Friday, December 11, 2020

ಕಣ್ಣಿಗೆ ಕಾಣದ್ದು, ಕಿವಿಗೆ ಕೇಳಿಸದ್ದು

ನಾವು ನಮ್ಮ ಪಂಚೇಂದ್ರಿಯಗಳ ಮೂಲಕ ಜಗತ್ತಿನ ಅನುಭವ ಪಡೆಯುತ್ತೇವೆ. ನೀವು ಈಗ   ನೋಡುತ್ತಿರುವುದು ನಿಮ್ಮ ಫೋನ್ (ಅಥವಾ ಕಂಪ್ಯೂಟರ್) ಅಲ್ಲ. ಬದಲಿಗೆ ಅದರ ಅದರ ಮೇಲೆ ಬಿದ್ದ ಬೆಳಕು ಪ್ರತಿಫಲಿಸಿ ನಿಮ್ಮ ಕಣ್ಣಿನ ಒಳಗಡೆ ಮೂಡಿದ ಬಿಂಬವನ್ನ. ಹಾಗೆಯೇ ನಿಮ್ಮ ಪಕ್ಕದವರು ನಿಮ್ಮನ್ನು ಕೈ ಮುಟ್ಟಿ ಮಾತನಾಡಿಸಿದರೆ ನಿಮಗೆ ಅರಿವಾಗುವದು ಅವರ ಕೈ ಸ್ಪರ್ಶ ಅಲ್ಲ. ನಿಮ್ಮ ಅನುಭವಕ್ಕೆ ಬಂದದ್ದು ನಿಮ್ಮ ಚರ್ಮದ ಮೇಲೆ ಮೂಡಿದ ಸಂವೇದನೆ ಮಾತ್ರ. ಪ್ರತಿಯೊಂದು ಇಂದ್ರಿಯವು ಕೆಲಸ ಮಾಡುವ ಬಗೆ ಹಾಗೆಯೇ. ನಮ್ಮ ಇಂದ್ರಿಯಗಳ ಸಾಮರ್ಥ್ಯಕ್ಕೂ ಹಲವಾರು ಇತಿ ಮಿತಿಗಳಿವೆ. ಹಾಗಾಗಿ ನಮ್ಮ ಇಂದ್ರಿಯಗಳ ಗ್ರಹಿಕೆಗೆ ಸಿಕ್ಕದೆ ಹೋಗುವ ಸಾವಿರಾರು ವಿಷಯಗಳ ಅನುಭವ ನಮಗೆ ದಕ್ಕದೆ ಹೋಗುತ್ತದೆ. ಅದು ನನ್ನ ಇಂದಿನ ವಿಷಯ ವಸ್ತು.
 

ಮನೆಯಲ್ಲಿಯ ಮೈಕ್ರೋವೇವ್ ಓವೆನ್ ಹೇಗೆ ಅಡುಗೆ ಬಿಸಿ ಮಾಡುತ್ತದೆ ಎಂದು ಯೋಚಿಸಿದ್ದೀರಾ? ಅಲ್ಲಿ ನೀವು ಕಡ್ಡಿ ಗೀರುವುದಿಲ್ಲ, ಬೆಂಕಿ ಹಚ್ಚುವುದಿಲ್ಲ. ಅದರೊಳಗೆ ಇಟ್ಟ ಪಾತ್ರೆ ಹೆಚ್ಚು ಬಿಸಿಯಾಗದೆ ಇದ್ದರೂ, ಅದರೊಳಗಿನ ಅಡುಗೆ (ಮ್ಯಾಗಿ ನೂಡಲ್ಸ್?) ಮಾತ್ರ ಬಿಸಿ ಬಿಸಿಯಾಗಿ ಹೇಗೆ ತಯಾರಾಗಿರುತ್ತದೆ? ಸುಲಭ ಉತ್ತರ, ಮೈಕ್ರೋವೇವ್ ಕಿರಣಗಳು ಕಣ್ಣಿಗೆ ಕಾಣದೆ ಇದ್ದರೂ, ಶಕ್ತಿಯುತವಾಗಿ ಕೆಲಸ ಮಾಡುತ್ತವೆ. ನಮಗೆ ಕಣ್ಣಿಗೆ ಗೋಚರವಾಗುವುದು VIBGYOR ಬಣ್ಣಗಳ ಕಿರಣಗಳು ಮಾತ್ರ. Violet ಬಣ್ಣದ ಆಚೆಗಿನ ಕಿರಣಗಳು Ultraviolet, X-Ray, Gamma ಹಾಗೆ Red ಬಣ್ಣದ ಈಚೆಗಿನ ಕಿರಣಗಳಿಗೆ Infrared, Microwave, Radio ಎಂದು ಕರೆಯುತ್ತೇವೆ. ನಮ್ಮ ಕಣ್ಣಿಗೆ ಕಾಣುವುದಕ್ಕಿಂತ, ಕಾಣದೆ ಹೋಗುವುದು ಅಗಾಧವಾಗಿರುವುದು ನಿಮಗೆ ಗೊತ್ತೇ? ಅವುಗಳ ಉಪಯೋಗ ಮಾತ್ರ ನಾವು ದಿನ ನಿತ್ಯ ಎನ್ನುವಂತೆ ರೇಡಿಯೋ, ಮೊಬೈಲ್ ಫೋನ್, ಕ್ಷ-ಕಿರಣ ಹೀಗೆ ಹಲವಾರು ಉಪಕರಣಗಳ ಸಹಾಯದಿಂದ ಸಾಧ್ಯವಾಗುತ್ತದೆ.


ನೋಡುವ ವಸ್ತು ಒಂದೇ ಆಗಿದ್ದರೂ, ಅದು ನಮಗೆ ಕಂಡ ಹಾಗೆ ಇತರೆ ಪ್ರಾಣಿಗಳಿಗೆ ಕಾಣುವುದಿಲ್ಲ. ಕೆಲವೊಂದು ಪ್ರಾಣಿಗಳು ಬಣ್ಣ ಗುರುತಿಸಲಾರವು. ಆದರೆ ಬೆಕ್ಕುಗಳು ನಮಗಿಂತ ಹೆಚ್ಚು ಅಗಲದ ೨೦೦ ಡಿಗ್ರಿ ನೋಟವನ್ನು ನೋಡಬಲ್ಲವು. ಕತ್ತಲಾದರೆ ನಾವು ಮನೆ ಸೇರಿದರೆ, ಕಾಡಿನಲ್ಲಿನ ಬೇಟೆ ಪ್ರಾಣಿಗಳು ಹಾಗು ನಿಶಾಚರ ಹಕ್ಕಿಗಳು ಆಗ ಹೊರ ಬೀಳುವುದಿಲ್ಲವೇ? ಪ್ರಕೃತಿಯು ಅವುಗಳ ದೇಹವನ್ನು ಬೇರೆ ತರಹ ವಿನ್ಯಾಸ ಮಾಡಿ ಅವುಗಳ ಇಂದ್ರಿಯಗಳ ಸಾಮರ್ಥ್ಯವನ್ನು ಅವುಗಳ ಜೀವನ ಶೈಲಿಗೆ ಹೊಂದುವಂತೆ ಬದಲಾಯಿಸಿದೆ. ನಾಯಿಗಳ ವಾಸನೆ ಗುರುತು ಹಿಡಿಯುವ ಶಕ್ತಿ ನಮಗಿಂತ  ಹೆಚ್ಚು ಇರುವ ಹಾಗೆ, ಹಾವುಗಳು ಸೂಕ್ಷ್ಮ ಕಂಪನಗಳನ್ನು ಗುರುತಿಸಿದ ಹಾಗೆ ಎಲ್ಲ ಪ್ರಾಣಿ, ಪಕ್ಷಿಗಳು ವಿವಿಧ ಸ್ಥರದಲ್ಲಿ ಇಂದ್ರಿಯ ಸಾಮರ್ಥ್ಯ ಹೊಂದಿವೆ. ಎಲ್ಲ ಜೀವಿಗಳಿಗೂ, ಕಾಣಿಸುವ ಬೆಳಕು, ಕೇಳಿಸುವ ಶಬ್ದ, ವಾಸನೆ, ರುಚಿ ಗುರುತಿಸುವಿಕೆ, ಹಾಗೆಯೆ ಸ್ಪರ್ಶದ ಅನುಭವಕ್ಕೆ ಬೇರೆ ಬೇರೆ ವ್ಯಾಪ್ತಿಗಳಿವೆ. ಅದರಾಚೆಗೆ ಇರುವುದು ಅವುಗಳ ಅನುಭವಕ್ಕೆ ಬರುವುದಿಲ್ಲ ಅಷ್ಟೇ. ಆದರೆ ಇರುವಿಕೆಯನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ.


