Friday, October 28, 2022

ಶಾಂತಾರಾಮ್: ಒಂದು ವಿಭಿನ್ನ ಕಾದಂಬರಿ

(Gregory David Roberts ಅವರು ಬರೆದ ‘Shantaram’ ಪುಸ್ತಕದ ಮೊದಲ ಪುಟಗಳ ಭಾವಾನುವಾದ. ಬಹಳ ದಿನದ ಮೇಲೆ ಒಂದು ಒಳ್ಳೆಯ ಕಾದಂಬರಿ ಓದಿದ ಅನುಭವ ಆದ್ದರಿಂದ, ಅದರ ಲೇಖಕರು ಬರೆದ ಪರಿಚಯ ಪುಟಗಳನ್ನು ಇಲ್ಲಿ ಸಂಕ್ಷಿಪ್ತವಾಗಿ ಅನುವಾದಿಸಿದ್ದೇನೆ.)

 

ಬಹುಕಾಲದ ಹಿಂದೆ ಮಾಟಗಾತಿಯೊಬ್ಬಳು ನನಗೆ ಹೇಳಿದ್ದಳು. ಎಲ್ಲಾ ಜನರು ಒಂದಲ್ಲ ಒಂದು  ವರ್ಗಕ್ಕೆ ಸೇರಿರುತ್ತಾರೆ. ಕೆಲವರು ರೈತರು. ಅವರು ಯಾವ ಊರಿಗೆ ಹೋದರು, ಗುಂಡಿ ತೆಗೆಯುವುದು, ಬೀಜ ಬಿತ್ತುವುದು, ಫಸಲು ಕಾಯುವುದು ಇಂತಹ ಕೆಲಸಗಳೇ ಅವರಿಗೆ ಇಷ್ಟವಾಗುವುದು. ಅದೇ ತರಹ ಕೆಲವರು ಕಟ್ಟಡ ನಿರ್ಮಾಣ ಮಾಡುವವರು, ಇನ್ನು ಕೆಲವರು ಸಂಗೀತಗಾರರು. ಹಾಗೆಯೆ ಕೆಲವರು ಕುಶಲಕರ್ಮಿಗಳು, ನಟರು, ಸಾಧು-ಸಂತರು, ಶಿಕ್ಷಕರು. ಹೀಗೆ ಅವರವರ ಕಾಯಕ ಅವರಿಗೆ ಇಷ್ಟ. ಸ್ವಲ್ಪ ಜನ ಮಾಟಗಾತಿಯರು, ನನ್ನ ತರಹ. ಕೆಲವರು ಕ್ಷತ್ರಿಯರು ನಿನ್ನ ತರಹ.

 

ಅವಳು ಹೇಳಿದ್ದು ನಾನು ಆಗ ಪೂರ್ತಿಯಾಗಿ ನಂಬಲಿಲ್ಲ ಹಾಗೆಯೆ ತೆಗೆದು ಹಾಕಲಿಲ್ಲ ಕೂಡ. ಆದರೆ ಅದು ಆತ್ಮದ ಕರೆಗಂಟೆ ಎಂದು ನನಗೆ ಸಮಯ ಕಳೆದಂತೆ ಅರ್ಥವಾಗತೊಡಗಿತು.

 

ಅನಿವಾರ್ಯವೋ ಅಥವಾ ವಿಮೋಚನೇ ಇಲ್ಲವೋ, ಕ್ಷತ್ರಿಯರಿಗೆ ಹೋರಾಟದ ಹಾದಿ ಬಿಟ್ಟು ಬೇರೆ ರುಚಿಸುವುದಿಲ್ಲ. ಹೋರಾಡುವುದನ್ನು ಅವರು ಚಿಕ್ಕಂದಿನಲ್ಲೇ ಕಲಿಯುತ್ತಾರೆ.  ಕರಾಟೆ, ಬಾಕ್ಸಿಂಗ್ ಇತ್ಯಾದಿ ಕ್ರೀಡೆಗಳನ್ನು ಆಸಕ್ತಿಯಿಂದ ಗಮನಿಸುತ್ತಾರೆ. ಸಮರ ಕಲೆಗಳು ಅವರನ್ನು ಸೆಳೆಯುತ್ತವೆ. ಚಾಕು ಬಳಸುವದು, ಬಡಿಗೆ ಹಿಡಿದು ತಮ್ಮನ್ನು ರಕ್ಷಿಸಿಕೊಳ್ಳುವುದು ಅವರಿಗೆ ಸುಲಭದಲ್ಲಿ ದಕ್ಕುತ್ತವೆ. ಅವರು ಸೈನಿಕರೋ, ಪೊಲೀಸರೋ ಇಲ್ಲವೇ ದರೋಡೆಕೋರರೋ ಆಗುತ್ತಾರೆ ಅಂದಲ್ಲ. ಆದರೆ ಅವರು ದಬ್ಬಾಳಿಕೆಯನ್ನು, ಅನ್ಯಾಯವನ್ನು ಸಹಿಸಿಕೊಳ್ಳಲಾರರು. ಮತ್ತು ದುರ್ಬಲರ ರಕ್ಷಣೆಗೆ ಕಾಳಗಕ್ಕೆ ಇಳಿಯಲು ಹಿಂದೆ ಮುಂದೆ ನೋಡುವುದಿಲ್ಲ.

