Tuesday, January 18, 2022

ಕಥೆ: ಸ್ವಗತಾ ಲಹರಿ

ಅಂದು ಅಸಮಾಧಾನ ಹೆಚ್ಚಿ ತಾಳ್ಮೆ ಮುಗಿದು ಹೋಗಿತ್ತು. ಜಾಗ ಬದಲಿ ಮಾಡುವುದು ವಾಸಿ ಎಂದೆನಿಸಿ, ಮಾಡುತ್ತಿದ್ದ ಕೆಲಸ ಅರ್ಧಕ್ಕೆ ನಿಲ್ಲಿಸಿ, ಲ್ಯಾಪ್ ಟಾಪ್ ಮುಚ್ಚಿ, ಬಟ್ಟೆ ಜೋಡಿಸಿಕೊಂಡು ಕಾರು ತೆಗೆದುಕೊಂಡು ಬೆಂಗಳೂರಿಗೆ ಹೊರಟು ಬಿಟ್ಟೆ. ಸಿಂಧನೂರು, ಗಂಗಾವತಿ, ಹೊಸಪೇಟೆ ಎಲ್ಲ ಊರುಗಳನ್ನು ದಾಟಿ ಕಾರು ಸರಾಗವಾಗಿ ಹೋಗುತ್ತಿತ್ತು. ಹೊಟ್ಟೆ ಹಸಿದು ಚುರ್ರ್ ಎನ್ನುತ್ತಿದ್ದರೂ, ಸೋತು ಹೋದ ಮನಸು ಊಟ ಮಾಡಲು ಒಪ್ಪಲಿಲ್ಲ. ಚಿತ್ರದುರ್ಗದ ಮುರುಘಾ ಮಠ ಸೇರುವ ಹೊತ್ತಿಗೆಲ್ಲ ಸಾಯಂಕಾಲದ ಸಮಯ. ಮಠದ ನೆರಳು ತಲೆ ಸಿಡಿಯುವುದನ್ನು ಕಡಿಮೆ ಮಾಡಿತ್ತು. ಮುಳುಗುವ ಸೂರ್ಯ ಚಿತ್ರದುರ್ಗದ ಬೆಟ್ಟವನ್ನು ಕೆಂಪಾಗಿಸಿದ್ದ. ಆ ಬೆಟ್ಟದ ಮೇಲೆ ಕೋಟೆಯ ಗೋಡೆಗಳ ಸಾಲುಗಳು ನೆತ್ತರು ಬೀರಿದಂತೆ ಕೆಂಪಾಗಿ ಕಾಣುತ್ತಿದ್ದವು. ಕಲ್ಲಿನ ಕೋಟೆ ಕಟ್ಟಿ, ರಕ್ತದ ಹೊಳೆ ಹರಿಸಿದ ನಾಯಕರಿಗಿಂತ, ಕರುಣಾ ಸೌಧವನ್ನು ಕಟ್ಟಿದ ಶರಣರ ಜೀವನ ಸಾರ್ಥಕ ಎನಿಸಿತು. ಜೀವನ  ಸಾಕಾದವರಿಗೆ ಸುಡುಗಾಡು ಅಲ್ಲದೆ ಇನ್ನೊಂದು ಆಯ್ಕೆ ಇರಲಿ ಎನ್ನುವುದಕ್ಕಾಗಿ ಶರಣರು ಮಠ ಕಟ್ಟಿದರೇನೋ ಎನಿಸಿತು. ಅಷ್ಟೊತ್ತಿಗೆ ಮತ್ತೆ ನನ್ನ ನೆತ್ತಿ ಸುಡುತ್ತಾ ಜ್ವರ ಏರಲು ಆರಂಭಿಸಿತ್ತು. ಹತ್ತಿರದಲ್ಲೇ ರೂಮು ಹುಡುಕಿ, ಮಾತ್ರೆ ತೆಗೆದುಕೊಂಡು ಮಲಗಿಬಿಟ್ಟೆ. ಮರುದಿನ ಬೆಳ್ಳಿಗೆ ಏಳುವ ವಿಶ್ವಾಸ, ಆಸೆ ಎರಡೂ ಉಳಿದಿರಲಿಲ್ಲ. ಆದರೆ ಅದಕ್ಕೆ ತದ್ವಿರುದ್ಧವಾಗಿ, ಬೆಳಿಗ್ಗೆ ಜ್ವರ ತಗ್ಗಿ ಮನಸ್ಸು ಹಗುರಾಗಿತ್ತು. ಮಾತ್ರೆಯೋ, ನಿದ್ದೆಯೊ, ಶರಣ ಆಶೀರ್ವಾದವೋ ಯಾವುದು ಕೆಲಸ ಮಾಡಿತ್ತು ತಿಳಿಯಲಿಲ್ಲ. ಎರಡು ಇಡ್ಲಿ ತಿಂದು, ಕಾರಿಗೆ ಡೀಸೆಲ್ ತುಂಬಿಸಿ ಬೆಂಗಳೂರಿನ ಕಡೆಗೆ ಪ್ರಯಾಣ ಆರಂಭಿಸಿದೆ. ಕಾರು ತೇಲಿದಂತೆ ಕರೆದುಕೊಂಡು ಹೋಗುತ್ತಿತ್ತು. ಇದೇ ಕಾರು ಹತ್ತು ವರುಷದ ಹಿಂದೆ ಇದ್ದಿದ್ದರೆ, ಇಡೀ ಕರ್ನಾಟಕವನ್ನು ಕನಿಷ್ಠ ಒಂದು ಡಜನ್ ಸಲ ಆದರೂ ಸುತ್ತದೇ ಬಿಡುತ್ತಿದ್ದಿಲ್ಲ ಅಂದುಕೊಂಡೆ. ನೋಡುವಷ್ಟರಲ್ಲಿ ಬಂದೇ ಬಿಟ್ಟಿತು ಬೆಂಗಳೂರು.

 

