Tuesday, March 15, 2022

ಮುಖವಾಡ ಕಳಚುವವರೆಗೆ ಎಲ್ಲರೂ ಒಳ್ಳೆಯವರೇ

ಭಗವಾನ್ ಓಶೋ ಅವರ ಪ್ರವಚನಗಳನ್ನು ಕೇಳಿದಾಗ, ಅವರ ಪುಸ್ತಕಗಳನ್ನು ಓದಿದಾಗ ನನಗೆ ಈತ ಮಹಾ ಜ್ಞಾನಿ ಎನ್ನುವುದರಲ್ಲಿ ಸಂದೇಹವೇ ಉಳಿದಿರಲಿಲ್ಲ. ಆಧ್ಯಾತ್ಮದ ಅರ್ಥವನ್ನು, ಉದ್ದೇಶವನ್ನು ಈತನಷ್ಟು ಸರಳವಾಗಿ, ಸ್ಪಷ್ಟವಾಗಿ ಹೇಳಬಲ್ಲ ಇನ್ನೊಬ್ಬರನ್ನು ನಾನು ನೋಡಿಲ್ಲ. ಆ ವಿಷಯದಲ್ಲಿ ಈತ ಒಬ್ಬ ಮಹಾ ಗುರು. ಆದರೆ ಹಲವು ವರುಶಗಳವರೆಗೆ ಈತನ ಸೆಕ್ರೆಟರಿ ಆಗಿ ಕೆಲಸ ಮಾಡಿದ ಶೀಲಾ ಎನ್ನುವವರು ಬರೆದ 'Don't kill him' ಎನ್ನುವ ಪುಸ್ತಕ ಓದಿ ನೋಡಿ. ಓಶೋ ಎಷ್ಟು ಲಂಪಟನಾಗಿದ್ದ, ಶ್ರೀಮಂತರನ್ನು ಹೇಗೆ ಸುಲಿಗೆ ಮಾಡಿ ಐಷಾರಾಮಿ ಕಾರುಗಳನ್ನು ಖರೀದಿಸುತ್ತಿದ್ದ. ತನ್ನ ಆಶ್ರಮದ ಕಾರುಬಾರುಗಳನ್ನು ಹೇಗೆ ಕುತಂತ್ರಗಳಿಂದ ನಿಭಾಯಿಸುತ್ತಿದ್ದ ಎನ್ನುವ ವಿಷಯಗಳು ಮನದಟ್ಟಾಗುತ್ತವೆ. ಆಧ್ಯಾತ್ಮ ಭೋದಿಸಿದ ಮಹಾ ಗುರುವೇ ವೈಯಕ್ತಿಕ ಜೀವನದಲ್ಲಿ ತೀರಾ ಸಾಧಾರಣ ವ್ಯಕ್ತಿಯ ಹಾಗೆ, ಎಲ್ಲ ತರಹದ ಮನೋವಿಕಾರಗಳೊಂದಿಗೆ ಜೀವಿಸುತ್ತಿದ್ದ ಎನ್ನುವ ವಿಷಯ ಅನುಭವಕ್ಕೆ ಬರುತ್ತದೆ.

 

ಓಶೋ ವಿಷಯವೇ ಹೀಗಾದರೆ ಇನ್ನು ಲೌಕಿಕದಲ್ಲಿ ಜೀವನ ಮಾಡುವವರ ಪಾಡೇನು? ನಮ್ಮ ಸುತ್ತ ಮುತ್ತಲಿನ ಎಷ್ಟೋ ಜನರನ್ನು ನಾವು ದೇವರ ಸಮಾನ ಎಂದುಕೊಂಡಿರುತ್ತೇವೆ. ಅಷ್ಟಲ್ಲದಿದ್ದರೂ ಅವರು ಒಳ್ಳೆಯ ಜನ ಎಂದು ನಂಬಿರುತ್ತೇವೆ. ಅವರು ಕೂಡ ನಮ್ಮನ್ನು ಹಾಗೆಯೆ ನಂಬಿಸುವ ಪ್ರಯತ್ನ ಮಾಡಿರುತ್ತಾರೆ. ಸಮಯ, ಸಂದರ್ಭ ಬರುವವರೆಗೂ ಆ ಭ್ರಮೆ ಹಾಗೆಯೆ ಉಳಿದುಕೊಂಡುಬಿಡುತ್ತದೆ. ಆದರೆ ವಿಧಿ ಇರುವುದನ್ನು ಹಾಗೆಯೆ ಇರಲು ಎಲ್ಲಿ ಬಿಡುತ್ತದೆ? ಅಂದುಕೊಳ್ಳದ ವೇಳೆಯಲ್ಲಿ, ಪರಿಸ್ಥಿತಿ ಹಠಾತ್ತನೆ ಬದಲಾಗುತ್ತದೆ. ಆಗ ದೇವರಂತಹ ಮನುಷ್ಯರ ಒಳ್ಳೆಯತನದ ಮುಖವಾಡ ಕಳಚಿ ಬೀಳುತ್ತದೆ. ಅದುವರೆಗೆ ನಾವು ಅಂದುಕೊಂಡಿದ್ದು ಶುದ್ಧ ಸುಳ್ಳು ಎನ್ನುವ ವಿಷಯ ನಮಗೆ ಮನದಟ್ಟಾಗುತ್ತದೆ. ಅಷ್ಟೇ ಅಲ್ಲ, ಅದುವರೆಗೂ ಅವರು ನಮ್ಮನ್ನು ಯಾಮಾರಿಸಿದ್ದು ಮುಖಕ್ಕೆ ರಾಚಿಬಿಡುತ್ತದೆ.

 

'ಸಿಕ್ಕಿ ಬಿದ್ದರೆ ಮಾತ್ರ ಕಳ್ಳ' ಎನ್ನುವುದು ಹಳೆಯ ಗಾದೆ. ಅದಕ್ಕೆ ತಕ್ಕಂತೆ ಸಾಕಷ್ಟು ಜನರದು ಮೋಸದ ಜೀವನ. ತಾಯಿಯ ಪಾತ್ರ ಬಿಟ್ಟರೆ ಉಳಿದೆಲ್ಲ ಸಂಬಂಧಗಳು ಒಂದಲ್ಲ ಒಂದು ರೀತಿಯ ವ್ಯಾಪಾರವೇ. ಆಸ್ತಿಯ ಜಗಳಕ್ಕೆ ಬಿದ್ದ ಅಣ್ಣ-ತಮ್ಮರನ್ನು ನೋಡಿ. ಅದಕ್ಕೂ ಮುಂಚೆ ಅವರು ಅಣ್ಣ-ತಮ್ಮರ ತರಹವೇ ಇದ್ದರಲ್ಲ. ಆಸ್ತಿ ಜಗಳ ಬಂದಾಗ ಆ ಪ್ರೀತಿ ಎಲ್ಲಿಗೆ ಹೋಯಿತು? ರಾತ್ರಿ ಕುಡಿದು ಬಂದು ಹೆಂಡತಿಯನ್ನು ಪೀಡಿಸುವ ಗಂಡ, ಹಗಲಿನಲ್ಲಿ ತನ್ನ ಹೆಂಡತಿಯ ಜೊತೆಗೆ ದೇವಸ್ಥಾನಕ್ಕೆ ಹೋದಾಗ ಆದರ್ಶ ಪತಿಯ ವೇಷ ಹಾಕಿರುವುದಿಲ್ಲವೇ? ಅನೈತಿಕ ಸಂಬಂಧಗಳನ್ನು ಇಟ್ಟುಕೊಂಡ ಪತಿವ್ರತೆಯರು ಸಿಕ್ಕಿ ಬೀಳುವವರೆಗೆ ಮಾತ್ರ ಗಂಡನಿಗೆ ನಿಷ್ಠೆಯುಳ್ಳವರು. ಗುಟ್ಟು ಹೊರ ಬಿದ್ದ ಮೇಲೆ ಅವರು ಗಂಡನ ಮೇಲೆ ನೂರೆಂಟು ಅಪವಾದಗಳನ್ನು ಹೊರಿಸದೆ ಬಿಡುವುದಿಲ್ಲ. ಪ್ರಾಣ ಬೇಕಾದರೂ ಕೊಡ್ತೀನಿ ಅನ್ನುವ ಸ್ನೇಹಿತನನ್ನು ಸಾಲ ತೆಗೆದುಕೊಳ್ಳುವಾಗ ಶೂರಿಟಿ ಹಾಕಲು ಕರೆದು ನೋಡಿ. ಅವರು ನಿಜ ಸ್ನೇಹಿತರು ಹೌದೋ ಅಲ್ಲವೋ ತಿಳಿದೇ ಬಿಡುತ್ತದೆ. ಯಾವುದಾದರು ಹಗರಣಗಳಲ್ಲಿ ಸಿಕ್ಕಿ ಹಾಕಿಕೊಳ್ಳುವವರೆಗೆ, ರಾಜಕಾರಣಿಗಳು ಪ್ರಾಮಾಣಿಕರೋ, ಅಲ್ಲವೋ ತಿಳಿಯುವುದಿಲ್ಲ. ಅಲ್ಲಿಯವರೆಗೆ ಅವರು ಲೋಕ ಕಲ್ಯಾಣದ ಭಾಷಣಗಳನ್ನು ಮಾಡುತ್ತಲೇ ಇರುತ್ತಾರೆ.

 

ಒಳ್ಳೆಯವರು ಈ ಲೋಕದಲ್ಲಿ ಇಲ್ಲ ಎಂದೇನಿಲ್ಲ. ಆದರೆ ಅವರ ವೇಷ ಹಾಕಿ ಮೋಸ, ಸುಲಿಗೆ ಮಾಡುವ ಜನರೇ ಅಧಿಕ. ಎಲ್ಲರನ್ನು ಒಳ್ಳೆಯವರೇ ಎಂದು ತಿಳಿದುಕೊಳ್ಳುತ್ತಿದ್ದ ನನ್ನ ಮುಗ್ಧತೆಗೆ ಸರಿಯಾದ ಪಾಠಗಳನ್ನು ಹಲವಾರು ಜನ ಕಲಿಸಿದ್ದಾರೆ. ಅಳೆದು, ತೂಗಿ, ಪರೀಕ್ಷಿಸಿ ನೋಡುವವರೆಗೆ ಯಾರನ್ನೂ ಒಳ್ಳೆಯವರು ಎಂದು ನಿರ್ಣಯಿಸಬಾರದು ಎಂದು ತಿಳಿದುಕೊಳ್ಳುವಷ್ಟರಲ್ಲಿ ಹಲವಾರು ಬಾರಿ ಮೂರ್ಖನಾಗಿ ಹೋಗಿದ್ದೇನೆ. ಮನುಷ್ಯ ಮನುಷ್ಯನನ್ನು ನಂಬದೆ ಬದುಕಲು ಸಾಧ್ಯವೇ ಎಂದು ದಯವಿಟ್ಟು ಕೇಳಬೇಡಿ. ಅದು ರಾತ್ರಿ ಕಂಡ ಭಾವಿಗೆ ಹಗಲು ಬಿದ್ದ ಹಾಗೆ. ಸಂಪೂರ್ಣ ನಂಬಿಕೆ ಇಟ್ಟಲ್ಲಿ ಮೋಸ ಹೋಗುವುದು ಸುಲಭ. ಆದರೆ ಜಾಗರೂಕತೆ ಇದ್ದಲ್ಲಿ ಎಡವುವ ಸಾಧ್ಯತೆಯೂ ಕಡಿಮೆ ಆಗುತ್ತದೆ. ಆ ಎಚ್ಚರಿಕೆ ನಮ್ಮಲ್ಲಿ ಇರಬೇಕಷ್ಟೆ. ಏಕೆಂದರೆ ನಮ್ಮ ಸಮಾಜದ ಸಾಕಷ್ಟು ಜನ ಮುಖವಾಡ ಕಳಚುವವರೆಗೆ ಮಾತ್ರ ಒಳ್ಳೆಯವರು. ಅವರಿಗೆ ತಮ್ಮ ಕೆಟ್ಟತನ ತೋರಿಸುವ ಸಂದರ್ಭ ಬಂದಿರಲಿಲ್ಲ ಅಷ್ಟೇ. ಮುಖವಾಡ ಕಳಚಿದ ಮೇಲೆ ಕಾಣುವುದೇ ಅವರ ನಿಜವಾದ ಮುಖ. ಅಲ್ಲಿಯವರೆಗೆ ಅವರದು ಆದರ್ಶ ವ್ಯಕ್ತಿತ್ವಗಳ ಅಭಿನಯ ಮಾತ್ರ.

