Thursday, September 16, 2021

ಗೈಡ್ ಎನ್ನುವ ವಿಲಕ್ಷಣ ಚಿತ್ರ

'ಮಾಲ್ಗುಡಿ ಡೇಸ್' ಬರೆದ ಆರ್.ಕೆ.ನಾರಾಯಣ್ ಸೃಜನಶೀಲ ಕಥೆಗಳಿಗೆ ಹೆಸರಾದವರು. ಅವರ ಶೈಲಿ, ಸ್ವಭಾವಕ್ಕೆ ವಿರುದ್ಧ ಎನ್ನಿಸುವ ಕಥಾ ವಸ್ತು ಹೊಂದಿದ್ದ 'ಗೈಡ್'  ಎನ್ನುವ ಕಿರುಕಾದಂಬರಿಯನ್ನು ಅವರು ಬರೆದರು. ಅದೇ ಆಶ್ಚರ್ಯ ಎಂದರೆ ಇನ್ನೂ ಆಶ್ಚರ್ಯವೆನ್ನುವಂತೆ ಅದು ೧೯೬೫ ರಲ್ಲಿ ಹಿಂದಿಯಲ್ಲಿ ಚಲನ ಚಿತ್ರವಾಗಿ ಬಿಟ್ಟಿತು ಕೂಡ. ಅದರ ಕಥಾ ವಸ್ತು ಹೀಗಿದೆ.


ನಾಟ್ಯ ಪ್ರವೀಣೆಯಾದ ನಾಯಕಿಗೆ, ಅವಳನ್ನು ಆದರಿಸದ ಗಂಡ. ಪ್ರವಾಸದ ಸಮಯದಲ್ಲಿ ಊರು ಸುತ್ತಾಡಿಸುವ ಲವಲವಿಕೆಯ 'ಗೈಡ್' ನಲ್ಲಿ ಅವಳಿಗೆ ಪ್ರೇಮಾಂಕುರವಾಗುತ್ತದೆ. ಮದುವೆಯನ್ನು ತೊರೆದು ಹೊರ ಬಂದು ಮತ್ತೆ ಕಾಲಿಗೆ ಗೆಜ್ಜೆ ಕಟ್ಟಿಕೊಳ್ಳುತ್ತಾಳೆ. ಕಥಾನಾಯಕ ಗೈಡ್ ನ ಸಹಾಯದಿಂದ ಯಶಸ್ಸಿನ ಮೆಟ್ಟಿಲೇರುತ್ತಾಳೆ. ಅವಳ ನೃತ್ಯ ಪ್ರದರ್ಶನ ನೋಡಲು ಜನ ಮುಗಿಬೀಳುತ್ತಾರೆ. ಆಗ ಹರಿದು ಬಂದ ದುಡ್ಡನ್ನು ನಾಯಕ ದುರುಪಯೋಗ ಮಾಡಿಕೊಳ್ಳುತ್ತಾನೆ. ನಾಯಕಿ ನೀಡಿದ ದೂರಿನ ಆಧಾರದ ಮೇಲೆ ನಾಯಕ ಜೈಲು ಪಾಲಾಗುತ್ತಾನೆ. ಸಮಾಜವನ್ನು ಎದುರು ಹಾಕಿಕೊಂಡು ನಾಯಕಿಗೆ ಆಶ್ರಯ ನೀಡಿದ ನಾಯಕನಿಗೆ ಅದರಿಂದ ಆಘಾತವಾಗುತ್ತದೆ. ಜೈಲಿನಿಂದ ಬಿಡುಗಡೆಯಾದ ನಂತರ ಗೊತ್ತು ಗುರಿಯಿಲ್ಲದೆ ಅಲೆಯುತ್ತಾನೆ. ದಾರಿಯಲ್ಲಿ ಅವನ ಬಟ್ಟೆಗಳು ಹರಿದು ಅವನ ಅವತಾರವೇ ಬದಲಾಗುತ್ತದೆ. ಒಂದು ಹಳ್ಳಿಯಲ್ಲಿ ಮುಗ್ಧ ಜನರು ಅವನನ್ನು ಸಂತ ಎಂದುಕೊಳ್ಳುತ್ತಾರೆ. ನಾಯಕ ಅದನ್ನು ನಿರಾಕರಿಸುವುದಿಲ್ಲ. ಅವನು ಸಂತನಾಗಿ ಪ್ರಸಿದ್ಧಿಯಾಗಿ, ನಾಯಕಿ ಮತ್ತೆ ಅವನನ್ನು ಹುಡುಕಿ ಬರುವಷ್ಟರಲ್ಲಿ ನಾಯಕನ ಕಥೆಯು ಮುಗಿಯುತ್ತದೆ.


