Friday, June 9, 2023
ಮಗಳ ದೌರ್ಬಲ್ಯಗಳನ್ನು ಮುಚ್ಚಿ ಹಾಕಿದ ನಂತರ
Wednesday, May 17, 2023
ಮುಳುಗುತ್ತಿರುವ ಸೂರ್ಯನತ್ತ ನಡೆದು ಹೋಗುವ ಮುನ್ನ

Friday, May 12, 2023
ಅಧಿಕಾರದ ಆಸೆ ಮತ್ತು ಸಾಯಬಹುದಲ್ಲ ಎನ್ನುವ ಭಯ
ಸಾಮಾನ್ಯ ಮನುಷ್ಯ ಬೇಕಾದರೆ ಒಂದೊಪ್ಪತ್ತು ಊಟ ಬಿಟ್ಟು ಉಪವಾಸ ಮಾಡುತ್ತಾನೆಯೇ ಹೊರತು ವಿಷ ಬೆರೆಸಿದ ಆಹಾರ ಸೇವಿಸಲು ಒಪ್ಪುವುದಿಲ್ಲ. ಕಹಿ ಅನಿಸಿದ ಪದಾರ್ಥ ಆಗಿಂದಾಗಲೇ ಉಗುಳಿ ಜೀವ ಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತಾನೆ. ಪ್ರಕೃತಿ ಮನುಷ್ಯನನ್ನು ರೂಪಿಸಿದ್ದು ಹಾಗೆಯೇ. ಬದುಕಿದರೆ ಹೇಗೋ ಜೀವನ ಮಾಡಬಹುದು ಎಂದುಕೊಳ್ಳುವ ಮನುಷ್ಯ ಸಾವಿನ ಅಪಾಯಗಳನ್ನು ಎದುರಿಸಲು ಹೋಗುವುದಿಲ್ಲ. ಆದರೆ ಎಲ್ಲರೂ ಹಾಗಲ್ಲ.
ಹಿಂದಿನ ಕಾಲದಲ್ಲಿ ರಾಜರುಗಳು ಒಬ್ಬರ ಮೇಲೆ ಒಬ್ಬರ ಯುದ್ಧ ಹೂಡುತ್ತಿದ್ದರಲ್ಲ. ಅದರ ಹಿಂದಿನ ಕಾರಣ, ಒಬ್ಬ ರಾಜನಿಗೆ ಹೆಚ್ಚಿನ ಅಧಿಕಾರದ ಆಸೆ. ಮತ್ತು ಇನ್ನೊಬ್ಬನಿಗೆ ಇರುವ ಅಧಿಕಾರ ಏಕೆ ಬಿಟ್ಟು ಕೊಡಬೇಕು ಎನ್ನುವ ಛಲ. ಹೆಚ್ಚಿನ ಯುದ್ಧಗಳು ಇಬ್ಬರಲ್ಲಿ ಒಬ್ಬ ರಾಜ ಸಾಯುವುದರೊಂದಿಗೆ ಕೊನೆಗೊಳ್ಳುತ್ತಿದ್ದವಲ್ಲ. ಅಂದರೆ ಸಾವಿಗೆ ಇಬ್ಬರು ರಾಜರುಗಳು ಮಾನಸಿಕವಾಗಿ ಸಿದ್ಧರಾಗಿಯೇ ಬಂದಿರುತ್ತಿದ್ದರು. ಅವರಿಗೆ ಸತ್ತರೆ ಹೇಗೆ ಎನ್ನುವ ಭಯಕ್ಕಿಂತ ಅಧಿಕಾರ ಕಳೆದುಕೊಂಡರೆ ಹೇಗೆ ಎನ್ನುವ ಚಿಂತೆ ಹೆಚ್ಚಿಗೆ ಭಾದಿಸುತ್ತಿತ್ತು.
