Saturday, March 19, 2022

ಕಥೆ: ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ

(ಇದು ರವೀಂದ್ರನಾಥ ಟಾಗೋರ್ ಅವರು ಬರೆದ 'Once there was a king' ಕಥೆಯ ಭಾವಾನುವಾದ)


"ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ"


ನಾವು ಮಕ್ಕಳಾಗಿದ್ದಾಗ ಆ ಕಥೆಯಲ್ಲಿರುವ ರಾಜ ನಿಖರವಾಗಿ ಯಾರು ಎಂದು ತಿಳಿದುಕೊಳ್ಳುವ ಅವಶ್ಯಕತೆ ಇರಲಿಲ್ಲ. ಅವನ ಹೆಸರು ವಿಕ್ರಮಾದಿತ್ಯನೋ ಅಥವಾ ಬೇರೆಯೋ ಆಗಿದ್ದರೆ ಮತ್ತು ಅವನು ಆಳಿದ್ದು ಕಾಶಿಯಲ್ಲೋ ಇಲ್ಲವೇ ಉಜ್ಜಯಿನಿಯಲ್ಲೋ ಆಗಿದ್ದರೂ ನಮಗೆ ಯಾವ ವ್ಯತ್ಯಾಸವೂ ಅನ್ನಿಸುತ್ತಿರಲಿಲ್ಲ. ಏಳು ವರುಷದ ಹುಡುಗನ ಹೃದಯ ಬಡಿತ ಸಂತೋಷದಿಂದ ಏರಲು ಕಥೆ ಶುರುವಾಗಿದ್ದರೆ ಸಾಕಿತ್ತು "ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ ..."


ಆದರೆ ಇಂದಿನ ಕಾಲದ ಕೆಲವು ಓದುಗರಿಗೆ ಅದು ಸಾಕಾಗುವುದಿಲ್ಲ. ಅವರಿಗೆ ವ್ಯಕ್ತಿ ಮತ್ತು ಸ್ಥಳಗಳ ಹೆಸರುಗಳು ಕರಾರುವಕ್ಕಾಗಿ ಇರಬೇಕು. ಇಲ್ಲದಿದ್ದರೆ ಅವರು ಶುರುವಲ್ಲಿಯೇ ಕೇಳಿಬಿಡುತ್ತಾರೆ "ಅದು ಯಾವ ರಾಜ?"


ಹಾಗಾಗಿ ಕಥೆ ಹೇಳುವವರು ಖಚಿತವಾದ ಮಾಹಿತಿಯೊಂದಿಗೆ ಕಥೆ ಹೇಳಲು ಶುರು ಮಾಡುತ್ತಾರೆ "ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ. ಅವನ ಹೆಸರು ಅಜಾತಶತ್ರು"


ಆದರೆ ಆಧುನಿಕ ಕಾಲದ ಓದುಗರಿಗೆ ಇಷ್ಟು ಸಾಕಾಗುವುದಿಲ್ಲ. ಕಣ್ಣು ರೆಪ್ಪೆ ಬಡಿಯುವುದರಲ್ಲೇ ಕೇಳಿ ಬಿಡುತ್ತಾರೆ "ಯಾವ ಅಜಾತಶತ್ರು?"


ಆಗ ಕಥೆಗಾರ ಸ್ಪಷ್ಟನೆ ಕೊಡಲಾರಂಭಿಸುತ್ತಾನೆ. ಇತಿಹಾಸದಲ್ಲಿ ಮೂವರು ಅಜಾತಶತ್ರುಗಳಿದ್ದಾರೆ. ಮೊದಲನೆಯವನು ಕ್ರಿ.ಪೂ. ಎರಡನೇ ಶತಮಾನದಲ್ಲಿ ಹುಟ್ಟಿ, ಸಣ್ಣ ವಯಸ್ಸಿನಲ್ಲೇ ಸಾಯುತ್ತಾನೆ. ಅವನ ಬಗ್ಗೆ ಹೆಚ್ಚಿನ ಮಾಹಿತಿ ಯಾರಿಗೂ ತಿಳಿದಿಲ್ಲ. ಎರಡನೆಯ ಅಜಾತಶತ್ರುವಿನ ಬಗ್ಗೆ ಸಾಕಷ್ಟು ಮಾಹಿತಿಯನ್ನು ಇತಿಹಾಸಕಾರರು ದಾಖಲಿಸಿದ್ದಾರೆ. ನೀವು ಎನ್ ಸೈಕ್ಲೊಪೀಡಿಯಾ ತೆಗೆದು ನೋಡಿದರೆ ..."


ಆಗ ಆಧುನಿಕ ಕಾಲದ ಓದುಗರ ಸಂಶಯ ನಿವಾರಣೆ ಆಗುತ್ತದೆ.


ಇಂಗ್ಲಿಷ್ ಭಾಷೆಯಲ್ಲಿ ಒಂದು ಗಾದೆ ಮಾತಿದೆ. "ನೀವು ಯಾವ ಪ್ರಶ್ನೆ ಕೇಳದಿದ್ದರೆ, ನಾನು ಯಾವ ಸುಳ್ಳು ಹೇಳುವುದಿಲ್ಲ". ಕಥೆ ಇಷ್ಟ ಪಡುವ ಎಲ್ಲ ಚಿಕ್ಕ ಹುಡುಗರಿಗೂ ಈ ವಿಷಯ ಚೆನ್ನಾಗಿ ಗೊತ್ತಿರುತ್ತದೆ. ಹಾಗಾಗಿ ಅವರು ಕಥೆ ಕೇಳುವಾಗ ಪ್ರಶ್ನಿಸದೆ, ಸುಂದರ ಸುಳ್ಳುಗಳನ್ನು, ಪಾರದರ್ಶಕ ಸತ್ಯವೆಂದೇ ಒಪ್ಪಿಕೊಂಡು ಕಾಲ್ಪನಿಕ ಕಥೆಯಲ್ಲಿ ಮುಳುಗಿ ಹೋಗುತ್ತಾರೆ.


ಒಂದು ದಿನ ಸಂಜೆ ಆ ಕಥೆ ಕೇಳಿದ ದಿನ ನನಗೆ ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಮಳೆ, ಬಿರುಗಾಳಿ ಅಂದು ಕಲ್ಕತ್ತೆಯಲ್ಲಿ ಪ್ರವಾಹವನ್ನೇ ಸೃಷ್ಟಿಸಿದ್ದವು. ನಮ್ಮ ಬೀದಿಯಲ್ಲಿ ಮೊಳಕಾಲಿನವರೆಗೆ ನೀರು ಹರಿಯುತ್ತಿತ್ತು. ಮನೆಯ ಜಗುಲಿಯಲ್ಲಿ, ಮಳೆಯನ್ನೇ ನೋಡುತ್ತಾ ನನಗೆ ಟ್ಯೂಷನ್ ಹೇಳಿಕೊಡುವ ಶಿಕ್ಷಕರು ಬಂದೇ ಬಿಡುತ್ತಾರೇನೋ ಎನ್ನುವ ಆತಂಕದಲ್ಲಿ ಕುಳಿತಿದ್ದೆ. ಮನದಲ್ಲಿ 'ಮಳೆ ಕಡಿಮೆ ಆಗದಿರಲಿ ದೇವರೇ' ಎಂದು ಕೇಳಿಕೊಳ್ಳುತ್ತಿದ್ದೆ. ದೇವರಿಗೆ ನನ್ನ ಪ್ರಾರ್ಥನೆ ಕೇಳಿಸಿದಂತೆ ಮಳೆ ಕಡಿಮೆಯೇ ಆಗಲಿಲ್ಲ. ಆದರೆ ನನ್ನ ಶಿಕ್ಷಕರು ಕೂಡ ಬಿಡಲು ತಯಾರಿರಲಿಲ್ಲ. ಸಮಯಕ್ಕೆ ಸರಿಯಾಗಿ ಅವರು ಕೊಡೆ ಹಿಡಿದು ಬರುವುದನ್ನು ನೋಡಿಯೇ ಬಿಟ್ಟೆ. ಕೂಡಲೇ ಮನೆಯೊಳಗೇ ಓಡಿ ಹೋದೆ. ನನ್ನ ಅಮ್ಮ, ಅಜ್ಜಿಯ ಜೊತೆ ಮಾತನಾಡುತ್ತ ಕೂತಿದ್ದರು. ನಾನು ಅಮ್ಮನ ಪಕ್ಕ ಮುದುರಿ ಕೂತು 'ಅಮ್ಮ, ಶಿಕ್ಷಕರು ಬಂದಿದ್ದಾರೆ. ಆದರೆ ನನಗೆ ವಿಪರೀತ ತಲೆ ನೋವು. ಇವತ್ತು ನನಗೆ ಟ್ಯೂಷನ್ ಬೇಡ.'


ಬುದ್ಧಿ ತಿಳಿಯದ ಆ ವಯಸ್ಸಿನಲ್ಲಿ ನಾನು ಹಾಗೆ ನಡೆದುಕೊಂಡಿದ್ದು ಇಂದಿನ ಓದುಗರು ಒಪ್ಪಿಕೊಳ್ಳುತ್ತಾರೋ ಇಲ್ಲವೋ ಆದರೆ ನನ್ನ ಅಮ್ಮ "ಸರಿ" ಎಂದು ಹೇಳಿಯೇಬಿಟ್ಟಳು ಮತ್ತು ಬಂದಿದ್ದ ಶಿಕ್ಷಕರಿಗೆ ವಾಪಸ್ಸಾಗುವಂತೆ ಸೂಚಿಸಿದಳು. ಅವಳಿಗೆ ನನಗೆ ಯಾವ ತಲೆನೋವು ಇಲ್ಲವೆಂದು ತಿಳಿದಿತ್ತು. ಹಾಗಾಗಿ ನನ್ನ ಬಗ್ಗೆ ಯಾವ ವಿಶೇಷ ಕಾಳಜಿಯನ್ನು ತೋರಲಿಲ್ಲ. ನಾನು ತಲೆದಿಂಬಿನಲ್ಲಿ ಮುಖ ಹುದುಗಿಸಿ ಮನಸಾರೆ ನಕ್ಕು ಬಿಟ್ಟೆ. ನಾನು ಮತ್ತು ನನ್ನಮ್ಮ ಒಬ್ಬರನ್ನೊಬ್ಬರು ಎಷ್ಟು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೆವು.


ಸ್ವಲ್ಪ ಹೊತ್ತಿಗೆ ನಾನು ಅಜ್ಜಿಗೆ ಕಥೆ ಹೇಳಲು ಪೀಡಿಸಲಾರಂಭಿಸಿದೆ. ನಾನು ಹಿಡಿದ ಪಟ್ಟು ಬಿಡುವುದಿಲ್ಲ ಎಂದು ಗೊತ್ತಿದ್ದ ನನ್ನ ಅಮ್ಮ, ತಾನು ಅಜ್ಜಿಯೊಡನೆ ಆಡುತ್ತಿದ್ದ ಮಾತು ನಿಲ್ಲಿಸಿ ಅಜ್ಜಿಗೆ ಹೇಳಿದಳು 'ಅವನು ಕೇಳಿದ್ದು ನಾವು ಮಾಡದಿದ್ದರೆ ನಮಗೆ ಅವನನ್ನು ನಿಭಾಯಿಸಲು ಆಗುವುದಿಲ್ಲ'.


ನಾನು ಅಜ್ಜಿಯ ಕೈ ಹಿಡಿದು, ನನ್ನ ಹಾಸಿಗೆಯವರೆಗೆ ಕರೆದೊಯ್ದು 'ಅಜ್ಜಿ ಈಗ ಕಥೆ ಹೇಳು' ಎಂದು ಹಟ ಮಾಡಿದೆ. ಅಜ್ಜಿ ಕಥೆ ಶುರು ಮಾಡಿದಳು "ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ. ಅವನಿಗೆ ಒಬ್ಬ ರಾಣಿಯಿದ್ದಳು".