 

ಹತ್ತುವರುಷಗಳ ಕಠಿಣ ಜೈಲು ವಾಸದಲ್ಲಿ ಹಲವಾರು ಕ್ಷತ್ರಿಯರನ್ನು ಹತ್ತಿರದಿಂದ ಗಮನಿಸಿದ್ದೇನೆ. ಅವರಲ್ಲಿ ಹೋರಾಟ ಭಾವ ಎಷ್ಟು ದಟ್ಟವಾಗಿದೆಯೋ ಅಷ್ಟೇ ಸರಾಗವಾಗಿ ಅವರು ಕವಿತೆ ರಚಿಸಬಲ್ಲರು. ಮತ್ತು ಕೆಲವರು ಇತಿಹಾಸವನ್ನು ಅರೆದು ಕುಡಿದವರು. ಮತ್ತು ಕೆಲವರು ತತ್ವಜ್ಞಾನ ವಿಷಯದಲ್ಲಿ ಪ್ರಭುದ್ಧ ವಾದ ಮಂಡಿಸಬಲ್ಲವರು.

 

ಸಮವಸ್ತ್ರ ಧರಿಸಿದ ಸೈನಿಕರೆಲ್ಲ ಕ್ಷತ್ರಿಯರಲ್ಲ. ಹಾಗೆಯೆ ಸೂಟು ಬೂಟು ಧರಿಸಿದ್ದರು, ಕೆಲವರಲ್ಲಿ ಕ್ಷತ್ರಿಯರ ರಕ್ತ ಕುದಿಯುತ್ತಿರಬಹುದು. ಮತ್ತೆ ಬೀದಿ ಬದಿಯ ಒರಟರೆಲ್ಲ ಕ್ಷತ್ರಿಯರಲ್ಲ. ಏಕೆಂದರೆ  ಕ್ಷತ್ರಿಯರು ಒರಟರಲ್ಲ ಮತ್ತು ಒರಟರು ಕ್ಷತ್ರಿಯರಲ್ಲ.  

 

'ಶಾಂತಾರಾಮ್' ಪುಸ್ತಕದ ಮುಖ್ಯ ಪಾತ್ರ ಕೂಡ ಒಬ್ಬ ಕ್ಷತ್ರಿಯ. ಜೈಲಿನಿಂದ ತಪ್ಪಿಸಿಕೊಂಡು ತನ್ನ ಧೈರ್ಯ ಮತ್ತು ಬದುಕುವ ಆಸೆಯನ್ನು ಅವನು ನವೀಕರಣಗೊಳಿಸುತ್ತಾನೆ. ಆದರೆ ಕಾನೂನು ಬಾಹಿರ ದುಷ್ಕೃತ್ಯಗಳನ್ನು ಎಸಗಿದ್ದಕ್ಕೆ ಅವನಿಗೆ ನೋವಿದೆ. ಮತ್ತು ತನ್ನ ಘನತೆಯನ್ನು ಬಿಟ್ಟು ಕೊಡದ ಹೋರಾಟ ಅವನಿಗೆ ಅವನ ಜೀವನದ ಗಮ್ಯವನ್ನು ತಲುಪಲು ಸಹಾಯ ಮಾಡುತ್ತದೆ. ಸಮಾಧಾನದ ವಿಷಯ ಎಂದರೆ ಜೀವನದ ಆ ಪಯಣದಲ್ಲಿ ನಾವು ಒಬ್ಬಂಟಿಗರಲ್ಲ.

Tuesday, October 25, 2022

Book Review: Shantaram by Gregory David Roberts

A person convicted of armed robbery escapes from a jail in Australia. He is not a seasoned criminal but a first-time convict who wants to escape the jail term. He gets a fake passport and lands in Bombay. He is fascinated by the vividness the city offers. In no time he becomes part of it. He goes by the name in his fake passport “Lin”. He becomes a part of foreigners group living in Bombay. All of them have a criminal past in their respective home countries and they do not want to go back. They are all people with normal lives who accidentally got into crime and found Bombay as their hideout and a place to heal and thrive. ‘Leopold’ a restaurant in ‘Colaba’ area of Bombay is the place they meet regularly.

 

Lin has a personal tourist guide, Prabhakar, who helps Lin find a hotel and takes him around the town. Not just the regular tourist spots, he takes Lin to the dark side of Bombay too, like the slave market. They become close friends and Lin goes with Prabhakar to his native place, a village in Northern Maharashtra. Not only he enjoys living there, but he also gets an Indian name “Shantaram” chosen by the villagers for him.

 

After he returns to Bombay, he runs out of money and his visa is expired too. He goes on to live in a slum where Prabhakar lives where no one questions his visa status, and he does not have to pay any rent. One day, when the slum is caught on fire, Lin treats those affected with the first aid he has with him. Then on he becomes the doctor, the first person to go for medical assistance in the slum. The goodwill developed attracts the underworld don of Bombay, Khader Bhai (loosely based on the real character of Karim Lala). Lin gets medicine supplies and references to the hospitals and doctors with the help of Khader and he becomes a well-known person in the slum.

