Thursday, July 29, 2021

ಆಸೆಯ ಮೂಲ?

ಆಸೆಯೇ ದುಃಖಕ್ಕೆ ಮೂಲ ಎಂದ ಬುದ್ಧ. ಸರಿ, ಆದರೆ ಆಸೆಯ ಮೂಲ ಯಾವುದು? ಆಸೆಗಳಿಗೆ ಕೊನೆಯಿಲ್ಲದಂತೆ ಆಗಿದ್ದು ಹೇಗೆ? ಅದರ ಬಗ್ಗೆ ಬುದ್ಧ ಏನು ಹೇಳಿದ್ದಾನೋ ಗೊತ್ತಿಲ್ಲ. ಆದರೆ ಪ್ರಕೃತಿ ವಿಕಾಸ (Evolution) ಇದರ ಬಗ್ಗೆ ಸಾಕಷ್ಟು ಬೆಳಕು ಚೆಲ್ಲುತ್ತದೆ.


ಪ್ರಕೃತಿ ಸಹಸ್ರಾರು ಜೀವಿಗಳನ್ನು ಸೃಷ್ಟಿಸಿ, ಅವುಗಳು ನಿರಂತರ ವಿಕಾಸ ಹೊಂದುವ ಪ್ರಕ್ರಿಯೆಯನ್ನು ಸದಾ ಜಾರಿಯಲ್ಲಿ ಇಟ್ಟಿರುತ್ತದೆ. ಪರಿಸರಕ್ಕೆ ತಕ್ಕಂತೆ ಬದಲಾವಣೆ ಹೊಂದಬಲ್ಲ ಜೀವಿಗಳು ಮಾತ್ರ ಉಳಿದುಕೊಂಡು ತಮ್ಮ ವಂಶವನ್ನು ಮುಂದುವರೆಸಿಕೊಂಡು ಹೋಗುತ್ತವೆ. ಉಳಿದವುಗಳನ್ನು ನಿರ್ದಾಕ್ಷಿಣ್ಯವಾಗಿ ಪ್ರಕೃತಿ ಹೊಸಕಿ ಹಾಕುತ್ತದೆ. ಈ ವಿಕಾಸ ಹೊಂದುವ ಪ್ರಕ್ರಿಯೆ ಮುಂದುವರೆದುಕೊಂಡು ಹೋಗಲು, ಪ್ರಕೃತಿ ಎಲ್ಲ ಜೀವಿಗಳಲ್ಲಿ, ತಾನು ಸ್ವಾರ್ಥಿಯಾಗುವಂತೆ, ಎಂತಹ ಪರಿಸ್ಥಿತಿಯಲ್ಲೂ ಮೊದಲು ತನಗೆ ಆಹಾರ ಹುಡುಕಿಕೊಳ್ಳುವಂತೆ, ತನ್ನ ಪ್ರಾಣ ಕಾಪಾಡಿಕೊಳ್ಳುವಂತೆ, ತನ್ನ ವಂಶ ಮುಂದುವರೆಯುವಂತೆ ಮಾಡುವ ಸ್ವಭಾವಗಳನ್ನು ಹುಟ್ಟಿನಿಂದಲೇ ಬರುವ ಏರ್ಪಾಡು ಮಾಡುತ್ತದೆ. ಆಸೆ ಮತ್ತು ನೋವು ಈ ಸ್ವಭಾವಗಳ ಎರಡು ಮುಖಗಳು. ನೋವೇ ಆಗದಿದ್ದರೆ ಮನುಷ್ಯ ತನ್ನ ದೇಹಕ್ಕೆ ಕಾಳಜಿ ಮಾಡುತ್ತಿದ್ದನೇ? ಅದಕ್ಕೆ ನೋಡಿ, ಯಾವುದೇ ಗಾಯ ಉಲ್ಬಣವಾಗುವುದಕ್ಕೆ ಮುನ್ನವೇ ನೋವು ಉಂಟು ಮಾಡಿ ದೇಹದ ಕಡೆಗೆ ಗಮನ ಹರಿಸುವಂತೆ ಮಾಡುವ ವ್ಯವಸ್ಥೆ ಪ್ರಕೃತಿ ಮನುಷ್ಯನನ್ನು ಸೇರಿದಂತೆ ಎಲ್ಲ ಪ್ರಾಣಿ, ಪಕ್ಷಿಗಳಲ್ಲಿ ಮಾಡಿದೆ. ಹಾಗೆಯೇ, ವಿಕಾಸ ಹೊಂದುವುದಕ್ಕೆ ಆಸೆಯನ್ನು ಎಲ್ಲ ಜೀವಿಗಳಲ್ಲಿ ಹುಟ್ಟು ಗುಣವನ್ನಾಗಿಸಿದೆ. ಆದರೆ ಮನುಷ್ಯರಲ್ಲಿ ಮಾತ್ರ ಆಸೆಗಳಿಗೆ ಮಿತಿಯೇ ಇಲ್ಲ ಎನ್ನುವಂತೆ ಆಗಿರುವುದು ಪ್ರಕೃತಿ ನಮಗೆ ಹೆಚ್ಚಿಗೆ ಕೊಟ್ಟ ಬುದ್ದಿವಂತಿಕೆಯಿಂದ. ಆಸೆಗಳು ಹೆಚ್ಚಾದಷ್ಟು ದುಃಖವು ಹೆಚ್ಚಾಗುತ್ತದೆ ಎನ್ನುವುದು ಮಾತ್ರ ಬುದ್ಧ ನಮಗೆ ತಿಳಿಸಿಕೊಟ್ಟ.


