Tuesday, July 13, 2021

ಕವಿತೆ: ದುಡ್ಡು

ಜಿಪುಣರು ಉಳಿಸುತ್ತಾರೆ

ಉಡಾಫೆಯವರು ಉಡಾಯಿಸುತ್ತಾರೆ 


ಶ್ರೀಮಂತರು ಇರುವುದನ್ನು ಹೆಚ್ಚಿಸುತ್ತಾರೆ

ಜೂಜುಕೋರರು ಇರುವುದನ್ನು ಕಳೆಯುತ್ತಾರೆ


ಶ್ರಮಿಕರು ದುಡಿದು ಗಳಿಸುತ್ತಾರೆ

ಹೆಂಡತಿಯರು ಖರ್ಚು ಮಾಡುತ್ತಾರೆ


ಬ್ಯಾಂಕ್ ನವರು ಸಾಲ ಕೊಡುತ್ತಾರೆ

ಸರಕಾರದವರು ತೆರಿಗೆಯಲ್ಲಿ ಕಿತ್ತುಕೊಳ್ಳುತ್ತಾರೆ


ಸಾಯುವವರು ಬಿಟ್ಟು ಹೋಗುತ್ತಾರೆ

ಉತ್ತರಾಧಿಕಾರಿಗಳು ಅನುಭವಿಸುತ್ತಾರೆ


ಇಲ್ಲದವರು ದಾಹ ಪಡುತ್ತಾರೆ

ಇರುವವರು ಚಿಂತೆ ಮಾಡುತ್ತಾರೆ


ದಾನಿಗಳು ಹಂಚುತ್ತಾರೆ

ಕಳ್ಳರು ದೋಚುತ್ತಾರೆ


ಬೇಕೇ ಬೇಕು ಎನಿಸಿದವರು ಅಡ್ಡದಾರಿ ಹಿಡಿಯುತ್ತಾರೆ

ಸಾಕು ಸಾಕು ಎನಿಸಿದವರು ಸರಿದಾರಿ ಮೆಚ್ಚುತ್ತಾರೆ

Monday, July 12, 2021

ಅನುಭವ ಕಥನ: ಪ್ರತಿಫಲ

ವರ್ಷ: 2010

ಬೆಂಗಳೂರಿನಿಂದ ನಮ್ಮ ಊರಿಗೆ ಬಸ್ಸಲ್ಲಿ ಹೋದರೆ, ಬಳ್ಳಾರಿ ಬರುವುದು ಬೆಳಗಿನ ಜಾವ  ನಾಲ್ಕು ಗಂಟೆ ಹೊತ್ತಿಗೆ. ಬಸ್ ಸ್ಟಾಂಡ್ ನಲ್ಲಿ ಇಳಿದು ದೇಹ ಭಾಧೆ ತೀರಿಸಿಕೊಂಡು ಮತ್ತೆ ಬಸ್ ಹತ್ತಿ ನಿದ್ರೆಗೆ ಜಾರಿದರೆ, ಈ ಊರಿನ ಬಸ್ ಸ್ಟಾಂಡ್ ಮಾತ್ರ ನಮ್ಮ ಮನಸಿನಲ್ಲಿ ಉಳಿದು ಹೋಗುತ್ತದೆ. ಉಳಿದೆಲ್ಲ ವಿಷಯಗಳನ್ನು ಪೇಪರ್ ಓದಿಯೇ ತಿಳಿದುಕೊಳ್ಳಬೇಕು. ೨೦೦೮-೨೦೦೯ ರ ಹೊತ್ತಿನಲ್ಲಿ ಬಳ್ಳಾರಿ ಪ್ರತಿ ದಿನವೂ ಸುದ್ದಿಯಾಗುತಿತ್ತಲ್ಲ. ಅದರ ಹಿಂದೆ ಇದ್ದಿದ್ದು ಪ್ರಮುಖವಾಗಿ ಗಣಿಗಾರಿಕೆ ವಿಷಯ. ಕುತೂಹಲಕ್ಕಾಗಿ ಬಳ್ಳಾರಿಯ ಮಣ್ಣಿಗೇಕೆ ಬೇಡಿಕೆ ಎಂದು ಗಮನಿಸುತ್ತಾ ಹೋದೆ. ನಮ್ಮ ದೇಶದ ಬೇರೆಡೆ ಸಿಗುವ ಕಬ್ಬಿಣದ ಅದಿರು 40% Fe ಆದರೆ ಬಳ್ಳಾರಿಯಲ್ಲಿ ಸಿಗುವುದು ಉತ್ತಮ ಗುಣಮಟ್ಟದ  65% Fe ಅದಿರು. ಈ ಮಣ್ಣನ್ನು ಸಂಸ್ಕರಿಸಿದರೆ ಹೆಚ್ಚಿನ ಮಟ್ಟದ ಕಬ್ಬಿಣವನ್ನು ತಯಾರಿಸಬಹುದು. ಹಾಗಾಗಿ ಬಳ್ಳಾರಿಯ ಅದಿರಿಗೆ ಬೇಡಿಕೆ ಅಷ್ಟೇ ಅಲ್ಲ ಬೆಲೆ ಕೂಡ ಹೆಚ್ಚು. ಸರಿ ಇದನ್ನು ಕೊಂಡುಕೊಳ್ಳುವವರು ಯಾರು? ಪ್ರಮುಖವಾಗಿ ಚೀನಾ ದೇಶ. ಅವರೇಕೆ ಅಪಾರ ಪ್ರಮಾಣದಲ್ಲಿ ಅದಿರು ಕೊಳ್ಳುತ್ತಿದ್ದಾರೆ? ೨೦೦೮ ರಲ್ಲಿ ಆ ದೇಶದಲ್ಲಿ ನಡೆಯುವ ಒಲಿಂಪಿಕ್ಸ್ ಕ್ರೀಡಾ ಕೂಟಕ್ಕೆ ಅದ್ಭುತವೆನಿಸುವ ಸ್ಟೇಡಿಯಂ ಗಳನ್ನು ಕಟ್ಟುವ ಸಲುವಾಗಿ ಮತ್ತು ತಮ್ಮ ಪಟ್ಟಣಗಳಲ್ಲಿನ ಗಗನಚುಂಬಿ ಕಟ್ಟಡಗಳ ನಿರ್ಮಾಣಕ್ಕಾಗಿ. ಇಷ್ಟು ಮಾಹಿತಿಗಳು ದಿನ ಪತ್ರಿಕೆ, ಇಂಟರ್ನೆಟ್ ಮೂಲಕ ತಿಳಿದುಕೊಂಡದ್ದಾಯಿತು. ಆದರೆ ರಾಜಕೀಯ, ವ್ಯವಹಾರ ಮೀರಿ ಸಾಮಾನ್ಯ ಜನಜೀವನಕ್ಕೆ ಇದರ ಕೊಡುಗೆ ಏನು ಎಂದು ನಾನು ಖುದ್ದು ತಿಳಿದುಕೊಳ್ಳಬೇಕಿತ್ತು.


