Monday, September 5, 2022

ಅಧಿಕಾರ ಹೋದ ಮೇಲೆ ಯಾವ ರಾಜ, ಎಲ್ಲಿಯ ಅಹಂಕಾರ

( "Tears of the Begums" ಪುಸ್ತಕದ ಒಂದು ಅಧ್ಯಾಯದ ಭಾವಾನುವಾದ)


ಮುನ್ನೂರು ವರುಷಗಳ ಕಾಲ ಭಾರತವನ್ನು ಆಳಿ ಮೆರೆದ ಮೊಗಲ್ ವಂಶಂಸ್ಥರ ಕೊನೆಯೂ ಕೂಡ ಅಷ್ಟೇ ಭೀಕರವಾಗಿತ್ತು. ೧೮೫೭ ರ ಸಿಪಾಯಿ ದಂಗೆಯ ನಂತರ ಬ್ರಿಟಿಷರ ಎದಿರೇಟಿಗೆ ಮೊಗಲ್ ಸಾಮ್ರಾಜ್ಯ ಸಂಪೂರ್ಣ ಅವನತಿ ಹೊಂದಿತು. ದೆಹಲಿಯ ಕೆಂಪು ಕೋಟೆಯಲ್ಲಿದ್ದ ರಾಜ ವಂಶಸ್ಥರ ಮನೆಗಳು ನಾಶಗೊಂಡವು. ಅರಮನೆ, ಪಲ್ಲಕ್ಕಿಗಳಿಲ್ಲದೆ ಊಟ ಅರಸಿ ಬೀದಿಗೆ ಬಂದ ಅವರುಗಳು ಪ್ರತಿಕೂಲ ವಾತಾವರಣ ಎದುರಿಸುವಲ್ಲಿ ಸೋತು ಹೋದರು. ಹೊಸ ಶತ್ರು ತಂದೊಡ್ಡಿದ ಕಷ್ಟಗಳನ್ನು ತಾಳಲಾರದೆ ಕಣ್ಮರೆಯಾದ ಇಪ್ಪತ್ತೊಂಬತ್ತು ಜನ ರಾಜ ಕುಟುಂಬದ ಸದಸ್ಯರ ಕಥೆಗಳು ಈ ಪುಸ್ತಕದಲ್ಲಿವೆ. ಅದರಲ್ಲಿ ಮುಖ್ಯವಾದದ್ದು ಮೊಗಲ್ ವಂಶದ ಕೊನೆಯ ರಾಜ ಬಹದ್ದೂರ್ ಶಾಹ್ ನದು.


ಒಂದು ವೇಳೆ ಬಹದ್ದೂರ್ ಶಾಹ್ ಸಿಪಾಯಿ ದಂಗೆಯಲ್ಲಿ ಶಾಮೀಲಾಗದಿದ್ದರೆ, ಅವನ ಜೀವನ ನೆಮ್ಮದಿಯಿಂದ ಮತ್ತು ವೈಭವದಿಂದ ಕೂಡಿರುತ್ತಿತ್ತು. ಆದರೆ ದಂಗೆ ಎದ್ದವರು ಹೆಣೆದ ಬಲೆಯಲ್ಲಿ ಅವನು ಸಿಕ್ಕಿಕೊಂಡು ಕೊನೆಯ ದಿನಗಳಲ್ಲಿ ಅವನು ದುಸ್ಥಿತಿಗೆ ಬಂದುಬಿಟ್ಟ.


ಕೊನೆಯ ಬಾರಿಗೆ ದೆಹಲಿ ಕೋಟೆಯಿಂದ ಹೊರ ನಡೆದಾಗ, ಅವನು ಮೊದಲಿಗೆ ಬಂದದ್ದು ಮೆಹಬೂಬ್-ಈ-ಇಲಾಹಿ ದರಗಾಕ್ಕೆ. ಅವನನ್ನು ಒಂದು ಖುರ್ಚಿಯಲ್ಲಿ ಹೊತ್ತು ತಂದ ಸೇವಕರನ್ನು ಬಿಟ್ಟರೆ ಅವನ ಜೊತೆಗೆ ಬೇರೆ ಯಾರು ಇರಲಿಲ್ಲ. ಅವನ ಮುಖದ ತುಂಬಾ ಚಿಂತೆ ಹೊತ್ತ ಗೆರೆಗಳು. ಹಾಗೆಯೆ ಅವನ ಬಿಳಿ ಗಡ್ಡದಲ್ಲಿ ಮಣ್ಣಿನ ಧೂಳು. ದರಗಾದಲ್ಲಿ ಅವನ ಕ್ಷೇಮ ವಿಚಾರಿಸಿದವರಲ್ಲಿ ಅವನು ಹೇಳಿದ:


