Tuesday, September 20, 2016

ಕಾಂತಪುರ

(ರಾಜಾರಾವ್ ರವರ ಕಾಂತಪುರ ಕಾದಂಬರಿಯ ಮೊದಲ ಕೆಲವು ಪುಟಗಳ ಅನುವಾದ)

ಸ್ಥಳ ಪುರಾಣವಿಲ್ಲದ ಊರು ಅಥವಾ ಹಳ್ಳಿ ಭಾರತದಲ್ಲಿ ಇಲ್ಲವೇ ಇಲ್ಲ ಎಂದು ಹೇಳಬಹುದು. ಅದು ಎಷ್ಟೇ ಕುಗ್ಗಳ್ಳಿಯಾಗಿರಲಿ, ಅದಕ್ಕೇ ತನ್ನದೇ ಆದ ದಂತ ಕಥೆ ಇದ್ದೆ ಇರುತ್ತದೆ. ಒಬ್ಬ ದೇವರು ಅಥವಾ ದೇವತಾ ಪುರುಷ ಆ ಊರಿನ ಮಾರ್ಗವಾಗಿ ಸಂಚಾರ ಮಾಡಿರಬಹುದು. ರಾಮಾಯಣದ ರಾಮ ವಿಶ್ರಾಂತಿ ತೆಗೆದುಕೊಂಡಿದ್ದು ಆ ಊರಿನ ಅರಳಿ ಮರದ ಕೆಳಗೆ, ಸೀತೆ ತನ್ನ ಸ್ನಾನದ ನಂತರ ಬಟ್ಟೆಗಳನ್ನೂ ಒಣಗಿಸಿಕೊಂಡಿದ್ದು ಆ ಚಿಕ್ಕ ಬೆಟ್ಟದ ಕಲ್ಲುಗಳ ಮೇಲೆ, ಇಲ್ಲವೇ ಮಹಾತ್ಮಾ ಗಾಂಧಿ ತನ್ನ ದೇಶ ಪರ್ಯಟನೆಯ ಹೊತ್ತಿನಲ್ಲಿ ಈ ಊರಿನ ಮಾರ್ಗವಾಗಿ ಬಂದಾಗ, ಉಳಿದುಕೊಂಡದ್ದು ಆ ಚಿಕ್ಕ ಗುಡಿಸಿಲಿನಲ್ಲಿ. ಹೀಗೆ ಇತಿಹಾಸ ಮತ್ತು ವರ್ತಮಾನ ಕಾಲಗಳ ನಡುವೆ ಬೆಸುಗೆ ಹಾಕುವ, ದೇವರು ಮನುಷ್ಯರೊಡನೆ ಬೆರೆಯುವ ಸಂಗತಿಗಳು, ಪ್ರತಿ ಊರಿನ ಹಿರಿಯ ಜೀವಗಳ ನೆನಪಿನ ಭಂಡಾರದಲ್ಲಿ ಪ್ರಕಾಶಿಸುತ್ತಲೇ ಇರುತ್ತವೆ. ಅಂತಹುದೇ ಒಂದು ಊರಿನ ಕಥೆ ಇಲ್ಲಿದೆ.

ನಮ್ಮ ಹಳ್ಳಿ, ಇದರ ಹೆಸರು ಬಹುಶ ನೀವು ಕೇಳಿರದೇ ಇರಬಹುದು, ಅದು ಕರಾವಳಿ ಪ್ರದೇಶದ ಕಾಂತಪುರ.

