Thursday, February 24, 2022

ಸರ್ವಾಧಿಕಾರಿಗಳ ಮೊದಲ ಪ್ರೇಮ: ಯುದ್ಧ

ಜಗತ್ತನ್ನೇ ಗೆಲ್ಲ ಹೋರಾಟ ಮಹತ್ವಾಕಾಂಕ್ಷಿಗಳಲ್ಲಿ ಮೂವರು ಪ್ರಮುಖರು: ಅಲೆಕ್ಸಾಂಡರ್, ನೆಪೋಲಿಯನ್ ಮತ್ತು ಹಿಟ್ಲರ್. ಅವರ ಪೀಳಿಗೆ ಇನ್ನು ಮುಗಿದು ಹೋಗಿಲ್ಲ ಎನ್ನುವಂತೆ, ಆ ಸಾಲಿಗೆ ಸೇರಲು ಇಂದಿನ ಕಾಲಮಾನದ ಇಬ್ಬರು ತಯಾರಾಗಿ ನಿಂತಿದ್ದಾರೆ. ಅವರು ರಷ್ಯಾ ದೇಶದ ಪುಟಿನ್ ಮತ್ತು ಚೀನಾದ ಕ್ಸಿ ಜಿಂಪಿಂಗ್. ಅವರೆಲ್ಲರ ವ್ಯಕ್ತಿತ್ವಗಳಲ್ಲಿ ಸಮಾನವಾಗಿ ಕಂಡು ಬರುವ ಅಂಶಗಳು ಕೆಲವಿವೆ. ಮೊದಲಿಗೆ ಸರ್ವಾಧಿಕಾರ, ಅವರನ್ನು ಯಾರೂ ಎದುರು ಹಾಕಿಕೊಳ್ಳುವ ಹಾಗೆ ಇಲ್ಲ. ಅವರುಗಳ ಹಿಂದೆ ಬಲಿಷ್ಠ ಸೈನ್ಯಗಳಿವೆ. ಅವರಿಗೆ ಅವಶ್ಯಕತೆಗೆ ತಕ್ಕಂತೆ ಸ್ನೇಹಿತರು. ಸಮಯ, ಸನ್ನಿವೇಶ ಬದಲಾದರೆ ತಮ್ಮ ಸ್ನೇಹಿತರನ್ನು ಯಾವುದೇ ಮುಲಾಜಿಲ್ಲದೆ ಮುಗಿಸಿ ಹಾಕುತ್ತಾರೆ. ಅವರಿಗೆ ತಮ್ಮ ಸಾಮರ್ಥ್ಯದ ಮೇಲೆ ಅಗಾಧ ನಂಬಿಕೆ. ಸಾಮಾನ್ಯ ಜನ ಎದುರಿಸಲಾಗದ ಅಪಾಯಗಳನ್ನು ಅವರುಗಳು ಸುಲಭವಾಗಿ ನಿಭಾಯಿಸುತ್ತಾರೆ. ಕಾನೂನುಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳುತ್ತಾರೆ. ತಮ್ಮ ದೇಶದ ಜನರನ್ನು ಪ್ರಭಾವದಿಂದಲೋ ಇಲ್ಲವೇ ಬೆದರಿಸಿಯೋ ತಮ್ಮ ಕೆಲಸಗಳಿಗೆ ಸಹಕಾರ ನೀಡುವಂತೆ ಮತ್ತು ಪ್ರತಿಭಟಿಸದಂತೆ ನೋಡಿಕೊಳ್ಳುತ್ತಾರೆ. ಅವರು ತಮ್ಮ ಆಸೆಗಳನ್ನು ಸಾಕಾರಗೊಳಿಸಿಕೊಳ್ಳುವುದರಲ್ಲಿ ಯಶಸ್ಸು ಕಾಣುತ್ತಾರೋ ಇಲ್ಲವೋ ಆದರೆ ಅವರ ಅಂತ್ಯ ಮಾತ್ರ ದಾರುಣವಾಗಿರುತ್ತದೆ.


ಕುದುರೆಯ ಬೆನ್ನೇರಿ, ಸುಮಾರು ಮೂವತ್ತು ಸಾವಿರ ಕಿ.ಮೀ. ದೂರವನ್ನು ತನ್ನ ಸೈನ್ಯದೊಂದಿಗೆ ಕ್ರಮಿಸಿ, ಒಂದರ ನಂತರ ಇನ್ನೊಂದರಂತೆ ಯುದ್ಧಗಳನ್ನು ಅಲೆಕ್ಸಾಂಡರ್ ಗೆಲ್ಲಲ್ಲು ಸಾಧ್ಯವಾಗಿದ್ದು ಅವನ ಮೇಲೆ ವಿಪರೀತ ಅಭಿಮಾನ ಹೊಂದಿದ ಸೈನ್ಯದಿಂದ. ಆದರೆ ಯುದ್ಧ ಬಿಟ್ಟು ಬೇರೇನೂ ಮಾಡಲೊಲ್ಲದ ಅಲೆಕ್ಸಾಂಡರ್ ಕೊನೆಯುಸಿರೆಳೆದಾಗ ಅವನ ಹೆಣ ಅವನ ತಾಯ್ನಾಡು ತಲುಪಲಿಲ್ಲ. ಆಮೇಲೆ ಎಷ್ಟೋ ವರುಶಗಳವರೆಗೆ ಅವನ ದಂಡನಾಯಕರು ಅಲೆಕ್ಸಾಂಡರ್ ನ ಕಿರೀಟವನ್ನು ನ್ಯಾಯಸ್ಥಾನದಲ್ಲಿ ಇಟ್ಟು ತಮ್ಮ ಅಧಿಕಾರ ಮುಂದುವರೆಸಿದರು.


ರಣರಂಗದಲ್ಲಿ ಚಾಣಕ್ಷತೆಯಿಂದ, ಎದುರಾಳಿಗಳಲ್ಲಿ ಗೊಂದಲವೆಬ್ಬಿಸುತ್ತ ಶತ್ರು ಸೈನ್ಯವನ್ನು ಧೂಳಿಪಠ ಮಾಡುತ್ತ ಹಲವಾರು ಯುದ್ಧಗಳನ್ನು ಗೆದ್ದ ನೆಪೋಲಿಯನ್ ಮಾನವ ಜಗತ್ತು ಕಂಡ ಯುದ್ಧ ತಂತ್ರಗಾರಿಕೆಯ ನಿಪುಣ. ಆದರೆ ಅವನ ಅಂತ್ಯವೂ ಹಾಗೆ ಇತ್ತು. ಮಾನವ ಸಂಪರ್ಕ ಇಲ್ಲದೆ ಒಂದು ದ್ವೀಪದಲ್ಲಿ ಬಂದಿಯಾಗಿ ಕೊನೆ ಉಸಿರೆಳೆದ ಆ ನಿಪುಣ.


ಜರ್ಮನಿ ಜನರನ್ನು ತನ್ನ ಮೋಡಿಗೆ ಸಿಲುಕಿಸಿ ಅಧಿಕಾರ ಪಡೆದುಕೊಂಡು, ಎಂತಹ ಯುದ್ಧಗಳಿಗಾದರೂ ಸೈ ಎನ್ನುವಂತಹ ಬಲಿಷ್ಠ ಸೇನೆಯನ್ನು ಮುಂದಿಟ್ಟುಕೊಂಡು ಯುರೋಪ್ ನ ಎಲ್ಲ ರಾಷ್ತ್ರಗಳಿಗೂ ಸಿಂಹ ಸ್ವಪ್ನ ಎನಿಸಿದ ಹಿಟ್ಲರ್, ಸೋತು ಹೋದಾಗ ತಾನೇ ಗುಂಡಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡ.


ಆದರೆ ಯುದ್ಧ ಘೋಷಣೆ ಮಾಡುವ, ಉತ್ಸಾಹದಿಂದ ರಣರಂಗಕ್ಕೆ ಇಳಿಯುವ ವೀರರು ಇಂದಿಗೂ ಇದ್ದಾರೆ. ರಷ್ಯಾ ಮತ್ತು ಚೀನಾ ದೇಶಗಳು ಅತ್ಯಾಧುನಿಕ ಎನಿಸುವ ತಂತ್ರಜ್ಞಾನ ಹೊಂದಿದ ಕ್ಷಿಪಣಿಗಳನ್ನು ಹೊಂದಿದ್ದಾರೆ. ಯಾವುದೇ ಜನ ಸಮುದಾಯವನ್ನು ನಾಶ ಪಡಿಸಬಲ್ಲ ಪರಮಾಣು ಬಾಂಬ್ ಗಳನ್ನೂ ಹೊಂದಿದ್ದಾರೆ. ಎಲ್ಲಕ್ಕೂ ಮಿಗಿಲೆನ್ನುವಂತೆ ಎಂತಹ ಎದುರಾಳಿಗಳನ್ನು ಬೇಕಾದರೂ ನಾಶ ಮಾಡುವ ಉತ್ಸಾಹದ ಮಾತುಗಳನ್ನು ಮತ್ತು ಯುದ್ಧ ಪ್ರಚೋದಿಸುವ ಕಾರ್ಯಗಳನ್ನು ಮಾಡುತ್ತಲೇ ಇರುತ್ತಾರೆ. ರಷ್ಯಾ ದೇಶದ ಪುಟಿನ್ ಮತ್ತು ಚೀನಾದ ಕ್ಸಿ ಜಿಂಪಿಂಗ್  ತಮ್ಮ ದೇಶದಲ್ಲಿ ಸರ್ವಾಧಿಕಾರಿಗಳು. ಆದರೆ ಅವರಿಗೆ ಅಷ್ಟಕ್ಕೇ ತೃಪ್ತಿಯಿಲ್ಲ. ಮೊದಲಿಗೆ ನೆರೆ ದೇಶಗಳನ್ನು, ನಂತರ ಜಗತ್ತನ್ನೇ ಗೆಲ್ಲುವ ಮಹದಾಸೆ ಅವರದು.


