Thursday, April 29, 2021

ಸಮರ್ಪಣೆ, ನಿಸ್ವಾರ್ಥತೆ ಇರದೇ ಇದ್ದರೆ ...

'ಬಾನಲ್ಲು ನೀನೆ, ಭುವಿಯಲ್ಲೂ ನೀನೆ,

ಎಲ್ಲೆಲ್ಲೂ ನೀನೆ, ನನ್ನಲ್ಲೂ ನೀನೇ"

 

ಇದು ಒಂದು ಪ್ರೇಮಗೀತೆ ಆದರೂ, ಭಗವಂತನನ್ನು ಸ್ಮರಿಸಿ ಗೀತೆ ಹಾಡಿದರೆ ಇದು ಒಂದು ಭಕ್ತಿ ಗೀತೆಯಾಗಿ ಬದಲಾದೀತು.

 

'ಪೂಜಿಸಲೆಂದೇ ಹೂಗಳ ತಂದೆ,

ದರುಶನ ಕೋರಿ ನಾ ನಿಂದೆ,

ತೆರೆಯೋ ಬಾಗಿಲನು, ರಾಮ'

 

ಇದು ಒಂದು ದೇವರ ಪೂಜೆ ಗೀತೆ ಎನಿಸಿದರೂ, ಒಂದು ಪ್ರೇಮ ಗೀತೆಯ ತರಹ ಚಿತ್ರಿತಗೊಂಡಿದೆ. ಪ್ರೇಮವಾಗಲಿ, ಭಕ್ತಿಯಾಗಲಿ ಒಂದೇ ಭಾವನೆಯ ತಳಹದಿಯ ಮೇಲೆ ಹುಟ್ಟಿದಂತವು. ಹಾಗಾಗಿ ಎರಡಕ್ಕೂ ಹೆಚ್ಚಿನ ವ್ಯತಾಸವೇನಿಲ್ಲ. ಸಮರ್ಪಣಾ ಹಾಗು ನಿಸ್ವಾರ್ಥ ಭಾವದಿಂದ ಕೂಡಿದ್ದರೆ, ಎರಡು ಕೂಡ ಸುಲಲಿತವಾಗಿ ಸಾಗುತ್ತವೆ. ಇಲ್ಲವೇ ಭ್ರಮ ನಿರಸನ ಎನ್ನುವುದು ಕಟ್ಟಿಟ್ಟ ಬುತ್ತಿ.

 

ಒಂದು ವೇಳೆ ಪ್ರೇಮವು ಸ್ವಾರ್ಥದಿಂದ ಕೂಡಿದ್ದರೆ, ಯಾವುದೊ ಮಹಾನ್ ಪ್ರೇಮಿಯನ್ನು ತಾನು ಪ್ರೀತಿಸಿದ್ದೇನೆ ಎನ್ನುವ ಭ್ರಮೆಯಲ್ಲಿ 'ತೆರೆಯೋ ಬಾಗಿಲನು' ಎಂದು ಹಾಡಿದರೆ, ತೆರೆದ ಬಾಗಿಲಿನಾಚೆ ಇರುವುದು ಒಬ್ಬ ಅಡ್ಡನಾಡಿ, ನಿರುಪಯೋಗಿ ರಾಮ ಎಂದು ಗೊತ್ತಾದಾಗ ನಿರಾಸೆ ಆಗುವುದಿಲ್ಲವೇ? ಪ್ರೀತಿಸುವುದಕ್ಕಿಂತ ಮುಂಚೆಯೇ ತನ್ನ ರಾಮ ಎಂಥವನು ಎನ್ನುವ ಅರಿವು ಇರಬೇಕಿತ್ತಲ್ಲವೇ? ಹಾಗೆಯೇ ಭಕ್ತಿಯೂ ಕೂಡ ಅಷ್ಟೇ. ಯಾವುದೊ ಆಸೆಯನ್ನು ಮನದಲ್ಲಿಟ್ಟುಕೊಂಡು, 'ಇಂದ್ರ-ಚಂದ್ರ' ಎಂದು ದೇವರನ್ನು ಗುಣಗಾನ ಮಾಡುತ್ತಾ ಹಾಡಿದರೆ, ದೇವರು ಒಲಿದೆ ಒಲಿಯುತ್ತಾನೆ ಎಂದು ಏನು ಗ್ಯಾರಂಟಿ?

 

ಪ್ರೇಮಿ ಹೇಗೆ ಕೈ ಕೊಟ್ಟು ಪಾರಾಗುತ್ತಾನೋ, ದೇವರು ಕೂಡ ಕೇಳಿದ್ದು ಕೊಡದೆ ಆಟವಾಡಿಸುತ್ತಾನೆ.

 

ಅದಕ್ಕೆ ಸಮರ್ಪಣೆ, ನಿಸ್ವಾರ್ಥತೆ ಇರದೇ ಇದ್ದರೆ ಪ್ರೇಮವಾಗಲಿ, ಭಕ್ತಿಯಾಗಲಿ ವ್ಯರ್ಥ ಎಂದು ನನಗೆ ಅನಿಸಿದ್ದು. ನೀ ಹೇಗಿದ್ದಿಯೋ ಹಾಗೆ ನನಗೆ ಒಪ್ಪಿಗೆ ಎನ್ನುವ ಪ್ರೇಮಿ, ನೀನು ಕೊಟ್ಟಿದ್ದೆ ನನಗೆ ಪ್ರಸಾದ ಎನ್ನುವ ಭಕ್ತ ಇವರಿಬ್ಬರ ಶೃದ್ಧೆ ಬಹಳ ದೊಡ್ಡದು. ಅವರಿಗೆ ನಿರಾಸೆ ಎನ್ನುವುದಿಲ್ಲ. ಆದರೆ ಅಂತಹ ಪ್ರೇಮಿಗಳಾಗಲಿ, ಭಕ್ತರಾಗಲಿ ಇರುವುದು ವಿರಳ. ಹಾಗಾಗಿ ಪ್ರೀತಿ ವಿರಸದಲ್ಲಿ ಮತ್ತು ಭಕ್ತಿ ಭ್ರಮ ನಿರಸನದಲ್ಲಿ ಬದಲಾಗುವ ಸಂಭವನೀಯತೆಯೇ ಹೆಚ್ಚು. ಹಾಗೆಯೇ ಸಮರ್ಪಣೆ, ನಿಸ್ವಾರ್ಥತೆ ಇದ್ದಲ್ಲಿ  ಪ್ರೇಮ, ಭಕ್ತಿಗಳು ಕೂಡ ಅಜರಾಮರ.

Wednesday, April 28, 2021

ರಾಜಣ್ಣನ ನಾಯಕಿಯರು

ಕಲಾಸಾರ್ವಭೌಮ ರಾಜಕುಮಾರ್ ಗೆ ಹೆಚ್ಚಿನ ಚಿತ್ರಗಳಲ್ಲಿ ಜೊತೆಯಾದದ್ದು ಅಭಿನಯ ಶಾರದೆ ಜಯಂತಿ ಅವರು. ಅವರಿಬ್ಬರೂ ಸುಮಾರು ೩೫ ಚಿತ್ರಗಳಲ್ಲಿ ಜೋಡಿಯಾಗಿ ನಟಿಸಿದ್ದಾರೆ. ನಂತರದ ಸರದಿ ಭಾರತಿ ಅವರದ್ದು. ಸುಮಾರು ೨೧ ಚಿತ್ರಗಳಲ್ಲಿ ಜೋಡಿಯಾಗಿ ಜನಪ್ರಿಯರಾದ ಇವರನ್ನು ಕಂಡೆ 'ಭಲೇ ಜೋಡಿ' ಎನ್ನುವ ಚಿತ್ರ ತೆರೆಗೆ ಬಂದಿತ್ತು. 'ಮೇಯರ್ ಮುತ್ತಣ್ಣ', 'ದೂರದ ಬೆಟ್ಟ', ಐತಿಹಾಸಿಕ ದಾಖಲೆ ಮಾಡಿದ 'ಬಂಗಾರದ ಮನುಷ್ಯ' ಚಿತ್ರಗಳಲ್ಲಿ ರಾಜಣ್ಣನಿಗೆ ಸರಿಸಾಟಿ ಎನ್ನುವಂತೆ ಜೊತೆ ನೀಡಿದ್ದು ಭಾರತಿಯವರು.


ಜಯಪ್ರದ ಅವರ ಜೊತೆ ಬಂದ ಕೆಲವೇ ಚಿತ್ರಗಳು  'ಸನಾದಿ ಅಪ್ಪಣ್ಣ', 'ಹುಲಿಯ ಹಾಲಿನ ಮೇವು', 'ಕವಿರತ್ನ ಕಾಳಿದಾಸ' ಅದ್ಭುತ ಯಶಸ್ಸನ್ನು ಕಂಡವು.


ರಾಜಣ್ಣನ ಮೊದಲಿನ ಚಿತ್ರಗಳಲ್ಲಿ ನಾಯಕಿಯಾಗಿದ್ದ ಫಂಡರಿಬಾಯಿ ಅವರು ಕೊನೆಯ ಚಿತ್ರಗಳಲ್ಲಿ ರಾಜಕುಮಾರ್ ಗೆ ತಾಯಿಯಾಗಿ ನಟಿಸಿದರು. 'ಜೀವನ ಚೈತ್ರ' ಚಿತ್ರದಲ್ಲಿ ಮಗ ವಿಶ್ವ ಬರುವವರೆಗೆ ಕಾದಿದ್ದು ಕೊನೆಗೆ ಅವನ ತೋಳಿನಲ್ಲಿ ಪ್ರಾಣ ಬಿಡುವ ಅವರ ಪಾತ್ರ ಮರೆಯುವುದೆಂತು?


ಆದವಾನಿ ಲಕ್ಶ್ಮಿದೇವಿ ಅವರು ರಾಜಕುಮಾರ್ ಜೊತೆಗೆ ಪೋಷಕ ಪಾತ್ರಗಲ್ಲಿ ನಟಿಸಿದರೆ, ಅವರ ಮಗಳು ರೂಪಾದೇವಿ ಅವರು ರಾಜಕುಮಾರ್ ಗೆ 'ಯಾರಿವನು', 'ಸಮಯದ ಗೊಂಬೆ' ಚಿತ್ರಗಳಲ್ಲಿ ನಾಯಕಿಯಾದರು. ಹಾಗೆಯೇ 'ಹಾವಿನ ಹೆಡೆ' ಚಿತ್ರದಲ್ಲಿ ಅಣ್ಣಾವ್ರು ತಮ್ಮ ಮೊಮ್ಮಗಳ ವಯಸ್ಸಿನ ನಟಿಯ ಜೊತೆ ನಾಯಕ ಪಾತ್ರದಲ್ಲಿ ಮಿಂಚಿದ್ದು ಉಂಟಲ್ಲ.


ನಟಿ ಕಾಂಚನ ಅವರ ಜೊತೆಗೆ ಒಂದು ಪಾತ್ರದಲ್ಲಿ ನಾಯಕನಾದರೆ, ಇನ್ನೊಂದು ಪಾತ್ರದಲ್ಲಿ ಮಗನಾಗಿ ಅಭಿನಯಿಸುತ್ತಾರೆ ರಾಜಕುಮಾರ್. ಇದು 'ಶಂಕರ್ ಗುರು' ಮತ್ತು 'ಬಬ್ರುವಾಹನ' ಚಿತ್ರಗಳಲ್ಲುಂಟು. 


