Saturday, September 18, 2021

ಕಲ್ಲರಳಿ ಹೂವಾಗಿ, ಹೂವರಳಿ ಹೆಣ್ಣಾಗಿ

"ಕಲ್ಲರಳಿ ಹೂವಾಗಿ,

ಹೂವರಳಿ ಹೆಣ್ಣಾಗಿ"


ಹೀಗೆ ಸಾಗುತ್ತದೆ 'ಕಲ್ಲರಳಿ ಹೂವಾಗಿ' ಚಲನಚಿತ್ರದ ಒಂದು ಗೀತೆ. ಇದು ಒಳ್ಳೆ ಗೀತೆ, ಅದರಲ್ಲೇನಿದೆ ವಿಶೇಷ ಎನ್ನುತ್ತೀರಾ? ನೂರಾರು ಕೋಟಿ ವರುಷಗಳ ದೀರ್ಘ ಕಾಲದಲ್ಲಿ ಮನುಜ ಕುಲ ವಿಕಾಸ ಹೊಂದಿದ ಬಗೆಯನ್ನು ಒಬ್ಬ ಕವಿ ಎರಡು ಸಾಲುಗಳಲ್ಲಿ ಹೇಳಿದ ಬಗೆ ಅಚ್ಚರಿ ಮೂಡಿಸಿತು. ಹಾಡಿನ ಮೊದಲು ಎರಡು ಸಾಲುಗಳು ಅಕ್ಷರಶ ಸತ್ಯ ಎನ್ನುವುದು ಜೀವಶಾಸ್ತ್ರ ಓದಿ ನಾನು ಧೃಢಪಡಿಸಿಕೊಂಡೆ. 


ನಾವು ಉಸಿರಾಡುವುದು ಆಕ್ಸಿಜನ್. ಅದು ನಮಗೆ ಜೀವ ಕೊಟ್ಟರೂ, ಆಕ್ಸಿಜನ್ ಅಣು ಮಾತ್ರ ನಿರ್ಜಿವ ವಸ್ತು. ಹೈಡ್ರೋಜನ್ ಮತ್ತು ಆಕ್ಸಿಜನ್ ಸೇರಿ ಆಗುವ ನೀರು ನಮ್ಮ ಜೀವನಕ್ಕೆ ಅವಶ್ಯಕ. ಆದರೆ ಅದು ಕೂಡ ನಿರ್ಜಿವ ವಸ್ತು. ಇವೆರಡಕ್ಕೆಇನ್ನೆರಡು ನಿರ್ಜಿವ ಕಾರ್ಬನ್ ಮತ್ತು ನೈಟ್ರೋಜನ್ ವಸ್ತುಗಳ ಅಣುಗಳು ಒಟ್ಟಾಗಿ ಸೇರಿ ಅಮೈನೊ ಆಸಿಡ್ ಆಯಿತು. ಈ ಅಮೈನೊ ಆಸಿಡ್ ಸರಪಣಿಯ ಹಾಗೆ ಜೊತೆಗೊಂಡು, ಪ್ರೊಟೀನ್ ಆಯಿತು. ಅದು ಜೀನ್ ಬೆಳವಣಿಗೆಗೆ ಕಾರಣವಾಯಿತು. ಅಲ್ಲಿಂದ ಏಕ ಕೋಶ ಜೀವಿಗಳ ಉಗಮ ಆಯಿತು. ನಿರ್ಜಿವ ಕಲ್ಲರಳಿ ಜೀವ ವಿಕಾಸವಾಯಿತು. 


