Sunday, March 14, 2021

ಯಶಸ್ಸಿನ ತುದಿಯಲ್ಲಿ ಎಲ್ಲರೂ ಒಬ್ಬಂಟಿಗರೇ

ನಮ್ಮ ಶಾಲಾ ದಿನಗಳಲ್ಲಿ ನಮಗೆ ನೂರಾರು ಜನ ಸ್ನೇಹಿತರಿದ್ದರಿಲ್ಲ. ಆದರೆ ಇಂದಿಗೆ ಅವರಲ್ಲಿ ಕೆಲವರು ಮಾತ್ರ ಸಂಪರ್ಕದಲ್ಲಿ ಉಳಿದು, ಉಳಿದವರೆಲ್ಲ ಕಳೆದು ಹೋಗಲಿಲ್ಲವೇ? ನಾವು ಚಿಕ್ಕವರಿದ್ದಾಗ 'ಅದು ಸರಿ, ಇದು ತಪ್ಪು' ಅಥವಾ 'ಅವರು ಒಳ್ಳೆಯವರು, ಇವರು ಕೆಟ್ಟವರು' ಎನ್ನುವ ಭಾವ ಬಲವಾಗಿ ಇರಲಿಲ್ಲ. ಹಾಗಾಗಿ ಊರಿನ ಜನರೆಲ್ಲಾ ಹತ್ತಿರದವರು ಎನಿಸುತ್ತಿದ್ದರು. ಮುಂದೆ ಕಹಿ ಸತ್ಯಗಳ ಅರಿವಾದಂತೆ ನಮ್ಮ ಆತ್ಮೀಯರ ಸಂಖ್ಯೆ ಕ್ಷೀಣಿಸುತ್ತಾ ಹೋಯಿತು. ನೂರಾರು ತೋರಿಕೆಯ ಸ್ನೇಹಿತರ ಬದಲು, ಹತ್ತಾರು ನಿಜ ಸ್ನೇಹಿತರಿದ್ದರೆ ಸಾಕು ಎನಿಸುವಂತೆ ಆಯಿತು. ನಮಗೇ ಇಂತಹ ಅನುಭವಗಳು ಆಗಬೇಕಾದರೆ ಯಶಸ್ಸಿನ ಮೆಟ್ಟಿಲನ್ನು ಏರಿದ ಮಹಾನುಭಾವರ ಜೀವನ ಇನ್ನೂ ಒಬ್ಬಂಟಿ ತನದಿಂದ ಕೂಡಿರುತ್ತದೆ ಎನ್ನುವುದು ಪಿ.ವಿ.ನರಸಿಂಹ ರಾವ್ ರವರ ಜೀವನಗಾಥೆಯನ್ನು (Book: Half Lion by Vinay Sitapati) ಓದಿದಾಗ ಅರಿವಾಯಿತು.


ಆಂಧ್ರ ಪ್ರದೇಶದ ಹಳ್ಳಿಯೊಂದರಲ್ಲಿ ಹುಟ್ಟಿ, ಕುಟುಂಬದ  ಆಸ್ತಿಯನ್ನು ಉಳಿಸಿಕೊಳ್ಳಲು ರಾಜಕಾರಣಕ್ಕೆ ಬಂದು, ಹಳ್ಳಿ, ತಾಲೂಕು, ಜಿಲ್ಲಾ ಮಟ್ಟದ ರಾಜಕಾರಣದಿಂದ ರಾಜ್ಯ ಮಟ್ಟದ ರಾಜಕಾರಣಕ್ಕೆ ಏರಿ ನಂತರ ದೆಹಲಿಯ ಗದ್ದುಗೆ ಏರಿದವರು ಪಿ.ವಿ.ನರಸಿಂಹ ರಾವ್. ಒಂದೂರಿಂದ ಇನ್ನೊಂದೂರಿಗೆ, ಸಣ್ಣ ಸಮಸ್ಯೆಗಳಿಂದ ದೊಡ್ಡ ಸಮಸ್ಯೆಗಳಿಗೆ ದಾಪುಗಾಲಿಟ್ಟವರು ಅವರು. ಇಂದಿರಾ ಗಾಂಧಿಯವರಿಗೆ ಹತ್ತಿರದವರಾಗಿ, ಹಲವು ಹುದ್ದೆಗಳನ್ನು ನಿಭಾಯಿಸಿದ ಅವರು ರಾಜೀವ್ ರಿಂದ ಕಡೆಗಣಿಸಲ್ಪಟ್ಟರು. ರಾಜೀವರ ಮರಣಾ ನಂತರ ಒಲಿದು ಬಂದ ಪ್ರಧಾನಿ ಪಟ್ಟವನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿ, ಭಾರತದ ಆರ್ಥಿಕ ವ್ಯವಸ್ಥೆಯನ್ನು ಬದಲಾಯಿಸಿದ ಹೆಗ್ಗಳಿಕೆ ಅವರದ್ದು. ಆದರೆ ಅವರ ವೈಯಕ್ತಿಕ ಜೀವನದಲ್ಲಿ ಅವರನ್ನು ಒಬ್ಬಂಟಿತನ ಕಾಡದೆ ಇರಲಿಲ್ಲ. ಯಶಸ್ಸು, ಅಧಿಕಾರ ತಂದೊಡ್ಡುವ ಹಲವಾರು ಧರ್ಮ ಸಂಕಟಗಳು ನೂರಾರು ಜನರು ಸುತ್ತಲಿದ್ದರೂ, ಒಬ್ಬಂಟಿತನ ಕಾಡುವಂತೆ ಮಾಡಿಬಿಡುತ್ತವೆ. ಪ್ರಧಾನಿ ಪಟ್ಟದ ಮುಂಚೆ, ಅಧಿಕಾರದ ನಡುವೆ ಮತ್ತು ನಂತರ ಪಿ.ವಿ.ನರಸಿಂಹ ರಾವ್ ರವರು ಕಳೆದ ಹಲವಾರು ಒಬ್ಬಂಟಿ ಸಂಜೆ, ರಾತ್ರಿಗಳನ್ನು ದಾಖಲಿಸುತ್ತದೆ ಈ ಪುಸ್ತಕ.


ಯಶಸ್ಸಿನ ತುದಿಯಲ್ಲಿ ನಿಮಗೆ ನಿಮ್ಮನ್ನು ಸಮರ್ಥಿಸಿಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಹಾಗೆಯೇ ಪ್ರಾಮಾಣಿಕವಾಗಿ ಅಭಿಪ್ರಾಯ ಹಂಚಿಕೊಳ್ಳಲು ಗೆಳೆಯರೂ ಉಳಿದಿರುವುದಿಲ್ಲ.




No comments:

Post a Comment