Sunday, August 22, 2021

ಸಾಲ ಮಾಡುವುದಕ್ಕಿಂತ ಉಪವಾಸವಿರುವುದೇ ಮೇಲು

“Rather go to bed without dinner than to rise in debt” – Benjamin Franklin


ಯಾವುದೇ ರಸ್ತೆಯನ್ನು ಒಮ್ಮೆ ಸುತ್ತು ಹಾಕಿ ಬನ್ನಿ. ನಿಮಗೆ ಬ್ಯಾಂಕ್ ಗಳು, ಫೈನಾನ್ಸ್ ಕಂಪನಿ ಗಳು, ಕಾಣದೆ ಇರುವುದಿಲ್ಲ. ಅವುಗಳಲ್ಲಿ ನಡೆಯುವ ವ್ಯವಹಾರ ಎಂದರೆ ಒಂದು ಠೇವಣಿ ತೆಗೆದುಕೊಳ್ಳುವುದು ಮತ್ತು ಎರಡನೆಯದು ಮುಖ್ಯವಾಗಿ ಸಾಲ ಕೊಡುವುದು. ಠೇವಣಿ ಇಡುವವರು ಸ್ವಲ್ಪ ಜನ ಆದರೆ ಸಾಲ ತೆಗೆದುಕೊಳ್ಳುವವವರು ನೂರಾರು, ಸಾವಿರಾರು ಜನ. ಸಾಲಗಳಲ್ಲಿ ಕೂಡ ಈಗ ಹಲವಾರು ವಿಧ. ಮನೆ ಮೇಲಿನ ಸಾಲ, ವ್ಯಾಪಾರದ ಮೇಲಿನ ಸಾಲ, ಆಭರಣಗಳ ಮೇಲೆ ಸಾಲ, ಕೃಷಿ ಸಾಲ, ಗೃಹ ಉಪಯೋಗಿ ಉಪಕರಣಗಳ ಮೇಲೆ ಸಾಲ, ಇವೆಲ್ಲ ಬಿಟ್ಟು ಓವರ್ ಡ್ರಾಫ್ಟ್ ಖಾತೆ ಮತ್ತು ಕ್ರೆಡಿಟ್ ಕಾರ್ಡ್ ಗಳು.


ಸಾಲ ಮತ್ತು ನಮ್ಮ ಜೀವನ ಇವೆರಡು ಬೇರ್ಪಡಿಸಲಾಗದ ಸಂಗತಿಗಳು. ಸಾಲ ಮಾಡದ ಗಂಡಸಿಲ್ಲ ಎಂಬುದು ನಮ್ಮ ನಾಣ್ಣುಡಿ. ಜಗತ್ತು ಸುತ್ತಿ ಬಂದರೆ ಸಾಲವನ್ನು ದ್ವೇಷಿಸುವ ದೇಶಗಳು, ಧರ್ಮಗಳನ್ನು ಕಾಣಬಹುದು. ಆದರೆ ಸಾಲವನ್ನು ಬಿಗಿದಪ್ಪಿದ ದೇಶಗಳು, ನಾಗರಿಕತೆಗಳೇ ಹೆಚ್ಚು. ಸಾಲ ಮಾಡುವುದು ತಪ್ಪು ಎಂದೇನಿಲ್ಲ. ಸಾಲ ಯಾವ ಕಾರಣಕ್ಕಾಗಿ ಮಾಡುತ್ತಿದ್ದೇವೆ ಮತ್ತು ಅದನ್ನು ನಮ್ಮಿಂದ ತೀರಿಸಲು ಸಾಧ್ಯವೇ? ಅದು ಮುಗಿದು ಹೋಗುವ ಮುನ್ನ ನಮ್ಮ ಎಷ್ಟು ಜೀವನವನ್ನು ಬಸಿದುಬಿಡುತ್ತದೆ ಎನ್ನುವ ಲೆಕ್ಕಾಚಾರ ಮುಖ್ಯ. ಆದರೆ ಸಾಕಷ್ಟು ಜನ ಸಾಲ ಪಡೆಯುವ ಮುನ್ನ ಅವುಗಳ ಬಗ್ಗೆ ಆಲೋಚನೆಯೇ ಮಾಡುವುದಿಲ್ಲ. ಅದು ಅವರನ್ನು ಫಜೀತಿಗೆ ಬೀಳಿಸುತ್ತದೆ.  ಅವಿವೇಕಿಯ ಕೈಯಲ್ಲಿನ ದುಡ್ಡು, ಬೊಗಸೆಯಲ್ಲಿನ ನೀರಿನ ಹಾಗೆ. ಹೆಚ್ಚು ಹೊತ್ತು ಹಿಡಿದಿಡಲು ಸಾಧ್ಯವಿಲ್ಲ. ಆದರೆ ಸಾಲ ಮಾತ್ರ, ಬಡ್ಡಿಯ ಜೊತೆ ಬಳ್ಳಿಯ ಹಾಗೆ ನಮ್ಮ ದೇಹವನ್ನು ಆವರಿಸಿ ಬೆಳೆಯುತ್ತ ಕೊನೆಗೆ ನಮ್ಮ ಕುತ್ತಿಗೆ ಸುತ್ತುವರಿದು ಉಸಿರುಗಟ್ಟಿಸುವ ಹಾಗೆ ಆದಾಗ ತಪ್ಪಿನ ಅರಿವಾಗುತ್ತದೆ. ಆದರೆ ಕಾಲ ಮಿಂಚಿ ಹೋಗಿರುತ್ತದೆ.


ಎಷ್ಟೋ ಕುಟುಂಬಗಳು ಬೀದಿಗೆ ಬಂದದ್ದು ಆ ಮನೆಗಳಲ್ಲಿನ ಸಾಲಗಾರರಿಂದ. ಸಾಲ ಮಾಡಿ ಬೇಕಾಬಿಟ್ಟಿ ಖರ್ಚು ಮಾಡುವುದು ಬರಿ ಕುಟುಂಬಗಳನ್ನಲ್ಲ, ಸರ್ಕಾರಗಳನ್ನೇ ದಿವಾಳಿ ಎಬ್ಬಿಸಿಬಿಡುತ್ತದೆ. ಅದೇ ಕಾರಣಕ್ಕೆ ಹಣಕಾಸು ಸಚಿವರು ಇಂದಿಗೆ ಮುಖ್ಯ ಮಂತ್ರಿ, ಪ್ರಧಾನ ಮಂತ್ರಿಗಳಷ್ಟೇ ಪ್ರಮುಖರು. ಯಾವುದೇ ಯಶಸ್ವಿ ಕಂಪನಿ ಯಲ್ಲಿ, CEO ಗೆ ಸರಿ ಸಮನಾಗಿ CFO ಕೂಡ  ಜವಾಬ್ದಾರಿ ಹೊತ್ತಿರುತ್ತಾನೆ. ಅವರು ಸಾಲ ಮಾಡುವುದಿಲ್ಲ ಎಂದೇನಿಲ್ಲ. ಆದರೆ ಎಷ್ಟು ಸಾಲ ಮಾಡಬೇಕು. ಅದನ್ನು ಯಾವ ರೂಪದಲ್ಲಿ, ಎಷ್ಟು ಬಡ್ಡಿ ದರಕ್ಕೆ ತರಬೇಕು ಮತ್ತು ಅದನ್ನು ಹಿಂತಿರುಗಿಸುವ ಬಗೆ ಹೇಗೆ ಎಂದು ಕೂಲಂಕುಷವಾಗಿ ಯೋಚಿಸಿರುತ್ತಾರೆ ಮತ್ತು ಅದನ್ನು ಕಾರ್ಯರೂಪಕ್ಕೆ ಇಳಿಸುತ್ತಾರೆ. ಅವರುಗಳು ಬ್ಯಾಂಕ್ ನ ಸಾಲದಿಂದ ಅಭಿವೃದ್ಧಿ ಹೊಂದಿದರೆ, ಜವಾಬ್ದಾರಿ ಇರದವರು ತಮ್ಮ ಕುಟುಂಬಕ್ಕೆ ದುಡಿದದ್ದಕ್ಕಿಂತ ಹೆಚ್ಚು ಬ್ಯಾಂಕ್ ಗಳ ಸಲುವಾಗಿ ದುಡಿಯುತ್ತಾರೆ.