"ದಂಗೆ ಎದ್ದವರನ್ನು ಬೆಂಬಲಿಸುವುದರಿಂದ ತಮಗೆ ಕೆಟ್ಟದೇ ಆಗುತ್ತದೆ ಎಂದು ತಿಳಿದಿತ್ತು. ಆದರೆ ಅದು ವಿಧಿ ಲಿಖಿತ ಆಗಿತ್ತೋ ಏನೋ? ಅವರು ಓಡಿ ಹೋದರು. ನಾನು ಭಿಕಾರಿಯಾದೆ. ತಿಮೂರನ ವಂಶಸ್ಥನಾದ ನನಗೆ ಹೋರಾಡುವುದು ರಕ್ತದಲ್ಲೇ ಬಂದಿದೆ. ನನ್ನ ಪೂರ್ವಜರು ಎಂಥಹ ಕಷ್ಟದ ಪರಿಸ್ಥಿತಿಯಲ್ಲೂ ಆಶಾವಾದಿ ಆಗಿದ್ದರು. ಆದರೆ ನನ್ನ ಕೊನೆ ನನಗೆ ಕಾಣುತ್ತಿದೆ. ತಿಮೂರನ ವಂಶದ ಕೊನೆಯ ರಾಜ ನಾನೇ ಎನ್ನುವುದರಲ್ಲಿ ನನಗೆ ಯಾವುದೇ ಸಂಶಯ ಉಳಿದಿಲ್ಲ. ಆ ವಂಶದ ಬೆಳಕು ಇನ್ನು ಕೆಲವು ಘಂಟೆಗಳಲ್ಲಿ ಆರಿ ಹೋಗಲಿದೆ. ಅಂದ ಮೇಲೆ ಮತ್ತೆ ರಕ್ತಪಾತ ಮಾಡಿ ಏನು ಪ್ರಯೋಜನ? ಅದಕ್ಕೆ ನಾನು ಕೋಟೆ ಬಿಟ್ಟು ಬಂದದ್ದು. 


ಈ ದೇಶ ಭಗವಂತನಿಗೆ ಸೇರಿದ್ದು. ಅವನು ಇಚ್ಛಿಸಿದವರು ಇಲ್ಲಿ ಅಧಿಕಾರ ನಡೆಸುತ್ತಾರೆ. ನನ್ನ ವಂಶಸ್ಥರು ಹಿಂದುಸ್ಥಾನವನ್ನು ನೂರಾರು ವರುಷಗಳ ಕಾಲ ತೋಳ್ಬಲದಿಂದ ವೈರಿಗಳನ್ನು ಹೆದರಿಸಿ ರಾಜ್ಯಭಾರ ಮಾಡಿದರು. ಈಗ ಬೇರೆಯವರಿಗೆ ಅಧಿಕಾರ ನಡೆಸಲು ಅವಕಾಶ. ನಾವು ಆಳಿಸಿಕೊಳ್ಳುವವರಾಗುತ್ತೀವಿ. ಅವರು ಆಳುವವರಾಗುತ್ತಾರೆ. ನಮ್ಮ ಮೇಲೆ ಯಾರೂ ಅನುಕಂಪ ತೋರಿಸುವ ಅಗತ್ಯ ಇಲ್ಲ. ನಾವು ಬೇರೆಯವರ ವಂಶ ಕೊನೆಗೊಳಿಸಿಯೇ  ಸಿಂಹಾಸನ ಏರಿದ್ದು.


ಇಂದಿಗೆ ನಾವುಗಳು ಸಾವಿನ ತುದಿಯಲ್ಲಿ ನಿಂತಿದ್ದೇವೆ. ಕಳೆದ ಮೂರು ಹೊತ್ತಿನ ಊಟ ನಮಗೆ ಸಿಕ್ಕಿಯೇ ಇಲ್ಲ. ನಿಮ್ಮ ಮನೆಯಲ್ಲಿ ಏನಾದರು ತಿನ್ನಲಿಕ್ಕೆ ಇದ್ದರೆ ತಂದು ಕೊಡಿ"


ತನ್ನ ಮೆಲ್ಲನೆಯ ಧ್ವನಿಯ ಮಾತು ಮುಗಿಸಿದ ಕೊನೆಯ ಮೊಘಲ್ ಚಕ್ರವರ್ತಿ. ಅಲ್ಲಿಂದ ಅವನು ಹುಮಾಯುನ್ ನ ಸಮಾಧಿಗೆ ತೆರಳಿದ. ಅಲ್ಲಿ ಅವನನ್ನು ಬಂಧಿಸಲಾಯಿತು. ಬಂಧನದಲ್ಲಿ ತನ್ನ ಕೊನೆಯ ಉಸಿರು ಹೋಗುವವರೆಗೆ ಆಧ್ಯಾತ್ಮಿಕ ಸಾಧನೆಯ ಕಡೆಗೆ ತನ್ನ ಮನಸ್ಸು ಹೊರಳಿಸಿದ್ದ ಬಹದ್ದೂರ್ ಶಾಹ್ ಜಫರ್.


ಈ ನಿಜ ಕಥೆ ಎಲ್ಲಾ ಮಾನವರಿಗೂ ಎಚ್ಚರಿಕೆಯ ಘಂಟೆ. ಇದಾದ ಮೇಲೆಯೂ ಅಹಂಕಾರ ಕಡಿಮೆ ಮಾಡಿಕೊಳ್ಳದಿದ್ದರೆ ಅವರಿಗೆ ಜೀವನವೇ ಪಾಠ ಕಲಿಸುತ್ತದೆ.



Saturday, September 3, 2022

ಮನದಾಸೆಗಳನ್ನು ಗೆಲ್ಲದೇ ಮಠ ಕಟ್ಟುವವರು

ಕನ್ನಡ ನಾಡಿನಲ್ಲಿ ಮಠ ಕಟ್ಟಿದ ಸಂತರು ಅನೇಕ. ಸಿದ್ಧಾರೂಢರಿಂದ, ಶಿವಕುಮಾರ ಸ್ವಾಮಿಗಳವರೆಗೆ. ಅವರು ಕಟ್ಟಿದ ಮಠಗಳಿಂದ ಸಮಾಜಕ್ಕೆ ಆದ ಪ್ರಯೋಜನ ಅಪಾರ. ಮಠ ಬಿಟ್ಟು ಅವರಿಗೆ ಪ್ರತ್ಯೇಕ ಜೀವನ ಎನ್ನುವುದು ಇರಲಿಕ್ಕಿರಲಿಲ್ಲ. ಅಷ್ಟೇ ಪ್ರಮುಖವಾಗಿದ್ದದ್ದು ಚಿತ್ರದುರ್ಗದ ಬೃಹನ್ಮಠ. ಆದರೆ ಅದರ ಜವಾಬ್ದಾರಿ ಹೊತ್ತು ಹೆಸರು ಗಳಿಸಿದ್ದ ಮಠಾಧೀಶರು ತಂದುಕೊಂಡ ಅಪವಾದ ಜನಸಾಮಾನ್ಯರಿಗೆ ಮಠಗಳ ಮೇಲಿನ ನಂಬಿಕೆ ಕುಸಿಯುವಂತೆ ಮಾಡುತ್ತದೆ.