 

While trying to help his friend, Karla, with whom Lin is in love, he gets into a negative spiral. He gets jailed in Bombay and severely beaten up by police for four months. Khader helps him to get out. To repay the due, Lin becomes part of the illegal businesses Khader Bhai runs. Li becomes part of foreign currency exchange, passport forgery, and gold smuggling all of them operated by underworld gangs. He becomes confident of Khader Bhai and goes on to fight the war in Afghanistan. There Lin learns that he was part of a bigger scheme of Khader and that meeting him and Karla were no random events. In Afghanistan, Khader dies in the conflict. Lin returns to Bombay. He has a score to settle with a person who had sent him to jail. But he learns that that person is already destroyed mentally. Prabhakar dies in an accident. Love for Karla dies. But life goes on.

 

This is a 930 pages novel set in the Bombay of 1980s. It was on my book rack for years but as it became a TV serial now, my interest got rekindled. I put my hands on it and could not take it off. This book reads like a work of fiction but feels real. In fact, most of this book is real and is loosely based on the author’s real-life experience.

 

Conversations with Didier (a character in the novel) are deeply psychological and the discussions in Khader's council are philosophical. I have learned many things in this novel that I could not grasp in the books of Psychology and Philosophy. The character of Karla is brilliantly crafted. Many of the passages are worth re-reading. Surprisingly for a first-book writer, literary quality is very high. The author has not only lived an interesting life; he has mastered putting it into words also.

 

This book has a sequel (a novel running 870 pages). It has already arrived on my study table.



Saturday, October 1, 2022

ವಿಕ್ರಮನಿಗೆ ಕಥೆ ಹೇಳಲು ಬೇತಾಳವೇ ಏಕೆ ಬೇಕು?

'ವಿಕ್ರಮ ಮತ್ತು ಬೇತಾಳ' ಕಥೆಗಳನ್ನು ಮೊದಲು ನಾನು ಓದಿದ್ದು ಚಂದಮಾಮದಲ್ಲಿ. ಹೆಣವನ್ನು ಹೆಗಲಿಗೆ ಹಾಕಿಕೊಂಡು, ಒಂದು ಕೈಯಲ್ಲಿ ಕತ್ತಿ ಹಿರಿದು ಸ್ಮಶಾನದಲ್ಲಿ ಸಾಗಿ ಹೋಗುವ ರಾಜ ವಿಕ್ರಮಾದಿತ್ಯನ ಚಿತ್ರ ಭೀತಿ ಹುಟ್ಟಿಸುತಿತ್ತು. ಹಾಗೆಯೆ ಅವನ ಧೈರ್ಯ, ಸಾಹಸಗಳು ಬೆರಗು ಮೂಡಿಸುತ್ತಿತ್ತು. ಕ್ರಮೇಣ ಗೊತ್ತಾಯಿತು. ಬೇತಾಳ ಹೇಳುತ್ತಿದ್ದ ಕಥೆಗಳು ದೆವ್ವಗಳ ಕಥೆಗಳಲ್ಲ. ಬದಲಿಗೆ ರಾಜನ ಜಾಣ್ಮೆ, ವಿವೇಕ ಪರೀಕ್ಷೆ ಮಾಡುವ ಮತ್ತು ನೈತಿಕ ಸಂಧಿಗ್ದತೆ ಬಂದಾಗ ಸರಿ-ತಪ್ಪುಗಳನ್ನು ಅಳೆದು ನೋಡಿ ನಿರ್ಧಾರಕ್ಕೆ ಬರುವ ಕಥೆಗಳು ಆಗಿದ್ದವು.


ಅವು ನಿಜ ಕಥೆಗಳೋ ಅಥವಾ ದಂತ ಕಥೆಗಳೋ ಅನ್ನುವುದಕ್ಕಿಂತ ಅವುಗಳು ಕಥೆ ಕೇಳುವವರಲ್ಲಿ ಹುಟ್ಟಿಸುವ ಪ್ರಜ್ಞೆಯೇ ಮುಖ್ಯ. ಅದೇ ತರಹದ ಉದ್ದೇಶವನ್ನು ಪಂಚತಂತ್ರದ ಕಥೆಗಳು ಕೂಡ ಹೊಂದಿವೆ. ಸಮಸೆಗಳನ್ನು ಉಪಾಯದಿಂದ ಪರಿಹರಿಸಿಕೊಳ್ಳುವ ಅಕ್ಬರ್-ಬೀರಬಲ್, ತೆನಾಲಿ ರಾಮಕೃಷ್ಣರ ಕಥೆಗಳು ಕೂಡ ನಮ್ಮಲ್ಲಿವೆ.


