Thursday, March 24, 2022

ಅತ್ತೆ-ಸೊಸೆ ಜಗಳ ಸಾಮಾನ್ಯವಾದಷ್ಟು ಇತರ ಜಗಳಗಳು ಏಕಲ್ಲ?

ಹೆಂಡತಿಗೆ ಅತ್ತೆ ಇದ್ದ ಹಾಗೆ, ಗಂಡನಿಗೂ ಅತ್ತೆ ಇರುತ್ತಾಳೆ. ಆದರೆ ಹೆಂಡತಿ ಅತ್ತೆ ಕಾಟ ಎಂದು ಸಂಕಟ ಪಟ್ಟಷ್ಟು ಗಂಡ ಸಂಕಟ ಪಡುವುದಿಲ್ಲ. ಅದು ಏಕಿರಬಹುದು?


ಮೊದಲಿಗೆ ಗಮನಿಸಬೇಕಾದ ಅಂಶವೆಂದರೆ, ಅತ್ತೆ-ಸೊಸೆ ಒಂದೇ ಮನೆಯಲ್ಲಿ ಇರಬೇಕು. ಆದರೆ ಗಂಡಸು ತನ್ನ ತಾಯಿಯ ಜೊತೆ ವಾಸಿಸುತ್ತಾನೆ, ಅತ್ತೆಯ ಜೊತೆ ಅಲ್ಲ. ಹಾಗಾಗಿ ಅವನಿಗೆ ಅತ್ತೆಯ ಕಾಟ ಇರದೇ ಹೋಗಬಹುದು. ಆದರೆ ಎಷ್ಟೋ ಗಂಡ-ಹೆಂಡತಿಯರು ಬೇರೆ ಮನೆ ಮಾಡಿಕೊಂಡು ಅತ್ತೆ-ಸೊಸೆ ಬೇರೆ ಬೇರೆ ವಾಸಿಸುತ್ತಿದ್ದರೂ, ಸೊಸೆಗೆ ಅತ್ತೆಯ ಕಂಡರೆ ಹಾಗೆಯೆ ಅತ್ತೆಗೆ ಸೊಸೆಯನ್ನು ಕಂಡರೆ ಆಗಿಬರುವುದಿಲ್ಲ. ಅದಕ್ಕೇನು ಹೇಳುತ್ತೀರಿ? ಕೆಲ ಗಂಡಸರು ಮನೆ ಅಳಿಯನಾಗಿ ಹೋಗಿರುತ್ತಾರಲ್ಲ. ಅವರಿಗೆ ಅತ್ತೆಯ ಕಾಟ ಇರುತ್ತೋ, ಇಲ್ಲವೋ? ನನಗೆ ಈ ವಿಷಯ ಗೊತ್ತಿಲ್ಲವಾದ್ದರಿಂದ ಕೇಳಿ ತಿಳಿಯಬೇಕು.


ಈ ಜಗಳಗಳೆಲ್ಲ ಹೆಣ್ಣು-ಹೆಣ್ಣುಗಳಲ್ಲಿ ಹೆಚ್ಚು. ಆದ್ದರಿಂದ ಅತ್ತೆ-ಸೊಸೆ ಜಗಳವಿದ್ದ ಹಾಗೆ ಅತ್ತೆ-ಅಳಿಯನ ಜಗಳ ಇರಲು ಸಾಧ್ಯವಿಲ್ಲ ಎನ್ನುವುದಾದರೆ ಗಂಡಸು-ಗಂಡಸರ ನಡುವೆ ಅಳಿಯ-ಮಾವನ ಜಗಳ ಇರಲು ಸಾಧ್ಯವೇ? ಮಾವನಿಗೆ ಅವನದೇ ಲೋಕ. ಅಳಿಯನಿಗೂ ಕೂಡ ಅವನದ್ದೇ ಆದ ಲೋಕ ಇರುತ್ತಾದ್ದರಿಂದ ಅವರು ಅದರಿಂದ ಹೊರ ಬಂದು ಜಗಳ ಕಾಯುವ ಸಾಧ್ಯತೆ ಕಡಿಮೆಯೇ ಎನ್ನಬಹುದು. ಒಂದು ವೇಳೆ ಮಾವ-ಅಳಿಯ ಜಗಳಕ್ಕೆ ಬಿದ್ದರೂ ಅದರಲ್ಲಿ ಯಾರೋ ಒಬ್ಬರು ಗೆದ್ದು ಸಮಸ್ಯೆ ಸ್ವಲ್ಪ ಸಮಯದಲ್ಲೇ ಇತ್ಯರ್ಥ ಆಗಿಬಿಡುತ್ತದೆ. ಗಂಡಸು ಕೋಳಿ ಜಗಳ ಎಲ್ಲಿ ಇಷ್ಟ ಪಡುತ್ತಾನೆ? ಇಷ್ಟಕ್ಕೂ ಅವಶ್ಯಕತೆ ಬಿದ್ದಾಗ ಜಗಳಕ್ಕೆ ಸಿದ್ಧವಾಗದ ಗಂಡಸಿಗೆ ಸಮಾಜ ಎಲ್ಲಿ ಬೆಲೆ ಕೊಡುತ್ತದೆ? ಹೇಡಿ ಎಂದು ಜರಿದು ಅವನನ್ನು ಕೆರಳಿಸಿ, ಅವನಿಂದ ಸೋಲೋ-ಗೆಲುವೋ ಎನ್ನುವ ಫಲಿತಾಂಶ ಬರಲು ಬಹು ಸಮಯ ತೆಗೆದುಕೊಳ್ಳುವುದಿಲ್ಲ. ಆ ಜಗಳ ಬಹು ಕಾಲ ಉಳಿಯುದಿಲ್ಲವಾದ್ದರಿಂದ, ಮಾವ-ಅಳಿಯರ ಜಗಳಗಳು ಅಷ್ಟು ಸಾಮಾನ್ಯವಾಗಿ ಕಂಡು ಬರುವುದಿಲ್ಲ.


ಇನ್ನೊಂದು ಕಡೆ ಹೆಂಗಸು-ಗಂಡಸಿನ ಜಗಳಗಳು ಯಾರೋ ಒಬ್ಬರು ಇನ್ನೊಬ್ಬರನ್ನು ಕ್ಷಮಿಸುವುದರೊಂದಿಗೆ ಇಲ್ಲವೇ  ಇವರ ಹಣೆ ಬರಹ ಇಷ್ಟೇ ಬಿಡು ಅನ್ನುವುದರೊಂದಿಗೆ ಇತ್ಯರ್ಥ ಆಗಿಬಿಡುತ್ತವೆ. ಸೊಸೆ ಅತ್ತೆಯ ಜೊತೆ ಜಗಳ ಕಾದಷ್ಟು ಸುಲಭವಾಗಿ, ಅನವಶ್ಯಕವಾಗಿ ಮಾವನ ಜೊತೆ ಜಗಳ ಕಾಯಲು ಹೋಗುವುದಿಲ್ಲ. ಹಾಗೆಯೇ ಅತ್ತೆ ಕೂಡ ಅಳಿಯನನ್ನು ಬೈಯುವಷ್ಟು ಬೈದು ಸುಮ್ಮನಾಗಿ ಬಿಡುತ್ತಾಳೆ. ಗಂಡ-ಹೆಂಡತಿಯರು ಏನು ಜಗಳ ಕಾದರೂ ಒಬ್ಬರಿಗೆ ಇನ್ನೊಬ್ಬರ ಅವಶ್ಯಕತೆ ಇರುತ್ತದಲ್ಲ. ಅವನು ಹೋಗಿ ಸಕ್ಕರೆ ತಂದರೆ ಇವಳು ಚಹಾ ಮಾಡುತ್ತಾಳೆ. ಅದಕ್ಕೆ ನೋಡಿ ಗಂಡ-ಹೆಂಡತಿ ಜಗಳ ಬಿಡಿಸಲು, ಸಂಧಾನಕ್ಕೆ ಹೋಗಲು ಹತ್ತಾರು ಜನ ರೆಡಿ. ಆದರೆ ಅತ್ತೆ-ಸೊಸೆ ಜಗಳ ಬಿಡಿಸಲು ಹೋಗುವರೆಷ್ಟು ಜನ?

 


ಕೊನೆಗೆ ಇದು ಅತ್ತೆ-ಸೊಸೆ ಜಗಳ ಸಾಮಾನ್ಯವಾಗಿ ಕಂಡು ಬಂದಷ್ಟು ಅತ್ತೆ-ಅಳಿಯನ, ಮಾವ-ಅಳಿಯನ ಅಥವಾ ಸೊಸೆ-ಮಾವನ ಜಗಳ ಕಂಡು ಬರುವುದಿಲ್ಲ ಎನ್ನುವಲ್ಲಿಗೆ ಬಂದು ನಿಲ್ಲುತ್ತದೆ. ಈ ಅತ್ತೆ-ಸೊಸೆ ಒಂದೇ ಸೂರಿನಡಿ ವಾಸಿಸದಿದ್ದರೂ, ಅವರ ನಡುವೆ ಜಗಳ ಕಾಯುವ ವಿಷಯ ಗಂಡಸೇ ಆಗಿರುತ್ತಾನೆ. ಆ ಗಂಡಸು ತುತ್ತಾ-ಮುತ್ತಾ ಎಂದು ಎಂದು ಹಾಡಿದರೆ, ಅವನ ತಾಯಿ ಮತ್ತು ಹೆಂಡತಿ ನಾನಾ-ನೀನಾ ಎನ್ನುವ ಸ್ಪರ್ಧೆಯಿಂದ ಹಿಂದೆ ಸರಿಯುವುದೇ ಇಲ್ಲ. ಅವರಲ್ಲಿ ಯಾರೋ ಒಬ್ಬರು ಮಚ್ಚು ಎತ್ತಿ ಕೊಲೆ ಮಾಡುವ ಧೈರ್ಯ ಮಾಡುವುದೂ ಇಲ್ಲ. ಮತ್ತು ಜಗಳ ಅಲ್ಲಿಗೆ ಬಿಟ್ಟು ಬಿಡುವ ದೊಡ್ಡ ಮನಸ್ಸು ಕೂಡ ಮಾಡುವದಿಲ್ಲ. ಬಿಡದ ಜಿಟಿ ಜಿಟಿ ಮಳೆಯಂತೆ, ಅತ್ತ ತೊಯ್ಯಿಸದು ಇತ್ತ ನೆಮ್ಮದಿಯಿಂದ ಓಡಾಡಲು ಬಿಡದು ಎನ್ನುವಂತೆ ಅವರ ಜಗಳ ನಿರಂತರ  ಆಗಿರುತ್ತದೆ.


