Saturday, March 19, 2022

ಗುರುವಿನ ಸಮ್ಮೋಹಕ ಶಕ್ತಿ

(ಇದು ಅರುಣ್ ಶೌರಿ ಅವರು ಬರೆದ 'Two Saints' ಪುಸ್ತಕದ ಮೊದಲ ಅಧ್ಯಾಯದ ಭಾವಾನುವಾದ. ಸ್ವಾಮಿ ವಿವೇಕಾನಂದ ಎಂದು ಗುರುತಿಸಿಕೊಂಡ ನರೇಂದ್ರ ಮತ್ತು ಅವರ ಗುರು ರಾಮಕೃಷ್ಣ ಪರಮಹಂಸರ ಜೀವನ ಕುರಿತು ಇದು ಬೆಳಕು ಚೆಲ್ಲುತ್ತದೆ)


ಗುರು ದೇವಿಯ ಪ್ರಾರ್ಥನೆಯ ಮಧ್ಯೆ ಬಿಕ್ಕುತ್ತಿದ್ದ. ತನ್ನ ಕೆಲಸ ಮುಂದುವರೆಸಲು ಸಹಾಯವಾಗುವಂತೆ ಶಿಷ್ಯರನ್ನು ಅನುಗ್ರಹಿಸುವಂತೆ ಬೇಡಿಕೊಳ್ಳುತ್ತಿದ್ದ. ಅವರಿಗೆ ತಮ್ಮ ದಿವ್ಯದೃಷ್ಟಿಯಲ್ಲಿ ಕೆಲ ಯುವಕರು ಅದರಲ್ಲೂ ನರೇಂದ್ರ ಎನ್ನುವ ಸ್ವಂತ ಚಿಂತನೆಯುಳ್ಳ, ದೇವರ ಬಗ್ಗೆ ಯಾರೂ ತಿಳಿದುಕೊಳ್ಳಲು ಸಾಧ್ಯವಿಲ್ಲ ಎಂದು ನಂಬಿದ್ದ ಬಂಡಾಯಗಾರ ಯುವಕ ಬರುವುದು ಮುಂಚೆಯೇ ಕಾಣುತ್ತಿತ್ತು. ಅದರಂತೆಯೇ ನರೇಂದ್ರ ತನ್ನ ಸ್ನೇಹಿತರೊಡನೆ ಗುರುವಿನ ಭೇಟಿಗಾಗಿ ದಕ್ಷಿಣೇಶ್ವರಕ್ಕೆ ಬರಲು ಆರಂಭಿಸಿದ. ನರೇಂದ್ರನನ್ನು ನೋಡಿದ ಕೂಡಲೇ ಗುರುವಿನ ಹರ್ಷ ಎಲ್ಲೇ ಮೀರಿತ್ತು.


ಮೊದಲ ಭೇಟಿಯಲ್ಲಿ ನರೇಂದ್ರನಿಗೆ ಗುರುವು ಮತಿಭ್ರಮಣೆಗೊಂಡ ವ್ಯಕ್ತಿಯ ತರಹ ತೋರಿದರೂ, ಇನ್ನು ಕೆಲವು ಸಲ ಭೇಟಿ ನೀಡಿ ನಿರ್ಧರಿಸಿದರಾಯಿತು ಎಂದುಕೊಂಡ. ಎರಡನೆಯ ಭೇಟಿಯಲ್ಲಿ, ಗುರುವಿನ ಹತ್ತಿರ ಯಾರೂ ಇರಲಿಲ್ಲ. ನರೇಂದ್ರನನ್ನು ಕರೆದು ತನ್ನ ಹತ್ತಿರವೇ ಕುಳಿಸಿಕೊಂಡ ಗುರು ಅವನನ್ನು ತನ್ನ ಬಲಗಾಲಿನಿಂದ ಸ್ಪರ್ಶಿಸಿದರು. ನರೇಂದ್ರನಿಗೆ ಒಂದು ಅದ್ಭುತ ಅನುಭವದ ಆರಂಭವಾಯಿತು. ಅವರು ಕುಳಿತಿದ್ದ ಕೋಣೆಯ ಗೋಡೆಗಳೆಲ್ಲ ಹಿಂದೆ ಸರಿದು ಮಾಯವಾಗುತ್ತಿರುವ ಹಾಗೆ ಮತ್ತು ಅದರ ಜೊತೆಗೆ ನರೇಂದ್ರನಿಗೆ ತಾನು ತಾನೆನ್ನುವ ಅರಿವು ಕಳೆದು ಶೂನ್ಯದಲ್ಲಿ ಸೇರಿ ಹೋದ ಹಾಗೆ ಅನುಭವ. 


"ನನಗೆ ಏನು ಮಾಡುತ್ತಿದ್ದೀರಿ? ನನಗೆ ತಂದೆ, ತಾಯಿಯರಿದ್ದಾರೆ" ನರೇಂದ್ರ ದೊಡ್ಡ ಧ್ವನಿಯಲ್ಲಿ ಗಾಬರಿಯಿಂದ ಕೇಳಿಯೇ ಬಿಟ್ಟ. ಆ ಮಾತಿಗೆ ದೊಡದಾಗಿ ನಗುತ್ತಾ, ತಮ್ಮ ಕೈಯನ್ನು ನರೇಂದ್ರನ ಎದೆಯ ಮೇಲಿಟ್ಟು "ಹಾಗಾದರೆ ಇದು ನಿಲ್ಲಲಿ. ಎಲ್ಲ ಅನುಭವ ಒಂದೇ ಸಾಲಕ್ಕೆ ಆಗುವ ಅಗತ್ಯವಿಲ್ಲ. ಕಾಲ ಕಳೆದಂತೆ ಅವು ನಿನ್ನವಾಗಲಿ" ಎಂದು ಗುರು ನುಡಿದರು. ಅಸಾಧಾರಣವಾದಂತ ಆ ಅನುಭವ ಅಲ್ಲಿಗೆ ಕೊನೆಯಾಗಿ ಮತ್ತೆ ಸಹಜ ಸ್ಥಿತಿಗೆ ಮರಳಿದ ನರೇಂದ್ರ.


ನರೇಂದ್ರ ಮೂರನೆಯ ಬಾರಿ ಬಂದಾಗ ಗುಡಿಯಲ್ಲಿ ಗದ್ದಲವಿತ್ತು. ತನ್ನ ಜೊತೆಗೆ ಬರುವಂತೆ ಸೂಚಿಸಿದ ಗುರುಗಳು ನರೇಂದ್ರನನ್ನು ಕರೆದುಕೊಂಡು ಒಂದು ಕೋಣೆಯಲ್ಲಿ ಕುಳಿತುಕೊಂಡರು. ನೋಡುನೋಡುತ್ತಿದ್ದಂತೆಯೇ ಗುರುಗಳು ಮೈಮರೆತು ಭಾವಪರವಶರಾದರು. ಗುರುಗಳಲ್ಲಾಗುತ್ತಿರುವ ಬದಲಾವಣೆಯನ್ನು ನರೇಂದ್ರ ಗಮನಿಸುತ್ತಿದ್ದ. ಹಠಾತ್ತನೆ ಗುರುಗಳು ನರೇಂದ್ರನನ್ನು ಸ್ಪರ್ಶಿಸುತ್ತಾರೆ. ಆ ಸ್ಪರ್ಶಕ್ಕಿದ್ದ ಶಕ್ತಿಯಿಂದ ನರೇಂದ್ರನಿಗೆ ಮಾತೇ ಹೊರಡಲಿಲ್ಲ. ಅವನಿಗೆ ಅರಿವು ಸಂಪೂರ್ಣ ಕಳೆದು ಹೋಯಿತು. ಅವನು ಮತ್ತೆ ಸಹಜ ಸ್ಥಿತಿಗೆ ಬರುವಷ್ಟರಲ್ಲಿ ಒಂದು ದಿನವೇ ಕಳೆದು ಹೋಗಿತ್ತು.


ಎಷ್ಟೋ ವಾರಗಳು ಉರುಳಿ ಹೋದವು. ಒಂದು ದಿನ ನರೇಂದ್ರ ತನ್ನ ಸ್ನೇಹಿತನೊಡನೆ ಗುರುಗಳು ದೇವರ ಬಗ್ಗೆ ಹೇಳಿದ್ದನ್ನು ಅಪಹಾಸ್ಯ ಮಾಡುತ್ತ ನಿಂತಿದ್ದ. ಅಲ್ಲಿಗೆ ಬಂದ ಗುರುಗಳು ಪ್ರೀತಿಯಿಂದ "ಯಾವ ವಿಷಯ ಮಾತನಾಡುತ್ತಿರುವಿರಿ?" ಎನ್ನುತ್ತಾ ನರೇಂದ್ರನನ್ನು ಸ್ಪರ್ಶಿಸಿದರು. ನರೇಂದ್ರನಿಗೆ ತಲೆ ಸುತ್ತಿ ಬಂದಂತೆ ಆಗಿ ಉತ್ತರಿಸಿದ "ನೀವು ಈ ಜಗತ್ತಿನಲ್ಲಿ ದೇವರ ಬಿಟ್ಟು ಬೇರೇನಿಲ್ಲ ಎಂದು ಹೇಳಿದ್ದರ ಬಗ್ಗೆ". ಆ ಅನುಭವ ನರೇಂದ್ರನಿಗೆ ಎಷ್ಟೋ ದಿನಗಳವರೆಗೆ ಬಿಟ್ಟು ಹೋಗಲಿಲ್ಲ. ಅಷ್ಟರಲ್ಲಿ ದೇವರು ಮತ್ತು ಜಗತ್ತು ಬೇರೆ ಬೇರೆ ಅಲ್ಲ ಎನ್ನುವ ಅದ್ವೈತ ಸಿದ್ಧಾಂತ ಅವನ ಸ್ವಂತ ಅನುಭವಕ್ಕೆ ಬಂದು ಬಿಟ್ಟಿತು.