ಇದು ಹಳೆಯ ಕಾಲಕ್ಕೆ ಸೀಮಿತವಲ್ಲ. ಅಮೇರಿಕಾದ ಅಧ್ಯಕ್ಷ ಜಾನ್ ಎಫ್ ಕೆನಡಿ ಯಿಂದ ಭಾರತದ ಪ್ರಧಾನಿ ಇಂದಿರಾ ಗಾಂಧಿಯವರೆಗೆ ಅವರು ಅಧಿಕಾರದಲ್ಲಿ ಇರುವಾಗ ಹತರಾದರಲ್ಲ. ಅವರು ತೆಗೆದುಕೊಂಡ ನಿರ್ಧಾರಗಳು ಶತ್ರುಗಳನ್ನು ಸೃಷ್ಟಿಸುವುದು ಮತ್ತು ಅದು ಅವರ ಜೀವಕ್ಕೆ ಕುತ್ತಾಗಬಹುದು ಎನ್ನುವ ಅಪಾಯಗಳ ಬಗ್ಗೆ ಅವರಿಗೆ ಸ್ಪಷ್ಟವಾಗಿ ಅರಿವಿತ್ತು. ಆದರೂ ಕೂಡ ಅವರೇಕೆ ಅಪಾಯಗಳಿಗೆ ಎದೆಯೊಡ್ಡಿದರು? ಪ್ರಕೃತಿ ಅವರನ್ನೇಕೆ ವಿಭಿನ್ನವಾಗಿ ರೂಪಿಸಿತು?
ಕೂಲಂಕುಷವಾಗಿ ಪರಿಶೀಲಿಸಿ ನೋಡಿದರೆ, ಪ್ರಕೃತಿ ಎಲ್ಲ ತರಹದ ಜನರನ್ನು ಸೃಷ್ಟಿಸಿತ್ತದೆ. ಕಾಡಿನಲ್ಲಿ ಜಿಂಕೆ, ತೋಳ, ಹುಲಿಗಳ ನಡುವಳಿಕೆ ಬೇರೆ ಬೇರೆ ಹಾಗೆಯೆ ಅವುಗಳ ಸಂಖ್ಯೆಯು ಕೂಡ ಬೇರೆ ಬೇರೆ. ಜಿಂಕೆಗಳು ಗುಂಪಿನಲ್ಲಿ ಬದುಕುತ್ತವೆ. ಅವುಗಳು ಇನ್ನೊಬ್ಬರ ಮೇಲೆ ಆಕ್ರಮಣ ಮಾಡುವುದಿರಲಿ, ತಮ್ಮನ್ನು ರಕ್ಷಿಕೊಳ್ಳುವ ಕಲೆಯೂ ಅವುಗಳಿಗೆ ಒಲಿದಿಲ್ಲ. ಆದರೆ ಹಸಿದ ಹುಲಿ ಎಂತಹ ಪ್ರಾಣಿಯನ್ನಾದರೂ ಬೇಟೆಯಾಡುವ ಗುಂಡಿಗೆ ತೋರುತ್ತದೆ. ಅದೇ ತರಹ ಮನುಷ್ಯರಲ್ಲಿ ತಾನು ರಾಜನಾಗಬೇಕೆನ್ನುವ ಆಸೆ ಇರುವವರ ಸಂಖ್ಯೆ ಕಡಿಮೆ. ಆದರೆ ಅವರಿಲ್ಲ ಎಂದಿಲ್ಲ. ಒಂದು ಜಿಂಕೆ ಹುಲಿಗೆ ಆಹಾರವಾದರೆ ಉಳಿದವೆಲ್ಲ ಓಡಿ ತಪ್ಪಿಸಿಕೊಳ್ಳುತ್ತವಲ್ಲ. ಉಳಿದ ಜನ ಎಲ್ಲ ಆ ಪ್ರಕೃತಿಯವರು.