ಇದು ಒಳ್ಳೆಯ ಆರಂಭ. ಎಷ್ಟೋ ಕಥೆಗಳಲ್ಲಿ ರಾಜನಿಗೆ ಹಲವಾರು ರಾಣಿಯರಿರುತ್ತಾರೆ. ಅದು ಕೇಳಿದೊಡನೆ ನಮಗೆ ಹೃದಯ ಕುಸಿದ ಅನುಭವ ಆಗತೊಡಗುತ್ತದೆ. ಏಕೆಂದರೆ ಅಲ್ಲಿ ಒಬ್ಬ ರಾಣಿಗಾದರೂ ಅಸಮಾಧಾನ ಇದ್ದೆ ಇರುತ್ತದೆ. ಈ ಕಥೆಯಲ್ಲಿ ಅಂತಹ ಅಪಾಯ ಇಲ್ಲ. ಏಕೆಂದರೆ ಈ ಕಥೆಯ ರಾಜನಿಗೆ ಒಬ್ಬಳೇ ರಾಣಿ ಇದ್ದಾಳೆ.


ಅಜ್ಜಿ ಕಥೆ ಮುಂದುವರೆಸುತ್ತಾಳೆ. ಆ ರಾಜನಿಗೆ ಮಗಳಿದ್ದಾಳೆ. ಆದರೆ ಗಂಡು ಸಂತಾನ ಇರುವುದಿಲ್ಲ.


ಏಳು ವರುಷದ ಹುಡುಗನಿಗೆ ಗಂಡು ಸಂತಾನ ಇರದಿದ್ದರೆ ಏಕೆ ಚಿಂತಿಸಬೇಕು ಎಂದು ಅರ್ಥವಾಗುವುದು ಕಷ್ಟ. ಈಗ ಇರದಿದ್ದರೆ ಮುಂದೆ ಹುಟ್ಟಬಹುದಲ್ಲವೇ ಎನ್ನುವುದು ಅವನ ವಿಚಾರ.   


ಆದರೆ ಅಜ್ಜಿಯ ಕಥೆ ಮುಂದೆ ಸಾಗುತ್ತದೆ. ಚಿಂತೆಯಿಂದ ರಾಜ ಗಂಡು ಸಂತಾನಕ್ಕಾಗಿ ದೇವರನ್ನು ಪ್ರಾರ್ಥಿಸಿ ತಪಸ್ಸು ಮಾಡಲು ಕಾಡಿಗೆ ಹೊರಡುತ್ತಾನೆ. ರಾಣಿಯನ್ನು, ಚಿಕ್ಕ ಮಗಳನ್ನು ಅರಮನೆಯಲ್ಲೇ ಬಿಟ್ಟು ರಾಜ ಹೊರಡುತ್ತಾನೆ. ಹನ್ನೆರಡು ವರ್ಷಗಳು ಕಳೆದು ಹೋಗುತ್ತವೆ. ಅವನ ಮಗಳು ಬೆಳೆದು ನಿಂತು ಸುಂದರ ಯುವತಿಯಾಗುತ್ತಾಳೆ. ಬೆಳೆದು ನಿಂತ ಮಗಳಿಗೆ ಮದುವೆ ಮಾಡಲು ರಾಜನಿಲ್ಲದೆ ರಾಣಿಗಷ್ಟೇ ಹೇಗೆ ಸಾಧ್ಯ? ಅವಳು ರಾಜನಿಗೆ ಒಂದು ದಿನ ಮಟ್ಟಿಗಾದರೂ ಬಂದು ಹೋಗುವಂತೆ ಹೇಳಿಕಳಿಸುತ್ತಾಳೆ.


ಅದಕ್ಕೆ ಒಪ್ಪಿದ ರಾಜ ಅರಮನೆಗೆ ಮರಳುತ್ತಾನೆ. ರಾಣಿ ತನ್ನ ಕೈಯಿಂದಲೇ ವಿಧ ವಿಧದ ಭಕ್ಷ್ಯಗಳನ್ನು ತಯಾರಿಸಿ ಕಾಯುತ್ತಿರುತ್ತಾಳೆ. ಅವಳ ಮಗಳು ನವಿಲು ಗರಿಯ ಬೀಸಣಿಕೆ ಹಿಡಿದು ರಾಜನಿಗೆ ಸೇವೆ ಮಾಡಲು ನಿಂತಿರುತ್ತಾಳೆ. ಅಲ್ಲಿಗೆ ಬಂದ ರಾಜ "ಸೌಂದರ್ಯದ ಖನಿಯಾಗಿರುವ ಈ ಹುಡುಗಿ ಯಾರು? ಯಾರ ಮಗಳು?" ಎಂದು ರಾಜ, ರಾಣಿಯನ್ನು ಪ್ರಶ್ನಿಸುತ್ತಾನೆ. ರಾಣಿ ಹಣೆ ಚಚ್ಚಿಕೊಳ್ಳುತ್ತ "ನಿಮ್ಮ ಮಗಳನ್ನು ನೀವು ಗುರುತು ಹಿಡಿಯದೇ ಹೋದಿರಾ?" ಎಂದು ಪ್ರಶ್ನಿಸುತ್ತಾಳೆ. ಅದನ್ನು ಕೇಳಿ ಉಲ್ಲಾಸಭರಿತನಾದ ರಾಜ "ನಾಳೆ ನಾನು ನೋಡಿದ ಪ್ರಥಮ ವ್ಯಕ್ತಿಯೊಂದಿಗೆ ಇವಳ ಮದುವೆ ಮಾಡುತ್ತೇನೆ" ಎಂದು ಹೇಳುತ್ತಾನೆ.


ಮರುದಿನ ಅರಮನೆಯ ಹೊರಗೆ ಕಟ್ಟಿಗೆ ಆಯಲು ಬಂದ ಒಬ್ಬ ಬ್ರಾಹ್ಮಣ ಹುಡುಗನನ್ನು ರಾಜ ನೋಡುತ್ತಾನೆ. ಅವನಿನ್ನೂ ಏಳೆಂಟು ವರುಷದವನು. ಆದರೆ ರಾಜ ಅವನಿಗೆ ತನ್ನ ಮಗಳನ್ನು ಕೊಟ್ಟು ಮದುವೆ ಮಾಡಲು ನಿರ್ಧರಿಸುತ್ತಾನೆ. ರಾಜನ ನಿರ್ಧಾರವನ್ನು ಪ್ರಶ್ನಿಸುವ ಧೈರ್ಯ ಯಾರಿಗುಂಟು? ತಡವಿಲ್ಲದೆ ಅವನ ಮಗಳ ಮದುವೆ ಆ ಬ್ರಾಹ್ಮಣ ಹುಡುಗನೊಂದಿಗೆ ನಡೆದೇ ಹೋಗುತ್ತದೆ.


"ಆಮೇಲೆ ಏನಾಯಿತು?" ನಾನು ಅಜ್ಜಿಗೆ ಕೇಳಿದೆ. ಹೀಗೆ ಸೊಗಸಾಗಿ ಕಥೆ ಹೇಳುವ ಅಜ್ಜಿ ಮುಂದಿನ ಜನ್ಮದಲ್ಲೂ ಅಜ್ಜಿಯಾಗೇ ಹುಟ್ಟಬೇಕು ಎಂದು ಮನಸ್ಸಿನಲ್ಲೇ ಅಂದುಕೊಂಡೆ.


ಅಜ್ಜಿ ಕಥೆ ಮುಂದುವರೆಸಿದಳು. ರಾಜಕುಮಾರಿ ತನ್ನ ಹೊಸ ಅರಮನೆಗೆ ಇನ್ನೂ ಬಾಲಕನಾದ ಗಂಡನನ್ನು ಕರೆದುಕೊಂಡು ಹೋಗುತ್ತಾಳೆ. ಆ ಹುಡುಗನನ್ನು ಶಾಲೆಗೆ ಕಳಿಸಿ ವಿದ್ಯಾಭ್ಯಾಸ ಮುಂದುವರೆಯುವಂತೆ ಏರ್ಪಾಡು ಮಾಡಲಾಗಿತ್ತು. ಶಾಲೆಯಲ್ಲಿ ಅವನ ಸ್ನೇಹಿತರೆಲ್ಲ, ಅರಮನೆಯಲ್ಲಿರುವ ಆ ಸುಂದರ ಹೆಣ್ಣು ಅವನಿಗೆ ಏನಾಗಬೇಕು ಎಂದು ಕೇಳುತ್ತಿದ್ದರು. ಆ ಬಾಲಕನಿಗೋ ಒಂದು ದಿನ ಅವಳ ಜೊತೆ ಹಾರ ಬದಲಿ ಮಾಡಿಕೊಂಡ ನೆನಪು ಮಾತ್ರ ಉಂಟು. ಅದಕ್ಕಿಂತ ಹೆಚ್ಚಿಗೆ ಅವನಿಗೆ ಏನು ತಿಳಿಯದು. ನಾಲ್ಕು-ಐದು ವರುಷಗಳು ಕಳೆದು ಹೋದವು. ಅವನ ಸ್ನೇಹಿತರು ಅರಮನೆಯಲ್ಲಿರುವ ಸುಂದರ ಹೆಣ್ಣು ಯಾರು ಎಂದು ಕೇಳುತ್ತಲೇ ಇದ್ದರು. ಅವನು ಮನೆಗೆ ಬಂದೊಡನೆ ಯುವರಾಣಿಗೆ ಕೇಳಿಯೇ ಬಿಟ್ಟ. "ನನ್ನ ಸ್ನೇಹಿತರೆಲ್ಲ ನೀನಾರು ಎಂದು ಕೇಳುತ್ತಿದ್ದಾರೆ. ಯಾರು ನೀನು?" ಅದಕ್ಕೆ ಯುವರಾಣಿ "ಅದು ಇಂದಿಗೆ ಬೇಡ. ಮುಂದೆ ಎಂದಾದರೂ ಆ ವಿಷಯ ಹೇಳುತ್ತೇನೆ" ಎಂದು ಹೇಳಿದಳು. ಹಾಗೆಯೆ ಇನ್ನು ಕೆಲವು ವರುಷಗಳು ಕಳೆದು ಹೋದವು. ಕೊನೆಗೆ ಬ್ರಾಹ್ಮಣ ಹುಡುಗ ತಾಳ್ಮೆ ಕಳೆದುಕೊಂಡು "ನೀನು ಯಾರು ಎಂದು ಹೇಳಲೇಬೇಕು" ಎಂದು ಒತ್ತಾಯಿಸಿದ. "ಇಂದು ಬೇಡ, ನಾಳೆ ಖಂಡಿತ ಹೇಳುತ್ತೇನೆ" ಎಂದು ಉತ್ತರಿಸಿದಳು ಯುವರಾಣಿ.


