Saturday, November 14, 2020

ದೇವಾನಾಂಪ್ರಿಯ ಅಶೋಕನ ಕುರಿತು ನೆಹರು

(ನೆಹರುರವರು ೧೯೩೦ ರಿಂದ ೧೯೩೩ ರವರೆಗೆ ಜೈಲಿನಿಂದ, ಶಾಲೆಯಲ್ಲಿ ಓದುತ್ತಿದ್ದ ತಮ್ಮ ಮಗಳು ಇಂದಿರಾಗೆ ಪ್ರಪಂಚದ ಇತಿಹಾಸ ತಿಳಿಸುತ್ತ ನಿರಂತರವಾಗಿ ಬರೆದ ಪತ್ರಗಳನ್ನು ಒಟ್ಟುಗೂಡಿ "Glimpses of World History" ಎನ್ನುವ ಪುಸ್ತಕವಾಗಿದೆ. ಅದರಲ್ಲಿ ಒಂದು ಪತ್ರ ಅಶೋಕ ಮತ್ತು ಆತನ ಶಾಸನಗಳನ್ನು ಉಲ್ಲೇಖಿಸಿ ಬರೆದಿದ್ದಾಗಿದೆ. ಅದನ್ನು ಸಂಕ್ಷಿಪ್ತ ವಾಗಿ ಇಲ್ಲಿ ಅನುವಾದಿಸಿದ್ದೇನೆ.)

 ಪತ್ರ ೨೪: ಅಶೋಕ, ದೇವರಿಗೆ ಪ್ರಿಯನಾದವನು, ಮಾರ್ಚ್ ೩೦, ೧೯೩೨

 ಬಿಂದುಸಾರನ ನಂತರ ಕ್ರಿ. ಪೂ. ೨೬೮ ರಲ್ಲಿ ಅಧಿಕಾರಕ್ಕೆ ಬಂದವನು ಅಶೋಕ. ಸಾಮ್ರಾಜ್ಯವನ್ನು ವಿಸ್ತಾರಗೊಳಿಸುವ ಉದ್ದೇಶದಿಂದ ಕಳಿಂಗ ಯುದ್ಧವನ್ನು ಮಾಡಿದ್ದೆ ಕೊನೆ. ಯುದ್ಧ ತರುವ ಸಾವು ನೋವುಗಳಿಗೆ ಜಿಗುಪ್ಸೆಗೊಂಡು ತನಗಿನ್ನು ಆ ನೋವು ಸಾಕು ಎನ್ನುವ ನಿರ್ಧಾರಕ್ಕೆ ಬರುತ್ತಾನೆ. ಗೆಲುವಿನ ನಂತರವೂ ಯುದ್ಧ ತ್ಯಜಿಸಿದ ಏಕೈಕ ರಾಜ ಅಶೋಕ. ಆತನ ಮನದಾಳದಲ್ಲಿದ್ದ ವಿಷಯ ಅರಿಯಲು ನಾವು ಇತಿಹಾಸಕಾರರ ಮೇಲೆ ಅವಲಂಬಿತವಾಗಬೇಕಿಲ್ಲ. ಅಶೋಕನೇ ಕೆತ್ತಿಸಿದ ಶಾಸನಗಳು ಆತನ ಸಂದೇಶವನ್ನು ಸಾರಿ ಹೇಳುತ್ತವೆ.  ನಿಜವಾದ ವಿಜಯವೆಂದರೆ, ಅಶೋಕನ ಪ್ರಕಾರ, ನಿಮ್ಮನ್ನು ನೀವು ಗೆಲ್ಲುವುದು ಮತ್ತು ಧರ್ಮ ಮಾರ್ಗದ ಮೂಲಕ ಜನರ ಹೃದಯ ಗೆಲ್ಲುವುದು.