ರಾಜಕುಮಾರ್ ಅವರ ಕೊನೆಯ  ಚಿತ್ರಗಳಲ್ಲಿ ಅವರಿಗೆ ನಾಯಕಿರಾಗಿದ್ದು ಗೀತಾ ಮತ್ತು ಮಾಧವಿ ಅವರು. ಇವರಿಬ್ಬರ ವಿರುದ್ಧ ಸ್ವಭಾವದ ಪಾತ್ರಗಳ ನಡುವೆ 'ಅನುರಾಗ ಅರಳಿತು' ಚಿತ್ರದಲ್ಲಿನ ಅಣ್ಣಾವ್ರ ಅಭಿನಯ ನನಗೆ ಅಚ್ಚು ಮೆಚ್ಚು. ಹಾಗೆಯೇ 'ಆಕಸ್ಮಿಕ' ಚಿತ್ರದಲ್ಲಿ ಇವರಿಬ್ಬರು ಒಬ್ಬರಾದ ನಂತರ ಇನ್ನೊಬರು ಬಂದು ಹೋಗುತ್ತಾರೆ.


ರಸಿಕರ ರಾಜನಿಗೆ ತೆರೆಯ ಮೇಲೆ ೪೫ ಕ್ಕೂ ಹೆಚ್ಚು ನಾಯಕಿಯರು. ರಾಜಕುಮಾರ್ ಅವರ ಚಿತ್ರಗಳು ಮತ್ತು ಪಾತ್ರಗಳು ಎಷ್ಟು ವೈವಿಧ್ಯವೋ ಅವರ ನಾಯಕಿಯರು ಕೂಡ ಅಷ್ಟೇ.

ಕಣ್ಣೀರು ಮಾರೋ ಬಜಾರು

ಇಂದಿಗೆ ದಿನಕ್ಕೆ ನೂರಾರು ಲೆಕ್ಕದಲ್ಲಿ ಬೆಂಗಳೂರಿನಲ್ಲಿ ಹಾಗೆಯೇ ಸಾವಿರ ಲೆಕ್ಕದಲ್ಲಿ ಭಾರತದಲ್ಲಿ, ಕೋವಿಡ್ ಸಂಬಂದಿಸಿದ ಸಾವುಗಳು ಸಂಭವಿಸುತ್ತಿವೆಯಲ್ಲ. ಆಸ್ಪತ್ರೆಗೆ ಸೇರಿದ ಸಾವಿರಾರು ಜನ ಗುಣ ಹೊಂದಿ ಮನೆಗೆ ಮರಳಿ ನೇಪಥ್ಯಕ್ಕೆ ಸರಿದು ಹೋದರೂ, ಅದಕ್ಕೆ ಹೋಲಿಸದರೆ ಕಡಿಮೆ ಪ್ರಮಾಣದ ಸಾವುಗಳು ಹೆಚ್ಚಿನ ಮಟ್ಟದ ಸುದ್ದಿಯಾಗುತ್ತಲಿವೆ.

 

ಇದಕ್ಕೆ ಏನು ಕಾರಣ ಎಂದು ವಿಚಾರ ಮಾಡಿದರೆ, ನಾವು, ನಮ್ಮ ಸರ್ಕಾರ, ನಮ್ಮ ಸಮಾಜ, ನಮ್ಮ ವೈದ್ಯಕೀಯ ವ್ಯವಸ್ಥೆ ಇಂತಹ ದೊಡ್ಡ ಪ್ರಮಾಣದ ಕೋವಿಡ್ ಪ್ರಮಾಣಕ್ಕೆ ತಯ್ಯಾರಿ ಮಾಡಿಕೊಳ್ಳದಿರುವುದು. 'ಗಡ್ಡಕ್ಕೆ ಬೆಂಕಿ ಹತ್ತಿದಾಗ ಭಾವಿ ತೋಡು' ಎಂಬ ಗಾದೆ ಮಾತು ಭಾರತಕ್ಕೆ ಮಾತ್ರ ಅನ್ವಯ ಎನ್ನುವಂತೆ ಇಂದಿಗೆ ಎರಡನೇ ಅಲೆಗೆ ಭಾರತದಲ್ಲಿ ಮಾತ್ರ ಹೆಚ್ಚಿನ ಸಾವು ಸಂಭವಿಸುತ್ತಿವೆ. ಪರಿಸ್ಥಿತಿಯಲ್ಲಿ ಬರೀ ಕೆಲವರನ್ನೇ ದೂರಿ ಏನು ಉಪಯೋಗ ಹೇಳಿ? ವೈದ್ಯರು, ಆಸ್ಪತ್ರೆ ಸಿಬ್ಬಂದಿ ಕೂಡ ಮನುಷ್ಯರೇ ಅಲ್ಲವೇ? ಅವರು ಕೂಡ ಒತ್ತಡಕ್ಕೆ ಒಳಗಾಗುತ್ತಾರೆ. ಹಾಗೆಯೇ ಎಲ್ಲ ವೃತ್ತಿಗಳಲ್ಲಿ ಇರುವಂತೆಯೇ, ಇಲ್ಲಿಯೂ ಅಲ್ಪ ಪ್ರಮಾಣದ ಪರಿಸ್ಥಿತಿಯ ಲಾಭ ಪಡೆಯುವ ಮನಸ್ಥಿತಿ ಉಳ್ಳವರೂ ಇದ್ದಾರೆ. ಲಾಭ ಪಡೆಯುವದಕ್ಕೆಂದೇ ಸೃಷ್ಟಿಯಾದ ಖಾಸಗಿ ಆಸ್ಪತ್ರೆಗಳು ತಮ್ಮ ಲಾಭ-ನಷ್ಟದ ವಿಚಾರವನ್ನು ಮಾಡಿಯೇ ಮಾಡುತ್ತವೆ. ಅದನ್ನು ಜಗಜ್ಜಾಹೀರು ಮಾಡದಿದ್ದರೂ, ಅವರ ಲೆಕ್ಕಾಚಾರ ಅವರಿಗೆ ಅಲ್ಲವೇ. ಆದರೆ ಇದೆಲ್ಲರ ನಡುವೆ ನಾವು ಸರಕಾರಿ ಆಸ್ಪತ್ರೆಗಳ ಅಭಿವೃದ್ಧಿ ಕಡೆ ಯಾಕೆ ಗಮನ ಕೊಡಲಿಲ್ಲ? ಎಲ್ಲಿಯೋ ಕಟ್ಟುವ ರಾಮ ಮಂದಿರಕ್ಕೆ ದೇಣಿಗೆ ನೀಡುವ ನಾವು, ನಮ್ಮ ಊರಿನ ಆಸ್ಪತ್ರೆಯ ಕುಂದು-ಕೊರತೆಗಳ ಬಗ್ಗೆ ವಿಚಾರಿಸಲಿಲ್ಲ. 'ಮಾಡಿದ್ದುಣ್ಣೋ ಮಹರಾಯ' ಎನ್ನುವಂತೆ ಇಂದು ನಮ್ಮ ಕರ್ಮ ಫಲಗಳನ್ನು ನಾವು ಅನುಭವಿಸುತ್ತಿದ್ದೇವೆ ಅಷ್ಟೇ.

 

ಆದರೆ ಅವಘಡಗಳು ಸಂಭವಿಸುತ್ತಿರುವುದು ಬರೀ ವೈದ್ಯಕೀಯ ವ್ಯವಸ್ಥೆಯಲ್ಲಷ್ಟೇ ಅಲ್ಲವಲ್ಲ. ಔಷಧಿಗಳ ಅಭಾವ, ಆಂಬುಲೆನ್ಸ್ ಗೆ ಕಾಯುವಿಕೆ, ಸತ್ತ ನಂತರ ಅಂತ್ಯ ಸಂಸ್ಕಾರದಲ್ಲಿ ಆಗುತ್ತಿರುವ ಅನ್ಯಾಯ ಇವೆಲ್ಲೆವುಗಳನ್ನು ಗಮನಿಸಿದರೆ ಇಲ್ಲಿ ಒಂದು ಕಣ್ಣೀರು ಮಾರೋ ಬಜಾರು ಸೃಷ್ಟಿಯಾಗಿದೆ. ಸತ್ತವರು ಪುಣ್ಯ ಕಂಡರೂ, ಅವರ ಸಂಬಂಧಿಗಳ ಕರುಣಾಜನಕ ರೋಧನ ನೋಡಲಾಗದು. ಇಲ್ಲಿ ಸಾಮಾನ್ಯ ಜನ, ಸಂಘ ಸಂಸ್ಥೆಗಳು ಹೆಚ್ಚಿಗೆ ಮಾಡುವುದೇನಿಲ್ಲ. ದೊಡ್ಡ ಕಾರ್ಖಾನೆಗಳು ತಮ್ಮ ಉತ್ಪಾದನೆಯನ್ನು ನಿಲ್ಲಿಸಿ ಆಕ್ಸಿಜನ್ ಉತ್ಪಾದನೆ ಕಡೆ ಗಮನ ಹರಿಸಿದರೂ, ಉಳಿದ ವೈದ್ಯಕೀಯ ವಿಷಯಗಳಲ್ಲಿ ಅವರು ತಲೆ ಹಾಕುವಂತಿಲ್ಲ. ಹಾಗಾಗಿಯೇ ಸಂಭವಿಸುತ್ತಿರುವ ಸಾವುಗಳನ್ನು ನೋಡುತ್ತಾ ಅಸಹಾಯಕರಾಗಿ ನಿಲ್ಲುವ ಪರಿಸ್ಥಿತಿ ಸಾಮಾನ್ಯ ಮನುಷ್ಯನದ್ದು.

Tuesday, April 27, 2021

ಸಾಕಿದ ನಾಯಿ ಮತ್ತು ದುಡಿದ ದುಡ್ಡು ಬಿಟ್ಟರೆ ...

ಒಂದು ಮಾತಿದೆ. ಸಾಕಿದ ನಾಯಿ ಮತ್ತು ದುಡಿದ ದುಡ್ಡು ಬಿಟ್ಟರೆ ಬೇರೆ ಯಾವುದು ನಂಬಿಕೆಗೆ ಅರ್ಹವಲ್ಲ ಎಂದು. ಈ ಮಾತು ಸಂಪೂರ್ಣ ಸತ್ಯವಲ್ಲವಾದರೂ ಬಹುತೇಕ ನಿಜ. ಅವಸರಕ್ಕೆ ಆಗುವ ಸ್ನೇಹಿತರು, ಬಂಧುಗಳು ಪ್ರತಿಯೊಬ್ಬರಿಗೂ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲದಿದ್ದರೂ ಒಬ್ಬಿಬ್ಬರು ಆದರೂ ಇದ್ದೆ ಇರುತ್ತಾರೆ. ಆದರೆ ಅವರನ್ನು ಹೊರತು ಪಡಿಸಿ ಉಳಿದವರೆಲ್ಲ ತಮ್ಮ ಅನುಕೂಲಕ್ಕೆ ತಕ್ಕಂತೆ ಆಡುವವರು.