ಕಾಲಾಂತರದಲ್ಲಿ ಸೊಸೆ ಅತ್ತೆಯ ಸ್ಥಾನಕ್ಕೆ ಬಂದರೂ ಯಾವುದೇ ಬದಲಾವಣೆ ಆಗುವುದಿಲ್ಲ. ಏಕೆಂದರೆ ಅವರಿಗೆ ಸಮಸ್ಯೆ ಬಗೆ ಹರಿಸಿಕೊಳ್ಳುವುದು ಬೇಕಿಲ್ಲ ಹಾಗಾಗಿ ಅವರ ನಡುವೆ ಯಾವುದೇ ರಾಜಿ-ಸಂಧಾನಗಳು ಫಲಪ್ರದವಾಗುವುದಿಲ್ಲ. ಸೂರ್ಯ-ಚಂದ್ರರು ತಮ್ಮ ತಮ್ಮ ಸಮಯಕ್ಕೆ  ಆಕಾಶವನ್ನು ಆಕ್ರಮಿಸಿಕೊಂಡಂತೆ, ಅವರ ಹೊಳಪಿನಲ್ಲಿ ಇತರೆ ನಕ್ಷತ್ರಗಳು ಮಂಕಾಗಿ ಕಾಣುವಂತೆ,  ಕುಟುಂಬವೆಂಬ ಆಕಾಶದಲ್ಲಿ ಅತ್ತೆ-ಸೊಸೆಯರ ಅಸಮಾಧಾನಗಳು ಕೂಡ ನಿರಂತರ. ಇತರೆ ಎಲ್ಲ ಜಗಳಗಳು ಒಮ್ಮೆ ಹೊಳೆದು ಮರೆಯಾಗಿ ಹೋಗುವ ನಕ್ಷತ್ರಗಳ ತರಹ.

Wednesday, March 23, 2022

ಹಿತಶತ್ರುವೆಂಬ ಮಹಾನ್ ಗುರು

ಎದೆಯ ದೀಪ ಹೊತ್ತಿಸಲು,

ಆತ್ಮದ ಅಜ್ಞಾನ ಕಳೆಯಲು, 

ಮೂರ್ಖ ಮಿತ್ರನಿಗಿಂತ, 

ಬುದ್ದಿವಂತ ಶತ್ರುವೇ ಲೇಸು

 

- ರೂಮಿ, ಪರ್ಷಿಯಾ ದೇಶದ ಕವಿ



ಸಾಧಾರಣವಾಗಿ ನಮಗೂ, ನಮ್ಮ ಶತ್ರುಗಳಿಗೂ ನಡುವಳಿಕೆಗಳಲ್ಲಿ, ವಿಚಾರ ಶೈಲಿಯಲ್ಲಿ ಅಥವಾ ಜೀವನದ ಉದ್ದೇಶಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿರುತ್ತವೆ. ಅದಕ್ಕೆ ಅವರಿಗೂ ನಮಗೂ ಆಗದೆ ಶತ್ರುತ್ವ ಬೆಳೆದಿರುತ್ತದೆ. ಆದರೆ ಹಿತಶತ್ರುಗಳು? ಅವರು ನಮ್ಮೊಡನೆ, ನಮ್ಮ ಸ್ನೇಹಿತರ ಹಾಗೆ ಇರುತ್ತಾರೆ. ಮೇಲ್ನೋಟಕ್ಕೆ ಅವರ ಉದ್ದೇಶಗಳ ಅರ್ಥ ನಮಗಾಗದೆ ಹೋಗಿರುತ್ತದೆ. ಅವರ ಮೇಲೆ ಸಂಶಯ ಪಡಲು ಯಾವುದೇ ಕಾರಣ ಇರುವುದಿಲ್ಲ. ಆದರೆ ಪೆಟ್ಟಿಗೆ ಬಿದ್ದಾಗ ಇದು ಏನು ಎಂದು ಅರಿತುಕೊಳ್ಳಲು ಸಾಕಷ್ಟು ಸಂಶೋಧನೆ ನಡೆಸಿದಾಗ, ಈ ಹಿತ ಶತ್ರುಗಳ ನಿಜ ಬಣ್ಣ ಬಯಲಾಗುತ್ತ ಹೋಗುತ್ತದೆ. ಮಹಾಭಾರತದ ಶಕುನಿ ಕೌರವರ ನಾಶಕ್ಕೆ ಒಳ ಸಂಚು ಹಾಕಿದಂತೆ ನಮ್ಮ ಹಿತ ಶತ್ರುಗಳು ನಮ್ಮ ವಿನಾಶಕ್ಕೆ ಪಟ್ಟು ಹಾಕಿರುವುದು ಮೆಲ್ಲಗೆ ಅರಿವಿಗೆ ಬರುತ್ತಾ ಹೋಗುತ್ತದೆ.

 

ಇವರ ಮೇಲೆ ಸಂಶಯ ಪಟ್ಟರೆ ಮೊದಮೊದಲಿಗೆ ಯಾರೂ ನಿಮ್ಮನ್ನು ನಂಬುವುದಿಲ್ಲ. ಬದಲಿಗೆ ನಿಮ್ಮ ತಲೆ ನೆಟ್ಟಗಿದೆಯೋ ಎನ್ನುವಂತೆ ನೋಡುತ್ತಾರೆ. ಹಾಗಾಗಿ ನಿಮಗೆ ವಿಷಯದ ಬಗ್ಗೆ ಸ್ಪಷ್ಟತೆ ಬರಲು ಯಾರೂ ಜೊತೆಗಾರರು ಅಥವಾ ಯಾವುದೇ ತರಹದ ನೆರವು ದೊರಕುವುದಿಲ್ಲ. ಎರಡನೆಯದು ಅವರು ನಿಮ್ಮ ಹಿತೈಷಿಗಳಂತೆ ಸಮಾಜಕ್ಕೆ ತೋರುವುದರಿಂದ ನಿಮ್ಮ ಬಗೆಗಿನ ಎಲ್ಲ ಮಾಹಿತಿ ಅವರಿಗೆ ಲಭ್ಯ. ಎಲ್ಲಕ್ಕಿಂತ ಮುಖ್ಯವಾಗಿ ಅವರನ್ನು ಪ್ರಬಲವಾಗಿ ವಿರೋಧಿಸಿದರೆ, ಜನ ನಿಮ್ಮನ್ನು ತಪ್ಪಾಗಿ ತಿಳಿದುಕೊಳ್ಳುವ ಸಾಧ್ಯತೆಯೇ ಹೆಚ್ಚು. ಈ ಎಲ್ಲ ಅನುಕೂಲಗಳನ್ನು ನಿಮ್ಮ ಹಿತಶತ್ರುಗಳು ಬಳಸಿಕೊಂಡು ನಿಮ್ಮ ಸುತ್ತ ಬಲೆ ಹೆಣೆಯತೊಡಗುತ್ತಾರೆ. ಇದು ನಿಮಗೆ ಅರಿವಿಗೆ ಬಂದರೂ ಆ ಕ್ಷಣದಲ್ಲಿ ನೀವು ನಿಸ್ಸಹಾಯಕರು. ಕಷ್ಟ ಪಟ್ಟು ನೀವು ಸಾಕ್ಷಿ, ಆಧಾರಗಳನ್ನು ಕಲೆ ಹಾಕಿ ಅವರನ್ನು ತೆರೆದಿಡುತ್ತಾ ಹೋಗುವವರೆಗೆ ನೀವು ಒಬ್ಬಂಟಿ. ಹಾಗೆಂದು ಅವರು ಸೋಲಿಲ್ಲದ ಸರದಾರರೇನಲ್ಲ.

 

ಕುಸ್ತಿಯ ಪಟ್ಟುಗಳನ್ನು ನೀವು ಕಲಿಯುತ್ತ ಹೋದಂತೆ ನಿಮಗೆ ವಿಷಯ ಅರಿವಾಗಿದೆ ಎಂಬ ಸೂಕ್ಷ್ಮ ಅರಿವು ಅವರಿಗೆ ಬಂದು ಬಿಡುತ್ತದೆ. ಅಲ್ಲಿಂದ ಅವರು ನಿಮ್ಮ ಮೇಲಿನ ಹಿಡಿತ ಸಡಿಲಿಸಬಹುದು ಅಥವಾ ಬಹಿರಂಗ ಜಗಳಗಳಿಗೆ ಇಳಿಯಬಹುದು. ಅದು ಬೇಗನೆ ಬಹಿರಂಗಗೊಂಡಷ್ಟು ನಿಮಗೆ ಅನುಕೂಲ ಜಾಸ್ತಿ. ಅವರ ಉದ್ದೇಶ ಅರಿವಾದಂತೆ ಅವರ ಶತ್ರುಗಳು ನಿಮ್ಮ ಸ್ನೇಹಿತರಾಗುತ್ತಾರೆ ಮತ್ತು ನಿಮ್ಮ ಬಲಹೀನತೆಗಳ ಮಾಹಿತಿ ಅವರಿಗೆ ದೊರಕುವ ಸಾಧ್ಯತೆ ಕಡಿಮೆ ಆಗುತ್ತದೆ. ಆದರೆ ಅಲ್ಲಿಯವರೆಗಿನ ಶೀತಲ ಸಮರ ನಿಮಗೆ ಮನುಷ್ಯ ಕುಲದ ವಿಚಿತ್ರ ಮತ್ತು ವಿಲಕ್ಷಣ ಎನ್ನಿಸುವ ಗುಣ-ಸ್ವಭಾವಗಳ ದರ್ಶನ ಮಾಡಿಸುತ್ತ ಹೋಗುತ್ತದೆ.

