Friday, April 21, 2023

ನೋವು ಮರೆತ ಸ್ಪಷ್ಟ ಗುರುತು

ಕೆಲ ವರುಷಗಳ ಹಿಂದೆ ನಾನು ಕೆಲಸ ಮಾಡುತ್ತಿದ್ದ ಆಫೀಸ್ ನಲ್ಲಿ, ಮಧ್ಯಾಹ್ನದ ಹೊತ್ತಿಗೆ ಒಂದು NGO ಕಡೆಯಿಂದ ಒಂದು ಪ್ರಸ್ತುತಿ ಇದೆ ಎಂದು ನಮ್ಮೆಲ್ಲರನ್ನೂ ಒಟ್ಟಿಗೆ ಸೇರಿಸಿದರು. ಅದು ರಸ್ತೆಯಲ್ಲಿ ವಾಹನ ಚಲಾಯಿಸುವಾಗ ಜವಾಬ್ದಾರಿಯಿಂದ ಚಲಾಯಿಸುವುದು ಮತ್ತು ರಸ್ತೆಯಲ್ಲಿ ಇರುವ ಇತರರ ಮೇಲೆ ಸಹಾನುಭೂತಿ ತೋರಿಸುವುದು ಅದರ ಕುರಿತಾಗಿತ್ತು. ನಮ್ಮ ಸಹೋದ್ಯೋಗಿಯೊಬ್ಬ ಅವರಿಗೆ ಪ್ರಶ್ನೆ ಕೇಳಿಯೇ ಬಿಟ್ಟ 'ನಿಮಗೇಕೆ ಇದರಲ್ಲಿ ಆಸಕ್ತಿ?' ಅವರು ಸಮಾಧಾನದಿಂದ ಉತ್ತರಿಸಿದರು. ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದ ಅವರ ಮಗಳ ಮೇಲೆ ಒಬ್ಬ ಲಾರಿ ಹತ್ತಿಸಿ ಸಹಾಯಕ್ಕೆ ನಿಲ್ಲದೆ ಹೋಗಿದ್ದ. ಬೇರೆಯವರು ಗಮನಿಸುವದಷ್ಟರಲ್ಲಿ ಅವಳು ತೀವ್ರ ರಕ್ತಸಾವ್ರದಿಂದ ಅಸು ನೀಗಿದ್ದಳು. ಅದನ್ನು ಆತ ನಮಗೆ ಯಾವುದೇ ನೋವಿಲ್ಲದೆ ವಿವರಿಸಿದ್ದ. ಮತ್ತು ಆ ಘಟನೆ ಒಂದು NGO ಸ್ಥಾಪನೆಗೆ ಕಾರಣ ಆಯಿತು ಎಂದು ವಿವರಿಸಿದ್ದ.


ಯಾರೇ ಆಗಲಿ, ತೀವ್ರ ನೋವಿಗೆ ಒಳಪಟ್ಟಾಗ ಖಿನ್ನತೆಗೆ ಒಳಗಾಗುತ್ತಾರೆ. ಅದು ತಮಗೆ ಏಕೆ ಆಯಿತು ಎನ್ನುವ ಪ್ರಶ್ನೆ ಮತ್ತೆ ಹಾಕಿಕೊಳ್ಳುತ್ತಾರೆ. 'ಸಾವಿರದ ಮನೆಯಿಂದ ಸಾಸಿವೆ ತಾ' ಎಂದ ಬುದ್ಧ ಅದು ಎಲ್ಲರಿಗೆ ಸಹಜ ಎನ್ನುವ ಮನವರಿಕೆ ಮಾಡಿಕೊಟ್ಟದ್ದನಲ್ಲವೇ? ಹಾಗೆಯೆ ಆ ನೋವನ್ನು ಭರಿಸುವ ಶಕ್ತಿ ಮನಸ್ಸಿಗೆ ಬಂದಾಗ ಅದು ಬೇರೆಯ ತರಹದ ವಿಚಾರಗಳನ್ನು ಮಾಡಲು ತೊಡಗುತ್ತದೆ. ಅದರಿಂದ ತಾವು ಕಲಿಯಬೇಕಾದ್ದು ಏನು ಎನ್ನುವ ಪ್ರಶ್ನೆ ಅವರಿಗೆ ಖಿನ್ನತೆಯಿಂದ ಹೊರ ಬರುವಂತೆ ಮಾಡುತ್ತದೆ. ಆ ತರಹ ಇನ್ನೊಬ್ಬರಿಗೆ ಆಗಬಾರದು ಎಂದರೆ ಏನು ಮಾಡಬೇಕು ಅನ್ನುವ ದಿಕ್ಕಿನಲ್ಲಿ ಕೆಲಸ ಪ್ರಾರಂಭಿಸುವದರೊಂದಿಗೆ ಆ ದುಃಖ ಬಹತೇಕ ಮರೆಯಾಗಿಬಿಡುತ್ತದೆ. ಅದು ನೋವು ಮರೆತ ಸ್ಪಷ್ಟ ಗುರುತು.


