Friday, August 12, 2022

ಕಾಡು ಕುದುರೆ ಓಡಿ ಬಂದಿತ್ತಾ…

ಗಾಯಕ ಶಿವಮೊಗ್ಗ ಸುಬ್ಬಣ್ಣನವರು ಇಂದು ವಿಧಿವಶ ಆಗಿದ್ದಾರೆ. ಅವರು ಮುಂಚೂಣಿಗೆ ಬಂದಿದ್ದು "ಕಾಡು ಕುದುರೆ ಓಡಿ ಬಂದಿತ್ತಾ" ಹಾಡಿನ ಮೂಲಕ. ನಂತರ ಜನಪ್ರಿಯತೆ ಗಳಿಸಿದ್ದು ಸಂತ ಶಿಶುನಾಳ ಶರೀಫರ ಹಾಡುಗಳ ಮೂಲಕ. ೮೩ ವರುಷಗಳ ತುಂಬು ಜೀವನ  ನಡೆಸಿದ ಅವರು ಸಾಕಷ್ಟು ಪ್ರಶಸ್ತಿ, ಗೌರವಗಳಿಗೆ ಪಾತ್ರ ಆಗಿದ್ದಾರೆ. ಅವರ ಕಂಠದಿಂದ ಹಾಡುಗಳಲ್ಲಿ ಹೊರ ಹೊಮ್ಮುವ ಶಕ್ತಿ ಅವರು ಹಾಡಿದ್ದ ಹಾಡುಗಳನ್ನು ಜನರಿಗೆ ಹತ್ತಿರವಾಗಿಸುತ್ತವೆ. ಶಿವಮೊಗ್ಗದಲ್ಲಿ ಹುಟ್ಟಿ ಬೆಳೆದು ಶಾಸ್ತ್ರೀಯ ಸಂಗೀತ ಕಲೆತು ನಂತರ ಬೆಂಗಳೂರಿನಲ್ಲಿ ನೆಲೆಸಿದ್ದ ಅವರು ಕನ್ನಡ ಸಂಸ್ಕೃತಿಯ ಭಾಗವಾಗಿದ್ದರು.

ಚಂದ್ರಶೇಖರ ಕಂಬಾರ ಅವರು ರಚಿಸಿದ ಕಾಡು ಕುದುರೆ ಓಡಿ ಬಂದಿತ್ತಾ ಹಾಡು ಹೀಗಿದೆ: 

ಕಾಡು ಕುದುರೆ ಓಡಿ ಬಂದಿತ್ತಾ
ಕಾಡು ಕುದುರೆ ಓಡಿ ಬಂದಿತ್ತಾ

ಊರಿನಾಚೆ ದೂರದಾರಿ 
ಸುರುವಾಗೊ ಜಾಗದಲ್ಲಿ 
ಮೂಡಬೆಟ್ಟ ಸೂರ್ಯ ಹುಟ್ಟಿ 
ಹೆಸರಿನ ಗುಟ್ಟ ಒಡೆವಲ್ಲಿ 
ಮುಗಿವೇ ಇಲ್ಲದ ಮುಗಿಲಿನಿಂದ 
ಜಾರಿಬಿದ್ದ ಉಲ್ಕೀ ಹಾಂಗ 
ಕಾಡಿನಿಂದ ಚಂಗನೆ ನೆಗೆದಿತ್ತ ||ಪ|| 

ಮೈಯಾ ಬೆಂಕಿ ಮಿರುಗತಿತ್ತ 
ಬ್ಯಾಸ್ಗಿ ಬಿಸಿಲ ಉಸಿರಾಡಿತ್ತ 
ಹೊತ್ತಿ ಉರಿಯೊ ಕೇಶರಾಶಿ 
ಕತ್ತಿನಾಗ ಕುಣೀತಿತ್ತ 
ಧೂಮಕೇತು ಹಿಂಬಾಲಿತ್ತ 
ಹೌಹಾರಿತ್ತ ಹರಿದಾಡಿತ್ತ 
ಹೈಹೈ ಅಂತ ಹಾರಿಬಂದಿತ್ತ ||1|| 

ಕಣ್ಣಿನಾಗ ಸಣ್ಣ ಖಡ್ಗ 
ಆಸುಪಾಸು ಝಳಪಿಸಿತ್ತ 
ಬೆನ್ನ ಹುರಿ ಬಿಗಿದಿತ್ತಣ್ಣ 
ಸೊಂಟದ ಬುಗುರಿ ತಿರಗತಿತ್ತ 
ಬಿಗಿದ ಕಾಂಡ ಬಿಲ್ಲಿನಿಂದ 
ಬಿಟ್ಟ ಬಾಣಧಾಂಗ ಚಿಮ್ಮಿ 
ಹದ್ದ ಮೀರಿ ಹಾರಿ ಬಂದಿತ್ತ ||2||
 
ನೆಲ ಒದ್ದು ಗುದ್ದ ತೋಡಿ 
ಗುದ್ದಿನ ಬದ್ದಿ ಒದ್ದಿಯಾಗಿ 
ಒರತಿ ನೀರು ಭರ್ತಿಯಾಗಿ 
ಹರಿಯೋಹಾಂಗ ಹೆಜ್ಜೀ ಹಾಕಿ 
ಹತ್ತಿದವರ ಎತ್ತಿಕೊಂಡು 
ಏಳಕೊಳ್ಳ ತಿಳ್ಳೀ ಹಾಡಿ 
ಕಳ್ಳೆ ಮಳ್ಳೆ ಆಡಿಸಿ ಕೆಡವಿತ್ತ ||3||


Song Link: https://www.youtube.com/watch?v=U6m9JSjH8fY

ಕೊನೆಯ ಸಾಲುಗಳನ್ನು ಮತ್ತೆ ಓದಿಕೊಳ್ಳಿ. ಕಾಡು ಕುದುರೆ ಹತ್ತಿದವರ ಎತ್ತಿಕೊಂಡು ಕಳ್ಳೆ ಮಳ್ಳೆ ಆಡಿಸಿ ಕೆಡವಿ ಹೋಗಿದೆ.

ಶಿವಮೊಗ್ಗ ಸುಬ್ಬಣ್ಣನವರಿಗೆ ಶ್ರದ್ಧಾಂಜಲಿಗಳು. 



No comments:

Post a Comment