ಗುರುವಿಗೆ ನರೇಂದ್ರ ಹತ್ತಿರವಾದರೂ, ಅವನು ತನ್ನ ಸಂಶಯ ಪಡುವ, ವಾದಕ್ಕೆ ಇಳಿಯುವ, ಪ್ರಶ್ನೆ ಹಾಕುವ ಸ್ವಭಾವವನ್ನು ಬಿಟ್ಟಿರಲಿಲ್ಲ.


ನರೇಂದ್ರನ ತಂದೆ ತೀರಿಕೊಂಡರು. ಅವನ ಕುಟುಂಬ ಕಡುಬಡತನಕ್ಕಿಳಿಯಿತು. ಮನೆಯಲ್ಲಿ ಎಲ್ಲರಿಗು ಸಾಕಾಗುವಷ್ಟು ಊಟವಿರುತ್ತಿರಲಿಲ್ಲ. ಯಾವುದೊ ಒಂದು ನೆಪದಲ್ಲಿ ಮನೆಯಿಂದ ನರೇಂದ್ರ ಹೊರ ಬಂದು ಬಿಡುತ್ತಿದ್ದ. ಉಳಿದವರಿಗೆ ಒಂದು ತುತ್ತು ಊಟ ಹೆಚ್ಚಿಗೆ ಸಿಗಲಿ ಎಂದು. ಅವನು ಕೆಲಸಕ್ಕಾಗಿ ಅಲೆದು ಅಲೆದು ಸುಸ್ತಾದ. ಆದರೆ ಅವನಿಗೆ ಎಲ್ಲೂ ಕೆಲಸ ದೊರಕಲಿಲ್ಲ. ಒಂದು ದಿನ ಮಳೆಯಲ್ಲಿ ನೆನೆದು, ನಡೆಯಲು ತ್ರಾಣವಿಲ್ಲದೆ ಕುಸಿದುಬಿಟ್ಟ. ಮತ್ತೆ ಅವನು ಎದ್ದಾಗ, ಅವನಿಗೆ ತಾನು ಕೆಲಸ ಮಾಡುವುದಕ್ಕೆ, ಹಣ ಗಳಿಸುವುದಕ್ಕೆ ಹುಟ್ಟಿಲ್ಲ ಎನ್ನುವುದನ್ನು ಕಂಡುಕೊಂಡ. ಲೌಕಿಕವನ್ನು ತೊರೆದು ಸನ್ಯಾಸಿಯಾಗುವ ಬಯಕೆ ಅವನಲ್ಲಿ ಮೊಳೆಯತೊಡಗಿತ್ತು. ಆದರೆ ತನ್ನ ತಾಯಿ, ಸಹೋದರರು ಉಪವಾಸ ಇರುವುದನ್ನು ಅವನು ನೋಡಲಾರ.


ಗುರುವಿನ ಹತ್ತಿರ ಬಂದ ನರೇಂದ್ರ ತನ್ನ ಕುಟುಂಬಕ್ಕೆ ಸಹಾಯ ಮಾಡುವಂತೆ ದೇವಿಯನ್ನು ಪ್ರಾರ್ಥಿಸಿ ಎಂದು ಕೇಳಿಕೊಂಡ. ಗುರುವು ಅದಕ್ಕೆ "ದೇವಿಯನ್ನು ನಾನು ಸಾಕಷ್ಟು ಸಲ ನಿಮ್ಮ ಕುಟುಂಬದ ದಾರಿದ್ರ್ಯವನ್ನು ದೂರ ಮಾಡುವಂತೆ ಪ್ರಾರ್ಥಿಸಿದ್ದೇನೆ. ಅದರಿಂದ ಯಾವ ಉಪಯೋಗವು ಆಗಿಲ್ಲ. ಏಕೆಂದರೆ ನಿನಗೆ ದೇವಿಯ ಮೇಲೆ ನಂಬಿಕೆ ಇಲ್ಲ. ಇಂದು ಮಂಗಳವಾರ. ದೇವಿಯ ಇಷ್ಟದ ವಾರ. ನೀನೆ ಏಕೆ ದೇವಿಯನ್ನು ಪ್ರಾರ್ಥಿಸಬಾರದು? ಅವಳು ಜಗತ್ತಿಗೆ ಜನ್ಮ ಕೊಟ್ಟವಳು. ಅವಳು ಮನಸ್ಸು ಮಾಡಿದರೆ ಆಗದ ಕೆಲಸ ಯಾವುದಿದೆ?"  ಎಂದು ಹೇಳಿದರು.


ದೇವಸ್ಥಾನದ ಮೆಟ್ಟಿಲೇರಿ ಒಳ ಹೋದ ನರೇಂದ್ರ ಕರುಣೆಯ ಚಿಲುಮೆಯಾಗಿದ್ದ ದೇವಿಯನ್ನು ನೋಡುತ್ತಾ ಮೈಮರೆತು ತನಗೆ ದೈವಿಕ ಜ್ಞಾನ ಮತ್ತು ವೈರಾಗ್ಯವನ್ನು ಕೊಡುವಂತೆ ಬೇಡಿಕೊಂಡ. ಮರಳಿ ಬಂದ ನರೇಂದ್ರನ್ನು ಕಂಡ ಗುರುಗಳು "ದೇವಿಯ ಹತ್ತಿರ ನಿನ್ನ ಕುಟುಂಬದ ಸಮಸ್ಯೆ ಹೇಳಿಕೊಂಡೆಯಾ?" ಎಂದು ಪ್ರಶ್ನಿಸಿದರು. ದೇವಿಯ ಸಾನ್ನಿಧ್ಯದಲ್ಲಿ ಅದು ತನಗೆ ಸಂಪೂರ್ಣ ಮರೆತು ಹೋದುದನ್ನು ನರೇಂದ್ರ ನಿವೇದಿಸಿಕೊಂಡ. ಮತ್ತೆ ಇನ್ನೊಂದು ಸಲ ಹೋಗಿ ಪ್ರಾರ್ಥಿಸುವಂತೆ ಗುರುಗಳು ನರೇಂದ್ರನಿಗೆ ಸೂಚಿಸಿದರು. ಎರಡನೆಯ ಅನುಭವವು ನರೇಂದ್ರನಿಗೆ ವಿಭಿನ್ನವಾಗಿರಲಿಲ್ಲ. ಮತ್ತೆ ಮೂರನೆಯ ಬಾರಿಗೆ ಹೋಗುವಂತೆ ಗುರುಗಳು ಸೂಚಿಸಿದರು. ಈ ಬಾರಿ ದೇವಸ್ಥಾನದೊಳಗೆ ಕಾಲಿಟ್ಟೊಡನೆ ನರೇಂದ್ರನಿಗೆ ಲೌಕಿಕ ಸ್ವಾರ್ಥಗಳಿಗೆ ದೇವಿಯನ್ನು ಪ್ರಾರ್ಥಿಸಬಾರದು ಎನ್ನುವ ಅರಿವು ಮೂಡಿತು. ಮತ್ತೆ ತನಗೆ ದೈವಿಕ ಜ್ಞಾನ ನೀಡುವಂತೆ ದೇವಿಯನ್ನು ಪ್ರಾರ್ಥಿಸಿ ಗುರುವಿನತ್ತ ಮರಳಿದ ನರೇಂದ್ರ. 


"ಇದು ನಿಮ್ಮದೇ ಆಟ. ನನಗೆ ದೇವಿಯಲ್ಲಿ ಸ್ವಾರ್ಥಕ್ಕಾಗಿ ಪ್ರಾರ್ಥಿಸದಂತೆ ಮಾಡುತ್ತಿರುವಿರಿ. ನನ್ನ ತಾಯಿ, ತಮ್ಮಂದಿರ ಜವಾಬ್ದಾರಿಯನ್ನು ನಿಮಗೆ ಬಿಡುತ್ತೇನೆ" ಎಂದು ಹೇಳಿದ ನರೇಂದ್ರ. 

"ಸರಿ. ಅವರಿಗಿನ್ನೂ ಸಾಧಾರಣ ಊಟ, ಬಟ್ಟೆಗಳ ತೊಂದರೆ ಆಗದಂತೆ ನಾನು ನೋಡಿಕೊಳ್ಳುತ್ತೇನೆ" ಅಭಯವಿತ್ತರು ಗುರುಗಳು.


ಕೆಲ ತಿಂಗಳುಗಳು ಕಳೆದವು. ಗುರುಗಳ ಗಂಟಲ ಬೇನೆ ಉಲ್ಬಣವಾಗುತ್ತ ಹೋಯಿತು. ನರೇಂದ್ರ ಮತ್ತು ಅವನ ಸ್ನೇಹಿತರು ಸರದಿಯಲ್ಲಿ ಗುರುವಿನ ಸೇವೆಗೆ ನಿಂತರು. ಒಂದು ದಿನ ನರೇಂದ್ರ ಗುರುಗಳಲ್ಲಿ ಅಧ್ಯಾತ್ಮದ ಅಂತಿಮ ಹಂತವನ್ನು ತನಗೆ ತೋರಿಸಿಕೊಡುವಂತೆ ಬೇಡಿಕೊಂಡ. ಗುರುಗಳು ಅದನ್ನು ಮುಂದಕ್ಕೆ ತಳ್ಳಿ ಹಾಕುತ್ತ ಹೋದರು. ಒಂದು ದಿನ ನರೇಂದ್ರನಿಗೆ ತನ್ನ ತಲೆಯ ಹಿಂದೆ ಒಂದು ಪ್ರಕಾಶಮಾನವಾದ ದೀಪ ಹೊತ್ತಿಕೊಂಡಂತೆ, ಅವನ ಆತ್ಮ ಬೇರೆಯಾಗಿ ಶೂನ್ಯದೊಂದಿಗೆ ಬೆರೆತುಕೊಂಡ ಅನುಭವ ಆಯಿತು. ತನ್ನ ಜೊತೆಗಾರರನ್ನು ಸಹಾಯಕ್ಕಾಗಿ ಕೂಗಿದ. ಬಂದವರು ನರೇಂದ್ರನ ದೇಹ ನಿಶ್ಚಲವಾಗಿ, ಜೀವವಿಲ್ಲದಂತೆ ಮಲಗಿರುವುದನ್ನು ನೋಡಿ ಗುರುವಿನ ಹತ್ತಿರ ಓಡಿ ಹೋದರು. ಗುರುಗಳು ಶಾಂತವಾಗಿ, ತಮಗೆಲ್ಲ ಅರಿವಿರುವಂತೆ "ಅವನು ಹಾಗೆ ಇರಲಿ. ಬಹಳಷ್ಟು ದಿನಗಳಿಂದ ಆ ಅನುಭವಕ್ಕಾಗಿ ಗಂಟು ಬಿದ್ದಿದ್ದ" ಎಂದು ಹೇಳಿದರು.