ಮರುದಿನ ಮತ್ತೆ ಅದೇ ಪ್ರಶ್ನೆ ಬಂದಾಗ "ಈಗ ಬೇಡ. ರಾತ್ರಿ ಊಟದ ನಂತರ ಮಲಗುವಾಗ ಹೇಳುತ್ತೇನೆ" ಎಂದಳು ಯುವರಾಣಿ. ಅಂದು ರಾತ್ರಿ ಅವರ ಮಂಚ ಹೂವಿನಿಂದ ಅಲಂಕೃತವಾಗಿತ್ತು. ಕೋಣೆಯಲ್ಲಿ ಸುಗಂಧ ದ್ರವ್ಯಗಳನ್ನು ಸಿಂಪಡಿಸಲಾಗಿತ್ತು. ಯುವರಾಣಿ ಸುಂದರ ಬಟ್ಟೆ ಧರಿಸಿ ಅಲಂಕೃತವಾಗಿದ್ದಳು. ಅವಳ ಗಂಡ ಅಲ್ಲಿಗೆ ಹೋಗಿ ಮಲಗಿದ ಮೇಲೆ ಹೆಚ್ಚಿಗೆ ತಡ ಮಾಡದೆ ಆ ಕೋಣೆಯನ್ನು ಪ್ರವೇಶಿಸಿದಳು ಯುವರಾಣಿ. ಆದರೆ ಅಷ್ಟರಲ್ಲೇ ಹೂವಿನ ಬುಟ್ಟಿಯಲ್ಲಿದ್ದ ವಿಷದ ಹಾವು ಅಲಂಕೃತವಾಗಿದ್ದ ಮಂಚದ ಮೇಲೆ ಮಲಗಿದ್ದ ಅವಳ ಗಂಡನ ಕಚ್ಚಿ ಪ್ರಾಣ ತೆಗೆದಿತ್ತು.


ನನ್ನ ಹೃದಯ ಒಮ್ಮೆಲೇ ನಿಂತಂತಾಗಿ ಉಸಿರುಗಟ್ಟಿದ ಧ್ವನಿಯಲ್ಲಿ ಅಜ್ಜಿಯನ್ನು ಕೇಳಿದೆ "ಆಮೇಲೆ ಏನಾಯಿತು?"


ಆಮೇಲೆ ಕಥೆ ಮುಂದುವರೆಸಿ ಏನು ಪ್ರಯೋಜನ ಇದೆ? ಸಾವಿನ ನಂತರದ ಕಥೆಯನ್ನು ಯಾವ ಅಜ್ಜಿಯೂ ಮುಂದುವರೆಸಲಾರಳು. ಆ ಸುಂದರ ಸಂಜೆಯ ಕಥೆ ಹೀಗೆ ಅಂತ್ಯ ಕಾಣಬಹುದು ಎಂದು ನಾನು ಊಹಿಸಲು ಹೇಗೆ ಸಾಧ್ಯ ಇತ್ತು? ಮಂತ್ರೋಚ್ಚಾರಣೆ ಮಾಡಿ ಸತ್ತವರನ್ನು ಮತ್ತೆ ಬದುಕಿಸುವ ಕಥೆ ಅದಾಗಿರಲಿಲ್ಲ. ಎಲ್ಲದಕ್ಕೂ ಒಂದು ಅಂತ್ಯ ಎನ್ನುವುದು ಇರಬೇಕಲ್ಲವೇ? ಆದರೆ ಕಥೆ ಕೇಳುತ್ತಿದ್ದ ನನಗೆ ಸಾವು ಎನ್ನುವುದು ಭಯ ಬೀಳಿಸುವ ಅಂತ್ಯ ಅನಿಸದೇ ಅದು ಒಂದು ದೀರ್ಘ ರಾತ್ರಿಯ ತರಹದ್ದಾಗಿರಬೇಕು ಎನಿಸಿತು. ಕಥೆ ಮುಗಿದ ಮೇಲೆ ಕಣ್ಣು ರೆಪ್ಪೆ ಭಾರವಾಗಿ ನಿದ್ರೆಗೆ ಜಾರುವ ಹುಡುಗ ಮರುದಿನ ಮತ್ತೆ ಬೆಳಕಿನ ಜಗತ್ತಿಗೆ ಮತ್ತು ಬದುಕಿಗೆ ತನ್ನನ್ನು ಒಡ್ಡಿಕೊಳ್ಳುತ್ತಾನೆ. ಹೊಸ ಕಥೆಗೆ ಅಣಿಯಾಗುತ್ತಾನೆ.

ಗುರುವಿನ ಸಮ್ಮೋಹಕ ಶಕ್ತಿ

(ಇದು ಅರುಣ್ ಶೌರಿ ಅವರು ಬರೆದ 'Two Saints' ಪುಸ್ತಕದ ಮೊದಲ ಅಧ್ಯಾಯದ ಭಾವಾನುವಾದ. ಸ್ವಾಮಿ ವಿವೇಕಾನಂದ ಎಂದು ಗುರುತಿಸಿಕೊಂಡ ನರೇಂದ್ರ ಮತ್ತು ಅವರ ಗುರು ರಾಮಕೃಷ್ಣ ಪರಮಹಂಸರ ಜೀವನ ಕುರಿತು ಇದು ಬೆಳಕು ಚೆಲ್ಲುತ್ತದೆ)


ಗುರು ದೇವಿಯ ಪ್ರಾರ್ಥನೆಯ ಮಧ್ಯೆ ಬಿಕ್ಕುತ್ತಿದ್ದ. ತನ್ನ ಕೆಲಸ ಮುಂದುವರೆಸಲು ಸಹಾಯವಾಗುವಂತೆ ಶಿಷ್ಯರನ್ನು ಅನುಗ್ರಹಿಸುವಂತೆ ಬೇಡಿಕೊಳ್ಳುತ್ತಿದ್ದ. ಅವರಿಗೆ ತಮ್ಮ ದಿವ್ಯದೃಷ್ಟಿಯಲ್ಲಿ ಕೆಲ ಯುವಕರು ಅದರಲ್ಲೂ ನರೇಂದ್ರ ಎನ್ನುವ ಸ್ವಂತ ಚಿಂತನೆಯುಳ್ಳ, ದೇವರ ಬಗ್ಗೆ ಯಾರೂ ತಿಳಿದುಕೊಳ್ಳಲು ಸಾಧ್ಯವಿಲ್ಲ ಎಂದು ನಂಬಿದ್ದ ಬಂಡಾಯಗಾರ ಯುವಕ ಬರುವುದು ಮುಂಚೆಯೇ ಕಾಣುತ್ತಿತ್ತು. ಅದರಂತೆಯೇ ನರೇಂದ್ರ ತನ್ನ ಸ್ನೇಹಿತರೊಡನೆ ಗುರುವಿನ ಭೇಟಿಗಾಗಿ ದಕ್ಷಿಣೇಶ್ವರಕ್ಕೆ ಬರಲು ಆರಂಭಿಸಿದ. ನರೇಂದ್ರನನ್ನು ನೋಡಿದ ಕೂಡಲೇ ಗುರುವಿನ ಹರ್ಷ ಎಲ್ಲೇ ಮೀರಿತ್ತು.


ಮೊದಲ ಭೇಟಿಯಲ್ಲಿ ನರೇಂದ್ರನಿಗೆ ಗುರುವು ಮತಿಭ್ರಮಣೆಗೊಂಡ ವ್ಯಕ್ತಿಯ ತರಹ ತೋರಿದರೂ, ಇನ್ನು ಕೆಲವು ಸಲ ಭೇಟಿ ನೀಡಿ ನಿರ್ಧರಿಸಿದರಾಯಿತು ಎಂದುಕೊಂಡ. ಎರಡನೆಯ ಭೇಟಿಯಲ್ಲಿ, ಗುರುವಿನ ಹತ್ತಿರ ಯಾರೂ ಇರಲಿಲ್ಲ. ನರೇಂದ್ರನನ್ನು ಕರೆದು ತನ್ನ ಹತ್ತಿರವೇ ಕುಳಿಸಿಕೊಂಡ ಗುರು ಅವನನ್ನು ತನ್ನ ಬಲಗಾಲಿನಿಂದ ಸ್ಪರ್ಶಿಸಿದರು. ನರೇಂದ್ರನಿಗೆ ಒಂದು ಅದ್ಭುತ ಅನುಭವದ ಆರಂಭವಾಯಿತು. ಅವರು ಕುಳಿತಿದ್ದ ಕೋಣೆಯ ಗೋಡೆಗಳೆಲ್ಲ ಹಿಂದೆ ಸರಿದು ಮಾಯವಾಗುತ್ತಿರುವ ಹಾಗೆ ಮತ್ತು ಅದರ ಜೊತೆಗೆ ನರೇಂದ್ರನಿಗೆ ತಾನು ತಾನೆನ್ನುವ ಅರಿವು ಕಳೆದು ಶೂನ್ಯದಲ್ಲಿ ಸೇರಿ ಹೋದ ಹಾಗೆ ಅನುಭವ. 


"ನನಗೆ ಏನು ಮಾಡುತ್ತಿದ್ದೀರಿ? ನನಗೆ ತಂದೆ, ತಾಯಿಯರಿದ್ದಾರೆ" ನರೇಂದ್ರ ದೊಡ್ಡ ಧ್ವನಿಯಲ್ಲಿ ಗಾಬರಿಯಿಂದ ಕೇಳಿಯೇ ಬಿಟ್ಟ. ಆ ಮಾತಿಗೆ ದೊಡದಾಗಿ ನಗುತ್ತಾ, ತಮ್ಮ ಕೈಯನ್ನು ನರೇಂದ್ರನ ಎದೆಯ ಮೇಲಿಟ್ಟು "ಹಾಗಾದರೆ ಇದು ನಿಲ್ಲಲಿ. ಎಲ್ಲ ಅನುಭವ ಒಂದೇ ಸಾಲಕ್ಕೆ ಆಗುವ ಅಗತ್ಯವಿಲ್ಲ. ಕಾಲ ಕಳೆದಂತೆ ಅವು ನಿನ್ನವಾಗಲಿ" ಎಂದು ಗುರು ನುಡಿದರು. ಅಸಾಧಾರಣವಾದಂತ ಆ ಅನುಭವ ಅಲ್ಲಿಗೆ ಕೊನೆಯಾಗಿ ಮತ್ತೆ ಸಹಜ ಸ್ಥಿತಿಗೆ ಮರಳಿದ ನರೇಂದ್ರ.


ನರೇಂದ್ರ ಮೂರನೆಯ ಬಾರಿ ಬಂದಾಗ ಗುಡಿಯಲ್ಲಿ ಗದ್ದಲವಿತ್ತು. ತನ್ನ ಜೊತೆಗೆ ಬರುವಂತೆ ಸೂಚಿಸಿದ ಗುರುಗಳು ನರೇಂದ್ರನನ್ನು ಕರೆದುಕೊಂಡು ಒಂದು ಕೋಣೆಯಲ್ಲಿ ಕುಳಿತುಕೊಂಡರು. ನೋಡುನೋಡುತ್ತಿದ್ದಂತೆಯೇ ಗುರುಗಳು ಮೈಮರೆತು ಭಾವಪರವಶರಾದರು. ಗುರುಗಳಲ್ಲಾಗುತ್ತಿರುವ ಬದಲಾವಣೆಯನ್ನು ನರೇಂದ್ರ ಗಮನಿಸುತ್ತಿದ್ದ. ಹಠಾತ್ತನೆ ಗುರುಗಳು ನರೇಂದ್ರನನ್ನು ಸ್ಪರ್ಶಿಸುತ್ತಾರೆ. ಆ ಸ್ಪರ್ಶಕ್ಕಿದ್ದ ಶಕ್ತಿಯಿಂದ ನರೇಂದ್ರನಿಗೆ ಮಾತೇ ಹೊರಡಲಿಲ್ಲ. ಅವನಿಗೆ ಅರಿವು ಸಂಪೂರ್ಣ ಕಳೆದು ಹೋಯಿತು. ಅವನು ಮತ್ತೆ ಸಹಜ ಸ್ಥಿತಿಗೆ ಬರುವಷ್ಟರಲ್ಲಿ ಒಂದು ದಿನವೇ ಕಳೆದು ಹೋಗಿತ್ತು.