 ಬುದ್ಧ ಧರ್ಮದ ಆರಾಧಕನಾಗಿ ಹೋದ ಅಶೋಕ, ಧರ್ಮ ಪ್ರಚಾರದ ಕಾರ್ಯ ಕೈಗೊಳ್ಳುತ್ತಾನೆ. ಬಲವಂತಿಕೆ ಅಥವಾ ಶಕ್ತಿ ಪ್ರದರ್ಶನದಿಂದಲ್ಲ, ಬದಲಿಗೆ ಜನರ ಹೃದಯ ಸೂರೆಗೊಳ್ಳುವುದರ ಮೂಲಕ. ಧರ್ಮ ಪ್ರಚಾರಕರನ್ನು ಏಷ್ಯಾ, ಯೂರೋಪ್, ಆಫ್ರಿಕಾ ಖಂಡಗಳಿಗೆ ಕಳುಹಿಸಿಕೊಡುತ್ತಾನೆ. ಅವನ ತಮ್ಮ ತಂಗಿಯಯರೇ ದಕ್ಷಿಣ ಭಾರತ ಮತ್ತು ಶ್ರೀಲಂಕಾಗೆ ಅಶೋಕನ ಸಂದೇಶ ಹೊತ್ತು ಸಾಗುತ್ತಾರೆ. ಇದು ಭಾರತದಲ್ಲಿ ಬೌದ್ಧ ಧರ್ಮ ಕ್ಷಿಪ್ರ ವಾಗಿ ಹಬ್ಬಲು ಕಾರಣವಾಗುತ್ತದೆ. ಅವನ ಯೋಜನಗಳು ಬರಿ ಪ್ರಾರ್ಥನೆ, ಆಚರಣೆಗಳಿಗೆ ಸೀಮಿತಗೊಳ್ಳದೆ, ಸಮಾಜದ ಉನ್ನತಿಗೆ ಕಾರಣವಾಗುವಂತೆ ಸಾರ್ವಜನಿಕ ಅನೂಕೂಲಕ್ಕಾಗಿ ಉತ್ತಮ ಆಸ್ಪತ್ರೆಗಳು, ಉದ್ಯಾನಗಳು, ರಸ್ತೆಗಳ ನಿರ್ಮಾಣಕ್ಕೆ ಕಾರಣವಾಗುತ್ತವೆ. ಶಿಕ್ಷಣದ ಪೋಷಣೆಗೆಂದು ನಾಲ್ಕು ವಿಶ್ವ ವಿದ್ಯಾನಿಲಯಗಳು - ತಕ್ಷಶಿಲಾ, ಮಥುರಾ, ಉಜ್ಜಯಿನಿ ಮತ್ತು ನಳಂದ ಪಟ್ಟಣಗಳಲ್ಲಿ ನಿರ್ಮಿತವಾಗುತ್ತವೆ. ದೇಶದ ಉದ್ದಗಲಕ್ಕೂ ಬೌದ್ಧ ಧರ್ಮದ ವಿಹಾರಗಳು ನಿರ್ಮಿಸಲ್ಪಡುತ್ತವೆ.

 ಅಶೋಕನ ಕಾರ್ಯಕ್ಷೇತ್ರ ಮನುಜರಿಗೆ ಸೀಮಿತವಾಗದೆ, ಪ್ರಾಣಿಗಳಿಗೂ ದಯೆ ತೋರುವ, ಅವುಗಳನ್ನು ಬಲಿ ಕೊಡದಂತೆ ತಡೆಯುವ ಮತ್ತು ಅವುಗಳಿಗೆಂದೇ ಆಸ್ಪತ್ರೆಗಳನ್ನು ನಿರ್ಮಿಸುವುದರಲ್ಲೂ ಕಂಡು ಬರುತ್ತದೆ. ಅವನ ಈ ಕಾರ್ಯಗಳು ಮತ್ತು ಬೌದ್ಧ ಧರ್ಮದ ಹರಡುವಿಕೆ, ಭಾರತೀಯರಲ್ಲಿ ಹೆಚ್ಚಿನವರು ಸಸ್ಯಹಾರಿಗಳು ಆಗುವಂತೆ ಮಾಡುತ್ತದೆ.