ನಮ್ಮ ಸಮಾಜದಲ್ಲಿ ಸುಳ್ಳು, ಮೋಸಗಳು ಹದವಾಗಿ ಬೆರೆತು ಹೋಗಿವೆ. 'ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು' ಎಂದು ಗಾದೆ ಮಾತೇ ಇದೆಯಲ್ಲ. ಅಂದರೆ ಸುಳ್ಳು ಹೇಳಿದರೆ ತಪ್ಪೇನಿಲ್ಲ ಎನ್ನುವುದು ಸಮಾಜದ ಅಭಿಪ್ರಾಯ. ಹಾಗೆಯೇ ಒಂದು ಯುದ್ಧದಲ್ಲಿ ಮೋಸ ಮಾಡಿ ಗೆಲ್ಲುವುದು ಚಾಣಾಕ್ಷತೆಯ ಸಂಕೇತ ಎನಿಸಿಕೊಳ್ಳುತ್ತದೆ. ಸುಳ್ಳು, ಮೋಸ ಬಲ್ಲವನು ಚಾಣಾಕ್ಷ, ಮೇಧಾವಿ ಎನಿಸಿಕೊಳ್ಳುತ್ತಾನೆ. ರಾಜಕಾರಣಿ ಸುಳ್ಳು ಆಶ್ವಾಸನೆ ಕೊಡುತ್ತಾನೆ ಎಂದು ಗೊತ್ತಿದ್ದರೂ ನಾವು ಭಾಷಣ ಕೇಳಲು ಹೋಗುವುದಿಲ್ಲವೆ? ಇದು ಪ್ರತಿಯೊಬ್ಬ ಸಾಮಾನ್ಯ ಮನುಷ್ಯನಿಗೂ ಅನ್ವಯಿಸುತ್ತದೆ. ಗಂಡಸು ಹುಟ್ಟಾ ಲಂಪಟ. ಸುಲಭವಾಗಿ ಸುಳ್ಳು ಹೇಳುತ್ತಾನೆ. ಸಿಕ್ಕಿ ಬಿದ್ದರೆ 'ಹೌದು. ಸುಳ್ಳು ಹೇಳಿದೆ. ಏನಿವಾಗ?' ಎಂದು ದಬಾಯಿಸುತ್ತಾನೆ. ಹೆಂಗಸು ಕನ್ನಡಿ ಇಲ್ಲದೆ ಸೀರೆ ಬದಲಾಯಿಸಬಲ್ಲಳು. ಅವಳು ನಿಶ್ಚಯಿಸಿದ್ದಲ್ಲಿ, ಎಂಥ ಜಾಣನಿಗೂ ಪಂಗನಾಮ ಗ್ಯಾರಂಟಿ. ತಂದೆ-ತಾಯಿ, ಗಂಡ-ಹೆಂಡತಿ, ಮಕ್ಕಳು, ಹತ್ತಿರದ ಬಂಧುಗಳು, ಗೊತ್ತೇ ಇರದ ಅಪರಿಚಿತರು ಎಲ್ಲರೂ ಸಮಯಕ್ಕೆ ತಕ್ಕ ಹಾಗೆ ಸುಳ್ಳು ಹೇಳುತ್ತಾರೆ. ಮತ್ತು ಅದು ದೊಡ್ಡ ವಿಷಯ ಏನಲ್ಲ ಎನ್ನುವಂತೆ ವರ್ತಿಸುತ್ತಾರೆ. ಸಮಯ ಪ್ರಜ್ಞೆ ಮತ್ತು ಸೂಕ್ಷ್ಮತೆ ನಮಗೆ ಇರದೇ ಹೋದರೆ ನಾವು ಮೋಸ ಹೋಗುತ್ತಿರುವುದು ಬಹು ಸಮಯದವರೆಗೆ ಗೊತ್ತೇ ಆಗುವುದಿಲ್ಲ.


ಆದರೆ ಸಾಕಿದ ನಾಯಿ ತನ್ನ ಜೀವನದುದ್ದಕ್ಕೂ, ಹಾಗೆಯೆ ದುಡಿದ ದುಡ್ಡು ಅದು ಮುಗಿದು ಹೋಗುವವರೆಗೆ ತಮ್ಮ ಒಡೆಯನಿಗೆ ನಂಬಿಕೆಯಿಂದ ನಡೆದುಕೊಳ್ಳುತ್ತವೆ. ಅನುಕೂಲಕ್ಕೆ ತಕ್ಕಂತೆ ಬದಲಾಗುವುದು ಅವುಗಳ ಜಾಯಮಾನದಲ್ಲಿಲ್ಲ. ಹಾಗಾಗಿಯೇ ಇಂತಹದೊಂದು ಮಾತು ರೂಢಿಗೆ ಬಂದಿರಬೇಕು.


ಬರೀ ನಾಯಿ ಮತ್ತು ದುಡಿದ ದುಡ್ಡೇ ಜೀವನ ಅಲ್ಲವಲ್ಲ. ನಾವು ಬದುಕ ಬೇಕಾಗಿರುವುದು ಮನುಷ್ಯರ ಜೊತೆ. ನಿಮಗೆ ಪ್ರಾಮಾಣಿಕ, ನಂಬಿಕಸ್ಥ ಸ್ನೇಹಿತರು ಸಿಕ್ಕಾಗ ಆ ಸ್ನೇಹವನ್ನು ಎಂದಿಗೂ ಕಳೆದುಕೊಳ್ಳಬೇಡಿ. ಆದರೆ ಉಳಿದೆಲ್ಲರ ಜೊತೆಗೆ ಒಂದು ಎಚ್ಚರಿಕೆಯಿಂದ ವರ್ತಿಸಿ. ಎಲ್ಲರಿಗೂ ನಿಮ್ಮನ್ನು ಮೋಸ ಮಾಡುವ ಉದ್ದೇಶ ಇರುವುದಿಲ್ಲ. ಆದರೆ ನೀವು ಎಲ್ಲರನ್ನು ನಂಬುವ ಮುಗ್ಧರು ಎನ್ನುವ ಸಂದೇಶ ನಿಮ್ಮಿಂದ ಹೋದರೆ, ಮೋಸಗಾರರು ನಿಮ್ಮನ್ನು ಸುತ್ತುವರೆಯಲು ಬಹಳ ಸಮಯ ಬೇಕಿಲ್ಲ. ಎಷ್ಟು ಎಚ್ಚರಿಕೆಯಿಂದ ಇದ್ದರೂ ಮೋಸಗಳು ಆಗಿಯೇ ಬಿಡುತ್ತವಲ್ಲ. ಅಂತಹ ಮೋಸಗಾರರಿಂದ ನಗುತ್ತಲೇ ದೂರವಾಗಿ. ಅವರನ್ನು ನೀವು ನಂಬಲು ಅವರು ನೀವು ಸಾಕಿದ ನಾಯಿಯಲ್ಲ. ನಿಮ್ಮ ಪರ್ಸ್ ಅಲ್ಲಿ ಇರುವ ಏಟಿಎಂ ಕಾರ್ಡ್ ಅಲ್ಲ.

Monday, April 26, 2021

ಕಲ್ಲು ಸಕ್ಕರೆ ಕೊಳ್ಳಿರೋ ನೀವೆಲ್ಲರೂ

೧೯೬೧ ರಲ್ಲಿ ಬಿಡುಗಡೆಯಾದ ಕಪ್ಪು-ಬಿಳುಪು ಚಿತ್ರ 'ಕಣ್ತೆರೆದು ನೋಡು'. ಈ ಚಿತ್ರದಲ್ಲಿ ಕಣ್ಣು ಕಾಣಿಸದ ನಾಯಕನಿಗೆ ಕಂಠ ಸಿರಿಯ ಪ್ರತಿಭೆ. ಅವನಿಂದ ಹಾಡು ಹಾಡಿಸಿ ಹಣ ಸಂಗ್ರಹಿಸುವ ಜೊತೆಗಾರ. ಈ ಚಿತ್ರದಲ್ಲಿ ಪಿ.ಬಿ.ಶ್ರೀನಿವಾಸ್ ಅವರ ಧ್ವನಿಯಲ್ಲಿರುವ ಪುರಂದರ ದಾಸರ ಕೀರ್ತನೆ ಇಂಪಾಗಿ ಮೂಡಿ ಬಂದಿದೆ. "ಸಂತೆಯೊಳಗೆ ಇಟ್ಟು ಮಾರುವುದಲ್ಲ ಭಕ್ತಿಯ ಸವಿ" ಎಂದು ದಾಸರು ಹಾಡಿದರೂ, ಅದನ್ನೇ ಬಂಡವಾಳ ಮಾಡಿಕೊಂಡಿರುವ ನಮ್ಮ ಸಮಾಜದ ದ್ವಂದ್ವವನ್ನು ತೋರಿಸುತ್ತದೆ.




Sunday, April 25, 2021

ಕನ್ನಡ ಮಣ್ಣಿನ ಧ್ರುವತಾರೆ

ಈ ವಾರ ಪೂರ್ತಿ ದೂರದರ್ಶನದಲ್ಲಿ ರಾಜಕುಮಾರ್ ಅಭಿನಯದ ಸಾಲು ಸಾಲು ಚಿತ್ರಗಳು. ಹಾಗೆಯೇ ಪತ್ರಿಕೆ, ಸೋಶಿಯಲ್ ಮೀಡಿಯಾ ದಲ್ಲೂ ಕೂಡ ರಾಜ್ ರ ನೆನಪಿಸಿಕೊಳ್ಳುವ ಲೇಖನಗಳು ಹಲವಾರು. ಇಂದಿನ ವಿಷಯ ಬಿಡಿ. ೫೦ ವರುಷಗಳಿಗೆ ಮುಂಚೆ ರೇಡಿಯೋನೇ ಲಕ್ಸುರಿ ಅನ್ನೋ ಕಾಲ ಇತ್ತಲ್ಲ. ಆಗ ಅದರಲ್ಲೂ ಕೂಡ 'ನಾನೇ ರಾಜಕುಮಾರ' ಎನ್ನುವ ಹಾಡು ಜನಪ್ರಿಯವಾಗಿತ್ತು. ಅವರ ಕಪ್ಪು-ಬಿಳುಪು ಚಿತ್ರಗಳು ಹಣ ಹಾಕಿದ ನಿರ್ಮಾಪಕರಿಗೆ ಮತ್ತು ನಾಲ್ಕಾಣೆ ಕೊಟ್ಟು ಸಿನಿಮಾ ನೋಡಲು ಬಂದ ಪ್ರೇಕ್ಷಕರಿಗೂ ನಿರಾಸೆ ಮಾಡಲಿಲ್ಲ. ಆರಂಭದಲ್ಲಿ ಭಕ್ತಿ ಪ್ರಧಾನ, ಕೌಟುಂಬಿಕ ಮತ್ತು ಪೌರಾಣಿಕ ಚಿತ್ರಗಳಲ್ಲಿ ಅವರು ಪ್ರಸಿದ್ಧಿಗೆ ಬಂದರೂ, ಆ ಚೌಕಟ್ಟನ್ನು ಮೀರಿ ಮುಂದೆ ಸಾಮಾಜಿಕ ಚಿತ್ರಗಳು, ಬಾಂಡ್ ಚಿತ್ರಗಳಲ್ಲಿ ಕೂಡ ಲೀಲಾಜಾಲವಾಗಿ ಅಭಿನಯಿಸಿ ತೋರಿಸಿದರಲ್ಲ.


