಯವೆನ್ನುವಂತೆ ಅದು ೧೯೬೫ ರಲ್ಲಿ ಹಿಂದಿಯಲ್ಲಿ ಚಲನ ಚಿತ್ರವಾಗಿ ಬಿಟ್ಟಿತು ಕೂಡ. ಅದರ ಕಥಾ ವಸ್ತು ಹೀಗಿದೆ.


ನಾಟ್ಯ ಪ್ರವೀಣೆಯಾದ ನಾಯಕಿಗೆ, ಅವಳನ್ನು ಆದರಿಸದ ಗಂಡ. ಪ್ರವಾಸದ ಸಮಯದಲ್ಲಿ ಊರು ಸುತ್ತಾಡಿಸುವ ಲವಲವಿಕೆಯ 'ಗೈಡ್' ನಲ್ಲಿ ಅವಳಿಗೆ ಪ್ರೇಮಾಂಕುರವಾಗುತ್ತದೆ. ಮದುವೆಯನ್ನು ತೊರೆದು ಹೊರ ಬಂದು ಮತ್ತೆ ಕಾಲಿಗೆ ಗೆಜ್ಜೆ ಕಟ್ಟಿಕೊಳ್ಳುತ್ತಾಳೆ. ಕಥಾನಾಯಕ ಗೈಡ್ ನ ಸಹಾಯದಿಂದ ಯಶಸ್ಸಿನ ಮೆಟ್ಟಿಲೇರುತ್ತಾಳೆ. ಅವಳ ನೃತ್ಯ ಪ್ರದರ್ಶನ ನೋಡಲು ಜನ ಮುಗಿಬೀಳುತ್ತಾರೆ. ಆಗ ಹರಿದು ಬಂದ ದುಡ್ಡನ್ನು ನಾಯಕ ದುರುಪಯೋಗ ಮಾಡಿಕೊಳ್ಳುತ್ತಾನೆ. ನಾಯಕಿ ನೀಡಿದ ದೂರಿನ ಆಧಾರದ ಮೇಲೆ ನಾಯಕ ಜೈಲು ಪಾಲಾಗುತ್ತಾನೆ. ಸಮಾಜವನ್ನು ಎದುರು ಹಾಕಿಕೊಂಡು ನಾಯಕಿಗೆ ಆಶ್ರಯ ನೀಡಿದ ನಾಯಕನಿಗೆ ಅದರಿಂದ ಆಘಾತವಾಗುತ್ತದೆ. ಜೈಲಿನಿಂದ ಬಿಡುಗಡೆಯಾದ ನಂತರ ಗೊತ್ತು ಗುರಿಯಿಲ್ಲದೆ ಅಲೆಯುತ್ತಾನೆ. ದಾರಿಯಲ್ಲಿ ಅವನ ಬಟ್ಟೆಗಳು ಹರಿದು ಅವನ ಅವತಾರವೇ ಬದಲಾಗುತ್ತದೆ. ಒಂದು ಹಳ್ಳಿಯಲ್ಲಿ ಮುಗ್ಧ ಜನರು ಅವನನ್ನು ಸಂತ ಎಂದುಕೊಳ್ಳುತ್ತಾರೆ. ನಾಯಕ ಅದನ್ನು ನಿರಾಕರಿಸುವುದಿಲ್ಲ. ಅವನು ಸಂತನಾಗಿ ಪ್ರಸಿದ್ಧಿಯಾಗಿ, ನಾಯಕಿ ಮತ್ತೆ ಅವನನ್ನು ಹುಡುಕಿ ಬರುವಷ್ಟರಲ್ಲಿ ನಾಯಕನ ಕಥೆಯು ಮುಗಿಯುತ್ತದೆ.


ವಿಲಕ್ಷಣ ಎನ್ನಿಸುವ ಈ ಕಥೆಯಲ್ಲಿ, ನಾಯಕ-ನಾಯಕಿ ಪಾತ್ರಗಳಲ್ಲಿ ಮನೋಜ್ಞ ಅಭಿನಯ ನೀಡಿದ್ದು ದೇವ್ ಆನಂದ್ ಮತ್ತು ವಹೀದಾ ರೆಹಮಾನ್. ಕಿಶೋರ್ ಕುಮಾರ್, ಮೊಹಮ್ಮದ್ ರಫಿ, ಲತಾ ಮಂಗೇಶ್ಕರ್ ಹಾಡಿದ ಹಾಡುಗಳು ಅಜರಾಮರ ಎನ್ನುವ ಹಾಗಿವೆ. ಈ ಚಿತ್ರ ಮತ್ತು ಅದರ ಹಾಡುಗಳು ಹಿಂದಿ ಚಿತ್ರರಂಗದಲ್ಲಿ ಒಂದು ಮೈಲಿಗಲ್ಲಾದವು. ಹೆಣ್ಣಿನ ಮನಸ್ಸಿನ ಕಂದಕಗಳನ್ನು ಮತ್ತು ಗಂಡಿನ ಸ್ವಭಾವದ ವಿಚಿತ್ರ ತಿರುವುಗಳನ್ನು ಸೇರಿಸಿ ಇಂತಹ ಒಂದು ಕಥೆ ಹೆಣೆದ ಆರ್.ಕೆ.ನಾರಾಯಣ್ ಮತ್ತು ಅದನ್ನು ಚಲನಚಿತ್ರವನ್ನಾಗಿಸಿ ಜನರಿಗೆ ತಲುಪಿಸಿದ ದೇವ್ ಆನಂದ್ ಇಬ್ಬರ ಧೈರ್ಯ ಮೆಚ್ಚುವಂತಹದ್ದು. ಮದುವೆಯಾಗದೆ ಜೊತೆಗಿರುವ ಗಂಡು-ಹೆಣ್ಣಿನ ಸಂಘರ್ಷಗಳನ್ನು ಹೊತ್ತ ಈ ಚಿತ್ರ  ೬೦ ರ ದಶಕದಲ್ಲಿ ತೆರೆ ಕಂಡಿದ್ದು, ಅದು ಸಮಯಕ್ಕೂ ಬಹಳ ಮುನ್ನವೇ ಬಂದ ಹಾಗಿತ್ತು. ಆದರೂ ಗಲ್ಲಾ ಪೆಟ್ಟಿಗೆಯಲ್ಲಿ ಲಾಭ ಗಳಿಸುವುದರ ಜೊತೆಗೆ ಚಿತ್ರದಲ್ಲಿ ಭಾಗಿಯಾದ ಎಲ್ಲರಿಗೂ ಹೆಸರು ತಂದು ಕೊಟ್ಟಿತು. ಈಗಾಗಲೇ ನೀವು ಈ ಚಿತ್ರ ನೋಡಿರದಿದ್ದರೆ, ಒಮ್ಮೆ ಯಾಕೆ ನೋಡಬಾರದು?

  


ಪಾತ್ರಗಳ ನಡುವಿನ ಶುಭ್ರ ಬಿಳಿಯ ವಸ್ತ್ರ

'ಭಕ್ತ ಕುಂಬಾರ' ಚಿತ್ರದಲ್ಲಿ 'ಹರಿ ನಾಮವೇ ಚಂದ, ಅದ ನಂಬಿಕೊ ಕಂದಾ' ಎಂದು ಹಾಡುವ ರಾಜಕುಮಾರ್, 'ಭಕ್ತ ಪ್ರಹ್ಲಾದ' ಚಿತ್ರದಲ್ಲಿ 'ಹರಿಯೇ ವೈರಿ ದಾನವ ಕುಲಕೆ ಮರೆಯದಿರು ಶಿಶುವೇ' ಎಂದು ಹಾಡುತ್ತಾರೆ. ಎಂಥಹ ವಿರೋಧಾಭಾಸ? ಒಂದರಲ್ಲಿ ಹರಿ ಭಕ್ತ, ಇನ್ನೊಂದರಲ್ಲಿ ಹರಿಯ ಪರಮ ವೈರಿ. ನೀರು ತಾನಿಟ್ಟ ಪಾತ್ರೆಯ ಆಕಾರಕ್ಕೆ ಒಗ್ಗಿಕೊಳ್ಳುವಂತೆ, ಅಣ್ಣಾವ್ರಿಗೆ ತಮಗೆ ಸಿಕ್ಕ ಪಾತ್ರಗಳಿಗೆ ನ್ಯಾಯ ಒದಗಿಸುತ್ತ ಹೋಗಲು ಹೇಗೆ ಸಾಧ್ಯವಾಯಿತು? ಏಕೆಂದರೆ ಅವರು ಯಾವುದೇ ಪ್ರತಿಷ್ಠೆಗೆ ಗಂಟು ಬೀಳಲಿಲ್ಲ. ಮೇಕಪ್ ಅಳಿಸಿದ ಮೇಲೆ ಅವರು ತಾವು ನಟಿಸಿದ ಪಾತ್ರಗಳಿಂದ ಹೊರ ಬಂದು ಬಿಡುತ್ತಿದ್ದರು. ಶುಭ್ರ ಬಿಳಿಯ ಬಟ್ಟೆ ಧರಿಸಿ ತಮ್ಮ ವ್ಯಕ್ತಿತ್ವವನ್ನು ಸರಳವಾಗಿಟ್ಟು ಕೊಂಡಿದ್ದರು. ಹೊಸ ಪಾತ್ರಕ್ಕೆ ತಕ್ಕಂತೆ ಬಣ್ಣದ ಬಟ್ಟೆ, ಪಾತ್ರ ಮುಗಿದ ನಂತರ ವಾಪಸ್ಸು ಬಿಳಿಯ ಬಟ್ಟೆ. ಅದಕ್ಕೆ ಅವರಿಗೆ ವೈವಿಧ್ಯಮಯ ಮತ್ತು ವಿರೋಧಾಭಾಸದ ಪಾತ್ರಗಳನ್ನು ತನ್ಮಯತೆಯಿಂದ ಮಾಡಲು ಸಾಧ್ಯವಾಯಿತು.


