Sunday, July 31, 2022

ಕುರಿ, ತೋಳ ಮತ್ತು ಕುರಿ ಕಾಯುವ ನಾಯಿ

ಲಕ್ಷಾಂತರ ವರ್ಷಗಳ ಹಿಂದೆ ಮಾನವ ಅಲೆಮಾರಿಯಾಗಿ, ಬೇಟೆಯಾಡುತ್ತ ಜೀವಿಸುತ್ತಿದ್ದ. ಆದರೆ ಅವನು ಕ್ರಮೇಣ ಕೃಷಿಕನಾಗಿ ಮಾರ್ಪಟ್ಟ. ಏಕೆಂದರೆ ಅದು ಬೇಟೆಗೆ ಹೋಲಿಸಿದರೆ ಸುಲಭ ಮತ್ತು ಅದರಿಂದ ಹೆಚ್ಚು ಹೊಟ್ಟೆಗಳನ್ನು ತುಂಬಿಸಬಹುದಾಗಿತ್ತು. ಕೃಷಿ ಜೀವನ ಮನುಷ್ಯರು ಒಟ್ಟಿಗೆ ಬಂದು ಒಂದು ಸಮಾಜ ಕಟ್ಟಲು ಸಹಾಯವಾಯಿತು. ಪ್ರಕೃತಿ ಮನುಷ್ಯನಿಗೆ ಮತ್ತು ಎಲ್ಲ ಜೀವಿಗಳಿಗೆ ಸುಲಭ ಜೀವನ ಹುಡುಕಿಕೊಳ್ಳಲು ಪ್ರಚೋದಿಸುತ್ತದೆ. ಹಾಗಾಗಿ ಎಲ್ಲರಿಗೂ ಕೃಷಿ ಕೆಲಸ ಇಷ್ಟವಾಗದೇ, ಕೃಷಿ ಮಾಡುವವರನ್ನು ದೋಚುವ (ಮೋಸದಿಂದಲೋ ಅಥವಾ ದಬ್ಬಾಳಿಕೆಯಿಂದಲೋ) ಮತ್ತು ಅದರಿಂದ ಸುಲಭ ಜೀವನ ಸಾಗಿಸುವ ವೃತ್ತಿಯನ್ನು ಹಲವರು ಆಯ್ದುಕೊಂಡರು. ಇಂತಹ ಕಳ್ಳರನ್ನು ಎದುರಿಸಲು, ಅವರಿಂದ ಸಾಮಾನ್ಯ ಜನರನ್ನು ರಕ್ಷಿಸಲು ದಂಡನಾಯಕರು, ತಳವಾರರು ಹುಟ್ಟಿಕೊಂಡರು. ಅಂತಹ ಹಲವರು ದಂಡನಾಯಕರಿಗೆ ನಾಯಕ ಆದವನೇ ರಾಜ ಎನಿಸಿಕೊಂಡ. ಹೀಗೆ ನಮ್ಮ ಸಮಾಜ ರೂಪುಗೊಳ್ಳುತ್ತ ಹೋಯಿತು.


ಇಂದಿಗೂ ಕೂಡ ಎಲ್ಲಾ ಸಮಾಜಗಳಲ್ಲಿ ಹಲವಾರು ಲೋಪ ದೋಷಗಳಿರುತ್ತವೆ. ದೌರ್ಬಲ್ಯಗಳಿರುತ್ತವೆ. ಅವುಗಳ ದುರ್ಬಳಕೆ ಮಾಡಿಕೊಳ್ಳುವ ಜನರು ಹುಟ್ಟಿಕೊಳ್ಳುತ್ತಾರೆ. ಉದಾಹರಣೆಗೆ ಮಾಫಿಯಾ ಅಥವಾ  ಭ್ರಷ್ಟ ರಾಜಕಾರಣಿಗಳು ಮತ್ತು ಅಧಿಕಾರಿಗಳು. ಕೆಲವರು ದಬ್ಬಾಳಿಕೆ ಮಾಡುತ್ತಾರೆ. ಇನ್ನು ಕೆಲವರು ಮೋಸ ಮಾಡಿ ತಮ್ಮ ಜಾಣ್ಮೆ ಮೆರೆಯುತ್ತಾರೆ. ಆದರೆ ಅವರು ಬದುಕುವುದು ಸಮಾಜದ ರಕ್ತ ಹೀರುತ್ತ ಅಲ್ಲದೆ ಯಾವುದೇ ಕೃಷಿ ಸಾಧನೆಯಿಂದಲ್ಲ.