ಹಾಗೆಯೇ ನಿಮ್ಮ ಶ್ರವಣ ಶಕ್ತಿಗೆ ಒಂದು ಪುಟ್ಟ ಪರೀಕ್ಷೆ. ಲಿಂಕ್ ನಲ್ಲಿರುವ ಧ್ವನಿಯನ್ನು ಆಲಿಸಿ. ಅದರ ಮೊದಲ ಕೆಲವು ಕ್ಷಣಗಳು ಹಾಗು ಕೊನೆಯ ಕ್ಷಣಗಳು ನಿಮಗೆ ಕೇಳಿಸದೇ ಹೋಗಬಹುದು. ಆದರೂ ಸಂಪೂರ್ಣ ಆಲಿಸಿ. ನಂತರ ಮನೆಯಲ್ಲಿನ ಚಿಕ್ಕ ಮಕ್ಕಳಿಗೆ ಇದನ್ನು ಕೇಳಿಸಿ ನೋಡಿ. ನಿಮಗಿಂತ ಹೆಚ್ಚಿನ frequency ಅವರಿಗೆ ಕೇಳಿಸುವುದಾಗಿ ಹೇಳುತ್ತಾರೆ. ತರಂಗಾಂತರದಲ್ಲಿ ಶಬ್ದ ಇದ್ದರೂ, ಅದು ಚಿಕ್ಕ ಮಕ್ಕಳಿಗೆ ಕೇಳಿಸಿದರೂ, ನಮಗೆ ಮಾತ್ರ ಕೇಳಿಸದೇ ಹೋಗಿತ್ತು.

https://www.youtube.com/watch?v=PAsMlDptjx8

 



ವಿಜ್ಞಾನದ ತಿಳಿವು ಪಂಚೇಂದ್ರಿಯಗಳ ಸಾಮರ್ಥ್ಯಕ್ಕೆ ನಿಲುಕದ ಅನುಭೂತಿ ಮತ್ತು ಜ್ಞಾನವನ್ನು ನಮ್ಮದಾಗಿಸುತ್ತ ಹೋಗುತ್ತದೆ. ಪ್ರಕೃತಿಯ ರಹಸ್ಯಗಳು ತಮಗೆ ತಾವೇ ತೆರೆದುಕೊಳ್ಳುತ್ತಾ ಹೋಗುತ್ತವೆ. ಇದು ಎಷ್ಟು ಕುತೂಹಲಕಾರಿ ವಿಷಯ ಅಲ್ಲವೇ?

Thursday, December 10, 2020

ವಿಶ್ವದ ಅಗಾಧತೆ: ನಮಗೆಷ್ಟು ಗೊತ್ತು?

ನಾನು ಶಾಲೆ ಓದುತ್ತಿರುವಾಗ, ನಮ್ಮ ಸೌರ ಮಂಡಲವನ್ನೇ (Solar System) ವಿಶ್ವ (Universe) ಎಂದುಕೊಂಡಿದ್ದೆ. ಆದರೆ ಕಾಲೇಜು ಓದುತ್ತಿರುವಾಗ ನಮ್ಮ ಸೌರ ಮಂಡಲದ  ಹಾಗೆ ೫೦೦ಕ್ಕು ಹೆಚ್ಚು ಸೌರ ಮಂಡಲಗಳಿದ್ದು ಅವನ್ನೆಲ್ಲ ಒಟ್ಟುಗೂಡಿ ಮಿಲ್ಕಿ ವೆ ಗ್ಯಾಲಕ್ಸಿ (Milki Way Galaxy) ಎನ್ನುತ್ತಾರೆ ಎಂದು ತಿಳಿಯಿತು. ಮುಂದೆ ಕುತೂಹಲಕ್ಕಾಗಿ ವಿಜ್ಞಾನದ ಬೆಳವಣಿಗೆಗಳನ್ನು ತಿಳಿದುಕೊಳ್ಳುತ್ತ ಹೋದಾಗ ಆಂಡ್ರೊಮೆಡಾ ಗ್ಯಾಲಕ್ಸಿ (Andromeda Galaxy) ನಮ್ಮ ಗ್ಯಾಲಕ್ಸಿಗಿಂತ ಹಿರಿದಾದುದು ಎನ್ನುವ ವಿಷಯ ತಿಳಿಯಿತು. ಹೀಗೆ ಕಾಡಿನಲ್ಲಿ ಮರಕ್ಕಿಂತ ಮರ ದೊಡ್ಡದು ಎನ್ನುವ ಹಾಗೆ, ವಿಶ್ವದ ಅಗಾಧತೆ ನಾವು ಅರ್ಥ ಮಾಡಿಕೊಳ್ಳುತ್ತ ಹೋದಷ್ಟು ದೊಡ್ಡದಾಗುತ್ತ ಹೋಗುತ್ತದೆ. ವರ್ಷದ ಭೌತ ಶಾಸ್ತ್ರದ ನೊಬೆಲ್ ಪ್ರಶಸ್ತಿ ನಮ್ಮ ಗ್ಯಾಲಕ್ಸಿ ಕೇಂದ್ರ ಬಿಂದು ಒಂದು ಕಪ್ಪು ರಂಧ್ರ (Black Hole) ಎಂದು ಕಂಡು ಹಿಡಿದ ವಿಜ್ಞಾನಿಗಳಿಗೆ ದೊರಕಿತಲ್ಲವೇ. ಇದು ಹೀಗೆ ಇರಲು ಸಾಧ್ಯವೇ ಎಂದು ಆಶ್ಚರ್ಯ ಎನಿಸಿತು.


