Sunday, September 26, 2021

ಬದುಕು ಕರೆದೊಯ್ದ ಕಡೆಗೆ ಹೋದೆ ನಾನು

 ಹಿಂದಿಯ 'ಹಮ್ ದೋನೋ' ಚಿತ್ರದ ಒಂದು ಹಾಡು 'ಮೈ ಜಿಂದಗಿ ಕಾ ಸಾಥ್ ನಿಭಾತಾ ಚಲಾ ಗಯಾ'. ಈ ಹಾಡನ್ನು ಒಬ್ಬ ಉಪೇಕ್ಷೆಯ ವ್ಯಕ್ತಿ ಹಾಡುವ ಹಾಡಿನಂತೆ ಚಿತ್ರೀಕರಿಸಲಾಗಿದೆ. ಆದರೆ ಲೌಕಿಕದಲ್ಲಿ ಎಲ್ಲವನ್ನು ನಿರ್ಲಕ್ಷಿಸುವುದನ್ನೇ ಅಧ್ಯಾತ್ಮ ಕೂಡ ಹೇಳಿಕೊಡುತ್ತದೆ. ಆದ್ದರಿಂದ ಅದನ್ನು ಯಾವ ತರಹ ಬೇಕಾದರೂ ಸ್ವೀಕರಿಸಬಹುದು. ಸಾಹಿರ್ ಲುಧಿಯಾನ್ವಿ ರಚಿಸಿದ, ಮೊಹಮ್ಮದ್ ರಫಿ ಹಾಡಿದ ಈ ಹಾಡು ಇಷ್ಟವಾಯಿತು.  


https://www.youtube.com/watch?v=ZwDvIZA-H9A


ಎಲ್ಲ ಹಾಡುಗಳನ್ನು ಯಥಾವತ್ತಾಗಿ ಭಾಷಾಂತರ ಮಾಡಲು ಎಲ್ಲಿ ಸಾಧ್ಯ? ಆದರೆ ಅರ್ಥವನ್ನು ಕಟ್ಟಿಕೊಡುವ ಪ್ರಯತ್ನ ಇಲ್ಲಿದೆ.


ಬದುಕು ಕರೆದೊಯ್ದ ಕಡೆಗೆ ಹೋದೆ ನಾನು

ನನ್ನೆಲ್ಲ ಚಿಂತೆಗಳನ್ನು ಹೊಗೆಯ ಹಾಗೆ ತೇಲಿ ಬಿಟ್ಟೆ


ವಿನಾಶದ ಬಗ್ಗೆ ಕೊರಗುವುದಲ್ಲಿ ಏನಿದೆ ಅರ್ಥ?

ಅದಕ್ಕೆ ನನ್ನ ವಿನಾಶವನ್ನೇ ಮೆರೆಸತೊಡಗಿದೆ


ಸಿಕ್ಕಿದ್ದೇ ನನ್ನ ದೈವ ಎಂದುಕೊಂಡೆ

ಕಳೆದು ಹೋದದ್ದನ್ನು ನಾನು ಮರೆತುಬಿಟ್ಟೆ


ಸುಖ-ದುಃಖದ ನಡುವೆ ಭೇದವನ್ನೇ ಕಾಣದ

ಸ್ಥಿತಿಗೆ ಹೃದಯವನ್ನು ತಳ್ಳಿಕೊಂಡು ಬಂದೆ


ಬದುಕು ಕರೆದೊಯ್ದ ಕಡೆಗೆ ಹೋದೆ ನಾನು

ನನ್ನೆಲ್ಲ ಚಿಂತೆಗಳನ್ನು ಹೊಗೆಯ ಹಾಗೆ ತೇಲಿ ಬಿಟ್ಟೆ

Saturday, September 25, 2021

ಮುಸ್ಸಲೋನಿ ಎಂಬ ಸರ್ವಾಧಿಕಾರಿ - ಭಾಗ ೨

(ಫ್ರಾಂಕ್ ಡಿಕೊಟ್ಟೆರ್ ಬರೆದ 'How to be a dictator' ಪುಸ್ತಕದ 'ಮುಸ್ಸಲೋನಿ' ಅಧ್ಯಾಯದ ಆಯ್ದ ಭಾಗದ ಭಾವಾನುವಾದ)


೧೯೩೦ ರ ಹೊತ್ತಿಗೆ ಜನಪ್ರಿಯತೆಯ ತುತ್ತ ತುದಿಯಲ್ಲಿದ್ದ ಮುಸ್ಸಲೋನಿ. ಅವನು ಹೋದ ಕಡೆಯೆಲ್ಲ ಜನ ಸಾಗರ ಮತ್ತು ಚಪ್ಪಾಳೆಗಳ ಸುರಿಮಳೆ. ಅಲ್ಲೊಬ್ಬರು, ಇಲ್ಲೊಬ್ಬರು ಮುಸ್ಸಲೋನಿ ಕಟ್ಟಿದ ಪಕ್ಷವನ್ನು ಟೀಕೆ, ವಿಮರ್ಶೆ ಮಾಡುವವರು ಇದ್ದರೂ ಮುಸ್ಸಲೋನಿಯನ್ನು ಟೀಕೆ ಮಾಡುವವರು ಮಾತ್ರ ಸಮಾಜದ ಹೊರ ನೋಟಕ್ಕೆ ಕಾಣುತ್ತಿರಲಿಲ್ಲ. ಏಕೆಂದರೆ ಮುಸ್ಸಲೋನಿ ಅವರಿಗೆಲ್ಲ ಆರಾಧ್ಯ ದೈವ ಆಗಿಬಿಟ್ಟಿದ್ದ. ಅವನಲ್ಲಿ ಏನು ತಪ್ಪು ಹುಡುಕುವುದು?