ಆಸೆಗಳನ್ನೇ ಬೇಡ ಎಂದು ತಿರಸ್ಕಿರಿಸದರೆ ಏನಾಗುತ್ತದೆ? ಅದು ಪ್ರಕೃತಿಯ ವಿರುದ್ಧದ ಈಜಾಗುತ್ತದೆ. ನಾವು ಆಸೆಗಳನ್ನು ಅದುಮಿಕೊಂಡರೂ, ಪ್ರಕೃತಿ ನಮ್ಮನ್ನು ಮತ್ತೆ ವಿಕಾಸದ ಕಡೆಗೆ ಸೆಳೆಯುವ ಪ್ರಯತ್ನ ಮಾಡುತ್ತಲೇ ಇರುತ್ತದೆ. ಅದಕ್ಕೆ ಬುದ್ಧ, ಮಹಾವೀರ, ಸ್ವಾಮಿ ವಿವೇಕಾನಂದ ತರಹದ ಕೆಲವೇ ಜನರಿಗೆ ಮಾತ್ರ ಆಧ್ಯಾತ್ಮ ಒಲಿಸಿಕೊಳ್ಳಲು ಸಾಧ್ಯವಾಯಿತು. ಕೊನೆಯಿಲ್ಲದ, ನಿರಂತರ ವಿಕಾಸದ ವಿರುದ್ಧ ದಿಕ್ಕಿನೆಡೆ ಅವರು ಸಾಗಿ ಪ್ರಕೃತಿಯ ಬಿಗಿ ಮುಷ್ಟಿಯಿಂದ ಪಾರಾದರು. ಪ್ರಕೃತಿಗೆ ಸಾಧು-ಸಂತರಿಂದ ಏನೂ ಉಪಯೋಗವಿಲ್ಲ. ಅದಕ್ಕೆ ಅದು ಆಸೆಗಳಿಗೆ ಶರಣಾಗುವ ನಮ್ಮ ನಿಮ್ಮಂಥವರನ್ನೇ ಅವಲಂಬಿಸಿದೆ. ಒಬ್ಬೊಬ್ಬರಿಗೆ ಒಂದೊಂದು ತರಹದ ಹುಚ್ಚು ಹತ್ತಿಸಿ ತನ್ನ ಕಾರ್ಯ ಸಾಧಿಸಿಕೊಳ್ಳುತ್ತದೆ. ಆಸೆಗಳನ್ನು ಮೆಟ್ಟಿ ನಿಂತವರನ್ನು ತನ್ನಲ್ಲಿ ಲೀನವಾಗಿಸಿಕೊಂಡು ಪುನರ್ಜನ್ಮವಿಲ್ಲದಂತೆ ಮಾಡಿಬಿಡುತ್ತದೆ. (ಇದು ನನ್ನ ಅಭಿಪ್ರಾಯ ಅಷ್ಟೇ, ಯಾವ ಅನುಭವವು ನನಗಿಲ್ಲ).


ಪ್ರಕೃತಿಗೆ ವಿಕಾಸ ಮುಖ್ಯ. ನಿರ್ದಿಷ್ಟ ಮನುಷ್ಯನಲ್ಲ. ಆಸೆಯೇ ಇರದಿದ್ದರೆ, ಬದಲಾವಣೆ ಮತ್ತು ಪ್ರಗತಿ ಹೇಗೆ ಸಾಧ್ಯ? ಪ್ರಕೃತಿ ವಿಕಾಸ ನಿರಂತರವಾಗಿ ಸಾಗಲು ಆಸೆಗಳ ನೆರವು ಪ್ರಕೃತಿಗೆ ಅತ್ಯವಶಕ. ಅದಕ್ಕೆ ಅದು ಬದಲಾವಣೆ ಬಯಸದವರನ್ನು ಹಿಂದಕ್ಕೆ ಬಿಟ್ಟು, ಆಸೆಯ ತೆವಲಿಗೆ ಬಿದ್ದವರನ್ನು ತನ್ನ ದಾಳವನ್ನಾಗಿಸಿಕೊಳ್ಳುತ್ತದೆ. ಸತ್ಯ ಕಂಡುಕೊಂಡ ಕೆಲವೇ ಕೆಲವರು ಈ ಆಟದಿಂದ ದೂರ ಸರಿದರೆ, ಉಳಿದವರೆಲ್ಲ ಆಸೆಗಳ ಬೆಂಬತ್ತಿ ಜೀವನ ಸವೆಸುತ್ತಾರೆ. ಅದಕ್ಕೆ ಬುದ್ಧ 'ಆಸೆಯೇ ದುಃಖಕ್ಕೆ ಮೂಲ' ಎಂದು ಎರಡು ಸಾವಿರ ವರುಷಗಳ ಹಿಂದೆಯೇ ಸಾರಿ ಹೇಳಿದರೂ, ಮನುಜ ಕುಲ ಕಿಂಚಿತ್ತಾದರೂ ಬದಲಾಗದೇ, ಇನ್ನು ಹೆಚ್ಚಿನ ಆಸೆಬುರುಕರಾಗಿರುವುದು.

Sunday, July 25, 2021

ಪುಸ್ತಕ ಪರಿಚಯ: ತೇಜೋ-ತುಂಗಭದ್ರಾ (ಲೇಖಕರು: ವಸುಧೇಂದ್ರ)

ಇದು ಹದಿನೈದನೇ ಶತಮಾನದಲ್ಲಿ ನಡೆಯುವ ಕಥಾ ವಸ್ತುವನ್ನು ಹೊಂದಿದೆ. ಪೋರ್ಚುಗೀಸ್ ದೇಶದ ತೇಜೋ ನದಿ ದಡದ, ಲಿಸ್ಬನ್ ನಗರದಲ್ಲಿ ವಾಸಿಸುವ ಗೇಬ್ರಿಯಲ್ ಮತ್ತು ವಿಜಯನಗರ ಸಾಮ್ರಾಜ್ಯದಲ್ಲಿ, ತುಂಗಭದ್ರಾ ನದಿ ದಡದಲ್ಲಿರುವ ತೆಂಬಕಪುರದಲ್ಲಿ ವಾಸಿಸುವ ಹಂಪಮ್ಮ ಈ ಕಾದಂಬರಿಯ ಕೇಂದ್ರ ಬಿಂದುಗಳು. ಅವರಲ್ಲದೇ ಇನ್ನೂ ಹತ್ತಾರು ಪಾತ್ರಗಳು ತಮ್ಮ ಕಥೆಗಳನ್ನು ಹೇಳುತ್ತಾ ವಿಶಿಷ್ಟ ಛಾಪು ಮೂಡಿಸುತ್ತಾರೆ.