ಸಹಜ ಸ್ಥಿತಿಗೆ ಮರಳಿದ ನಂತರ ನರೇಂದ್ರ ತನ್ನ ಗುರುಗಳ ಬಳಿ ಹೋದ. ಅವನನ್ನು ಉದ್ದೇಶಿಸಿ ಗುರುಗಳು ಹೇಳಿದರು "ತಾಯಿ ನಿನಗೆ ಸಕಲವನ್ನೂ ತೋರಿದ್ದಾಳೆ. ಆದರೆ ನಿನಗೆ ಮಾಡಲು ಸಾಕಷ್ಟು  ಕೆಲಸವಿದೆ. ಅದು ಮುಗಿದ ನಂತರ ಮತ್ತೆ ಆ ಅನುಭವ ನಿನ್ನದಾಗುತ್ತದೆ".


ಗುರುಗಳ ಆರೋಗ್ಯ ಹದಗೆಡುತ್ತಾ ಹೋಯಿತು. ಅವರಿಗೆ ಊಟ ಸೇರದಾಯಿತು. ನರೇಂದ್ರನನ್ನು ಎದುರಿಗೆ ಕೂಡಿಸಿಕೊಂಡು, ಅವನನ್ನು ನೋಡುತ್ತಾ ಸಮಾಧಿ ಸ್ಥಿತಿಗೆ ತಲುಪಿದರು. ನರೇಂದ್ರನಿಗೆ ತನ್ನ ದೇಹದಲ್ಲಿ ಏನೋ ಸೇರುತ್ತಿರುವ ಅನುಭವವಾಗಿ ಪ್ರಜ್ಞೆ ಕಳೆದುಕೊಂಡನು. ಮತ್ತೆ ಅವನಿಗೆ ಪ್ರಜ್ಞೆ ಬಂದಾಗ ಗುರುಗಳು ಅವನಿಗೆ ತಮ್ಮ ಜ್ಞಾನವನ್ನೆಲ್ಲ ಧಾರೆ ಎರೆದದ್ದು ತಿಳಿಸಿದರು. ನಂತರ ಗುರುಗಳು ತಮ್ಮ ದೇಹ ತೊರೆದರು. ಅಲ್ಲಿಂದ ಮುಂದೆ ನರೇಂದ್ರನಿಗೆ ತನ್ನ ಜೀವನದ ಉದ್ದೇಶ ಏನು  ಎನ್ನುವುದರಲ್ಲಿ ಯಾವುದೇ ಸಂದೇಹ ಉಳಿಯಲಿಲ್ಲ.

Thursday, March 17, 2022

ಕವನ ಸಂಕಲನ: ಹರಿದ ಹೊಕ್ಕಳ ಬಳ್ಳಿ; ಲೇಖಕರು: ವರದೇಂದ್ರ

ಚೊಚ್ಚಲ ಕವನ ಸಂಕಲನವನ್ನು ಹೊರ ತಂದಿರುವ ಗೆಳೆಯ ವರದೇಂದ್ರ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಬರೀ ಅಕ್ಷರ ಪ್ರೇಮವಿದ್ದರೆ ಸಾಲದು, ಭಾವನೆಗಳ ತುಡಿತವಿರದೆ ಯಾರೂ ಕವಿಯಾಗಲಾರರು. ಕಥೆಗಳನ್ನು ಕಥೆಗಾರ ಸೃಷ್ಟಿಸಿದರೆ, ಕಾವ್ಯಗಳೇ ಕವಿಯನ್ನು ಸೃಷ್ಟಿಸುತ್ತವೆ. ಭಾವನೆಗಳು ತೀವ್ರವಾದಾಗ, ತಾಳಲಾರದ ಪ್ರಸವ ವೇದನೆಯಂತೆ ಕಾವ್ಯ ಮೈದಳೆಯುತ್ತದೆ.


ಕಾದಂಬರಿಕಾರ ನೂರಾರು ಪುಟಗಳಲ್ಲಿ ಹೇಳುವುದನ್ನು ಕಥೆಗಾರ ನೂರಾರು ಸಾಲುಗಳಲ್ಲಿ ಹೇಳಿ ಮುಗಿಸುತ್ತಾನೆ. ಆದರೆ ಕವಿ ಹತ್ತಾರು ಪದಗಳಲ್ಲಿ ಹೆಚ್ಚಿನ ಸರಕನ್ನು ಸಾಗಿಸಿ ಬಿಡುತ್ತಾನೆ. ಅವ್ಯಕ್ತ ಭಾವನೆಗಳು ಪದ ಜೋಡಣೆಯೊಳಗೆ ತೂರಿಕೊಂಡು ಕಾವ್ಯವನ್ನು ಜೀವಂತವಾಗಿಸುತ್ತವೆ. ಕಾಳಿದಾಸನಿಂದ ಕುವೆಂಪುವರೆಗೆ ನೂರಾರು ಕವಿಗಳು ಕಾವ್ಯಗಳನ್ನು ರಚಿಸಿದರೂ ಅದಕ್ಕೆ ಸ್ಪೂರ್ತಿ ಮಾತ್ರ ಪ್ರಕೃತಿ ಮತ್ತು ಅವರ ಸಮಾಜದ ಒಡನಾಟಗಳು. ಕವಿ ತಾನಿರುವ ಕಾಲದ ಸಂಸ್ಕೃತಿಯನ್ನು, ಸಮಾಜವನ್ನು ಪ್ರತಿಬಿಂಬಿಸುತ್ತಾನೆ. ಕಾವ್ಯಗಳು ಅಂದಿನ ಸಮಾಜದ ಭಾವನೆಗಳ ಪ್ರತಿರೂಪವಾಗಿರುತ್ತವೆ. ಮತ್ತೆ ಕೆಲವು ಕಾಲಾತೀತವಾಗಿ ಮಾನವ ಬದುಕಿನ ಸಂಗಾತಿಯಾಗುತ್ತವೆ.  ಅದಕ್ಕೆ ನೋಡಿ ಕರ್ತೃ ಯಾರು ಎಂದು ಗೊತ್ತಿರದಿದ್ದರೂ ಜಾನಪದ ಗೀತೆಗಳು ನಮ್ಮ ಮನದಿಂದ ಮರೆಯಾಗದೆ ಹೋಗದಿರುವುದು.


ಕವಿ ವರದೇಂದ್ರ ಅವರು ನಮ್ಮ-ನಿಮ್ಮ ಅನುಭವಗಳನ್ನೇ ಕಾವ್ಯವನ್ನಾಗಿಸಿದ್ದಾರೆ. ಶಬ್ದ ಜೋಡಣೆ ಅವರದಾದರೂ, ಅನುಭವಗಳು ನಮ್ಮವೂ ಕೂಡ. ಈ ಸಂಕಲನದ ಕವಿತೆಗಳ ಕೆಲ ಸಾಲುಗಳನ್ನು ಓದಿ ನೋಡಿ.


'ಕಲ್ಲೊಳಗೆ ಹುಟ್ಟುವ ಸಸಿಗೆ ವಿಶ್ವಾಸ' (ಬಾ ಯುಗಾದಿ ಮತ್ತೆ)

 

'ಚಟ್ಟಕೆ ದಾರಿ ಮಾಡಿದವರು, ಆದರೂ ಇವರು ನಮ್ಮವರು' (...ವರು)


'ಬೆಳಕ ಕಂಡು ಬೆಂಕಿಯೆಂದರೆ  ಕತ್ತಲೆನು ಮಾಡಿತು' (ದಾರಿ ದೀಪ)


'ಸಾಧನೆಗೆ ಎಲ್ಲೇ ಮೀರುವ ಹಸಿವು'   (ಹಸಿವು)


ವರದೇಂದ್ರ ಅವರ ಸಾಹಿತ್ಯ ಸೇವೆ ಹೀಗೆ ಮುಂದುವರೆಯಲಿ, ಅವರ ಕವಿತೆಗಳು ಓದುಗರ ಮನಗಳ ಸಂಗಾತಿಯಾಗಲಿ ಎಂದು ಹಾರೈಸುವೆ.