ಮುಸ್ಸಲೋನಿ ಮತ್ತು ಅವನ ಪಕ್ಷ ಬಿಟ್ಟರೆ ಜನರಿಗೆ ಬೇರೆ ಆಯ್ಕೆಯೇ ಇರಲಿಲ್ಲ. ಮೊದಲಿಗೆ ಮಂತ್ರಮುಗ್ಧರಾಗಿ ಮುಸ್ಸಲೋನಿಯ ಭಾಷಣ ಕೇಳುತ್ತಿದ್ದ ಜನರಿಗೆ ಕ್ರಮೇಣ ಮುಸ್ಸಲೋನಿಯ ನಿಜಮುಖದ ಗೋಚರವಾಗತೊಡಗಿತು. ಅವನೊಬ್ಬ ಅದ್ಭುತ ನಟ ಮತ್ತು ಅವನು ಹಿಂಬಾಲಕರು  ನಾಟಕದ ಇತರ ಪಾತ್ರಧಾರಿಗಳು ಎನ್ನುವ ಅರಿವು ಬರತೊಡಗಿತು. ಬಹಿರಂಗವಾಗಿ ವಿರೋಧಿಸಿದರೆ ಕಠಿಣ ಶಿಕ್ಷೆಗಳಿದ್ದವಲ್ಲ. ಹೀಗಾಗಿ ಹೊರಗೆ ಏನು ಮಾತನಾಡದೆ ಇದ್ದರೂ ತಮ್ಮ ತಮ್ಮ ಜನರೊಡನೆ ಇದ್ದಾಗ M for Mussolini ಅಲ್ಲ ಅದು M for Misery ಎಂದು ನಗೆಯಾಡತೊಡಗಿದರು. ತನ್ನ ಜನಪ್ರಿಯತೆ ಕುಗ್ಗುತ್ತಿರುವುದರ ಸುಳಿವನ್ನು ರಹಸ್ಯ ಏಜೆಂಟ ರಿಂದ ಪಡೆದ ಮುಸ್ಸಲೋನಿ, ಜನರ ಗಮನ ಬೇರೆ ಕಡೆ ಹರಿಸಲು ಹೊಸ ಯೋಜನೆಯೊಂದನ್ನು ಹೆಣೆದ. ಅದು ಪಕ್ಕದ ದೇಶವಾದ ಗ್ರೀಸ್ ಮೇಲೆ ಧಾಳಿ ನಡೆಸುವುದು. ಆದರೆ ಮುಸ್ಸಲೋನಿಯ ದುರಾದೃಷ್ಟಕ್ಕೆ ಅವನ ಸೈನಿಕರು ಪ್ರತಿಕೂಲ ಪರಿಸ್ಥಿತಿಯಿಂದ ಮರಳಿ ಬಂದರು. ತನ್ನ ಸ್ನೇಹಿತ ಹಿಟ್ಲರ್ ನ ಸಹಾಯ ಕೋರಿದ ಮುಸ್ಸಲೋನಿ, ಗ್ರೀಸ್ ದೇಶವನ್ನು ಆಕ್ರಮಿಸಿಕೊಳ್ಳುವಲ್ಲಿ ಸಫಲನಾದ. ಆದರೆ ಹಿಟ್ಲರ್ ನ ಸೈನಿಕರು ಅಲ್ಲಿ ತಮ್ಮ ಅಧಿಪತ್ಯ ಸಾಧಿಸಿ ಮುಸ್ಸಲೋನಿ ಯನ್ನು ಮೂಲೆಗುಂಪು ಮಾಡಿಬಿಟ್ಟರು. ಒಂದು ಕಾಲದ ಸರ್ವಾಧಿಕಾರಿ ಮುಸ್ಸಲೋನಿ ಸುಮ್ಮನೆ ಶಬ್ದ ಮಾಡುವ ಖಾಲಿ ಪಾತ್ರೆಯಾದ. 