ಐತಿಹಾಸಿಕ ವ್ಯಕ್ತಿಗಳು ಹೇಗಿದ್ದರೋ ನಾವು ತಿಳಿಯೆವು. ಆದರೆ 'ಮಯೂರ' ಎಂದರೆ ನನಗೆ ಕಣ್ಮುಂದೆ ಬರುವುದು ಕತ್ತಿ ಹಿಡಿದ ರಾಜಕುಮಾರ್ ಚಿತ್ರ. ಹಾಗೆಯೇ 'ಭಕ್ತ ಕನಕದಾಸ' ಎಂದರೆ 'ಬಾಗಿಲನು ತೆರೆದು ಸೇವೆಯನು ಕೊಡು ಹರಿಯೇ' ಎಂದು ರಾಜಕುಮಾರ್ ದೀನವಾಗಿ ಹಾಡುವ ಹಾಡು. 'ಕವಿರತ್ನ ಕಾಳಿದಾಸ', 'ಶ್ರೀಕೃಷ್ಣದೇವರಾಯ' ಮುಂತಾದ ಧೀಮಂತ ವ್ಯಕ್ತಿತ್ವಗಳಿಗೆ ಅವರು ಬಣ್ಣ ತುಂಬಿದ್ದು, ನಮ್ಮ ಕಲ್ಪನೆಗಳಿಗೆ ಸ್ಪಷ್ಟತೆ ಕೊಟ್ಟಿತು. ಆ ಪಾತ್ರಗಳಲ್ಲಿ ಬೇರೆಯವರನ್ನು ಕಲ್ಪಿಸಿಕೊಳ್ಳುವುದು ನನಗೆ ಅಸಾಧ್ಯದ ಮಾತು.


ರಾಜಕುಮಾರ್ ಅವರ ಅಭಿಮಾನಿ ಬಳಗವು ಅಪಾರವಾಗಿ ಬೆಳೆಯಿತಲ್ಲ. 'ತಾಯಿಗೆ ತಕ್ಕ ಮಗ' ಚಿತ್ರ ಬಿಡುಗಡೆಯ ನೂಕು ನುಗ್ಗಲಿನಲ್ಲಿ ಕೆಲ ಜನ ಸತ್ತೇ ಹೋದರು. 'ಹುಲಿಯ ಹಾಲಿನ ಮೇವು' ಚಿತ್ರದ ಟಿಕೆಟ್ ಗಳನ್ನು ಸ್ಟೇಡಿಯಂನಲ್ಲಿ ವಿತರಿಸಲಾಗಿತ್ತು. ಅವರ ಸಿನಿಮಾ ಬರಿ ಮನರಂಜನೆಗೆ ಸೀಮಿತವಾಗಲಿಲ್ಲ. 'ನಾವಿರುವ ತಾಣವೇ ಗಂಧದ ಗುಡಿ' ಎಂದು ಹಾಡಿ, ನಮ್ಮಕನ್ನಡ ನಾಡಿನ ಪ್ರೇಮವನ್ನು ಜಾಗೃತಗೊಳಿಸಿದರು.


ಅವರ ನೂರಾರು ಚಿತ್ರಗಳಲ್ಲಿನ ಪಾತ್ರಗಳು, ಅವುಗಳು ನಮ್ಮ ಸಾಮಾಜಿಕ ಬದುಕಿಗೆ ನೈತಿಕ ಚೌಕಟ್ಟು, ಆದರ್ಶಗಳನ್ನು ತುಂಬಿದ್ದು, ಯಾವುದೇ ಒಬ್ಬ ನಟ ಕೊಡಬಹುದಾದ ಮಹತ್ತರ ಕೊಡುಗೆ. ಅದಕ್ಕೆ ಅಲ್ಲವೇ, ಇಂದಿಗೆ ಅವರಿಲ್ಲ ಎಂದರೂ ಅವರ ಪ್ರಭಾವ ಕಡಿಮೆ ಆಗದೆ ಇರುವುದು. ಅದಕ್ಕೆ ಅವರು ನನಗೆ ಸ್ವಲ್ಪವೂ ಹೊಳಪು ಕಳೆದುಕೊಳ್ಳದ ಧ್ರುವತಾರೆ ಎನಿಸುತ್ತಾರೆ.

Friday, April 23, 2021

ಎಲ್ಲಿ ನಿಮ್ಮ ಮನೆ?

"ಎಲ್ಲೋ ಜೋಗಪ್ಪ ನಿನ್ನ ಅರಮನೆ?" ಎಂದು ಯಾರಾದರೂ ಕೇಳಿದರೆ ತೋರಿಸಲಿಕ್ಕೆ ಆದರೂ ನಮಗೆ ಮನೆ ಬೇಕಲ್ಲವೇ? ಅದು ಚಿಕ್ಕದಾದರೂ ಆದೀತು, ಶೀಟಿನದು ಆದರೂ ಆದೀತು. ನೆರಳು, ಏಕಾಂತ ಕೊಟ್ಟರೆ ಸಾಕು. ಚಿಕ್ಕ ಮಕ್ಕಳು ಅಮ್ಮನ ಮಡಿಲಿನಲ್ಲಿ ಮಲಗಿದ ಹಾಗೆ, ಮೈ ಚೆಲ್ಲಿ ನಿರಾತಂಕವಾಗಿ ಮಲಗಬಹುದಾದ ಸ್ಥಳ ನಮಗೆ ನಮ್ಮ ಮನೆ. ಯಾವಾಗಲಾದರೂ ಎರಡು-ಮೂರು ದಿನ ಸತತ ಪ್ರವಾಸ ಮಾಡಿ, ಬಸ್-ಸ್ಟಾಂಡ್ ನಲ್ಲೋ, ರೈಲ್ವೆ ಸ್ಟೇಷನ್ ನಲ್ಲೋ ಮಲಗಿದಾಗ, ಯಾವಾಗ ಮನೆ ಸೇರಿದೆವೋ ಎಂದು ಹಾತೊರೆಯುತ್ತಿರುತ್ತೇವೆ. ಸರ್ವಜ್ಞ ತನ್ನ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ವಚನದಲ್ಲಿ ಮೊದಲು ಉಲ್ಲೇಖಿಸಿದ್ದು ಬೆಚ್ಚನೆಯ ಮನೆಯನ್ನು ಅಲ್ಲವೇ? ಸಾಕಷ್ಟು ಜನರ ಗಳಿಕೆಯ ಬಹುಪಾಲು ತಮ್ಮ ಮನೆಯ ಕಟ್ಟುವಿಕೆಗೆ ಖರ್ಚು ಮಾಡಿರುತ್ತಾರೆ. ಮತ್ತು ಅದು ಅವರ ಜೀವಮಾನದ ಸಾಧನೆ ಕೂಡ ಆಗಿರುತ್ತದೆ. ಇಂತಹ ಮನೆಯನ್ನು ಬಿಟ್ಟು ಹೋಗುವ ಸಂಧರ್ಭ ಹಿಂದೆ ಹಲವರಿಗೆ ಬಂದಿತ್ತಲ್ಲವೇ?


ಗೌತಮ, ಬುದ್ಧನಾಗುವುದಕ್ಕಿಂತ ಮುಂಚೆ ರಾಜಕುಮಾರನಾಗಿದ್ದನಲ್ಲವೇ? ರಾಜಕುಮಾರ ಸಿದ್ಧಾರ್ಥ ಸತ್ಯಾನ್ವೇಷಣೆಗೆ ಮನೆ ಬಿಟ್ಟು ಹೊರಟು ನಿಂತಾಗ, ಆತನ ಪತ್ನಿ ಯಶೋಧರೆ ಆ ಅನ್ವೇಷಣೆ, ಸಾಧನೆ ಮನೆಯಲ್ಲಿದ್ದುಕೊಂಡೇ ಮಾಡಬಹುದಲ್ಲವೇ ಎಂದು ಪ್ರಶ್ನಿಸುತ್ತಾಳೆ. ಅದಕ್ಕೆ ಸಿದ್ಧಾರ್ಥ ಕೊಟ್ಟ ಉತ್ತರವೇನು?


ತುಂಬಾ ಶ್ರೀಮಂತನಾಗಿದ್ದು, ಅಷ್ಟೇ ಜಿಪುಣನಾಗಿದ್ದ ನವಕೋಟಿ ನಾರಾಯಣ, ಪುರಂದರ ದಾಸನಾಗಿ ಬದಲಾಗಿ, ಅವನು ಮನೆ ತೊರೆಯುವ ಮುನ್ನ 'ಹೆಂಡತಿ ಸಂತತಿ ಸಾವಿರವಾಗಲಿ' ಎಂದು ಹಾಡಿದ್ದೇಕೆ?


ಮೋಹವೆಂದರೆ ಬರಿ ಧನ-ಕನಕ-ಸ್ತ್ರೀ ಅಷ್ಟೇ ಅಲ್ಲವಲ್ಲ. ನಾವು ಇಷ್ಟ ಪಟ್ಟು ಕಟ್ಟಿಕೊಂಡ ಮನೆಯೂ ಕೂಡ ಮೋಹದ ಒಂದು ಭಾಗ. ಆ ಮನೆಯನ್ನು ತ್ಯಜಿಸಿ ಹೋದವರಿಗೆ ಪ್ರಕೃತಿಯೇ ಮನೆಯಾಗುತ್ತದೆ. ಮಲಗಲು ಮರದ ನೆರಳು, ಪಾಳುಮಂಟಪ, ದೇವಸ್ಥಾನದ ಬಯಲು ಹೀಗೆ ಹಲವಾರು ಸ್ಥಳಗಳು. ಮನೆಯ ಗೋಡೆಗಳು ಬಂಧಿಸಿ ಹಿಡಿದಿಡುವ ಮನಸ್ಥಿತಿ ಬಯಲಿನಲ್ಲಿ ಇರುವುದಿಲ್ಲ. ಆಕಾಶವೇ ಹೊದ್ದಿಕೆಯಾದಾಗ, ಮನದ ವ್ಯಾಪ್ತಿಯೂ ವಿಶಾಲವಾಗುತ್ತದೆ. ಅದನ್ನು ಮನಗಂಡ ಸಾಧು-ಸಂತ-ಶರಣರು, ವಿಶಾಲ ಜಗತ್ತನ್ನೇ ತಮ್ಮ ಮನೆಯನ್ನಾಗಿಸಿಕೊಂಡರು. ಅವರ ಜೀವನ ಅನುಭವ ಕೂಡ ವಿಶಾಲವಾಯಿತು.