ಕ್ರಿಶ್ಚಿಯನ್ ಆದ ಗೇಬ್ರಿಯಲ್ ಗೆ, ಯಹೂದಿ ಧರ್ಮಕ್ಕೆ ಸೇರಿದ ಬೆಲ್ಲಾಳನ್ನು ಮದುವೆಯಾಗುವ ಆಸೆ. ಆದರೆ ಅವಳ ಅಪ್ಪ ಶ್ರೀಮಂತರಿಗೆ ಮಾತ್ರ ತನ್ನ ಮಗಳು ಸಿಗುವುದು ಎಂದು ಸ್ಪಷ್ಟ ಪಡಿಸಿದ ಮೇಲೆ, ಹೇಗಾದರೂ ತನ್ನ ಬಡತನ ಕಳೆದುಕೊಳ್ಳುವ ಉದ್ದೇಶದಿಂದ, ಶ್ರೀಮಂತಿಕೆ-ವೈಭವದಿಂದ ಮೆರೆಯುವ ಭಾರತಕ್ಕೆ, ಹಣ ಗಳಿಸುವುದಕ್ಕಾಗಿ ತೆರಳುತ್ತಾನೆ. ಅಷ್ಟರಲ್ಲಾಗಲೇ ವಾಸ್ಕೋ-ಡಾ-ಗಮ ಭಾರತಕ್ಕೆ ಸಮುದ್ರ ಮಾರ್ಗ ಕಂಡು ಹಿಡಿದಿದ್ದನಲ್ಲ. ಅವನ ಹಡಗುಗಳು ಮಸಾಲೆ, ರತ್ನ-ವೈಡೂರ್ಯಗಳನ್ನು ಹೊತ್ತು ತಂದು, ಅವನ ಜೊತೆಗಾರರನ್ನು ಶ್ರೀಮಂತರನ್ನಾಗಿಸುವುದಲ್ಲದೆ ರಾಜ ಮನೆತನದ ಬೊಕ್ಕಸವನ್ನು ಕೂಡ ತುಂಬಿದ್ದವು. ಭಾರತದೊಡನೆ ವ್ಯಾಪಾರ ಮಾಡಿದರೆ ಬಡತನ ಕಳೆದುಹೋಗುವುದು ಸುಲಭ ಎನ್ನುವುದು ಎಲ್ಲ ಸಾಮಾನ್ಯ ಜನರಿಗೂ ಗೊತ್ತಾಗಿ ಹೋಗಿತ್ತು.


ತೆಂಬಕಪುರದಲ್ಲಿ ಹಂಪಮ್ಮಳನ್ನು ಮದುವೆಯಾಗುವ ಉದ್ದೇಶದಿಂದ ಇಬ್ಬರು ಜಟ್ಟಿಗಳು ಕಾಳಗಕ್ಕೆ ಇಳಿದಿದ್ದರು. ಸೋತವನು ಸತ್ತರೆ, ಗೆದ್ದವನಿಗೆ ಹಂಪಮ್ಮಳ ಕೈ ಹಿಡಿಯುವ ಅದೃಷ್ಟ. ಆ ಕಾಳಗ ನೋಡಲು, ಸ್ವತಃ ಶ್ರೀಕೃಷ್ಣದೇವರಾಯರೇ ತಮ್ಮ ರಾಣಿಯರ ಜೊತೆ ತೆಂಬಕಪುರಕ್ಕೆ ಆಗಮಿಸಿದ್ದರಲ್ಲ. ಅದರಲ್ಲಿ ಗೆದ್ದ ಕೇಶವ ಹಂಪಮ್ಮಳನ್ನು ಮದುವೆಯಾದರೂ, ಕೆಲವೇ ವರುಷಗಳಿಗೆ ಕೃಷ್ಣದೇವರಾಯರಿಗೆ ಗಂಡು ಮಗುವಾದಾಗ, ಲೆಂಕನಾಗಿ ಪ್ರಾಣ ತೆರುತ್ತಾನೆ. ಸಹಗಮನಕ್ಕೆ ಒಪ್ಪದ, ಆಗಲೇ ಗರ್ಭಿಣಿಯಾಗಿದ್ದ ಹಂಪಮ್ಮ, ತಪ್ಪಿಸಿಕೊಂಡು ನದಿ ದಾಟುತ್ತಾಳೆ.


ಭಾರತಕ್ಕೆ ಬಂದು ತಲುಪಿದ ಗೇಬ್ರಿಯಲ್, ಗೋವಾದಲ್ಲಿ ಬಿಜಾಪುರ ಸುಲ್ತಾನರ ಕೈಗೆ ಸಿಕ್ಕು, ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡು, ಅಹ್ಮದ್ ಖಾನ್ ನಾಗಿ ಬದಲುಗುತ್ತಾನೆ. ಮತ್ತೆ ಪೋರ್ಚುಗೀಸ್ ರ ಧಾಳಿಗೆ ಸಿಕ್ಕು ತನ್ನ ಕಿವಿ-ಮೂಗುಗಳನ್ನು ಕೊಯ್ಯಿಸಿಕೊಂಡು ವಿರೂಪಗೊಳ್ಳುತ್ತಾನೆ. ಕೊನೆಗೆ ವಿಜಯನಗರಕ್ಕೆ ಬಂದು ನೆಲೆಗೊಳ್ಳುತ್ತಾನೆ. ಅವನ ಹೆಸರು ಕನ್ನಡಕ್ಕೆ ರೂಪಾಂತರಗೊಂಡು  ಅಮ್ಮದಕಣ್ಣ ನಾಗಿ ಬದಲಾಗುತ್ತದೆ.