(Author Contact: Varadendra, 9945253030)



Tuesday, March 15, 2022

ಮುಖವಾಡ ಕಳಚುವವರೆಗೆ ಎಲ್ಲರೂ ಒಳ್ಳೆಯವರೇ

ಭಗವಾನ್ ಓಶೋ ಅವರ ಪ್ರವಚನಗಳನ್ನು ಕೇಳಿದಾಗ, ಅವರ ಪುಸ್ತಕಗಳನ್ನು ಓದಿದಾಗ ನನಗೆ ಈತ ಮಹಾ ಜ್ಞಾನಿ ಎನ್ನುವುದರಲ್ಲಿ ಸಂದೇಹವೇ ಉಳಿದಿರಲಿಲ್ಲ. ಆಧ್ಯಾತ್ಮದ ಅರ್ಥವನ್ನು, ಉದ್ದೇಶವನ್ನು ಈತನಷ್ಟು ಸರಳವಾಗಿ, ಸ್ಪಷ್ಟವಾಗಿ ಹೇಳಬಲ್ಲ ಇನ್ನೊಬ್ಬರನ್ನು ನಾನು ನೋಡಿಲ್ಲ. ಆ ವಿಷಯದಲ್ಲಿ ಈತ ಒಬ್ಬ ಮಹಾ ಗುರು. ಆದರೆ ಹಲವು ವರುಶಗಳವರೆಗೆ ಈತನ ಸೆಕ್ರೆಟರಿ ಆಗಿ ಕೆಲಸ ಮಾಡಿದ ಶೀಲಾ ಎನ್ನುವವರು ಬರೆದ 'Don't kill him' ಎನ್ನುವ ಪುಸ್ತಕ ಓದಿ ನೋಡಿ. ಓಶೋ ಎಷ್ಟು ಲಂಪಟನಾಗಿದ್ದ, ಶ್ರೀಮಂತರನ್ನು ಹೇಗೆ ಸುಲಿಗೆ ಮಾಡಿ ಐಷಾರಾಮಿ ಕಾರುಗಳನ್ನು ಖರೀದಿಸುತ್ತಿದ್ದ. ತನ್ನ ಆಶ್ರಮದ ಕಾರುಬಾರುಗಳನ್ನು ಹೇಗೆ ಕುತಂತ್ರಗಳಿಂದ ನಿಭಾಯಿಸುತ್ತಿದ್ದ ಎನ್ನುವ ವಿಷಯಗಳು ಮನದಟ್ಟಾಗುತ್ತವೆ. ಆಧ್ಯಾತ್ಮ ಭೋದಿಸಿದ ಮಹಾ ಗುರುವೇ ವೈಯಕ್ತಿಕ ಜೀವನದಲ್ಲಿ ತೀರಾ ಸಾಧಾರಣ ವ್ಯಕ್ತಿಯ ಹಾಗೆ, ಎಲ್ಲ ತರಹದ ಮನೋವಿಕಾರಗಳೊಂದಿಗೆ ಜೀವಿಸುತ್ತಿದ್ದ ಎನ್ನುವ ವಿಷಯ ಅನುಭವಕ್ಕೆ ಬರುತ್ತದೆ.

 

ಓಶೋ ವಿಷಯವೇ ಹೀಗಾದರೆ ಇನ್ನು ಲೌಕಿಕದಲ್ಲಿ ಜೀವನ ಮಾಡುವವರ ಪಾಡೇನು? ನಮ್ಮ ಸುತ್ತ ಮುತ್ತಲಿನ ಎಷ್ಟೋ ಜನರನ್ನು ನಾವು ದೇವರ ಸಮಾನ ಎಂದುಕೊಂಡಿರುತ್ತೇವೆ. ಅಷ್ಟಲ್ಲದಿದ್ದರೂ ಅವರು ಒಳ್ಳೆಯ ಜನ ಎಂದು ನಂಬಿರುತ್ತೇವೆ. ಅವರು ಕೂಡ ನಮ್ಮನ್ನು ಹಾಗೆಯೆ ನಂಬಿಸುವ ಪ್ರಯತ್ನ ಮಾಡಿರುತ್ತಾರೆ. ಸಮಯ, ಸಂದರ್ಭ ಬರುವವರೆಗೂ ಆ ಭ್ರಮೆ ಹಾಗೆಯೆ ಉಳಿದುಕೊಂಡುಬಿಡುತ್ತದೆ. ಆದರೆ ವಿಧಿ ಇರುವುದನ್ನು ಹಾಗೆಯೆ ಇರಲು ಎಲ್ಲಿ ಬಿಡುತ್ತದೆ? ಅಂದುಕೊಳ್ಳದ ವೇಳೆಯಲ್ಲಿ, ಪರಿಸ್ಥಿತಿ ಹಠಾತ್ತನೆ ಬದಲಾಗುತ್ತದೆ. ಆಗ ದೇವರಂತಹ ಮನುಷ್ಯರ ಒಳ್ಳೆಯತನದ ಮುಖವಾಡ ಕಳಚಿ ಬೀಳುತ್ತದೆ. ಅದುವರೆಗೆ ನಾವು ಅಂದುಕೊಂಡಿದ್ದು ಶುದ್ಧ ಸುಳ್ಳು ಎನ್ನುವ ವಿಷಯ ನಮಗೆ ಮನದಟ್ಟಾಗುತ್ತದೆ. ಅಷ್ಟೇ ಅಲ್ಲ, ಅದುವರೆಗೂ ಅವರು ನಮ್ಮನ್ನು ಯಾಮಾರಿಸಿದ್ದು ಮುಖಕ್ಕೆ ರಾಚಿಬಿಡುತ್ತದೆ.

 

'ಸಿಕ್ಕಿ ಬಿದ್ದರೆ ಮಾತ್ರ ಕಳ್ಳ' ಎನ್ನುವುದು ಹಳೆಯ ಗಾದೆ. ಅದಕ್ಕೆ ತಕ್ಕಂತೆ ಸಾಕಷ್ಟು ಜನರದು ಮೋಸದ ಜೀವನ. ತಾಯಿಯ ಪಾತ್ರ ಬಿಟ್ಟರೆ ಉಳಿದೆಲ್ಲ ಸಂಬಂಧಗಳು ಒಂದಲ್ಲ ಒಂದು ರೀತಿಯ ವ್ಯಾಪಾರವೇ. ಆಸ್ತಿಯ ಜಗಳಕ್ಕೆ ಬಿದ್ದ ಅಣ್ಣ-ತಮ್ಮರನ್ನು ನೋಡಿ. ಅದಕ್ಕೂ ಮುಂಚೆ ಅವರು ಅಣ್ಣ-ತಮ್ಮರ ತರಹವೇ ಇದ್ದರಲ್ಲ. ಆಸ್ತಿ ಜಗಳ ಬಂದಾಗ ಆ ಪ್ರೀತಿ ಎಲ್ಲಿಗೆ ಹೋಯಿತು? ರಾತ್ರಿ ಕುಡಿದು ಬಂದು ಹೆಂಡತಿಯನ್ನು ಪೀಡಿಸುವ ಗಂಡ, ಹಗಲಿನಲ್ಲಿ ತನ್ನ ಹೆಂಡತಿಯ ಜೊತೆಗೆ ದೇವಸ್ಥಾನಕ್ಕೆ ಹೋದಾಗ ಆದರ್ಶ ಪತಿಯ ವೇಷ ಹಾಕಿರುವುದಿಲ್ಲವೇ? ಅನೈತಿಕ ಸಂಬಂಧಗಳನ್ನು ಇಟ್ಟುಕೊಂಡ ಪತಿವ್ರತೆಯರು ಸಿಕ್ಕಿ ಬೀಳುವವರೆಗೆ ಮಾತ್ರ ಗಂಡನಿಗೆ ನಿಷ್ಠೆಯುಳ್ಳವರು. ಗುಟ್ಟು ಹೊರ ಬಿದ್ದ ಮೇಲೆ ಅವರು ಗಂಡನ ಮೇಲೆ ನೂರೆಂಟು ಅಪವಾದಗಳನ್ನು ಹೊರಿಸದೆ ಬಿಡುವುದಿಲ್ಲ. ಪ್ರಾಣ ಬೇಕಾದರೂ ಕೊಡ್ತೀನಿ ಅನ್ನುವ ಸ್ನೇಹಿತನನ್ನು ಸಾಲ ತೆಗೆದುಕೊಳ್ಳುವಾಗ ಶೂರಿಟಿ ಹಾಕಲು ಕರೆದು ನೋಡಿ. ಅವರು ನಿಜ ಸ್ನೇಹಿತರು ಹೌದೋ ಅಲ್ಲವೋ ತಿಳಿದೇ ಬಿಡುತ್ತದೆ. ಯಾವುದಾದರು ಹಗರಣಗಳಲ್ಲಿ ಸಿಕ್ಕಿ ಹಾಕಿಕೊಳ್ಳುವವರೆಗೆ, ರಾಜಕಾರಣಿಗಳು ಪ್ರಾಮಾಣಿಕರೋ, ಅಲ್ಲವೋ ತಿಳಿಯುವುದಿಲ್ಲ. ಅಲ್ಲಿಯವರೆಗೆ ಅವರು ಲೋಕ ಕಲ್ಯಾಣದ ಭಾಷಣಗಳನ್ನು ಮಾಡುತ್ತಲೇ ಇರುತ್ತಾರೆ.

