Thursday, April 29, 2021

ಸಮರ್ಪಣೆ, ನಿಸ್ವಾರ್ಥತೆ ಇರದೇ ಇದ್ದರೆ ...

'ಬಾನಲ್ಲು ನೀನೆ, ಭುವಿಯಲ್ಲೂ ನೀನೆ,

ಎಲ್ಲೆಲ್ಲೂ ನೀನೆ, ನನ್ನಲ್ಲೂ ನೀನೇ"

 

ಇದು ಒಂದು ಪ್ರೇಮಗೀತೆ ಆದರೂ, ಭಗವಂತನನ್ನು ಸ್ಮರಿಸಿ ಗೀತೆ ಹಾಡಿದರೆ ಇದು ಒಂದು ಭಕ್ತಿ ಗೀತೆಯಾಗಿ ಬದಲಾದೀತು.

 

'ಪೂಜಿಸಲೆಂದೇ ಹೂಗಳ ತಂದೆ,

ದರುಶನ ಕೋರಿ ನಾ ನಿಂದೆ,

ತೆರೆಯೋ ಬಾಗಿಲನು, ರಾಮ'

 

ಇದು ಒಂದು ದೇವರ ಪೂಜೆ ಗೀತೆ ಎನಿಸಿದರೂ, ಒಂದು ಪ್ರೇಮ ಗೀತೆಯ ತರಹ ಚಿತ್ರಿತಗೊಂಡಿದೆ. ಪ್ರೇಮವಾಗಲಿ, ಭಕ್ತಿಯಾಗಲಿ ಒಂದೇ ಭಾವನೆಯ ತಳಹದಿಯ ಮೇಲೆ ಹುಟ್ಟಿದಂತವು. ಹಾಗಾಗಿ ಎರಡಕ್ಕೂ ಹೆಚ್ಚಿನ ವ್ಯತಾಸವೇನಿಲ್ಲ. ಸಮರ್ಪಣಾ ಹಾಗು ನಿಸ್ವಾರ್ಥ ಭಾವದಿಂದ ಕೂಡಿದ್ದರೆ, ಎರಡು ಕೂಡ ಸುಲಲಿತವಾಗಿ ಸಾಗುತ್ತವೆ. ಇಲ್ಲವೇ ಭ್ರಮ ನಿರಸನ ಎನ್ನುವುದು ಕಟ್ಟಿಟ್ಟ ಬುತ್ತಿ.

 

ಒಂದು ವೇಳೆ ಪ್ರೇಮವು ಸ್ವಾರ್ಥದಿಂದ ಕೂಡಿದ್ದರೆ, ಯಾವುದೊ ಮಹಾನ್ ಪ್ರೇಮಿಯನ್ನು ತಾನು ಪ್ರೀತಿಸಿದ್ದೇನೆ ಎನ್ನುವ ಭ್ರಮೆಯಲ್ಲಿ 'ತೆರೆಯೋ ಬಾಗಿಲನು' ಎಂದು ಹಾಡಿದರೆ, ತೆರೆದ ಬಾಗಿಲಿನಾಚೆ ಇರುವುದು ಒಬ್ಬ ಅಡ್ಡನಾಡಿ, ನಿರುಪಯೋಗಿ ರಾಮ ಎಂದು ಗೊತ್ತಾದಾಗ ನಿರಾಸೆ ಆಗುವುದಿಲ್ಲವೇ? ಪ್ರೀತಿಸುವುದಕ್ಕಿಂತ ಮುಂಚೆಯೇ ತನ್ನ ರಾಮ ಎಂಥವನು ಎನ್ನುವ ಅರಿವು ಇರಬೇಕಿತ್ತಲ್ಲವೇ? ಹಾಗೆಯೇ ಭಕ್ತಿಯೂ ಕೂಡ ಅಷ್ಟೇ. ಯಾವುದೊ ಆಸೆಯನ್ನು ಮನದಲ್ಲಿಟ್ಟುಕೊಂಡು, 'ಇಂದ್ರ-ಚಂದ್ರ' ಎಂದು ದೇವರನ್ನು ಗುಣಗಾನ ಮಾಡುತ್ತಾ ಹಾಡಿದರೆ, ದೇವರು ಒಲಿದೆ ಒಲಿಯುತ್ತಾನೆ ಎಂದು ಏನು ಗ್ಯಾರಂಟಿ?