ಇಟಲಿ ದೇಶದ ಜನರು ತಮ್ಮ ನಾಯಕನ ಮಾತುಗಳನ್ನು ನಂಬದೆ ನಿಜ ಸುದ್ದಿ ತಿಳಿಯಲು ಬ್ರಿಟಿಷ್ ದೇಶದ ರೇಡಿಯೋ ಸ್ಟೇಷನ್ ಗಳಿಂದ ಸುದ್ದಿ ಕೇಳತೊಡಗಿದದರು. ಇತ್ತ ಆಫ್ರಿಕಾ ದೇಶಗಳ ಕಡೆ ಆಕ್ರಮಣಕ್ಕೆ ಹೋಗಿದ್ದ ಮುಸ್ಸಲೋನಿಯ ಸೇನೆ ಸೋತು ಸುಣ್ಣವಾಯಿತು. ಒಂದು ಕಾಲದಲ್ಲಿ 'ಅತಿ ಹೆಚ್ಚು ಫೋಟೋ ತೆಗೆಸಿಕೊಂಡ ವ್ಯಕ್ತಿ' ಎಂದು ಪ್ರಸಿದ್ಧಿ ಪಡೆದಿದ್ದ ಮುಸ್ಸಲೋನಿಯ ಚಿತ್ರಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗದೆ ತಿಂಗಳುಗಳು ಸವೆದವು. ಸ್ವತಃ ಮುಸ್ಸಲೋನಿ ತನ್ನ ಭಾಷಣಗಳನ್ನು ನಿಲ್ಲಿಸಿಬಿಟ್ಟ. ಅವನು ಬದುಕಿದ್ದಾನೋ, ಇಲ್ಲವೋ ಎಂದು ಅನುಮಾನ ಪಡುವಷ್ಟರ ಮಟ್ಟಿಗೆ ಅವನಿಂದ ಯಾವುದೇ ಸುದ್ದಿ ಬರುವುದು ನಿಂತು ಹೋಯಿತು. 

ಹದಿನೆಂಟು ತಿಂಗಳ ನಂತರ ತನ್ನ ಮೌನ ಮುರಿದು ಮಾತನಾಡಿದ ಮುಸ್ಸಲೋನಿ ಯ ಧ್ವನಿಯಲ್ಲಿ ಯಾವುದೇ ಮಾಂತ್ರಿಕತೆ ಉಳಿದಿರಲಿಲ್ಲ. ಆ ಹೊತ್ತಿಗೆ ಇಟಲಿಯ ದೊಡ್ಡ ಪಟ್ಟಣಗಳ ಮೇಲೆ ಪಕ್ಕದ ದೇಶಗಳ ಧಾಳಿ ನಡೆದಿತ್ತು. ಅದರಿಂದ ಜನರನ್ನು ಉಳಿಸುವ ಶಕ್ತಿ ಮುಸ್ಸಲೋನಿ ಯಲ್ಲಿ ಉಳಿದಿರಲಿಲ್ಲ. ಅವನನ್ನು ಆರಾಧಿಸಿದ ಜನರೇ ಅವನು ಸತ್ತರೆ ಚೆನ್ನ ಎಂದು ಮಾತನಾಡುವಂತೆ ಆಯಿತು. ಇಟಲಿ ದೇಶದ ಜನನಾಯಕರೆಲ್ಲ ಸೇರಿ ಮುಸ್ಸಲೋನಿಯನ್ನು ಕೆಳಗಿಳಿಸುವ ನಿರ್ಧಾರಕ್ಕೆ ಬಂದರು. ಆದರೆ ಮುಸ್ಸಲೋನಿಗೆ ಇನ್ನೂ ಒಬ್ಬ ಸ್ನೇಹಿತ ಉಳಿದೆ ಇದ್ದ. ಅವನು ಹಿಟ್ಲರ್. ಅವನ ಸಹಾಯದಿಂದ ತನ್ನ ಕೆಲವು ವೈರಿಗಳನ್ನು ಮುಸ್ಸಲೋನಿ ಮುಗಿಸಿದರೂ, ಅವನ ಕಾಲ ಮಿಂಚಿ ಹೋಗಿತ್ತು. ಅವನ ವಿರೋಧಿಗಳು ಮುಸ್ಸಲೋನಿಯನ್ನು ಮತ್ತು ಅವನ ಹಿಂಬಾಲಕರನ್ನು ಶೂಟ್ ಮಾಡಿ ಸಾಯಿಸಿ, ಮಿಲಾನ್ ನಗರದಲ್ಲಿ ತಲೆ ಕೆಳಗೆ, ಕಾಲು ಮೇಲೆ ಮಾಡಿ ಜನರ ವೀಕ್ಷಣೆಗೆಂದು ನೇತು ಹಾಕಿದರು. ಅದಕ್ಕೆ ಮೊದಲೇ ಮುಸ್ಸಲೋನಿ ತನ್ನ ಆಪ್ತರಲ್ಲಿ ತನ್ನ ನಟನೆ ಮುಗಿದಿರುವುದಾಗಿ ಮತ್ತು ತಾನು ಜೀವಂತ ಶವ ಅಷ್ಟೇ ಎಂದು ಹೇಳಿಕೊಂಡಿದ್ದ.

ಮುಸ್ಸಲೋನಿ ಎಂಬ ಸರ್ವಾಧಿಕಾರಿ

(ಫ್ರಾಂಕ್ ಡಿಕೊಟ್ಟೆರ್ ಬರೆದ 'How to be a dictator' ಪುಸ್ತಕದ 'ಮುಸ್ಸಲೋನಿ' ಅಧ್ಯಾಯದ ಆಯ್ದ ಭಾಗದ ಭಾವಾನುವಾದ)

 

