Sunday, March 3, 2024

ಸೋತಾಗ ಹಣೆ ಬರಹ, ಅರ್ಥವಾಗದಿದ್ದಾಗ ಕರ್ಮ

ನಿಮ್ಮ ಸ್ನೇಹಿತ ಬಲು ಪ್ರಯತ್ನಶಾಲಿ. ಅವನ ಪ್ರಯತ್ನಗಳನ್ನು ನೀವು ಮೆಚ್ಚುಗೆಯಿಂದಲೇ ಗಮನಿಸುತ್ತಿರುತ್ತೀರಿ. ಅವನು ಎಂತಹ ಸಮಸ್ಯೆಗಳೇ ಬರಲಿ, ಧೈರ್ಯದಿಂದಲೇ ಎದುರಿಸುತ್ತಿರುತ್ತಾನೆ. ಆದರೆ ಅವನಿಗೆ ವಿಜಯಮಾಲೆ ದೂರ. ಅವನು ಛಲ ಬಿಡದ ತ್ರಿವಿಕ್ರಮ. ಮತ್ತೆ ತನ್ನ ಪ್ರಯತ್ನಗಳನ್ನು ಮುಂದುವರೆಸುತ್ತಾನೆ. ಆದರೆ ನೋಡಿ. ಅದು ಏನು ಮಾಡಿದರೂ ಅವನು ಜಯಶಾಲಿ ಆಗುತ್ತಿಲ್ಲ. ಆಗ ನಮ್ಮ-ನಿಮ್ಮ ಬಾಯಿಂದ ಉದ್ಗಾರ ಹೊರಡುತ್ತದೆ. "ಹಣೆ ಬರಹದ ಮುಂದೆ ಯಾರೇನು  ಮಾಡುವುದಕ್ಕಾಗುತ್ತದೆ?"

ವಿಚಾರ ಮಾಡಿ ನೋಡಿದರೆ ಹಣೆ ಬರಹ ಅಂತ ಏನೂ ಇರುವುದಿಲ್ಲ. ಅದನ್ನೇ ಎಲ್ಲರು ನಂಬಿಕೊಂಡಿದ್ದರೆ, ಯಾರು ಪ್ರಯತ್ನವನ್ನೇ ಮಾಡುತ್ತಿದ್ದಿಲ್ಲ. ಆದರೆ ಪ್ರಯತ್ನ ಮಾಡಿದರೂ, ಅದಕ್ಕೆ ತಕ್ಕ ಪ್ರತಿಫಲ ದೊರಕದಿದ್ದರೆ 'ಹಣೆ ಬರಹ' ಎಂದು ಸುಮ್ಮನಾಗುತ್ತೇವೆ ಅಷ್ಟೇ.

ಇನ್ನೊಂದು ಉದಾಹರಣೆ ನೋಡಿ. ನಿಮ್ಮ ಮನೆಯಲ್ಲಿ ಒಬ್ಬ ಸೋಮಾರಿ. ಅವನಿಗೆ ದುಡಿಯುವುದು ಬೇಕಿಲ್ಲ. ಸಿಕ್ಕ ಅವಕಾಶಗಳನ್ನು ಉಪಯೋಗ ಮಾಡಿಕೊಳ್ಳುವುದಿಲ್ಲ. ಅವನಿಗೆ ಬುದ್ಧಿ ಹೇಳಲು ಮನೆಯವರು, ಸ್ನೇಹಿತರು, ಬಂಧುಗಳು ಎಲ್ಲ ಪ್ರಯತ್ನ ಮಾಡಿ ಸೋತು ಹೋಗುತ್ತಾರೆ. ಕೊನೆಗೆ ಎಲ್ಲರು ಹೇಳುವುದು ಒಂದೇ "ಅವನ ಹಣೆಬರಹಕ್ಕೆ ನಾವೇನು ಮಾಡುವುದುಕ್ಕಾಗುತ್ತದೆ?" 

ಕರ್ಮ ಅನ್ನುವುದು ಇದಕ್ಕಿಂತ ಸ್ವಲ್ಪ ಬೇರೆ (ತುಂಬಾ ಅಲ್ಲ). ಯಾರೋ ಒಬ್ಬರಿಗೆ ಹೆಚ್ಚು ಪ್ರಯತ್ನ ಇಲ್ಲದೆ ಯಶಸ್ಸು ದೊರಕಿದರೆ, ನಾವು ಅವನಿಗೆ ಅದೃಷ್ಟಶಾಲಿ ಎನ್ನುತ್ತೇವೆ. ಸ್ವಲ್ಪ ಜನ ಅದು ಅವರ ಸಂಸ್ಕಾರ, ಅವರ ಹಿಂದಿನ ಜನ್ಮದ ಪುಣ್ಯದ ಫಲ ಎಂದು ಕೂಡ ಹೇಳುತ್ತಾರೆ. ಅದೇ ಇನ್ನೊಬ್ಬರಿಗೆ ದಾರಿದ್ರ್ಯ ಕಾಡಿದರೆ ಅದು ಅವರು ಪಡೆದುಕೊಂಡು ಬಂದದ್ದು, ಅದು ಅವರ ಕರ್ಮ ಅನುಭವಿಸಲೇಬೇಕು ಎಂದು ಕೂಡ ಹೇಳುತ್ತೇವೆ. ಒಳ್ಳೆಯ ತಂದೆ-ತಾಯಿಗಳಿಗೆ ಕೆಟ್ಟ ಮಕ್ಕಳು, ಒಳ್ಳೆಯ ಗಂಡನಿಗೆ ಕಾಡುವ ಹೆಂಡತಿ ಅಥವಾ ಒಳ್ಳೆಯ ಹೆಂಡತಿಗೆ ದುಷ್ಟ ಗಂಡ ಇವೆಲ್ಲವುಗಳು ಅವರ ಪಾಪ-ಪುಣ್ಯದ ಫಲಗಳು, ಅದು ಅವರ ಕರ್ಮ ಎಂದು ಮಾತು ಮುಗಿಸುತ್ತೇವೆ. ಏಕೆಂದರೆ ಆ ನಂಟುಗಳು ನಮಗೆ ಅರ್ಥವಾಗದ್ದು.

