Monday, August 9, 2021

ಮಾತು, ಮನಸು, ಹೃದಯಗಳ ಸರಳರೇಖೆ

ಆಸೆಗಳು ಹುಟ್ಟುವುದು ಹೃದಯದಲ್ಲಿ. ಅವುಗಳನ್ನು ಸಾಕಾರಗೊಳಿಸುವ ಶಕ್ತಿ ನಮ್ಮಲಿದೆಯೋ, ಇಲ್ಲವೋ? ಯಾವುದಕ್ಕೆ ಎಷ್ಟು ಖರ್ಚು ಮಾಡುವುದು ಸರಿ? ಇವುಗಳನ್ನು ಅಳೆದು, ತೂಗುವುದು ಮನಸ್ಸು. ಬಹಳಷ್ಟು ಜನರಿಗೆ ನಮ್ಮ ಹೃದಯ, ಮನಸ್ಸು ಅರ್ಥವಾಗುವುದಿಲ್ಲ. ಅವರಿಗೆ ಅರ್ಥವಾಗುವುದು ನಮ್ಮ ನಾಲಿಗೆಯಿಂದ ಹೊರಡುವ ಮಾತು. ಇತರರಿಗೆ ನಮ್ಮ ಮಾತು ಇಷ್ಟವಾದಾಗ ಮಾತ್ರ ಅವರಿಂದ ನಮಗೆ ಸಹಕಾರ ದೊರಕಲು ಸಾಧ್ಯ. ಹೀಗೆ ಹೃದಯ-ಮನಸ್ಸು-ಮಾತು ಇವೆಲ್ಲವುಗಳು ಒಂದೇ ಸರಳ ರೇಖೆಯಲ್ಲಿ ಕೆಲಸ ಮಾಡಿದಾಗ ಅಂದುಕೊಂಡಿದ್ದು ಆಗಲು ಸಾಧ್ಯ.


ಆದರೆ ದೇವರು (ಅಥವಾ ಪ್ರಕೃತಿ) ಈ ಮೂರುಗಳನ್ನು ಒಂದೇ ರೇಖೆಯಲ್ಲಿ ಇರಲು ಬಿಡದೆ ಸಾಕಷ್ಟು ಸಿಕ್ಕು, ಗಂಟುಗಳನ್ನು ಮಧ್ಯದಲ್ಲಿ ಸೇರಿಸಿಬಿಡುತ್ತಾನೆ. ಆಸೆ ಇರುವ ಸಾಕಷ್ಟು ಜನರು ಅದನ್ನು ನಿಜ ಮಾಡಲು ಬೇಕಾದ ಶ್ರಮ, ಶಕ್ತಿ ವ್ಯಯಿಸಲು ಸಿದ್ಧರಿರುವುದಿಲ್ಲ. ಅವರು ಹಗಲು ಕನಸು ಕಾಣುವ ಸೋಂಭೇರಿಗಳು. ಇನ್ನು ಕೆಲವರು ತಮಗಿರುವ ಶಕ್ತಿಯನ್ನು ಹೆಚ್ಚಾಗಿಯೇ ಅಂದಾಜು ಹಾಕುತ್ತಾರೆ. ಸಾಮರ್ಥ್ಯ ಇರದೇ, ಆಸೆಗಳ ಹಿಂದೆ ಬೆನ್ನಟ್ಟಿದರೆ ಅವರು ಸೋತು ಸುಣ್ಣವಾಗುತ್ತಾರೆ. ಅಂತಹವರನ್ನು ನೋಡಿಯೇ 'ಕೆಡುವ ಕಾಲಕ್ಕೆ ಬುದ್ಧಿಯಿಲ್ಲ' ಎನ್ನುವ ಆಡು ಮಾತು ಹುಟ್ಟಿದ್ದು. ಆಸೆ, ಶಕ್ತಿ-ಸಾಮರ್ಥ್ಯ ಎರಡೂ ಇದ್ದರೂ, ಅದನ್ನು ಸರಿಯಾಗಿ ವ್ಯಕ್ತಪಡಿಸುವ ಮಾತಿನ ಕಲೆಗಾರಿಕೆಯೂ ಅತ್ಯವಶ್ಯ. ಯಾವತ್ತೂ ಮಾತೇ ಆಡದ ಮೂಗ ನಾಯಕನನ್ನು ಯಾವ ಕಾಲಕ್ಕಾದರೂ ಕಂಡಿದ್ದೀರಾ? ಮಾತು ಕಡಿಮೆ ಆಡಿ, ಅವನು ತನ್ನ ಶಕ್ತಿಯನ್ನು ಯಾವ ರೀತಿಯಲ್ಲೂ ತೋರ್ಪಡಿಸದಿದ್ದರೆ ಅವನನ್ನು ಕೈಲಾಗದವನು ಎಂದು ನಿರ್ಧರಿಸುತ್ತದೆ ಸಮಾಜ. ಮತ್ತು ಅವನಿಗೆ ಯಾವ ರೀತಿಯ ಸಹಕಾರವನ್ನು ನೀಡುವುದಿಲ್ಲ. ಒಂದು ವೇಳೆ ಅವನು ಹೆಚ್ಚು ಮಾತನಾಡುವುವನಾದರೆ ಅದೇ ಸಮಾಜ ಅವನಿಗೆ ಅಹಂಕಾರಿಯ ಪಟ್ಟ ಕಟ್ಟಿ, ಅವನ ದಾರಿಯಲ್ಲಿ ಪ್ರತಿ ಹೆಜ್ಜೆಗೂ ಅಡ್ಡಗಾಲು ಹಾಕಿ ಅವನನ್ನು ತೊಂದರೆಗೆ ಈಡು ಮಾಡುತ್ತದೆ.


ಆಸೆ ಹೊತ್ತ ಹೃದಯ, ಅಳೆದು ತೂಗುವ ಚಾಣಾಕ್ಷತೆ, ನಯ ಮಾತುಗಾರಿಕೆ ಎಲ್ಲವೂ ಇದ್ದವನಿಗೆ ಅದು ಹಾಗೆಯೇ ಇರಲು ಬಿಡುವುದಿಲ್ಲ ವಿಧಿ. ಅವನ ವೈಯಕ್ತಿಕ ಜೀವನದಲ್ಲಿ ಸೋಲುಂಟು ಮಾಡಿ, ಆಸೆಗಳನ್ನೇ ಬತ್ತಿಸಿಬಿಡುತ್ತದೆ. ಮಾತು, ಮನಸು, ಹೃದಯಗಳನ್ನು ಸಮತೋಲನವಾಗಿ ಒಂದೇ  ಸರಳರೇಖೆಯಲ್ಲಿ ಇಡಲು ನಾವೆಲ್ಲ ಪ್ರಯತ್ನಿಸುತ್ತೇವೆ. ಆದರೆ ಅಸಮತೋಲನ ಉಂಟು ಮಾಡುವುದು ಮಾತ್ರ ನೈಸರ್ಗಿಕ ಕ್ರಿಯೆ. ಅದಕ್ಕೆ ನಮ್ಮ ಯಾವ ಪ್ರಯತ್ನವೂ ಬೇಕಿಲ್ಲ. ಯಶಸ್ಸಿನ ತುದಿ, ಸೋಲಿನ ನೇಪಥ್ಯ ಎರಡೂ ವಿರುದ್ಧ ದಿಕ್ಕಿನಲ್ಲಿ ಇದ್ದರೂ, ಅವು ಉಯ್ಯಾಲೆಯ ಎರಡೂ ತುದಿಗಳು. ಎಷ್ಟು ಜೋರಾಗಿ ಮುಂದು ನೂಕುತ್ತಿರೋ ಅಷ್ಟೇ ವೇಗದಲ್ಲಿ ಅದನ್ನು ಹಿಂದಕ್ಕೆ ತಳ್ಳುತ್ತದೆ ಪ್ರಕೃತಿ.