ವಿಶ್ವದ ಬಗ್ಗೆ ನಮ್ಮ ತಿಳುವಳಿಕೆ ಸಾವಿರಾರು ವರುಷಗಳಿಂದ ಬದಲಾಗುತ್ತ ಬಂದಿದೆ ಮತ್ತು ಹಾಗೆ ಬದಲಾಗುವುದು ಮುಂದುವರೆದಿದೆ. ಭೂಮಿ ಚಪ್ಪಟೆಯಾಗಿದೆ ಎಂದು ನಂಬಿದ್ದ ಕಾಲವಿತ್ತು. ಹಾಗೆಯೇ ಭೂಮಿಯ ಸುತ್ತ ಸೂರ್ಯ ಸುತ್ತುವುದು ಎಂದು ನಂಬಿದ್ದ ಕಾಲವೂ ಇತ್ತು. ಸೂರ್ಯನೇ ಕೇಂದ್ರ ಬಿಂದು ಎಂದ ಗೆಲಿಲಿಯೋ ಅಂದಿನ ಸಮಾಜಕ್ಕೆ ಅರ್ಥವಾಗದೇ ಹೋದರೂ, ವಿಜ್ಞಾನದ ಬೆಳವಣಿಗೆಗೆ ಅವನ ಕೊಡುಗೆ ಅಪಾರ. ಅವನು ತಯಾರಿಸಿದ ಟೆಲಿಸ್ಕೋಪ್ ಗಳು, ಗ್ರಹಗಳ ಚಲನೆಯನ್ನು ಹಾಗೆಯೇ ವಿಶ್ವದ ರಚನೆಯನ್ನು ತೆರೆದಿಡುತ್ತಾ ಹೋದವು. ಅವನ ಹಾಗೆ ಖಗೋಳಶಾಸ್ತ್ರದಲ್ಲಿ ಆಸಕ್ತಿ ಇದ್ದ ಸಾಕಷ್ಟು ವಿಜ್ಞಾನಿಗಳು ಹೊಸ ವಿಷಯಗಳನ್ನು ಕಲಿಯುತ್ತ, ಹಳೆಯ ತಪ್ಪು ತಿಳುವಳಿಕೆಗಳನ್ನು ತಿದ್ದುತ್ತಾ ಸಾಗಿದರು. ನ್ಯೂಟನ್, ಐನ್ ಸ್ಟೀನ್ ರಂತ ದೈತ್ಯ ಪ್ರತಿಭೆಗಳು ವಿಜ್ಞಾನವನ್ನು ಮನುಕುಲದ ಮುಂಚೂಣಿಗೆ ತಂದರು. ಸ್ಟೀಫೆನ್ ಹಾಕಿಂಗ್ ವಿಶ್ವದ ಬಗೆಗಿನ ನಮ್ಮ ತಿಳುವಳಿಕೆಯ ಪರಿಧಿಯನ್ನು ವಿಸ್ತರಿಸಿದರು. ಇತ್ತೀಚಿನ ವರ್ಷಗಳಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ವೇಗದ ಬೆಳವಣಿಗೆ ಕಂಡು, ಹೆಚ್ಚಿನ ಮಾಹಿತಿಯನ್ನು ನಿಖರವಾಗಿ ಕಲೆ ಹಾಕಲು ಸಾಧ್ಯವಾಗಿದೆ.

 

ನಮ್ಮದೇ ಲೋಕದಲ್ಲಿ  ಮುಳುಗಿ ಹೋಗುವ ನಮಗೆ, ನಾವು ಇರುವ ಭೂಮಿ ಎಷ್ಟು ಚಿಕ್ಕದು ಎನ್ನುವ ಅಂದಾಜು ಸಿಗಲಿಕ್ಕೆ ಈ ವಿಡಿಯೋ ನೋಡಿ. ನಾವು ಇರುವ ಭೂಮಿ ಏನು ಅಲ್ಲ, ನಮ್ಮ ಸೂರ್ಯನೇ ಯಾವ ಲೆಕ್ಕಕ್ಕೂ ಅಲ್ಲ ಅನ್ನುವಷ್ಟು ದೊಡ್ಡ ದೊಡ್ಡ ನಕ್ಷತ್ರಗಳಿವೆ ಈ ವಿಶ್ವದಲ್ಲಿ. ಹಾಗೆ ನಕ್ಷತ್ರ  ಉರಿಯುವುದು ಮುಗಿದು ಹೋದ ಮೇಲೆ ಶೂನ್ಯವಾಗಿ ಬದಲಾಗಿ, ಆದರೆ ತಮ್ಮ ಗುರುತ್ವಾಕರ್ಷಣೆಯನ್ನು ಉಳಿಸಿಕೊಂಡು ಹತ್ತಿರದ ಎಲ್ಲವನ್ನು ತಮ್ಮ ಶೂನ್ಯದಲ್ಲಿ ಅರಗಿಸಿಕೊಳ್ಳುವ ಅನೇಕ ಕಪ್ಪು ರಂಧ್ರಗಳಿವೆ. ಹಾಗಿದ್ದರೂ ವಿಶ್ವದ ಅಗಾಧತೆ ಹಿಗ್ಗುತ್ತಲೇ ಇದೆ. ಇದು ವಿಸ್ಮಯದ ಸಂಗತಿ ಅಲ್ಲವೇ? 


ಅಂದ ಹಾಗೆ ನಿಮ್ಮ ಮನೆಯಲ್ಲಿ ಟೆಲಿಸ್ಕೋಪ್ ಇದೆಯೇ? ಇದ್ದಲ್ಲಿ, ಡಿಸೆಂಬರ್ ೨೧ ರಾತ್ರಿ ನಿಮ್ಮ ಮನೆ ಮಾಳಿಗೆ ಹತ್ತಿ, ದೊಡ್ಡ ಗ್ರಹಗಳಾದ ಶನಿ ಹಾಗು ಗುರು ಗ್ರಹಗಳ ಸಂಯೋಗ ವೀಕ್ಷಣೆಗೆ ಸಿದ್ಧತೆ ಮಾಡಿಕೊಂಡಿದ್ದೀರಾ?



https://www.youtube.com/watch?v=i93Z7zljQ7I

ಹೆಣ್ಣು ಪ್ರಕೃತಿ ಮಾತೆ ಆದರೆ ಅತ್ತೆಯ ಪಾತ್ರ ಮಾತ್ರ ಏಕೆ ಬೇರೆ?