ತಂದ ಸಾಲವನ್ನು ನಾವು ಬಂಡವಾಳದ ಹಾಗೆ ಬಳಕೆ ಮಾಡಿ, ಬಡ್ಡಿ ದರಕ್ಕಿಂತ ಹೆಚ್ಚಿಗೆ ದುಡಿಸಲು ಸಾಧ್ಯವಾಗದೆ ಹೋದರೆ, ಆ ಸಾಲ ಪಡೆಯುವ ಮುನ್ನ ವಿಚಾರ ಮಾಡುವುದು ಒಳಿತು. ನಮ್ಮ ಪ್ರವಾಸಗಳಿಗೆ, ಮನೆ ಉಪಕರಣಗಳಿಗೆ ಸಾಲ ಮಾಡುವುದಕ್ಕಿಂತ ಮೊದಲು ಉಳಿತಾಯ ಮಾಡಿ ಆ ಹಣವನ್ನೇ ಬಳಸುವುದು ಕ್ಷೇಮ. ಈ ಸಾಮಾನ್ಯ ವಿಚಾರ ಎಲ್ಲರಿಗೂ ತಿಳಿದಿದ್ದರೂ, ತಮ್ಮ ಆಸೆಗಳನ್ನು ಹಲವು ದಿನ ತಡೆ ಹಿಡಿಯುವದರಲ್ಲಿ ಸೋತು ಹೋಗುತ್ತಾರೆ. ಅಂತಹವರಿಗೆ ಅರ್ಥ ಆಗಲೆಂದೇ ಬೆಂಜಮಿನ್ ಫ್ರಾಂಕ್ಲಿನ್ ಸಾಲ ಮಾಡುವುದಕ್ಕಿಂತ ಉಪವಾಸವಿರುವುದೇ ಮೇಲು ಎಂದು ಹೇಳಿದ್ದು.

Thursday, August 19, 2021

ಶಾಂತಿ ಉಳಿಯಲು ತೋಳಿನ ಬಲ ಕೂಡ ಅತ್ಯವಶ್ಯಕ

ಭಾರತದ ಚರಿತ್ರೆಯಲ್ಲಿ ಶಾಂತಿದೂತ ಎಂದು ಹೆಸರಾದದ್ದು ಚಕ್ರವರ್ತಿ ಅಶೋಕ. ಆದರೆ ಇತಿಹಾಸವನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿ. ಮೌರ್ಯ ಸಾಮ್ರಾಜ್ಯವನ್ನು ಕಟ್ಟಿದ್ದು ಅಶೋಕನ ತಾತನಾದ, ಮಹತ್ವಾಕಾಂಕ್ಷಿ ಮತ್ತು ಸಾಹಸಿಯಾದ ಚಂದ್ರಗುಪ್ತ ಮೌರ್ಯ ಮತ್ತು ಚಾಣಾಕ್ಷತೆಗೆ, ಛಲಕ್ಕೆ ಹೆಸರಾದ ಚಾಣಕ್ಯ. ಅವರಿಬ್ಬರೂ ಕಟ್ಟಿದ ಬಲಿಷ್ಠ ಸೈನ್ಯ, ಮೌರ್ಯ ಸಾಮ್ರಾಜ್ಯವನ್ನು ಕಾಪಾಡಿಕೊಂಡು ಬಂತು. ನಂತರ ಬಂದ ಸಾಮ್ರಾಟ್ ಅಶೋಕ ಶಾಂತಿದೂತನಾಗಿ ಬದಲಾದಾಗ, ಬೌದ್ಧ ಧರ್ಮದ ಪ್ರಚಾರಕ್ಕೆ ನಿಂತಾಗ, ಅವನ ಗಮನ ಸೈನ್ಯದ ಮೇಲೆ ಕಡಿಮೆಯಾಗಿ, ಅದು ಕ್ರಮೇಣ ದುರ್ಬಲವಾಗಿರಲಿಕ್ಕೂ ಸಾಕು. ಅಶೋಕನ ಮಕ್ಕಳು ಕೂಡ ಧರ್ಮ ಪ್ರಚಾರಕ್ಕೆಂದು ನಿಂತರು. ಅಶೋಕನ  ಕಾಲಾ ನಂತರ, ಅವನ ಮಕ್ಕಳು ಪಟ್ಟಕ್ಕೇರದೆ, ಮೊಮ್ಮಗನಾದ ಬೃಹದ್ರಥ ಅರಸನಾದ. ಆದರೆ ಶುಂಗ ರಾಜವಂಶಕ್ಕೆ ಸೇರಿದ ಪುಷ್ಯಮಿತ್ರನ ಧಾಳಿಗೆ, ಬೃಹದ್ರಥ ಯುದ್ಧದಲ್ಲೇ ಮೃತ ಪಟ್ಟು, ಮೌರ್ಯ ವಂಶದ ಆಳ್ವಿಕೆ ಕೊನೆಗೊಂಡಿತು. ತೋಳ್ಬಲದಿಂದ ಕಟ್ಟಿದ ಶಾಂತಿಯುತ ಸಾಮ್ರಾಜ್ಯ, ತೋಳ್ಬಲ ಕುಂದಿದಾಗ ಮರೆಯಾಗಿ ಹೋಯಿತು.

 

ಇಂದಿಗೆ ಅಫ್ಘಾನಿಸ್ಥಾನ್ ನಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ ತೋಳ್ಬಲ, ಶಸ್ತ್ರಾಸ್ತ್ರಗಳು ಮೇಲುಗೈ ಸಾಧಿಸಿರುವುದು ಕಾಣುತ್ತದೆ. ಪ್ರಪಂಚ ರಾಜಕೀಯದಲ್ಲಿ ಸಾಕಷ್ಟು ದೇಶಗಳು ನಾಗರಿಕತೆಯ ಅಭಿವೃದ್ಧಿ ಹೊಂದಿ ಆರ್ಥಿಕ, ಸಾಮಾಜಿಕ ಬೆಳವಣಿಗೆ ಕಾಣುತ್ತ ಹೋದರೆ, ಇದೊಂದು ದೇಶ ನೂರಾರು ವರುಶಗಳಷ್ಟು ಹಿಂದೆ ಉಳಿದಿರುವುದು ಅಶ್ಯರ್ಯಕರ ಬೆಳವಣಿಗೆ ಏನು ಅಲ್ಲ. ಏಕೆಂದರೆ ಶಾಂತಿ ಇರಲು, ಅರಾಜಕತೆ ಉಂಟಾಗದೇ ಇರಲು ತೋಳ್ಬಲದ ಅವಶ್ಯಕತೆಯೂ ಅಷ್ಟೇ ಮುಖ್ಯ. ಅಲ್ಲಿಯ ಸೈನ್ಯ ಬಲವಾಗಿದ್ದರೆ ಇಂತಹ ಬೆಳವಣಿಗೆಗೆ ಅವಕಾಶ ಎಲ್ಲಿತ್ತು? ಇದೇ ಕಾರಣಕ್ಕೆ ಎಲ್ಲ ದೇಶಗಳು ಅನಿವಾರ್ಯವಾಗಿ ಆದರೂ ಬಲಿಷ್ಠ ಸೈನ್ಯವನ್ನು ಕಟ್ಟಿಕೊಳ್ಳುತ್ತಾರೆ. ಸೇನೆಯ ಮುಖ್ಯ ಉದ್ದೇಶ ಆಕ್ರಮಣವಾಗಿರದೆ, ಗಡಿಯನ್ನು ಕಾಪಾಡಿಕೊಳ್ಳುವುದು ಮತ್ತು ಆಕ್ರಮಣ ನಿರೋಧ ಮಾಡುವುದು ಆಗಿರುತ್ತದೆ.