ಉಜ್ಜಯಿನಿಯ ರಾಜ ವಿಕ್ರಮಾದಿತ್ಯ ನ್ಯಾಯ ನೀತಿಗೆ ಪ್ರಸಿದ್ಧನಾದವನು. ಅವನಿಗೆ ಸವಾಲೊಡ್ಡುವ ಕಥೆಗಳನ್ನು ಹೇಳುವ ಬೇತಾಳ. ಉತ್ತರ ಗೊತ್ತಿದ್ದೂ ಹೇಳದೆ ಹೋದರೆ 'ತಲೆ ಸಿಡಿದು ನೂರು ಚೂರಾಗುವುದು' ಎನ್ನುವ ಅದರ ಬೆದರಿಕೆ ಬೇರೆ. ಮೌನ ಮುರಿದರೆ ಮತ್ತೆ ಬೇತಾಳವನ್ನು ಹೊತ್ತು ಕಥೆ ಕೇಳುವ ಪರಿಸ್ಥಿತಿ ರಾಜನಿಗೆ. ಆದರೂ ಅವನು ಮೌನ ಮುರಿಯುತ್ತಾನೆ. ತನ್ನ ಸರಿ-ತಪ್ಪಿನ ತೀರ್ಪು ನೀಡುತ್ತಾನೆ. ಮತ್ತೆ ಹೊಸ ಕಥೆ ಹುಟ್ಟುತ್ತದೆ. ಆದರೆ ರಾಜನಿಗೆ ಕಥೆ ಹೇಳಲು ಬೇತಾಳವೇ ಏಕೆ ಬೇಕಿತ್ತು? ಬೇರೆ ಯಾರೂ ಮಾನವರು ಆ ಕಥೆಗಳನ್ನು ಹೇಳಲು ಸಾಧ್ಯ ಆಗುತ್ತಿರಲಿಲ್ಲವೇ? ಬೇತಾಳ ಹೇಳಿದ ಕಥೆಗಳನ್ನು ಗಮನಿಸಿ ನೋಡಿದರೆ ಸಂದೇಹವೇ ಬೇಡ. ಕಥೆಗಳಲ್ಲಿ ಬರುವ ಸನ್ನಿವೇಶಗಳು, ಸರಿ-ತಪ್ಪಿನ ಸವಾಲುಗಳು ಜೀವನವನ್ನು ಒಟ್ಟಾರೆಯಾಗಿ ನೋಡಿದಾಗ ಮಾತ್ರ ಹುಟ್ಟುವಂತಹವು. ಸಾಮಾನ್ಯ ಮನುಷ್ಯ ಯಾವುದೊ ಆಸೆಯ ಹಿಂದೆ ಬಿದ್ದಿರುತ್ತಾನೆ ಮತ್ತು ಸಮಸ್ಯೆ ಬಂದಾಗ ಸ್ವಾರ್ಥಿಯಾಗಿ ನಡೆದುಕೊಳ್ಳುತ್ತಾನೆ. ಅವನಿಗೆ ಸರಿ-ತಪ್ಪಿನ ವಿವೇಚನೆಗಿಂತ ತನ್ನ ಬೆಳವಣಿಗೆಯೇ ಮುಖ್ಯ. ಸಾಮಾನ್ಯ ಮನುಷ್ಯ ಮಾಡುವ ತಪ್ಪುಗಳನ್ನು ಎತ್ತಿ ತೋರಿಸುವ ಕಥೆಗಳನ್ನು ಬೇತಾಳ ಹೇಳುವುದೇ ಸಮಂಜಸ ಅಲ್ಲವೇ? ಆದರೆ ರಾಜ ವಿವೇಕ ಎತ್ತಿ ಹಿಡಿಯುವವನಾಗಿದ್ದ. ಬೇತಾಳ ಕೇಳುವ ಪ್ರಶ್ನೆಗೆ ಸಮಂಜಸ ಉತ್ತರ ನೀಡುತ್ತಿದ್ದ. ಹೀಗಾಗಿ ಆ ಕಥೆಗಳನ್ನು ಕೇಳಿದವರಲ್ಲಿ ನೈತಿಕ ಪ್ರಜ್ಞೆ ಜಾಗೃತ ಆಗುತ್ತಿತ್ತು. ಇಷ್ಟಕ್ಕೂ ಪ್ರಶ್ನೆ ಕೇಳಲು ಬೇತಾಳನೇ ಆಗಬೇಕಿಲ್ಲ. ನಮ್ಮ ಅಂತಃಪ್ರಜ್ಞೆಯೇ ಸಾಕು. ಮತ್ತು ಕಥೆ ಕೇಳಲು ರಾಜನೇ ಆಗಬೇಕಿಲ್ಲ. ನಮ್ಮಂತ ಸಾಮಾನ್ಯ ಜನರು ದೈನಂದಿನ ಕಾರ್ಯಗಳಲ್ಲಿ ತೆಗೆದುಕೊಳ್ಳುವ ಸರಿ-ತಪ್ಪಿನ ನಿರ್ಧಾರಗಳನ್ನು ವಿವೇಚನೆಯಿಂದ ತೆಗೆದುಕೊಂಡರೆ ಸಾಕು.


