Thursday, September 23, 2021

ಕ್ಯಾನ್ಸರ್ ಆದವರ ಮುಂದೆ ನೆಗಡಿ ಎಂಥ ದೊಡ್ಡ ರೋಗ ಎಂದು ಹೇಳುವವರಿಗೆ

ನೀವು ಹಳೇ ಚಿತ್ರಗಳನ್ನು ನೋಡುತ್ತೀರಾ? ನನಗೆ ಭೂತಕಾಲ ಕಾಡಿದಷ್ಟು, ವರ್ತಮಾನ, ಭವಿಷ್ಯ ಕಾಡುವುದಿಲ್ಲ. ಹಾಗಾಗಿ ಟಿ.ವಿ.ಯಲ್ಲಿ ಬರುವ ಹಳೆಯ ಚಿತ್ರಗಳನ್ನು ಆಗಾಗ ನೋಡುತ್ತಿರುತ್ತೇನೆ. ೧೯೭೨ರಲ್ಲಿ ಬಿಡುಗಡೆಯಾದ 'ಬಂಗಾರದ ಮನುಷ್ಯ' ಚಿತ್ರ ಯಾರಿಗೆ ಗೊತ್ತಿಲ್ಲ? ಅದರಲ್ಲಿ ಒಂದು ಸನ್ನಿವೇಶದಲ್ಲಿ ರಾಜಕುಮಾರ್ ತಮ್ಮ ಅಕ್ಕನ ಮಗನಿಗೆ ಬರುವ ೬೦೦ ರೂಪಾಯಿ ಸಂಬಳ ಕುಟುಂಬ ನಿರ್ವಹಣೆಗೆ ಸಾಕಾಗುದಿಲ್ಲವೇ ಎಂದು ದಬಾಯಿಸುತ್ತಾರೆ. ಆ ಕಾಲ ಹಾಗಿತ್ತೇನೋ? ಅದಾಗಿ ೧೫ ವರುಷ ಕಳೆದಿರಲಿಲ್ಲ. ೧೯೮೬ ರಲ್ಲಿ ತೆರೆ ಕಂಡ 'ಭಾಗ್ಯದ ಲಕ್ಷ್ಮಿ ಬಾರಮ್ಮ' ಚಿತ್ರದಲ್ಲಿ, ಅದೇ ರಾಜಕುಮಾರ್, ಸ್ಪರ್ಧೆಯಲ್ಲಿ ಗೆದ್ದರೆ ಸಿಗುವ ೧೦,೦೦೦ ಸಾವಿರ ರೂಪಾಯಿಗಾಗಿ ಸಾವಿರ ಸುಳ್ಳು ಹೇಳುವ ಹಾಸ್ಯಮಯ ಪಾತ್ರವನ್ನು ನಿಭಾಯಿಸುತ್ತಾರೆ. ಕೆಲವು ನೂರು ಅಥವಾ ಕೆಲವು ಸಾವಿರ ರೂಪಾಯಿಗೆ ಎಷ್ಟೊಂದು ಬೆಲೆಯಿತ್ತಲ್ಲವೇ? ದುಡ್ಡಿಗಿದ್ದ ಆ ಬೆಲೆ, ಹೋಟೆಲಿನ ಗಾಜುಗಳನ್ನು ಒಡೆದು, ಸಾವಿರಾರು ರೂಪಾಯಿ ಖರ್ಚು ಮಾಡುವ 'ಅಂಜದ ಗಂಡು' ಚಿತ್ರದ ರವಿಚಂದ್ರನ್ ಅವರ ಪಾತ್ರದಲ್ಲಿ ಕಾಣುವುದಿಲ್ಲ. ಅದೇಕೆ ಎನ್ನುವುದು ಸುಲಭ. ಆ ಚಿತ್ರದ ನಾಯಕನಿಗೆ ಬಡತನ ಎಂದರೆ ಏನು ಎಂದರೆ ಗೊತ್ತಿರುವುದಿಲ್ಲ ಅಷ್ಟೇ. ನಿಜ ಕಷ್ಟಗಳನ್ನು ನೋಡದ ಮನುಷ್ಯರು ಸಣ್ಣ ಪುಟ್ಟ ಸಮಸ್ಯೆಗಳನ್ನು ಕೂಡ ದೊಡ್ಡದೇ ಎಂದುಕೊಳ್ಳುತ್ತಾರೆ.