 

ಒಳ್ಳೆಯವರು ಈ ಲೋಕದಲ್ಲಿ ಇಲ್ಲ ಎಂದೇನಿಲ್ಲ. ಆದರೆ ಅವರ ವೇಷ ಹಾಕಿ ಮೋಸ, ಸುಲಿಗೆ ಮಾಡುವ ಜನರೇ ಅಧಿಕ. ಎಲ್ಲರನ್ನು ಒಳ್ಳೆಯವರೇ ಎಂದು ತಿಳಿದುಕೊಳ್ಳುತ್ತಿದ್ದ ನನ್ನ ಮುಗ್ಧತೆಗೆ ಸರಿಯಾದ ಪಾಠಗಳನ್ನು ಹಲವಾರು ಜನ ಕಲಿಸಿದ್ದಾರೆ. ಅಳೆದು, ತೂಗಿ, ಪರೀಕ್ಷಿಸಿ ನೋಡುವವರೆಗೆ ಯಾರನ್ನೂ ಒಳ್ಳೆಯವರು ಎಂದು ನಿರ್ಣಯಿಸಬಾರದು ಎಂದು ತಿಳಿದುಕೊಳ್ಳುವಷ್ಟರಲ್ಲಿ ಹಲವಾರು ಬಾರಿ ಮೂರ್ಖನಾಗಿ ಹೋಗಿದ್ದೇನೆ. ಮನುಷ್ಯ ಮನುಷ್ಯನನ್ನು ನಂಬದೆ ಬದುಕಲು ಸಾಧ್ಯವೇ ಎಂದು ದಯವಿಟ್ಟು ಕೇಳಬೇಡಿ. ಅದು ರಾತ್ರಿ ಕಂಡ ಭಾವಿಗೆ ಹಗಲು ಬಿದ್ದ ಹಾಗೆ. ಸಂಪೂರ್ಣ ನಂಬಿಕೆ ಇಟ್ಟಲ್ಲಿ ಮೋಸ ಹೋಗುವುದು ಸುಲಭ. ಆದರೆ ಜಾಗರೂಕತೆ ಇದ್ದಲ್ಲಿ ಎಡವುವ ಸಾಧ್ಯತೆಯೂ ಕಡಿಮೆ ಆಗುತ್ತದೆ. ಆ ಎಚ್ಚರಿಕೆ ನಮ್ಮಲ್ಲಿ ಇರಬೇಕಷ್ಟೆ. ಏಕೆಂದರೆ ನಮ್ಮ ಸಮಾಜದ ಸಾಕಷ್ಟು ಜನ ಮುಖವಾಡ ಕಳಚುವವರೆಗೆ ಮಾತ್ರ ಒಳ್ಳೆಯವರು. ಅವರಿಗೆ ತಮ್ಮ ಕೆಟ್ಟತನ ತೋರಿಸುವ ಸಂದರ್ಭ ಬಂದಿರಲಿಲ್ಲ ಅಷ್ಟೇ. ಮುಖವಾಡ ಕಳಚಿದ ಮೇಲೆ ಕಾಣುವುದೇ ಅವರ ನಿಜವಾದ ಮುಖ. ಅಲ್ಲಿಯವರೆಗೆ ಅವರದು ಆದರ್ಶ ವ್ಯಕ್ತಿತ್ವಗಳ ಅಭಿನಯ ಮಾತ್ರ.

Saturday, March 12, 2022

ಕಥೆ: ವಜ್ರದ ಹಾರ

ಲಕ್ಷ್ಮಿ ರೂಪ-ಲಾವಣ್ಯಗಳಲ್ಲಿ ಯಾರಿಗೂ ಕಡಿಮೆ ಇರಲಿಲ್ಲ. ಆದರೆ ಬರೀ ಆಕರ್ಷಕವಾಗಿದ್ದರೆ ಏನು ಉಪಯೋಗ, ಅವಳ ಹೆಸರಿನಲ್ಲಿದ್ದ ಲಕ್ಷ್ಮಿ ಅವಳ ಕುಟುಂಬಕ್ಕೆ ಒಲಿದಿರಲಿಲ್ಲ. ಅವಳ ಮದುವೆ ಒಬ್ಬ ಸಾಮಾನ್ಯ ದರ್ಜೆಯ, ಗುಮಾಸ್ತೆ ಕೆಲಸದಲ್ಲಿದ್ದ ಅನಂತನೊಂದಿಗೆ ನಡೆದು ಹೋಯಿತು. ಲಕ್ಷ್ಮಿಯ ಅಭಿರುಚಿಗಳು ತುಂಬಾ ಸರಳ ಎನ್ನುವಂತೆ ಇದ್ದವು ಏಕೆಂದರೆ ಅವಳಿಗೆ ದುಬಾರಿ ಬೆಲೆಯ ವಸ್ತುಗಳನ್ನು ಖರೀದಿಸುವ ತಾಕತ್ತು ಎಲ್ಲಿತ್ತು? ಅವಳಿಗೆ ತನಗೆ ಸರಿ ಸಮ ಅಲ್ಲದ ಬಡವನಾದ ಗಂಡ ಸಿಕ್ಕ ಕೊರಗು ಬೇಕಾದಷ್ಟಿತ್ತು. ಆದರೆ ಐಷಾರಾಮಿ ಜೀವನದ ಆಸೆ ಬಿಟ್ಟು ಹೋಗಲೊಲ್ಲದು. ಅವಳಿಗೆ ತನ್ನ ಮನೆಯ ಬಣ್ಣ ಕಾಣದ ಗೋಡೆಗಳು, ಸವಕಲಾದ ಖುರ್ಚಿಗಳು, ಸಂಪೂರ್ಣ ಮಾಸಿ ಹೋದ ಕಿಟಕಿಯ ಪರದೆಗಳು ನೋಡಿದಾಗಲೆಲ್ಲ ಅವಳಲ್ಲಿ ಜಿಗುಪ್ಸೆ ಹುಟ್ಟಿಸುತ್ತಿದ್ದವು.  ಅವುಗಳ ಬದಲು ವಿಶಾಲವಾದ ಮನೆ, ಅಂದದ ಪೀಠೋಪಕರಣಗಳು, ಊಟಕ್ಕೆ ವಿವಿಧ ಭಗೆಯ ಭಕ್ಷ್ಯಗಳು ಇದ್ದರೆ ತನ್ನನ್ನು ಭೇಟಿಯಾಗ ಬಂದ ಸ್ನೇಹಿತರು ತನ್ನ ಅದೃಷ್ಟವನ್ನು ಹಾಡಿ ಹೊಗಳುತ್ತಿದ್ದರು ಎಂದು ಮನಸ್ಸಿನಲ್ಲೇ ಅಂದುಕೊಳ್ಳುವಳು. ಆದರೆ ವಾಸ್ತವದಲ್ಲಿ ಅವಳಿಗೆ ಉಡಲು ಒಳ್ಳೆಯ ಬಟ್ಟೆಗಳಿರಲಿಲ್ಲ. ಇನ್ನು ಬಂಗಾರದ ಆಭರಣಗಳು ದೂರದ ಮಾತೇ ಸರಿ.


ಒಂದು ಸಂಜೆ ಅವಳ ಗಂಡ ಮನೆಗೆ ಬಂದು ಅವಳ ಕೈಯಲ್ಲಿ ಒಂದು ದಪ್ಪನೆಯ ಕವರ್ ಕೊಟ್ಟು, 'ನೋಡು, ಇದು ನಿನಗಾಗಿ' ಎಂದು ಹೇಳಿದ. ಅವಳು ಆ ಕವರ್ ತೆಗೆದು ನೋಡಿದರೆ ಅದು ಆ ಊರಿನಲ್ಲಿ ನಡೆಯುತ್ತಿರುವ ಶ್ರೀಮಂತರ ಪಾರ್ಟಿಯ ಆಮಂತ್ರಣ ಪಾತ್ರ. ಅವಳ ಗಂಡ ಊಹಿಸಿದ ಹಾಗೆ ಅದು ಲಕ್ಷ್ಮಿಗೆ ಸಂತೋಷ ತರಲಿಲ್ಲ. ಬದಲಿಗೆ ಅದನ್ನು ಬಿಸಾಕಿ 'ಇದನ್ನು ತೆಗೆದುಕೊಂಡು ನಾನೇನು ಮಾಡಬೇಕು?' ಎಂದು ಗಂಡನನ್ನು ಪ್ರಶ್ನಿಸಿದಳು. ಅವಳ ಗಂಡ ಅದಕ್ಕೆ ಉತ್ತರವಾಗಿ 'ಇದು ನಿನಗೆ ಸಂತೋಷ ತರುತ್ತೆ ಎಂದು ಭಾವಿಸಿದ್ದೆ. ಅಲ್ಲಿ ಊರಿನ ದೊಡ್ಡ ಜನರೆಲ್ಲಾ ಸೇರಿರುತ್ತಾರೆ. ಇದರ ಆಮಂತ್ರಣ ಸಿಗುವುದು ಕೆಲವೇ ಜನರಿಗೆ. ಅದರಲ್ಲೂ ಗುಮಾಸ್ತರಿಗೆ ಇದರ ಆಮಂತ್ರಣ ಸಿಗುವುದು ಕಷ್ಟ'. 


'ಅಂತಹ ದೊಡ್ಡ ಪಾರ್ಟಿಗೆ ನಾನೇನು ಉಟ್ಟುಕೊಂಡು ಹೋಗಬೇಕು?' ಎಂದು ಕಣ್ಣಲ್ಲಿ ಬೆಂಕಿ ಸೂಸುತ್ತಾ ಗಂಡನನ್ನು ಪ್ರಶ್ನಿಸಿದಳು ಲಕ್ಷ್ಮಿ. 


ಅವನ ಗಂಡ ಇದರ ಬಗ್ಗೆ ವಿಚಾರ ಮಾಡಿರಲಿಲ್ಲವಾದ್ದರಿಂದ ಸ್ವಲ್ಪ ತಡವರಿಸಿದ. 'ದೇವಸ್ಥಾನಕ್ಕೆ  ಹೋದಾಗ ಉಟ್ಟುಕೊಂಡು ಹೋಗುತ್ತೀಯಲ್ಲ, ಅದು ನಿನಗೆ ಚೆನ್ನಾಗಿ ಕಾಣುತ್ತೆ' ಎಂದು ತನ್ನ ಅಭಿಪ್ರಾಯ ಹೇಳಿದ. ಅವನ ಮಾತು ಮುಗಿಯುವ ಮುಂಚೆಯೇ ತನ್ನ ಪತ್ನಿಯ ಎರಡು ಕಣ್ಣಲ್ಲಿ ದೊಡ್ಡ ದೊಡ್ಡ ಹನಿಗಳು ಉದುರುವುದನ್ನು ನೋಡಿ ಗಾಬರಿಯಾಗಿ, 'ಏಕೆ? ಏನಾಯಿತು?' ಎಂದು ಕೇಳಿದ.