ಸುಮಾರು ನಾಲ್ಕು ವರುಷಗಳ ಹಿಂದೆ ನಡೆದ ಘಟನೆ. ಅದು ನಮಗೆ ಎರಡನೇ ಮಗ ಹುಟ್ಟಿದ ಸಂದರ್ಭ. ಆಗ ನನ್ನ ಪತ್ನಿಯ ತವರೂರಾದ ಸಿರುಗುಪ್ಪದ ಹೆರಿಗೆ ಆಸ್ಪತ್ರೆ ಒಂದರಲ್ಲಿ ನಾವು ಸುಮಾರು ಒಂದು ವಾರ ಕಾಲ ಇದ್ದೆವು. ಆ ಆಸ್ಪತ್ರೆಯ ಕಟ್ಟಡದಲ್ಲಿ ತುಂಬಾ ಕಿರಿದೆನಿಸುವ, ಆರು ಅಡಿಗೊಂದಕ್ಕೆ ಎನ್ನುವಂತೆ ಹಲವಾರು ಕೋಣೆಗಳು. ಪಕ್ಕದ ಕೋಣೆಯಲ್ಲಿ ಮಾತನಾಡಿದರೆ ಕೇಳುವುದು ಅಷ್ಟೇ ಅಲ್ಲ, ಜೋರಾಗಿ ಉಸಿರಾಡಿದರೂ ಕೇಳಿಸುವಷ್ಟು ಹತ್ತಿರ. ಯಾರ ಕೋಣೆಯಲ್ಲಿ ಮಗು ಅಳುತ್ತಿದೆಯೋ ಅಥವಾ ಯಾರನ್ನು ಯಾರು ಮಾತನಾಡಿಸುತ್ತಿದ್ದರೋ ಎಂದು ಗೊಂದಲಕ್ಕೆ ಈಡಾಗುವ ಪರಿಸ್ಥಿತಿ. ಅಲ್ಲಿ ನನಗೆ ಪತ್ನಿ, ಮಗುವಿಗೆ ಔಷಧ ತಂದು ಕೊಡುವ, ಇಡ್ಲಿ ಕಟ್ಟಿಸಿಕೊಂಡು ಬರುವ, ಮಾತನಾಡಿಸಲು ಬಂದವರನ್ನು ಬಸ್ ನಿಲ್ದಾಣಕ್ಕೆ ಬಿಟ್ಟು ಬರುವ ಜವಾಬ್ದಾರಿ.


ಆ ವಾರದಲ್ಲಿ ಒಂದು ದಿನ ಮುಂಜಾನೆ ನಾನು ಆಸ್ಪತ್ರೆಗೆ ತಲುಪಿದಾಗ, ಒಂದು ಕೋಣೆಯಿಂದ ಹೆಣ್ಣು ಮಗಳೊಬ್ಬಳು ಅಳುತ್ತಿರುವುದು ಕೇಳಿ ಬರುತ್ತಿತ್ತು. ವಿಷಯ ಏನೆಂದು ವಿಚಾರಿಸಿದಾಗ, ಹಿಂದಿನ ರಾತ್ರಿ ಆದ ಹೆರಿಗೆಯಲ್ಲಿ ಅವಳ ಮಗುವು ಸತ್ತು ಹುಟ್ಟಿತ್ತು. ಒಂಬತ್ತು ತಿಂಗಳು ಕಾದು, ಮಗುವಿನ ಮುಖ ನೋಡುವ ಹಂಬಲ ಹೊತ್ತ ತಾಯಿಗೆ, ಮಗು ಸತ್ತಿರುವುದು ಆಘಾತಕಾರಿ ವಿಷಯವೇ ಸರಿ. ಆದರೆ ಅಷ್ಟೇ ಇರಲಿಲ್ಲ. ಅವಳಿಗೆ ಈ ತರಹ ಆಗಿದ್ದು ಎರಡನೇ ಬಾರಿ. ಒತ್ತಿಕೊಳ್ಳಲಾಗದ ದುಃಖ ಆ ಹೆಣ್ಣು ಮಗಳನ್ನು ಕಾಡಿದ್ದು ಆಸ್ಪತ್ರೆಯಲ್ಲಿ ಇದ್ದ ಎಲ್ಲರಿಗೂ ತಿಳಿದು ವಿಷಾದ ಭಾವ ಮೂಡಿತ್ತು. ಇಡೀ ಆಸ್ಪತ್ರೆಯೇ ಮಂಕಾಗಿ, ಅವಳದೊಂದೇ ಧ್ವನಿ ಕೇಳಿ ಬರುತಿತ್ತು. ಸ್ವಲ್ಪ ಸಮಯದಲ್ಲಿ ಅವಳ ದುಃಖದ ತೀವ್ರತೆ ಇನ್ನು ಹೆಚ್ಚಾಗತೊಡಗಿತು. ಅವಳ ಮೊದಲ ಮಗು ಸತ್ತಾಗ ಅವಳ ಅತ್ತೆ ಮಾಡಿದ ದೋಷಾರೋಪಗಳ ನೆನಪಾಗಿ ಅವಳ ಅಳು ತೀವ್ರವಾಗತೊಡಗಿತು. ಇನ್ನು ಮುಂದೇನು ಕಾದಿದೆಯೋ ಎನ್ನುವ ಚಿಂತೆ ಕಾಡಿ, ಮಗು ಸತ್ತ ದುಃಖಕ್ಕಿಂತ, ತನ್ನ ಅತ್ತೆಯನ್ನು ಹೇಗೆ ಎದುರಿಸುವುದೋ ಎನ್ನುವ ಭಯ ಅವಳನ್ನು ಕಂಗಾಲು ಮಾಡಿತ್ತು. ಪ್ರಕೃತಿ ಮಾತೆಗೆ ಸರಿ ಸಮನಾಗಿ ಸಲಹುವ ಹೆಣ್ಣು, ಅತ್ತೆಯ ಪಾತ್ರದಲ್ಲಿ ಮಾತ್ರ ಏಕೆ ಕ್ರೂರಿಯಾಗಿ ಬದಲಾಗುತ್ತಾಳೆ ಎನ್ನುವುದು ನನಗೆ ಅಂದಿಗೆ ಅರ್ಥವಾಗದೇ ಹೋಗಿತ್ತು. 


