Friday, June 9, 2023

ಋಷಿಗಳು vs ಬುದ್ಧ

ಹಿಂದಿನ ಕಾಲದಲ್ಲಿ ಋಷಿಗಳು ಹೇಗೆ ಬದುಕಿದ್ದರು ಎನ್ನುವ ಚಿತ್ರಗಳನ್ನು ಗಮನಿಸಿ ನೋಡಿ. ಅವರುಗಳು ಉದ್ದನೆಯ ಗಡ್ಡ ಬಿಟ್ಟಿರುತ್ತಿದ್ದರು. ಅವರು ವೇದ-ಉಪನಿಷತ್ತುಗಳ  ಕರ್ತೃಗಳು  ಅಥವಾ ಅವುಗಳನ್ನು ಭೋಧಿಸುವವರು ಆಗಿದ್ದರು. ಅವರುಗಳು ಊರ ಹೊರಗಡೆ ಆಶ್ರಮಗಳಲ್ಲಿ ವಾಸಿಸುತ್ತಿದ್ದರು. ಅಲ್ಲಿ ಅವರ ಜೊತೆ ಅವರ ಹೆಂಡತಿ-ಮಕ್ಕಳು ಕೂಡ ವಾಸ ಆಗಿರುತ್ತಿದ್ದರು. ಅವರುಗಳು ತಮ್ಮ ದೇಶದ ರಾಜನಿಗೆ ಉಪದೇಶ ಮಾಡುವುದು, ಅವನ ಮಕ್ಕಳ ವಿದ್ಯಾಭ್ಯಾಸದ ಹೊಣೆ ಹೊರುವುದು ಇತ್ಯಾದಿ ಕೆಲಸಗಳಿಗೆ ನೆರವಾಗುತ್ತಿದ್ದರು. ಹಾಗೆಯೇ ಅವರಿಗೆ ತೊಂದರೆ ಕೊಟ್ಟವರಿಗೆ ಶಾಪ ಕೊಟ್ಟ ಉದಾಹರಣೆಗಳು ಏನೂ ಕಡಿಮೆ ಇಲ್ಲ. ಎಷ್ಟು ದೊಡ್ಡ ಋಷಿಯೊ, ಶಾಪ ಕೂಡ ಅಷ್ಟೇ ದೊಡ್ಡದಾಗಿರುತ್ತಿತ್ತು.


ಬುದ್ಧನ ಚಿತ್ರಗಳು ಅವನಿಗೆ ಮೀಸೆ-ಗಡ್ಡ ಇರುವುದು ತೋರಿಸಲಿಲ್ಲ.ಅವನು ಮೂರ್ತಿ ಪೂಜೆಯ ವಿರೋಧಿ ಆಗಿದ್ದ. ಅವನು ಹೆಂಡತಿ-ಮಕ್ಕಳನ್ನು ಬಿಟ್ಟು ಬಂದಿದ್ದ. ಅವನು ಒಂದು ಸ್ಥಳದಲ್ಲಿ ವಾಸ ಮಾಡದೆ ಅಲೆಮಾರಿಯಾಗಿದ್ದ. ಅವನು ರಾಜ ಮತ್ತು ಸಾಮಾನ್ಯರ ನಡುವೆ ಭೇಧ-ಭಾವ  ತೋರಿಸಲಿಲ್ಲ. ಅವನು ವೇದಾಭ್ಯಾಸ ಮಾಡಲಿಲ್ಲ. ದೇವರನ್ನು ನಂಬು ಎಂದು ಹೇಳಲಿಲ್ಲ. ಬದಲಿಗೆ ನಮ್ಮ ಆಸೆಗಳಿಗೆ ನಮ್ಮನ್ನೇ ಹೊಣೆಗಾರರನ್ನಾಗಿ ಮಾಡಿದ. ಅವನು ಸಿಟ್ಟಾದ ಅಥವಾ ಶಾಪ ಕೊಟ್ಟ ಉದಾಹರಣೆಗಳೇ ಇರಲಿಲ್ಲ. ಬುದ್ಧ ಗುರುವಿನ ಬಳಿ ಕಲಿತು ಜ್ಞಾನಿ ಆಗಲಿಲ್ಲ ಮತ್ತು ಜ್ಞಾನದ ಬಗ್ಗೆ ಭೋದಿಸಲಿಲ್ಲ. ಆದರೆ ಅವನು ಸ್ವಂತ ಅನುಭವದ ಜ್ಞಾನಿಯಾಗಿದ್ದ. ಅದನ್ನೇ ಸರಳ ಮಾತುಗಳಲ್ಲಿ ಹೇಳಿದ.


ಬುದ್ಧ ಯಾವ ಅವಮಾನಕ್ಕೂ ಸ್ಪಂದಿಸಲಿಲ್ಲ. ಅವನು ಕ್ಷಮಿಸಿದನೋ ಅಥವಾ ನಿರ್ಲಕ್ಷ್ಯ ಮಾಡಿದನೋ ಕೂಡ ಯಾರಿಗೂ ತಿಳಿಯಲಿಲ್ಲ.

No comments:

Post a Comment