 

ತೋಳ್ಬಲ ಶಾಂತಿಯನ್ನು ಸ್ಥಾಪಿಸಬಹುದು ಆದರೆ ಅದೇ ತೋಳ್ಬಲ ಶಕ್ತಿ ಕಳೆದುಕೊಂಡಾಗ ಶಾಂತಿ ಉಳಿಯುವುದು ಹೇಗೆ ಸಾಧ್ಯ? ಅದು ಉಳಿಯಬೇಕೆಂದರೆ ಜಗತ್ತಿನ ಉಳಿದೆಲ್ಲ ಜನರು ಒಂದೇ ಮಟ್ಟದ ನಾಗರೀಕತೆ ಹೊಂದಿರಬೇಕು. ಇಲ್ಲದೇ ಹೋದರೆ ಅಪಾಯ ತಪ್ಪಿದ್ದಲ್ಲ. ಸಾವಿರಾರು ವರುಷಗಳ ಹಿಂದೆಯೇ ಅಭಿವೃದ್ಧಿ ಹೊಂದಿದ್ದ ಭಾರತ ದೇಶದ ನಾಗರಿಕರು, ಶಾಂತಿ-ಧರ್ಮದ ಕಡೆಗೆ ಒತ್ತು ಕೊಟ್ಟು, ತಮ್ಮ ಶಸ್ತ್ರಾಸ್ತ್ರಗಳನ್ನು ಕೆಳಗಿಟ್ಟರು. ಅದೇ ಕಾರಣಕ್ಕೆ ಹಿಂಸೆಯನ್ನೇ ಮೈಗೂಡಿಸಿಕೊಂಡ ಧಾಳಿಕೋರರಿಗೆ ಸೋತು ಹೋದರು. ಭಾರತ ಹಲವಾರು ಸಲ ಲೂಟಿಯಾಯಿತು. ಭಾರತ ಇಂದಿಗೆ ಸುರಕ್ಷತೆ ದೃಷ್ಟಿಯಿಂದ ಭದ್ರವಾಗಿದೆ. ಆದರೂ ಕೂಡ ಚರಿತ್ರೆಯ ಪಾಠಗಳನ್ನು ಮರೆಯಬಾರದು.

 

ಭಾರತದಲ್ಲಿ ಇಂದಿಗೆ ದೇಗುಲಗಳನ್ನು ಕಟ್ಟುವುದಕ್ಕಿಂತ ಗಡಿಯಲ್ಲಿ ಹೆಚ್ಚಿನ ಕಾವಲು ಗೋಪುರಗಳನ್ನು ನಿರ್ಮಿಸುವುದು ಅತ್ಯವಶ್ಯ. ಇಲ್ಲದಿದ್ದರೆ ಕಟ್ಟಿದ ದೇಗುಲಗಳು ಉಳಿಯುವುದು ಅಸಾಧ್ಯ.

Tuesday, August 17, 2021

ಹೇಳದೆ ಕಳೆದು ಹೋದ ಕಥೆಗಳು

ಎಲ್ಲರಲ್ಲೂ ಹೇಳಬಹುದಾದ ಆದರೂ ಹೇಳದೆ ಹೋದ ಕಥೆಗಳಿವೆ. ಹತ್ತಾರು ಅಲ್ಲದಿದ್ದರೂ ಒಂದೆರಡು ಆದರೂ ಕಥೆಗಳನ್ನು ಅಡಗಿಸಿಕೊಂಡಿರದ ಜೀವಿಯೇ ಇಲ್ಲ.  ಕೆಲವರಿಗೆ ಕೇಳುವ ಕಿವಿಗಳು ಸಿಕ್ಕಾಗ, ತಮ್ಮ ಕಥೆ ಹೇಳಿ ಹಗುರಾಗುತ್ತಾರೆ. ಕಥೆಗಳನ್ನು ಅರಗಿಸಿಕೊಳ್ಳದೆ ಹೋದವರು ಅದನ್ನು ಬರೆದು ವಾಂತಿ ಮಾಡಿಕೊಳ್ಳುತ್ತಾರೆ. ಸಾಕಷ್ಟು ಜನರು ಕಥೆಗಳನ್ನು ತಮ್ಮ ಹೃದಯಗಳಲ್ಲಿ ಅಡಗಿಸಿಕೊಳ್ಳುತ್ತಾರೆ. ಅವರದ್ದೇ ಸಮಸ್ಯೆ. ಅವರಿಗೆ ಗೊತ್ತಿಲ್ಲದೇ ಇರುವ ವಿಷಯ ಏನೆಂದರೆ ಕಥೆಗಳನ್ನು ಎಂದೂ ಜೀರ್ಣಿಸಿಕೊಳ್ಳಲಾಗುವುದಿಲ್ಲ. ಅವುಗಳು ಚಿಂತೆಗಳಾಗಿ ಬದಲಾಗಿ ಅವರ ಕಥೆ ಮುಗಿಸುತ್ತವೆ. ಹುಚ್ಚರು ಗೋಡೆಯ ಜೊತೆ, ಆಕಾಶದ ಜೊತೆ ಮಾತನಾಡುವುದು ನೋಡಿರುತ್ತಿರಿಲ್ಲ. ಅವರಿಗೆ ಅವರ ಕಥೆ ಹೇಳುವ ಅವಕಾಶ ಸಿಕ್ಕಿದ್ದರೆ, ಅವರ ಕಥೆ ಬೇರೆಯ ತರಹ ಇರುತ್ತಿತ್ತೋ ಏನೋ? ಕಥೆ ಎಷ್ಟು ಕೆಟ್ಟದಾಗಿದ್ದರೂ ಪರವಾಗಿಲ್ಲ. ಅದನ್ನು ಹೇಳಿ ಬಿಟ್ಟರೆ ಚೆನ್ನ ಎನ್ನುವುದು ನನ್ನ ಅಭಿಪ್ರಾಯ.


ಕಥೆಗಳನ್ನು ಕಟ್ಟು ಕಥೆ, ಅವು ಮನುಷ್ಯ ನಿರ್ಮಿತ ಎಂದೆಲ್ಲ ಮಾತನಾಡುತ್ತವೆ. ವಿಚಾರ ಮಾಡಿ ನೋಡಿದರೆ ಕಥೆಗಳೇ ಮನುಷ್ಯನನ್ನು ರೂಪಿಸುತ್ತವೆ. ಪ್ರತಿ ದಿನ ಬೆಳಿಗ್ಗೆ ಆ ದಿನ ಬದುಕಲು ನಮಗೆ ನಾವು ಏನೋ ಕಥೆ ಹೇಳಿಕೊಳ್ಳುತ್ತೇವೆ. ಆ ದಿನದ ಬದುಕು ಮುಂದುವರೆಯಲು ಆ ಕಥೆ ಪ್ರೇರೇಪಣೆ ನೀಡುತ್ತದೆ. ಹಾಗೆಯೇ ರಾತ್ರಿ ಮಲಗುವಾಗ ಹಾಗೆಯೇ ಸತ್ತು ಹೋಗದಿರಲು, ಮರು ದಿನ ಜೀವನ ಮುಂದುವರೆಯಲು ನಮಗೆ ನಾವು ಕಥೆ ಹೇಳಿಕೊಳ್ಳುವುದನ್ನು ಮುಂದುವರೆಸುತ್ತೇವೆ. ಹೀಗೆ ಕಥೆ ಹೇಳಿಕೊಳ್ಳುವುದು ನಿಂತಾಗ ನಮ್ಮ ಕಥೆಯು ಅಂತ್ಯಕ್ಕೆ ಬಂದು ನಿಲ್ಲುತ್ತದೆ. ಈಗ ವಿಚಾರ ಮಾಡಿ ನೋಡಿ. ಕಥೆಯೇ ಕರ್ತೃವಾಯಿತು. ನಾವೇ ಅದರ ಪಾತ್ರಧಾರಿಗಳಾದೆವು.