ನಮ್ಮ ಜೀವನ ಅಷ್ಟೊಂದು ವೈವಿಧ್ಯಮಯ ಅಲ್ಲದಿದ್ದರೂ, ಹಲವು ಪಾತ್ರಗಳನ್ನು ನಾವು ಕೂಡ ನಿಜ ಜೀವನದಲ್ಲಿ ನಿಭಾಯಿಸಬೇಕಾಗುತ್ತದೆ. ಹಿಂದೆ ನನ್ನ ತಲೆಯ ಮೇಲೆ ಕೂಡಿಸಿಕೊಂಡು ಮೆರೆಸಿದ ವ್ಯಕ್ತಿಗಳ ವಿರುದ್ಧ ಇಂದು ನಾನು ತಿರುಗಿ ಬಿದ್ದಿದ್ದೇನೆ. ಎಲ್ಲವು ಸರಿ ಇದ್ದಾಗ ರಾಗ, ಅದು ಮುಗಿದ ಮೇಲೆ ದ್ವೇಷ, ಈ ಹಗ್ಗ ಜಗ್ಗಾಟ ನಾನು ಮಾಡದಿದ್ದರೆ ಸರಿ ಇತ್ತೇನೋ ಅನ್ನಿಸಿದೆ. ಆದರೆ ಆ ಎರಡೂ ಪಾತ್ರಗಳ ನಡುವೆ ನಮಗೆ ಇನ್ನೊಂದು ವ್ಯಕ್ತಿತ್ವ ಇರಲು ಸಾಧ್ಯ ಎಂದು ನನಗೆ ಮೊದಲೇ ತಿಳಿದಿರಲಿಲ್ಲ. ಇಷ್ಟಕ್ಕೂ ನಾವು ಪಾತ್ರ ಮುಗಿದ ಮೇಲೆ ಅದರಿಂದ ಹೊರ ಬಂದು ಬಿಡಬೇಕು ಎನ್ನುವ ತಿಳುವಳಿಕೆ ಕೂಡ ತಡವಾಗಿ ಬಂತು.


ಪ್ರತಿಷ್ಠೆಗೆ, ನಾವು ಅಂದುಕೊಂಡ ಇಮೇಜ್ ಗೆ ಗಂಟು ಬೀಳುವುದನ್ನು ಮನಃಶಾಸ್ತ್ರದಲ್ಲಿ 'ego ' ಎಂದು ಹೇಳಿದರೆ, ಅಧ್ಯಾತ್ಮ ಪ್ರಪಂಚದಲ್ಲಿ ಅದೇ ಅಹಂ. ಯಾವುದರ ಜೊತೆಗೆ ನಾವು ಗುರುತಿಸಿಕೊಳ್ಳುತ್ತೇವೋ, ಅದು ನಮ್ಮನ್ನು ಯಶಸ್ಸಿನ ಶಿಖರಕ್ಕೆ ತಲುಪಿಸಬಹುದು ಅಥವಾ ಸೋಲಿನ ಪ್ರಪಾತಕ್ಕೂ ತಳ್ಳಬಹುದು. ಅದು ನಮ್ಮನ್ನು ಸೋಲು-ಗೆಲುವು, ರಾಗ-ದ್ವೇಷಗಳ ಮಾಯೆಯಲ್ಲಿ ಸಿಲುಕಿಸುತ್ತದೆ. ಯಶಸ್ಸು ತಲೆಗೇರಿ ಅಹಂಕಾರವಾಗಲೂಬಹುದು ಅಥವಾ ಸೋಲು ಹೃದಯದಾಳದಲ್ಲಿ ನೋವು, ಸಂಕಟಗಳ ಕಂದಕ ಸೃಷ್ಟಿಸಬಹುದು. ಅದೇ ನಾವು ಆ ಪಾತ್ರವಾಗದೆ ಹೋದರೆ, ಆ ಪಾತ್ರಕ್ಕೆ ಸಿಕ್ಕುವ ಮರ್ಯಾದೆ-ಅವಮರ್ಯಾದೆ ಎರಡನ್ನು ದೂರದಿಂದ ನಿಂತು ಗಮನಿಸಬಹದು.


ಇತ್ತೀಚಿಗೆ ಈ ಕಲಿಕೆಯನ್ನು ಅಳವಡಿಸಿಕೊಳ್ಳುತ್ತಾ ಹೋಗುತ್ತಿದ್ದೇನೆ. ನನ್ನನ್ನು ಮೆಚ್ಚುವವರನ್ನು, ನನ್ನ ಯಾವ ಪಾತ್ರವನ್ನು ಅವರು ಮೆಚ್ಚಿದ್ದು ಎಂದು ನಾನು ಗಮನಿಸುತ್ತಾ ಹೋಗುತ್ತೇನೆ. ಹಾಗೆಯೆ ನನ್ನನ್ನು ದ್ವೇಷಿಸುವವರು ಕೂಡ ನನ್ನ ಯಾವ ಪಾತ್ರವನ್ನು ಅವರು ದ್ವೇಷಿಸುತ್ತಾರೆ ಎನ್ನುವುದು ಕೂಡ ಗಮನಕ್ಕೆ ಬರುತ್ತಾ ಹೋಗುತ್ತದೆ. ನನಗೆ ಈಗ ಗೊತ್ತಾಗಿದೆ. ಲೌಕಿಕವಾಗಿ ಅವೆರಡು ನಾನೇ ಆದರೂ, ಮನದಾಳದಲ್ಲಿ ಅವೆರಡು ಪಾತ್ರಗಳು ನಾನಲ್ಲ. ಅವಶ್ಯಕತೆ ತಕ್ಕಂತೆ ಬಣ್ಣದ ಬಟ್ಟೆ ಧರಿಸುತ್ತೇನೆ. ಪಾತ್ರ ಮುಗಿದ ಮೇಲೆ ಬಿಳಿ ಬಟ್ಟೆ ಧರಿಸಲು ಮರೆಯುವುದಿಲ್ಲ. ರಾಜಕುಮಾರ್ ರಂತೆ ವೈವಿಧ್ಯಮಯ ಪಾತ್ರ ಅಭಿನಯಿಸುವಷ್ಟು ಪ್ರತಿಭೆ ನನಗಿಲ್ಲ. ಆದರೆ ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸಬೇಕು ಮತ್ತು ಆ ಪಾತ್ರಗಳು ನಾವಾಗದಂತೆ ಎಚ್ಚರ ವಹಿಸಬೇಕು ಎನ್ನುವುದನ್ನು ಮಾತ್ರ  ಅವರಿಂದ ಕಲಿತುಕೊಂಡಿದ್ದೇನೆ.

Wednesday, September 15, 2021

ಆಕಾಶದ ನಕ್ಷತ್ರಗಳನ್ನು ಎಣಿಸುವವರಾರು?

ಬೆಂಗಳೂರಿನವರಿಗೆ ಮಾಳಿಗೆಯ ಮೇಲೆ ಮಲಗಿ ಅಭ್ಯಾಸವಿಲ್ಲ. ಆದರೆ ಒಂದೆರಡು ದಶಕಗಳ ಹಿಂದೆ ಉತ್ತರ ಕರ್ನಾಟಕದ ಜನರು ಬೇಸಿಗೆ ಕಾಲದ ರಾತ್ರಿಗಳನ್ನು ಕಳೆಯುತ್ತಿದ್ದದ್ದೇ ಮಾಳಿಗೆಗಳ ಮೇಲೆ. ಆಗ ಹುಣ್ಣಿಮೆ ಬೆಳಕು ತರುವ ಆನಂದ, ಅಮಾವಾಸ್ಯೆ ಕತ್ತಲು ಹುಟ್ಟಿಸುವ ದಿಗಿಲು ಎಲ್ಲವೂ ನಮ್ಮ ಅನುಭವಕ್ಕೆ ಬರಲು ಸಾಧ್ಯವಿತ್ತು. ಮನೆ ಹೊರಗೆ ಕಟ್ಟೆಯ ಮೇಲೆ ಮತ್ತು ಮಾಳಿಗೆ ಮೇಲೆ ಮಲಗಿ ಬೆಳೆದ ನಾನು, ಪ್ರತಿ ರಾತ್ರಿ ಅಂದು ಚಂದ್ರ ಎಲ್ಲಿದ್ದಾನೆ, ಎಷ್ಟು ಚುಕ್ಕಿಗಳು ಕಾಣುತ್ತಿದ್ದಾವೆ ಎಂದು ಆಕಾಶ ದಿಟ್ಟಿಸುತ್ತಲೇ ನಿದ್ರೆಗೆ ಜಾರುತ್ತಿದ್ದೆ. ಆಗ ನನಗೆ ರಾತ್ರಿಯ ಆಕಾಶವೆಂದರೆ ಕಪ್ಪು ಪರದೆಯ ಮೇಲೆ ಮೂಡಿರುವ ಬಿಳಿ ಚುಕ್ಕಿಗಳು ಮಾತ್ರ. ಕೆಲವು ಚುಕ್ಕಿಗಳು ಮಿರಿ ಮಿರಿ ಮಿನುಗಿದರೆ, ಇನ್ನು ಕೆಲವು ಮಂದ. ಕೆಲವು ಮಿಂಚಿ ಮಾಯವಾದರೆ, ಇನ್ನು ಕೆಲವು ಬೇರೆ ಕಡೆ ಪ್ರತ್ಯಕ್ಷ. ಚಂದ್ರನನ್ನು ಗುರುತಿಸುವದಕ್ಕೆ ನಮ್ಮ ಪ್ರಯತ್ನ ನಿಲ್ಲಿಸದೆ, ಸ್ವಲ್ಪ ಪ್ರಯತ್ನ ಪಟ್ಟರೆ ಕೆಂಪು ಬಣ್ಣದ ಮಂಗಳ ಗ್ರಹವನ್ನು ಮತ್ತು ಬೃಹತ್ ಗಾತ್ರದ ಗುರು ಗ್ರಹವನ್ನು ಗುರುತಿಸಲು ಸಾಧ್ಯ, ಟೆಲಿಸ್ಕೋಪ್ ಸಹಾಯ ಪಡೆದರೆ, ನಮ್ಮ ಸೌರ ಮಂಡಲದ ಇತರ ಸದಸ್ಯರನ್ನು ಕಂಡು ಖುಷಿ ಪಡಬಹುದು.

