Saturday, October 2, 2021

ಗೀತೆಯ ಹಿಂದಿನ ಸಾಹಿತಿ: ಕಣಗಾಲ್ ಪ್ರಭಾಕರ ಶಾಸ್ತ್ರಿ

ಹಳೆಯ ಹಾಡುಗಳು ಮಧುರ ಮತ್ತು ಅರ್ಥಪೂರ್ಣ ಇದ್ದವಲ್ಲವೇ? ಅದರ ಹಿಂದಿನ ಕಾರಣ ಗೀತೆ ರಚನೆಕಾರರಿಗಿದ್ದ ಆಳವಾದ ಜೀವನ ಅನುಭವ, ಕನ್ನಡ ಭಾಷೆಯ ಮೇಲಿನ ಪ್ರೀತಿ ಮತ್ತು ಗೀತೆಯ ಸವಿಯನ್ನು ಪ್ರೇಕ್ಷಕರಿಗೆ ಸರಳ ಪದಗಳಲ್ಲಿ, ಪ್ರಾಸಬದ್ಧವಾಗಿ ಮುಟ್ಟಿಸುವ ಕಲೆ. ೬೦ ಮತ್ತು ೭೦ ರ ದಶಕದಲ್ಲಿ ತೆರೆ ಕಂಡ ಚಿತ್ರಗಳಲ್ಲಿ ಸಾಕಷ್ಟು ಚಿತ್ರಗಳಿಗೆ ಸಂಭಾಷಣೆ ಮತ್ತು ಗೀತೆಗಳನ್ನು ಬರೆದವರು ಕಣಗಾಲ್ ಪ್ರಭಾಕರ ಶಾಸ್ತ್ರಿ. ಇವರು ಹೆಸರಾಂತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಅಣ್ಣ. ಕಡು ಬಡತನದ ಕುಟುಂಬದಲ್ಲಿ ಬೆಳೆದ ಇವರು, ತಾತನ ತೊಡೆಯ ಮೇಲೆ ಕುಳಿತು ಕೇಳಿದ ಕಥೆಗಳು ಇವರಲ್ಲಿ ಸಾಹಿತ್ಯನ್ನು ಹುಟ್ಟು ಹಾಕಿದವು. ಹೊಟ್ಟೆ ಪಾಡಿಗಾಗಿ ಚಿಕ್ಕ ವಯಸ್ಸಿನಲ್ಲೇ ನಾಟಕ ಕಂಪನಿ ಸೇರಿದ ಇವರು ಸರಸ್ವತಿಯನ್ನು ಒಲಿಸಿಕೊಂಡು, ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.


೧೯೫೮ ರಲ್ಲಿ ತೆರೆ ಕಂಡ 'ಸ್ಕೂಲ್ ಮಾಸ್ಟರ್' ಎನ್ನುವ ಚಿತ್ರಕ್ಕೆ ಇವರು ಬರೆದ ಗೀತೆ 'ಅತಿ ಮಧುರ ಅನುರಾಗ' ಜನಪ್ರಿಯವಾಯಿತು. ೧೯೬೩ ರಲ್ಲಿ ತೆರೆ ಕಂಡ ರಾಜಕುಮಾರ್ ಅಭಿನಯದ 'ಕುಲ ವಧು' ಚಿತ್ರದ 'ಒಲವಿನ ಪ್ರಿಯಲತೆ' ಹಾಡು ಗಮನ ಸೆಳೆಯಿತು. ೧೯೭೦ ರಲ್ಲಿ ಬಂದ 'ನನ್ನ ತಮ್ಮ' ಚಿತ್ರದ 'ಇದೆ ಹೊಸ ಹಾಡು, ಹೃದಯಸಾಕ್ಷಿ ಹಾಡು, ಎದೆಯಾಸೆ ಭಾಷೆ ಈ ಹಾಡು' ಎನ್ನುವ ಗೀತೆ ಇವರ ಅಂತರಂಗವನ್ನೇ ಪ್ರತಿನಿಧಿಸುತ್ತಿತ್ತು. 'ಶ್ರೀ ಕೃಷ್ಣದೇವರಾಯ' ಚಿತ್ರದ 'ತಿರುಪತಿ ಗಿರಿ ವಾಸ ಶ್ರೀ ವೆಂಕಟೇಶ' ಹಾಡು ಕೂಡ ಇವರ ರಚನೆಯೇ. ಅಲ್ಲಿಂದ ಸಾಲು ಸಾಲು ಚಿತ್ರಗಳಿಗೆ ಗೀತೆ, ಸಂಭಾಷಣೆ ರಚಿಸುವುದರಲ್ಲಿ ಪ್ರಭಾಕರ ಶಾಸ್ತ್ರಿ ಸಂಪೂರ್ಣ ಮುಳುಗಿ ಹೋದರು. ಆದರೆ ಇವರ ದೈತ್ಯ ಪ್ರತಿಭೆಯ ಅನಾವರಣವಾಗಿದ್ದು ಅವರ ತಮ್ಮ ಪುಟ್ಟಣ್ಣ ಅವರು ತಮ್ಮ ಚಿತ್ರಗಳಿಗೆ ಇವರಿಂದ ಹಾಡು ಬರೆಸಲು ಆರಂಭ ಮಾಡಿದಾಗ.