 

ಪ್ರೇಮಿ ಹೇಗೆ ಕೈ ಕೊಟ್ಟು ಪಾರಾಗುತ್ತಾನೋ, ದೇವರು ಕೂಡ ಕೇಳಿದ್ದು ಕೊಡದೆ ಆಟವಾಡಿಸುತ್ತಾನೆ.

 

ಅದಕ್ಕೆ ಸಮರ್ಪಣೆ, ನಿಸ್ವಾರ್ಥತೆ ಇರದೇ ಇದ್ದರೆ ಪ್ರೇಮವಾಗಲಿ, ಭಕ್ತಿಯಾಗಲಿ ವ್ಯರ್ಥ ಎಂದು ನನಗೆ ಅನಿಸಿದ್ದು. ನೀ ಹೇಗಿದ್ದಿಯೋ ಹಾಗೆ ನನಗೆ ಒಪ್ಪಿಗೆ ಎನ್ನುವ ಪ್ರೇಮಿ, ನೀನು ಕೊಟ್ಟಿದ್ದೆ ನನಗೆ ಪ್ರಸಾದ ಎನ್ನುವ ಭಕ್ತ ಇವರಿಬ್ಬರ ಶೃದ್ಧೆ ಬಹಳ ದೊಡ್ಡದು. ಅವರಿಗೆ ನಿರಾಸೆ ಎನ್ನುವುದಿಲ್ಲ. ಆದರೆ ಅಂತಹ ಪ್ರೇಮಿಗಳಾಗಲಿ, ಭಕ್ತರಾಗಲಿ ಇರುವುದು ವಿರಳ. ಹಾಗಾಗಿ ಪ್ರೀತಿ ವಿರಸದಲ್ಲಿ ಮತ್ತು ಭಕ್ತಿ ಭ್ರಮ ನಿರಸನದಲ್ಲಿ ಬದಲಾಗುವ ಸಂಭವನೀಯತೆಯೇ ಹೆಚ್ಚು. ಹಾಗೆಯೇ ಸಮರ್ಪಣೆ, ನಿಸ್ವಾರ್ಥತೆ ಇದ್ದಲ್ಲಿ  ಪ್ರೇಮ, ಭಕ್ತಿಗಳು ಕೂಡ ಅಜರಾಮರ.

Wednesday, April 28, 2021

ರಾಜಣ್ಣನ ನಾಯಕಿಯರು

ಕಲಾಸಾರ್ವಭೌಮ ರಾಜಕುಮಾರ್ ಗೆ ಹೆಚ್ಚಿನ ಚಿತ್ರಗಳಲ್ಲಿ ಜೊತೆಯಾದದ್ದು ಅಭಿನಯ ಶಾರದೆ ಜಯಂತಿ ಅವರು. ಅವರಿಬ್ಬರೂ ಸುಮಾರು ೩೫ ಚಿತ್ರಗಳಲ್ಲಿ ಜೋಡಿಯಾಗಿ ನಟಿಸಿದ್ದಾರೆ. ನಂತರದ ಸರದಿ ಭಾರತಿ ಅವರದ್ದು. ಸುಮಾರು ೨೧ ಚಿತ್ರಗಳಲ್ಲಿ ಜೋಡಿಯಾಗಿ ಜನಪ್ರಿಯರಾದ ಇವರನ್ನು ಕಂಡೆ 'ಭಲೇ ಜೋಡಿ' ಎನ್ನುವ ಚಿತ್ರ ತೆರೆಗೆ ಬಂದಿತ್ತು. 'ಮೇಯರ್ ಮುತ್ತಣ್ಣ', 'ದೂರದ ಬೆಟ್ಟ', ಐತಿಹಾಸಿಕ ದಾಖಲೆ ಮಾಡಿದ 'ಬಂಗಾರದ ಮನುಷ್ಯ' ಚಿತ್ರಗಳಲ್ಲಿ ರಾಜಣ್ಣನಿಗೆ ಸರಿಸಾಟಿ ಎನ್ನುವಂತೆ ಜೊತೆ ನೀಡಿದ್ದು ಭಾರತಿಯವರು.