 

ಆಕಾಶ ವೀಕ್ಷಣೆಯ ಹವ್ಯಾಸ ಪ್ರಾಚೀನ ಕಾಲದಿಂದಲೂ ಭಾರತೀಯರಿಗಿತ್ತು. ಹೆಣ್ಣು ಮಕ್ಕಳು ಚುಕ್ಕಿ ಸೇರಿಸಿ ರಂಗೋಲಿ ಬಿಡಿಸಿದ ಹಾಗೆ, ಆಕಾಶದ ಚುಕ್ಕಿಗಳನ್ನು ಸೇರಿಸಿ, ಯಾವುದೊ ಒಂದು ಪ್ರಾಣಿಗೆ ಹೋಲಿಕೆ ಮಾಡಿ ಜ್ಯೋತಿಷ್ಯ ಶಾಸ್ತ್ರದ ರಾಶಿಗಳನ್ನು ಮತ್ತು ಅವುಗಳಿಗೆ ನಮ್ಮ ಜೀವನ ಜೊತೆ ಇರಬಹುದಾದ ಅವಿನಾನುಭವ ಸಂಬಂಧಗಳ ಬಗ್ಗೆ ಸವಿಸ್ತಾರ ಸಿದ್ಧಾಂತವನ್ನೇ ಅವರು ಮಂಡಿಸಿದರು. ನಮ್ಮ ಜೀವನವನ್ನು ನಾವು ಕೈಗತ್ತಿಕೊಳ್ಳದೆ ಇದ್ದರೆ, ನಮಗೆ ಶನಿ ಗ್ರಹ ಕಾಡದೆ ಬಿಡುವುದಿಲ್ಲ.

 

ಆಕಾಶ ವೀಕ್ಷಣೆಯ ಹುಚ್ಚು ಪಾಶ್ಚತ್ಯರಿಗೆ ಏನು ಕಡಿಮೆ ಇರಲಿಲ್ಲ. ಕೊಪರ್ನಿಕಸ್ ೧೬ನೆ ಶತಮಾನದಲ್ಲಿ, ಭೂಮಿಯೇ ಸೂರ್ಯನ ಸುತ್ತುವುದು ಎಂದು ಹೇಳಿದ್ದು ಅರಗಿಸಿಕೊಳ್ಳಲು ಮನುಷ್ಯ ಕುಲಕ್ಕೆ ಶತಮಾನಗಳೇ ಬೇಕಾದವು. ಗೆಲಿಲಿಯೋ ತಾನೇ ಒಂದು ಟೆಲಿಸ್ಕೋಪ್ ತಯಾರಿಸಿಕೊಂಡಿದ್ದ. ಭೂಮಿಯ ಸುತ್ತ ಚಂದ್ರ ಸುತ್ತಿದ ಹಾಗೆ, ಗುರು ಗ್ರಹವನ್ನು ಮೂರು ಚಂದ್ರರು ಸುತ್ತುವುದನ್ನು ತನ್ನ ಟೆಲಿಸ್ಕೋಪ್ ಮೂಲಕ ತೋರಿಸಿದ. ಅಲ್ಲಿಂದ ಶುರುವಾದ ನಮ್ಮ ಮನುಜ ಕುಲದ ಆಕಾಶದ ಚುಕ್ಕಿಗಳ ಎಣಿಸುವಿಕೆಯ ಕಾರ್ಯ ಇಂದಿಗೂ ಮುಂದುವರೆದಿದೆ.

 

ನಮ್ಮ ಸೌರ ಮಂಡಲವನ್ನೇ ನಮ್ಮ ಜಗತ್ತು ಎಂದುಕೊಂಡಿದ್ದ ನಾವು, ನಮ್ಮ ಸೂರ್ಯನಿಗಿಂತ ನೂರು ಪಟ್ಟು ದೊಡ್ಡ ಸೂರ್ಯ ಇರುವ ಸಂಗತಿ ತಿಳಿದುಕೊಂಡೆವು. ಸ್ವಂತ ಬೆಳಕು ಚೆಲ್ಲುವ ನಕ್ಷತ್ರಗಳಲ್ಲಿ ಸೂರ್ಯನು ಕೂಡ ಒಂದು ನಕ್ಷತ್ರ. ಹೀಗೆ ಮೂರು ಸಾವಿರಕ್ಕೂ ಹೆಚ್ಚು ನಕ್ಷತ್ರಗಳು ಸೇರಿ ನಮ್ಮ ಮಿಲ್ಕಿ ವೆ ಗ್ಯಾಲಕ್ಸಿ (ತಾರಾಗಣ) ಆಗಿದೆ. ನಮ್ಮ ಪಕ್ಕದ ಆಂಡ್ರೊಮೆಡಾ ಗ್ಯಾಲಕ್ಸಿ, ನಮ್ಮ ಗ್ಯಾಲಕ್ಸಿ ಗಿಂತ ದೊಡ್ಡದು.  ಹೀಗೆ ಕೋಟ್ಯಂತರ ಗ್ಯಾಲಕ್ಸಿ ಗಳನ್ನೂ ಒಟ್ಟಾಗಿ ಯೂನಿವರ್ಸ್ (ಬ್ರಹ್ಮಾಂಡ) ಎನ್ನುತ್ತೇವೆ. ಈ ಬ್ರಹ್ಮಾಂಡಕ್ಕೆ ಇರುವ ಹಲವಾರು ಆಯಾಮಗಳನ್ನು ಒಟ್ಟಾಗಿ multiverse ಎನ್ನುತ್ತೇವೆ.

 

ಆಕಾಶದ ಚುಕ್ಕಿಗಳನ್ನು ಎಣಿಸುವ ವಿಫಲ ಯತ್ನಗಳನ್ನು ಚಿಕ್ಕಂದಿನಲ್ಲೇ ಕೈ ಬಿಟ್ಟಿರುವವರು ನಾವಾದರೆ, ಪ್ರಯತ್ನ ಜಾರಿಯಲ್ಲಿಟ್ಟಿರುವವರು ಮಾತ್ರ ಹೊಸ ಹೊಸ ನಕ್ಷತ್ರಗಳನ್ನು ಹುಡುಕಿ ಪಟ್ಟಿಗೆ ಸೇರಿಸುತ್ತಲೇ ಇದ್ದಾರೆ. ಈ ಕಾರ್ಯ ಹಲವು ಶತಮಾನಗಳಿಂದ ಜಾರಿಯಲ್ಲಿದೆ. ಆದರೂ ಮುಗಿಯಲು ಸಾಧ್ಯ ಆಗುತ್ತಿಲ್ಲ. ಏಕೆಂದರೆ ಬ್ರಹ್ಮಾಂಡ ಅಗಾಧ ಅಷ್ಟೇ ಅಲ್ಲ, ಅನಂತ ಕೂಡ.

Monday, September 13, 2021

ನೋಡಿದ ಕಡೆಯೆಲ್ಲ ದೇವರು

 ದೇವರನ್ನು ಎಲ್ಲೆಲ್ಲೋ ಹುಡುಕಿದೆ,

ಸಿಕ್ಕಿದ್ದು ಬರೀ ನಾನೇ


ನನ್ನನ್ನೇ ಹುಡುಕತೊಡಗಿದೆ,
ನೋಡಿದ ಕಡೆಯೆಲ್ಲ ದೇವರು

- ರೂಮಿ (ಪರ್ಷಿಯಾ ದೇಶದ ಕವಿ)

Friday, September 10, 2021

ಮನಸ್ಸೆಂಬ ಔಷಧಿ

ಅಮೆರಿಕಕ್ಕೆ ವಲಸೆ ಬಂದ, ೪೫ ರ ಹರೆಯದ ಸ್ಟಮ್ಯಾಟಿಸ್ ಎನ್ನುವ ವ್ಯಕ್ತಿಗೆ ವೈದ್ಯರು ತಪಾಸಣೆ ಮಾಡಿ, ಅವನಿಗೆ ಶ್ವಾಸಕೋಶದ ಕ್ಯಾನ್ಸರ್ ಇರುವುದು ಪತ್ತೆ ಹಚ್ಚಿ, ಅವನು ಇನ್ನು ಒಂಭತ್ತು ತಿಂಗಳಿಗೂ ಹೆಚ್ಚು ಕಾಲ ಬದುಕುವ ಸಾಧ್ಯತೆ ಇಲ್ಲ ಎಂದು ತಿಳಿಸುತ್ತಾರೆ. ಚಿಕಿತ್ಸೆ, ಉಪಚಾರ ಮಾಡಿದರೂ ಅದು ಅವನ ಜೀವಿತಾವಧಿಯನ್ನು ವಿಸ್ತರಿಸುವುದು ಕಷ್ಟವಿತ್ತು. ಉಳಿದಿರುವುದು ಒಂಭತ್ತು ತಿಂಗಳು ಆದರೆ ಅದನ್ನು ತನ್ನ ತಾಯ್ನಾಡಾದ ಗ್ರೀಸ್ ನಲ್ಲೆ ಕಳೆಯುವುದಾಗಿ ಮತ್ತು ಸತ್ತ ನಂತರ ತನ್ನ ಪೂರ್ವಿಕರ ಸಮಾಧಿಗಳ ಜೊತೆ ತನ್ನದು ಒಂದಾಗಲಿ ಎನ್ನುವ ಆಶಯದೊಂದಿಗೆ ಗ್ರೀಸ್ ಗೆ ಅವನು ವಾಪಸ್ಸು ಆಗುತ್ತಾನೆ. ಅವನು ವಾಪಸ್ಸು ಬಂದಿರುವ ವಿಷಯ ತಿಳಿದು ಅವನ ಹಳೆಯ ಸ್ನೇಹಿತರೆಲ್ಲ ಅವನನ್ನು ಕಾಣಲು ಕೈಯಲ್ಲಿ ವೈನ್ ಬಾಟಲಿ ಹಿಡಿದು ಬರುತ್ತಾರೆ. ತಾನು ಚಿಕ್ಕವನಿದ್ದಾಗ ಹೋಗುತ್ತಿದ್ದ ಚರ್ಚ್ ಗೆ ಮತ್ತೆ ಹೋಗಲು ಸ್ಟಮ್ಯಾಟಿಸ್ ಆರಂಭಿಸುತ್ತಾನೆ. ತನ್ನ ತೋಟದಲ್ಲಿ ವಿಧ ವಿಧದ ತರಕಾರಿ, ಹಣ್ಣಿನ ಗಿಡಗಳನ್ನು ಹಾಕುತ್ತಾನೆ. ಅವು ಬೆಳೆ ಬರುವುದರಲ್ಲಿ ತಾನು ಉಳಿಯುತ್ತೇನೋ, ಇಲ್ಲವೋ ಎನ್ನುವುದರ ಬಗ್ಗೆ ಅವನು ತಲೆ ಕೆಡಿಸಿಕೊಳ್ಳದೆ, ತನಗೆ ಆನಂದ ಕೊಡುವ  ಕೆಲಸಗಳಲ್ಲಿ ಅವನು ಮುಳುಗಿ ಹೋಗುತ್ತಾನೆ. ಅವನ ತೋಟದ ಬೆಳೆಗಳು ಬರಲಾರಂಭಿಸುತ್ತವೆ. ಒಂದು ವರ್ಷದ ನಂತರ ಇನ್ನೊಂದು ಕಳೆದು ಹೋಗುತ್ತದೆ. ಸ್ಟಮ್ಯಾಟಿಸ್ ಗೆ ಈಗ ೯೮ ವರ್ಷ ವಯಸ್ಸು.