ನಮ್ಮ ಸುತ್ತ ಮುತ್ತಲಿನ ಜನರನ್ನು ಗಮನಿಸಿ ನೋಡಿ. ಆಸೆ ಇದ್ದು ಸಾಮರ್ಥ್ಯ ಇಲ್ಲದವರು, ಅಥವಾ ಶಕ್ತಿ-ಸಾಮರ್ಥ್ಯ ಇದ್ದು ಮಾತಿನ ನಯಗಾರಿಕೆಯ ಕೊರತೆ ಇರುವವರು, ಇವರುಗಳು ಯಥೇಚ್ಛವಾಗಿ ಕಾಣ ಸಿಗುತ್ತಾರೆ. ಎಲ್ಲ ಸರಿ ಇರುವವರು ಕಡಿಮೆ ಸಂಖ್ಯೆಯಲ್ಲಿ ಇದ್ದರೂ, ಅವರನ್ನು ಒಂದು ಕಿರುಗಣ್ಣಿನಲ್ಲಿ ಗಮನಿಸುತ್ತಾ ಹೋಗಿ. ಕಾಲಚಕ್ರ ಅವರನ್ನು ಕೆಳಗಿಳಿಸುವುದಕ್ಕೆ ನೀವೇ ಸಾಕ್ಷಿಯಾಗುತ್ತೀರಿ. ಹಾಗೆಯೇ ಆಸೆ ಬತ್ತಿ ಹೋದವರು ವಿರಳ ಸಂಖ್ಯೆಯಲ್ಲಿದ್ದರೂ ಅವರ ಇತಿಹಾಸ ತಿಳಿದುಕೊಂಡು ನೋಡಿ. ಅವರಿಗೆ ಯಾವ ಕೊರತೆ ಇರದೆಯೇ ಇದ್ದದ್ದು, ಆದರೂ ಯಶಸ್ಸಿನ ತುದಿಯಿಂದ ಯಾವುದೊ ಕಾರಣಕ್ಕೆ ಸೋಲಿನ ಸೋಪಾನಕ್ಕೆ ಜಾರಿದ್ದು ಮತ್ತು ತದನಂತರ ಅವರು ಮೌನಕ್ಕೆ ಶರಣಾಗಿದ್ದು ನಿಮ್ಮ ಗಮನಕ್ಕೆ ಬಂದೇ ಬರುತ್ತದೆ.


ಮಾತು-ಮನಸು-ಹೃದಯಗಳು ನಿಮ್ಮಲಿ ಒಂದೇ ಸರಳ ರೇಖೆಯಲ್ಲಿದ್ದರೆ ನಿಮಗೆ ಅಭಿನಂದನೆಗಳು. ಅದು ಹಾಗೆಯೆ ಇರುವಷ್ಟು ದಿನ ಆನಂದಿಸಿ. ಮತ್ತು ಅದು ಹಾಗೆಯೆ ಉಳಿಯುವುದಿಲ್ಲ ಎನ್ನುವ ಸತ್ಯವೂ ನೆನಪಿರಲಿ. ಪ್ರಕೃತಿ ಇಂದು ನಿಮ್ಮನ್ನು ನಾಯಕನನ್ನಾಗಿಸಿದೆ. ನಾಳೆ ನಿಮ್ಮನ್ನು ಕೆಳಗಿಳಿಸಿ ಇನ್ನೊಬ್ಬರನ್ನು ನಾಯಕನನ್ನಾಗಿ ಮಾಡಲಿದೆ.

Wednesday, August 4, 2021

ವಿಜಯಗಳ ಸರಮಾಲೆ ಹಾಕಿಕೊಂಡವರನ್ನು ಮುಗಿಸಲು ಒಂದು ಸಣ್ಣ ಸೋಲು ಸಾಕು

ಇತ್ತೀಚಿಗೆ ಓದಿದ 'ತೇಜೋ-ತುಂಗಭದ್ರಾ' ಕಾದಂಬರಿಯಲ್ಲಿ ವಿಜಯನಗರದ ಅರಸು ಶ್ರೀಕೃಷ್ಣದೇವರಾಯನ ವ್ಯಕ್ತಿತ್ವದ ಕಿರು ಚಿತ್ರಣ ಇದೆ. ಸಾಮ್ರಾಜ್ಯ ವಿಸ್ತರಿಸಿ, ಭವ್ಯ ಪರಂಪರೆ ಕಟ್ಟಿದ ಅರಸನಿಗೆ ಗಂಡು ಸಂತಾನವಿಲ್ಲದ ಹಪಾಹಪಿ. ಅದಕ್ಕೆ ಆತ ದೇವರಲ್ಲಿ ಹರಕೆ ಹೊರುವ ಪ್ರಸಂಗ ಇದೆ. ಆತನ ಇತರ ವಿಷಯಗಳ ಬಗ್ಗೆ ಆ ಕಾದಂಬರಿಯಲ್ಲಿ ಉಲ್ಲೇಖ ಇಲ್ಲವಾದರೂ ಬೇರೆ ಸಾಕಷ್ಟು ಪುಸ್ತಕಗಳನ್ನು ಓದಿ ತಿಳಿದುಕೊಳ್ಳಬಹುದು. ಹೆಚ್ಚು ಕಡಿಮೆ ಆತನ ವಯಸ್ಸಿನವರಾದ ಅಳಿಯಂದರಿಗೆ ಅಥವಾ ಅಧಿಕಾರಕ್ಕೆ ತುದಿಗಾಲಲ್ಲಿ ನಿಂತ ತಮ್ಮಂದಿರಿಗೆ ರಾಜ್ಯಭಾರ ಬಿಟ್ಟು ಕೊಡಲು ಆತನಿಗೆ ಸುತರಾಂ ಇಷ್ಟವಿಲ್ಲದ್ದು ಆತನ ನಡುವಳಿಕೆಯಿಂದ ತಿಳಿದು ಬರುತ್ತದೆ. ಮುಂದೆ ಆತನಿಗೆ ಗಂಡು ಸಂತಾನವಾದಾಗ, ಸಣ್ಣ ವಯಸ್ಸಿನಲ್ಲೇ ಆತನಿಗೆ ಪಟ್ಟ ಕಟ್ಟುತ್ತಾನೆ. ಆದರೆ ಆಂತರಿಕ ಶತ್ರುಗಳು ಆತನ ಮಗನನ್ನು ವಿಷವಿಕ್ಕಿ ಕೊಲ್ಲುತ್ತಾರೆ. ಅದಾಗಿ ಕೆಲವೇ ದಿನಗಳಿಗೆ ಶ್ರೀಕೃಷ್ಣದೇವರಾಯನ ಅಂತ್ಯವೂ ಆಗುತ್ತದೆ. ರಣರಂಗದಲ್ಲಿ ಶತ್ರುಗಳನ್ನು ಬೆನ್ನಟ್ಟಿ ಹೋಗಿ ಸದೆ ಬಡಿದು, ತಾನು ಮಾಡಿದ ಯಾವುದೇ ಯುದ್ಧಗಳಲ್ಲಿ ಸೋಲು ಕಾಣದ ಶ್ರೀಕೃಷ್ಣದೇವರಾಯ, ತನ್ನ ಮನೆಯಲ್ಲಿ ತನ್ನ ಮಗನನ್ನು ಉಳಿಸಿಕೊಳ್ಳುವಲ್ಲಿ ಸೋತು ಹೋಗುತ್ತಾನೆ. ಅದು ಹುಟ್ಟಿಸಿದ ಕೊರಗು ಆತನ ಜೀವ ತೆಗೆದಿರಲಿಕ್ಕೂ ಸಾಕು ಎನ್ನುವುದು ಮಾತ್ರ ನನ್ನ ಅಭಿಪ್ರಾಯ.