ನಾನು ೨೦೦೫ ರಿಂದ ಕಾರು ಓಡಿಸಲು ಕಲಿತುಕೊಂಡು, ಅವಶ್ಯಕತೆ ಬಿದ್ದಾಗ ನಮ್ಮೂರಿಗೆ ಕಾರಲ್ಲೇ ಹೋಗುವುದಕ್ಕೆ ಆರಂಭಿಸಿದ್ದೆ. ಬೆಂಗಳೂರಿನಿಂದ ತುಮಕೂರಿನವರೆಗೆ ಟ್ರಾಫಿಕ್ ದಟ್ಟಣೆಯಲ್ಲಿ ಕಾರು ಓಡಿಸುವುದು ಕಿರಿ ಕಿರಿ ಅನಿಸಿದರೆ, ಅಲ್ಲಿಂದ ಸಿರಾ, ಹಿರಿಯೂರಿನವರೆಗೆ ರಸ್ತೆ ಅಕ್ಕ-ಪಕ್ಕದ ತೆಂಗಿನ ತೋಟಗಳನ್ನು ನೋಡುತ್ತಾ ಉಲ್ಲಾಸದಾಯಕವಾಗಿ ಡ್ರೈವ್ ಮಾಡಬಹುದು. ಹೈವೇ ನಿಂದ ಬಲಕ್ಕೆ ತಿರುಗಿ ಚಳ್ಳಕೆರೆ ದಾಟಿದರೆ ಅಲ್ಲಿಂದ ಬಳ್ಳಾರಿ ಸುಮಾರು ನೂರು ಕಿ.ಮೀ. ದೂರ. ಆ ನೂರು ಕಿ.ಮೀ. ಉದ್ದದ ಪ್ರದೇಶದಲ್ಲಿ ಹೆಚ್ಚಿನ ಕೃಷಿ ಮತ್ತು ವಾಣಿಜ್ಯ ಚಟುವಟಿಕೆ ಕಾಣುವುದಿಲ್ಲವಾದ್ದರಿಂದ, ಮಾರ್ಗ ಮಧ್ಯದಲ್ಲಿ ಯಾವುದೇ ದೊಡ್ಡ ಪಟ್ಟಣಗಳಿಲ್ಲ. ಆದರೆ ಓಬಳಾಪುರಂ ದಾಟಿ ಬಳ್ಳಾರಿ ಇನ್ನು ೨೦ ಕಿ.ಮೀ. ಇರುವಾಗಲೇ, ಅದಿರು ಹೊತ್ತ ದೊಡ್ಡ ದೊಡ್ಡ ಟಿಪ್ಪರ್ ಗಳು ರಸ್ತೆಯನ್ನು ಆಕ್ರಮಿಸಿಕೊಳ್ಳುತ್ತವೆ. ಅವು ಧೊಳೆಬ್ಬಿಸುತ್ತ, ರಸ್ತೆಯನ್ನು ಕೆಂಪಾಗಿಸುತ್ತ ಬಳ್ಳಾರಿ ಪ್ರದೇಶದ ಗಣಿಗಾರಿಕೆಯ ಪ್ರಥಮ ಅನುಭವವನ್ನು ನಮಗೆ ಕೊಡುತ್ತವೆ.


ಒಂದು ಸಲ ಮುಖ್ಯ ರಸ್ತೆಯಲ್ಲಿ ಯಾವುದೊ ಕಾರಣಕ್ಕಾಗಿ ಸಂಚಾರ ನಿಲ್ಲಿಸಿ, ನಾವು ಸುತ್ತು ಹಾಕಿ ಹಳ್ಳಿಗಳ  ಮಾರ್ಗದ ಮೂಲಕ ಬಳ್ಳಾರಿ ತಲುಪವ ಅವಶ್ಯಕತೆ ಬಂದಿತು. ಕೆಂಪು ರಸ್ತೆಗಳ ಮೇಲೆ, ಕಡಿಮೆ ವೇಗದಲ್ಲಿ ಕಾರು ನಡೆಸತೊಡಗಿದೆ. ದೂರದಲ್ಲಿ ಕಾಣುತ್ತಿರುವ ಬೆಟ್ಟಗಳು ಕರಗುತ್ತಿರುವುದು ಯಾರಾದರೂ ಮೇಲ್ನೋಟಕ್ಕೆ ಗಮನಿಸಬಹುದಿತ್ತು. ಹಳ್ಳಿಗಳ ರಸ್ತೆ ಬದಿಯ ಮನೆಗಳು ಧೂಳು ಸುರಿದಂತಿದ್ದವು. ನೀರಿಲ್ಲದ ಊರುಗಳಲ್ಲಿ ಧೂಳು ತೊಳೆಯವರು ಯಾರು? ಬರಿ ಮನೆಗಳಲ್ಲ, ದಾರಿಯಲ್ಲಿ ಸಿಕ್ಕ ಎಮ್ಮೆಗಳು ಕೂಡ ಕಂದಾಗಿ ಕಾಣುತ್ತಿದ್ದವು. ರಸ್ತೆ ಬದಿಯ ತಟ್ಟೆ ಹೋಟೆಲು ಸಂಪೂರ್ಣ ಧೂಳುಮಯವಾಗಿತ್ತು. ಅಲ್ಲಿನ ಟೇಬಲ್ ಗಳು, ಪಾತ್ರೆಗಳು ಸಹ ಧೂಳುಮಯವಾಗಿದ್ದವು.  ಚಹಾ ಕುಡಿಯುವ ಒತ್ತಾಸೆಯನ್ನು ನಾನು ಅದುಮಿಕೊಂಡು ಸುಮ್ಮನಾದೆ. 


ಹಳ್ಳಿಗಳು ಶೋಚನೀಯ ಸ್ಥಿತಿಯಲ್ಲಿದ್ದರೆ, ಬಳ್ಳಾರಿ ನಗರಕ್ಕೆ ಶ್ರೀಮಂತಿಕೆಯ ವೈಭವ ಬಂದು ಬಿಟ್ಟಿತ್ತು. ಕೆಲವು ಅರಮನೆಯಂತಹ ಮನೆಗಳು, ರೋಡಿನ ಮೇಲೆ ಲಕ್ಸುರಿ ಕಾರುಗಳು, ರಸ್ತೆಗೆ ಅಲಂಕಾರಿಕ ದೀಪಗಳು ಹೀಗೆ ಸಂಪೂರ್ಣ ಊರು ಬದಲಾಗದಿದ್ದರೂ, ಆ ಊರಿನ ಕೆಲವರಾದರೂ ಗಣಿಗಾರಿಕೆಯ ಲಾಭ ಪಡೆದುಕೊಂಡಿದ್ದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಹಾಗೆಯೇ ಆ ಊರಲ್ಲಿ ಮೊದಲಿಗಿಂತ ಹೆಚ್ಚಿನ ಸಂಖ್ಯೆಯ ಆಸ್ಪತ್ರೆಗಳು ನನಗೆ ಕಾಣಿಸಲಾರಂಭಿಸಿದವು. ಅಲ್ಲಿ ಮೆಡಿಕಲ್ ಕಾಲೇಜು ಇದೆ ಎನ್ನುವ ಕಾರಣಕ್ಕೆ ಅಲ್ಲಿ ಡಾಕ್ಟರ್ ಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆಯೇ ಅಥವಾ ರೋಗಿಗಳು ಹೆಚ್ಚಾಗಿದ್ದರೆ ಎನ್ನುವ ಕಾರಣಕ್ಕೆ ಡಾಕ್ಟರ್ ಗಳು ಹೆಚ್ಚಾಗಿದ್ದರೆ ಎನ್ನುವುದು ತಿಳಿಯದೆ ಹೋಯಿತು. ಬಿಸಿಲ ನಾಡಿನಲ್ಲಿ ಆರೋಗ್ಯವಾಗಿದ್ದ ಜನರು ಗಣಿಗಾರಿಕೆಯ ಧೂಳಿಗೆ ಬಲಿಪಶುಗಳಾಗುತ್ತಿದ್ದಾರೆಯೇ ಎನ್ನುವ ಅನುಮಾನ ಕೂಡ ಮೂಡಿತು.