ಎಲ್ಲ ಸಮಾಜದಲ್ಲಿ ಮೂರು ವರ್ಗದ ಜನರಿರುತ್ತಾರೆ. ಹೆಚ್ಚಿನವರು ಕುರಿಗಳು. ಅವರಿಗೆ ತಮ್ಮನ್ನು ತಾವು ಕಾಪಾಡಿಕೊಳ್ಳುವುದು ಗೊತ್ತಿಲ್ಲ. ಕೆಲವರು ತೋಳಗಳು. ಅವರು ಕುರಿಗಳನ್ನು ಹರಿದು ತಿನ್ನುತ್ತಾರೆ. ಇನ್ನು ಕೆಲವರು ಕುರಿ ಕಾಯುವ ನಾಯಿಗಳು. ಅವರು ತಮ್ಮ ಪ್ರಾಣವನ್ನೇ ಒತ್ತೆ ಇಟ್ಟು ಕುರಿಗಳನ್ನು ಕಾಪಾಡುತ್ತಾರೆ. ಸುತ್ತಲಿನ ಪರಿಸರ ಸದಾ ಗಮನಿಸುತ್ತಾ ಇರುತ್ತಾರೆ. ತೋಳ ಕಣ್ಣಿಗೆ ಬಿದ್ದೊಡನೆ ಎಚ್ಚರಿಸುತ್ತಾರೆ. ಮತ್ತು ಅವಶ್ಯಕತೆ ಬಿದ್ದರೆ ಕಾದಾಟಕ್ಕೆ ಇಳಿಯುತ್ತಾರೆ.


ಉದಾಹರಣೆಗೆ, ಮುಂಬೈ ನಲ್ಲಿ ಭಯೋತ್ಪಾದಕರ ಧಾಳಿಯಾದಾಗ, ಅಲ್ಲಿನ ಸಾರ್ವಜನಕರು ಕುರಿಗಳಾಗಿದ್ದರು. ತೋಳ ಪಾತ್ರ ವಹಿಸಿದ ಭಯೋತ್ಪಾದಕರ ಗುಂಡಿಗೆ ಬಲಿಯಾಗಿ ಸುಲಭದಲ್ಲಿ ಪ್ರಾಣ ತೆತ್ತರು. ಆದರೆ ಆ ತೋಳಗಳನ್ನು ಎದುರಿಸಿದ 'ಬ್ಲಾಕ್ ಕ್ಯಾಟ್ ಕಮಾಂಡೋ' ಗಳು ಮತ್ತು ಶಸ್ತ್ರಸಜ್ಜಿತ ಪೋಲಿಸ್ ರು ವಹಿಸಿದ ಪಾತ್ರ ಕುರಿಗಳನ್ನು ಕಾಯುವುದು ಮತ್ತು ತೋಳವನ್ನು ಓಡಿಸುವುದು ಇಲ್ಲವೇ ಕೊಲ್ಲುವುದು ಆಗಿತ್ತು.


ಭಾರತದ ಚರಿತ್ರೆಯನ್ನು ಗಮನಿಸುತ್ತಾ ಹೋಗಿ. ನಮ್ಮ ಹಾಗೆ ಪರಕೀಯರಿಂದ ಹಲವಾರು ಬಾರಿ ಅಕ್ರಮಣಕ್ಕೊಳಗಾದ ದೇಶ ಬೇರೆ ಯಾವುದೂ ಇಲ್ಲ. ಹಾಗೆ ಅಕ್ರಮಣಕ್ಕೊಳಗಾದಾಗ ದೇಶದಲ್ಲಿ ಇದ್ದ ಪರಿಸ್ಥಿತಿ ಗಮನಿಸಿ. ಕುರಿ ಕಾಯುವ ನಾಯಿ ಕಡಿಮೆ ಸಂಖ್ಯೆಯಲ್ಲಿದ್ದಾಗ, ಕುರಿಗಳೇ ಹೆಚ್ಚು ತುಂಬಿಕೊಂಡಿದ್ದಾಗ ತೋಳ ಸುಲಭದಲ್ಲಿ ಗೆಲ್ಲಲು ಸಾಧ್ಯ ಅಲ್ಲವೇ? ತೋಳಗಳ ಹಿಂಡಿನಲ್ಲಿ ಪ್ರತಿ ತೋಳ ಹೋರಾಡುತ್ತದೆ. ಆದರೆ ಕುರಿ ಹಿಂಡು ಚೆಲ್ಲಾಪಿಲ್ಲಿಯಾಗಿ ಸುಲಭಕ್ಕೆ ಪ್ರಾಣ ಕಳೆದುಕೊಳ್ಳುತ್ತವೆ. ಜೊತೆಗೆ ಕೆಲವೇ ಇದ್ದ ಕಾವಲು ನಾಯಿಗಳನ್ನು ಕೂಡ ಸಾವಿನ ಅಂಚಿಗೆ ತಳ್ಳಿಬಿಡುತ್ತವೆ. ನಿಮಗೆ ಪರಿಸ್ಥಿತಿ ಅರ್ಥವಾಗಿರಲಿಕ್ಕೆ ಸಾಕು.