ಎಷ್ಟೋ ವಾರಗಳು ಉರುಳಿ ಹೋದವು. ಒಂದು ದಿನ ನರೇಂದ್ರ ತನ್ನ ಸ್ನೇಹಿತನೊಡನೆ ಗುರುಗಳು ದೇವರ ಬಗ್ಗೆ ಹೇಳಿದ್ದನ್ನು ಅಪಹಾಸ್ಯ ಮಾಡುತ್ತ ನಿಂತಿದ್ದ. ಅಲ್ಲಿಗೆ ಬಂದ ಗುರುಗಳು ಪ್ರೀತಿಯಿಂದ "ಯಾವ ವಿಷಯ ಮಾತನಾಡುತ್ತಿರುವಿರಿ?" ಎನ್ನುತ್ತಾ ನರೇಂದ್ರನನ್ನು ಸ್ಪರ್ಶಿಸಿದರು. ನರೇಂದ್ರನಿಗೆ ತಲೆ ಸುತ್ತಿ ಬಂದಂತೆ ಆಗಿ ಉತ್ತರಿಸಿದ "ನೀವು ಈ ಜಗತ್ತಿನಲ್ಲಿ ದೇವರ ಬಿಟ್ಟು ಬೇರೇನಿಲ್ಲ ಎಂದು ಹೇಳಿದ್ದರ ಬಗ್ಗೆ". ಆ ಅನುಭವ ನರೇಂದ್ರನಿಗೆ ಎಷ್ಟೋ ದಿನಗಳವರೆಗೆ ಬಿಟ್ಟು ಹೋಗಲಿಲ್ಲ. ಅಷ್ಟರಲ್ಲಿ ದೇವರು ಮತ್ತು ಜಗತ್ತು ಬೇರೆ ಬೇರೆ ಅಲ್ಲ ಎನ್ನುವ ಅದ್ವೈತ ಸಿದ್ಧಾಂತ ಅವನ ಸ್ವಂತ ಅನುಭವಕ್ಕೆ ಬಂದು ಬಿಟ್ಟಿತು.


ಗುರುವಿಗೆ ನರೇಂದ್ರ ಹತ್ತಿರವಾದರೂ, ಅವನು ತನ್ನ ಸಂಶಯ ಪಡುವ, ವಾದಕ್ಕೆ ಇಳಿಯುವ, ಪ್ರಶ್ನೆ ಹಾಕುವ ಸ್ವಭಾವವನ್ನು ಬಿಟ್ಟಿರಲಿಲ್ಲ.


ನರೇಂದ್ರನ ತಂದೆ ತೀರಿಕೊಂಡರು. ಅವನ ಕುಟುಂಬ ಕಡುಬಡತನಕ್ಕಿಳಿಯಿತು. ಮನೆಯಲ್ಲಿ ಎಲ್ಲರಿಗು ಸಾಕಾಗುವಷ್ಟು ಊಟವಿರುತ್ತಿರಲಿಲ್ಲ. ಯಾವುದೊ ಒಂದು ನೆಪದಲ್ಲಿ ಮನೆಯಿಂದ ನರೇಂದ್ರ ಹೊರ ಬಂದು ಬಿಡುತ್ತಿದ್ದ. ಉಳಿದವರಿಗೆ ಒಂದು ತುತ್ತು ಊಟ ಹೆಚ್ಚಿಗೆ ಸಿಗಲಿ ಎಂದು. ಅವನು ಕೆಲಸಕ್ಕಾಗಿ ಅಲೆದು ಅಲೆದು ಸುಸ್ತಾದ. ಆದರೆ ಅವನಿಗೆ ಎಲ್ಲೂ ಕೆಲಸ ದೊರಕಲಿಲ್ಲ. ಒಂದು ದಿನ ಮಳೆಯಲ್ಲಿ ನೆನೆದು, ನಡೆಯಲು ತ್ರಾಣವಿಲ್ಲದೆ ಕುಸಿದುಬಿಟ್ಟ. ಮತ್ತೆ ಅವನು ಎದ್ದಾಗ, ಅವನಿಗೆ ತಾನು ಕೆಲಸ ಮಾಡುವುದಕ್ಕೆ, ಹಣ ಗಳಿಸುವುದಕ್ಕೆ ಹುಟ್ಟಿಲ್ಲ ಎನ್ನುವುದನ್ನು ಕಂಡುಕೊಂಡ. ಲೌಕಿಕವನ್ನು ತೊರೆದು ಸನ್ಯಾಸಿಯಾಗುವ ಬಯಕೆ ಅವನಲ್ಲಿ ಮೊಳೆಯತೊಡಗಿತ್ತು. ಆದರೆ ತನ್ನ ತಾಯಿ, ಸಹೋದರರು ಉಪವಾಸ ಇರುವುದನ್ನು ಅವನು ನೋಡಲಾರ.


ಗುರುವಿನ ಹತ್ತಿರ ಬಂದ ನರೇಂದ್ರ ತನ್ನ ಕುಟುಂಬಕ್ಕೆ ಸಹಾಯ ಮಾಡುವಂತೆ ದೇವಿಯನ್ನು ಪ್ರಾರ್ಥಿಸಿ ಎಂದು ಕೇಳಿಕೊಂಡ. ಗುರುವು ಅದಕ್ಕೆ "ದೇವಿಯನ್ನು ನಾನು ಸಾಕಷ್ಟು ಸಲ ನಿಮ್ಮ ಕುಟುಂಬದ ದಾರಿದ್ರ್ಯವನ್ನು ದೂರ ಮಾಡುವಂತೆ ಪ್ರಾರ್ಥಿಸಿದ್ದೇನೆ. ಅದರಿಂದ ಯಾವ ಉಪಯೋಗವು ಆಗಿಲ್ಲ. ಏಕೆಂದರೆ ನಿನಗೆ ದೇವಿಯ ಮೇಲೆ ನಂಬಿಕೆ ಇಲ್ಲ. ಇಂದು ಮಂಗಳವಾರ. ದೇವಿಯ ಇಷ್ಟದ ವಾರ. ನೀನೆ ಏಕೆ ದೇವಿಯನ್ನು ಪ್ರಾರ್ಥಿಸಬಾರದು? ಅವಳು ಜಗತ್ತಿಗೆ ಜನ್ಮ ಕೊಟ್ಟವಳು. ಅವಳು ಮನಸ್ಸು ಮಾಡಿದರೆ ಆಗದ ಕೆಲಸ ಯಾವುದಿದೆ?"  ಎಂದು ಹೇಳಿದರು.


ದೇವಸ್ಥಾನದ ಮೆಟ್ಟಿಲೇರಿ ಒಳ ಹೋದ ನರೇಂದ್ರ ಕರುಣೆಯ ಚಿಲುಮೆಯಾಗಿದ್ದ ದೇವಿಯನ್ನು ನೋಡುತ್ತಾ ಮೈಮರೆತು ತನಗೆ ದೈವಿಕ ಜ್ಞಾನ ಮತ್ತು ವೈರಾಗ್ಯವನ್ನು ಕೊಡುವಂತೆ ಬೇಡಿಕೊಂಡ. ಮರಳಿ ಬಂದ ನರೇಂದ್ರನ್ನು ಕಂಡ ಗುರುಗಳು "ದೇವಿಯ ಹತ್ತಿರ ನಿನ್ನ ಕುಟುಂಬದ ಸಮಸ್ಯೆ ಹೇಳಿಕೊಂಡೆಯಾ?" ಎಂದು ಪ್ರಶ್ನಿಸಿದರು. ದೇವಿಯ ಸಾನ್ನಿಧ್ಯದಲ್ಲಿ ಅದು ತನಗೆ ಸಂಪೂರ್ಣ ಮರೆತು ಹೋದುದನ್ನು ನರೇಂದ್ರ ನಿವೇದಿಸಿಕೊಂಡ. ಮತ್ತೆ ಇನ್ನೊಂದು ಸಲ ಹೋಗಿ ಪ್ರಾರ್ಥಿಸುವಂತೆ ಗುರುಗಳು ನರೇಂದ್ರನಿಗೆ ಸೂಚಿಸಿದರು. ಎರಡನೆಯ ಅನುಭವವು ನರೇಂದ್ರನಿಗೆ ವಿಭಿನ್ನವಾಗಿರಲಿಲ್ಲ. ಮತ್ತೆ ಮೂರನೆಯ ಬಾರಿಗೆ ಹೋಗುವಂತೆ ಗುರುಗಳು ಸೂಚಿಸಿದರು. ಈ ಬಾರಿ ದೇವಸ್ಥಾನದೊಳಗೆ ಕಾಲಿಟ್ಟೊಡನೆ ನರೇಂದ್ರನಿಗೆ ಲೌಕಿಕ ಸ್ವಾರ್ಥಗಳಿಗೆ ದೇವಿಯನ್ನು ಪ್ರಾರ್ಥಿಸಬಾರದು ಎನ್ನುವ ಅರಿವು ಮೂಡಿತು. ಮತ್ತೆ ತನಗೆ ದೈವಿಕ ಜ್ಞಾನ ನೀಡುವಂತೆ ದೇವಿಯನ್ನು ಪ್ರಾರ್ಥಿಸಿ ಗುರುವಿನತ್ತ ಮರಳಿದ ನರೇಂದ್ರ. 


"ಇದು ನಿಮ್ಮದೇ ಆಟ. ನನಗೆ ದೇವಿಯಲ್ಲಿ ಸ್ವಾರ್ಥಕ್ಕಾಗಿ ಪ್ರಾರ್ಥಿಸದಂತೆ ಮಾಡುತ್ತಿರುವಿರಿ. ನನ್ನ ತಾಯಿ, ತಮ್ಮಂದಿರ ಜವಾಬ್ದಾರಿಯನ್ನು ನಿಮಗೆ ಬಿಡುತ್ತೇನೆ" ಎಂದು ಹೇಳಿದ ನರೇಂದ್ರ. 

"ಸರಿ. ಅವರಿಗಿನ್ನೂ ಸಾಧಾರಣ ಊಟ, ಬಟ್ಟೆಗಳ ತೊಂದರೆ ಆಗದಂತೆ ನಾನು ನೋಡಿಕೊಳ್ಳುತ್ತೇನೆ" ಅಭಯವಿತ್ತರು ಗುರುಗಳು.


ಕೆಲ ತಿಂಗಳುಗಳು ಕಳೆದವು. ಗುರುಗಳ ಗಂಟಲ ಬೇನೆ ಉಲ್ಬಣವಾಗುತ್ತ ಹೋಯಿತು. ನರೇಂದ್ರ ಮತ್ತು ಅವನ ಸ್ನೇಹಿತರು ಸರದಿಯಲ್ಲಿ ಗುರುವಿನ ಸೇವೆಗೆ ನಿಂತರು. ಒಂದು ದಿನ ನರೇಂದ್ರ ಗುರುಗಳಲ್ಲಿ ಅಧ್ಯಾತ್ಮದ ಅಂತಿಮ ಹಂತವನ್ನು ತನಗೆ ತೋರಿಸಿಕೊಡುವಂತೆ ಬೇಡಿಕೊಂಡ. ಗುರುಗಳು ಅದನ್ನು ಮುಂದಕ್ಕೆ ತಳ್ಳಿ ಹಾಕುತ್ತ ಹೋದರು. ಒಂದು ದಿನ ನರೇಂದ್ರನಿಗೆ ತನ್ನ ತಲೆಯ ಹಿಂದೆ ಒಂದು ಪ್ರಕಾಶಮಾನವಾದ ದೀಪ ಹೊತ್ತಿಕೊಂಡಂತೆ, ಅವನ ಆತ್ಮ ಬೇರೆಯಾಗಿ ಶೂನ್ಯದೊಂದಿಗೆ ಬೆರೆತುಕೊಂಡ ಅನುಭವ ಆಯಿತು. ತನ್ನ ಜೊತೆಗಾರರನ್ನು ಸಹಾಯಕ್ಕಾಗಿ ಕೂಗಿದ. ಬಂದವರು ನರೇಂದ್ರನ ದೇಹ ನಿಶ್ಚಲವಾಗಿ, ಜೀವವಿಲ್ಲದಂತೆ ಮಲಗಿರುವುದನ್ನು ನೋಡಿ ಗುರುವಿನ ಹತ್ತಿರ ಓಡಿ ಹೋದರು. ಗುರುಗಳು ಶಾಂತವಾಗಿ, ತಮಗೆಲ್ಲ ಅರಿವಿರುವಂತೆ "ಅವನು ಹಾಗೆ ಇರಲಿ. ಬಹಳಷ್ಟು ದಿನಗಳಿಂದ ಆ ಅನುಭವಕ್ಕಾಗಿ ಗಂಟು ಬಿದ್ದಿದ್ದ" ಎಂದು ಹೇಳಿದರು.