"Every saint has a past and every sinner has a future". ಎಲ್ಲ ಸಂತರಿಗೂ ಗತ ಕಾಲ ಇರುತ್ತದೆ. ಅದನ್ನು ದಾಟಿ ಬಂದ ಮೇಲೆ ಅವರು ಸಂತರಾಗುವುದು. ಆದರೆ ಅವರು ವರ್ತಮಾನದಲ್ಲೂ ಕೂಡ ಮನದಾಸೆಗಳಿಗೆ ಕಟ್ಟು ಬಿದ್ದರೆ, ಅವರಲ್ಲಿ ಲೈಂಗಿಕ ದಾಹ ಇಂಗಿರದಿದ್ದರೆ, ಅವರು ನಿಜವಾದ ಸಂತರಲ್ಲ. ಅವರು ಸಾಮಾನ್ಯ ಮನುಷ್ಯರಂತೆ ಸಂಸಾರಿಯಾಗುವುದು ವಾಸಿ. ಹೊರ ಜಗತ್ತಿಗೆ ಧರ್ಮ ಸಾರುತ್ತ, ಅಂತರಂಗದಲ್ಲಿ ಅಧರ್ಮದ ಕೆಲಸಗಳಿಗೆ ಇಳಿದರೆ ಅದು ಇತರೆ ಮಠಾಧೀಶರನ್ನು ಕೂಡ ಅನುಮಾನದಿಂದ ನೋಡುವಂತೆ ಮಾಡುತ್ತದೆ.


ಮಠಾಧೀಶರು ಕೂಡ ಕಾನೂನಿಗಿಂತ ದೊಡ್ದವರೇನಲ್ಲ ಎನ್ನುವುದು ಇವತ್ತಿನ ಬೆಳವಣಿಗೆಗಳು ಸಾಬೀತು ಪಡಿಸುತ್ತಿವೆ. ಆದರೆ ಮಠದ ಒಳಗಡೆ ಅವರೇ ಸರ್ವಾಧಿಕಾರಿಗಳು ಅಲ್ಲವೇ? ಅದನ್ನು ಅವರು ದುರುಪಯೋಗ ಮಾಡಿಕೊಂಡರೆ ಯಾರಿಗೆ ದೂರುವುದು? ಹಾಗಾಗಿ ಎಷ್ಟೋ ಪ್ರಕರಣಗಳು ಬೆಳಕಿಗೆ ಬರದೇ ಮುಚ್ಚಿ ಹೋಗಿಬಿಡಬಹುದು. ಮಠದ ಶಾಲೆಗಳಲ್ಲಿ ಓದುತ್ತಿರುವ ಎಷ್ಟು ವಿದ್ಯಾರ್ಥಿಗಳಿಗೆ ಮಠಾಧೀಶರನ್ನು ವಿರೋಧಿಸುವ ಧೈರ್ಯ ಇರುತ್ತದೆ? ಅವರ ಆರ್ಥಿಕ, ಸಾಮಾಜಿಕ ಪರಿಸ್ಥಿತಿಗಳು ಅವರನ್ನು ಪ್ರತಿಭಟಿಸದಂತೆ ತಡೆಯಬಹುದು. ಅಲ್ಲದೆ ಅವರ ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನ ಮಠ ನಡೆಸುವವರು ಮಾಡುತ್ತಾರಲ್ಲ. ಅವೆಲ್ಲ ಸೇರಿ, ಸಮಸ್ಯೆ ದೊಡ್ಡ ಹಂತ ತಲುಪುವವರೆಗೆ ಸಾರ್ವಜನಿಕರಿಗೆ ಅದರ ಸುಳಿವು ಸಿಗದಂತೆ ಆಗಿಬಿಡುತ್ತದೆ. ಕೊನೆಗೆ ವಿಷಯ ಹೊರ ಬಿದ್ದಾಗ, ಎಲ್ಲ ಟಿವಿ ಚಾನೆಲ್ ಗಳು ಮುಗಿ ಬಿದ್ದು ಅದನ್ನೇ ತೋರಿಸುತ್ತಾರೆ. ಆಗ ತಮ್ಮ ಮಕ್ಕಳನ್ನು ಮಠದ ಶಾಲೆಗಳಲ್ಲಿ ಬಿಟ್ಟ ಪೋಷಕರಿಗೆ ಆತಂಕವಾಗುವುದು ಸಹಜ.


ಧರ್ಮ ಎತ್ತಿ ಹಿಡಿಯಬೇಕಾದವರು ಅಧರ್ಮದ ಹಾದಿ ತುಳಿದಾಗ ಅದರಿಂದ ಆಗುವ ಹಾನಿ ಅಪಾರ. ದೇವಸ್ಥಾನಕ್ಕೆ ಹೋದಾಗ ಪ್ರಸಾದವನ್ನು ಕಣ್ಣು ಮುಚ್ಚಿಕೊಂಡು ತಿನ್ನುವ ನಾವುಗಳು ಅದು ವಿಷ ಆಗಿರಬಹುದೇ ಎನ್ನುವ ವಿಚಾರ ಕ್ಷಣ ಕಾಲಕ್ಕೂ ಮಾಡುವುದಿಲ್ಲ. ಹಾಗೆಯೆ ಮಠದ ಶಾಲೆಗಳಿಗೆ ಈ ಘಟನೆಯಿಂದ ಆಗುವ ಆಘಾತ ಬಹು ಕಾಲದವರೆಗೆ ಕಣ್ಮರೆಯಾಗುವುದಿಲ್ಲ.