ಜಯಪ್ರದ ಅವರ ಜೊತೆ ಬಂದ ಕೆಲವೇ ಚಿತ್ರಗಳು  'ಸನಾದಿ ಅಪ್ಪಣ್ಣ', 'ಹುಲಿಯ ಹಾಲಿನ ಮೇವು', 'ಕವಿರತ್ನ ಕಾಳಿದಾಸ' ಅದ್ಭುತ ಯಶಸ್ಸನ್ನು ಕಂಡವು.


ರಾಜಣ್ಣನ ಮೊದಲಿನ ಚಿತ್ರಗಳಲ್ಲಿ ನಾಯಕಿಯಾಗಿದ್ದ ಫಂಡರಿಬಾಯಿ ಅವರು ಕೊನೆಯ ಚಿತ್ರಗಳಲ್ಲಿ ರಾಜಕುಮಾರ್ ಗೆ ತಾಯಿಯಾಗಿ ನಟಿಸಿದರು. 'ಜೀವನ ಚೈತ್ರ' ಚಿತ್ರದಲ್ಲಿ ಮಗ ವಿಶ್ವ ಬರುವವರೆಗೆ ಕಾದಿದ್ದು ಕೊನೆಗೆ ಅವನ ತೋಳಿನಲ್ಲಿ ಪ್ರಾಣ ಬಿಡುವ ಅವರ ಪಾತ್ರ ಮರೆಯುವುದೆಂತು?


ಆದವಾನಿ ಲಕ್ಶ್ಮಿದೇವಿ ಅವರು ರಾಜಕುಮಾರ್ ಜೊತೆಗೆ ಪೋಷಕ ಪಾತ್ರಗಲ್ಲಿ ನಟಿಸಿದರೆ, ಅವರ ಮಗಳು ರೂಪಾದೇವಿ ಅವರು ರಾಜಕುಮಾರ್ ಗೆ 'ಯಾರಿವನು', 'ಸಮಯದ ಗೊಂಬೆ' ಚಿತ್ರಗಳಲ್ಲಿ ನಾಯಕಿಯಾದರು. ಹಾಗೆಯೇ 'ಹಾವಿನ ಹೆಡೆ' ಚಿತ್ರದಲ್ಲಿ ಅಣ್ಣಾವ್ರು ತಮ್ಮ ಮೊಮ್ಮಗಳ ವಯಸ್ಸಿನ ನಟಿಯ ಜೊತೆ ನಾಯಕ ಪಾತ್ರದಲ್ಲಿ ಮಿಂಚಿದ್ದು ಉಂಟಲ್ಲ.


ನಟಿ ಕಾಂಚನ ಅವರ ಜೊತೆಗೆ ಒಂದು ಪಾತ್ರದಲ್ಲಿ ನಾಯಕನಾದರೆ, ಇನ್ನೊಂದು ಪಾತ್ರದಲ್ಲಿ ಮಗನಾಗಿ ಅಭಿನಯಿಸುತ್ತಾರೆ ರಾಜಕುಮಾರ್. ಇದು 'ಶಂಕರ್ ಗುರು' ಮತ್ತು 'ಬಬ್ರುವಾಹನ' ಚಿತ್ರಗಳಲ್ಲುಂಟು. 