ನಿಮ್ಮಲ್ಲಿ ಹೇಳದೆ ಹೋದ ಕಥೆಗಳಿದ್ದರೆ, ಅವುಗಳನ್ನು ಮೊದಲು ಹೊರ ಹಾಕಿ ಹಗುರಾಗಿ. ಅಲ್ಲಿಂದ ನೀವು ಮುಂದೆ ಹೇಳಬಹುದಾದ ಕಥೆಗಳ ದಿಕ್ಕು ಕೂಡ ಬದಲಾಗುತ್ತದೆ. ಇತರರ ಕಥೆಗಳಿಗೆ ಕಿವಿಯಾಗಿ. ಅವು ನಿಮ್ಮ ಕಥೆಯೂ ಕೂಡ ಆಗಿರಬಹುದು. ಇನ್ನು ಕೆಲವು ದಾರುಣ ಕಥೆಗಳು, ಅವು ನಿಮ್ಮದಾಗದಂತೆ ಎಚ್ಚರ ವಹಿಸುವ ಪ್ರಕ್ರಿಯೆ ಮತ್ತು ಅವುಗಳಿಗೆ ಪರ್ಯಾಯವಾಗಿ ನೀವು ಹೇಳಿಕೊಳ್ಳಬೇಕಾದ ಕಥೆಗಳ ಕಡೆಗೆ ಗಮನ ಹರಿಸಿ. ಆಗ ನಿಮ್ಮ ಕಥೆ ಇತರರಿಗೆ ಆದರ್ಶವಾಗುತ್ತದೆ. ಇಲ್ಲದೇ ಹೋದರೆ ನಿಮ್ಮ ಕಥೆ ಹೇಗೆ ಬದುಕಬಾರದು ಎನ್ನುವುದಕ್ಕೆ ಉದಾಹರಣೆ ಆಗುತ್ತದೆ.


ಯಾವುದು ನಿಮ್ಮ ಕಥೆ? ನೀವು ಕಥೆ ಹೇಳಲು ಜನರನ್ನು ಹುಡುಕಿಕೊಂಡು ಹೋಗುತ್ತೀರಿ ಎಂದರೆ, ನಿಮ್ಮ ಕಥೆಯಲ್ಲಿ ಏನೋ ದೋಷವಿದೆ. ಆದರೂ ಪರವಾಗಿಲ್ಲ. ಕಥೆ ಹೇಳದೆ ಸುಮ್ಮನಾಗಬೇಡಿ. ಒಂದು ವೇಳೆ, ಜನ ಕಥೆ ಕೇಳಲು ನಿಮ್ಮನ್ನು ಹುಡುಕಿಕೊಂಡು ಬರುತ್ತಾರೆ ಎಂದರೆ ನಿಮಗೆ ಅಭಿನಂದನೆಗಳು.

Monday, August 9, 2021

ಮಾತು, ಮನಸು, ಹೃದಯಗಳ ಸರಳರೇಖೆ

ಆಸೆಗಳು ಹುಟ್ಟುವುದು ಹೃದಯದಲ್ಲಿ. ಅವುಗಳನ್ನು ಸಾಕಾರಗೊಳಿಸುವ ಶಕ್ತಿ ನಮ್ಮಲಿದೆಯೋ, ಇಲ್ಲವೋ? ಯಾವುದಕ್ಕೆ ಎಷ್ಟು ಖರ್ಚು ಮಾಡುವುದು ಸರಿ? ಇವುಗಳನ್ನು ಅಳೆದು, ತೂಗುವುದು ಮನಸ್ಸು. ಬಹಳಷ್ಟು ಜನರಿಗೆ ನಮ್ಮ ಹೃದಯ, ಮನಸ್ಸು ಅರ್ಥವಾಗುವುದಿಲ್ಲ. ಅವರಿಗೆ ಅರ್ಥವಾಗುವುದು ನಮ್ಮ ನಾಲಿಗೆಯಿಂದ ಹೊರಡುವ ಮಾತು. ಇತರರಿಗೆ ನಮ್ಮ ಮಾತು ಇಷ್ಟವಾದಾಗ ಮಾತ್ರ ಅವರಿಂದ ನಮಗೆ ಸಹಕಾರ ದೊರಕಲು ಸಾಧ್ಯ. ಹೀಗೆ ಹೃದಯ-ಮನಸ್ಸು-ಮಾತು ಇವೆಲ್ಲವುಗಳು ಒಂದೇ ಸರಳ ರೇಖೆಯಲ್ಲಿ ಕೆಲಸ ಮಾಡಿದಾಗ ಅಂದುಕೊಂಡಿದ್ದು ಆಗಲು ಸಾಧ್ಯ.


ಆದರೆ ದೇವರು (ಅಥವಾ ಪ್ರಕೃತಿ) ಈ ಮೂರುಗಳನ್ನು ಒಂದೇ ರೇಖೆಯಲ್ಲಿ ಇರಲು ಬಿಡದೆ ಸಾಕಷ್ಟು ಸಿಕ್ಕು, ಗಂಟುಗಳನ್ನು ಮಧ್ಯದಲ್ಲಿ ಸೇರಿಸಿಬಿಡುತ್ತಾನೆ. ಆಸೆ ಇರುವ ಸಾಕಷ್ಟು ಜನರು ಅದನ್ನು ನಿಜ ಮಾಡಲು ಬೇಕಾದ ಶ್ರಮ, ಶಕ್ತಿ ವ್ಯಯಿಸಲು ಸಿದ್ಧರಿರುವುದಿಲ್ಲ. ಅವರು ಹಗಲು ಕನಸು ಕಾಣುವ ಸೋಂಭೇರಿಗಳು. ಇನ್ನು ಕೆಲವರು ತಮಗಿರುವ ಶಕ್ತಿಯನ್ನು ಹೆಚ್ಚಾಗಿಯೇ ಅಂದಾಜು ಹಾಕುತ್ತಾರೆ. ಸಾಮರ್ಥ್ಯ ಇರದೇ, ಆಸೆಗಳ ಹಿಂದೆ ಬೆನ್ನಟ್ಟಿದರೆ ಅವರು ಸೋತು ಸುಣ್ಣವಾಗುತ್ತಾರೆ. ಅಂತಹವರನ್ನು ನೋಡಿಯೇ 'ಕೆಡುವ ಕಾಲಕ್ಕೆ ಬುದ್ಧಿಯಿಲ್ಲ' ಎನ್ನುವ ಆಡು ಮಾತು ಹುಟ್ಟಿದ್ದು. ಆಸೆ, ಶಕ್ತಿ-ಸಾಮರ್ಥ್ಯ ಎರಡೂ ಇದ್ದರೂ, ಅದನ್ನು ಸರಿಯಾಗಿ ವ್ಯಕ್ತಪಡಿಸುವ ಮಾತಿನ ಕಲೆಗಾರಿಕೆಯೂ ಅತ್ಯವಶ್ಯ. ಯಾವತ್ತೂ ಮಾತೇ ಆಡದ ಮೂಗ ನಾಯಕನನ್ನು ಯಾವ ಕಾಲಕ್ಕಾದರೂ ಕಂಡಿದ್ದೀರಾ? ಮಾತು ಕಡಿಮೆ ಆಡಿ, ಅವನು ತನ್ನ ಶಕ್ತಿಯನ್ನು ಯಾವ ರೀತಿಯಲ್ಲೂ ತೋರ್ಪಡಿಸದಿದ್ದರೆ ಅವನನ್ನು ಕೈಲಾಗದವನು ಎಂದು ನಿರ್ಧರಿಸುತ್ತದೆ ಸಮಾಜ. ಮತ್ತು ಅವನಿಗೆ ಯಾವ ರೀತಿಯ ಸಹಕಾರವನ್ನು ನೀಡುವುದಿಲ್ಲ. ಒಂದು ವೇಳೆ ಅವನು ಹೆಚ್ಚು ಮಾತನಾಡುವುವನಾದರೆ ಅದೇ ಸಮಾಜ ಅವನಿಗೆ ಅಹಂಕಾರಿಯ ಪಟ್ಟ ಕಟ್ಟಿ, ಅವನ ದಾರಿಯಲ್ಲಿ ಪ್ರತಿ ಹೆಜ್ಜೆಗೂ ಅಡ್ಡಗಾಲು ಹಾಕಿ ಅವನನ್ನು ತೊಂದರೆಗೆ ಈಡು ಮಾಡುತ್ತದೆ.