ಆ ಜೀವಗಳು ವಿಕಾಸ ಹೊಂದುತ್ತ ಹಲವಾರು ವೈವಿಧ್ಯಮಯ ಜಲಚರ, ಸರಿಸೃಪಗಳು, ಮರಗಳು ಸೃಷ್ಟಿಗೊಂಡವು. ಮರಗಳಲ್ಲೇ ವಿವಿಧ ಬಗೆಯ ಮರಗಳ ಸೃಷ್ಟಿಯಾಯಿತು. ಆ ಮರಗಳು ದುಂಬಿಗಳನ್ನು ಆಕರ್ಷಿಸಲು ಪೈಪೋಟಿ ನಡೆಸಲೆಂದು ಹುಟ್ಟಿಕೊಂಡಿದ್ದೇ ಹೂವು. ಕಣ್ಣುಸೆಳೆಯುವ ಬಣ್ಣಗಳು,  ಆಕರ್ಷಕ ವಿನ್ಯಾಸ, ಘಮ್ಮೆನ್ನುವ ಸುವಾಸನೆ ಇವೆಲ್ಲವುಗಳು ಹೂಗಳಲ್ಲಿ ಅಡಕಗೊಂಡವು.  ಪ್ರಕೃತಿ ವಿಕಾಸ ಕಲ್ಲಿಗೆ ಜೀವ ತುಂಬಿ, ಸೌಂದರ್ಯದ ಹೂ ಅರಳಿಸಿತು.


ಪ್ರಕೃತಿ ವಿಕಾಸದ ಇತ್ತೀಚಿನ ಹಂತದಲ್ಲಿ ಹುಟ್ಟಿ ಬಂದದ್ದು ಸಸ್ತನಿಗಳು ಮತ್ತು ಕೊನೆಯಲ್ಲಿ ಮಾನವ. ಪ್ರಕೃತಿ ಅಲ್ಲಿಯವೆರೆಗೂ ಕಲಿತುಕೊಂಡು ಬಂದದ್ದೆನ್ನೆಲ್ಲಾ ಮಾನವನ ಸೃಷ್ಟಿಯಲ್ಲಿ ಧಾರೆ ಎರೆಯಿತು. ಹೂವಿನ ಸೌಂದರ್ಯ, ಆಕರ್ಷಣೆಗಳನ್ನು ವಿವೇಕದ ಜೊತೆಗೂಡಿಸಿ ಹೆಣ್ಣಾಗಿಸಿತು. ಹೂ ಅರಳಿ ಹೆಣ್ಣಾಯಿತು. ಪ್ರಕೃತಿ ಹೆಣ್ಣಿನಲ್ಲಿ ಬರಿ ಅಂದವನ್ನಷ್ಟೇ ತುಂಬದೇ, ಕಂದಮ್ಮಗಳ ಆರೈಕೆಯ ಜವಾಬ್ದಾರಿಯನ್ನು ಹೊರಿಸಿತು. ಗಮನಿಸಿ ನೋಡಿ. ನಾವು ನೀರಿಗೆ ಗಂಗೆ, ಭಾಗೀರಥಿ ಎನ್ನುತ್ತೇವೆ. ಆಹಾರಕ್ಕೆ ಅನ್ನಪೂರ್ಣೆಯನ್ನು ಪೂಜಿಸುತ್ತೇವೆ. ಸಂಪತ್ತಿಗೆ ಲಕ್ಷ್ಮಿ, ವಿದ್ಯೆಗೆ ಸರಸ್ವತಿ ಹೀಗೆ ಮಾನವ ಕಲ್ಯಾಣದ ಜವಾಬ್ದಾರಿಯನ್ನು ಪ್ರಕೃತಿ ಹೆಣ್ಣಿನ ಹೆಗಲೇರಿಸಿತು. ಇನ್ನೊಂದು ಅರ್ಥದಲ್ಲಿ ಪ್ರಕೃತಿಯೇ ಹೆಣ್ಣಾಗಿ ಬದಲಾಯಿತು.


ಹೀಗೆ ಕಲ್ಲು, ಹೂವಾಗಿ, ಹೆಣ್ಣಾಗಿ ಬದಲಾಗಲು ಕೋಟ್ಯಂತರ ವರುಷ ತೆಗೆದುಕೊಂಡರೂ, ಆ ಪ್ರಕ್ರಿಯೆಯನ್ನು ಪ್ರಾಸಬದ್ಧ ಪದಗಳಲ್ಲಿ ಒಂದು ಹಾಡಾಗಿ ಕೇಳುವುದು ಎಷ್ಟು ಚೆಂದ ಅಲ್ಲವೇ?

No comments:

Post a Comment