ಮುಸ್ಸಲೋನಿ ಜನ ಸಾಮಾನ್ಯರನ್ನು ತನ್ನ ಮೋಡಿಗೆ ಒಳಪಡಿಸಲು ಉತ್ಸುಕನಾಗಿದ್ದ. ಅದಕ್ಕಾಗಿ ಅವನು ದೇಶಾದ್ಯಂತ ಪ್ರವಾಸ ಕೈಗೊಂಡ. ಕಾರ್ಯಕರ್ತರ ಸಾಮೂಹಿಕ ಸಭೆಗಳು, ಸರ್ಕಾರೀ ಕೆಲಸಗಳ ಉದ್ಘಾಟನೆಗಳು ಹೀಗೆ ಯಾವುದೇ ಅವಕಾಶ ಇರಲಿ, ಅವುಗಳ ಮೂಲಕ ನೂರಾರು ಪಟ್ಟಣ, ಹಳ್ಳಿಗಳಲ್ಲಿ ಅವನು ಚಿರಪರಿಚಿತನಾಗಿ ಹೋದ. ತನ್ನ ಓಡಾಟಕ್ಕೆಂದೇ ಒಂದು ರೈಲನ್ನು ನಿಯಮಿಸಿಕೊಂಡ. ಮಾರ್ಗ ಮದ್ಯದಲ್ಲಿ ಜನಸಂದಣಿ ಎಲ್ಲೆಲ್ಲಿ ಇರುತ್ತಿತ್ತೋ, ಅಲ್ಲಿ ಅವನಿದ್ದ ರೈಲು ನಿಧಾನವಾಗಿ ಚಲಿಸುತ್ತಿತ್ತು. ಅವನು ಕಿಟಕಿಯಲ್ಲಿ ನಿಂತು ಕೈ ಬೀಸುತ್ತ ಜನರ ಕಣ್ಣಿಗೆ ತಾನು ಬಿದ್ದಿದ್ದೇನೆ ಎನ್ನುವುದನ್ನು ಖಚಿತಗೊಳಿಸಿಕೊಳ್ಳುತ್ತಿದ್ದ. ಮೊದಲಿಗೆ ಯಾವುದು ರಾಜಕೀಯ ಅವಶ್ಯಕತೆಯಾಗಿತ್ತೋ ಅದು ಕಾಲ ಕ್ರಮೇಣ ಒಂದು ಗೀಳಾಗಿ ಮಾರ್ಪಟ್ಟಿತ್ತು.

 

ತನ್ನ ನಂಬಿಕಸ್ಥರಿಗೆ ಕೆಲವು ಕೆಲಸಗಳ ಜವಾಬ್ದಾರಿ ವಹಿಸಿದ. ಅದರಲ್ಲಿ ಮೊದಲನೆಯದು, ತನ್ನ ಅವಶ್ಯಕತೆ ಎಷ್ಟು ಇದೆ ಎಂದು ಜನರಿಗೆ ಮಾಧ್ಯಮಗಳ ಮೂಲಕ ತೋರಿಸುವುದು, ಅದಕ್ಕೆ ನೆರವಾದ ಸಂಸ್ಥೆಗಳಿಗೆ ಅನುಕೂಲ ಮಾಡಿಕೊಡುವುದು, ಸಹಾಯ ಮಾಡದವರನ್ನು ತನ್ನ ಕಪಿ ಮುಷ್ಟಿಯಲ್ಲಿ ಹಿಚುಕಿ ಹಾಕುವುದು. ಎರಡನೆಯದು, ತನ್ನ ರಾಜಕೀಯ ವೈರಿಗಳನ್ನು ಒಬ್ಬೊಬ್ಬರನ್ನಾಗಿ ನಿರ್ಮೂಲ ಮಾಡುವುದು. ಇವೆಲ್ಲದರ ನಡುವೆ ಮುಸ್ಸೊಲೊನಿ ಜನರ ಮಧ್ಯೆ ಆವೇಶದಿಂದ ಭಾಷಣ ಮಾಡುತ್ತಿದ್ದ. ಜನರ ಮನಸ್ಸಿನಿಂದ ತಾನು ಕಣ್ಮರೆಯಾಗದಂತೆ, ಅವರಿಗೆ ಉಳಿದಿರುವ ಕೊನೆಯ ಆಶಾಕಿರಣ, ಭರವಸೆ ತಾನೊಬ್ಬನೇ ಎನ್ನುವ ಸಂದೇಶ ಪರೋಕ್ಷವಾಗಿ ನೀಡಲು ಮರೆಯುತ್ತಿರಲ್ಲ. ಪಕ್ಷದ, ಸರಕಾರದ ಎಲ್ಲ ಕಾರ್ಯಗಳು ಅವನ ಹತೋಟಿಗೆ ಬರಲು ಬಹಳ ಸಮಯ ಏನೂ ತಗುಲಲಿಲ್ಲ. ಆಮೇಲಿಂದ ಅವನ ಮಾತೇ ಅಂತಿಮ ಆಗಿ ಹೋಯಿತು. ಎಲ್ಲ ಊರಿನ, ಎಲ್ಲ ಜನ ಸಂಪರ್ಕ ಸ್ಥಳಗಳಲ್ಲಿ ಅವನ ಫೋಟೋಗಳು ರಾರಾಜಿಸತೊಡಗಿದವು. ಮಾಧ್ಯಮಗಳು ಅವನನ್ನು ಹೊಗಳಿ ಪುಟಗಟ್ಟಲೆ ಬರೆದವು. ಅವನ ಜೀವನ ಚರಿತ್ರೆಯ ಪುಸ್ತಕಗಳು ಒಂದಾದರ ನಂತರ ಇನ್ನೊಂದರಂತೆ ಬಿಡುಗಡೆಯಾದವು. ಅಂತರರಾಷ್ಟ್ರೀಯ ಗಣ್ಯ ವ್ಯಕ್ತಿಗಳೆಲ್ಲ ಅವನಿಗೆ ಭೇಟಿಯ ಗೌರವ ಕೊಡಲು ಬಂದರು. ಅವನ ಜೊತೆ ಕಳೆದ ಕೆಲವೇ ಕ್ಷಣಗಳಿಗೆ, ಅವನದು ಸೂಜಿಗಲ್ಲಿನ ವ್ಯಕ್ತಿತ್ವ ಎಂದು ಹೊಗಳಿದರು.