"ಧಾಳಿಕೋರನಿಗೆ ಯಾವ ಧರ್ಮ" ಎಂದ ಅಲ್ಲಮಪ್ರಭುಗಳು "ಸಾಸಿವೆ ಸುಖಕ್ಕೆ ಸಾಗರದಷ್ಟು ದುಃಖ ನೋಡಾ" ಎಂದೂ ಕೂಡ ಹೇಳಿದ್ದಾರೆ. ಯಾರೋ ಒಬ್ಬ ಸರ್ವಾಧಿಕಾರಿ ಗೆದ್ದ ದೊಡ್ಡಸ್ತಿಕೆ ತೋರಲು ಸಾವಿರಾರು ಜನ ಪ್ರಾಣ ಕಳೆದುಕೊಳ್ಳಬೇಕು. ಲಕ್ಷಾಂತರ ಜನ ಮನೆ-ಆಸ್ತಿ ಕಳೆದುಕೊಂಡು ಊರು ಬಿಟ್ಟು ಸುರಕ್ಷಿತ ಜಾಗಕ್ಕೆ ತಲುಪಬೇಕು. ಯುದ್ಧ ತರುವ ಸಾವು-ನೋವು ಅಪಾರ. ಆದರೆ ಮನುಷ್ಯನ ಹುಚ್ಚು ಮನಸ್ಸಿನ ಹತ್ತು ಮುಖಗಳಲ್ಲಿ ಯುದ್ಧದ ಅತಿರೇಕವೂ ಒಂದು.


ಮನುಷ್ಯ ನಾಗರಿಕತೆಯೆಡೆಗೆ ಹೆಜ್ಜೆ ಇಟ್ಟರೆ, ಅವನನ್ನು ಹಿಂದಕ್ಕೆ ಎಳೆದು ತರದೇ ಬಿಡುವುದಿಲ್ಲ ಈ ಸರ್ವಾಧಿಕಾರಿಗಳು. ಅವರು ಕೂಡ ಸಮಾಜದ ಪ್ರತೀಕ ಅಲ್ಲವೇ.

Sunday, February 13, 2022

ಕಥೆ: ರಾಜಧರ್ಮ

(ವಿಜಯನಗರವನ್ನಾಳಿದ ಅರಸು ಶ್ರೀಕೃಷ್ಣದೇವರಾಯನ ಸಾವು ಮತ್ತು ನಂತರದ ಅಧಿಕಾರ ಹಸ್ತಾಂತರದ ಬಗ್ಗೆ ಇತಿಹಾಸದಲ್ಲಿ ಸಮರ್ಪಕವಾದ ವಿವರಣೆಗಳಿಲ್ಲ. ಆ ಕಾಲಘಟ್ಟದಲ್ಲಿ ನಡೆದಿರಬಹುದಾದ ಸಂಗತಿಗಳ ಬಗ್ಗೆ ಒಂದು ಕಾಲ್ಪನಿಕ ಕಥೆ)


ಅಧ್ಯಾಯ-೧; ವಿರೂಪಾಕ್ಷ ಬೀದಿಯ ವರ್ತಕರು ತಮ್ಮಲ್ಲೇ ಮಾತನಾಡಿಕೊಳ್ಳುವುದು


ಮೊದಲನೆಯ ವರ್ತಕ: ತಲೆ ತಲಾಂತರಗಳಿಂದ ಇಲ್ಲಿನ ಜನರು ವಿರೂಪಾಕ್ಷನಿಗೆ ನಡೆದು ಕೊಂಡರೆ, ನಮ್ಮ ರಾಯ ರಾಜ್ಯದ ಬೊಕ್ಕಸ ಹಣವನ್ನೆಲ್ಲ ತಿರುಪತಿಯಲ್ಲಿ ಸುರಿದು ಬರುತ್ತಾನೆ. ನೀವೇ ನೋಡಿತ್ತಿದ್ದೀರಲ್ಲ. ವಿರೂಪಾಕ್ಷನ ಸನ್ನಿಧಿಗೆ ಕೇವಲ ಎರಡು ಸಲ ದೇಣಿಗೆ ನೀಡಿದರೆ, ತಿರುಪತಿ ವೆಂಕಟೇಶನಿಗೆ ಏಳು ಸಲ ಧನ-ಕನಕ ಅರ್ಪಿಸಿದ್ದಾನೆ.


ಎರಡನೆಯ ವರ್ತಕ: ನಮ್ಮ ರಾಯ ತಿರುಪತಿಗೆ ಹೋಗುವುದು ವರುಷಕ್ಕೊಮ್ಮೆ. ಆದರೆ ಇಲ್ಲಿ ಹಂಪೆಯಲ್ಲಿ ವಿಠಲ ದೇವಸ್ಥಾನ ಕಟ್ಟಿದ ನಂತರ, ಅಲ್ಲಿ ಕೊಡುವ ದಾನಗಳಿಗೆ, ಆ ದೇವಸ್ಥಾನದ ವೈಭವಕ್ಕೆ, ಅಲ್ಲಿನ ಪೇಟೆಗೆ ಕೂಡ ಮೆರುಗು ಬಂದು ನಮ್ಮ ಪೇಟೆ ವ್ಯಾಪಾರ ಕಡಿಮೆ ಆಗಿದೆ.


ಮೂರನೆಯ ವರ್ತಕ: ಇದು ಬರಿ ಶೈವ-ವೈಷ್ಣವ ಸಮಸ್ಯೆ ಅಷ್ಟೇ ಅಲ್ಲ. ರಾಜನ ಆಸ್ಥಾನದಲ್ಲಿ ತೆಲುಗು ಭಾಷಿಕರೇ ತುಂಬಿದ್ದಾರೆ. ಸ್ವತಃ ಪ್ರಭುಗಳೇ ತೆಲುಗಿನಲ್ಲಿ ಕಾವ್ಯ ರಚಿಸುತ್ತಾರೆ. ಸುಮ್ಮನ ಅವರಿಗೆ 'ಆಂಧ್ರ ಭೋಜ' ಎಂದು ಕರೆಯುವರೇ? ಸೈನ್ಯದಲ್ಲಿ ಕೂಡ, ಮಂತ್ರಿ ತಿಮ್ಮರಸರು ತೆಲುಗು ದಳವಾಯಿಗಳಿಗೆ ಹೆಚ್ಚಿನ ಅಧಿಕಾರ ಕೊಟ್ಟಿದ್ದಾರೆ.


ಮೊದಲನೆಯ ವರ್ತಕ: ಸಂಗಮ ವಂಶದ ರಾಜರುಗಳೆಲ್ಲ ವಿರೂಪಾಕ್ಷನ ಆಶೀರ್ವಾದ ಪಡೆದು, ಅವನ ಕೃಪೆಯಿಂದ ರಾಜ್ಯ ಆಳಿದವರು ಆದರೆ ಈಗಿನ ತುಳುವ ವಂಶದ ಅರಸರಿಗೆ, ಅದರಲ್ಲೂ ನಮ್ಮ ಈಗಿನ ದೊರೆಗೆ ಮಾತ್ರ ವಿಷ್ಣುವಿನ ಮೇಲೆ ಪರಮ ಪ್ರೀತಿ.


ಎರಡನೆಯ ವರ್ತಕ: ಪ್ರಭುಗಳು ಹೊರಗಿನವರಿಗೆ ಹೆಚ್ಚಿನ ಅವಕಾಶ ನೀಡುವುದು ಮುಂದುವರೆದರೆ ಮುಂದೆ ನಮ್ಮ ಗತಿ?


ಮೂರನೆಯ ವರ್ತಕ: ಸಮಯಕ್ಕೆ ತಕ್ಕಂತೆ ಬದಲಾವಣೆಗಳು ಆಗುತ್ತಲೇ ಇರುತ್ತವೆ. ಆದರೆ ಅಲ್ಲಿಯವರೆಗೆ ಸುಮ್ಮನೆ ಇರದೇ ಆಕ್ಷೇಪಿಸಿದರೆ, ರಾಜಭ್ರಷ್ಟ ಎನಿಸಿಕೊಂಡು ತಲೆದಂಡ ತೆರಬೇಕಾದೀತು.

---


ಅಧ್ಯಾಯ-೨; ಮಗನನ್ನು ಕಳೆದುಕೊಂಡ ಶೋಕದಲ್ಲಿ ಶ್ರೀಕೃಷ್ಣದೇವರಾಯ ತನ್ನ ಅರಮನೆಯಲ್ಲಿ ಶೋಕಿಸುತ್ತಿದ್ದಾನೆ.


ಸರಿ ರಾತ್ರಿ ಹೊತ್ತಾಗಿ, ಎಷ್ಟು ಉರುಳಾಡಿದರೂ ಕಣ್ಣಿಗೆ ನಿದ್ದೆ ಮಾತ್ರ ಬರದು. ಹಾಸಿಗೆಯಿಂದ ಎದ್ದು ತನ್ನ ಅರಮನೆಯಲ್ಲೇ ಶ್ರೀಕೃಷ್ಣದೇವರಾಯ ಶತಪಥ ತಿರುಗಲು ತೊಡಗುತ್ತಾನೆ. ಅವನಿಗೆ ತಾನು ಎಡವಿದ್ದೆಲ್ಲಿ ಎಂದು ಅರಿವಾಗುತ್ತಿಲ್ಲ. ರಣರಂಗದಲ್ಲಿ ಸೋಲನ್ನೇ ಕಾಣದ ಅರಸನ ಮಗನಿಗೆ, ಅವನ ಅರಮನೆಯಲ್ಲೇ ವಿಷ ಪ್ರಾಶನವಾಗುವುದು ಎಂದರೇನು? 