ಆಸೆ ಹೊತ್ತ ಹೃದಯ, ಅಳೆದು ತೂಗುವ ಚಾಣಾಕ್ಷತೆ, ನಯ ಮಾತುಗಾರಿಕೆ ಎಲ್ಲವೂ ಇದ್ದವನಿಗೆ ಅದು ಹಾಗೆಯೇ ಇರಲು ಬಿಡುವುದಿಲ್ಲ ವಿಧಿ. ಅವನ ವೈಯಕ್ತಿಕ ಜೀವನದಲ್ಲಿ ಸೋಲುಂಟು ಮಾಡಿ, ಆಸೆಗಳನ್ನೇ ಬತ್ತಿಸಿಬಿಡುತ್ತದೆ. ಮಾತು, ಮನಸು, ಹೃದಯಗಳನ್ನು ಸಮತೋಲನವಾಗಿ ಒಂದೇ  ಸರಳರೇಖೆಯಲ್ಲಿ ಇಡಲು ನಾವೆಲ್ಲ ಪ್ರಯತ್ನಿಸುತ್ತೇವೆ. ಆದರೆ ಅಸಮತೋಲನ ಉಂಟು ಮಾಡುವುದು ಮಾತ್ರ ನೈಸರ್ಗಿಕ ಕ್ರಿಯೆ. ಅದಕ್ಕೆ ನಮ್ಮ ಯಾವ ಪ್ರಯತ್ನವೂ ಬೇಕಿಲ್ಲ. ಯಶಸ್ಸಿನ ತುದಿ, ಸೋಲಿನ ನೇಪಥ್ಯ ಎರಡೂ ವಿರುದ್ಧ ದಿಕ್ಕಿನಲ್ಲಿ ಇದ್ದರೂ, ಅವು ಉಯ್ಯಾಲೆಯ ಎರಡೂ ತುದಿಗಳು. ಎಷ್ಟು ಜೋರಾಗಿ ಮುಂದು ನೂಕುತ್ತಿರೋ ಅಷ್ಟೇ ವೇಗದಲ್ಲಿ ಅದನ್ನು ಹಿಂದಕ್ಕೆ ತಳ್ಳುತ್ತದೆ ಪ್ರಕೃತಿ.


ನಮ್ಮ ಸುತ್ತ ಮುತ್ತಲಿನ ಜನರನ್ನು ಗಮನಿಸಿ ನೋಡಿ. ಆಸೆ ಇದ್ದು ಸಾಮರ್ಥ್ಯ ಇಲ್ಲದವರು, ಅಥವಾ ಶಕ್ತಿ-ಸಾಮರ್ಥ್ಯ ಇದ್ದು ಮಾತಿನ ನಯಗಾರಿಕೆಯ ಕೊರತೆ ಇರುವವರು, ಇವರುಗಳು ಯಥೇಚ್ಛವಾಗಿ ಕಾಣ ಸಿಗುತ್ತಾರೆ. ಎಲ್ಲ ಸರಿ ಇರುವವರು ಕಡಿಮೆ ಸಂಖ್ಯೆಯಲ್ಲಿ ಇದ್ದರೂ, ಅವರನ್ನು ಒಂದು ಕಿರುಗಣ್ಣಿನಲ್ಲಿ ಗಮನಿಸುತ್ತಾ ಹೋಗಿ. ಕಾಲಚಕ್ರ ಅವರನ್ನು ಕೆಳಗಿಳಿಸುವುದಕ್ಕೆ ನೀವೇ ಸಾಕ್ಷಿಯಾಗುತ್ತೀರಿ. ಹಾಗೆಯೇ ಆಸೆ ಬತ್ತಿ ಹೋದವರು ವಿರಳ ಸಂಖ್ಯೆಯಲ್ಲಿದ್ದರೂ ಅವರ ಇತಿಹಾಸ ತಿಳಿದುಕೊಂಡು ನೋಡಿ. ಅವರಿಗೆ ಯಾವ ಕೊರತೆ ಇರದೆಯೇ ಇದ್ದದ್ದು, ಆದರೂ ಯಶಸ್ಸಿನ ತುದಿಯಿಂದ ಯಾವುದೊ ಕಾರಣಕ್ಕೆ ಸೋಲಿನ ಸೋಪಾನಕ್ಕೆ ಜಾರಿದ್ದು ಮತ್ತು ತದನಂತರ ಅವರು ಮೌನಕ್ಕೆ ಶರಣಾಗಿದ್ದು ನಿಮ್ಮ ಗಮನಕ್ಕೆ ಬಂದೇ ಬರುತ್ತದೆ.


ಮಾತು-ಮನಸು-ಹೃದಯಗಳು ನಿಮ್ಮಲಿ ಒಂದೇ ಸರಳ ರೇಖೆಯಲ್ಲಿದ್ದರೆ ನಿಮಗೆ ಅಭಿನಂದನೆಗಳು. ಅದು ಹಾಗೆಯೆ ಇರುವಷ್ಟು ದಿನ ಆನಂದಿಸಿ. ಮತ್ತು ಅದು ಹಾಗೆಯೆ ಉಳಿಯುವುದಿಲ್ಲ ಎನ್ನುವ ಸತ್ಯವೂ ನೆನಪಿರಲಿ. ಪ್ರಕೃತಿ ಇಂದು ನಿಮ್ಮನ್ನು ನಾಯಕನನ್ನಾಗಿಸಿದೆ. ನಾಳೆ ನಿಮ್ಮನ್ನು ಕೆಳಗಿಳಿಸಿ ಇನ್ನೊಬ್ಬರನ್ನು ನಾಯಕನನ್ನಾಗಿ ಮಾಡಲಿದೆ.

