Sunday, July 24, 2022

ಕರ್ಮ ಎನ್ನುವ ಪಾಪ-ಪುಣ್ಯದ ಲೆಖ್ಖ

ಕರ್ಮ ಎನ್ನುವುದು ಅಂತೆ-ಕಂತೆಗಳ ಪುರಾಣ. ಅದರಲ್ಲಿ ನಿಮಗೆ ನಂಬಿಕೆ ಇರದೇ ಇದ್ದರೆ ಮುಂದಕ್ಕೆ ಓದಲೇಬೇಡಿ. ಆದರೆ ನನಗೆ ಆಗುತ್ತಿರುವ ಅನುಭವಗಳು ಅದರ ಮೇಲೆ ನಂಬಿಕೆ ಮೂಡಿಸಿವೆ.

 

ಸದ್ಗುರು, ರವಿಶಂಕರ್, ಶಿವಾನಿ ಅವರು ಕರ್ಮದ ಬಗ್ಗೆ ಮಾತನಾಡಿರುವ ಹಲವಾರು ವಿಡಿಯೋಗಳನ್ನು ನೋಡಿದ್ದೇನೆ. ಇಂಟರ್ನೆಟ್ ನಲ್ಲಿ ಸಾಕಷ್ಟು ಲೇಖನಗಳನ್ನು ಓದಿದ್ದೇನೆ. ಅದರ ಬಗ್ಗೆ ಸಾಕಷ್ಟು ವಿಚಾರ ಮಾಡಿದ್ದೇನೆ. ಮತ್ತು ನನ್ನ ಬದುಕಿಗೆ ತಾಳೆ ಹಾಕಿ ನೋಡಿದ್ದೇನೆ. ಕೊನೆಗೆ ನನಗೆ ಅರ್ಥವಾಗಿರುವುದಿಷ್ಟು.

 

ಕರ್ಮ ಎನ್ನುವುದು ಪಾಪ-ಪುಣ್ಯಗಳ ಪ್ರತ್ಯೇಕ ಲೆಖ್ಖ. ಆದರೆ ಅದು ಗಣಿತದ ಲೆಖ್ಖವಲ್ಲ. ಅನುಭವಗಳ ಲೆಖ್ಖ. ನೀವು ಇತರರಲ್ಲಿ ಒಳ್ಳೆಯ ಅನುಭೂತಿ ಮೂಡಿಸಿದ್ದರೆ ಅದರ ಫಲವು ನಿಮಗೆ ಉಂಟು. ಹಾಗೆಯೆ ನೀವು ಇತರರಿಗೆ ಅನ್ಯಾಯ ಮತ್ತು ನೋವು ಉಂಟು ಮಾಡಿದ್ದರೆ ಅದೇ ಅನುಭವ ನಿಮಗೆ ಕಟ್ಟಿಟ್ಟ ಬುತ್ತಿ. ಆ ಅನುಭವಗಳ ಪಾಠ ಕಲಿಯುವವರೆಗೆ ಆ ಸನ್ನಿವೇಶಗಳು ಮತ್ತು ವ್ಯಕ್ತಿಗಳು ನಮ್ಮ ಜೀವನದಲ್ಲಿ ಪುನರಾವರ್ತನೆ ಆಗುತ್ತಲೇ ಇರುತ್ತಾರೆ. ಹಾಗಾಗಿ ನೀವು ಎಷ್ಟು ಬೇಗ ಪಾಠ ಕಲಿಯುತ್ತಿರೋ ಅಷ್ಟು ಉತ್ತಮ.

 

ಸುಲಭ ಲೆಕ್ಕಾಚಾರದ ಪ್ರಕಾರ (ಜನ್ಮ ದಿನ ಮತ್ತು ರಾಶಿಯ ಅನುಗುಣವಾಗಿ) ನಾನು ಈ ಜನ್ಮಕ್ಕೆ ತಂದ ಕರ್ಮದ ಹೊರೆ ಎಂದರೆ, ಹಿಂದಿನ ಜನ್ಮಗಳಲ್ಲಿ ಅಹಂಕಾರಿಯಾಗಿ ಬೇರೆಯವರ ಭಾವನೆಗಳಿಗೆ ಬೆಲೆ ಕೊಡದೆ ನಡೆದುಕೊಂಡಿದ್ದು. ಅದರ ಫಲವಾಗಿಯೇನೋ ಎನ್ನುವಂತೆ ನನಗೆ ನನ್ನ ಭಾವನೆಗಳಿಗೆ ಬೆಲೆ ಕೊಡದ ಒರಟರೆ ಇಂದಿಗೆ ನನ್ನ ಬಂಧು-ಬಳಗವಾಗಿದ್ದಾರೆ. ಅದು ನಾನು ಮಾಡಿದ ಕರ್ಮ ನಾನು ಅನುಭವಿಸದೇ ವಿಧಿ ಇಲ್ಲ ಎನ್ನುವಂತೆ. ಆದರೆ ಅದರ ಪಾಠ ನನಗೆ ಮನದಟ್ಟಾಗಿ ಹೋಗಿದೆ. ಪಾಠ ಕಲಿಯದೇ ಇರುವ ಮೂರ್ಖತನದ ಶಾಪ ನನಗೆ ದೇವರು ನೀಡಿಲ್ಲ. ಅದು ಯಾವ ಪುಣ್ಯ ಕರ್ಮದ ಫಲವೋ?