 

ದಕ್ಷಿಣ ಭಾರತದಲ್ಲಿ ವಿಜಯನಗರ ಸಾಮ್ರಾಜ್ಯ ಪತನವಾಗುವ ಹೊತ್ತಿಗೆ, ಉತ್ತರ ಭಾರತದಲ್ಲಿ ಮೊಗಲ್  ದೊರೆ ಅಕ್ಬರ, ಫತೇಪುರ್ ಸಿಕ್ರಿ (ಕನ್ನಡದಲ್ಲಿ ರೂಪಾಂತರಿಸಿದರೆ ಅದು ಕೂಡ ವಿಜಯನಗರವೇ) ಕಟ್ಟುತ್ತಿರುತ್ತಾನೆ. ಆತನಿಗೆ ತನ್ನ ಮಕ್ಕಳ ಮೇಲೆ ವಿಶ್ವಾಸವಿರುವುದಿಲ್ಲ. ಆದರೆ ಆತನ ಮೊಮ್ಮಗ ಒಬ್ಬನಿಗೆ, ಆಸ್ಥಾನ ಜ್ಯೋತಿಷ್ಯಕಾರರು ಉಜ್ವಲ ಭವಿಷ್ಯ ಇರುವುದಾಗಿ ತಿಳಿಸಿರುತ್ತಾರೆ. ಆತನೇ ಷಾಜಹಾನ್. ಆತನನ್ನು ತನ್ನ ತೊಡೆಯ ಮೇಲೆ ಕೂಡಿಸಿಕೊಂಡೆ ಬೆಳೆಸುತ್ತಾನೆ ಅಕ್ಬರ್. ಅಕ್ಬರನ ಮರಣಾ ನಂತರ, ಷಾಜಹಾನ್ ತನ್ನ ತಂದೆಯಿಂದ ದೂರಾಗಿ, ಕೆಲವು ಸಲ ತಲೆ ಮರೆಸಿಕೊಂಡು ಬದುಕಬೇಕಾದರೂ, ದೆಹಲಿಯ ಗದ್ದುಗೆ ಏರಿದ ನಂತರ, ಸಾಲು ಸಾಲು ಯುದ್ಧಗಳನ್ನು ಗೆದ್ದು, ತನ್ನ ಸಾಮ್ರಾಜ್ಯ ವಿಸ್ತರಿಸುತ್ತ, ಭಾರತ ಹಿಂದೆಂದೂ ಕಂಡರಿಯದ ಶ್ರೀಮಂತಿಕೆಯ ರಾಜ್ಯವನ್ನು ಕಟ್ಟುತ್ತಾನೆ. ಹಣ, ಕೀರ್ತಿ ಎಲ್ಲ ದಿಕ್ಕುಗಳಿಂದ ಹರಿದು ಬರುತ್ತದೆ. ಜಗತ್ತಿನ ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್ ಅನ್ನು ತನ್ನ ಹೆಂಡತಿಯ ನೆನಪಿಗಾಗಿ ಕಟ್ಟುತಾನೆ ಷಾಜಹಾನ್. ಮೇಧಾವಿ ಮಗನಾದ ದಾರಾ ಶಿಕೋ ನಿಗೆ ಯುವರಾಜ ಪಟ್ಟ ಕಟ್ಟುತ್ತಾನೆ. ಆದರೆ ವಿಧಿಯ ಬರಹ ಬೇರೆಯೇ ಇತ್ತಲ್ಲ. ಆತನ ಇನ್ನೊಬ್ಬ ಮಗ ಔರಂಗಜೇಬ್, ತನ್ನ ತಂದೆ ಷಾಜಹಾನ್ ನನ್ನು ಗೃಹಬಂಧಿಯನ್ನಾಗಿಸಿ, ತನ್ನ ಅಣ್ಣ ದಾರಾ ಶಿಕೋ ನನ್ನು ಮತ್ತು ಆತನ ಮಗನನ್ನು ಆನೆಯಿಂದ ತುಳಿಸಿ ಸಾಯಿಸುತ್ತಾನೆ. ತನ್ನದೇ ಸಾಮ್ರಾಜ್ಯದಲ್ಲಿ, ತಾನೇ ಕಟ್ಟಿದ ಅರಮನೆಯಲ್ಲಿ ಬಂದಿಯಾಗಿ, ತನ್ನ ಇನ್ನೊಂದು ನಿರ್ಮಾಣವಾದ ತಾಜ್ ಮಹಲ್ ನ್ನು ಕಿಟಕಿಯ ಮೂಲಕ ನೋಡುತ್ತಾ ತನ್ನ ಕೊನೆಯ ದಿನಗಳನ್ನು ಕಳೆಯುತ್ತಾನೆ ಷಾಜಹಾನ್.

 

ವೈಭವದಿಂದ ಮೆರೆದ, ರಣರಂಗದಲ್ಲಿ ಸೋಲನ್ನೇ ಕಾಣದ ಒಬ್ಬ ರಾಜಾಧಿರಾಜನಿಗೆ ತನ್ನ ಪುತ್ರನನ್ನು ಉಳಿಸಿಕೊಳ್ಳಲು ಆಗದೆ ಹೋದರೆ, ಇನ್ನೊಬ್ಬ ಚಕ್ರವರ್ತಿ ತನ್ನ ಪುತ್ರನಿಂದಲೇ ಅಧಿಕಾರ ಕಳೆದುಕೊಂಡು ದಾರುಣವಾಗಿ ತನ್ನ ಅಂತ್ಯದ ದಿನಗಳನ್ನು ಸವೆಸುತ್ತಾನೆ. ಯಶಸ್ಸಿನ ಸರಮಾಲೆಗಳನ್ನೇ ಕೊರಳಲ್ಲಿ ಹಾಕಿಕೊಂಡು ಮೆರೆದ, ಸಧೃಢ ವ್ಯಕ್ತಿತ್ವ ಹೊಂದಿದ, ಇತಿಹಾಸ ರೂಪಿಸಿದ ಮಹಾನ್ ವ್ಯಕ್ತಿಗಳೇ, ಕೊನೆ ಗಳಿಗೆಯ ಸೋಲಿನಿಂದ ಮೂಲೆಗುಂಪಾಗಿಬಿಡುತ್ತಾರೆ.

