Saturday, June 12, 2021

ಕವಿ ಸಿದ್ದಲಿಂಗಯ್ಯ ನವರಿಗೊಂದು ನಮನ

ಸಿದ್ದಲಿಂಗಯ್ಯ ನವರು ದಲಿತ ಬಂಡಾಯದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರು. ಹಾಗೆಯೇ ಕನ್ನಡ ಸಾಹಿತ್ಯಕ್ಕೆ ಹಲವಾರು ಪುಸ್ತಕ, ನಾಟಕ, ಕವನ ಸಂಕಲನಗಳ ರಚನೆಗಳ ಮೂಲಕ ಸೇವೆ ಸಲ್ಲಿಸಿದ್ದು ಅಲ್ಲದೆ, ವಿಶ್ವವಿದ್ಯಾನಿಲಯಗಳಿಗೆ ಮತ್ತು ಸರ್ಕಾರೀ ಪ್ರಾಧಿಕಾರಗಳಿಗೂ ಮಣ್ಣು ಹೊತ್ತಿದ್ದಾರೆ.

 


ಒಬ್ಬ ಹೋರಾಟಗಾರ ಕವಿಯೂ ಆದರೆ, ಅವನಲ್ಲಿ ಹುಟ್ಟುವ ಕವಿತೆಗಳು ತೀಕ್ಷ್ಣವಾಗಿರುತ್ತಲ್ಲವೇ? ಯಾವುದೇ ಕಲೆಗಾರ ತನ್ನ ವಿಚಾರ, ಅಭಿಪ್ರಾಯಗಳನ್ನು ತನ್ನ ಕಲೆಯ ಮೂಲಕವೇ ವ್ಯಕ್ತಪಡಿಸುತ್ತಾನೆ. ಕವಿ ಸಿದ್ದಲಿಂಗಯ್ಯ ನವರು ಬರೆದ ಅನೇಕ ಕವಿತೆಗಳು ನಮ್ಮ ಸಮಾಜದ ಧೂರ್ತತನಕ್ಕೆ ಕನ್ನಡಿ ಹಿಡಿಯುವುದಲ್ಲದೆ, ಚಾಟಿ ಏಟು ಬೀಸಿ ಪ್ರಶ್ನಿಸುತ್ತಿದ್ದವು. ಅವರ ಒಂದು ಕವಿತೆ, ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ಧರಣಿ ಮಂಡಲ ಮಧ್ಯದೊಳಗೆ' ಚಿತ್ರದೊಳಗೆ ಉಪಯೋಗವಾಗಿದೆ. ದುಡ್ಡಿನ ಮದದವರಿಗೆ ತರಾಟೆ ತೆಗೆದುಕೊಳ್ಳುವ ಸನ್ನಿವೇಶದಲ್ಲಿ ಈ ಹಾಡು ಮೂಡಿ ಬರುತ್ತದೆ. ಆ ಕವಿತೆಯ ಸಾಲುಗಳನ್ನು ಇಲ್ಲಿ ಓದಿಕೊಂಡು ನೋಡಿ.

 

 

ಕಾಸನು ಬೀಸಿ, ಒಲವಿನ ಬೆಲೆಯನು

ನಿಗದಿ ಮಾಡುವ ಅಂಧಕರೇ,

ಬೀಸುವ ಗಾಳಿಯ ಕೊಳ್ಳುವಿರೇನು,

ನೋಟಿನ ಕಂತೆಯ ಉಳ್ಳವರೇ

 

ದುಡ್ಡಿನ ಗಂಟನು ಮೇಲಕೆ ತೂರಿ,

ಹಾರುವ ಹಕ್ಕಿಯ ಇಳಿಸುವಿರಾ?

ಬಣ್ಣದ ನೋಟಿನ ಬಲೆಯನು ಬೀಸಿ,

ಉರಿಯುವ ಸೂರ್ಯನ ಹಿಡಿಯುವಿರಾ?

 

ಕಾಸನು ಬೀಸಿ, ಒಲವಿನ ಬೆಲೆಯನು

ನಿಗದಿ ಮಾಡುವ ಅಂಧಕರೇ

 

ಕಾಸಿನ ಸದ್ದಿಗೆ ಗಿಡದಲಿ ಮೊಗ್ಗು,

ಅರಳುವುದೇನು ಹೂವಾಗಿ?

ಕಾಸನು ಕಂಡು ಮರದಲಿ ಕಾಯಿ,

ತೂಗುವುದೇನು ಹಣ್ಣಾಗಿ?

 

ಕಾಸನು ಬೀಸಿ, ಒಲವಿನ ಬೆಲೆಯನು

ನಿಗದಿ ಮಾಡುವ ಅಂಧಕರೇ

 

ಮಿರುಗುವ ನೋಟಿನ ಕಟ್ಟನು ತೋರಿ,

ಕಂದನ ನಗುವನು ಕೊಳ್ಳುವಿರಾ?

ಕಾಸನು ಕೊಟ್ಟರೆ ಕಾಮನ ಬಿಲ್ಲನು,

ನೀಲಿಯ ಗಗನದಲಿ ತೋರುವಿರಾ? 

 

ಕಾಸನು ಬೀಸಿ, ಒಲವಿನ ಬೆಲೆಯನು

ನಿಗದಿ ಮಾಡುವ ಅಂಧಕರೇ

 

ಕವನ ಓದುವುದಿಕ್ಕಿಂತ, ಆ ಹಾಡು ಚಿತ್ರದ ತೆರೆಯ ಮೇಲೆ ಬಂದಿದ್ದು ನೀವು ನೋಡುವವರಾದರೆ, ಇಲ್ಲಿದೆ ಅದರ ಲಿಂಕ್.




No comments:

Post a Comment