Thursday, August 19, 2021

ಶಾಂತಿ ಉಳಿಯಲು ತೋಳಿನ ಬಲ ಕೂಡ ಅತ್ಯವಶ್ಯಕ

ಭಾರತದ ಚರಿತ್ರೆಯಲ್ಲಿ ಶಾಂತಿದೂತ ಎಂದು ಹೆಸರಾದದ್ದು ಚಕ್ರವರ್ತಿ ಅಶೋಕ. ಆದರೆ ಇತಿಹಾಸವನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿ. ಮೌರ್ಯ ಸಾಮ್ರಾಜ್ಯವನ್ನು ಕಟ್ಟಿದ್ದು ಅಶೋಕನ ತಾತನಾದ, ಮಹತ್ವಾಕಾಂಕ್ಷಿ ಮತ್ತು ಸಾಹಸಿಯಾದ ಚಂದ್ರಗುಪ್ತ ಮೌರ್ಯ ಮತ್ತು ಚಾಣಾಕ್ಷತೆಗೆ, ಛಲಕ್ಕೆ ಹೆಸರಾದ ಚಾಣಕ್ಯ. ಅವರಿಬ್ಬರೂ ಕಟ್ಟಿದ ಬಲಿಷ್ಠ ಸೈನ್ಯ, ಮೌರ್ಯ ಸಾಮ್ರಾಜ್ಯವನ್ನು ಕಾಪಾಡಿಕೊಂಡು ಬಂತು. ನಂತರ ಬಂದ ಸಾಮ್ರಾಟ್ ಅಶೋಕ ಶಾಂತಿದೂತನಾಗಿ ಬದಲಾದಾಗ, ಬೌದ್ಧ ಧರ್ಮದ ಪ್ರಚಾರಕ್ಕೆ ನಿಂತಾಗ, ಅವನ ಗಮನ ಸೈನ್ಯದ ಮೇಲೆ ಕಡಿಮೆಯಾಗಿ, ಅದು ಕ್ರಮೇಣ ದುರ್ಬಲವಾಗಿರಲಿಕ್ಕೂ ಸಾಕು. ಅಶೋಕನ ಮಕ್ಕಳು ಕೂಡ ಧರ್ಮ ಪ್ರಚಾರಕ್ಕೆಂದು ನಿಂತರು. ಅಶೋಕನ  ಕಾಲಾ ನಂತರ, ಅವನ ಮಕ್ಕಳು ಪಟ್ಟಕ್ಕೇರದೆ, ಮೊಮ್ಮಗನಾದ ಬೃಹದ್ರಥ ಅರಸನಾದ. ಆದರೆ ಶುಂಗ ರಾಜವಂಶಕ್ಕೆ ಸೇರಿದ ಪುಷ್ಯಮಿತ್ರನ ಧಾಳಿಗೆ, ಬೃಹದ್ರಥ ಯುದ್ಧದಲ್ಲೇ ಮೃತ ಪಟ್ಟು, ಮೌರ್ಯ ವಂಶದ ಆಳ್ವಿಕೆ ಕೊನೆಗೊಂಡಿತು. ತೋಳ್ಬಲದಿಂದ ಕಟ್ಟಿದ ಶಾಂತಿಯುತ ಸಾಮ್ರಾಜ್ಯ, ತೋಳ್ಬಲ ಕುಂದಿದಾಗ ಮರೆಯಾಗಿ ಹೋಯಿತು.

 