ಈ ಜೀವನ ವೃತ್ತಾಂತ ತಿಳಿಸಿದ್ದು ಡಾ. ಲಿಸ್ಸಾ ರಾಂಕಿನ್. ಅವಳನ್ನು ಕಾಣಲು ಬರುವ ರೋಗಿಗಳಿಗೆ ಈ ವೈದ್ಯೆ ಬರೀ ಔಷಧವನ್ನಷ್ಟೇ ಕೊಡುವುದಿಲ್ಲ. ಅವರ ಜೀವನವನ್ನು ಸಮಗ್ರವಾಗಿ, ಕೂಲಂಕುಷವಾಗಿ ವಿಚಾರಿಸಿಕೊಳ್ಳುತ್ತಾಳೆ. ಅವರ ಆರೋಗ್ಯದ ಮತ್ತು ವೈಯಕ್ತಿಕ ಸಮಸ್ಯೆಗಳಿಗೆ ಯಾವ ಔಷದಿ ಕೊಟ್ಟರೆ ಚೆನ್ನ ಎಂದು ಅವರಿಗೆ ಅನ್ನಿಸುತ್ತದೆ ಎಂದು ಕೇಳುತ್ತಾಳೆ. ಆಗ ಸಮಸ್ಯೆಗಳ ಮೂಲ ಮತ್ತು ಪರಿಹಾರ ರೋಗಿಗಳ ಬಾಯಿಂದಲೇ ಬರುತ್ತದೆ. 


ಒತ್ತಡದ ಉದ್ಯೋಗ, ಹಣಕಾಸಿನ ಸಮಸ್ಯೆ, ಕೌಟುಂಬಿಕ ಕಲಹಗಳು, ನಿದ್ದೆಗೆಡುವುದು, ಒಬ್ಬಂಟಿ ಜೀವನ ಮುಂತಾದವುಗಳು ಕಾಲ ಕ್ರಮೇಣ ರೋಗಗಳಾಗಿ ಬದಲಾಗಿ ಅನಾರೋಗ್ಯಕ್ಕೆ ಈಡು ಮಾಡುತ್ತವೆ. ಬದುಕುವ ಆಸೆ ಕಡಿಮೆಯಾದಂತೆಲ್ಲ ರೋಗಗಳು ಉಲ್ಬಣಗೊಳ್ಳುತ್ತ ಹೋಗುತ್ತವೆ. ಮೂಲ ಸಮಸ್ಯೆಗಳನ್ನು ಬಗೆಹರಿಸದೆ ಬರೀ ಔಷಧಿ ತೆಗೆದುಕೊಂಡರೆ ಆಗುವ ಪ್ರಯೋಜನ ಅಂತಹ ದೊಡ್ಡದೇನಲ್ಲ. ಇದಕ್ಕೆ ತದ್ವಿರುದ್ಧವಾಗಿ, ಜೀವನ ಉಲ್ಲಾಸಮಯವಾದಂತೆಲ್ಲ ರೋಗಗಳ ತೀವ್ರತೆಯು ಕಡಿಮೆಯಾಗುತ್ತ ಹೋಗುತ್ತದೆ. ಶಾಂತ ಮನಸ್ಸು ನಮ್ಮ ದೇಹದ ಸ್ವ-ರಿಪೇರಿ ಮಾಡುವ ತಾಕತ್ತನ್ನು ಹೆಚ್ಚಿಸುತ್ತ ಹೋಗುತ್ತದೆ. ಸ್ವಸ್ಥ ಮನಸ್ಸು ದೇಹದ ಆರೋಗ್ಯವನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ.


ಕೆಲಸದಲ್ಲಿ ಒತ್ತಡ ಯಾರಿಗಿಲ್ಲ? ಆದರೆ ಸಹೋದ್ಯೋಗಿಗಳೊಂದಿಗೆ ಸ್ಪರ್ಧೆಗೆ ಬೀಳದೆ ಒತ್ತಡ ಕಡಿಮೆ ಮಾಡಿಕೊಳ್ಳುವ ಆಯ್ಕೆ ನಮಗೆ ಬಿಟ್ಟಿದ್ದು. ಇರುವ ರಜೆಗಳ ಸಂಪೂರ್ಣ ಉಪಯೋಗ ಪಡೆದು, ಒತ್ತಡ ಕಡಿಮೆ ಮಾಡುವ ಹವ್ಯಾಸಗಳಲ್ಲಿ ತೊಡಗಿ, ಮನಸ್ಸಿಗೆ ಮತ್ತು ದೇಹಕ್ಕೆ ವಿಶ್ರಾಂತಿ ಕೊಟ್ಟರೆ ಅದು ಆರೋಗ್ಯವನ್ನು ಪುನಶ್ಚೇತನಗೊಳಿಸುತ್ತದೆ. ಕೌಟುಂಬಿಕ ಸಂಬಂಧಗಳು ಸರಿ ಹೋಗದಿದ್ದರೆ, ಸಹನೆಯ ಮಿತಿಯನ್ನು ದಾಟಿದ್ದರೆ, ಪ್ರತಿ ದಿನ ವಿಷ ನುಂಗುವುದಕ್ಕಿಂತ ಧೈರ್ಯ ತೆಗೆದುಕೊಂಡು ಆ ಸಂಬಂಧಗಳನ್ನು ಕೊನೆಗೊಳಿಸಿ ಎನ್ನುವ ಸಲಹೆ ನೀಡುತ್ತಾರೆ ಈ ವೈದ್ಯೆ. ಉತ್ತಮ ಸ್ನೇಹಿತರು ನಿಮ್ಮ ಆಯಸ್ಸನ್ನು ಹೆಚ್ಚಿಗೆ ಮಾಡುತ್ತಾರೆ ಮತ್ತು ನಿಮಗೆ ಬದುಕುವ ಉಲ್ಲಾಸ ತುಂಬುತ್ತಾರೆ. ಹಳೆಯ ಸ್ನೇಹಿತರನ್ನು ಕಳೆದುಕೊಳ್ಳಬೇಡಿ ಮತ್ತು ಹೊಸಬರ ಸ್ನೇಹ ಆಗುತ್ತಿರಲಿ ಎನ್ನುವುದು ಇವರ ಅಭಿಪ್ರಾಯ. ಯೋಗ, ಧ್ಯಾನ, ಆಟಗಳು, ಸಂಗೀತ, ಚಿತ್ರಕಲೆ ಹೀಗೆ ಯಾವುದರಲ್ಲಿ ನಿಮಗೆ ಆಸಕ್ತಿ ಇದೆಯೋ ಅದರಲ್ಲಿ ನಿಮ್ಮ ಕ್ರಿಯಾಶೀಲತೆಯನ್ನು ಬೆಳೆಸಿಕೊಳ್ಳಿ. ಇವೆಲ್ಲ ನೀವು ರೋಗಗಳಿಂದ ದೂರಾಗುವಲ್ಲಿ ನೆರವಾಗುತ್ತವೆ. ದೇಹದ ಕಾರ್ಯ ಕ್ಷಮತೆ ಹೆಚ್ಚಿಸಿ, ನಿಮ್ಮ ಜೀವನ ಕಾಲ ವಿಸ್ತರಿಸುವಂತೆ ಮಾಡುತ್ತವೆ. ನೀವು ಸಂತೋಷವಾಗಿಲ್ಲದೆ, ಔಷಧಿ ಮಾತ್ರ ತೆಗೆದುಕೊಂಡರೆ ಅದರ ಪ್ರಯೋಜನ ಅಷ್ಟಕಷ್ಟೇ ಎನ್ನುವ ಸತ್ಯ ಬಿಚ್ಚಿಡುತ್ತಾರೆ. 