Wednesday, August 31, 2022

Happy Birthday Warren!

I like Warren Buffett for many reasons. But his being wealthy is not one of them. 


The first reason I like him is for the wisdom he has. It is not easy and not possible for everyone to come out of natural human biases and acquire the wisdom and temperament he possesses.


The second one is for living so long. He has taken care of his health. Had he not lived this long, wealth creation through compounding would not have worked for him. Had he died in his 60s, he would neither be on the list of the world's richest nor he would be this famous.


The third one is for sharing his knowledge. Remember, he never gives any stock tips but he teaches you how to fish. He has created a cult of investors who follow his style of investing. His annual general meetings are a treasure trove closely followed by a huge fan following. You not only learn investing from him but many of life's lessons. And the only other guy who shares the stage with him, Charlie Munger is another person who would teach you many of life's lessons with his short sentences but they will be loaded one's. 


The fourth reason for liking Warren is for sharing his wealth. Most of his wealth goes back to underprivileged parts of society. And the wealth that would get redistributed would do wonders where it is deployed.


The fifth one is for being a motivation to many. He goes out to colleges to talk to young men. He offers lessons on how he has made it. Watching his videos has helped me immensely to improve my temperament and turn from a trader to an investor.


I wish Warren Buffett all the best on his birthday and also thank him for shaping the minds of many investors including me.



 



Sunday, August 28, 2022

ಪಳಗಲಾರದ ಕುದುರೆಗೆ ಯಾರೂ ಬೆಲೆ ಕಟ್ಟುವುದಿಲ್ಲ

'ಗೆದ್ದರೆ ಸ್ವಾತಂತ್ರ್ಯ, ಸತ್ತರೆ ಸ್ವರ್ಗ' ಇದು ಕಿತ್ತೂರು ರಾಣಿ ಚೆನ್ನಮ್ಮ ಆಡಿದ ಮಾತು. ಸ್ವಾತಂತ್ರ್ಯ ಹೋರಾಟಗಾರರೆಲ್ಲ ಬದುಕಿದ್ದು ಹಾಗೇಯೇ. ಭಗತ್ ಸಿಂಗ್ ಆಗಲಿ, ಆಜಾದ್ ಆಗಲಿ, ಸುಭಾಷ್ ಚಂದ್ರ ಭೋಸ್ ಆಗಲಿ ಅವರೆಲ್ಲ ಬ್ರಿಟಿಷರಿಗೆ ಪಳಗಲಿಲ್ಲ. ಅವರು ಬ್ರಿಟಿಷರ ಆಸೆ, ಆಮಿಷಗಳಿಗೆ ಇಲ್ಲವೇ ಬೆದರಿಕೆಗಳಿಗೆ ಮಣಿಯಲಿಲ್ಲ. ಗಾಂಧಿಗೂ ಬ್ರಿಟಿಷರ ಕಾನೂನನ್ನು ಪ್ರಶ್ನಿಸುವ ನೈತಿಕ ಸ್ಥೈರ್ಯ ಇತ್ತು. ಸ್ವಾತಂತ್ರ್ಯ ಅಲ್ಲದೆ ಕಡಿಮೆ ಯಾವುದಕ್ಕೂ ರಾಜಿ ಆಗಲು ಅವರು ಸಿದ್ಧರಿರಲಿಲ್ಲ. ಸ್ವಾತಂತ್ರ್ಯ ಹೋರಾಟಗಾರರೆಲ್ಲ ಬ್ರಿಟಿಷರಿಗೆ ಪಳಗಲಾರದ ಕುದುರೆ ಆಗಿದ್ದರು. ಆದರೆ ಹೆಚ್ಚಿನ ಸ್ವಾತಂತ್ರ್ಯ ಹೋರಾಟಗಾರರ ಅಂತ್ಯ, ಅವರ ಸಾವು ಅಸಹಜ ಆಗಿತ್ತು. ಅದು ಸ್ವಾತಂತ್ರ್ಯ ಬಯಸಿದ್ದಕ್ಕೆ ಅವರು ತೆತ್ತ ಬೆಲೆ. ಅದೇ ಕಾರಣಕ್ಕೆ ಹೆಚ್ಚಿನ ಜನ ಸ್ವಾತಂತ್ರ್ಯ ಬಯಸದೆ ಹೇಗೋ ಒಂದು ಬದುಕಿರುವುದು ಬಯಸುತ್ತಾರೆ.