 

ಕರ್ಮವನ್ನು ನೀವು ನಂಬಿದರೆ, ಈಗ ನಮ್ಮ ಜೊತೆಗೆ ಅನ್ಯಾಯದಿಂದ ನಡೆದುಕೊಳ್ಳುವ ಜನರನ್ನು ನಾವು ಬೈದುಕೊಳ್ಳುವಂತೆ ಇಲ್ಲ. ಹಾಗೆ ಮಾಡಿದರೆ ಮುಂದಿನ ಜನ್ಮದಲ್ಲಿ ಅದೇ ಜನರ ಜೊತೆಗೆ ನಮ್ಮ ಜೀವನ. ಅದು ಪಾಠ ಕಲಿಯದೇ ಇದ್ದದ್ದಕ್ಕಾಗಿ. ಬಿ.ಕೆ.ಶಿವಾನಿ ಅವರ ಪ್ರಕಾರ ನಾವು ಅವರಿಗೆ ಕ್ಷಮೆ ಕೇಳಬೇಕು. ಅದು ನಮಗೆ ನೆನಪಿರದ ಯಾವುದೊ ಜನ್ಮದಲ್ಲಿ ನಾವು ಅವರಿಗೆ ಮಾಡಿರಬಹುದಾದ ಅನ್ಯಾಯಕ್ಕಾಗಿ. ಕ್ಷಮೆ ಯಾಚನೆಯಿಂದ ನಮ್ಮ ಕರ್ಮದ ಹೊರೆ ಕಡಿಮೆ ಆಗುತ್ತದೆ. ಹಾಗೆ ಪಾಠ ಸಂಪೂರ್ಣ ಕಲಿತ ಮೇಲೆ, ನಮಗೆ ಅವರ ಜೊತೆ ಇರುವ ಕರ್ಮದ ಸಂಬಂಧ ಕಳಚಿ ಬೀಳುತ್ತದೆ. ಅದಾಗದೆ ಹೊಸ ಜೀವನ ಶುರು ಆಗದು.

 

ನೀವು ಯೋಗಿಗಳನ್ನು ಗಮನಿಸಿದರೆ ಅವರು ಯಾರ ಜೊತೆಗೂ ಕರ್ಮವನ್ನು ಕಟ್ಟಿಕೊಳ್ಳುವ ಗೊಡವೆಗೆ ಹೋಗುವುದೇ ಇಲ್ಲ. ಬುದ್ಧನ ಬಗ್ಗೆ ಒಂದು ಕಥೆಯಿದೆ. ಒಬ್ಬ ಮನುಷ್ಯ ಬುದ್ಧನ ಎದುರಿಗೆ ನಿಂತು, ಎಲ್ಲರ ಎದುರಿಗೆ ಬುದ್ಧನನ್ನು ವಾಚಾಮಗೋಚರವಾಗಿ ನಿಂದಿಸುತ್ತಾನೆ. ತಾಳ್ಮೆ ಕಳೆದುಕೊಳ್ಳದ ಬುದ್ಧ ಶಾಂತಿಯಿಂದ ಉತ್ತರಿಸುತ್ತಾನೆ. "ನೀನು ಕೊಟ್ಟ ಯಾವ ಉಡುಗೊರೆಯನ್ನು ನಾನು ಸ್ವೀಕರಿಸುತ್ತಿಲ್ಲ. ಅವೆಲ್ಲ ನಿನ್ನಲ್ಲೇ ಇರಲಿ."

 

ಬುದ್ಧನಿಗಿದ್ದ ಪ್ರೌಢಿಮೆ ನಮಗಿಲ್ಲ. ಉದ್ವೇಗಕ್ಕೆ ಸಿಕ್ಕು ಮನಸ್ಸಿಗೆ ತೋಚಿದ ಉತ್ತರ ನೀಡಿ ಕರ್ಮದ ಸುಳಿಗೆ ಸಿಲುಕಿ ನಾವು ಒದ್ದಾಡುತ್ತೇವೆ. ಪಾಠ ಪುನರಾವರ್ತನೆ ಆಗುತ್ತಾ ಹೋಗುತ್ತದೆ. ಶಿವಾನಿ ಅಕ್ಕಳ ಮಾತಿಗೆ ತಲೆಬಾಗಿ ಇಂದು ನಾನು ಹಿಂದೆ ಮಾಡಿರಬಹುದಾದ ಎಲ್ಲ ಅನ್ಯಾಯಗಳಿಗೆ, ಅದರಿಂದ ನೋವು ಅನುಭವಿಸಿದ ಎಲ್ಲರಲ್ಲಿ ಕ್ಷಮೆ ಕೋರುತ್ತೇನೆ. ಮುಂದೆ ಒಂದು ದಿನ ಕರ್ಮದ ಹೊರೆ ಕಡಿಮೆ ಎನಿಸಿದರೆ ನಿಮಗೆ ಖಂಡಿತ ತಿಳಿಸುತ್ತೇನೆ.

 

ಇದ್ಯಾವ ಪುರಾಣ ಎಂದು ನಿಮಗೆ ಅನ್ನಿಸಿದರೆ, ನಾನು ನಿಮಗೆ ಮುಂಚೆಯೇ ಈ ಲೇಖನ ಓದದೇ ಇರಲು ಎಚ್ಚರಿಸಿದ್ದೆ. ಧನ್ಯವಾದಗಳು!

Friday, July 22, 2022

ಅಹಂ ಬ್ರಹ್ಮಾಸ್ಮಿಯೋ ಅಥವಾ ನಕ್ಷತ್ರ ಧೂಳೋ?

ಸಂಸ್ಕೃತದಲ್ಲಿ 'ಅಹಂ ಬ್ರಹ್ಮಾಸ್ಮಿ' (ನಾವು ಕೂಡ ಬ್ರಹ್ಮ) ಎನ್ನುವ ಮಾತಿದೆ. ಯೋಗದ ಅರ್ಥ ಮತ್ತು ಉದ್ದೇಶ ಬ್ರಹ್ಮ ಅಥವಾ ಸೃಷ್ಟಿಕರ್ತನಲ್ಲಿ ಒಂದಾಗುವುದು.