ಈ ಕರ್ಮ ಎನ್ನುವುದು ನಿಜವಾಗಿ ಇದೆಯೋ ಇಲ್ಲವೋ ಯಾರಿಗೆ ಗೊತ್ತು? ಆದರೆ ಅರ್ಥವಾಗದ ವಿಷಯಗಳಿಗೆ ತುಂಬಾ ಹೆಚ್ಚಿಗೆ ತಲೆ ಕೆಡಿಸಿಕೊಳ್ಳುವುದಕ್ಕಿಂತ ಅದು ಕರ್ಮ ಎಂದು ಕೈ ತೊಳೆದುಕೊಳ್ಳುವುದು ವಾಸಿ ಅಲ್ಲವೇ? ಹಾಗೆ ಮಾಡುವುದರಿಂದ ಆ ಸಮಸ್ಯೆಯನ್ನು ಸ್ವಲ್ಪ ಸಮಯದ ಮಟ್ಟಿಗಾದರೂ ಪಕ್ಕಕ್ಕೆ ಇಟ್ಟು ಜೀವನ ಮುಂದುವರೆಸಲು ಆಗುತ್ತದೆ. ಅರ್ಥವಾಗದ ಸಮಸ್ಯೆಗಳಿಗೆ ಹಿಂದಿನ ಜನ್ಮವನ್ನು ಹೊಣೆಗಾರ ಮಾಡಿದರೆ ಈ ಜನ್ಮದಲ್ಲಿ ಸ್ವಲ್ಪವಾದರೂ ನೆಮ್ಮದಿ. ಅದು ನಮ್ಮನ್ನು ನಾವು ಸಮಾಧಾನ ಮಾಡಿಕೊಳ್ಳುವ ರೀತಿ. ಹಾಗೆ ಮಾಡದೆ ಹೋದರೆ ನಮ್ಮ ಮನಸ್ಸಿನ ಮೇಲೆ ಆಗುವ ಪರಿಣಾಮಗಳು ಅಧಿಕ. ಹಿಂದಿನ ಜನ್ಮದಲ್ಲಿ ನೀವು ಕೆಟ್ಟದು ಮಾಡಿದ್ದಕ್ಕೆ ಇಂದಿನ ಜನ್ಮದಲ್ಲಿ ನೀವು ಒಳ್ಳೆಯವರು ಆದರೂ ಕಷ್ಟ ಅನುಭವಿಸುತ್ತಿದ್ದೀರಿ ಎಂದು ನಿಮ್ಮ ಮೇಲೆ ನೀವೇ ಅನುಕಂಪ ತೋರಿಸಿದರೆ ನೀವು ನಾಲ್ಕು ದಿನ ಬಾಳಲು ಸಾಧ್ಯ. ಇಲ್ಲದೆ ಹೋದರೆ ನೀವು ಈ ಜನ್ಮದ ಕಷ್ಟಗಳನ್ನು ಎದುರಿಸಲು ಆಗದೆ ಸಾವಿಗೆ ಹತ್ತಿರವಾಗುತ್ತಾ ಹೋಗುತ್ತೀರಿ. ಇಲ್ಲವೇ ದ್ವೇಷ ಸಾಧಿಸುತ್ತ ಬದುಕಲ್ಲಿ ಇನ್ನು ಹೆಚ್ಚು ತೊಂದರೆಗಳನ್ನು ಆಹ್ವಾನಿಸುತ್ತ ಹೋಗುತ್ತೀರಿ.

ನಮ್ಮ ವೇದ-ಪುರಾಣಗಳಲ್ಲಿ ಮರು ಜನ್ಮಗಳ ವ್ಯಾಖ್ಯಾನಗಳಿವೆ. ಪಾಪ-ಪುಣ್ಯ-ಕರ್ಮಗಳ ಲೆಕ್ಕಗಳಿವೆ. ಮಹಾಭಾರತದ ಉಪಕಥೆಗಳನ್ನು ಗಮನಿಸಿ ನೋಡಿ. ಅಲ್ಲಿ ಅವನು ಹಿಂದಿನ ಜನ್ಮದಲ್ಲಿ ಹಾಗೆ ಮಾಡಿದ್ದಕೆ ಈ ಜನ್ಮದಲ್ಲಿ ಇದನ್ನು ಅನುಭವಿಸುತ್ತಿದ್ದಾನೆ ಎನ್ನುವ ವಿವರಣೆಗಳಿವೆ. ಇವುಗಳ ಪ್ರಭಾವ ನಮ್ಮ ಮೇಲೆ ಕೂಡ ಆಗಿ ನಾವು ಪಾಪ-ಕರ್ಮಗಳ ಉದಾಹರಣೆಗಳನ್ನು ಸುಲಭದಲ್ಲಿ ಒಪ್ಪಿಕೊಂಡುಬಿಡುತ್ತೇವೆ. ಅದು ನಮಗೆ ಯಾರೋ ಕೆಟ್ಟದು ಮಾಡಿದಾಗ ಕೂಡ ನಾವು ಅವರ ಮೇಲೆ ದ್ವೇಷ ಸಾಧಿಸಿ ಮತ್ತೆ ಕೆಟ್ಟದು ಮಾಡದಂತೆ ಕಾಯುತ್ತದೆ. 