ರಾಜಕುಮಾರ್ ಅವರ ಕೊನೆಯ  ಚಿತ್ರಗಳಲ್ಲಿ ಅವರಿಗೆ ನಾಯಕಿರಾಗಿದ್ದು ಗೀತಾ ಮತ್ತು ಮಾಧವಿ ಅವರು. ಇವರಿಬ್ಬರ ವಿರುದ್ಧ ಸ್ವಭಾವದ ಪಾತ್ರಗಳ ನಡುವೆ 'ಅನುರಾಗ ಅರಳಿತು' ಚಿತ್ರದಲ್ಲಿನ ಅಣ್ಣಾವ್ರ ಅಭಿನಯ ನನಗೆ ಅಚ್ಚು ಮೆಚ್ಚು. ಹಾಗೆಯೇ 'ಆಕಸ್ಮಿಕ' ಚಿತ್ರದಲ್ಲಿ ಇವರಿಬ್ಬರು ಒಬ್ಬರಾದ ನಂತರ ಇನ್ನೊಬರು ಬಂದು ಹೋಗುತ್ತಾರೆ.


ರಸಿಕರ ರಾಜನಿಗೆ ತೆರೆಯ ಮೇಲೆ ೪೫ ಕ್ಕೂ ಹೆಚ್ಚು ನಾಯಕಿಯರು. ರಾಜಕುಮಾರ್ ಅವರ ಚಿತ್ರಗಳು ಮತ್ತು ಪಾತ್ರಗಳು ಎಷ್ಟು ವೈವಿಧ್ಯವೋ ಅವರ ನಾಯಕಿಯರು ಕೂಡ ಅಷ್ಟೇ.

ಕಣ್ಣೀರು ಮಾರೋ ಬಜಾರು

ಇಂದಿಗೆ ದಿನಕ್ಕೆ ನೂರಾರು ಲೆಕ್ಕದಲ್ಲಿ ಬೆಂಗಳೂರಿನಲ್ಲಿ ಹಾಗೆಯೇ ಸಾವಿರ ಲೆಕ್ಕದಲ್ಲಿ ಭಾರತದಲ್ಲಿ, ಕೋವಿಡ್ ಸಂಬಂದಿಸಿದ ಸಾವುಗಳು ಸಂಭವಿಸುತ್ತಿವೆಯಲ್ಲ. ಆಸ್ಪತ್ರೆಗೆ ಸೇರಿದ ಸಾವಿರಾರು ಜನ ಗುಣ ಹೊಂದಿ ಮನೆಗೆ ಮರಳಿ ನೇಪಥ್ಯಕ್ಕೆ ಸರಿದು ಹೋದರೂ, ಅದಕ್ಕೆ ಹೋಲಿಸದರೆ ಕಡಿಮೆ ಪ್ರಮಾಣದ ಸಾವುಗಳು ಹೆಚ್ಚಿನ ಮಟ್ಟದ ಸುದ್ದಿಯಾಗುತ್ತಲಿವೆ.

 