 

ಇಂಗ್ಲಿಷ್ ನಲ್ಲಿ ಸ್ವಲ್ಪ ಬೇರೆಯ ತರಹದ ವ್ಯಖ್ಯಾನ ಇದೆ . ಅದರ ಪ್ರಕಾರ ನಾವೆಲ್ಲ ನಕ್ಷತ್ರ ಧೂಳು (Star Dust). ಅದು ನಿಜವೇ. ನಾವು ಜನ್ಮ ತಳೆದದ್ದು ಭೂಮಿಯ ಸಂಪನ್ಮೂಲಗಳಿಂದ. ಭೂಮಿ ಮೈ ತಳೆದದ್ದು ಸೂರ್ಯನಿಂದ ಸಿಡಿದ ತುಂಡಿನಿಂದ. ಅಂದರೆ ನಾವೆಲ್ಲ ಸೂರ್ಯನ ತುಂಡುಗಳಿಂದ ರೂಪುಗೊಂಡ ದೇಹಗಳೇ. ಅಷ್ಟೇ ಅಲ್ಲ ಸೂರ್ಯನ ಶಕ್ತಿಯೇ ಗಿಡ, ಮರಗಳಿಗೆ ಜೀವ ತುಂಬಿ ನಮಗೆ ಪ್ರತಿ ದಿನದ ಆಹಾರ ಒದಗಿಸುತ್ತದೆ. ಸೂರ್ಯನಿಂದ ರೂಪುಗೊಂಡ, ಸೂರ್ಯನಿಂದಲೇ ಜೀವಂತವಾಗಿರುವ ನಾವು ಸೂರ್ಯನ ಧೂಳಿನ ಕಣಗಳೇ ಸರಿ.

 

ಸತ್ತ ಮೇಲೆ ದೇಹ ಮಣ್ಣಲ್ಲಿ ಮಣ್ಣಾಗಿ ಮತ್ತೆ ಸೃಷ್ಟಿಯಲ್ಲಿ ಒಂದಾಗುತ್ತದೆ. ದೈಹಿಕವಾಗಿ ಗಮನಿಸಿದರೆ ಅಹಂ ಬ್ರಹ್ಮಾಸ್ಮಿ ಮತ್ತು ನಕ್ಷತ್ರ ಧೂಳು ಒಂದೇ ತರಹದ ಅರ್ಥ ಒದಗಿಸುತ್ತದೆ. ಆದರೆ 'ಅಹಂ ಬ್ರಹ್ಮಾಸ್ಮಿ' ಗೆ ಇರುವ ಪಾರಮಾರ್ಥಿಕ ಅರ್ಥ ನಕ್ಷತ್ರ ಧೂಳಿಗೆ ಇಲ್ಲ. ದೈಹಿಕ ಅಸ್ತಿತ್ವಕ್ಕೆ ಮೀರಿದ ಆತ್ಮದ ಇರುವಿಕೆಯ ಬಗ್ಗೆ ನಕ್ಷತ್ರದ ಧೂಳು ಮಾತನಾಡುವುದಿಲ್ಲ. ಅದು ನಂಬುವುದು ಕಣ್ಣಿಗೆ ಕಾಣುವ ಅಥವಾ ಅಳತೆಗೆ ಸಿಗುವಂತಹದ್ದು ಮಾತ್ರ.

 

ಆದರೆ ವಿಜ್ಞಾನ ಬೆಳೆದಂತೆಲ್ಲ ಪುರಾತನ ಕಾಲದ ಯೋಗ ಅಭ್ಯಾಸಗಳಿಗೆ, ಧ್ಯಾನ ತಂದುಕೊಡುವ ದೈಹಿಕ ಲಾಭಗಳಿಗೆ ಪುರಾವೆ ಸಿಗತೊಡಗಿದೆ. ಆದರೆ ಧ್ಯಾನ ನಮ್ಮಲ್ಲಿ ಮೂಡಿಸುವ ಪ್ರಜ್ಞೆಗಳಿಗೆ ವಿಜ್ಞಾನ ಹುಡುಕಿರುವ ವಿವರಣೆ ಅಷ್ಟಕಷ್ಟೇ. ಕ್ರಮೇಣ ಅದು ಕೂಡ ಬದಲಾಗುತ್ತದೆ. ಕಣ್ಣಿಗೆ ಕಾಣಿಸಿದ ಮತ್ತು ಕಿವಿಗೆ ಕೇಳಿಸದ ತರಂಗಾಂತರಗಳಲ್ಲಿ (wavelength) ಅದ್ಭುತ ಜಗತ್ತೇ ಅಡಗಿದೆ. ಭೂಮಿಯ ಗುರುತ್ವಾಕರ್ಷಣೆ ಶಕ್ತಿ ನಮ್ಮ ಕಣ್ಣಿಗೆ ಕಾಣುವುದಿಲ್ಲ, ಕಿವಿಗೆ ಕೇಳಿಸುವುದಿಲ್ಲ, ನಾಲಿಗೆ ರುಚಿಗೆ, ಮೂಗಿನ ವಾಸನೆಗೆ ನಿಲುಕುವುದಿಲ್ಲ ಮತ್ತು ಚರ್ಮದ ಸ್ಪರ್ಶಕ್ಕೆ ದೊರಕುವುದಿಲ್ಲ. ಆದರೆ ನಮ್ಮ ಅನುಭವಕ್ಕೆ ಬರುತ್ತದೆ. ಅದನ್ನು ಪರೀಕ್ಷೆ ಮಾಡಬೇಕೆ? ಒಂದು ಚೆಂಡನ್ನು ನಿಮ್ಮ ತಲೆಯ ಮೇಲೆ ತೂರಿ ನೋಡಿ.