ಮನೆ ಮುಂದಿರುವ ಕಾರ್ಮಿಕರ ಶೆಡ್ ನಲ್ಲಿ ಅಂದು ಸಂಜೆ ಹೊಸಬರು ವಾಸ ಆರಂಭಿಸಿದ್ದರು. ಅವರಲ್ಲಿ ಒಬ್ಬನು ತನ್ನ ಹೆಸರು 'ಕುಮಾರ್' ಎಂದು ನನ್ನ ಜೊತೆ ಪರಿಚಯ ಮಾಡಿಕೊಂಡ. ಬರೀ 'ಕುಮಾರ್' ಅನ್ನುವ ಹೆಸರು ಯಾಕೋ ಸರಿ ಹೊಂದುತ್ತಿಲ್ಲ. ಹಿಂದೆ ಅಥವಾ ಮುಂದೆ ಏನಾದರು ಸೇರಿಸಿ 'ರಾಜ್ ಕುಮಾರ್' ಎಂದೋ ಇಲ್ಲವೋ 'ಕುಮಾರ ರಾಮ' ನೆಂದೋ ಹೇಳಿದ್ದರೆ ಸಮಂಜಸ ಆಗುತ್ತಿತ್ತು ಎಂದು ಹೇಳಿದೆ. ಆದರೆ ಅವನು ಕಣ್ಣು ನೆಟ್ಟಿದ್ದು ನಮ್ಮ ಮನೆ ಮುಂದಿರುವ ಸಂಪಿಗೆ ಮರದ ಕಡೆಗೆ. ಅಲ್ಲಿ ಯಾಕೆ ಜೋಕಾಲಿ ಕಟ್ಟಿದ್ದು ಎಂದು ಕೇಳಿದ. ಅವು ಕಟ್ಟಡ ಕಾರ್ಮಿಕರು ತಮ್ಮ ಮಕ್ಕಳನ್ನು ಮಲಗಿಸುವ ಜೋಳಿಗೆ, ಅವನ್ನು ಬಿಚ್ಚದೆ ಹಾಗೆ ಬಿಟ್ಟು ಹೋಗಿದ್ದಾರೆ ಎಂದು ನಾನು ಹೇಳಿದೆ. ಅವನು ಅಸಮಾಧಾನದಿಂದ, ಅವನ್ನು ಹಾಗೆ ಬಿಡಬಾರದು, ಒಳ್ಳೆಯದಲ್ಲ ಎಂದು ಹೇಳಿದ. ಮತ್ತು ಅವುಗಳನ್ನು ಬಿಚ್ಚುವದಕ್ಕೆ ಸಹಾಯ ಮಾಡಿದ. ಅವುಗಳನ್ನು ಬಿಚ್ಚದಿದ್ದರೆ, ರಾತ್ರಿ ವೇಳೆಯಲ್ಲಿ ದೆವ್ವಗಳು ಅಲ್ಲಿ ಜೋಕಾಲಿ ಆಡುವುದಾಗಿ, ಆ ವಿಷಯ ತನಗೆ ಗೊತ್ತಿರುವುದಾಗಿ, ಮತ್ತು ಆ ವಿಷಯ ಅವನು ಪೂರ್ತಿ ಹೇಳಿದರೆ ನಾನು ಆ ರಾತ್ರಿ ನಿದ್ದೆಯೇ ಮಾಡುವುದಿಲ್ಲ ಎಂದು ಹೆದರಿಸಿದ. ಅಮಾವಾಸ್ಯೆ ಒಂದೆರಡು ದಿನಗಳಷ್ಟು ಹತ್ತಿರವಿತ್ತು. ಮಬ್ಬುಗತ್ತಲಿನಲ್ಲಿ ಅವನ ಮುಖ ನೋಡಿದೆ. ದವಡೆಯ ತುಂಬಾ ಗುಟಖಾ ಜಗಿಯುತ್ತಿದ್ದ ಅವನು ದೆವ್ವವಲ್ಲ, ಮನುಷ್ಯನೇ ಎಂದು ಖಾತರಿಯಾಗಿ ನಿರಾಳವಾಯಿತು.

 

ಅಂದು ರಾತ್ರಿ ಮನೆಯಲ್ಲಿ ಒಬ್ಬನೇ ಮಲಗಿದೆ. ನಡು ರಾತ್ರಿ ಎರಡು, ಮೂರು ಘಂಟೆ ಹೊತ್ತಿಗೆ ಯಾರೋ ಒಂದು ಹೆಣ್ಣು ಧ್ವನಿ 'ಅಣ್ಣಾ' ಎಂದು ಕರೆದ ಹಾಗೆ. ಅರೆ ನಿದ್ದೆಯಲ್ಲಿ ಇದ್ದ ನಾನು, ಕಿಟಕಿಯಿಂದ ಯಾರಾದರೂ ಕೂಗುತ್ತಿರಬಹುದಾ ಅಂದುಕೊಂಡೆ. ಆದರೆ ಧ್ವನಿ ಹೊರಗಡೆಯಿಂದ ಬರುತ್ತಿರಲಿಲ್ಲ. ಕಿವಿಯನ್ನು ಬಲವಾಗಿ ಮುಚ್ಚಿಕೊಂಡು ನೋಡಿದೆ. ಧ್ವನಿ ಕೇಳಿಸುತ್ತಿದ್ದದ್ದು ಸೀದಾ ಮನಸಿನಲ್ಲಿ. ಅದು ಕೆಲವು ವರುಷಗಳ ಹಿಂದೆ ಅನಾರೋಗ್ಯದಿಂದ ತೀರಿಕೊಂಡ ನನ್ನ ಚಿಕ್ಕಮ್ಮಳ ಮಗಳು, ನನ್ನ ತಂಗಿಯ ಧ್ವನಿಯನ್ನು ಹೋಲುತ್ತಿತ್ತು. ಅಷ್ಟರಲ್ಲೇ ಇನ್ನೊಂದು ಗಂಡು ಧ್ವನಿ ಕೇಳಿಸಿತು. 'ಎಷ್ಟು ಹೆದರಿಕೊಳ್ಳುತ್ತೀಯಲ್ಲ ಅಣ್ಣ ನೀನು?'. ಸಂದೇಹವೇ ಇಲ್ಲ, ಅದು ಕೆಲವೇ ತಿಂಗಳುಗಳ ಹಿಂದೆ ಅಸಹಜವಾಗಿ ತೀರಿಕೊಂಡ ನನ್ನ ಇನ್ನೊಬ ಚಿಕ್ಕಮ್ಮಳ ಮಗ, ನನ್ನ ತಮ್ಮನದು. ನಿದ್ದೆ ಹಾರಿ ಹೋಯಿತು. ಎದ್ದು ಕುಳಿತುಕೊಂಡೆ. ಅವರು ಯಾಕೆ ನನ್ನನ್ನು ಮಾತನಾಡಿಸುತ್ತಿದ್ದಾರೆ ಎಂಬ ಪ್ರಶ್ನೆಗೆ ಕ್ಷಣಾರ್ಧದಲ್ಲೇ ಉತ್ತರ ಹೊಳೆಯಿತು. ಅವರು ಬಂದಿರುವುದು ತಮ್ಮ ನೋವು ತೋಡಿಕೊಳ್ಳಲು. ನನಗೇ ಯಾರಾದರೂ ಸಮಾಧಾನ ಹೇಳಬೇಕಾದ ಪರಿಸ್ಥಿತಿಯಲ್ಲಿರುವಾಗ, ನಾನು ಅವರಿಗೇನು ಸಮಾಧಾನ ಹೇಳಬಲ್ಲೆ? ಆದರೆ ಎದ್ದು ಕುಳಿತ ಮೇಲೆ, ಬರೀ ಗುಂಯ್ಗುಡುವ ಸದ್ದು. ಅದರ ಅರ್ಥ ಏನು ಎಂದು ತಿಳಿಯದೇ ಹೋಯಿತು. ನನ್ನ ನೋವಿಗಿಂತ ಅವರ ನೋವು ತೀವ್ರವಾದದ್ದು ಎನ್ನುವುದು ಅರಿವಿಗೆ ಬಂತು. ಆದರೆ ಮುಂದೆ ಯಾವ ಸಂಪರ್ಕವೂ ಸಾಧ್ಯವಾಗಲಿಲ್ಲ. ಹಾಸಿಗೆಯಲ್ಲಿ ಹೊರಳಾಡುತ್ತಾ ನಿದ್ದೆಗೆ ಜಾರಿದ್ದು ತಿಳಿಯಲೇ ಇಲ್ಲ.

