Monday, June 13, 2022

ಚಲನ ಚಿತ್ರ ವಿಮರ್ಶೆ: ಗಂಗೂಬಾಯಿ ಕಠಿಯಾವಾಡಿ (ಹಿಂದಿ)

ಗಂಗಾ (ಅಲಿಯಾ ಭಟ್) ಉತ್ತಮ ಮನೆ ವಾತಾವರಣದಲ್ಲಿ ಬೆಳೆದವಳು ಆದರೆ ಅವಳಿಗೆ ಚಲನಚಿತ್ರಗಳಲ್ಲಿ ನಟಿಸುವಾಸೆ. ದೇವ್ ಆನಂದ್ ಅವಳ ಅಚ್ಚುಮೆಚ್ಚಿನ ನಟ. ಗಂಗಾಳಿಗೆ ಅವಳ ಪ್ರಿಯಕರ ಚಿತ್ರರಂಗದಲ್ಲಿ ಅವಕಾಶ ಕೊಡಿಸುವ ಆಸೆ ಒಡ್ಡಿ ಅವಳಿಗೆ ಮನೆಯಲ್ಲಿ ಯಾರಿಗೂ ತಿಳಿಸದಂತೆ ಆದರೆ ಒಡವೆಗಳನ್ನು ತೆಗೆದುಕೊಂಡು ಬರುವಂತೆ ತಿಳಿಸುತ್ತಾನೆ. ಅವನ ಜೊತೆ ಬಾಂಬೆಗೆ ಹೋಗುವ ಗಂಗಾಳಿಗೆ ಬೇರೆಯೇ ಭವಿಷ್ಯ ಕಾದಿರುತ್ತದೆ. ಅವಳ ಪ್ರಿಯಕರ ಅವಳನ್ನು ತನ್ನ ಆಂಟಿ ಮನೆ ಎಂದು ಹೇಳಿ ಒಂದು ವೇಶ್ಯಾಗೃಹಕ್ಕೆ ಅವಳನ್ನು ಸಾವಿರ ರುಪಾಯಿಗೆ ಮಾರಿ ಹೋಗಿಬಿಡುತ್ತಾನೆ. ಒಲ್ಲದ ಮನಸ್ಸಿನಿಂದ ಗಂಗಾ ಒಬ್ಬ ವೇಶ್ಯೆಯಾಗಿ ಬದಲಾಗುತ್ತಾಳೆ. ಅಲ್ಲಿ ಇರುವ ಹೆಣ್ಣು ಮಕ್ಕಳೆದೆಲ್ಲ ಹೆಚ್ಚು ಕಡಿಮೆ ಅದೇ ತರಹದ ಕಥೆಗಳು. ಮನೆ ಬಿಟ್ಟು ಹೋಗುವ ಮುನ್ನ ತಮ್ಮ ತಂದೆಗೆ ಭೇಟಿಯಾಗಿದ್ದರೆ ಅವನು ಅವರನ್ನು ಅಲ್ಲೇ ಉಳಿಸಿಕೊಂಡು ಈ ನರಕದಿಂದ ಪಾರು ಮಾಡಿರುತ್ತಿದ್ದ ಎಂದು ಹಲಬುವವರು. ತಂದೆ-ತಾಯಿಯನ್ನು ತುಂಬಾ ಪ್ರೀತಿಸುವವರು ಆದರೆ ಮನೆಗೆ ವಾಪಸ್ಸು ಹೋಗಲು ಹೆದರುವುವರು. ಅವರ ಕುಟುಂಬ ಅವರನ್ನು ಕ್ಷಮಿಸುತ್ತದೆಯೋ ಇಲ್ಲವೋ ಮತ್ತು ಸಮಾಜ ಅವರನ್ನು ಹೇಗೆ ನೋಡುತ್ತದೋ ಎನ್ನುವ ಹೆದರಿಕೆಯಿಂದ ಅಲ್ಲೇ ಉಳಿದುಕೊಂಡು ಪೂರ್ಣ ಪ್ರಮಾಣದ ವೇಶ್ಯೆಯರಾಗಿ ಜೀವನ ಮಾಡುತ್ತಿರುವವರು.