ಇದು ನಮಗೆ ತಿಳಿಯದ ಹೊಸ ವಿಷಯವೇನಲ್ಲ. ಆದರೆ ವೈದ್ಯರೇ ಇದನ್ನು ಧೃಡೀಕರಿಸುವದು ಇದರ ಪ್ರಾಮುಖ್ಯತೆ ತೋರಿಸುತ್ತದೆ. ಔಷಧಿ ಚೀಟಿಯನ್ನು ಈ ವೈದ್ಯರು ಬರೆದು ಕೊಡದೆ, ನಮಗೆ ನಾವೇ ಬರೆದುಕೊಳ್ಳುವಂತೆ ಪ್ರಚೋದಿಸುವ ಈ ವೈದ್ಯೆ ವಿಶಿಷ್ಟ ಎನಿಸುತ್ತಾರೆ. ಇನ್ನು ಹೆಚ್ಚಿನ ವಿಷಯಗಳನ್ನು ಅವರಿಂದಲೇ ತಿಳಿದುಕೊಳ್ಳಿ.

https://www.youtube.com/watch?v=gcai0i2tJt0



Sunday, September 5, 2021

ಹೀರೋ ಎನ್ನುವ ಕಲ್ಪನೆ, ವಿಲ್ಲನ್ ಎಂಬ ವಾಸ್ತವ

ನಾವು ನೋಡುವ ಚಲನ ಚಿತ್ರಗಳಲ್ಲಿ ನಾಯಕ, ನಾಯಕಿ, ಖಳನಾಯಕ ಇವರುಗಳ ಪಾತ್ರ ಸೃಷ್ಟಿ ಹೇಗೆ ಆಗುತ್ತೆ ಎನ್ನುವ ಕಡೆಗೆ ಗಮನ ಹರಿಸಿದ್ದೀರಾ? ಯಾವುದೇ ಕತೆಗಾರನ ಅಥವಾ ಚಲನ ಚಿತ್ರ ನಿರ್ದೇಶಕನ ಅಂತರಂಗವನ್ನು ಕೆದಕಿ ನೋಡಿ. ನಾಯಕನನ್ನು ಆದರ್ಶವಾಗಿ ಚಿತ್ರಿಸಲು, ಅವನು ಹೇಗಿದ್ದರೆ ಚೆನ್ನ ಎನ್ನುವ ಕಲ್ಪನೆಯ ಮೊರೆ ಹೋಗುತ್ತಾರೆ. ನಾಯಕಿಗೆ ರೂಪ, ಲಾವಣ್ಯಗಳೇ ಅಳತೆಗೋಲು. ಖಳನಾಯಕನನ್ನು ನಮ್ಮ ಸಮಾಜದ ನಡುವೆಯಿಂದ ಎತ್ತಿಕೊಂಡು ಬರುತ್ತಾರೆ, ಇಲ್ಲವೇ ವಾಸ್ತವಕ್ಕೆ ಹತ್ತಿರವಾಗಿ ಇರುವ ವ್ಯಕ್ತಿಗಳನ್ನೇ ಆಧರಿಸಿಕೊಂಡು ಬಿಡುತ್ತಾರೆ.


ಹೀರೋನ ಇಮೇಜ್ ವಿಲ್ಲನ್ ಮೇಲೆ ಅವಲಂಬಿಸುರುತ್ತದೆ. ಖಳನಾಯಕ ಎಷ್ಟು ಭೀಕರ ಇರುತ್ತಾನೋ ಅಷ್ಟು ನಾಯಕನ ಮೌಲ್ಯ ಬೆಳೆಯುತ್ತದೆ. ಖಳನಾಯಕ ಸಾದಾ ಎನಿಸಿದರೆ ಹಲವಾರು ಖಳನಾಯಕರನ್ನು ಸೃಷ್ಟಿಸಲಾಗುತ್ತದೆ. ಹಿಂದೆ ಕರಾಟೆ ಪಟ್ಟು ತೆಗೆಯುತ್ತಿದ್ದ ಶಂಕರ್ ನಾಗ್ ರಿಗೆ ಹಲವಾರು ಖಳರೊಂದಿಗೆ ಒಟ್ಟಿಗೆ ಬಡಿದಾಡುವ ಸನ್ನಿವೇಶಗಳಿರುತ್ತಿದ್ದವು. ಇತ್ತೀಚಿನ 'ಬಾಹುಬಲಿ' ಚಿತ್ರದಲ್ಲಿ ನಾಯಕನಿಗೆ ಸರಿ ಸಮಾನ ದೇಹ ಧಾರ್ಡ್ಯ ಇರುವ ಖಳನಾಯಕ ಇದ್ದ. ಸವಾಲು ಹಾಕುವ ಖಳನಾಯಕನೇ ಇರದಿದ್ದರೆ ನಾಯಕನಿಗೆ ಎಲ್ಲಿಯ ಬೆಲೆ? ಚಿತ್ರ ನೋಡುವ ವೀಕ್ಷಕರೆಲ್ಲರೂ ಆ ಚಿತ್ರದಲ್ಲಿ ತಾವೇ ಹೀರೋ ಅನ್ನುವಂತೆ ಚಿತ್ರವನ್ನು ವೀಕ್ಷಿಸುತ್ತಾರೆ ಹಾಗೆಯೆ ಅವರಿಗೆ ಖಳನಾಯಕ ತಮ್ಮ ಜೀವನದಲ್ಲಿ ಪ್ರತಿಸ್ಪರ್ಧಿ ಎನ್ನಿಸುವುದು ಸಾಧಾರಣ ಸಂಗತಿ. ಆದರೆ ನೀವು ಯಾರನ್ನು ಖಳನಾಯಕನ ಪಾತ್ರದಲ್ಲಿ ನಿಲ್ಲಿಸಿ ನೋಡುತ್ತಿರೋ, ಅವನು ಅದೇ ಚಿತ್ರವನ್ನು ತಾನೇ ಹೀರೋ ಎನ್ನುವಂತೆ ವೀಕ್ಷಣೆ ಮಾಡುತ್ತಿರುತ್ತಾನೆ. ಮತ್ತು ಅವರಿಗೆ ನೀವೇ ವಿಲ್ಲನ್.


ಚಲನಚಿತ್ರದ ಪಾತ್ರಗಳಲ್ಲಿ ನಾವು ಒಂದಾಗದೆ ಸ್ವಲ್ಪ ದೂರ ನಿಂತುಕೊಂಡು ಗಮನಿಸಿ ನೋಡಿ. ಪರದೆಯ ಮೇಲೆ ಹೊಡೆದಾಡಿ ಗೆಲ್ಲುವ ನಾಯಕ, ನಿಜ ಜೀವನದಲ್ಲಿ ಅಷ್ಟು ಶಕ್ತಿವಂತನಾಗಿರುವುದಿಲ್ಲ. ಆದರೆ ಖಳನಾಯಕ ವಾಸ್ತವದಲ್ಲಿ ಚಿತ್ರದಲ್ಲಿಗಿಂತ ಹೆಚ್ಚಿನ ಕಟುಕ ಆಗಿದ್ದರು ಆಶ್ಚರ್ಯವಿಲ್ಲ.  ಬಹಳಷ್ಟು ಚಿತ್ರಗಳು, ಕಾದಂಬರಿಗಳು ಮದುವೆಯಲ್ಲೋ, ಇಲ್ಲವೇ ನಾಯಕನ ಸಾವಿನಲ್ಲೂ ಮುಕ್ತಾಯವಾಗುತ್ತವೆ. ಆದರೆ ನಿಜ ಜೀವನದಲ್ಲಿ ದೈಹಿಕ ಶಕ್ತಿಗಿಂತ ಧೈರ್ಯ, ಸಾಹಸ, ಬುದ್ಧಿವಂತಿಕೆ, ಸಮಯ ಪ್ರಜ್ಞೆ ಇಬ್ಬರಲ್ಲಿ ಯಾರಿಗೆ ಹೆಚ್ಚಿದೆಯೋ ಅವರ ಕೈ ಮೇಲಾಗುತ್ತದೆ. ಆದರೆ ಗೆಲುವು ಕೂಡ ಶಾಶ್ವತ ಅಲ್ಲ. ಒಂದು ಗೆಲುವು ಸಾಧಿಸಿದ ಸ್ವಲ್ಪೇ ಸಮಯಕ್ಕೆ ನಿಮ್ಮ ಜೀವನದಲ್ಲಿ ಇನ್ನೊಬ್ಬ ಖಳನಾಯಕ ಕಾಲಿಟ್ಟು ಬಿಡುತ್ತಾನೆ, 'ಅಭಿ ಪಿಕ್ಚರ್ ಬಾಕಿ ಹೈ' ಎನ್ನುವ ಹಾಗೆ.


ಚಿತ್ರಗಳಲ್ಲಿ ನಾಯಕನ ಸ್ನೇಹಿತರಿಗೆ ಖಳನಾಯಕನಿಗೆ ಇರುವ ಪ್ರಾಶಸ್ತ್ಯ ಇಲ್ಲ. ಅವರು ಕಥೆಗೆ ಪೂರಕ ಇದ್ದರೂ ನಿರ್ಣಾಯಕ ಸನ್ನಿವೇಶಗಳಲ್ಲಿ ಅವರು ಕಾಣುವುದೇ ಇಲ್ಲ. ಆಗ ನಮ್ಮ ಹೀರೋ ಒಬ್ಬಂಟಿ. ಗೆದ್ದರೂ, ಸೋತರೂ ಅದು ಅವನ ಪ್ರಯತ್ನದಿಂದ. ಇದು ಮಾತ್ರ ನಿಜ ಜೀವನಕ್ಕೂ ಅನ್ವಯಿಸುತ್ತದೆ. ನಕ್ಕು ಹಗುರಾಗಲು, ಕಷ್ಟದಲ್ಲಿ ಸಹಾಯ ಮಾಡಲು ನಮಗೆ ಹಲವಾರು ಸ್ನೇಹಿತರಿದ್ದರೂ, ಅವರು ನಮಗೆ ಸವಾಲಾಗುವುದಿಲ್ಲ. ಖಳನಾಯಕನೇ ನಮ್ಮನ್ನು ಬಲೆಗೆ ಸಿಕ್ಕಿ ಹಾಕಿಸಿ ಚಿತ್ರಹಿಂಸೆ ಕೊಡುವುದು. ಖಳನಾಯಕನನ್ನು ಎಷ್ಟು ಚೆನ್ನಾಗಿ ನಿಭಾಯಿಸುತ್ತೇವೆ ಎನ್ನುವುದು ನಮ್ಮ ಅಳಿವು-ಉಳಿವನ್ನು ನಿರ್ಧರಿಸುತ್ತದೆ. ಹಾಗಾಗಿ ಖಳನಾಯಕರು ನಮ್ಮ ಸ್ನೇಹಿತರಿಂಗಿಂತ ಹೆಚ್ಚು ಅನ್ನಿಸುವಷ್ಟು ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತಾರೆ.