ಅವಳು ತನ್ನ ಕೆನ್ನೆಯ ಮೇಲಿನ ಕಣ್ಣೀರು ಒರೆಸಿಕೊಳ್ಳುತ್ತ ಹೇಳಿದಳು 'ಇಂತಹ ಪಾರ್ಟಿಗೆ ಒಪ್ಪುವ ಸೀರೆ ನನ್ನಲ್ಲಿ ಇಲ್ಲ. ನೀವು ಈ ಆಮಂತ್ರಣ ಪತ್ರಿಕೆ ನಿಮ್ಮ ಸ್ನೇಹಿತರಿಗೆ ಯಾರಿಗಾದರೂ ಕೊಟ್ಟು ಬಿಡಿ. ಅವರ ಹೆಂಡತಿಯರಿಗೆ ಉಡಲು ಒಳ್ಳೆಯ ಬಟ್ಟೆಗಳಿದ್ದರೆ ಅವರು ಪಾರ್ಟಿಗೆ ಹೋಗಿ ಸಂತೋಷ ಪಡುತ್ತಾರೆ' ಎಂದು ಹೇಳಿದಳು.

 

ಅನಂತನ ಹೃದಯ ಒಡೆದು ಹೋದರೂ, ಹೆಂಡತಿಯನ್ನು ಒಪ್ಪಿಸುವ ಪ್ರಯತ್ನಕ್ಕಾಗಿ 'ಅಂತಹ ಸೀರೆ ಎಷ್ಟು ಬೆಲೆ ಬಾಳಬಹುದು?' ಎಂದು ಕೇಳಿದ.


ಸ್ವಲ್ಪ ಹೊತ್ತು ವಿಚಾರ ಮಾಡಿದ ಲಕ್ಷ್ಮಿ ಹೇಳಿದಳು 'ನನಗೆ ಬೆಲೆ ಸರಿಯಾಗಿ ಗೊತ್ತಿಲ್ಲ. ಆದರೆ ಕನಿಷ್ಠ ನಾಲ್ಕು ಸಾವಿರ ಆದರೂ ಆಗುತ್ತೆ'


ಗುಮಾಸ್ತೆಯಾಗಿ ಲೆಕ್ಕಾಚಾರದಲ್ಲಿ ಪಳಗಿದ್ದ ಅನಂತ ಅವಸರಕ್ಕೆ ಮನೆ ಖರ್ಚಿಗೆ ಇರಲಿ ಎಂದು ಎತ್ತಿಟ್ಟಿದ್ದ ನಾಲ್ಕು ಸಾವಿರ ರೂಪಾಯಿಗಳನ್ನು ಇದಕ್ಕೆ ಬಳಸಿದರಾಯಿತು ಎಂದು ತೀರ್ಮಾನಿಸಿದ. 


ಪಾರ್ಟಿಯ ದಿನ ಹತ್ತಿರ ಬಂದಿತು. ಲಕ್ಷ್ಮಿಯ ಭರ್ಜರಿ ಸೀರೆಯೂ ಅಷ್ಟರಲ್ಲಿ ಮನೆಗೆ ಬಂದಿತ್ತು. ಆದರೂ ಅವಳ ಮುಖದಲ್ಲಿ ಆತಂಕ. ಅದನ್ನು ಗಮನಿಸಿ ಅವಳ ಗಂಡ ಕೇಳಿಯೇ ಬಿಟ್ಟ 'ನಿನಗೆ ಇನ್ನೂ ಸಮಾಧಾನ ಇಲ್ಲವೇನು?' ಅದಕ್ಕೆ ಅವಳು ಉತ್ತರಿಸಿದಳು 'ನನಗೆ ಧರಿಸಲು ಯಾವ ಒಡವೆಯೂ ಇಲ್ಲ. ಬರೀ ಕೊರಳಲ್ಲಿ ನಾನು ಪಾರ್ಟಿಗೆ ಹೇಗೆ ಬರಲಿ?'


ಇಪ್ಪತ್ತು ರೂಪಾಯಿ ಖರ್ಚು ಮಾಡಿ ಹೂವು ಮುಡಿದುಕೊಂಡರೆ ಅವಳು ಆಕರ್ಷಕವಾಗಿ ಕಾಣುತ್ತಾಳೆ ಎನ್ನುವ ಗಂಡನ ಅಭಿಪ್ರಾಯವನ್ನು ಲಕ್ಷ್ಮಿ ಸಾರಾ ಸಗಟಾಗಿ ತಿರಸ್ಕರಿಸಿದಳು. 'ಶ್ರೀಮಂತರ ನಡುವೆ ನೀವು ನನ್ನ ಮರ್ಯಾದೆ ತೆಗೆದಿಡುತ್ತಿರಿ' ಎಂದು ಕ್ಯಾತೆ ತೆಗೆದಳು. ಕೊನೆಗೆ ಅವಳ ಶ್ರೀಮಂತ ಸ್ನೇಹಿತೆ ಕಮಾಲಾಳಿಂದ ಒಂದು ಒಡವೆಯನ್ನು ಒಂದು ದಿನದ ಮಟ್ಟಿಗೆ ಕೇಳಿ ತಂದರಾಯಿತು ಎನ್ನುವ ಅಭಿಪ್ರಾಯಕ್ಕೆ ಬಂದರು.


ಅಪರೂಪಕ್ಕೆ ಮನೆಗೆ ಬಂದ ಸ್ನೇಹಿತೆ ಲಕ್ಷ್ಮಿಯನ್ನು ಆದರದಿಂದ ಸ್ವಾಗತಿಸಿದಳು ಕಮಲಾ. ನಾಲ್ಕಾರು ಆಭರಣಗಳನ್ನು ಅವಳ ಮುಂದಿರಿಸಿ ಅವಳಿಗೆ ಒಪ್ಪಿಗೆಯಾದದ್ದು ತೆಗೆದುಕೊಳ್ಳುವಂತೆ ಸೂಚಿಸಿದಳು. ಮುತ್ತಿನ ಸರಗಳು, ಬಂಗಾರದ ನೆಕ್ಲೆಸ್, ಸೂಕ್ಷ್ಮ ಕುಸುರಿ ಕೆಲಸದ ಹಾರಗಳು ತನ್ನ ಕುತ್ತಿಗೆಗೆ ಧರಿಸಿ, ಕನ್ನಡಿಯಲ್ಲಿ ನೋಡಿಕೊಳ್ಳುತ್ತ ಲಕ್ಷ್ಮಿ 'ಬೇರೆ ಯಾವುದಾದರೂ ಇದೆಯೇ?' ಎಂದು ಸ್ನೇಹಿತೆಗೆ ಕೇಳಿದಳು. 'ನೀನೆ ನೋಡಿಕೋ' ಎಂದು ಆಭರಣ ಪೆಟ್ಟಿಗೆ ಅವಳ ಮುಂದಿರಿಸಿ ಹೇಳಿದಳು ಕಮಲಾ. ಅದರಲ್ಲಿ ನೋಡುತ್ತಿರುವಾಗ ಕಪ್ಪು ಬಣ್ಣದ ಸ್ಯಾಟಿನ್ ಬಟ್ಟೆಯ ಪೆಟ್ಟಿಗೆಯಲ್ಲಿದ್ದ ವಜ್ರದ ನೆಕ್ಲೆಸ್ ಲಕ್ಷ್ಮಿಗೆ ಇಷ್ಟವಾಗಿ ಹೋಯಿತು. ಅದನ್ನು ಧರಿಸಿ ಒಮ್ಮೆ ಕನ್ನಡಿಯಲ್ಲಿ ನೋಡಿಕೊಂಡಾಗ ಲಕ್ಷ್ಮಿಗೆ ಹರುಷದಿಂದ ಭಾವೋತ್ಕರ್ಷ ಉಂಟಾಯಿತು. ತನ್ನ ಸ್ನೇಹಿತೆಗೆ ಕೇಳಿದಳು 'ಇದೊಂದನ್ನು ಕೊಡು. ಸಾಕು'. ಅವಳ ಸ್ನೇಹಿತೆ ಉತ್ತರಿಸಿದಳು 'ಹಾಗೆಯೇ ಆಗಲಿ'.


ಪಾರ್ಟಿಯ ದಿನ ಬಂದೆ ಬಿಟ್ಟಿತು. ಹಾಗೆಯೇ ಲಕ್ಷ್ಮಿಯ ಪ್ರಯತ್ನಗಳು ಯಶಸ್ಸು ತಂದು ಕೊಟ್ಟವು. ಪಾರ್ಟಿಯಲ್ಲಿ ಶ್ರೀಮಂತ ಹೆಂಗಸರ ನಡುವೆ, ಲಕ್ಷ್ಮಿಯೇ ದೊಡ್ಡ ಆಕರ್ಷಣೆ ಆಗಿಬಿಟ್ಟಳು. ಅವಳ ಸಹಜ ಸೌಂದರ್ಯಕ್ಕೆ ಅವಳ ಉಟ್ಟ ಸೀರೆ, ಧರಿಸಿದ ವಜ್ರದ ನೆಕ್ಲೆಸ್ ಇನ್ನೂ ಹೆಚ್ಚಿನ ಮೆರಗು ತಂದು ಕೊಟ್ಟವು.  ಪಾರ್ಟಿಗೆ ಬಂದ ಹೆಣ್ಣು ಮಕ್ಕಳು ಅವಳ ಹೆಸರೇನು ಎಂದು ಕೇಳಿ ತಿಳಿದುಕೊಂಡರು. ಗಂಡಸರು ಅವಳನ್ನು ದಿಟ್ಟಿಸಿ ನೋಡಿದರು. ದೊಡ್ಡ ದೊಡ್ಡ ಶ್ರೀಮಂತರು ಅವಳನ್ನು ಮುಗುಳ್ನಗೆಯೊಂದಿಗೆ ಮಾತನಾಡಿಸಿದರು. 