'ಇದು ಕಲಿಗಾಲ. ಒಳ್ಳೆಯವರಿಗೆ ಕೆಟ್ಟದ್ದು ಆಗುತ್ತದೆ' ಎಂದೆಲ್ಲ ಮಾತನಾಡುತ್ತಾರೆ ಅಲ್ಲವೇ. ಇದು ಯಾವ ಕಾಲವೇ ಆಗಿರಲಿ. ನಮಗೆ ಕೆಟ್ಟದು ಆದಾಗಲೂ ನಾವು ಒಳ್ಳೆಯತನ ಕೈ ಬಿಡಬಾರದು ಎನ್ನುವ ಉದ್ದೇಶದಿಂದ ಮನುಷ್ಯ ಆ ಮಾತುಗಳನ್ನು ರೂಢಿಗೆ ತಂದ. ಹಾಗೆಯೆ "ಕೆಟ್ಟವರನ್ನು ದೇವರು ನೋಡಿಕೊಳ್ಳುತ್ತಾನೆ" ಎನ್ನುವ ಸಮಾಧಾನದ ಮಾತುಗಳು ನಾವು ಸಮಾಜದಲ್ಲಿ ಕೆಟ್ಟ ಹುಳುಗಳು ಆಗದಂತೆ ನಮ್ಮನ್ನು ಕಾಪಾಡಿದವು.

ಇನ್ನು ಮುಂದೆ ನೀವು ಎಲ್ಲಿಯಾದರೂ 'ಹಣೆ ಬರಹ' ಎನ್ನುವ ಪದ ಕೇಳಿದಾಗ ಅಲ್ಲಿ ಅವರು ಪ್ರಯತ್ನ ಮಾಡಿ ಸೋತಿದ್ದಾರೆ ಎನ್ನುವುದು ಅರ್ಥ ಮಾಡಿಕೊಳ್ಳಿ. ನೀವು ಅವರ ಪ್ರಯತ್ನಗಳಿಗೆ  ಅಭಿನಂದಿಸಿ. 

ಹಾಗೆಯೇ ಯಾರಾದರೂ 'ಕರ್ಮ' ಎಂದು ಹೇಳುತ್ತಿದ್ದರೆ ಅವರು ಕಷ್ಟಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ಬದುಕು ನಡೆಸುತ್ತಿದ್ದಾರೆ ಎಂದು ಅರ್ಥ ಮಾಡಿಕೊಳ್ಳಿ. ಅವರ ಜೀವನ ಪ್ರೀತಿ ಕೂಡ ಅಷ್ಟೇ ದೊಡ್ಡದು ಎನ್ನುವುದು ಮರೆಯಬೇಡಿ.

Saturday, February 24, 2024

ಯುಗಳ ಗೀತೆ ಹಾಡಿದರೆ ವಿಷಾದ ಗೀತೆ ಕೂಡ ಹಾಡಲೇ ಬೇಕು

ಅಮಾವಾಸ್ಯೆ ಕಳೆದು ೫-೬ ದಿನಗಳಷ್ಟೇ ಆಗಿತ್ತು. ರಾತ್ರಿ ಹೊತ್ತು ಸೆಖೆ ತಾಳದೆ ಹೊರಗೆ ಬಾಲ್ಕನಿಯಲ್ಲಿ ಬಂದು ಮಲಗಿದೆ. ಸಹಜವಾಗಿ ಕಣ್ಣು ಆಕಾಶದತ್ತ ನೋಡಿತು. ಆ ಕಡೆ ಪೂರ್ತಿ ಕತ್ತಲು ಇಲ್ಲ, ಈ ಕಡೆ ಶುಭ್ರ ಬೆಳದಿಂಗಳು ಕೂಡ ಅಲ್ಲ. ಕೆಂಪು ದೀಪ ಮಿಟುಕಿಸುತ್ತ ಹಾರುವ ವಿಮಾನಗಳು ಇದು ಬೆಂಗಳೂರಿನ ಆಕಾಶ ಎನ್ನುವ ಸಂಜ್ಞೆ ಬಿಟ್ಟರೆ ಬೇರೆ ಏನು ಗೋಚರಿಸುತ್ತಿರಲಿಲ್ಲ. ಅಲ್ಲಿ ಚಂದ್ರನಿಲ್ಲ ಎನ್ನುವ ಕೊರತೆ ಎದ್ದು ಕಾಣುತ್ತಿತ್ತು. 