 

ಇತಿಹಾಸದಲ್ಲಿ ಬರೀ ವಿಜಯಗಳ ಬಗ್ಗೆ ಬರೆದಿದ್ದು ಹೆಚ್ಚು. ಆದರೆ ಗಮನಿಸಿ ನೋಡಿದರೆ ಯಾವ ವಿಜಯವು ಶಾಶ್ವತವಲ್ಲ. ಮಹಾತಾಕಾಂಕ್ಷಿಗಳೇ ಮಣ್ಣಾಗಿ ಹೋಗಿರುವಾಗ, ಸಣ್ಣ ಪುಟ್ಟ ಗೆಲುವಿನಿಂದ ಅಹಂಕಾರ ಹೆಚ್ಚಿಸಿಕೊಂಡ ಜನರೇ ನಮ್ಮ ಸುತ್ತ ತುಂಬಿದ್ದಾರಲ್ಲ. ಅವರಾರು ಇತಿಹಾಸದಿಂದ ಕಲಿತಿದ್ದೇನೂ ಇಲ್ಲ. ಅದಕ್ಕೆ ಇತಿಹಾಸ ಪುನರಾವರ್ತನೆ ಆಗುತ್ತಲೇ ಇರುತ್ತದೆ.

Sunday, August 1, 2021

ರಕ್ತಪಿಶಾಚಿಯೊಡನೆ ಒಂದು ಮಧ್ಯಾಹ್ನ

ಮಧ್ಯಾಹ್ನ ಊಟವಾದ ನಂತರ ಮಂಚದ ಮೇಲೆ ಒರಗಿಕೊಂಡು, ಸ್ವಲ್ಪ ಹೊತ್ತು ಏನಾದರು ಓದುತ್ತ ವಿಶ್ರಾಂತಿ ತೆಗೆದುಕೊಳ್ಳುವುದು, ಹಾಗೆಯೆ ಕೆಲವೊಂದು ಸಲ ನಿದ್ದೆ ಮಾಡಿಬಿಡುವುದು ನನ್ನ ಸಾಮಾನ್ಯ ದಿನಚರಿ. ಅಂದು ಕೂಡ ಕುವೆಂಪು ರಚಿಸಿದ ಸಣ್ಣ ಕಥೆಗಳನ್ನು ಓದುತ್ತ, ಮನಸ್ಸು ನಿಧಾನವಾಗುತ್ತ, ನಿದ್ರೆಗೆ ಜಾರುವುದರಲ್ಲಿದ್ದೆ. ಆಗ ಕೇಳಿಸಿದ್ದು ಕಿವಿಯ ಪಕ್ಕದಲ್ಲಿ ಗುಂಯ್ ಗುಡುವ ಸದ್ದು. ಸುಮ್ಮನೆ ಕೈ ಆಡಿಸಿದೆ. ಆಗ ಸದ್ದು ಇನ್ನೊಂದು ಕಿವಿಯ ಹತ್ತಿರ ಕೇಳಿಸತೊಡಗಿತು. ಪಕ್ಕದಲ್ಲಿದ್ದ ಪುಸ್ತಕವನ್ನು ಹಿಡಿದು ತಲೆಯ ಎರಡು ಬದಿಗೂ ಆಡಿಸಿದೆ. ನನ್ನ ಕೈ ಚಲನೆಯ ವೇಗವನ್ನು ಮೀರಿ ಆ ಸದ್ದು ನನ್ನ ಸುತ್ತತೊಡಗಿತು. ಅದು ಒಂದು ಯಕಶ್ಚಿತ್ ಸೊಳ್ಳೆ ಎಂದರೆ ನಾವು ಅದನ್ನು ಅಪಮಾನಿಸಿದಂತೆ ಅನಿಸತೊಡಗಿತು. ಸುಮ್ಮನೆ ರಕ್ತ ಹೀರಿ ಹೋಗಿದ್ದರೆ ನನ್ನದೇನು ಅಭ್ಯಂತರ ಇರಲಿಲ್ಲ. ಜಿಗಣೆಯ ಹಾಗೆ ನೋವಾಗದಂತೆ ರಕ್ತ ಹೀರುವುದು ಈ ಸೊಳ್ಳೆಗಳಿಗೆ ಗೊತ್ತಿಲ್ಲ. ಸೂಜಿಯ ಮೊನೆಯ ಹಾಗೆ ಚುಚ್ಚಿ, ತಾವು ರಕ್ತ ಹೀರುವುದನ್ನು ಜಗಜ್ಜಾಹೀರು ಮಾಡುತ್ತವೆ. ಅಲ್ಲದೆ ಕೆರಳಿಸುವ ಹಾಗೆ ಕಿವಿಯ ಹತ್ತಿರವೇ ಬಂದು ಗುಂಯ್ ಗುಡುತ್ತವೆ. ನಿದ್ದೆಗೆಡಿಸಿ, ರಕ್ತ ಹೀರಿ, ಬಿಟ್ಟು ಬಿಡದಂತೆ ತೊಂದರೆ ಕೊಡುವ ಈ ಜೀವಿಗಳಿಗೆ ಸೊಳ್ಳೆ ಎನ್ನದೆ ರಕ್ತ ಪಿಶಾಚಿ ಎನ್ನುವುದೇ ಸೂಕ್ತ ಅನಿಸತೊಡಗಿತು. ಅದರ ಮೇಲೆ ದ್ವೇಷ ಹುಟ್ಟಿ, ಇದನ್ನು ಬೇಟೆಯಾಡದೆ ಬಿಟ್ಟರೆ ನನಗೆ ಉಳಿಗಾಲವಿಲ್ಲ ಎನಿಸತೊಡಗಿತು.

 

ಕಿಟಕಿಯ ಪರದೆಯನ್ನು ಪೂರ್ತಿ ತೆಗೆದು, ಕೋಣೆಯ ತುಂಬಾ ಬೆಳಕಾಗುವಂತೆ ಮಾಡಿಕೊಂಡೆ. ಗೋಡೆಯ ಮೇಲೆ ಕುಳಿತ ಸೊಳ್ಳೆ ಸ್ಪಷ್ಟವಾಗಿ ಕಂಡಿತು. ಆ ದಿನದ ನ್ಯೂಸ್ ಪೇಪರ್ ನ್ನು ಕೈಯಲ್ಲಿ ಮಡಿಚಿ ಹಿಡಿದು ಮೆತ್ತಗೆ ಹೆಜ್ಜೆ ಹಾಕುತ್ತ ಸೊಳ್ಳೆಯ ಹತ್ತಿರಕ್ಕೆ ಹೋಗಿ ರಪ್ಪೆಂದು ಬಾರಿಸಿದೆ. ಆದರೆ ಕೊನೆ ಕ್ಷಣದಲ್ಲಿ ನನ್ನ ನೆರಳು ಅದರ ಮೇಲೆ ಬಿದ್ದು ಅದು ಪಕ್ಕಕ್ಕೆ ಹಾರಿತು. ತಕ್ಷಣವೇ ಅದು ಹಾರಿದ ದಿಕ್ಕಿನಲ್ಲಿ ಗಾಳಿಯಲ್ಲಿ ಕೈ ಬೀಸಿದೆ. ಕೈಯಲ್ಲಿ ಹಿಡಿದ ಪೇಪರ್ ಅದರ ಮೈಗೆ ತಾಗಿದರೂ, ಅದು ತನಗೆ ಏನು ಆಗಿಲ್ಲ ಎನ್ನುವಂತೆ ಮತ್ತೆ ದಿಕ್ಕು ಬದಲಾಯಿಸಿ ಮರೆಯಾಯಿತು.