Saturday, March 12, 2022

ಕಥೆ: ವಜ್ರದ ಹಾರ

ಲಕ್ಷ್ಮಿ ರೂಪ-ಲಾವಣ್ಯಗಳಲ್ಲಿ ಯಾರಿಗೂ ಕಡಿಮೆ ಇರಲಿಲ್ಲ. ಆದರೆ ಬರೀ ಆಕರ್ಷಕವಾಗಿದ್ದರೆ ಏನು ಉಪಯೋಗ, ಅವಳ ಹೆಸರಿನಲ್ಲಿದ್ದ ಲಕ್ಷ್ಮಿ ಅವಳ ಕುಟುಂಬಕ್ಕೆ ಒಲಿದಿರಲಿಲ್ಲ. ಅವಳ ಮದುವೆ ಒಬ್ಬ ಸಾಮಾನ್ಯ ದರ್ಜೆಯ, ಗುಮಾಸ್ತೆ ಕೆಲಸದಲ್ಲಿದ್ದ ಅನಂತನೊಂದಿಗೆ ನಡೆದು ಹೋಯಿತು. ಲಕ್ಷ್ಮಿಯ ಅಭಿರುಚಿಗಳು ತುಂಬಾ ಸರಳ ಎನ್ನುವಂತೆ ಇದ್ದವು ಏಕೆಂದರೆ ಅವಳಿಗೆ ದುಬಾರಿ ಬೆಲೆಯ ವಸ್ತುಗಳನ್ನು ಖರೀದಿಸುವ ತಾಕತ್ತು ಎಲ್ಲಿತ್ತು? ಅವಳಿಗೆ ತನಗೆ ಸರಿ ಸಮ ಅಲ್ಲದ ಬಡವನಾದ ಗಂಡ ಸಿಕ್ಕ ಕೊರಗು ಬೇಕಾದಷ್ಟಿತ್ತು. ಆದರೆ ಐಷಾರಾಮಿ ಜೀವನದ ಆಸೆ ಬಿಟ್ಟು ಹೋಗಲೊಲ್ಲದು. ಅವಳಿಗೆ ತನ್ನ ಮನೆಯ ಬಣ್ಣ ಕಾಣದ ಗೋಡೆಗಳು, ಸವಕಲಾದ ಖುರ್ಚಿಗಳು, ಸಂಪೂರ್ಣ ಮಾಸಿ ಹೋದ ಕಿಟಕಿಯ ಪರದೆಗಳು ನೋಡಿದಾಗಲೆಲ್ಲ ಅವಳಲ್ಲಿ ಜಿಗುಪ್ಸೆ ಹುಟ್ಟಿಸುತ್ತಿದ್ದವು.  ಅವುಗಳ ಬದಲು ವಿಶಾಲವಾದ ಮನೆ, ಅಂದದ ಪೀಠೋಪಕರಣಗಳು, ಊಟಕ್ಕೆ ವಿವಿಧ ಭಗೆಯ ಭಕ್ಷ್ಯಗಳು ಇದ್ದರೆ ತನ್ನನ್ನು ಭೇಟಿಯಾಗ ಬಂದ ಸ್ನೇಹಿತರು ತನ್ನ ಅದೃಷ್ಟವನ್ನು ಹಾಡಿ ಹೊಗಳುತ್ತಿದ್ದರು ಎಂದು ಮನಸ್ಸಿನಲ್ಲೇ ಅಂದುಕೊಳ್ಳುವಳು. ಆದರೆ ವಾಸ್ತವದಲ್ಲಿ ಅವಳಿಗೆ ಉಡಲು ಒಳ್ಳೆಯ ಬಟ್ಟೆಗಳಿರಲಿಲ್ಲ. ಇನ್ನು ಬಂಗಾರದ ಆಭರಣಗಳು ದೂರದ ಮಾತೇ ಸರಿ.


ಒಂದು ಸಂಜೆ ಅವಳ ಗಂಡ ಮನೆಗೆ ಬಂದು ಅವಳ ಕೈಯಲ್ಲಿ ಒಂದು ದಪ್ಪನೆಯ ಕವರ್ ಕೊಟ್ಟು, 'ನೋಡು, ಇದು ನಿನಗಾಗಿ' ಎಂದು ಹೇಳಿದ. ಅವಳು ಆ ಕವರ್ ತೆಗೆದು ನೋಡಿದರೆ ಅದು ಆ ಊರಿನಲ್ಲಿ ನಡೆಯುತ್ತಿರುವ ಶ್ರೀಮಂತರ ಪಾರ್ಟಿಯ ಆಮಂತ್ರಣ ಪಾತ್ರ. ಅವಳ ಗಂಡ ಊಹಿಸಿದ ಹಾಗೆ ಅದು ಲಕ್ಷ್ಮಿಗೆ ಸಂತೋಷ ತರಲಿಲ್ಲ. ಬದಲಿಗೆ ಅದನ್ನು ಬಿಸಾಕಿ 'ಇದನ್ನು ತೆಗೆದುಕೊಂಡು ನಾನೇನು ಮಾಡಬೇಕು?' ಎಂದು ಗಂಡನನ್ನು ಪ್ರಶ್ನಿಸಿದಳು. ಅವಳ ಗಂಡ ಅದಕ್ಕೆ ಉತ್ತರವಾಗಿ 'ಇದು ನಿನಗೆ ಸಂತೋಷ ತರುತ್ತೆ ಎಂದು ಭಾವಿಸಿದ್ದೆ. ಅಲ್ಲಿ ಊರಿನ ದೊಡ್ಡ ಜನರೆಲ್ಲಾ ಸೇರಿರುತ್ತಾರೆ. ಇದರ ಆಮಂತ್ರಣ ಸಿಗುವುದು ಕೆಲವೇ ಜನರಿಗೆ. ಅದರಲ್ಲೂ ಗುಮಾಸ್ತರಿಗೆ ಇದರ ಆಮಂತ್ರಣ ಸಿಗುವುದು ಕಷ್ಟ'. 


'ಅಂತಹ ದೊಡ್ಡ ಪಾರ್ಟಿಗೆ ನಾನೇನು ಉಟ್ಟುಕೊಂಡು ಹೋಗಬೇಕು?' ಎಂದು ಕಣ್ಣಲ್ಲಿ ಬೆಂಕಿ ಸೂಸುತ್ತಾ ಗಂಡನನ್ನು ಪ್ರಶ್ನಿಸಿದಳು ಲಕ್ಷ್ಮಿ. 


ಅವನ ಗಂಡ ಇದರ ಬಗ್ಗೆ ವಿಚಾರ ಮಾಡಿರಲಿಲ್ಲವಾದ್ದರಿಂದ ಸ್ವಲ್ಪ ತಡವರಿಸಿದ. 'ದೇವಸ್ಥಾನಕ್ಕೆ  ಹೋದಾಗ ಉಟ್ಟುಕೊಂಡು ಹೋಗುತ್ತೀಯಲ್ಲ, ಅದು ನಿನಗೆ ಚೆನ್ನಾಗಿ ಕಾಣುತ್ತೆ' ಎಂದು ತನ್ನ ಅಭಿಪ್ರಾಯ ಹೇಳಿದ. ಅವನ ಮಾತು ಮುಗಿಯುವ ಮುಂಚೆಯೇ ತನ್ನ ಪತ್ನಿಯ ಎರಡು ಕಣ್ಣಲ್ಲಿ ದೊಡ್ಡ ದೊಡ್ಡ ಹನಿಗಳು ಉದುರುವುದನ್ನು ನೋಡಿ ಗಾಬರಿಯಾಗಿ, 'ಏಕೆ? ಏನಾಯಿತು?' ಎಂದು ಕೇಳಿದ.


ಅವಳು ತನ್ನ ಕೆನ್ನೆಯ ಮೇಲಿನ ಕಣ್ಣೀರು ಒರೆಸಿಕೊಳ್ಳುತ್ತ ಹೇಳಿದಳು 'ಇಂತಹ ಪಾರ್ಟಿಗೆ ಒಪ್ಪುವ ಸೀರೆ ನನ್ನಲ್ಲಿ ಇಲ್ಲ. ನೀವು ಈ ಆಮಂತ್ರಣ ಪತ್ರಿಕೆ ನಿಮ್ಮ ಸ್ನೇಹಿತರಿಗೆ ಯಾರಿಗಾದರೂ ಕೊಟ್ಟು ಬಿಡಿ. ಅವರ ಹೆಂಡತಿಯರಿಗೆ ಉಡಲು ಒಳ್ಳೆಯ ಬಟ್ಟೆಗಳಿದ್ದರೆ ಅವರು ಪಾರ್ಟಿಗೆ ಹೋಗಿ ಸಂತೋಷ ಪಡುತ್ತಾರೆ' ಎಂದು ಹೇಳಿದಳು.

 

ಅನಂತನ ಹೃದಯ ಒಡೆದು ಹೋದರೂ, ಹೆಂಡತಿಯನ್ನು ಒಪ್ಪಿಸುವ ಪ್ರಯತ್ನಕ್ಕಾಗಿ 'ಅಂತಹ ಸೀರೆ ಎಷ್ಟು ಬೆಲೆ ಬಾಳಬಹುದು?' ಎಂದು ಕೇಳಿದ.


ಸ್ವಲ್ಪ ಹೊತ್ತು ವಿಚಾರ ಮಾಡಿದ ಲಕ್ಷ್ಮಿ ಹೇಳಿದಳು 'ನನಗೆ ಬೆಲೆ ಸರಿಯಾಗಿ ಗೊತ್ತಿಲ್ಲ. ಆದರೆ ಕನಿಷ್ಠ ನಾಲ್ಕು ಸಾವಿರ ಆದರೂ ಆಗುತ್ತೆ'


ಗುಮಾಸ್ತೆಯಾಗಿ ಲೆಕ್ಕಾಚಾರದಲ್ಲಿ ಪಳಗಿದ್ದ ಅನಂತ ಅವಸರಕ್ಕೆ ಮನೆ ಖರ್ಚಿಗೆ ಇರಲಿ ಎಂದು ಎತ್ತಿಟ್ಟಿದ್ದ ನಾಲ್ಕು ಸಾವಿರ ರೂಪಾಯಿಗಳನ್ನು ಇದಕ್ಕೆ ಬಳಸಿದರಾಯಿತು ಎಂದು ತೀರ್ಮಾನಿಸಿದ. 


