Saturday, September 3, 2022

ಮನದಾಸೆಗಳನ್ನು ಗೆಲ್ಲದೇ ಮಠ ಕಟ್ಟುವವರು

ಕನ್ನಡ ನಾಡಿನಲ್ಲಿ ಮಠ ಕಟ್ಟಿದ ಸಂತರು ಅನೇಕ. ಸಿದ್ಧಾರೂಢರಿಂದ, ಶಿವಕುಮಾರ ಸ್ವಾಮಿಗಳವರೆಗೆ. ಅವರು ಕಟ್ಟಿದ ಮಠಗಳಿಂದ ಸಮಾಜಕ್ಕೆ ಆದ ಪ್ರಯೋಜನ ಅಪಾರ. ಮಠ ಬಿಟ್ಟು ಅವರಿಗೆ ಪ್ರತ್ಯೇಕ ಜೀವನ ಎನ್ನುವುದು ಇರಲಿಕ್ಕಿರಲಿಲ್ಲ. ಅಷ್ಟೇ ಪ್ರಮುಖವಾಗಿದ್ದದ್ದು ಚಿತ್ರದುರ್ಗದ ಬೃಹನ್ಮಠ. ಆದರೆ ಅದರ ಜವಾಬ್ದಾರಿ ಹೊತ್ತು ಹೆಸರು ಗಳಿಸಿದ್ದ ಮಠಾಧೀಶರು ತಂದುಕೊಂಡ ಅಪವಾದ ಜನಸಾಮಾನ್ಯರಿಗೆ ಮಠಗಳ ಮೇಲಿನ ನಂಬಿಕೆ ಕುಸಿಯುವಂತೆ ಮಾಡುತ್ತದೆ.


"Every saint has a past and every sinner has a future". ಎಲ್ಲ ಸಂತರಿಗೂ ಗತ ಕಾಲ ಇರುತ್ತದೆ. ಅದನ್ನು ದಾಟಿ ಬಂದ ಮೇಲೆ ಅವರು ಸಂತರಾಗುವುದು. ಆದರೆ ಅವರು ವರ್ತಮಾನದಲ್ಲೂ ಕೂಡ ಮನದಾಸೆಗಳಿಗೆ ಕಟ್ಟು ಬಿದ್ದರೆ, ಅವರಲ್ಲಿ ಲೈಂಗಿಕ ದಾಹ ಇಂಗಿರದಿದ್ದರೆ, ಅವರು ನಿಜವಾದ ಸಂತರಲ್ಲ. ಅವರು ಸಾಮಾನ್ಯ ಮನುಷ್ಯರಂತೆ ಸಂಸಾರಿಯಾಗುವುದು ವಾಸಿ. ಹೊರ ಜಗತ್ತಿಗೆ ಧರ್ಮ ಸಾರುತ್ತ, ಅಂತರಂಗದಲ್ಲಿ ಅಧರ್ಮದ ಕೆಲಸಗಳಿಗೆ ಇಳಿದರೆ ಅದು ಇತರೆ ಮಠಾಧೀಶರನ್ನು ಕೂಡ ಅನುಮಾನದಿಂದ ನೋಡುವಂತೆ ಮಾಡುತ್ತದೆ.


ಮಠಾಧೀಶರು ಕೂಡ ಕಾನೂನಿಗಿಂತ ದೊಡ್ದವರೇನಲ್ಲ ಎನ್ನುವುದು ಇವತ್ತಿನ ಬೆಳವಣಿಗೆಗಳು ಸಾಬೀತು ಪಡಿಸುತ್ತಿವೆ. ಆದರೆ ಮಠದ ಒಳಗಡೆ ಅವರೇ ಸರ್ವಾಧಿಕಾರಿಗಳು ಅಲ್ಲವೇ? ಅದನ್ನು ಅವರು ದುರುಪಯೋಗ ಮಾಡಿಕೊಂಡರೆ ಯಾರಿಗೆ ದೂರುವುದು? ಹಾಗಾಗಿ ಎಷ್ಟೋ ಪ್ರಕರಣಗಳು ಬೆಳಕಿಗೆ ಬರದೇ ಮುಚ್ಚಿ ಹೋಗಿಬಿಡಬಹುದು. ಮಠದ ಶಾಲೆಗಳಲ್ಲಿ ಓದುತ್ತಿರುವ ಎಷ್ಟು ವಿದ್ಯಾರ್ಥಿಗಳಿಗೆ ಮಠಾಧೀಶರನ್ನು ವಿರೋಧಿಸುವ ಧೈರ್ಯ ಇರುತ್ತದೆ? ಅವರ ಆರ್ಥಿಕ, ಸಾಮಾಜಿಕ ಪರಿಸ್ಥಿತಿಗಳು ಅವರನ್ನು ಪ್ರತಿಭಟಿಸದಂತೆ ತಡೆಯಬಹುದು. ಅಲ್ಲದೆ ಅವರ ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನ ಮಠ ನಡೆಸುವವರು ಮಾಡುತ್ತಾರಲ್ಲ. ಅವೆಲ್ಲ ಸೇರಿ, ಸಮಸ್ಯೆ ದೊಡ್ಡ ಹಂತ ತಲುಪುವವರೆಗೆ ಸಾರ್ವಜನಿಕರಿಗೆ ಅದರ ಸುಳಿವು ಸಿಗದಂತೆ ಆಗಿಬಿಡುತ್ತದೆ. ಕೊನೆಗೆ ವಿಷಯ ಹೊರ ಬಿದ್ದಾಗ, ಎಲ್ಲ ಟಿವಿ ಚಾನೆಲ್ ಗಳು ಮುಗಿ ಬಿದ್ದು ಅದನ್ನೇ ತೋರಿಸುತ್ತಾರೆ. ಆಗ ತಮ್ಮ ಮಕ್ಕಳನ್ನು ಮಠದ ಶಾಲೆಗಳಲ್ಲಿ ಬಿಟ್ಟ ಪೋಷಕರಿಗೆ ಆತಂಕವಾಗುವುದು ಸಹಜ.


ಧರ್ಮ ಎತ್ತಿ ಹಿಡಿಯಬೇಕಾದವರು ಅಧರ್ಮದ ಹಾದಿ ತುಳಿದಾಗ ಅದರಿಂದ ಆಗುವ ಹಾನಿ ಅಪಾರ. ದೇವಸ್ಥಾನಕ್ಕೆ ಹೋದಾಗ ಪ್ರಸಾದವನ್ನು ಕಣ್ಣು ಮುಚ್ಚಿಕೊಂಡು ತಿನ್ನುವ ನಾವುಗಳು ಅದು ವಿಷ ಆಗಿರಬಹುದೇ ಎನ್ನುವ ವಿಚಾರ ಕ್ಷಣ ಕಾಲಕ್ಕೂ ಮಾಡುವುದಿಲ್ಲ. ಹಾಗೆಯೆ ಮಠದ ಶಾಲೆಗಳಿಗೆ ಈ ಘಟನೆಯಿಂದ ಆಗುವ ಆಘಾತ ಬಹು ಕಾಲದವರೆಗೆ ಕಣ್ಮರೆಯಾಗುವುದಿಲ್ಲ.

No comments:

Post a Comment