ಕೇಳುತ್ತಿದ್ದ ೯೦ ರ ದಶಕದ ಹಿಂದಿ ಹಾಡುಗಳು ಕೂಡ ಅದೇ ಭಾವವನ್ನು ಹೊಮ್ಮಿಸುತಿದ್ದವು. 


ಮೊದಲಿಗೆ ಆಶಿಕಿ ಚಿತ್ರದ ಗೀತೆ:


'ಚಾಂದ ಕಿ ಜರೂರತ್ ಹೈ ಜೈಸೇ ಚಾಂದನಿ ಕೆ ಲಿಯೇ, 

ಬಸ್ ಏಕ್ ಸನಮ್ ಚಾಹಿಯೇ ಆಶಿಕಿ ಕೆ ಲಿಯೇ'


ಹೌದಲ್ಲವೇ? ಚಂದ್ರನಿಲ್ಲದೆ ಬೆಳೆದಿಂಗಳೆಲ್ಲಿ? ಪ್ರೇಯಸಿ ಇರದೇ ಪ್ರೀತಿ ಎಲ್ಲಿ?


ನಂತರ ಇನ್ನೊಂದು ಗೀತೆ 'ಹಮ್ ಹೈ ರಾಹಿ ಪ್ಯಾರ್ ಕೆ' ಚಿತ್ರದ್ದು 


'ಜಬ್ ತಕ್ ನ ಪಡೆ ಆಶಿಕಿ ಕಿ ನಜರ್,

ಸಿಂಗಾರ್ ಅಧೂರಾ ರೆಹತಾ ಹೈ'


ಇದೂನು ಸರಿಯೇ. ಮೆಚ್ಚುವವರು ಇರದೇ ಹೋದರೆ ಸಿಂಗಾರಕ್ಕೆ ಯಾವ ಬೆಲೆ?


ಆಕಾಶಕ್ಕೂ ಒಂದು ಅಪೂರ್ಣತೆ ಇದೆ. ಅಲ್ಲಿ ಚಂದ್ರನಿದ್ದರೆ ಕಳೆ. ಇಲ್ಲದಿದ್ದರೆ ಅಲ್ಲಿ ಯಾವ ಆಕರ್ಷಣೆಯೂ ಇಲ್ಲ. ಅದು ಬರಿ ಕಗ್ಗತ್ತಲು.


ಹಗಲು ಹೊತ್ತಿನಲ್ಲಿ ಉರಿಯುವ ಸೂರ್ಯ ನಮಗೆ ಬೆವರಿಳಿಸಿ ಕಂಗಾಲು ಮಾಡಿ ಬಿಡುತ್ತಾನೆ. ಅದೇ ಸೂರ್ಯನ ಬೆಳಕು ಚಂದ್ರನ ಮೇಲೆ ಬಿದ್ದು ಪ್ರತಿಫಲಗೊಂಡು ಆ ಬೆಳಕು ಉಷ್ಣತೆ ಕಳೆದುಕೊಂಡು ಬೆಳದಿಂಗಳಾಗಿ ರಾತ್ರಿಯಲ್ಲಿ ಆಹ್ಲಾದತೆ ತಂದು ಕೊಡುತ್ತದೆ. ಸಮುದ್ರವನ್ನು ಉಕ್ಕೇರಿಸತ್ತದೆ. ಪ್ರೇಮಿಗಳಿಗೆ ಮತ್ತೇರಿಸುತ್ತದೆ. ಕವಿಗಳಿಗೆ ಉತ್ತೇಜನ ನೀಡುತ್ತದೆ. ದಣಿದ ಜೀವಗಳಿಗೆ ತಂಪೆರುಯುತ್ತದೆ. ಆದರೆ ಆ ಸಂತೋಷ ನಿಮಗೆ ಪ್ರತಿ ದಿನ ಇಲ್ಲ.


ಇದು ಗಾಲಿ ತಿರುಗಿದ ಹಾಗೆ ಅಲ್ಲವೇ? ಹುಣ್ಣಿಮೆ ನಂತರ ನಿಮಗೆ ಬೇಕೋ ಬೇಡವೋ ಅಮಾವಾಸ್ಯೆಯ ಕತ್ತಲು ಅನಿಭವಿಸಿದ ಮೇಲೆಯೇ ಇನ್ನೊಮ್ಮೆ ಹುಣ್ಣಿಮೆ. ನಿಮಗೆ ಹುಣ್ಣಿಮೆಯ ಸಂತೋಷ ಬೇಕೆಂದರೆ ಅಮಾವಾಸ್ಯೆ ಹುಟ್ಟಿಸುವ ದಿಗಿಲು ಕೂಡ ಅನುಭವಿಸಬೇಕು. ಯುಗಳ ಗೀತೆ ಹಾಡಿದರೆ ವಿಷಾದ ಗೀತೆ ಕೂಡ ಹಾಡಲೇ ಬೇಕು. ಸರಸ-ವಿರಸವೆಂಬ ಹುಣ್ಣಿಮೆ-ಅಮಾವಾಸ್ಯೆಗಳು ಎಲ್ಲರ ಬಾಳಿನಲ್ಲಿ ಉಂಟು. ಅದು ಪ್ರಕೃತಿ ನಿಯಮ.