Wednesday, August 4, 2021

ವಿಜಯಗಳ ಸರಮಾಲೆ ಹಾಕಿಕೊಂಡವರನ್ನು ಮುಗಿಸಲು ಒಂದು ಸಣ್ಣ ಸೋಲು ಸಾಕು

ಇತ್ತೀಚಿಗೆ ಓದಿದ 'ತೇಜೋ-ತುಂಗಭದ್ರಾ' ಕಾದಂಬರಿಯಲ್ಲಿ ವಿಜಯನಗರದ ಅರಸು ಶ್ರೀಕೃಷ್ಣದೇವರಾಯನ ವ್ಯಕ್ತಿತ್ವದ ಕಿರು ಚಿತ್ರಣ ಇದೆ. ಸಾಮ್ರಾಜ್ಯ ವಿಸ್ತರಿಸಿ, ಭವ್ಯ ಪರಂಪರೆ ಕಟ್ಟಿದ ಅರಸನಿಗೆ ಗಂಡು ಸಂತಾನವಿಲ್ಲದ ಹಪಾಹಪಿ. ಅದಕ್ಕೆ ಆತ ದೇವರಲ್ಲಿ ಹರಕೆ ಹೊರುವ ಪ್ರಸಂಗ ಇದೆ. ಆತನ ಇತರ ವಿಷಯಗಳ ಬಗ್ಗೆ ಆ ಕಾದಂಬರಿಯಲ್ಲಿ ಉಲ್ಲೇಖ ಇಲ್ಲವಾದರೂ ಬೇರೆ ಸಾಕಷ್ಟು ಪುಸ್ತಕಗಳನ್ನು ಓದಿ ತಿಳಿದುಕೊಳ್ಳಬಹುದು. ಹೆಚ್ಚು ಕಡಿಮೆ ಆತನ ವಯಸ್ಸಿನವರಾದ ಅಳಿಯಂದರಿಗೆ ಅಥವಾ ಅಧಿಕಾರಕ್ಕೆ ತುದಿಗಾಲಲ್ಲಿ ನಿಂತ ತಮ್ಮಂದಿರಿಗೆ ರಾಜ್ಯಭಾರ ಬಿಟ್ಟು ಕೊಡಲು ಆತನಿಗೆ ಸುತರಾಂ ಇಷ್ಟವಿಲ್ಲದ್ದು ಆತನ ನಡುವಳಿಕೆಯಿಂದ ತಿಳಿದು ಬರುತ್ತದೆ. ಮುಂದೆ ಆತನಿಗೆ ಗಂಡು ಸಂತಾನವಾದಾಗ, ಸಣ್ಣ ವಯಸ್ಸಿನಲ್ಲೇ ಆತನಿಗೆ ಪಟ್ಟ ಕಟ್ಟುತ್ತಾನೆ. ಆದರೆ ಆಂತರಿಕ ಶತ್ರುಗಳು ಆತನ ಮಗನನ್ನು ವಿಷವಿಕ್ಕಿ ಕೊಲ್ಲುತ್ತಾರೆ. ಅದಾಗಿ ಕೆಲವೇ ದಿನಗಳಿಗೆ ಶ್ರೀಕೃಷ್ಣದೇವರಾಯನ ಅಂತ್ಯವೂ ಆಗುತ್ತದೆ. ರಣರಂಗದಲ್ಲಿ ಶತ್ರುಗಳನ್ನು ಬೆನ್ನಟ್ಟಿ ಹೋಗಿ ಸದೆ ಬಡಿದು, ತಾನು ಮಾಡಿದ ಯಾವುದೇ ಯುದ್ಧಗಳಲ್ಲಿ ಸೋಲು ಕಾಣದ ಶ್ರೀಕೃಷ್ಣದೇವರಾಯ, ತನ್ನ ಮನೆಯಲ್ಲಿ ತನ್ನ ಮಗನನ್ನು ಉಳಿಸಿಕೊಳ್ಳುವಲ್ಲಿ ಸೋತು ಹೋಗುತ್ತಾನೆ. ಅದು ಹುಟ್ಟಿಸಿದ ಕೊರಗು ಆತನ ಜೀವ ತೆಗೆದಿರಲಿಕ್ಕೂ ಸಾಕು ಎನ್ನುವುದು ಮಾತ್ರ ನನ್ನ ಅಭಿಪ್ರಾಯ.

 

ದಕ್ಷಿಣ ಭಾರತದಲ್ಲಿ ವಿಜಯನಗರ ಸಾಮ್ರಾಜ್ಯ ಪತನವಾಗುವ ಹೊತ್ತಿಗೆ, ಉತ್ತರ ಭಾರತದಲ್ಲಿ ಮೊಗಲ್  ದೊರೆ ಅಕ್ಬರ, ಫತೇಪುರ್ ಸಿಕ್ರಿ (ಕನ್ನಡದಲ್ಲಿ ರೂಪಾಂತರಿಸಿದರೆ ಅದು ಕೂಡ ವಿಜಯನಗರವೇ) ಕಟ್ಟುತ್ತಿರುತ್ತಾನೆ. ಆತನಿಗೆ ತನ್ನ ಮಕ್ಕಳ ಮೇಲೆ ವಿಶ್ವಾಸವಿರುವುದಿಲ್ಲ. ಆದರೆ ಆತನ ಮೊಮ್ಮಗ ಒಬ್ಬನಿಗೆ, ಆಸ್ಥಾನ ಜ್ಯೋತಿಷ್ಯಕಾರರು ಉಜ್ವಲ ಭವಿಷ್ಯ ಇರುವುದಾಗಿ ತಿಳಿಸಿರುತ್ತಾರೆ. ಆತನೇ ಷಾಜಹಾನ್. ಆತನನ್ನು ತನ್ನ ತೊಡೆಯ ಮೇಲೆ ಕೂಡಿಸಿಕೊಂಡೆ ಬೆಳೆಸುತ್ತಾನೆ ಅಕ್ಬರ್. ಅಕ್ಬರನ ಮರಣಾ ನಂತರ, ಷಾಜಹಾನ್ ತನ್ನ ತಂದೆಯಿಂದ ದೂರಾಗಿ, ಕೆಲವು ಸಲ ತಲೆ ಮರೆಸಿಕೊಂಡು ಬದುಕಬೇಕಾದರೂ, ದೆಹಲಿಯ ಗದ್ದುಗೆ ಏರಿದ ನಂತರ, ಸಾಲು ಸಾಲು ಯುದ್ಧಗಳನ್ನು ಗೆದ್ದು, ತನ್ನ ಸಾಮ್ರಾಜ್ಯ ವಿಸ್ತರಿಸುತ್ತ, ಭಾರತ ಹಿಂದೆಂದೂ ಕಂಡರಿಯದ ಶ್ರೀಮಂತಿಕೆಯ ರಾಜ್ಯವನ್ನು ಕಟ್ಟುತ್ತಾನೆ. ಹಣ, ಕೀರ್ತಿ ಎಲ್ಲ ದಿಕ್ಕುಗಳಿಂದ ಹರಿದು ಬರುತ್ತದೆ. ಜಗತ್ತಿನ ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್ ಅನ್ನು ತನ್ನ ಹೆಂಡತಿಯ ನೆನಪಿಗಾಗಿ ಕಟ್ಟುತಾನೆ ಷಾಜಹಾನ್. ಮೇಧಾವಿ ಮಗನಾದ ದಾರಾ ಶಿಕೋ ನಿಗೆ ಯುವರಾಜ ಪಟ್ಟ ಕಟ್ಟುತ್ತಾನೆ. ಆದರೆ ವಿಧಿಯ ಬರಹ ಬೇರೆಯೇ ಇತ್ತಲ್ಲ. ಆತನ ಇನ್ನೊಬ್ಬ ಮಗ ಔರಂಗಜೇಬ್, ತನ್ನ ತಂದೆ ಷಾಜಹಾನ್ ನನ್ನು ಗೃಹಬಂಧಿಯನ್ನಾಗಿಸಿ, ತನ್ನ ಅಣ್ಣ ದಾರಾ ಶಿಕೋ ನನ್ನು ಮತ್ತು ಆತನ ಮಗನನ್ನು ಆನೆಯಿಂದ ತುಳಿಸಿ ಸಾಯಿಸುತ್ತಾನೆ. ತನ್ನದೇ ಸಾಮ್ರಾಜ್ಯದಲ್ಲಿ, ತಾನೇ ಕಟ್ಟಿದ ಅರಮನೆಯಲ್ಲಿ ಬಂದಿಯಾಗಿ, ತನ್ನ ಇನ್ನೊಂದು ನಿರ್ಮಾಣವಾದ ತಾಜ್ ಮಹಲ್ ನ್ನು ಕಿಟಕಿಯ ಮೂಲಕ ನೋಡುತ್ತಾ ತನ್ನ ಕೊನೆಯ ದಿನಗಳನ್ನು ಕಳೆಯುತ್ತಾನೆ ಷಾಜಹಾನ್.