 

ಪಂಚೇದ್ರಿಯಗಳಿಗೆ ನಿಲುಕದ ಗ್ರಹಿಕೆಗಳು ವಿಶ್ವದ ತುಂಬಾ ವ್ಯಾಪಿಸಿವೆ. ಪ್ರಕೃತಿಯು ನಮ್ಮ ಉಳಿವಿಗೆ ಎಷ್ಟು ಸಾಕೋ ಅಷ್ಟು ಮಾತ್ರದ ಶಕ್ತಿಯನ್ನು ನಮ್ಮ ಪಂಚೇಂದ್ರಿಯಗಳಿಗೆ ನೀಡಿತು. ಅದರ ಮುಂದಿನ ಕಲಿಕೆ ಮಾತ್ರ ನಮ್ಮ ಪ್ರಯತ್ನಕ್ಕೆ ಬಿಟ್ಟಿದ್ದು. ವಿಜ್ಞಾನ ಬೆಳೆದಂತೆಲ್ಲ, ತಂತ್ರಜ್ಞಾನ ಅಭಿವೃದ್ಧಿಯಾದಂತೆಲ್ಲ ಅವುಗಳ ಉಪಯೋಗ ಪ್ರತಿದಿನ ಮಾಡುತ್ತೇವೆ. ಉದಾಹರಣೆಗೆ ಮೈಕ್ರೋವೇವ್ ಓವನ್ ನಲ್ಲಿ ಬೆಂಕಿ ಇಲ್ಲದೆ ಅಡುಗೆ ಬಿಸಿಯಾಗಿದ್ದು ಹೇಗೆ? ನಮ್ಮ ಸೆಲ್ ಫೋನ್ ಗಳು ಹಿಂದಿನ ತಲೆಮಾರಿನವರಿಗೆ ಒಂದು ಅದ್ಭುತದಂತೆ ತೋರುತ್ತವೆಯೋ ಏನೋ?

 

ಒಂದು ಕಾಲದಲ್ಲಿ ಭೂಮಿ ಚಪ್ಪಟೆ ಆಗಿದೆ, ಅದೇ ವಿಜ್ಞಾನ ಎಂದು ನಂಬಿದ್ದ ನಾವುಗಳು ಕಾಲ ಕ್ರಮೇಣ ನಮ್ಮ ನಂಬಿಕೆಗಳನ್ನು ಬದಲಾಯಿಸಿಕೊಂಡೆವು. ಹಾಗೆಯೆ ಯೋಗ, ಧ್ಯಾನ ತಂದು ಕೊಡುವ ಮಾನಸಿಕ ಪ್ರಭುದ್ಧತೆ ವೈರಾಗ್ಯವನ್ನು ಮೀರಿದ ವಿಜ್ಞಾನ ಎನ್ನುವ ತಿಳುವಳಿಕೆ ನಮಗೆ ಈಗ ಇರದೇ ಹೋಗಬಹುದು. ಆದರೆ ಆ ಅನಿಸಿಕೆ ಬದಲಾಗುವ ಕಾಲ ತುಂಬಾ ದೂರ ಇರಲಿಕ್ಕಿಲ್ಲ. ವಿಜ್ಞಾನಿಗಳು ಪ್ರಯೋಗಾಲಯದಲ್ಲಿ ಕಂಡುಕೊಂಡ ಸತ್ಯಗಳ ಹಾಗೆ, ಯೋಗಿಗಳು ಧ್ಯಾನದ ಮೂಲಕ ಕಂಡ ಸತ್ಯಗಳು ಕೂಡ ಅಷ್ಟೇ ನಿಖರವಾದವು ಎನ್ನುವ ನಂಬಿಕೆ ನಮಗೆ ಕ್ರಮೇಣ ಮೂಡಬಹುದು.

 

ಇದೆಲ್ಲ ಅನಿಸಿದ್ದು 'Stalking the wild pendulum' ಎನ್ನುವ ಪುಸ್ತಕ ಓದಿದ ಮೇಲೆ. ಆ ಪುಸ್ತಕದ ಪರಿಚಯ ನನ್ನ ಹಿಂದಿನ ಲೇಖನದಲ್ಲಿದೆ. ಒಮ್ಮೆ ಓದಿ ನೋಡಿ.