ರಾಜಧಾನಿಗೆ ಯಾರು ಹೊಸಬರು ಬಂದರೂ, ತಳವಾರ ತನಗೆ ತಿಳಿಸುತ್ತಲೇ ಇದ್ದ. ಇದು ಸುಲ್ತಾನರು ಕಳಿಸಿದ ಬೇಹುಗಾರರ ಮಸಲತ್ತಲ್ಲ. ಏಳು ಸುತ್ತಿನ ಕಾವಲು ದಾಟಿದ ಮೇಲೆ ಮಾತ್ರ ಅರಸನ ಭೇಟಿ ಹಾಗೆ ಅರಮನೆಗೆ ಕಾಲಿಡಲು ಸಾಧ್ಯ. ಇದು ಹೊರಗಿನವರ ಕೆಲಸ ಅಲ್ಲವೇ ಅಲ್ಲ. ಛೆ, ಅಪ್ಪಾಜಿ ತಿಮ್ಮರಸು ಅವರ ಮೇಲೆ ಅನುಮಾನ ಪಟ್ಟು ಅವರನ್ನು ಶಿಕ್ಷಿಸಿದ್ದು ಎಂಥ ತಪ್ಪಾಗಿ ಹೋಯಿತು. ಈ ಕೆಲಸ ಮತ್ತಿನ್ನಾರದ್ದು? ಮಂತ್ರಿ, ದಳವಾಯಿಗಳ ಮನೆಗಳಲ್ಲಿ ಏನು ಮಾತಾದರೂ, ಯಾರು ಬಂದು ಹೋದರೂ ಅದು ತನಗೆ ಅರಿವಿಗೆ ಬರದೇ ಇರಲು ಸಾಧ್ಯವಿದ್ದಿಲ್ಲ. ರಾಜನಾದವನಿಗೆ ಅಂತಹ ಮುನ್ನೆಚ್ಚರಿಕೆ ಇರುವುದಕ್ಕೆ ಅಲ್ಲವೇ ತಾನು  ನಂಬಿಗಸ್ಥ ಗುಪ್ತಚರರ ಬಲವಾದ ವ್ಯವಸ್ಥೆ ಕಟ್ಟಿಕೊಂಡಿದ್ದು? 

ಹಾಗಾದರೆ, ಇದು ಕುಟುಂಬದವರ ಕೆಲಸವೇ? ಮಲ ತಮ್ಮ ಅಚ್ಯುತರಾಯನಿಗೆ ಸಿಂಹಾಸನದ ಮೇಲೆ ಕಣ್ಣಿರುವುದು ತಮಗೆ ತಿಳಿಯದ ವಿಷಯವೇನಲ್ಲ. ಅದಕ್ಕೆ ಅಲ್ಲವೇ ಅವನನ್ನು ದೂರದ ಚಂದ್ರಗಿರಿಗೆ ಅಟ್ಟಿದ್ದು? ಅವನು ಅಲ್ಲಿಯೇ ಕುಳಿತು ಮಸಲತ್ತು ಮಾಡುವುದಾದರೆ, ಅವನಿಗೆ ರಾಜಧಾನಿ ಹಂಪೆಯಲ್ಲಿ ಯಾರದೋ ಸಹಕಾರ ಇರಬೇಕಲ್ಲವೇ? ಯಾರಿಗೆ ಅಂತಹ ಆಸೆ ಉಂಟು? ಶ್ರೀಕೃಷ್ಣದೇವರಾಯನ ಮನದಲ್ಲಿ ಕ್ಷಣ ಕಾಲ ಅದು ಅಳಿಯ ರಾಮರಾಯನ ಕೆಲಸವಿರಬಹುದೇ ಅನ್ನಿಸಿತು. ತಕ್ಷಣವೇ ತಲೆ ಕೊಡವಿ, ಅವನು ಯುದ್ಧ ಭೂಮಿಯಲ್ಲಿ ಭುಜಕ್ಕೆ ಭುಜ ಕೊಟ್ಟು ಹೋರಾಡಿ , ನಂಬಿಕೆಗೆ ಅರ್ಹ ಅನ್ನಿಸಿದ ಮೇಲೆ ಅಲ್ಲವೇ ಅವನಿಗೆ ತನ್ನ ಮಗಳನ್ನು ಧಾರೆ ಎರೆದು ಕೊಟ್ಟಿದ್ದು? ಈ ಕೆಲಸ ಅವನದ್ದಿರಿಲಿಕ್ಕಿಲ್ಲ ಎಂದು ಪ್ರಭುಗಳಿಗೆ ಅನ್ನಿಸಿತು. ಆದರೂ ತಮಗೆ ಮೊದಲಿನ ಹಾಗೆ ಸ್ಪಷ್ಟ, ದಿಟ್ಟ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಕಳೆದು ಹೋಗಿದೆ ಎಂದು ಶ್ರೀಕೃಷ್ಣದೇವರಾಯನಿಗೆ ಸ್ವಯಂ ಅನ್ನಿಸತೊಡಗಿತ್ತು. 

ತಿರುಪತಿ ವೆಂಕಟೇಶನಿಗೆ ಹರಕೆ ಹೊತ್ತ ಮೇಲೆಯೇ ಹುಟ್ಟಿದ ತನ್ನ ಮಗನಿಗೆ, ಆ ವೆಂಕಟೇಶ ಯಾಕೆ ಅಕಾಲ ಮರಣ ಕೊಟ್ಟನೆಂದು ದೊರೆಗಳಿಗೆ ತಿಳಿಯದಾಯಿತು. ತಾನು ತಿರುಪತಿಗೆ ಕೊಟ್ಟ ಧನ-ಕನಕಗಳೇನು ಕಡಿಮೆಯೇ? ಆದರೂ ವೆಂಕಟೇಶನಿಗೆ ತಮ್ಮ ವಂಶ ರಾಜ್ಯಭಾರ ಮುಂದುವರೆಸುವುದು ಯಾಕೆ ಇಷ್ಟವಾಗಲಿಲ್ಲವೋ ಎಂದು ಪ್ರಭುಗಳಿಗೆ ತಿಳಿಯಲಿಲ್ಲ. ಇಷ್ಟಕ್ಕೂ ತಮ್ಮ ಆರೋಗ್ಯವೇಕೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ? ತಮ್ಮ ಮೈಯಲ್ಲಿ ಅಲ್ಪ ಪ್ರಮಾಣದ ವಿಷವೇನಾದರೂ ಸೇರಿಕೊಂಡಿದೆಯೇ? ಇನ್ನು ರಣರಂಗದಲ್ಲಿ ಮತ್ತೆ ಖಡ್ಗ ಬೀಸುತ್ತ ಕಾದಲು  ಸಾಧ್ಯವೇ? ಕುಮಾರನ ಸಾವಿನ ನಂತರ, ತಮಗೂ ಬದುಕುವ ಆಸೆ ಕುಂದುತ್ತಾ ಹೋಗುತ್ತಿರುವುದೇಕೆ? ಶ್ರೀಕೃಷ್ಣದೇವರಾಯನ ಅಂತರಂಗ ಕಾದ ಬಾಣಲಿಯಾಗಿತ್ತು. ದೇಹ ಮಾತ್ರ ಬಳಲಿ ಬೆಂಡಾಗಿ ಹೋಗಿತ್ತು. 

----


ಅಧ್ಯಾಯ-೩; ದಳವಾಯಿಗಳು ತಮ್ಮಲ್ಲೇ ಮಾತನಾಡಿಕೊಳ್ಳುತ್ತಿರುವುದು

ಒಬ್ಬ ದಳವಾಯಿ: ನಮ್ಮ ಅರಸರ ಮುಖ ನೋಡಿ ತಿಂಗಳುಗಳೇ ಆದವು. ಅರಮನೆಯಲ್ಲಿ ಏನು ನಡೆಯುತ್ತಿರಬಹುದು? ಇಷ್ಟಕ್ಕೂ ನಮ್ಮ ರಾಜಕುಮಾರನನ್ನು ಸಾಯಿಸಿದವರು ಯಾರು? ಏಕಿರಬಹುದು?


ಇನ್ನೊಬ್ಬ ದಳವಾಯಿ: ರಾಜ ಮನೆತನದ ವಿಷಯಗಳು ಅಷ್ಟು ಸುಲಭವಲ್ಲ. ಸಂಗಮ ವಂಶದವರನ್ನು ಕೊನೆಗಾಣಿಸಿಯೇ ಅಲ್ಲವೇ ಸಾಳುವ ವಂಶದವರು ಅಧಿಕಾರಕ್ಕೆ ಬಂದಿದ್ದು? ಹಾಗೆಯೆ ಸಾಳುವ ವಂಶದ ರಾಜಕುಮಾರನನ್ನು ಸಾಯಿಸಿಯೇ ಅಲ್ಲವೇ ಶ್ರೀಕೃಷ್ಣದೇವರಾಯನ ಅಣ್ಣ ಪಟ್ಟ ಏರಿದ್ದು ಮತ್ತು ತುಳುವ ವಂಶದ ರಾಜ್ಯಭಾರ ಆರಂಭವಾಗಿದ್ದು? ಅಧಿಕಾರದ ಆಸೆ ಕ್ಷತ್ರಿಯರಿಗೆ ಸಹಜವಾದದ್ದು. ಯುದ್ಧ ಗೆದ್ದೋ, ಇಲ್ಲವೇ ಮೋಸದಿಂದ ಮುಗಿಸಿಯೋ, ಅಧಿಕಾರ ಹಿಡಿದುಕೊಳ್ಳುತ್ತಾರೆ.


ಮತ್ತೊಬ್ಬ ದಳವಾಯಿ: ಈಗಲೂ ಹಾಗೆ ಆಗಬಹುದು ಎನ್ನಿಸುತ್ತಿದೆ. ಕಾದು ನೋಡಬೇಕು ಅಷ್ಟೇ.

---


ಅಧ್ಯಾಯ-೪; ಶ್ರೀಕೃಷ್ಣದೇವರಾಯರ ಸಾವಿನ ನಂತರ ಅವರ ಮಲ ತಮ್ಮ ಅಚ್ಚುತರಾಯರು ಪಟ್ಟವನ್ನೇರಿದ್ದಾರೆ. ಮತ್ತು ಮಂತ್ರಿ ಪದವಿ ಶ್ರೀಕೃಷ್ಣದೇವರಾಯರ ಅಳಿಯ ರಾಮರಾಯರವರದ್ದಾಗಿದೆ.

