Saturday, September 25, 2021

ಮುಸ್ಸಲೋನಿ ಎಂಬ ಸರ್ವಾಧಿಕಾರಿ

(ಫ್ರಾಂಕ್ ಡಿಕೊಟ್ಟೆರ್ ಬರೆದ 'How to be a dictator' ಪುಸ್ತಕದ 'ಮುಸ್ಸಲೋನಿ' ಅಧ್ಯಾಯದ ಆಯ್ದ ಭಾಗದ ಭಾವಾನುವಾದ)

 

ಮುಸ್ಸಲೋನಿ ಜನ ಸಾಮಾನ್ಯರನ್ನು ತನ್ನ ಮೋಡಿಗೆ ಒಳಪಡಿಸಲು ಉತ್ಸುಕನಾಗಿದ್ದ. ಅದಕ್ಕಾಗಿ ಅವನು ದೇಶಾದ್ಯಂತ ಪ್ರವಾಸ ಕೈಗೊಂಡ. ಕಾರ್ಯಕರ್ತರ ಸಾಮೂಹಿಕ ಸಭೆಗಳು, ಸರ್ಕಾರೀ ಕೆಲಸಗಳ ಉದ್ಘಾಟನೆಗಳು ಹೀಗೆ ಯಾವುದೇ ಅವಕಾಶ ಇರಲಿ, ಅವುಗಳ ಮೂಲಕ ನೂರಾರು ಪಟ್ಟಣ, ಹಳ್ಳಿಗಳಲ್ಲಿ ಅವನು ಚಿರಪರಿಚಿತನಾಗಿ ಹೋದ. ತನ್ನ ಓಡಾಟಕ್ಕೆಂದೇ ಒಂದು ರೈಲನ್ನು ನಿಯಮಿಸಿಕೊಂಡ. ಮಾರ್ಗ ಮದ್ಯದಲ್ಲಿ ಜನಸಂದಣಿ ಎಲ್ಲೆಲ್ಲಿ ಇರುತ್ತಿತ್ತೋ, ಅಲ್ಲಿ ಅವನಿದ್ದ ರೈಲು ನಿಧಾನವಾಗಿ ಚಲಿಸುತ್ತಿತ್ತು. ಅವನು ಕಿಟಕಿಯಲ್ಲಿ ನಿಂತು ಕೈ ಬೀಸುತ್ತ ಜನರ ಕಣ್ಣಿಗೆ ತಾನು ಬಿದ್ದಿದ್ದೇನೆ ಎನ್ನುವುದನ್ನು ಖಚಿತಗೊಳಿಸಿಕೊಳ್ಳುತ್ತಿದ್ದ. ಮೊದಲಿಗೆ ಯಾವುದು ರಾಜಕೀಯ ಅವಶ್ಯಕತೆಯಾಗಿತ್ತೋ ಅದು ಕಾಲ ಕ್ರಮೇಣ ಒಂದು ಗೀಳಾಗಿ ಮಾರ್ಪಟ್ಟಿತ್ತು.

 

ತನ್ನ ನಂಬಿಕಸ್ಥರಿಗೆ ಕೆಲವು ಕೆಲಸಗಳ ಜವಾಬ್ದಾರಿ ವಹಿಸಿದ. ಅದರಲ್ಲಿ ಮೊದಲನೆಯದು, ತನ್ನ ಅವಶ್ಯಕತೆ ಎಷ್ಟು ಇದೆ ಎಂದು ಜನರಿಗೆ ಮಾಧ್ಯಮಗಳ ಮೂಲಕ ತೋರಿಸುವುದು, ಅದಕ್ಕೆ ನೆರವಾದ ಸಂಸ್ಥೆಗಳಿಗೆ ಅನುಕೂಲ ಮಾಡಿಕೊಡುವುದು, ಸಹಾಯ ಮಾಡದವರನ್ನು ತನ್ನ ಕಪಿ ಮುಷ್ಟಿಯಲ್ಲಿ ಹಿಚುಕಿ ಹಾಕುವುದು. ಎರಡನೆಯದು, ತನ್ನ ರಾಜಕೀಯ ವೈರಿಗಳನ್ನು ಒಬ್ಬೊಬ್ಬರನ್ನಾಗಿ ನಿರ್ಮೂಲ ಮಾಡುವುದು. ಇವೆಲ್ಲದರ ನಡುವೆ ಮುಸ್ಸೊಲೊನಿ ಜನರ ಮಧ್ಯೆ ಆವೇಶದಿಂದ ಭಾಷಣ ಮಾಡುತ್ತಿದ್ದ. ಜನರ ಮನಸ್ಸಿನಿಂದ ತಾನು ಕಣ್ಮರೆಯಾಗದಂತೆ, ಅವರಿಗೆ ಉಳಿದಿರುವ ಕೊನೆಯ ಆಶಾಕಿರಣ, ಭರವಸೆ ತಾನೊಬ್ಬನೇ ಎನ್ನುವ ಸಂದೇಶ ಪರೋಕ್ಷವಾಗಿ ನೀಡಲು ಮರೆಯುತ್ತಿರಲ್ಲ. ಪಕ್ಷದ, ಸರಕಾರದ ಎಲ್ಲ ಕಾರ್ಯಗಳು ಅವನ ಹತೋಟಿಗೆ ಬರಲು ಬಹಳ ಸಮಯ ಏನೂ ತಗುಲಲಿಲ್ಲ. ಆಮೇಲಿಂದ ಅವನ ಮಾತೇ ಅಂತಿಮ ಆಗಿ ಹೋಯಿತು. ಎಲ್ಲ ಊರಿನ, ಎಲ್ಲ ಜನ ಸಂಪರ್ಕ ಸ್ಥಳಗಳಲ್ಲಿ ಅವನ ಫೋಟೋಗಳು ರಾರಾಜಿಸತೊಡಗಿದವು. ಮಾಧ್ಯಮಗಳು ಅವನನ್ನು ಹೊಗಳಿ ಪುಟಗಟ್ಟಲೆ ಬರೆದವು. ಅವನ ಜೀವನ ಚರಿತ್ರೆಯ ಪುಸ್ತಕಗಳು ಒಂದಾದರ ನಂತರ ಇನ್ನೊಂದರಂತೆ ಬಿಡುಗಡೆಯಾದವು. ಅಂತರರಾಷ್ಟ್ರೀಯ ಗಣ್ಯ ವ್ಯಕ್ತಿಗಳೆಲ್ಲ ಅವನಿಗೆ ಭೇಟಿಯ ಗೌರವ ಕೊಡಲು ಬಂದರು. ಅವನ ಜೊತೆ ಕಳೆದ ಕೆಲವೇ ಕ್ಷಣಗಳಿಗೆ, ಅವನದು ಸೂಜಿಗಲ್ಲಿನ ವ್ಯಕ್ತಿತ್ವ ಎಂದು ಹೊಗಳಿದರು.