ಪಾರ್ಟಿಯ ದಿನ ಹತ್ತಿರ ಬಂದಿತು. ಲಕ್ಷ್ಮಿಯ ಭರ್ಜರಿ ಸೀರೆಯೂ ಅಷ್ಟರಲ್ಲಿ ಮನೆಗೆ ಬಂದಿತ್ತು. ಆದರೂ ಅವಳ ಮುಖದಲ್ಲಿ ಆತಂಕ. ಅದನ್ನು ಗಮನಿಸಿ ಅವಳ ಗಂಡ ಕೇಳಿಯೇ ಬಿಟ್ಟ 'ನಿನಗೆ ಇನ್ನೂ ಸಮಾಧಾನ ಇಲ್ಲವೇನು?' ಅದಕ್ಕೆ ಅವಳು ಉತ್ತರಿಸಿದಳು 'ನನಗೆ ಧರಿಸಲು ಯಾವ ಒಡವೆಯೂ ಇಲ್ಲ. ಬರೀ ಕೊರಳಲ್ಲಿ ನಾನು ಪಾರ್ಟಿಗೆ ಹೇಗೆ ಬರಲಿ?'


ಇಪ್ಪತ್ತು ರೂಪಾಯಿ ಖರ್ಚು ಮಾಡಿ ಹೂವು ಮುಡಿದುಕೊಂಡರೆ ಅವಳು ಆಕರ್ಷಕವಾಗಿ ಕಾಣುತ್ತಾಳೆ ಎನ್ನುವ ಗಂಡನ ಅಭಿಪ್ರಾಯವನ್ನು ಲಕ್ಷ್ಮಿ ಸಾರಾ ಸಗಟಾಗಿ ತಿರಸ್ಕರಿಸಿದಳು. 'ಶ್ರೀಮಂತರ ನಡುವೆ ನೀವು ನನ್ನ ಮರ್ಯಾದೆ ತೆಗೆದಿಡುತ್ತಿರಿ' ಎಂದು ಕ್ಯಾತೆ ತೆಗೆದಳು. ಕೊನೆಗೆ ಅವಳ ಶ್ರೀಮಂತ ಸ್ನೇಹಿತೆ ಕಮಾಲಾಳಿಂದ ಒಂದು ಒಡವೆಯನ್ನು ಒಂದು ದಿನದ ಮಟ್ಟಿಗೆ ಕೇಳಿ ತಂದರಾಯಿತು ಎನ್ನುವ ಅಭಿಪ್ರಾಯಕ್ಕೆ ಬಂದರು.


ಅಪರೂಪಕ್ಕೆ ಮನೆಗೆ ಬಂದ ಸ್ನೇಹಿತೆ ಲಕ್ಷ್ಮಿಯನ್ನು ಆದರದಿಂದ ಸ್ವಾಗತಿಸಿದಳು ಕಮಲಾ. ನಾಲ್ಕಾರು ಆಭರಣಗಳನ್ನು ಅವಳ ಮುಂದಿರಿಸಿ ಅವಳಿಗೆ ಒಪ್ಪಿಗೆಯಾದದ್ದು ತೆಗೆದುಕೊಳ್ಳುವಂತೆ ಸೂಚಿಸಿದಳು. ಮುತ್ತಿನ ಸರಗಳು, ಬಂಗಾರದ ನೆಕ್ಲೆಸ್, ಸೂಕ್ಷ್ಮ ಕುಸುರಿ ಕೆಲಸದ ಹಾರಗಳು ತನ್ನ ಕುತ್ತಿಗೆಗೆ ಧರಿಸಿ, ಕನ್ನಡಿಯಲ್ಲಿ ನೋಡಿಕೊಳ್ಳುತ್ತ ಲಕ್ಷ್ಮಿ 'ಬೇರೆ ಯಾವುದಾದರೂ ಇದೆಯೇ?' ಎಂದು ಸ್ನೇಹಿತೆಗೆ ಕೇಳಿದಳು. 'ನೀನೆ ನೋಡಿಕೋ' ಎಂದು ಆಭರಣ ಪೆಟ್ಟಿಗೆ ಅವಳ ಮುಂದಿರಿಸಿ ಹೇಳಿದಳು ಕಮಲಾ. ಅದರಲ್ಲಿ ನೋಡುತ್ತಿರುವಾಗ ಕಪ್ಪು ಬಣ್ಣದ ಸ್ಯಾಟಿನ್ ಬಟ್ಟೆಯ ಪೆಟ್ಟಿಗೆಯಲ್ಲಿದ್ದ ವಜ್ರದ ನೆಕ್ಲೆಸ್ ಲಕ್ಷ್ಮಿಗೆ ಇಷ್ಟವಾಗಿ ಹೋಯಿತು. ಅದನ್ನು ಧರಿಸಿ ಒಮ್ಮೆ ಕನ್ನಡಿಯಲ್ಲಿ ನೋಡಿಕೊಂಡಾಗ ಲಕ್ಷ್ಮಿಗೆ ಹರುಷದಿಂದ ಭಾವೋತ್ಕರ್ಷ ಉಂಟಾಯಿತು. ತನ್ನ ಸ್ನೇಹಿತೆಗೆ ಕೇಳಿದಳು 'ಇದೊಂದನ್ನು ಕೊಡು. ಸಾಕು'. ಅವಳ ಸ್ನೇಹಿತೆ ಉತ್ತರಿಸಿದಳು 'ಹಾಗೆಯೇ ಆಗಲಿ'.


ಪಾರ್ಟಿಯ ದಿನ ಬಂದೆ ಬಿಟ್ಟಿತು. ಹಾಗೆಯೇ ಲಕ್ಷ್ಮಿಯ ಪ್ರಯತ್ನಗಳು ಯಶಸ್ಸು ತಂದು ಕೊಟ್ಟವು. ಪಾರ್ಟಿಯಲ್ಲಿ ಶ್ರೀಮಂತ ಹೆಂಗಸರ ನಡುವೆ, ಲಕ್ಷ್ಮಿಯೇ ದೊಡ್ಡ ಆಕರ್ಷಣೆ ಆಗಿಬಿಟ್ಟಳು. ಅವಳ ಸಹಜ ಸೌಂದರ್ಯಕ್ಕೆ ಅವಳ ಉಟ್ಟ ಸೀರೆ, ಧರಿಸಿದ ವಜ್ರದ ನೆಕ್ಲೆಸ್ ಇನ್ನೂ ಹೆಚ್ಚಿನ ಮೆರಗು ತಂದು ಕೊಟ್ಟವು.  ಪಾರ್ಟಿಗೆ ಬಂದ ಹೆಣ್ಣು ಮಕ್ಕಳು ಅವಳ ಹೆಸರೇನು ಎಂದು ಕೇಳಿ ತಿಳಿದುಕೊಂಡರು. ಗಂಡಸರು ಅವಳನ್ನು ದಿಟ್ಟಿಸಿ ನೋಡಿದರು. ದೊಡ್ಡ ದೊಡ್ಡ ಶ್ರೀಮಂತರು ಅವಳನ್ನು ಮುಗುಳ್ನಗೆಯೊಂದಿಗೆ ಮಾತನಾಡಿಸಿದರು. 


ಪಾರ್ಟಿ ಮುಗಿದ ಮೇಲೆ ಒಂದು ಆಟೋ ಹಿಡಿದು ಮನೆಗೆ ಮರಳಿದರು ಅನಂತ ಮತ್ತು ಲಕ್ಷ್ಮಿ. ಮನೆಯಲ್ಲಿ ಬಟ್ಟೆ ಬದಲಾಯಿಸುವಾಗ ತನ್ನ ಕುತ್ತಿಗೆ ಬರಿದಾಗಿದ್ದು ಗಮನಿಸಿಕೊಂಡಳು ಲಕ್ಷ್ಮಿ. ಪಾರ್ಟಿಯಿಂದ ಹೊರಡುವಾಗ ಕುತ್ತಿಗೆ ಸವರಿಕೊಂಡಾಗ ಅಲ್ಲಿಯೇ ಇತ್ತು ನೆಕ್ಲೆಸ್. ಆದರೆ ಮನೆ ತಲುಪಿದಾಗ ಇರಲಿಲ್ಲ. ಅವಳ ಗಂಡ ಅದು ದಾರಿಯಲ್ಲಿ ಎಲ್ಲಿಯಾದರೂ ಬಿದ್ದಿರಬಹುದೇನೋ ಎಂದು ನೋಡಿ ಬಂದ. ಆಟೋದವನನ್ನು ಹುಡುಕಿ ವಿಚಾರಿಸಿದ. ಯಾವುದೂ ಉಪಯೋಗವಾಗಲಿಲ್ಲ. ವಜ್ರದ ನೆಕ್ಲೆಸ್ ಕಳೆದು ಹೋಗಿತ್ತು.


ವಜ್ರದ ನೆಕ್ಲೆಸ್ ಇಟ್ಟ ಬಾಕ್ಸ್ ನಲ್ಲಿ ಅದನ್ನು ತಯಾರಿಸಿದ ಆಭರಣ ಮಳಿಗೆಯ ವಿಳಾಸ ಇತ್ತು. ಅಲ್ಲಿ ಹೋಗಿ ಕಳೆದುಕೊಂಡಿದ್ದ ವಜ್ರದ ನೆಕ್ಲೆಸ್ ತರಹದ್ದು ಎಷ್ಟು ಬೆಲೆಯಾಗಬಹುದು ಎಂದು ವಿಚಾರಿಸಿದರು. ಸುಮಾರು ನಾಲ್ಕೂವರೆ ಲಕ್ಷ ಬೆಲೆಯ ನೆಕ್ಲೆಸ್ ಅದಾಗಿತ್ತು. ಆ ಹಣವನ್ನು ಅನಂತ ಎಲ್ಲಿಂದಲೋ ಸಾಲ ತಂದ. ಅದನ್ನು ಖರೀದಿಸಿ ಆ ನೆಕ್ಲೆಸ್ ಅನ್ನು ತನ್ನ ಸ್ನೇಹಿತೆ ಕಮಲಾಳ ಮನೆಗೆ ಹೋಗಿ ಹಿಂತಿರುಗಿಸಿದಳು ಲಕ್ಷ್ಮಿ. ಅದರ ಬಾಕ್ಸ್ ನ್ನು ತೆರೆದು ಕೂಡ ನೋಡಲಿಲ್ಲ ಕಮಲಾ. ಅದನ್ನು ಯಾವುದೊ ಒಂದು ಸಲ ಹಾಕಿಕೊಂಡಿದ್ದು, ಮತ್ತೆ ಅದನ್ನು ಧರಿಸಲು ತನಗೆ ಇಷ್ಟ ಇಲ್ಲ ಎಂದು ಕೂಡ ಹೇಳಿದಳು.