 

ವೈಭವದಿಂದ ಮೆರೆದ, ರಣರಂಗದಲ್ಲಿ ಸೋಲನ್ನೇ ಕಾಣದ ಒಬ್ಬ ರಾಜಾಧಿರಾಜನಿಗೆ ತನ್ನ ಪುತ್ರನನ್ನು ಉಳಿಸಿಕೊಳ್ಳಲು ಆಗದೆ ಹೋದರೆ, ಇನ್ನೊಬ್ಬ ಚಕ್ರವರ್ತಿ ತನ್ನ ಪುತ್ರನಿಂದಲೇ ಅಧಿಕಾರ ಕಳೆದುಕೊಂಡು ದಾರುಣವಾಗಿ ತನ್ನ ಅಂತ್ಯದ ದಿನಗಳನ್ನು ಸವೆಸುತ್ತಾನೆ. ಯಶಸ್ಸಿನ ಸರಮಾಲೆಗಳನ್ನೇ ಕೊರಳಲ್ಲಿ ಹಾಕಿಕೊಂಡು ಮೆರೆದ, ಸಧೃಢ ವ್ಯಕ್ತಿತ್ವ ಹೊಂದಿದ, ಇತಿಹಾಸ ರೂಪಿಸಿದ ಮಹಾನ್ ವ್ಯಕ್ತಿಗಳೇ, ಕೊನೆ ಗಳಿಗೆಯ ಸೋಲಿನಿಂದ ಮೂಲೆಗುಂಪಾಗಿಬಿಡುತ್ತಾರೆ.

 

ಇತಿಹಾಸದಲ್ಲಿ ಬರೀ ವಿಜಯಗಳ ಬಗ್ಗೆ ಬರೆದಿದ್ದು ಹೆಚ್ಚು. ಆದರೆ ಗಮನಿಸಿ ನೋಡಿದರೆ ಯಾವ ವಿಜಯವು ಶಾಶ್ವತವಲ್ಲ. ಮಹಾತಾಕಾಂಕ್ಷಿಗಳೇ ಮಣ್ಣಾಗಿ ಹೋಗಿರುವಾಗ, ಸಣ್ಣ ಪುಟ್ಟ ಗೆಲುವಿನಿಂದ ಅಹಂಕಾರ ಹೆಚ್ಚಿಸಿಕೊಂಡ ಜನರೇ ನಮ್ಮ ಸುತ್ತ ತುಂಬಿದ್ದಾರಲ್ಲ. ಅವರಾರು ಇತಿಹಾಸದಿಂದ ಕಲಿತಿದ್ದೇನೂ ಇಲ್ಲ. ಅದಕ್ಕೆ ಇತಿಹಾಸ ಪುನರಾವರ್ತನೆ ಆಗುತ್ತಲೇ ಇರುತ್ತದೆ.

Sunday, August 1, 2021

ರಕ್ತಪಿಶಾಚಿಯೊಡನೆ ಒಂದು ಮಧ್ಯಾಹ್ನ

ಮಧ್ಯಾಹ್ನ ಊಟವಾದ ನಂತರ ಮಂಚದ ಮೇಲೆ ಒರಗಿಕೊಂಡು, ಸ್ವಲ್ಪ ಹೊತ್ತು ಏನಾದರು ಓದುತ್ತ ವಿಶ್ರಾಂತಿ ತೆಗೆದುಕೊಳ್ಳುವುದು, ಹಾಗೆಯೆ ಕೆಲವೊಂದು ಸಲ ನಿದ್ದೆ ಮಾಡಿಬಿಡುವುದು ನನ್ನ ಸಾಮಾನ್ಯ ದಿನಚರಿ. ಅಂದು ಕೂಡ ಕುವೆಂಪು ರಚಿಸಿದ ಸಣ್ಣ ಕಥೆಗಳನ್ನು ಓದುತ್ತ, ಮನಸ್ಸು ನಿಧಾನವಾಗುತ್ತ, ನಿದ್ರೆಗೆ ಜಾರುವುದರಲ್ಲಿದ್ದೆ. ಆಗ ಕೇಳಿಸಿದ್ದು ಕಿವಿಯ ಪಕ್ಕದಲ್ಲಿ ಗುಂಯ್ ಗುಡುವ ಸದ್ದು. ಸುಮ್ಮನೆ ಕೈ ಆಡಿಸಿದೆ. ಆಗ ಸದ್ದು ಇನ್ನೊಂದು ಕಿವಿಯ ಹತ್ತಿರ ಕೇಳಿಸತೊಡಗಿತು. ಪಕ್ಕದಲ್ಲಿದ್ದ ಪುಸ್ತಕವನ್ನು ಹಿಡಿದು ತಲೆಯ ಎರಡು ಬದಿಗೂ ಆಡಿಸಿದೆ. ನನ್ನ ಕೈ ಚಲನೆಯ ವೇಗವನ್ನು ಮೀರಿ ಆ ಸದ್ದು ನನ್ನ ಸುತ್ತತೊಡಗಿತು. ಅದು ಒಂದು ಯಕಶ್ಚಿತ್ ಸೊಳ್ಳೆ ಎಂದರೆ ನಾವು ಅದನ್ನು ಅಪಮಾನಿಸಿದಂತೆ ಅನಿಸತೊಡಗಿತು. ಸುಮ್ಮನೆ ರಕ್ತ ಹೀರಿ ಹೋಗಿದ್ದರೆ ನನ್ನದೇನು ಅಭ್ಯಂತರ ಇರಲಿಲ್ಲ. ಜಿಗಣೆಯ ಹಾಗೆ ನೋವಾಗದಂತೆ ರಕ್ತ ಹೀರುವುದು ಈ ಸೊಳ್ಳೆಗಳಿಗೆ ಗೊತ್ತಿಲ್ಲ. ಸೂಜಿಯ ಮೊನೆಯ ಹಾಗೆ ಚುಚ್ಚಿ, ತಾವು ರಕ್ತ ಹೀರುವುದನ್ನು ಜಗಜ್ಜಾಹೀರು ಮಾಡುತ್ತವೆ. ಅಲ್ಲದೆ ಕೆರಳಿಸುವ ಹಾಗೆ ಕಿವಿಯ ಹತ್ತಿರವೇ ಬಂದು ಗುಂಯ್ ಗುಡುತ್ತವೆ. ನಿದ್ದೆಗೆಡಿಸಿ, ರಕ್ತ ಹೀರಿ, ಬಿಟ್ಟು ಬಿಡದಂತೆ ತೊಂದರೆ ಕೊಡುವ ಈ ಜೀವಿಗಳಿಗೆ ಸೊಳ್ಳೆ ಎನ್ನದೆ ರಕ್ತ ಪಿಶಾಚಿ ಎನ್ನುವುದೇ ಸೂಕ್ತ ಅನಿಸತೊಡಗಿತು. ಅದರ ಮೇಲೆ ದ್ವೇಷ ಹುಟ್ಟಿ, ಇದನ್ನು ಬೇಟೆಯಾಡದೆ ಬಿಟ್ಟರೆ ನನಗೆ ಉಳಿಗಾಲವಿಲ್ಲ ಎನಿಸತೊಡಗಿತು.