ಇದಕ್ಕೆ ಏನು ಕಾರಣ ಎಂದು ವಿಚಾರ ಮಾಡಿದರೆ, ನಾವು, ನಮ್ಮ ಸರ್ಕಾರ, ನಮ್ಮ ಸಮಾಜ, ನಮ್ಮ ವೈದ್ಯಕೀಯ ವ್ಯವಸ್ಥೆ ಇಂತಹ ದೊಡ್ಡ ಪ್ರಮಾಣದ ಕೋವಿಡ್ ಪ್ರಮಾಣಕ್ಕೆ ತಯ್ಯಾರಿ ಮಾಡಿಕೊಳ್ಳದಿರುವುದು. 'ಗಡ್ಡಕ್ಕೆ ಬೆಂಕಿ ಹತ್ತಿದಾಗ ಭಾವಿ ತೋಡು' ಎಂಬ ಗಾದೆ ಮಾತು ಭಾರತಕ್ಕೆ ಮಾತ್ರ ಅನ್ವಯ ಎನ್ನುವಂತೆ ಇಂದಿಗೆ ಎರಡನೇ ಅಲೆಗೆ ಭಾರತದಲ್ಲಿ ಮಾತ್ರ ಹೆಚ್ಚಿನ ಸಾವು ಸಂಭವಿಸುತ್ತಿವೆ. ಪರಿಸ್ಥಿತಿಯಲ್ಲಿ ಬರೀ ಕೆಲವರನ್ನೇ ದೂರಿ ಏನು ಉಪಯೋಗ ಹೇಳಿ? ವೈದ್ಯರು, ಆಸ್ಪತ್ರೆ ಸಿಬ್ಬಂದಿ ಕೂಡ ಮನುಷ್ಯರೇ ಅಲ್ಲವೇ? ಅವರು ಕೂಡ ಒತ್ತಡಕ್ಕೆ ಒಳಗಾಗುತ್ತಾರೆ. ಹಾಗೆಯೇ ಎಲ್ಲ ವೃತ್ತಿಗಳಲ್ಲಿ ಇರುವಂತೆಯೇ, ಇಲ್ಲಿಯೂ ಅಲ್ಪ ಪ್ರಮಾಣದ ಪರಿಸ್ಥಿತಿಯ ಲಾಭ ಪಡೆಯುವ ಮನಸ್ಥಿತಿ ಉಳ್ಳವರೂ ಇದ್ದಾರೆ. ಲಾಭ ಪಡೆಯುವದಕ್ಕೆಂದೇ ಸೃಷ್ಟಿಯಾದ ಖಾಸಗಿ ಆಸ್ಪತ್ರೆಗಳು ತಮ್ಮ ಲಾಭ-ನಷ್ಟದ ವಿಚಾರವನ್ನು ಮಾಡಿಯೇ ಮಾಡುತ್ತವೆ. ಅದನ್ನು ಜಗಜ್ಜಾಹೀರು ಮಾಡದಿದ್ದರೂ, ಅವರ ಲೆಕ್ಕಾಚಾರ ಅವರಿಗೆ ಅಲ್ಲವೇ. ಆದರೆ ಇದೆಲ್ಲರ ನಡುವೆ ನಾವು ಸರಕಾರಿ ಆಸ್ಪತ್ರೆಗಳ ಅಭಿವೃದ್ಧಿ ಕಡೆ ಯಾಕೆ ಗಮನ ಕೊಡಲಿಲ್ಲ? ಎಲ್ಲಿಯೋ ಕಟ್ಟುವ ರಾಮ ಮಂದಿರಕ್ಕೆ ದೇಣಿಗೆ ನೀಡುವ ನಾವು, ನಮ್ಮ ಊರಿನ ಆಸ್ಪತ್ರೆಯ ಕುಂದು-ಕೊರತೆಗಳ ಬಗ್ಗೆ ವಿಚಾರಿಸಲಿಲ್ಲ. 'ಮಾಡಿದ್ದುಣ್ಣೋ ಮಹರಾಯ' ಎನ್ನುವಂತೆ ಇಂದು ನಮ್ಮ ಕರ್ಮ ಫಲಗಳನ್ನು ನಾವು ಅನುಭವಿಸುತ್ತಿದ್ದೇವೆ ಅಷ್ಟೇ.

 