ಇಂದಿಗೆ ನಮ್ಮ ಎಷ್ಟು ಮಕ್ಕಳಿಗೆ ವಿಕ್ರಮ ಮತ್ತು ಬೇತಾಳನ ಕಥೆಗಳು ಗೊತ್ತಿವೆ? ಅವರು 'ಮೇರಿ ಹ್ಯಾಡ್ ಎ ಲಿಟಲ್ ಲ್ಯಾಂಬ್' ಎಂದು ಹಾಡುತ್ತಾರೆ. ಈ ವಿಷಯ ಪ್ರಸ್ತಾಪಿಸಿದರೆ ನನ್ನ ಸ್ನೇಹಿತರು ಇಂಗ್ಲಿಷ್ ಮತ್ತು ತಂತ್ರಜ್ಞಾನ ಹೊಟ್ಟೆ ತುಂಬಿಸುತ್ತದೆ. ಆದರೆ ನೈತಿಕತೆಯಿಂದ ಏನು ಪ್ರಯೋಜನ ಎನ್ನುವ ಪ್ರಶ್ನೆ ಹಾಕುತ್ತಾರೆ. ವಿಜ್ಞಾನ ಮತ್ತು ತಂತ್ರಜ್ಞಾನ ಬೆಳವಣಿಗೆ ಅವಶ್ಯಕ ಮತ್ತು ಇಂಗ್ಲಿಷ್ ಅದಕ್ಕೆ ಅನುಕೂಲಕರ. ಆದರೆ ನೋಡಿ ನೈತಿಕತೆ ಇರದ ತಂತ್ರಜ್ಞಾನ ಒಡ್ಡುವ ಅಪಾಯಗಳ ಬಗ್ಗೆ ಅವರು ತಲೆ ಕೆಡಿಸಿಕೊಳ್ಳುವುದಿಲ್ಲ. ತಂತ್ರಜ್ಞಾನ ಪರಮಾಣು ಬಾಂಬ್ ಗಳನ್ನೂ ಕೂಡ ಸೃಷ್ಟಿಸುತ್ತದೆ. ಮೊದಲಿಗೆ ಅದರ ಉಪಯೋಗ ಶತ್ರುಗಳ ಮೇಲೆ. ಅವರು ನಾಶವಾದ ನಂತರ ತಮ್ಮ-ತಮ್ಮೊಳಗೆ ಜಗಳ ಹುಟ್ಟಿದರೆ?


ಮುಂದೊಂದು ದಿನ ಮಾನವ ಜಗತ್ತು ನಾಶವಾದರೆ, ಅದು ಕೇವಲ ತಂತ್ರಜ್ಞಾನದ ಬೆಳವಣಿಗೆಯಿಂದ ಅಲ್ಲ. ಅದು ನೈತಿಕತೆ ಮತ್ತು ಸರಿ-ತಪ್ಪಿನ ವಿವೇಚನೆ ಮರೆತದ್ದಕ್ಕಾಗಿ. ಮತ್ತು ಚಿಕ್ಕಂದಿನಲ್ಲಿ ವಿಕ್ರಮ ಮತ್ತು ಬೇತಾಳ ತರಹದ ಕಥೆಗಳನ್ನು ಕೇಳದಿದ್ದಕ್ಕಾಗಿ. ಎಲ್ಲ ನಾಶವಾದ ಮೇಲೆ ಕಥೆ ಹೇಳುವ ಬೇತಾಳಗಳು ಸಾಕಷ್ಟು ಹುಟ್ಟುತ್ತವೆ. ಆದರೆ ವಿವೇಚನೆಯಿಂದ ಸರಿ-ತಪ್ಪು ನಿರ್ಧಾರ ಮಾಡುವ ವಿಕ್ರಮಾದಿತ್ಯರು ಇರುವುದಿಲ್ಲ.



Monday, September 5, 2022

ಅಧಿಕಾರ ಹೋದ ಮೇಲೆ ಯಾವ ರಾಜ, ಎಲ್ಲಿಯ ಅಹಂಕಾರ

( "Tears of the Begums" ಪುಸ್ತಕದ ಒಂದು ಅಧ್ಯಾಯದ ಭಾವಾನುವಾದ)


ಮುನ್ನೂರು ವರುಷಗಳ ಕಾಲ ಭಾರತವನ್ನು ಆಳಿ ಮೆರೆದ ಮೊಗಲ್ ವಂಶಂಸ್ಥರ ಕೊನೆಯೂ ಕೂಡ ಅಷ್ಟೇ ಭೀಕರವಾಗಿತ್ತು. ೧೮೫೭ ರ ಸಿಪಾಯಿ ದಂಗೆಯ ನಂತರ ಬ್ರಿಟಿಷರ ಎದಿರೇಟಿಗೆ ಮೊಗಲ್ ಸಾಮ್ರಾಜ್ಯ ಸಂಪೂರ್ಣ ಅವನತಿ ಹೊಂದಿತು. ದೆಹಲಿಯ ಕೆಂಪು ಕೋಟೆಯಲ್ಲಿದ್ದ ರಾಜ ವಂಶಸ್ಥರ ಮನೆಗಳು ನಾಶಗೊಂಡವು. ಅರಮನೆ, ಪಲ್ಲಕ್ಕಿಗಳಿಲ್ಲದೆ ಊಟ ಅರಸಿ ಬೀದಿಗೆ ಬಂದ ಅವರುಗಳು ಪ್ರತಿಕೂಲ ವಾತಾವರಣ ಎದುರಿಸುವಲ್ಲಿ ಸೋತು ಹೋದರು. ಹೊಸ ಶತ್ರು ತಂದೊಡ್ಡಿದ ಕಷ್ಟಗಳನ್ನು ತಾಳಲಾರದೆ ಕಣ್ಮರೆಯಾದ ಇಪ್ಪತ್ತೊಂಬತ್ತು ಜನ ರಾಜ ಕುಟುಂಬದ ಸದಸ್ಯರ ಕಥೆಗಳು ಈ ಪುಸ್ತಕದಲ್ಲಿವೆ. ಅದರಲ್ಲಿ ಮುಖ್ಯವಾದದ್ದು ಮೊಗಲ್ ವಂಶದ ಕೊನೆಯ ರಾಜ ಬಹದ್ದೂರ್ ಶಾಹ್ ನದು.