ಸ್ವಾತಂತ್ರ್ಯ ಎನ್ನುವ ಅಳಿವು ಉಳಿವಿನ ಹೋರಾಟ ಮನುಷ್ಯ ಭೂಮಿಗೆ ಬಂದಾಗಿನಿಂದ ಅವನ ಜೊತೆಯಾಗಿದೆ. ಆದಿವಾಸಿಯಾಗಿ ಬೆಟ್ಟ ಗುಡ್ಡಗಳಲ್ಲಿ ವಾಸಿಸುತ್ತಿದ್ದ ಮನುಷ್ಯ ಮೊದಲಿಗೆ ಪ್ರಾಣಿಗಳೊಡನೆ ಹೋರಾಡುತ್ತಿದ್ದ. ನಂತರ ನಿಯಾಂಡರ್ ಥಲ್ ಎನ್ನುವ ಇನ್ನೊಂದು ಬಲಿಷ್ಠ ಮನುಷ್ಯ ವರ್ಗದ ಜೊತೆ ಜಾಣತನದಿಂದ ಹೋರಾಡಿ ಬದುಕುಳಿದ ಹೋಮೋ ಸೇಪಿಯನ್ಸ್ ಗಳು ನಾವು. ನಂತರ ನಾಗರೀಕತೆ ಬೆಳೆದರೂ, ದಬ್ಬಾಳಿಕೆ-ಸ್ವಾತಂತ್ರ್ಯ ಹೋರಾಟದ ತಿಕ್ಕಾಟ ನಿಲ್ಲಲಿಲ್ಲ. ಭಾರತದ ಮೇಲೆ ಎಷ್ಟು ಜನ ಧಾಳಿ ನಡೆಸಿ ತಮ್ಮ ದಬ್ಬಾಳಿಕೆ ಮೆರೆದಿಲ್ಲ? ಕೊನೆಗೆ ಬಂದವರು ಬ್ರಿಟಿಷರು. ಅವರು ಹೋದ ಮೇಲೆ ನಮ್ಮ ನಮ್ಮ ಜನಗಳ ನಡುವೆಯೇ ತಿಕ್ಕಾಟ ಮುಂದುವರೆದಿದೆ.


ಅದು ದೇಶ-ಪಂಗಡಗಳ ನಡುವಿನ ಸಮಸ್ಯೆ ಅಷ್ಟೇ ಅಲ್ಲ. ಅದು ಪ್ರತಿಯೊಬ್ಬರೂ ತಮ್ಮ ಸ್ವಾತಂತ್ರ್ಯ ಹಕ್ಕನ್ನು ಉಳಿಸಿಕೊಳ್ಳುವ ಅಥವಾ ಇನ್ನೊಬ್ಬರಿಗೆ ಅಡಿಯಾಳಾಗಿ ಬದುಕುವ ಸಮಸ್ಯೆ. ಸಾಮಾನ್ಯವಾಗಿ ಜಗಳ-ಹೊಡೆದಾಟಗಳಿಂದ ದೂರ ಇರಲು ಬಯಸುವ ನಾನು ನನ್ನ ಸ್ವಾತಂತ್ರ್ಯ ವಿಷಯ ಬಂದಾಗ ಪೂರ್ತಿ ಶಕ್ತಿಯೊಂದಿಗೆ ಕಾದಾಡುತ್ತೇನೆ. ಬ್ರಿಟಿಷರಿಗೆ ಕಪ್ಪ ಕೊಡಲು ಬಯಸದ ಕಿತ್ತೂರು ರಾಣಿಯ ಹಾಗೆ. ನನ್ನಮೇಲೆ ಸವಾರಿ ಮಾಡಲು ಬಂದ ಎಲ್ಲರಿಗೂ, ಅದು ಆಫೀಸ್ ನಲ್ಲಿ ಬಾಸು, ಮನೆಯಲ್ಲಿ ಹೆಂಡತಿ, ಶ್ರೀಮಂತಿಕೆಯ ದರ್ಪ ಇರುವ ಸಂಬಂಧಿಗಳು, ರೌಡಿಗಳಂತೆ ಆಡುವ ಅಣ್ಣ-ತಮ್ಮಂದಿರು, ಸ್ನೇಹಿತರ ವೇಷದ ವಂಚಕರು ಹೀಗೆ ಎಲ್ಲರಿಗೂ ನನ್ನ ಹೋರಾಟದ ಬಿಸಿ ಮುಟ್ಟಿಸಿದ್ದೇನೆ. ಸೋಲಿನ ರುಚಿ ತೋರಿಸಿದ್ದೇನೆ. ಅವರಿಗೆ ಒಮ್ಮೆ ಸೋತರೆ ಆಯಿತು. ಅವರು ನಿಮ್ಮ ಮೇಲೆ ಸವಾರಿ ಮಾಡಲು ತೊಡಗುತ್ತಾರೆ. ನೀವು ಮನುಷ್ಯರಿಂದ ಪ್ರಾಣಿಯಾಗಿ ಬದಲಾಗಿ ಬಿಡುತ್ತೀರಿ. ಅದೇ ನೀವು ಪಳಗಲಾರದ ಕುದುರೆ ಆಗಿದ್ದರೆ, ನೀವು ನಿಮ್ಮ ಹಿಂದೆ ಬಿದ್ದವರನ್ನು ಹಿಂಗಾಲಿನಿಂದ ಝಾಡಿಸಿ ಬಿಡುತ್ತೀರಿ. ನಿಮ್ಮ ಬೆನ್ನೇರಿದರೆ ಅವರನ್ನು ಆಯಕಟ್ಟಿನ ಸ್ಥಳದಲ್ಲಿ ಕೆಡವುತ್ತೀರಿ. ಮತ್ತೆ ನಿಮ್ಮ ಸ್ವಾತಂತ್ರ್ಯ ಸಾಬೀತು ಪಡಿಸುತ್ತಿರಿ. ಅದೇ ಕಾರಣಕ್ಕೆ ನಾನು ದಬ್ಬಾಳಿಕೆ ಮಾಡುವುವರ ಜೊತೆಗೆ ಪೂರ್ತಿ ಶಕ್ತಿಯೊಂದಿಗೆ ಹೋರಾಡುತ್ತೇನೆ. ನನಗೆ ಒಮ್ಮೆ ಯಾರಾದರೂ ಬ್ಲಾಕ್ ಮೇಲ್ ಮಾಡಿದರೆ ಅಥವಾ ಡಬಲ್ ಗೇಮ್ ಆಡಿದರೆ ಅವರಿಗೆ ಇನ್ನೊಮೆ ಅವಕಾಶ ಕೊಡದಂತೆ ಜಾಗರೂಕತೆ ವಹಿಸುತ್ತೇನೆ. ಅವರ ಮನೆಗೆ ಕಾಲಿಡುವುದಿಲ್ಲ ಮತ್ತು ಅವರು ನನ್ನ ಮನೆಗೆ ಕಾಲಿಡದಂತೆ ಮಾಡುತ್ತೇನೆ. ಇದೇ ಕಾರಣಕ್ಕೆ ನೌಕರಿಗಳನ್ನು ಬದಲಾಯಿಸಿದ್ದೇನೆ. ಒಬ್ಬಂಟಿಯಾದರು ಧಿಕ್ಕಾರ ಹೇಳಿದ್ದೇನೆ. ಆದರೆ ಸ್ವಾತಂತ್ರ್ಯ ಕಳೆದುಕೊಂಡಿಲ್ಲ. ನನ್ನ ಜೊತೆಗೆ ದಬ್ಬಾಳಿಕೆ ಮಾಡಲು ಬಂದವರು ನಾನು ಪಳಗಲಾರದ ಕುದುರೆ ಎನ್ನುವ ಅರಿವು ಬಂದೊಡನೆ ನನ್ನ ತಂಟೆ ಕೈ ಬಿಡುತ್ತಾರೆ. ಆದರೆ ಬದಲಾಗುವ ಕಾಲ ಹೊಸ ಜನರ ಸಂಪರ್ಕ ತರುತ್ತದೆ. ಕೆಲವರು ಗೆಳೆಯರು ಆದರೆ, ಕೆಲವರು ದಬ್ಬಾಳಿಕೆ ಮಾಡಲು ಪ್ರಯತ್ನಿಸಿ ಬೇರೆ ದಾರಿ ಇಲ್ಲದೆ ದೂರ ಸರಿಯುತ್ತಾರೆ.