ನಮ್ಮ ಸಮಾಜದಲ್ಲಿ ಹೀರೋಗಳು ತುಂಬಾ ವಿರಳ. ಆದರೆ ವಿಲ್ಲನ್ ಗಳು ಹಾದಿಗೊಬ್ಬರು, ಬೀದಿಗೊಬ್ಬರು. ಒಂದು ವೇಳೆ ನಿಮಗೆ ನೀವು ಹೀರೋ ಅನ್ನಿಸಿದರೆ, ನಿಮ್ಮನ್ನು ಹೀರೋ ಮಾಡಿದ್ದು ಆ ವಿಲ್ಲನ್ ಗಳೇ ಎನ್ನುವುದೇ ನೆನಪಿರಲಿ. ನಿಮ್ಮ ಶಕ್ತಿ, ಸಾಮರ್ಥ್ಯಕ್ಕೆ ಅವರು ಸವಾಲು ಹಾಕಿದ್ದಕ್ಕೆ ಅಲ್ಲವೇ ನೀವು ಹೀರೋ ಆಗಿ ಬೆಳೆದದ್ದು? ಸ್ನೇಹಿತರನ್ನು ನೀವು ಆಯ್ಕೆ ಮಾಡುವ ಅಗತ್ಯವಿಲ್ಲ. ಆದರೆ ಪ್ರತಿಸ್ಪರ್ಧಿಯನ್ನು ಮಾತ್ರ ನೀವು ಅಳೆದು, ತೂಗಿ ಆಯ್ಕೆ ಮಾಡಬೇಕು. ಏಕೆಂದರೆ ಇಲ್ಲಿ ಗೆದ್ದವನೇ ಹೀರೋ ಮತ್ತು ಸೋತವನು ಕೈಲಾಗದವನು ಅಷ್ಟೇ.

Saturday, September 4, 2021

ನಮ್ಮೂರೇ ನಮಗೆ ಮೇಲು ಎಂದು ಹಾಡುವ ಮುನ್ನ ಸ್ವಲ್ಪ ಅಲೆದು ಬನ್ನಿ

ಊರೂರು ಸುತ್ತುವುದಕ್ಕಿಂತ ಸುಮ್ಮನೆ ಒಂದೂರಲ್ಲಿ ಕುಳಿತುಕೊಳ್ಳುವುದೆಕ್ಕೆನು ಧಾಡಿ ಎಂದು ನಾವು ಯಾರಿಗಾದರೂ ಬೈಯುತ್ತೇವೆಲ್ಲ? ಜಗತ್ತಿನ ಎಲ್ಲ ಜನರು ತಮ್ಮೂರಲ್ಲೇ, ತಮ್ಮ ಮನೆಯಲ್ಲೇ ಕುಳಿತುಕೊಂಡಿದ್ದರೆ, ನಾವು ಇನ್ನು ಶಿಲಾಯುಗದಲ್ಲೇ ಇರುತ್ತಿದ್ದೆವೇನೋ? ವಲಸಿಗರೇ ಕಟ್ಟಿದ ಅಮೇರಿಕ ದೇಶವನ್ನು ನಾವು ಇಂದು ಹಾಡಿ ಹೊಗುಳುವುದಿಲ್ಲವೇ? ಭಾರತಕ್ಕೆ ಸಮುದ್ರ ಮಾರ್ಗ ಕಂಡು ಹಿಡಿದ ಅಲೆಮಾರಿ ವಾಸ್ಕೋ-ಡಾ-ಗಾಮ ಚರಿತ್ರೆಯ ಪುಟದಲ್ಲಿ ಸೇರಿ ಹೋಗಿಲ್ಲವೇ? ಆದಿ ಶಂಕರ ಕೇರಳದಿಂದ ಹಿಮಾಲಯಕ್ಕೆ ಕಾಲ್ನಡಿಗೆಯಲ್ಲಿ ಹೋಗಲಿಲ್ಲವೇ? ಅವನು ವೇದಗಳಿಗಿಂತ ಹೆಚ್ಚು ತನ್ನ ಪ್ರವಾಸದಿಂದ ಕಲಿತದ್ದು ಎನ್ನುವುದು ನನ್ನ ಸ್ವಂತ ಅಭಿಪ್ರಾಯ. ಚೀನಾ ದೇಶದ ಪ್ರವಾಸಿಗರು, ಭಾರತದಿಂದ ಚಹಾ ತಯಾರಿಸುವುದನ್ನು ಕಲಿತು ಹೋದರೆ, ವಾಪಸ್ಸು ಬಂದು ಚಹಾವನ್ನು ಕುಡಿಯಲು ಪಿಂಗಾಣಿ ಕಪ್ ಗಳನ್ನು ಕೊಟ್ಟು ಹೋದರು. ಅವರು ಧರಿಸಿದ ಹೊಳಪಿನ ಬಟ್ಟೆ 'ಚೈನಾ ಸಿಲ್ಕ್' ಹೊತ್ತು ತರಲು ಬಳಸಿದ 'ಸಿಲ್ಕ್ ರೂಟ್' ದಾರಿಗಳು ಮುಂದೆ ಹೆದ್ದಾರಿಗಳಾಗಿ ಬದಲಾದವು. ವಿಚಾರ, ಸಂಸ್ಕೃತಿ ವಿನಿಮಯವಾಗಿದ್ದೆ ಪ್ರವಾಸಿಗರಿಂದ, ಅಲೆಮಾರಿಗಳಿಂದ. ಭಾಷೆ ಗೊತ್ತಿಲ್ಲದ, ನಿಮಗೆ ಗೊತ್ತಿರುವವರು ಯಾರು ಇಲ್ಲದ ಊರಿಗೆ ಹೋಗಿ ಬನ್ನಿ. ಆಮೇಲೆ ನಮ್ಮೂರೇ ಚೆನ್ನ ಎಂದು ಹೇಳಿ, ಅಡ್ಡಿ ಇಲ್ಲ. 


ಅದು ೨೦೦೬ನೆ ವರ್ಷ. ಆಗ ನಾನು ಕೆಲಸ ಮಾಡುತ್ತಿದ್ದ GE ಕಂಪನಿಯಿಂದ ಇಟಲಿ ದೇಶದ ಫ್ಲಾರೆನ್ಸ್ ಎನ್ನುವ ಪ್ರವಾಸಿ ನಗರದಲ್ಲಿ ಎರಡು ತಿಂಗಳುಗಳ ಕಾಲ ಕೆಲಸದ ಮೇಲೆ ಹೋಗಿದ್ದೆ. ಫ್ರಾನ್ಸ್ ದೇಶದ ಪ್ಯಾರಿಸ್ ನಲ್ಲೆ ನನ್ನ ಪಾಸ್ ಪೋರ್ಟ್ ನಲ್ಲಿ ಸೀಲ್ ಹಾಕಿ 'ವೆಲ್ ಕಮ್ ಟು ಯುರೋಪ್' ಎಂದು ಹೇಳಿದಾಗ ನನಗೆ ಪರಮಾಶ್ಚರ್ಯ. ಆದರೆ ಆ ಸ್ವಾಗತ ಮತ್ತು ಇಂಗ್ಲಿಷ್ ಭಾಷೆ ಅಲ್ಲಿಗೆ ಕೊನೆ ಎಂದು ಗೊತ್ತಿರಲಿಲ್ಲ. ಫ್ಲಾರೆನ್ಸ್ ನಗರ ತಲುಪಿ ಮರು ದಿನ ಬೆಳಿಗ್ಗೆ ಫ್ಯಾಕ್ಟರಿಗೆ ಹೋಗಲು ವಿಳಾಸ ತೋರಿಸಿ, ಹೋಗುವ ಮಾರ್ಗ ಹೇಗೆ ಎಂದು ಹೋಟೆಲ್ ನ ಅಟೆಂಡರ್ ಕೇಳಿದರೆ ಅವನು ಇಟಾಲಿಯನ್ ಭಾಷೆಯಲ್ಲಿ ಉತ್ತರ ನೀಡಿದ. ಅವನಿಗೆ ಇಂಗ್ಲಿಷ್ ಭಾಷೆ ಬಾರದು. ನನಗೆ ಅವರ ಭಾಷೆ ಸ್ವಲ್ಪ ಕೂಡ  ಅರ್ಥವಾಗುತ್ತಿರಲಿಲ್ಲ. ಸರಿ, ಇನ್ನೇನು ಮಾಡುವುದು? ಯಾವುದೊ ಒಂದು ಭಾಷೆಯಲ್ಲಿ ಮಾತನಾಡಬೇಕಲ್ಲ. ಕನ್ನಡದಲ್ಲೇ ಮತ್ತೆ 'ಟ್ಯಾಕ್ಸಿ ಎಲ್ಲಿ ಸಿಗುತ್ತೆ?' ಎಂದು ಕೇಳಿದೆ. ಅವನು ನನಗೆ ಒಂದು ಗ್ಲಾಸ್ ನೀರು ತಂದುಕೊಟ್ಟು, ತನಗೆ ಏನು ಅರ್ಥವಾಗುತ್ತಿಲ್ಲ ಎನ್ನುವ ಹಾಗೆ ಕೈ ಚೆಲ್ಲಿ ದೈಹಿಕ ಭಾಷೆಯಲ್ಲಿ ಹೇಳಿ ಹೋದ. ಕೊನೆಗೆ ಇಂಗ್ಲಿಷ್ ಭಾಷೆ ಬರುವ ಒಬ್ಬರನ್ನು ಹುಡುಕಿ ಆಫೀಸ್ ತಲುಪಿದೆವು. ಅದು ಇಟಲಿ ಸರ್ಕಾರ ನಡೆಸುತ್ತಿದ್ದ ಫ್ಯಾಕ್ಟರಿ. ಆ ಫ್ಯಾಕ್ಟರಿ ಯಲ್ಲಿ ತಯಾರಿ ಆಗುತ್ತಿದ್ದದ್ದು ಬೃಹತ್ ಗಾತ್ರದ ಕಂಪ್ರೆಸರ್ ಗಳು. ಅವುಗಳು ಅಲ್ಲಿಂದ ಸೌದಿ ಅರೇಬಿಯಾಕ್ಕೆ ಹೋಗಿ, ಅಲ್ಲಿ ಕಚ್ಚಾ ತೈಲ ಉತ್ಪಾದನೆಗೆ ಬಳಕೆಯಾಗುತ್ತಿದ್ದವು. ಅಲ್ಲಿ ಹೊರ ತೆಗೆದ ತೈಲ ನೂರಾರು ದೇಶಗಳಿಗೆ ತಲುಪಿದಾಗ ತಾನೇ ಕಾರು, ಬಸ್ಸು, ರೈಲುಗಳು ಚಲಿಸುವುದು? ಪ್ರಪಂಚದ ಎಲ್ಲ ಜನರು ತಮ್ಮ ಮನೆಯಲ್ಲೇ ಕುಳಿತುಕೊಂಡಿದ್ದರೆ, ತೈಲ ಉದ್ಯಮ ಮತ್ತು ಆಟೋಮೊಬೈಲ್ ಉದ್ಯಮ ಎಲ್ಲಿರುತ್ತಿತ್ತು? ವಿಚಾರ ಮಾಡಿ ನೋಡಿದರೆ, ಅಲೆಮಾರಿಗಳೇ ಜಗತ್ತನ್ನು ಮುನ್ನಡೆಸುವುದು.