ವರ್ಷ: 2021

ಕೆಲವು ವರುಷಗಳು ಕಳೆದು ಹೋದವು. ರಾಜ್ಯ ರಾಜಕಾರಣವನ್ನೇ ಬದಲಿಸಿದ ಬಳ್ಳಾರಿಯ ಗಣಿಗಾರಿಕೆ ತನ್ನ ಸದ್ದು ಕಳೆದುಕೊಂಡಿತ್ತು. ಚೀನಾ ದೇಶ ತನ್ನ ಆರ್ಥಿಕ ಪ್ರಗತಿಯ ವೇಗವನ್ನು ಕಳೆದುಕೊಂಡಿತ್ತು. ಗಣಿಗಾರಿಕೆಗೆ ಹಲವಾರು ನಿರ್ಬಂಧಗಳನ್ನು ಸರ್ಕಾರ ಹೇರಿತ್ತು. ನಾನು ಮತ್ತೆ ಊರಿಗೆ ಹೊರಟಾಗ ಬಳ್ಳಾರಿಯ ಬಸ್ ಸ್ಟಾಂಡ್ ಪಕ್ಕದಲ್ಲಿ ಬಾಡಿಗೆ ಸಿಗದೇ ಸುಮ್ಮನೆ ನಿಂತ ನೂರಾರು ಜೆಸಿಬಿ ಮತ್ತು ಟಿಪ್ಪರ್ ಗಳು ಕಂಡವು. ಅವು ವಾಹನಗಳೆನಿಸದೆ ಗತ ಕಾಲ ವೈಭವದ ಪಳೆಯುಳಿಕೆ ತರಹ ಕಂಡವು. ಕೆಲ ದಿನಗಳ ನಂತರ, ನಾನು ಬೆಂಗಳೂರಿಗೆ ಹೊಸಪೇಟೆ ಮಾರ್ಗ ಮೂಲಕ ವಾಪಸ್ಸಾದೆ. ಗಣಿಗಾರಿಕೆ ಪ್ರದೇಶದಲ್ಲಿದ್ದ ಹಳ್ಳಿಗಳ ಮೂಲಕ ಸಾಗಿ ಬಂದೆ. ಅಲ್ಲಿ ರಸ್ತೆ ಪಕ್ಕದ ಒಂದು ಮನೆಯಲ್ಲಿ ಟಿವಿ ನೋಡುತ್ತಿರುವುದು ಕಾಣುತ್ತಿತ್ತು. ಆ ಧೂಳು ತುಂಬಿದ ಟಿವಿ ಯಲ್ಲಿ ಚೀನಾ ದೇಶದ ಸ್ಟೇಡಿಯಂ ಗಳನ್ನು ತೋರಿಸುತ್ತಿದ್ದರು. ತಮ್ಮ ಊರಿನ ಮಣ್ಣೇ ಅಲ್ಲಿ ಸ್ಟೇಡಿಯಂ ಆಗಿರುವ ಪರಿವೆ ಅಲ್ಲಿ ಟಿವಿ ನೋಡುತ್ತಿರುವವರಿಗೆ ತಿಳಿದಿದೆಯೋ ಇಲ್ಲವೋ ನಿರ್ಧರಿಸಲು ಆಗಲಿಲ್ಲ. ಅಷ್ಟಕ್ಕೂ ಮಣ್ಣನ್ನು ಕಳೆದುಕೊಂಡ ಅವರಿಗೆ ಸಿಕ್ಕ ಪ್ರತಿಫಲ ಏನು ಎಂದು ಕೂಡ ತಿಳಿಯದೆ ಹೋಯಿತು.

Sunday, July 11, 2021

ಕಥೆ: ಇದೂ ಒಂದು ಕನಸಲ್ಲವೇ?

ಸಂತೆಗೆ ಜನ ತರಕಾರಿ ಕೊಳ್ಳಲು ಹೋಗುತ್ತಾರೆ. ಆದರೆ ನೆಮ್ಮದಿ ಹುಡುಕಲು ಹೋಗುತ್ತಾರೆಯೇ? ಹಾಗೇಯೇ ಅನಿಸಿತ್ತು ನನಗೆ ಬೆಂಗಳೂರಿನ ಜೀವನ. ಬೆಂಗಳೂರು ಅಲ್ಲಿ ಬದುಕಿದ ಇಪ್ಪತ್ತು ವರುಷಗಳಲ್ಲಿ, ಹಣ, ಅನುಭವ ಎರಡನ್ನು ಯಥೇಚ್ಛವಾಗಿ ಕೊಟ್ಟಿತ್ತಾದರೂ, ಅಲ್ಲಿ ನೆಮ್ಮದಿ ಬಯಸುವ ಯಾರೂ ಬದುಕಲು ಸಾಧ್ಯವಿಲ್ಲ ಎನಿಸಿ, ೪೫ನೇ ವಯಸ್ಸಿನಲ್ಲಿ ಹುಟ್ಟೂರಿಗೆ ಮರಳಿ ಬಂದುಬಿಟ್ಟಿದ್ದೆ. ನಮ್ಮೂರು ಮಸ್ಕಿಯೂ ಸಾಕಷ್ಟು ಬದಲಾಗಿತ್ತಲ್ಲ. ಚಿಕ್ಕವರಾಗಿದ್ದಾಗ ಇಲ್ಲಿ ಎಲ್ಲವರು ಒಳ್ಳೆಯವರೇ ಆಗಿ ಕಾಣುತ್ತಿದ್ದರು. ಅದು ಚಿಕ್ಕ ವಯಸ್ಸಿನ ಮುಗ್ಧತೆಯ ಪ್ರಭಾವವೋ ಏನೋ? ಆದರೆ ಎದುರಿಗಿರುವ ವ್ಯಕ್ತಿಯ ಕಣ್ಣಾಚೆಗಿನ ಮನಸ್ಸನ್ನು ಓದಲು ಕಲಿತ ಮೇಲೆ, ಅಂತಹ ಅನಿಸಿಕೆ ಈಗೇನು ಉಳಿದಿಲ್ಲ. ಆದರೆ ಹಳೆ ಗೆಳೆಯರು, ಚಿಕ್ಕಂದಿನಲ್ಲಿ ಓಡಾಡಿದ ಜಾಗಗಳು, ಹಳೆಯ ನೆನಪುಗಳು ಇಲ್ಲಿ ಉಳಿದುಕೊಂಡಿವೆಯಾದ್ದರಿಂದ, ಬೆಂಗಳೂರಿನಷ್ಟು ಅನುಕೊಲಗಳು ಇಲ್ಲಿ ಇರಲು ಸಾಧ್ಯವಿಲ್ಲವಾದರೂ, ಒಂದು ಸಮಾಧಾನದ ಬದುಕು ಸಾಧ್ಯವಾಗಿತ್ತು. ಇಲ್ಲಿ ಬೇರೆಯ ದಿನಚರಿಗೆ ಹೊಂದಿಕೊಂಡು, ಹತ್ತಾರು ವರುಷಗಳು ಕಳೆದೇ ಹೋದವು. 