 

ಹೊರಗಿನ ಶತ್ರುಗಳು ಇಲ್ಲವಾದ ಮೇಲೆ, ತನ್ನದೇ ಪಕ್ಷದಲ್ಲಿ ತನಗೆ ಯಾವುದೇ ಉತ್ತರಾಧಿಕಾರಿ ಹುಟ್ಟದಂತೆ ನೋಡಿಕೊಳ್ಳುವುದನ್ನು ಮುಸ್ಸಲೋನಿ ಮರೆಯಲಿಲ್ಲ. ಯಾರಾದರೂ ತನಗಿಂತ ಜನಮನ್ನಣೆ ಪಡೆದರೆ ಸಾಕು ಅವರನ್ನು ಆ ಜಾಗದಿಂದ ಕೆಳಗಿಳಿಸಿ, ಅಲ್ಲಿ ಒಬ್ಬ ಅನಾಮಿಕನನ್ನು ತಂದು ಕೂರಿಸುತ್ತಿದ್ದ. ಅವನಿಗೆ ಸ್ವಾಮಿ ನಿಷ್ಠೆ ತೋರಿಸದವರೆಲ್ಲ ಮೂಲೆ ಗುಂಪಾಗಿ ಹೋದರು. ಪಕ್ಷದ, ದೇಶದ, ಜನ ಹಿತದ ಧ್ಯೇಯಗಳೆಲ್ಲ ಬದಲಾಗಿ 'ಮುಸ್ಸಲೋನಿ ಎಲ್ಲ ವಿಷಯದಲ್ಲೂ ಸರಿ' ಎನ್ನುವುದೇ ವೇದವಾಕ್ಯವಾಗಿ ಹೋಯಿತು. ಅವನೀಗ ತನ್ನ ಭಾಷಣಗಳನ್ನು ರೇಡಿಯೋದಲ್ಲಿ ಪ್ರಸಾರ ಮಾಡಿ ಇಡೀ ಇಟಲಿ ದೇಶ ಒಂದೇ ಸಲಕ್ಕೆ ತನ್ನ ಮಾತು ಕೇಳುವಂತೆ ಮಾಡಿಕೊಂಡ. ಜನ ನಿಬಿಡ ಸ್ಥಳಗಳಲ್ಲಿ ಬೃಹತ್ ಸ್ಪೀಕರ್ ಗಳು ಅವನ ಭಾಷಣವನ್ನು ಬಿತ್ತರಿಸತೊಡಗಿದವು.


ಅವನು ಸಾರ್ವಜನಿಕವಾಗಿ ಯಾವುದಾದರೂ ಊರಲ್ಲಿ ಭಾಷಣ ಮಾಡುವುದು ಇತ್ತೆಂದರೆ, ಅಂದು ಅಲ್ಲಿ ಶಾಲೆಗಳಿಗೆ, ಅಂಗಡಿ-ಮುಗ್ಗಟ್ಟುಗಳಿಗೆ ರಜೆ ಘೋಷಿಸಲಾಗುತ್ತಿತ್ತು. ಅವನ ಭಾಷಣ ಕೇಳುವುದು ಎಲ್ಲರಿಗೂ ಕಡ್ಡಾಯವಾಗಿತ್ತು. ಅವನು ಭಾಷಣ ಮಾಡುವ ವೇದಿಕೆಯಲ್ಲಿ ಅವನು ಪ್ರಕಾಶಮಾನವಾಗಿ ಕಾಣುವಂತೆ ದೀಪಗಳಿಂದ ಸಜ್ಜುಗೊಳಿಸಲಾಗುತ್ತಿತ್ತು. ಅಲ್ಲಿ ಸೇರಿದ ಜನ ಸಮೂಹ ಅವನ ಹೆಸರನ್ನೇ ಜಪಿಸುವಂತೆ ಹಿನ್ನೆಲೆ ಸಂಗೀತ ನೀಡಲಾಗುತ್ತಿತ್ತು. ಜನರ ಉನ್ಮಾದ ತಾರಕಕ್ಕೇರಿದ ಮೇಲೆ ಮುಸ್ಸಲೋನಿ ವೇದಿಕೆಯ  ಮೇಲೆ ಪ್ರತ್ಯಕ್ಷನಾಗಿ ಅವರ ಹುಚ್ಚನ್ನು ಇನ್ನು ಅಧಿಕಗೊಳಿಸುತ್ತಿದ್ದ.

No comments:

Post a Comment