ಅದು ಇರುವುದು ಪಶ್ಚಿಮ ಘಟ್ಟಗಳ ಎತ್ತರದ ಪ್ರದೇಶದಲ್ಲಿ, ಅರಬ್ಬೀ ಸಮುದ್ರಕ್ಕೆ ಮುಖ ಕೊಟ್ಟು ನಿಂತ ಪರ್ವತ ಶ್ರೇಣಿಗಳ ಮಧ್ಯದಲ್ಲಿ. ಮಂಗಳೂರು ಮತ್ತು ಪುತ್ತೂರು ಊರುಗಳ ನಡುವೆ, ಏಲಕ್ಕಿ, ಕಾಫಿ, ಭತ್ತ, ಕಬ್ಬಿನ ಗದ್ದೆಗಳ ನಡುವಿನಿಂದ ಸಾಗಿ ಹೋಗುವ ಚಿಕ್ಕ ಮತ್ತು ಧೂಳು ತುಂಬಿದ ರಸ್ತೆಗಳ ಮಾರ್ಗವಾಗಿ, ಹೊನ್ನೆ, ಹಲಸು, ತೇಗು, ಗಂಧದ ಗಿಡಗಳಿಂದ ತುಂಬಿದ ಕಾಡುಗಳನ್ನು ದಾಟುತ್ತ, ಗಿರಿಕಂದರ ಪ್ರಪಾತಗಳ ಅಂಚಿನಲ್ಲಿ ಓಲಾಡುತ್ತಾ, ಆನೆ ಕಾಟವಿರುವ ಕಣಿವೆಗಳಲ್ಲಿ ಬಿರುಸಿನಿಂದ ಸಾಗುತ್ತ, ಅಲ್ಲಿ ಎಡಕ್ಕೆ ಮುಂದೆ ಬಲಕ್ಕೆ, ಹೀಗೆ ಸಾಗಿದಾಗ ನಮ್ಮೂರಿನ ಬಯಲಿಗೆ ಬಂದಿರುತ್ತೀರಿ. ಅಲ್ಲಿ ಇರುವ ಗೋದಾಮುಗಳಿಂದ ಮಸಾಲೆ ಪದಾರ್ಥಗಳನ್ನು, ನೀಲಿ ಸಮುದ್ರದಲ್ಲಿ ನಿಂತಿರುವ ತಮ್ಮ ಹಡಗುಗಳಿಗೆ ತುಂಬಿಸಿ, ಫರಂಗಿಗಳು ಸಪ್ತ ಸಾಗರದಾಚೆ ಇರುವ ತಮ್ಮ ದೇಶದೆಡೆಗೆ ಸಾಗುತ್ತಾರೆ.

ಒಂದಾದ ನಂತರ ಒಂದರಂತೆ ಸಾಗುವ ಚಕ್ಕಡಿ ಬಂಡಿಗಳ ಸದ್ದು ಕಾಂತಪುರದ ರಸ್ತೆಗಳಲ್ಲಿ ನಿರಂತರ. ಸಾಕಷ್ಟು ರಾತ್ರಿ, ಕಣ್ಣುಗಳು ಮುಚ್ಚುವ ಮುಂಚೆ ನೋಡುವ ಕೊನೆಯ ನೋಟ ಆ ಬಂಡಿಗಳ ಸಾಲು ಸಾಲು ದೀಪಗಳದ್ದೇ ಆಗಿರುತ್ತದೆ. ಹಾಗೇಯೇ, ಕಿವಿಗಳಿಗೆ ಬೀಳುವ ಕೊನೆಯ ಸದ್ದು, ರಾತ್ರಿಯನ್ನು ಸೀಳಿ ಬರುವ ಆ ಚಕ್ಕಡಿ ಚಾಲಕರ ಹಾಡುಗಳದ್ದೇ ಆಗಿರುತ್ತದೆ. ಆ ಚಕ್ಕಡಿಗಳು ಊರಿನ ಮುಖ್ಯ ರಸ್ತೆಯಿಂದ ಸಾಗಿ, ಕುಂಬಾರ ಓಣಿಯನ್ನು ದಾಟಿಕೊಂಡು, ಚೆನ್ನಯ್ಯನ ಕೆರೆಯ ಹತ್ತಿರ ಬಲಕ್ಕೆ ತಿರುಗಿ, ಅಲ್ಲಿಂದ ಮೇಲಕ್ಕೆ ಸಾಗುತ್ತಾ, ಸಮುದ್ರದಿಂದ ಸೂರ್ಯ ಮೇಲೇಳುವ ಹೊತ್ತಿಗೆಲ್ಲ ತಮ್ಮ ಗುರಿ ತಲುಪುತ್ತಾರೆ.