 

ಮರುದಿನ ಬೆಳ್ಳಿಗೆ ಹೊತ್ತಿಗೆ ಫೋನ್ ಮಾಡಿದ್ದ ಅಕ್ಕ ಕೇಳುತ್ತಿದ್ದಳು 'ಹುಷಾರಾಗಿದ್ದೀಯ?'. ಬದುಕಿದ್ದೀಯಾ ಎಂದು ನೇರವಾಗಿ ಕೇಳದೆ ಸೂಕ್ಷ್ಮವಾಗಿ ಕೇಳುತ್ತಿದ್ದಾಳೆ ಅಂದುಕೊಂಡೆ. ಎರಡು ದಿನದ ಒಬ್ಬಂಟಿತನ, ನೋವು, ಅನುಭವಗಳ ಮೆಲುಕು ಹಾಕಿದ ಮೇಲೆ ನನಗೇ ಅರಿವಾಗತೊಡಗಿತ್ತು. ಬುದ್ಧ ಹೇಳಿದ್ದು ಬರೀ ಆಸೆಗಳನ್ನು ಗೆಲುವುದಕ್ಕಲ್ಲ. ಆವೇಶ, ಆಲೋಚನೆಗಳನ್ನು ಕೂಡ ಗೆಲ್ಲು ಎಂದು. ನಮ್ಮ ದೇಹ ನಾವಲ್ಲವಾದರೆ, ನಮ್ಮ ಮನಸ್ಸು ಕೂಡ ನಾವಲ್ಲ. ಮನಸ್ಸು ಮಾಡುವ ವಿಚಾರಗಳು ಕೂಡ ನಾವಲ್ಲ. ಅದು ಪಡುವ ಸಂತೋಷ, ನೋವುಗಳೂ ಕೂಡ ನಾವಲ್ಲ. ಹಾಗಾದರೆ ಮನಸ್ಸಿನ ಜೊತೆ ನಮಗೆ ಇರಬಹುದಾದ ಸಂಬಂಧ ಎಂಥದ್ದು? ಅದು ಕರ್ಮಫಲ ಎಂದು ಸೂಕ್ಷ್ಮವಾಗಿ ತಿಳಿಸುತ್ತದೆ ನಮ್ಮ ಧರ್ಮಗ್ರಂಥಗಳು. ಆದರೆ ವಿಜ್ಞಾನ ಮಾತ್ರ ಆತ್ಮ, ಕರ್ಮ ಇರುವುದಕ್ಕೆ ಯಾವ ಸಾಕ್ಷಿಯೂ ಇಲ್ಲ ಎಂದು ಅದನ್ನು ಸಾರಾ ಸಗಟಾಗಿ ತಿರಸ್ಕರಿಸುತ್ತದೆ. ದೇಹ, ಮನಸ್ಸು ಬೇರೆ ಬೇರೆ ಅಲ್ಲ. ಮನಸ್ಸು  ಹುಟ್ಟಿಸುವ ಭ್ರಮೆಗಳು ನಮ್ಮಲ್ಲಿ ವಿಚಿತ್ರ ಅನುಭವ ಹುಟ್ಟಿಸುತ್ತವೆ. ಅದಕ್ಕೆಲ್ಲ ನಮ್ಮ ದೇಹದಲ್ಲಿ ಶ್ರವಿಸುವ ರಾಸಾಯನಿಕಗಳು ಕಾರಣ ಎನ್ನುವ ವಿವರಣೆಯನ್ನು ವಿಜ್ಞಾನ ಕೊಡುತ್ತದೆ.

 

ನನ್ನ ಮೊಬೈಲ್ ನಲ್ಲಿ ಬ್ಯಾಂಕ್ ನವರು ಮೆಸೇಜ್ ಕಳಿಸಿದ್ದರು. ಮನೆ ಸಾಲದ ಕಂತು ಇನ್ನೆರಡು ದಿನಗಳಲ್ಲಿ ಕಟ್ಟಬೇಕು, ಖಾತೆಯಲ್ಲಿ ಹಣ ಇರುವಂತೆ ನೋಡಿಕೊಳ್ಳಿ ಎಂದು. ಲ್ಯಾಪ್ ಟಾಪ್ ತೆಗೆದು ನೋಡಿದರೆ, ಕೆಲಸ ಅರ್ಧಕ್ಕೆ ಬಿಟ್ಟು ಹೋದರೆ ಹೇಗೆ ಮಾರಾಯ ಎನ್ನುವ ಹಾಗೆ ಈ-ಮೇಲ್ ಗಳ ರಾಶಿಯಿತ್ತು. ಅಧ್ಯಾತ್ಮವೋ, ವಿಜ್ಞಾನ ಹೇಳುವ ಹಾಗೆ ಭ್ರಮೆಯೋ ಎನ್ನುವುದು ಅವಸರದಲ್ಲಿ ನಿರ್ಧರಿಸಬೇಕಿಲ್ಲ. ಅವಸರ ಇರುವುದು ಲೌಕಿಕ ಜೀವನದ ಕಟ್ಟುಪಾಡುಗಳು, ಜವಾಬ್ದಾರಿಗಳನ್ನು ನಿಭಾಯಿಸುವುದರಲ್ಲಿ ಅಲ್ಲವೇ? ಅಲ್ಲಿಗೆ ನನ್ನ ಸ್ವಗತಾ ಲಹರಿ ತುಂಡಾಯಿತು. ಜೀವನದ ನೊಗ ಮತ್ತೆ ಹೊತ್ತು ತಿರುಗಣಿಗೆ ಬಿದ್ದದ್ದಾಯಿತು. ಇಂದಿಗೆ ಆ ಅನುಭವ, ಯಾವುದೇ ಆವೇಶ, ಉದ್ವೇಗ ಇಲ್ಲದ ಬರೀ ನೆನಪು ಮಾತ್ರ. ಹಾಗಾಗಿ ಅದೊಂದು ಹೊತ್ತುಕಳೆಯಲು ಹೇಳುವ ಕಥೆ ಅಷ್ಟೇ.

Thursday, January 13, 2022

೨೦೨೧: ಒಂದು ಹಿನ್ನೋಟ

ಕಳೆದ ವರುಷದ ಬದುಕು ನೀಡಿದ ಅನುಭವಗಳ ಒಂದು ಹಿನ್ನೋಟ.


೧. ನನಗೆ ಹೊಸ ಅಭ್ಯಾಸ ಎನ್ನುವಂತೆ, ಪ್ರತಿ ದಿನ ಅಲ್ಲದಿದ್ದರೂ ಸಾಕಷ್ಟು ದಿನಗಳ ಆರಂಭ ಆಗಿದ್ದು ಭಕ್ತಿ ಗೀತೆಗಳಿಂದ. ಪುರಂದರ ದಾಸರ 'ಬೇವು ಬೆಲ್ಲದೊಳಿಡಲೇನು ಫಲ', 'ಕಲ್ಲು ಸಕ್ಕರೆ ಕೊಳ್ಳಿರೋ', ಕನಕದಾಸರ 'ಎಸು ಕಾಯಂಗಳ ಕಳೆದು', 'ಬಾಗಿಲನು ತೆರೆದು', ಶಿಶುನಾಳ ಶರೀಫರ 'ಹಾಕಿದ ಜನಿವಾರವ', 'ದೇಹದ ಗುಡಿಯ ನೋಡಿರಣ್ಣ' ಈ ಗೀತೆಗಳು ಮಾತ್ರ ಪ್ರತಿದಿನ ಖಾಯಂ. ಕೇಳುವುದಷ್ಟೇ ಅಲ್ಲದೆ ಮೆಲ್ಲಗೆ ಅವುಗಳನ್ನು ಹಾಡಿಕೊಳ್ಳುವಷ್ಟು ತಲ್ಲೀನತೆ. ದಾಸರು ಹೃದಯದಾಳದಷ್ಟೇ ಅಲ್ಲ, ನಾಲಿಗೆಯ ತುದಿ ಮೇಲೂ ನಲಿಯುತ್ತಾರೆ.