ನೀವು ಪ್ರಕೃತಿಯನ್ನು ಮೀರಿಸುವ ಸನ್ಯಾಸಿಯಾದರೆ ನಿಮಗೆ ಹುಣ್ಣಿಮೆ ಸಂತೋಷ ತರದು ಹಾಗೆಯೇ ಅಮಾವಾಸ್ಯೆಯ ಕತ್ತಲು ಭೀತಿಗೊಳಿಸದು. ಆದರೆ ಉಳಿದ ಭಾವನಾತ್ಮಕ ಮನುಜರಿಗೆ ಹುಣ್ಣಿಮೆಯ-ಅಮಾವಾಸ್ಯೆಗಳ ಚಕ್ರಗಳಿಂದ ಹೊರ ಬರಲು ಆಗದು. ಹುಣ್ಣಿಮೆ ಇರುವಷ್ಟು ಹೊತ್ತು ಆನಂದಿಸಿ. ಅದು ಕ್ಷೀಣಿಸಿದಾಗ ಸಂತೋಷದಿಂದಲೇ ಬೀಳ್ಕೊಡಿ. ಏಕೆಂದರೆ ಇನ್ನೊಂದು ಹುಣ್ಣಿಮೆ ಬಂದೆ ಬರುತ್ತದೆ.

ಹೊಸ ತೇರು, ಹಳೆ ಜಾತ್ರೆ, ಸಮಾಯಾತೀತ ಶ್ರೀ ಮಲ್ಲಿಕಾರ್ಜುನ


ನಮ್ಮೂರಿನಲ್ಲಿ ಇಂದು ಭರತ ಹುಣ್ಣಿಮೆಯ ದಿನದಂದು ಶ್ರೀ ಮಲ್ಲಿಕಾರ್ಜುನನ ಜಾತ್ರೆ. ಇಲ್ಲಿ ಜಾತ್ರೆಯ ದಿನದಂದು ಎಳೆಯುವ ತೇರು ಎಷ್ಟು ವರುಷ ಹಳೆಯದು, ಯಾರು ಮಾಡಿಸಿದ್ದು ಎಂದು ಈ ಊರಿನಲ್ಲಿರುವ ೮೦-೯೦ ವರುಷದ ವೃದ್ಧರಿಗೂ ತಿಳಿದಿಲ್ಲ. ಅವರಿಗೆ ಜಾತ್ರೆಯ ದಿನದಂದು ತೇರು ಎಳೆದದ್ದು ಅಷ್ಟೇ ನೆನಪು. ತೇರಿನ ಹಳೆಯ ಭಾಗಗಳು (ಕಟ್ಟಿಗೆಯಿಂದ ಮಾಡಿದ್ದು) ಗಮನಿಸಿ ನೋಡಿದಾಗ ಇದು ೧೨೦ ರಿಂದ ೧೫೦ ವರುಷ ಹಳೆಯದು ಎಂದು ಅಂದಾಜು ಮಾಡಬಹುದು. ಗಟ್ಟಿ-ಮುಟ್ಟ್ಯಾಗಿರುವ ಜನ ತುಂಬಾ ಭಾರವೆನಿಸುವ ಹಗ್ಗ ಹಿಡಿದು ತೇರು ಎಳೆದರೆ, ಉಳಿದೆಲ್ಲ ಭಕ್ತರಿಗೆ ತೇರಿನ ಕಳಸಕ್ಕೆ ಬಾಳೆ ಹಣ್ಣು ಎಸೆಯುವ ಸಂಭ್ರಮ. ತೇರು ತನ್ನ ಮನೆಗೆ ಮರಳಿದ ನಂತರ ಸಂಜೆ ಹೊತ್ತಿಗೆ ಜಾತ್ರೆ ಶುರು. ಇದು ಸಾವಿರಾರು ವರುಷಗಳಿಂದ ಇಲ್ಲಿ ನೆಲೆಗೊಂಡಿರುವ ಶ್ರೀ ಮಲ್ಲಿಕಾರ್ಜುನನ ಜಾತ್ರೆ.

ನೂರಾರು ವರುಷಗಳ ಹಳೆಯ ಸಂಪ್ರದಾಯ ಎನಿಸುವ ಪೂಜೆಗಳು ಬೆಳಿಗ್ಗೆ ಹೊತ್ತಿಗೆಲ್ಲ ಶುರು. ಹೆಚ್ಚು ಕಡಿಮೆ ಊರಿನ ಜನ ಎಲ್ಲ ಶ್ರೀ ಮಲ್ಲಿಕಾರ್ಜುನ ದರ್ಶನ ಪಡೆಯುವಷ್ಟರಲ್ಲಿ ಸುತ್ತ ಹತ್ತಾರು ಹಳ್ಳಿಗಳಿಂದ ಜನರ ಆಗಮನ, ಡೊಳ್ಳು ಬಾರಿಸುತ್ತ ಬರುವ ಕುರುಬರು ವಿಶೇಷ ಗಮನ ಸೆಳೆಯುತ್ತಾರೆ. ಸಣ್ಣ ಮಕ್ಕಳ ಕೈಯಲ್ಲಿ ಬಣ್ಣದ ಬಲೂನುಗಳು, ಹೆಂಗಳೆಯರ ಮುಖದಲ್ಲಿ ಭಕ್ರಿ ಭಾವ, ಗಂಡಸರ ಮುಖದಲ್ಲಿ ತೇರು ಎಳೆಯುವ ಉತ್ಸಾಹ. ಇದು ಪ್ರತಿ ವರುಷ ಜಾತ್ರೆಯ ದಿನ ಕಾಣ ಸಿಗುವ ನೋಟ.