ನದಿ ದಾಟಿ ಬಂದ ಹಂಪಮ್ಮಳಿಗೆ, ಅವಳನ್ನು ಕೊಲ್ಲಲು ಹಿಂದೆ ಬೆನ್ನಟ್ಟಿ ಬರುತ್ತಿರುವವರಿಂದ ಕಾಪಾಡುವ ಉದ್ದೇಶದಿಂದ ಅಮ್ಮದಕಣ್ಣ, ಹಂಪಮ್ಮಳನ್ನು ತನ್ನ ಕುದುರೆಯ ಮೇಲೆ ಗೋವಾ ಗೆ ಕರೆದೊಯ್ಯುತ್ತಾನೆ. ಮಾರ್ಗ ಮಧ್ಯದಲ್ಲಿ ಪುರಂದರ ದಾಸರ ದರ್ಶನವಾಗಿ ಅವರು ಇವರನ್ನು ಹರಸುತ್ತಾರೆ. ಗೋವಾ ತಲುಪಿ ಪೋರ್ಚುಗೀಸ್ ರ ಆಶ್ರಯ ಪಡೆಯುವ ಹಂಪಮ್ಮ, ತನಗೆ ನೆರವಾದ ಅಮ್ಮದಕಣ್ಣನನ್ನು ತನಗೆ ಜೋಡಿಯಾಗುವಂತೆ ಕೇಳಿಕೊಳ್ಳುತ್ತಾಳೆ.


ಪರದೇಶದವನಿಗೆ ಆಶ್ರಯ ಕೊಟ್ಟ ಹಂಪೆ, ತನ್ನದೇ ನಾಡಿನವಳಿಗೆ ಹೊರ ಹೋಗುವಂತ ಸನ್ನಿವೇಶ ಸೃಷ್ಟಿಸುವ ವಿಪರ್ಯಾಸ ಈ ಕಥೆಯಲ್ಲಿದೆ. ಸಣ್ಣ ಕಥೆಗಳಲ್ಲಿರುವ ಸೂಕ್ಷ್ಮತೆ, ಆರ್ದ್ರತೆ ಈ ಕಾದಂಬರಿ ಉದ್ದಕ್ಕೂ ಕಾಪಾಡಿಕೊಂಡು ಬಂದಿದ್ದಾರೆ ಲೇಖಕರು. ಐದು ನೂರು ವರುಷಗಳ ಹಿಂದೆ ಇದ್ದ ಸಮಾಜದ ಸಂಸ್ಕೃತಿ, ಧರ್ಮ-ಅಧರ್ಮದ ವಿಮರ್ಶೆ, ಸಾಮಾಜಿಕ ಸ್ಥಿತಿ-ಗತಿಗಳು, ಮತ್ತು ಜೀವನಶೈಲಿ ಇವುಗಳನ್ನು ವಾಸ್ತವಕ್ಕೆ ಹತ್ತಿರವಾಗಿ ಅಕ್ಷರಗಳಲ್ಲಿ ಈ ಕೃತಿಯ ಮೂಲಕ ಮೂಡಿಸಿದ್ದಾರೆ ಲೇಖಕ ವಸುಧೇಂದ್ರ. ಬಡತನ-ಹಸಿವು, ಧರ್ಮ ಮತ್ತು ರಾಜಭಕ್ತಿಗಳನ್ನು ಮೀರಿದ್ದು, ಹಾಗೆಯೇ ಮನುಷ್ಯ ತನ್ನ ಅಧಿಕಾರ ದಾಹಕ್ಕೆ ಧರ್ಮ ಮತ್ತು ಕ್ರೌರ್ಯಗಳನ್ನು ಹೇಗೆ ಬಳಸಿಕೊಳ್ಳುತ್ತಾನೆ ಎಂದು ಈ ಕಾದಂಬರಿಯ ಕೆಲವು ಪಾತ್ರಗಳು ಸ್ಪಷ್ಟ ಪಡಿಸುತ್ತವೆ. 


ಇತಿಹಾಸಕ್ಕೆ, ಸಮಾಜಕ್ಕೆ ಮತ್ತು ಮನುಷ್ಯ ವರ್ಗಕ್ಕೆ ಕನ್ನಡಿ ಹಿಡಿಯುವ ಕೃತಿಯಾಗಿದೆ ಈ ಕಾದಂಬರಿ.




Wednesday, July 14, 2021

ಪರಿಸ್ಥಿತಿ vs. ನಾಯಕ

ಕಾಲಮಾನ, ಸನ್ನಿವೇಶಗಳು ನಾಯಕರನ್ನು ಸೃಷ್ಟಿಸುತ್ತವೆ ಎಂದು ಹೇಳಿದ್ದು ಲಿಯೋ ಟಾಲ್ಸ್ಟಾಯ್. ಅದಕ್ಕೆ ತದ್ವಿರುದ್ಧವಾಗಿ, ನಾಯಕರು ಸನ್ನಿವೇಶಗಳನ್ನು ಸೃಷ್ಟಿಸುತ್ತಾರೆ ಮತ್ತು ಕಾಲಮಾನವನ್ನು ಪ್ರಭಾವಗೊಳಿಸುತ್ತಾರೆ ಎಂದು ಹೇಳಿದ್ದು ಥಾಮಸ್ ಕಾರ್ಲೈಲ್. ಒಬ್ಬರದು ನಾಯಕರು ಇತಿಹಾಸದ ಕೈಗೊಂಬೆ ಎನ್ನುವ ಅಭಿಪ್ರಾಯ. ಇತಿಹಾಸ ಎನ್ನುವುದು ಮಹಾನ್ ನಾಯಕರ ಆತ್ಮ ಚರಿತ್ರೆ ಎನ್ನುವುದು ಇನ್ನೊಬ್ಬರ ಅಭಿಪ್ರಾಯ.