ಮಾಡಿದ ಸಾಲ ಅನಂತ ಮತ್ತು ಲಕ್ಷ್ಮಿ ಕುಟುಂಬಕ್ಕೆ ಹೊರೆಯಾಗಿ ಬಿಟ್ಟಿತು. ಬಡ್ಡಿ ತೀರಿಸಲು ಹಣ ತೆತ್ತು, ಅವರ ಕುಟುಂಬ ಬಡತನದಿಂದ ಕಡು ಬಡತನಕ್ಕೆ ಇಳಿದುಬಿಟ್ಟಿತು. ಮನೆ ಕೆಲಸದವರನ್ನು ಬಿಡಿಸಿ ಮನೆ ಕೆಲಸವನ್ನು ತಾನೇ ಮಾಡಿಕೊಳ್ಳತೊಡಗಿದಳು ಲಕ್ಷ್ಮಿ. ಅನಂತ ಸಾಯಂಕಾಲ ಕೂಡ ಬೇರೆ ಕೆಲಸಕ್ಕೆ ಹೋಗಲಾರಂಭಿಸಿದ್ದ. ಸಾಲ ಮುಟ್ಟಲು ಕೆಲ ವರುಷಗಳೇ ಹಿಡಿದವು. ಆದರೆ ಅಷ್ಟರಲ್ಲಿ ಲಕ್ಷ್ಮಿಯ ಮುಖದಲ್ಲಿ ಹೊಳಪು ಎಲ್ಲ ಕಳೆದು ಹೋಗಿ, ಮುಖ ಸುಕ್ಕು ಗಟ್ಟಿತ್ತು. ಹತ್ತಾರು ವರುಷಗಳು ಹೆಚ್ಚಿಗೆ ವಯಸ್ಸಾಗಿರುವಂತೆ ಅವಳು ಕಾಣುತ್ತಿದ್ದಳು.


ಒಂದು ಸಂಜೆ ಮಾರುಕಟ್ಟೆಯಲ್ಲಿ ಕಮಲಾಳನ್ನು ನೋಡಿದ ಲಕ್ಸ್ಮಿ ಅವಳನ್ನು ಮಾತನಾಡಿಸಿದಳು. ಗುರುತು ಸಿಗದಂತೆ ಆಗಿದ್ದ ಲಕ್ಷ್ಮಿಯನ್ನು ನೋಡಿದ ಕಮಲಾ ಏನು ತೊಂದರೆ ಎಂದು ಕೇಳಿದಳು. 'ಅದಕ್ಕೆಲ್ಲ ನಿನ್ನ ವಜ್ರದ ನೆಕ್ಲೆಸ್ ಕಾರಣ' ಎಂದು ಹೇಳಿದಳು ಲಕ್ಷ್ಮಿ. ಅದು ತನಗೆ ಅರ್ಥವಾಗಲಿಲ್ಲ ಎನ್ನುವಂತೆ 'ಅದ್ಹೇಗೆ?' ಎಂದು ಪ್ರಶ್ನಿದಳು ಕಮಲಾ. ಅದನ್ನು ಕಳೆದುಕೊಂಡಿದ್ದು ಮತ್ತು ಅದೇ ತರಹದ ಇನ್ನೊಂದು ವಜ್ರದ ನೆಕ್ಲೆಸ್ ತರಲು ಸಾಲ ಮಾಡಿ ಬವಣೆ ಪಟ್ಟಿದ್ದು ಎಲ್ಲವನ್ನು ವಿವರಿಸಿದಳು ಲಕ್ಷ್ಮಿ. 


ಅದನ್ನು ಕೇಳಿ ಮಮ್ಮಲ ಮರುಗಿದ ಕಮಲಾ, ಲಕ್ಷ್ಮಿಯ ಎರಡು ಕೈಗಳನ್ನು ತನ್ನ ಕೈಯಲ್ಲಿ ತೆಗೆದುಕೊಂಡು ಹೇಳಿದಳು 'ನಿನ್ನ ಪರಿಸ್ಥಿತಿ ನೋಡಿ ಸಂಕಟವಾಗುತ್ತದೆ ಲಕ್ಷ್ಮಿ. ನನ್ನ ವಜ್ರದ ನೆಕ್ಲೆಸ್ ಅಸಲಿಯದ್ದಾಗಿರಲಿಲ್ಲ. ಅದಕ್ಕೆ ಎರಡು ಸಾವಿರ ಕೊಟ್ಟಿದ್ದೆ ಅಷ್ಟೇ' 

Thursday, February 24, 2022

ಸರ್ವಾಧಿಕಾರಿಗಳ ಮೊದಲ ಪ್ರೇಮ: ಯುದ್ಧ

ಜಗತ್ತನ್ನೇ ಗೆಲ್ಲ ಹೋರಾಟ ಮಹತ್ವಾಕಾಂಕ್ಷಿಗಳಲ್ಲಿ ಮೂವರು ಪ್ರಮುಖರು: ಅಲೆಕ್ಸಾಂಡರ್, ನೆಪೋಲಿಯನ್ ಮತ್ತು ಹಿಟ್ಲರ್. ಅವರ ಪೀಳಿಗೆ ಇನ್ನು ಮುಗಿದು ಹೋಗಿಲ್ಲ ಎನ್ನುವಂತೆ, ಆ ಸಾಲಿಗೆ ಸೇರಲು ಇಂದಿನ ಕಾಲಮಾನದ ಇಬ್ಬರು ತಯಾರಾಗಿ ನಿಂತಿದ್ದಾರೆ. ಅವರು ರಷ್ಯಾ ದೇಶದ ಪುಟಿನ್ ಮತ್ತು ಚೀನಾದ ಕ್ಸಿ ಜಿಂಪಿಂಗ್. ಅವರೆಲ್ಲರ ವ್ಯಕ್ತಿತ್ವಗಳಲ್ಲಿ ಸಮಾನವಾಗಿ ಕಂಡು ಬರುವ ಅಂಶಗಳು ಕೆಲವಿವೆ. ಮೊದಲಿಗೆ ಸರ್ವಾಧಿಕಾರ, ಅವರನ್ನು ಯಾರೂ ಎದುರು ಹಾಕಿಕೊಳ್ಳುವ ಹಾಗೆ ಇಲ್ಲ. ಅವರುಗಳ ಹಿಂದೆ ಬಲಿಷ್ಠ ಸೈನ್ಯಗಳಿವೆ. ಅವರಿಗೆ ಅವಶ್ಯಕತೆಗೆ ತಕ್ಕಂತೆ ಸ್ನೇಹಿತರು. ಸಮಯ, ಸನ್ನಿವೇಶ ಬದಲಾದರೆ ತಮ್ಮ ಸ್ನೇಹಿತರನ್ನು ಯಾವುದೇ ಮುಲಾಜಿಲ್ಲದೆ ಮುಗಿಸಿ ಹಾಕುತ್ತಾರೆ. ಅವರಿಗೆ ತಮ್ಮ ಸಾಮರ್ಥ್ಯದ ಮೇಲೆ ಅಗಾಧ ನಂಬಿಕೆ. ಸಾಮಾನ್ಯ ಜನ ಎದುರಿಸಲಾಗದ ಅಪಾಯಗಳನ್ನು ಅವರುಗಳು ಸುಲಭವಾಗಿ ನಿಭಾಯಿಸುತ್ತಾರೆ. ಕಾನೂನುಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳುತ್ತಾರೆ. ತಮ್ಮ ದೇಶದ ಜನರನ್ನು ಪ್ರಭಾವದಿಂದಲೋ ಇಲ್ಲವೇ ಬೆದರಿಸಿಯೋ ತಮ್ಮ ಕೆಲಸಗಳಿಗೆ ಸಹಕಾರ ನೀಡುವಂತೆ ಮತ್ತು ಪ್ರತಿಭಟಿಸದಂತೆ ನೋಡಿಕೊಳ್ಳುತ್ತಾರೆ. ಅವರು ತಮ್ಮ ಆಸೆಗಳನ್ನು ಸಾಕಾರಗೊಳಿಸಿಕೊಳ್ಳುವುದರಲ್ಲಿ ಯಶಸ್ಸು ಕಾಣುತ್ತಾರೋ ಇಲ್ಲವೋ ಆದರೆ ಅವರ ಅಂತ್ಯ ಮಾತ್ರ ದಾರುಣವಾಗಿರುತ್ತದೆ.


ಕುದುರೆಯ ಬೆನ್ನೇರಿ, ಸುಮಾರು ಮೂವತ್ತು ಸಾವಿರ ಕಿ.ಮೀ. ದೂರವನ್ನು ತನ್ನ ಸೈನ್ಯದೊಂದಿಗೆ ಕ್ರಮಿಸಿ, ಒಂದರ ನಂತರ ಇನ್ನೊಂದರಂತೆ ಯುದ್ಧಗಳನ್ನು ಅಲೆಕ್ಸಾಂಡರ್ ಗೆಲ್ಲಲ್ಲು ಸಾಧ್ಯವಾಗಿದ್ದು ಅವನ ಮೇಲೆ ವಿಪರೀತ ಅಭಿಮಾನ ಹೊಂದಿದ ಸೈನ್ಯದಿಂದ. ಆದರೆ ಯುದ್ಧ ಬಿಟ್ಟು ಬೇರೇನೂ ಮಾಡಲೊಲ್ಲದ ಅಲೆಕ್ಸಾಂಡರ್ ಕೊನೆಯುಸಿರೆಳೆದಾಗ ಅವನ ಹೆಣ ಅವನ ತಾಯ್ನಾಡು ತಲುಪಲಿಲ್ಲ. ಆಮೇಲೆ ಎಷ್ಟೋ ವರುಶಗಳವರೆಗೆ ಅವನ ದಂಡನಾಯಕರು ಅಲೆಕ್ಸಾಂಡರ್ ನ ಕಿರೀಟವನ್ನು ನ್ಯಾಯಸ್ಥಾನದಲ್ಲಿ ಇಟ್ಟು ತಮ್ಮ ಅಧಿಕಾರ ಮುಂದುವರೆಸಿದರು.


ರಣರಂಗದಲ್ಲಿ ಚಾಣಕ್ಷತೆಯಿಂದ, ಎದುರಾಳಿಗಳಲ್ಲಿ ಗೊಂದಲವೆಬ್ಬಿಸುತ್ತ ಶತ್ರು ಸೈನ್ಯವನ್ನು ಧೂಳಿಪಠ ಮಾಡುತ್ತ ಹಲವಾರು ಯುದ್ಧಗಳನ್ನು ಗೆದ್ದ ನೆಪೋಲಿಯನ್ ಮಾನವ ಜಗತ್ತು ಕಂಡ ಯುದ್ಧ ತಂತ್ರಗಾರಿಕೆಯ ನಿಪುಣ. ಆದರೆ ಅವನ ಅಂತ್ಯವೂ ಹಾಗೆ ಇತ್ತು. ಮಾನವ ಸಂಪರ್ಕ ಇಲ್ಲದೆ ಒಂದು ದ್ವೀಪದಲ್ಲಿ ಬಂದಿಯಾಗಿ ಕೊನೆ ಉಸಿರೆಳೆದ ಆ ನಿಪುಣ.


ಜರ್ಮನಿ ಜನರನ್ನು ತನ್ನ ಮೋಡಿಗೆ ಸಿಲುಕಿಸಿ ಅಧಿಕಾರ ಪಡೆದುಕೊಂಡು, ಎಂತಹ ಯುದ್ಧಗಳಿಗಾದರೂ ಸೈ ಎನ್ನುವಂತಹ ಬಲಿಷ್ಠ ಸೇನೆಯನ್ನು ಮುಂದಿಟ್ಟುಕೊಂಡು ಯುರೋಪ್ ನ ಎಲ್ಲ ರಾಷ್ತ್ರಗಳಿಗೂ ಸಿಂಹ ಸ್ವಪ್ನ ಎನಿಸಿದ ಹಿಟ್ಲರ್, ಸೋತು ಹೋದಾಗ ತಾನೇ ಗುಂಡಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡ.