ಶ್ರೀ ಮಲ್ಲಿಕಾರ್ಜುನ ಕಾಲಾತೀತ. ಆತನಿಗೆ ಹಳೆ ಪೀಳಿಗೆಯ ಭಕ್ತರು ಮಣ್ಣು ಸೇರಿದರೆ  ಹೊಸ ಪೀಳಿಗೆಯ ಭಕ್ತರು ಮಲ್ಲಿಕಾರ್ಜುನ ಜಾತ್ರೆ ನಡೆಸಿಕೊಂಡು ಹೋಗುತ್ತಾರೆ. ಸುಮಾರು ೫-೬ ಪೀಳಿಗೆಯ ಜನ ಎಳೆದ ತೇರು ಕೆಲವು ವರುಷಗಳಿಂದ ತೊಂದರೆ ಕೊಡುತ್ತಲಿತ್ತು. ಹೊಸ ಗಾಲಿಗಳು ಬಂದರು ತೊಂದರೆ ತಪ್ಪಲಿಲ್ಲ. ದಾರಿ ಬಿಟ್ಟು ಬರುವ ತೇರು, ಸಿಕ್ಕಿ ಹಾಕಿಕೊಂಡ ಜಾಗದಿಂದ ಮಿಸುಗಾಡದ ತೇರು, ತುಂಡಾಗುವ ಹಗ್ಗ ಹೀಗೆ ಹಲವು ತೊಂದರೆಗಳಿಂದ ತೇರನ್ನು ಒಂದೇ ದಿನದಲ್ಲಿ ಆದರೆ ಮನೆಗೆ ಸೇರಿಸಲು ಆಗುತ್ತಿರಲಿಲ್ಲ. ದೈವ ಕೃಪೆಯೋ, ಭಕ್ತರ ಕಾಳಜಿಯೋ ಒಟ್ಟಿನಲ್ಲಿ ಈ ವರುಷ ಹೊಸ ತೇರು ಬಂದಾಗಿದೆ. 

ಹಳೆಯ ತೇರನ್ನು ಕೊನೆಯ ಬಾರಿಗೆ ಎಳೆದು, ಹೊಸ ತೇರನ್ನು ಮಲ್ಲಿಕಾರ್ಜುನನ ಸೇವೆಗೆ ಬಿಡುವ ಜಾತ್ರೆ ಇಂದು. ಎರಡು ತೇರುಗಳನ್ನು ಒಟ್ಟಿಗೆ ನೋಡಿದ ಆನಂದ ಈ ದಿನ ನನ್ನದು. ಅಷ್ಟೇ ಅಲ್ಲ, ನಿಮಗೂ ಅದನ್ನು ತೋರಿಸುವ ಆಸೆ. ಒಮ್ಮೆ ವಿಡಿಯೋ ನೋಡಿ.


Sunday, January 28, 2024

One Sunday Morning

Distance covered: 75 km in 3 hours

Places: Manchanabele, Savanadurga


Tippagondanahalli Reservoir

Anjaneya waiting for his mask to be removed

Savana Durga 





Let's go!

Manchanabele Reservoir 

Savana Durga 

Thursday, January 4, 2024

ಆಶಾವಾದಿಯ ಕನಸುಗಳು ಮತ್ತು ನಿರಾಶಾವಾದಿಯ ಹತಾಶೆಗಳು

ಯಾವುದೇ ರಾಜಕಾರಣಿಯ ಭಾಷಣ ಕೇಳಿ ನೋಡಿ. ಅವರು ನಿಮಗೆ ಭವಿಷ್ಯದ ಕನಸು ಕಟ್ಟಿ ಕೊಡುತ್ತಾರೆ. ನಿಮ್ಮ ಚಿಕ್ಕ ಮಕ್ಕಳು ಸ್ವಲ್ಪ ಜಾಣತನ ತೋರಿದರು ಸಾಕು. ಮುಂದೆ ಅವರು ದೊಡ್ಡ ಮನುಷ್ಯರಾಗುವ ಕನಸು ನೀವೇ ಕಾಣತೊಡಗುತ್ತೀರಿ. ಭರವಸೆ ಹುಟ್ಟಿಸುವ ಯಾವುದೇ ಕೆಲಸಗಾರನ ಭವಿಷ್ಯದ ಅಂದಾಜು ಎಲ್ಲರಿಗೂ ಮನವರಿಕೆ ಆಗಿರುತ್ತದೆ. ಮನುಷ್ಯ ಎಂತಹ ಸೋಮಾರಿಯೇ ಆಗಿರಲಿ ಅವನು ಕನಸು ಕಾಣದೆ ಇರಲಾರ. ಅದು ಆಶಾವಾದಿಯ ಜಗತ್ತು.


