Sunday, August 28, 2022

ಪಳಗಲಾರದ ಕುದುರೆಗೆ ಯಾರೂ ಬೆಲೆ ಕಟ್ಟುವುದಿಲ್ಲ

'ಗೆದ್ದರೆ ಸ್ವಾತಂತ್ರ್ಯ, ಸತ್ತರೆ ಸ್ವರ್ಗ' ಇದು ಕಿತ್ತೂರು ರಾಣಿ ಚೆನ್ನಮ್ಮ ಆಡಿದ ಮಾತು. ಸ್ವಾತಂತ್ರ್ಯ ಹೋರಾಟಗಾರರೆಲ್ಲ ಬದುಕಿದ್ದು ಹಾಗೇಯೇ. ಭಗತ್ ಸಿಂಗ್ ಆಗಲಿ, ಆಜಾದ್ ಆಗಲಿ, ಸುಭಾಷ್ ಚಂದ್ರ ಭೋಸ್ ಆಗಲಿ ಅವರೆಲ್ಲ ಬ್ರಿಟಿಷರಿಗೆ ಪಳಗಲಿಲ್ಲ. ಅವರು ಬ್ರಿಟಿಷರ ಆಸೆ, ಆಮಿಷಗಳಿಗೆ ಇಲ್ಲವೇ ಬೆದರಿಕೆಗಳಿಗೆ ಮಣಿಯಲಿಲ್ಲ. ಗಾಂಧಿಗೂ ಬ್ರಿಟಿಷರ ಕಾನೂನನ್ನು ಪ್ರಶ್ನಿಸುವ ನೈತಿಕ ಸ್ಥೈರ್ಯ ಇತ್ತು. ಸ್ವಾತಂತ್ರ್ಯ ಅಲ್ಲದೆ ಕಡಿಮೆ ಯಾವುದಕ್ಕೂ ರಾಜಿ ಆಗಲು ಅವರು ಸಿದ್ಧರಿರಲಿಲ್ಲ. ಸ್ವಾತಂತ್ರ್ಯ ಹೋರಾಟಗಾರರೆಲ್ಲ ಬ್ರಿಟಿಷರಿಗೆ ಪಳಗಲಾರದ ಕುದುರೆ ಆಗಿದ್ದರು. ಆದರೆ ಹೆಚ್ಚಿನ ಸ್ವಾತಂತ್ರ್ಯ ಹೋರಾಟಗಾರರ ಅಂತ್ಯ, ಅವರ ಸಾವು ಅಸಹಜ ಆಗಿತ್ತು. ಅದು ಸ್ವಾತಂತ್ರ್ಯ ಬಯಸಿದ್ದಕ್ಕೆ ಅವರು ತೆತ್ತ ಬೆಲೆ. ಅದೇ ಕಾರಣಕ್ಕೆ ಹೆಚ್ಚಿನ ಜನ ಸ್ವಾತಂತ್ರ್ಯ ಬಯಸದೆ ಹೇಗೋ ಒಂದು ಬದುಕಿರುವುದು ಬಯಸುತ್ತಾರೆ.


ಸ್ವಾತಂತ್ರ್ಯ ಎನ್ನುವ ಅಳಿವು ಉಳಿವಿನ ಹೋರಾಟ ಮನುಷ್ಯ ಭೂಮಿಗೆ ಬಂದಾಗಿನಿಂದ ಅವನ ಜೊತೆಯಾಗಿದೆ. ಆದಿವಾಸಿಯಾಗಿ ಬೆಟ್ಟ ಗುಡ್ಡಗಳಲ್ಲಿ ವಾಸಿಸುತ್ತಿದ್ದ ಮನುಷ್ಯ ಮೊದಲಿಗೆ ಪ್ರಾಣಿಗಳೊಡನೆ ಹೋರಾಡುತ್ತಿದ್ದ. ನಂತರ ನಿಯಾಂಡರ್ ಥಲ್ ಎನ್ನುವ ಇನ್ನೊಂದು ಬಲಿಷ್ಠ ಮನುಷ್ಯ ವರ್ಗದ ಜೊತೆ ಜಾಣತನದಿಂದ ಹೋರಾಡಿ ಬದುಕುಳಿದ ಹೋಮೋ ಸೇಪಿಯನ್ಸ್ ಗಳು ನಾವು. ನಂತರ ನಾಗರೀಕತೆ ಬೆಳೆದರೂ, ದಬ್ಬಾಳಿಕೆ-ಸ್ವಾತಂತ್ರ್ಯ ಹೋರಾಟದ ತಿಕ್ಕಾಟ ನಿಲ್ಲಲಿಲ್ಲ. ಭಾರತದ ಮೇಲೆ ಎಷ್ಟು ಜನ ಧಾಳಿ ನಡೆಸಿ ತಮ್ಮ ದಬ್ಬಾಳಿಕೆ ಮೆರೆದಿಲ್ಲ? ಕೊನೆಗೆ ಬಂದವರು ಬ್ರಿಟಿಷರು. ಅವರು ಹೋದ ಮೇಲೆ ನಮ್ಮ ನಮ್ಮ ಜನಗಳ ನಡುವೆಯೇ ತಿಕ್ಕಾಟ ಮುಂದುವರೆದಿದೆ.