 

ಹಿತ ಶತ್ರುಗಳನ್ನು ನಾನೇಕೆ ಮಹಾನ್ ಗುರು ಎಂದೆನೆಂದು ನಿಮಗೆ ಈಗಾಗಲೇ ಅಂದಾಜು ಬಂದಿರಬಹುದು. ಏಕೆಂದರೆ ಹಿತೈಷಿಗಳು ಎಂದು ತೋರಿಸಿಕೊಂಡವರೆಲ್ಲ ನಂಬಿಕೆಗೆ ಅರ್ಹರಲ್ಲ ಎನ್ನುವ ಪಾಠ ಅವರು ನಮಗೆ ಕಲಿಸಿರುತ್ತಾರೆ. ನಮ್ಮ ದೌರ್ಬಲ್ಯಗಳನ್ನು ಹಂಚಿಕೊಳ್ಳುವ ಮುನ್ನ ನಾವು ಹುಷಾರಾಗಿ ಇರಬೇಕು ಇಲ್ಲದಿದ್ದರೆ ಅವುಗಳು ನಮ್ಮ ಮೇಲೆಯೇ ಪ್ರಯೋಗಿಸಲ್ಪಡುತ್ತವೆ  ಎನ್ನುವ ಅರಿವು ಅವರು ನಮಗೆ ಮೂಡಿಸಿರುತ್ತಾರೆ. ಅವರ ಮೇಲೆ ಜಗಳಕ್ಕೆ ಹೋಗುವ ಮುನ್ನ ಯಾವ ಸ್ನೇಹಿತರು ನಮ್ಮ ನೆರವಿಗೆ ಬಂದಾರು ಮತ್ತು ಯಾರ ಬೆಂಬಲ ನಮಗೆ ಸಿಕ್ಕೀತು ಎಂದು ತಿಳಿದಿಕೊಳ್ಳುವ ಪ್ರಜ್ಞೆ ನಮ್ಮಲ್ಲಿ ಬೆಳೆಯುವಂತೆ ಮಾಡಿರುತ್ತಾರೆ.

 

ಲೆಕ್ಕಕ್ಕೆ ಸಿಗದ ಎಷ್ಟೋ ಪಾಠಗಳನ್ನು ಜೀವನ ನಮಗೆ ನಿಧಾನವಾಗಿ ಕಲಿಸುತ್ತ ಹೋಗುತ್ತದೆ. ಆದರೆ ನಮ್ಮ ಹಿತಶತ್ರುಗಳು ನಮ್ಮನ್ನು ಶೀಘ್ರ ಹಾದಿಯಲ್ಲಿ ಅಲ್ಲಿಗೆ ತಲುಪುವಂತೆ ಮಾಡುತ್ತಾರೆ. ಅನುಭವಕ್ಕಿಂತ ದೊಡ್ಡ ಗುರು ಇಲ್ಲವಾದರೆ, ಅಂತಹ ಅನುಭವ ಕೊಡುವ ನಮ್ಮ ಹಿತಶತ್ರುಗಳು ನಮಗೆ ಮಹಾನ್ ಗುರುಗಳಲ್ಲದೆ ಇನ್ನೇನು? ಒಂದೆರಡು ಸಲ ಅನುಭವ ಆದ ಮೇಲೆ ಅವರನ್ನು ದೂರದಿಂದಲೇ ಗುರುತಿಸುವ ಮತ್ತು ಅವರಿಂದ ತೊಂದರೆ ಆಗದಂತೆ ಎಚ್ಚರ ವಹಿಸುವ ಗುಣಗಳು ನಮ್ಮಲ್ಲಿ ಅಡಕವಾಗುತ್ತ ಹೋಗುತ್ತವೆ. ಇಂತಹ ಅನುಭವಗಳು ಚಿಕ್ಕ ವಯಸ್ಸಿನಲ್ಲೇ ಆದಷ್ಟು ಒಳ್ಳೆಯದು. ಆದರೆ ಎಲ್ಲರ ಜೀವನವು ಒಂದೇ ತರಹ ಎಲ್ಲಿರುತ್ತದೆ? ಅಥವಾ ನಿಮಗೆ ಈ ವಿಷಯದಲ್ಲಿ ನನಗಿಂತ ಹೆಚ್ಚಿನ ಪರಿಣಿತಿ ಇರಬಹುದು. ಆದರೂ ನಿಮ್ಮ ಹತ್ತಿರ ಅಂತರಂಗ ಅರಿತುಕೊಂಡ ವಿಷಯಗಳನ್ನು ಹಂಚಿಕೊಂಡಾಗಲೇ ಸಮಾಧಾನ. ನಿಮ್ಮ ಅಭಿಪ್ರಾಯ ಏನು?

Saturday, March 19, 2022

ಕಥೆ: ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ

(ಇದು ರವೀಂದ್ರನಾಥ ಟಾಗೋರ್ ಅವರು ಬರೆದ 'Once there was a king' ಕಥೆಯ ಭಾವಾನುವಾದ)


"ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ"


ನಾವು ಮಕ್ಕಳಾಗಿದ್ದಾಗ ಆ ಕಥೆಯಲ್ಲಿರುವ ರಾಜ ನಿಖರವಾಗಿ ಯಾರು ಎಂದು ತಿಳಿದುಕೊಳ್ಳುವ ಅವಶ್ಯಕತೆ ಇರಲಿಲ್ಲ. ಅವನ ಹೆಸರು ವಿಕ್ರಮಾದಿತ್ಯನೋ ಅಥವಾ ಬೇರೆಯೋ ಆಗಿದ್ದರೆ ಮತ್ತು ಅವನು ಆಳಿದ್ದು ಕಾಶಿಯಲ್ಲೋ ಇಲ್ಲವೇ ಉಜ್ಜಯಿನಿಯಲ್ಲೋ ಆಗಿದ್ದರೂ ನಮಗೆ ಯಾವ ವ್ಯತ್ಯಾಸವೂ ಅನ್ನಿಸುತ್ತಿರಲಿಲ್ಲ. ಏಳು ವರುಷದ ಹುಡುಗನ ಹೃದಯ ಬಡಿತ ಸಂತೋಷದಿಂದ ಏರಲು ಕಥೆ ಶುರುವಾಗಿದ್ದರೆ ಸಾಕಿತ್ತು "ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ ..."


ಆದರೆ ಇಂದಿನ ಕಾಲದ ಕೆಲವು ಓದುಗರಿಗೆ ಅದು ಸಾಕಾಗುವುದಿಲ್ಲ. ಅವರಿಗೆ ವ್ಯಕ್ತಿ ಮತ್ತು ಸ್ಥಳಗಳ ಹೆಸರುಗಳು ಕರಾರುವಕ್ಕಾಗಿ ಇರಬೇಕು. ಇಲ್ಲದಿದ್ದರೆ ಅವರು ಶುರುವಲ್ಲಿಯೇ ಕೇಳಿಬಿಡುತ್ತಾರೆ "ಅದು ಯಾವ ರಾಜ?"


ಹಾಗಾಗಿ ಕಥೆ ಹೇಳುವವರು ಖಚಿತವಾದ ಮಾಹಿತಿಯೊಂದಿಗೆ ಕಥೆ ಹೇಳಲು ಶುರು ಮಾಡುತ್ತಾರೆ "ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ. ಅವನ ಹೆಸರು ಅಜಾತಶತ್ರು"


ಆದರೆ ಆಧುನಿಕ ಕಾಲದ ಓದುಗರಿಗೆ ಇಷ್ಟು ಸಾಕಾಗುವುದಿಲ್ಲ. ಕಣ್ಣು ರೆಪ್ಪೆ ಬಡಿಯುವುದರಲ್ಲೇ ಕೇಳಿ ಬಿಡುತ್ತಾರೆ "ಯಾವ ಅಜಾತಶತ್ರು?"


ಆಗ ಕಥೆಗಾರ ಸ್ಪಷ್ಟನೆ ಕೊಡಲಾರಂಭಿಸುತ್ತಾನೆ. ಇತಿಹಾಸದಲ್ಲಿ ಮೂವರು ಅಜಾತಶತ್ರುಗಳಿದ್ದಾರೆ. ಮೊದಲನೆಯವನು ಕ್ರಿ.ಪೂ. ಎರಡನೇ ಶತಮಾನದಲ್ಲಿ ಹುಟ್ಟಿ, ಸಣ್ಣ ವಯಸ್ಸಿನಲ್ಲೇ ಸಾಯುತ್ತಾನೆ. ಅವನ ಬಗ್ಗೆ ಹೆಚ್ಚಿನ ಮಾಹಿತಿ ಯಾರಿಗೂ ತಿಳಿದಿಲ್ಲ. ಎರಡನೆಯ ಅಜಾತಶತ್ರುವಿನ ಬಗ್ಗೆ ಸಾಕಷ್ಟು ಮಾಹಿತಿಯನ್ನು ಇತಿಹಾಸಕಾರರು ದಾಖಲಿಸಿದ್ದಾರೆ. ನೀವು ಎನ್ ಸೈಕ್ಲೊಪೀಡಿಯಾ ತೆಗೆದು ನೋಡಿದರೆ ..."


ಆಗ ಆಧುನಿಕ ಕಾಲದ ಓದುಗರ ಸಂಶಯ ನಿವಾರಣೆ ಆಗುತ್ತದೆ.


ಇಂಗ್ಲಿಷ್ ಭಾಷೆಯಲ್ಲಿ ಒಂದು ಗಾದೆ ಮಾತಿದೆ. "ನೀವು ಯಾವ ಪ್ರಶ್ನೆ ಕೇಳದಿದ್ದರೆ, ನಾನು ಯಾವ ಸುಳ್ಳು ಹೇಳುವುದಿಲ್ಲ". ಕಥೆ ಇಷ್ಟ ಪಡುವ ಎಲ್ಲ ಚಿಕ್ಕ ಹುಡುಗರಿಗೂ ಈ ವಿಷಯ ಚೆನ್ನಾಗಿ ಗೊತ್ತಿರುತ್ತದೆ. ಹಾಗಾಗಿ ಅವರು ಕಥೆ ಕೇಳುವಾಗ ಪ್ರಶ್ನಿಸದೆ, ಸುಂದರ ಸುಳ್ಳುಗಳನ್ನು, ಪಾರದರ್ಶಕ ಸತ್ಯವೆಂದೇ ಒಪ್ಪಿಕೊಂಡು ಕಾಲ್ಪನಿಕ ಕಥೆಯಲ್ಲಿ ಮುಳುಗಿ ಹೋಗುತ್ತಾರೆ.