ಸಹಜ ಸ್ಥಿತಿಗೆ ಮರಳಿದ ನಂತರ ನರೇಂದ್ರ ತನ್ನ ಗುರುಗಳ ಬಳಿ ಹೋದ. ಅವನನ್ನು ಉದ್ದೇಶಿಸಿ ಗುರುಗಳು ಹೇಳಿದರು "ತಾಯಿ ನಿನಗೆ ಸಕಲವನ್ನೂ ತೋರಿದ್ದಾಳೆ. ಆದರೆ ನಿನಗೆ ಮಾಡಲು ಸಾಕಷ್ಟು  ಕೆಲಸವಿದೆ. ಅದು ಮುಗಿದ ನಂತರ ಮತ್ತೆ ಆ ಅನುಭವ ನಿನ್ನದಾಗುತ್ತದೆ".


ಗುರುಗಳ ಆರೋಗ್ಯ ಹದಗೆಡುತ್ತಾ ಹೋಯಿತು. ಅವರಿಗೆ ಊಟ ಸೇರದಾಯಿತು. ನರೇಂದ್ರನನ್ನು ಎದುರಿಗೆ ಕೂಡಿಸಿಕೊಂಡು, ಅವನನ್ನು ನೋಡುತ್ತಾ ಸಮಾಧಿ ಸ್ಥಿತಿಗೆ ತಲುಪಿದರು. ನರೇಂದ್ರನಿಗೆ ತನ್ನ ದೇಹದಲ್ಲಿ ಏನೋ ಸೇರುತ್ತಿರುವ ಅನುಭವವಾಗಿ ಪ್ರಜ್ಞೆ ಕಳೆದುಕೊಂಡನು. ಮತ್ತೆ ಅವನಿಗೆ ಪ್ರಜ್ಞೆ ಬಂದಾಗ ಗುರುಗಳು ಅವನಿಗೆ ತಮ್ಮ ಜ್ಞಾನವನ್ನೆಲ್ಲ ಧಾರೆ ಎರೆದದ್ದು ತಿಳಿಸಿದರು. ನಂತರ ಗುರುಗಳು ತಮ್ಮ ದೇಹ ತೊರೆದರು. ಅಲ್ಲಿಂದ ಮುಂದೆ ನರೇಂದ್ರನಿಗೆ ತನ್ನ ಜೀವನದ ಉದ್ದೇಶ ಏನು  ಎನ್ನುವುದರಲ್ಲಿ ಯಾವುದೇ ಸಂದೇಹ ಉಳಿಯಲಿಲ್ಲ.

Thursday, March 17, 2022

ಕವನ ಸಂಕಲನ: ಹರಿದ ಹೊಕ್ಕಳ ಬಳ್ಳಿ; ಲೇಖಕರು: ವರದೇಂದ್ರ

ಚೊಚ್ಚಲ ಕವನ ಸಂಕಲನವನ್ನು ಹೊರ ತಂದಿರುವ ಗೆಳೆಯ ವರದೇಂದ್ರ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಬರೀ ಅಕ್ಷರ ಪ್ರೇಮವಿದ್ದರೆ ಸಾಲದು, ಭಾವನೆಗಳ ತುಡಿತವಿರದೆ ಯಾರೂ ಕವಿಯಾಗಲಾರರು. ಕಥೆಗಳನ್ನು ಕಥೆಗಾರ ಸೃಷ್ಟಿಸಿದರೆ, ಕಾವ್ಯಗಳೇ ಕವಿಯನ್ನು ಸೃಷ್ಟಿಸುತ್ತವೆ. ಭಾವನೆಗಳು ತೀವ್ರವಾದಾಗ, ತಾಳಲಾರದ ಪ್ರಸವ ವೇದನೆಯಂತೆ ಕಾವ್ಯ ಮೈದಳೆಯುತ್ತದೆ.


ಕಾದಂಬರಿಕಾರ ನೂರಾರು ಪುಟಗಳಲ್ಲಿ ಹೇಳುವುದನ್ನು ಕಥೆಗಾರ ನೂರಾರು ಸಾಲುಗಳಲ್ಲಿ ಹೇಳಿ ಮುಗಿಸುತ್ತಾನೆ. ಆದರೆ ಕವಿ ಹತ್ತಾರು ಪದಗಳಲ್ಲಿ ಹೆಚ್ಚಿನ ಸರಕನ್ನು ಸಾಗಿಸಿ ಬಿಡುತ್ತಾನೆ. ಅವ್ಯಕ್ತ ಭಾವನೆಗಳು ಪದ ಜೋಡಣೆಯೊಳಗೆ ತೂರಿಕೊಂಡು ಕಾವ್ಯವನ್ನು ಜೀವಂತವಾಗಿಸುತ್ತವೆ. ಕಾಳಿದಾಸನಿಂದ ಕುವೆಂಪುವರೆಗೆ ನೂರಾರು ಕವಿಗಳು ಕಾವ್ಯಗಳನ್ನು ರಚಿಸಿದರೂ ಅದಕ್ಕೆ ಸ್ಪೂರ್ತಿ ಮಾತ್ರ ಪ್ರಕೃತಿ ಮತ್ತು ಅವರ ಸಮಾಜದ ಒಡನಾಟಗಳು. ಕವಿ ತಾನಿರುವ ಕಾಲದ ಸಂಸ್ಕೃತಿಯನ್ನು, ಸಮಾಜವನ್ನು ಪ್ರತಿಬಿಂಬಿಸುತ್ತಾನೆ. ಕಾವ್ಯಗಳು ಅಂದಿನ ಸಮಾಜದ ಭಾವನೆಗಳ ಪ್ರತಿರೂಪವಾಗಿರುತ್ತವೆ. ಮತ್ತೆ ಕೆಲವು ಕಾಲಾತೀತವಾಗಿ ಮಾನವ ಬದುಕಿನ ಸಂಗಾತಿಯಾಗುತ್ತವೆ.  ಅದಕ್ಕೆ ನೋಡಿ ಕರ್ತೃ ಯಾರು ಎಂದು ಗೊತ್ತಿರದಿದ್ದರೂ ಜಾನಪದ ಗೀತೆಗಳು ನಮ್ಮ ಮನದಿಂದ ಮರೆಯಾಗದೆ ಹೋಗದಿರುವುದು.


ಕವಿ ವರದೇಂದ್ರ ಅವರು ನಮ್ಮ-ನಿಮ್ಮ ಅನುಭವಗಳನ್ನೇ ಕಾವ್ಯವನ್ನಾಗಿಸಿದ್ದಾರೆ. ಶಬ್ದ ಜೋಡಣೆ ಅವರದಾದರೂ, ಅನುಭವಗಳು ನಮ್ಮವೂ ಕೂಡ. ಈ ಸಂಕಲನದ ಕವಿತೆಗಳ ಕೆಲ ಸಾಲುಗಳನ್ನು ಓದಿ ನೋಡಿ.


'ಕಲ್ಲೊಳಗೆ ಹುಟ್ಟುವ ಸಸಿಗೆ ವಿಶ್ವಾಸ' (ಬಾ ಯುಗಾದಿ ಮತ್ತೆ)

 

'ಚಟ್ಟಕೆ ದಾರಿ ಮಾಡಿದವರು, ಆದರೂ ಇವರು ನಮ್ಮವರು' (...ವರು)


'ಬೆಳಕ ಕಂಡು ಬೆಂಕಿಯೆಂದರೆ  ಕತ್ತಲೆನು ಮಾಡಿತು' (ದಾರಿ ದೀಪ)


'ಸಾಧನೆಗೆ ಎಲ್ಲೇ ಮೀರುವ ಹಸಿವು'   (ಹಸಿವು)


ವರದೇಂದ್ರ ಅವರ ಸಾಹಿತ್ಯ ಸೇವೆ ಹೀಗೆ ಮುಂದುವರೆಯಲಿ, ಅವರ ಕವಿತೆಗಳು ಓದುಗರ ಮನಗಳ ಸಂಗಾತಿಯಾಗಲಿ ಎಂದು ಹಾರೈಸುವೆ.

(Author Contact: Varadendra, 9945253030)



Tuesday, March 15, 2022

ಮುಖವಾಡ ಕಳಚುವವರೆಗೆ ಎಲ್ಲರೂ ಒಳ್ಳೆಯವರೇ

ಭಗವಾನ್ ಓಶೋ ಅವರ ಪ್ರವಚನಗಳನ್ನು ಕೇಳಿದಾಗ, ಅವರ ಪುಸ್ತಕಗಳನ್ನು ಓದಿದಾಗ ನನಗೆ ಈತ ಮಹಾ ಜ್ಞಾನಿ ಎನ್ನುವುದರಲ್ಲಿ ಸಂದೇಹವೇ ಉಳಿದಿರಲಿಲ್ಲ. ಆಧ್ಯಾತ್ಮದ ಅರ್ಥವನ್ನು, ಉದ್ದೇಶವನ್ನು ಈತನಷ್ಟು ಸರಳವಾಗಿ, ಸ್ಪಷ್ಟವಾಗಿ ಹೇಳಬಲ್ಲ ಇನ್ನೊಬ್ಬರನ್ನು ನಾನು ನೋಡಿಲ್ಲ. ಆ ವಿಷಯದಲ್ಲಿ ಈತ ಒಬ್ಬ ಮಹಾ ಗುರು. ಆದರೆ ಹಲವು ವರುಶಗಳವರೆಗೆ ಈತನ ಸೆಕ್ರೆಟರಿ ಆಗಿ ಕೆಲಸ ಮಾಡಿದ ಶೀಲಾ ಎನ್ನುವವರು ಬರೆದ 'Don't kill him' ಎನ್ನುವ ಪುಸ್ತಕ ಓದಿ ನೋಡಿ. ಓಶೋ ಎಷ್ಟು ಲಂಪಟನಾಗಿದ್ದ, ಶ್ರೀಮಂತರನ್ನು ಹೇಗೆ ಸುಲಿಗೆ ಮಾಡಿ ಐಷಾರಾಮಿ ಕಾರುಗಳನ್ನು ಖರೀದಿಸುತ್ತಿದ್ದ. ತನ್ನ ಆಶ್ರಮದ ಕಾರುಬಾರುಗಳನ್ನು ಹೇಗೆ ಕುತಂತ್ರಗಳಿಂದ ನಿಭಾಯಿಸುತ್ತಿದ್ದ ಎನ್ನುವ ವಿಷಯಗಳು ಮನದಟ್ಟಾಗುತ್ತವೆ. ಆಧ್ಯಾತ್ಮ ಭೋದಿಸಿದ ಮಹಾ ಗುರುವೇ ವೈಯಕ್ತಿಕ ಜೀವನದಲ್ಲಿ ತೀರಾ ಸಾಧಾರಣ ವ್ಯಕ್ತಿಯ ಹಾಗೆ, ಎಲ್ಲ ತರಹದ ಮನೋವಿಕಾರಗಳೊಂದಿಗೆ ಜೀವಿಸುತ್ತಿದ್ದ ಎನ್ನುವ ವಿಷಯ ಅನುಭವಕ್ಕೆ ಬರುತ್ತದೆ.