ವಿಲಕ್ಷಣ ಎನ್ನಿಸುವ ಈ ಕಥೆಯಲ್ಲಿ, ನಾಯಕ-ನಾಯಕಿ ಪಾತ್ರಗಳಲ್ಲಿ ಮನೋಜ್ಞ ಅಭಿನಯ ನೀಡಿದ್ದು ದೇವ್ ಆನಂದ್ ಮತ್ತು ವಹೀದಾ ರೆಹಮಾನ್. ಕಿಶೋರ್ ಕುಮಾರ್, ಮೊಹಮ್ಮದ್ ರಫಿ, ಲತಾ ಮಂಗೇಶ್ಕರ್ ಹಾಡಿದ ಹಾಡುಗಳು ಅಜರಾಮರ ಎನ್ನುವ ಹಾಗಿವೆ. ಈ ಚಿತ್ರ ಮತ್ತು ಅದರ ಹಾಡುಗಳು ಹಿಂದಿ ಚಿತ್ರರಂಗದಲ್ಲಿ ಒಂದು ಮೈಲಿಗಲ್ಲಾದವು. ಹೆಣ್ಣಿನ ಮನಸ್ಸಿನ ಕಂದಕಗಳನ್ನು ಮತ್ತು ಗಂಡಿನ ಸ್ವಭಾವದ ವಿಚಿತ್ರ ತಿರುವುಗಳನ್ನು ಸೇರಿಸಿ ಇಂತಹ ಒಂದು ಕಥೆ ಹೆಣೆದ ಆರ್.ಕೆ.ನಾರಾಯಣ್ ಮತ್ತು ಅದನ್ನು ಚಲನಚಿತ್ರವನ್ನಾಗಿಸಿ ಜನರಿಗೆ ತಲುಪಿಸಿದ ದೇವ್ ಆನಂದ್ ಇಬ್ಬರ ಧೈರ್ಯ ಮೆಚ್ಚುವಂತಹದ್ದು. ಮದುವೆಯಾಗದೆ ಜೊತೆಗಿರುವ ಗಂಡು-ಹೆಣ್ಣಿನ ಸಂಘರ್ಷಗಳನ್ನು ಹೊತ್ತ ಈ ಚಿತ್ರ  ೬೦ ರ ದಶಕದಲ್ಲಿ ತೆರೆ ಕಂಡಿದ್ದು, ಅದು ಸಮಯಕ್ಕೂ ಬಹಳ ಮುನ್ನವೇ ಬಂದ ಹಾಗಿತ್ತು. ಆದರೂ ಗಲ್ಲಾ ಪೆಟ್ಟಿಗೆಯಲ್ಲಿ ಲಾಭ ಗಳಿಸುವುದರ ಜೊತೆಗೆ ಚಿತ್ರದಲ್ಲಿ ಭಾಗಿಯಾದ ಎಲ್ಲರಿಗೂ ಹೆಸರು ತಂದು ಕೊಟ್ಟಿತು. ಈಗಾಗಲೇ ನೀವು ಈ ಚಿತ್ರ ನೋಡಿರದಿದ್ದರೆ, ಒಮ್ಮೆ ಯಾಕೆ ನೋಡಬಾರದು?

  


No comments:

Post a Comment