 

ಹೊರಗಿನ ಶತ್ರುಗಳು ಇಲ್ಲವಾದ ಮೇಲೆ, ತನ್ನದೇ ಪಕ್ಷದಲ್ಲಿ ತನಗೆ ಯಾವುದೇ ಉತ್ತರಾಧಿಕಾರಿ ಹುಟ್ಟದಂತೆ ನೋಡಿಕೊಳ್ಳುವುದನ್ನು ಮುಸ್ಸಲೋನಿ ಮರೆಯಲಿಲ್ಲ. ಯಾರಾದರೂ ತನಗಿಂತ ಜನಮನ್ನಣೆ ಪಡೆದರೆ ಸಾಕು ಅವರನ್ನು ಆ ಜಾಗದಿಂದ ಕೆಳಗಿಳಿಸಿ, ಅಲ್ಲಿ ಒಬ್ಬ ಅನಾಮಿಕನನ್ನು ತಂದು ಕೂರಿಸುತ್ತಿದ್ದ. ಅವನಿಗೆ ಸ್ವಾಮಿ ನಿಷ್ಠೆ ತೋರಿಸದವರೆಲ್ಲ ಮೂಲೆ ಗುಂಪಾಗಿ ಹೋದರು. ಪಕ್ಷದ, ದೇಶದ, ಜನ ಹಿತದ ಧ್ಯೇಯಗಳೆಲ್ಲ ಬದಲಾಗಿ 'ಮುಸ್ಸಲೋನಿ ಎಲ್ಲ ವಿಷಯದಲ್ಲೂ ಸರಿ' ಎನ್ನುವುದೇ ವೇದವಾಕ್ಯವಾಗಿ ಹೋಯಿತು. ಅವನೀಗ ತನ್ನ ಭಾಷಣಗಳನ್ನು ರೇಡಿಯೋದಲ್ಲಿ ಪ್ರಸಾರ ಮಾಡಿ ಇಡೀ ಇಟಲಿ ದೇಶ ಒಂದೇ ಸಲಕ್ಕೆ ತನ್ನ ಮಾತು ಕೇಳುವಂತೆ ಮಾಡಿಕೊಂಡ. ಜನ ನಿಬಿಡ ಸ್ಥಳಗಳಲ್ಲಿ ಬೃಹತ್ ಸ್ಪೀಕರ್ ಗಳು ಅವನ ಭಾಷಣವನ್ನು ಬಿತ್ತರಿಸತೊಡಗಿದವು.


ಅವನು ಸಾರ್ವಜನಿಕವಾಗಿ ಯಾವುದಾದರೂ ಊರಲ್ಲಿ ಭಾಷಣ ಮಾಡುವುದು ಇತ್ತೆಂದರೆ, ಅಂದು ಅಲ್ಲಿ ಶಾಲೆಗಳಿಗೆ, ಅಂಗಡಿ-ಮುಗ್ಗಟ್ಟುಗಳಿಗೆ ರಜೆ ಘೋಷಿಸಲಾಗುತ್ತಿತ್ತು. ಅವನ ಭಾಷಣ ಕೇಳುವುದು ಎಲ್ಲರಿಗೂ ಕಡ್ಡಾಯವಾಗಿತ್ತು. ಅವನು ಭಾಷಣ ಮಾಡುವ ವೇದಿಕೆಯಲ್ಲಿ ಅವನು ಪ್ರಕಾಶಮಾನವಾಗಿ ಕಾಣುವಂತೆ ದೀಪಗಳಿಂದ ಸಜ್ಜುಗೊಳಿಸಲಾಗುತ್ತಿತ್ತು. ಅಲ್ಲಿ ಸೇರಿದ ಜನ ಸಮೂಹ ಅವನ ಹೆಸರನ್ನೇ ಜಪಿಸುವಂತೆ ಹಿನ್ನೆಲೆ ಸಂಗೀತ ನೀಡಲಾಗುತ್ತಿತ್ತು. ಜನರ ಉನ್ಮಾದ ತಾರಕಕ್ಕೇರಿದ ಮೇಲೆ ಮುಸ್ಸಲೋನಿ ವೇದಿಕೆಯ  ಮೇಲೆ ಪ್ರತ್ಯಕ್ಷನಾಗಿ ಅವರ ಹುಚ್ಚನ್ನು ಇನ್ನು ಅಧಿಕಗೊಳಿಸುತ್ತಿದ್ದ.