'ಶರಪಂಜರ' ಚಿತ್ರದ 'ಬಿಳಿಗಿರಿ ರಂಗಯ್ಯ, ನೀನೇ ಹೇಳಯ್ಯ' ಎನ್ನುವ ಮನೋಜ್ಞ ಹಾಡು ಇವರಿಂದ ಹುಟ್ಟಿ ಬಂತು. 'ಸಾಕ್ಷಾತ್ಕಾರ' ಚಿತ್ರಕ್ಕೆ ಇವರು ಕಥೆ, ಚಿತ್ರಕಥೆ, ಸಂಭಾಷಣೆ, ಹಾಡುಗಳು ಹೀಗೆ ಸಮಗ್ರ ಸಾಹಿತ್ಯದ ಜವಾಬ್ದಾರಿ ಹೊತ್ತರು. 'ರಂಗನಾಯಕಿ', 'ಶುಭ ಮಂಗಳ' ಚಿತ್ರಗಳಿಗೆ ಇವರು ರಚಿಸಿದ ಹಾಡುಗಳು ಚಿತ್ರಕ್ಕೆ ಮೆರುಗು ತಂದು ಕೊಟ್ಟವು. ಭಾಷಾ ಪ್ರಜ್ಞೆಯನ್ನು, ಭಾವನೆಗಳ ಜೊತೆ ಮೇಳೈಸಿ ಇವರು ರಚಿಸಿದ 'ಶುಭ ಮಂಗಳ' ಚಿತ್ರದ ಈ ಗೀತೆ ನನಗೆ ಅಚ್ಚು ಮೆಚ್ಚು.


"ಶುಭ ಮಂಗಳ

ಸುಮುಹೂರ್ತವೆ 

ಶುಭವೇಳೆ

ಅಭಿಲಾಷೆಯ

ಅನುಬಂಧವೇ

ಕರೆಯೋಲೆ


ಚೈತ್ರ ವಸಂತವೇ ಮಂಟಪ ಶಾಲೆ 

ತಾರಾಲೋಕದ ದೀಪಮಾಲೆ

ಸದಾನುರಾಗವೇ ಸಂಬಂಧ ಮಾಲೆ

ಬದುಕೇ ಭೋಗದ ರಸರಾಸ ಲೀಲೆ


ಭಾವತರಂಗವೇ ಸಪ್ತಪದಿ ನ ಓಲೆ 

ಭಾವೈಕ್ಯ ಗಾನವೇ ಉರುಟಣೆ ಉಯ್ಯಾಲೆ 

ಭಾವೋನ್ಮಾದವೇ ಶೃಂಗಾರ ಲೀಲೆ 

ಬದುಕೇ ಭಾವದ ನವರಾಗಮಾಲೆ


ಈ ಜೀವನವೇ ನವರಂಗ ಶಾಲೆ

ಯೌವನ ಕಾಲವೇ ಆನಂದ ಲೀಲೆ 

ಹೃದಯ ಮಿಲನವೇ ಹರುಷದ ಹಾಲೆಲೆ

ಬದುಕೇ ಸುಮಧುರ ಸ್ನೇಹ ಸಂಕೋಲೆ


ಶುಭ ಮಂಗಳ

ಸುಮುಹೂರ್ತವೆ 

ಶುಭವೇಳೆ

ಅಭಿಲಾಷೆಯ

ಅನುಬಂಧವೇ

ಕರೆಯೋಲೆ"


ನಮ್ಮ ನಿಮ್ಮ ಜೀವನವನ್ನು ಒಂದೆರಡು ಭಾವಗಳು ಆಳಿದರೆ, ಕಣಗಾಲ್ ಪ್ರಭಾಕರ ಶಾಸ್ತ್ರಿ ತರಹದ ಕವಿಗಳ ಬದುಕೇ ಭಾವದ ನವರಾಗಮಾಲೆ.

No comments:

Post a Comment