ಅವರಿಗೆ ಎಲ್ಲಿ ಹೋದರೂ, 'ಯಾವುದು ನಿಮ್ಮೂರು?', 'ಎಲ್ಲಿ ನಿಮ್ಮ ಮನೆ?' ಎನ್ನುವ ಪ್ರಶ್ನೆ ಎದುರಾಗಲಿಲ್ಲ. ಒಂದು ವೇಳೆ ಅಂತಹ ಪ್ರಶ್ನೆಗಳು ಎದುರಾದರೂ ಮುಗುಳ್ನಗುತ್ತ ಮುಂದೆ ಸಾಗಿದರು. ಆ ಸತ್ಯ ಗೊತ್ತಾಗದ ನಮ್ಮಂಥ ಲೌಕಿಕ ಜನರು, ಯಾರಾದ್ರೂ 'ಎಲ್ಲಿ ನಿಮ್ಮ ಮನೆ?' ಎಂದು ಕೇಳಿದರೆ ಸಾಕು. ನಮ್ಮ ಮನೆಯ ಪೂರ್ತಿ ವಿಳಾಸವನ್ನು ಕೊಡುವ ಪ್ರಯತ್ನ ಮಾಡುತ್ತೇವೆ ಅಲ್ಲವೇ?

Saturday, April 17, 2021

Growth drivers for Healthcare & Pharma Industry

When India had got independency, average life span of an Indian was 45 years. Thanks to improving healthcare facilities, now the average life expectancy is 69 years. (Link: http://niti.gov.in/content/life-expectancy) While the healthcare industry enabled this glory, it too got fetes to celebrate for itself. With doctors at the top of social respect and income hierarchy and pharma entrepreneurs becoming billionaires, healthcare & pharma sectors are set to become a lot bigger than what they are today. Here are some of the major drivers:

 

1.     Expanding senior population: The population of those aged above 60 living now is higher than ever in the past. Due to age related issues, their need to visit doctors for medial assistance would be much higher than the young population. As the demography of India changes from young to old, this phenomenon of higher medial expenses will only intensify.

 

2.     Increased awareness about healthcare: Couple of decades ago, checking blood pressure, sugar levels, blood tests were not as common as now. For preventive care, routine health checkups have become the norm these days. Also due to lifestyle issues and crappy food, getting the diseases early in their lives is also a common factor leading to more frequent checkups and increased consumption of pills.

 

3.     Ability to pay and insurance coverage: Slowly over the generations, people are being uplifted from poverty and their income levels are improved to afford healthcare costs themselves. For those who are still poor, Govt. does its bit to protect them. And there is a wider insurance coverage available now helping people to take care of unforeseen and higher medical expenses. All these have improved the affordability. With demand side becoming steady, supply of side of hospital network and drug stores too have improved and have a wider reach as well.

 

    All these growth drivers will only intensify with time and make the healthcare industry even bigger. There would be other topics of interest such as contribution of Indian healthcare industry to global phenomenon and the dark side of the industry involving doctor-industry nexus, scams at big pharma companies and large population being social engineered to benefit the pharma industry etc. They would become material for separate blog posts.

Thursday, April 15, 2021

ತಾಯಂದಿರೆಲ್ಲ ಗಾಂಧಾರಿಯರು

ಧೃತರಾಷ್ಟ್ರ ಹುಟ್ಟು ಕುರುಡನಿದ್ದ. ಆದರೆ ಗಾಂಧಾರಿ ಹಾಗಲ್ಲವಲ್ಲ. ಅವಳು ಕಣ್ಣು ಕಟ್ಟಿಕೊಂಡಿದ್ದು ಅವಳ ಗಂಡನಿಗಾಗಿ ಮಾಡಿದ ತ್ಯಾಗ ಎನಿಸಿದರೂ ಅವಳು ಮಕ್ಕಳ ವಿಷಯದಲ್ಲಿ ನಡೆದುಕೊಂಡಿದ್ದು ಮಾತ್ರ ವಿಚಿತ್ರ. ತುಂಬು ಸಭೆಯಲ್ಲಿ ದ್ರೌಪದಿಯ ವಸ್ತ್ರಹರಣ ನಡೆದಾಗ, ಬೇರೆ ಯಾರಿಗಾದರೂ ಅದನ್ನು ನಿಲ್ಲಿಸುವ ಹಕ್ಕು ಇತ್ತೋ ಇಲ್ಲವೋ, ಗಾಂಧಾರಿಗೆ ತನ್ನ ಮಕ್ಕಳಿಗೆ ಅದನ್ನು ಬೇಡ ಎನ್ನುವ ಹಕ್ಕು ಇದ್ದೆ ಇತ್ತು. ಆದರೆ ಗಾಂಧಾರಿ ಕಟ್ಟಿಕೊಂಡಿದ್ದು ಕೇವಲ ಕಣ್ಣಿಗಲ್ಲ, ಅವಳ ಮನಸ್ಸಿಗೂ ಕೂಡ. ಮಾತೃ ಪ್ರೇಮ ಕೇವಲ ಅವಳ ಕಣ್ಣನ್ನು ಅಲ್ಲ, ವಿವೇಕವನ್ನು ಕೂಡ ಕುರುಡು ಮಾಡಿತ್ತು. ಅವಳು ಮಾನಾಪಹರಣ ನಿಲ್ಲಿಸುವ ಪ್ರಯತ್ನ ಮಾಡಲೇ ಇಲ್ಲ.


ಮಹಾಭಾರತ ಒಂದು ಕಟ್ಟು ಕಥೆ ಎಂದು ಅದನ್ನು ಉಪೇಕ್ಷಿಸಬಹುದು. ಆದರೆ ಇಂದಿನ ತಾಯಂದಿರು ಕೂಡ ತಾವು ಯಾವ ಗಾಂಧಾರಿಗೇನು ಕಡಿಮೆ ಇಲ್ಲ ಎಂದು ಕಲಿಯುಗದಲ್ಲಿ ವರ್ತಿಸುತ್ತಾರಲ್ಲ. ಅದು ನನ್ನನ್ನು ಅಚ್ಚರಿಗೊಳಿಸುತ್ತದೆ. ತಮ್ಮ ಮಕ್ಕಳ (ಗಂಡಾಗಲಿ, ಹೆಣ್ಣಾಗಲಿ) ಸಹಾಯಕ್ಕೆ ಧಾವಿಸುವ ತಾಯಂದಿರು, ಅದೇ ಮಕ್ಕಳು ಅನ್ಯಾಯದ ಕೆಲಸಕ್ಕೆ ಇಳಿದಾಗ ಕಂಡೂ ಕಾಣದಂತೆ ವರ್ತಿಸಿಬಿಡುತ್ತಾರೆ. ಅನ್ಯಾಯ ತಡೆಗಟ್ಟದ ಗಾಂಧಾರಿಯಂತೆ, ನವ ಮಹಾಭಾರತಗಳಿಗೆ ದಾರಿಯಾಗುತ್ತಾರೆ.  ಇಲ್ಲವೇ ಒಬ್ಬ ಮಗ ಗೆದ್ದು ತಂದದ್ದನ್ನು ಉಳಿದೆಲ್ಲ ಮಕ್ಕಳಿಗೆ ಹಂಚುವ ಕುಂತಿಯರಾಗುತ್ತಾರೆ. ಇವನ್ನೆಲ್ಲ ಗಮನಿಸಿದರೆ, ಮಹಾಭಾರತ ಸಮಯದ ತಾಯಂದಿರಿಗೂ ಇಂದಿನ ತಾಯಂದಿರಿಗೂ ಯಾವುದೇ ವ್ಯತ್ಯಾಸ ಇಲ್ಲ ಎಂದು ಅನಿಸುತ್ತದೆ.

 

ಆದರೆ ಇಲ್ಲಿ ಗಮನಿಸಬೇಕಾದ ಪಾಠವೆಂದರೆ, ತಾಯಿ ಪ್ರೀತಿ ಯಾವುದೇ ಪ್ರಶ್ನೆ ಇರಲಾರದಂತದ್ದು. ನಿಮಗೆ ನೋವಾದಾಗ ತಾಯಿ ಮಡಿಲು ಕೊಡುವ ಆಶ್ರಯ ಬೇರೆ ಯಾರು ಕೂಡ ನೀಡಲಾರದಂತಹದ್ದು. ಆದರೆ ಗಾಂಧಾರಿ, ಕುಂತಿಯರಂತೆ ನಿಮ್ಮ ವಿವೇಕವನ್ನು ಎಚ್ಚರಿಸುವ ಕೆಲಸವನ್ನುತಾಯಿ ಮಾಡದೆ ಹೋಗಬಹುದು. ಒಂದು ವೇಳೆ ನೀವು ಮಾಡುತ್ತಿರುವುದು ಮಾನಾಪಹರಣದ ಕೆಲಸ ಆದರೆ, ಅದಕ್ಕೆ ನಿಮ್ಮನ್ನು ಎಚ್ಚರಿಸುವ, ತಡೆಯುವ ಕೆಲಸ ತಾಯಿ ಮಾಡಲಾರಳು. ಅದಕ್ಕೆ ಭಾವನಾತೀತ ವಿದುರರು ನಿಮ್ಮ ಜೊತೆ ಇರಬೇಕು.  ಇಲ್ಲದೆ ಹೋದರೆ ನೀವು ಮಹಾಭಾರತದಿಂದ ಕಲಿತದ್ದೇನು ಇಲ್ಲ.