ಕೆಲವೊಂದು ಸಲ ರಾಮ ಚೆಟ್ಟಿ ಅಥವಾ ಸುಬ್ಬ ಚೆಟ್ಟಿಯವರ ಮಾರಾಟ ಸರಕು ಸಾಗಿಸುವದಿದ್ದರೆ, ಚಕ್ಕಡಿ ಬಂಡಿಗಳು ಊರಿನಲ್ಲಿ ನಿಲ್ಲುತ್ತವೆ ಮತ್ತು ಉಭಯ ಕುಶಲೋಪರಿಯ ಉಪಚಾರಗಳಾಗುತ್ತವೆ. ಆಗ ಸುಬ್ಬ ಚೆಟ್ಟಿಯ ೩೫೦ ರೂಪಾಯಿ ಬೆಲೆ ಬಾಳುವ ಎತ್ತುಗಳು ನೊಗ ಹೊರುವ ಮುಂಚೆ ಹೊರಡುವ ಅವುಗಳ ಕತ್ತಿನ ಗಂಟೆಗಳ ಸದ್ದು ಊರಿನ ಪ್ರತಿ ಮನೆಯಲ್ಲೂ ಕೇಳಿಸುತ್ತದೆ. 'ಹೇ-ಹೋ' ಎಂದು ಅರಚುವ ಸುಬ್ಬ ಚೆಟ್ಟಿಯ ಧ್ವನಿ ಕೇಳಿಸಿಕೊಂಡ ಎತ್ತುಗಳು, ಬಲವಾಗಿ ಕಂಪಿಸುತ್ತ ಪ್ರಯಾಣದ ಆರಂಭ ಮಾಡುತ್ತವೆ. ನಿಧಾನ ಗತಿಯಲ್ಲಿ ಅಂಧಕಾರದಲ್ಲಿ ಸಾಗುವ ಚಕ್ಕಡಿ ಬಂಡಿಗಳು ಮಾಡುವ ನಿರಂತರ ಸದ್ದು ಕೇಳತೊಡಗುತ್ತದೆ. ಅವು ಊರಿನ ಬೆಟ್ಟದ ಆ ಬದಿಗೆ ಸಾಗಿದ ನಂತರ, ಅವುಗಳ ಧ್ವನಿ ಕ್ಷೀಣವಾಗುತ್ತಾ, ಹೇಮಾವತಿ ನದಿ ಮೃದುವಾಗಿ ಹರಿಯುವ ಸದ್ದು ಏಳತೊಡಗುತ್ತದೆ. ಈ ಊರಿನ ಜನ ನಂಬಿರುವ ಪ್ರಕಾರ, ಹೇಮಾವತಿ ನದಿ ದೇವತೆಯು ಬೆಟ್ಟದ ದೇವತೆ ಕೆಂಚಮ್ಮಳ ಜೊತೆ ರಾತ್ರಿಯಿಡಿ ನಲಿಯುತ್ತಾಳೆ. ಏಕೆಂದರೆ ಕೆಂಚಮ್ಮ ದೇವಿ ಹೇಮಾವತಿಯ ತಾಯಿ. ಆ ತಾಯಿಯ ಕರುಣೆ ನಮ್ಮ ಮೇಲೆ ಸದಾ ಇರಲಿ.

ಕೆಂಚಮ್ಮ ನಮ್ಮೂರಿನ ದೇವತೆ. ಬಹು ಉದಾರ ಮನಸ್ಸಿನವಳು. ಎಷ್ಟೋ ಕಾಲದ ಹಿಂದೆ, ಈ ಊರಿನ ಜನರನ್ನು ಪೀಡಿಸುತ್ತಿದ್ದ, ಈ ಊರಿನ ಮಕ್ಕಳನ್ನು ತನ್ನ ಆಹಾರ ಮಾಡಿಕೊಂಡಿದ್ದ ಒಬ್ಬ ರಾಕ್ಷಸನನ್ನು ಸಂಹಾರ ಮಾಡಿದವಳು. ಕೆಂಚಮ್ಮ ಬಂದಿದ್ದು ಸ್ವರ್ಗ ಲೋಕದಿಂದ. ನಮ್ಮ ಊರಿನ ಋಷಿ ಮಾಡಿದ ಕಠಿಣ ತಪಸ್ಸಿನ ಫಲವಾಗಿ ಅವಳು ಇಲ್ಲಿಗೆ ಇಳಿದು ಬಂದು, ಎಷ್ಟೋ ರಾತ್ರಿಗಳು ನಡೆದ ಭಯಂಕರ ಕದನದಲ್ಲಿ, ರಾಕ್ಷಸನ ರಕ್ತ ಚೆಲ್ಲಾಡಿದಳು. ಅದೇ ಕಾರಣಕ್ಕಾಗಿ, ಕೆಂಚಮ್ಮ ಗುಡ್ಡ ಪೂರ್ತಿ ಕೆಂಪಾಗಿ ಕಾಣುವುದು. ಇಲ್ಲದಿದ್ದರೆ ಸುತ್ತ ಮುತ್ತ ಬರಿ ಕಪ್ಪು ಮಣ್ಣು ತುಂಬಿದ ಜಾಗದ ನಡುವೆ, ಕೆಂಪು ಬಣ್ಣ ಬರಲು ಬೇರೆ ಯಾವ ಕಾರಣವಿದ್ದೀತು? ಹೇಳಿ, ನೀವೇ ಹೇಳಿ.





No comments:

Post a Comment