ಹಿಟ್ಲರ್, ಸ್ಟಾಲಿನ್, ಮಾವೋ ಮುಂತಾದವರು ತಮ್ಮ ಬಿಗಿ ಹಿಡಿತದಿಂದ ಚರಿತ್ರೆ ಸೃಷ್ಟಿಸಿದರೆ, ಇಂದಿಗೆ ಸಾಕಷ್ಟು ದೇಶಗಳಲ್ಲಿ ಒಬ್ಬ ವ್ಯಕ್ತಿಯಲ್ಲಿ ಸಂಪೂರ್ಣ ಅಧಿಕಾರ ಕೇಂದ್ರೀಕೃತವಾಗುವ ಬದಲು ಒಂದು ವ್ಯವಸ್ಥೆ, ಸಮೂಹ ಮತ್ತು ಸಂಸ್ಥೆಗಳು ಜವಾಬ್ದಾರಿಯ ನಿರ್ವಹಣೆ ಮಾಡುತ್ತವೆ.


ಕೆಲವು ನಾಯಕರು ಎಲ್ಲ ನಿರ್ಧಾರಗಳನ್ನು ತಾವು ತೆಗೆದುಕೊಳ್ಳದೆ, ಸಂಘ, ಸಂಸ್ಥೆಗಳನ್ನು ಹುಟ್ಟು ಹಾಕಿ ಅವುಗಳು ತೆಗೆದುಕೊಳ್ಳುವ ನಿರ್ಧಾರಕ್ಕೆ ಬೆಲೆ ಕೊಟ್ಟ ಉದಾಹರಣೆಗಳು ಇವೆ. ಹಾಗೆಯೆ, ಸಂಘ, ಸಂಸ್ಥೆಗಳಿಂದ ಬೆಳಕಿಗೆ ಬಂದ ಕೆಲವು ನಾಯಕರು ಅದನ್ನು ಮೀರಿ ಬೆಳೆದು, ಅಧಿಕಾರವನ್ನು ತಮ್ಮ ಕೈಗೆ ತೆಗೆದುಕೊಂಡ ಉದಾಹರಣೆಗಳು ಇವೆ.


ವ್ಯಕ್ತಿಗಿಂತ ಸಿದ್ಧಾಂತ ಮುಖ್ಯ ಎನ್ನುವವವರು ಇದ್ದಾರೆ. ವ್ಯಕ್ತಿಯೇ ಸಿದ್ಧಾಂತವಾದ ಉದಾಹರಣೆಗಳು ಕೂಡ ಇವೆ. ಒಳ್ಳೆಯ ನಾಯಕರಿಲ್ಲದ ದೇಶದ್ದು ದುರಾದೃಷ್ಟ ಎನ್ನುವ ವಾದ ಇದೆ. ನಾಯಕರ ಮೇಲೆ ಅವಲಂಬಿತವಾದ ದೇಶದ್ದೇ ದುರಾದೃಷ್ಟ ಎನ್ನುವ ವಾದವೂ ಕೂಡ ಇದೆ.


ಆದರೆ ಇಲ್ಲಿ ನಾವು ಗಮನಿಸಬೇಕಾದದ್ದು ನಾಯಕ ಮತ್ತು ಪರಿಸ್ಥಿತಿ ಇವರಲ್ಲಿ ಯಾರು ಮೇಲುಗೈ ಸಾಧಿಸುತ್ತಾರೆ ಎನ್ನುವುದು. ಪರಿಸ್ಥಿತಿ ಅನುಕೂಲಕರವಾಗಿದ್ದಾಗ ನಾಯಕರು ಹೇಳಿದ್ದೆಲ್ಲ ವೇದವಾಕ್ಯವಾದರೆ, ಸರ್ವಾಧಿಕಾರಿಗಳು ಪರಿಸ್ಥಿತಿ ತಮ್ಮ ಕೈ ಮೀರಿ ಹೋದ ಕೆಲವೇ ದಿನಗಳಿಗೆ ಅಂತ್ಯ ಕಂಡರು.


ಮಹಾತ್ಮಾ ಗಾಂಧಿ ೧೯೧೭ ರಲ್ಲೇ ತಮ್ಮ ಸತ್ಯಾಗ್ರಹವನ್ನು ಆರಂಭಿಸಿದಾಗ, ಅವರ ಹಿಂದೆ ೩೦ ಜನ ಹಿಂಬಾಲಕರೂ ಇರಲಿಲ್ಲ. ಆದರೆ ೧೯೪೨ ರಲ್ಲಿ ಕ್ವಿಟ್ ಇಂಡಿಯಾ ಆಗ್ರಹ ಶುರುವಾಗುವ ಹೊತ್ತಿಗೆ ಅವರಿಗೆ ೩೦ ಕೋಟಿ ಹಿಂಬಾಲಕರಿದ್ದರು. ಆ ೨೫ ವರುಷಗಳ ಅಂತರದಲ್ಲಿ, ಗಾಂಧೀಜಿ ನಂಬಿದ್ದು, ಹೇಳಿದ್ದು ಯಾವುದು ಬದಲಾಗಿರಲಿಲ್ಲ ಆದರೆ ಬದಲಾಗಿದ್ದು ಪರಿಸ್ಥಿತಿ ಮಾತ್ರ ಮತ್ತು ಅದು ಒಬ್ಬ ನಾಯಕನ ಬೆಳವಣಿಗೆಗೆ ದಾರಿ ಮಾಡಿ ಕೊಟ್ಟಿತು. 


