Tuesday, October 5, 2021

ಎಲ್ಲೂ ಇರದ ಆದರ್ಶ ಸಂಗಾತಿಯ ಬಯಸುತ್ತ

ನಾನು ೫-೬ ವರ್ಷದವನಿದ್ದಾಗ ನನ್ನ ಅಕ್ಕ ಚಿತ್ರ ಮಂದಿರಕ್ಕೆ ಒಬ್ಬಳೇ ಹೋಗಲಾಗದೆ, ನನಗೆ ಒಂದು  ಪಾರ್ಲೆ-ಜಿ ಬಿಸ್ಕಿಟ್ ಕೊಡಿಸಿಕೊಂಡು ಜೊತೆಗೆಂದು ಕರೆದುಕೊಂಡು ಹೋಗುತ್ತಿದ್ದಳು. ಒಂದೇ ಚಿತ್ರ ಅದು ಆಗ ನನಗೆ ಅರ್ಥವಾಗದದಿದ್ದರೂ ಹಲವಾರು ಬಾರಿ ನೋಡಿದ್ದ ನೆನಪಿದೆ. ಅದು ೧೯೮೩ ರಲ್ಲಿ ಬಿಡುಗಡೆಯಾದ 'ಬೆಂಕಿಯ ಬಲೆ' ಚಿತ್ರ. ಗಂಡ-ಹೆಂಡತಿ ನಡುವಿನ ನವಿರು ಪ್ರೇಮ ದುಃಖಾಂತ ಕಾಣುವ ಚಿತ್ರ. ಆ ಚಿತ್ರದಲ್ಲಿ ನಾಯಕ-ನಾಯಕಿ 'ಬಿಸಿಲಾದರೇನು, ಮಳೆಯಾದರೇನು' ಎಂದು ಯಾವ ಕಷ್ಟವನ್ನು ಜೊತೆಯಲ್ಲೇ ಎದುರಿಸುವ ಹಾಡು ಹಾಡುತ್ತಾರೆ. ಗಂಡ ಅನಾರೋಗ್ಯದಿಂದ ಸಾವನ್ನಪ್ಪಿದಾಗ, ಹೆಂಡತಿ  ಅವನ ಹೆಣ ಸಾಗಿಸುವ ಬಂಡಿಯಲ್ಲೇ ಪ್ರಾಣ ತ್ಯಜಿಸುತ್ತಾಳೆ. ಅಂದಿಗೆ ಆ ಚಿತ್ರ ನೋಡಿದವರು ಗಂಡ-ಹೆಂಡತಿ ಅಂದರೆ ಅನಂತನಾಗ್, ಲಕ್ಷ್ಮಿ ತರಹ ಇರಬೇಕು ಎಂದು ಮಾತನಾಡಿಕೊಂಡಿದ್ದರು.

 

ಕಥೆ, ಕಾದಂಬರಿಗಳು, ಚಲನಚಿತ್ರಗಳಲ್ಲಿ ಅದರ ಕರ್ತೃಗಳು ಸದುದ್ದೇಶದಿಂದ ಆದರ್ಶ ತುಂಬುತ್ತಾರೆ. ಅವರ ಉದ್ದೇಶ ಸಮಾಜ ಅದನ್ನು ಅನುಕರಿಸಲಿ ಎನ್ನುವುದು. ಆದರೆ ಅವು ವಾಸ್ತವ ಕಥೆಯಿಂದ ದೂರ ಇರುತ್ತವೆ. ಆ ಚಿತ್ರದ ನಾಯಕಿ ಲಕ್ಷ್ಮಿ ನಿಜ ಜೀವನದಲ್ಲಿ ಮೂರು ಮದುವೆಯಾಗಿ, ಯಾವ ಗಂಡ ಸತ್ತರೆ ತನಗೇನು ಎನ್ನುವಂತೆ ಹಾಯಾಗಿಲ್ಲವೇ? ಹಾಗೆಯೇ ಅನಂತನಾಗ್ ಕೂಡ ತಮ್ಮ ನಿಜ ಜೀವನದ ಹೆಂಡತಿಗೆ 'ನೀನಿಲ್ಲದೆ ಬದುಕುವ ಶಕ್ತಿ ನನಗಿಲ್ಲ' ಎಂದು ಹೇಳಿದ್ದಾರೆಯೇ ಎನ್ನುವುದು ಅನುಮಾನ. ಚಿತ್ರಕಥೆಯೇ ಬೇರೆ. ನಿಜ ಜೀವನವೇ ಬೇರೆ. ಏಕೆ ಹೀಗೆ?