ಒಂದು ದಿನ ಸಂಜೆ ಆ ಕಥೆ ಕೇಳಿದ ದಿನ ನನಗೆ ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಮಳೆ, ಬಿರುಗಾಳಿ ಅಂದು ಕಲ್ಕತ್ತೆಯಲ್ಲಿ ಪ್ರವಾಹವನ್ನೇ ಸೃಷ್ಟಿಸಿದ್ದವು. ನಮ್ಮ ಬೀದಿಯಲ್ಲಿ ಮೊಳಕಾಲಿನವರೆಗೆ ನೀರು ಹರಿಯುತ್ತಿತ್ತು. ಮನೆಯ ಜಗುಲಿಯಲ್ಲಿ, ಮಳೆಯನ್ನೇ ನೋಡುತ್ತಾ ನನಗೆ ಟ್ಯೂಷನ್ ಹೇಳಿಕೊಡುವ ಶಿಕ್ಷಕರು ಬಂದೇ ಬಿಡುತ್ತಾರೇನೋ ಎನ್ನುವ ಆತಂಕದಲ್ಲಿ ಕುಳಿತಿದ್ದೆ. ಮನದಲ್ಲಿ 'ಮಳೆ ಕಡಿಮೆ ಆಗದಿರಲಿ ದೇವರೇ' ಎಂದು ಕೇಳಿಕೊಳ್ಳುತ್ತಿದ್ದೆ. ದೇವರಿಗೆ ನನ್ನ ಪ್ರಾರ್ಥನೆ ಕೇಳಿಸಿದಂತೆ ಮಳೆ ಕಡಿಮೆಯೇ ಆಗಲಿಲ್ಲ. ಆದರೆ ನನ್ನ ಶಿಕ್ಷಕರು ಕೂಡ ಬಿಡಲು ತಯಾರಿರಲಿಲ್ಲ. ಸಮಯಕ್ಕೆ ಸರಿಯಾಗಿ ಅವರು ಕೊಡೆ ಹಿಡಿದು ಬರುವುದನ್ನು ನೋಡಿಯೇ ಬಿಟ್ಟೆ. ಕೂಡಲೇ ಮನೆಯೊಳಗೇ ಓಡಿ ಹೋದೆ. ನನ್ನ ಅಮ್ಮ, ಅಜ್ಜಿಯ ಜೊತೆ ಮಾತನಾಡುತ್ತ ಕೂತಿದ್ದರು. ನಾನು ಅಮ್ಮನ ಪಕ್ಕ ಮುದುರಿ ಕೂತು 'ಅಮ್ಮ, ಶಿಕ್ಷಕರು ಬಂದಿದ್ದಾರೆ. ಆದರೆ ನನಗೆ ವಿಪರೀತ ತಲೆ ನೋವು. ಇವತ್ತು ನನಗೆ ಟ್ಯೂಷನ್ ಬೇಡ.'


ಬುದ್ಧಿ ತಿಳಿಯದ ಆ ವಯಸ್ಸಿನಲ್ಲಿ ನಾನು ಹಾಗೆ ನಡೆದುಕೊಂಡಿದ್ದು ಇಂದಿನ ಓದುಗರು ಒಪ್ಪಿಕೊಳ್ಳುತ್ತಾರೋ ಇಲ್ಲವೋ ಆದರೆ ನನ್ನ ಅಮ್ಮ "ಸರಿ" ಎಂದು ಹೇಳಿಯೇಬಿಟ್ಟಳು ಮತ್ತು ಬಂದಿದ್ದ ಶಿಕ್ಷಕರಿಗೆ ವಾಪಸ್ಸಾಗುವಂತೆ ಸೂಚಿಸಿದಳು. ಅವಳಿಗೆ ನನಗೆ ಯಾವ ತಲೆನೋವು ಇಲ್ಲವೆಂದು ತಿಳಿದಿತ್ತು. ಹಾಗಾಗಿ ನನ್ನ ಬಗ್ಗೆ ಯಾವ ವಿಶೇಷ ಕಾಳಜಿಯನ್ನು ತೋರಲಿಲ್ಲ. ನಾನು ತಲೆದಿಂಬಿನಲ್ಲಿ ಮುಖ ಹುದುಗಿಸಿ ಮನಸಾರೆ ನಕ್ಕು ಬಿಟ್ಟೆ. ನಾನು ಮತ್ತು ನನ್ನಮ್ಮ ಒಬ್ಬರನ್ನೊಬ್ಬರು ಎಷ್ಟು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೆವು.


ಸ್ವಲ್ಪ ಹೊತ್ತಿಗೆ ನಾನು ಅಜ್ಜಿಗೆ ಕಥೆ ಹೇಳಲು ಪೀಡಿಸಲಾರಂಭಿಸಿದೆ. ನಾನು ಹಿಡಿದ ಪಟ್ಟು ಬಿಡುವುದಿಲ್ಲ ಎಂದು ಗೊತ್ತಿದ್ದ ನನ್ನ ಅಮ್ಮ, ತಾನು ಅಜ್ಜಿಯೊಡನೆ ಆಡುತ್ತಿದ್ದ ಮಾತು ನಿಲ್ಲಿಸಿ ಅಜ್ಜಿಗೆ ಹೇಳಿದಳು 'ಅವನು ಕೇಳಿದ್ದು ನಾವು ಮಾಡದಿದ್ದರೆ ನಮಗೆ ಅವನನ್ನು ನಿಭಾಯಿಸಲು ಆಗುವುದಿಲ್ಲ'.


ನಾನು ಅಜ್ಜಿಯ ಕೈ ಹಿಡಿದು, ನನ್ನ ಹಾಸಿಗೆಯವರೆಗೆ ಕರೆದೊಯ್ದು 'ಅಜ್ಜಿ ಈಗ ಕಥೆ ಹೇಳು' ಎಂದು ಹಟ ಮಾಡಿದೆ. ಅಜ್ಜಿ ಕಥೆ ಶುರು ಮಾಡಿದಳು "ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ. ಅವನಿಗೆ ಒಬ್ಬ ರಾಣಿಯಿದ್ದಳು".


ಇದು ಒಳ್ಳೆಯ ಆರಂಭ. ಎಷ್ಟೋ ಕಥೆಗಳಲ್ಲಿ ರಾಜನಿಗೆ ಹಲವಾರು ರಾಣಿಯರಿರುತ್ತಾರೆ. ಅದು ಕೇಳಿದೊಡನೆ ನಮಗೆ ಹೃದಯ ಕುಸಿದ ಅನುಭವ ಆಗತೊಡಗುತ್ತದೆ. ಏಕೆಂದರೆ ಅಲ್ಲಿ ಒಬ್ಬ ರಾಣಿಗಾದರೂ ಅಸಮಾಧಾನ ಇದ್ದೆ ಇರುತ್ತದೆ. ಈ ಕಥೆಯಲ್ಲಿ ಅಂತಹ ಅಪಾಯ ಇಲ್ಲ. ಏಕೆಂದರೆ ಈ ಕಥೆಯ ರಾಜನಿಗೆ ಒಬ್ಬಳೇ ರಾಣಿ ಇದ್ದಾಳೆ.


ಅಜ್ಜಿ ಕಥೆ ಮುಂದುವರೆಸುತ್ತಾಳೆ. ಆ ರಾಜನಿಗೆ ಮಗಳಿದ್ದಾಳೆ. ಆದರೆ ಗಂಡು ಸಂತಾನ ಇರುವುದಿಲ್ಲ.


ಏಳು ವರುಷದ ಹುಡುಗನಿಗೆ ಗಂಡು ಸಂತಾನ ಇರದಿದ್ದರೆ ಏಕೆ ಚಿಂತಿಸಬೇಕು ಎಂದು ಅರ್ಥವಾಗುವುದು ಕಷ್ಟ. ಈಗ ಇರದಿದ್ದರೆ ಮುಂದೆ ಹುಟ್ಟಬಹುದಲ್ಲವೇ ಎನ್ನುವುದು ಅವನ ವಿಚಾರ.   


ಆದರೆ ಅಜ್ಜಿಯ ಕಥೆ ಮುಂದೆ ಸಾಗುತ್ತದೆ. ಚಿಂತೆಯಿಂದ ರಾಜ ಗಂಡು ಸಂತಾನಕ್ಕಾಗಿ ದೇವರನ್ನು ಪ್ರಾರ್ಥಿಸಿ ತಪಸ್ಸು ಮಾಡಲು ಕಾಡಿಗೆ ಹೊರಡುತ್ತಾನೆ. ರಾಣಿಯನ್ನು, ಚಿಕ್ಕ ಮಗಳನ್ನು ಅರಮನೆಯಲ್ಲೇ ಬಿಟ್ಟು ರಾಜ ಹೊರಡುತ್ತಾನೆ. ಹನ್ನೆರಡು ವರ್ಷಗಳು ಕಳೆದು ಹೋಗುತ್ತವೆ. ಅವನ ಮಗಳು ಬೆಳೆದು ನಿಂತು ಸುಂದರ ಯುವತಿಯಾಗುತ್ತಾಳೆ. ಬೆಳೆದು ನಿಂತ ಮಗಳಿಗೆ ಮದುವೆ ಮಾಡಲು ರಾಜನಿಲ್ಲದೆ ರಾಣಿಗಷ್ಟೇ ಹೇಗೆ ಸಾಧ್ಯ? ಅವಳು ರಾಜನಿಗೆ ಒಂದು ದಿನ ಮಟ್ಟಿಗಾದರೂ ಬಂದು ಹೋಗುವಂತೆ ಹೇಳಿಕಳಿಸುತ್ತಾಳೆ.