ಅಪರೂಪಕ್ಕೆ ಎನ್ನುವಂತೆ ಅತ್ತೆ-ಸೊಸೆಯ ಹೊಂದಾಣಿಕೆ ಕಂಡ ನಮಗೆ, ಅತ್ತೆ-ಸೊಸೆ ಜಗಳ ಎಲ್ಲರ ಮನೆ ಮಾತು ಎನ್ನುವಷ್ಟು ಸಾಮಾನ್ಯ ವಿಷಯ. ಮುಂದೆ ಹಲವಾರು ಮನಶಾಸ್ತ್ರದ ಪುಸ್ತಕಗಳನ್ನು ಓದಿಕೊಂಡಾಗ ನನಗೆ ಅರ್ಥವಾಗಿದ್ದಿಷ್ಟು. ಮಗಳು, ಸೋದರಿ, ಪತ್ನಿ ಹೀಗೆ ಹಲವಾರು ಪಾತ್ರಗಳನ್ನು ಯಶಸ್ವಿಯಾಗಿ ನಿಭಾಯಿಸುವ ಹೆಣ್ಣು, ತನ್ನ ತಾಯಿಯ ಪಾತ್ರ ಸ್ವಲ್ಪ ಹೆಚ್ಚೆ ಅನ್ನಿಸುವ ಹಾಗೆ ತನ್ನ ಮಕ್ಕಳನ್ನು ಮಮತೆಯಿಂದ, ತನ್ನ ದೇಹದ ಅವಿಭಾಜ್ಯ ಅಂಗ ಎನ್ನುವ ಹಾಗೆ ಬೆಳೆಸುತ್ತಾಳೆ. ಮುಂದೆ ಅವಳ ಮಗನ ಜೊತೆ ಬಾಳಲು ಬಂದ ಇನ್ನೊಂದು ಹೆಣ್ಣು ಅವಳಿಗೆ ಇಷ್ಟ ಆಗದೆ ಹೋದರೆ, ಅವಳು ತನ್ನ ಪ್ರೀತಿಯಲ್ಲಿ ಪಾಲು ಕೇಳಲು ಬಂದ ಪ್ರತಿಸ್ಪರ್ಧಿ ಎನ್ನುವ ಭಾವ ಮೂಡುತ್ತದೆ. ಅಲ್ಲಿಂದ ಶುರುವಾಗುವ ಅಸಮಾಧಾನ ಎಲ್ಲಿಗೆ ಬೇಕಾದರೂ ತಲುಪಬಹುದು. ತನ್ನ ಮಕ್ಕಳ ದೊಡ್ಡ ದೊಡ್ಡ ತಪ್ಪನ್ನೇ ಕ್ಷಮಿಸಿಬಿಡುವ ಹೆಣ್ಣು, ಸೊಸೆಯ ಚಿಕ್ಕ ಪುಟ್ಟ ತಪ್ಪುಗಳನ್ನು ಕ್ಷಮಿಸಿಬಿಡುವುದರಲ್ಲಿ ಸೋಲುತ್ತಾಳೆ. ಅದುವರೆಗೆ ಕಂಡಿರದ ಅವಳ ಇನ್ನೊಂದು ಮುಖದ ಪರಿಚಯವಾಗುತ್ತ ಹೋಗುತ್ತದೆ. ಒಬ್ಬ ಕೆಟ್ಟ ಅತ್ತೆಯ ಕೈಯಲ್ಲಿ ಪಳಗಿದ ಸೊಸೆ, ಮುಂದೆ ಇನ್ನೊಬ್ಬ ಕೆಟ್ಟ ಅತ್ತೆಯಾಗಿ ಬದಲಾಗುವ ಸಂಭವನೀಯತೆ ಹೆಚ್ಚು ಎನ್ನುತ್ತದೆ ಮನಶಾಸ್ತ್ರ. ಪ್ರತಿಯೊಂದು ಕುಟುಂಬದಲ್ಲಿ ಹೀಗೆ ಎಂದು ಹೇಳಲು ಆಗದಿದ್ದರೂ, ಅತ್ತೆ-ಸೊಸೆಯ ಅಸಮಾಧಾನದ ಪರಂಪರೆ ಮುಂದುವರೆದುಕೊಂಡು ಹೋಗುತ್ತದೆ.


ಇದು ಬರಿ ಸೊಸೆಗೆ ಸೀಮಿತವಲ್ಲ. ದೌರ್ಜನ್ಯಕ್ಕೆ ಒಳಗಾದ ಕೆಲವರು ಮುಂದೆ ಅದರಲ್ಲೇ ಒಂದು ವಿಕೃತಿಯ ಸಂತೋಷ ಕಂಡುಕೊಳ್ಳುವುದು, ಒಬ್ಬ ಸ್ಯಾಡಿಸ್ಟ್ ಆಗಿ ಬದಲಾಗುವುದು ನಾವು ಗಮನಿಸಬಹುದಾದ ಸಂಗತಿ. ಬಹುಶ ಇದನ್ನು ಕಂಡೆ ಗಾಂಧಿ ಹೇಳಿದ್ದು, ಯಾರೋ ನಿಮ್ಮ ಕಣ್ಣನ್ನು ಕಿತ್ತರು ಎಂದು ನೀವು ಇನ್ನೊಬ್ಬರ ಕಣ್ಣು ಕಿತ್ತರೆ, ಜಗತ್ತಿನ ತುಂಬೆಲ್ಲ ಕುರುಡರೇ ತುಂಬಿರುತ್ತಾರೆ ಎಂದು. ಈ ದ್ವೇಷದ ಸರಪಳಿ ತುಂಡಾಗಬೇಕೆಂದರೆ, ನಮಗಾದ ನೋವಿಗೆ ಇನ್ನೊಬರನ್ನು ಬಲಿ ತೆಗೆದುಕೊಳ್ಳುವುದೇ ಇರುವುದು. ಅದು ಸಾಧ್ಯವೇ? ಏಕಾಗಬಾರದು ಎನ್ನುವುದು ನನ್ನ ಅಭಿಮತ. ಹಾಗೇನಾದರು ಆದಲ್ಲಿ, ದೂರದರ್ಶನದಲ್ಲಿ ಅತ್ತೆ-ಸೊಸೆ ಪ್ರೀತಿಯನ್ನು ಬಿಂಬಿಸುವ ಧಾರಾವಾಹಿಗಳು ತುಂಬಿ ಹೋಗಿರುತ್ತವೆ. ಆ ಭಾಗ್ಯ ನಮ್ಮ ಕಾಲಕ್ಕೆ ಬರಬಹುದೇ?

Wednesday, December 9, 2020

ಅವರು ಹೀಗೆ ಮಾಡಬಾರದಾಗಿತ್ತು

'ಛೆ!  ಅವರು ಹೀಗೆ ಮಾಡಬಾರದಾಗಿತ್ತು" ಎಂದು ಕೆಲವೊಂದು ಸಲ ನಾವು ಹೇಳುತ್ತಿರುತ್ತಿವೆ. ಯಾರೋ ಹಾಗೆ ಮಾಡಿದ್ದರೆ ನಾವು ಚಿಂತೆ ಮಾಡುತ್ತಿರಲಿಲ್ಲ. ಆದರೆ ನಮ್ಮ ಬಂಧು, ಸ್ನೇಹಿತರು, ಹತ್ತಿರದವರು ನಾವು ಅಂದುಕೊಳ್ಳದ ರೀತಿಯಲ್ಲಿ ವರ್ತಿಸಿರುತ್ತಾರೆ. ಅದು ನಮಗೆ ಬೇಸರ ಮೂಡಿಸಿ ಈ ಮಾತು ನಮ್ಮಿಂದ ಹೊರಬಿದ್ದಿರುತ್ತದೆ.


ಅವರು ಏಕೆ ಹಾಗೆ ಮಾಡಿದರು ಅನ್ನುವುದಕ್ಕೆ ಹಲವಾರು ಕಾರಣಗಳಿರಬಹುದು. ಆಕಸ್ಮಿಕವೋ, ಗೊತ್ತಿಲ್ಲದೆಯೋ, ಪರಿಸ್ಥಿತಿಯ ಒತ್ತಡದಿಂದಲೋ ಅಥವಾ ಗೊತ್ತಿದ್ದೂ ನಿಮಗೆ ನೋವುಂಟು ಮಾಡಲು ಎಂದೇ ಅವರು ಹಾಗೆ ಮಾಡಿರಬಹುದು. ನೀವು ಅವರನ್ನೇ ಕೇಳಿ ನೋಡಿ, ಆಗ ಪ್ರಾಮಾಣಿಕ, ಸಮಂಜಸ ಎನ್ನುವ ಉತ್ತರ ಬರದಿದ್ದರೆ ಅದು ನೀವು ಜಾಗೃತ ಆಗುವ ಸಮಯ. ನಿಮ್ಮನ್ನು ಬಲಿಪಶು ಮಾಡಲೆಂದೇ ಅಥವಾ ನಿಮ್ಮನ್ನು ದುರುಪಯೋಗ ಮಾಡಿಕೊಳ್ಳಲೆಂದೇ ಅವರು ಹಾಗೆ ವರ್ತಿಸಿದ್ದರೆ,  ನಿಮಗೆ ನೀವು ಬೇರೆ ಪ್ರಶ್ನೆಗಳನ್ನು ಕೇಳಿಕೊಳ್ಳಲೇಬೇಕು ಎನ್ನುವ ಸಮಯ.


