Wednesday, April 28, 2021

ಕಣ್ಣೀರು ಮಾರೋ ಬಜಾರು

ಇಂದಿಗೆ ದಿನಕ್ಕೆ ನೂರಾರು ಲೆಕ್ಕದಲ್ಲಿ ಬೆಂಗಳೂರಿನಲ್ಲಿ ಹಾಗೆಯೇ ಸಾವಿರ ಲೆಕ್ಕದಲ್ಲಿ ಭಾರತದಲ್ಲಿ, ಕೋವಿಡ್ ಸಂಬಂದಿಸಿದ ಸಾವುಗಳು ಸಂಭವಿಸುತ್ತಿವೆಯಲ್ಲ. ಆಸ್ಪತ್ರೆಗೆ ಸೇರಿದ ಸಾವಿರಾರು ಜನ ಗುಣ ಹೊಂದಿ ಮನೆಗೆ ಮರಳಿ ನೇಪಥ್ಯಕ್ಕೆ ಸರಿದು ಹೋದರೂ, ಅದಕ್ಕೆ ಹೋಲಿಸದರೆ ಕಡಿಮೆ ಪ್ರಮಾಣದ ಸಾವುಗಳು ಹೆಚ್ಚಿನ ಮಟ್ಟದ ಸುದ್ದಿಯಾಗುತ್ತಲಿವೆ.

 

ಇದಕ್ಕೆ ಏನು ಕಾರಣ ಎಂದು ವಿಚಾರ ಮಾಡಿದರೆ, ನಾವು, ನಮ್ಮ ಸರ್ಕಾರ, ನಮ್ಮ ಸಮಾಜ, ನಮ್ಮ ವೈದ್ಯಕೀಯ ವ್ಯವಸ್ಥೆ ಇಂತಹ ದೊಡ್ಡ ಪ್ರಮಾಣದ ಕೋವಿಡ್ ಪ್ರಮಾಣಕ್ಕೆ ತಯ್ಯಾರಿ ಮಾಡಿಕೊಳ್ಳದಿರುವುದು. 'ಗಡ್ಡಕ್ಕೆ ಬೆಂಕಿ ಹತ್ತಿದಾಗ ಭಾವಿ ತೋಡು' ಎಂಬ ಗಾದೆ ಮಾತು ಭಾರತಕ್ಕೆ ಮಾತ್ರ ಅನ್ವಯ ಎನ್ನುವಂತೆ ಇಂದಿಗೆ ಎರಡನೇ ಅಲೆಗೆ ಭಾರತದಲ್ಲಿ ಮಾತ್ರ ಹೆಚ್ಚಿನ ಸಾವು ಸಂಭವಿಸುತ್ತಿವೆ. ಪರಿಸ್ಥಿತಿಯಲ್ಲಿ ಬರೀ ಕೆಲವರನ್ನೇ ದೂರಿ ಏನು ಉಪಯೋಗ ಹೇಳಿ? ವೈದ್ಯರು, ಆಸ್ಪತ್ರೆ ಸಿಬ್ಬಂದಿ ಕೂಡ ಮನುಷ್ಯರೇ ಅಲ್ಲವೇ? ಅವರು ಕೂಡ ಒತ್ತಡಕ್ಕೆ ಒಳಗಾಗುತ್ತಾರೆ. ಹಾಗೆಯೇ ಎಲ್ಲ ವೃತ್ತಿಗಳಲ್ಲಿ ಇರುವಂತೆಯೇ, ಇಲ್ಲಿಯೂ ಅಲ್ಪ ಪ್ರಮಾಣದ ಪರಿಸ್ಥಿತಿಯ ಲಾಭ ಪಡೆಯುವ ಮನಸ್ಥಿತಿ ಉಳ್ಳವರೂ ಇದ್ದಾರೆ. ಲಾಭ ಪಡೆಯುವದಕ್ಕೆಂದೇ ಸೃಷ್ಟಿಯಾದ ಖಾಸಗಿ ಆಸ್ಪತ್ರೆಗಳು ತಮ್ಮ ಲಾಭ-ನಷ್ಟದ ವಿಚಾರವನ್ನು ಮಾಡಿಯೇ ಮಾಡುತ್ತವೆ. ಅದನ್ನು ಜಗಜ್ಜಾಹೀರು ಮಾಡದಿದ್ದರೂ, ಅವರ ಲೆಕ್ಕಾಚಾರ ಅವರಿಗೆ ಅಲ್ಲವೇ. ಆದರೆ ಇದೆಲ್ಲರ ನಡುವೆ ನಾವು ಸರಕಾರಿ ಆಸ್ಪತ್ರೆಗಳ ಅಭಿವೃದ್ಧಿ ಕಡೆ ಯಾಕೆ ಗಮನ ಕೊಡಲಿಲ್ಲ? ಎಲ್ಲಿಯೋ ಕಟ್ಟುವ ರಾಮ ಮಂದಿರಕ್ಕೆ ದೇಣಿಗೆ ನೀಡುವ ನಾವು, ನಮ್ಮ ಊರಿನ ಆಸ್ಪತ್ರೆಯ ಕುಂದು-ಕೊರತೆಗಳ ಬಗ್ಗೆ ವಿಚಾರಿಸಲಿಲ್ಲ. 'ಮಾಡಿದ್ದುಣ್ಣೋ ಮಹರಾಯ' ಎನ್ನುವಂತೆ ಇಂದು ನಮ್ಮ ಕರ್ಮ ಫಲಗಳನ್ನು ನಾವು ಅನುಭವಿಸುತ್ತಿದ್ದೇವೆ ಅಷ್ಟೇ.