Thursday, September 23, 2021

ಕ್ಯಾನ್ಸರ್ ಆದವರ ಮುಂದೆ ನೆಗಡಿ ಎಂಥ ದೊಡ್ಡ ರೋಗ ಎಂದು ಹೇಳುವವರಿಗೆ

ನೀವು ಹಳೇ ಚಿತ್ರಗಳನ್ನು ನೋಡುತ್ತೀರಾ? ನನಗೆ ಭೂತಕಾಲ ಕಾಡಿದಷ್ಟು, ವರ್ತಮಾನ, ಭವಿಷ್ಯ ಕಾಡುವುದಿಲ್ಲ. ಹಾಗಾಗಿ ಟಿ.ವಿ.ಯಲ್ಲಿ ಬರುವ ಹಳೆಯ ಚಿತ್ರಗಳನ್ನು ಆಗಾಗ ನೋಡುತ್ತಿರುತ್ತೇನೆ. ೧೯೭೨ರಲ್ಲಿ ಬಿಡುಗಡೆಯಾದ 'ಬಂಗಾರದ ಮನುಷ್ಯ' ಚಿತ್ರ ಯಾರಿಗೆ ಗೊತ್ತಿಲ್ಲ? ಅದರಲ್ಲಿ ಒಂದು ಸನ್ನಿವೇಶದಲ್ಲಿ ರಾಜಕುಮಾರ್ ತಮ್ಮ ಅಕ್ಕನ ಮಗನಿಗೆ ಬರುವ ೬೦೦ ರೂಪಾಯಿ ಸಂಬಳ ಕುಟುಂಬ ನಿರ್ವಹಣೆಗೆ ಸಾಕಾಗುದಿಲ್ಲವೇ ಎಂದು ದಬಾಯಿಸುತ್ತಾರೆ. ಆ ಕಾಲ ಹಾಗಿತ್ತೇನೋ? ಅದಾಗಿ ೧೫ ವರುಷ ಕಳೆದಿರಲಿಲ್ಲ. ೧೯೮೬ ರಲ್ಲಿ ತೆರೆ ಕಂಡ 'ಭಾಗ್ಯದ ಲಕ್ಷ್ಮಿ ಬಾರಮ್ಮ' ಚಿತ್ರದಲ್ಲಿ, ಅದೇ ರಾಜಕುಮಾರ್, ಸ್ಪರ್ಧೆಯಲ್ಲಿ ಗೆದ್ದರೆ ಸಿಗುವ ೧೦,೦೦೦ ಸಾವಿರ ರೂಪಾಯಿಗಾಗಿ ಸಾವಿರ ಸುಳ್ಳು ಹೇಳುವ ಹಾಸ್ಯಮಯ ಪಾತ್ರವನ್ನು ನಿಭಾಯಿಸುತ್ತಾರೆ. ಕೆಲವು ನೂರು ಅಥವಾ ಕೆಲವು ಸಾವಿರ ರೂಪಾಯಿಗೆ ಎಷ್ಟೊಂದು ಬೆಲೆಯಿತ್ತಲ್ಲವೇ? ದುಡ್ಡಿಗಿದ್ದ ಆ ಬೆಲೆ, ಹೋಟೆಲಿನ ಗಾಜುಗಳನ್ನು ಒಡೆದು, ಸಾವಿರಾರು ರೂಪಾಯಿ ಖರ್ಚು ಮಾಡುವ 'ಅಂಜದ ಗಂಡು' ಚಿತ್ರದ ರವಿಚಂದ್ರನ್ ಅವರ ಪಾತ್ರದಲ್ಲಿ ಕಾಣುವುದಿಲ್ಲ. ಅದೇಕೆ ಎನ್ನುವುದು ಸುಲಭ. ಆ ಚಿತ್ರದ ನಾಯಕನಿಗೆ ಬಡತನ ಎಂದರೆ ಏನು ಎಂದರೆ ಗೊತ್ತಿರುವುದಿಲ್ಲ ಅಷ್ಟೇ. ನಿಜ ಕಷ್ಟಗಳನ್ನು ನೋಡದ ಮನುಷ್ಯರು ಸಣ್ಣ ಪುಟ್ಟ ಸಮಸ್ಯೆಗಳನ್ನು ಕೂಡ ದೊಡ್ಡದೇ ಎಂದುಕೊಳ್ಳುತ್ತಾರೆ.