ಇಂದಿಗೆ ಚುನಾವಣೆಗಳು ನಡೆದಿವೆಯಲ್ಲ. ಅಲ್ಲಿ ಅಧಿಕಾರ ಬೇಕೆಂದು ಸ್ಪರ್ಧಿಸುವವರು ಕೆಲವು ಜನ. ಅವರ ಹಿಂದೆ ಹೊಡೆದಾಡಲು ತಯ್ಯಾರು ಇರುವವರು ಕೆಲವು ಸಾವಿರ ಜನ. ಆದರೆ ಅದನ್ನು ನಿಂತು ನೋಡುವವರು ಕೋಟಿ ಜನ. ಚುನಾವಣೆಯಲ್ಲಿ ಬರಿ ಮತದ ಹೋರಾಟ ಅಷ್ಟೇ ಇಲ್ಲ. ಪ್ರತಿಸ್ಪರ್ಧಿಗಳು ಬೀದಿಯಲ್ಲಿ ಕೂಡ ಹೊಡೆದಾಟಕ್ಕೆ ಇಳಿಯುತ್ತಾರೆ. ಆಗ ಸಂಘರ್ಷದಲ್ಲಿ ಕೈ-ಕಾಲು ಮುರಿಯಬಹುದು ಅಥವಾ ತಮ್ಮ ಅಥವಾ ಹಿಂಬಾಲಕರ ಜೀವವೇ ಹೋಗಬಹುದು. ಆ ಅಪಾಯವನ್ನು ಎದುರಿಸಲು ಸಜ್ಜಾಗಿರುವವನೇ ಶಾಸಕ ಆಗುತ್ತಾನೆ. ಅವನು ಒಳ್ಳೆಯವನು ಅಥವಾ ಕೆಟ್ಟವನು ಎನ್ನುವ ನೈತಿಕ ವಿಮರ್ಶೆ ನಾನು ಮಾಡುತ್ತಿಲ್ಲ. ಆದರೆ ಶಾಸಕನ ಅಧಿಕಾರದ ಆಸೆ ಅವನನ್ನು ಜೀವ ಭಯವನ್ನು ಮೆಟ್ಟಿ ನಿಲ್ಲುವಂತೆ ಮಾಡಿದೆ. ಅದು ಹಿಂದಿನ ಕಾಲದಲ್ಲಿ ರಾಜನೊಬ್ಬ ಯುದ್ಧಕ್ಕೆ ಸಜ್ಜಾದ ಹಾಗೆ.
ತಮಗೆ ಏನಾದರೂ ಆದರೆ ಹೇಗೆ ಎನ್ನುವ ಸಾಮಾನ್ಯ ಮನುಷ್ಯ ಅಂತಹ ಅಪಾಯಗಳಿಗೆ ಎದೆಯೊಡ್ಡುವುದಿಲ್ಲ. ತಲೆ ತಗ್ಗಿಸಿ ದೌರ್ಜನ್ಯಗಳನ್ನು ಸಹಿಸಿಕೊಳ್ಳುತ್ತಾನೆ. ಅಪಾಯ ಎದುರಿಸಿ ನಿಲ್ಲುವ ವ್ಯಕ್ತಿ ಒಂದು ಗೆಲ್ಲುತ್ತಾನೆ ಇಲ್ಲವೇ ಸೋತು ಸುಣ್ಣವಾಗುತ್ತಾನೆ ಅಥವಾ ಪ್ರಾಣ ಕಳೆದುಕೊಳ್ಳುತ್ತಾನೆ. ಗೆದ್ದವನ ದೊಡ್ಡಸ್ತಿಕೆ ಇನ್ನೊಬ್ಬ ಪ್ರತಿಸ್ಪರ್ಧಿ ಹುಟ್ಟುವವರೆಗೆ. ಅವನ ಸಂತತಿ ಉಳಿಯುವುದು ಕಷ್ಟ. ಕಾಡಿನಲ್ಲಿ ಹುಲಿಗಳ ಹಾಗೆ. ಆದರೆ ಅಪಾಯದಿಂದ ದೂರ ಸರಿಯುವ ವ್ಯಕ್ತಿಯ ಸಂತತಿ ಬೆಳೆಯುತ್ತ ಹೋಗುತ್ತದೆ. ಕಾಡಿನ ಜಿಂಕೆಗಳ ಹಾಗೆ.