 

ಪ್ರತಿಯೊಬ್ಬ ಮನುಷ್ಯ, ಗಂಡಾಗಲಿ, ಹೆಣ್ಣಾಗಲಿ ಅವರದೇ ಆದ ವೈಯಕ್ತಿಕ ಆಸೆ, ಹಂಬಲಗಳನ್ನು ಹೊಂದಿರುತ್ತಾರೆ. ಬೇರೆ ಬೇರೆ ಕುಟುಂಬಗಳಲ್ಲಿ, ಬೇರೆ ವಾತಾವರಣದಲ್ಲಿ ಬೆಳೆದ ಇಬ್ಬರು, ಮದುವೆಯಲ್ಲಿ ಜೊತೆಯಾದಾಗ ಅವರಿಬ್ಬರ ನಡುವೆ ಸಾಮ್ಯತೆಗಳಿಗಿಂತ, ಬೇರೆ ಬೇರೆ ಪ್ರವೃತ್ತಿಗಳೇ ಹೆಚ್ಚಾಗಿರುತ್ತವೆ. ಇಬ್ಬರ ಆಸೆಗಳು ವಿರುದ್ಧ ದಿಕ್ಕಿನ ಕಡೆಗೆ ಸೆಳೆದಾಗ, ಮದುವೆ ಇಬ್ಬರ ಸಹನೆಯನ್ನು ಪರೀಕ್ಷೆಗೆ ಒಡ್ಡುತ್ತದೆ. ಇಬ್ಬರಲ್ಲಿ ಒಬ್ಬರು ಸಹನೆ ಕಳೆದುಕೊಂಡರೂ ಸಾಕು. ದಾಂಪತ್ಯದ ಬಿರುಕು ಅವರಿಬ್ಬರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಅಲ್ಲಿಂದ ಶುರುವಾಗುವ ದೋಷಾರೋಪಣೆಗಳು ಕುಟುಂಬದ ಇತರೆ ಸದಸ್ಯರನ್ನು ಸೆಳೆದುಕೊಂಡುಬಿಡುತ್ತವೆ. ಆದರ್ಶ ದಂಪತಿಗಳ ಜೀವನ ದ್ವೇಷಮಯವಾಗುತ್ತದೆ.

 

ಇದಕ್ಕೆಲ್ಲ ಮೂಲ ಕಾರಣ, ಗಂಡ ತನಗೆ ತಕ್ಕ ಹೆಂಡತಿ ಸಿಕ್ಕಿಲ್ಲವೆಂದುಕೊಳ್ಳುವುದು. ಮತ್ತು ಹೆಂಡತಿ ನಾನಾದಕ್ಕೆ ಇವರ ಜೊತೆ ಸಂಸಾರ ಮಾಡಿಕೊಂಡು ಹೋಗುತ್ತಿದ್ದೇನೆ ಎನ್ನುವ ಭಾವದಲ್ಲಿ ಬದುಕುವುದು. ಎಂತಹ ಹೆಂಡತಿ ಸಿಕ್ಕಿದ್ದರೂ, ತಾನು ಜಗಳವಾಡುತ್ತಿದ್ದ ಎನ್ನುವುದು ಗಂಡ ಒಪ್ಪುವುದಿಲ್ಲ. ಇವನನ್ನು ಬಿಟ್ಟು, ಇನ್ನೂ ಮೂರು ಮದುವೆಯಾದರು ತಾನು ಹೊಸ ಗಂಡನಲ್ಲಿ ಸಮಸ್ಯೆ ಹುಡುಕದೆ ಬಿಡುತ್ತಿದ್ದಿಲ್ಲ ಎನ್ನುವುದು ಹೆಂಡತಿ ಒಪ್ಪುವುದಿಲ್ಲ. ಸಮಸ್ಯೆ ಅವರ ಮದುವೆಯಲ್ಲಿಲ್ಲ. ಅವರ ವ್ಯಕ್ತಿತ್ವದಲ್ಲಿದೆ. ಅವರಿಬ್ಬರೂ 'ಬೆಂಕಿಯ ಬಲೆ' ಚಿತ್ರದ ಆದರ್ಶ ದಂಪತಿಗಳನ್ನು ನೋಡಿದ್ದಾರೆ. ಆದರೆ ನಿಜ ಜೀವನದಲ್ಲಿ ಅನಂತನಾಗ್, ಲಕ್ಷ್ಮಿ ಬೇರೆಯೇ ತರಹದ ವ್ಯಕ್ತಿತ್ವ ಹೊಂದಿದ್ದಾರೆ ಎನ್ನುವುದು ಮರೆತು ಹೋಗಿದ್ದಾರೆ. ಚಿತ್ರಕಥೆಯಲ್ಲಿರುವ ನಾಯಕ-ನಾಯಕಿಗಿರುವ ಹೊಂದಾಣಿಕೆಯನ್ನು ಕಂಡು ಬೆರಗಾಗುತ್ತಾರೆ. ಆದರೆ ತಾವು ಮಾತ್ರ ಸಣ್ಣ-ಪುಟ್ಟ ಹೊಂದಾಣಿಕೆಗೂ ತಯ್ಯಾರು ಇರುವುದಿಲ್ಲ. ಎಲ್ಲೂ ಇರದ ಆದರ್ಶ ಸಂಗಾತಿ ತಮಗೆ ಸಿಕ್ಕಿದ್ದರೆ ಎಷ್ಟು ಚೆನ್ನ ಇತ್ತು ಎನ್ನುವ ಕೊರಗಿನಲ್ಲೇ ಸಮಯ ದೂಡುತ್ತಾರೆ. ಇರುವ ಸಂಬಂಧಗಳನ್ನು ಆದರ್ಶವಾಗಿಸಿಕೊಳ್ಳಲು ಪ್ರಯತ್ನ ಮಾಡುವುದರಲ್ಲಿ ಸೋತು ಹೋಗುತ್ತಾರೆ.

No comments:

Post a Comment