Saturday, February 24, 2024

ಹೊಸ ತೇರು, ಹಳೆ ಜಾತ್ರೆ, ಸಮಾಯಾತೀತ ಶ್ರೀ ಮಲ್ಲಿಕಾರ್ಜುನ


ನಮ್ಮೂರಿನಲ್ಲಿ ಇಂದು ಭರತ ಹುಣ್ಣಿಮೆಯ ದಿನದಂದು ಶ್ರೀ ಮಲ್ಲಿಕಾರ್ಜುನನ ಜಾತ್ರೆ. ಇಲ್ಲಿ ಜಾತ್ರೆಯ ದಿನದಂದು ಎಳೆಯುವ ತೇರು ಎಷ್ಟು ವರುಷ ಹಳೆಯದು, ಯಾರು ಮಾಡಿಸಿದ್ದು ಎಂದು ಈ ಊರಿನಲ್ಲಿರುವ ೮೦-೯೦ ವರುಷದ ವೃದ್ಧರಿಗೂ ತಿಳಿದಿಲ್ಲ. ಅವರಿಗೆ ಜಾತ್ರೆಯ ದಿನದಂದು ತೇರು ಎಳೆದದ್ದು ಅಷ್ಟೇ ನೆನಪು. ತೇರಿನ ಹಳೆಯ ಭಾಗಗಳು (ಕಟ್ಟಿಗೆಯಿಂದ ಮಾಡಿದ್ದು) ಗಮನಿಸಿ ನೋಡಿದಾಗ ಇದು ೧೨೦ ರಿಂದ ೧೫೦ ವರುಷ ಹಳೆಯದು ಎಂದು ಅಂದಾಜು ಮಾಡಬಹುದು. ಗಟ್ಟಿ-ಮುಟ್ಟ್ಯಾಗಿರುವ ಜನ ತುಂಬಾ ಭಾರವೆನಿಸುವ ಹಗ್ಗ ಹಿಡಿದು ತೇರು ಎಳೆದರೆ, ಉಳಿದೆಲ್ಲ ಭಕ್ತರಿಗೆ ತೇರಿನ ಕಳಸಕ್ಕೆ ಬಾಳೆ ಹಣ್ಣು ಎಸೆಯುವ ಸಂಭ್ರಮ. ತೇರು ತನ್ನ ಮನೆಗೆ ಮರಳಿದ ನಂತರ ಸಂಜೆ ಹೊತ್ತಿಗೆ ಜಾತ್ರೆ ಶುರು. ಇದು ಸಾವಿರಾರು ವರುಷಗಳಿಂದ ಇಲ್ಲಿ ನೆಲೆಗೊಂಡಿರುವ ಶ್ರೀ ಮಲ್ಲಿಕಾರ್ಜುನನ ಜಾತ್ರೆ.

ನೂರಾರು ವರುಷಗಳ ಹಳೆಯ ಸಂಪ್ರದಾಯ ಎನಿಸುವ ಪೂಜೆಗಳು ಬೆಳಿಗ್ಗೆ ಹೊತ್ತಿಗೆಲ್ಲ ಶುರು. ಹೆಚ್ಚು ಕಡಿಮೆ ಊರಿನ ಜನ ಎಲ್ಲ ಶ್ರೀ ಮಲ್ಲಿಕಾರ್ಜುನ ದರ್ಶನ ಪಡೆಯುವಷ್ಟರಲ್ಲಿ ಸುತ್ತ ಹತ್ತಾರು ಹಳ್ಳಿಗಳಿಂದ ಜನರ ಆಗಮನ, ಡೊಳ್ಳು ಬಾರಿಸುತ್ತ ಬರುವ ಕುರುಬರು ವಿಶೇಷ ಗಮನ ಸೆಳೆಯುತ್ತಾರೆ. ಸಣ್ಣ ಮಕ್ಕಳ ಕೈಯಲ್ಲಿ ಬಣ್ಣದ ಬಲೂನುಗಳು, ಹೆಂಗಳೆಯರ ಮುಖದಲ್ಲಿ ಭಕ್ರಿ ಭಾವ, ಗಂಡಸರ ಮುಖದಲ್ಲಿ ತೇರು ಎಳೆಯುವ ಉತ್ಸಾಹ. ಇದು ಪ್ರತಿ ವರುಷ ಜಾತ್ರೆಯ ದಿನ ಕಾಣ ಸಿಗುವ ನೋಟ.

ಶ್ರೀ ಮಲ್ಲಿಕಾರ್ಜುನ ಕಾಲಾತೀತ. ಆತನಿಗೆ ಹಳೆ ಪೀಳಿಗೆಯ ಭಕ್ತರು ಮಣ್ಣು ಸೇರಿದರೆ  ಹೊಸ ಪೀಳಿಗೆಯ ಭಕ್ತರು ಮಲ್ಲಿಕಾರ್ಜುನ ಜಾತ್ರೆ ನಡೆಸಿಕೊಂಡು ಹೋಗುತ್ತಾರೆ. ಸುಮಾರು ೫-೬ ಪೀಳಿಗೆಯ ಜನ ಎಳೆದ ತೇರು ಕೆಲವು ವರುಷಗಳಿಂದ ತೊಂದರೆ ಕೊಡುತ್ತಲಿತ್ತು. ಹೊಸ ಗಾಲಿಗಳು ಬಂದರು ತೊಂದರೆ ತಪ್ಪಲಿಲ್ಲ. ದಾರಿ ಬಿಟ್ಟು ಬರುವ ತೇರು, ಸಿಕ್ಕಿ ಹಾಕಿಕೊಂಡ ಜಾಗದಿಂದ ಮಿಸುಗಾಡದ ತೇರು, ತುಂಡಾಗುವ ಹಗ್ಗ ಹೀಗೆ ಹಲವು ತೊಂದರೆಗಳಿಂದ ತೇರನ್ನು ಒಂದೇ ದಿನದಲ್ಲಿ ಆದರೆ ಮನೆಗೆ ಸೇರಿಸಲು ಆಗುತ್ತಿರಲಿಲ್ಲ. ದೈವ ಕೃಪೆಯೋ, ಭಕ್ತರ ಕಾಳಜಿಯೋ ಒಟ್ಟಿನಲ್ಲಿ ಈ ವರುಷ ಹೊಸ ತೇರು ಬಂದಾಗಿದೆ. 

ಹಳೆಯ ತೇರನ್ನು ಕೊನೆಯ ಬಾರಿಗೆ ಎಳೆದು, ಹೊಸ ತೇರನ್ನು ಮಲ್ಲಿಕಾರ್ಜುನನ ಸೇವೆಗೆ ಬಿಡುವ ಜಾತ್ರೆ ಇಂದು. ಎರಡು ತೇರುಗಳನ್ನು ಒಟ್ಟಿಗೆ ನೋಡಿದ ಆನಂದ ಈ ದಿನ ನನ್ನದು. ಅಷ್ಟೇ ಅಲ್ಲ, ನಿಮಗೂ ಅದನ್ನು ತೋರಿಸುವ ಆಸೆ. ಒಮ್ಮೆ ವಿಡಿಯೋ ನೋಡಿ.


No comments:

Post a Comment