 

ಅದು ನನ್ನನ್ನು ಮತ್ತೆ ಹುಡುಕಿ ಬಂದೇ ಬರುತ್ತದೆ ಎನ್ನುವ ನಂಬಿಕೆಯಿಂದ ನಾನು ಕೋಣೆಯ ಮಧ್ಯದಲ್ಲಿ ಕುಳಿತು ಅದಕ್ಕಾಗಿ ಕಾಯತೊಡಗಿದೆ. ಕೆಲವೇ ಕ್ಷಣಗಳಿಗೆ, ನನ್ನ ನಂಬಿಕೆ ಸುಳ್ಳಾಗದಂತೆ ಹತ್ತಿರವೇ ಗುಂಯ್ ಗುಡುವ ಸದ್ದು ಕೇಳಿಸತೊಡಗಿತು. ಮೈಯೆಲ್ಲಾ ಕಿವಿಯಾಗಿಸಿಕೊಂಡು ಯಾವ ಕಡೆಯಿಂದ ಸದ್ದು ಕೇಳುತ್ತಿದೆ ಎಂದು ಗಮನಿಸತೊಡಗಿದೆ. ಮಹಾಭಾರತದ ಅರ್ಜುನ ಶಬ್ದವೇಧಿ ವಿದ್ಯೆಯನ್ನು ಇಂತಹ ಸಂದರ್ಭಗಳಲ್ಲಿ ಕಲಿತಿದ್ದೆನೋ ಎನಿಸಿತು. ಸದ್ದು ಕ್ಷೀಣವಾಗುತ್ತ ಅದು ನನ್ನ ಕಾಲ ಮೇಲೆ ಕುಳಿತುಕೊಳ್ಳುವುದು ಕಾಣಿಸಿತು. ಅದು ನನ್ನ ಕಾಲೇ ಆದರೂ, ಸಿಟ್ಟಿನಿಂದ ಕೈಯಲ್ಲಿ ಹಿಡಿದ ಪೇಪರ್ ನಿಂದ ರಪ್ಪೆಂದು ಬಾರಿಸಿದೆ. ಮತ್ತೆ ತಪ್ಪಿಸಿಕೊಂಡ ಆ ಸೊಳ್ಳೆ ಹತ್ತಿರದ ಗೋಡೆಯ ಮೇಲೆ ಕುಳಿತುಕೊಂಡಿತು. ಶತ್ರುವಿನ ಪ್ರಾಣ ತೆಗೆಯಲು ನಿಂತ ಯೋಧನ ಹಾಗೆ ನಾನು ಅದರ ಬೆನ್ನು ಬಿಡದೆ ರಪ್ಪೆಂದು ಬಾರಿಸಿದೆ. ಅದು ಮತ್ತೆ ಪಾರಾಗುವ ಮುನ್ನವೇ ಇನ್ನೊಂದು ಸಲ ಬಾರಿಸಿ ಆಯಿತು. ಅಲ್ಲಿಯವರೆಗೆ ಫೈಟರ್ ಜೆಟ್ ವಿಮಾನಗಳ ಹಾಗೆ ಹಾರುತ್ತ ತಪ್ಪಿಸಿಕೊಳ್ಳುತ್ತಿದ್ದ ಆ ಸೊಳ್ಳೆ, ನನ್ನ ಚೌಕಾಕಾರದ ಪೇಪರ್ ಆಯುಧಕ್ಕೆ ಕೊನೆಗೂ ಆಹುತಿ ಆಯಿತು.

 

ದೊಡ್ಡ ಗಾತ್ರದ ಆ ಸೊಳ್ಳೆಯನ್ನು ಪೇಪರ್ ನಲ್ಲಿ ತುಂಬಿ, ಕಿಟಕಿ ತೆಗೆದು ಹೊರ ಹಾಕಿದೆ. ಮನೆಯ ಕಾಂಪೌಂಡ್ ಗೋಡೆಗೆ ಕುಳಿತಿದ್ದ ಕಟ್ಟಡ ಕಾರ್ಮಿಕ ಹಚ್ಚಿದ ರೇಡಿಯೋನಲ್ಲಿ ಅಣ್ಣಾವ್ರು ಸಣ್ಣಗೆ ಹಾಡುತ್ತಿದ್ದರು "ಕೋಟೆ ಕಟ್ಟಿ ಮೆರೆದೋರೆಲ್ಲ ಏನಾದರು? ಮೀಸೆ ತಿರುವಿ ಕುಣಿದೊರೆಲ್ಲ ಮಣ್ಣಾದರು".  ಹೌದಲ್ಲವೇ ಅನಿಸಿತು. ಮೆರೆದವರನ್ನು ಸಾವು ಹುಡುಕಿಕೊಂಡು ಬರುತ್ತೋ ಅಥವಾ ಅದು ತಾನು ಬರುವ ಮುಂಚೆ ಮೆರೆಯುವ ಹುಚ್ಚುತನವನ್ನು ಕಳಿಸುತ್ತೋ? ಯಾವುದರ ಕಾರಣ ಯಾವುದು ಎಂದು ಒಮ್ಮೆಗೆ ನಿರ್ಧರಿಸಲು ಆಗಲಿಲ್ಲ.

 

ಸೊಳ್ಳೆ ಸಾಯುವ ಮುಂಚೆ ಅದನ್ನು ಕ್ಷಮಿಸಲು ಸಾಧ್ಯವೇ ಇಲ್ಲ ಎನ್ನುವ ಮನಸ್ಥಿತಿಯಲ್ಲಿ ಇದ್ದ ನನಗೆ, ಅದು ಸತ್ತ ಮೇಲೆ 'ಪಾಪ, ಅದರ ಕರ್ಮ' ಎನಿಸತೊಡಗಿತು.

Thursday, July 29, 2021

ಆಸೆಯ ಮೂಲ?

ಆಸೆಯೇ ದುಃಖಕ್ಕೆ ಮೂಲ ಎಂದ ಬುದ್ಧ. ಸರಿ, ಆದರೆ ಆಸೆಯ ಮೂಲ ಯಾವುದು? ಆಸೆಗಳಿಗೆ ಕೊನೆಯಿಲ್ಲದಂತೆ ಆಗಿದ್ದು ಹೇಗೆ? ಅದರ ಬಗ್ಗೆ ಬುದ್ಧ ಏನು ಹೇಳಿದ್ದಾನೋ ಗೊತ್ತಿಲ್ಲ. ಆದರೆ ಪ್ರಕೃತಿ ವಿಕಾಸ (Evolution) ಇದರ ಬಗ್ಗೆ ಸಾಕಷ್ಟು ಬೆಳಕು ಚೆಲ್ಲುತ್ತದೆ.