 

ಕಿಟಕಿಯ ಪರದೆಯನ್ನು ಪೂರ್ತಿ ತೆಗೆದು, ಕೋಣೆಯ ತುಂಬಾ ಬೆಳಕಾಗುವಂತೆ ಮಾಡಿಕೊಂಡೆ. ಗೋಡೆಯ ಮೇಲೆ ಕುಳಿತ ಸೊಳ್ಳೆ ಸ್ಪಷ್ಟವಾಗಿ ಕಂಡಿತು. ಆ ದಿನದ ನ್ಯೂಸ್ ಪೇಪರ್ ನ್ನು ಕೈಯಲ್ಲಿ ಮಡಿಚಿ ಹಿಡಿದು ಮೆತ್ತಗೆ ಹೆಜ್ಜೆ ಹಾಕುತ್ತ ಸೊಳ್ಳೆಯ ಹತ್ತಿರಕ್ಕೆ ಹೋಗಿ ರಪ್ಪೆಂದು ಬಾರಿಸಿದೆ. ಆದರೆ ಕೊನೆ ಕ್ಷಣದಲ್ಲಿ ನನ್ನ ನೆರಳು ಅದರ ಮೇಲೆ ಬಿದ್ದು ಅದು ಪಕ್ಕಕ್ಕೆ ಹಾರಿತು. ತಕ್ಷಣವೇ ಅದು ಹಾರಿದ ದಿಕ್ಕಿನಲ್ಲಿ ಗಾಳಿಯಲ್ಲಿ ಕೈ ಬೀಸಿದೆ. ಕೈಯಲ್ಲಿ ಹಿಡಿದ ಪೇಪರ್ ಅದರ ಮೈಗೆ ತಾಗಿದರೂ, ಅದು ತನಗೆ ಏನು ಆಗಿಲ್ಲ ಎನ್ನುವಂತೆ ಮತ್ತೆ ದಿಕ್ಕು ಬದಲಾಯಿಸಿ ಮರೆಯಾಯಿತು.

 

ಅದು ನನ್ನನ್ನು ಮತ್ತೆ ಹುಡುಕಿ ಬಂದೇ ಬರುತ್ತದೆ ಎನ್ನುವ ನಂಬಿಕೆಯಿಂದ ನಾನು ಕೋಣೆಯ ಮಧ್ಯದಲ್ಲಿ ಕುಳಿತು ಅದಕ್ಕಾಗಿ ಕಾಯತೊಡಗಿದೆ. ಕೆಲವೇ ಕ್ಷಣಗಳಿಗೆ, ನನ್ನ ನಂಬಿಕೆ ಸುಳ್ಳಾಗದಂತೆ ಹತ್ತಿರವೇ ಗುಂಯ್ ಗುಡುವ ಸದ್ದು ಕೇಳಿಸತೊಡಗಿತು. ಮೈಯೆಲ್ಲಾ ಕಿವಿಯಾಗಿಸಿಕೊಂಡು ಯಾವ ಕಡೆಯಿಂದ ಸದ್ದು ಕೇಳುತ್ತಿದೆ ಎಂದು ಗಮನಿಸತೊಡಗಿದೆ. ಮಹಾಭಾರತದ ಅರ್ಜುನ ಶಬ್ದವೇಧಿ ವಿದ್ಯೆಯನ್ನು ಇಂತಹ ಸಂದರ್ಭಗಳಲ್ಲಿ ಕಲಿತಿದ್ದೆನೋ ಎನಿಸಿತು. ಸದ್ದು ಕ್ಷೀಣವಾಗುತ್ತ ಅದು ನನ್ನ ಕಾಲ ಮೇಲೆ ಕುಳಿತುಕೊಳ್ಳುವುದು ಕಾಣಿಸಿತು. ಅದು ನನ್ನ ಕಾಲೇ ಆದರೂ, ಸಿಟ್ಟಿನಿಂದ ಕೈಯಲ್ಲಿ ಹಿಡಿದ ಪೇಪರ್ ನಿಂದ ರಪ್ಪೆಂದು ಬಾರಿಸಿದೆ. ಮತ್ತೆ ತಪ್ಪಿಸಿಕೊಂಡ ಆ ಸೊಳ್ಳೆ ಹತ್ತಿರದ ಗೋಡೆಯ ಮೇಲೆ ಕುಳಿತುಕೊಂಡಿತು. ಶತ್ರುವಿನ ಪ್ರಾಣ ತೆಗೆಯಲು ನಿಂತ ಯೋಧನ ಹಾಗೆ ನಾನು ಅದರ ಬೆನ್ನು ಬಿಡದೆ ರಪ್ಪೆಂದು ಬಾರಿಸಿದೆ. ಅದು ಮತ್ತೆ ಪಾರಾಗುವ ಮುನ್ನವೇ ಇನ್ನೊಂದು ಸಲ ಬಾರಿಸಿ ಆಯಿತು. ಅಲ್ಲಿಯವರೆಗೆ ಫೈಟರ್ ಜೆಟ್ ವಿಮಾನಗಳ ಹಾಗೆ ಹಾರುತ್ತ ತಪ್ಪಿಸಿಕೊಳ್ಳುತ್ತಿದ್ದ ಆ ಸೊಳ್ಳೆ, ನನ್ನ ಚೌಕಾಕಾರದ ಪೇಪರ್ ಆಯುಧಕ್ಕೆ ಕೊನೆಗೂ ಆಹುತಿ ಆಯಿತು.

 

ದೊಡ್ಡ ಗಾತ್ರದ ಆ ಸೊಳ್ಳೆಯನ್ನು ಪೇಪರ್ ನಲ್ಲಿ ತುಂಬಿ, ಕಿಟಕಿ ತೆಗೆದು ಹೊರ ಹಾಕಿದೆ. ಮನೆಯ ಕಾಂಪೌಂಡ್ ಗೋಡೆಗೆ ಕುಳಿತಿದ್ದ ಕಟ್ಟಡ ಕಾರ್ಮಿಕ ಹಚ್ಚಿದ ರೇಡಿಯೋನಲ್ಲಿ ಅಣ್ಣಾವ್ರು ಸಣ್ಣಗೆ ಹಾಡುತ್ತಿದ್ದರು "ಕೋಟೆ ಕಟ್ಟಿ ಮೆರೆದೋರೆಲ್ಲ ಏನಾದರು? ಮೀಸೆ ತಿರುವಿ ಕುಣಿದೊರೆಲ್ಲ ಮಣ್ಣಾದರು".  ಹೌದಲ್ಲವೇ ಅನಿಸಿತು. ಮೆರೆದವರನ್ನು ಸಾವು ಹುಡುಕಿಕೊಂಡು ಬರುತ್ತೋ ಅಥವಾ ಅದು ತಾನು ಬರುವ ಮುಂಚೆ ಮೆರೆಯುವ ಹುಚ್ಚುತನವನ್ನು ಕಳಿಸುತ್ತೋ? ಯಾವುದರ ಕಾರಣ ಯಾವುದು ಎಂದು ಒಮ್ಮೆಗೆ ನಿರ್ಧರಿಸಲು ಆಗಲಿಲ್ಲ.

 

ಸೊಳ್ಳೆ ಸಾಯುವ ಮುಂಚೆ ಅದನ್ನು ಕ್ಷಮಿಸಲು ಸಾಧ್ಯವೇ ಇಲ್ಲ ಎನ್ನುವ ಮನಸ್ಥಿತಿಯಲ್ಲಿ ಇದ್ದ ನನಗೆ, ಅದು ಸತ್ತ ಮೇಲೆ 'ಪಾಪ, ಅದರ ಕರ್ಮ' ಎನಿಸತೊಡಗಿತು.