Thursday, July 21, 2022

ವಿಷಪೂರಿತ ಸಂಬಂಧಗಳ ಜೊತೆಗಿನ ಅನುಭವ

೧. ಅವರು ಯಾವ ತಪ್ಪು ಮಾಡುವುದು ಸಾಧ್ಯವಿಲ್ಲ. ತಪ್ಪೆಲ್ಲಾ ನಿಮ್ಮದೇ.
೨. ಅವರು ನಿಮ್ಮ ಮೇಲೆ ದಬ್ಬಾಳಿಕೆ ಮಾಡಿದರೂ, ಅದು ನೀವೇ ಮಾಡಿದ್ದು ಎನ್ನುತ್ತಾರೆ.
೩. ಅವರು ಯಾವ ಟೀಕೆ, ವಿಮರ್ಶೆ ಸಹಿಸಿಕೊಳ್ಳುವುದಿಲ್ಲ
೪. ಅವರು ಸಮಯಕ್ಕೆ ಸರಿಯಾಗಿ ಯಾವತ್ತೂ ಬರುವುದಿಲ್ಲ. ಆದರೆ ಅದರ ಜವಾಬ್ದಾರಿ ಮಾತ್ರ ಅವರದಲ್ಲ.
೫. ಅವರಿಗೆ ನಿಮ್ಮ ಮೇಲೆ ಸಂಪೂರ್ಣ ಅಧಿಕಾರದ ಹಕ್ಕಿದೆ. ಆದರೆ ಅವರ ಮೇಲೆ ನಿಮಗೆ ಯಾವ ಹಕ್ಕು ಇಲ್ಲ.
೬. ಅವರು ಸೋಂಭೇರಿಗಳು. ಹೆಚ್ಚಿನ ಕೆಲಸ ನೀವೇ ಮಾಡಿದರೂ, ಅವರನ್ನೇ ನೀವು ಹೊಗಳಬೇಕು.
೭. ಸುಳ್ಳು ಹೇಳುವುದು ಅವರಿಗೆ ನೀರು ಕುಡಿದಷ್ಟು ಸುಲಭ.
೮. ಸಂದರ್ಭಕ್ಕೆ ತಕ್ಕಂತೆ ನಾಟಕ ಆಡುವುದರಲ್ಲಿ ಅವರು ಎತ್ತಿದ ಕೈ. ಅವರ ನಟನೆ ಸಿನೆಮಾ ನಟರಿಗಿಂತ ಅದ್ಭುತ.
೯. ಪರಿಸ್ಥಿತಿ ಕೈ ಮೀರಿದರೆ ತಾವು ಸಾಕಿಕೊಂಡ ಚೇಲಾಗಳನ್ನು ಕರೆಸಿ ನಿಮ್ಮ ಮೇಲೆ ಒಟ್ಟಿಗೆ ಬೀಳುತ್ತಾರೆ.
೧೦. ನಿಮಗೆ ಗೊತ್ತಿರದಂತೆ ಸಮಾಜದಲ್ಲಿ ನಿಮ್ಮ ಮೇಲೆ ಸುಳ್ಳು ಅಪವಾದ ಹೊರಿಸುತ್ತಾರೆ.
೧೧. ಅವರಿಗೆ ಅನೇಕ ಲೈಂಗಿಕ ಸಂಬಂಧಗಳಿರುತ್ತವೆ.
೧೨. ನಿಮ್ಮ ಹಿಂದೆ ಇರುವ ಮತ್ತು ಸಹಾಯಕ್ಕಾಗುವ ಜನರನ್ನು ಅವರು ನಿಮ್ಮಿಂದ ಬೇರ್ಪಡಿಸುತ್ತಾರೆ.
೧೩. ಅವರಿಗೆ ನೀವು ಏನೇ ಮಾಡಿದರೂ ಅವರಿಗೆ ಅದು ಸಾಕೆನಿಸುವುದಿಲ್ಲ.
೧೪. ನಿಮಗೆ ತೊಂದರೆ ಆದಾಗ ಅವರು ವಿಕೃತ ಸಂತೋಷ ಅನುಭವಿಸುತ್ತಾರೆ.
೧೫. ಸಮಾಜದ ಕಣ್ಣಿಗೆ ಅವರು ತಮ್ಮ ಗುಣಧರ್ಮಗಳು ಬೀಳದಂತೆ ಎಚ್ಚರ ವಹಿಸುತ್ತಾರೆ. ಅವರ ಆಟ ಏನಿದ್ದರೂ ನೀವು ಒಬ್ಬಂಟಿಯಾಗಿ ಸಿಕ್ಕಾಗ.
೧೬. ನೀವು ಅವರ ವಿರುದ್ಧ ಧ್ವನಿ ಎತ್ತಿದರೆ, ಅವರು ಮಾಡುವ ಚಟಗಳನ್ನು ಎತ್ತಿ ತೋರಿಸಿದರೆ ಅವುಗಳನ್ನು ಮಾಡಿದ್ದು ನೀವೇ  ಎಂದು ವಾದಿಸುತ್ತಾರೆ.

ಈ ಮೇಲಿನ ಗುಣಧರ್ಮಗಳನ್ನು ನೀವು ನಿಮ್ಮ ಹತ್ತಿರದವರಲ್ಲಿ ಗುರುತಿಸಿದ್ದೆ ಆದರೆ ನೀವು ಈಗಾಗಲೇ ಎಚ್ಚರದಿಂದ ಇರುತ್ತೀರಿ. ಆದರೆ ನೀವು ಅವರನ್ನು ಬದಲು ಮಾಡುವ, ತಿದ್ದುವ ಕೆಲಸಕ್ಕೆ ಕೈ ಹಾಕಿದರೆ ನಿಮ್ಮ ಬದುಕೇ ಹಾಳಾಗುವುದರಲ್ಲಿ ಸಂದೇಹ ಇಲ್ಲ. ಬದಲಿಗೆ ಅವರಿಂದ ದೂರ ಇದ್ದಷ್ಟು ವಾಸಿ. ನೀವು ಅವರನ್ನು ಕೈ ಬಿಟ್ಟರೂ ಅವರು ನಿಮ್ಮನ್ನು ಕೈ ಬಿಡುವುದಿಲ್ಲ. ಒಳ್ಳೆಯತನ ಪಕ್ಕಕ್ಕಿಟ್ಟು ನಿಮಗೆ ಕೂಡ ಕೆಟ್ಟವರಾಗಲು ಬರುತ್ತದೆ ಎಂದು ತೋರಿಸಿಕೊಡದೆ ಇದ್ದರೆ ನಿಮಗೆ ಮಾನಸಿಕ ಚಿತ್ರಹಿಂಸೆ ಗ್ಯಾರಂಟಿ. ಅವರ ವಿರುದ್ಧ ಕಾನೂನು ಸಮರ ಹೂಡುವ ಮೊದಲು ಸಾಕಷ್ಟು ದಾಖಲೆಗಳನ್ನು ಸಿದ್ಧ ಪಡಿಸಿಕೊಳ್ಳಿ. ತಜ್ಞರ ಸಲಹೆ ಪಡೆಯಿರಿ. ನಿಮಗೆ ನಂಬಿಕೆ ಇರುವ ಗೆಳೆಯರಲ್ಲಿ ವಿಷಯ ತಿಳಿಸಿ. ಒಬ್ಬಂಟಿಯಾಗಿ ಹೋರಾಡುವುದಕ್ಕಿಂತ ಸಹಾಯ ಪಡೆದುಕೊಂಡು ಮುಂದುವರೆಯಿರಿ. ನೀವು ಅವರಿಗಿಂತ ಪಳಗಿದ ಕೈ ಎಂದು ಅವರಿಗೆ ಸ್ಪಷ್ಟ ಮಾಡಿಕೊಟ್ಟರೆ ಅವರು ನಿಮ್ಮನ್ನು ಬಿಟ್ಟು ಇನ್ನೊಬ್ಬರನ್ನು ತಮ್ಮ ಚಿತ್ರಹಿಂಸೆಗೆ ಹುಡುಕಿಕೊಳ್ಳುತ್ತಾರೆ.