ಪ್ರಕೃತಿ ಸಹಸ್ರಾರು ಜೀವಿಗಳನ್ನು ಸೃಷ್ಟಿಸಿ, ಅವುಗಳು ನಿರಂತರ ವಿಕಾಸ ಹೊಂದುವ ಪ್ರಕ್ರಿಯೆಯನ್ನು ಸದಾ ಜಾರಿಯಲ್ಲಿ ಇಟ್ಟಿರುತ್ತದೆ. ಪರಿಸರಕ್ಕೆ ತಕ್ಕಂತೆ ಬದಲಾವಣೆ ಹೊಂದಬಲ್ಲ ಜೀವಿಗಳು ಮಾತ್ರ ಉಳಿದುಕೊಂಡು ತಮ್ಮ ವಂಶವನ್ನು ಮುಂದುವರೆಸಿಕೊಂಡು ಹೋಗುತ್ತವೆ. ಉಳಿದವುಗಳನ್ನು ನಿರ್ದಾಕ್ಷಿಣ್ಯವಾಗಿ ಪ್ರಕೃತಿ ಹೊಸಕಿ ಹಾಕುತ್ತದೆ. ಈ ವಿಕಾಸ ಹೊಂದುವ ಪ್ರಕ್ರಿಯೆ ಮುಂದುವರೆದುಕೊಂಡು ಹೋಗಲು, ಪ್ರಕೃತಿ ಎಲ್ಲ ಜೀವಿಗಳಲ್ಲಿ, ತಾನು ಸ್ವಾರ್ಥಿಯಾಗುವಂತೆ, ಎಂತಹ ಪರಿಸ್ಥಿತಿಯಲ್ಲೂ ಮೊದಲು ತನಗೆ ಆಹಾರ ಹುಡುಕಿಕೊಳ್ಳುವಂತೆ, ತನ್ನ ಪ್ರಾಣ ಕಾಪಾಡಿಕೊಳ್ಳುವಂತೆ, ತನ್ನ ವಂಶ ಮುಂದುವರೆಯುವಂತೆ ಮಾಡುವ ಸ್ವಭಾವಗಳನ್ನು ಹುಟ್ಟಿನಿಂದಲೇ ಬರುವ ಏರ್ಪಾಡು ಮಾಡುತ್ತದೆ. ಆಸೆ ಮತ್ತು ನೋವು ಈ ಸ್ವಭಾವಗಳ ಎರಡು ಮುಖಗಳು. ನೋವೇ ಆಗದಿದ್ದರೆ ಮನುಷ್ಯ ತನ್ನ ದೇಹಕ್ಕೆ ಕಾಳಜಿ ಮಾಡುತ್ತಿದ್ದನೇ? ಅದಕ್ಕೆ ನೋಡಿ, ಯಾವುದೇ ಗಾಯ ಉಲ್ಬಣವಾಗುವುದಕ್ಕೆ ಮುನ್ನವೇ ನೋವು ಉಂಟು ಮಾಡಿ ದೇಹದ ಕಡೆಗೆ ಗಮನ ಹರಿಸುವಂತೆ ಮಾಡುವ ವ್ಯವಸ್ಥೆ ಪ್ರಕೃತಿ ಮನುಷ್ಯನನ್ನು ಸೇರಿದಂತೆ ಎಲ್ಲ ಪ್ರಾಣಿ, ಪಕ್ಷಿಗಳಲ್ಲಿ ಮಾಡಿದೆ. ಹಾಗೆಯೇ, ವಿಕಾಸ ಹೊಂದುವುದಕ್ಕೆ ಆಸೆಯನ್ನು ಎಲ್ಲ ಜೀವಿಗಳಲ್ಲಿ ಹುಟ್ಟು ಗುಣವನ್ನಾಗಿಸಿದೆ. ಆದರೆ ಮನುಷ್ಯರಲ್ಲಿ ಮಾತ್ರ ಆಸೆಗಳಿಗೆ ಮಿತಿಯೇ ಇಲ್ಲ ಎನ್ನುವಂತೆ ಆಗಿರುವುದು ಪ್ರಕೃತಿ ನಮಗೆ ಹೆಚ್ಚಿಗೆ ಕೊಟ್ಟ ಬುದ್ದಿವಂತಿಕೆಯಿಂದ. ಆಸೆಗಳು ಹೆಚ್ಚಾದಷ್ಟು ದುಃಖವು ಹೆಚ್ಚಾಗುತ್ತದೆ ಎನ್ನುವುದು ಮಾತ್ರ ಬುದ್ಧ ನಮಗೆ ತಿಳಿಸಿಕೊಟ್ಟ.


ಆಸೆಗಳನ್ನೇ ಬೇಡ ಎಂದು ತಿರಸ್ಕಿರಿಸದರೆ ಏನಾಗುತ್ತದೆ? ಅದು ಪ್ರಕೃತಿಯ ವಿರುದ್ಧದ ಈಜಾಗುತ್ತದೆ. ನಾವು ಆಸೆಗಳನ್ನು ಅದುಮಿಕೊಂಡರೂ, ಪ್ರಕೃತಿ ನಮ್ಮನ್ನು ಮತ್ತೆ ವಿಕಾಸದ ಕಡೆಗೆ ಸೆಳೆಯುವ ಪ್ರಯತ್ನ ಮಾಡುತ್ತಲೇ ಇರುತ್ತದೆ. ಅದಕ್ಕೆ ಬುದ್ಧ, ಮಹಾವೀರ, ಸ್ವಾಮಿ ವಿವೇಕಾನಂದ ತರಹದ ಕೆಲವೇ ಜನರಿಗೆ ಮಾತ್ರ ಆಧ್ಯಾತ್ಮ ಒಲಿಸಿಕೊಳ್ಳಲು ಸಾಧ್ಯವಾಯಿತು. ಕೊನೆಯಿಲ್ಲದ, ನಿರಂತರ ವಿಕಾಸದ ವಿರುದ್ಧ ದಿಕ್ಕಿನೆಡೆ ಅವರು ಸಾಗಿ ಪ್ರಕೃತಿಯ ಬಿಗಿ ಮುಷ್ಟಿಯಿಂದ ಪಾರಾದರು. ಪ್ರಕೃತಿಗೆ ಸಾಧು-ಸಂತರಿಂದ ಏನೂ ಉಪಯೋಗವಿಲ್ಲ. ಅದಕ್ಕೆ ಅದು ಆಸೆಗಳಿಗೆ ಶರಣಾಗುವ ನಮ್ಮ ನಿಮ್ಮಂಥವರನ್ನೇ ಅವಲಂಬಿಸಿದೆ. ಒಬ್ಬೊಬ್ಬರಿಗೆ ಒಂದೊಂದು ತರಹದ ಹುಚ್ಚು ಹತ್ತಿಸಿ ತನ್ನ ಕಾರ್ಯ ಸಾಧಿಸಿಕೊಳ್ಳುತ್ತದೆ. ಆಸೆಗಳನ್ನು ಮೆಟ್ಟಿ ನಿಂತವರನ್ನು ತನ್ನಲ್ಲಿ ಲೀನವಾಗಿಸಿಕೊಂಡು ಪುನರ್ಜನ್ಮವಿಲ್ಲದಂತೆ ಮಾಡಿಬಿಡುತ್ತದೆ. (ಇದು ನನ್ನ ಅಭಿಪ್ರಾಯ ಅಷ್ಟೇ, ಯಾವ ಅನುಭವವು ನನಗಿಲ್ಲ).