ನಾನು ಬೆಂಗಳೂರಿಗೆ ಬಂದದ್ದು ೧೯೯೯ ರಲ್ಲಿ. ವಾಪಸ್ಸು ಊರಿಗೆ ಹೋಗುವುದಿಲ್ಲ ಮತ್ತು ಮನೆಯಲ್ಲಿ ಯಾವುದೇ ಕಾರಣಕ್ಕೆ ದುಡ್ಡು ಕೇಳುವುದಿಲ್ಲ ಎನ್ನುವ ಧೃಢ ನಿರ್ಧಾರದಿಂದ ಬೆಂಗಳೂರಿಗೆ ಬಂದಿದ್ದ ನನಗೆ, ಬಂದ ಮೂರೇ ದಿನಕ್ಕೆ ಕೆಲಸ ಸಿಕ್ಕಿತ್ತು. ಭರ್ತಿ ೨,೫೦೦ ರೂಪಾಯಿ ಸಂಬಳ. ತಿಂಗಳ ಕೊನೆಗೆ ೨೦೦-೩೦೦ ರೂಪಾಯಿ ಉಳಿದರೆ ಅದೇ ಹೆಚ್ಚು. ಅದನ್ನೇ ಪೂರ್ತಿ ಒಂದು ವರುಷ ಉಳಿಸಿ, ಅದರಲ್ಲಿ ಒಂದು ಚಿಕ್ಕ ಟಿ.ವಿ. ಖರೀದಿಸುವ ಆಸೆಯಿಂದ ಮಾರುಕಟ್ಟೆಗೆ ಹೋದರೆ ನನ್ನಲ್ಲಿ ಇದ್ದ ಹಣಕ್ಕೆ ಖರೀದಿಸಲು ಸಾಧ್ಯವಾಗಿದ್ದು ಒಂದು ಟೇಪ್ ರೆಕಾರ್ಡರ್ ಮಾತ್ರ. ಅದು ನನ್ನ ಹಲವಾರು ವರುಷಗಳ ಸಂಗಾತಿಯಾಗಿತ್ತು. ಅದಾಗಿ ಇಪ್ಪತ್ತು ವರುಷ ನಂತರದ ಇಂದಿನ ವರ್ತಮಾನಕ್ಕೆ ಬಂದರೆ, ನನ್ನ ಮಗ ತನಗೆ ಆಟ ಆಡಲು ಎರಡು ಸಾವಿರ ರೂಪಾಯಿ ಬೆಲೆಯ ಆಟಿಕೆ ಸಾಮಾನು ಕೇಳುತ್ತಿದ್ದ. ಹಿಂದೆ ನನಗೆ ಅಷ್ಟು ಹಣ ಉಳಿಸಲು ಪೂರ್ತಿ ಒಂದು ವರುಷ ಬೇಕಾಗಿತ್ತು ಎನ್ನುವ ವಿಷಯ ನಾನು ಅವನಿಗೆ ತಿಳಿಸುವುದು ಸಾಧ್ಯವೇ? ನೂರು ರೂಪಾಯಿ ಬಿಡಿ, ಸಾವಿರ ರೂಪಾಯಿಗೆ ಏನು ಬೆಲೆ ಎಂದು ಕೂಡ ಅವನಿಗೆ ತಿಳಿಸುವುದು ಕಷ್ಟ.


ಈ ಬೆಲೆಯ ಮಹತ್ವ ಬರಿ ದುಡ್ಡಿನ ವಿಚಾರಕ್ಕೆ ಮಾತ್ರ ನಿಲ್ಲುವುದಿಲ್ಲ. ಅದು ಬದುಕಿನ ಇತರ ವಿಷಯಗಳಿಗೂ ಅನ್ವಯಿಸುತ್ತದೆ. ತೆಲುಗು ಚಿತ್ರರಂಗದ ಸಮಂತಾ ಎನ್ನುವ ನಟಿ ಇಂದು ತನ್ನ ಮದುವೆಯನ್ನು ಕೊನೆಗೊಳ್ಳಿಸುವ ವಿಚಾರ ಸುದ್ದಿ ಮಾಧ್ಯಮಗಳಲ್ಲಿ ಬರುತ್ತಿದೆಯಲ್ಲ. ಅವಳಿಗೆ ಇರುವ ಸೌಂದರ್ಯ, ಕುರೂಪದಿಂದ ಮದುವೆಯಾಗದೆ ಹಾಗೆಯೆ ಉಳಿದು ಹೋದ ಹುಡುಗಿಗೆ, ಅಥವಾ ಮುಖದ ಮೇಲೆ ಆಸಿಡ್ ಸುರಿಸಿಕೊಂಡ ನತದೃಷ್ಟರಿಗೆ ಇದ್ದರೆ ಹೇಗಿರುತ್ತಿತ್ತು? ಸಮಂತಾಗಿರುವ ಅಭಿನಯ ಪ್ರತಿಭೆ, ಹಿಂದೆ ಕನ್ನಡ ಚಿತ್ರರಂಗವನ್ನಾಳಿದ ಜಯಂತಿ, ಕಲ್ಪನಾರಿಗೆ ಕೂಡ ಇತ್ತಲ್ಲ. ಅವರಿಗೆ ವೈವಾಹಿಕ ಜೀವನ ಬೇಕು ಎಂದು ಎಷ್ಟು ಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ. ನಟಿ ಸಮಂತಾರಿಗೆ ಅವರದೇ ಆದ ವೈಯಕ್ತಿಕ ಕಾರಣಗಳು ಇರಬಹುದು. ಹಾಗೆಯೇ ಅವರ ಜೀವನ ಅವರ ವೈಯಕ್ತಿಕ ವಿಚಾರ. ಆದರೆ ಅವರ ಸಮಸ್ಯೆಗಳು ದುಃಖವನ್ನೇ ನೋಡದ ಮನುಷ್ಯರ ಕಸಿವಿಸಿಯಂತಹವು ಎನ್ನುವುದು ಮಾತ್ರ ನನ್ನ ಅಭಿಪ್ರಾಯ. ಅವರು ಬೇರೆ ಮದುವೆಯಾದರೂ ಅಥವಾ ಹಾಗೆ ಉಳಿದರೂ ಅವರ ವೈಯಕ್ತಿಕ ಜೀವನ ಈಗಿರುವುದಕ್ಕಿಂತ ಉತ್ತಮ ಆಗಲು ಸಾಧ್ಯವೇ ಎನ್ನುವುದು ಸಾಮಾನ್ಯರ ವಿಚಾರಕ್ಕೂ ನಿಲುಕುವಂತಹದ್ದು.