ಒಂದು ವೇಳೆ ಬಹದ್ದೂರ್ ಶಾಹ್ ಸಿಪಾಯಿ ದಂಗೆಯಲ್ಲಿ ಶಾಮೀಲಾಗದಿದ್ದರೆ, ಅವನ ಜೀವನ ನೆಮ್ಮದಿಯಿಂದ ಮತ್ತು ವೈಭವದಿಂದ ಕೂಡಿರುತ್ತಿತ್ತು. ಆದರೆ ದಂಗೆ ಎದ್ದವರು ಹೆಣೆದ ಬಲೆಯಲ್ಲಿ ಅವನು ಸಿಕ್ಕಿಕೊಂಡು ಕೊನೆಯ ದಿನಗಳಲ್ಲಿ ಅವನು ದುಸ್ಥಿತಿಗೆ ಬಂದುಬಿಟ್ಟ.


ಕೊನೆಯ ಬಾರಿಗೆ ದೆಹಲಿ ಕೋಟೆಯಿಂದ ಹೊರ ನಡೆದಾಗ, ಅವನು ಮೊದಲಿಗೆ ಬಂದದ್ದು ಮೆಹಬೂಬ್-ಈ-ಇಲಾಹಿ ದರಗಾಕ್ಕೆ. ಅವನನ್ನು ಒಂದು ಖುರ್ಚಿಯಲ್ಲಿ ಹೊತ್ತು ತಂದ ಸೇವಕರನ್ನು ಬಿಟ್ಟರೆ ಅವನ ಜೊತೆಗೆ ಬೇರೆ ಯಾರು ಇರಲಿಲ್ಲ. ಅವನ ಮುಖದ ತುಂಬಾ ಚಿಂತೆ ಹೊತ್ತ ಗೆರೆಗಳು. ಹಾಗೆಯೆ ಅವನ ಬಿಳಿ ಗಡ್ಡದಲ್ಲಿ ಮಣ್ಣಿನ ಧೂಳು. ದರಗಾದಲ್ಲಿ ಅವನ ಕ್ಷೇಮ ವಿಚಾರಿಸಿದವರಲ್ಲಿ ಅವನು ಹೇಳಿದ:


"ದಂಗೆ ಎದ್ದವರನ್ನು ಬೆಂಬಲಿಸುವುದರಿಂದ ತಮಗೆ ಕೆಟ್ಟದೇ ಆಗುತ್ತದೆ ಎಂದು ತಿಳಿದಿತ್ತು. ಆದರೆ ಅದು ವಿಧಿ ಲಿಖಿತ ಆಗಿತ್ತೋ ಏನೋ? ಅವರು ಓಡಿ ಹೋದರು. ನಾನು ಭಿಕಾರಿಯಾದೆ. ತಿಮೂರನ ವಂಶಸ್ಥನಾದ ನನಗೆ ಹೋರಾಡುವುದು ರಕ್ತದಲ್ಲೇ ಬಂದಿದೆ. ನನ್ನ ಪೂರ್ವಜರು ಎಂಥಹ ಕಷ್ಟದ ಪರಿಸ್ಥಿತಿಯಲ್ಲೂ ಆಶಾವಾದಿ ಆಗಿದ್ದರು. ಆದರೆ ನನ್ನ ಕೊನೆ ನನಗೆ ಕಾಣುತ್ತಿದೆ. ತಿಮೂರನ ವಂಶದ ಕೊನೆಯ ರಾಜ ನಾನೇ ಎನ್ನುವುದರಲ್ಲಿ ನನಗೆ ಯಾವುದೇ ಸಂಶಯ ಉಳಿದಿಲ್ಲ. ಆ ವಂಶದ ಬೆಳಕು ಇನ್ನು ಕೆಲವು ಘಂಟೆಗಳಲ್ಲಿ ಆರಿ ಹೋಗಲಿದೆ. ಅಂದ ಮೇಲೆ ಮತ್ತೆ ರಕ್ತಪಾತ ಮಾಡಿ ಏನು ಪ್ರಯೋಜನ? ಅದಕ್ಕೆ ನಾನು ಕೋಟೆ ಬಿಟ್ಟು ಬಂದದ್ದು. 