ಪ್ರಕೃತಿಗೆ ವಿಕಾಸ ಮುಖ್ಯ. ನಿರ್ದಿಷ್ಟ ಮನುಷ್ಯನಲ್ಲ. ಆಸೆಯೇ ಇರದಿದ್ದರೆ, ಬದಲಾವಣೆ ಮತ್ತು ಪ್ರಗತಿ ಹೇಗೆ ಸಾಧ್ಯ? ಪ್ರಕೃತಿ ವಿಕಾಸ ನಿರಂತರವಾಗಿ ಸಾಗಲು ಆಸೆಗಳ ನೆರವು ಪ್ರಕೃತಿಗೆ ಅತ್ಯವಶಕ. ಅದಕ್ಕೆ ಅದು ಬದಲಾವಣೆ ಬಯಸದವರನ್ನು ಹಿಂದಕ್ಕೆ ಬಿಟ್ಟು, ಆಸೆಯ ತೆವಲಿಗೆ ಬಿದ್ದವರನ್ನು ತನ್ನ ದಾಳವನ್ನಾಗಿಸಿಕೊಳ್ಳುತ್ತದೆ. ಸತ್ಯ ಕಂಡುಕೊಂಡ ಕೆಲವೇ ಕೆಲವರು ಈ ಆಟದಿಂದ ದೂರ ಸರಿದರೆ, ಉಳಿದವರೆಲ್ಲ ಆಸೆಗಳ ಬೆಂಬತ್ತಿ ಜೀವನ ಸವೆಸುತ್ತಾರೆ. ಅದಕ್ಕೆ ಬುದ್ಧ 'ಆಸೆಯೇ ದುಃಖಕ್ಕೆ ಮೂಲ' ಎಂದು ಎರಡು ಸಾವಿರ ವರುಷಗಳ ಹಿಂದೆಯೇ ಸಾರಿ ಹೇಳಿದರೂ, ಮನುಜ ಕುಲ ಕಿಂಚಿತ್ತಾದರೂ ಬದಲಾಗದೇ, ಇನ್ನು ಹೆಚ್ಚಿನ ಆಸೆಬುರುಕರಾಗಿರುವುದು.

Sunday, July 25, 2021

ಪುಸ್ತಕ ಪರಿಚಯ: ತೇಜೋ-ತುಂಗಭದ್ರಾ (ಲೇಖಕರು: ವಸುಧೇಂದ್ರ)

ಇದು ಹದಿನೈದನೇ ಶತಮಾನದಲ್ಲಿ ನಡೆಯುವ ಕಥಾ ವಸ್ತುವನ್ನು ಹೊಂದಿದೆ. ಪೋರ್ಚುಗೀಸ್ ದೇಶದ ತೇಜೋ ನದಿ ದಡದ, ಲಿಸ್ಬನ್ ನಗರದಲ್ಲಿ ವಾಸಿಸುವ ಗೇಬ್ರಿಯಲ್ ಮತ್ತು ವಿಜಯನಗರ ಸಾಮ್ರಾಜ್ಯದಲ್ಲಿ, ತುಂಗಭದ್ರಾ ನದಿ ದಡದಲ್ಲಿರುವ ತೆಂಬಕಪುರದಲ್ಲಿ ವಾಸಿಸುವ ಹಂಪಮ್ಮ ಈ ಕಾದಂಬರಿಯ ಕೇಂದ್ರ ಬಿಂದುಗಳು. ಅವರಲ್ಲದೇ ಇನ್ನೂ ಹತ್ತಾರು ಪಾತ್ರಗಳು ತಮ್ಮ ಕಥೆಗಳನ್ನು ಹೇಳುತ್ತಾ ವಿಶಿಷ್ಟ ಛಾಪು ಮೂಡಿಸುತ್ತಾರೆ.


ಕ್ರಿಶ್ಚಿಯನ್ ಆದ ಗೇಬ್ರಿಯಲ್ ಗೆ, ಯಹೂದಿ ಧರ್ಮಕ್ಕೆ ಸೇರಿದ ಬೆಲ್ಲಾಳನ್ನು ಮದುವೆಯಾಗುವ ಆಸೆ. ಆದರೆ ಅವಳ ಅಪ್ಪ ಶ್ರೀಮಂತರಿಗೆ ಮಾತ್ರ ತನ್ನ ಮಗಳು ಸಿಗುವುದು ಎಂದು ಸ್ಪಷ್ಟ ಪಡಿಸಿದ ಮೇಲೆ, ಹೇಗಾದರೂ ತನ್ನ ಬಡತನ ಕಳೆದುಕೊಳ್ಳುವ ಉದ್ದೇಶದಿಂದ, ಶ್ರೀಮಂತಿಕೆ-ವೈಭವದಿಂದ ಮೆರೆಯುವ ಭಾರತಕ್ಕೆ, ಹಣ ಗಳಿಸುವುದಕ್ಕಾಗಿ ತೆರಳುತ್ತಾನೆ. ಅಷ್ಟರಲ್ಲಾಗಲೇ ವಾಸ್ಕೋ-ಡಾ-ಗಮ ಭಾರತಕ್ಕೆ ಸಮುದ್ರ ಮಾರ್ಗ ಕಂಡು ಹಿಡಿದಿದ್ದನಲ್ಲ. ಅವನ ಹಡಗುಗಳು ಮಸಾಲೆ, ರತ್ನ-ವೈಡೂರ್ಯಗಳನ್ನು ಹೊತ್ತು ತಂದು, ಅವನ ಜೊತೆಗಾರರನ್ನು ಶ್ರೀಮಂತರನ್ನಾಗಿಸುವುದಲ್ಲದೆ ರಾಜ ಮನೆತನದ ಬೊಕ್ಕಸವನ್ನು ಕೂಡ ತುಂಬಿದ್ದವು. ಭಾರತದೊಡನೆ ವ್ಯಾಪಾರ ಮಾಡಿದರೆ ಬಡತನ ಕಳೆದುಹೋಗುವುದು ಸುಲಭ ಎನ್ನುವುದು ಎಲ್ಲ ಸಾಮಾನ್ಯ ಜನರಿಗೂ ಗೊತ್ತಾಗಿ ಹೋಗಿತ್ತು.