ಅದಕ್ಕೆ ಒಪ್ಪಿದ ರಾಜ ಅರಮನೆಗೆ ಮರಳುತ್ತಾನೆ. ರಾಣಿ ತನ್ನ ಕೈಯಿಂದಲೇ ವಿಧ ವಿಧದ ಭಕ್ಷ್ಯಗಳನ್ನು ತಯಾರಿಸಿ ಕಾಯುತ್ತಿರುತ್ತಾಳೆ. ಅವಳ ಮಗಳು ನವಿಲು ಗರಿಯ ಬೀಸಣಿಕೆ ಹಿಡಿದು ರಾಜನಿಗೆ ಸೇವೆ ಮಾಡಲು ನಿಂತಿರುತ್ತಾಳೆ. ಅಲ್ಲಿಗೆ ಬಂದ ರಾಜ "ಸೌಂದರ್ಯದ ಖನಿಯಾಗಿರುವ ಈ ಹುಡುಗಿ ಯಾರು? ಯಾರ ಮಗಳು?" ಎಂದು ರಾಜ, ರಾಣಿಯನ್ನು ಪ್ರಶ್ನಿಸುತ್ತಾನೆ. ರಾಣಿ ಹಣೆ ಚಚ್ಚಿಕೊಳ್ಳುತ್ತ "ನಿಮ್ಮ ಮಗಳನ್ನು ನೀವು ಗುರುತು ಹಿಡಿಯದೇ ಹೋದಿರಾ?" ಎಂದು ಪ್ರಶ್ನಿಸುತ್ತಾಳೆ. ಅದನ್ನು ಕೇಳಿ ಉಲ್ಲಾಸಭರಿತನಾದ ರಾಜ "ನಾಳೆ ನಾನು ನೋಡಿದ ಪ್ರಥಮ ವ್ಯಕ್ತಿಯೊಂದಿಗೆ ಇವಳ ಮದುವೆ ಮಾಡುತ್ತೇನೆ" ಎಂದು ಹೇಳುತ್ತಾನೆ.


ಮರುದಿನ ಅರಮನೆಯ ಹೊರಗೆ ಕಟ್ಟಿಗೆ ಆಯಲು ಬಂದ ಒಬ್ಬ ಬ್ರಾಹ್ಮಣ ಹುಡುಗನನ್ನು ರಾಜ ನೋಡುತ್ತಾನೆ. ಅವನಿನ್ನೂ ಏಳೆಂಟು ವರುಷದವನು. ಆದರೆ ರಾಜ ಅವನಿಗೆ ತನ್ನ ಮಗಳನ್ನು ಕೊಟ್ಟು ಮದುವೆ ಮಾಡಲು ನಿರ್ಧರಿಸುತ್ತಾನೆ. ರಾಜನ ನಿರ್ಧಾರವನ್ನು ಪ್ರಶ್ನಿಸುವ ಧೈರ್ಯ ಯಾರಿಗುಂಟು? ತಡವಿಲ್ಲದೆ ಅವನ ಮಗಳ ಮದುವೆ ಆ ಬ್ರಾಹ್ಮಣ ಹುಡುಗನೊಂದಿಗೆ ನಡೆದೇ ಹೋಗುತ್ತದೆ.


"ಆಮೇಲೆ ಏನಾಯಿತು?" ನಾನು ಅಜ್ಜಿಗೆ ಕೇಳಿದೆ. ಹೀಗೆ ಸೊಗಸಾಗಿ ಕಥೆ ಹೇಳುವ ಅಜ್ಜಿ ಮುಂದಿನ ಜನ್ಮದಲ್ಲೂ ಅಜ್ಜಿಯಾಗೇ ಹುಟ್ಟಬೇಕು ಎಂದು ಮನಸ್ಸಿನಲ್ಲೇ ಅಂದುಕೊಂಡೆ.


ಅಜ್ಜಿ ಕಥೆ ಮುಂದುವರೆಸಿದಳು. ರಾಜಕುಮಾರಿ ತನ್ನ ಹೊಸ ಅರಮನೆಗೆ ಇನ್ನೂ ಬಾಲಕನಾದ ಗಂಡನನ್ನು ಕರೆದುಕೊಂಡು ಹೋಗುತ್ತಾಳೆ. ಆ ಹುಡುಗನನ್ನು ಶಾಲೆಗೆ ಕಳಿಸಿ ವಿದ್ಯಾಭ್ಯಾಸ ಮುಂದುವರೆಯುವಂತೆ ಏರ್ಪಾಡು ಮಾಡಲಾಗಿತ್ತು. ಶಾಲೆಯಲ್ಲಿ ಅವನ ಸ್ನೇಹಿತರೆಲ್ಲ, ಅರಮನೆಯಲ್ಲಿರುವ ಆ ಸುಂದರ ಹೆಣ್ಣು ಅವನಿಗೆ ಏನಾಗಬೇಕು ಎಂದು ಕೇಳುತ್ತಿದ್ದರು. ಆ ಬಾಲಕನಿಗೋ ಒಂದು ದಿನ ಅವಳ ಜೊತೆ ಹಾರ ಬದಲಿ ಮಾಡಿಕೊಂಡ ನೆನಪು ಮಾತ್ರ ಉಂಟು. ಅದಕ್ಕಿಂತ ಹೆಚ್ಚಿಗೆ ಅವನಿಗೆ ಏನು ತಿಳಿಯದು. ನಾಲ್ಕು-ಐದು ವರುಷಗಳು ಕಳೆದು ಹೋದವು. ಅವನ ಸ್ನೇಹಿತರು ಅರಮನೆಯಲ್ಲಿರುವ ಸುಂದರ ಹೆಣ್ಣು ಯಾರು ಎಂದು ಕೇಳುತ್ತಲೇ ಇದ್ದರು. ಅವನು ಮನೆಗೆ ಬಂದೊಡನೆ ಯುವರಾಣಿಗೆ ಕೇಳಿಯೇ ಬಿಟ್ಟ. "ನನ್ನ ಸ್ನೇಹಿತರೆಲ್ಲ ನೀನಾರು ಎಂದು ಕೇಳುತ್ತಿದ್ದಾರೆ. ಯಾರು ನೀನು?" ಅದಕ್ಕೆ ಯುವರಾಣಿ "ಅದು ಇಂದಿಗೆ ಬೇಡ. ಮುಂದೆ ಎಂದಾದರೂ ಆ ವಿಷಯ ಹೇಳುತ್ತೇನೆ" ಎಂದು ಹೇಳಿದಳು. ಹಾಗೆಯೆ ಇನ್ನು ಕೆಲವು ವರುಷಗಳು ಕಳೆದು ಹೋದವು. ಕೊನೆಗೆ ಬ್ರಾಹ್ಮಣ ಹುಡುಗ ತಾಳ್ಮೆ ಕಳೆದುಕೊಂಡು "ನೀನು ಯಾರು ಎಂದು ಹೇಳಲೇಬೇಕು" ಎಂದು ಒತ್ತಾಯಿಸಿದ. "ಇಂದು ಬೇಡ, ನಾಳೆ ಖಂಡಿತ ಹೇಳುತ್ತೇನೆ" ಎಂದು ಉತ್ತರಿಸಿದಳು ಯುವರಾಣಿ.


ಮರುದಿನ ಮತ್ತೆ ಅದೇ ಪ್ರಶ್ನೆ ಬಂದಾಗ "ಈಗ ಬೇಡ. ರಾತ್ರಿ ಊಟದ ನಂತರ ಮಲಗುವಾಗ ಹೇಳುತ್ತೇನೆ" ಎಂದಳು ಯುವರಾಣಿ. ಅಂದು ರಾತ್ರಿ ಅವರ ಮಂಚ ಹೂವಿನಿಂದ ಅಲಂಕೃತವಾಗಿತ್ತು. ಕೋಣೆಯಲ್ಲಿ ಸುಗಂಧ ದ್ರವ್ಯಗಳನ್ನು ಸಿಂಪಡಿಸಲಾಗಿತ್ತು. ಯುವರಾಣಿ ಸುಂದರ ಬಟ್ಟೆ ಧರಿಸಿ ಅಲಂಕೃತವಾಗಿದ್ದಳು. ಅವಳ ಗಂಡ ಅಲ್ಲಿಗೆ ಹೋಗಿ ಮಲಗಿದ ಮೇಲೆ ಹೆಚ್ಚಿಗೆ ತಡ ಮಾಡದೆ ಆ ಕೋಣೆಯನ್ನು ಪ್ರವೇಶಿಸಿದಳು ಯುವರಾಣಿ. ಆದರೆ ಅಷ್ಟರಲ್ಲೇ ಹೂವಿನ ಬುಟ್ಟಿಯಲ್ಲಿದ್ದ ವಿಷದ ಹಾವು ಅಲಂಕೃತವಾಗಿದ್ದ ಮಂಚದ ಮೇಲೆ ಮಲಗಿದ್ದ ಅವಳ ಗಂಡನ ಕಚ್ಚಿ ಪ್ರಾಣ ತೆಗೆದಿತ್ತು.


ನನ್ನ ಹೃದಯ ಒಮ್ಮೆಲೇ ನಿಂತಂತಾಗಿ ಉಸಿರುಗಟ್ಟಿದ ಧ್ವನಿಯಲ್ಲಿ ಅಜ್ಜಿಯನ್ನು ಕೇಳಿದೆ "ಆಮೇಲೆ ಏನಾಯಿತು?"