ಬಲಿಷ್ಠ ಸೇನೆ ಕಟ್ಟಿ, ದಶಕಗಳ ಕಾಲ ಸಾಲು ಸಾಲು ಯುದ್ಧ ಗೆದ್ದ ಮಹತ್ವಾಕಾಂಕ್ಷಿ ನೆಪೋಲಿಯನ್, ಪರಿಸ್ಥಿತಿಯನ್ನು ತನ್ನ ಆಳಾಗಿ ಇಟ್ಟುಕೊಂಡಿದ್ದ. ಆದರೆ ಒಂದು ಪ್ರತಿಕೂಲ ಪರಿಸ್ಥಿತಿಯಲ್ಲಿ ಒಂದು ಯುದ್ಧ ಸೋತು, ಕೊನೆಯವರೆಗೂ ಬಂದಿಯಾಳಾಗಿ ಜೀವಿಸಬೇಕಾಯಿತು. ಬದಲಾಗಿದ್ದು ನೆಪೋಲಿಯನ್ ನ ಯುದ್ಧ ಕೌಶಲ್ಯತೆ ಅಲ್ಲ. ಪ್ರತಿಕೂಲ ಪರಿಸ್ಥಿತಿ ಮಾತ್ರ. ಅದು ಒಬ್ಬ ನಾಯಕನನ್ನು ಆಹುತಿ ತೆಗೆದುಕೊಂಡಿತು.


ಪರಿಸ್ಥಿತಿ ಮತ್ತು ನಾಯಕ ಇಬ್ಬರೂ ಶಾಶ್ವತವಲ್ಲ. ಇಬ್ಬರು ಒಬ್ಬರ ಮೇಲೆ ಇನ್ನೊಬ್ಬರು ಅವಲಂಬಿತರು. ನಾಯಕನ ಅಂತ್ಯ ಪರಿಸ್ಥಿತಿಯನ್ನು ಬದಲಾಯಿಸಬಹುದು. ಪರಿಸ್ಥಿತಿಯ ಬದಲಾವಣೆ ಹೊಸ ನಾಯಕನನ್ನು ಹುಟ್ಟು ಹಾಕಬಹುದು. ಹೊಂದಾಣಿಕೆ ಇರುವಷ್ಟು ಹೊತ್ತು ಅವರಿಬ್ಬರದು ಭಲೇ ಜೋಡಿ. ಹೊಂದಾಣಿಕೆ ಮುರಿದು ಬಿದ್ದಾಗ ಮುಗಿಯುವುದು ಮೋಡಿ.

ಸರಳ, ಸಜ್ಜನರ ಊರು ಮೈಸೂರು

ಮೈಸೂರು ಪ್ರವಾಸಿ ತಾಣವಾಗಿ, ಸಾಂಸ್ಕೃತಿಕ ಕೇಂದ್ರವಾಗಿ ನಮಗೆಲ್ಲ ಗೊತ್ತು. ನೀವು ಅಲ್ಲಿಗೆ ಹಲವಾರು ಸಲ ಭೇಟಿ ನೀಡಿದರೆ ಮತ್ತು ಕೆಲವು ದಿನ ಉಳಿದುಕೊಂಡರೆ, ಆ ಊರಿನ ಮತ್ತು ಅಲ್ಲಿನ ಜನರ ಜೀವನ ಶೈಲಿ, ಅವರ ಆದ್ಯತೆಗಳು, ಹೆಚ್ಚಿನ ಜನರ ವಿಚಾರ ಧಾಟಿ ಇವುಗಳನ್ನು ಗುರುತಿಸಬಹುದು. ಬೇರೆ ಎಲ್ಲ ಊರುಗಳಲ್ಲಿ ಇರುವ ಹಾಗೆ, ಮೈಸೂರಲ್ಲಿ ಕೂಡ ಎಲ್ಲ ತರಹದ ಜನರು ಇರಬಹುದು. ಆದರೆ ನನ್ನ ಅನುಭವದಲ್ಲಿ ಸರಳ, ಸಜ್ಜನಿಕೆಯ ಜನರು ಬೇರೆ ಊರಿಗಿಂತ ಮೈಸೂರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಲ್ಲಿ ನನಗಾದ ಮೂರು ಅನುಭವಗಳನ್ನು ಇಲ್ಲಿ ಕೊಡುತ್ತಿದ್ದೇನೆ.


೧.

ನಾವು ಸ್ನೇಹಿತರು ಒಂದು ದಿನ ಮೈಸೂರಿನಲ್ಲಿ ಸಾಯಂಕಾಲ ಕತ್ತಲಾಗುತ್ತಿರುವ ಸಮಯದಲ್ಲಿ ಕೈಯಲ್ಲಿ ವಿಳಾಸ ಹಿಡಿದುಕೊಂಡು ಆ ಮನೆಯ ಪತ್ತೆ ಹಚ್ಚುವುದಕ್ಕೆ ಪರದಾಡುತ್ತಿದ್ದೆವು. ಅಲ್ಲಿ ಒಬ್ಬರು ತಮ್ಮ ಮನೆಯ ಹೊರಗಡೆ ನಿಂತಿದ್ದರು. ಅವರ ಹತ್ತಿರ ವಿಚಾರಿಸಿದಾಗ, ಅವರು ಹತ್ತಿರದಲ್ಲೇ ಇರುವ ಆ ವಿಳಾಸಕ್ಕೆ ತಲುಪುವುದು ಹೇಗೆಂದು ಅತ್ಯಂತ ಸ್ಪಷ್ಟವಾಗಿ ಮಾರ್ಗದರ್ಶನ ನೀಡಿದರು. ಅಷ್ಟರಲ್ಲಿ ಆ ಮನೆಯಿಂದ ಹೊರ ಬಂದ ಅವರ ಪತ್ನಿ, ತಮ್ಮ ಪತಿಗೆ ನಮ್ಮ ಜೊತೆ ಹೋಗಿ ಆ ಮನೆಯವರಿಗೆ ಹೋಗಿ ನಮ್ಮನ್ನು ಬಿಟ್ಟು ಬನ್ನಿ ಎಂದು ಹೇಳಬೇಕೇ? ಆತ ತಲೆ ತಗ್ಗಿಸಿಕೊಂಡು, ಸರಿ ಹೋಗೋಣ ಬನ್ನಿ ಎಂದು ನಮ್ಮ ಜೊತೆಗೆ ಬರಲು ಸಿದ್ಧನಾದ. ನಮ್ಮ ಕಲ್ಯಾಣ ಕರ್ನಾಟಕದಲ್ಲಿ ಅಷ್ಟು ಒಳ್ಳೆಯ ಹೆಂಡತಿಯರು ಮತ್ತು ಅವರ ಮಾತು ಕೇಳುವ ಗಂಡಂದಿರು ಇರುವುದು ಮತ್ತು ಅವರು ಅಪರಿಚಿತರಿಗೆ ಸಹಾಯ ಮಾಡುವುದು ಸಾಧ್ಯವೇ?