ಬೆಂಗಳೂರು ಮಾತ್ರ ಬೆಳೆಯಬೇಕೆ? ನಮ್ಮೂರು ಮಸ್ಕಿ ಹಿಂದೆ ಒಂದು ಕಾಲಕ್ಕೆ ಬೆಟ್ಟ ಹತ್ತಿ ಮಲ್ಲಿಕಾರ್ಜುನ ದೇವಸ್ಥಾನದಿಂದ ನೋಡಿದರೆ, ಒಂದು ಕಡೆ ಹಳ್ಳ, ಇನ್ನೊಂದು ಕಡೆ ಕಾಲುವೆ ಮತ್ತು ಮುಖ್ಯ ರಸ್ತೆ, ಈ ಮೂರು ಗಡಿಗಳ ನಡುವೆ ತ್ರಿಕೋನಾಕಾರದ ಪ್ರದೇಶ ಬಿಟ್ಟು ಬೆಳೆದಿರಲಿಲ್ಲ. ಆದರೆ ಇಂದಿಗೆ ಅದರ ರೂಪು ರೇಷೆಯೇ ಬೇರೆಯಾಗಿಬಿಟ್ಟಿದೆ. ಬೆಟ್ಟವನ್ನು ಕಾಲ್ನಡಿಗೆಯಲ್ಲಿ ಹತ್ತಿ ದೇವರ ದರ್ಶನ ಪಡೆಯುವರು ಕಡಿಮೆಯಾಗಿ, ಬೆಟ್ಟದ ಹಿಂಭಾಗದ ರಸ್ತೆಯ ಮೂಲಕ ಭುರ್ರೆಂದು ವಾಹನದಲ್ಲಿ ಬಂದು ಧಿಢೀರ್ ದರ್ಶನ ಪಡೆಯುವರು ಹೆಚಾಗಿದ್ದರಲ್ಲ. ಅದು ಬದಲಾದ ನಮ್ಮೂರಿನ ಸಮಾಜದ ಮನಸ್ಥಿತಿಯನ್ನು ಸಹ ತೋರಿಸುತ್ತದೆ. ಸಹನೆ ಇಲ್ಲದ ಜನರು ಬೆಂಗಳೂರು ಮಾತ್ರವಲ್ಲ, ಎಲ್ಲ ಕಡೆಯೂ ಇದ್ದಾರೆ ಎನ್ನುವ ಪಾಠವನ್ನು ಅದು ನನಗೆ ಕಲಿಸಿತ್ತು. ಆದರೆ ಪರಿಚಿತರ ಯೋಗಕ್ಷೇಮ ವಿಚಾರಿಸಿಕೊಳ್ಳಲು ಪುರುಸೊತ್ತಿಲ್ಲದ ಬೆಂಗಳೂರಿನ ಜನ ಸಾಗರಕ್ಕಿಂತ, ಯಾವುದೇ ಸಹಾಯ ಮಾಡದಿದ್ದರೂ, "ಆರಾಮಿದ್ದಿರಾ?" ಎಂದು ಕೇಳುವ ನಮ್ಮೂರ ಜನರೇ ಹಿತವೆನಿಸಿದ್ದರು.


ಏರು ಜವ್ವನದಲ್ಲಿ ನಾವು ವರ್ಷಕ್ಕೆ ಒಂದು ಸಲವೋ, ಇಲ್ಲವೇ ಎರಡು ವರುಷಕ್ಕೆ ಒಂದು ಸಲವೋ ವೈದ್ಯರನ್ನು ಭೇಟಿಯಾದರೆ, ವಯಸ್ಸಾಗುತ್ತ ದೈಹಿಕ ಶಕ್ತಿ ಕುಗ್ಗಿದಾಗ, ತಿಂಗಳಿಗೆ ಎರಡು ಸಲ ವೈದ್ಯರನ್ನು ನೋಡುವ ಅವಶ್ಯಕತೆ ಬಂದು ಬಿಡುತ್ತದೆ. ಇಂತಹುದೇ ಸಂದರ್ಭದಲ್ಲಿ ಹೆಚ್ಚು ಕಡಿಮೆ ನನ್ನದೇ ವಯಸ್ಸಿನ ವೈದ್ಯ ಒಬ್ಬರನ್ನು ನಾನು ನಾಲ್ಕಾರು ಸಲ ಭೇಟಿಯಾದ ಮೇಲೆ, ನಮ್ಮಿಬ್ಬರ ನಡುವೆ ಒಂದು ಸ್ನೇಹ, ಸಲಿಗೆ ಬೆಳೆದಿತ್ತು. ಅವರಿಗೆ ಅದೇನು ಅನ್ನಿಸಿತೋ ಒಂದು ದಿನ ರಾತ್ರಿ ಊಟಕ್ಕೆ ನನ್ನನ್ನು ತಮ್ಮ ಮನೆಗೆ ಆಹ್ವಾನಿಸಿದರು. ಸರಿ, ಹೋದರಾಯಿತು ಎಂದು ಅವರ ಮನೆ ಎಲ್ಲಿ ಎಂದು ವಿಚಾರಿಸಿಕೊಂಡೆ. ಕವಿತಾಳ ರಸ್ತೆಗೆ ಬಂದು, ಬಲಕ್ಕೆ ಒಂದು ಅಡ್ಡ ರಸ್ತೆಯಲ್ಲಿ ತಿರುಗಿಕೊಳ್ಳಿ. ಅವಶ್ಯಕತೆ ಬಿದ್ದಲ್ಲಿ ಫೋನ್ ಮಾಡಿ, ರಾತ್ರಿ ಎಂಟು ಗಂಟೆ ಹೊತ್ತಿಗೆಲ್ಲ ಬಂದು ಬಿಡಿ ಎಂದು ತಿಳಿಸಿದ್ದರು.


ರಾಯಚೂರಿಗೆ ಸಂಪರ್ಕ ಕಲ್ಪಿಸುವ ಆ ಕವಿತಾಳ ರಸ್ತೆಯಲ್ಲಿ ನಾನು ಓಡಾಡಿದ್ದರೂ, ಅಲ್ಲಿ ಬೆಳೆದಿದ್ದ ಊರಿನ ಪರಿಚಯ ಇರಲಿಲ್ಲ. ಚಿಕ್ಕವನಾಗಿದ್ದಾಗ ನಮ್ಮ ಮನೆ ಇದ್ದದ್ದು ಊರ ಮಧ್ಯದಲ್ಲಿ ಮತ್ತು ನಂತರದ ಜೀವನವೆಲ್ಲ ಕಳೆದದ್ದು ಸಿಂಧನೂರು ರಸ್ತೆಯ ಆಸು ಪಾಸಿಗೆ ಬೆಳೆದ ಪ್ರದೇಶದಲ್ಲಿ.  ಏಕಾದರೂ ಇರಲಿ, ಸ್ವಲ್ಪ ಬೇಗ ಹೊರಟರಾಯಿತು ಎಂದು ಸಂಜೆ ಕತ್ತಲಾಗುವ ಸಮಯಕ್ಕೆ ನನ್ನ ಕಾರನ್ನು ತೆಗೆದುಕೊಂಡು  ಕವಿತಾಳ ರಸ್ತೆಗೆ  ಹೊರಟೆ. ಅಡ್ಡ ರಸ್ತೆಯಲ್ಲಿ ಕಾರು ಸರಾಗವಾಗಿ ಓಡಾಡುವಷ್ಟು ರಸ್ತೆಗಳು ಅಗಲ ಇರದಿದ್ದರಿಂದ, ಕಾರನ್ನು ಒಂದು ಕಡೆ ನಿಲ್ಲಿಸಿ, ನಡೆಯುತ್ತಾ ಡಾಕ್ಟರ್ ರ ಮನೆ ಹುಡುಕಿದರೆ ಆಯಿತು ಎಂದು ನಿರ್ಧರಿಸಿದೆ. 