೨. ಒಟ್ಟಾರೆ ಓದಿದ ಪುಸ್ತಕಗಳು ಸುಮಾರು ೪೦. ಸಂಖ್ಯೆಗಿಂತ ಗುಣಮಟ್ಟಕ್ಕೆ ಒತ್ತು ಕೊಡುತ್ತಿರುವುದರಿಂದ, ಕೈಗೆತ್ತಿಕೊಳ್ಳುವ ಪುಸ್ತಕದಲ್ಲಿ ಈಗ ನಾನು ತುಂಬಾ ಕಟ್ಟು ನಿಟ್ಟು. ಅತಿ ಪ್ರಭಾವ ಬೀರಿದ ಪುಸ್ತಕ ಎಂದರೆ 'Yuval Harrari' ಅವರು ಬರೆದ 'Sapiens' ಪುಸ್ತಕ. ವೇದ, ಉಪನಿಷತ್ತುಗಳಲ್ಲಿ ದೊರಕದ ಉತ್ತರಗಳು ನನಗೆ ಈ ಪುಸ್ತಕದಲ್ಲಿ ಸಿಕ್ಕವು. ಅರ್ಥವಿಲ್ಲದ ಜೀವನದಲ್ಲಿ, ಅರ್ಥ ಹುಡುಕುವ ಅಥವಾ ತನ್ನದೇ ಅರ್ಥ ತುಂಬುವ ಪ್ರಯತ್ನವನ್ನು ಮಾನವ ಅನಾದಿ ಕಾಲದಿಂದಲೂ ಜಾರಿಯಲ್ಲಿಟ್ಟಿದ್ದಾನೆ. ಪ್ರಕೃತಿ (ಜೀನ್, ಹಾರ್ಮೋನ್ ಗಳ ಮೂಲಕ) ಆಡಿಸುವ ಆಟದ ಕೈಗೊಂಬೆಯಾದ ಮಾನವ ಲಕ್ಷಾಂತರ ವರುಷಗಳ ಕಾಲ ವಿಕಾಸ ಹೊಂದಿದ ಬಗೆಯನ್ನು ವಿವರಿಸುವ ಈ ಪುಸ್ತಕ ಅಸಾಮಾನ್ಯವಾದದ್ದು.


೩. ಕಳೆದ ವರ್ಷ ನನ್ನ ಮೇಲೆ ಪ್ರಭಾವ ಬೀರಿದ ವ್ಯಕ್ತಿ 'ನವಲ್ ರವಿಕಾಂತ್'. ಭಾರತೀಯ ಮೂಲದ, ಅಮೇರಿಕಾದಲ್ಲಿ ವಾಸಿಸುವ, ಹೊಸ ತರಹದ ಕಂಪೆನಿಗಳಲ್ಲಿ ಹೂಡಿಕೆ ಮಾಡುವ ಈತ, ತನ್ನ podcast ಗಳ ಮೂಲಕ ಜೀವನಾನುಭವಗಳನ್ನು ಹಂಚಿಕೊಂಡಿದ್ದಾನೆ. ಆತನ ಮಾತುಗಳು ನನಗೆ ಸರಿಯಾದ ನಿರ್ಧಾರಗಳು ತೆಗೆದುಕೊಳ್ಳುವುದರಲ್ಲಿ ಅತ್ಯಂತ ಸಹಕಾರಿ ಎನಿಸಿದವು.


೪. ನಾನು ಬ್ಲಾಗ್ ನಲ್ಲಿ ಬರಹಗಳನ್ನು ಬರೆಯುವುದನ್ನು ೨೦೧೩ ರಲ್ಲೇ ಪ್ರಾರಂಭಿಸಿದರೂ, ಅವುಗಳನ್ನು ನಿರ್ಭಯದಿಂದ Facebook ನಲ್ಲಿ ಹಂಚಿಕೊಳ್ಳುವುದನ್ನು ಪ್ರಾರಂಭಿಸಿದ್ದು ಕಳೆದ ವರುಷ. ಅದರ ಪರಿಣಾಮವಾಗಿ, ಕೆಲವು ಗೆಳೆಯರು ನನ್ನಲ್ಲಿರುವ ಬರಹಗಾರನನ್ನು ಗುರುತಿಸುತ್ತಿರುವುದು ಸಂತೋಷದ ವಿಷಯ. ಕಳೆದ ವರುಷ ಬರೆದ ಬರಹಗಳ ಸಂಖ್ಯೆ ೧೦೧.


೫. ಹಣಕಾಸಿನ ವಿಚಾರದಲ್ಲಿ ಕಳೆದ ವರ್ಷ ತೆಗೆದುಕೊಂಡ ನಿರ್ಧಾರಗಳು ನಿರೀಕ್ಷೆಗೂ ಮೀರಿದ ಲಾಭವನ್ನು ತಂದುಕೊಟ್ಟವು. ನನ್ನನ್ನು ಕೆಲಸದಲ್ಲಿಟ್ಟುಕೊಂಡು ಸಲಹುವ 'Applied Materials' ಕಂಪನಿಗೂ ಮತ್ತು ದೊಡ್ಡ ಮಟ್ಟದ ಹಣ ಸರಾಗವಾಗಿ ಖರ್ಚು ಮಾಡುವಷ್ಟು ಸವಲತ್ತು ನೀಡಿದ ಷೇರು ಮಾರುಕಟ್ಟೆಗೂ ನಮೋ ನಮಃ.


೬. ಕೆಲ ಕುಟುಂಬದ ಸದಸ್ಯರು ತಮ್ಮ ದೌರ್ಬಲ್ಯಗಳಿಗೆ ನಮ್ಮನ್ನು ಹೊಣೆಗಾರರನ್ನಾಗಿಸಿ, ಅತಿ ಎನಿಸುವಷ್ಟು ದೋಷಾರೋಪಗಳನ್ನು ಮಾಡಿ ನಮ್ಮನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳುವ ಪ್ರಯತ್ನ ಮಾಡುತ್ತಾರಲ್ಲ. ಅಂತಹ ಒಂದು ಬೆನ್ನೇರಿದ ಬೇತಾಳವನ್ನು ಕೆಳಗಿಳಿಸುವುದಷ್ಟರಲ್ಲಿ, ನನ್ನ ತಲೆಯ ಕೂದಲಿನ ಸ್ವಲ್ಪ ಭಾಗ ಬೆಳ್ಳಗಾಗಿ ಹೋಗಿದ್ದು ಕಳೆದ ವರುಷದ ವಿಶಿಷ್ಟ ಅನುಭವ. ಸಮಯಕ್ಕೆ ಸರಿಯಾಗಿ ಧೈರ್ಯ ತುಂಬಿದ ಸ್ನೇಹಿತರಿಗೊಂದು ಹೃದಯಪೂರ್ವಕ ಸಲಾಂ.


೭. ಸಾಮಾಜಿಕ ಸೇವೆಯ ಕಾರ್ಯಗಳಿಗೆ ಕಳೆದ ವರುಷ ಹೆಚ್ಚಿನ ಪ್ರಮಾಣದಲ್ಲಿ ಕೊಡುಗೆ ನೀಡಲು ಸಾಧ್ಯವಾದರೂ ಅದನ್ನು ಇನ್ನು ಉತ್ತಮವಾಗಿಸಲು ಸಾಧ್ಯವಿತ್ತು ಎಂದು ನನಗೇ ಅನ್ನಿಸಿದೆ.


೮. ಎರಡು ವಾರ ಟೈಫಾಯಿಡ್ ಗುಮಾನಿಯಿಂದ ಮಲಗಿದ್ದು ಬಿಟ್ಟರೆ, ಆರೋಗ್ಯ ಕೈ ಕೊಟ್ಟಿಲ್ಲ.


೯. ವರುಷದ ಆರಂಭದಲ್ಲಿ ಶೃಂಗೇರಿ, ಹೊರನಾಡು ಪ್ರವಾಸ ಮಾಡಿದ್ದು ಬಿಟ್ಟರೆ, ಕೋವಿಡ್ ಮೂದೇವಿ ಬೇರೆ ಪ್ರವಾಸ ಮಾಡಲು ಬಿಟ್ಟಿಲ್ಲ.


ಇದು ನನ್ನ ೨೦೨೧ ರ ಹೈಲೈಟ್ಸ್. 