ಆದರೆ ಅವಘಡಗಳು ಸಂಭವಿಸುತ್ತಿರುವುದು ಬರೀ ವೈದ್ಯಕೀಯ ವ್ಯವಸ್ಥೆಯಲ್ಲಷ್ಟೇ ಅಲ್ಲವಲ್ಲ. ಔಷಧಿಗಳ ಅಭಾವ, ಆಂಬುಲೆನ್ಸ್ ಗೆ ಕಾಯುವಿಕೆ, ಸತ್ತ ನಂತರ ಅಂತ್ಯ ಸಂಸ್ಕಾರದಲ್ಲಿ ಆಗುತ್ತಿರುವ ಅನ್ಯಾಯ ಇವೆಲ್ಲೆವುಗಳನ್ನು ಗಮನಿಸಿದರೆ ಇಲ್ಲಿ ಒಂದು ಕಣ್ಣೀರು ಮಾರೋ ಬಜಾರು ಸೃಷ್ಟಿಯಾಗಿದೆ. ಸತ್ತವರು ಪುಣ್ಯ ಕಂಡರೂ, ಅವರ ಸಂಬಂಧಿಗಳ ಕರುಣಾಜನಕ ರೋಧನ ನೋಡಲಾಗದು. ಇಲ್ಲಿ ಸಾಮಾನ್ಯ ಜನ, ಸಂಘ ಸಂಸ್ಥೆಗಳು ಹೆಚ್ಚಿಗೆ ಮಾಡುವುದೇನಿಲ್ಲ. ದೊಡ್ಡ ಕಾರ್ಖಾನೆಗಳು ತಮ್ಮ ಉತ್ಪಾದನೆಯನ್ನು ನಿಲ್ಲಿಸಿ ಆಕ್ಸಿಜನ್ ಉತ್ಪಾದನೆ ಕಡೆ ಗಮನ ಹರಿಸಿದರೂ, ಉಳಿದ ವೈದ್ಯಕೀಯ ವಿಷಯಗಳಲ್ಲಿ ಅವರು ತಲೆ ಹಾಕುವಂತಿಲ್ಲ. ಹಾಗಾಗಿಯೇ ಸಂಭವಿಸುತ್ತಿರುವ ಸಾವುಗಳನ್ನು ನೋಡುತ್ತಾ ಅಸಹಾಯಕರಾಗಿ ನಿಲ್ಲುವ ಪರಿಸ್ಥಿತಿ ಸಾಮಾನ್ಯ ಮನುಷ್ಯನದ್ದು.

Tuesday, April 27, 2021

ಸಾಕಿದ ನಾಯಿ ಮತ್ತು ದುಡಿದ ದುಡ್ಡು ಬಿಟ್ಟರೆ ...

ಒಂದು ಮಾತಿದೆ. ಸಾಕಿದ ನಾಯಿ ಮತ್ತು ದುಡಿದ ದುಡ್ಡು ಬಿಟ್ಟರೆ ಬೇರೆ ಯಾವುದು ನಂಬಿಕೆಗೆ ಅರ್ಹವಲ್ಲ ಎಂದು. ಈ ಮಾತು ಸಂಪೂರ್ಣ ಸತ್ಯವಲ್ಲವಾದರೂ ಬಹುತೇಕ ನಿಜ. ಅವಸರಕ್ಕೆ ಆಗುವ ಸ್ನೇಹಿತರು, ಬಂಧುಗಳು ಪ್ರತಿಯೊಬ್ಬರಿಗೂ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲದಿದ್ದರೂ ಒಬ್ಬಿಬ್ಬರು ಆದರೂ ಇದ್ದೆ ಇರುತ್ತಾರೆ. ಆದರೆ ಅವರನ್ನು ಹೊರತು ಪಡಿಸಿ ಉಳಿದವರೆಲ್ಲ ತಮ್ಮ ಅನುಕೂಲಕ್ಕೆ ತಕ್ಕಂತೆ ಆಡುವವರು.