(ಇದು ನನ್ನ ಸ್ವಂತ ಅನುಭವ. ಹಂಚಿಕೊಂಡರೆ ಯಾರಿಗಾದರೂ ಉಪಯೋಗವಾದೀತು ಎನ್ನುವ ಉದ್ದೇಶದಿಂದ ಇದನ್ನು ಹಂಚಿಕೊಂಡಿದ್ದೇನೆ. ಹೆಚ್ಚಿನ ವಿಷಯ ತಿಳಿದುಕೊಳ್ಳುವುದಕ್ಕೆ 'Narcissist' ಎನ್ನುವ ಪದ ಗೂಗಲ್ ನಲ್ಲಿ ಹುಡುಕಿ)

Book Review: Stalking the wild pendulum by Itzhak Bentov

First published in 1977, this book is at the intersection of Modern Physics and Yoga. Of late, I have been reading books separately on Astro Physics and on Yoga. I was getting a notion that both are connected somehow but after putting my hands on this book, things seem much clearer now.

 

The majority of modern astrophysicists (or at least of those I have read) don’t explain what was in place before Big Bang. They all start with Big Bang creating the Universe, its galaxies, stars, and the planetary system thereof. And they all agree with Einstein that nothing can travel faster than light. But this book proposes a model (not the ultimate theory) that describes the continuous process of recreation of the Universe, all physical objects being sucked by a black hole into nothingness, and they are being recreated from the other end of a black hole – a white hole, through the big bang. This book describes it as a continuous process and not a one-time phenomenon.

 

How does this author know that this is the case? He says by expanding one’s consciousness anyone can become aware of this. Then, how can one expand his/her consciousness? He says that is possible through meditation. From unknown times, sages who meditated have been telling the same although not in scientific terms.

 

Modern physics is getting beyond quantum physics and exploring the string theory which says sub-atomic particles (Protons, Neutrons, and Electrons) are nothing but vibrating energy strings. In his famous equation, Einstein said energy and mass can be converted into each other. This author too shows that is the process happening at the source of creation (Black hole sucking mass converting into energy and White hole converting energy into mass). He further explains how the Universe expands and shows where our Galaxy is placed in that scheme. Well, all of it seems to be convincing though I could not digest it fully.

 

There are particles that can travel at a higher speed than light (which modern science is exploring now, though no firm explanations are available), and our souls too can travel to other parts of the Universe (beyond Earth and other Galaxies in no time) and exchange information and energy. Well, that is possible when one is at the highest level of consciousness. All of us are not born with that level of consciousness. Most human beings have their consciousness closer to that of animals and plants. But with the training (through mediation) our level of consciousness can be raised. Kundalini Yoga too teaches the same that through the activation of various chakras our awareness levels raise.

Our physiology and neurological systems enable higher consciousness when they are healed and prepared for it. They have a higher potential to do higher tasks than what an ordinary human being uses them for. As health issues and emotional disturbances reduce in a person, his/her brain will get tuned to vibrate with Earth's frequency. When mediation practitioners are put into vibration resonance with that of Earth, energy and information exchange is possible with it. Though we call it intuition, it is the information we downloaded from the space and its members. It also enables one to get back into time (or forward) and get to know the past and the possibilities of what the future holds. Our yogis have been doing the same but without scientific explanation. But this book discusses the scientific models to enable a discussion of how this is made possible.

 

What we think of as superhuman skills, yogis seem to do them with ease. They are the siddhis one acquires with the expansion of consciousness. It is not that they become superhuman or those capabilities were not in existence before, only that we were not in tune to access them. But the process of yoga expands one’s consciousness and in the journey, many of the siddhis become possible. This is very similar to what Sage Patanjali had described in his Yoga sutras.

 

Thus, this book bridges the gap between the ancient system of Yoga and modern physics. The meaning of Yoga – becoming one with a higher self and what is proposed in this book, the purpose of raising consciousness – merging with the Universe are one and the same. I know I will have to visit this book again.

 

For those who practice meditation and aspire to understand the mechanics of consciousness, this book is a great read.




Saturday, July 16, 2022

ಸರ್ವವನ್ನು ಪರಿತ್ಯಾಗ ಮಾಡಿದ ಸರ್ವಜ್ಞನು ತ್ರಿಪದಿ ಹೇಳುವುದನ್ನು ಮರೆಯಲಿಲ್ಲ

ನೀವು ಕಥೆ ಓದುತ್ತಿರೋ, ಕೇಳುತ್ತಿರೋ (ಇನ್ನೊಬ್ಬರಿಂದ ಅಥವಾ ರೇಡಿಯೋನಲ್ಲಿ) ಅಥವಾ ನೋಡುತ್ತಿರೋ (ಸಿನೆಮಾ ಇಲ್ಲವೇ ದೂರದರ್ಶನದಲ್ಲಿ) ಎನ್ನುವುದು ಮುಖ್ಯವಲ್ಲ. ಅದಕ್ಕೆ ಹೇಗೆ ಸ್ಪಂದಿಸುತ್ತೀರಿ ಅನ್ನುವುದು ಮುಖ್ಯ. ಕಥೆಗಳಿಗೆ ಭಾಷೆ ಮತ್ತು ಮಾಧ್ಯಮಕ್ಕಿಂತ ಅವುಗಳು ತಮ್ಮ ವೀಕ್ಷಕರನ್ನು ಹೇಗೆ ಹಿಡಿದಿಡುತ್ತವೆ ಎನ್ನುವುದೇ ಮುಖ್ಯ.

 

ಶಾಲಾ, ಕಾಲೇಜುಗಳಲ್ಲಿ ಒತ್ತಾಯಪೂರ್ವಕವಾಗಿ ನಿಮಗೆ ಕಥೆ ಓದಿಸಿದ್ದರೆ ಅಥವಾ ಬೇಕಿಲ್ಲದ ಸಿನೆಮಾ ನೀವು ನೋಡಿದ್ದರೆ ಅವು ನಿಮ್ಮ ಮನಸ್ಸಿನಲ್ಲಿ ನಿಲ್ಲುವುದೇ ಇಲ್ಲ. ಅದು ಸಮಯ ವ್ಯರ್ಥ ಮಾತ್ರ. ಬರೀ ನಿಮ್ಮದಷ್ಟೇ ಅಲ್ಲ, ಕಥೆ ಬರೆದವರ ಅಥವಾ ಸಿನೆಮಾ ಮಾಡಿದವರದು ಕೂಡ. ಆದರೆ ನೀವು ಚಿಕ್ಕಂದಿನಲ್ಲಿ ಅಜ್ಜಿ ಹೇಳಿದ ಕಥೆ ಆಸಕ್ತಿಯಿಂದ ಕೇಳಿದ್ದರೆ ಅದು ನಿಮ್ಮ ಮನಸ್ಸಿನಲ್ಲಿ ಒಂದು ಶಾಶ್ವತ ಸ್ಥಾನ ಪಡೆಯುತ್ತದೆ. ಮುಂದೆ ನೀವು ಅಜ್ಜ, ಅಜ್ಜಿಯಾದ ಮೇಲೆ ನಿಮ್ಮ ಮೊಮ್ಮಕ್ಕಳಿಗೆ ಅದೇ ಕಥೆ ಹೇಳಲು ಹೊರಡುತ್ತೀರಿ. ಕಾಲ ಬದಲಾಗಿದೆ. ಆದರೂ ನೀವು ಕೇಳಿದ ಕಥೆ ಮೂಲವನ್ನು ಹಾಗೆಯೆ ಇಟ್ಟುಕೊಂಡು ಕೆಲವು ವಿವರಗಳನ್ನು ಮತ್ತು ಹೇಳುವ ಶೈಲಿ ಮಾತ್ರ ಬದಲಾಯಿಸುತ್ತೀರಿ. ನೀವು ಕಥೆ ಕೇಳುಗರಿಂದ, ಕಥೆ ಹೇಳುವವರಾಗಿ ಬದಲಾಗಿದ್ದು ನಿಮ್ಮ ಅರಿವಿಗೆ ಬರುವುದೇ ಇಲ್ಲ. ನಿಮ್ಮ ಮೊಮ್ಮಕ್ಕಳಿಗೂ ನೀವು ಹೇಳುವ ಹಲವು ಕಥೆಗಳು ಇಷ್ಟವಾಗಿ ಬಿಡುತ್ತವೆ. ರಾಮಾಯಣ, ಮಹಾಭಾರತಗಳು ಸಾವಿರಾರು ವರುಷಗಳು ಕಾಲ ಬದುಕಿ ಬಂದದ್ದು ಹಾಗೆಯೆ.

 

ಕಥೆ ಅಂದರೆ ಕೃಷ್ಣನ ಬಾಲ ಲೀಲೆಗಳು, ಶಿವಾಜಿಯ ಸಾಹಸಗಳು ಅಷ್ಟೇ ಅಲ್ಲವಲ್ಲ. ನಮ್ಮ ನಿಮ್ಮ ನಡುವೆ ಹೊಸ ಕಥೆಗಳು ಹುಟ್ಟಿಬಿಡುತ್ತವೆ. ಅಥವಾ ನಾವೇ ಹೊಸ ಕಥೆಯ ವಸ್ತುಗಳಾಗಿ ಬಿಡುತ್ತೇವೆ. ನಮ್ಮ ನಡುವೆ ಅದನ್ನು ಗಮನಿಸಿ ಹೇಳುವ ಹೊಸ ಕಥೆಗಾರ ಹುಟ್ಟಿಯೇ ಬಿಡುತ್ತಾನೆ. ಅವನು ಅದನ್ನು ಹಾಸ್ಯಮಯವಾಗಿ ಹೇಳಬಹುದು.

 

"ದೊಡ್ಡವರೆಲ್ಲ ಜಾಣರಲ್ಲ,

ಚಿಕ್ಕವರೆಲ್ಲ ಕೋಣರಲ್ಲ"

 

ಇಲ್ಲವೇ ವಿಷಾದ ತುಂಬಿ ಹೇಳಬಹುದು

.

" ಕೈ ಸೋತರೆ ಬೊಂಬೆಯ ಕಥೆಯು

ಕೊನೆಯಾಗುವುದೇಕೊನೆಯಾಗುವುದೇ?"

 

ಮನಸ್ಸಿಗೆ ತಟ್ಟಿದ ಕಥೆಗಳೆಲ್ಲ ಒಬ್ಬ ಮನುಷ್ಯನಿಂದ ಇನ್ನೊಬ್ಬನಿಗೆ ವರ್ಗಾವಣೆಯಾಗುತ್ತ ಹೋಗುತ್ತವೆ. ಮಾಧ್ಯಮಕ್ಕಿಂತ (ಪುಸ್ತಕ, ಸಿನೆಮಾ) ಕಥೆಯ ಸಾರವೇ ಮುಖ್ಯವಾಗುತ್ತದೆ. ಆಗ ಕಥೆ ಬರೆದವರಿಗೂ ಮತ್ತು ಸಿನೆಮಾ ಮಾಡಿದವರಿಗೂ ಒಂದು ಸಾರ್ಥಕ ಭಾವನೆ ಹುಟ್ಟುತ್ತದೆ. ಭಾವನೆಯೇ ಬರಹಗಾರರಿಗೆ, ಚಿತ್ರ ನಿರ್ದೇಶಕರಿಗೆ ಸ್ಫೂರ್ತಿ ತುಂಬುತ್ತದೆ. ಸಿನೆಮಾ ನಿರ್ದೇಶಕರ ಮನಸ್ಸು ಕೆದಕಿ ನೋಡಿ. ಅಲ್ಲಿ ಅವರನ್ನು ಪ್ರಭಾವಗೊಳಿಸಿದ ಅನೇಕ ಚಿತ್ರಗಳು ಇರುತ್ತವೆ. ಹಾಗೆಯೆ ಬರಹಗಾರನಲ್ಲಿ ಅವನು ಓದಿದ ಹಲವಾರು ಪುಸ್ತಕಗಳು ಇರುತ್ತವೆ. ಪ್ರಭಾವ ಅವರಲ್ಲಿ ದಟ್ಟವಾಗಿದ್ದು, ತಾವು ಹೊಸ ಕಥೆಗಳ ಹುಡುಕಾಟಕ್ಕೆ ತೊಡಗುತ್ತಾರೆ. ಇನ್ನಾರನ್ನೋ ಪ್ರಭಾವಗೊಳಿಸುತ್ತಾರೆ. ಅವರ ಸಂತತಿ ಬೆಳೆಯುತ್ತ ಹೋಗುತ್ತದೆ. ಅದು ಅಜ್ಜಿ ಹೇಳಿದ ಕಥೆ ಕೇಳಿ ನಾವು ಕಥೆಗಾರ ಆದಂತೆ.