ರಾಮರಾಯ ತನ್ನ ಅಂತರಂಗದಲ್ಲೇ ಮೆಲುಕು ಹಾಕುತ್ತಿದ್ದ. ಯಾವುದೇ ಸಾಹಸಿ ಬರಿ ಧನ-ಐಶ್ವರ್ಯಗಳಿಗೆ ಮರುಳಾಗಿ ಕಾದಾಟಕ್ಕೆ ಇಳಿಯುವುದಿಲ್ಲ. ಅವನಿಗೆ ಅಧಿಕಾರದ ಆಸೆಯೇ ಮೂಲವಾಗಿರುತ್ತದೆ. ತನ್ನ ಮಾವ ಮತ್ತು ಅವನ ಮಂತ್ರಿ ತಿಮ್ಮರಸು ಇವರುಗಳೇ ಅಧಿಕಾರ ಮುಂದುವರೆಸಿದ್ದರೆ, ತನಗೆ ಮಂತ್ರಿಯಾಗುವ ಅವಕಾಶ ಎಲ್ಲಿರುತ್ತಿತ್ತು? ಇಷ್ಟಕ್ಕೂ ಬರೀ ಮಂತ್ರಿ ಪದವಿ ತನಗೆ ಸಮಾಧಾನ ತರುವ ವಿಷಯ ಅಲ್ಲ. ಆದರೆ ರಾಜ್ಯದ ಎಲ್ಲದ ಅಧಿಕಾರಗಳ ಮೇಲೆ ಹಿಡಿತ ಸಾಧಿಸಿದ ಮೇಲೆ ಅಲ್ಲವೇ ತನ್ನನ್ನು ರಾಜ ಎಂದು ಜನತೆ ಒಪ್ಪಿಕೊಳ್ಳುವುದು? ಈಗಿರುವ ಮಂತ್ರಿ  ಪದವಿಯ ಸಹಾಯದಿಂದ ಉಳಿದ ರಾಜ್ಯಭಾರದ ಅಧಿಕಾರಗಳನ್ನು ತನ್ನ ಹತೋಟಿಗೆ ತೆಗೆದುಕೊಳ್ಳುವುದಕ್ಕೆ ಎಷ್ಟು ಸಮಯ ಬೇಕಾಗಬಹುದು? ಅಲ್ಲಿಯವರೆಗೆ ಮಾತ್ರ ಅಚ್ಚುತರಾಯನಿಗೆ ತನ್ನ ಸಹಕಾರ ಸಾಧ್ಯ. ಅವನ ನಂತರ ವಿಜಯನಗರ ಸಾಮ್ರಾಜ್ಯದ ಸಂಪೂರ್ಣ ಅಧಿಕಾರ ತನ್ನದೇ. 

ತಾನು ಸಾಹಸಿಯಾದದ್ದಕ್ಕೆ ಅಲ್ಲವೇ ಶ್ರೀಕೃಷ್ಣದೇವರಾಯ ತನ್ನನ್ನು ಅಳಿಯನಾಗಿ ಒಪ್ಪಿಕೊಂಡಿದ್ದು. ಅವನ ಮಗಳನ್ನು ಮದುವೆಯಾದ ತಾನು ರಾಜ ಕುಟುಂಬದ ಸದಸ್ಯನೇ ಆಗಲಿಲ್ಲವೇ? ಸಂಗಮ, ಸಾಳುವ ವಂಶಗಳು ಕೊನೆಯಾದ ಹಾಗೆ ಈ ತುಳುವ ವಂಶದ ಅಧಿಕಾರ ಕೂಡ ಕೊನೆಯಾಗಬಾರದೇಕೆ? ಇಷ್ಟಕ್ಕೂ ಅಧಿಕಾರ ಯಾರ ಸ್ವತ್ತೂ ಅಲ್ಲ. ಬಲದಿಂದಲೋ, ಬುದ್ಧಿಯಿಂದಲೋ ಗೆದ್ದವನಿಗೆ ಸಲ್ಲುತ್ತದೆ ಅಧಿಕಾರ. ಹಿಂದೆ ಶ್ರೀಕೃಷ್ಣದೇವರಾಯನನ್ನು ಸಾಯಿಸುವುದಕ್ಕೆ ಅವರ ಅಣ್ಣ ಆಜ್ಞೆ ಮಾಡಿರಲಿಲ್ಲವೇ? ತಿಮ್ಮರಸು ಯುಕ್ತಿಯಿಂದಲೇ ಅಲ್ಲವೇ ಶ್ರೀಕೃಷ್ಣದೇವರಾಯ ಪಟ್ಟವನ್ನೇರಿದ್ದು? ಹಾಗೆಯೆ ಇನ್ನೊಬ್ಬರ ಯುಕ್ತಿಗೆ ಅವರಿಬ್ಬರೂ ಪ್ರಾಣ ತೆತ್ತರು. 

ಅರಸನಾದವನಿಗೆ ತನ್ನ ಜೀವದ ಮತ್ತು ಅವನ ಉತ್ತರಾಧಿಕಾರಿಗಳ ಜೀವದ ಅಪಾಯ ಎಂದೆಂದಿಗೂ ಇರುತ್ತದೆ. ಅಪಾಯವನ್ನು ಉಪೇಕ್ಷಿಸಿದಾಗ ಆಗುವ ಹಾನಿ ಅಪಾರ. ಅಂತಹ ಮೈಮರೆತ ಸನ್ನಿವೇಶದಲ್ಲೇ ಅಲ್ಲವೇ  ಶ್ರೀಕೃಷ್ಣದೇವರಾಯ ತನ್ನ ಮಗನನ್ನು ಕಳೆದುಕೊಂಡಿದ್ದು. ಅವರ ಅಣ್ಣ ಸಾಳುವ ವಂಶವನ್ನು ಕೊನೆಗೊಳಿಸಿದ್ದು ಹೀಗೆಯೇ. ಹಾಗಿದ್ದಲ್ಲಿ ಇತಿಹಾಸ ಶ್ರೀಕೃಷ್ಣದೇವರಾಯನ ತಪ್ಪುಗಳನ್ನೇಕೆ ಮನ್ನಿಸಬೇಕು? ರಾಜನಾಗಿ ಅಧಿಕಾರ ಅನುಭವಿಸಿದವನಿಗೆ ಅದು ತಂದೊಡ್ಡುವ ಅಪಾಯಗಳಿಗೆ ತಲೆಯೊಡ್ಡಬೇಕಾದದ್ದು ಕೂಡ ರಾಜಧರ್ಮವೇ. ಅವನು ಉಪಾಯವಾಗಿ ಅಧಿಕಾರಕ್ಕೆ ಬಂದಿದ್ದು ರಾಜಧರ್ಮವಾದರೆ, ಅವನ ಅಂತ್ಯಕ್ಕೆ ಬೇರೆಯವರು ಉಪಾಯ ಮಾಡುವುದು ಕೂಡ ರಾಜಧರ್ಮವೇ.


[ಶ್ರೀಕೃಷ್ಣದೇವರಾಯನ ಸಾವಿನ ಪ್ರಯೋಜನವಾಗಿದ್ದು, ಅವನ ನಂತರ ಅಧಿಕಾರಕ್ಕೆ ಬಂದ ಅವನ ಮಲ ತಮ್ಮ ಅಚ್ಚುತರಾಯನಿಗೆ ಮತ್ತು ಹೆಚ್ಚಿನ ಅಧಿಕಾರ ದೊರಕಿಸಿಕೊಂಡ ರಾಮರಾಯನಿಗೆ. ಅಚ್ಚುತರಾಯನ ಸಾವಿನ ನಂತರ ಅವನ ಮಗನನ್ನು ಹೆಸರಿಗೆ ಮಾತ್ರ ರಾಜನನ್ನಾಗಿ ಮಾಡಿ, ಸಂಪೂರ್ಣ ಅಧಿಕಾರವನ್ನು ತನ್ನ ಕೈಗತ್ತಿಕೊಂಡ ರಾಮರಾಯ ಶ್ರೀಕೃಷ್ಣದೇವರಾಯನ ಸಾವಿನಿಂದ ಹೆಚ್ಚಿನ ಪ್ರಮಾಣದ ಪ್ರಯೋಜನ ಪಡೆಯುವುದರಿಂದ ಅವನ ಮೇಲೆ ಸಂಶಯ ಪಟ್ಟು ಈ ಕಥೆ ಹೆಣೆದಿರಲಾಗಿರುತ್ತದೆ. ಇದು ಒಂದು ಕಲ್ಪನೆ ಮಾತ್ರ. ಇದಕ್ಕೆ ಯಾವ ಆಧಾರಗಳು ಇರುವುದಿಲ್ಲ.]