 

ಓಶೋ ವಿಷಯವೇ ಹೀಗಾದರೆ ಇನ್ನು ಲೌಕಿಕದಲ್ಲಿ ಜೀವನ ಮಾಡುವವರ ಪಾಡೇನು? ನಮ್ಮ ಸುತ್ತ ಮುತ್ತಲಿನ ಎಷ್ಟೋ ಜನರನ್ನು ನಾವು ದೇವರ ಸಮಾನ ಎಂದುಕೊಂಡಿರುತ್ತೇವೆ. ಅಷ್ಟಲ್ಲದಿದ್ದರೂ ಅವರು ಒಳ್ಳೆಯ ಜನ ಎಂದು ನಂಬಿರುತ್ತೇವೆ. ಅವರು ಕೂಡ ನಮ್ಮನ್ನು ಹಾಗೆಯೆ ನಂಬಿಸುವ ಪ್ರಯತ್ನ ಮಾಡಿರುತ್ತಾರೆ. ಸಮಯ, ಸಂದರ್ಭ ಬರುವವರೆಗೂ ಆ ಭ್ರಮೆ ಹಾಗೆಯೆ ಉಳಿದುಕೊಂಡುಬಿಡುತ್ತದೆ. ಆದರೆ ವಿಧಿ ಇರುವುದನ್ನು ಹಾಗೆಯೆ ಇರಲು ಎಲ್ಲಿ ಬಿಡುತ್ತದೆ? ಅಂದುಕೊಳ್ಳದ ವೇಳೆಯಲ್ಲಿ, ಪರಿಸ್ಥಿತಿ ಹಠಾತ್ತನೆ ಬದಲಾಗುತ್ತದೆ. ಆಗ ದೇವರಂತಹ ಮನುಷ್ಯರ ಒಳ್ಳೆಯತನದ ಮುಖವಾಡ ಕಳಚಿ ಬೀಳುತ್ತದೆ. ಅದುವರೆಗೆ ನಾವು ಅಂದುಕೊಂಡಿದ್ದು ಶುದ್ಧ ಸುಳ್ಳು ಎನ್ನುವ ವಿಷಯ ನಮಗೆ ಮನದಟ್ಟಾಗುತ್ತದೆ. ಅಷ್ಟೇ ಅಲ್ಲ, ಅದುವರೆಗೂ ಅವರು ನಮ್ಮನ್ನು ಯಾಮಾರಿಸಿದ್ದು ಮುಖಕ್ಕೆ ರಾಚಿಬಿಡುತ್ತದೆ.

 

'ಸಿಕ್ಕಿ ಬಿದ್ದರೆ ಮಾತ್ರ ಕಳ್ಳ' ಎನ್ನುವುದು ಹಳೆಯ ಗಾದೆ. ಅದಕ್ಕೆ ತಕ್ಕಂತೆ ಸಾಕಷ್ಟು ಜನರದು ಮೋಸದ ಜೀವನ. ತಾಯಿಯ ಪಾತ್ರ ಬಿಟ್ಟರೆ ಉಳಿದೆಲ್ಲ ಸಂಬಂಧಗಳು ಒಂದಲ್ಲ ಒಂದು ರೀತಿಯ ವ್ಯಾಪಾರವೇ. ಆಸ್ತಿಯ ಜಗಳಕ್ಕೆ ಬಿದ್ದ ಅಣ್ಣ-ತಮ್ಮರನ್ನು ನೋಡಿ. ಅದಕ್ಕೂ ಮುಂಚೆ ಅವರು ಅಣ್ಣ-ತಮ್ಮರ ತರಹವೇ ಇದ್ದರಲ್ಲ. ಆಸ್ತಿ ಜಗಳ ಬಂದಾಗ ಆ ಪ್ರೀತಿ ಎಲ್ಲಿಗೆ ಹೋಯಿತು? ರಾತ್ರಿ ಕುಡಿದು ಬಂದು ಹೆಂಡತಿಯನ್ನು ಪೀಡಿಸುವ ಗಂಡ, ಹಗಲಿನಲ್ಲಿ ತನ್ನ ಹೆಂಡತಿಯ ಜೊತೆಗೆ ದೇವಸ್ಥಾನಕ್ಕೆ ಹೋದಾಗ ಆದರ್ಶ ಪತಿಯ ವೇಷ ಹಾಕಿರುವುದಿಲ್ಲವೇ? ಅನೈತಿಕ ಸಂಬಂಧಗಳನ್ನು ಇಟ್ಟುಕೊಂಡ ಪತಿವ್ರತೆಯರು ಸಿಕ್ಕಿ ಬೀಳುವವರೆಗೆ ಮಾತ್ರ ಗಂಡನಿಗೆ ನಿಷ್ಠೆಯುಳ್ಳವರು. ಗುಟ್ಟು ಹೊರ ಬಿದ್ದ ಮೇಲೆ ಅವರು ಗಂಡನ ಮೇಲೆ ನೂರೆಂಟು ಅಪವಾದಗಳನ್ನು ಹೊರಿಸದೆ ಬಿಡುವುದಿಲ್ಲ. ಪ್ರಾಣ ಬೇಕಾದರೂ ಕೊಡ್ತೀನಿ ಅನ್ನುವ ಸ್ನೇಹಿತನನ್ನು ಸಾಲ ತೆಗೆದುಕೊಳ್ಳುವಾಗ ಶೂರಿಟಿ ಹಾಕಲು ಕರೆದು ನೋಡಿ. ಅವರು ನಿಜ ಸ್ನೇಹಿತರು ಹೌದೋ ಅಲ್ಲವೋ ತಿಳಿದೇ ಬಿಡುತ್ತದೆ. ಯಾವುದಾದರು ಹಗರಣಗಳಲ್ಲಿ ಸಿಕ್ಕಿ ಹಾಕಿಕೊಳ್ಳುವವರೆಗೆ, ರಾಜಕಾರಣಿಗಳು ಪ್ರಾಮಾಣಿಕರೋ, ಅಲ್ಲವೋ ತಿಳಿಯುವುದಿಲ್ಲ. ಅಲ್ಲಿಯವರೆಗೆ ಅವರು ಲೋಕ ಕಲ್ಯಾಣದ ಭಾಷಣಗಳನ್ನು ಮಾಡುತ್ತಲೇ ಇರುತ್ತಾರೆ.

 

ಒಳ್ಳೆಯವರು ಈ ಲೋಕದಲ್ಲಿ ಇಲ್ಲ ಎಂದೇನಿಲ್ಲ. ಆದರೆ ಅವರ ವೇಷ ಹಾಕಿ ಮೋಸ, ಸುಲಿಗೆ ಮಾಡುವ ಜನರೇ ಅಧಿಕ. ಎಲ್ಲರನ್ನು ಒಳ್ಳೆಯವರೇ ಎಂದು ತಿಳಿದುಕೊಳ್ಳುತ್ತಿದ್ದ ನನ್ನ ಮುಗ್ಧತೆಗೆ ಸರಿಯಾದ ಪಾಠಗಳನ್ನು ಹಲವಾರು ಜನ ಕಲಿಸಿದ್ದಾರೆ. ಅಳೆದು, ತೂಗಿ, ಪರೀಕ್ಷಿಸಿ ನೋಡುವವರೆಗೆ ಯಾರನ್ನೂ ಒಳ್ಳೆಯವರು ಎಂದು ನಿರ್ಣಯಿಸಬಾರದು ಎಂದು ತಿಳಿದುಕೊಳ್ಳುವಷ್ಟರಲ್ಲಿ ಹಲವಾರು ಬಾರಿ ಮೂರ್ಖನಾಗಿ ಹೋಗಿದ್ದೇನೆ. ಮನುಷ್ಯ ಮನುಷ್ಯನನ್ನು ನಂಬದೆ ಬದುಕಲು ಸಾಧ್ಯವೇ ಎಂದು ದಯವಿಟ್ಟು ಕೇಳಬೇಡಿ. ಅದು ರಾತ್ರಿ ಕಂಡ ಭಾವಿಗೆ ಹಗಲು ಬಿದ್ದ ಹಾಗೆ. ಸಂಪೂರ್ಣ ನಂಬಿಕೆ ಇಟ್ಟಲ್ಲಿ ಮೋಸ ಹೋಗುವುದು ಸುಲಭ. ಆದರೆ ಜಾಗರೂಕತೆ ಇದ್ದಲ್ಲಿ ಎಡವುವ ಸಾಧ್ಯತೆಯೂ ಕಡಿಮೆ ಆಗುತ್ತದೆ. ಆ ಎಚ್ಚರಿಕೆ ನಮ್ಮಲ್ಲಿ ಇರಬೇಕಷ್ಟೆ. ಏಕೆಂದರೆ ನಮ್ಮ ಸಮಾಜದ ಸಾಕಷ್ಟು ಜನ ಮುಖವಾಡ ಕಳಚುವವರೆಗೆ ಮಾತ್ರ ಒಳ್ಳೆಯವರು. ಅವರಿಗೆ ತಮ್ಮ ಕೆಟ್ಟತನ ತೋರಿಸುವ ಸಂದರ್ಭ ಬಂದಿರಲಿಲ್ಲ ಅಷ್ಟೇ. ಮುಖವಾಡ ಕಳಚಿದ ಮೇಲೆ ಕಾಣುವುದೇ ಅವರ ನಿಜವಾದ ಮುಖ. ಅಲ್ಲಿಯವರೆಗೆ ಅವರದು ಆದರ್ಶ ವ್ಯಕ್ತಿತ್ವಗಳ ಅಭಿನಯ ಮಾತ್ರ.

Saturday, March 12, 2022

ಕಥೆ: ವಜ್ರದ ಹಾರ

ಲಕ್ಷ್ಮಿ ರೂಪ-ಲಾವಣ್ಯಗಳಲ್ಲಿ ಯಾರಿಗೂ ಕಡಿಮೆ ಇರಲಿಲ್ಲ. ಆದರೆ ಬರೀ ಆಕರ್ಷಕವಾಗಿದ್ದರೆ ಏನು ಉಪಯೋಗ, ಅವಳ ಹೆಸರಿನಲ್ಲಿದ್ದ ಲಕ್ಷ್ಮಿ ಅವಳ ಕುಟುಂಬಕ್ಕೆ ಒಲಿದಿರಲಿಲ್ಲ. ಅವಳ ಮದುವೆ ಒಬ್ಬ ಸಾಮಾನ್ಯ ದರ್ಜೆಯ, ಗುಮಾಸ್ತೆ ಕೆಲಸದಲ್ಲಿದ್ದ ಅನಂತನೊಂದಿಗೆ ನಡೆದು ಹೋಯಿತು. ಲಕ್ಷ್ಮಿಯ ಅಭಿರುಚಿಗಳು ತುಂಬಾ ಸರಳ ಎನ್ನುವಂತೆ ಇದ್ದವು ಏಕೆಂದರೆ ಅವಳಿಗೆ ದುಬಾರಿ ಬೆಲೆಯ ವಸ್ತುಗಳನ್ನು ಖರೀದಿಸುವ ತಾಕತ್ತು ಎಲ್ಲಿತ್ತು? ಅವಳಿಗೆ ತನಗೆ ಸರಿ ಸಮ ಅಲ್ಲದ ಬಡವನಾದ ಗಂಡ ಸಿಕ್ಕ ಕೊರಗು ಬೇಕಾದಷ್ಟಿತ್ತು. ಆದರೆ ಐಷಾರಾಮಿ ಜೀವನದ ಆಸೆ ಬಿಟ್ಟು ಹೋಗಲೊಲ್ಲದು. ಅವಳಿಗೆ ತನ್ನ ಮನೆಯ ಬಣ್ಣ ಕಾಣದ ಗೋಡೆಗಳು, ಸವಕಲಾದ ಖುರ್ಚಿಗಳು, ಸಂಪೂರ್ಣ ಮಾಸಿ ಹೋದ ಕಿಟಕಿಯ ಪರದೆಗಳು ನೋಡಿದಾಗಲೆಲ್ಲ ಅವಳಲ್ಲಿ ಜಿಗುಪ್ಸೆ ಹುಟ್ಟಿಸುತ್ತಿದ್ದವು.  ಅವುಗಳ ಬದಲು ವಿಶಾಲವಾದ ಮನೆ, ಅಂದದ ಪೀಠೋಪಕರಣಗಳು, ಊಟಕ್ಕೆ ವಿವಿಧ ಭಗೆಯ ಭಕ್ಷ್ಯಗಳು ಇದ್ದರೆ ತನ್ನನ್ನು ಭೇಟಿಯಾಗ ಬಂದ ಸ್ನೇಹಿತರು ತನ್ನ ಅದೃಷ್ಟವನ್ನು ಹಾಡಿ ಹೊಗಳುತ್ತಿದ್ದರು ಎಂದು ಮನಸ್ಸಿನಲ್ಲೇ ಅಂದುಕೊಳ್ಳುವಳು. ಆದರೆ ವಾಸ್ತವದಲ್ಲಿ ಅವಳಿಗೆ ಉಡಲು ಒಳ್ಳೆಯ ಬಟ್ಟೆಗಳಿರಲಿಲ್ಲ. ಇನ್ನು ಬಂಗಾರದ ಆಭರಣಗಳು ದೂರದ ಮಾತೇ ಸರಿ.