ಮದುವೆಯನ್ನು ವ್ಯಾಪಾರ ಮಾಡಿಕೊಂಡ ಹೆಂಡತಿಯರಿಗಾಗಿ

ನಾನು ಇಂದು ಬರೆಯುತ್ತಿರುವುದು ವರದಕ್ಷಿಣೆಯ ಅನ್ಯಾಯದ ಬಗ್ಗೆ ಅಲ್ಲ. ಆದರೆ ಮದುವೆಯ ನಂತರ ಹೆಂಡತಿಯರು ನಡೆಸುವ ಅನ್ಯಾಯದ ಬಗ್ಗೆ. ಮದುವೆಯನ್ನು ಒಂದು ವ್ಯಾಪಾರ ಮಾಡಿಬಿಡುವುದು ಬರೀ ಗಂಡಸಿಗೆ ಸೀಮಿತವಲ್ಲ. ಗಂಡಸು ನಡೆಸುವ ದೌರ್ಜನ್ಯ ತಡೆಯಲೆಂದೇ ಕಾನೂನುಗಳಿವೆ. ಮತ್ತು ಅದನ್ನು ಪ್ರತಿಭಟಿಸುವ ಹೆಣ್ಣು ಮಕ್ಕಳಿಗೆ ಸಮಾಜದ ಸಹಾಯ ದೊರಕುತ್ತದೆ. ಆದರೆ ದುರಾಸೆಗೆ ಬಿದ್ದ ಹೆಂಡತಿ, ಗಂಡನಿಗೆ ಆಸ್ತಿಯಲ್ಲಿ ಪಾಲು ಕೇಳುವಂತೆ ಇಲ್ಲವೇ ಯಾವುದೇ ದಾರಿಯಲ್ಲಾದರೂ ಗಂಟು ಸಂಪಾದಿಸುವಂತೆ ದುಂಬಾಲು ಬೀಳುತ್ತಾಳಲ್ಲ. ಅದು ಎಷ್ಟೋ ಗಂಡಸರನ್ನು ತಮಗೆ ಇಷ್ಟವಿಲ್ಲದಿದ್ದರೂ, ತಪ್ಪು ದಾರಿ ಹಿಡಿಯುವಂತೆ ಮಾಡಿ, ತಮ್ಮ ಜೀವನದ ಮೌಲ್ಯಗಳ ಜೊತೆ ಹೊಂದಾಣಿಕೆ ಮಾಡಿಕೊಂಡು, ಅಸಮಾಧಾನಕಾರ ಬದುಕನ್ನು ನಡೆಸುವಂತೆ ಮಾಡುತ್ತದೆ. ಅವನು ಹೆಂಡತಿ ಮಾತು ಕೇಳಲು ತಯಾರಿಲ್ಲವೋ, ಅವನ ಮನೆ ಅವನಿಗೆ ಒಂದು ಪ್ರೈವೇಟ ನರಕ. ಗಂಡನಿಗೆ ಎಲ್ಲಿ ಚುಚ್ಚಿದರೆ ಎಷ್ಟು ನೋವಾಗುತ್ತದೆ ಎಂದು ಸಂಪೂರ್ಣ ಅರಿತಿರುವ ಹೆಂಡತಿಯರು, ಶಿಕ್ಷೆ ಕೊಡುವುದರಲ್ಲಿ ತಾವು ಯಮನಿಗೂ ಒಂದು ಕೈ ಮುಂದು ಎನ್ನುವಂತೆ ವರ್ತಿಸುತ್ತಿರುತ್ತಾರೆ. ಗಂಡನಿಗೆ ಅನುಭವ ಒಂದು ಬಿಸಿ ತುಪ್ಪ. ಹೊರಗೆ ಹೇಳಿಕೊಂಡರೆ, ಸಮಾಜ ಅವನನ್ನು ಹೀಯಾಳಿಸಿ ನಗುತ್ತದೆ. ಯಾವುದೊ ಹಿರಿಯರನ್ನು ಸಂಧಾನಕ್ಕೆ ಕರೆದರೆ, ಹೆಂಡತಿ ಅತ್ತು ಕರೆದು, ಎಲ್ಲ ಸಮಸ್ಯೆ ಗಂಡನದೇ ಎಂದು ಬಿಂಬಿಸಿಬಿಡುತ್ತಾಳೆ. ಅಲ್ಲಿಗೆ ಗಂಡನಿಗೆ ನೆಮ್ಮದಿಯಿಂದ ಬದುಕುವ ಎಲ್ಲ ಅವಕಾಶಗಳು ಮುಚ್ಚಿ ಹೋಗುತ್ತವೆ.

 

ಸಮಾಧಾನದ ವಿಷಯವೆಂದರೆ ಸಮಸ್ಯೆ ಬಡ ಕುಟುಂಬಗಳಲ್ಲಿ ಇಲ್ಲ. ಅಲ್ಲಿ ಗಂಡನಿಗೂ ಆಸ್ತಿ ಇಲ್ಲ, ಹೆಂಡತಿಗೂ ಇಲ್ಲ. ದುಡಿದರೆ ಹೊಟ್ಟೆ ತುಂಬಾ ಊಟ ಇಲ್ಲದಿದ್ದರೆ ಇಲ್ಲ ಎನ್ನುವ ಕಡೆ ಆಸ್ತಿ ಸಮಸ್ಯೆ ಎಲ್ಲಿಯದು? ಹಾಗೆಯೇ ಶ್ರೀಮಂತ ಕುಟುಂಬಗಳಲ್ಲಿ ಗಂಡ-ಹೆಂಡತಿಯರ ನಡುವೆ ಮನಸ್ತಾಪ ಬಂದರೆ ಅದು ಸುಲಭದಲ್ಲಿ ಡೈವೋರ್ಸ್ ನಲ್ಲಿ ಕೊನೆಗೊಳ್ಳುತ್ತದೆ. ಹಾಗಾಗಿ ಸಮಸ್ಯೆ ಇರುವುದು ಮಧ್ಯಮ ವರ್ಗದ ಕುಟುಂಬಗಳಲ್ಲಿ ಮಾತ್ರ. ಇರುವುದರಲ್ಲಿ ನೆಮ್ಮದಿಯಾಗಿ ಇರುವುದು ಅವರಿಗೆ ಬೇಕಿಲ್ಲ. ಹಾಗೆಯೇ ಅಪಾರ ಶ್ರೀಮಂತಿಕೆಯ ಕನಸು ಕಾಣಲು ಅವರಿಗೆ ಹಗಲು-ರಾತ್ರಿಗಳು ಸಾಕಾಗುವುದಿಲ್ಲ. ತಮ್ಮ ತಂದೆ-ತಾಯಿಗಳನ್ನು ದೇವರ ಹಾಗೆ ಕಾಣುವ ಹೆಂಡತಿಯರಿಗೆ, ಗಂಡನ ತಂದೆ-ತಾಯಂದಿರು ಸುಮ್ಮನೆ ತಿಂದು ಕೂಡುವ ದಂಡ-ಪಿಂಡಗಳ ಹಾಗೆ ಕಾಣುತ್ತಾರೆ. ತಮ್ಮ ಸಹೋದರ-ಸಹೋದರಿಯರನ್ನು ಅವರಿರುವ ಹಾಗೆ ಒಪ್ಪಿಕೊಳ್ಳುವ ಅವರು, ಗಂಡನ ಸಂಬಂಧಿಕರಲ್ಲಿ ಕಾಣುವುದು ದೌರ್ಬಲ್ಯಗಳು ಮಾತ್ರ. ಎಷ್ಟು ಸಾಧ್ಯವೋ ಅಷ್ಟು ಬೇಗ ಆಸ್ತಿ ಭಾಗ ಮಾಡಿ ಎಂದು ಹಟ ಹಿಡಿದು ಕೂರುವ ಅವರು ತಾವು ಹಿಡಿದ ಕೆಲಸದಲ್ಲಿ ಸಫಲರಾಗಿಬಿಡುತ್ತಾರೆ ಕೂಡ. ಹಾಗೆಯೇ ಗಂಡನಿಗೆ ತನ್ನವರ ಜೊತೆ ಸೌಜನ್ಯದಿಂದ ಇರುವ ಭಾಗ್ಯವನ್ನು ಕೂಡ ಕಳೆದುಬಿಡುತ್ತಾರೆ.

 

ವಿಚಾರ ಮಾಡಿ ನೋಡಿದರೆ, ತಂದೆಯ ಆಸ್ತಿ ಮಗನಿಗೆ ಬರದೇ ಎಲ್ಲಿಗೆ ಹೋಗುತ್ತದೆ? ಆದರೆ ಅದು ತಾನಾಗಿಯೇ ಆಗುವ ಹೊತ್ತಿನವರೆಗೆ ಕಾಯುವ ತಾಳ್ಮೆ ಹೆಂಡತಿಯರಿಗಿಲ್ಲ. ತಾವು ಮದುವೆಯಾಗಿದ್ದು ಗಂಡನ ಆಸ್ತಿಯ ವ್ಯಾಪಾರ ಸರಿಯಾಗಿ ನಡೆಯಲು ಎನ್ನುವಂತೆ ಅವಸರಕ್ಕೆ ಬಿದ್ದು ಮನೆ-ಮನಗಳನ್ನು ಮುರಿದುಬಿಡುತ್ತಾರೆ. ಗಮನಿಸಿ ನೋಡಿ. ಎಷ್ಟೋ ಆಸ್ತಿ ಜಗಳಗಳು ಮೇಲ್ನೋಟಕ್ಕೆ ಗಂಡಸರ ಹೊಡೆದಾಟ ಅನ್ನಿಸಿದರೂ, ಅವರು ಕೈಗೊಂಬೆಯ ಹಾಗೆ ವರ್ತಿಸಿರುತ್ತಾರೆ. ದೂರದರ್ಶನದಲ್ಲಿ ಬರುವ ಎಷ್ಟೋ ಧಾರಾವಾಹಿಗಳ ವಿಷಯ ವಸ್ತು ಇದೇ ಆಗಿರುತ್ತದೆ. ಒಬ್ಬರ ಮನೆ ಮುರಿದು ಬೀಗುವ ಹೆಂಗಸರಿಗೆ ಅದರ ಕರ್ಮದ ಫಲ ಎನ್ನುವಂತೆ ಅವರಿಗೆ ಇವರ ಮನೆ ಮುರಿಯುವ ಸೊಸೆಯಂದಿರೇ ಸಿಗುತ್ತಾರೆ. ಬಡಿದಾಡಿ ತೆಗೆದುಕೊಂಡ ಆಸ್ತಿ ಇವರ ಕೊನೆ ವಯಸ್ಸಿನಲ್ಲಿ ಮತ್ತೆ ಕೈ ಬಿಟ್ಟು ಹೋಗುತ್ತದೆ. ಹಾಗೆಯೇ ಅವರ ಮಕ್ಕಳು ಕೂಡ ದೂರವಾಗುತ್ತಾರೆ. ತಾವು ಗಂಡನ ಜೊತೆ ತೋರಿಸಿದ ಕ್ರೂರತನ ಮರೆತ ಅವರು, ತಮ್ಮ ಮಕ್ಕಳು ಅವರ ಹೆಂಡತಿಯ ಕೈಯಲ್ಲಿ ನಲುಗಿ ಹೋಗುವುದನ್ನು ನೋಡಿ ಕೈ-ಕೈ ಹಿಸುಕಿಕೊಳ್ಳುತ್ತಾರೆ. ಆಸ್ತಿ ಜಗಳಗಳ ಜೀವನ ಚಕ್ರ ಮುಂದುವರೆಯುತ್ತ ಹೋಗುತ್ತದೆ.

 

ಗಂಡಸು ತನ್ನ ಹೆಂಡತಿಯ ಮೇಲೆ ನಡೆಸುವ ದೌರ್ಜನ್ಯ ಎಲ್ಲೆಲ್ಲ ಸುದ್ದಿಯಾಗುತ್ತದೆ. ಆದರೆ ಮದುವೆಯಾಗಿ ತನ್ನ ಗಂಡನನ್ನು ಖರೀದಿ ಮಾಡಿದ್ದೇನೆ ಎಂದು ವರ್ತಿಸುವ ಹೆಂಡತಿಯರು ಸಾಕಷ್ಟು ಮನೆಗಳಲ್ಲಿದ್ದರೂ ಅವರು ಮಾತ್ರ ಎಲ್ಲೂ ಸುದ್ದಿಯಾಗುವುದಿಲ್ಲ. ಹಾಗೆಂದು ಅವರು ಕಾಲಚಕ್ರನ ಮಹಿಮೆಗೆ ಸಿಕ್ಕದೆ ಹೋಗುವವರಲ್ಲ.

Wednesday, April 14, 2021

ಬೇವು ಬೆಲ್ಲದೊಳಿಡಲೇನು ಫಲ?