ಒಂದು ಕಾಲದಲ್ಲಿ ಕನಸು ಕಂಡು ಆದರೆ ಕೈ ಸುಟ್ಟುಕೊಂಡು ನಿರಾಶಾವಾದಿಯಾಗಿ ಬದಲಾಗಿರುತ್ತಾರಲ್ಲ. ಅವರಿಗೆ ಯಾವುದರಲ್ಲೂ ಭರವಸೆ ಇರುವುದಿಲ್ಲ. ಅವರದ್ದು ಬರೀ ಹತಾಶೆಯ ಮಾತುಗಳು. ನಮ್ಮ ದೇಶ ಬದಲಾಗೋದಿಲ್ಲ ಬಿಡಿ ಅನ್ನುತ್ತಾ ಇರುತ್ತಾರೆ. ಭಾರತದ ಉಪಗ್ರಹ ಚಂದ್ರನ ಮೇಲೆ ಇಳಿದದ್ದು ಅವರಿಗೆ ಸಾಧನೆ ಎನಿಸುವುದಿಲ್ಲ.ಸಂತೆ ವ್ಯಾಪಾರಕ್ಕೆ ಸ್ಮಾರ್ಟ್ ಫೋನ್ ಬಳಕೆಯಾಗುವುದು ಅವರಿಗೆ ಪ್ರಗತಿ ಎನಿಸುವುದಿಲ್ಲ. 'ಏನೇ ಆಗಲಿ ನಮ್ಮ ದೇಶದ ಕಥೆ ಇಷ್ಟೇ ಬಿಡಿ' ಎಂದೇ ಅವರು ಹೇಳುವುದು. ದೇಶದ ಕಥೆ ಹೇಗೆಯೇ ಇರಲಿ ನಿರಾಶಾವಾದಿಗಳ ಕಥೆ ಮಾತ್ರ ಅಲ್ಲಿಯೇ ಉಳಿದಿರುತ್ತದೆ.


ವಿಚಾರ ಮಾಡಿ ನೋಡಿ. ಒಂದು ವಯಸ್ಸಿನವರೆಗೆ (ಸುಮಾರು ೧೬-೧೮ ವರುಷದವರೆಗೆ)  ಮನುಷ್ಯ ಆಶಾವಾದಿಯಾಗಿದ್ದರೆ ತೊಂದರೆ ಏನಿಲ್ಲ. ಆದರೆ ಮುಂದೆಯೂ ಅವನು ವಿಪರೀತ ಕನಸುಗಾರನಾದರೆ, ಅವನಿಗೆ ಜೀವನ ಪೆಟ್ಟು ಕೊಡದೆ ಬಿಡುವುದಿಲ್ಲ. ನಿರಾಶಾವಾದಿಗಳ ಎಚ್ಚರಿಕೆ ಸ್ವಭಾವ ಅವರನ್ನು ಮತ್ತೆ ಎಡವದಂತೆ ಕಾಯುತ್ತದೆ. ಆದರೆ ಸಂಪೂರ್ಣ ಆಶಾವಾದಿಗಳು ಅಪಾಯಗಳನ್ನು ನಿರ್ಲಕ್ಷಿಸುವ ಸ್ವಭಾವ ಹೊಂದಿರುತ್ತಾರೆ. ಅದೇ ಅವರಿಗೆ ಮುಳುವಾಗುತ್ತದೆ. ಮುಂದೆ ನಾವು ದೊಡ್ಡ ಮನುಷ್ಯರಾಗಬೇಕು ನಿಜ ಆದರೆ ಇಂದಿಗೆ ನಾವು ಎಚ್ಚರಿಕೆಯಿಂದ ಕೂಡ ಇರಬೇಕಾದದ್ದು ಅವಶ್ಯಕ ಅಲ್ಲವೇ?


ಸಂಪೂರ್ಣ ಆಶಾವಾದಿಯಾಗದೆ ಅಥವಾ ನಿರಾಶಾವಾದಿಯಾಗದೆ, ಎರಡರ ನಡುವಿನ ವಾಸ್ತವವಾದಿಯಾಗಿ ನೋಡಿ. ಅವನಿಗೆ ಜಗತ್ತು ಹೇಗೆ ಇದೆಯೋ ಹಾಗೆ ನೋಡಲು ಸಾಧ್ಯವಾಗುತ್ತದೆ. ಅವನಿಗೆ ಆಶಾವಾದಿಗೆ ಕಾಣುವ ಅವಕಾಶಗಳು ಮತ್ತು ನಿರಾಶಾವಾದಿಗೆ  ಕಾಣುವ ಅಪಾಯಗಳು ಎರಡು ಗೋಚರಿಸುತ್ತವೆ. ಅವನು ಸಮತೋಲನದಿಂದ, ಸಮಚಿತ್ತದಿಂದ ವರ್ತಿಸುತ್ತಾನೆ. ಅಪಾಯ ಗೊತ್ತಿರದ ಆಶಾವಾದಿ ಮತ್ತು ಪ್ರಯತ್ನ ನಿಲ್ಲಿಸಿರುವ ನಿರಾಶಾವಾದಿಗಿಂತ ಹೆಚ್ಚಿನ ಸಾಧನೆ ವಾಸ್ತವವಾದಿಯದ್ದಾಗಿರುತ್ತದೆ.