ಸಂಜೆಯಾದರೆ ಸಾಕು ನಾನು ಆ ಊರು ಸುತ್ತಲು ಹೊರಟು ಬಿಡುತ್ತಿದ್ದೆ. ಫ್ಲಾರೆನ್ಸ್ ಊರಿನ ತುಂಬಾ ಚರ್ಚ್ ಗಳು ಮತ್ತು ಮ್ಯೂಸಿಯಂ ಗಳು . ನಮ್ಮ ಹಂಪಿಯಲ್ಲಿ ಬೀದಿ ಬೀದಿಗೆ ದೇವಸ್ಥಾನಗಳು ಸಿಕ್ಕುತ್ತಾವಲ್ಲ ಹಾಗೆ. ಸಣ್ಣದು, ದೊಡ್ಡದು, ಗುಡ್ಡದ ಮೇಲೆ, ಗುಡ್ಡದ ಕೆಳಗೆ, ಹಳೆಯದು, ಹೊಸದು ಹೀಗೆ ಅವುಗಳು ತರಹಾವರಿ. ಖ್ಯಾತ ಶಿಲ್ಪಿ ಮೈಕಲ್ ಆಂಜೆಲೋ ನಿರ್ಮಿಸಿದ ಡೇವಿಡ್ ಪ್ರತಿಮೆ ಕೂಡ ಆ ಊರಿನಲ್ಲಿದೆ. ಭಾಷೆ ಬಾರದ ಊರಿನಲ್ಲಿ ಅಲೆಯುವಾಗ ತೆರೆದುಕೊಳ್ಳುವ ಲೋಕ ವಿಶಿಷ್ಟ ಎನಿಸುತ್ತಿತ್ತು. ನೀವು ಎಷ್ಟೇ ಪುಸ್ತಕ ಓದಿ ಅಥವಾ ಚಲನ ಚಿತ್ರಗಳನ್ನು ನೋಡಿ. ಅವುಗಳು ಅಲೆಮಾರಿತನ ತಂದು ಕೊಡುವ ಅನುಭವಕ್ಕೆ ಸಾಟಿಯಾಗವು. ಮನುಷ್ಯನನ್ನು ಹೊರತು ಪಡಿಸಿ ಪ್ರಕೃತಿಯಲ್ಲಿರುವ ಎಲ್ಲ ಜೀವಿಗಳು ಅಲೆಮಾರಿಗಳು. ನೀರು ಸಿಗುವುದು ಒಂದು ಕಡೆ ಆದರೆ ಆಹಾರ ಸಿಗುವುದು ಇನ್ನೊಂದೆಡೆ. ದೈಹಿಕ ಕರ್ಮಗಳಿಗೆ ಹುಡುಕಬೇಕು ಮತ್ತೊಂದು ಜಾಗ. ಹೀಗೆ ಪ್ರಾಣಿ, ಪಕ್ಷಿಗಳು ತಮ್ಮ ಶಕ್ತಿಯನುಸಾರ ದಿನವಿಡೀ ಅಲೆಯುತ್ತವೆ. ಹುಲಿ, ಸಿಂಹಗಳು ತಮ್ಮ ಗಡಿಯನ್ನು ಗುರುತು ಮಾಡುತ್ತ ಅಲೆಯುತ್ತವೆ. ಹೆಚ್ಚು ಅಲೆದ ಆನೆ ಗುಂಪಿಗೆ ನಾಯಕನಾಗುತ್ತದೆ. ಆದರೆ ಮನುಷ್ಯನಿಗೆ ಮಾತ್ರ ಮನೆಯಲ್ಲಿಯೇ ಇದೆ ಬಾತ್ ರೂಮ್ ಹಾಗೆ ಕಿಚನ್. ಇವತ್ತಿನ ಕಾಲದಲ್ಲಿ ಏನಾದರು ಬೇಕಾದರೆ ಮನೆ ಬಾಗಿಲಿಗೆ ತಲುಪಿಸಲಿಕ್ಕೆ ಇವೆ ಅಮೆಜಾನ್ ಮತ್ತು ಝೋಮ್ಯಾಟೊ. ಆದರೆ ಪ್ರಕೃತಿ ಕೆಲವರನ್ನಾದರೂ ಮನೆ ಬಾಗಿಲಿಂದ ಆಚೆ ಹೋಗುವಂತೆ ಪ್ರೇರೇಪಿಸುತ್ತದೆ. ಅದೇ ನೆಮ್ಮದಿ. ಅವರಿಂದಲೇ ಏನಾದರು ಹೊಸ ಬದಲಾವಣೆಗಳು ಬರುವುದು.


ಕೆಲಸ ಮುಗಿಯುವ ಮುನ್ನ, ಸಮುದ್ರದ ಅಂಚಿನಲ್ಲಿರುವ ಮಸ್ಸಾ ಎನ್ನುವ ಪಟ್ಟಣಕ್ಕೆ ಒಂದು ದಿನ ಹೋಗಬೇಕಾಗಿ ಬಂತು. ಆ ದಿನ ಸಂಜೆ ಕಡಲ ತಡಿಗೆ ಹೋಗಿ ಕುಳಿತುಕೊಂಡೆ. ಸಮುದ್ರ ತೀರದ ತುಂಬೆಲ್ಲ ಬಿಳಿ ಬಣ್ಣದ, ಬೂದು ಬಣ್ಣದ ವಲಸೆ ಪಕ್ಷಿಗಳು. ಎಲ್ಲಿಂದ ಬಂದವೋ ಮತ್ತು ಮುಂದೆಲ್ಲಿಗೆ ಹೋಗುತ್ತವೋ? ಅಪಾಯದ ನಡುವೆಯೂ ಅವುಗಳು ಹೊಸ ಅನುಭವಕ್ಕೆ ತಮ್ಮನ್ನು ಒಡ್ಡಿಕೊಳ್ಳುವುದು ವಿಶಿಷ್ಟ ಎನಿಸಿತು. ಅನುಭವ ವಿಸ್ತಾರ ಆಗಲೆಂದು ಪ್ರಕೃತಿಯು ಹೀಗೆ ಜೀವ ವಿನ್ಯಾಸ ಮಾಡಿತೋ ಏನೋ? ನಿಂತ ನೀರು ಕೆಡಬಹುದು ಆದರೆ ಹರಿಯುವ ನೀರು ನವೀಕರಣಗೊಳ್ಳುತ್ತ ಸಾಗುತ್ತದೆ. ಪ್ರಕೃತಿಗೆ ಬೇಕಾದದ್ದು ಅದೇ ಅಲ್ಲವೇ ಅನ್ನಿಸಿತು.


"ಏನೇನೋ ಕಂಡ ಮೇಲೆ ನಮ್ಮೂರೇ ನಮಗೆ ಮೇಲು" ಎನ್ನುವ ಹಾಡನ್ನು ನಾನು ಕೂಡ ಒಪ್ಪುತ್ತೇನೆ. ಆದರೆ ಏಳು ಕೆರೆ ನೀರು ಕುಡಿದು ಬಂದು ಆ ಹಾಡು ಹಾಡಿದರೆ ಅದು ನಮ್ಮ ಅನುಭವದ ಹಾಡಾಗುತ್ತದೆ. ಭಾವಿಯ ಕಪ್ಪೆಯ ಹಾಗೆ ನನ್ನದೇ ದೊಡ್ಡ ಭಾವಿ ಎನ್ನುವದಕ್ಕಿಂತ, ಬೇರೆ ಭಾವಿ ಒಮ್ಮೆಯಾದರೂ ನೋಡಿ ಬರುವುದೇ ಲೇಸು ಎನ್ನುವುದು ನನ್ನ ಅಭಿಪ್ರಾಯ. ಸ್ವಲ್ಪವಾದರೂ ಅಲೆಮಾರಿತನ ನಮ್ಮಲ್ಲಿ ಹೊಸತನ ತರುತ್ತದೆ. ಈ ಕೊರೊನ ಕಾಟ ಮುಗಿದ ಮೇಲೆ, ಇದುವರೆಗೆ ಹೋಗಿರದ ಜಾಗಕ್ಕೆ ಹೋಗಿ ಬರೋಣ ಎನ್ನುವ ವಿಚಾರದಲ್ಲಿದ್ದೇನೆ. ನೀವೆಲ್ಲಿಗೆ ಹೋಗುವ ಯೋಜನೆ ಹಾಕಿದ್ದೀರಿ?