ಆಸೆ-ನಿರಾಸೆಗಳ ಉಯ್ಯಾಲೆ ಏರದೇ, ಬಂದಿದ್ದು ಬರಲಿ ಎನ್ನುವ ನಿರ್ಲಿಪ್ತತೆಯಿಂದ ಹೊಸ ವರುಷಕ್ಕೆ ಕಾಲಿಟ್ಟಿದ್ದೇನೆ. ದಾಸರು ಮನದಲ್ಲಿ ಜಾಗ ಮಾಡಿದರೂ, ವ್ಯಾಪಾರೀ ಬುದ್ಧಿ ಇನ್ನೂ ಹೋಗಿಲ್ಲ. ಹಣ ಗಳಿಸುವುದನ್ನು, ಮಕ್ಕಳ ಜವಾಬ್ದಾರಿಯನ್ನು ಇಷ್ಟ ಪಟ್ಟೇ ಮಾಡುತ್ತೇನೆ. ಓದಲು ಸಾಕಷ್ಟು ಪುಸ್ತಕಗಳು ಉಳಿದಿವೆ. ಸಮಯ ಕಳೆದದ್ದು ಗೊತ್ತಾಗದಂತೆ ಇರಲು, ಕಷ್ಟ-ಸುಖ ಹಂಚಿಕೊಳ್ಳಲು ನಿಮ್ಮಂತಹ ಸಮ ಮನಸ್ಸಿನ ಸ್ನೇಹಿತರಿದ್ದೀರಿ.


ಕಳೆದ ವರುಷ ನಿಮಗೆ ಹೇಗಿತ್ತು? ಹತ್ತರ ಜೊತೆಗೆ ಹನ್ನೊಂದೋ ಅಥವಾ ವಿಶಿಷ್ಟವೋ? ಈ ವರುಷದ ನಿಮ್ಮ ಗುರಿಗಳು ಏನು? ಮಾತಾಡೋಣ, ಸಿಗ್ತೀವಲ್ಲ.

Tuesday, December 28, 2021

ಕುರಿಯಲ್ಲಿ ಕುರಿ ಬುದ್ಧಿ ತುಂಬಿದವರಾರು?

ಸುಮಾರು ೭೦,೦೦೦ ವರುಶಗಳಷ್ಟು ಹಿಂದೆ ಆದಿವಾಸಿ ಮನುಷ್ಯ ಗುಡ್ಡಗಾಡು ಅಲೆಯುತ್ತ, ಚಿಕ್ಕ ಪುಟ್ಟ ಪ್ರಾಣಿಗಳನ್ನು ಬೇಟೆಯಾಡುತ್ತ ಬದುಕುತ್ತಿರಲಿಲ್ಲವೇ? ಗುಹೆಗಳಲ್ಲಿ ವಾಸಿಸುತ್ತಿದ್ದ ಅವನು ದೊಡ್ಡ ಪ್ರಾಣಿಗಳನ್ನು ಬೇಟೆಯಾಡಲು ಅಸಮರ್ಥನಾಗಿದ್ದ. ಹುಲಿ, ಸಿಂಹಗಳಿಗಿದ್ದಷ್ಟು ದೈಹಿಕ ಸಾಮರ್ಥ್ಯ, ಬಲವಾದ ಉಗುರುಗಳು, ಕೋರೆ ಹಲ್ಲುಗಳು ಅವನಿಗಿರಲಿಲ್ಲ. ತನ್ನ ದೌರ್ಬಲ್ಯ ನೀಗಿಸಲು ಅವನು ಸಂಘ ಜೀವಿಯಾದ. ಗುಂಪಾಗಿ ಬೇಟೆಯಾಡುವುದು ಆ ಕಾಲದ ಮನುಷ್ಯನಿಗೆ ಅನುಕೂಲ ಎನಿಸಿತು. ಬೆಂಕಿಯ ಉಪಯೋಗ ಕಲಿತ ಮೇಲೆ, ಮಾಂಸ ಬೇಯಿಸಿ ತಿನ್ನುವುದನ್ನು ಕಲಿತ. ಅದರಿಂದ ಅವನ ಜೀರ್ಣ ಶಕ್ತಿಯ ಮೇಲೆ ಒತ್ತಡ ಕಡಿಮೆಯಾಗಿ, ಹಲ್ಲುಗಳು ಚಿಕ್ಕವಾಗಿ, ಕರುಳಿನ ಉದ್ದ ಕಡಿಮೆ ಆಗಿ ಅಲ್ಲಿ ವ್ಯಯವಾಗುತ್ತಿದ್ದ ಶಕ್ತಿಯನ್ನು, ಇಂದ್ರಿಯಗಳಿಗೆ ಮತ್ತು ಮೆದುಳಿಗೆ ವರ್ಗಾಯಿಸಲು ಸಾಧ್ಯ ಆಯಿತು. ಅಲ್ಲಿಂದ ಅವನ ವಿಚಾರ ಶಕ್ತಿ ಮತ್ತು ಹೊಸ ವಿಷಯ ಗ್ರಹಿಸುವ ಶಕ್ತಿ ಹೆಚ್ಚಾಗುತ್ತಾ ಹೋಯಿತು.

 

ಕಾಲ ಕ್ರಮೇಣ ತನ್ನೊಂದಿಗೆ ಬೇಟೆಗೆ ಸ್ಪರ್ಧಿಸುತ್ತಿದ್ದ ಒಂದು ಜಾತಿಯ ತೋಳಗಳ ಗುಂಪನ್ನು ಪಳಗಿಸಿಕೊಂಡ. ಅವು ನಂಬಿಕಸ್ಥ ನಾಯಿಯಾಗಿ ಬದಲಾದವು. ನಾಯಿಗಳು ಅವನಿಗೆ ಬೇಟೆಯಲ್ಲಿ ಸಹಾಯ ಮಾಡುವುದರ ಜೊತೆಗೆ, ರಾತ್ರಿ ಕಾವಲು ಕಾಯಲು, ಇತರೆ ಪ್ರಾಣಿಗಳು ಬಂದಾಗ ಎಚ್ಚರಿಸಲು ಸಹಾಯ ಮಾಡುತ್ತಿದ್ದವು. ತಾನು ಬೇಟೆಯಾಡುತ್ತಿದ್ದ ಮೊಲ, ಕೋಳಿ, ಆಡು-ಕುರಿಗಳನ್ನು ಸಾಕಲು ಆರಂಭಿಸಿದ. ಹಸು-ಎಮ್ಮೆಗಳನ್ನು ಹಾಲಿಗಾಗಿ ಸಾಕಲಾರಂಭಿಸಿದ. ಕುದುರೆಗಳು ಅವನಿಗೆ ಸಾಮಾನು ಸಾಗಿಸಲು, ವೇಗವಾಗಿ ಓಡಾಡಲು ಸಹಾಯವಾಗತೊಡಗಿದವು.

 