ಪುರಂದರ ದಾಸರು ದೇವರ ಕೀರ್ತನೆಗಳನ್ನು ಹಾಡಿದಷ್ಟೇ ಸುಲಭವಾಗಿ, ಮನುಷ್ಯ ಗುಣದ ಲೋಪ ದೋಷಗಳನ್ನು, ಸಮಾಜದ ಹುಳುಕುಗಳನ್ನು ಎತ್ತಿ ತೋರಿಸುವ ಸಾಕಷ್ಟು ಗೀತೆಗಳನ್ನು ಕೂಡ ರಚಿಸಿದ್ದಾರೆ. ಅಂತಹ ಒಂದು ಗೀತೆ "ಬೇವು ಬೆಲ್ಲದೊಳಿಡಲೇನು ಫಲ?". ಆ ಗೀತೆಗಳು ದಾಸರ ಕಾಲವಾದ  ೧೫ ನೇ ಶತಮಾನದ ಜನ ಸಾಮಾನ್ಯರ ಶೈಲಿ ತೋರಿಸುವುದಷ್ಟೇ ಅಲ್ಲ. ಬದಲಾಗದ ಮನುಷ್ಯನ ಗುಣಗಳು ಕಾಲಾತೀತ ಎನ್ನುವ ವಿಪರ್ಯಾಸವನ್ನು ಮಾರ್ಮಿಕವಾಗಿ ತೋರಿಸುತ್ತವೆ. ಹಾಗೆಯೇ ಮೋಹ-ಮದ ಇತ್ಯಾದಿ ವಿಕಾರಗಳು ತಹಬದಿಗೆ ಬಂದಾಗ, ಇಷ್ಟ ದೈವ ಹೃದಯದಾಳವನ್ನು ತಲುಪಲು ಸುಲಭ ಸಾಧ್ಯ ಎನ್ನುವ ಸತ್ಯ ಸಂದೇಶ ಕೂಡ ಸಾರುತ್ತವೆ. ಆದರೆ ಅದಕ್ಕೆ ಬರೀ ಗೀತೆಯನ್ನು ಆನಂದಿಸುವುದಷ್ಟೇ ಅಲ್ಲ, ಪುರಂದರರು ಕೇಳುವ ಪ್ರಶ್ನೆಗಳನ್ನು ನಮ್ಮ ಅಂತರಾಳದಲ್ಲಿ ಕೇಳಿ ಕೊಳ್ಳಬೇಕಲ್ಲವೇ?




Sunday, April 11, 2021

ಕೇಳಬಾರದ ಪ್ರಶ್ನೆಗಳು ಆದರೂ ಸಿಗುವ ಉತ್ತರಗಳು

ಯಾರಾದರೂ ಆಗಲಿ ಏಕೆ ಸುಳ್ಳು ಹೇಳುತ್ತಾರೆ? ಚಿಕ್ಕ ಮಕ್ಕಳು ಚಾಕಲೇಟ್ ಆಸೆಗೋ, ಇಲ್ಲವೇ ಆಟದ ಸಾಮಾನು ತಾನು ಮುರಿದಿಲ್ಲವೆಂದೋ ಸುಳ್ಳು ಹೇಳಬಹುದು. ರಾಜಕಾರಣಿಗಳು ಪರಿಸ್ಥಿತಿಯ ಲಾಭ ಪಡೆಯಲೋ, ಇಲ್ಲವೇ ಕುಣಿಕೆಯಿಂದ ಪಾರಾಗಲೋ ಸುಳ್ಳು ಹೇಳಬಹುದು. ಇದು ಲಾಭ-ನಷ್ಟದ ಲೆಕ್ಕಾಚಾರವಾಯಿತು. ಆದರೆ ಕೆಲವರು ಸುಳ್ಳನ್ನೇ ಜೀವನ ಮಾಡಿಕೊಂಡಿರುತ್ತಾರಲ್ಲ. ಅವರ ಬಗ್ಗೆ ವಿಚಾರ ಮಾಡಿ ನೋಡೋಣ.


ಕಳ್ಳ ತಾನು ಸಮಾಜದಲ್ಲಿ ಕಳ್ಳ ಎಂದು ಒಪ್ಪಿಕೊಂಡರೆ ಅವನ ಆಟ ನಿಲ್ಲುತ್ತದೆ. ಅದಕ್ಕೆ ಆತ ಬೇರೆಯದೇ ಮುಖವಾಡ ಧರಿಸುತ್ತಾನೆ. ಒಬ್ಬ ಭ್ರಷ್ಟ ಅಧಿಕಾರಿ ತನ್ನ ದೌರ್ಬಲ್ಯ ಮುಚ್ಚಿಕೊಳ್ಳಲು ಅಗತ್ಯಕ್ಕಿಂತ ಹೆಚ್ಚಿಗೆ ಖಡಕ್ಕಾಗಿ ಇರುತ್ತಾನೆ. ಕುಡಿತಕ್ಕೆ ದಾಸನಾದ ಗಂಡಸು ಜೋರು ಧ್ವನಿಯಲ್ಲೇ ಸುಳ್ಳೇ ಜಗಳ ತೆಗೆಯುತ್ತಾನೆ. ಅನೈತಿಕ ಸಂಬಂಧ ಹೊಂದಿದ ಹೆಣ್ಣು ಹೂವಿನಷ್ಟೇ ಮೆತ್ತಗೆ ಸುಳ್ಳು ಹೇಳಿ, ಕೇಳುಗರ ಕಿವಿಯಲ್ಲಿ ಹೂವು ಇಟ್ಟು ಕಳಿಸುತ್ತಾಳೆ. ಮೈತುಂಬ ಸಾಲ ಮಾಡಿಕೊಂಡ ವಿಫಲ ವರ್ತಕ, ಚಟಗಳಿಗೆ ದಾಸರಾಗಿರುವ ಮಕ್ಕಳ ಹೆತ್ತ ತಾಯಿ ತಮಗೆ ಸುಳ್ಳು ಹೇಳುವುದು ಬಿಟ್ಟು ಬೇರೆ ದಾರಿಯೇ ಇಲ್ಲ ಎಂಬಂತೆ ವರ್ತಿಸುತ್ತಾರೆ.


ಅವರಿಗೆ ನೀವು ಯಾಕೆ ಹೀಗಾಯಿತು ಎಂದು ಪ್ರಶ್ನೆ ಕೇಳಿದರೆ ಉಪಯೋಗವಿಲ್ಲ. ಯಾವ ದೇವರ ಮೇಲೆ ಆಣೆ ಮಾಡಿಸಿದರೂ, ಅವರು ನಿಜ ಹೇಳಲಾರರು. ಅವರು ಈಗಾಗಲೇ ತಮಗೆ ತಾವು ಸುಳ್ಳು ಹೇಳಿಕೊಂಡಿದ್ದಾರೆ. ಅದನ್ನೇ ನಿಮಗೂ ಹೇಳುತ್ತಾರೆ. ಬದಲಿಗೆ ಅವರ ಜೊತೆ ಸ್ವಲ್ಪ ಸಮಯ ಕಳೆದು ನೋಡಿ. ವಾಸ್ತವ ಸತ್ಯದ ಅನಾವರಣ ನಿಮಗೆ ಆಗುತ್ತಾ ಹೋಗುತ್ತದೆ. ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಕ್ಕೇ ಹೋಗುತ್ತದೆ.


ತಮ್ಮ ದೌರ್ಬಲ್ಯಗಳನ್ನು ನೇರವಾಗಿ ಎದುರಿಸುವ ಜನ ತುಂಬಾ ಕಡಿಮೆ. ಅವರಿಗೆ ಸುಳ್ಳು ಹೇಳುವ ಅವಶ್ಯಕತೆ ಬರುವುದಿಲ್ಲ. ಆದರೆ ಉಳಿದವರಿಗೆ ಸುಳ್ಳಿನ ಲೋಕವೇ ಪ್ರೀತಿ. ವಾಸ್ತವವನ್ನು ಒಪ್ಪಿಕೊಳ್ಳದೆ, ಕನಸುಗಳನ್ನು ಕೈ ಬಿಡದೆ, ಅಡ್ಡ ದಾರಿ ಹಿಡಿದು, ತಮ್ಮ ದೌರ್ಬಲ್ಯಗಳನ್ನು ಮುಚ್ಚಿ ಹಾಕಲು ಸುಳ್ಳನ್ನು ಅವಲಂಬಿಸುತ್ತಾರೆ. ಆದರೆ ಒಂದು ಸುಳ್ಳು ಮುಚ್ಚಿ ಹಾಕಲು ಇನ್ನೊಂದು ಸುಳ್ಳು ಹೇಳಬೇಕಲ್ಲ. ಹೀಗೆ ಅವರು ಸುಳ್ಳಿನ ಸರಮಾಲೆಯಲ್ಲೇ ಸಿಕ್ಕಿ ಹಾಕಿಕೊಂಡು ತಮ್ಮ ಜೀವನ ಮತ್ತೆ ಬದಲಾಗದಷ್ಟು ನೈತಿಕ ಅಧಪತನಕ್ಕೆ ಇಳಿದು ಬಿಡುತ್ತಾರೆ. ಅದರಿಂದ ಹೊರ ಬರುವ ಹಾದಿ ಕಠಿಣ. ಅದಕ್ಕೆ ಈ ಜಗತ್ತಿಗೆ ಸತ್ಯ ಅಪಥ್ಯ.

Saturday, April 10, 2021

ಶರಣರು ಕಟ್ಟಿದ ಕರುಣಾ ಕೇಂದ್ರ

ಮನೆ ಇಲ್ಲದವರಿಗೂ, ಮನೆ ಸಾಕಾದವರಿಗೂ ಆಶ್ರಯ ನೀಡುವ ಸ್ಥಳ ಮಠ. ಚಿತ್ರದುರ್ಗದ ಮುರುಘರಾಜೇಂದ್ರ ಮಠ ಕೇವಲ ಮನುಶ್ಯರಿಗಲ್ಲದೆ ಹಲವಾರು ಪ್ರಾಣಿ ಪಕ್ಷಿಗಳ ವಾಸ ಸ್ಥಾನ ಕೂಡ ಆಗಿದೆ. ಕನ್ನಡ ಮಣ್ಣಿನಲ್ಲಿ ರಾಜ ಮಹಾರಾಜರು ಸಾಧಿಸಿದ್ದಕ್ಕಿಂತ ಹೆಚ್ಚಿನ ಸಾಧನೆ ಇಲ್ಲಿನ ಸಾಧು, ಸಂತ, ಶರಣರದ್ದು. ನಾಯಕರು ಕಟ್ಟಿದ ಕಲ್ಲಿನ ಕೋಟೆ ಇಂದಿಗೆ ಬಿಸಿಲಿನಲ್ಲಿ ಭಣಗುಡುತ್ತಿದ್ದರೆ, ಶರಣರು ಕಟ್ಟಿದ ಮಠ, ವನ ಮಾತ್ರ ಹಚ್ಚ ಹಸಿರು. ಕೋಟೆ ಅಂದಿನ ಕತ್ತಿಯ ಮೊನಚು, ಫಿರಂಗಿ ಗುಂಡುಗಳು ಹರಿಸಿದ ರಕ್ತ ಮತ್ತು ಮನುಷ್ಯನ ಕ್ರೌರ್ಯದ ನೆನಪು ತಂದರೆ, ಮಠ ಮನುಷ್ಯನ ಇನ್ನೊಂದು ಮುಖವಾದ ಕರುಣೆ ಎನ್ನುವ ತಣ್ಣನೆಯ ತೀರ್ಥ ಪ್ರವಹಿಸುವ ಕೇಂದ್ರವಾಗಿ ಇತಿಹಾಸವನ್ನು ಇಂದಿನ ಕಾಲದ ಜೊತೆಗೆ ಜೋಡಿಸುತ್ತದೆ.