ಆದರೆ ಯುದ್ಧ ಘೋಷಣೆ ಮಾಡುವ, ಉತ್ಸಾಹದಿಂದ ರಣರಂಗಕ್ಕೆ ಇಳಿಯುವ ವೀರರು ಇಂದಿಗೂ ಇದ್ದಾರೆ. ರಷ್ಯಾ ಮತ್ತು ಚೀನಾ ದೇಶಗಳು ಅತ್ಯಾಧುನಿಕ ಎನಿಸುವ ತಂತ್ರಜ್ಞಾನ ಹೊಂದಿದ ಕ್ಷಿಪಣಿಗಳನ್ನು ಹೊಂದಿದ್ದಾರೆ. ಯಾವುದೇ ಜನ ಸಮುದಾಯವನ್ನು ನಾಶ ಪಡಿಸಬಲ್ಲ ಪರಮಾಣು ಬಾಂಬ್ ಗಳನ್ನೂ ಹೊಂದಿದ್ದಾರೆ. ಎಲ್ಲಕ್ಕೂ ಮಿಗಿಲೆನ್ನುವಂತೆ ಎಂತಹ ಎದುರಾಳಿಗಳನ್ನು ಬೇಕಾದರೂ ನಾಶ ಮಾಡುವ ಉತ್ಸಾಹದ ಮಾತುಗಳನ್ನು ಮತ್ತು ಯುದ್ಧ ಪ್ರಚೋದಿಸುವ ಕಾರ್ಯಗಳನ್ನು ಮಾಡುತ್ತಲೇ ಇರುತ್ತಾರೆ. ರಷ್ಯಾ ದೇಶದ ಪುಟಿನ್ ಮತ್ತು ಚೀನಾದ ಕ್ಸಿ ಜಿಂಪಿಂಗ್  ತಮ್ಮ ದೇಶದಲ್ಲಿ ಸರ್ವಾಧಿಕಾರಿಗಳು. ಆದರೆ ಅವರಿಗೆ ಅಷ್ಟಕ್ಕೇ ತೃಪ್ತಿಯಿಲ್ಲ. ಮೊದಲಿಗೆ ನೆರೆ ದೇಶಗಳನ್ನು, ನಂತರ ಜಗತ್ತನ್ನೇ ಗೆಲ್ಲುವ ಮಹದಾಸೆ ಅವರದು.


"ಧಾಳಿಕೋರನಿಗೆ ಯಾವ ಧರ್ಮ" ಎಂದ ಅಲ್ಲಮಪ್ರಭುಗಳು "ಸಾಸಿವೆ ಸುಖಕ್ಕೆ ಸಾಗರದಷ್ಟು ದುಃಖ ನೋಡಾ" ಎಂದೂ ಕೂಡ ಹೇಳಿದ್ದಾರೆ. ಯಾರೋ ಒಬ್ಬ ಸರ್ವಾಧಿಕಾರಿ ಗೆದ್ದ ದೊಡ್ಡಸ್ತಿಕೆ ತೋರಲು ಸಾವಿರಾರು ಜನ ಪ್ರಾಣ ಕಳೆದುಕೊಳ್ಳಬೇಕು. ಲಕ್ಷಾಂತರ ಜನ ಮನೆ-ಆಸ್ತಿ ಕಳೆದುಕೊಂಡು ಊರು ಬಿಟ್ಟು ಸುರಕ್ಷಿತ ಜಾಗಕ್ಕೆ ತಲುಪಬೇಕು. ಯುದ್ಧ ತರುವ ಸಾವು-ನೋವು ಅಪಾರ. ಆದರೆ ಮನುಷ್ಯನ ಹುಚ್ಚು ಮನಸ್ಸಿನ ಹತ್ತು ಮುಖಗಳಲ್ಲಿ ಯುದ್ಧದ ಅತಿರೇಕವೂ ಒಂದು.


ಮನುಷ್ಯ ನಾಗರಿಕತೆಯೆಡೆಗೆ ಹೆಜ್ಜೆ ಇಟ್ಟರೆ, ಅವನನ್ನು ಹಿಂದಕ್ಕೆ ಎಳೆದು ತರದೇ ಬಿಡುವುದಿಲ್ಲ ಈ ಸರ್ವಾಧಿಕಾರಿಗಳು. ಅವರು ಕೂಡ ಸಮಾಜದ ಪ್ರತೀಕ ಅಲ್ಲವೇ.

Sunday, February 13, 2022

ಕಥೆ: ರಾಜಧರ್ಮ

(ವಿಜಯನಗರವನ್ನಾಳಿದ ಅರಸು ಶ್ರೀಕೃಷ್ಣದೇವರಾಯನ ಸಾವು ಮತ್ತು ನಂತರದ ಅಧಿಕಾರ ಹಸ್ತಾಂತರದ ಬಗ್ಗೆ ಇತಿಹಾಸದಲ್ಲಿ ಸಮರ್ಪಕವಾದ ವಿವರಣೆಗಳಿಲ್ಲ. ಆ ಕಾಲಘಟ್ಟದಲ್ಲಿ ನಡೆದಿರಬಹುದಾದ ಸಂಗತಿಗಳ ಬಗ್ಗೆ ಒಂದು ಕಾಲ್ಪನಿಕ ಕಥೆ)


ಅಧ್ಯಾಯ-೧; ವಿರೂಪಾಕ್ಷ ಬೀದಿಯ ವರ್ತಕರು ತಮ್ಮಲ್ಲೇ ಮಾತನಾಡಿಕೊಳ್ಳುವುದು


ಮೊದಲನೆಯ ವರ್ತಕ: ತಲೆ ತಲಾಂತರಗಳಿಂದ ಇಲ್ಲಿನ ಜನರು ವಿರೂಪಾಕ್ಷನಿಗೆ ನಡೆದು ಕೊಂಡರೆ, ನಮ್ಮ ರಾಯ ರಾಜ್ಯದ ಬೊಕ್ಕಸ ಹಣವನ್ನೆಲ್ಲ ತಿರುಪತಿಯಲ್ಲಿ ಸುರಿದು ಬರುತ್ತಾನೆ. ನೀವೇ ನೋಡಿತ್ತಿದ್ದೀರಲ್ಲ. ವಿರೂಪಾಕ್ಷನ ಸನ್ನಿಧಿಗೆ ಕೇವಲ ಎರಡು ಸಲ ದೇಣಿಗೆ ನೀಡಿದರೆ, ತಿರುಪತಿ ವೆಂಕಟೇಶನಿಗೆ ಏಳು ಸಲ ಧನ-ಕನಕ ಅರ್ಪಿಸಿದ್ದಾನೆ.


ಎರಡನೆಯ ವರ್ತಕ: ನಮ್ಮ ರಾಯ ತಿರುಪತಿಗೆ ಹೋಗುವುದು ವರುಷಕ್ಕೊಮ್ಮೆ. ಆದರೆ ಇಲ್ಲಿ ಹಂಪೆಯಲ್ಲಿ ವಿಠಲ ದೇವಸ್ಥಾನ ಕಟ್ಟಿದ ನಂತರ, ಅಲ್ಲಿ ಕೊಡುವ ದಾನಗಳಿಗೆ, ಆ ದೇವಸ್ಥಾನದ ವೈಭವಕ್ಕೆ, ಅಲ್ಲಿನ ಪೇಟೆಗೆ ಕೂಡ ಮೆರುಗು ಬಂದು ನಮ್ಮ ಪೇಟೆ ವ್ಯಾಪಾರ ಕಡಿಮೆ ಆಗಿದೆ.


ಮೂರನೆಯ ವರ್ತಕ: ಇದು ಬರಿ ಶೈವ-ವೈಷ್ಣವ ಸಮಸ್ಯೆ ಅಷ್ಟೇ ಅಲ್ಲ. ರಾಜನ ಆಸ್ಥಾನದಲ್ಲಿ ತೆಲುಗು ಭಾಷಿಕರೇ ತುಂಬಿದ್ದಾರೆ. ಸ್ವತಃ ಪ್ರಭುಗಳೇ ತೆಲುಗಿನಲ್ಲಿ ಕಾವ್ಯ ರಚಿಸುತ್ತಾರೆ. ಸುಮ್ಮನ ಅವರಿಗೆ 'ಆಂಧ್ರ ಭೋಜ' ಎಂದು ಕರೆಯುವರೇ? ಸೈನ್ಯದಲ್ಲಿ ಕೂಡ, ಮಂತ್ರಿ ತಿಮ್ಮರಸರು ತೆಲುಗು ದಳವಾಯಿಗಳಿಗೆ ಹೆಚ್ಚಿನ ಅಧಿಕಾರ ಕೊಟ್ಟಿದ್ದಾರೆ.


ಮೊದಲನೆಯ ವರ್ತಕ: ಸಂಗಮ ವಂಶದ ರಾಜರುಗಳೆಲ್ಲ ವಿರೂಪಾಕ್ಷನ ಆಶೀರ್ವಾದ ಪಡೆದು, ಅವನ ಕೃಪೆಯಿಂದ ರಾಜ್ಯ ಆಳಿದವರು ಆದರೆ ಈಗಿನ ತುಳುವ ವಂಶದ ಅರಸರಿಗೆ, ಅದರಲ್ಲೂ ನಮ್ಮ ಈಗಿನ ದೊರೆಗೆ ಮಾತ್ರ ವಿಷ್ಣುವಿನ ಮೇಲೆ ಪರಮ ಪ್ರೀತಿ.


ಎರಡನೆಯ ವರ್ತಕ: ಪ್ರಭುಗಳು ಹೊರಗಿನವರಿಗೆ ಹೆಚ್ಚಿನ ಅವಕಾಶ ನೀಡುವುದು ಮುಂದುವರೆದರೆ ಮುಂದೆ ನಮ್ಮ ಗತಿ?


ಮೂರನೆಯ ವರ್ತಕ: ಸಮಯಕ್ಕೆ ತಕ್ಕಂತೆ ಬದಲಾವಣೆಗಳು ಆಗುತ್ತಲೇ ಇರುತ್ತವೆ. ಆದರೆ ಅಲ್ಲಿಯವರೆಗೆ ಸುಮ್ಮನೆ ಇರದೇ ಆಕ್ಷೇಪಿಸಿದರೆ, ರಾಜಭ್ರಷ್ಟ ಎನಿಸಿಕೊಂಡು ತಲೆದಂಡ ತೆರಬೇಕಾದೀತು.

---


ಅಧ್ಯಾಯ-೨; ಮಗನನ್ನು ಕಳೆದುಕೊಂಡ ಶೋಕದಲ್ಲಿ ಶ್ರೀಕೃಷ್ಣದೇವರಾಯ ತನ್ನ ಅರಮನೆಯಲ್ಲಿ ಶೋಕಿಸುತ್ತಿದ್ದಾನೆ.