ಜಗತ್ತನ್ನೇ ಗೆಲ್ಲ ಹೋರಾಟ ಮಹತ್ವಕಾಂಕ್ಷಿಗಳು ಆಶಾವಾದಿಗಳಾಗಿದ್ದರು. ಅಪಾಯಗಳು ಅವರು ಮೈ ಮರೆತ ಕ್ಷಣಗಳಲ್ಲಿ ಅವರನ್ನು ಸಣ್ಣ ಯುದ್ಧಗಳಲ್ಲಿ ಅಳಿಸಿ ಹಾಕಿದವು. ನೆಪೋಲಿಯನ್ ವಾಟರ್ಲೂ ಕಾಳಗದಲ್ಲಿ ಸೋತ ಹಾಗೆ. ಬಲಿಷ್ಠ ವಿಜಯನಗರ ಸಾಮ್ರಾಜ್ಯವನ್ನು ಐದು ಸಣ್ಣ ರಾಜ್ಯಗಳು ಒಟ್ಟಿಗೆ ಸೇರಿ ಸೋಲಿಸಿದ ಹಾಗೆ. ಹಾಗೆಯೆ ನಿರಾಶಾವಾದಿಗಳು ಯಾವ ಚರಿತ್ರೆಯ ಪುಟಗಳಲ್ಲಿ ಕಾಣ ಸಿಗುವುದಿಲ್ಲ. ಏಕೆಂದರೆ ಅವರು ಸಾಧಿಸುವ ಕೆಲಸಗಳಿಗೆ ಕೈ ಹಾಕಲೇ ಇಲ್ಲ.


ವಾಸ್ತವವಾದಿಗಳ ಉದಾಹರಣೆ ಕೊಡಿ ಎಂದು ಕೇಳಲೇಬೇಡಿ. ಅವರು ಎಲ್ಲೆಲ್ಲೂ ಇದ್ದಾರೆ. ಉದಾಹರಣೆಗೆ ನಿಮ್ಮ ಬ್ಯಾಂಕ್ ಮ್ಯಾನೇಜರ್. ಅವನು ಸಾಲ ಕೊಡುವ ಮುನ್ನ ನಿಮ್ಮ ಸಾಲ ವಾಪಸ್ಸು ಕೊಡುವ ತಾಕತ್ತು ಅಳೆಯುತ್ತಾನೆ. ಅವನು ನಿಮ್ಮ ಕನಸುಗಳಿಗಿಂತ ವಾಸ್ತವಕ್ಕೆ ಬೆಲೆ ಕೊಡುತ್ತಾನೆ. ನವ ಭಾರತ ಕಟ್ಟಿದ ಗಾಂಧಿ-ನೆಹರು-ಪಟೇಲ್ ವಾಸ್ತವವಾದಿಗಳಾಗಿದ್ದರು. ಅವರು ಭಾರತಕ್ಕೆ ಸ್ವತಂತ್ರ ತರುವ ಜೊತೆಗೆ ಭಾರತದಲ್ಲಿ ಪ್ರಜಾಪ್ರಭುತ್ವ ನೆಲೆಯೂರುವಂತೆ ನೋಡಿಕೊಂಡರು. ಬಹುಕಾಲ ಬಾಳಿದ ಯಾವುದೇ ಸಂಘ-ಸಂಸ್ಥೆ, ಇಲ್ಲವೇ ದೇಶಗಳನ್ನೇ ಗಮನಿಸಿ ನೋಡಿ. ಅವುಗಳನ್ನು ವಾಸ್ತವವಾದಿಗಳೇ ಕಟ್ಟಿರುತ್ತಾರೆ. ಯುದ್ಧ ಮಾಡಿ ನಿರಾಶನಾದ ಸಾಮ್ರಾಟ್ ಅಶೋಕ, ಸಮಾಜ ಪ್ರಗತಿಗೆ ಪ್ರಯತ್ನ ಮಾಡುವ ಆಶಾವಾದಿಯೂ ಆಗಿದ್ದ. ಎಲ್ಲವನ್ನು ಹಿಂದೆ ಬಿಟ್ಟು ನಡೆದ ಬುದ್ಧ, ಶಾಂತಿ ಸಂದೇಶ ಸಾರುವ ಆಶಾವಾದಿಯೂ ಆಗಿದ್ದ. ಅದರ ಫಲ ಎಷ್ಟು ಜನ ಪಡೆದುಕೊಂಡರು ಎಂದು ವಿಚಾರ ಮಾಡದೆ ಇರುವ ನಿರಾಶಾವಾದಿಯೂ ಆಗಿದ್ದ.


ಆಶಾವಾದಿಗಳ ಪ್ರಯತ್ನ, ನಿರಾಶಾವಾದಿಗಳ ಎಚ್ಚರಿಕೆ ಈ ಎರಡರ ಸಮ್ಮಿಶ್ರಣ ಬದುಕನ್ನು ಸುಲಭವಾಗಿಸುತ್ತದೆ. ಅವುಗಳು ವಾಹನದಲ್ಲಿ ಆಕ್ಸಿಲರೇಟರ್ ಮತ್ತು ಬ್ರೆಕ್ ಎರಡರನ್ನು ಅಗತ್ಯಕ್ಕೆ ತಕ್ಕಂತೆ ಉಪಯೋಗ ಮಾಡಿಕೊಂಡು ಮುಂದೆ ಸಾಗಿದ ಹಾಗೆ. ಕನಸುಗಳ ಜೊತೆಗೆ ಅಪಾಯಗಳನ್ನು ಸರಿದೂಗಿಸಿಕೊಂಡು ಹೋಗುವ ವಾಸ್ತವವಾದಿಗಳು ನಾವಾಗಬೇಕಲ್ಲವೇ? ನೀವು ಏನಂತೀರಿ?