ಅಡ್ಡ ರಸ್ತೆಯ ಕೊನೆಯವರೆಗೂ ಹೋದರೂ, ಡಾಕ್ಟರ್ ಹೆಸರಿರುವ ಫಲಕ ಯಾರ ಮನೆ ಮುಂದೆಯೂ ಕಾಣಲಿಲ್ಲ. ಇಷ್ಟಕ್ಕೂ ಈ ಡಾಕ್ಟರ್ ಗೆ ಮನೆ ಕಟ್ಟಲು ಬೇರೆ ಯಾವ ಪ್ರದೇಶವು ಸಿಗಲಿಲ್ಲವೇ ಎಂದು ಕೂಡ ಅನಿಸಿತು.  ಅಲ್ಲಿ ಒಬ್ಬರನ್ನು ವಿಚಾರಿಸಿ ನೋಡಿದೆ. ಅಲ್ಲಿ ಯಾವ ಡಾಕ್ಟರ್ ಮನೆ ಇಲ್ಲ, ಆದರೆ ಹತ್ತಿರದ ಸ್ಮಶಾನದ ಸುತ್ತ ಮುತ್ತ ಕೂಡ ಸಾಕಷ್ಟು ಮನೆಗಳಾಗಿದ್ದು ಅಲ್ಲಿ ವಿಚಾರಿಸಿ ನೋಡಿ ಎಂದರು. ಅಲ್ಲಿಂದ ಇನ್ನೊಂದು ರಸ್ತೆಯಲ್ಲಿ ಹೊರಳಿದರೆ ಅದು ಸ್ಮಶಾನಕ್ಕೆ ಹೋಗುವ ಮಾರ್ಗವಾಗಿತ್ತು. ಅಲ್ಲಿಗೆ ಬಂದಾಗ, ಎಷ್ಟೋ ವರುಷಗಳು ಹಿಂದೆ  ತೀರಿಕೊಂಡ ನನ್ನ ದೊಡ್ಡಮ್ಮಳ ಅಂತ್ಯ ಸಂಸ್ಕಾರಕ್ಕೆಂದು ಆ ಅಡ್ಡ ರಸ್ತೆಯಲ್ಲಿ ಒಮ್ಮೆ ಓಡಾಡಿದ್ದು ನೆನೆಪಿಗೆ ಬಂತು. ನಾನು ಅವತ್ತು ಬಂದಿದ್ದು ಹಗಲಿನಲ್ಲಿ. ಆದರೆ ಇಂದು ಕತ್ತಲಾಗಿ ಸಂಪೂರ್ಣ ಗುರುತು ಸಿಗುತ್ತಿರಲಿಲ್ಲ. ಸ್ಮಶಾನದ ಪ್ರವೇಶದಲ್ಲಿ ಕಟ್ಟಿರುವ ಒಂದು ಕಮಾನಿನವರೆಗೆ ನಡೆದು ಬಂದರೂ, ದಾರಿಯಲ್ಲಿದ್ದ ಯಾವ ಮನೆಗಳು ನಾನು ಭೇಟಿಯಾಗಬೇಕಿರುವ ಡಾಕ್ಟರ್ ದ್ದು ಎಂದು ಅನಿಸಲಿಲ್ಲ. 


ಸ್ಮಶಾನದ ಅಂಚಿನಲ್ಲಿ ಒಬ್ಬ ಹೆಣ್ಣು ಮಗಳು ನನ್ನನ್ನು ನೋಡಿದರೂ ನೋಡದಂತೆ ಹೊರಟು ಹೋದಳು. ಅವಳ ಮುಖ ನಾನು ಚಿಕ್ಕವನಾಗಿದ್ದಾಗ ವರದಕ್ಷಿಣೆ ಕಿರುಕುಳ ತಾಳದೆ ವಿಷ ಕುಡಿದು ಸತ್ತ ಹೆಣ್ಣು ಮಗಳನ್ನು ಹೋಲುತ್ತಿತ್ತು. ಅಂದು ಊರಿನ ಜನರೆಲ್ಲಾ ಆ ಮನೆ ಮುಂದೆ ಸೇರಿದ್ದಲ್ಲ. ಅವಳ ದೇಹವನ್ನು ಬಿಳಿ ಬಟ್ಟೆಯಲ್ಲಿ ಸುತ್ತಿ ಮುಖ ಮಾತ್ರ ಕಾಣುವಂತೆ ಮಲಗಿಸಿಟ್ಟಿದ್ದರು. ಇಂದು ಕೂಡ ಅಲ್ಲಿರುವ ಮಬ್ಬೆಳಕಿನಲ್ಲಿ ಆ ಹೆಣ್ಣು ಮಗಳ ಮುಖ ನೀಲಿ ಮಿಶ್ರಿತ ಕಪ್ಪಾಗಿರುವುದು ಕಾಣುತ್ತಿತ್ತು. ಛೆ, ಕಾರನ್ನು ಹಿಂದೆಯೇ ಬಿಟ್ಟು ಬರಬಾರದಿತ್ತು, ಅದರ ಬೆಳಕು ಇಲ್ಲಿ ಸಹಾಯವಾಗುತ್ತಿತ್ತು ಎಂದು ಅನಿಸಿತು. ಪ್ಯಾಂಟಿನ ಜೇಬಿಗೆ ಕೈ ಹಾಕಿ ನೋಡಿದೆ. ಕಾರಿನ ಕೀ ಅಲ್ಲಿ ಭದ್ರವಾಗಿತ್ತು. ಮತ್ತೆ ಹಿಂದೆ ಹೋಗುವುದಕ್ಕಿಂತ ಮುನ್ನ ಯಾರನ್ನಾದರೂ ವಿಚಾರ ಮಾಡಿದರಾಯಿತು ಎಂದು ಸುತ್ತ ಮುತ್ತ ನೋಡಿದೆ. ಸ್ಮಶಾನ ದ್ವಾರ ಮಂಟಪದ ಕೆಳಗೆ ಕತ್ತಲಿನಲ್ಲಿ ಒಬ್ಬ ಅಜಾನುಬಾಹು ವ್ಯಕ್ತಿ ನಿಂತಿದ್ದ. ಆತನ ಆಕಾರ ಹೆದರಿಕೆ ತರುತ್ತಿದ್ದರೂ, ಧೈರ್ಯ ತೆಗೆದುಕೊಂಡು ಹತ್ತಿರ ಹೋಗಿ,


"ಇಲ್ಲಿ ಹತ್ತಿರದಲ್ಲಿ ಡಾಕ್ಟರ್ ಮನೆ ಇದೆಯೇ?" ಎಂದು ಕೇಳಿದೆ. 


ತನಗೆ ಯಾವ ಡಾಕ್ಟರ್ ಗೊತ್ತಿಲ್ಲ ಎಂದು ಹೇಳಿದ ಅವನು ತಾನು ನಿಂತ ಆ ಜಾಗದಿಂದಾಚೆ ಹೋದವರನ್ನು ಮತ್ತೆ ಆಚೆಗೆ ಬಿಡುವುದಿಲ್ಲ ಎಂದು ಧೃಢ ನಿರ್ಧಾರದ ಧ್ವನಿಯಲ್ಲಿ ಹೇಳಿದ. ಇವನು ಸ್ಮಶಾನದ ಕಾವಲುಗಾರನೋ, ಇಲ್ಲವೇ ನಿಜ ಯಮಧರ್ಮನೊ, ಮತ್ತು ಅವನು ನನಗೇಕೆ ಹಾಗೆ ಹೇಳಿದ ಎಂದು ಒಂದು ಕ್ಷಣ ಕಸಿವಿಸಿ ಆಯಿತು. ಕತ್ತಲು ಮನಸಿಗೂ ಕವಿದಂತಾಗಿತ್ತು. 