ಸರಿ ರಾತ್ರಿ ಹೊತ್ತಾಗಿ, ಎಷ್ಟು ಉರುಳಾಡಿದರೂ ಕಣ್ಣಿಗೆ ನಿದ್ದೆ ಮಾತ್ರ ಬರದು. ಹಾಸಿಗೆಯಿಂದ ಎದ್ದು ತನ್ನ ಅರಮನೆಯಲ್ಲೇ ಶ್ರೀಕೃಷ್ಣದೇವರಾಯ ಶತಪಥ ತಿರುಗಲು ತೊಡಗುತ್ತಾನೆ. ಅವನಿಗೆ ತಾನು ಎಡವಿದ್ದೆಲ್ಲಿ ಎಂದು ಅರಿವಾಗುತ್ತಿಲ್ಲ. ರಣರಂಗದಲ್ಲಿ ಸೋಲನ್ನೇ ಕಾಣದ ಅರಸನ ಮಗನಿಗೆ, ಅವನ ಅರಮನೆಯಲ್ಲೇ ವಿಷ ಪ್ರಾಶನವಾಗುವುದು ಎಂದರೇನು? 

ರಾಜಧಾನಿಗೆ ಯಾರು ಹೊಸಬರು ಬಂದರೂ, ತಳವಾರ ತನಗೆ ತಿಳಿಸುತ್ತಲೇ ಇದ್ದ. ಇದು ಸುಲ್ತಾನರು ಕಳಿಸಿದ ಬೇಹುಗಾರರ ಮಸಲತ್ತಲ್ಲ. ಏಳು ಸುತ್ತಿನ ಕಾವಲು ದಾಟಿದ ಮೇಲೆ ಮಾತ್ರ ಅರಸನ ಭೇಟಿ ಹಾಗೆ ಅರಮನೆಗೆ ಕಾಲಿಡಲು ಸಾಧ್ಯ. ಇದು ಹೊರಗಿನವರ ಕೆಲಸ ಅಲ್ಲವೇ ಅಲ್ಲ. ಛೆ, ಅಪ್ಪಾಜಿ ತಿಮ್ಮರಸು ಅವರ ಮೇಲೆ ಅನುಮಾನ ಪಟ್ಟು ಅವರನ್ನು ಶಿಕ್ಷಿಸಿದ್ದು ಎಂಥ ತಪ್ಪಾಗಿ ಹೋಯಿತು. ಈ ಕೆಲಸ ಮತ್ತಿನ್ನಾರದ್ದು? ಮಂತ್ರಿ, ದಳವಾಯಿಗಳ ಮನೆಗಳಲ್ಲಿ ಏನು ಮಾತಾದರೂ, ಯಾರು ಬಂದು ಹೋದರೂ ಅದು ತನಗೆ ಅರಿವಿಗೆ ಬರದೇ ಇರಲು ಸಾಧ್ಯವಿದ್ದಿಲ್ಲ. ರಾಜನಾದವನಿಗೆ ಅಂತಹ ಮುನ್ನೆಚ್ಚರಿಕೆ ಇರುವುದಕ್ಕೆ ಅಲ್ಲವೇ ತಾನು  ನಂಬಿಗಸ್ಥ ಗುಪ್ತಚರರ ಬಲವಾದ ವ್ಯವಸ್ಥೆ ಕಟ್ಟಿಕೊಂಡಿದ್ದು? 

ಹಾಗಾದರೆ, ಇದು ಕುಟುಂಬದವರ ಕೆಲಸವೇ? ಮಲ ತಮ್ಮ ಅಚ್ಯುತರಾಯನಿಗೆ ಸಿಂಹಾಸನದ ಮೇಲೆ ಕಣ್ಣಿರುವುದು ತಮಗೆ ತಿಳಿಯದ ವಿಷಯವೇನಲ್ಲ. ಅದಕ್ಕೆ ಅಲ್ಲವೇ ಅವನನ್ನು ದೂರದ ಚಂದ್ರಗಿರಿಗೆ ಅಟ್ಟಿದ್ದು? ಅವನು ಅಲ್ಲಿಯೇ ಕುಳಿತು ಮಸಲತ್ತು ಮಾಡುವುದಾದರೆ, ಅವನಿಗೆ ರಾಜಧಾನಿ ಹಂಪೆಯಲ್ಲಿ ಯಾರದೋ ಸಹಕಾರ ಇರಬೇಕಲ್ಲವೇ? ಯಾರಿಗೆ ಅಂತಹ ಆಸೆ ಉಂಟು? ಶ್ರೀಕೃಷ್ಣದೇವರಾಯನ ಮನದಲ್ಲಿ ಕ್ಷಣ ಕಾಲ ಅದು ಅಳಿಯ ರಾಮರಾಯನ ಕೆಲಸವಿರಬಹುದೇ ಅನ್ನಿಸಿತು. ತಕ್ಷಣವೇ ತಲೆ ಕೊಡವಿ, ಅವನು ಯುದ್ಧ ಭೂಮಿಯಲ್ಲಿ ಭುಜಕ್ಕೆ ಭುಜ ಕೊಟ್ಟು ಹೋರಾಡಿ , ನಂಬಿಕೆಗೆ ಅರ್ಹ ಅನ್ನಿಸಿದ ಮೇಲೆ ಅಲ್ಲವೇ ಅವನಿಗೆ ತನ್ನ ಮಗಳನ್ನು ಧಾರೆ ಎರೆದು ಕೊಟ್ಟಿದ್ದು? ಈ ಕೆಲಸ ಅವನದ್ದಿರಿಲಿಕ್ಕಿಲ್ಲ ಎಂದು ಪ್ರಭುಗಳಿಗೆ ಅನ್ನಿಸಿತು. ಆದರೂ ತಮಗೆ ಮೊದಲಿನ ಹಾಗೆ ಸ್ಪಷ್ಟ, ದಿಟ್ಟ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಕಳೆದು ಹೋಗಿದೆ ಎಂದು ಶ್ರೀಕೃಷ್ಣದೇವರಾಯನಿಗೆ ಸ್ವಯಂ ಅನ್ನಿಸತೊಡಗಿತ್ತು. 

ತಿರುಪತಿ ವೆಂಕಟೇಶನಿಗೆ ಹರಕೆ ಹೊತ್ತ ಮೇಲೆಯೇ ಹುಟ್ಟಿದ ತನ್ನ ಮಗನಿಗೆ, ಆ ವೆಂಕಟೇಶ ಯಾಕೆ ಅಕಾಲ ಮರಣ ಕೊಟ್ಟನೆಂದು ದೊರೆಗಳಿಗೆ ತಿಳಿಯದಾಯಿತು. ತಾನು ತಿರುಪತಿಗೆ ಕೊಟ್ಟ ಧನ-ಕನಕಗಳೇನು ಕಡಿಮೆಯೇ? ಆದರೂ ವೆಂಕಟೇಶನಿಗೆ ತಮ್ಮ ವಂಶ ರಾಜ್ಯಭಾರ ಮುಂದುವರೆಸುವುದು ಯಾಕೆ ಇಷ್ಟವಾಗಲಿಲ್ಲವೋ ಎಂದು ಪ್ರಭುಗಳಿಗೆ ತಿಳಿಯಲಿಲ್ಲ. ಇಷ್ಟಕ್ಕೂ ತಮ್ಮ ಆರೋಗ್ಯವೇಕೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ? ತಮ್ಮ ಮೈಯಲ್ಲಿ ಅಲ್ಪ ಪ್ರಮಾಣದ ವಿಷವೇನಾದರೂ ಸೇರಿಕೊಂಡಿದೆಯೇ? ಇನ್ನು ರಣರಂಗದಲ್ಲಿ ಮತ್ತೆ ಖಡ್ಗ ಬೀಸುತ್ತ ಕಾದಲು  ಸಾಧ್ಯವೇ? ಕುಮಾರನ ಸಾವಿನ ನಂತರ, ತಮಗೂ ಬದುಕುವ ಆಸೆ ಕುಂದುತ್ತಾ ಹೋಗುತ್ತಿರುವುದೇಕೆ? ಶ್ರೀಕೃಷ್ಣದೇವರಾಯನ ಅಂತರಂಗ ಕಾದ ಬಾಣಲಿಯಾಗಿತ್ತು. ದೇಹ ಮಾತ್ರ ಬಳಲಿ ಬೆಂಡಾಗಿ ಹೋಗಿತ್ತು. 

----


ಅಧ್ಯಾಯ-೩; ದಳವಾಯಿಗಳು ತಮ್ಮಲ್ಲೇ ಮಾತನಾಡಿಕೊಳ್ಳುತ್ತಿರುವುದು

ಒಬ್ಬ ದಳವಾಯಿ: ನಮ್ಮ ಅರಸರ ಮುಖ ನೋಡಿ ತಿಂಗಳುಗಳೇ ಆದವು. ಅರಮನೆಯಲ್ಲಿ ಏನು ನಡೆಯುತ್ತಿರಬಹುದು? ಇಷ್ಟಕ್ಕೂ ನಮ್ಮ ರಾಜಕುಮಾರನನ್ನು ಸಾಯಿಸಿದವರು ಯಾರು? ಏಕಿರಬಹುದು?


ಇನ್ನೊಬ್ಬ ದಳವಾಯಿ: ರಾಜ ಮನೆತನದ ವಿಷಯಗಳು ಅಷ್ಟು ಸುಲಭವಲ್ಲ. ಸಂಗಮ ವಂಶದವರನ್ನು ಕೊನೆಗಾಣಿಸಿಯೇ ಅಲ್ಲವೇ ಸಾಳುವ ವಂಶದವರು ಅಧಿಕಾರಕ್ಕೆ ಬಂದಿದ್ದು? ಹಾಗೆಯೆ ಸಾಳುವ ವಂಶದ ರಾಜಕುಮಾರನನ್ನು ಸಾಯಿಸಿಯೇ ಅಲ್ಲವೇ ಶ್ರೀಕೃಷ್ಣದೇವರಾಯನ ಅಣ್ಣ ಪಟ್ಟ ಏರಿದ್ದು ಮತ್ತು ತುಳುವ ವಂಶದ ರಾಜ್ಯಭಾರ ಆರಂಭವಾಗಿದ್ದು? ಅಧಿಕಾರದ ಆಸೆ ಕ್ಷತ್ರಿಯರಿಗೆ ಸಹಜವಾದದ್ದು. ಯುದ್ಧ ಗೆದ್ದೋ, ಇಲ್ಲವೇ ಮೋಸದಿಂದ ಮುಗಿಸಿಯೋ, ಅಧಿಕಾರ ಹಿಡಿದುಕೊಳ್ಳುತ್ತಾರೆ.


ಮತ್ತೊಬ್ಬ ದಳವಾಯಿ: ಈಗಲೂ ಹಾಗೆ ಆಗಬಹುದು ಎನ್ನಿಸುತ್ತಿದೆ. ಕಾದು ನೋಡಬೇಕು ಅಷ್ಟೇ.

---


ಅಧ್ಯಾಯ-೪; ಶ್ರೀಕೃಷ್ಣದೇವರಾಯರ ಸಾವಿನ ನಂತರ ಅವರ ಮಲ ತಮ್ಮ ಅಚ್ಚುತರಾಯರು ಪಟ್ಟವನ್ನೇರಿದ್ದಾರೆ. ಮತ್ತು ಮಂತ್ರಿ ಪದವಿ ಶ್ರೀಕೃಷ್ಣದೇವರಾಯರ ಅಳಿಯ ರಾಮರಾಯರವರದ್ದಾಗಿದೆ.