ನಾನು ಬೆಂಗಳೂರಿಗೆ ಬಂದದ್ದು ೧೯೯೯ ರಲ್ಲಿ. ವಾಪಸ್ಸು ಊರಿಗೆ ಹೋಗುವುದಿಲ್ಲ ಮತ್ತು ಮನೆಯಲ್ಲಿ ಯಾವುದೇ ಕಾರಣಕ್ಕೆ ದುಡ್ಡು ಕೇಳುವುದಿಲ್ಲ ಎನ್ನುವ ಧೃಢ ನಿರ್ಧಾರದಿಂದ ಬೆಂಗಳೂರಿಗೆ ಬಂದಿದ್ದ ನನಗೆ, ಬಂದ ಮೂರೇ ದಿನಕ್ಕೆ ಕೆಲಸ ಸಿಕ್ಕಿತ್ತು. ಭರ್ತಿ ೨,೫೦೦ ರೂಪಾಯಿ ಸಂಬಳ. ತಿಂಗಳ ಕೊನೆಗೆ ೨೦೦-೩೦೦ ರೂಪಾಯಿ ಉಳಿದರೆ ಅದೇ ಹೆಚ್ಚು. ಅದನ್ನೇ ಪೂರ್ತಿ ಒಂದು ವರುಷ ಉಳಿಸಿ, ಅದರಲ್ಲಿ ಒಂದು ಚಿಕ್ಕ ಟಿ.ವಿ. ಖರೀದಿಸುವ ಆಸೆಯಿಂದ ಮಾರುಕಟ್ಟೆಗೆ ಹೋದರೆ ನನ್ನಲ್ಲಿ ಇದ್ದ ಹಣಕ್ಕೆ ಖರೀದಿಸಲು ಸಾಧ್ಯವಾಗಿದ್ದು ಒಂದು ಟೇಪ್ ರೆಕಾರ್ಡರ್ ಮಾತ್ರ. ಅದು ನನ್ನ ಹಲವಾರು ವರುಷಗಳ ಸಂಗಾತಿಯಾಗಿತ್ತು. ಅದಾಗಿ ಇಪ್ಪತ್ತು ವರುಷ ನಂತರದ ಇಂದಿನ ವರ್ತಮಾನಕ್ಕೆ ಬಂದರೆ, ನನ್ನ ಮಗ ತನಗೆ ಆಟ ಆಡಲು ಎರಡು ಸಾವಿರ ರೂಪಾಯಿ ಬೆಲೆಯ ಆಟಿಕೆ ಸಾಮಾನು ಕೇಳುತ್ತಿದ್ದ. ಹಿಂದೆ ನನಗೆ ಅಷ್ಟು ಹಣ ಉಳಿಸಲು ಪೂರ್ತಿ ಒಂದು ವರುಷ ಬೇಕಾಗಿತ್ತು ಎನ್ನುವ ವಿಷಯ ನಾನು ಅವನಿಗೆ ತಿಳಿಸುವುದು ಸಾಧ್ಯವೇ? ನೂರು ರೂಪಾಯಿ ಬಿಡಿ, ಸಾವಿರ ರೂಪಾಯಿಗೆ ಏನು ಬೆಲೆ ಎಂದು ಕೂಡ ಅವನಿಗೆ ತಿಳಿಸುವುದು ಕಷ್ಟ.