"ಇದೇನು ನಿಜವೋ, ಕನಸೋ?" ಎಂದು ನನಗೆ ನಾನೇ ಕೇಳಿಕೊಂಡೆ.


ಆ ವ್ಯಕ್ತಿ ನನ್ನನ್ನೇ ದಿಟ್ಟಿಸಿ ನೋಡುತ್ತಾ, ನಿನಗಿನ್ನೂ ಅರ್ಥವಾಗಿಲ್ಲವೇ ಎನ್ನುವ ಭಾವದಲ್ಲಿ ಹೇಳಿದ "ಜೀವನ ಕೂಡ ಒಂದು ಕನಸಲ್ಲವೇ?"

Friday, July 9, 2021

ಎನಗೂ ಆಣೆ, ನಿನಗೂ ಆಣೆ

ಯಾವುದೇ ಮನುಷ್ಯ-ಮನುಷ್ಯ ಸಂಬಂಧಗಳು ಗಟ್ಟಿಯಾಗಿ ನಿಲ್ಲಬೇಕೆಂದರೆ, ಅದರಲ್ಲಿ ಇಬ್ಬರ ಕೊಡುಗೆಯು ಸರಿ ಸಮನಾಗಿ ಇರಬೇಕು ಅಲ್ಲವೇ? ಒಮ್ಮುಖವಾದ ಸಂಬಂಧ, ಸಂಬಂಧ ಎನಿಸಿಕೊಳ್ಳದು. ಅದು ಬರೀ ಬಂಧವಾಗುತ್ತದೆ. ಇಲ್ಲದಿದ್ದರೆ ಕರ್ತವ್ಯವೋ, ಕಟ್ಟುಪಾಡೋ ಎನಿಸಿಕೊಳ್ಳಬಹುದು ಅಷ್ಟೇ. ಗಮನಿಸಿ ನೋಡಿದರೆ ನಮ್ಮ ಸಮಾಜದಲ್ಲಿನ ಎಷ್ಟೋ ಸಂಬಂಧಗಳು, ತಂದೆ-ಮಗ, ಅಣ್ಣ-ತಮ್ಮ, ಗಂಡ-ಹೆಂಡತಿ ಇವುಗಳೆಲ್ಲ ಸಂಬಂಧಗಳಾಗದೆ ಕೇವಲ ಬಂಧಗಳಾಗಿ ಉಳಿದುಬಿಡುತ್ತವೆ. ಏಕೆಂದರೆ ಇವುಗಳಲ್ಲಿ ಸರಿ ಸಮಾನ ಕೊಡುಗೆಯ ಕೊರತೆ. ಅಥವಾ ಅವರಿಬ್ಬರಲ್ಲಿ ಒಬ್ಬರಿಗೆ ತಾನು ಹೆಚ್ಚು ಎಂದು ಶೋಷಣೆಗೆ ಇಳಿಯುವ ಹುಚ್ಚು. ಇಲ್ಲವೇ ಇನ್ನೊಬ್ಬರ ನೋವಿಗೆ ಸ್ಪಂದಿಸದ ಅಥವಾ ಖುಷಿ ಪಡುವ ಪ್ರವೃತ್ತಿ.


ತನಗೆ ಮರ್ಯಾದೆ ಇಲ್ಲ ಎಂದುಕೊಳ್ಳುವ ತಂದೆ, ತನ್ನಿಷ್ಟದಂತೆ ನಡೆಯಲು ಬಿಡುತ್ತಿಲ್ಲ ಎನ್ನುವ ಮಗ, ಇವಳ ಜೊತೆ ಹೇಗೆ ಬದುಕಬೇಕೋ ಎಂದುಕೊಳ್ಳುವ ಗಂಡ, ತನ್ನನ್ನು ಸರಿಯಾಗಿ ಬಾಳಿಸುತ್ತಿಲ್ಲ ಎಂದು ದೂರುವ ಹೆಂಡತಿ, ಇವರೆಲ್ಲರೂ ತಮ್ಮ ಸಂಬಂಧಗಳಲ್ಲಿ ಅಸಮಾನತೆಯನ್ನು ಹುಡುಕಿ ತರುತ್ತಾರೆ. ಆಮೇಲೆ ಶುರುವಾಗುವುದು ಅವರವರ ಕರ್ತವ್ಯಗಳ ಪಾಲನೆ ಬಗ್ಗೆ ಆರೋಪ, ಪ್ರತ್ಯಾರೋಪ. ಅಲ್ಲಿಗೆ ಸಂಬಂಧ ಸತ್ತು ಹೋದ ನಂತರ ಅವರ ನಡುವೆ ಉಳಿಯುವುದು ಸಾಮಾಜಿಕ ಕಟ್ಟು ಪಾಡಿನ ಪಾಲನೆ ಮಾತ್ರ.


ಅವರೆಲ್ಲರೂ ತಮ್ಮ ದೋಷಾರೋಪಣೆಗೆ ಮುಂಚೆ ಆ ಸಂಬಂಧಕ್ಕೆ, ಅದನ್ನು ಸಿಹಿಗೊಳಿಸುವದಕ್ಕೆ, ಗಟ್ಟಿಯಾಗಿಸುವುದಕ್ಕೆ, ಕರ್ತವ್ಯ ಪಾಲನೆಯನ್ನು ಮೀರಿ ತಮ್ಮ ಕೊಡುಗೆಯ ಬಗ್ಗೆ ಸ್ಪಷ್ಟತೆ ಹೊಂದಿದ್ದರೆ, ಆ ಸಂಬಂಧ ಪಡೆದುಕೊಳ್ಳುವ ತಿರುವು ಬೇರೆ. ಸಂಬಂಧ ಅನ್ನುವುದು ವ್ಯಾಪಾರ ಅಲ್ಲದೆ ಇರಬಹುದು. ಆದರೆ ನಾವು ಇನ್ನೊಬ್ಬರಿಗೆ ಆಣೆ, ಭಾಷೆ ತೆಗೆದುಕೊಳ್ಳುವ ಮುನ್ನ ನಾವು ಯಾವ ಆಣೆಗೆ ಸಿದ್ಧರಿದ್ದೇವೆ ಎನ್ನುವುದು ತಿಳಿಸಬೇಕೆಲ್ಲವೇ? ಪುರಂದರ ದಾಸರ ಹಾಡು ಕೇಳಿದ್ದೀರಾ?