ಆಮೇಲೆ ಕಥೆ ಮುಂದುವರೆಸಿ ಏನು ಪ್ರಯೋಜನ ಇದೆ? ಸಾವಿನ ನಂತರದ ಕಥೆಯನ್ನು ಯಾವ ಅಜ್ಜಿಯೂ ಮುಂದುವರೆಸಲಾರಳು. ಆ ಸುಂದರ ಸಂಜೆಯ ಕಥೆ ಹೀಗೆ ಅಂತ್ಯ ಕಾಣಬಹುದು ಎಂದು ನಾನು ಊಹಿಸಲು ಹೇಗೆ ಸಾಧ್ಯ ಇತ್ತು? ಮಂತ್ರೋಚ್ಚಾರಣೆ ಮಾಡಿ ಸತ್ತವರನ್ನು ಮತ್ತೆ ಬದುಕಿಸುವ ಕಥೆ ಅದಾಗಿರಲಿಲ್ಲ. ಎಲ್ಲದಕ್ಕೂ ಒಂದು ಅಂತ್ಯ ಎನ್ನುವುದು ಇರಬೇಕಲ್ಲವೇ? ಆದರೆ ಕಥೆ ಕೇಳುತ್ತಿದ್ದ ನನಗೆ ಸಾವು ಎನ್ನುವುದು ಭಯ ಬೀಳಿಸುವ ಅಂತ್ಯ ಅನಿಸದೇ ಅದು ಒಂದು ದೀರ್ಘ ರಾತ್ರಿಯ ತರಹದ್ದಾಗಿರಬೇಕು ಎನಿಸಿತು. ಕಥೆ ಮುಗಿದ ಮೇಲೆ ಕಣ್ಣು ರೆಪ್ಪೆ ಭಾರವಾಗಿ ನಿದ್ರೆಗೆ ಜಾರುವ ಹುಡುಗ ಮರುದಿನ ಮತ್ತೆ ಬೆಳಕಿನ ಜಗತ್ತಿಗೆ ಮತ್ತು ಬದುಕಿಗೆ ತನ್ನನ್ನು ಒಡ್ಡಿಕೊಳ್ಳುತ್ತಾನೆ. ಹೊಸ ಕಥೆಗೆ ಅಣಿಯಾಗುತ್ತಾನೆ.

ಗುರುವಿನ ಸಮ್ಮೋಹಕ ಶಕ್ತಿ

(ಇದು ಅರುಣ್ ಶೌರಿ ಅವರು ಬರೆದ 'Two Saints' ಪುಸ್ತಕದ ಮೊದಲ ಅಧ್ಯಾಯದ ಭಾವಾನುವಾದ. ಸ್ವಾಮಿ ವಿವೇಕಾನಂದ ಎಂದು ಗುರುತಿಸಿಕೊಂಡ ನರೇಂದ್ರ ಮತ್ತು ಅವರ ಗುರು ರಾಮಕೃಷ್ಣ ಪರಮಹಂಸರ ಜೀವನ ಕುರಿತು ಇದು ಬೆಳಕು ಚೆಲ್ಲುತ್ತದೆ)


ಗುರು ದೇವಿಯ ಪ್ರಾರ್ಥನೆಯ ಮಧ್ಯೆ ಬಿಕ್ಕುತ್ತಿದ್ದ. ತನ್ನ ಕೆಲಸ ಮುಂದುವರೆಸಲು ಸಹಾಯವಾಗುವಂತೆ ಶಿಷ್ಯರನ್ನು ಅನುಗ್ರಹಿಸುವಂತೆ ಬೇಡಿಕೊಳ್ಳುತ್ತಿದ್ದ. ಅವರಿಗೆ ತಮ್ಮ ದಿವ್ಯದೃಷ್ಟಿಯಲ್ಲಿ ಕೆಲ ಯುವಕರು ಅದರಲ್ಲೂ ನರೇಂದ್ರ ಎನ್ನುವ ಸ್ವಂತ ಚಿಂತನೆಯುಳ್ಳ, ದೇವರ ಬಗ್ಗೆ ಯಾರೂ ತಿಳಿದುಕೊಳ್ಳಲು ಸಾಧ್ಯವಿಲ್ಲ ಎಂದು ನಂಬಿದ್ದ ಬಂಡಾಯಗಾರ ಯುವಕ ಬರುವುದು ಮುಂಚೆಯೇ ಕಾಣುತ್ತಿತ್ತು. ಅದರಂತೆಯೇ ನರೇಂದ್ರ ತನ್ನ ಸ್ನೇಹಿತರೊಡನೆ ಗುರುವಿನ ಭೇಟಿಗಾಗಿ ದಕ್ಷಿಣೇಶ್ವರಕ್ಕೆ ಬರಲು ಆರಂಭಿಸಿದ. ನರೇಂದ್ರನನ್ನು ನೋಡಿದ ಕೂಡಲೇ ಗುರುವಿನ ಹರ್ಷ ಎಲ್ಲೇ ಮೀರಿತ್ತು.


ಮೊದಲ ಭೇಟಿಯಲ್ಲಿ ನರೇಂದ್ರನಿಗೆ ಗುರುವು ಮತಿಭ್ರಮಣೆಗೊಂಡ ವ್ಯಕ್ತಿಯ ತರಹ ತೋರಿದರೂ, ಇನ್ನು ಕೆಲವು ಸಲ ಭೇಟಿ ನೀಡಿ ನಿರ್ಧರಿಸಿದರಾಯಿತು ಎಂದುಕೊಂಡ. ಎರಡನೆಯ ಭೇಟಿಯಲ್ಲಿ, ಗುರುವಿನ ಹತ್ತಿರ ಯಾರೂ ಇರಲಿಲ್ಲ. ನರೇಂದ್ರನನ್ನು ಕರೆದು ತನ್ನ ಹತ್ತಿರವೇ ಕುಳಿಸಿಕೊಂಡ ಗುರು ಅವನನ್ನು ತನ್ನ ಬಲಗಾಲಿನಿಂದ ಸ್ಪರ್ಶಿಸಿದರು. ನರೇಂದ್ರನಿಗೆ ಒಂದು ಅದ್ಭುತ ಅನುಭವದ ಆರಂಭವಾಯಿತು. ಅವರು ಕುಳಿತಿದ್ದ ಕೋಣೆಯ ಗೋಡೆಗಳೆಲ್ಲ ಹಿಂದೆ ಸರಿದು ಮಾಯವಾಗುತ್ತಿರುವ ಹಾಗೆ ಮತ್ತು ಅದರ ಜೊತೆಗೆ ನರೇಂದ್ರನಿಗೆ ತಾನು ತಾನೆನ್ನುವ ಅರಿವು ಕಳೆದು ಶೂನ್ಯದಲ್ಲಿ ಸೇರಿ ಹೋದ ಹಾಗೆ ಅನುಭವ. 


"ನನಗೆ ಏನು ಮಾಡುತ್ತಿದ್ದೀರಿ? ನನಗೆ ತಂದೆ, ತಾಯಿಯರಿದ್ದಾರೆ" ನರೇಂದ್ರ ದೊಡ್ಡ ಧ್ವನಿಯಲ್ಲಿ ಗಾಬರಿಯಿಂದ ಕೇಳಿಯೇ ಬಿಟ್ಟ. ಆ ಮಾತಿಗೆ ದೊಡದಾಗಿ ನಗುತ್ತಾ, ತಮ್ಮ ಕೈಯನ್ನು ನರೇಂದ್ರನ ಎದೆಯ ಮೇಲಿಟ್ಟು "ಹಾಗಾದರೆ ಇದು ನಿಲ್ಲಲಿ. ಎಲ್ಲ ಅನುಭವ ಒಂದೇ ಸಾಲಕ್ಕೆ ಆಗುವ ಅಗತ್ಯವಿಲ್ಲ. ಕಾಲ ಕಳೆದಂತೆ ಅವು ನಿನ್ನವಾಗಲಿ" ಎಂದು ಗುರು ನುಡಿದರು. ಅಸಾಧಾರಣವಾದಂತ ಆ ಅನುಭವ ಅಲ್ಲಿಗೆ ಕೊನೆಯಾಗಿ ಮತ್ತೆ ಸಹಜ ಸ್ಥಿತಿಗೆ ಮರಳಿದ ನರೇಂದ್ರ.


ನರೇಂದ್ರ ಮೂರನೆಯ ಬಾರಿ ಬಂದಾಗ ಗುಡಿಯಲ್ಲಿ ಗದ್ದಲವಿತ್ತು. ತನ್ನ ಜೊತೆಗೆ ಬರುವಂತೆ ಸೂಚಿಸಿದ ಗುರುಗಳು ನರೇಂದ್ರನನ್ನು ಕರೆದುಕೊಂಡು ಒಂದು ಕೋಣೆಯಲ್ಲಿ ಕುಳಿತುಕೊಂಡರು. ನೋಡುನೋಡುತ್ತಿದ್ದಂತೆಯೇ ಗುರುಗಳು ಮೈಮರೆತು ಭಾವಪರವಶರಾದರು. ಗುರುಗಳಲ್ಲಾಗುತ್ತಿರುವ ಬದಲಾವಣೆಯನ್ನು ನರೇಂದ್ರ ಗಮನಿಸುತ್ತಿದ್ದ. ಹಠಾತ್ತನೆ ಗುರುಗಳು ನರೇಂದ್ರನನ್ನು ಸ್ಪರ್ಶಿಸುತ್ತಾರೆ. ಆ ಸ್ಪರ್ಶಕ್ಕಿದ್ದ ಶಕ್ತಿಯಿಂದ ನರೇಂದ್ರನಿಗೆ ಮಾತೇ ಹೊರಡಲಿಲ್ಲ. ಅವನಿಗೆ ಅರಿವು ಸಂಪೂರ್ಣ ಕಳೆದು ಹೋಯಿತು. ಅವನು ಮತ್ತೆ ಸಹಜ ಸ್ಥಿತಿಗೆ ಬರುವಷ್ಟರಲ್ಲಿ ಒಂದು ದಿನವೇ ಕಳೆದು ಹೋಗಿತ್ತು.