ನಮ್ಮ ಸಮಾಜದಲ್ಲಿ ಸುಳ್ಳು, ಮೋಸಗಳು ಹದವಾಗಿ ಬೆರೆತು ಹೋಗಿವೆ. 'ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು' ಎಂದು ಗಾದೆ ಮಾತೇ ಇದೆಯಲ್ಲ. ಅಂದರೆ ಸುಳ್ಳು ಹೇಳಿದರೆ ತಪ್ಪೇನಿಲ್ಲ ಎನ್ನುವುದು ಸಮಾಜದ ಅಭಿಪ್ರಾಯ. ಹಾಗೆಯೇ ಒಂದು ಯುದ್ಧದಲ್ಲಿ ಮೋಸ ಮಾಡಿ ಗೆಲ್ಲುವುದು ಚಾಣಾಕ್ಷತೆಯ ಸಂಕೇತ ಎನಿಸಿಕೊಳ್ಳುತ್ತದೆ. ಸುಳ್ಳು, ಮೋಸ ಬಲ್ಲವನು ಚಾಣಾಕ್ಷ, ಮೇಧಾವಿ ಎನಿಸಿಕೊಳ್ಳುತ್ತಾನೆ. ರಾಜಕಾರಣಿ ಸುಳ್ಳು ಆಶ್ವಾಸನೆ ಕೊಡುತ್ತಾನೆ ಎಂದು ಗೊತ್ತಿದ್ದರೂ ನಾವು ಭಾಷಣ ಕೇಳಲು ಹೋಗುವುದಿಲ್ಲವೆ? ಇದು ಪ್ರತಿಯೊಬ್ಬ ಸಾಮಾನ್ಯ ಮನುಷ್ಯನಿಗೂ ಅನ್ವಯಿಸುತ್ತದೆ. ಗಂಡಸು ಹುಟ್ಟಾ ಲಂಪಟ. ಸುಲಭವಾಗಿ ಸುಳ್ಳು ಹೇಳುತ್ತಾನೆ. ಸಿಕ್ಕಿ ಬಿದ್ದರೆ 'ಹೌದು. ಸುಳ್ಳು ಹೇಳಿದೆ. ಏನಿವಾಗ?' ಎಂದು ದಬಾಯಿಸುತ್ತಾನೆ. ಹೆಂಗಸು ಕನ್ನಡಿ ಇಲ್ಲದೆ ಸೀರೆ ಬದಲಾಯಿಸಬಲ್ಲಳು. ಅವಳು ನಿಶ್ಚಯಿಸಿದ್ದಲ್ಲಿ, ಎಂಥ ಜಾಣನಿಗೂ ಪಂಗನಾಮ ಗ್ಯಾರಂಟಿ. ತಂದೆ-ತಾಯಿ, ಗಂಡ-ಹೆಂಡತಿ, ಮಕ್ಕಳು, ಹತ್ತಿರದ ಬಂಧುಗಳು, ಗೊತ್ತೇ ಇರದ ಅಪರಿಚಿತರು ಎಲ್ಲರೂ ಸಮಯಕ್ಕೆ ತಕ್ಕ ಹಾಗೆ ಸುಳ್ಳು ಹೇಳುತ್ತಾರೆ. ಮತ್ತು ಅದು ದೊಡ್ಡ ವಿಷಯ ಏನಲ್ಲ ಎನ್ನುವಂತೆ ವರ್ತಿಸುತ್ತಾರೆ. ಸಮಯ ಪ್ರಜ್ಞೆ ಮತ್ತು ಸೂಕ್ಷ್ಮತೆ ನಮಗೆ ಇರದೇ ಹೋದರೆ ನಾವು ಮೋಸ ಹೋಗುತ್ತಿರುವುದು ಬಹು ಸಮಯದವರೆಗೆ ಗೊತ್ತೇ ಆಗುವುದಿಲ್ಲ.


ಆದರೆ ಸಾಕಿದ ನಾಯಿ ತನ್ನ ಜೀವನದುದ್ದಕ್ಕೂ, ಹಾಗೆಯೆ ದುಡಿದ ದುಡ್ಡು ಅದು ಮುಗಿದು ಹೋಗುವವರೆಗೆ ತಮ್ಮ ಒಡೆಯನಿಗೆ ನಂಬಿಕೆಯಿಂದ ನಡೆದುಕೊಳ್ಳುತ್ತವೆ. ಅನುಕೂಲಕ್ಕೆ ತಕ್ಕಂತೆ ಬದಲಾಗುವುದು ಅವುಗಳ ಜಾಯಮಾನದಲ್ಲಿಲ್ಲ. ಹಾಗಾಗಿಯೇ ಇಂತಹದೊಂದು ಮಾತು ರೂಢಿಗೆ ಬಂದಿರಬೇಕು.