ಒಂದು ಸಂಜೆ ಅವಳ ಗಂಡ ಮನೆಗೆ ಬಂದು ಅವಳ ಕೈಯಲ್ಲಿ ಒಂದು ದಪ್ಪನೆಯ ಕವರ್ ಕೊಟ್ಟು, 'ನೋಡು, ಇದು ನಿನಗಾಗಿ' ಎಂದು ಹೇಳಿದ. ಅವಳು ಆ ಕವರ್ ತೆಗೆದು ನೋಡಿದರೆ ಅದು ಆ ಊರಿನಲ್ಲಿ ನಡೆಯುತ್ತಿರುವ ಶ್ರೀಮಂತರ ಪಾರ್ಟಿಯ ಆಮಂತ್ರಣ ಪಾತ್ರ. ಅವಳ ಗಂಡ ಊಹಿಸಿದ ಹಾಗೆ ಅದು ಲಕ್ಷ್ಮಿಗೆ ಸಂತೋಷ ತರಲಿಲ್ಲ. ಬದಲಿಗೆ ಅದನ್ನು ಬಿಸಾಕಿ 'ಇದನ್ನು ತೆಗೆದುಕೊಂಡು ನಾನೇನು ಮಾಡಬೇಕು?' ಎಂದು ಗಂಡನನ್ನು ಪ್ರಶ್ನಿಸಿದಳು. ಅವಳ ಗಂಡ ಅದಕ್ಕೆ ಉತ್ತರವಾಗಿ 'ಇದು ನಿನಗೆ ಸಂತೋಷ ತರುತ್ತೆ ಎಂದು ಭಾವಿಸಿದ್ದೆ. ಅಲ್ಲಿ ಊರಿನ ದೊಡ್ಡ ಜನರೆಲ್ಲಾ ಸೇರಿರುತ್ತಾರೆ. ಇದರ ಆಮಂತ್ರಣ ಸಿಗುವುದು ಕೆಲವೇ ಜನರಿಗೆ. ಅದರಲ್ಲೂ ಗುಮಾಸ್ತರಿಗೆ ಇದರ ಆಮಂತ್ರಣ ಸಿಗುವುದು ಕಷ್ಟ'. 


'ಅಂತಹ ದೊಡ್ಡ ಪಾರ್ಟಿಗೆ ನಾನೇನು ಉಟ್ಟುಕೊಂಡು ಹೋಗಬೇಕು?' ಎಂದು ಕಣ್ಣಲ್ಲಿ ಬೆಂಕಿ ಸೂಸುತ್ತಾ ಗಂಡನನ್ನು ಪ್ರಶ್ನಿಸಿದಳು ಲಕ್ಷ್ಮಿ. 


ಅವನ ಗಂಡ ಇದರ ಬಗ್ಗೆ ವಿಚಾರ ಮಾಡಿರಲಿಲ್ಲವಾದ್ದರಿಂದ ಸ್ವಲ್ಪ ತಡವರಿಸಿದ. 'ದೇವಸ್ಥಾನಕ್ಕೆ  ಹೋದಾಗ ಉಟ್ಟುಕೊಂಡು ಹೋಗುತ್ತೀಯಲ್ಲ, ಅದು ನಿನಗೆ ಚೆನ್ನಾಗಿ ಕಾಣುತ್ತೆ' ಎಂದು ತನ್ನ ಅಭಿಪ್ರಾಯ ಹೇಳಿದ. ಅವನ ಮಾತು ಮುಗಿಯುವ ಮುಂಚೆಯೇ ತನ್ನ ಪತ್ನಿಯ ಎರಡು ಕಣ್ಣಲ್ಲಿ ದೊಡ್ಡ ದೊಡ್ಡ ಹನಿಗಳು ಉದುರುವುದನ್ನು ನೋಡಿ ಗಾಬರಿಯಾಗಿ, 'ಏಕೆ? ಏನಾಯಿತು?' ಎಂದು ಕೇಳಿದ.


ಅವಳು ತನ್ನ ಕೆನ್ನೆಯ ಮೇಲಿನ ಕಣ್ಣೀರು ಒರೆಸಿಕೊಳ್ಳುತ್ತ ಹೇಳಿದಳು 'ಇಂತಹ ಪಾರ್ಟಿಗೆ ಒಪ್ಪುವ ಸೀರೆ ನನ್ನಲ್ಲಿ ಇಲ್ಲ. ನೀವು ಈ ಆಮಂತ್ರಣ ಪತ್ರಿಕೆ ನಿಮ್ಮ ಸ್ನೇಹಿತರಿಗೆ ಯಾರಿಗಾದರೂ ಕೊಟ್ಟು ಬಿಡಿ. ಅವರ ಹೆಂಡತಿಯರಿಗೆ ಉಡಲು ಒಳ್ಳೆಯ ಬಟ್ಟೆಗಳಿದ್ದರೆ ಅವರು ಪಾರ್ಟಿಗೆ ಹೋಗಿ ಸಂತೋಷ ಪಡುತ್ತಾರೆ' ಎಂದು ಹೇಳಿದಳು.

 

ಅನಂತನ ಹೃದಯ ಒಡೆದು ಹೋದರೂ, ಹೆಂಡತಿಯನ್ನು ಒಪ್ಪಿಸುವ ಪ್ರಯತ್ನಕ್ಕಾಗಿ 'ಅಂತಹ ಸೀರೆ ಎಷ್ಟು ಬೆಲೆ ಬಾಳಬಹುದು?' ಎಂದು ಕೇಳಿದ.


ಸ್ವಲ್ಪ ಹೊತ್ತು ವಿಚಾರ ಮಾಡಿದ ಲಕ್ಷ್ಮಿ ಹೇಳಿದಳು 'ನನಗೆ ಬೆಲೆ ಸರಿಯಾಗಿ ಗೊತ್ತಿಲ್ಲ. ಆದರೆ ಕನಿಷ್ಠ ನಾಲ್ಕು ಸಾವಿರ ಆದರೂ ಆಗುತ್ತೆ'


ಗುಮಾಸ್ತೆಯಾಗಿ ಲೆಕ್ಕಾಚಾರದಲ್ಲಿ ಪಳಗಿದ್ದ ಅನಂತ ಅವಸರಕ್ಕೆ ಮನೆ ಖರ್ಚಿಗೆ ಇರಲಿ ಎಂದು ಎತ್ತಿಟ್ಟಿದ್ದ ನಾಲ್ಕು ಸಾವಿರ ರೂಪಾಯಿಗಳನ್ನು ಇದಕ್ಕೆ ಬಳಸಿದರಾಯಿತು ಎಂದು ತೀರ್ಮಾನಿಸಿದ. 


ಪಾರ್ಟಿಯ ದಿನ ಹತ್ತಿರ ಬಂದಿತು. ಲಕ್ಷ್ಮಿಯ ಭರ್ಜರಿ ಸೀರೆಯೂ ಅಷ್ಟರಲ್ಲಿ ಮನೆಗೆ ಬಂದಿತ್ತು. ಆದರೂ ಅವಳ ಮುಖದಲ್ಲಿ ಆತಂಕ. ಅದನ್ನು ಗಮನಿಸಿ ಅವಳ ಗಂಡ ಕೇಳಿಯೇ ಬಿಟ್ಟ 'ನಿನಗೆ ಇನ್ನೂ ಸಮಾಧಾನ ಇಲ್ಲವೇನು?' ಅದಕ್ಕೆ ಅವಳು ಉತ್ತರಿಸಿದಳು 'ನನಗೆ ಧರಿಸಲು ಯಾವ ಒಡವೆಯೂ ಇಲ್ಲ. ಬರೀ ಕೊರಳಲ್ಲಿ ನಾನು ಪಾರ್ಟಿಗೆ ಹೇಗೆ ಬರಲಿ?'


ಇಪ್ಪತ್ತು ರೂಪಾಯಿ ಖರ್ಚು ಮಾಡಿ ಹೂವು ಮುಡಿದುಕೊಂಡರೆ ಅವಳು ಆಕರ್ಷಕವಾಗಿ ಕಾಣುತ್ತಾಳೆ ಎನ್ನುವ ಗಂಡನ ಅಭಿಪ್ರಾಯವನ್ನು ಲಕ್ಷ್ಮಿ ಸಾರಾ ಸಗಟಾಗಿ ತಿರಸ್ಕರಿಸಿದಳು. 'ಶ್ರೀಮಂತರ ನಡುವೆ ನೀವು ನನ್ನ ಮರ್ಯಾದೆ ತೆಗೆದಿಡುತ್ತಿರಿ' ಎಂದು ಕ್ಯಾತೆ ತೆಗೆದಳು. ಕೊನೆಗೆ ಅವಳ ಶ್ರೀಮಂತ ಸ್ನೇಹಿತೆ ಕಮಾಲಾಳಿಂದ ಒಂದು ಒಡವೆಯನ್ನು ಒಂದು ದಿನದ ಮಟ್ಟಿಗೆ ಕೇಳಿ ತಂದರಾಯಿತು ಎನ್ನುವ ಅಭಿಪ್ರಾಯಕ್ಕೆ ಬಂದರು.