ಮೊದಲಿಗೆ ವನ್ಯ ಜೀವಿಗಳಾಗಿದ್ದ ಅವುಗಳಿಗೆ ಮಾನವನಿಗೆ ಹೊಂದಾಣಿಕೆ ಇರಲಿಲ್ಲ. ಆದರೆ ಮಾನವನ ಗ್ರಹಣ ಶಕ್ತಿ ಹೆಚ್ಚುತ್ತಾ ಹೋಗುತ್ತಿತ್ತಲ್ಲವೇ? ಅವನು ಕುರಿ ಮರಿಗಳನ್ನು ಕೊಲ್ಲದೇ, ಅವುಗಳ ದೊಡ್ಡವು ಆಗುವವರೆಗೆ ಸಹನೆ ತೋರಿಸಲು ಆರಂಭಿಸಿದ. ಹಾಗೆಯೆ ಮರಿ ಹಾಕುವ ಹೆಣ್ಣು ಕುರಿಗಳನ್ನು ಕೊಲ್ಲುವುದಕ್ಕಿಂತ ಕಾಯುವುದು ಮೇಲು ಎನ್ನುವುದು ಗ್ರಹಿಸಿದ. ದೊಡ್ಡ ಕುರಿ ಹಿಂಡಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದ ಗಂಡು ಕುರಿಗಳು, ಮುದಿ ಕುರಿಗಳು ಅವನಿಗೆ ಮೊದಲು ಬಲಿಯಾದವು. ಆಕ್ರಮಣಕಾರಿ ಪ್ರವೃತ್ತಿಯ ಗಂಡು ಕುರಿಗಳನ್ನು ಕಂಡ ಕೂಡಲೇ ಕೊಂದು ಹಾಕುತ್ತಿದ್ದ ಅವನು ಅಂತಹ ಗುಣಗಳು ಕುರಿಗಳಲ್ಲಿ ವಂಶವಾಹಿಯಾಗುವುದನ್ನು ಕಡಿಮೆ ಮಾಡಿದ. ಮನುಷ್ಯನಿಗೆ ಸಹನೆ ತೋರಿಸುವ ಗಂಡು ಕುರಿ ಮತ್ತು ಮಂದ ಗತಿಯಲ್ಲಿ ಓಡುವ ಹೆಣ್ಣು ಕುರಿಗಳನ್ನು ಜೊತೆ ಮಾಡಿದ. ಮುಂದೆ ಹುಟ್ಟುವ ಕುರಿ ಮರಿಗಳು ಮನುಷ್ಯನಿಗೆ ಅನುಕೂಲ ಆಗುವ ಗುಣಗಳನ್ನು ಹೊಂದುತ್ತ ಹೋದವು. ಅವುಗಳ ಕಾಡು ಪ್ರವೃತ್ತಿ ಕ್ರಮೇಣ ಮರೆಯಾಗುತ್ತಾ ಹೋಗಿ ಸಾಕು ಪ್ರಾಣಿಗಳಾಗಿ ಬದಲಾದವು. 'Natural Selection' ಎನ್ನುವ ಪ್ರಾಕೃತಿಕ ಕ್ರಿಯೆಯ ಮಧ್ಯಕ್ಕೆ ಕೈ ಹಾಕಿದ ಮಾನವ, ಕೆಲ ಪ್ರಾಣಿ, ಪಕ್ಷಿಗಳಲ್ಲಿ ತನಗೆ ಬೇಕಾದ ಗುಣಗಳು ವಿಕಾಸ ಹೊಂದುವಂತೆ ಮಾಡಲು ಸಫಲನಾದ.

 

ಮನುಷ್ಯ ತಾನು ಪ್ರಕೃತಿಯ ಕೈಗೊಂಬೆಯಾದರೂ, ಇತರೆ ಕೆಲವು ಪ್ರಾಣಿಗಳನ್ನು ತನ್ನ ಅಂಕೆಯಂತೆ ಆಡಿಸಲು ಯಶಸ್ವಿಯಾದ. ಕುರಿಯಲ್ಲಿ ಕುರಿ ಬುದ್ಧಿಯನ್ನು ತುಂಬಿದವರಾರು ಎನ್ನುವ ಪ್ರಶ್ನೆಗೆ ನೀವು ದೇವರು ಅಥವಾ ಪ್ರಕೃತಿ ಎನ್ನುವ ಉತ್ತರ ಕೊಟ್ಟಿರಿ ಜೋಕೆ. ಅದು ನಿಸ್ಸಂದೇಹವಾಗಿ ಮಾನವನದೇ ಕೆಲಸ.

Reference: ‘Sapience’ by Yuval Noah Harrari

ಪ್ರಕೃತಿಯ ಕೈಗೊಂಬೆ ಮಾನವ

ನೀವು ದಟ್ಟ ಕಾಡಿನಲ್ಲಿ ಸಫಾರಿಗೆಂದು ಹೊರಟಿರುವಿರಿ. ಅಲ್ಲಿ ನಿಮ್ಮ ಅದೃಷ್ಟಕ್ಕೆ ಹುಲಿ ಕಣ್ಣಿಗೆ ಬೀಳುತ್ತದೆ. ನೀವು ಸುರಕ್ಷಿತ ಗಾಡಿಯಲ್ಲಿ ಕುಳಿತಿದ್ದು, ನಿಮಗೆ ಯಾವ ಅಪಾಯವಿಲ್ಲದಿದ್ದರೂ ನಿಮ್ಮ ಹೃದಯ ಬಡಿತ ಏರುತ್ತದೆ ಮತ್ತು ಉಸಿರಾಟ ತೀವ್ರವಾಗುತ್ತದೆ. ಅವಶ್ಯಕತೆ ಇರದಿದ್ದರೂ ನಿಮ್ಮ ದೇಹ ಓಡಿ ಹೋಗಲು, ಅಥವಾ ತಪ್ಪಿಸಿಕೊಳ್ಳಲು ಸಜ್ಜು ಮಾಡಿಕೊಳ್ಳುತ್ತದೆ. ಏಕೆ ಹೀಗೆ? ಉತ್ತರ ಸುಲಭ. ಮನುಷ್ಯ ಆದಿವಾಸಿಯಾಗಿ ಕಾಡಿನಲ್ಲಿ ಬದುಕುತ್ತಿದ್ದಾಗ, ಹುಲಿಯನ್ನು ಕಂಡರೆ ಹೇಗೆ ಪ್ರತಿಕ್ರಿಯಿಸುತ್ತಿದ್ದನೋ ಅದೇ ಪ್ರತಿಕ್ರಿಯೆ ಇಂದಿಗೂ ಕೂಡ ಮನುಷ್ಯನಲ್ಲಿ ಹಾಸು ಹೊಕ್ಕಾಗಿದೆ. ಲಕ್ಷಾಂತರ ವರುಷಗಳಿಂದ ವಿಕಾಸ ಹೊಂದುತ್ತಿರುವ ಮಾನವ ಕಾಡು ಬಿಟ್ಟು ನಾಗರಿಕತೆಗೆ ಬಂದು ಕೆಲ ಸಾವಿರ ವರುಶಗಳಷ್ಟೇ ಕಳೆದಿವೆ. ಸುಮಾರು ೪೦೦ ಕೋಟಿ ವರುಷ ಇತಿಹಾಸ ಹೊಂದಿರುವ ಜೀವ ವಿಕಾಸಕ್ಕೆ, ಸಾವಿರ ವರುಷಗಳು ಅಲ್ಪ ಸಮಯ ಮಾತ್ರ. ಇಷ್ಟು ಕಡಿಮೆ ಸಮಯದಲ್ಲಿ ಮನುಷ್ಯನ ಜೀನ್ ಗಳು ಮಾರ್ಪಾಡಾಗುವುದು ಅಸಾಧ್ಯ. ಹಾಗಾಗಿ ಅಲೆಮಾರಿ ಮನುಷ್ಯನ ಪ್ರವೃತ್ತಿಗಳು ಆಧುನಿಕ ಮನುಷ್ಯನಲ್ಲಿ ಕೂಡ ಬದಲಾಗದೆ ಹಾಗೆ ಉಳಿದಿವೆ.