ದುಷ್ಟತೆ ಮೈಗೂಡಿಸಿಕೊಂಡಂತ ಸಮಾಜದ ವಿಷ ತಗ್ಗಿಸಲು, ಮಾನವೀಯತೆಂಬ ಜೀವ ಸೆಲೆ ಬತ್ತದಂತೆ ಕಾಪಾಡಲು ಮಠಗಳನ್ನು ಕಟ್ಟಬೇಕಾದ ಅವಶ್ಯಕತೆಯನ್ನು ಮನಗಂಡ ಶರಣರು ತಾವು ವಿರಕ್ತರಾದರೂ, ಸಮಾಜೋದ್ಧಾರಕ್ಕಾಗಿ ಹಟದಿಂದ ಮಠ ಕಟ್ಟಿದರು. ೧೭ನೆ ಶತಮಾನದಲ್ಲಿ ಈ ಮಠ ಕಟ್ಟಿದ ಶ್ರೀ ಗುರುಸಿದ್ಧ ಸ್ವಾಮಿಗಳಿಂದ, ಅದನ್ನು ಅನವರತ ನಡೆಸಿಕೊಂಡ ಬಂದ ಅನೇಕ ಶರಣರು, ಇಂದು ಅದನ್ನು ಮುನ್ನಡೆಸುವ ಶ್ರೀ ಶಿವಮೂರ್ತಿ ಶರಣರವರೆಗೆ ಹಲವಾರು ಸಂತರ ಜೀವಶಕ್ತಿಯನ್ನು ಈ ಮಠ ತನ್ನದಾಗಿಸಿಕೊಂಡಿದೆ. ೧೫೦ ಕ್ಕೂ ಹೆಚ್ಚು ವಿದ್ಯಾ ಕೇಂದ್ರಗಳನ್ನು ಈ ಮಠ ನಡೆಸುತ್ತ, ಬರಿ ರಾಜಕೀಯ ಅಥವಾ ಧಾರ್ಮಿಕ ಕೇಂದ್ರವಾಗದೆ, ಮನುಷ್ಯನ ಅಜ್ಞಾನವನ್ನು ಹೋಗಲಾಡಿಸುವ ಪ್ರಯತ್ನವನ್ನು ಯಾವತ್ತಿಗೂ ಜಾರಿಯಲ್ಲಿಟ್ಟಿದೆ.

ದೂರದ ಹರಿದ್ವಾರ, ಕಾಶಿಗೆ ಪ್ರವಾಸ ಹೋಗಿ, ಅಲ್ಲಿ ಗಂಗೆಯಲ್ಲಿ ಮುಳುಗೆದ್ದು ಪಾಪ ಪರಿಹಾರ ಎನ್ನುವ ಭ್ರಮೆಯಲ್ಲಿ ವಾಪಸ್ಸು ಬರುವುದಕ್ಕಿಂತ, ನಮ್ಮ ಸುತ್ತ ಮುತ್ತಲಿನ ಮಠಗಳ ಅಂಗಳದ ಕಸ ಬಳೆದು, ನೀರು ಹೊತ್ತು ಹಾಕಿ, ಬಂದವರಿಗೆ ಊಟ ಬಡಿಸಿ, ಶರಣರ ಸಾನ್ನಿಧ್ಯದಲ್ಲಿ ಪ್ರಾರ್ಥಿಸಿದರೆ ಎಂಥಹ ಕಷ್ಟಕರ ಜೀವನವಾದರೂ ಸಹನೀಯವಾದೀತು ಎನ್ನುವುದು ನನ್ನ ಅಭಿಪ್ರಾಯ.





Saturday, April 3, 2021

ಯುದ್ಧಗಳ ಬದಲಾದ ಸ್ವರೂಪವೇ ಚುನಾವಣೆ

ಮನುಷ್ಯ ಚರಿತ್ರೆ ದಾಖಲಿಸುವ ಮುಂಚೆಯೇ ಬುಡಕಟ್ಟು ಜನಾಂಗಗಳು ಗಡಿಗಾಗಿ, ತಮ್ಮ ಶ್ರೇಷ್ಠತೆ ತೋರ್ಪಡಿಸುವುದಕ್ಕಾಗಿ ಕಾದಾಡುತ್ತಿದ್ದರಲ್ಲ. ಅಲ್ಲಿಂದ 1945 ರವರೆಗಿನ ಎರಡನೇ ಜಾಗತಿಕ ಮಹಾ ಯುದ್ಧದವರೆಗೆ ಯುದ್ಧಗಳು ತಮ್ಮ ರಾಜನ ಅಳಿವು ಉಳಿವನ್ನು ನಿರ್ಧರಿಸುತ್ತಿದ್ದವು. ಆದರೆ ಎರಡನೇ ಜಾಗತಿಕ ಯುದ್ಧದಲ್ಲಿ ಹಿಟ್ಲರ್-ಸ್ಟಾಲಿನ್, ಅಮೇರಿಕ-ಜಪಾನ್ ನಡುವಿನ ಹಣ ಹಣಿ ಅಪಾರ ಪ್ರಮಾಣದ ಸಾವು ನೋವು ತಂದ ನಂತರ ಮನುಷ್ಯ ಯುದ್ಧಗಳ ಬದಲಿಗೆ ಚುನಾವಣೆಯನ್ನು ಕಾರ್ಯರೂಪಕ್ಕೆ ತಂದ. ಚುನಾವಣೆಗಳು ಹೊಸ ಜಗತ್ತಿನ ಹರಿಕಾರರಾಗದೆ  ಹಳೆಯ ಯುದ್ಧಗಳ ಹೊಸ ಸ್ವರೂಪವಾಗಿ ಬದಲಾದವು.


ಹಿಂದೆ ಒಬ್ಬ ರಾಜ ಇನ್ನೊಬ್ಬ ರಾಜನ ಮೇಲೆ ಕಾದಾಡಿದರೆ ಇಂದು ಒಂದು ರಾಜಕೀಯ ಪಕ್ಷ ಇನ್ನೊಂದು ಪಕ್ಷದ ಮೇಲೆ ಯುದ್ಧ ಸಾರುತ್ತದೆ. ಅಂದಿಗೆ ರಣ ಕಹಳೆ ಊದಿದರೆ ಇಂದಿಗೆ ಲೌಡ್ ಸ್ಪೀಕರ್ ಗಳ ಹಾವಳಿ. ಅಂದಿಗೆ ದುಡ್ಡು ಕೊಟ್ಟು ಸೈನಿಕರನ್ನು ಮತ್ತು  ಅವರ ನಾಯಕರನ್ನು ಖರೀದಿ ಮಾಡಿದರೆ, ಇಂದಿಗೆ ಮತದಾರರನ್ನು ಮತ್ತು ಎದುರಾಳಿ ನಾಯಕರನ್ನು ಖರೀದಿಸಲಾಗುತ್ತದೆ. ಅಂದಿಗೆ ಮೋಸದಿಂದ ಎದುರಾಳಿಗಳನ್ನು ಇಕ್ಕಟ್ಟಿಗೆ ಸಿಕ್ಕಿಸಿದರೆ, ಇಂದಿನ ಸಿ.ಡಿ. ಪ್ರಕರಣಗಳು ಇನ್ನೇನು? ಅಂದು ಯುದ್ಧವೆಂದರೆ ಹೊಡೆದಾಟ. ಇಂದಿಗೆ ಅದು ವಾಕ್ಸಮರ. ಆವೇಶ ಹೆಚ್ಚಾದಾಗ ಅದು ಬಡಿದಾಟವಾಗಿ ಬದಲಾಗವುದು ಇಂದಿಗೂ ಇದೆ. ಅಂದಿಗೆ ರಾಜ ತನ್ನ ಅಂಗರಕ್ಷಕರ ಜೊತೆ ಬರುತ್ತಿದ್ದ. ಇಂದಿನ ಪುಢಾರಿಗಳು ತಮ್ಮ ಹುಡುಗರ ಗುಂಪನ್ನು ಕಟ್ಟಿಕೊಂಡು ಬರುತ್ತಾರೆ.


ಅಂದಿನ ರಾಜ, ಮಹಾರಾಜರು ಇಂದಿನ ಮುಖ್ಯ ಮಂತ್ರಿ, ಪ್ರಧಾನ ಮಂತ್ರಿಗಳಾಗಿ ಬದಲಾಗಿದ್ದಾರೆ ರಾಜನನ್ನು ವಿರೋಧಿಸಿದ ಸಾಮಾನ್ಯರಿಗೆ ಅಂದಿಗೂ ಉಳಿಗಾಲ ಇರಲಿಲ್ಲ, ಇಂದಿಗೂ ಇಲ್ಲ. ಪ್ರಜಾಪ್ರಭುತ್ವ ಮತ್ತು ಚುನಾವಣೆಗಳು ಯುದ್ಧಗಳ ರಕ್ತದೋಕುಳಿ ತಪ್ಪಿಸಿದರೂ, ನಿಜ ಬದಲಾವಣೆಯನ್ನು ತರಲೇ ಇಲ್ಲ. ಬುದ್ಧ, ಶಂಕರ, ಬಸವ, ವಿವೇಕಾನಂದರಂತಹ ಸಮಾಜ ಸುಧಾರಕರು ಮನುಷ್ಯನ ಆಸೆಗಳಿಗೆ ಧರ್ಮ-ಕಾಯಕದ ಕಡಿವಾಣ ಹಾಕಿದರೂ, ಅಧಿಕಾರ ದಾಹದ ಮನುಜರು ರಕ್ತ ಬೀಜಾಸುರನ ಸಂತತಿಯಂತೆ ಹಬ್ಬುತ್ತಲಿದ್ದಾರೆ. ಯುದ್ಧ ಗೆದ್ದವರೇ ಅಂದಿಗೆ ರಾಜರು. ಚುನಾವಣೆಗಳನ್ನು ರಣಭೂಮಿಯನ್ನಾಗಿ ಮಾಡಿಕೊಂಡವರೇ ಇಂದಿನ ಪ್ರಭುಗಳು. 


ಪ್ರಜೆಗಳು ಅಂದಿಗೆ ರಾಜ ಮನೆತನಗಳನ್ನು ಕಂದಾಯ ಕೊಟ್ಟು ಸಲಹಿದರೆ, ಇಂದಿಗೆ ರಾಜಕೀಯ ಪಕ್ಷಗಳನ್ನು ಸಲಹುತ್ತಾರೆ. ಕಾಲ ಬದಲಾಗಿ, ಬದುಕಿನ ಹೊರ ನೋಟ ಬದಲಾದರೂ, ಎಂದೆಂದಿಗೂ ಬದಲಾಗದ ಮನುಜನ ಆಂತರಿಕ ಸ್ವಭಾವದ ಅತಿರೇಕಗಳು ಅಂದಿಗೆ ಯುದ್ಧಗಳಾಗಿ ಬದಲಾದರೆ, ಇಂದಿಗೆ ಅವು ಚುನಾವಣೆಗಳಾಗಿ ಬದಲಾಗಿವೆ.