ಇಂದಿಗೆ ಅಫ್ಘಾನಿಸ್ಥಾನ್ ನಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ ತೋಳ್ಬಲ, ಶಸ್ತ್ರಾಸ್ತ್ರಗಳು ಮೇಲುಗೈ ಸಾಧಿಸಿರುವುದು ಕಾಣುತ್ತದೆ. ಪ್ರಪಂಚ ರಾಜಕೀಯದಲ್ಲಿ ಸಾಕಷ್ಟು ದೇಶಗಳು ನಾಗರಿಕತೆಯ ಅಭಿವೃದ್ಧಿ ಹೊಂದಿ ಆರ್ಥಿಕ, ಸಾಮಾಜಿಕ ಬೆಳವಣಿಗೆ ಕಾಣುತ್ತ ಹೋದರೆ, ಇದೊಂದು ದೇಶ ನೂರಾರು ವರುಶಗಳಷ್ಟು ಹಿಂದೆ ಉಳಿದಿರುವುದು ಅಶ್ಯರ್ಯಕರ ಬೆಳವಣಿಗೆ ಏನು ಅಲ್ಲ. ಏಕೆಂದರೆ ಶಾಂತಿ ಇರಲು, ಅರಾಜಕತೆ ಉಂಟಾಗದೇ ಇರಲು ತೋಳ್ಬಲದ ಅವಶ್ಯಕತೆಯೂ ಅಷ್ಟೇ ಮುಖ್ಯ. ಅಲ್ಲಿಯ ಸೈನ್ಯ ಬಲವಾಗಿದ್ದರೆ ಇಂತಹ ಬೆಳವಣಿಗೆಗೆ ಅವಕಾಶ ಎಲ್ಲಿತ್ತು? ಇದೇ ಕಾರಣಕ್ಕೆ ಎಲ್ಲ ದೇಶಗಳು ಅನಿವಾರ್ಯವಾಗಿ ಆದರೂ ಬಲಿಷ್ಠ ಸೈನ್ಯವನ್ನು ಕಟ್ಟಿಕೊಳ್ಳುತ್ತಾರೆ. ಸೇನೆಯ ಮುಖ್ಯ ಉದ್ದೇಶ ಆಕ್ರಮಣವಾಗಿರದೆ, ಗಡಿಯನ್ನು ಕಾಪಾಡಿಕೊಳ್ಳುವುದು ಮತ್ತು ಆಕ್ರಮಣ ನಿರೋಧ ಮಾಡುವುದು ಆಗಿರುತ್ತದೆ.

 

ತೋಳ್ಬಲ ಶಾಂತಿಯನ್ನು ಸ್ಥಾಪಿಸಬಹುದು ಆದರೆ ಅದೇ ತೋಳ್ಬಲ ಶಕ್ತಿ ಕಳೆದುಕೊಂಡಾಗ ಶಾಂತಿ ಉಳಿಯುವುದು ಹೇಗೆ ಸಾಧ್ಯ? ಅದು ಉಳಿಯಬೇಕೆಂದರೆ ಜಗತ್ತಿನ ಉಳಿದೆಲ್ಲ ಜನರು ಒಂದೇ ಮಟ್ಟದ ನಾಗರೀಕತೆ ಹೊಂದಿರಬೇಕು. ಇಲ್ಲದೇ ಹೋದರೆ ಅಪಾಯ ತಪ್ಪಿದ್ದಲ್ಲ. ಸಾವಿರಾರು ವರುಷಗಳ ಹಿಂದೆಯೇ ಅಭಿವೃದ್ಧಿ ಹೊಂದಿದ್ದ ಭಾರತ ದೇಶದ ನಾಗರಿಕರು, ಶಾಂತಿ-ಧರ್ಮದ ಕಡೆಗೆ ಒತ್ತು ಕೊಟ್ಟು, ತಮ್ಮ ಶಸ್ತ್ರಾಸ್ತ್ರಗಳನ್ನು ಕೆಳಗಿಟ್ಟರು. ಅದೇ ಕಾರಣಕ್ಕೆ ಹಿಂಸೆಯನ್ನೇ ಮೈಗೂಡಿಸಿಕೊಂಡ ಧಾಳಿಕೋರರಿಗೆ ಸೋತು ಹೋದರು. ಭಾರತ ಹಲವಾರು ಸಲ ಲೂಟಿಯಾಯಿತು. ಭಾರತ ಇಂದಿಗೆ ಸುರಕ್ಷತೆ ದೃಷ್ಟಿಯಿಂದ ಭದ್ರವಾಗಿದೆ. ಆದರೂ ಕೂಡ ಚರಿತ್ರೆಯ ಪಾಠಗಳನ್ನು ಮರೆಯಬಾರದು.

 

ಭಾರತದಲ್ಲಿ ಇಂದಿಗೆ ದೇಗುಲಗಳನ್ನು ಕಟ್ಟುವುದಕ್ಕಿಂತ ಗಡಿಯಲ್ಲಿ ಹೆಚ್ಚಿನ ಕಾವಲು ಗೋಪುರಗಳನ್ನು ನಿರ್ಮಿಸುವುದು ಅತ್ಯವಶ್ಯ. ಇಲ್ಲದಿದ್ದರೆ ಕಟ್ಟಿದ ದೇಗುಲಗಳು ಉಳಿಯುವುದು ಅಸಾಧ್ಯ.

No comments:

Post a Comment