ನಾಡನ್ನಾಳಿದ ಎಷ್ಟೋ ರಾಜ ಮನೆತನಗಳ ಸಂತತಿಗಳು ಬಹು ಬೇಗ ಅಳಿದು ಹೋದವು. ಅದು ಅವರು ಅಪಾಯಗಳನ್ನು ಎದುರಿಸಿದ್ದಕ್ಕೆ. ಸಾಮಾನ್ಯ ಜನರ ಸಂತತಿ ನೂರು ಪಟ್ಟು ಬೆಳೆಯಿತು. ಅದು ಅವರು ಪರಿಸ್ಥಿತಿಗೆ ತಲೆ ಬಾಗಿದ್ದಕ್ಕೆ. ಅದು ಕಾಡಲ್ಲಿನ ಹುಲಿ-ಜಿಂಕೆಯ ಅನುಪಾತದ ಹಾಗೆ.
ಅಧಿಕಾರ ಬೇಕೆನ್ನುವವರು ಮುಂದೆಯೂ ಇರುತ್ತಾರೆ. ಅವರು ಪುಕ್ಕಲರ ಹಾಗೆ ಬದುಕುವುದಿಲ್ಲ. ಮತ್ತು ಅವರ ಅಧಿಕಾರ ತುಂಬಾ ಕಾಲ ಕೂಡ ಉಳಿಯುವುದಿಲ್ಲ. ಹೇಗೋ ಒಂದು ಬದುಕಿದರಾಯಿತು ಎನ್ನುವವರು ಯಾವುದೇ ಸಂಘರ್ಷಕ್ಕೆ ಇಳಿಯುವುದಿಲ್ಲ. ಅವರ ಬದುಕಿದ್ದು, ಸತ್ತಿದ್ದು ಯಾರಿಗೂ ಬದಲಾವಣೆ ತರುವುದಿಲ್ಲ. ಬದಲಾವಣೆ ತರುವವರು ಸಾವಿಗೆ ಅಂಜಿ ಬದುಕುವುದಿಲ್ಲ.
(ಪ್ರಭಾವ: ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣ ಸ್ಪರ್ಧಿಗಳ ಬೀದಿ ಹೊಡೆದಾಟ ನೋಡಿ ಅನಿಸಿದ್ದು)
Sunday, May 7, 2023
ಐಹೊಳೆ ಮತ್ತು ಪಟ್ಟದಕಲ್ಲು ದೇಗುಲ ಸಮೂಹ
೬-೮ ನೇ ಶತಮಾನದ ಅವಧಿಯಲ್ಲಿ ಬಾದಾಮಿಯ ಚಾಲುಕ್ಯರಿಂದ ನಿರ್ಮಿಸಲ್ಪಟ್ಟ ದೇವಸ್ಥಾನಗಳ ಸಮೂಹ ಐಹೊಳೆಯಲ್ಲಿವೆ. ಹೆಚ್ಚಿನ ದೇವಸ್ಥಾನಗಳು ಶಿವ, ವಿಷ್ಣು ಮತ್ತು ದುರ್ಗೆಯನ್ನು ಪೂಜಿಸುವ ಮಂದಿರಗಳಾದರೆ, ಜೈನ ಮಂದಿರಗಳೇನೂ ಕಡಿಮೆ ಸಂಖ್ಯೆಯಲ್ಲಿಲ್ಲ. ಒಂದು ಬುದ್ಧ ಮಂದಿರ ಕೂಡ ಇಲ್ಲಿ ಕಾಣಬಹುದು. ಇದು ಆ ಕಾಲಘಟ್ಟದಲ್ಲಿ ಮೂರು ಧರ್ಮಗಳಿಗೂ ಪ್ರಾಶಸ್ತ್ಯ ಇತ್ತು ಎನ್ನುವುದು ತೋರಿಸುತ್ತದೆ. ಬೆಟ್ಟ ಕೊರೆದು ಗುಹೆಯಲ್ಲಿ ನಿರ್ಮಿಸಿದ ಮಂದಿರಗಳು, ಬೃಹದಾಕಾರದ ಕಲ್ಲುಗಳನ್ನು ಜೋಡಿಸಿ, ಅದರಲ್ಲೇ ಮಂಟಪ, ಗೋಪುರ ಕಟ್ಟಿ, ಅವುಗಳಲ್ಲಿ ಕಲೆ ಅರಳಿಸಿದ ದೇವಸ್ಥಾನಗಳು ಮನುಷ್ಯ ೧೫೦೦ ವರುಷಗಳ ಹಿಂದೆ ಕಲ್ಲನ್ನು ಪಳಗಿಸುವ ನೈಪುಣ್ಯ ಹೊಂದಿದ್ದ ಎಂದು ತೋರಿಸುತ್ತವೆ. ವಾಸ್ತುಶಿಲ್ಪದ ಪರಿಣಿತಿ ಕೂಡ ಆ ಕಾಲದಿಂದಲೇ ಆರಂಭ.
ಬಿರು ಬಿಸಿಲಿನ ಬಯಲು ಸೀಮೆಯಲ್ಲಿ ರಾಜ್ಯ ಕಟ್ಟಿ ಮೆರೆದ ಮನೆತನಗಳು ಅನೇಕ. ಅವರಿಗೆ ಬರೀ ಅಧಿಕಾರದ ಮೇಲಷ್ಟೇ ಆಸೆ ಇರಲಿಲ್ಲ. ತಮ್ಮ ಹೆಸರು ಅಜರಾಮರ ಆಗಲಿ ಎನ್ನುವ ಹೆಬ್ಬಯಕೆ ಕೂಡ ಅಷ್ಟೇ ಬಲವಾಗಿತ್ತು. ಕೋಟೆ, ಕೆರೆ, ದೇವಸ್ಥಾನಗಳ ಕಟ್ಟಿ ಸಮಾಜಕ್ಕೆ ಹಲವಾರು ಕೊಡುಗೆ ನೀಡಿ ಮಾನವನ ಏಳಿಗೆಗೆ ಕಾರಣರಾಗುತ್ತಾ ಹೋದರು. ಆದರೆ ಅವರಂತೆ ಇನ್ನೊಬ್ಬ ರಾಜನಿಗೆ ಕೂಡ ಅದೇ ಆಸೆ ಹುಟ್ಟುತ್ತದಲ್ಲ. ಆಗ ನಡೆದದ್ದು ಯುದ್ಧ. ಐಹೊಳೆ ಬಾದಾಮಿಯ ಚಾಲುಕ್ಯರಿಂದ, ರಾಷ್ಟ್ರಕೂಟರಿಗೆ ನಂತರ ಕಲ್ಯಾಣದ ಚಾಲುಕ್ಯರಿಗೆ, ದೆಹಲಿ ಸುಲ್ತಾನರಿಗೆ, ವಿಜಯನಗರದ ಅರಸರಿಗೆ, ಬಹಮನಿ ಸಾಮ್ರಾಜ್ಯಕ್ಕೆ ಹೀಗೆ ಬೇರೆ ಬೇರೆ ರಾಜ ಮನೆತನಗಳ ಆಳ್ವಿಕೆಗೆ ಒಳ ಪಡುತ್ತಾ ಬಂತು. ಮುಸ್ಲಿಮರ ಆಳ್ವಿಕೆ ಇದ್ದಾಗ ಲಾಡ್ ಖಾನ್ ಎನ್ನುವವ ಇಲ್ಲಿ ಗುಡಿಯೊಂದರಲ್ಲಿ ನೆಲೆಸಿದ್ದ. ಆಮೇಲೆ ಅವನ ಹೆಸರೇ ಆ ಗುಡಿಗೆ ಖಾಯಂ ಆಯಿತು.