ಪ್ರಕೃತಿಯು ಎಲ್ಲ ಜೀವಿಗಳಲ್ಲಿ ತಾನು ಜೀವ ಉಳಿಸಿಕೊಳ್ಳುವದಕ್ಕೆ ಮತ್ತು ವಂಶ ಮುಂದುವರೆಸುವುದಕ್ಕೆ ಏನು ಬೇಕು ಅದನ್ನು ಮಾತ್ರ ಜೀನ್ ಗಳಲ್ಲಿ ಸಾಂಕೇತಿಕ ಭಾಷೆಯಲ್ಲಿ ಬರೆದುಬಿಟ್ಟಿದೆ. ಅದಕ್ಕೆ ನೋಡಿ ಆಧುನಿಕ ಮನುಷ್ಯ ಎಲ್ಲ ಸವಲತ್ತುಗಳ ನಡುವೆಯೂ ಕೂಡ ನೆಮ್ಮದಿಯಿಲ್ಲದೆ ಒದ್ದಾಡುವುದು. ನೀವು ಬೆಳಿಗ್ಗೆ ಹೊತ್ತಿಗೆ ದೊಡ್ಡ ಲಾಟರಿ ಗೆದ್ದಿರುವಿರಿ ಎಂದುಕೊಳ್ಳೋಣ. ಆದರೆ ಅಂದು ಮಧ್ಯಾಹ್ನ ನೀವು ಊಟ ಮಾಡುವುದು ತಡ ಮಾಡಿದರೆ, ನಿಮ್ಮ ದೇಹ ಸಂಕಟ ಉಂಟು ಮಾಡಿ ನಿಮ್ಮ ಲಾಟರಿ ಗೆದ್ದ ಸಂತೋಷ ಮರೆತು ಹೋಗುವಂತೆ ಮಾಡುತ್ತದೆ. ಏಕೆಂದರೆ ಪ್ರಕೃತಿಗೆ ಮುಖ್ಯವಾಗಿರುವುದು ನೀವು ಊಟ ಮಾಡಿ ಜೀವ ಉಳಿಸಿಕೊಳ್ಳುವುದು. ಹಾಗೆಯೇ ಅದು ಮೈಥುನದಲ್ಲಿ ಆನಂದವನ್ನು ಕ್ಷಣಿಕವಾಗಿಸಿದೆ. ಅದು ಉಂಟುಮಾಡುವ ಸಂವೇದನೆಗೆ ಮತ್ತೆ ಮತ್ತೆ ಹಾತೊರೆಯುವಂತೆ ಮಾಡುತ್ತದೆ. ಪ್ರಕೃತಿಗೆ ಬೇಕಾಗಿರುವುದು ನೀವು ಜೀವ ಉಳಿಸಿಕೊಳ್ಳುವುದು ಮತ್ತು ನಿಮ್ಮ ವಂಶ ಮುಂದುವರೆಯುವುದು ಮಾತ್ರ. ನೀವು ಸಂತೋಷವಾಗಿರುವುದು ಅಲ್ಲ. ನೀವು ಸಂತೋಷದಲ್ಲಿ ಮೈ ಮರೆತು ಬಿಟ್ಟರೆ ಹೇಗೆ? ಹಾಗಾಗಿ ಅದು ಸಂತೋಷವನ್ನು ಕ್ಷಣಿಕವನ್ನಾಗಿಸಿ, ಮತ್ತೆ ಊಟ ಹುಡುಕಿಕೊಳ್ಳುವಂತೆ, ಸಂಗಾತಿಯನ್ನು ಹುಡುಕಿಕೊಳ್ಳುವಂತೆ ಪ್ರೇರೇಪಿಸುತ್ತ ಹೋಗುತ್ತದೆ. ದುಃಖ ಸಂವೇದನೆಗಳನ್ನು ಹೆಚ್ಚಿಸಿ, ಕ್ಷಣಿಕ ಸಂತೋಷದ ಸಂವೇದನೆಗಳಿಗೆ ಹಾತೊರೆಯುವಂತೆ ಮಾಡುತ್ತದೆ.


ಪ್ರಕೃತಿ ವಿಕಾಸ ಸೃಷ್ಟಿಸಿದ ಜೀವಿಗಳು ಸಂಪೂರ್ಣ ನೆಮ್ಮದಿಯಿಂದ ಬದುಕಲಾರವು. ನೆಮ್ಮದಿ ಪ್ರಕೃತಿಯ ಉದ್ದೇಶ ಅಲ್ಲ. ಬದಲಿಗೆ ಅದು ಜೀವಿಗಳನ್ನು ಸ್ಪರ್ಧೆಗೆ, ಪೈಪೋಟಿಗೆ ಹಚ್ಚುತ್ತದೆ. ಮನುಷ್ಯರಲ್ಲಿ ದುಡ್ಡು, ಆಸ್ತಿ, ಸಾಮಾಜಿಕ ಸ್ಥಾನಮಾನ ಇವುಗಳಿಗೆ ಪ್ರತಿ ದಿನ ಪೈಪೋಟಿ ಏರ್ಪಡುತ್ತದೆ. ಅದರಲ್ಲಿ ಗೆದ್ದವರ ಸಂತೋಷ ಕ್ಷಣಿಕ. ಅವರು ಮತ್ತೆ ಹೆಚ್ಚಿನ ಸ್ಪರ್ಧೆಗೆ ಬೀಳುತ್ತಾರೆ. ಆದರೆ ಸೋತವರ ವೇದನೆ ಮಾತ್ರ ದೀರ್ಘ ಕಾಲಿಕ. ವೇದನೆಯ ಸಂವೇದನೆಗಳನ್ನು ಮರೆಯಲು ಮಾನಸಿಕವಾಗಿ ದುರ್ಬಲನಾದ ಮನುಷ್ಯ ತನ್ನ ಸಂಕಟ ಮರೆಯಲು ನಶೆ ಮಾರ್ಗಗಳನ್ನು ಹುಡುಕುತ್ತಾನೆ. ಅವು ಮನುಷ್ಯನಲ್ಲಿ ಉಂಟು ಮಾಡುವ ರಾಸಾಯನಿಕ ಕ್ರಿಯೆಗಳು, ಸಂವೇದನೆಗಳನ್ನು ತಾತ್ಕಾಲಿಕವಾಗಿ ಬದಲು ಮಾಡಿದರೂ, ಪ್ರಕೃತಿ ಮತ್ತೆ ಮರು ದಿನ ಬೆಳಿಗ್ಗೆ ತನ್ನ ನೋವಿನೊಂದಿಗೆ ವಾಪಸ್ಸು ಆಗುತ್ತದೆ.


ಸಂತೋಷ ಎನ್ನುವುದು ಹೊರಗಡೆ ಸಿಗುವ ವಸ್ತುವಲ್ಲ ಅದು ನಮ್ಮಲ್ಲೇ ಇರಬೇಕು ಎಂದು ಹೇಳಿದ್ದು ಬುದ್ಧ. ಈಗ ಇರುವ ಪರಿಸ್ಥಿತಿಯಲ್ಲಿ ನೀವು ಸಂತೋಷವಾಗಿಲ್ಲ ಎಂದರೆ ನೀವು ಯಾವತ್ತೂ ಕೂಡ ಸಂತೋಷವಾಗಿರಲು ಸಾಧ್ಯವಿಲ್ಲ ಎನ್ನುವುದು ಅವನ ಅಭಿಪ್ರಾಯ. ನೀವು ಏನು ಗಳಿಸಿದರು ಅದರ ಆನಂದ ಸ್ವಲ್ಪ ಸಮಯದಲ್ಲಿ ಕಳೆದು ಹೋಗಿ, ಮತ್ತೆ ಹೆಚ್ಚಿನ ಗಳಿಕೆಗೆ ಮುಂದಾಗುವಂತೆ ನಿಮ್ಮ ಮನಸ್ಸನ್ನು ಪ್ರಕೃತಿ ಪ್ರೇರೇಪಿಸುತ್ತದೆ. ಹೀಗೆ ಬಯಸುವುದನ್ನು ನಿಲ್ಲಿಸದಿದ್ದರೆ, ಬಳಲುವುದನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂಬ ಸತ್ಯವನ್ನು ಬುದ್ಧ ಕಂಡುಕೊಂಡಿದ್ದ. ಅದನ್ನೇ ಸರಳವಾಗಿ 'ಆಸೆಯೇ ದುಃಖಕ್ಕೆ ಮೂಲ' ಎಂದು ಹೇಳಿದ. ಗಮನಿಸಿ ನೋಡಿ, ಆಸೆಯನ್ನು ಹುಟ್ಟು ಹಾಕುವುದು ಪ್ರಕೃತಿಯ ಮೂಲ ಗುಣ. ನೀವು ಅದರ ಕೈಗೊಂಬೆಯಾದರೆ, ಅದು ನಿಮ್ಮನ್ನು ಆಟ ಆಡಿಸುತ್ತದೆಯೇ ಹೊರತು ನೆಮ್ಮದಿ ಕೊಡುವುದಿಲ್ಲ. ಪ್ರಕೃತಿಯ ವಿರುದ್ಧ ನಿಮಗೆ ಈಜಲು ಸಾಧ್ಯವಾದರೆ ಮಾತ್ರ ನಿಮಗೆ ಮುಕ್ತಿ ದೊರಕಲು ಸಾಧ್ಯ.