ಅದು ದೇಶ-ಪಂಗಡಗಳ ನಡುವಿನ ಸಮಸ್ಯೆ ಅಷ್ಟೇ ಅಲ್ಲ. ಅದು ಪ್ರತಿಯೊಬ್ಬರೂ ತಮ್ಮ ಸ್ವಾತಂತ್ರ್ಯ ಹಕ್ಕನ್ನು ಉಳಿಸಿಕೊಳ್ಳುವ ಅಥವಾ ಇನ್ನೊಬ್ಬರಿಗೆ ಅಡಿಯಾಳಾಗಿ ಬದುಕುವ ಸಮಸ್ಯೆ. ಸಾಮಾನ್ಯವಾಗಿ ಜಗಳ-ಹೊಡೆದಾಟಗಳಿಂದ ದೂರ ಇರಲು ಬಯಸುವ ನಾನು ನನ್ನ ಸ್ವಾತಂತ್ರ್ಯ ವಿಷಯ ಬಂದಾಗ ಪೂರ್ತಿ ಶಕ್ತಿಯೊಂದಿಗೆ ಕಾದಾಡುತ್ತೇನೆ. ಬ್ರಿಟಿಷರಿಗೆ ಕಪ್ಪ ಕೊಡಲು ಬಯಸದ ಕಿತ್ತೂರು ರಾಣಿಯ ಹಾಗೆ. ನನ್ನಮೇಲೆ ಸವಾರಿ ಮಾಡಲು ಬಂದ ಎಲ್ಲರಿಗೂ, ಅದು ಆಫೀಸ್ ನಲ್ಲಿ ಬಾಸು, ಮನೆಯಲ್ಲಿ ಹೆಂಡತಿ, ಶ್ರೀಮಂತಿಕೆಯ ದರ್ಪ ಇರುವ ಸಂಬಂಧಿಗಳು, ರೌಡಿಗಳಂತೆ ಆಡುವ ಅಣ್ಣ-ತಮ್ಮಂದಿರು, ಸ್ನೇಹಿತರ ವೇಷದ ವಂಚಕರು ಹೀಗೆ ಎಲ್ಲರಿಗೂ ನನ್ನ ಹೋರಾಟದ ಬಿಸಿ ಮುಟ್ಟಿಸಿದ್ದೇನೆ. ಸೋಲಿನ ರುಚಿ ತೋರಿಸಿದ್ದೇನೆ. ಅವರಿಗೆ ಒಮ್ಮೆ ಸೋತರೆ ಆಯಿತು. ಅವರು ನಿಮ್ಮ ಮೇಲೆ ಸವಾರಿ ಮಾಡಲು ತೊಡಗುತ್ತಾರೆ. ನೀವು ಮನುಷ್ಯರಿಂದ ಪ್ರಾಣಿಯಾಗಿ ಬದಲಾಗಿ ಬಿಡುತ್ತೀರಿ. ಅದೇ ನೀವು ಪಳಗಲಾರದ ಕುದುರೆ ಆಗಿದ್ದರೆ, ನೀವು ನಿಮ್ಮ ಹಿಂದೆ ಬಿದ್ದವರನ್ನು ಹಿಂಗಾಲಿನಿಂದ ಝಾಡಿಸಿ ಬಿಡುತ್ತೀರಿ. ನಿಮ್ಮ ಬೆನ್ನೇರಿದರೆ ಅವರನ್ನು ಆಯಕಟ್ಟಿನ ಸ್ಥಳದಲ್ಲಿ ಕೆಡವುತ್ತೀರಿ. ಮತ್ತೆ ನಿಮ್ಮ ಸ್ವಾತಂತ್ರ್ಯ ಸಾಬೀತು ಪಡಿಸುತ್ತಿರಿ. ಅದೇ ಕಾರಣಕ್ಕೆ ನಾನು ದಬ್ಬಾಳಿಕೆ ಮಾಡುವುವರ ಜೊತೆಗೆ ಪೂರ್ತಿ ಶಕ್ತಿಯೊಂದಿಗೆ ಹೋರಾಡುತ್ತೇನೆ. ನನಗೆ ಒಮ್ಮೆ ಯಾರಾದರೂ ಬ್ಲಾಕ್ ಮೇಲ್ ಮಾಡಿದರೆ ಅಥವಾ ಡಬಲ್ ಗೇಮ್ ಆಡಿದರೆ ಅವರಿಗೆ ಇನ್ನೊಮೆ ಅವಕಾಶ ಕೊಡದಂತೆ ಜಾಗರೂಕತೆ ವಹಿಸುತ್ತೇನೆ. ಅವರ ಮನೆಗೆ ಕಾಲಿಡುವುದಿಲ್ಲ ಮತ್ತು ಅವರು ನನ್ನ ಮನೆಗೆ ಕಾಲಿಡದಂತೆ ಮಾಡುತ್ತೇನೆ. ಇದೇ ಕಾರಣಕ್ಕೆ ನೌಕರಿಗಳನ್ನು ಬದಲಾಯಿಸಿದ್ದೇನೆ. ಒಬ್ಬಂಟಿಯಾದರು ಧಿಕ್ಕಾರ ಹೇಳಿದ್ದೇನೆ. ಆದರೆ ಸ್ವಾತಂತ್ರ್ಯ ಕಳೆದುಕೊಂಡಿಲ್ಲ. ನನ್ನ ಜೊತೆಗೆ ದಬ್ಬಾಳಿಕೆ ಮಾಡಲು ಬಂದವರು ನಾನು ಪಳಗಲಾರದ ಕುದುರೆ ಎನ್ನುವ ಅರಿವು ಬಂದೊಡನೆ ನನ್ನ ತಂಟೆ ಕೈ ಬಿಡುತ್ತಾರೆ. ಆದರೆ ಬದಲಾಗುವ ಕಾಲ ಹೊಸ ಜನರ ಸಂಪರ್ಕ ತರುತ್ತದೆ. ಕೆಲವರು ಗೆಳೆಯರು ಆದರೆ, ಕೆಲವರು ದಬ್ಬಾಳಿಕೆ ಮಾಡಲು ಪ್ರಯತ್ನಿಸಿ ಬೇರೆ ದಾರಿ ಇಲ್ಲದೆ ದೂರ ಸರಿಯುತ್ತಾರೆ.