"ತನುಮನಧನದಲಿ ವಂಚಕನಾದರೆ ಎನಗೆ ಆಣೆ

ರಂಗಾ ಮನಸು ನಿನ್ನಲಿ ನಿಲಿಸದಿದ್ದರೆ ನಿನಗೆ ಆಣೆ


ಕಾಕು ಮನುಜರ ಸಂಗವ ಮಾಡಿದರೆ ಎನಗೆ ಆಣೆ

ರಂಗಾ ಲೌಕಿಕವ ಬಿಡಿಸದಿದ್ದರೆ ನಿನಗೆ ಆಣೆ


ಹರಿ ನಿನ್ನಾಶ್ರಾಯ ಮಾಡದಿದ್ದರೆ ಎನಗೆ ಆಣೆ

ರಂಗಾ ಪುರಂದರವಿಠಲ ನೀನೊಲಿಯದಿದ್ದರೆ ನಿನಗೆ ಆಣೆ


ಎನಗೆ ಆಣೆ ನಿನಗೆ ಆಣೆ

ಎನಗೂ ನಿನಗೂ ಇಬ್ಬರಿಗೂ ಭಕ್ತರಾಣೆ"


ಪುರಂದರ ದಾಸರಿಗೆ ತಮ್ಮ ಇಷ್ಟ ದೈವದ ಮೇಲೆ ಆಣೆ ಹಾಕುವ ಆತ್ಮಸ್ಥೈರ್ಯ ತಂದುಕೊಟ್ಟಿದ್ದು ಅವರು ತಮಗೆ ತಾವು ಹಾಕಿಕೊಳ್ಳುವ ಆಣೆಯಿಂದ. ಅವರ ಸಂಬಂಧ ಮನುಷ್ಯ-ದೇವರ ನಡುವಿನದಾದರೂ ಅದು ಒಂದು ಗಟ್ಟಿ ತಳಹದಿಯ ಮೇಲಿತ್ತು. ಹಾಕಿಕೊಂಡ ಆಣೆಗಳು ಸಂಬಂಧಗಳ ಮೇಲಿನ ನಂಬುಗೆಯನ್ನು ಹೆಚ್ಚಿಸಿದವು. ಆ ಸಂಬಂಧದ ಮಾಧುರ್ಯ, ಕಂಪು ಅವರಿಬ್ಬರಿಗೆ ಮೀಸಲಾಗದೆ ಇತರರಿಗೂ ಪಸರಿಸಿ ಪ್ರಭಾವಗೊಳಿಸಿತು. ನಮಗೆ ದಾಸರಿಗಿದ್ದ ಶೃದ್ಧೆ ಇಲ್ಲ. ಕಾಯಿ ಒಡೆದು, ಕೋಟಿ ಕೇಳುವ ನಮಗೆ ದೇವರು ಒಲಿಯುವುದಾದರೂ ಹೇಗೆ?


ನಾವು ಬದುಕುವ ರೀತಿ ನೋಡಿ. ನಮಗೆ ನಾವು ಯಾವ ಆಣೆಗೂ ತಯ್ಯಾರಿಲ್ಲ. ಅದೆಲ್ಲ ಮಾಡಬೇಕಾದ್ದು ಇನ್ನೊಬ್ಬರು ಎನ್ನುವ ಮನೋಭಾವದವರು. ಅದಕ್ಕೆ ನಮ್ಮ ಸಂಬಂಧಗಳಲ್ಲಿ ಕಂಪಿಲ್ಲ. ನಾವು ದಾಸರ ಪದಗಳನ್ನು ಕೇಳುತ್ತೇವೆ. ಹಾಗೆಯೇ ಮುಂದಿನ ಜಗಳಕ್ಕೆ ಸಿದ್ಧರಾಗುತ್ತೇವೆ. ನೆಮ್ಮದಿಯಿಂದ ಬದುಕಲು ಆಗದೆ, ಕರ್ತವ್ಯ ನಮ್ಮನ್ನು ಸಾಯಲು ಬಿಡದೆ, ಮುಕ್ತಿಯ ಆಸೆ ನಾವು ಬಿಡದೆ, ಲೌಕಿಕ ನಮ್ಮನ್ನು ಬಿಡದೆ ಚಡಪಡಿಸುವ ಹಕ್ಕಿಗಳಾಗಿ ಹೊತ್ತುಗಳೆಯುತ್ತೇವೆ.

Sunday, July 4, 2021

ಇಲ್ಲಿ ಹಿಟ್ಲರ್ ನು ಇದ್ದ, ಮದರ್ ತೇರೇಸಾ ಳೂ ಇದ್ದಳು

ಪ್ರಕೃತಿ ಎಲ್ಲರನ್ನು ಹೇಗೆ ಹುಟ್ಟು ಸ್ವಾರ್ಥಿಗಳನ್ನಾಗಿಸುತ್ತದೆ ಎಂದು ಕಳೆದ ಲೇಖನದಲ್ಲಿ ಗಮನಿಸಿದ್ದೆವು. ಆದರೆ ಕೆಲವೇ ಕೆಲವರಿಗಾದರೂ ಸ್ವಾರ್ಥ ಭಾವದಿಂದ ಹೊರ ಬಂದು ಮಾನವ ಕಲ್ಯಾಣ ಕಾರ್ಯಗಳನ್ನು ಮಾಡಲು ಸಾಧ್ಯವಾಗುತ್ತದಲ್ಲ. ಇಲ್ಲದಿದ್ದರೆ ಎಷ್ಟೊಂದು ಗುಡಿ, ಮಠಗಳು, ಅನಾಥಾಶ್ರಮಗಳು, ಮನುಷ್ಯ ಕಲ್ಯಾಣಕ್ಕೆಂದೇ ಮೀಸಲಾಗಿರುವ ಸಂಘ-ಸಂಸ್ಥೆಗಳು ಹುಟ್ಟಿಕೊಳ್ಳಲು ಸಾಧ್ಯವಿತ್ತೇ? ಮನುಷ್ಯನ ಆ ಇನ್ನೊಂದು ಪ್ರಕ್ರಿಯೆ ಬಗ್ಗೆ ಗಮನ ಹರಿಸೋಣ.

 

ವಿಪರೀತ ನೋವನ್ನುಂಡ ಮನುಷ್ಯನಲ್ಲಿ, ಇತರೆ ಜೀವಿಗಳಲ್ಲಿ ಆ ನೋವನ್ನು ಗುರುತಿಸುವುದು ಮತ್ತು ಮತ್ತು ಅವರ ನೋವಿಗೆ ಮಿಡಿಯುವುದು ಸಾಧ್ಯವಾಗುತ್ತದೆ. ಸಾಮ್ರಾಟ್ ಅಶೋಕನಿಗೆ ಸಾಧ್ಯವಾಗಿದ್ದು ಅದೇ. ಯುದ್ಧ ಮಾಡಿ ಸಾಮ್ರಾಜ್ಯ ಗೆಲ್ಲುವ ಆಕಾಂಕ್ಷೆಯನ್ನು ಅಲ್ಲಿಗೆ ಕೊನೆಗೊಳಿಸಿ, ಪ್ರಜೆಗಳನ್ನು ಮಕ್ಕಳ ಹಾಗೆ ಗಮನಿಸಲು ಆರಂಭ ಮಾಡಿದಾಗ ಅವನು ಗೆದ್ದದ್ದು ಅವನ ಮನದಲ್ಲಿನ ಸ್ವಾರ್ಥ ಭಾವವನ್ನು. ಇಂದಿಗೂ ಇತಿಹಾಸ ಅವನನ್ನು ದಾಖಲಿಸುವುದು ಒಬ್ಬ ಕರುಣಾಮಯಿ ಚಕ್ರವರ್ತಿಯನ್ನಾಗಿ.