೨.

ಇನ್ನೊಂದು ಪ್ರವಾಸದಲ್ಲಿ, ಅವತ್ತು ಶನಿವಾರ ಸಾಯಂಕಾಲವಾಗಿತ್ತು. ಮಾರ್ಕೆಟ್ ನಲ್ಲಿ, ಅಡ್ಡಾಡುತ್ತ ನನಗೆ ಕಾರು ಡೂಪ್ಲಿಕೇಟ್ ಕೀ ಮಾಡುವ ಅಂಗಡಿ ಕಾಣಿಸಿತು. ಸರಿ ನನಗೆ ಆ ಅವಶ್ಯಕತೆ ಇತ್ತಲ್ಲ. ಆ ಅಂಗಡಿಗೆ ಹೋದೆ. ಅವನು ಕೀ ಮಾಡುವುದಲ್ಲದೆ, ಅದನ್ನು ಕಾರಿನಲ್ಲಿಟ್ಟು ಒಂದು ಸಾಫ್ಟ್ ವೇರ್ ಕೋಡ್ ಕೂಡ  ನಕಲು ಮಾಡಬೇಕಿತ್ತು. ಅವನು ಎಷ್ಟು ಪ್ರಯತ್ನ ಪಟ್ಟರೂ ಅದು ಆಗಲೊಲ್ಲದು. ಪಕ್ಕದ ಎಲ್ಲ ಅಂಗಡಿಗಳು ಮುಚ್ಚಿ, ಇಡೀ ಮಾರುಕಟ್ಟೆಯೇ ಮುಚ್ಚಿ, ನಾವಷ್ಟೇ ಉಳಿದಾಯಿತು. ಆದರೂ ಕೆಲಸ ಪೂರ್ಣಗೊಳ್ಳಲಿಲ್ಲ. ಮರುದಿನ ರವಿವಾರ ಅವನ ಅಂಗಡಿ ಮತ್ತು ಮಾರುಕಟ್ಟೆಗೆ ರಜೆ. ಆದರೆ ನಾವು ಅಂದೇ ಮೈಸೂರಿನಿಂದ ಹೊರಟು ಬಿಡುವವರಿದ್ದೆವು. ಅವನು ನಾನು ಉಳಿದುಕೊಂಡ ಲಾಜ್ ವಿವರ ತಿಳಿದುಕೊಂಡು ಮರುದಿನ ಬೆಳಿಗ್ಗೆ ಬರುವುದಾಗಿ ತಿಳಿಸಿದ. ಮರುದಿನ ಬೆಳಿಗ್ಗೆ ನಾನು ಹಲ್ಲುಜ್ಜಿ, ಏನು ಟಿಫನ್ ತಿನ್ನುವುದು ಎಂದು ವಿಚಾರ ಮಾಡುವ ಹೊತ್ತಿಗೆ ಅವನು ಲಾಜ್ ಮುಂದೆ ಹಾಜರ್. ಪಾರ್ಕಿಂಗ್ ನಲ್ಲೆ ಕುಳಿತು, ತನ್ನ ಕೆಲಸ ಮುಗಿಸಿಕೊಟ್ಟು ನಮಗೆ ವಿದಾಯ ಹೇಳಿ ಹೋದ. ಅವನ ಕರ್ತವ್ಯ ಪ್ರಜ್ಞೆ ಮತ್ತು ನಮ್ಮ ಬಗ್ಗೆ ಅವನು ತೋರಿಸಿದ ಕಾಳಜಿ ಕಂಡು ನನಗೆ ಆಶ್ಚರ್ಯ. ಇದೆ ಕೆಲಸಕ್ಕೆ ನನಗೆ ಬೆಂಗಳೂರಿನಲ್ಲಿ ಎರಡು ಮೂರು ದಿನ ಓಡಾಡಿಸಿ, ಅದು ನಿಮ್ಮ ಹಣೆಬರಹ ಎಂದು ಹೇಳಿರುತ್ತಿದ್ದರು.


೩.