ಆದರೆ ಗಂಗಾ ಮಾತ್ರ ತನ್ನ ಘನತೆಯನ್ನು ಯಾವ ಕಾರಣಕ್ಕೂ ಬಿಟ್ಟು ಕೊಡುವುದಿಲ್ಲ. ಒಂದು ದಿನ ಅವಳ ಹತ್ತಿರ ಬಂದವನೊಬ್ಬ ಅವಳಿಗೆ ದೈಹಿಕ ಚಿತ್ರಹಿಂಸೆ ನೀಡಿ ಅವಳಿಗೆ ಆಸ್ಪತ್ರೆ ಸೇರುವಂತೆ ಮಾಡುತ್ತಾನೆ. ಸಹಾಯ ಕೋರಿ ಗಂಗಾ ಅಲ್ಲಿಯ ಭೂಗತ ದೊರೆ ರಹೀಮ್ ಲಾಲಾ (ಅಜಯ್ ದೇವಗನ್) ಸಂಪರ್ಕಿಸುತ್ತಾಳೆ. ಅವಳನ್ನು ಸೋದರಿಯ ಹಾಗೆ ನೋಡುವ ಲಾಲಾ ಗಂಗಾಳಿಗೆ ದೈಹಿಕ ಹಿಂಸೆ ನೀಡಿದವನಿಗೆ ತಕ್ಕ ಶಾಸ್ತಿ ಕಲಿಸುತ್ತಾನೆ. ಅಲ್ಲಿಂದ ವೇಶ್ಯಾಗೃಹದ ನಾಯಕಿಯಾಗಿ ಬದಲಾಗುತ್ತಾಳೆ ಗಂಗಾ. ಮತ್ತು ಕಾಮಾಟಿಪುರದ ಸ್ಥಳೀಯ ಚುನಾವಣೆಗೆ ಸ್ಪರ್ಧಿಸಿ ಗೆದ್ದೂ ಬಿಡುತ್ತಾಳೆ. ಅವಳು ವೇಶ್ಯೆಯರ ಪರವಾಗಿ ದನಿ ಎತ್ತುತ್ತಾಳೆ. ಅವರ ಮಕ್ಕಳನ್ನು ಶಾಲೆಗೆ ಕಳಿಸುವ ಏರ್ಪಾಡು ಮಾಡುತ್ತಾಳೆ.


ಅವಳಿಗೆ ಒಬ್ಬ ಪ್ರಿಯಕರನೂ ಇದ್ದಾನೆ. ಆದರೆ ಮದುವೆ ಹೇಗೆ ಸಾಧ್ಯ. ಬದಲಿಗೆ ತನ್ನ ಸಹೋದ್ಯೋಗಿ ಒಬ್ಬಳ ಮಗಳನ್ನು ಅವನಿಗೆ ಮದುವೆ ಮಾಡಿಸುತ್ತಾಳೆ. ಅವಳೀಗ ತನ್ನ ಸಹೋದ್ಯೋಗಿ ಎಲ್ಲರ ಪ್ರತಿನಿಧಿ. ಕಾಮಾಟಿಪುರದಿಂದ ಅವರೆನ್ನೆಲ್ಲ ಹೊರ ಹೋಗಲು ಹೇಳಿದಾಗ ಅವಳು ತನ್ನ ಸಮುದಾಯವನ್ನು ಪ್ರತಿನಿಧಿಸುತ್ತಾಳೆ. ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಾಳೆ. ಸ್ತ್ರೀ ಹಕ್ಕು ವೇದಿಕೆಯಲ್ಲಿ ಅವಳ ಭಾಷಣಕ್ಕೆ ಎಲ್ಲರೂ ತಲೆದೂಗುತ್ತಾರೆ. ಅವಳಿಗೆ ದೇಶದ ಪ್ರಧಾನಿ (ಅಂದಿನ ಪ್ರಧಾನಿ ಜವಾಹರಲಾಲ್ ನೆಹರು) ಅವರೊಂದಿಗೆ ವೇಶ್ಯೆಯರ ಸಮಸ್ಯೆ ಕುರಿತು ಮಾತನಾಡುವ ಅವಕಾಶ ಕೂಡ ದೊರಕುತ್ತದೆ. ಕಾಮಾಟಿಪುರದಿಂದ ಅವರನ್ನು ಹೊರ ಕಳಿಸುವ ಚರ್ಚೆ ಅಲ್ಲಿಗೆ ಮುಗಿಯುತ್ತದೆ.