 

ಸಕಲ ಜೀವಾತ್ಮಗಳಲ್ಲಿರುವ ಶಕ್ತಿ ಒಂದೇ. ನಾವು ಮತ್ತು ಈ ಜಗತ್ತು ಬೇರೆ ಬೇರೆಯಲ್ಲ ಎಂದು ತಿಳಿಸಿದ್ದು ಪ್ರಾಚೀನ ಕಾಲದಲ್ಲಿ ರೂಪುಗೊಂಡ ಉಪನಿಷತ್ತುಗಳು - ಐತ್ತರಿಯ ಉಪನಿಷತ್ತು (ಪ್ರಜ್ಞೆಯೇ ಬ್ರಹ್ಮ), ಬೃಹದಾರಣ್ಯಕ ಉಪನಿಷತ್ತು (ಅಹಂ ಬ್ರಹ್ಮಾಸ್ಮಿ), ಚಂದೋಗ್ಯ ಉಪನಿಷತ್ತು (ತತ್ವಂ ಅಸಿ), ಮಾಂಡೂಕ್ಯ ಉಪನಿಷತ್ತು (ಆತ್ಮನೇ ಬ್ರಹ್ಮ). ಇವುಗಳ ಮೇಲೆ ರೂಪುಗೊಂಡಿದ್ದು ಅದ್ವೈತ ಶಾಸ್ತ್ರ. ಧರ್ಮ, ಅರ್ಥ, ಕಾಮ, ಮೋಕ್ಷ ಎನ್ನುವ ಮನುಷ್ಯ ಜೀವನದ ನಾಲ್ಕು ಧ್ಯೇಯಗಳನ್ನು ಅದು ಸಾರಿ ಹೇಳಿತು. ಆದಿ ಶಂಕರ ಎನ್ನುವ ಅಪರೂಪದ ವ್ಯಕ್ತಿ ಅದನ್ನು ಜನ ಸಾಮಾನ್ಯರಿಗೆ ಸರಳವಾಗಿ ತಿಳಿಸಿ ಹೋದ. ಆತನ ಮುಂಚಿನ ಮತ್ತು ನಂತರದ ಅನೇಕರು (ಬುದ್ಧ, ಮಹಾವೀರ, ಬಸವ, ಸ್ವಾಮಿ ವಿವೇಕಾನಂದ) ಮನುಷ್ಯನಿಗೆ ತನ್ನ ಸ್ವಾರ್ಥದಿಂದ ಹೊರ ಬಂದು ಜೀವಿಸಲು ಪ್ರೇರೇಪಣೆ ನೀಡಿದರು.

 

ಇಂದಿಗೂ ಪ್ರತಿ ಊರಿನಲ್ಲಿ, ನಮ್ಮ ನಿಮ್ಮೆಲ್ಲರ ನಡುವೆ, ಪ್ರಾಮಾಣಿಕತೆಯಿಂದ ಸಮಾಜ ಸೇವೆ ಮಾಡುತ್ತಿರುವರು ಇದ್ದಾರಲ್ಲ. ಅವರನ್ನು ಆಳುತ್ತಿರುವ ಭಾವ ಸ್ವಾರ್ಥವೋ, ನಿಸ್ವಾರ್ಥವೋ ಎಂದು ಗಮನಿಸಿ ನೋಡಿ. ಅವರಿಗೆ ಆಸ್ತಿ-ಅಹಂಕಾರದ ಪ್ರತಿಷ್ಠೆ ಏಕಿಲ್ಲ ಎಂದು ವಿಚಾರ ಮಾಡಿ ನೋಡಿ. ಗಂಗಾ ನದಿ ತಟದಲ್ಲಿ ಎಷ್ಟೋ ಸಾಧು-ಸಂತರು ವಾಸ ಮಾಡಿಕೊಂಡಿರುತ್ತಾರಲ್ಲ. ಅವರ ಹೆಸರೇನು ಎಂದು ಕೇಳಿ ನೋಡಿ. 'ಬಾಬಾ ಮುರ್ದಾ ಹೋತಾ ಹೈ' ಎನ್ನುವ ಉತ್ತರ ಬರುತ್ತದೆ. ತಮ್ಮ ಪೂರ್ವಾಶ್ರಮದ ಹೆಸರು, ಗುರುತುಗಳನ್ನು ಬಿಟ್ಟು ಅವರು ಹುಡುಕುತ್ತಿರುವುದು ಏನನ್ನು? ನಾವು ಮಾತ್ರ ನಮ್ಮ ಹೆಸರು, ಪ್ರತಿಷ್ಠೆಗೆ ಗಂಟು ಬಿದ್ದಿರುವುದು ಏಕೆ?

 

ಪ್ರಕೃತಿ ಎಲ್ಲರನ್ನು ಸ್ವಾರ್ಥಿಯಾಗಿಯೇ ಹುಟ್ಟಿಸಿತು. ಹಾಗೆಯೆ ವಿಚಾರ ಮಾಡುವ ಶಕ್ತಿ, ವಿವೇಕವನ್ನು ಕೂಡ ಕೊಟ್ಟಿತು. ಸ್ವಾರ್ಥವನ್ನೇ ಆಯುಧವನ್ನಾಗಿಸಿಕೊಂಡ ಹಿಟ್ಲರ್ ತನ್ನ ಹಿತಕ್ಕಾಗಿ ಲಕ್ಷಾಂತರ ಜನರ ಸಾವಿಗೆ ಕಾರಣನಾದರೆ, ಮದರ್ ತೇರೇಸಾ ನೊಂದ ಜನರ ಸೇವೆಯಲ್ಲಿ ತನ್ನ ಜೀವನದ ಬೆಳಕು ಕಂಡಳು. ಒಬ್ಬ ಸ್ವಾರ್ಥ ಕೂಪದಿಂದ ಹೊರ ಬರದೇ ಹೋದರೆ, ಇನ್ನೊಬ್ಬಳಿಗೆ ಅದನ್ನು ಮೆಟ್ಟಿ ನಿಲ್ಲಲು ಸಾಧ್ಯವಾಯಿತು.

 

ಪ್ರಕೃತಿ ನಮ್ಮಲ್ಲಿ ಅಸಮಾನತೆಯನ್ನು ಸೃಷ್ಟಿಸುತ್ತದೆ. ಒಬ್ಬರ ಮೇಲೆ ಇನ್ನೊಬ್ಬರು ಪೈಪೋಟಿ ಮಾಡುವಂತೆ ಮಾಡುತ್ತದೆ. ಆದರೆ ಆ ಅಸಮಾನತೆಯ ಅಂತರ ಕಡಿಮೆ ಮಾಡಲು ಪ್ರಯತ್ನಿಸುವ ಕೆಲವರಾದರೂ ಇದ್ದಾರಲ್ಲ. ಅವರಿಂದ ನಮ್ಮ ಬದುಕು ಸ್ವಲ್ಪ ಮಟ್ಟಿಗಾದರೂ ಸಹನೀಯವಾಗಿದೆ. ನಿಸ್ವಾರ್ಥ ಸೇವೆಗೆ ನಿಂತವರು ಮುಕ್ತಿ ಪಥದತ್ತ ಹೆಜ್ಜೆ ಹಾಕಿದರೆ, ಉಳಿದವರು ಕರ್ಮದ ತಿರುಗಣಿಯಲ್ಲೇ ಸುತ್ತುತ್ತಾರೆ. ಪ್ರಕೃತಿಯನ್ನು ಗೆದ್ದವರು, ಪ್ರಕೃತಿಯಲ್ಲಿ ಲೀನವಾಗುತ್ತಾರೆ. ಉಳಿದವರು ಪ್ರಕೃತಿಯ ನಿಯಮಗಳಿಗೆ ಅನುಸಾರವಾಗಿ ಬದುಕುತ್ತಾರೆ.