ಪಳಗಿದ ಕುದುರೆಗೆ ಬೆಲೆ ಕಟ್ಟಿ ಮಾರಾಟ ಮಾಡಬಹುದು ಮತ್ತು ಅದನ್ನು ಸ್ವಾರ್ಥ ಕೆಲಸಕ್ಕೆ ಉಪಯೋಗಿಸಿಕೊಳ್ಳಬಹುದು. ಆದರೆ ಪಳಗಲಾರದ ಕುದುರೆ ಬೇರೆಯವರ ದೌರ್ಜನ್ಯಕ್ಕೆ ಸಿಕ್ಕುವುದಿಲ್ಲ ಅಂದ ಮೇಲೆ ಅದಕ್ಕೆ ಬೆಲೆ ಯಾರು ಕಟ್ಟುತ್ತಾರೆ? ಬದಲಿಗೆ ಅದರ ಸಾವು ಬಯಸುತ್ತಾರೆ. ಹಾಗೇಯೇ ಇದು ಒಂದು ದಿನದ ಮಾತು ಅಲ್ಲ. ನೀವು ಸ್ವಾತಂತ್ರ್ಯ ಬಯಸಿದರೆ, ಮೊಗಲರಿಗೆ ಸಾಮಂತನಾಗಿ ಇರಲು ಒಪ್ಪದ ಶಿವಾಜಿಯ ಹಾಗೆ ನೀವು ಜೀವನ ಪೂರ್ತಿ ಕಾದಾಡುತ್ತ ಇರಬೇಕು. ಸ್ವಾತಂತ್ರ್ಯದ ಬೆಲೆ ತೆರಲು ತಯ್ಯಾರಾಗಿರಬೇಕು. ಆದರೆ ಯಾರೋ ಹೇಳಿದ ಹಾಗೆ ಬದುಕುವುದಕ್ಕಿಂತ ಅಪಾಯ ತಂದೊಡ್ಡುವ ಸ್ವಾತಂತ್ರ್ಯವೇ ನನಗೆ ಹೆಚ್ಚು ಪ್ರೀತಿ. ಬದುಕುವುದು ಸ್ವಲ್ಪ ದಿನವೇ ಆದರೂ, ನಾನು ಬದುಕುವುದು ನನ್ನ ಇಚ್ಛೆಯ ಹಾಗೆ.

No comments:

Post a Comment