ರಾಮರಾಯ ತನ್ನ ಅಂತರಂಗದಲ್ಲೇ ಮೆಲುಕು ಹಾಕುತ್ತಿದ್ದ. ಯಾವುದೇ ಸಾಹಸಿ ಬರಿ ಧನ-ಐಶ್ವರ್ಯಗಳಿಗೆ ಮರುಳಾಗಿ ಕಾದಾಟಕ್ಕೆ ಇಳಿಯುವುದಿಲ್ಲ. ಅವನಿಗೆ ಅಧಿಕಾರದ ಆಸೆಯೇ ಮೂಲವಾಗಿರುತ್ತದೆ. ತನ್ನ ಮಾವ ಮತ್ತು ಅವನ ಮಂತ್ರಿ ತಿಮ್ಮರಸು ಇವರುಗಳೇ ಅಧಿಕಾರ ಮುಂದುವರೆಸಿದ್ದರೆ, ತನಗೆ ಮಂತ್ರಿಯಾಗುವ ಅವಕಾಶ ಎಲ್ಲಿರುತ್ತಿತ್ತು? ಇಷ್ಟಕ್ಕೂ ಬರೀ ಮಂತ್ರಿ ಪದವಿ ತನಗೆ ಸಮಾಧಾನ ತರುವ ವಿಷಯ ಅಲ್ಲ. ಆದರೆ ರಾಜ್ಯದ ಎಲ್ಲದ ಅಧಿಕಾರಗಳ ಮೇಲೆ ಹಿಡಿತ ಸಾಧಿಸಿದ ಮೇಲೆ ಅಲ್ಲವೇ ತನ್ನನ್ನು ರಾಜ ಎಂದು ಜನತೆ ಒಪ್ಪಿಕೊಳ್ಳುವುದು? ಈಗಿರುವ ಮಂತ್ರಿ  ಪದವಿಯ ಸಹಾಯದಿಂದ ಉಳಿದ ರಾಜ್ಯಭಾರದ ಅಧಿಕಾರಗಳನ್ನು ತನ್ನ ಹತೋಟಿಗೆ ತೆಗೆದುಕೊಳ್ಳುವುದಕ್ಕೆ ಎಷ್ಟು ಸಮಯ ಬೇಕಾಗಬಹುದು? ಅಲ್ಲಿಯವರೆಗೆ ಮಾತ್ರ ಅಚ್ಚುತರಾಯನಿಗೆ ತನ್ನ ಸಹಕಾರ ಸಾಧ್ಯ. ಅವನ ನಂತರ ವಿಜಯನಗರ ಸಾಮ್ರಾಜ್ಯದ ಸಂಪೂರ್ಣ ಅಧಿಕಾರ ತನ್ನದೇ. 

ತಾನು ಸಾಹಸಿಯಾದದ್ದಕ್ಕೆ ಅಲ್ಲವೇ ಶ್ರೀಕೃಷ್ಣದೇವರಾಯ ತನ್ನನ್ನು ಅಳಿಯನಾಗಿ ಒಪ್ಪಿಕೊಂಡಿದ್ದು. ಅವನ ಮಗಳನ್ನು ಮದುವೆಯಾದ ತಾನು ರಾಜ ಕುಟುಂಬದ ಸದಸ್ಯನೇ ಆಗಲಿಲ್ಲವೇ? ಸಂಗಮ, ಸಾಳುವ ವಂಶಗಳು ಕೊನೆಯಾದ ಹಾಗೆ ಈ ತುಳುವ ವಂಶದ ಅಧಿಕಾರ ಕೂಡ ಕೊನೆಯಾಗಬಾರದೇಕೆ? ಇಷ್ಟಕ್ಕೂ ಅಧಿಕಾರ ಯಾರ ಸ್ವತ್ತೂ ಅಲ್ಲ. ಬಲದಿಂದಲೋ, ಬುದ್ಧಿಯಿಂದಲೋ ಗೆದ್ದವನಿಗೆ ಸಲ್ಲುತ್ತದೆ ಅಧಿಕಾರ. ಹಿಂದೆ ಶ್ರೀಕೃಷ್ಣದೇವರಾಯನನ್ನು ಸಾಯಿಸುವುದಕ್ಕೆ ಅವರ ಅಣ್ಣ ಆಜ್ಞೆ ಮಾಡಿರಲಿಲ್ಲವೇ? ತಿಮ್ಮರಸು ಯುಕ್ತಿಯಿಂದಲೇ ಅಲ್ಲವೇ ಶ್ರೀಕೃಷ್ಣದೇವರಾಯ ಪಟ್ಟವನ್ನೇರಿದ್ದು? ಹಾಗೆಯೆ ಇನ್ನೊಬ್ಬರ ಯುಕ್ತಿಗೆ ಅವರಿಬ್ಬರೂ ಪ್ರಾಣ ತೆತ್ತರು. 

ಅರಸನಾದವನಿಗೆ ತನ್ನ ಜೀವದ ಮತ್ತು ಅವನ ಉತ್ತರಾಧಿಕಾರಿಗಳ ಜೀವದ ಅಪಾಯ ಎಂದೆಂದಿಗೂ ಇರುತ್ತದೆ. ಅಪಾಯವನ್ನು ಉಪೇಕ್ಷಿಸಿದಾಗ ಆಗುವ ಹಾನಿ ಅಪಾರ. ಅಂತಹ ಮೈಮರೆತ ಸನ್ನಿವೇಶದಲ್ಲೇ ಅಲ್ಲವೇ  ಶ್ರೀಕೃಷ್ಣದೇವರಾಯ ತನ್ನ ಮಗನನ್ನು ಕಳೆದುಕೊಂಡಿದ್ದು. ಅವರ ಅಣ್ಣ ಸಾಳುವ ವಂಶವನ್ನು ಕೊನೆಗೊಳಿಸಿದ್ದು ಹೀಗೆಯೇ. ಹಾಗಿದ್ದಲ್ಲಿ ಇತಿಹಾಸ ಶ್ರೀಕೃಷ್ಣದೇವರಾಯನ ತಪ್ಪುಗಳನ್ನೇಕೆ ಮನ್ನಿಸಬೇಕು? ರಾಜನಾಗಿ ಅಧಿಕಾರ ಅನುಭವಿಸಿದವನಿಗೆ ಅದು ತಂದೊಡ್ಡುವ ಅಪಾಯಗಳಿಗೆ ತಲೆಯೊಡ್ಡಬೇಕಾದದ್ದು ಕೂಡ ರಾಜಧರ್ಮವೇ. ಅವನು ಉಪಾಯವಾಗಿ ಅಧಿಕಾರಕ್ಕೆ ಬಂದಿದ್ದು ರಾಜಧರ್ಮವಾದರೆ, ಅವನ ಅಂತ್ಯಕ್ಕೆ ಬೇರೆಯವರು ಉಪಾಯ ಮಾಡುವುದು ಕೂಡ ರಾಜಧರ್ಮವೇ.


[ಶ್ರೀಕೃಷ್ಣದೇವರಾಯನ ಸಾವಿನ ಪ್ರಯೋಜನವಾಗಿದ್ದು, ಅವನ ನಂತರ ಅಧಿಕಾರಕ್ಕೆ ಬಂದ ಅವನ ಮಲ ತಮ್ಮ ಅಚ್ಚುತರಾಯನಿಗೆ ಮತ್ತು ಹೆಚ್ಚಿನ ಅಧಿಕಾರ ದೊರಕಿಸಿಕೊಂಡ ರಾಮರಾಯನಿಗೆ. ಅಚ್ಚುತರಾಯನ ಸಾವಿನ ನಂತರ ಅವನ ಮಗನನ್ನು ಹೆಸರಿಗೆ ಮಾತ್ರ ರಾಜನನ್ನಾಗಿ ಮಾಡಿ, ಸಂಪೂರ್ಣ ಅಧಿಕಾರವನ್ನು ತನ್ನ ಕೈಗತ್ತಿಕೊಂಡ ರಾಮರಾಯ ಶ್ರೀಕೃಷ್ಣದೇವರಾಯನ ಸಾವಿನಿಂದ ಹೆಚ್ಚಿನ ಪ್ರಮಾಣದ ಪ್ರಯೋಜನ ಪಡೆಯುವುದರಿಂದ ಅವನ ಮೇಲೆ ಸಂಶಯ ಪಟ್ಟು ಈ ಕಥೆ ಹೆಣೆದಿರಲಾಗಿರುತ್ತದೆ. ಇದು ಒಂದು ಕಲ್ಪನೆ ಮಾತ್ರ. ಇದಕ್ಕೆ ಯಾವ ಆಧಾರಗಳು ಇರುವುದಿಲ್ಲ.]

Saturday, February 5, 2022

ತಾಯಿ ಎನ್ನುವ ಸತ್ಯ, ತಂದೆ ಎನ್ನುವ ನಂಬಿಕೆ, ಮನುಷ್ಯತ್ವ ಎನ್ನುವ ವಿಶಾಲ ಪ್ರೇಮ

ಇತ್ತೀಚಿಗೆ ಬಿಡುಗಡೆಯಾದ 'ರತ್ನನ ಪ್ರಪಂಚ' ಎನ್ನುವ ಕನ್ನಡ ಚಿತ್ರ ನೋಡಿದೆ. ಅದರಲ್ಲಿ ಆ ಚಿತ್ರದ ನಾಯಕನಿಗೆ ತಾನು ದತ್ತು ಪುತ್ರ ಎನ್ನುವ ವಿಷಯ ಗೊತ್ತಾಗಿ, ತನ್ನ ಹಡೆದವರನ್ನು ಮತ್ತು ಒಡಹುಟ್ಟಿದವರನ್ನು ಗುರುತಿಸುವ ಪ್ರಯತ್ನಕ್ಕೆ ಇಳಿಯುತ್ತಾನೆ. ಮೊದಲಿಗೆ ತನಗೆ ಅಕ್ಕ ಇರುವ ವಿಷಯ ಗೊತ್ತಾಗಿ ಅವಳನ್ನು ಹುಡುಕಿಕೊಂಡು ಹೋಗುತ್ತಾನೆ. ಅವಳು ಅವನನ್ನು ಗುರುತಿಸಿದರೂ ತೋರಗೊಡದೆ , ಕೊನೆಗೆ 'ಜೊತೆಗೆ ಆಡಲಿಲ್ಲ, ಬೆಳೆಯಲಿಲ್ಲ, ಕಷ್ಟಕ್ಕೆ ಆಗಲಿಲ್ಲ, ಸುಖಕ್ಕೆ ಆಗಲಿಲ್ಲ, ನೀನ್ಯಾವ ಸೀಮೆ ತಮ್ಮ?' ಎಂದು ದಬಾಯಿಸಿಯೇ ಬಿಡುತ್ತಾಳೆ. ಅವನ ತಮ್ಮನನ್ನು ಹುಡುಕಿಕೊಂಡು ಹೋದ ಮೇಲೆ ಅದೇ ತರಹದ ಅನುಭವ ಆಗುತ್ತದೆ. ಕೊನೆಗೆ ತನ್ನ ಹೆತ್ತ ತಾಯಿಯನ್ನು ಹುಡುಕುತ್ತಾನೆ. ಅಷ್ಟರಲ್ಲಿ ತನ್ನ ಸಾಕು ತಾಯಿ ಸತ್ತ ಸುದ್ದಿ ಬರುತ್ತದೆ. ಆಗ ಅವನಿಗೆ ಸಾಕು ತಾಯಿಯ ಪ್ರೇಮದ ನೆನಪಾಗಿ, ಹೆತ್ತ ತಾಯಿಗೆ ವಿಷಯ ತಿಳಿಸದೇ ಸಾಕು ತಾಯಿಯ ಅಂತ್ಯಸಂಸ್ಕಾರಕ್ಕೆ ಹೊರಡುತ್ತಾನೆ.