ಇದು ನಿಜ ಜೀವನ ಆಧರಿಸಿ ಮಾಡಿದ ಚಿತ್ರ. ವೇಶ್ಯೆಯರ ಸಮಸ್ಯೆ ಕುರಿತು ಹಲವಾರು ಚಿತ್ರಗಳು ಬಂದಿವೆ. ಆದರೆ ವೇಶ್ಯೆ ಒಬ್ಬಳು ದನಿ ಎತ್ತಿ ಹೋರಾಟ ಮಾಡುವ ಚಿತ್ರ ಬಂದಿರಲಿಲ್ಲ. ಅಲಿಯಾ ಭಟ್ ಅವರ ಅಭಿನಯ ಅಮೋಘ. ಅಜಯ್ ದೇವಗನ್ ಅವರ ನಟನೆ ಕೂಡ ಗಮನ ಸೆಳೆಯುತ್ತದೆ. ಉಳಿದವರೆಲ್ಲ ಹೆಚ್ಚಾಗಿ ಹೊಸ ನಟರು ಆದರೆ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.


ಹೆಣ್ಣು ಮಕ್ಕಳನ್ನು ವೇಶ್ಯೆ ವೃತ್ತಿಗೆ ಇಳಿಸುವದರಲ್ಲಿ ಮೋಸದಿಂದ ಕರೆದೊಯ್ಯುವ ಗಂಡಸು ಎಷ್ಟು ಕಾರಣನೋ ಅಲ್ಲಿಂದ ಮುಂದಕ್ಕೆ ಕರೆದೊಯ್ಯುವ ಘರ್ ವಾಲಿ ಹೆಂಗಸರು ಕೂಡ ಅಷ್ಟೇ ಕಾರಣರು. ಹೆಣ್ಣು ಮಕ್ಕಳು ಮನೆ ಬಿಟ್ಟು ಓಡಿ ಹೋಗುವುದಕ್ಕಿಂತ ಮುಂಚೆ ಈ ಚಿತ್ರ ಒಮ್ಮೆ ನೋಡುವುದು ವಾಸಿ. ಹಾಗೆಯೆ ದೌರ್ಜನ್ಯ ತುಂಬಿದ ಸಮಾಜದಲ್ಲಿ ನ್ಯಾಯದ ಪರವಾಗಿ ನಿಲ್ಲುವ ಪಾತ್ರಗಳು ಕೂಡ ಈ ಚಿತ್ರದಲ್ಲಿ ಇವೆಯಲ್ಲ. ಮುಚ್ಚುಮರೆಯ ಲೋಕದಲ್ಲಿ ನಡೆಯುವ ಪಾಪಕಾರ್ಯಗಳ ಕಥೆಗಳನ್ನು ಆಲಿಸಲು ಈ ಚಿತ್ರ ಒಮ್ಮೆ ನೋಡಿ. ಈ ಚಿತ್ರ ನಿಮ್ಮ ಹೃದಯ ಗೆಲ್ಲುವುದರಲ್ಲಿ ಸಂದೇಹವೇ ಇಲ್ಲ.   




No comments:

Post a Comment