ಈ ದೇಶ ಭಗವಂತನಿಗೆ ಸೇರಿದ್ದು. ಅವನು ಇಚ್ಛಿಸಿದವರು ಇಲ್ಲಿ ಅಧಿಕಾರ ನಡೆಸುತ್ತಾರೆ. ನನ್ನ ವಂಶಸ್ಥರು ಹಿಂದುಸ್ಥಾನವನ್ನು ನೂರಾರು ವರುಷಗಳ ಕಾಲ ತೋಳ್ಬಲದಿಂದ ವೈರಿಗಳನ್ನು ಹೆದರಿಸಿ ರಾಜ್ಯಭಾರ ಮಾಡಿದರು. ಈಗ ಬೇರೆಯವರಿಗೆ ಅಧಿಕಾರ ನಡೆಸಲು ಅವಕಾಶ. ನಾವು ಆಳಿಸಿಕೊಳ್ಳುವವರಾಗುತ್ತೀವಿ. ಅವರು ಆಳುವವರಾಗುತ್ತಾರೆ. ನಮ್ಮ ಮೇಲೆ ಯಾರೂ ಅನುಕಂಪ ತೋರಿಸುವ ಅಗತ್ಯ ಇಲ್ಲ. ನಾವು ಬೇರೆಯವರ ವಂಶ ಕೊನೆಗೊಳಿಸಿಯೇ  ಸಿಂಹಾಸನ ಏರಿದ್ದು.


ಇಂದಿಗೆ ನಾವುಗಳು ಸಾವಿನ ತುದಿಯಲ್ಲಿ ನಿಂತಿದ್ದೇವೆ. ಕಳೆದ ಮೂರು ಹೊತ್ತಿನ ಊಟ ನಮಗೆ ಸಿಕ್ಕಿಯೇ ಇಲ್ಲ. ನಿಮ್ಮ ಮನೆಯಲ್ಲಿ ಏನಾದರು ತಿನ್ನಲಿಕ್ಕೆ ಇದ್ದರೆ ತಂದು ಕೊಡಿ"


ತನ್ನ ಮೆಲ್ಲನೆಯ ಧ್ವನಿಯ ಮಾತು ಮುಗಿಸಿದ ಕೊನೆಯ ಮೊಘಲ್ ಚಕ್ರವರ್ತಿ. ಅಲ್ಲಿಂದ ಅವನು ಹುಮಾಯುನ್ ನ ಸಮಾಧಿಗೆ ತೆರಳಿದ. ಅಲ್ಲಿ ಅವನನ್ನು ಬಂಧಿಸಲಾಯಿತು. ಬಂಧನದಲ್ಲಿ ತನ್ನ ಕೊನೆಯ ಉಸಿರು ಹೋಗುವವರೆಗೆ ಆಧ್ಯಾತ್ಮಿಕ ಸಾಧನೆಯ ಕಡೆಗೆ ತನ್ನ ಮನಸ್ಸು ಹೊರಳಿಸಿದ್ದ ಬಹದ್ದೂರ್ ಶಾಹ್ ಜಫರ್.


ಈ ನಿಜ ಕಥೆ ಎಲ್ಲಾ ಮಾನವರಿಗೂ ಎಚ್ಚರಿಕೆಯ ಘಂಟೆ. ಇದಾದ ಮೇಲೆಯೂ ಅಹಂಕಾರ ಕಡಿಮೆ ಮಾಡಿಕೊಳ್ಳದಿದ್ದರೆ ಅವರಿಗೆ ಜೀವನವೇ ಪಾಠ ಕಲಿಸುತ್ತದೆ.



Saturday, September 3, 2022

ಮನದಾಸೆಗಳನ್ನು ಗೆಲ್ಲದೇ ಮಠ ಕಟ್ಟುವವರು

ಕನ್ನಡ ನಾಡಿನಲ್ಲಿ ಮಠ ಕಟ್ಟಿದ ಸಂತರು ಅನೇಕ. ಸಿದ್ಧಾರೂಢರಿಂದ, ಶಿವಕುಮಾರ ಸ್ವಾಮಿಗಳವರೆಗೆ. ಅವರು ಕಟ್ಟಿದ ಮಠಗಳಿಂದ ಸಮಾಜಕ್ಕೆ ಆದ ಪ್ರಯೋಜನ ಅಪಾರ. ಮಠ ಬಿಟ್ಟು ಅವರಿಗೆ ಪ್ರತ್ಯೇಕ ಜೀವನ ಎನ್ನುವುದು ಇರಲಿಕ್ಕಿರಲಿಲ್ಲ. ಅಷ್ಟೇ ಪ್ರಮುಖವಾಗಿದ್ದದ್ದು ಚಿತ್ರದುರ್ಗದ ಬೃಹನ್ಮಠ. ಆದರೆ ಅದರ ಜವಾಬ್ದಾರಿ ಹೊತ್ತು ಹೆಸರು ಗಳಿಸಿದ್ದ ಮಠಾಧೀಶರು ತಂದುಕೊಂಡ ಅಪವಾದ ಜನಸಾಮಾನ್ಯರಿಗೆ ಮಠಗಳ ಮೇಲಿನ ನಂಬಿಕೆ ಕುಸಿಯುವಂತೆ ಮಾಡುತ್ತದೆ.