ಅವರು ಹೇಗೆ ವರ್ತಿಸಬೇಕಿತ್ತು ಎನ್ನುವದಕ್ಕಿಂತ, ಆಗ ನೀವು ಏನು ಮಾಡಬಹುದಾಗಿತ್ತು ಎನ್ನುವ ವಿಚಾರವೇ ಹೆಚ್ಚು ಉಪಯೋಗಕರ. ಅವರಿಗೆ ತಮಗೆ ಹೇಗೆ ಬೇಕು ಹಾಗೆ ವರ್ತಿಸಿದರು. ಅಲ್ಲಿ ನೀವು ಮಾಡುವುದು ಏನು ಇಲ್ಲ. ಆದರೆ ಅದು ಪುನರಾವರ್ತನೆ ಆಗುವುದಿಲ್ಲ ಎಂದು ಏನು ಗ್ಯಾರಂಟಿ? ಹಾಗಾಗಿ, ಅವರ ಆ ರೀತಿಯ ವರ್ತನೆಗೆ ಮೂಲ ಕಾರಣ ಹುಡುಕುವುದಕ್ಕಿಂತ, ನೀವು ಬೇರೆಯ ಕೆಲಸಕ್ಕೆ ತೊಡಗಬೇಕು. ಆ ಪರಿಸ್ಥಿತಿಯಲ್ಲಿ ನಿಮಗಿರುವ ಆಯ್ಕೆಗಳು ಏನು? ನಿಮ್ಮ ಯಾವ ಪ್ರತಿಕ್ರಿಯೆ ನಿಮ್ಮನ್ನು ಬಲಿಪಶು ಆಗದಂತೆ ತಡೆಯುತ್ತದೆ ಎಂದು ವಿಚಾರ ಮಾಡಿ ನೋಡಿ. ನಿಮಗೆ ಅವರಿಂದಾಗುವ ಹಾನಿಯನ್ನು ಹೇಗೆ ಕಡಿಮೆ ಮಾಡಬಹುದು ಎನ್ನುವ ಕಡೆಗೆ ಲಕ್ಷ್ಯ ಹರಿಸಿ. ನೀವು ನೀಡುವ ಪ್ರತಿಕ್ರಿಯೆ ನೀವು ಮೂಕ ಪ್ರೇಕ್ಷಕರಾಗುವುದನ್ನು ತಪ್ಪಿಸಿ, ಪರಿಸ್ಥಿತಿ ಮತ್ತೆ ನಿಮ್ಮ ಹತೋಟಿಗೆ ಸಿಗುವ ಪ್ರಕ್ರಿಯೆ ಆಗಿರಬೇಕು.


ಪ್ರತಿಯೊಂದು ಸಲ ನೀವು ಗೆದ್ದೇ ಬಿಡುವಿರಿ ಎಂದೇನಿಲ್ಲ. ಆದರೆ ನೀವೀಗ ಮೂಕ ಪ್ರೇಕ್ಷಕರಲ್ಲ, ನೀವೂ ಒಬ್ಬ ಆಟಗಾರರು. ಆಟದಲ್ಲಿನ ಪ್ರತಿಯೊಬ್ಬರ ಮೇಲಿನ ನಿಮ್ಮ ನಿಗಾ, ಅವರ ನಡೆಯನ್ನು ಮೊದಲೇ ಊಹಿಸುವಂತೆ ಮಾಡುತ್ತದೆ. ಅವರ ಪಟ್ಟುಗಳ ಅಂದಾಜು ನಿಮಗೆ ಸಿಗತೊಡಗುತ್ತದೆ. ಅವರು ಹಿಂದೆ ನಿಮಗೆ ಉಂಟು ಮಾಡಿದ್ದ ಆಶ್ಚರ್ಯ ನಡೆಗೆ ಈಗ ಅವಕಾಶವೇ ಇಲ್ಲ. ನಿಮ್ಮನ್ನು ಸುಲಭದಲ್ಲಿ ಸಿಕ್ಕಿಸಿ, ನಿಮಗೆ ನೋವುಂಟು ಮಾಡುವ ಅವರ ಉದ್ದೇಶಗಳಿಗೆ ನೀವು ನೀಡುವ ಪ್ರತಿರೋಧ ನಿಮ್ಮನ್ನು ರಕ್ಷಿಸುತ್ತದೆ. ಈ ವಿದ್ಯೆ ನಿಮಗೆ ಕೈಗತವಾದಾಗ, ನೀವು ಇತರೆ ಬಲಿಪಶುಗಳಿಗೆ ಪರಿಸ್ಥಿತಿಯ ತಿಳುವಳಿಕೆ ನೀಡಿ ಎಚ್ಚರ ಮಾಡಿದರೆ ಆಗ ನೀವೇ ಒಬ್ಬ ಹೀರೋ. ನೀವು ನಿಸ್ಸಹಾಯಕರಲ್ಲ ಎನ್ನುವ ಸಂದೇಶ ಸ್ಪಷ್ಟವಾಗಿ ತಲುಪಿದರೆ ಸಾಕು. ನಿಮ್ಮ ಹಿತ ಶತ್ರುಗಳ ಆಟ ಕಳೆಗುಂದುತ್ತದೆ. 


ನೆನಪಿಡಿ, ಅವರು ಏನು ಮಾಡಿದರು ಎನ್ನುವುದು ಮುಖ್ಯವಲ್ಲ, ನೀವು ಹೇಗೆ ಪ್ರತಿಕ್ರಿಯೆ ನೀಡಿದಿರಿ ಎನ್ನುವುದೇ ಮುಖ್ಯ. ಇನ್ನೊಮ್ಮೆ ಯಾವಾಗಾದರೂ "ಅವರು ಹೀಗೆ ಮಾಡಬಾರದಾಗಿತ್ತು" ಅನ್ನಿಸಿದರೆ, ಅದರಿಂದ ನೀವು ಕಲಿತದ್ದು ಏನು ಎಂದು ತೀರ್ಮಾನಿಸಿ ಮತ್ತು ಇನ್ನೊಮ್ಮೆ ಹಾಗೆ ಆಗುವ ಅವಕಾಶ ನೀಡಬೇಡಿ.