ಎಷ್ಟೋ ವಾರಗಳು ಉರುಳಿ ಹೋದವು. ಒಂದು ದಿನ ನರೇಂದ್ರ ತನ್ನ ಸ್ನೇಹಿತನೊಡನೆ ಗುರುಗಳು ದೇವರ ಬಗ್ಗೆ ಹೇಳಿದ್ದನ್ನು ಅಪಹಾಸ್ಯ ಮಾಡುತ್ತ ನಿಂತಿದ್ದ. ಅಲ್ಲಿಗೆ ಬಂದ ಗುರುಗಳು ಪ್ರೀತಿಯಿಂದ "ಯಾವ ವಿಷಯ ಮಾತನಾಡುತ್ತಿರುವಿರಿ?" ಎನ್ನುತ್ತಾ ನರೇಂದ್ರನನ್ನು ಸ್ಪರ್ಶಿಸಿದರು. ನರೇಂದ್ರನಿಗೆ ತಲೆ ಸುತ್ತಿ ಬಂದಂತೆ ಆಗಿ ಉತ್ತರಿಸಿದ "ನೀವು ಈ ಜಗತ್ತಿನಲ್ಲಿ ದೇವರ ಬಿಟ್ಟು ಬೇರೇನಿಲ್ಲ ಎಂದು ಹೇಳಿದ್ದರ ಬಗ್ಗೆ". ಆ ಅನುಭವ ನರೇಂದ್ರನಿಗೆ ಎಷ್ಟೋ ದಿನಗಳವರೆಗೆ ಬಿಟ್ಟು ಹೋಗಲಿಲ್ಲ. ಅಷ್ಟರಲ್ಲಿ ದೇವರು ಮತ್ತು ಜಗತ್ತು ಬೇರೆ ಬೇರೆ ಅಲ್ಲ ಎನ್ನುವ ಅದ್ವೈತ ಸಿದ್ಧಾಂತ ಅವನ ಸ್ವಂತ ಅನುಭವಕ್ಕೆ ಬಂದು ಬಿಟ್ಟಿತು.


ಗುರುವಿಗೆ ನರೇಂದ್ರ ಹತ್ತಿರವಾದರೂ, ಅವನು ತನ್ನ ಸಂಶಯ ಪಡುವ, ವಾದಕ್ಕೆ ಇಳಿಯುವ, ಪ್ರಶ್ನೆ ಹಾಕುವ ಸ್ವಭಾವವನ್ನು ಬಿಟ್ಟಿರಲಿಲ್ಲ.


ನರೇಂದ್ರನ ತಂದೆ ತೀರಿಕೊಂಡರು. ಅವನ ಕುಟುಂಬ ಕಡುಬಡತನಕ್ಕಿಳಿಯಿತು. ಮನೆಯಲ್ಲಿ ಎಲ್ಲರಿಗು ಸಾಕಾಗುವಷ್ಟು ಊಟವಿರುತ್ತಿರಲಿಲ್ಲ. ಯಾವುದೊ ಒಂದು ನೆಪದಲ್ಲಿ ಮನೆಯಿಂದ ನರೇಂದ್ರ ಹೊರ ಬಂದು ಬಿಡುತ್ತಿದ್ದ. ಉಳಿದವರಿಗೆ ಒಂದು ತುತ್ತು ಊಟ ಹೆಚ್ಚಿಗೆ ಸಿಗಲಿ ಎಂದು. ಅವನು ಕೆಲಸಕ್ಕಾಗಿ ಅಲೆದು ಅಲೆದು ಸುಸ್ತಾದ. ಆದರೆ ಅವನಿಗೆ ಎಲ್ಲೂ ಕೆಲಸ ದೊರಕಲಿಲ್ಲ. ಒಂದು ದಿನ ಮಳೆಯಲ್ಲಿ ನೆನೆದು, ನಡೆಯಲು ತ್ರಾಣವಿಲ್ಲದೆ ಕುಸಿದುಬಿಟ್ಟ. ಮತ್ತೆ ಅವನು ಎದ್ದಾಗ, ಅವನಿಗೆ ತಾನು ಕೆಲಸ ಮಾಡುವುದಕ್ಕೆ, ಹಣ ಗಳಿಸುವುದಕ್ಕೆ ಹುಟ್ಟಿಲ್ಲ ಎನ್ನುವುದನ್ನು ಕಂಡುಕೊಂಡ. ಲೌಕಿಕವನ್ನು ತೊರೆದು ಸನ್ಯಾಸಿಯಾಗುವ ಬಯಕೆ ಅವನಲ್ಲಿ ಮೊಳೆಯತೊಡಗಿತ್ತು. ಆದರೆ ತನ್ನ ತಾಯಿ, ಸಹೋದರರು ಉಪವಾಸ ಇರುವುದನ್ನು ಅವನು ನೋಡಲಾರ.


ಗುರುವಿನ ಹತ್ತಿರ ಬಂದ ನರೇಂದ್ರ ತನ್ನ ಕುಟುಂಬಕ್ಕೆ ಸಹಾಯ ಮಾಡುವಂತೆ ದೇವಿಯನ್ನು ಪ್ರಾರ್ಥಿಸಿ ಎಂದು ಕೇಳಿಕೊಂಡ. ಗುರುವು ಅದಕ್ಕೆ "ದೇವಿಯನ್ನು ನಾನು ಸಾಕಷ್ಟು ಸಲ ನಿಮ್ಮ ಕುಟುಂಬದ ದಾರಿದ್ರ್ಯವನ್ನು ದೂರ ಮಾಡುವಂತೆ ಪ್ರಾರ್ಥಿಸಿದ್ದೇನೆ. ಅದರಿಂದ ಯಾವ ಉಪಯೋಗವು ಆಗಿಲ್ಲ. ಏಕೆಂದರೆ ನಿನಗೆ ದೇವಿಯ ಮೇಲೆ ನಂಬಿಕೆ ಇಲ್ಲ. ಇಂದು ಮಂಗಳವಾರ. ದೇವಿಯ ಇಷ್ಟದ ವಾರ. ನೀನೆ ಏಕೆ ದೇವಿಯನ್ನು ಪ್ರಾರ್ಥಿಸಬಾರದು? ಅವಳು ಜಗತ್ತಿಗೆ ಜನ್ಮ ಕೊಟ್ಟವಳು. ಅವಳು ಮನಸ್ಸು ಮಾಡಿದರೆ ಆಗದ ಕೆಲಸ ಯಾವುದಿದೆ?"  ಎಂದು ಹೇಳಿದರು.


ದೇವಸ್ಥಾನದ ಮೆಟ್ಟಿಲೇರಿ ಒಳ ಹೋದ ನರೇಂದ್ರ ಕರುಣೆಯ ಚಿಲುಮೆಯಾಗಿದ್ದ ದೇವಿಯನ್ನು ನೋಡುತ್ತಾ ಮೈಮರೆತು ತನಗೆ ದೈವಿಕ ಜ್ಞಾನ ಮತ್ತು ವೈರಾಗ್ಯವನ್ನು ಕೊಡುವಂತೆ ಬೇಡಿಕೊಂಡ. ಮರಳಿ ಬಂದ ನರೇಂದ್ರನ್ನು ಕಂಡ ಗುರುಗಳು "ದೇವಿಯ ಹತ್ತಿರ ನಿನ್ನ ಕುಟುಂಬದ ಸಮಸ್ಯೆ ಹೇಳಿಕೊಂಡೆಯಾ?" ಎಂದು ಪ್ರಶ್ನಿಸಿದರು. ದೇವಿಯ ಸಾನ್ನಿಧ್ಯದಲ್ಲಿ ಅದು ತನಗೆ ಸಂಪೂರ್ಣ ಮರೆತು ಹೋದುದನ್ನು ನರೇಂದ್ರ ನಿವೇದಿಸಿಕೊಂಡ. ಮತ್ತೆ ಇನ್ನೊಂದು ಸಲ ಹೋಗಿ ಪ್ರಾರ್ಥಿಸುವಂತೆ ಗುರುಗಳು ನರೇಂದ್ರನಿಗೆ ಸೂಚಿಸಿದರು. ಎರಡನೆಯ ಅನುಭವವು ನರೇಂದ್ರನಿಗೆ ವಿಭಿನ್ನವಾಗಿರಲಿಲ್ಲ. ಮತ್ತೆ ಮೂರನೆಯ ಬಾರಿಗೆ ಹೋಗುವಂತೆ ಗುರುಗಳು ಸೂಚಿಸಿದರು. ಈ ಬಾರಿ ದೇವಸ್ಥಾನದೊಳಗೆ ಕಾಲಿಟ್ಟೊಡನೆ ನರೇಂದ್ರನಿಗೆ ಲೌಕಿಕ ಸ್ವಾರ್ಥಗಳಿಗೆ ದೇವಿಯನ್ನು ಪ್ರಾರ್ಥಿಸಬಾರದು ಎನ್ನುವ ಅರಿವು ಮೂಡಿತು. ಮತ್ತೆ ತನಗೆ ದೈವಿಕ ಜ್ಞಾನ ನೀಡುವಂತೆ ದೇವಿಯನ್ನು ಪ್ರಾರ್ಥಿಸಿ ಗುರುವಿನತ್ತ ಮರಳಿದ ನರೇಂದ್ರ. 


"ಇದು ನಿಮ್ಮದೇ ಆಟ. ನನಗೆ ದೇವಿಯಲ್ಲಿ ಸ್ವಾರ್ಥಕ್ಕಾಗಿ ಪ್ರಾರ್ಥಿಸದಂತೆ ಮಾಡುತ್ತಿರುವಿರಿ. ನನ್ನ ತಾಯಿ, ತಮ್ಮಂದಿರ ಜವಾಬ್ದಾರಿಯನ್ನು ನಿಮಗೆ ಬಿಡುತ್ತೇನೆ" ಎಂದು ಹೇಳಿದ ನರೇಂದ್ರ. 

"ಸರಿ. ಅವರಿಗಿನ್ನೂ ಸಾಧಾರಣ ಊಟ, ಬಟ್ಟೆಗಳ ತೊಂದರೆ ಆಗದಂತೆ ನಾನು ನೋಡಿಕೊಳ್ಳುತ್ತೇನೆ" ಅಭಯವಿತ್ತರು ಗುರುಗಳು.