Saturday, February 5, 2022

ತಾಯಿ ಎನ್ನುವ ಸತ್ಯ, ತಂದೆ ಎನ್ನುವ ನಂಬಿಕೆ, ಮನುಷ್ಯತ್ವ ಎನ್ನುವ ವಿಶಾಲ ಪ್ರೇಮ

ಇತ್ತೀಚಿಗೆ ಬಿಡುಗಡೆಯಾದ 'ರತ್ನನ ಪ್ರಪಂಚ' ಎನ್ನುವ ಕನ್ನಡ ಚಿತ್ರ ನೋಡಿದೆ. ಅದರಲ್ಲಿ ಆ ಚಿತ್ರದ ನಾಯಕನಿಗೆ ತಾನು ದತ್ತು ಪುತ್ರ ಎನ್ನುವ ವಿಷಯ ಗೊತ್ತಾಗಿ, ತನ್ನ ಹಡೆದವರನ್ನು ಮತ್ತು ಒಡಹುಟ್ಟಿದವರನ್ನು ಗುರುತಿಸುವ ಪ್ರಯತ್ನಕ್ಕೆ ಇಳಿಯುತ್ತಾನೆ. ಮೊದಲಿಗೆ ತನಗೆ ಅಕ್ಕ ಇರುವ ವಿಷಯ ಗೊತ್ತಾಗಿ ಅವಳನ್ನು ಹುಡುಕಿಕೊಂಡು ಹೋಗುತ್ತಾನೆ. ಅವಳು ಅವನನ್ನು ಗುರುತಿಸಿದರೂ ತೋರಗೊಡದೆ , ಕೊನೆಗೆ 'ಜೊತೆಗೆ ಆಡಲಿಲ್ಲ, ಬೆಳೆಯಲಿಲ್ಲ, ಕಷ್ಟಕ್ಕೆ ಆಗಲಿಲ್ಲ, ಸುಖಕ್ಕೆ ಆಗಲಿಲ್ಲ, ನೀನ್ಯಾವ ಸೀಮೆ ತಮ್ಮ?' ಎಂದು ದಬಾಯಿಸಿಯೇ ಬಿಡುತ್ತಾಳೆ. ಅವನ ತಮ್ಮನನ್ನು ಹುಡುಕಿಕೊಂಡು ಹೋದ ಮೇಲೆ ಅದೇ ತರಹದ ಅನುಭವ ಆಗುತ್ತದೆ. ಕೊನೆಗೆ ತನ್ನ ಹೆತ್ತ ತಾಯಿಯನ್ನು ಹುಡುಕುತ್ತಾನೆ. ಅಷ್ಟರಲ್ಲಿ ತನ್ನ ಸಾಕು ತಾಯಿ ಸತ್ತ ಸುದ್ದಿ ಬರುತ್ತದೆ. ಆಗ ಅವನಿಗೆ ಸಾಕು ತಾಯಿಯ ಪ್ರೇಮದ ನೆನಪಾಗಿ, ಹೆತ್ತ ತಾಯಿಗೆ ವಿಷಯ ತಿಳಿಸದೇ ಸಾಕು ತಾಯಿಯ ಅಂತ್ಯಸಂಸ್ಕಾರಕ್ಕೆ ಹೊರಡುತ್ತಾನೆ.

 

ವಿಚಾರ ಮಾಡಿ ನೋಡಿ. ಹೆತ್ತ ತಾಯಿಯ ಪ್ರೀತಿ ದೊಡ್ಡದೋ? ಸಾಕು ತಾಯಿಯ ಪ್ರೀತಿ ದೊಡ್ಡದೋ? ಕೃಷ್ಣನ ಹಡೆದ ತಾಯಿ ದೇವಕಿಯ ಪ್ರೀತಿ ದೊಡ್ಡದೋ ಅಥವಾ ಅವನನ್ನು ಬೆಳೆಸಿದ ತಾಯಿ ಯಶೋದೆಯ ಪ್ರೀತಿ ದೊಡ್ಡದೋ? ನೀವು ಅದೇ ಪ್ರಶ್ನೆ ನನಗೆ ಕೇಳಿದರೆ ನಾನು ಖಂಡಿತ ಯಶೋದೆಯ ಪ್ರೀತಿಯ ದೊಡ್ಡದು ಎನ್ನುವ ಉತ್ತರ ಕೊಡುತ್ತೇನೆ. ದೈಹಿಕ-ರಕ್ತ ಸಂಬಂಧಗಳನ್ನು ಮೀರಿ ತೋರಿಸುವ ಪ್ರೀತಿ ನಿಜವಾದ ಮನುಷ್ಯತ್ವವನ್ನು ಅನಾವರಣಗೊಳಿಸುತ್ತದೆ ಎನ್ನುವ ನಂಬಿಕೆ ನನ್ನದು.

 

ತಾಯಿ ಬಿಟ್ಟು ತಂದೆ ವಿಷಯಕ್ಕೆ ಬರೋಣ. ಎಲ್ಲ ತಾಯಂದಿರಿಗೂ ತಮ್ಮ ಮಕ್ಕಳನ್ನು ತಾವು ಹೊತ್ತು ಹೆತ್ತಿರುತ್ತಾದ್ದರಿಂದ ತಾವೇ ಅವರ ತಾಯಿ ಎನ್ನುವ ಸತ್ಯ ಅವರಿಗೆ ಗೊತ್ತಿರುತ್ತದೆ. ಆದರೆ ತಂದೆಗೆ ಅದು ನಂಬಿಕೆ ಮಾತ್ರ. ಮಗು ಹುಟ್ಟಿದಾಗ ಕಣ್ಣು ತಂದೆಯ ಹಾಗೆ, ಮೂಗು ಅಜ್ಜನ ಹಾಗೆ ಎಂದು ನಂಬಿಕೆ ಹುಟ್ಟಿಸುವ ಪ್ರಯತ್ನ ಆರಂಭ ಆಗುತ್ತದೆ. ಆಗ ಅವನ ಹೆಂಡತಿ ಮಗುವನ್ನು ಕೈಯಲ್ಲಿ ಕೊಟ್ಟು ನೀನೆ ಅದರ ತಂದೆ ಎಂದರೆ ಅದನ್ನು ಸಂತೋಷದಿಂದ ಒಪ್ಪಿಕೊಳ್ಳುತ್ತಾನೆ. ಅವನಿಗೆ ಅನುಮಾನ ಇದ್ದರೆ, ಇಂದಿನ ಆಧುನಿಕ ಕಾಲದ ವೈದ್ಯಕೀಯ ಪರೀಕ್ಷೆಗಳು ಕೂಡ ಸಂಪೂರ್ಣ ನಿಖರತೆಯಿಂದ ಯಾವುದನ್ನೂ ಸಾಬೀತು ಪಡಿಸಲಾರವು. ಇನ್ನು ಹಳೆಯ ಕಾಲದಲ್ಲಿ ಯಾವ ಪರೀಕ್ಷೆಗಳು ಇದ್ದವು? ಆದರೂ ಆಧಾರದ ಅವಶ್ಯಕತೆ ಇಲ್ಲದ, ಮಕ್ಕಳ ಮೇಲೆ ಮಮಕಾರ ತೋರುವ ತಂದೆಯ ಪ್ರೀತಿ ಯಾವ ತಾಯಿಗೂ ಕಮ್ಮಿ ಇಲ್ಲ ಎಂದೇ ಹೇಳಬಹುದು. 'ಪ್ರಪಂಚದಲ್ಲಿ ಕೆಟ್ಟ ತಂದೆ ಇರಬಹುದು ಆದರೆ ಕೆಟ್ಟ ತಾಯಿ ಇಲ್ಲ' ಎನ್ನುವ ನಾಣ್ಣುಡಿಯಿದೆ. ಆದರೆ ತಾಯಿ ಸಣ್ಣ ವಯಸ್ಸಿನಲ್ಲೇ ತೀರಿಕೊಂಡು, ಬರೀ ತಂದೆ ಮಾತ್ರ ಬೆಳೆಸಿದ ಹೆಣ್ಣು ಮಕ್ಕಳನ್ನು ಒಮ್ಮೆ ನೋಡಿಕೊಂಡು ಬನ್ನಿ. ಅವರು ಸಮಾಜಕ್ಕೆ ಮಾದರಿ ಎನ್ನುವ ಹಾಗಿರುತ್ತಾರೆ. ಈಗ ಹೇಳಿ, ತನ್ನದೇ ಮಗು ಎನ್ನುವ ಸತ್ಯ ಗೊತ್ತಿರುವ ತಾಯಿಯ ಪ್ರೀತಿ ದೊಡ್ಡದೋ? ಅಥವಾ ಬರೀ ನಂಬಿಕೆಯ ಮೇಲೆ ಪ್ರೀತಿ ತೋರಿಸುವ ತಂದೆಯ ಪ್ರೀತಿ ದೊಡ್ಡದೋ?

 

ಮನುಷ್ಯನ ಇತಿಹಾಸ ಎಷ್ಟು ಹಳೆಯದೋ, ಅನೈತಿಕ ಸಂಬಂಧಗಳು ಕೂಡ ಅಷ್ಟೇ ಹಳೆಯವು. ಅನೈತಿಕ ಸಂಬಂಧಗಳು ಎಷ್ಟೋ ಕುಟುಂಬಗಳ ವೈಷಮ್ಯಕ್ಕೆ, ಕೊಲೆಗಳಿಗೆ ಕಾರಣವಾಗಿವೆ. ಅದೇ ಕಾರಣಕ್ಕೆ ರಾಜ ಮಹಾರಾಜರು ತಮ್ಮ ಅಂತಃಪುರಕ್ಕೆ ನಪುಂಸಕರನ್ನು ಕಾವಲಿಗೆ ಇಡುತ್ತಿರಲಿಲ್ಲವೇ? ಅದೇ ಸಾಮಾನ್ಯ ಮನುಷ್ಯ ತನ್ನ ಹೆಂಡತಿಯನ್ನು ಕಾವಲು ಕಾಯುತ್ತ ಕೂಡಲು ಸಾಧ್ಯವೇ? ಇಷ್ಟಕ್ಕೂ ಹೆಣ್ಣು ಚಂಚಲೆ ಆದರೆ ಅವಳಿಗೆ ಕಾವಲು ಕಾಯುವ ಗಂಡಸನ್ನು ಮೂರ್ಖನನ್ನಾಗಿ ಮಾಡಲು ಎಷ್ಟು ಹೊತ್ತು ಬೇಕು? ಆದರೂ ಗಂಡ-ಹೆಂಡತಿ ಸಂಬಂಧಗಳು ನಂಬಿಕೆ ಮೇಲೆಯೇ ನಿಂತಿವೆ. ತಾಯಿಗೆ ಮಾತ್ರ ಸತ್ಯ ಗೊತ್ತಿದೆ. ಆದರೆ ಕೇವಲ ನಂಬಿಕೆಯ ಆಧಾರದ ಮೇಲೆಯೇ ಮಕ್ಕಳ ಜವಾಬ್ದಾರಿಯನ್ನು ತಂದೆ ಹೊರುತ್ತಾನೆ.