ಇದು ಸಮಾಜದ ಮತ್ತು ದೇಶದ ಮಟ್ಟದಲ್ಲಿ ನಡೆಯುತ್ತಿರುವ ನಿರಂತರ ಪ್ರಕ್ರಿಯೆ. ಇದು ಸಣ್ಣ ಮಟ್ಟದಲ್ಲಿ ಅಂದರೆ ಕುಟುಂಬದ ಒಳ ಜಗಳಗಳಲ್ಲಿ ಕೂಡ ನಡೆಯುತ್ತಿರುತ್ತದೆ. ನಿಮ್ಮ ಕುಟುಂಬದಲ್ಲೇ ಕುರಿ ಯಾರು, ತೋಳ ಯಾರು ಮತ್ತು ಕುಟುಂಬ ಕಾಯುವ ನಾಯಿ ಯಾರು ಎಂದು ಗಮನಿಸಿ ನೋಡಿ. ಎಲ್ಲದಕ್ಕೂ ಮುಂಚೆ ನಿಮ್ಮ ಪಾತ್ರ ಏನು ಎಂದು ತಿಳಿದುಕೊಳ್ಳಿ. ನೀವು ಕುರಿಯಾಗಿದ್ದರೆ ನನ್ನ ಸಂತಾಪಗಳು. ನಿಮ್ಮನ್ನು ದೂಷಣೆಗೆ ಗುರಿ ಮಾಡಿ, ನಿಮ್ಮನ್ನು ಹುರಿ ಮುಕ್ಕುವ ತೋಳಗಳು ಹತ್ತಿರಕ್ಕೆ ಬರುವ ಮುನ್ನವೇ ಎಚ್ಚೆತ್ತುಕೊಳ್ಳಿ. ನಾಯಿಗಳ ಸ್ನೇಹ ಗಳಿಸಿ ಮತ್ತು ಅವುಗಳ ಎಚ್ಚರಿಕೆ ಮೀರದಿರಿ. ಒಂದು ವೇಳೆ ನೀವು ತೋಳವೇ ಆಗಿದ್ದರೆ, ಎಲ್ಲಾ ಸಮಯದಲ್ಲಿ ನಿಮ್ಮ ಆಟ ನಡೆಯುವುದಿಲ್ಲ. ನಿಮ್ಮನ್ನು ಗಮನಿಸುವ ನಾಯಿಗಳು ಇವೆ. ನಿಮ್ಮ ಲೆಕ್ಕಾಚಾರ ಹೆಚ್ಚು ಕಡಿಮೆ ಆದರೆ ನಿಮ್ಮ ಕೊನೆ ಗ್ಯಾರಂಟಿ ಎನ್ನುವುದು ಮರೆಯಬೇಡಿ. ನೀವು ಕುಟುಂಬ ಕಾಯುವ ನಾಯಿ ಆಗಿದ್ದರೆ ನಿಮಗೆ ಹೃತ್ಪೂರ್ವಕ ಅಭಿನಂದನೆಗಳು. ಕುರಿ ಎನ್ನುವ ಕುಟುಂಬ ಮತ್ತು ಸಮಾಜದ ರಕ್ಷಣೆ ಮಾಡಿದ್ದಕ್ಕೆ. 


ಇದೇ ತರಹದ ತರ್ಕವನ್ನು ಅಮೆರಿಕದ Navy Seal ಗಳಿಗೆ ಮತ್ತು ಇಸ್ರೇಲ್ ದೇಶದ Mossad ಕಮಾಂಡೋಗಳಿಗೆ ಹೇಳಿಕೊಡಲಾಗುತ್ತವೆ. ಆದರೆ ಇದು ಇತಿಹಾಸ ಓದಿದ ಮತ್ತು ಸಮಾಜವನ್ನು ಗಮನಿಸುವ ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬಹುದಾದ ಸಾಮಾನ್ಯ ತಿಳುವಳಿಕೆ.



ಚಿತ್ರ: ಹೋರಾಟದ ನಂತರ ನಾಯಿಯನ್ನು ಕುರಿ ಸಂತೈಸುತ್ತಿರುವುದು  



No comments:

Post a Comment