ಕೆಲ ತಿಂಗಳುಗಳು ಕಳೆದವು. ಗುರುಗಳ ಗಂಟಲ ಬೇನೆ ಉಲ್ಬಣವಾಗುತ್ತ ಹೋಯಿತು. ನರೇಂದ್ರ ಮತ್ತು ಅವನ ಸ್ನೇಹಿತರು ಸರದಿಯಲ್ಲಿ ಗುರುವಿನ ಸೇವೆಗೆ ನಿಂತರು. ಒಂದು ದಿನ ನರೇಂದ್ರ ಗುರುಗಳಲ್ಲಿ ಅಧ್ಯಾತ್ಮದ ಅಂತಿಮ ಹಂತವನ್ನು ತನಗೆ ತೋರಿಸಿಕೊಡುವಂತೆ ಬೇಡಿಕೊಂಡ. ಗುರುಗಳು ಅದನ್ನು ಮುಂದಕ್ಕೆ ತಳ್ಳಿ ಹಾಕುತ್ತ ಹೋದರು. ಒಂದು ದಿನ ನರೇಂದ್ರನಿಗೆ ತನ್ನ ತಲೆಯ ಹಿಂದೆ ಒಂದು ಪ್ರಕಾಶಮಾನವಾದ ದೀಪ ಹೊತ್ತಿಕೊಂಡಂತೆ, ಅವನ ಆತ್ಮ ಬೇರೆಯಾಗಿ ಶೂನ್ಯದೊಂದಿಗೆ ಬೆರೆತುಕೊಂಡ ಅನುಭವ ಆಯಿತು. ತನ್ನ ಜೊತೆಗಾರರನ್ನು ಸಹಾಯಕ್ಕಾಗಿ ಕೂಗಿದ. ಬಂದವರು ನರೇಂದ್ರನ ದೇಹ ನಿಶ್ಚಲವಾಗಿ, ಜೀವವಿಲ್ಲದಂತೆ ಮಲಗಿರುವುದನ್ನು ನೋಡಿ ಗುರುವಿನ ಹತ್ತಿರ ಓಡಿ ಹೋದರು. ಗುರುಗಳು ಶಾಂತವಾಗಿ, ತಮಗೆಲ್ಲ ಅರಿವಿರುವಂತೆ "ಅವನು ಹಾಗೆ ಇರಲಿ. ಬಹಳಷ್ಟು ದಿನಗಳಿಂದ ಆ ಅನುಭವಕ್ಕಾಗಿ ಗಂಟು ಬಿದ್ದಿದ್ದ" ಎಂದು ಹೇಳಿದರು.


ಸಹಜ ಸ್ಥಿತಿಗೆ ಮರಳಿದ ನಂತರ ನರೇಂದ್ರ ತನ್ನ ಗುರುಗಳ ಬಳಿ ಹೋದ. ಅವನನ್ನು ಉದ್ದೇಶಿಸಿ ಗುರುಗಳು ಹೇಳಿದರು "ತಾಯಿ ನಿನಗೆ ಸಕಲವನ್ನೂ ತೋರಿದ್ದಾಳೆ. ಆದರೆ ನಿನಗೆ ಮಾಡಲು ಸಾಕಷ್ಟು  ಕೆಲಸವಿದೆ. ಅದು ಮುಗಿದ ನಂತರ ಮತ್ತೆ ಆ ಅನುಭವ ನಿನ್ನದಾಗುತ್ತದೆ".


ಗುರುಗಳ ಆರೋಗ್ಯ ಹದಗೆಡುತ್ತಾ ಹೋಯಿತು. ಅವರಿಗೆ ಊಟ ಸೇರದಾಯಿತು. ನರೇಂದ್ರನನ್ನು ಎದುರಿಗೆ ಕೂಡಿಸಿಕೊಂಡು, ಅವನನ್ನು ನೋಡುತ್ತಾ ಸಮಾಧಿ ಸ್ಥಿತಿಗೆ ತಲುಪಿದರು. ನರೇಂದ್ರನಿಗೆ ತನ್ನ ದೇಹದಲ್ಲಿ ಏನೋ ಸೇರುತ್ತಿರುವ ಅನುಭವವಾಗಿ ಪ್ರಜ್ಞೆ ಕಳೆದುಕೊಂಡನು. ಮತ್ತೆ ಅವನಿಗೆ ಪ್ರಜ್ಞೆ ಬಂದಾಗ ಗುರುಗಳು ಅವನಿಗೆ ತಮ್ಮ ಜ್ಞಾನವನ್ನೆಲ್ಲ ಧಾರೆ ಎರೆದದ್ದು ತಿಳಿಸಿದರು. ನಂತರ ಗುರುಗಳು ತಮ್ಮ ದೇಹ ತೊರೆದರು. ಅಲ್ಲಿಂದ ಮುಂದೆ ನರೇಂದ್ರನಿಗೆ ತನ್ನ ಜೀವನದ ಉದ್ದೇಶ ಏನು  ಎನ್ನುವುದರಲ್ಲಿ ಯಾವುದೇ ಸಂದೇಹ ಉಳಿಯಲಿಲ್ಲ.

Thursday, March 17, 2022

ಕವನ ಸಂಕಲನ: ಹರಿದ ಹೊಕ್ಕಳ ಬಳ್ಳಿ; ಲೇಖಕರು: ವರದೇಂದ್ರ

ಚೊಚ್ಚಲ ಕವನ ಸಂಕಲನವನ್ನು ಹೊರ ತಂದಿರುವ ಗೆಳೆಯ ವರದೇಂದ್ರ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಬರೀ ಅಕ್ಷರ ಪ್ರೇಮವಿದ್ದರೆ ಸಾಲದು, ಭಾವನೆಗಳ ತುಡಿತವಿರದೆ ಯಾರೂ ಕವಿಯಾಗಲಾರರು. ಕಥೆಗಳನ್ನು ಕಥೆಗಾರ ಸೃಷ್ಟಿಸಿದರೆ, ಕಾವ್ಯಗಳೇ ಕವಿಯನ್ನು ಸೃಷ್ಟಿಸುತ್ತವೆ. ಭಾವನೆಗಳು ತೀವ್ರವಾದಾಗ, ತಾಳಲಾರದ ಪ್ರಸವ ವೇದನೆಯಂತೆ ಕಾವ್ಯ ಮೈದಳೆಯುತ್ತದೆ.


ಕಾದಂಬರಿಕಾರ ನೂರಾರು ಪುಟಗಳಲ್ಲಿ ಹೇಳುವುದನ್ನು ಕಥೆಗಾರ ನೂರಾರು ಸಾಲುಗಳಲ್ಲಿ ಹೇಳಿ ಮುಗಿಸುತ್ತಾನೆ. ಆದರೆ ಕವಿ ಹತ್ತಾರು ಪದಗಳಲ್ಲಿ ಹೆಚ್ಚಿನ ಸರಕನ್ನು ಸಾಗಿಸಿ ಬಿಡುತ್ತಾನೆ. ಅವ್ಯಕ್ತ ಭಾವನೆಗಳು ಪದ ಜೋಡಣೆಯೊಳಗೆ ತೂರಿಕೊಂಡು ಕಾವ್ಯವನ್ನು ಜೀವಂತವಾಗಿಸುತ್ತವೆ. ಕಾಳಿದಾಸನಿಂದ ಕುವೆಂಪುವರೆಗೆ ನೂರಾರು ಕವಿಗಳು ಕಾವ್ಯಗಳನ್ನು ರಚಿಸಿದರೂ ಅದಕ್ಕೆ ಸ್ಪೂರ್ತಿ ಮಾತ್ರ ಪ್ರಕೃತಿ ಮತ್ತು ಅವರ ಸಮಾಜದ ಒಡನಾಟಗಳು. ಕವಿ ತಾನಿರುವ ಕಾಲದ ಸಂಸ್ಕೃತಿಯನ್ನು, ಸಮಾಜವನ್ನು ಪ್ರತಿಬಿಂಬಿಸುತ್ತಾನೆ. ಕಾವ್ಯಗಳು ಅಂದಿನ ಸಮಾಜದ ಭಾವನೆಗಳ ಪ್ರತಿರೂಪವಾಗಿರುತ್ತವೆ. ಮತ್ತೆ ಕೆಲವು ಕಾಲಾತೀತವಾಗಿ ಮಾನವ ಬದುಕಿನ ಸಂಗಾತಿಯಾಗುತ್ತವೆ.  ಅದಕ್ಕೆ ನೋಡಿ ಕರ್ತೃ ಯಾರು ಎಂದು ಗೊತ್ತಿರದಿದ್ದರೂ ಜಾನಪದ ಗೀತೆಗಳು ನಮ್ಮ ಮನದಿಂದ ಮರೆಯಾಗದೆ ಹೋಗದಿರುವುದು.


ಕವಿ ವರದೇಂದ್ರ ಅವರು ನಮ್ಮ-ನಿಮ್ಮ ಅನುಭವಗಳನ್ನೇ ಕಾವ್ಯವನ್ನಾಗಿಸಿದ್ದಾರೆ. ಶಬ್ದ ಜೋಡಣೆ ಅವರದಾದರೂ, ಅನುಭವಗಳು ನಮ್ಮವೂ ಕೂಡ. ಈ ಸಂಕಲನದ ಕವಿತೆಗಳ ಕೆಲ ಸಾಲುಗಳನ್ನು ಓದಿ ನೋಡಿ.


'ಕಲ್ಲೊಳಗೆ ಹುಟ್ಟುವ ಸಸಿಗೆ ವಿಶ್ವಾಸ' (ಬಾ ಯುಗಾದಿ ಮತ್ತೆ)

 

'ಚಟ್ಟಕೆ ದಾರಿ ಮಾಡಿದವರು, ಆದರೂ ಇವರು ನಮ್ಮವರು' (...ವರು)


'ಬೆಳಕ ಕಂಡು ಬೆಂಕಿಯೆಂದರೆ  ಕತ್ತಲೆನು ಮಾಡಿತು' (ದಾರಿ ದೀಪ)


'ಸಾಧನೆಗೆ ಎಲ್ಲೇ ಮೀರುವ ಹಸಿವು'   (ಹಸಿವು)


ವರದೇಂದ್ರ ಅವರ ಸಾಹಿತ್ಯ ಸೇವೆ ಹೀಗೆ ಮುಂದುವರೆಯಲಿ, ಅವರ ಕವಿತೆಗಳು ಓದುಗರ ಮನಗಳ ಸಂಗಾತಿಯಾಗಲಿ ಎಂದು ಹಾರೈಸುವೆ.

(Author Contact: Varadendra, 9945253030)