 

ತಾಯಿಗೆ ಸತ್ಯ ಮತ್ತು ತಂದೆಗೆ ನಂಬಿಕೆ ದೊಡ್ಡದಾದರೆ, ಮಕ್ಕಳಿಲ್ಲದ ದಂಪತಿಗಳು ತಮಗೆ ಹುಟ್ಟಿರದ ಮಗುವನ್ನು ಏಕೆ ದತ್ತು ತೆಗೆದುಕೊಳ್ಳುವುದಕ್ಕೆ ಮುಂದಾಗುತ್ತಾರೆ? ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳು ತಾವು ಸ್ವತಃ ಮದುವೆ ಆಗದಿದ್ದರೂ, ಬೇರೆಯವರ ಸಾವಿರಾರು ಮಕ್ಕಳನ್ನು ತಮ್ಮ ಮಕ್ಕಳ ಹಾಗೆ ಮಠದಲ್ಲಿಟ್ಟುಕೊಂಡು ಮುದ್ದೆ-ಬುದ್ಧಿ ಕೊಟ್ಟು ಬೆಳೆಸಲಿಲ್ಲವೇ? ಅವರಿಗಿದ್ದಿದ್ದು ರಕ್ತ ಸಂಬಂಧಗಳ ಹಂಗಲ್ಲ.

 

ತಾಯಿಗೆ ಸತ್ಯ, ತಂದೆಗೆ ನಂಬಿಕೆ ಊರುಗೋಲಾದರೆ, ತಾಯಿ-ತಂದೆ ಪ್ರೀತಿಯನ್ನು ಮೀರಿ ಸಮಾಜವನ್ನು ಸಲಹಿದ ನೂರಾರು ಸಾಧು-ಸಂತರಿದ್ದಾರೆ. ಅವರು ತೋರಿದ ಮನುಷ್ಯತ್ವದ ಪಾಠ ದೊಡ್ಡದು. ನಮ್ಮ ನಿಮ್ಮ ನಡುವೆ ಕ್ಷುಲ್ಲಕವಾಗಿ ನಡೆದುಕೊಳ್ಳುವ ಮನುಜರ ನಡುವೆಯೂ ಸಿದ್ಧಗಂಗೆಯ ಶ್ರೀಗಳು, ಧರ್ಮಸ್ಥಳದ ಹೆಗ್ಗಡೆಯವರು ಇದ್ದಾರೆ ಎನ್ನುವುದೇ ಸಮಾಧಾನದ ವಿಷಯ. ಮನೆ ಮುರಿಯುವ ಸಮಾಜ ಘಾತುಕರ ನಡುವೆಯೂ, ಮನೆ ಉಳಿಸುವ, ಸಮಾಜ ಬೆಳೆಸುವ ಶರಣರು ಮನುಷ್ಯತ್ವ ಎನ್ನುವ ವಿಶಾಲ ಪ್ರೇಮ ಅಳಿಯದಂತೆ ಕಾಪಾಡಿಕೊಂಡು ಬಂದಿದ್ದಾರೆ. ಅವರಿಗೊಂದು ಶರಣು.

Wednesday, January 26, 2022

ಪ್ರಕೃತಿಯಲ್ಲಿ ಸೋಲು-ಗೆಲುವು ಇದೆ, ಒಳ್ಳೆಯದು-ಕೆಟ್ಟದ್ದು ಇಲ್ಲ

ಒಳ್ಳೆಯವರಿಗೆ ಒಳ್ಳೆಯದಾಗುತ್ತದೆ, ಕೆಟ್ಟವರಿಗೆ ಕೆಟ್ಟದ್ದಾಗಲೇಬೇಕು. ಹಾಗಂತ ನಿಯಮ ಎಲ್ಲಿದೆ? ಆದರೆ ಅದನ್ನು ನಂಬಿಯೇ ನಾವು (ಎಲ್ಲರೂ ಅಲ್ಲದಿದ್ದರೂ ಬಹುತೇಕ ಜನ) ಜೀವನ ಮಾಡುವುದು. 'ಸತ್ಯ  ಹರಿಶ್ಚಂದ್ರ' ಕಥೆ/ಸಿನಿಮಾದಲ್ಲಿ ಹರಿಶ್ಚಂದ್ರನಿಗೆ ಎಷ್ಟು ಕೆಟ್ಟ ಸಂದರ್ಭಗಳು ಎದುರಾದರೂ ಕೊನೆಗೆ ಒಳ್ಳೆಯದಾಗುವುದಿಲ್ಲವೇ? ಹಾಗೆಯೆ ಪಾಪಿಗಳಿಗೆ ಇಲ್ಲಿಯೇ ನರಕ ತೋರಿಸದೆ ದೇವರು (ಅಥವಾ ಅವರ ಕರ್ಮ) ಬಿಡುವುದಿಲ್ಲ ಎಂದು ಲೋಕಾರೂಢಿಯಾಗಿ ನಾವು ಮಾತನಾಡುತ್ತೇವೆ. ಆ ನಂಬಿಕೆಯೇ ನಮ್ಮ ಸಮಾಜದ ಒಗ್ಗಟ್ಟನ್ನು ಕಾಪಾಡುತ್ತದೆ. ಮನುಷ್ಯ ಒಬ್ಬರನ್ನೊಬ್ಬರು ಸಹಕರಿಸಿಕೊಂಡು ಸಂಘ ಜೀವಿಯಾಗಿ ಬಾಳುವಂತೆ ಮಾಡುತ್ತದೆ.


ಆದರೆ ಸರಿ-ತಪ್ಪು, ಒಳ್ಳೆಯದು-ಕೆಟ್ಟದ್ದು, ನ್ಯಾಯ-ಅನ್ಯಾಯ, ಅದೃಷ್ಟ-ದುರಾದೃಷ್ಟ ಅನ್ನುವ ಪರಾಮರ್ಶೆ ಮಾನವ ಜೀವಿಗೆ ಮಾತ್ರ ಸೀಮಿತವಾದದ್ದು. ಪ್ರಕೃತಿಯಲ್ಲಿ, ಪ್ರಾಣಿ-ಪಕ್ಷಿಗಳ ಲೋಕದಲ್ಲಿ ಅದಕ್ಕೆ ಅವಕಾಶವೇ ಇಲ್ಲ. ಇಲಿಯನ್ನು ತಿಂದು ಹಾವು, ಹಾವನ್ನು ತಿಂದು ಹದ್ದು ಜೀವಿಸಿದರೆ, ನೀರಿನಲ್ಲಿ ಸಣ್ಣ ಮೀನುಗಳನ್ನು ದೊಡ್ಡ ಮೀನುಗಳು ನುಂಗಿ ಹಾಕುತ್ತವೆ. ಪ್ರಕೃತಿ ಜಿಂಕೆಗೆ ವೇಗದಿಂದ ಓಡುವ ಸಾಮರ್ಥ್ಯ ಕೊಟ್ಟರೆ, ಹುಲಿಗೆ ಹೊಂಚು ಹಾಕುವ ವಿದ್ಯೆ ಕಲಿಸಿ ಕೊಡುತ್ತದೆ. ಬಲೆ ಹೆಣೆದು, ಅದರಲ್ಲಿ ಸಿಕ್ಕಿ ಹಾಕಿ ಕೊಳ್ಳುವ ಹುಳುಗಳನ್ನು ತಿನ್ನಲು ಕಾಯ್ದು ಕೂಡುವ ಜೇಡರ ಹುಳುವಿಗೆ ನಾವು ವಂಚಕ ಎನ್ನಬಹುದು. ಆದರೆ ಅದು ಅದರ ಹೊಟ್ಟೆ ಪಾಡು. ಜೀವ ಉಳಿಸಿಕೊಳ್ಳುವುದಕ್ಕೆ ಪ್ರಕೃತಿ ಒಂದು ಪ್ರಾಣಿಯನ್ನು ಇನ್ನೊಂದು ಪ್ರಾಣಿಯೊಡನೆ ಸ್ಪರ್ಧೆಗೆ ಒಡ್ಡಿದರೆ, ಸಂತಾನೋತ್ಪತ್ತಿ ಸಮಯದಲ್ಲಿ ಸಂಗಾತಿಯನ್ನು ಗೆಲ್ಲಲು ಒಂದೇ ಜಾತಿಯ ಪ್ರಾಣಿಗಳನ್ನು ಪರಸ್ಪರ ಸ್ಪರ್ಧೆಗೆ ಇಳಿಸುತ್ತದೆ. ಅಲ್ಲಿ ಇರುವುದು ಸೋಲು-ಗೆಲುವಿನ, ಅಳಿವು-ಉಳಿವಿನ ಸ್ಪರ್ಧೆ ಮಾತ್ರ. ಗೆದ್ದ ಪ್ರಾಣಿಗೆ ಮಾತ್ರ ಜೀವಿಸುವ, ವಂಶ ಮುಂದುವರೆಸುವ ಅವಕಾಶ. ಬೇಟೆಯಾಡಿದ ಹುಲಿಯ ಅದೃಷ್ಟ, ಸತ್ತ ಜಿಂಕೆಯ ದುರಾದೃಷ್ಟ, ಹುಲಿ ದುಷ್ಟ ಪ್ರಾಣಿ, ಜಿಂಕೆ ಪಾಪದ ಪ್ರಾಣಿ ಎಂದೆಲ್ಲ ನಾವು ವಿಮರ್ಶೆ ಮಾಡಿದರೂ ಪ್ರಕೃತಿ ಅದನ್ನೆಲ್ಲ ನಿರ್ದಾಕ್ಷಿಣ್ಯವಾಗಿ ತಳ್ಳಿ ಹಾಕುತ್ತದೆ.