ಐಹೊಳೆಗೆ ಹೋಲಿಸಿದರೆ ಪಟ್ಟದಕಲ್ಲಿನಲ್ಲಿ ದೇವಸ್ಥಾನಗಳ ಸಂಖ್ಯೆ ಕಡಿಮೆ. ಊರ ಹೆಸರೇ ಸೂಚಿಸುವಂತೆ ಚಾಲುಕ್ಯ ಅರಸರ ಪಟ್ಟಾಬ್ಜಿಷೇಕಕ್ಕೆ ಎಂದು ಕಟ್ಟಿದ ಊರಿನಲ್ಲಿ ದೇವಸ್ಥಾನಗಳ ಸಂಖ್ಯೆ ಕಾಲ ಕ್ರಮೇಣ ಹೆಚ್ಚುತ್ತಾ ಹೋಯಿತು. ವಿಶೇಷ ಎಂದರೆ ಇಲ್ಲಿನ ಕೆಲವು ದೇವಸ್ಥಾನಗಳನ್ನು ಕಟ್ಟಿಸಿದ್ದು ರಾಣಿಯರು. ಅದು ತಮ್ಮ ಗಂಡನ ವಿಜಯೋತ್ಸವಗಳ ನೆನಪಿಗಾಗಿ. ರಾಜ ಯುದ್ಧ ಮಾಡುವುದರಲ್ಲಿ ಗಮನ ಕೊಟ್ಟರೆ, ರಾಣಿಯರು ದೇವಸ್ಥಾನ ಕಟ್ಟುವ ಹೊಣೆ ಹೊತ್ತರೆನೋ? ಇಮ್ಮಡಿ ಪುಲಿಕೇಶೀ, ವಿಕ್ರಮಾದಿತ್ಯ ರಂತ ಚಾಲುಕ್ಯ ಮನೆತನದ ಅರಸರು ಗೆದ್ದ ಯುದ್ಧಗಳೇನು ಕಡಿಮೆಯೇ?
ಧರ್ಮ, ಇತಿಹಾಸ, ವಾಸ್ತುಶಿಲ್ಪ ಇವುಗಳಲ್ಲಿ ನಿಮಗೆ ಒಂದರಲ್ಲಿ ಆಸಕ್ತಿ ಇದ್ದರೂ ಸಾಕು. ಐಹೊಳೆ, ಪಟ್ಟದಕಲ್ಲು ನಿಮ್ಮನ್ನು ಬೆರಗುಗೊಳಿಸುವುದರಲ್ಲಿ ಸಂದೇಹವಿಲ್ಲ.