 

ಎಲ್ಲ ಕಥೆಗಾರರಿಗೆ ಅವರ ಸಂದೇಶ ಮುಂದಕ್ಕೆ ದಾಟಿಸುವ ಅವಶ್ಯಕತೆ ಇರುತ್ತದೆ. ಅವರಿಗೆ ಒಬ್ಬ ಓದುಗ ಅದನ್ನು ಮೆಚ್ಚಿಕೊಳ್ಳುತ್ತಾನೆ ಎನ್ನುವ ಆಸೆ ಇರುತ್ತದೆ. ನೋವಿರಲಿ, ಸುಖವಿರಲಿ ಅದನ್ನು ಕೇಳುವ ಕಿವಿಗಳು ಇರುತ್ತವೆ ಎನ್ನುವ ನಂಬಿಕೆ ಕಥೆಗಾರರನ್ನು ಕಥೆ ಹೊಸೆಯುವಂತೆ ಮಾಡುತ್ತವೆ. ಬಸವಣ್ಣ, ಅಲ್ಲಮ ಪ್ರಭುಗಳು ತಾವು ಕಂಡುಕೊಂಡಿದ್ದು ವಚನಗಳನ್ನಾಗಿಸಿದರು. ಮೂಲಕ ತಮ್ಮ ಅನುಭವಗಳನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಿದರು. ಮೊಗಲ್ ದೊರೆ ಅಕ್ಬರ್ ತನ್ನ ವಿಜಯಗಾಥೆ  ತಿಳಿಸಲು 'ಅಕ್ಬರ್ ನಾಮಾ' ಬರೆಸಿದ. ಅಶೋಕ ಚಕ್ರವರ್ತಿ ತನ್ನ ಸಂದೇಶಗಳನ್ನು ಕಲ್ಲಿನಲ್ಲಿ ಕೆತ್ತಿಸಲಿಲ್ಲವೇ? ಅವುಗಳು ಎರಡು ಸಾವಿರ ವರುಷಗಳ ನಂತರವೂ ಅವನ ಕಥೆ ಹೇಳುವ ಸ್ಮಾರಕಗಳಾಗಿ ಉಳಿದಿವೆ. ಪುರಂದರ ದಾಸರು ಬರೀ ಕೀರ್ತನೆಗಳನ್ನು ಹಾಡುವುದಷ್ಟೇ ಅಲ್ಲ, ಅವುಗಳನ್ನು ಬೇರೆಯವರಿಗೆ ಕಲಿಸಲು ಕೂಡ ಶ್ರಮ ಪಟ್ಟರು. ಸರ್ವವನ್ನು ಪರಿತ್ಯಾಗ ಮಾಡಿದ ಸರ್ವಜ್ಞನು ತ್ರಿಪದಿ ಹೇಳುವುದನ್ನು ಮರೆಯಲಿಲ್ಲ. ಅದು ಅವನ ಜೀವನದ ಸಂದೇಶ. ಋಷಿ ಮುನಿಗಳು ವೇದಗಳನ್ನು ಹುಟ್ಟಿಸಿದ್ದು ಹಾಗೆಯೆ. ಪತಂಜಲಿ ಮಹರ್ಷಿ ಯೋಗ ಸೂತ್ರಗಳನ್ನು ದಾಖಲಿಸಿದ್ದು ಅದೇ ಉದ್ದೇಶದಿಂದಲೇ. ಅವರ ಕಥೆ, ಸಂದೇಶಗಳನ್ನು ಕೇಳಿದ ಆಸಕ್ತರು ಅವುಗಳನ್ನು ಮುಂದಕ್ಕೆ ಸಾಗಿಸುತ್ತ ಬಂದರು.

 

ನಮ್ಮ ನಿಮ್ಮಲ್ಲೂ ಕಥೆಗಳು ಇವೆ. ಅವು ಆಸಕ್ತಿದಾಯಕವಾಗಿದ್ದಲ್ಲಿ ಅವುಗಳನ್ನು ಕೇಳುವವರು ಇರುತ್ತಾರೆ. ಇವತ್ತಲ್ಲದಿದ್ದರೆ ಮುಂದೊಂದು ದಿನ ಬರುತ್ತಾರೆ. ಸಾಕಷ್ಟು ಜನರು ಅಲ್ಲದಿದ್ದರೆ ಒಬ್ಬರಿಬ್ಬರಾದರು ಸರಿ. ಆಸೆ ಮತ್ತು ನಂಬಿಕೆಯೇ ನಮ್ಮ ಜೀವನವನ್ನು ಕುತೂಹಲದಾಯಕವಾಗಿಸುವುದು. ಹಾಗಾಗಿ ಇಲ್ಲಿ ಬರೀ ಕಥೆ ಕೇಳಿ ಹೋಗಬೇಡಿ. ನಿಮ್ಮ ಕಥೆಯನ್ನು ಕೂಡ ಹೇಳಿ ಹೋಗಿ.