ಸರಿ-ತಪ್ಪಿನ ವಿವೇಚನೆ ನಮಗೆ ನಾವು ಚಿಕ್ಕವರಾಗಿದ್ದಾಗ ನಮ್ಮ ತಂದೆ-ತಾಯಿ, ಬಂಧು-ಬಳಗ, ಶಾಲೆಯಲ್ಲಿ ಮೇಷ್ಟ್ರು, ಒಟ್ಟಿನಲ್ಲಿ ನಮ್ಮ ಸಮಾಜ ಅದನ್ನು ಹೇಳಿಕೊಡುತ್ತ ಬೆಳೆಸುತ್ತದೆ. ದೊಡ್ಡವರಾದಾಗ ಕಾನೂನಿನ ಪಾಲನೆ ಮಾಡದೇ ಹೋದರೆ ಅದಕ್ಕೆ ಕಟ್ಟಬೇಕು ದಂಡ, ಇಲ್ಲವೇ ಅನುಭವಿಸಬೇಕು ಶಿಕ್ಷೆ. ಈ ಸರಿ-ತಪ್ಪಿನ ವಿವೇಚನೆ, ಕಾಯ್ದೆ-ಕಾನೂನುಗಳೆಲ್ಲ ಎಲ್ಲ ಸಮಾಜಗಳಲ್ಲೂ ಒಂದೇ ತರಹ ಇಲ್ಲ. ಕೆಲವು ಧರ್ಮಗಳು ಮಾಂಸಾಹಾರ ನಿಷೇಧಿಸಿದರೆ, ಕೆಲವು ಧರ್ಮಗಳ ಜನರಿಗೆ ಅದು ಪ್ರತಿ ನಿತ್ಯದ ಆಹಾರ. ನಮ್ಮಲ್ಲಿ ಮದುವೆಯ ನಂತರವೇ ಮಕ್ಕಳು. ಆಫ್ರಿಕಾದ ಕೆಲ ಬುಡಕಟ್ಟು ಜನಾಂಗಗಳಲ್ಲಿ ಗರ್ಭಿಣಿಯಾದ ಮೇಲೆಯೇ ಮದುವೆ. ಅದು ಅಲ್ಲಿಯ ಕಾನೂನು. ಕೆಲ ಸಮಾಜಗಳು ಸಾಲ-ಬಡ್ಡಿ ವ್ಯವಹಾರವನ್ನು ಸಂಪೂರ್ಣ ನಿಷೇದಿಸುತ್ತವೆ. ಆದರೆ ಅದನ್ನು ಒಪ್ಪಿಕೊಂಡ ಸಮಾಜಗಳೇ ಜಗತ್ತಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವುದು.


ಬಹು ಕಾಲದ ಹಿಂದೆ ಮನುಷ್ಯ ಆದಿವಾಸಿಯಾಗಿ, ಅಲೆಯುತ್ತ ಪ್ರಾಣಿಗಳನ್ನು ಬೇಟೆ ಆಡಿ ಬದುಕುತ್ತಿದ್ದಾಗ ಅವನಿಗೆ ಸರಿ-ತಪ್ಪಿನ ವಿವೇಚನೆ ಇರಲಿಲ್ಲ. ಆದರೆ ಮನುಷ್ಯ ಒಂಟಿಯಾಗಿ ಬದುಕುವುದಕ್ಕಿಂತ, ಸಂಘ ಜೀವಿಯಾಗಿ ಬದುಕಿದರೆ ಇರುವ ಅನುಕೂಲಗಳನ್ನು ಕಂಡುಕೊಂಡ. ಆದರೆ ಮನುಷ್ಯ ಒಗ್ಗಟ್ಟಿನಲ್ಲಿ ಬಾಳಬೇಕೆಂದರೆ ಆ ಜನರ ಗುಂಪು ಒಂದೇ ನಂಬಿಕೆಗಳನ್ನು ಹೊಂದಿರಬೇಕು. ಆಗ ಕದಿಯುವುದು-ಕೊಲ್ಲುವುದು ತಪ್ಪು, ಹಸಿದವರೊಡನೆ ಊಟ ಹಂಚಿಕೊಳ್ಳುವುದು ಒಳ್ಳೆಯದು ಇತ್ಯಾದಿ ನಂಬಿಕೆಗಳನ್ನು ರೂಢಿಗೆ ತಂದ. ಆ ನಂಬಿಕೆಗಳು ಮನುಷ್ಯನಿಗೆ ಸಮಾಜವನ್ನು ಕಟ್ಟಲು ಸಹಾಯ ಮಾಡಿದವು. ದೇವರು-ಧರ್ಮ-ಕರ್ಮ ಮುಂತಾದವುಗಳು ಆ ನಂಬಿಕೆಗಳನ್ನು ಇನ್ನಷ್ಟು ಗಟ್ಟಿಗೊಳಿಸಿದವು. ಸಮಾಜವನ್ನು ವಿಸ್ತಾರಗೊಳಿಸಲು ಭದ್ರ ಬುನಾದಿ ಹಾಕಿದವು.


ನಮ್ಮ ನಂಬಿಕೆ ಏನಾದರೂ ಇರಲಿ, ಪ್ರಕೃತಿ ನಮ್ಮನ್ನು ಸ್ಪರ್ಧೆಗೆ ಒಡ್ಡದೆ ಬಿಡದು. ಆದರೆ ಸೋಲಾದಾಗ ಎದೆಗುಂದಬಾರದು ಎನ್ನುವ ಕಾರಣಕ್ಕೆ ಮನುಷ್ಯ 'ಆಗುವುದೆಲ್ಲ ಒಳ್ಳೆಯದಕ್ಕೆ' ಎನ್ನುವ ಮಾತು ರೂಢಿಗೆ ತಂದ. ಹಾಗೆಯೆ 'ಒಳ್ಳೆಯವರಿಗೂ ಕೆಟ್ಟ ಕಾಲ ಬಿಡುವಿದಿಲ್ಲ' ಎನ್ನುವ ಮಾತಿನ ಹಿಂದಿನ ಮರ್ಮ ವಿಚಾರ ಮಾಡಿ ನೋಡಿ. ಕೆಟ್ಟ ಕಾಲ ಬಂದಾಗಲೂ ಒಳ್ಳೆಯತನ ಬಿಡಬಾರದು, ಒಂದು ವೇಳೆ ನಾವು ಕೆಟ್ಟತನಕ್ಕೆ ಇಳಿದಲ್ಲಿ ಅದು ನಮ್ಮ ಸಮಾಜದ ಸಹಬಾಳ್ವೆಗೆ, ನಂಬಿಕೆಗೆ ಅಡ್ಡಿಯಾಗುತ್ತದೆ ಎನ್ನುವ ಕಾರಣಕ್ಕೆ. ಹಾಗಾಗಿ ಮನುಷ್ಯ 'ಒಳ್ಳೆಯವರಿಗೂ ಕೆಟ್ಟದಾಗುತ್ತದೆ' ಎನ್ನುವ ಮಾತು ಸಮಾಜದ ರೂಢಿಯಲ್ಲಿ ಇರುವಂತೆ ನೋಡಿಕೊಂಡ. ಸಮಾಜ ಬೆಳೆದಂತೆಲ್ಲ ಆ ನಂಬಿಕಗಳೇ ಕಾಯಿದೆ, ಕಾನೂನುಗಳಾಗಿ ಮಾರ್ಪಾಡಾದವು. ನ್ಯಾಯ ಎತ್ತಿ ಹಿಡಿಯಲು, ಅನ್ಯಾಯವನ್ನು ಶಿಕ್ಷಿಸಲು ಕೋರ್ಟ್-ಪೊಲೀಸ್ ಇಲಾಖೆಗಳು ನಿರ್ಮಾಣಗೊಂಡವು. ಧರ್ಮ ಎತ್ತಿ ಹಿಡಿದವರನ್ನು ನಮ್ಮ ಸಮಾಜ ಒಳ್ಳೆಯವರು ಎಂದು ಹಾಡಿ ಹೊಗಳಿದರೆ, ವಂಚಕರಿಗೆ ಕುಖ್ಯಾತಿ ಅಂಟಿಸದೇ ಬಿಡುವುದಿಲ್ಲ. ಇವೆಲ್ಲದರ ಮೂಲ ಉದ್ದೇಶ ಒಂದೇ. ಸಮಾಜ ಒಗ್ಗಟ್ಟಾಗಿ ಇರುವಂತೆ ನೋಡಿಕೊಳ್ಳುವುದು.


ಮನುಷ್ಯನನ್ನು ಹೊರತು ಪಡಿಸಿ ಬೇರೆ ಯಾವ ಪ್ರಾಣಿ-ಪಕ್ಷಿಗಳು ಒಳ್ಳೆಯ ಅಥವಾ ಕೆಟ್ಟ ಭಾವನೆಗಳನ್ನು ವ್ಯಕ್ತ ಪಡಿಸುವುದಿಲ್ಲ. ಪ್ರಕೃತಿ ನಿರ್ಮಿಸಿದ ಪ್ರಪಂಚದಲ್ಲಿ ನ್ಯಾಯ-ಅನ್ಯಾಯದ ನಿರ್ಣಾಯಕರಿಲ್ಲ. ಅಲ್ಲಿ ಇರುವುದು ಸೋಲು-ಗೆಲುವಿನ ಸ್ಪರ್ಧೆ ಮಾತ್ರ. ಆದರೆ ಈ ನಂಬಿಕೆ, ಪರಾಮರ್ಶೆಗಳನ್ನು ಬೆಳೆಸಿಕೊಂಡ ಮನುಷ್ಯ ಇತರೆ ಪ್ರಾಣಿ-ಪಕ್ಷಿಗಳನ್ನು ಹಿಂದಕ್ಕೆ ಒತ್ತುವುದರಲ್ಲಿ ಸಂಪೂರ್ಣ ಯಶಸ್ವಿಯಾದ.