Saturday, May 6, 2023
ಬಸವನಿದ್ದಲ್ಲಿ ಕಲ್ಯಾಣ
ಬಸವಣ್ಣವನವರು ತಾವು ಹುಟ್ಟಿದ ಕಾಲಮಾನದಲ್ಲಿ ಇದ್ದ ವಿಚಾರಗಳಿಗಿಂತ ಆಧುನಿಕತೆ ಹೊಂದಿದ್ದವರು. ಅನುಭವ ಮಂಟಪ ಆಗಲಿ, ಅಂತರ್ಜಾತಿ ವಿವಾಹಗಳೇ ಆಗಲಿ, ಲಿಂಗಾಯತ ಧರ್ಮವನ್ನು ಹುಟ್ಟಿ ಹಾಕಿದ್ದೆ ಆಗಲಿ, ತಾವು ವಚನಗಳನ್ನು ರಚಿಸುವುದಲ್ಲದೆ ಹಲವಾರು ಶರಣರಿಗೆ ವಚನ ರಚಿಸುವ ಪ್ರೋತ್ಸಾಹ ನೀಡಿ ಕನ್ನಡ ವಚನ ಸಾಹಿತ್ಯ ಸಮೃದ್ಧಿ ಇಷ್ಟೆಲ್ಲಾ ಕಾರ್ಯಗಳು ಜರುಗುವುದಕ್ಕೆ ಕಾರಣ ಆದರು. ಸನಾತನ ಧರ್ಮದ ಆಚಾರ-ವಿಚಾರಗಳನ್ನು ತಿರಸ್ಕರಿಸಿ 'ಕಾಯಕವೇ ಕೈಲಾಸ' ಎಂದು ಸಾರಿದರು. ಅವರ ಸಮಾಜ ಸುಧಾರಣೆ ಕಾರ್ಯಗಳನ್ನು ಅರಸೊತ್ತಿಗೆ ಒಪ್ಪದಿದ್ದಾಗ ಬಿಜ್ಜಳನ ರಾಜಧಾನಿಯನ್ನು ಬಿಟ್ಟು ಹೊರ ನಡೆದರು. ಕಲ್ಯಾಣದಲ್ಲಿ ಬಸವನಿಲ್ಲದಿದ್ದರೇನಂತೆ? ಬಸವನಿದ್ದಲ್ಲಿ ಕಲ್ಯಾಣ ಅಲ್ಲವೇ?
ಬಸವಣ್ಣವರ ಜೀವನ ದುರಂತ ಅಂತ್ಯ ಕಂಡರೂ, ಅವರು ಕಟ್ಟಿದ ಲಿಂಗಾಯತ ಧರ್ಮ ಬೆಳೆದು ಹೆಮ್ಮರ ಆಯಿತು. ಇಂದಿಗೂ ಪ್ರತಿಯೊಂದು ಲಿಂಗಾಯತ ಕುಟುಂಬದಲ್ಲಿ ಬಸವ ನಾಮಧೇಯರಿದ್ದಾರೆ. ಆದರೆ ಅವರಲ್ಲಿ ಎಷ್ಟು ಜನಕ್ಕೆ ಕೂಡಲ ಸಂಗನ ಒಲಿಸಿಕೊಳ್ಳುವ ಪರಿ ಗೊತ್ತು?
ನೀವು ಬಸವಣ್ಣನನ್ನು ಮೆಚ್ಚುವವರು ಆಗಿದ್ದರೆ, ಬಾಗೇವಾಡಿಯಿಂದ ಶುರು ಮಾಡಿ, ಬಸವಣ್ಣನವರ ಕಾರ್ಯಕ್ಷೇತ್ರ ಬಸವಕಲ್ಯಾಣದಲ್ಲಿ ಅಲೆದು ಕೊನೆಯಲ್ಲಿ ಅವರ ಐಕ್ಯ ಸ್ಥಳವಾದ ಕೂಡಲ ಸಂಗಮದಲ್ಲಿ ಕಾಲ ಕಳೆದು ನೋಡಿ. ಅಲ್ಲಿ ದೇವಸ್ಥಾನದ ಪ್ರಾಂಗಣದ ಕಟ್ಟೆಗಳ ಮೇಲೋ ಇಲ್ಲವೇ ಹೊಳೆಯ ದಡದಲ್ಲೋ ನಿಮಗೆ ಬಸವಣ್ಣನವರ ದರ್ಶನವಾದಂತೆ ಅನಿಸುತ್ತದೆ. ಬಸವ ಎನ್ನುವ ಭಕರ ಧ್ವನಿಯಿಂದ, ಹೃದಯ ಮುಟ್ಟುವ ವಚನಗಳ ಅರ್ಥಗಳ ಮೂಲಕ ಬಸವಣ್ಣನವರು ನಿಮಗೆ ಒಲಿಯುತ್ತಾರೆ. ಅವರಿಗೆ ಕೂಡಲ ಸಂಗಮ ಒಲಿದ ಹಾಗೆ.