Sunday, May 31, 2015

ಪುಸ್ತಕ ಪರಿಚಯ: ಶಿಕಾರಿ (ಯಶವಂತ ಚಿತ್ತಾಲ)

ಏಕಾಂಗಿಯೊಬ್ಬನ ವ್ಯಥನ ಕಥನದಂತೆ ಪ್ರಾರಂಭಗೊಳ್ಳುವ ಈ ಕಾದಂಬರಿ, ಪರಿವರ್ತನೆಗೊಳ್ಳುತ್ತ ಸಾಗುವ ಕಥಾ ನಾಯಕನ ಹೊಸ ಆಯಾಮಗಳನ್ನು ಪರಿಚಯಿಸಿ, ತನ್ನ ಬೇಟೆಗೆ ನಿಂತ ಶಿಕಾರಿಗಳ ಪ್ರಯತ್ನಗಳನ್ನು ನಿರರ್ಥಕಗೊಳಿಸಿ, ಬದುಕಿಗೆ ಹೊಸ ಉದ್ದೇಶ ಕಂಡುಕೊಳ್ಳುವ ನಾಗಪ್ಪನ ಕರಾಳ ದಿನಗಳನ್ನು ಓದುಗರ ಮುಂದಿಡುತ್ತದೆ.

ನಾಗಪ್ಪ (ಆಫೀಸಿನಲ್ಲಿ ನಾಗನಾಥ್), ಮುಂಬಯಿಯಲ್ಲಿ ರಾಸಾಯನಿಕ ಕಂಪನಿಯೊಂದರ ವಿಭಾಗವೊಂದರ ಮುಖ್ಯಸ್ಥ . ದುರದೃಷ್ಟವೆನಿಸುವಂಥ ಬಾಲ್ಯ ಇತನದ್ದು. ಕೆಟ್ಟ  ಬಾಲ್ಯದ ಪರಿಣಾಮವೆನ್ನುವಂತೆ ಈತ ಅಂತರ್ಮುಖಿಯಗುತ್ತಾನೆ. ಸಹಜವಾಗಿ ಇತರರೊಡನೆ ಬೆರೆಯುವುದು ಈತನಿಂದ ಸಾಧ್ಯವಾಗದೆ ಹೊಗುತ್ತದೆ. ಈತನ ಸ್ನೇಹಿತನೊಬ್ಬ ತನ್ನ ಗೆಳತಿಗೆ ಮೋಸಗೊಳಿಸಿ ಆಕೆಯ ಆತ್ಮಹತ್ಯೆಗೆ ಕಾರಣನಾಗುವ ಕೃತ್ಯಕ್ಕೆ ಸಾಕ್ಷಿಯಾಗುತ್ತಾನೆ. ಮುಂದೊಂದು ದಿನ ಇದನ್ನೇ ಆಧರಿಸಿ ಕಾದಂಬರಿಯನ್ನು ಬರೆಯಲು ಹೊರಡುವ ನಾಗಪ್ಪನಿಗೆ ಆತನ ಹಳೆಯ ಸ್ನೇಹಿತನೇ ಶತ್ರುವಾಗಿ ಮಾರ್ಪಡುತ್ತಾನೆ. ಇನ್ನು ಕೆಲವರನ್ನು ಸೇರಿಸಿಕೊಂಡು ನಾಗಪ್ಪನ ಶಿಕಾರಿಗೆ ನಿಲ್ಲುತ್ತಾನೆ. ಮಾನಸಿಕವಾಗಿ ತುಂಬಾ ಕುಗ್ಗಿ ಹೋದ ನಾಗಪ್ಪ ಅದರಿಂದ ಹೊರ ಬಂದು ಇದರ ಜಾಲದ ಸುಳಿಗೆ ಸಿಲುಕದೆ, ಪಿತೂರಿಯನ್ನು ಸಮರ್ಥವಾಗಿ ಎದುರಿಸುತ್ತಾನೆ. ಎಲ್ಲ ಆಮಿಷಗಳನ್ನು ನಿರಾಕರಿಸಿ, ಕೊನೆಯಲ್ಲಿ ತನ್ನ ಹುದ್ದಗೆ ರಾಜಿನಾಮೆ ನೀಡಿ, ತನ್ನ ಜೀವನದ ಮೂಲ ಉದ್ದೇಶ ಕಂಡುಕೊಳ್ಳುತ್ತಾನೆ.

ಈ ಕಾದಂಬರಿ ಸ್ವಗತದಂತೆ ಕಂಡರೂ, ಪದರ ಪದರವಾಗಿ ಕಥೆಯ ಎಳೆಯನ್ನು ಬಿಚ್ಚಿಡುತ್ತ ಹೋಗುತ್ತದೆ. ಮನುಷ್ಯನಲ್ಲಿ ಅಂತರ್ಗತವಾದ ಬೇಟೆ ಪ್ರವೃತ್ತಿಯನ್ನು ಮತ್ತು ವ್ಯಕ್ತಿಗತವಾದ ಸುಳ್ಳು, ಮೋಸಗಳನ್ನು ತನ್ನ ಸ್ವಾರ್ಥಕ್ಕೆ ಬಳಸಿಕೊಂಡು, ದುರ್ಬಲರನ್ನು ಜಾಲದಲ್ಲಿ ಸಿಲುಕಿಸಿ, ಶಿಕಾರಿಯಾಡುವ ಜನರನ್ನು ಮತ್ತು ಅವರ ಅಂತರಂಗವನ್ನು ಪರಿಶೋಧಿಸಿ, ಇದು ಒಂದು ಮನ ಶಾಸ್ತ್ರದ ಪುಸ್ತಕವೆನ್ನುವಂತ ಭಾವನೆ ಮೂಡಿಸುತ್ತದೆ.


ಇದು ಲೇಖಕರಾದ ಯಶವಂತ ಚಿತ್ತಾಲರಿಗೆ ಪ್ರಶಸ್ತಿ ಮತ್ತು ಜನಪ್ರಿಯತೆ ಗಳಿಸಿಕೊಟ್ಟ ಕೃತಿ. ಲೇಖಕರು ಜನಿಸುದ್ದು ಉತ್ತರ ಕನ್ನಡ ಜಿಲ್ಲೆಯ ಹನೇಹಳ್ಳಿಯಲ್ಲಿ, ಜೀವನ ಸಾಗಿಸಿದ್ದು ಮುಂಬಯಿನಲ್ಲಿ. ನವ್ಯ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುವಲ್ಲಿ ಇವರ ಕೊಡುಗೆ ಅಭಿನಂದನೀಯ.  ೧೯೭೯ ರಲ್ಲಿ ಪ್ರಥಮ ಬಾರಿಗೆ ಮುದ್ರಣಗೊಂಡ ಈ ಕಾದಂಬರಿ, ಒಂಬತ್ತು ಬಾರಿ ಮರು ಮುದ್ರಣಗೊಂಡಿದೆ ಮತ್ತು ಲೇಖಕರ ಪ್ರಯತ್ನವನ್ನು ಸಾರ್ಥಕವಾಗಿಸಿದೆ.

No comments:

Post a Comment