ಪ್ರಕೃತಿಯ ವಿರುದ್ಧ ನೀವು ಈಜುತ್ತಾ ಹೋದಷ್ಟು ಅದು ನಿಮ್ಮನ್ನು ಮತ್ತೆ ತನ್ನ ದಾರಿಗೆ ಎಳೆದು ತರುತ್ತಾ ಹೋಗುತ್ತದೆ. ಬಯಕೆಗಳನ್ನು ಅದುಮಿಕಂಡಷ್ಟೂ ಅವು ಹೆಚ್ಚುತ್ತಾ ಹೋಗುತ್ತವೆ. ಹಾಗಾಗಿ ಬುದ್ಧನ ಹಿಂಬಾಲಕರೆಲ್ಲ ಅವನ ಹಾಗೆ ಜ್ಞಾನಿಗಳಾಗಲಿಲ್ಲ. ಅದು ಕಷ್ಟದ ಹಾದಿ. ಆದರೆ ಸಾಧ್ಯವೇ ಇಲ್ಲ ಎನ್ನುವ ಹಾಗಿಲ್ಲ. ಅದು ಬುದ್ಧನ ಮಾರ್ಗವೇ ಆಗಬೇಕೆಂದಿಲ್ಲ. ಭಕ್ತಿ ಮಾರ್ಗವಾದರೂ ಆದೀತು. ನಿಸ್ವಾರ್ಥ ಸೇವೆಯ ಕರ್ಮ ಮಾರ್ಗವಾದರೂ ಆದೀತು. ಧ್ಯಾನ ಮಾರ್ಗವಾದರೂ ಆದೀತು. ಜ್ಞಾನ ಸಂಪಾದಿಸುವ ಮಾರ್ಗವಾದರೂ ಆದೀತು. ಅವುಗಳ ಭೋದನೆ ಬೇರೆ ಬೇರೆಯಾದರು ಗುರಿ ಮಾತ್ರ ಒಂದೇ. ಪ್ರಕೃತಿ ನಮ್ಮನ್ನು ಬಂಧಿಸಿಡುವ ಪ್ರಕ್ರಿಯೆಯಗಳಿಂದ ಹೊರ ಬರುವುದು. ಪ್ರಕೃತಿಯನ್ನು ಗೆದ್ದವರನ್ನು ಹಸಿವು, ನೋವು ಬಾಧಿಸುವುದಿಲ್ಲ ಎಂದೇನಿಲ್ಲ. ಆದರೆ ಅದನ್ನು ಸಮಾನ ಮನಸ್ಥಿತಿಯಲ್ಲಿ ಸ್ವೀಕರಿಸುವುದು ಅವರಿಗೆ ಸಾಧ್ಯವಾಗಿರುತ್ತದೆ.


ಪ್ರಕೃತಿಗೆ ತನ್ನನ್ನು ಮೀರಿದ ಸಾಧು-ಸಂತರಿಂದ ಏನು ಉಪಯೋಗ? ಅವರನ್ನು ತನ್ನಲ್ಲಿ ಲೀನವಾಗಿಸಿಕೊಂಡು, ಹೆಚ್ಚಿನ ಸ್ವಾರ್ಥಿಗಳನ್ನು ಹುಟ್ಟು ಹಾಕುತ್ತ ಹೋಗುತ್ತದೆ. ಜೀವಿಗಳನ್ನು ನೆಮ್ಮದಿಯಾಗಿರಲು ಬಿಡದೆ ತನ್ನ ಯೋಜನೆಗೆ ಬಳಸಿಕೊಳ್ಳುತ್ತದೆ. ಗಂಡು ಜಿಮ್ ಗೆ ಹೋಗಿ ದೇಹ ಧಾರ್ಡ್ಯ ಬೆಳೆಸಿಕೊಳ್ಳುತ್ತಾನೆ. ಧನ ಸಂಪಾದಿಸುವ ಹೊಸ ಮಾರ್ಗಗಳನ್ನು ಹುಡುಕುತ್ತ ಹೋಗುತ್ತಾನೆ. ಹೆಣ್ಣು ಬಟ್ಟೆ ಅಂಗಡಿಗೆ, ಆಭರಣ ಅಂಗಡಿಗೆ ಧಾಳಿಯಿಟ್ಟು ತಾನು ಇನ್ನೂ ಸುಂದರ ಕಾಣುವ ಮಾರ್ಗಗಳನ್ನು ಹುಡುಕಿಕೊಳ್ಳುತ್ತಾಳೆ. ಅವರಿಬ್ಬರ ಜೋಡಿಯನ್ನು ನೋಡಿ ಪ್ರಕೃತಿ ಮರೆಯಲ್ಲೇ ನಗುತ್ತದೆ. ಅವರ ಯೌವನ ಕಳೆದು ಹೋಗಿ ಜೀವನದ ಅರ್ಥ ಏನು ಎಂದು ಗ್ರಹಿಸುವಷ್ಟರಲ್ಲಿ, ಹೊಸ ಪೀಳಿಗೆಗೆ ತನ್ನ ಮೋಡಿಯನ್ನು ವರ್ಗಾಯಿಸಿರುತ್ತದೆ. ಬುದ್ಧ ಮಂದಹಾಸ ಬೀರಿದರೆ, ಪ್ರಕೃತಿ ಗಹಗಹಿಸಿ ನಗುತ್ತದೆ.

Tuesday, December 21, 2021

Book Review: The beginning of Infinity by David Deutsch

Human beings have been staring at the sky since time immemorable. Our ancestors felt everything went around them. So, they said the Sun rises and sets. Few centuries ago, that misconception was corrected with a better explanation. Though we can’t confirm with our bare eye experience how the Solar system looks, students in school now are taught about solar system with a better explanation than that existed many centuries ago.

 

Newton’s laws of motion and his explanation about gravity have a universal appeal. All that is fine for those dwelling on the Earth. But for those traveling in a space shuttle or studying astrophysics, they begin to lose accuracy. If someone is traveling across a Galaxy and is nearby a Blackhole, Newton’s explanation becomes hopelessly wrong. Thanks to Einstein who offered a better explanation about time-space warping.

 

Science advances with error correction and better explanations. Nature packs the evolutionary progress in the form of genes and leads to biological evolution. But human beings have a special gift – creativity. Human beings are not limited by biological evolution and that is why we are so advanced than all other living beings on the Earth. Our ability to learn new things, communicate it with others, correct misconceptions with better explanations puts us on the path of progress. We move from infinite ignorance to infinite possibilities.

 

Naval Ravikant had mentioned about this book in his podcast. This book took few weeks of intensive reading for me. I had to re-read many of the paragraphs to digest the information and close my eyes to ponder about it. Not an easy book to read but no knowledge comes without toil. Physics, Astronomy, Microbiology, Evolution and Philosophy are all merged in this book and makes the reader understand the evolution of human beings and the advancement of science are interwoven.

 

Author of this book David Deutsch was born in Israel, now lives and works at Oxford. His research in Quantum Physics has been highly influential and highly acclaimed.