ಎಲ್ಲರಿಗೂ ಅವರದೇ ಆದ ಸಮಸ್ಯೆಗಳಿವೆ. ಆದರೆ ಅವುಗಳು ದೊಡ್ಡ ಸಮಸ್ಯೆ ಹೌದೋ ಅಲ್ಲವೋ ಎಂದು ಅರಿವಾಗಲು ಸಾಕಷ್ಟು ಜನರಿಗೆ ಜೀವನ ಅನುಭವದ ಕೊರತೆ ಇದೆ. ತಮಗೆ ಆಗಿರುವ ನೆಗಡಿ ಎಂತಹ ಭೀಕರದ್ದು ಎಂದು ಅವರು ಕ್ಯಾನ್ಸರ್ ನಿಂದ ಬಳಲುತ್ತಿರುವ ರೋಗಿಯ ಮುಂದೆ ಹೇಳಲು ಹೊರಡುತ್ತಾರೆ. ತಮಗೆ ಕ್ಯಾನ್ಸರ್ ಆದಾಗ ಅವರು ಇನ್ನೇನು ಮಾಡುತ್ತಾರೋ?

Tuesday, September 21, 2021

ರೂಮಿಯ ಸೂಕ್ತಿಗಳು ಮತ್ತು ಕಿರು ಕವಿತೆಗಳ ಅನುವಾದ

ನೀವು ಸಮುದ್ರದ ಹನಿಯಲ್ಲ

ಹನಿಯೊಳಗಿರುವ ಸಮುದ್ರ

--೦--


ನೀವು ಏನನ್ನು ಹುಡುಕುತ್ತಿರುವಿರೋ 

ಅದು ನಿಮ್ಮನ್ನು ಹುಡುಕುತ್ತಿದೆ

--೦--


ಸರಿ-ತಪ್ಪುಗಳ ಆಚೆ ಇದೆ ಒಂದು ಬಯಲು

ನಾನು ನಿಮಗೆ ಅಲ್ಲಿಯೇ ಸಿಗುವೆ


ಆ ಹಸಿರಿನಲ್ಲಿ ಮಲಗಿದಾಗ

ಜಗತ್ತಿನ ಭಾಷೆ, ವಿಚಾರ, ಕಲ್ಪನೆಗಳು

ನಾವು-ನೀವು ಎಲ್ಲವೂ ಅಪ್ರಸ್ತುತ

--೦--


ಮುಂಜಾನೆಯ ತಂಗಾಳಿ

ಬಿಟ್ಟು ಕೊಡಲಿದೆ ಯಾವುದೊ ರಹಸ್ಯ

ಮಲಗಿ ನಿದ್ದೆ ಹೋಗಬೇಡಿ


ನಿಮಗೆ ಏನು ಬೇಕು

ನೀವು ಕೇಳಿಯೇ ಪಡೆಯಬೇಕು

ಮಲಗಿ ನಿದ್ದೆ ಹೋಗಬೇಡಿ


ಎರಡು ಜಗತ್ತುಗಳು ಸಂಧಿಸುವ ಬಾಗಿಲಿನಿಂದ

ಜನ ಒಳಗೆ-ಹೊರಗೆ ಚಲಿಸುತ್ತಲೇ ಇದ್ದಾರೆ


ಬಾಗಿಲು ತೆರೆದೇ ಇದೆ

ಮಲಗಿ ನಿದ್ದೆ ಹೋಗಬೇಡಿ

--೦--


ವಿಚಾರ ಮಾಡಬೇಡಿ

ಕಳೆದು ಹೋಗಬೇಡಿ


ಚಂದ್ರ ನಿಮ್ಮ ಹೃದಯ

ವಿಚಾರಗಳು ಅದರ ಮೇಲಿನ ಮುಸುಕು


ಮುಸುಕು ಸರಿಯಲಿ

ವಿಚಾರಗಳು ನೀರಲ್ಲಿ ಬಿದ್ದು ಹೋಗಲಿ

--೦--


ನಿನ್ನೆ ನಾನು ಮೇಧಾವಿ

ಜಗತ್ತನ್ನೇ ಬದಲಿಸ ಹೊರಟಿದ್ದೆ


ಇಂದು ನಾನು ಬುದ್ದಿವಂತ

ನನ್ನನ್ನು ಮಾತ್ರ ಬದಲಿಸುವೆ

--೦--


ಮಾತು ನದಿ

ಮೌನ ಸಮುದ್ರ


ಹುಡುಕುವುದು ಸಮುದ್ರವಾದರೆ

ನದಿಯಲ್ಲಿ ಕಳೆದು ಹೋಗುವುದೇಕೆ

--೦--