ಈ ಬೆಲೆಯ ಮಹತ್ವ ಬರಿ ದುಡ್ಡಿನ ವಿಚಾರಕ್ಕೆ ಮಾತ್ರ ನಿಲ್ಲುವುದಿಲ್ಲ. ಅದು ಬದುಕಿನ ಇತರ ವಿಷಯಗಳಿಗೂ ಅನ್ವಯಿಸುತ್ತದೆ. ತೆಲುಗು ಚಿತ್ರರಂಗದ ಸಮಂತಾ ಎನ್ನುವ ನಟಿ ಇಂದು ತನ್ನ ಮದುವೆಯನ್ನು ಕೊನೆಗೊಳ್ಳಿಸುವ ವಿಚಾರ ಸುದ್ದಿ ಮಾಧ್ಯಮಗಳಲ್ಲಿ ಬರುತ್ತಿದೆಯಲ್ಲ. ಅವಳಿಗೆ ಇರುವ ಸೌಂದರ್ಯ, ಕುರೂಪದಿಂದ ಮದುವೆಯಾಗದೆ ಹಾಗೆಯೆ ಉಳಿದು ಹೋದ ಹುಡುಗಿಗೆ, ಅಥವಾ ಮುಖದ ಮೇಲೆ ಆಸಿಡ್ ಸುರಿಸಿಕೊಂಡ ನತದೃಷ್ಟರಿಗೆ ಇದ್ದರೆ ಹೇಗಿರುತ್ತಿತ್ತು? ಸಮಂತಾಗಿರುವ ಅಭಿನಯ ಪ್ರತಿಭೆ, ಹಿಂದೆ ಕನ್ನಡ ಚಿತ್ರರಂಗವನ್ನಾಳಿದ ಜಯಂತಿ, ಕಲ್ಪನಾರಿಗೆ ಕೂಡ ಇತ್ತಲ್ಲ. ಅವರಿಗೆ ವೈವಾಹಿಕ ಜೀವನ ಬೇಕು ಎಂದು ಎಷ್ಟು ಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ. ನಟಿ ಸಮಂತಾರಿಗೆ ಅವರದೇ ಆದ ವೈಯಕ್ತಿಕ ಕಾರಣಗಳು ಇರಬಹುದು. ಹಾಗೆಯೇ ಅವರ ಜೀವನ ಅವರ ವೈಯಕ್ತಿಕ ವಿಚಾರ. ಆದರೆ ಅವರ ಸಮಸ್ಯೆಗಳು ದುಃಖವನ್ನೇ ನೋಡದ ಮನುಷ್ಯರ ಕಸಿವಿಸಿಯಂತಹವು ಎನ್ನುವುದು ಮಾತ್ರ ನನ್ನ ಅಭಿಪ್ರಾಯ. ಅವರು ಬೇರೆ ಮದುವೆಯಾದರೂ ಅಥವಾ ಹಾಗೆ ಉಳಿದರೂ ಅವರ ವೈಯಕ್ತಿಕ ಜೀವನ ಈಗಿರುವುದಕ್ಕಿಂತ ಉತ್ತಮ ಆಗಲು ಸಾಧ್ಯವೇ ಎನ್ನುವುದು ಸಾಮಾನ್ಯರ ವಿಚಾರಕ್ಕೂ ನಿಲುಕುವಂತಹದ್ದು.


ಎಲ್ಲರಿಗೂ ಅವರದೇ ಆದ ಸಮಸ್ಯೆಗಳಿವೆ. ಆದರೆ ಅವುಗಳು ದೊಡ್ಡ ಸಮಸ್ಯೆ ಹೌದೋ ಅಲ್ಲವೋ ಎಂದು ಅರಿವಾಗಲು ಸಾಕಷ್ಟು ಜನರಿಗೆ ಜೀವನ ಅನುಭವದ ಕೊರತೆ ಇದೆ. ತಮಗೆ ಆಗಿರುವ ನೆಗಡಿ ಎಂತಹ ಭೀಕರದ್ದು ಎಂದು ಅವರು ಕ್ಯಾನ್ಸರ್ ನಿಂದ ಬಳಲುತ್ತಿರುವ ರೋಗಿಯ ಮುಂದೆ ಹೇಳಲು ಹೊರಡುತ್ತಾರೆ. ತಮಗೆ ಕ್ಯಾನ್ಸರ್ ಆದಾಗ ಅವರು ಇನ್ನೇನು ಮಾಡುತ್ತಾರೋ?

No comments:

Post a Comment