ಪಾರ್ಟಿ ಮುಗಿದ ಮೇಲೆ ಒಂದು ಆಟೋ ಹಿಡಿದು ಮನೆಗೆ ಮರಳಿದರು ಅನಂತ ಮತ್ತು ಲಕ್ಷ್ಮಿ. ಮನೆಯಲ್ಲಿ ಬಟ್ಟೆ ಬದಲಾಯಿಸುವಾಗ ತನ್ನ ಕುತ್ತಿಗೆ ಬರಿದಾಗಿದ್ದು ಗಮನಿಸಿಕೊಂಡಳು ಲಕ್ಷ್ಮಿ. ಪಾರ್ಟಿಯಿಂದ ಹೊರಡುವಾಗ ಕುತ್ತಿಗೆ ಸವರಿಕೊಂಡಾಗ ಅಲ್ಲಿಯೇ ಇತ್ತು ನೆಕ್ಲೆಸ್. ಆದರೆ ಮನೆ ತಲುಪಿದಾಗ ಇರಲಿಲ್ಲ. ಅವಳ ಗಂಡ ಅದು ದಾರಿಯಲ್ಲಿ ಎಲ್ಲಿಯಾದರೂ ಬಿದ್ದಿರಬಹುದೇನೋ ಎಂದು ನೋಡಿ ಬಂದ. ಆಟೋದವನನ್ನು ಹುಡುಕಿ ವಿಚಾರಿಸಿದ. ಯಾವುದೂ ಉಪಯೋಗವಾಗಲಿಲ್ಲ. ವಜ್ರದ ನೆಕ್ಲೆಸ್ ಕಳೆದು ಹೋಗಿತ್ತು.


ವಜ್ರದ ನೆಕ್ಲೆಸ್ ಇಟ್ಟ ಬಾಕ್ಸ್ ನಲ್ಲಿ ಅದನ್ನು ತಯಾರಿಸಿದ ಆಭರಣ ಮಳಿಗೆಯ ವಿಳಾಸ ಇತ್ತು. ಅಲ್ಲಿ ಹೋಗಿ ಕಳೆದುಕೊಂಡಿದ್ದ ವಜ್ರದ ನೆಕ್ಲೆಸ್ ತರಹದ್ದು ಎಷ್ಟು ಬೆಲೆಯಾಗಬಹುದು ಎಂದು ವಿಚಾರಿಸಿದರು. ಸುಮಾರು ನಾಲ್ಕೂವರೆ ಲಕ್ಷ ಬೆಲೆಯ ನೆಕ್ಲೆಸ್ ಅದಾಗಿತ್ತು. ಆ ಹಣವನ್ನು ಅನಂತ ಎಲ್ಲಿಂದಲೋ ಸಾಲ ತಂದ. ಅದನ್ನು ಖರೀದಿಸಿ ಆ ನೆಕ್ಲೆಸ್ ಅನ್ನು ತನ್ನ ಸ್ನೇಹಿತೆ ಕಮಲಾಳ ಮನೆಗೆ ಹೋಗಿ ಹಿಂತಿರುಗಿಸಿದಳು ಲಕ್ಷ್ಮಿ. ಅದರ ಬಾಕ್ಸ್ ನ್ನು ತೆರೆದು ಕೂಡ ನೋಡಲಿಲ್ಲ ಕಮಲಾ. ಅದನ್ನು ಯಾವುದೊ ಒಂದು ಸಲ ಹಾಕಿಕೊಂಡಿದ್ದು, ಮತ್ತೆ ಅದನ್ನು ಧರಿಸಲು ತನಗೆ ಇಷ್ಟ ಇಲ್ಲ ಎಂದು ಕೂಡ ಹೇಳಿದಳು.


ಮಾಡಿದ ಸಾಲ ಅನಂತ ಮತ್ತು ಲಕ್ಷ್ಮಿ ಕುಟುಂಬಕ್ಕೆ ಹೊರೆಯಾಗಿ ಬಿಟ್ಟಿತು. ಬಡ್ಡಿ ತೀರಿಸಲು ಹಣ ತೆತ್ತು, ಅವರ ಕುಟುಂಬ ಬಡತನದಿಂದ ಕಡು ಬಡತನಕ್ಕೆ ಇಳಿದುಬಿಟ್ಟಿತು. ಮನೆ ಕೆಲಸದವರನ್ನು ಬಿಡಿಸಿ ಮನೆ ಕೆಲಸವನ್ನು ತಾನೇ ಮಾಡಿಕೊಳ್ಳತೊಡಗಿದಳು ಲಕ್ಷ್ಮಿ. ಅನಂತ ಸಾಯಂಕಾಲ ಕೂಡ ಬೇರೆ ಕೆಲಸಕ್ಕೆ ಹೋಗಲಾರಂಭಿಸಿದ್ದ. ಸಾಲ ಮುಟ್ಟಲು ಕೆಲ ವರುಷಗಳೇ ಹಿಡಿದವು. ಆದರೆ ಅಷ್ಟರಲ್ಲಿ ಲಕ್ಷ್ಮಿಯ ಮುಖದಲ್ಲಿ ಹೊಳಪು ಎಲ್ಲ ಕಳೆದು ಹೋಗಿ, ಮುಖ ಸುಕ್ಕು ಗಟ್ಟಿತ್ತು. ಹತ್ತಾರು ವರುಷಗಳು ಹೆಚ್ಚಿಗೆ ವಯಸ್ಸಾಗಿರುವಂತೆ ಅವಳು ಕಾಣುತ್ತಿದ್ದಳು.


ಒಂದು ಸಂಜೆ ಮಾರುಕಟ್ಟೆಯಲ್ಲಿ ಕಮಲಾಳನ್ನು ನೋಡಿದ ಲಕ್ಸ್ಮಿ ಅವಳನ್ನು ಮಾತನಾಡಿಸಿದಳು. ಗುರುತು ಸಿಗದಂತೆ ಆಗಿದ್ದ ಲಕ್ಷ್ಮಿಯನ್ನು ನೋಡಿದ ಕಮಲಾ ಏನು ತೊಂದರೆ ಎಂದು ಕೇಳಿದಳು. 'ಅದಕ್ಕೆಲ್ಲ ನಿನ್ನ ವಜ್ರದ ನೆಕ್ಲೆಸ್ ಕಾರಣ' ಎಂದು ಹೇಳಿದಳು ಲಕ್ಷ್ಮಿ. ಅದು ತನಗೆ ಅರ್ಥವಾಗಲಿಲ್ಲ ಎನ್ನುವಂತೆ 'ಅದ್ಹೇಗೆ?' ಎಂದು ಪ್ರಶ್ನಿದಳು ಕಮಲಾ. ಅದನ್ನು ಕಳೆದುಕೊಂಡಿದ್ದು ಮತ್ತು ಅದೇ ತರಹದ ಇನ್ನೊಂದು ವಜ್ರದ ನೆಕ್ಲೆಸ್ ತರಲು ಸಾಲ ಮಾಡಿ ಬವಣೆ ಪಟ್ಟಿದ್ದು ಎಲ್ಲವನ್ನು ವಿವರಿಸಿದಳು ಲಕ್ಷ್ಮಿ. 


ಅದನ್ನು ಕೇಳಿ ಮಮ್ಮಲ ಮರುಗಿದ ಕಮಲಾ, ಲಕ್ಷ್ಮಿಯ ಎರಡು ಕೈಗಳನ್ನು ತನ್ನ ಕೈಯಲ್ಲಿ ತೆಗೆದುಕೊಂಡು ಹೇಳಿದಳು 'ನಿನ್ನ ಪರಿಸ್ಥಿತಿ ನೋಡಿ ಸಂಕಟವಾಗುತ್ತದೆ ಲಕ್ಷ್ಮಿ. ನನ್ನ ವಜ್ರದ ನೆಕ್ಲೆಸ್ ಅಸಲಿಯದ್ದಾಗಿರಲಿಲ್ಲ. ಅದಕ್ಕೆ ಎರಡು ಸಾವಿರ ಕೊಟ್ಟಿದ್ದೆ ಅಷ್ಟೇ' 

Thursday, February 24, 2022

ಸರ್ವಾಧಿಕಾರಿಗಳ ಮೊದಲ ಪ್ರೇಮ: ಯುದ್ಧ

ಜಗತ್ತನ್ನೇ ಗೆಲ್ಲ ಹೋರಾಟ ಮಹತ್ವಾಕಾಂಕ್ಷಿಗಳಲ್ಲಿ ಮೂವರು ಪ್ರಮುಖರು: ಅಲೆಕ್ಸಾಂಡರ್, ನೆಪೋಲಿಯನ್ ಮತ್ತು ಹಿಟ್ಲರ್. ಅವರ ಪೀಳಿಗೆ ಇನ್ನು ಮುಗಿದು ಹೋಗಿಲ್ಲ ಎನ್ನುವಂತೆ, ಆ ಸಾಲಿಗೆ ಸೇರಲು ಇಂದಿನ ಕಾಲಮಾನದ ಇಬ್ಬರು ತಯಾರಾಗಿ ನಿಂತಿದ್ದಾರೆ. ಅವರು ರಷ್ಯಾ ದೇಶದ ಪುಟಿನ್ ಮತ್ತು ಚೀನಾದ ಕ್ಸಿ ಜಿಂಪಿಂಗ್. ಅವರೆಲ್ಲರ ವ್ಯಕ್ತಿತ್ವಗಳಲ್ಲಿ ಸಮಾನವಾಗಿ ಕಂಡು ಬರುವ ಅಂಶಗಳು ಕೆಲವಿವೆ. ಮೊದಲಿಗೆ ಸರ್ವಾಧಿಕಾರ, ಅವರನ್ನು ಯಾರೂ ಎದುರು ಹಾಕಿಕೊಳ್ಳುವ ಹಾಗೆ ಇಲ್ಲ. ಅವರುಗಳ ಹಿಂದೆ ಬಲಿಷ್ಠ ಸೈನ್ಯಗಳಿವೆ. ಅವರಿಗೆ ಅವಶ್ಯಕತೆಗೆ ತಕ್ಕಂತೆ ಸ್ನೇಹಿತರು. ಸಮಯ, ಸನ್ನಿವೇಶ ಬದಲಾದರೆ ತಮ್ಮ ಸ್ನೇಹಿತರನ್ನು ಯಾವುದೇ ಮುಲಾಜಿಲ್ಲದೆ ಮುಗಿಸಿ ಹಾಕುತ್ತಾರೆ. ಅವರಿಗೆ ತಮ್ಮ ಸಾಮರ್ಥ್ಯದ ಮೇಲೆ ಅಗಾಧ ನಂಬಿಕೆ. ಸಾಮಾನ್ಯ ಜನ ಎದುರಿಸಲಾಗದ ಅಪಾಯಗಳನ್ನು ಅವರುಗಳು ಸುಲಭವಾಗಿ ನಿಭಾಯಿಸುತ್ತಾರೆ. ಕಾನೂನುಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳುತ್ತಾರೆ. ತಮ್ಮ ದೇಶದ ಜನರನ್ನು ಪ್ರಭಾವದಿಂದಲೋ ಇಲ್ಲವೇ ಬೆದರಿಸಿಯೋ ತಮ್ಮ ಕೆಲಸಗಳಿಗೆ ಸಹಕಾರ ನೀಡುವಂತೆ ಮತ್ತು ಪ್ರತಿಭಟಿಸದಂತೆ ನೋಡಿಕೊಳ್ಳುತ್ತಾರೆ. ಅವರು ತಮ್ಮ ಆಸೆಗಳನ್ನು ಸಾಕಾರಗೊಳಿಸಿಕೊಳ್ಳುವುದರಲ್ಲಿ ಯಶಸ್ಸು ಕಾಣುತ್ತಾರೋ ಇಲ್ಲವೋ ಆದರೆ ಅವರ ಅಂತ್ಯ ಮಾತ್ರ ದಾರುಣವಾಗಿರುತ್ತದೆ.