ಅಪರೂಪಕ್ಕೆ ಮನೆಗೆ ಬಂದ ಸ್ನೇಹಿತೆ ಲಕ್ಷ್ಮಿಯನ್ನು ಆದರದಿಂದ ಸ್ವಾಗತಿಸಿದಳು ಕಮಲಾ. ನಾಲ್ಕಾರು ಆಭರಣಗಳನ್ನು ಅವಳ ಮುಂದಿರಿಸಿ ಅವಳಿಗೆ ಒಪ್ಪಿಗೆಯಾದದ್ದು ತೆಗೆದುಕೊಳ್ಳುವಂತೆ ಸೂಚಿಸಿದಳು. ಮುತ್ತಿನ ಸರಗಳು, ಬಂಗಾರದ ನೆಕ್ಲೆಸ್, ಸೂಕ್ಷ್ಮ ಕುಸುರಿ ಕೆಲಸದ ಹಾರಗಳು ತನ್ನ ಕುತ್ತಿಗೆಗೆ ಧರಿಸಿ, ಕನ್ನಡಿಯಲ್ಲಿ ನೋಡಿಕೊಳ್ಳುತ್ತ ಲಕ್ಷ್ಮಿ 'ಬೇರೆ ಯಾವುದಾದರೂ ಇದೆಯೇ?' ಎಂದು ಸ್ನೇಹಿತೆಗೆ ಕೇಳಿದಳು. 'ನೀನೆ ನೋಡಿಕೋ' ಎಂದು ಆಭರಣ ಪೆಟ್ಟಿಗೆ ಅವಳ ಮುಂದಿರಿಸಿ ಹೇಳಿದಳು ಕಮಲಾ. ಅದರಲ್ಲಿ ನೋಡುತ್ತಿರುವಾಗ ಕಪ್ಪು ಬಣ್ಣದ ಸ್ಯಾಟಿನ್ ಬಟ್ಟೆಯ ಪೆಟ್ಟಿಗೆಯಲ್ಲಿದ್ದ ವಜ್ರದ ನೆಕ್ಲೆಸ್ ಲಕ್ಷ್ಮಿಗೆ ಇಷ್ಟವಾಗಿ ಹೋಯಿತು. ಅದನ್ನು ಧರಿಸಿ ಒಮ್ಮೆ ಕನ್ನಡಿಯಲ್ಲಿ ನೋಡಿಕೊಂಡಾಗ ಲಕ್ಷ್ಮಿಗೆ ಹರುಷದಿಂದ ಭಾವೋತ್ಕರ್ಷ ಉಂಟಾಯಿತು. ತನ್ನ ಸ್ನೇಹಿತೆಗೆ ಕೇಳಿದಳು 'ಇದೊಂದನ್ನು ಕೊಡು. ಸಾಕು'. ಅವಳ ಸ್ನೇಹಿತೆ ಉತ್ತರಿಸಿದಳು 'ಹಾಗೆಯೇ ಆಗಲಿ'.


ಪಾರ್ಟಿಯ ದಿನ ಬಂದೆ ಬಿಟ್ಟಿತು. ಹಾಗೆಯೇ ಲಕ್ಷ್ಮಿಯ ಪ್ರಯತ್ನಗಳು ಯಶಸ್ಸು ತಂದು ಕೊಟ್ಟವು. ಪಾರ್ಟಿಯಲ್ಲಿ ಶ್ರೀಮಂತ ಹೆಂಗಸರ ನಡುವೆ, ಲಕ್ಷ್ಮಿಯೇ ದೊಡ್ಡ ಆಕರ್ಷಣೆ ಆಗಿಬಿಟ್ಟಳು. ಅವಳ ಸಹಜ ಸೌಂದರ್ಯಕ್ಕೆ ಅವಳ ಉಟ್ಟ ಸೀರೆ, ಧರಿಸಿದ ವಜ್ರದ ನೆಕ್ಲೆಸ್ ಇನ್ನೂ ಹೆಚ್ಚಿನ ಮೆರಗು ತಂದು ಕೊಟ್ಟವು.  ಪಾರ್ಟಿಗೆ ಬಂದ ಹೆಣ್ಣು ಮಕ್ಕಳು ಅವಳ ಹೆಸರೇನು ಎಂದು ಕೇಳಿ ತಿಳಿದುಕೊಂಡರು. ಗಂಡಸರು ಅವಳನ್ನು ದಿಟ್ಟಿಸಿ ನೋಡಿದರು. ದೊಡ್ಡ ದೊಡ್ಡ ಶ್ರೀಮಂತರು ಅವಳನ್ನು ಮುಗುಳ್ನಗೆಯೊಂದಿಗೆ ಮಾತನಾಡಿಸಿದರು. 


ಪಾರ್ಟಿ ಮುಗಿದ ಮೇಲೆ ಒಂದು ಆಟೋ ಹಿಡಿದು ಮನೆಗೆ ಮರಳಿದರು ಅನಂತ ಮತ್ತು ಲಕ್ಷ್ಮಿ. ಮನೆಯಲ್ಲಿ ಬಟ್ಟೆ ಬದಲಾಯಿಸುವಾಗ ತನ್ನ ಕುತ್ತಿಗೆ ಬರಿದಾಗಿದ್ದು ಗಮನಿಸಿಕೊಂಡಳು ಲಕ್ಷ್ಮಿ. ಪಾರ್ಟಿಯಿಂದ ಹೊರಡುವಾಗ ಕುತ್ತಿಗೆ ಸವರಿಕೊಂಡಾಗ ಅಲ್ಲಿಯೇ ಇತ್ತು ನೆಕ್ಲೆಸ್. ಆದರೆ ಮನೆ ತಲುಪಿದಾಗ ಇರಲಿಲ್ಲ. ಅವಳ ಗಂಡ ಅದು ದಾರಿಯಲ್ಲಿ ಎಲ್ಲಿಯಾದರೂ ಬಿದ್ದಿರಬಹುದೇನೋ ಎಂದು ನೋಡಿ ಬಂದ. ಆಟೋದವನನ್ನು ಹುಡುಕಿ ವಿಚಾರಿಸಿದ. ಯಾವುದೂ ಉಪಯೋಗವಾಗಲಿಲ್ಲ. ವಜ್ರದ ನೆಕ್ಲೆಸ್ ಕಳೆದು ಹೋಗಿತ್ತು.


ವಜ್ರದ ನೆಕ್ಲೆಸ್ ಇಟ್ಟ ಬಾಕ್ಸ್ ನಲ್ಲಿ ಅದನ್ನು ತಯಾರಿಸಿದ ಆಭರಣ ಮಳಿಗೆಯ ವಿಳಾಸ ಇತ್ತು. ಅಲ್ಲಿ ಹೋಗಿ ಕಳೆದುಕೊಂಡಿದ್ದ ವಜ್ರದ ನೆಕ್ಲೆಸ್ ತರಹದ್ದು ಎಷ್ಟು ಬೆಲೆಯಾಗಬಹುದು ಎಂದು ವಿಚಾರಿಸಿದರು. ಸುಮಾರು ನಾಲ್ಕೂವರೆ ಲಕ್ಷ ಬೆಲೆಯ ನೆಕ್ಲೆಸ್ ಅದಾಗಿತ್ತು. ಆ ಹಣವನ್ನು ಅನಂತ ಎಲ್ಲಿಂದಲೋ ಸಾಲ ತಂದ. ಅದನ್ನು ಖರೀದಿಸಿ ಆ ನೆಕ್ಲೆಸ್ ಅನ್ನು ತನ್ನ ಸ್ನೇಹಿತೆ ಕಮಲಾಳ ಮನೆಗೆ ಹೋಗಿ ಹಿಂತಿರುಗಿಸಿದಳು ಲಕ್ಷ್ಮಿ. ಅದರ ಬಾಕ್ಸ್ ನ್ನು ತೆರೆದು ಕೂಡ ನೋಡಲಿಲ್ಲ ಕಮಲಾ. ಅದನ್ನು ಯಾವುದೊ ಒಂದು ಸಲ ಹಾಕಿಕೊಂಡಿದ್ದು, ಮತ್ತೆ ಅದನ್ನು ಧರಿಸಲು ತನಗೆ ಇಷ್ಟ ಇಲ್ಲ ಎಂದು ಕೂಡ ಹೇಳಿದಳು.


ಮಾಡಿದ ಸಾಲ ಅನಂತ ಮತ್ತು ಲಕ್ಷ್ಮಿ ಕುಟುಂಬಕ್ಕೆ ಹೊರೆಯಾಗಿ ಬಿಟ್ಟಿತು. ಬಡ್ಡಿ ತೀರಿಸಲು ಹಣ ತೆತ್ತು, ಅವರ ಕುಟುಂಬ ಬಡತನದಿಂದ ಕಡು ಬಡತನಕ್ಕೆ ಇಳಿದುಬಿಟ್ಟಿತು. ಮನೆ ಕೆಲಸದವರನ್ನು ಬಿಡಿಸಿ ಮನೆ ಕೆಲಸವನ್ನು ತಾನೇ ಮಾಡಿಕೊಳ್ಳತೊಡಗಿದಳು ಲಕ್ಷ್ಮಿ. ಅನಂತ ಸಾಯಂಕಾಲ ಕೂಡ ಬೇರೆ ಕೆಲಸಕ್ಕೆ ಹೋಗಲಾರಂಭಿಸಿದ್ದ. ಸಾಲ ಮುಟ್ಟಲು ಕೆಲ ವರುಷಗಳೇ ಹಿಡಿದವು. ಆದರೆ ಅಷ್ಟರಲ್ಲಿ ಲಕ್ಷ್ಮಿಯ ಮುಖದಲ್ಲಿ ಹೊಳಪು ಎಲ್ಲ ಕಳೆದು ಹೋಗಿ, ಮುಖ ಸುಕ್ಕು ಗಟ್ಟಿತ್ತು. ಹತ್ತಾರು ವರುಷಗಳು ಹೆಚ್ಚಿಗೆ ವಯಸ್ಸಾಗಿರುವಂತೆ ಅವಳು ಕಾಣುತ್ತಿದ್ದಳು.


ಒಂದು ಸಂಜೆ ಮಾರುಕಟ್ಟೆಯಲ್ಲಿ ಕಮಲಾಳನ್ನು ನೋಡಿದ ಲಕ್ಸ್ಮಿ ಅವಳನ್ನು ಮಾತನಾಡಿಸಿದಳು. ಗುರುತು ಸಿಗದಂತೆ ಆಗಿದ್ದ ಲಕ್ಷ್ಮಿಯನ್ನು ನೋಡಿದ ಕಮಲಾ ಏನು ತೊಂದರೆ ಎಂದು ಕೇಳಿದಳು. 'ಅದಕ್ಕೆಲ್ಲ ನಿನ್ನ ವಜ್ರದ ನೆಕ್ಲೆಸ್ ಕಾರಣ' ಎಂದು ಹೇಳಿದಳು ಲಕ್ಷ್ಮಿ. ಅದು ತನಗೆ ಅರ್ಥವಾಗಲಿಲ್ಲ ಎನ್ನುವಂತೆ 'ಅದ್ಹೇಗೆ?' ಎಂದು ಪ್ರಶ್ನಿದಳು ಕಮಲಾ. ಅದನ್ನು ಕಳೆದುಕೊಂಡಿದ್ದು ಮತ್ತು ಅದೇ ತರಹದ ಇನ್ನೊಂದು ವಜ್ರದ ನೆಕ್ಲೆಸ್ ತರಲು ಸಾಲ ಮಾಡಿ ಬವಣೆ ಪಟ್ಟಿದ್ದು ಎಲ್ಲವನ್ನು ವಿವರಿಸಿದಳು ಲಕ್ಷ್ಮಿ. 


ಅದನ್ನು ಕೇಳಿ ಮಮ್ಮಲ ಮರುಗಿದ ಕಮಲಾ, ಲಕ್ಷ್ಮಿಯ ಎರಡು ಕೈಗಳನ್ನು ತನ್ನ ಕೈಯಲ್ಲಿ ತೆಗೆದುಕೊಂಡು ಹೇಳಿದಳು 'ನಿನ್ನ ಪರಿಸ್ಥಿತಿ ನೋಡಿ ಸಂಕಟವಾಗುತ್ತದೆ ಲಕ್ಷ್ಮಿ. ನನ್ನ ವಜ್ರದ ನೆಕ್ಲೆಸ್ ಅಸಲಿಯದ್ದಾಗಿರಲಿಲ್ಲ. ಅದಕ್ಕೆ ಎರಡು ಸಾವಿರ ಕೊಟ್ಟಿದ್ದೆ ಅಷ್ಟೇ'