ಪಳಗಿದ ಕುದುರೆಗೆ ಬೆಲೆ ಕಟ್ಟಿ ಮಾರಾಟ ಮಾಡಬಹುದು ಮತ್ತು ಅದನ್ನು ಸ್ವಾರ್ಥ ಕೆಲಸಕ್ಕೆ ಉಪಯೋಗಿಸಿಕೊಳ್ಳಬಹುದು. ಆದರೆ ಪಳಗಲಾರದ ಕುದುರೆ ಬೇರೆಯವರ ದೌರ್ಜನ್ಯಕ್ಕೆ ಸಿಕ್ಕುವುದಿಲ್ಲ ಅಂದ ಮೇಲೆ ಅದಕ್ಕೆ ಬೆಲೆ ಯಾರು ಕಟ್ಟುತ್ತಾರೆ? ಬದಲಿಗೆ ಅದರ ಸಾವು ಬಯಸುತ್ತಾರೆ. ಹಾಗೇಯೇ ಇದು ಒಂದು ದಿನದ ಮಾತು ಅಲ್ಲ. ನೀವು ಸ್ವಾತಂತ್ರ್ಯ ಬಯಸಿದರೆ, ಮೊಗಲರಿಗೆ ಸಾಮಂತನಾಗಿ ಇರಲು ಒಪ್ಪದ ಶಿವಾಜಿಯ ಹಾಗೆ ನೀವು ಜೀವನ ಪೂರ್ತಿ ಕಾದಾಡುತ್ತ ಇರಬೇಕು. ಸ್ವಾತಂತ್ರ್ಯದ ಬೆಲೆ ತೆರಲು ತಯ್ಯಾರಾಗಿರಬೇಕು. ಆದರೆ ಯಾರೋ ಹೇಳಿದ ಹಾಗೆ ಬದುಕುವುದಕ್ಕಿಂತ ಅಪಾಯ ತಂದೊಡ್ಡುವ ಸ್ವಾತಂತ್ರ್ಯವೇ ನನಗೆ ಹೆಚ್ಚು ಪ್ರೀತಿ. ಬದುಕುವುದು ಸ್ವಲ್ಪ ದಿನವೇ ಆದರೂ, ನಾನು ಬದುಕುವುದು ನನ್ನ ಇಚ್ಛೆಯ ಹಾಗೆ.