ಪ್ರವಾಸದ ಗುಂಗಿನಲ್ಲಿದ್ದ ನಮಗೆ ಮಧ್ಯಾಹ್ನದ ಹೊತ್ತು ಕಳೆದಿದ್ದೆ ಗೊತ್ತಾಗಿರಲಿಲ್ಲ. ಆಗಲೇ ಮೂರು ಗಂಟೆಯಾಗಿತ್ತು. ಮೈಸೂರಿನಿಂದ ಸುಮಾರು ಒಂದು ಗಂಟೆ ದೂರದಲ್ಲಿ ಇದ್ದ ನಮಗೆ ರಸ್ತೆಯಲ್ಲಿ ಸಿಕ್ಕ ಎಲ್ಲ ಹೋಟೆಲ್ ಗಳಲ್ಲಿ, ಊಟ-ತಿಂಡಿ ಎಲ್ಲ ಖಾಲಿ, ಮುಂದೆ ಹೋಗಿ ಎಂದು ಹೇಳಿ ಕಳಿಸಿದರು. ಮೈಸೂರು ಹೊರ ವಲಯಕ್ಕೆ ಬರುವ ಹೊತ್ತಿಗೆ ಮಧ್ಯಾಹ್ನ ನಾಲ್ಕು ಗಂಟೆ. ಎಲ್ಲರೂ ಹಸಿವಿನಿಂದ ಕಂಗಾಲು. ಮುಂದೆ ಹೋಗುವಷ್ಟು ಶಕ್ತಿ ನಮಗಾರಿಗೂ ಉಳಿದಿರಲಿಲ್ಲ. ಆದರೆ ಮೈಸೂರು ಹೊರ ವಲಯದ ಆ ಹೋಟೆಲ್ ನಲ್ಲೂ ಕೂಡ ಊಟ-ತಿಂಡಿ ಎಲ್ಲ ಖಾಲಿಯಾಗಿತ್ತು. ಆದರೆ ನಮ್ಮ ಸ್ಥಿತಿ ಗಮನಿಸಿದ ಹೋಟೆಲ್ ಮಾಲೀಕ, ಹದಿನೈದು ನಿಮಿಷ ಕಾದರೆ ಅನ್ನ-ಸಾಂಬಾರ್ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು. ಅವರ ಉದ್ದೇಶ ನಮ್ಮ ಹೊಟ್ಟೆ ತುಂಬಿಸುವುದಾಗಿತ್ತು. ನಮ್ಮವರೆಲ್ಲ ಒಂದೇ ಏಟಿಗೆ ಹೂಂ ಎಂದರು. ನಮ್ಮ ಊಟ ಮುಗಿದು ನಾವು ಹೊರಡುವ ಹೊತ್ತಿಗೆ, ನಮ್ಮದೇ ಪರಿಸ್ಥಿತಿ ಇದ್ದ ಇನ್ನೊಂದು ಕಾರು ಅಲ್ಲಿಗೆ ಬಂದು ಏನಾದರು ಊಟ ಕೊಡುವಂತೆ ಹೋಟೆಲ್ ಮಾಲೀಕರಿಗೆ ಕೇಳಿಕೊಳ್ಳುತ್ತಿದ್ದರು. ಅವರಿಗೂ ಕೂಡ ಆ ಮಾಲೀಕ ಸಮಾಧಾನವಾಗಿ ಉತ್ತರಿಸುತ್ತಿದ್ದರು. 


ಇದು ನನ್ನ ಅನುಭವಗಳು ಮತ್ತು ಅವುಗಳಿಂದ ಮೂಡಿದ ಅಭಿಪ್ರಾಯ. ಬೇರೆ ಊರಿನ ಪ್ರವಾಸಗಳಲ್ಲಿ ಸಾಕಷ್ಟು ಒರಟು ಎನಿಸುವ ಅನುಭವಗಳು ಆದ ಮೇಲೆ, ಮೈಸೂರಿನ ಜನರ ಸರಳ, ಸಜ್ಜನಿಕೆಗೆ ತಲೆ ಬಾಗುತ್ತೇನೆ. ಕುಟುಂಬದ ಜೊತೆ ಎರಡು ದಿನ ಬಿಡುವು ಬೇಕೆನಿಸಿದಾಗ, ಎರಡನೇ ವಿಚಾರ ಮಾಡದೇ ಮೈಸೂರಿಗೆ ಹೊರಟು ಬಿಡುತ್ತೇನೆ.

Tuesday, July 13, 2021

ಕವಿತೆ: ದುಡ್ಡು

ಜಿಪುಣರು ಉಳಿಸುತ್ತಾರೆ

ಉಡಾಫೆಯವರು ಉಡಾಯಿಸುತ್ತಾರೆ 


ಶ್ರೀಮಂತರು ಇರುವುದನ್ನು ಹೆಚ್ಚಿಸುತ್ತಾರೆ

ಜೂಜುಕೋರರು ಇರುವುದನ್ನು ಕಳೆಯುತ್ತಾರೆ


ಶ್ರಮಿಕರು ದುಡಿದು ಗಳಿಸುತ್ತಾರೆ

ಹೆಂಡತಿಯರು ಖರ್ಚು ಮಾಡುತ್ತಾರೆ


ಬ್ಯಾಂಕ್ ನವರು ಸಾಲ ಕೊಡುತ್ತಾರೆ

ಸರಕಾರದವರು ತೆರಿಗೆಯಲ್ಲಿ ಕಿತ್ತುಕೊಳ್ಳುತ್ತಾರೆ


ಸಾಯುವವರು ಬಿಟ್ಟು ಹೋಗುತ್ತಾರೆ

ಉತ್ತರಾಧಿಕಾರಿಗಳು ಅನುಭವಿಸುತ್ತಾರೆ


ಇಲ್ಲದವರು ದಾಹ ಪಡುತ್ತಾರೆ

ಇರುವವರು ಚಿಂತೆ ಮಾಡುತ್ತಾರೆ


ದಾನಿಗಳು ಹಂಚುತ್ತಾರೆ

ಕಳ್ಳರು ದೋಚುತ್ತಾರೆ


ಬೇಕೇ ಬೇಕು ಎನಿಸಿದವರು ಅಡ್ಡದಾರಿ ಹಿಡಿಯುತ್ತಾರೆ

ಸಾಕು ಸಾಕು ಎನಿಸಿದವರು ಸರಿದಾರಿ ಮೆಚ್ಚುತ್ತಾರೆ