 

ಆದರೆ ಅವಘಡಗಳು ಸಂಭವಿಸುತ್ತಿರುವುದು ಬರೀ ವೈದ್ಯಕೀಯ ವ್ಯವಸ್ಥೆಯಲ್ಲಷ್ಟೇ ಅಲ್ಲವಲ್ಲ. ಔಷಧಿಗಳ ಅಭಾವ, ಆಂಬುಲೆನ್ಸ್ ಗೆ ಕಾಯುವಿಕೆ, ಸತ್ತ ನಂತರ ಅಂತ್ಯ ಸಂಸ್ಕಾರದಲ್ಲಿ ಆಗುತ್ತಿರುವ ಅನ್ಯಾಯ ಇವೆಲ್ಲೆವುಗಳನ್ನು ಗಮನಿಸಿದರೆ ಇಲ್ಲಿ ಒಂದು ಕಣ್ಣೀರು ಮಾರೋ ಬಜಾರು ಸೃಷ್ಟಿಯಾಗಿದೆ. ಸತ್ತವರು ಪುಣ್ಯ ಕಂಡರೂ, ಅವರ ಸಂಬಂಧಿಗಳ ಕರುಣಾಜನಕ ರೋಧನ ನೋಡಲಾಗದು. ಇಲ್ಲಿ ಸಾಮಾನ್ಯ ಜನ, ಸಂಘ ಸಂಸ್ಥೆಗಳು ಹೆಚ್ಚಿಗೆ ಮಾಡುವುದೇನಿಲ್ಲ. ದೊಡ್ಡ ಕಾರ್ಖಾನೆಗಳು ತಮ್ಮ ಉತ್ಪಾದನೆಯನ್ನು ನಿಲ್ಲಿಸಿ ಆಕ್ಸಿಜನ್ ಉತ್ಪಾದನೆ ಕಡೆ ಗಮನ ಹರಿಸಿದರೂ, ಉಳಿದ ವೈದ್ಯಕೀಯ ವಿಷಯಗಳಲ್ಲಿ ಅವರು ತಲೆ ಹಾಕುವಂತಿಲ್ಲ. ಹಾಗಾಗಿಯೇ ಸಂಭವಿಸುತ್ತಿರುವ ಸಾವುಗಳನ್ನು ನೋಡುತ್ತಾ ಅಸಹಾಯಕರಾಗಿ ನಿಲ್ಲುವ ಪರಿಸ್ಥಿತಿ ಸಾಮಾನ್ಯ ಮನುಷ್ಯನದ್ದು.

No comments:

Post a Comment