Saturday, August 20, 2022

ಭಾರತಾಂಬೆಗೆ ಶರಣು

ಭಾರತ ಒಂದು ಭೂಭಾಗ ಎಂದುಕೊಂಡರೆ ಅದರ ಹೆಚ್ಚಿನ ಭಾಗವನ್ನು ಆಳಿದ ಮೊದಲ ರಾಜ ಅಶೋಕ ಚಕ್ರವರ್ತಿ. ಆ ನಂತರ ಉತ್ತರ, ದಕ್ಷಿಣ ಭಾಗಗಳನ್ನು ಬೇರೆ ಬೇರೆ ರಾಜರುಗಳು ಆಳಿದರೂ ಅವುಗಳು ಸಂಪರ್ಕದಲ್ಲಿದ್ದವು. ಆದರೆ ಮಹಾನ್ ಭಾರತದ ಕಲ್ಪನೆ ವಿದೇಶಿಯಗರಿಗೆ ನಮಗಿಂತ ಹೆಚ್ಚಾಗಿ ಇತ್ತು. ಭಾರತದ ಜೊತೆ ವ್ಯಾಪಾರ ಮಾಡಲು ವರ್ತಕರು ಹಾತೊರೆಯುತ್ತಿದ್ದರು. ಪ್ರವಾಸಿಗರು ಮುಗಿಬೀಳುತ್ತಿದ್ದರು. ಧಾಳಿಕೋರರು ಸಂಚು ಹೆಣೆಯುತ್ತಿದ್ದರು. ಅವರಿಗೆ ಸಿಂಧು ನದಿ ದಾಟಿದರೆ ಸಿಗುವ ಪ್ರದೇಶವೇ ಭಾರತ ಆಗಿತ್ತು. ಸಮುದ್ರ ಭಾಗದಿಂದ ಕೇರಳಕ್ಕೆ ಬಂದರೆ ಅದು ಕೂಡ ಅವರಿಗೆ ಭಾರತವೇ. ಗಾಳಿ ಬೀಸುವುದು ಹೆಚ್ಚು ಕಡಿಮೆ ಆಗಿ ಅವರ ಹಡಗು ಗೋವಾ ಗೆ ಬಂದು ಸೇರಿದರೆ ಅವರಿಗೆ ಅದು ಕೂಡ ಭಾರತವೇ. ಅದೇ ಇಂಗ್ಲಿಷರು ಸುತ್ತಿ ಬಳಸಿ ಕಲ್ಕತ್ತೆಗೆ ಬಂದರಲ್ಲ ಅದು ಕೂಡ ಭಾರತವೇ ಆಗಿತ್ತು. ಬ್ರಿಟಿಷರು ಭಾರತವನ್ನು ಒಟ್ಟುಗೂಡಿಸಿದ್ದು ಯಾವುದೇ ಸದುದ್ದೇಶ್ಶದಿಂದಲ್ಲ. ತಮ್ಮ ಆಡಳಿತ ಸುಗಮ ಆಗಲಿ ಎನ್ನುವುದಷ್ಟೆ ಆಗಿತ್ತು. ಆದರೆ ಇಂಡಿಯನ್ ರೈಲ್ವೇಸ್, ಇಂಡಿಯನ್ ಪೋಸ್ಟಲ್ ಸರ್ವಿಸ್ ಎನ್ನುವ ಸಂಸ್ಥೆಗಳು ಭಾರತದ ಉದ್ದಗಲಕ್ಕೂ ಹರಡಿ ಸಂಪರ್ಕ ಕಲ್ಪಿಸುವ ಜಾಲಗಳಾಗಿ ಹರಡಿಬಿಟ್ಟವು. ಅದರ ಸದುದ್ದೇಶ ಪಡೆದದ್ದು ಸ್ವತಂತ್ರ ಹೋರಾಟಗಾರರು.


ಮೋಹನ್ ದಾಸ್ ಎನ್ನುವ ವಕೀಲ ದಕ್ಷಿಣ ಆಫ್ರಿಕಾ ದಲ್ಲಿ ರೈಲಿನಿಂದ ಹೊರ ದಬ್ಬಿಸಿಕೊಂಡಾಗ ಅವನಲ್ಲಿ ಒಂದು ಸ್ವಾತಿಕ ಕಿಚ್ಚು ಮೂಡಿತ್ತು. ಅವಮಾನ ನುಂಗಲು ಸಿದ್ಧನಿರದ ಆತ ವ್ಯವಸ್ಥೆ ಬದಲಾಯಿಸಲು ಹೋರಾಟ. ಭಾರತಕ್ಕೆ ಮರಳಿ ಬಂದು ಮೊದಲ ಬಾರಿಗೆ ಅಹ್ಮದಾಬಾದ್ ನಲ್ಲಿ ಬಟ್ಟೆ ನೇಯುವ ಕಾರ್ಮಿಕರ ಪರವಾಗಿ ಉಪವಾಸ ಸತ್ಯಾಗ್ರಹ ಮಾಡಿದ. ಅವನ ಹಿಂದೆ ಜನರು ಮೂವತ್ತಿಗಿಂತ ಹೆಚ್ಚಿರಲಿಲ್ಲ. ಅದು ೧೯೧೯. ಆದರೆ ಅವನು ಸಾವಿರಾರು ಪಾತ್ರಗಳು ಬರೆದ. ನೂರಾರು ಊರು ಅಲೆದ. ಹೊಸ ನಾಯಕರನ್ನು ಹುಟ್ಟು ಹಾಕಿದ. ವಿದೇಶದ ಬಟ್ಟೆ ಸುಟ್ಟ. ಮತ್ತೆ ನೂಲುವುದನ್ನು ಕಲಿಸಿದ. ನಿಯಮಕ್ಕೆ ವಿರುದ್ಧವಾಗಿ ಸಮುದ್ರದ ನೀರಿನಿಂದ ಉಪ್ಪು ಮಾಡಲು ಹೊರಟ. ಹಲವಾರು ಬಾರಿ ಬಂಧನಕ್ಕೊಳಗಾದ. ಬಂಧಿಸಲು ಬಂದ ಬ್ರಿಟಿಷ್ ಪೊಲೀಸ್ ರಿಗೆ ನಿಮ್ಮ ಹತ್ತಿರ ಅರೆಸ್ಟ್ ವಾರೆಂಟ್ ಇದೆಯೇ ಎಂದು ಕೇಳಿದ ಮೊದಲ ಸ್ವಾತಂತ್ರ ಹೋರಾಟಗಾರ ಆತ. ಸಣ್ಣ ಮೈಯ, ಅಸಾಧಾರಣ ಧೈರ್ಯ ಇದ್ದ ವ್ಯಕ್ತಿ 'ಬ್ರಿಟಿಷರೇ ಭಾರತ ಬಿಟ್ಟು ತೊಲಗಿ' ಎನ್ನುವ ಚಳುವಳಿ ಆರಂಭಿಸಿದ. ಅದು ೧೯೪೨. ಅಷ್ಟೊತ್ತಿಗೆಲ್ಲ ಆತನಿಗೆ ಮೂವತ್ತು ಕೋಟಿ ಹಿಂಬಾಲಕರು ಇದ್ದರು.