Tuesday, December 8, 2020

ಅಜರಾಮರ ಹೈಡ್ರಾ; ಪಾರ್ಕಿನ್ಸನ್ ವಾಸನೆ

'Invisibilia' ಎನ್ನುವ podcast ನಲ್ಲಿ ಕೇಳಿದ ಎರಡು ಅಧ್ಯಾಯಗಳು ( 'An Unlikely Superpower' on Parkinson Disease and 'The Reluctant Immortalist' on Hydra) ವಿಜ್ಞಾನದ ಹೊಸ ವಿಷಯಗಳನ್ನು ತಿಳಿಸಿಕೊಟ್ಟವು. ಅವುಗಳ ಸಂಕ್ಷಿಪ್ತ ಸಾರಾಂಶ ಇಲ್ಲಿದೆ.


ಪತ್ನಿ ಮೂಸಿ ನೋಡಿ ಕಂಡು ಹಿಡಿದ ರೋಗ:

ಸ್ಕಾಟ್ಲೆಂಡ್ ನಲ್ಲಿ ಒಂದು ಸುಂದರ ಕುಟುಂಬ, 'ಜಾಯ್' ಮತ್ತು ಅವಳ ಪತಿ 'ಲೆಸ್'. ಅವರಿಬ್ಬರೂ ಕಾಲೇಜು ಓದುತ್ತಿರುವಾಗ ಪ್ರೇಮಿಸಿ ಮದುವೆಯಾಗಿದ್ದು. 'ಲೆಸ್' ಡಾಕ್ಟರ್ ಆದರೆ, 'ಜಾಯ್' ಆಗಿದ್ದು ನರ್ಸ್. ಆ ದಂಪತಿಗೆ ಮೂರು ಜನ ಮಕ್ಕಳು.


ಒಂದು ದಿನ ಮನೆಗೆ ಸೇವೆಯಿಂದ ವಾಪಸ್ಸಾದ ಪತಿ ಲೆಸ್ ನ ಮೈಯಿಂದ ಒಂದು ತರಹದ ವಾಸನೆ ಬರುವುದು ಪತ್ನಿ ಜಾಯ್ ಗಮನಿಸಿದಳು. ಆಸ್ಪತ್ರೆಯ ಯಾವುದೊ ವಾಸನೆ ಮೆಟ್ಟಿಕೊಂಡಿರಬಹುದೆಂದು ಪತಿಯನ್ನು ಸ್ನಾನದ ಮನೆಗೆ ದೂಡಿದಳು. ಆದರೂ ಅದು ಕಡಿಮೆಯಾಗಲಿಲ್ಲ. ದಿನ ಕಳೆದಂತೆ  ವಾಸನೆಯ ಘಾಟು ಹೆಚ್ಚುತ್ತಾ ಹೋಯಿತು ಹಾಗೆಯೇ ಲೆಸ್ ನ ವರ್ತನೆಯಲ್ಲೂ ಬದಲಾವಣೆಗಳು ಕಾಣಲಾರಂಭಿಸಿದವು. ಒಂದು ದಿನ ರಾತ್ರಿ ಲೆಸ್ ಸಹನೆ ಕಳೆದುಕೊಂಡು ವಿಚಿತ್ರವಾಗಿ ವರ್ತಿಸಿದಾಗ ಆಸ್ಪತ್ರೆಗೆ ತಪಾಸಣೆಗೆ ಹೋದರು. ಅಲ್ಲಿ ಲೆಸ್ ಗೆ ಪಾರ್ಕಿನ್ಸನ್ ಕಾಯಿಲೆ (ಮೆದುಳು ಮತ್ತು ನರಮಂಡಲಕ್ಕೆ ಸಂಬಂಧಿಸಿದ ರೋಗ) ಇರುವುದು ಗೊತ್ತಾಯಿತು. ಅಲ್ಲಿ ಕುಳಿತಿದ್ದ ಹಲವಾರು ರೋಗಿಗಳ ಮೈಯಿಂದ ಅದೇ ತರಹದ ವಾಸನೆ ಬರುವುದನ್ನು ಜಾಯ್ ಗಮನಿಸಿದಳು. ಮೊದಲಿಗೆ ವೈದ್ಯರು, ವಿಜ್ಞಾನಿಗಳು ಇದನ್ನು ನಿರಾಕರಿಸಿದರೂ, ಜಾಯ್ ನ್ನು ಒಂದು ಪರೀಕ್ಷೆಗೆ ಒಳಪಡಿಸಿದರು. ಈಗಾಗಲೇ ಪಾರ್ಕಿನ್ಸನ್ ಕಾಯಿಲೆ ಇರುವ ಮತ್ತು ಇರದಿರುವ ಸುಮಾರು ೨೫ ಜನರನ್ನು ಒಟ್ಟುಗೂಡಿಸಿ, ಜಾಯ್ ಅವರ ವಾಸನೆಯಿಂದ ಗ್ರಹಿಸಿ ಯಾರಿಗೆ ಕಾಯಿಲೆ ಇದೆ ಮತ್ತು ಯಾರಿಗೆ ಇಲ್ಲ ಎಂದು ನಿಖರವಾಗಿ ಗುರುತಿಸುವುದು ಈ ಪರೀಕ್ಷೆಯ ಉದ್ದೇಶ. ಒಬ್ಬರ ಹೊರತಾಗಿ ಉಳಿದೆಲ್ಲ ಜನರನ್ನು ನಿಖರವಾಗಿ ಗುರುತಿಸಿದಳು ಜಾಯ್. ಸ್ವಲ್ಪ ದಿನದ ನಂತರ ಆ ಇನ್ನೊಬ್ಬರಿಗೂ ಕಾಯಿಲೆ ಇರುವ ಸಂಗತಿ ಪರೀಕ್ಷೆಯ ನಂತರ ತಿಳಿಯಿತು. ಜಾಯ್ ಳ ವಾಸನಾ ಸಾಮರ್ಥ್ಯ ವೈದ್ಯಕೀಯ ಪರೀಕ್ಷೆ ಗುರುತಿಸಿವುದಕ್ಕಿಂತ ಮುಂಚೆಯೇ ಆ ಸಮಸ್ಯೆಯನ್ನು ಗುರುತಿಸಿತ್ತು. ನಂತರದ ಸಂಶೋಧನೆಗಳು ಸಾಬೀತು ಪಡಿಸಿದ್ದು, ಪಾರ್ಕಿನ್ಸನ್ ಕಾಯಿಲೆ ಚರ್ಮದ ಗ್ರಂಥಿಗಳಲ್ಲಿ ಒಂದು ವಿಶಿಷ್ಟ ದ್ರವವನ್ನು ಹೊರಸೂಸಿ ಒಂದು ತರಹದ ವಾಸನೆ ಹೊರಡಿಸುತ್ತದೆ. ಎಲ್ಲರಿಗೂ ಆ ವಾಸನೆಯನ್ನು ಗುರುತಿಸಲು ಆಗದಿದ್ದರು ಜಾಯ್ ತರಹದ ಕೆಲವರಿಗೆ ಸಾಧ್ಯವಾಗುತ್ತದೆ ಎನ್ನುವ ವಿಷಯ. 


ಜಾಯ್ ತನ್ನ ಪತಿಯನ್ನು ಈ ರೋಗಕ್ಕೆ ಕಳೆದುಕೊಂಡರೂ, ಅವಳ ಗ್ರಹಿಕೆ ಇಂದಿಗೆ ಈ ಕಾಯಿಲೆಯ ರೋಗಲಕ್ಷಣಗಳನ್ನು ಮುಂಚಿತವಾಗಿಯೇ ಗುರುತಿಸಲು ವೈದ್ಯಕೀಯ ಲೋಕಕ್ಕೆ ಸಹಾಯವಾಗುತ್ತಿದೆ.