ಲೋಕ ಕಲ್ಯಾಣ ಮಾಡಿದ ಜನರ ಜೀವನ ಗಮನಿಸಿ ನೋಡಿ. ಅವರು ಮಠ ಕಟ್ಟಿದ್ದು, ಕೆರೆ ಕಟ್ಟಿದ್ದು ಜನ ಹಿತಕ್ಕಾಗಿ ಎಂದು ಮೇಲ್ನೋಟಕ್ಕೆ ಅನಿಸಿದರೂ, ಅದು ಅವರು ತಮ್ಮ ನೋವು ಮರೆಯುವ ಪ್ರಕ್ರಿಯೆಯ ಕೊನೆಯ ಹಂತ ಆಗಿರುತ್ತದೆ. ಯಾವುದೇ ನೋವು ತಿನ್ನದ ಮನುಷ್ಯ ಸ್ವಾರ್ಥಿಯಾಗಿ ಬಾಳುವ ಸಾಧ್ಯತೆ ಹೆಚ್ಚು. ಆದರೆ ತಾಯಿಯನ್ನು ವೈದ್ಯಕೀಯ ಚಿಕಿತ್ಸೆ ಇಲ್ಲದೆ ಕಳೆದುಕೊಂಡ ಮನುಷ್ಯ, ತಮ್ಮೂರಿನಲ್ಲೆಯೇ ಹೊಸ ಆಸ್ಪತ್ರೆ ಕಟ್ಟಿಸಲು ಹೊರಡುತ್ತಾನೆ. ತಾನು ಕಲಿತುಕೊಂಡ ವಿಷಯಗಳನ್ನು ಇತರ ಒಳಿತಿಗೆ ಹಂಚಿಕೊಳ್ಳಲು ಬಯಸುತ್ತಾನೆ. ಅನಾಥರಾಗಿ ಬೆಳೆದವರು ಅನಾಥಾಶ್ರಮ ಕಟ್ಟಲು ಮುಂದಾಗುತ್ತಾರೆ. ಸಮಾಜದಿಂದ ತುಳಿತಕ್ಕೆ ಒಳಗಾದವರು, ಅದನ್ನು ತಮ್ಮದೇ ದಾರಿಯಲ್ಲಿ ತಡೆಗಟ್ಟುವ ಗಾಂಧಿ, ಅಂಬೇಡ್ಕರ್ ಆಗುತ್ತಾರೆ.


ಅದನ್ನು ಅವರು ಬರೀ ಸಮಾಜ ಸೇವೆಗೆಂದು ಮಾಡಿದರು ಎಂದುಕೊಳ್ಳಬೇಡಿ. ಮನಶಾಸ್ತ್ರದ ಪ್ರಕಾರ ಅದು ಅವರ ತಮ್ಮ ಆಂತರಿಕ ದಳ್ಳುರಿ ಶಮನ ಮಾಡಿಕೊಳ್ಳುವ ಪ್ರಕ್ರಿಯೆಯ ಒಂದು ಭಾಗ ಆಗಿತ್ತು ಅಷ್ಟೇ. ಅದು ಚಿಕ್ಕ ವಯಸ್ಸಿನಲ್ಲಿ ನೋವುಂಡ ಮನುಷ್ಯ ಮುಂದೆ ದೊಡ್ಡ ಸಾಧಕ ಆಗಲು ನೆರವಾಗುತ್ತದೆ. ಆದರೆ ನೋವುಗಳು ಕೊನೆ ವಯಸ್ಸಿನಲ್ಲಿ ಬಂದರೆ ಅವುಗಳು ಸಾವು ಬೇಗ ತಂದುಕೊಳ್ಳುವ ಸಾಧನ ಅಷ್ಟೇ.


ಯಾವುದೇ ಸಮಾಜ ಸುಧಾರಕ ನೋವು ನೋಡುತ್ತಾ ಸುಮ್ಮನೆ ಕೂಡುವುದಿಲ್ಲ. ಬುದ್ಧ ಜ್ಞಾನಿಯಾದ ಮೇಲೆ ಒಂದು ಮೂಲೆಯಲ್ಲಿ ಕುಳಿತು ಧ್ಯಾನ ಮಾಡುವ ಬದಲು ಅಲೆದಾಡುತ್ತ ಜನರ ಅಜ್ಞಾನ ಕಳೆಯುವ ಪ್ರಯತ್ನ ಮಾಡಿದ. ತನ್ನ ಹುಡುಕಾಟದ ನೋವು ಇತರರಿಗೆ ಆಗದೆ ಇರಲಿ ಎಂದು ತಾನು ತಿಳಿದುಕೊಂಡಿದ್ದನ್ನು ಇತರರಿಗೆ ತಿಳಿಸುವ ಪ್ರಯತ್ನ ಮಾಡಿದ. ಅದು ಅವನು ತನ್ನ ನೋವು ಮರೆತ ಸ್ಪಷ್ಟ ಗುರುತು ಆಗಿತ್ತು.

No comments:

Post a Comment