ಕುದುರೆಯ ಬೆನ್ನೇರಿ, ಸುಮಾರು ಮೂವತ್ತು ಸಾವಿರ ಕಿ.ಮೀ. ದೂರವನ್ನು ತನ್ನ ಸೈನ್ಯದೊಂದಿಗೆ ಕ್ರಮಿಸಿ, ಒಂದರ ನಂತರ ಇನ್ನೊಂದರಂತೆ ಯುದ್ಧಗಳನ್ನು ಅಲೆಕ್ಸಾಂಡರ್ ಗೆಲ್ಲಲ್ಲು ಸಾಧ್ಯವಾಗಿದ್ದು ಅವನ ಮೇಲೆ ವಿಪರೀತ ಅಭಿಮಾನ ಹೊಂದಿದ ಸೈನ್ಯದಿಂದ. ಆದರೆ ಯುದ್ಧ ಬಿಟ್ಟು ಬೇರೇನೂ ಮಾಡಲೊಲ್ಲದ ಅಲೆಕ್ಸಾಂಡರ್ ಕೊನೆಯುಸಿರೆಳೆದಾಗ ಅವನ ಹೆಣ ಅವನ ತಾಯ್ನಾಡು ತಲುಪಲಿಲ್ಲ. ಆಮೇಲೆ ಎಷ್ಟೋ ವರುಶಗಳವರೆಗೆ ಅವನ ದಂಡನಾಯಕರು ಅಲೆಕ್ಸಾಂಡರ್ ನ ಕಿರೀಟವನ್ನು ನ್ಯಾಯಸ್ಥಾನದಲ್ಲಿ ಇಟ್ಟು ತಮ್ಮ ಅಧಿಕಾರ ಮುಂದುವರೆಸಿದರು.


ರಣರಂಗದಲ್ಲಿ ಚಾಣಕ್ಷತೆಯಿಂದ, ಎದುರಾಳಿಗಳಲ್ಲಿ ಗೊಂದಲವೆಬ್ಬಿಸುತ್ತ ಶತ್ರು ಸೈನ್ಯವನ್ನು ಧೂಳಿಪಠ ಮಾಡುತ್ತ ಹಲವಾರು ಯುದ್ಧಗಳನ್ನು ಗೆದ್ದ ನೆಪೋಲಿಯನ್ ಮಾನವ ಜಗತ್ತು ಕಂಡ ಯುದ್ಧ ತಂತ್ರಗಾರಿಕೆಯ ನಿಪುಣ. ಆದರೆ ಅವನ ಅಂತ್ಯವೂ ಹಾಗೆ ಇತ್ತು. ಮಾನವ ಸಂಪರ್ಕ ಇಲ್ಲದೆ ಒಂದು ದ್ವೀಪದಲ್ಲಿ ಬಂದಿಯಾಗಿ ಕೊನೆ ಉಸಿರೆಳೆದ ಆ ನಿಪುಣ.


ಜರ್ಮನಿ ಜನರನ್ನು ತನ್ನ ಮೋಡಿಗೆ ಸಿಲುಕಿಸಿ ಅಧಿಕಾರ ಪಡೆದುಕೊಂಡು, ಎಂತಹ ಯುದ್ಧಗಳಿಗಾದರೂ ಸೈ ಎನ್ನುವಂತಹ ಬಲಿಷ್ಠ ಸೇನೆಯನ್ನು ಮುಂದಿಟ್ಟುಕೊಂಡು ಯುರೋಪ್ ನ ಎಲ್ಲ ರಾಷ್ತ್ರಗಳಿಗೂ ಸಿಂಹ ಸ್ವಪ್ನ ಎನಿಸಿದ ಹಿಟ್ಲರ್, ಸೋತು ಹೋದಾಗ ತಾನೇ ಗುಂಡಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡ.


ಆದರೆ ಯುದ್ಧ ಘೋಷಣೆ ಮಾಡುವ, ಉತ್ಸಾಹದಿಂದ ರಣರಂಗಕ್ಕೆ ಇಳಿಯುವ ವೀರರು ಇಂದಿಗೂ ಇದ್ದಾರೆ. ರಷ್ಯಾ ಮತ್ತು ಚೀನಾ ದೇಶಗಳು ಅತ್ಯಾಧುನಿಕ ಎನಿಸುವ ತಂತ್ರಜ್ಞಾನ ಹೊಂದಿದ ಕ್ಷಿಪಣಿಗಳನ್ನು ಹೊಂದಿದ್ದಾರೆ. ಯಾವುದೇ ಜನ ಸಮುದಾಯವನ್ನು ನಾಶ ಪಡಿಸಬಲ್ಲ ಪರಮಾಣು ಬಾಂಬ್ ಗಳನ್ನೂ ಹೊಂದಿದ್ದಾರೆ. ಎಲ್ಲಕ್ಕೂ ಮಿಗಿಲೆನ್ನುವಂತೆ ಎಂತಹ ಎದುರಾಳಿಗಳನ್ನು ಬೇಕಾದರೂ ನಾಶ ಮಾಡುವ ಉತ್ಸಾಹದ ಮಾತುಗಳನ್ನು ಮತ್ತು ಯುದ್ಧ ಪ್ರಚೋದಿಸುವ ಕಾರ್ಯಗಳನ್ನು ಮಾಡುತ್ತಲೇ ಇರುತ್ತಾರೆ. ರಷ್ಯಾ ದೇಶದ ಪುಟಿನ್ ಮತ್ತು ಚೀನಾದ ಕ್ಸಿ ಜಿಂಪಿಂಗ್  ತಮ್ಮ ದೇಶದಲ್ಲಿ ಸರ್ವಾಧಿಕಾರಿಗಳು. ಆದರೆ ಅವರಿಗೆ ಅಷ್ಟಕ್ಕೇ ತೃಪ್ತಿಯಿಲ್ಲ. ಮೊದಲಿಗೆ ನೆರೆ ದೇಶಗಳನ್ನು, ನಂತರ ಜಗತ್ತನ್ನೇ ಗೆಲ್ಲುವ ಮಹದಾಸೆ ಅವರದು.


"ಧಾಳಿಕೋರನಿಗೆ ಯಾವ ಧರ್ಮ" ಎಂದ ಅಲ್ಲಮಪ್ರಭುಗಳು "ಸಾಸಿವೆ ಸುಖಕ್ಕೆ ಸಾಗರದಷ್ಟು ದುಃಖ ನೋಡಾ" ಎಂದೂ ಕೂಡ ಹೇಳಿದ್ದಾರೆ. ಯಾರೋ ಒಬ್ಬ ಸರ್ವಾಧಿಕಾರಿ ಗೆದ್ದ ದೊಡ್ಡಸ್ತಿಕೆ ತೋರಲು ಸಾವಿರಾರು ಜನ ಪ್ರಾಣ ಕಳೆದುಕೊಳ್ಳಬೇಕು. ಲಕ್ಷಾಂತರ ಜನ ಮನೆ-ಆಸ್ತಿ ಕಳೆದುಕೊಂಡು ಊರು ಬಿಟ್ಟು ಸುರಕ್ಷಿತ ಜಾಗಕ್ಕೆ ತಲುಪಬೇಕು. ಯುದ್ಧ ತರುವ ಸಾವು-ನೋವು ಅಪಾರ. ಆದರೆ ಮನುಷ್ಯನ ಹುಚ್ಚು ಮನಸ್ಸಿನ ಹತ್ತು ಮುಖಗಳಲ್ಲಿ ಯುದ್ಧದ ಅತಿರೇಕವೂ ಒಂದು.


ಮನುಷ್ಯ ನಾಗರಿಕತೆಯೆಡೆಗೆ ಹೆಜ್ಜೆ ಇಟ್ಟರೆ, ಅವನನ್ನು ಹಿಂದಕ್ಕೆ ಎಳೆದು ತರದೇ ಬಿಡುವುದಿಲ್ಲ ಈ ಸರ್ವಾಧಿಕಾರಿಗಳು. ಅವರು ಕೂಡ ಸಮಾಜದ ಪ್ರತೀಕ ಅಲ್ಲವೇ.