 

ವಿಚಾರ ಮಾಡಿ ನೋಡಿ. ಹೆತ್ತ ತಾಯಿಯ ಪ್ರೀತಿ ದೊಡ್ಡದೋ? ಸಾಕು ತಾಯಿಯ ಪ್ರೀತಿ ದೊಡ್ಡದೋ? ಕೃಷ್ಣನ ಹಡೆದ ತಾಯಿ ದೇವಕಿಯ ಪ್ರೀತಿ ದೊಡ್ಡದೋ ಅಥವಾ ಅವನನ್ನು ಬೆಳೆಸಿದ ತಾಯಿ ಯಶೋದೆಯ ಪ್ರೀತಿ ದೊಡ್ಡದೋ? ನೀವು ಅದೇ ಪ್ರಶ್ನೆ ನನಗೆ ಕೇಳಿದರೆ ನಾನು ಖಂಡಿತ ಯಶೋದೆಯ ಪ್ರೀತಿಯ ದೊಡ್ಡದು ಎನ್ನುವ ಉತ್ತರ ಕೊಡುತ್ತೇನೆ. ದೈಹಿಕ-ರಕ್ತ ಸಂಬಂಧಗಳನ್ನು ಮೀರಿ ತೋರಿಸುವ ಪ್ರೀತಿ ನಿಜವಾದ ಮನುಷ್ಯತ್ವವನ್ನು ಅನಾವರಣಗೊಳಿಸುತ್ತದೆ ಎನ್ನುವ ನಂಬಿಕೆ ನನ್ನದು.

 

ತಾಯಿ ಬಿಟ್ಟು ತಂದೆ ವಿಷಯಕ್ಕೆ ಬರೋಣ. ಎಲ್ಲ ತಾಯಂದಿರಿಗೂ ತಮ್ಮ ಮಕ್ಕಳನ್ನು ತಾವು ಹೊತ್ತು ಹೆತ್ತಿರುತ್ತಾದ್ದರಿಂದ ತಾವೇ ಅವರ ತಾಯಿ ಎನ್ನುವ ಸತ್ಯ ಅವರಿಗೆ ಗೊತ್ತಿರುತ್ತದೆ. ಆದರೆ ತಂದೆಗೆ ಅದು ನಂಬಿಕೆ ಮಾತ್ರ. ಮಗು ಹುಟ್ಟಿದಾಗ ಕಣ್ಣು ತಂದೆಯ ಹಾಗೆ, ಮೂಗು ಅಜ್ಜನ ಹಾಗೆ ಎಂದು ನಂಬಿಕೆ ಹುಟ್ಟಿಸುವ ಪ್ರಯತ್ನ ಆರಂಭ ಆಗುತ್ತದೆ. ಆಗ ಅವನ ಹೆಂಡತಿ ಮಗುವನ್ನು ಕೈಯಲ್ಲಿ ಕೊಟ್ಟು ನೀನೆ ಅದರ ತಂದೆ ಎಂದರೆ ಅದನ್ನು ಸಂತೋಷದಿಂದ ಒಪ್ಪಿಕೊಳ್ಳುತ್ತಾನೆ. ಅವನಿಗೆ ಅನುಮಾನ ಇದ್ದರೆ, ಇಂದಿನ ಆಧುನಿಕ ಕಾಲದ ವೈದ್ಯಕೀಯ ಪರೀಕ್ಷೆಗಳು ಕೂಡ ಸಂಪೂರ್ಣ ನಿಖರತೆಯಿಂದ ಯಾವುದನ್ನೂ ಸಾಬೀತು ಪಡಿಸಲಾರವು. ಇನ್ನು ಹಳೆಯ ಕಾಲದಲ್ಲಿ ಯಾವ ಪರೀಕ್ಷೆಗಳು ಇದ್ದವು? ಆದರೂ ಆಧಾರದ ಅವಶ್ಯಕತೆ ಇಲ್ಲದ, ಮಕ್ಕಳ ಮೇಲೆ ಮಮಕಾರ ತೋರುವ ತಂದೆಯ ಪ್ರೀತಿ ಯಾವ ತಾಯಿಗೂ ಕಮ್ಮಿ ಇಲ್ಲ ಎಂದೇ ಹೇಳಬಹುದು. 'ಪ್ರಪಂಚದಲ್ಲಿ ಕೆಟ್ಟ ತಂದೆ ಇರಬಹುದು ಆದರೆ ಕೆಟ್ಟ ತಾಯಿ ಇಲ್ಲ' ಎನ್ನುವ ನಾಣ್ಣುಡಿಯಿದೆ. ಆದರೆ ತಾಯಿ ಸಣ್ಣ ವಯಸ್ಸಿನಲ್ಲೇ ತೀರಿಕೊಂಡು, ಬರೀ ತಂದೆ ಮಾತ್ರ ಬೆಳೆಸಿದ ಹೆಣ್ಣು ಮಕ್ಕಳನ್ನು ಒಮ್ಮೆ ನೋಡಿಕೊಂಡು ಬನ್ನಿ. ಅವರು ಸಮಾಜಕ್ಕೆ ಮಾದರಿ ಎನ್ನುವ ಹಾಗಿರುತ್ತಾರೆ. ಈಗ ಹೇಳಿ, ತನ್ನದೇ ಮಗು ಎನ್ನುವ ಸತ್ಯ ಗೊತ್ತಿರುವ ತಾಯಿಯ ಪ್ರೀತಿ ದೊಡ್ಡದೋ? ಅಥವಾ ಬರೀ ನಂಬಿಕೆಯ ಮೇಲೆ ಪ್ರೀತಿ ತೋರಿಸುವ ತಂದೆಯ ಪ್ರೀತಿ ದೊಡ್ಡದೋ?

 

ಮನುಷ್ಯನ ಇತಿಹಾಸ ಎಷ್ಟು ಹಳೆಯದೋ, ಅನೈತಿಕ ಸಂಬಂಧಗಳು ಕೂಡ ಅಷ್ಟೇ ಹಳೆಯವು. ಅನೈತಿಕ ಸಂಬಂಧಗಳು ಎಷ್ಟೋ ಕುಟುಂಬಗಳ ವೈಷಮ್ಯಕ್ಕೆ, ಕೊಲೆಗಳಿಗೆ ಕಾರಣವಾಗಿವೆ. ಅದೇ ಕಾರಣಕ್ಕೆ ರಾಜ ಮಹಾರಾಜರು ತಮ್ಮ ಅಂತಃಪುರಕ್ಕೆ ನಪುಂಸಕರನ್ನು ಕಾವಲಿಗೆ ಇಡುತ್ತಿರಲಿಲ್ಲವೇ? ಅದೇ ಸಾಮಾನ್ಯ ಮನುಷ್ಯ ತನ್ನ ಹೆಂಡತಿಯನ್ನು ಕಾವಲು ಕಾಯುತ್ತ ಕೂಡಲು ಸಾಧ್ಯವೇ? ಇಷ್ಟಕ್ಕೂ ಹೆಣ್ಣು ಚಂಚಲೆ ಆದರೆ ಅವಳಿಗೆ ಕಾವಲು ಕಾಯುವ ಗಂಡಸನ್ನು ಮೂರ್ಖನನ್ನಾಗಿ ಮಾಡಲು ಎಷ್ಟು ಹೊತ್ತು ಬೇಕು? ಆದರೂ ಗಂಡ-ಹೆಂಡತಿ ಸಂಬಂಧಗಳು ನಂಬಿಕೆ ಮೇಲೆಯೇ ನಿಂತಿವೆ. ತಾಯಿಗೆ ಮಾತ್ರ ಸತ್ಯ ಗೊತ್ತಿದೆ. ಆದರೆ ಕೇವಲ ನಂಬಿಕೆಯ ಆಧಾರದ ಮೇಲೆಯೇ ಮಕ್ಕಳ ಜವಾಬ್ದಾರಿಯನ್ನು ತಂದೆ ಹೊರುತ್ತಾನೆ.

 

ತಾಯಿಗೆ ಸತ್ಯ ಮತ್ತು ತಂದೆಗೆ ನಂಬಿಕೆ ದೊಡ್ಡದಾದರೆ, ಮಕ್ಕಳಿಲ್ಲದ ದಂಪತಿಗಳು ತಮಗೆ ಹುಟ್ಟಿರದ ಮಗುವನ್ನು ಏಕೆ ದತ್ತು ತೆಗೆದುಕೊಳ್ಳುವುದಕ್ಕೆ ಮುಂದಾಗುತ್ತಾರೆ? ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳು ತಾವು ಸ್ವತಃ ಮದುವೆ ಆಗದಿದ್ದರೂ, ಬೇರೆಯವರ ಸಾವಿರಾರು ಮಕ್ಕಳನ್ನು ತಮ್ಮ ಮಕ್ಕಳ ಹಾಗೆ ಮಠದಲ್ಲಿಟ್ಟುಕೊಂಡು ಮುದ್ದೆ-ಬುದ್ಧಿ ಕೊಟ್ಟು ಬೆಳೆಸಲಿಲ್ಲವೇ? ಅವರಿಗಿದ್ದಿದ್ದು ರಕ್ತ ಸಂಬಂಧಗಳ ಹಂಗಲ್ಲ.

 

ತಾಯಿಗೆ ಸತ್ಯ, ತಂದೆಗೆ ನಂಬಿಕೆ ಊರುಗೋಲಾದರೆ, ತಾಯಿ-ತಂದೆ ಪ್ರೀತಿಯನ್ನು ಮೀರಿ ಸಮಾಜವನ್ನು ಸಲಹಿದ ನೂರಾರು ಸಾಧು-ಸಂತರಿದ್ದಾರೆ. ಅವರು ತೋರಿದ ಮನುಷ್ಯತ್ವದ ಪಾಠ ದೊಡ್ಡದು. ನಮ್ಮ ನಿಮ್ಮ ನಡುವೆ ಕ್ಷುಲ್ಲಕವಾಗಿ ನಡೆದುಕೊಳ್ಳುವ ಮನುಜರ ನಡುವೆಯೂ ಸಿದ್ಧಗಂಗೆಯ ಶ್ರೀಗಳು, ಧರ್ಮಸ್ಥಳದ ಹೆಗ್ಗಡೆಯವರು ಇದ್ದಾರೆ ಎನ್ನುವುದೇ ಸಮಾಧಾನದ ವಿಷಯ. ಮನೆ ಮುರಿಯುವ ಸಮಾಜ ಘಾತುಕರ ನಡುವೆಯೂ, ಮನೆ ಉಳಿಸುವ, ಸಮಾಜ ಬೆಳೆಸುವ ಶರಣರು ಮನುಷ್ಯತ್ವ ಎನ್ನುವ ವಿಶಾಲ ಪ್ರೇಮ ಅಳಿಯದಂತೆ ಕಾಪಾಡಿಕೊಂಡು ಬಂದಿದ್ದಾರೆ. ಅವರಿಗೊಂದು ಶರಣು.