Link:

https://podcasts.google.com/feed/aHR0cHM6Ly9mZWVkcy5ucHIub3JnLzUxMDMwNy9wb2RjYXN0LnhtbA/episode/NTU1MjY5ZTAtODM3Ni00NzAxLWEwNzYtZGJhNWU1NTg5MDI2?sa=X&ved=0CAUQkfYCahcKEwiQ5cqggL7tAhUAAAAAHQAAAAAQAg&fbclid=IwAR0NpB9eYsDdfonS3-mwbkzvp1KpU8LsvsSsBbDAzPdFMBSVyw7bLhwEGZ0


ಅಜರಾಮರ ಹೈಡ್ರಾ:


ಹೈಡ್ರಾ ಇದು ನೀರಿನಲ್ಲಿ ವಾಸಿಸುವ ಸಣ್ಣ ಪ್ರಾಣಿ. ಕೊಳವೆಯಾಕಾರದ, ಬರಿ ೧೦ ಮೀ.ಮೀ. ಉದ್ದ ಬೆಳೆಯುವ ಈ ಪ್ರಾಣಿ ಬಲು ಸೋಜಿಗವಾದದ್ದು. ಇದರ ದೇಹಕ್ಕೆ ವಯಸ್ಸೇ ಆಗುವುದಿಲ್ಲ. ಅಷ್ಟೇ ಎಲ್ಲ, ಇದರ ಬಾಲವನ್ನು ಕಡಿದು ಹಾಕಿದರೆ ಹೊಸ ಬಾಲ ಬೆಳೆಯುತ್ತದೆ. ತಲೆಯನ್ನು ಕಡಿದರೆ, ಹೊಸ ತಲೆ ಬೆಳೆಯುತ್ತದೆ. ತಲೆ, ಬಾಲ ಎರಡನ್ನು ತುಂಡು ಮಾಡಿದರೆ, ನಡುವಿನ ಭಾಗ ತಲೆ ಮತ್ತು ಬಾಲ ಎರಡನ್ನೂ ಬೆಳೆಸಿಕೊಳ್ಳುತ್ತದೆ. ಹೀಗೆ ಇದರ ದೇಹ ಸಂಪೂರ್ಣ ನವೀಕರಣಗೊಳ್ಳುತ್ತ ಸಾಗುವುದರಿಂದ, ಇದಕ್ಕೆ ವಯಸ್ಸಿನ ಸಮಸ್ಯೆ ಕಾಡದೆ, ಅದನ್ನು ಯಾವುದೇ ಮೀನು ಸಂಪೂರ್ಣ ನುಂಗಿ ಜೀರ್ಣಗೊಳಿಸಿ ಕೊಂಡರೆ ಮಾತ್ರ ಅದರ ಜೀವನ ಮುಗಿಯುತ್ತದೆ ಇಲ್ಲದಿದ್ದರೆ ಅಜರಾಮರ ಎನ್ನುವಂತೆ ಜೀವಿಸುತ್ತದೆ. 


ಅದು ಹೇಗೆ ಸಾಧ್ಯ ಎನ್ನುವ ನಿಟ್ಟಿನಲ್ಲಿ ಸಂಶೋಧನೆಗಳು ನಡೆಯುತ್ತಿವೆ. ಅವರು ಇದುವರೆಗೂ ಕಂಡುಕೊಂಡಿದ್ದು, ಹೈಡ್ರಾ ನಲ್ಲಿ ಇದು ಸಾಧ್ಯವಾಗುವಂತೆ ಮಾಡುವುದು ಅವುಗಳ 'stem cells ಜೀವಕೋಶಗಳು. ಇವು ಮನುಷ್ಯನಲ್ಲಿ ಭ್ರೂಣಾವಸ್ಥೆಯಲ್ಲಿ ಅಂಗಾಂಗಗಳು ರೂಪುಗೊಳ್ಳುವಲ್ಲಿ ಮಹತ್ತರ ಪಾತ್ರ ವಹಿಸಿ ನಂತರ ಆಯಾ ಅಂಗಾಂಗಗಳ ಜೀವಕೋಶಗಳಾಗಿ ಬದಲಾಗುತ್ತವೆ. ಆದರೆ ಹೈಡ್ರಾ ನಲ್ಲಿ  stem cells  ಹಾಗೆಯೇ ಉಳಿದುಕೊಂಡು ಅವಶ್ಯಕತೆಗೆ ತಕ್ಕಂತೆ ಹೊಸ ಅಂಗಾಂಗಗಳನ್ನು ಬೆಳೆಸುತ್ತವೆ. ಹಾಗೆಯೇ ಇಡೀ ದೇಹವನ್ನು ನವೀಕರಿಸುತ್ತವೆ. ಅಲ್ಲದೆ ಇಡೀ ಜೀವಕ್ಕೆ ಬೇಕಾದ ಮಾಹಿತಿಯೆಲ್ಲವೂ ಜೀನ್ ಗಳ ಮುಖಾಂತರ ಪ್ರತಿಯೊಂದು ಜೀವಕೋಶದಲ್ಲಿ ಉಳಿದುಕೊಂಡು, ಯಾವುದೇ ಭಾಗ ಹಾನಿಗೊಂಡರೆ ಅದನ್ನು ಮತ್ತೆ ಬೆಳೆಸುವ ಕಾರ್ಯ ಸಾಧ್ಯವಾಗುತ್ತದೆ. ಇದರ ಮೇಲಿನ ಸಂಶೋಧನೆಗಳು, ಇದನ್ನು ಮನುಷ್ಯ ಕುಲದ ಒಳಿತಿಗೆ ಉಪಯೋಗಿಸಬಹುದೇ ಎನ್ನುವ ಕಡೆಗೆ ಸಾಗಿವೆ.


ಮನುಷ್ಯನ ಅಜರಾಮರ ಬಯಕೆ ಒಳ್ಳೆಯದೋ, ಅಲ್ಲವೋ ಹೇಗೆ ಹೇಳುತ್ತೀರಿ? ಆದರೆ ದೇಹದ ಭಾಗ ಹಾನಿಗೊಳಗಾದರೆ, ಅದನ್ನು ಹೈಡ್ರಾದ ಹಾಗೆ ಮತ್ತೆ ಬೆಳೆಸಿಕೊಳ್ಳುವುದು ಸಾಧ್ಯ ಆದರೆ ಎಷ್ಟು ಚೆನ್ನ ಅಲ್ಲವೇ?


Link:

https://podcasts.google.com/feed/aHR0cHM6Ly9mZWVkcy5ucHIub3JnLzUxMDMwNy9wb2RjYXN0LnhtbA/episode/YzliM2ViZDQtN2NiNC00MjFmLThmMTYtZTk5NDI4NGMyMGNl?sa=X&ved=0CAUQkfYCahcKEwiYvrfhmb7tAhUAAAAAHQAAAAAQHQ