 ಹೀಗೆ ಮೂವತ್ತೆಂಟು ವರುಷಗಳ ಕಾಲ ರಾಜ್ಯಭಾರ ಮಾಡಿದ ಅಶೋಕ, ತನ್ನ ಜೀವನ ಶಾಂತಿ, ಸೌಹಾರ್ದತೆ ಮತ್ತು ಸಮಾಜದ ಏಳಿಗೆಗಾಗಿ ಮೀಸಲಿಟ್ಟ.  ಕ್ರಿ. ಪೂ. ೨೨೬ ರಲ್ಲಿ ಕಾಲವಾಗುವ ಕೆಲ ಸಮಯದ ಮುನ್ನ ಬೌದ್ಧ ಧರ್ಮದ ಸನ್ಯಾಸತ್ವ ಸ್ವೀಕರಿಸಿದ್ದ.

 ಇಂದಿಗೆ ಮೌರ್ಯ ಸಾಮ್ರಾಜ್ಯದ ಗತ ವೈಭವ ಸಾರುವ ಅವಶೇಷಗಳು ಅಲ್ಲಿ-ಇಲ್ಲಿ ಸ್ವಲ್ಪ ಉಳಿದುಕೊಂಡಿವೆ. ಆದರೆ ಅಶೋಕನ ರಾಜಧಾನಿಯಾಗಿದ್ದ ಪಾಟಲೀಪುತ್ರದಲ್ಲಿ ಯಾವ ಅವಶೇಷಗಳು  ಉಳಿದಿಲ್ಲ. ಅಶೋಕನು ಕಾಲವಾಗಿ ೬೦೦ ವರುಷಗಳ ನಂತರ ಅಲ್ಲಿಗೆ ಭೇಟಿ ಕೊಟ್ಟಿದ್ದ ಫಾ-ಹಿಯೆನ್ ಎನ್ನುವ ಚೀನಾದ ಪ್ರವಾಸಿಯ ಪ್ರಕಾರ ಅದು ಅಭಿವೃದ್ಧಿ ಹೊಂದಿದ್ದ ಒಂದು ಶ್ರೀಮಂತ ನಗರವಾಗಿತ್ತು. ಅಷ್ಟೊತ್ತಿಗಾಗಲೇ ಅಶೋಕನ ಕಲ್ಲಿನ ಅರಮನೆ ಶಿಥಿಲಗೊಂಡಿತ್ತು, ಆದರೂ ಅದು ಮನುಜ ಮಾತ್ರರಿಂದ ಕಟ್ಟಲು ಸಾಧ್ಯವೇ ಎನ್ನುವಂತಿತ್ತು.

 ಅಶೋಕನ ಬೃಹದಾಕಾರವಾದ ಕಲ್ಲಿನ ಅರಮನೆ ಇಂದಿಗೆ ಸಂಪೂರ್ಣ ಅಳಿದು ಹೋಗಿದ್ದರೂ, ಅಶೋಕನ ಜೀವನ, ಅವನ ಸಂದೇಶಗಳು ಮತ್ತು ಎಂದಿಗೂ ಅಳಿಸಲಾಗದಾರದ ಅವನ ಸಾಧನೆಗಳನ್ನು ಭಾರತದಲ್ಲಿ ಅಲ್ಲದೆ ಏಷ್ಯಾ ಖಂಡದ ಹಲವು ದೇಶಗಳಲ್ಲಿ ಬದಲಾದ ಜನ ಜೀವನ ತೋರಿಸುತ್ತವೆ. ಅವನ ಶಾಸನಗಳು ಇಂದಿಗೂ ಅಶೋಕನನ್ನು ನಮ್ಮ ಹತ್ತಿರಕ್ಕೆ ತರುತ್ತವೆ.




No comments:

Post a Comment