ಆದರೆ ಮಾನವ-ಮಾನವರ ನಡುವೆ ಇರುವ ಸ್ಪರ್ಧೆಯಲ್ಲಿ, ಆ ಪರಾಮರ್ಶೆಯನ್ನು ಹಿಂದಕ್ಕಿಟ್ಟು, ತೋರಿಕೆಗೆ ಮಾತ್ರ ಸಮಾಜವನ್ನು ನಂಬಿದವರಂತೆ ಅಭಿನಯ ಮಾಡುತ್ತ, ಅಂತರಂಗದಲ್ಲಿ ಸ್ವಾರ್ಥಿಗಳಾದವರಿಗೆ ಸಮಾಜವನ್ನು ದುರುಪಯೋಗ ಪಡಿಸಿಕೊಳ್ಳಲು ಸಾಧ್ಯ. ಏಕೆಂದರೆ ಒಳ್ಳೆಯತನ-ಕೆಟ್ಟತನಗಳೆಲ್ಲ ಸಮಾಜ ನಿರ್ಮಿಸಿದ ಕಟ್ಟುಪಾಡುಗಳು. ಪ್ರಕೃತಿಯ ನಿಯಮಗಳಲ್ಲ. ನಿಮಗೆ ನೀವು ಒಳ್ಳೆಯವರು ಎಂದುಕೊಂಡಿದ್ದರೆ, ಒಮ್ಮೆ ವಿಚಾರ ಮಾಡಿ ನೋಡಿ. ಅದು ಸಮಾಜ ನಿಮ್ಮಿಂದ ಬಯಸಿದ್ದು ಅಷ್ಟೇ. ಅದು ಸರಿಯೂ ಅಲ್ಲ, ತಪ್ಪು ಕೂಡ ಅಲ್ಲ. ಹಾಗೆಯೇ ಯಾರಾದರೂ ನಿಮಗೆ ಮೋಸ ಮಾಡಿದರೆ, ಅವರು ಕೆಟ್ಟವರು, ಅವರನ್ನು ನಂಬಿದ್ದ ನೀವು ಒಳ್ಳೆಯವರು ಎನ್ನುವುದು ಎಲ್ಲ ಸಮಾಜ ನಿರ್ಮಿಸಿದ ನಂಬಿಕೆಗಳು ಅಷ್ಟೇ. ಈ ಸತ್ಯ ಅರ್ಥ ಮಾಡಿಕೊಂಡವರು ಅದರ ದುರುಪಯೋಗಕ್ಕೆ ಇಳಿದುಬಿಡುತ್ತಾರಲ್ಲ. ಒಂದು ವೇಳೆ, ಅಂತಹವರ ಕೈಯಲ್ಲಿ ಸಿಕ್ಕಿ ಹಾಕಿಕೊಂಡರೆ ಆಗ ನೀವೇನು ಮಾಡುವಿರಿ?


ಬೇಟೆಯಾಡುವುದನ್ನು ಹುಲಿ ಬಿಡುವುದಿಲ್ಲ ಅನ್ನುವುದಾದರೆ, ಆಕ್ರಮಣಕಾರಿ ಪ್ರವೃತ್ತಿ ಇರುವ ಮನುಷ್ಯರು ಕೂಡ ಬೇರೇನಲ್ಲ. ಯಾವುದಾದರೂ ಸಮಸ್ಯೆಯಲ್ಲಿ ಸಿಕ್ಕಿ ಹಾಕಿಕೊಂಡಾಗ, ಬೇರೆಯವರು ನಿಮ್ಮನ್ನು ಒಳ್ಳೆಯತನ-ಕೆಟ್ಟತನದ ಪರಾಮರ್ಶೆಗೆ ಒಳಪಡಿಸಿದರೆ, ಅವರು ತಮ್ಮ ಒಳಿತಿಗೆ ನಿಮ್ಮನ್ನು ಬಲಿ ತೆಗೆದುಕೊಳ್ಳುತ್ತಿರುವರೋ ಎಂದು ವಿಚಾರ ಮಾಡಿ ನೋಡಿ. ನ್ಯಾಯ-ಅನ್ಯಾಯ ಎಲ್ಲ ನಿಮಗೆ ಮಾತ್ರ ಅನ್ವಯ ಆಗುತ್ತದೆ, ಅವರಿಗೆ ಅಲ್ಲ ಎನ್ನುವ ಹಾಗಿದ್ದರೆ, ಆಗ ನೀವು ನಂಬಬೇಕಾದದ್ದು ಪ್ರಕೃತಿಯ ನಿಯಮ ಮಾತ್ರ. ಈಗ ನೀವು ಇರುವುದು ಸೋಲು-ಗೆಲುವಿನ ಸ್ಪರ್ಧೆಯಲ್ಲಿ. ಸರಿ-ತಪ್ಪಿನ ವಿಮರ್ಶೆ ಅಲ್ಲಿಗೆ ಬಿಟ್ಟು, ಒಳ್ಳೆಯತನದ ಕಟ್ಟು ಪಾಡಿಗೆ ಬೀಳದೆ, ನೀವು ಸ್ಪರ್ಧಿಸದಿದ್ದರೆ, ಪ್ರಕೃತಿ ನಿಮ್ಮನ್ನು ಮೂಲೆಗುಂಪು ಮಾಡದೇ ಬಿಡುವುದಿಲ್ಲ. ನೀವು ಇಲ್ಲವೇ ಅವರು ಉಳಿಯಬೇಕು ಎನ್ನುವ ಸ್ಪರ್ಧೆಯಲ್ಲಿ ನೀವೇ ಗೆಲ್ಲಬೇಕು. ಕನಿಷ್ಠ ಪಕ್ಷ ಆರೋಗ್ಯದಾಯಕ ಸ್ಪರ್ಧೆಯಾದರೂ ನೀವು ಕೊಡಬೇಕು. ಅಕಸ್ಮಾತ್ ಸೋತರೆ, 'ಆಗುವುದೆಲ್ಲ ಒಳ್ಳೆಯದಕ್ಕೆ' ಎಂದುಕೊಂಡರಾಯಿತು.


'ಭಕ್ತ ಕುಂಬಾರ' ಚಿತ್ರದಲ್ಲಿ ಕಷ್ಟ ಅನುಭವಿಸುವ ಕುಂಬಾರನಿಗೆ ಕೊನೆಯಲ್ಲಿ ಅವನು ಕಳೆದುಕೊಂಡದ್ದೆಲ್ಲ ಸಿಗುತ್ತದೆ. ಅದು ನಂಬಿಕೆ. ಅದು ಜೀವನದ ಕಷ್ಟಗಳನ್ನು ಎದುರಿಸುವ ಸ್ಥೈರ್ಯ ಕೊಡುತ್ತದೆ. ಆದರೆ ಘಜ್ನಿ ಎನ್ನುವ ಧಾಳಿಕೋರ ಗುಜರಾತ್ ನ ಸೋಮನಾಥಪುರ ದೇವಸ್ಥಾನಕ್ಕೆ ಧಾಳಿ ಮಾಡಿದಾಗ ಅಲ್ಲಿ ನೆರೆದಿದ್ದ ಸಾವಿರಾರು ಜನ, ಯಾವುದೊ ಪವಾಡದ ನಿರೀಕ್ಷೆಯಲ್ಲಿ, ಯಾವುದೇ ಹೋರಾಟ ಮಾಡದೇ ಜೀವ ಕಳೆದುಕೊಂಡರಲ್ಲ. ಅದು ಮೂಢ ನಂಬಿಕೆ. ಅವರು ಒಟ್ಟಾಗಿ, ಸಿಕ್ಕ ಆಯುಧಗಳನ್ನು ಹಿಡಿದು ಹೋರಾಟ ಮಾಡಿದ್ದರೆ, ಅವರಲ್ಲಿ ಕೆಲವು ಜನರ ಜೀವವಾದರೂ ಉಳಿಯುವ ಸಾಧ್ಯತೆ ಇತ್ತು. ಎದುರಾಳಿಗಳಲ್ಲೂ ಸಾವು-ನೋವು ಉಂಟು ಮಾಡಬಹುದಾಗಿತ್ತು. ಆ ಹೋರಾಟ ಧರ್ಮದ್ದಾಗಿರಲಿಲ್ಲ. ಬದಲಿಗೆ ಒಬ್ಬ ಸ್ವಾರ್ಥಿ ಧರ್ಮದ ದುರ್ಬಳಕೆ ಮಾಡುವುದಾಗಿತ್ತು.


ನಮ್ಮ ಜೀವನದ ಪ್ರತಿ ದಿನದ ಸಂಘರ್ಷ ನಮ್ಮ ನಂಬಿಕೆಗಳೊಡನೆ ಆಟ ಆಡುವವವರ ಜೊತೆ ಇರುತ್ತದೆ. ಆಗ ಒಳ್ಳೆಯತನಕ್ಕೆ ಕಟ್ಟು ಬೀಳದಿರಿ. ಮಾನವ ಮೌಲ್ಯಗಳಿಗೆ ಖಂಡಿತ ಬೆಲೆ ಕೊಡಿ. ಆದರೆ ಅವುಗಳಿಗೆ ಬೆಲೆ ಕೊಡದೆ ಇರುವವವರ ಜೊತೆಗೆ ಮಾತ್ರ ಪ್ರಕೃತಿ ನಿಯಮವನ್ನು ಕಡೆಗಣಿಸಬೇಡಿ.

Sunday, January 23, 2022

Book Review: Science, A History by John Gribbin

  • When Copernicus published a book in 1543 suggesting a model of the Universe with Sun at the center (correcting the earlier misconception of Earth being the center), the original edition of 400 copies did not even sell out!
  • Galileo was trained in Medicine, but taught Mathematics at a University in Pisa and he was an Astronomer by practice. Apart from compass, he built his own telescope which was the best in his times.
  • Unbiased historians find it impossible to say whether Newton or Hooke made more significant contribution. Not just in Mathematics and Physics, Newton had talents to rewrite history in his own favor as well.
  • When James Watt patented his steam engine in 1769, it was not an immediate commercial success but two decades later, it was at the heart of industrial revolution.
  • Marie Curie was banned from main laboratories for fear that sexual excitement of her presence there might prevent any research getting done.

 

Science is impersonal but scientists are not. Many of them struggled to make their ends meet but were driven by the pleasure of finding things out. They did not want to believe what their religion or society asked them to believe. They rather preferred experiments and equations to find the truth. One invention led to another and misconceptions were corrected with better explanations. It led to evolution of science. From Galileo to Stephen Hawking, science not only grew in volumes, it changed the way we live our lives. There were numerous scientists who dedicated their lives in pursuit of science. And standing on the shoulders of such giants were Newton and Einstein.

 

The history of science in the last 500 years is documented in this 600-page book through the lives of scientists who created it. You won’t appreciate science much by just going through a textbook. They are just theoretical equations and experiments. But when you understand the people who developed them along with their lives, their challenges and dilemma, you would appreciate more how the science we study came into existence.

 

John Gribbin, author of this book is a British science writer (has many popular science books to his credit), an astrophysicist and a visiting fellow in astronomy at the University of Sussex. His books are not only fascinating reads but make the science concepts such as quantum mechanics easier for a common man to understand and relate.