ತೆಂಬಕಪುರದಲ್ಲಿ ಹಂಪಮ್ಮಳನ್ನು ಮದುವೆಯಾಗುವ ಉದ್ದೇಶದಿಂದ ಇಬ್ಬರು ಜಟ್ಟಿಗಳು ಕಾಳಗಕ್ಕೆ ಇಳಿದಿದ್ದರು. ಸೋತವನು ಸತ್ತರೆ, ಗೆದ್ದವನಿಗೆ ಹಂಪಮ್ಮಳ ಕೈ ಹಿಡಿಯುವ ಅದೃಷ್ಟ. ಆ ಕಾಳಗ ನೋಡಲು, ಸ್ವತಃ ಶ್ರೀಕೃಷ್ಣದೇವರಾಯರೇ ತಮ್ಮ ರಾಣಿಯರ ಜೊತೆ ತೆಂಬಕಪುರಕ್ಕೆ ಆಗಮಿಸಿದ್ದರಲ್ಲ. ಅದರಲ್ಲಿ ಗೆದ್ದ ಕೇಶವ ಹಂಪಮ್ಮಳನ್ನು ಮದುವೆಯಾದರೂ, ಕೆಲವೇ ವರುಷಗಳಿಗೆ ಕೃಷ್ಣದೇವರಾಯರಿಗೆ ಗಂಡು ಮಗುವಾದಾಗ, ಲೆಂಕನಾಗಿ ಪ್ರಾಣ ತೆರುತ್ತಾನೆ. ಸಹಗಮನಕ್ಕೆ ಒಪ್ಪದ, ಆಗಲೇ ಗರ್ಭಿಣಿಯಾಗಿದ್ದ ಹಂಪಮ್ಮ, ತಪ್ಪಿಸಿಕೊಂಡು ನದಿ ದಾಟುತ್ತಾಳೆ.


ಭಾರತಕ್ಕೆ ಬಂದು ತಲುಪಿದ ಗೇಬ್ರಿಯಲ್, ಗೋವಾದಲ್ಲಿ ಬಿಜಾಪುರ ಸುಲ್ತಾನರ ಕೈಗೆ ಸಿಕ್ಕು, ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡು, ಅಹ್ಮದ್ ಖಾನ್ ನಾಗಿ ಬದಲುಗುತ್ತಾನೆ. ಮತ್ತೆ ಪೋರ್ಚುಗೀಸ್ ರ ಧಾಳಿಗೆ ಸಿಕ್ಕು ತನ್ನ ಕಿವಿ-ಮೂಗುಗಳನ್ನು ಕೊಯ್ಯಿಸಿಕೊಂಡು ವಿರೂಪಗೊಳ್ಳುತ್ತಾನೆ. ಕೊನೆಗೆ ವಿಜಯನಗರಕ್ಕೆ ಬಂದು ನೆಲೆಗೊಳ್ಳುತ್ತಾನೆ. ಅವನ ಹೆಸರು ಕನ್ನಡಕ್ಕೆ ರೂಪಾಂತರಗೊಂಡು  ಅಮ್ಮದಕಣ್ಣ ನಾಗಿ ಬದಲಾಗುತ್ತದೆ.


ನದಿ ದಾಟಿ ಬಂದ ಹಂಪಮ್ಮಳಿಗೆ, ಅವಳನ್ನು ಕೊಲ್ಲಲು ಹಿಂದೆ ಬೆನ್ನಟ್ಟಿ ಬರುತ್ತಿರುವವರಿಂದ ಕಾಪಾಡುವ ಉದ್ದೇಶದಿಂದ ಅಮ್ಮದಕಣ್ಣ, ಹಂಪಮ್ಮಳನ್ನು ತನ್ನ ಕುದುರೆಯ ಮೇಲೆ ಗೋವಾ ಗೆ ಕರೆದೊಯ್ಯುತ್ತಾನೆ. ಮಾರ್ಗ ಮಧ್ಯದಲ್ಲಿ ಪುರಂದರ ದಾಸರ ದರ್ಶನವಾಗಿ ಅವರು ಇವರನ್ನು ಹರಸುತ್ತಾರೆ. ಗೋವಾ ತಲುಪಿ ಪೋರ್ಚುಗೀಸ್ ರ ಆಶ್ರಯ ಪಡೆಯುವ ಹಂಪಮ್ಮ, ತನಗೆ ನೆರವಾದ ಅಮ್ಮದಕಣ್ಣನನ್ನು ತನಗೆ ಜೋಡಿಯಾಗುವಂತೆ ಕೇಳಿಕೊಳ್ಳುತ್ತಾಳೆ.


ಪರದೇಶದವನಿಗೆ ಆಶ್ರಯ ಕೊಟ್ಟ ಹಂಪೆ, ತನ್ನದೇ ನಾಡಿನವಳಿಗೆ ಹೊರ ಹೋಗುವಂತ ಸನ್ನಿವೇಶ ಸೃಷ್ಟಿಸುವ ವಿಪರ್ಯಾಸ ಈ ಕಥೆಯಲ್ಲಿದೆ. ಸಣ್ಣ ಕಥೆಗಳಲ್ಲಿರುವ ಸೂಕ್ಷ್ಮತೆ, ಆರ್ದ್ರತೆ ಈ ಕಾದಂಬರಿ ಉದ್ದಕ್ಕೂ ಕಾಪಾಡಿಕೊಂಡು ಬಂದಿದ್ದಾರೆ ಲೇಖಕರು. ಐದು ನೂರು ವರುಷಗಳ ಹಿಂದೆ ಇದ್ದ ಸಮಾಜದ ಸಂಸ್ಕೃತಿ, ಧರ್ಮ-ಅಧರ್ಮದ ವಿಮರ್ಶೆ, ಸಾಮಾಜಿಕ ಸ್ಥಿತಿ-ಗತಿಗಳು, ಮತ್ತು ಜೀವನಶೈಲಿ ಇವುಗಳನ್ನು ವಾಸ್ತವಕ್ಕೆ ಹತ್ತಿರವಾಗಿ ಅಕ್ಷರಗಳಲ್ಲಿ ಈ ಕೃತಿಯ ಮೂಲಕ ಮೂಡಿಸಿದ್ದಾರೆ ಲೇಖಕ ವಸುಧೇಂದ್ರ. ಬಡತನ-ಹಸಿವು, ಧರ್ಮ ಮತ್ತು ರಾಜಭಕ್ತಿಗಳನ್ನು ಮೀರಿದ್ದು, ಹಾಗೆಯೇ ಮನುಷ್ಯ ತನ್ನ ಅಧಿಕಾರ ದಾಹಕ್ಕೆ ಧರ್ಮ ಮತ್ತು ಕ್ರೌರ್ಯಗಳನ್ನು ಹೇಗೆ ಬಳಸಿಕೊಳ್ಳುತ್ತಾನೆ ಎಂದು ಈ ಕಾದಂಬರಿಯ ಕೆಲವು ಪಾತ್ರಗಳು ಸ್ಪಷ್ಟ ಪಡಿಸುತ್ತವೆ. 


ಇತಿಹಾಸಕ್ಕೆ, ಸಮಾಜಕ್ಕೆ ಮತ್ತು ಮನುಷ್ಯ ವರ್ಗಕ್ಕೆ ಕನ್ನಡಿ ಹಿಡಿಯುವ ಕೃತಿಯಾಗಿದೆ ಈ ಕಾದಂಬರಿ.