Friday, September 3, 2021

ಮನಶಾಸ್ತ್ರದ ಗಣಿತ ಸರಳವಲ್ಲ

೧. ಇಂದು ನಿಮ್ಮ ಅದೃಷ್ಟದ ದಿನ ಎಂದುಕೊಳ್ಳೋಣ. ಏಕೆಂದರೆ ನೀವು ಒಂದು ಲಕ್ಷ ರೂಪಾಯಿಯ ಲಾಟರಿ ಗೆದ್ದಿರುವಿರಿ. ಅದು ನಿಮಗೆ ಕೊಡುವ ಸಂತೋಷವೆಷ್ಟು? ಅದು ಉಳಿಯುವುದೆಷ್ಟು ದಿನ? ಒಂದು ವೇಳೆ ಇಂದು ನಿಮ್ಮ ದುರದೃಷ್ಟದ ದಿನವಾಗಿ, ನೀವು ಕಷ್ಟ ಪಟ್ಟು ಕೂಡಿಟ್ಟ ಒಂದು ಲಕ್ಷ ರೂಪಾಯಿ  ಕಳೆದುಕೊಂಡರೆ, ಅದು ನಿಮಗೆ ತರುವ ದುಃಖವೆಷ್ಟು? ಅದು ಮರೆತು ಹೋಗಲು ಬೇಕಾದ ಸಮಯವೆಷ್ಟು? ಒಂದು ಲಕ್ಷ ರೂಪಾಯಿ ಗೆದ್ದಾಗ ಆಗುವ ಸಂತೋಷ ಹೆಚ್ಚೊ? ಅಥವಾ ಅಷ್ಟೇ ದುಡ್ಡು ಕಳೆದುಕೊಂಡಾಗ ಆಗುವ ದುಃಖ ಹೆಚ್ಚೊ? 


೨. ನೀವು ಶಾಲಾ ಪರೀಕ್ಷೆಯಲ್ಲಿ ರಾಂಕ್ ಬಂದಿದ್ದರೆ, ಆ ಖುಷಿ, ಹೆಮ್ಮೆ ೧೫ ದಿನಗಳಲ್ಲಿ ಮರೆತು ಹೋಗಬಹುದು. ಆದರೆ ಒಂದು ವೇಳೆ ನೀವು ಫೇಲ್ ಆದರೆ ಒಂದು ವರ್ಷವಿಡೀ ಅವಮಾನ ನುಂಗಬೇಕಾಗಬಹುದು.


೩. ನೀವು ದುಡಿದ ಮೊದಲ ಲಕ್ಷ ರೂಪಾಯಿಗಳು ತರುವ ಸಂತೋಷ, ಎರಡನೆಯ ಲಕ್ಷ ರೂಪಾಯಿ ತರುವುದಿಲ್ಲ ಅಷ್ಟೇ ಸಂತೋಷ ತರಲು ನೀವು ಅದಕ್ಕಿಂತ ಹೆಚ್ಚಿಗೆ ಗಳಿಸಬೇಕಾಗುತ್ತದೆ. ಇದನ್ನು ಅರ್ಥಶಾಸ್ತ್ರದಲ್ಲಿ " law of diminishing marginal utility "  ಎನ್ನುತ್ತಾರೆ.


೪. ನೀವು ನಿಮ್ಮ ಪತ್ನಿಗೆ ಒಂದು ಕೆಟ್ಟ ಮಾತು ಹೇಳಿದರೆ, ಅದನ್ನು ಸರಿದೂಗಿಸಲು ಸುಮಾರು ಹದಿನಾರು ಒಳ್ಳೆಯ ಮಾತುಗಳನ್ನು ಆಡಬೇಕಾಗುತ್ತದೆ. ಇದು ಒಂದು ಸಮೀಕ್ಷೆಯಿಂದ ತಿಳಿದು ಬಂದ ವಿಷಯ.


ಇನ್ನೂ ಸಾಕಷ್ಟು ಉದಾಹರಣೆಗಳನ್ನು ಕೊಡುತ್ತ ಹೋಗಬಹುದು. ಅವು ಒಟ್ಟಾರೆಯಾಗಿ ತಿಳಿಸುವ ವಿಷಯವೆಂದರೆ, ಮನಶಾಸ್ತ್ರದ ಗಣಿತ ಸರಳವಲ್ಲ. ಅಲ್ಲಿ ಸಂತೋಷ ಮತ್ತು ದುಃಖ ಸರಿ ಸಮನಾಗಿ ಹಂಚಿಕೆಯಾಗುವುದಿಲ್ಲ. ಸಂತೋಷ ಎನ್ನುವುದು ಯಾವಾಗಲೋ ಒಮ್ಮೆ ಬಂದು ಹೋಗುವ ಅತಿಥಿಯಾದರೆ, ದುಃಖ ಎನ್ನುವುದು ನಮ್ಮ ಬೆನ್ನಿನ ಹಿಂದಿನ ನೆರಳು. ಬೆಳಕು ದೂರವಾದಂತೆಲ್ಲ ನೆರಳು ನಮಗಿಂತ  ಉದ್ದ ಬೆಳೆದು ನಿಲ್ಲುತ್ತದೆ. ಈ ವಿಷಯಗಳನ್ನು ಬುದ್ಧ, ಮಹಾವೀರ, ಸಾಕ್ರಟೀಸ್, ಅರಿಸ್ಟಾಟಲ್ ಇವರೆಲ್ಲ ಚೆನ್ನಾಗಿ ಅರಿತಿದ್ದರು.


ಮಹಾವೀರ 'ಬದುಕು,ಬದುಕಲು ಬಿಡು' ಎಂದು ಹೇಳಿದರೆ, ಬುದ್ಧ ಮಾತ್ರ ಬುಡಕ್ಕೆ ಕೈ ಹಾಕಿ ಹೇಳಿದ 'ಆಸೆಯೇ ದುಃಖಕ್ಕೆ ಮೂಲ' ಎಂದು. ಆಸೆಗಳನ್ನು ಕಡಿಮೆ ಮಾಡಿಕೊಂಡು ನೋಡಿ. ಭಯಗಳು ಕೂಡ ತಾನಾಗೇ ಕಡಿಮೆಯಾಗುತ್ತವೆ. ಚಿಂತೆಯ ಭಾರ ತಗ್ಗಿ, ನೀವು ಹಗುರಾಗುತ್ತೀರಿ. ನಮ್ಮ ಭಾವನೆಗಳ ತೀವ್ರತೆ ಕಡಿಮೆಯಾದಾಗ, ಎದುರಿಗೆ ಇರುವವರನ್ನು ವಸ್ತು ನಿಷ್ಠವಾಗಿ ನೋಡಲು ಸಾಧ್ಯವಾಗುತ್ತದೆ. ನಮ್ಮನ್ನು ನಾವು ದೂರದಿಂದ ನಿಂತು ನೋಡಲು ಸಾಧ್ಯವಾಗುತ್ತದೆ. ಬೇರೆಯವರನ್ನು ಅಳೆದು, ತೂಗುವುದನ್ನು ನಿಲ್ಲಿಸಿದ ನಂತರ ನಮ್ಮ ಮನಸ್ಸಿನ ವಟಗುಟ್ಟುವಿಕೆ ಕೂಡ ನಿಂತು ಹೋಗುತ್ತದೆ.

 

ಗಣಿತ ಸರಳವಲ್ಲದಿರಬಹುದು. ಆದರೆ ಬದುಕಿನ ಸತ್ಯಗಳು ಮಾತ್ರ ತೀರಾ ಸರಳ. ಬುದ್ಧ ಹನ್ನೆರಡು ವರುಷ ಅಲೆದು ಅರಿತುಕೊಂಡಿದ್ದನ್ನು, ನಾವು ಎಲ್ಲೂ ಹೋಗದೆ ಬರೀ ಮನಸ್ಸನ್ನು ಸ್ಥಿಮಿತಕ್ಕೆ ತೆಗೆದುಕೊಂಡು ಅರಿತುಕೊಳ್ಳಬಹುದು. ಬುದ್ಧ ಮುಗ್ಧನಾಗಿ ಬೆಳೆದಿದ್ದ. ಅದಕ್ಕೆ ಅವನಿಗೆ ದೇಶಾಂತರ ಹೋಗುವ ಅಗತ್ಯವಿತ್ತು. ಆದರೆ ನಾವು ಮುಗ್ಧರಲ್ಲ. ಕೂಡುವ, ಕಳೆಯುವ ಲೆಕ್ಕದಲ್ಲಿ ಚಾಣಾಕ್ಷರು. ಕೂಡಿದಾಗ ಆಗುವ ಸಂತೋಷಕ್ಕಿಂತ, ಕಳೆದಾಗ ಆಗುವ ದುಃಖ ಹೆಚ್ಚು ಎಂದು ಅರಿತುಕೊಳ್ಳುವುದಕ್ಕೆ ನಮಗೆ ನಮ್ಮ ಮನೆಯ ಮುಂದಿನ ಗಿಡದ ನೆರಳೇ ಸಾಕು. ಸಂತೋಷ ಎನ್ನುವ ಅತಿಥಿಯನ್ನು, ದುಃಖ ಎನ್ನುವ ಬೆಂಬಿಡದ ಭೂತವನ್ನು ಸಮನಾಗಿ ಸ್ವೀಕರಿಸುವ ಮನಸ್ಥಿತಿ ನಮ್ಮದಾದಾಗ ಮನಶಾಸ್ತ್ರದ ಗಣಿತ ನಮ್ಮನ್ನು ಬಾಧಿಸುವುದಿಲ್ಲ.