"Every saint has a past and every sinner has a future". ಎಲ್ಲ ಸಂತರಿಗೂ ಗತ ಕಾಲ ಇರುತ್ತದೆ. ಅದನ್ನು ದಾಟಿ ಬಂದ ಮೇಲೆ ಅವರು ಸಂತರಾಗುವುದು. ಆದರೆ ಅವರು ವರ್ತಮಾನದಲ್ಲೂ ಕೂಡ ಮನದಾಸೆಗಳಿಗೆ ಕಟ್ಟು ಬಿದ್ದರೆ, ಅವರಲ್ಲಿ ಲೈಂಗಿಕ ದಾಹ ಇಂಗಿರದಿದ್ದರೆ, ಅವರು ನಿಜವಾದ ಸಂತರಲ್ಲ. ಅವರು ಸಾಮಾನ್ಯ ಮನುಷ್ಯರಂತೆ ಸಂಸಾರಿಯಾಗುವುದು ವಾಸಿ. ಹೊರ ಜಗತ್ತಿಗೆ ಧರ್ಮ ಸಾರುತ್ತ, ಅಂತರಂಗದಲ್ಲಿ ಅಧರ್ಮದ ಕೆಲಸಗಳಿಗೆ ಇಳಿದರೆ ಅದು ಇತರೆ ಮಠಾಧೀಶರನ್ನು ಕೂಡ ಅನುಮಾನದಿಂದ ನೋಡುವಂತೆ ಮಾಡುತ್ತದೆ.


ಮಠಾಧೀಶರು ಕೂಡ ಕಾನೂನಿಗಿಂತ ದೊಡ್ದವರೇನಲ್ಲ ಎನ್ನುವುದು ಇವತ್ತಿನ ಬೆಳವಣಿಗೆಗಳು ಸಾಬೀತು ಪಡಿಸುತ್ತಿವೆ. ಆದರೆ ಮಠದ ಒಳಗಡೆ ಅವರೇ ಸರ್ವಾಧಿಕಾರಿಗಳು ಅಲ್ಲವೇ? ಅದನ್ನು ಅವರು ದುರುಪಯೋಗ ಮಾಡಿಕೊಂಡರೆ ಯಾರಿಗೆ ದೂರುವುದು? ಹಾಗಾಗಿ ಎಷ್ಟೋ ಪ್ರಕರಣಗಳು ಬೆಳಕಿಗೆ ಬರದೇ ಮುಚ್ಚಿ ಹೋಗಿಬಿಡಬಹುದು. ಮಠದ ಶಾಲೆಗಳಲ್ಲಿ ಓದುತ್ತಿರುವ ಎಷ್ಟು ವಿದ್ಯಾರ್ಥಿಗಳಿಗೆ ಮಠಾಧೀಶರನ್ನು ವಿರೋಧಿಸುವ ಧೈರ್ಯ ಇರುತ್ತದೆ? ಅವರ ಆರ್ಥಿಕ, ಸಾಮಾಜಿಕ ಪರಿಸ್ಥಿತಿಗಳು ಅವರನ್ನು ಪ್ರತಿಭಟಿಸದಂತೆ ತಡೆಯಬಹುದು. ಅಲ್ಲದೆ ಅವರ ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನ ಮಠ ನಡೆಸುವವರು ಮಾಡುತ್ತಾರಲ್ಲ. ಅವೆಲ್ಲ ಸೇರಿ, ಸಮಸ್ಯೆ ದೊಡ್ಡ ಹಂತ ತಲುಪುವವರೆಗೆ ಸಾರ್ವಜನಿಕರಿಗೆ ಅದರ ಸುಳಿವು ಸಿಗದಂತೆ ಆಗಿಬಿಡುತ್ತದೆ. ಕೊನೆಗೆ ವಿಷಯ ಹೊರ ಬಿದ್ದಾಗ, ಎಲ್ಲ ಟಿವಿ ಚಾನೆಲ್ ಗಳು ಮುಗಿ ಬಿದ್ದು ಅದನ್ನೇ ತೋರಿಸುತ್ತಾರೆ. ಆಗ ತಮ್ಮ ಮಕ್ಕಳನ್ನು ಮಠದ ಶಾಲೆಗಳಲ್ಲಿ ಬಿಟ್ಟ ಪೋಷಕರಿಗೆ ಆತಂಕವಾಗುವುದು ಸಹಜ.


ಧರ್ಮ ಎತ್ತಿ ಹಿಡಿಯಬೇಕಾದವರು ಅಧರ್ಮದ ಹಾದಿ ತುಳಿದಾಗ ಅದರಿಂದ ಆಗುವ ಹಾನಿ ಅಪಾರ. ದೇವಸ್ಥಾನಕ್ಕೆ ಹೋದಾಗ ಪ್ರಸಾದವನ್ನು ಕಣ್ಣು ಮುಚ್ಚಿಕೊಂಡು ತಿನ್ನುವ ನಾವುಗಳು ಅದು ವಿಷ ಆಗಿರಬಹುದೇ ಎನ್ನುವ ವಿಚಾರ ಕ್ಷಣ ಕಾಲಕ್ಕೂ ಮಾಡುವುದಿಲ್ಲ. ಹಾಗೆಯೆ ಮಠದ ಶಾಲೆಗಳಿಗೆ ಈ ಘಟನೆಯಿಂದ ಆಗುವ ಆಘಾತ ಬಹು ಕಾಲದವರೆಗೆ ಕಣ್ಮರೆಯಾಗುವುದಿಲ್ಲ.