ಬರೀ ನಾಯಿ ಮತ್ತು ದುಡಿದ ದುಡ್ಡೇ ಜೀವನ ಅಲ್ಲವಲ್ಲ. ನಾವು ಬದುಕ ಬೇಕಾಗಿರುವುದು ಮನುಷ್ಯರ ಜೊತೆ. ನಿಮಗೆ ಪ್ರಾಮಾಣಿಕ, ನಂಬಿಕಸ್ಥ ಸ್ನೇಹಿತರು ಸಿಕ್ಕಾಗ ಆ ಸ್ನೇಹವನ್ನು ಎಂದಿಗೂ ಕಳೆದುಕೊಳ್ಳಬೇಡಿ. ಆದರೆ ಉಳಿದೆಲ್ಲರ ಜೊತೆಗೆ ಒಂದು ಎಚ್ಚರಿಕೆಯಿಂದ ವರ್ತಿಸಿ. ಎಲ್ಲರಿಗೂ ನಿಮ್ಮನ್ನು ಮೋಸ ಮಾಡುವ ಉದ್ದೇಶ ಇರುವುದಿಲ್ಲ. ಆದರೆ ನೀವು ಎಲ್ಲರನ್ನು ನಂಬುವ ಮುಗ್ಧರು ಎನ್ನುವ ಸಂದೇಶ ನಿಮ್ಮಿಂದ ಹೋದರೆ, ಮೋಸಗಾರರು ನಿಮ್ಮನ್ನು ಸುತ್ತುವರೆಯಲು ಬಹಳ ಸಮಯ ಬೇಕಿಲ್ಲ. ಎಷ್ಟು ಎಚ್ಚರಿಕೆಯಿಂದ ಇದ್ದರೂ ಮೋಸಗಳು ಆಗಿಯೇ ಬಿಡುತ್ತವಲ್ಲ. ಅಂತಹ ಮೋಸಗಾರರಿಂದ ನಗುತ್ತಲೇ ದೂರವಾಗಿ. ಅವರನ್ನು ನೀವು ನಂಬಲು ಅವರು ನೀವು ಸಾಕಿದ ನಾಯಿಯಲ್ಲ. ನಿಮ್ಮ ಪರ್ಸ್ ಅಲ್ಲಿ ಇರುವ ಏಟಿಎಂ ಕಾರ್ಡ್ ಅಲ್ಲ.

Monday, April 26, 2021

ಕಲ್ಲು ಸಕ್ಕರೆ ಕೊಳ್ಳಿರೋ ನೀವೆಲ್ಲರೂ

೧೯೬೧ ರಲ್ಲಿ ಬಿಡುಗಡೆಯಾದ ಕಪ್ಪು-ಬಿಳುಪು ಚಿತ್ರ 'ಕಣ್ತೆರೆದು ನೋಡು'. ಈ ಚಿತ್ರದಲ್ಲಿ ಕಣ್ಣು ಕಾಣಿಸದ ನಾಯಕನಿಗೆ ಕಂಠ ಸಿರಿಯ ಪ್ರತಿಭೆ. ಅವನಿಂದ ಹಾಡು ಹಾಡಿಸಿ ಹಣ ಸಂಗ್ರಹಿಸುವ ಜೊತೆಗಾರ. ಈ ಚಿತ್ರದಲ್ಲಿ ಪಿ.ಬಿ.ಶ್ರೀನಿವಾಸ್ ಅವರ ಧ್ವನಿಯಲ್ಲಿರುವ ಪುರಂದರ ದಾಸರ ಕೀರ್ತನೆ ಇಂಪಾಗಿ ಮೂಡಿ ಬಂದಿದೆ. "ಸಂತೆಯೊಳಗೆ ಇಟ್ಟು ಮಾರುವುದಲ್ಲ ಭಕ್ತಿಯ ಸವಿ" ಎಂದು ದಾಸರು ಹಾಡಿದರೂ, ಅದನ್ನೇ ಬಂಡವಾಳ ಮಾಡಿಕೊಂಡಿರುವ ನಮ್ಮ ಸಮಾಜದ ದ್ವಂದ್ವವನ್ನು ತೋರಿಸುತ್ತದೆ.