ಆದರೆ ಸ್ವಾತಂತ್ರ ಹೋರಾಟದಲ್ಲಿ ಸಾಕಷ್ಟು ಜನ ಮುಂಚೂಣಿಯಲ್ಲಿದ್ದರು. ಬಿಸಿ ರಕ್ತದ ಭಗತ್ ಸಿಂಗ್, ಚಂದ್ರಶೇಖರ್ ಆಜಾದ್ ತರಹದವರು. 'ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ ಕೊಡುತ್ತೇನೆ' ಎಂದ ಅಪ್ರತಿಮ ದೇಶ ಭಕ್ತ ಸುಭಾಷ್ ಚಂದ್ರ ಬೋಸ್ ಇದ್ದರು. ಆಧ್ಯಾತ್ಮಿಕವಾಗಿ ಕ್ಷೇತ್ರದಲ್ಲಿದ್ದರು ಭಾರತ ಸ್ವತಂತ್ರ ಹೊಂದುವುದು ಬಯಸಿದ್ದ ಸ್ವಾಮಿ ವಿವೇಕಾನಂದ, ಅರವಿಂದೋ ಘೋಷ್ ಇದ್ದರು. ಅವರೆಲ್ಲರ ದಾರಿ ಬೇರೆ ಬೇರೆ. ಆದರೆ ಉದ್ದೇಶ ಒಂದೇ. ಸ್ವಾತಂತ್ರ ಭಾರತ. ಎರಡನೇ ಜಾಗತಿಕ ಯುದ್ಧದಲ್ಲಿ ಸೋತು ಸುಣ್ಣವಾಗಿದ್ದ ಬ್ರಿಟಿಷರು ಜಾಗತಿಕ ಬೆಳವಣಿಗೆಗಳ ಮೇಲೆ ತಮ್ಮ ಹಿಡಿತ ಕಳೆದುಕೊಂಡು ತಮ್ಮ ಅಧಿಕಾರವನ್ನು ಬಿಟ್ಟು ಕೊಡುತ್ತ ಹೋದರು. ಆಂತರಿಕ ಮತ್ತು ಬಾಹ್ಯ ಬೆಳವಣಿಗೆಗಳು ಭಾರತ ಸ್ವಾತಂತ್ರ ಆಗುವುದು ಬಿಟ್ಟರೆ ದಾರಿಯೇ ಇಲ್ಲ ಎನ್ನುವ ಸನ್ನಿವೇಶ ಸೃಷ್ಟಿ ಆಗಿಬಿಟ್ಟಿತು.


ಎಪ್ಪತೈದು ವರ್ಷಗಳ ಬಳಿಕ ಇಂದು ಸ್ವಾತಂತ್ರ ಭಾರತದಲ್ಲಿ ಅಭಿವೃದ್ಧಿ ಸಮರ್ಪಕ ಏನು ಅನಿಸುವುದಿಲ್ಲ. ಆದರೂ ಕೂಡ ಇದು ನಮ್ಮ ಭಾರತ ಎನ್ನುವ ನಂಬಿಕೆ ನಮ್ಮಲ್ಲಿ ಮನೆ ಮಾಡಿದೆ. ಅಂದಿಗೆ ಸ್ವತಂತ್ರ ಹೋರಾಟಗಾರರು ನಮ್ಮನ್ನು ಒಟ್ಟಿಗೆ ತರಲು ಹರಪ್ರಯತ್ನ ಪಟ್ಟರೆ ಇಂದಿಗೆ ಹಬ್ಬಗಳು, ಚಿತ್ರರಂಗ, ಕ್ರಿಕೆಟ್, ಗಡಿ ಸಮಸ್ಯೆಗಳು ನಮ್ಮನ್ನು ಒಟ್ಟಿಗೆ ತರುತ್ತಿವೆ. ನಮ್ಮ ದೇಶ ತಡವಾಗಿ ಆದರೂ ಹಂತ ಹಂತವಾಗಿ ಬಲಿಷ್ಠ ರಾಷ್ಟ್ರ ಎನಿಸಿಕೊಳ್ಳುತ್ತಿದೆ. 


ನಮ್ಮ ಇಂದಿನ ಸಮಸ್ಯೆಗಳು ಬೇರೆ ಇವೆ. ಬೇರೆ ದೇಶಗಳ ಜನ ಮಂಗಳ ಗ್ರಹಕ್ಕೆ ಹೋಗುವ ಪ್ರಯತ್ನ ಮಾಡುತ್ತಿದ್ದಾರೆ ಆದರೆ ನಾವು ಇತಿಹಾಸದಲ್ಲೇ ಕಳೆದು ಹೋಗಿದ್ದೇವೆ. ಅದರಿಂದ ಹೆಚ್ಚಿನ ಜನ ಹೊರ ಬಂದು ಹೊಸ ಪ್ರಯತ್ನಗಳನ್ನು ಜಾರಿ ಇಟ್ಟಾಗ ನಮ್ಮ ಭವಿಷ್ಯ ಕೂಡ ಉಜ್ವಲ ಆಗುತ್ತಾ ಹೋಗುತ್ತದೆ. ಎಲ್ಲ ಸಮಸ್ಯೆ ಮತ್ತು ಅವಕಾಶಗಳ ನಡುವೆ ಭಾರತಾಂಬೆ ನೂರು ಕೋಟಿ ಜನಕ್ಕೂ ಹೆಚ್ಚು ಜನರಿಗೆ ಆಶ್ರಯವಿತ್ತು ಸಲಹುತ್ತಿದ್ದಾಳೆ. ಅವಳಿಗೆ ಶರಣು!